ದೈನಂದಿನ ಕೆಲಸ ಕಾರ್ಯಗಳಿಗೆ ನೀರು ಅತೀ ಅವಶ್ಯಕ.ಹೊಲಗದ್ದೆಗಳಿಗೆ ಯಥೇಚ್ಛವಾಗಿ ನೀರುಣಿಸಬೇಕಾಗುತ್ತದೆ .ಮೊದಲೆಲ್ಲ ಭೂಮಿಯನ್ನು ಕೆಲವು ಅಡಿಗಳಷ್ಟು ಅಗೆದಾಗ ಸಿಗುತ್ತಿದ್ದ ನೀರು ಈಗ ಬತ್ತುತ್ತಿದೆ.ಮಾನವನ ದುರಾಸೆಯಿಂದ ಅರಣ್ಯನಾಶವಾಗಿ ಅತಿವೃಷ್ಟಿ ಅನಾವೃಷ್ಟಿ ಕಾಡುತಿದೆ.ಭೂಮಿಯ ಆಳಕ್ಕೆ ಮಳೆಯ ನೀರಿಳಿದು ಅಂತರ್ಜಲವಾಗುವ ಪ್ರಮಾಣ ಕಡಿಮೆಯಾಗಿದೆ.
ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಅಂತರ್ಜಲವನ್ನೂ ಬಳಸಲು ಆರಂಭಿಸಿದನು. ಕೊಳವೆ ಬಾವಿಗಳನ್ನು ನಿರ್ಮಿಸಿದ ..ಆರಂಭದ ದಿನಗಳಲ್ಲಿ ಯಥೇಚ್ಛವಾಗಿ ದೊರೆಯಲಾರಂಭಿಸಿ ಬಳಸುತ್ತಿದ್ದಂತೆ ನೀರಿನ ಪ್ರಮಾಣ ಕಡಿಮೆಯಾಗುವುದು ಕಂಡುಬಂತು.ನೀರು ದೊರೆಯುವ ಪ್ರಮಾಣ 1 ರಿಂದ 1.5 ಇಂಚಿನಷ್ಟು ಇದ್ದರೆ ಬಳಸುವುದು ಕಷ್ಟವೆಂದು ತಿಳಿದು ಉಪಯೋಗಿಸುವುದನ್ನು ನಿಲ್ಲಿಸುತ್ತಾರೆ.ಹಾಕಿದ ಪಂಪ್ ಸೆಟ್ ಕೂಡ ತೆಗೆಯುತ್ತಾರೆ..ಇಂತಹ ಸಂದರ್ಭದಲ್ಲಿ ಕೊಳವೆ ಬಾವಿಯನ್ನು ಮುಚ್ಚುತ್ತಾರೆಯೇ...? ಎಂದು ಪ್ರಶ್ನಿಸಿದರೆ ಕೆಲವರು ಮಾತ್ರ ಹೌದು ..ಮುಚ್ಚಿಸಿದ್ದೇವೆ .. ಎಂದರೆ ಬಹುತೇಕರದು ಇಲ್ಲ ಎಂಬ ಉತ್ತರವೇ ಸಿಗಬಹುದು.
ಕೊರೆಯುವಾಗಲೇ ನೀರು ಸಿಗದಿದ್ದ ಕೊಳವೆ ಬಾವಿಗಳ ಕಥೆಯೂ ಭಿನ್ನವಾಗಿಲ್ಲ.ಒಂದು ಕಡೆ ನೀರು ಸಿಗದಿದ್ದರೆ ಇನ್ನೊಂದು ಕಡೆ ಕೊಳವೆ ಬಾವಿ ಕೊರೆಸುತ್ತಾರೆ .. ನಿರುಪಯುಕ್ತ ಕೊಳವೆಯನ್ನು ಮುಚ್ಚಲು ನಿರಾಸಕ್ತಿ ತೋರುತ್ತಾರೆ.. ಇನ್ನೊಂದು ಕೊಳವೆಬಾವಿ ಕೊರೆಸುವುದರಲ್ಲಿ ಇರುವಷ್ಟು ಆಸಕ್ತಿ ಹಿಂದಿನದನ್ನು ಮುಚ್ಚಿ ಯಾರಿಗೂ ತೊಂದರೆಯಾಗದಂತೆ ಕ್ರಮಕೈಗೊಳ್ಳುವಲ್ಲಿ ಇರುವುದಿಲ್ಲ..ಕುಡಿಯುವ ನೀರಿಗಾಗಿ,ಹೊಲಗದ್ದೆಗಳ ಬಳಕೆಗಾಗಿ ಕೊರೆದ ಕೊಳವೆ ಬಾವಿಗಳಲ್ಲಿ ಎಷ್ಟು ವಿಫಲಗೊಂಡ ಮತ್ತು ನಿರುಪಯುಕ್ತ ಆದವುಗಳಿವೆ ಎಂಬುದನ್ನು ಅಂದಾಜಿಸುವುದು ಕಷ್ಟಸಾಧ್ಯ.
ಕೆಲವು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ತಿರಚ್ಚಿ ಜಿಲ್ಲೆಯ ನಡುಕಟ್ಟುಪಟ್ಟಿ ಸಮೀಪದಲ್ಲಿ ದುರ್ಘಟನೆಯೊಂದು ಸಂಭವಿಸಿದೆ.ಎರಡುವರ್ಷದ ಪುಟ್ಟ ಬಾಲಕ ಸುಜೀತ್ ವಿಲ್ಸನ್ ಮನೆಯ ಸಮೀಪ ಆಟವಾಡುತ್ತಿದ್ದಾಗ ತೆರೆದಿದ್ದ ಕೊಳವೆ ಬಾವಿಗೆ ಬಿದ್ದಿದ್ದಾನೆ.ವಿಷಯ ತಿಳಿದು 25 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನನ್ನು ರಕ್ಷಿಸಲು ಅಗ್ನಿಶಾಮಕ ದಳ, ಪೋಲೀಸ್ ಇಲಾಖೆ, ವಿಪತ್ತು ನಿರ್ವಹಣಾ ಸಿಬ್ಬಂದಿಗಳು ನೆರವಿಗೆ ಧಾವಿಸಿದ್ದಾರೆ.ಸತತ ಮಳೆ, ಹವಾಮಾನ ವೈಪರೀತ್ಯ,ಕುಸಿಯುತ್ತಿರುವ ಮಣ್ಣು ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದ್ದರೂ ಪ್ರಯತ್ನ ಮುಂದುವರಿಸಿದ್ದಾರೆ.
ಬಾಲಕ ಎಷ್ಟು ಸಂಕಟ ಅನುಭವಿಸಿದನೋ ಯೋಚಿಸಿದರೆ ಕಣ್ಣೀರು ಹರಿಯುತ್ತದೆ.ಉಸಿರಾಡುತ್ತಿದ್ದ ಬಾಲಕ ಮೂರು ದಿನಗಳ ನಿರಂತರ ಹೋರಾಟದ ನಂತರ ಅಸುನೀಗಿದ್ದಾನೆ.ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.ಸಮಾಜ ಪುಟ್ಟ ಬಾಲಕನ ದುರಂತ ಅಂತ್ಯಕ್ಕೆ ಕಂಬನಿ ಮಿಡಿದಿದೆ.ಅಧಿಕಾರಿಗಳು ಕೊಳವೆ ಬಾವಿಗಳನ್ನು ಮುಚ್ಚಿಸಲು ಮುಂದಾಗಿದ್ದಾರೆ.
ಇಂತಹ ಘಟನೆಗಳು ಕರ್ನಾಕಟದಲ್ಲೂ ಹಲವಾರು ನಡೆದಿದೆ.ಸುಮಾರು ಎರಡು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿಯ ಝಂಜರವಾಡ ಗ್ರಾಮದಲ್ಲಿ ಆರು ವರ್ಷ ದ ಬಾಲಕಿ ಕಾವೇರಿಯನ್ನು ತೆರೆದು ಕೊಳವೆ ಬಾವಿ ಆಪೋಶನ ತೆಗೆದುಕೊಂಡಿದೆ.ಕಾವೇರಿಯ ತಾಯಿ ಸವಿತಾ.."ನಮಗೆ ಪರಿಹಾರ ಬೇಡ.ರಾಜ್ಯದಲ್ಲಿರುವ ಎಲ್ಲಾ ತೆರೆದ ಕೊಳವೆಬಾವಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಿ" ಎಂದು ಮನವಿ ಮಾಡಿದ್ದರು..
ಕೆಲವು ವರ್ಷಗಳ ಹಿಂದೆ ವಿಜಾಪುರ ಜಿಲ್ಲೆಯ ನಾಗಠಾಣ ದ್ಯಾಜೀರಿ ಬಳಿ ನಾಲ್ಕು ವರ್ಷದ ಹುಡುಗಿ ಅಕ್ಷತಾ ಕೊಳವೆ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.ಇನ್ನೂ ಹಲವಾರು ಇಂತಹದೇ ಅವಘಡಗಳು ಸಂಭವಿಸಿವೆ.
ಇಂತಹ ಘಟನೆ ನಡೆದಾಗ ಆ ಬಗ್ಗೆ ಎಚ್ಚೆತ್ತುಕೊಳ್ಳುವ ಜನ ನಂತರ ಮರೆತುಬಿಡುತ್ತಾರೆ.ನಿರುಪಯುಕ್ತ ಹಾಗೂ ವಿಫಲಗೊಂಡ ಕೊಳವೆ ಬಾವಿಗಳನ್ನು ಮುಚ್ಚುವುದು ಕಡ್ಡಾಯವೆಂದು ಸುಪ್ರೀಂ ಕೋರ್ಟ್ 2017 ರಲ್ಲಿ ಆದೇಶ ಹೊರಡಿಸಿದೆ.
ಇದು ಸಮಾಜದ ಜನರೆಲ್ಲ ಕೈಜೋಡಿಸಿ ಮಾಡಬೇಕಾದ ಕೆಲಸ.ಪ್ರತಿಯೊಬ್ಬರೂ ಕೂಡ ಇದು ನನ್ನ ಜವಾಬ್ದಾರಿ ಎಂದು ತಿಳಿದು ಕಾರ್ಯಪ್ರವೃತ್ತರಾಗಬೇಕಾಗಿದೆ .
*ನಮ್ಮ ಪರಿಸರದಲ್ಲಿ ಕೊಳವೆ ಬಾವಿ ಬಾಯ್ದೆರೆದು ನಿಂತಿದ್ದರೆ ಅದನ್ನು ಮುಚ್ಚಲು ಮುಂದಾಗೋಣ.ಸಾಧ್ಯವಿಲ್ಲವೆಂದಾದರೆ ಸ್ಥಳೀಯ ಮುಖಂಡರು, ಗ್ರಾಮಪಂಚಾಯತ್ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡೋಣ.
*ಕೆಲವು ಕಡೆ ನಿರುಪಯುಕ್ತ ಕೊಳವೆಯನ್ನು ಬರಿ ಕಲ್ಲಿನಿಂದ ಮುಚ್ಚಿರುತ್ತಾರೆ . ಅದನ್ನು ಯಾರೋ ಕಿಡಿಗೇಡಿಗಳು ತೆಗೆದುಹಾಕುವ ಕಾರ್ಯ ಮಾಡುತ್ತಾರೆ .ಅಂತಹ ಸಂದರ್ಭದಲ್ಲಿ ಅದನ್ನು ಶಾಶ್ವತವಾಗಿ ಮುಚ್ಚುವ ಕಾರ್ಯಕ್ಕೆ ಮುಂದಾಗೋಣ.
*ನಿರುಪಯುಕ್ತ ಕೊಳವೆ ಬಾವಿಗಳಲ್ಲಿ ಮಳೆಗಾಲದಲ್ಲಿ ಜಲಮರುಪೂರಣ ಮಾಡಿ ಅಂತರ್ಜಲ ಸಮೃದ್ಧವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬಹುದು..
*ಮಕ್ಕಳನ್ನು ಆಡಲು ಬಿಡುವ ಮೊದಲು ತೆರೆದ ಬೋರ್ ವೆಲ್ ಇದೆಯೇ ಎಂದು ಗಮನಿಸೋಣ.
*ಒಮ್ಮೆ ಕೊಳವೆ ಬಾವಿಯನ್ನು ಮುಚ್ಚಿದರೂ ಪುನಃ ತೆರೆದುಕೊಂಡಿದೆಯೇ ಎಂದು ಮರುಪರಿಶೀಲಿಸುವುದು ಉತ್ತಮ.
*ಅವರವರ ಜಮೀನಿನಲ್ಲಿ ತೆಗೆದ ಕೊಳವೆ ಬಾವಿಗಳನ್ನು ಮುಚ್ಚುವ ಕಾರ್ಯವನ್ನು ವೈಯಕ್ತಿಕವಾಗಿ ಮಾಡೋಣ.
ಕೊಳವೆಬಾವಿಗಳು ಇನ್ನಷ್ಟು ಮಕ್ಕಳನ್ನು ಬಲಿಪಡೆದು ಮೃತ್ಯು ಕೂಪಗಳು ಎಂದು ಕರೆಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳೋಣ . ಹೃದಯ ವಿದ್ರಾವಕ ಘಟನೆ ನಡೆಯದಂತೆ ನಾವೂ ಅಳಿಲ ಸೇವೆ ಮಾಡೋಣ..
✍️... ಅನಿತಾ ಜಿ.ಕೆ.ಭಟ್.
30-10-2019.