Tuesday, 30 June 2020

ಜೀವನ ಮೈತ್ರಿ ಭಾಗ ೯೭(97)




ಜೀವನ ಮೈತ್ರಿ ಭಾಗ ೯೭


    ಬೆಂಗಳೂರಿನಿಂದ ಶಂಕರ ಶಾಸ್ತ್ರಿಗಳು ಕರೆ ಮಾಡಿದರು.ಅಮ್ಮನೊಡನೆ ಮಾತನಾಡಿ ಅಪ್ಪನನ್ನೂ ಕೂಡಾ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಒತ್ತಾಯಿಸಿದರು..

"ಮಗ..ಅವರು ಹಾಗೆಲ್ಲ ಬರಲು ಒಪ್ಪಲಾರರು.." ಎಂದರು ಮಹಾಲಕ್ಷ್ಮಿ ಅಮ್ಮ..

"ಅಪ್ಪನಲ್ಲೇ ಮಾತನಾಡುತ್ತೇನೆ . ಒಮ್ಮೆ ಕೊಡಮ್ಮ ಅಪ್ಪನಿಗೆ ಫೋನ್..''

"ಆಯ್ತು."ಎಂದ ಮಹಾಲಕ್ಷ್ಮಿ ಅಮ್ಮ ಪತಿಯನ್ನು ಕರೆದರು.

ಶಂಕರ ಶಾಸ್ತ್ರಿಗಳು ಅಪ್ಪನನ್ನು ಬರುವಂತೆ ಒತ್ತಾಯಿಸಿದಾಗ ಮೊದಲು ನಿರಾಕರಿಸಿದರೂ ಕೊನೆಗೆ ಒಪ್ಪಿಕೊಂಡರು..
ಶಂಕರ ಶಾಸ್ತ್ರಿಗಳು ಮುಂದುವರಿಸುತ್ತಾ ...

"ಅಪ್ಪಾ.. ನೀವು ಮೂವರು ಬಸ್ ನಲ್ಲಿ ಬರುವುದಕ್ಕಿಂತ ಕಾರು ಮಾಡಿಕೊಂಡು ಬನ್ನಿ.. ನಾನು ಚಕ್ಕೆಮೂಲೆ ಕಾರಂತಣ್ಣನ ಕಾರು ಬಾಡಿಗೆಗೆ ಬುಕ್ ಮಾಡುತ್ತೇನೆ.. ಬಾಡಿಗೆ ವಿಷಯ ನಾನೇ ನೋಡಿಕೊಳ್ಳುವೆ.ನೀವು ಬನ್ನಿ.."ಎಂದರು.

       ಮಗ ಇಷ್ಟೆಲ್ಲಾ ವ್ಯವಸ್ಥೆ ಮಾಡಿದಾಗ  ಶ್ಯಾಮ ಶಾಸ್ತ್ರಿಗಳು ಖುಷಿಯಿಂದ ಒಪ್ಪಿದರು.ಫೋನಿಟ್ಟಾಗ ಮಹಾಲಕ್ಷ್ಮಿ ಅಮ್ಮ ಗಂಡನಲ್ಲಿ
"ಮೂರು ಜನ ಆಗಿ ಹೋಗಬಾರದು.." ಎಂದು ತಗಾದೆ ತೆಗೆದರು.
ಮಂಗಳಮ್ಮ "ಮೂರು ಜನ ಹೇಗಾಗುತ್ತೆ..? ಡ್ರೈವರ್ ಕಾರಂತಣ್ಣ ಸೇರಿ ನಾಲ್ಕು ಜನ" ಎಂದರು.. ಮಹಾಲಕ್ಷ್ಮಿ ಅಮ್ಮ ನಿಗೆ ಸಮಾಧಾನವಿಲ್ಲ.ಕೊನೆಗೆ ಇಷ್ಟೆಲ್ಲಾ ವ್ಯವಸ್ಥೆ ಇರುವಾಗ ನಾನೊಮ್ಮೆ ತಮ್ಮನ ಮನೆಗೆ,ಮಗಳ ಮನೆಗೆ ಹೋದರೆ ಹೇಗೆ ? ಎಂಬ ಯೋಚನೆ ಬಂತು ಭಾಸ್ಕರ ಶಾಸ್ತ್ರಿಗಳಿಗೆ .

"ಹಾಗಾದರೆ ನಾನೂ ಬರುತ್ತೇನೆ..ಜನರ ಸಂಖ್ಯೆ ಸರಿಯಾಗುತ್ತದೆ ಅಮ್ಮ "ಎಂದರು..ಮಂಗಳಮ್ಮ ಕಿವಿ ನೆಟ್ಟಗೆ ಮಾಡಿಕೊಂಡರು.. ಇವರೆಲ್ಲರೂ ಹೋದಾಗ ಕೆಲವು ದಿನದ ಮಟ್ಟಿಗಾದರೂ ಗಂಡನ ಜೊತೆ ಹಾಯಾಗಿದಬಹುದು ಎಂದು ಲೆಕ್ಕ ಹಾಕಿದರೆ..ಇವರೂ ಹೊರಡುವುದಾ?..ಈ ಗಂಡನಿಗೆ ಪತ್ನಿಯ ಜೊತೆ ಒಂದು ವಾರವಾದರೂ ಏಕಾಂತದಲ್ಲಿ ಕಳೆಯಬೇಕು ಎಂದು ಅನಿಸುವುದೇ ಇಲ್ಲವೇ..? ಇಂತಹ ಅವಕಾಶ ಸಿಗುವುದು ಬಹಳ ಅಪರೂಪ.. ಎಂದು ಯೋಚಿಸುತ್ತಾ ಮುಖ ಸಣ್ಣದು ಮಾಡಿಕೊಂಡರು.

              *****

       ಮಮತಮ್ಮ ಬೆಂಗಳೂರಿನಲ್ಲಿ ಮಗನ ಮನೆಯಲ್ಲಿದ್ದಾಗ ತನ್ನ ಬಾಲ್ಯದ ಗೆಳತಿ ಗಿರಿಜೆಯನ್ನು ಫೋನ್ ಮಾಡಿ ಮನೆಗೇ ಬರಲು ಹೇಳಿ ಭೇಟಿಯಾದರು.ತುಂಬಾ ವರುಷಗಳ ನಂತರ ಆದ ಭೇಟಿ .. ಇಬ್ಬರೂ ತಮ್ಮ ಜೀವನದ ಕಷ್ಟ ಸುಖ ಹಂಚಿಕೊಂಡರು.ಆಕೆ ಮದುವೆಯಾಗಿ ಬೆಂಗಳೂರಿಗೆ ಬಂದವಳು.ಮಕ್ಕಳು ಶಾಲೆಗೆ ಹೋಗಲು ಆರಕಭಿಸುತ್ತಿದಂತೆ ನೌಕರಿಗೆ ಸೇರಿಕೊಂಡವಳು.ಈಗ ಮಕ್ಕಳಿಗೆ ಮದುವೆಯಾಗಿ ಅವರವರ ಜೀವನವನ್ನು ಕಟ್ಟಿಕೊಂಡಿದ್ದಾರೆ.ಇವರು ಉದ್ಯೋಗ ಬಿಟ್ಟು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ..ಗಂಡ ಹೆಂಡತಿ ಇಬ್ಬರೇ ಇದ್ದು ಬೇಸರವಾಗುತ್ತಿದ್ದಾಗ ಒಮ್ಮೆ ಗೆಳತಿ ಮಾತಿಗೆ ಸಿಕ್ಕಿದ್ದು ಅವರಿಗೂ ಒಂದು ಬದಲಾವಣೆ..

      ಹಳ್ಳಿಯಿಂದ ಬರುವಾಗ ತಂದಿದ್ದ  ತರಕಾರಿ ಮಾವಿನ ಹಣ್ಣು,ಹಪ್ಪಳ,ಎಲ್ಲ ಕಂಡ ಗಿರಿಜೆಗೆ ನಾಲಿಗೆ ನೀರೂರಿತು.. "ಇಲ್ಲಿ ಎಲ್ಲವನ್ನೂ ಕೊಂಡುಕೊಳ್ಳಬಹುದು .ಆದರೆ ತಾಜಾತನವಿರುವುದಿಲ್ಲ.. ಹಳ್ಳಿಯೇ ವಾಸಕ್ಕೆ ಯೋಗ್ಯ.ಪಟ್ಟಣ ಉದ್ಯೋಗಕ್ಕೆ ಸೂಕ್ತ.."ಎಂದು ಹೇಳಿಕೊಂಡರು.ಮಗಸೊಸೆಯ ವಿಚಾರ ಕೇಳುತ್ತಾ "ಯಾವುದಕ್ಕೂ ಅತಿಸಲಿಗೆ ಕೊಡಬೇಡ.ಮತ್ತೆ ಮಗ ನಿನ್ನ ಮಾತನ್ನೆಲ್ಲಿ ಕೇಳುತ್ತಾನೆ.ಮಡದಿಯ ಮಾತಿಗೇ ಬೆಲೆ.ನಮ್ಮ ಮಗನೂ ಹಾಗೆ..ಸೊಸೆಯ ದೌರ್ಬಲ್ಯಗಳನ್ನು ಹೇಳಿದರೂ ಕ್ಯಾರೇ ಮಾಡುವುದಿಲ್ಲ.."

ಆದರೆ ಅದಕ್ಕೆ ಮಾತ್ರ ಒಪ್ಪದ ಮಮತಮ್ಮ.."ಹಾಗಲ್ಲ ಗಿರಿಜೆ.. ನಾವು ಮಗ ಸೊಸೆಯೆಂದು ಭೇದ ಮಾಡದೆ ಇಬ್ಬರನ್ನು ಮಕ್ಕಳಂತೇ ಕಾಣಬೇಕು.ನಮ್ಮ ಪ್ರೀತಿಯ ವರ್ತುಲದಲ್ಲಿ ಬದುಕಿದ ಮಗ ಸೊಸೆ ನಮ್ಮ ಮಾತಿಗೆ ಬೆಲೆ ಕೊಡುತ್ತಾರೆ.."

"ಎಲ್ಲ ಹೇಳೋದಕ್ಕೆ ,ಕೇಳೋದಕ್ಕೆ ಮಾತ್ರ ಚಂದ ಮಮತಾ..ಅವರವರ ಕಾಲಬುಡಕ್ಕೆ ಬಂದಾಗಲೇ ಅರಿವಾಗುವುದು.."

"ಗಿರಿಜೆ..ನಾನಂತೂ ಹಾಗೇ ಭಾವಿಸುವುದಿಲ್ಲ.ನನಗೂ ಇಬ್ಬರು ಮಗಳಂದಿರಿದ್ದಾರೆ.ಅವರಿಗೂ ನಾನು ಹೇಳುವುದು ಇದನ್ನೇ..ನಿಮ್ಮ ಅತ್ತೆ, ಮಾವ, ಕುಟುಂಬದವರನ್ನು ಪ್ರೀತಿಯಿಂದ ಕಾಣಿ. ಅವರನ್ನು ಗೌರವಿಸಿ .. ಕೋಪದಲ್ಲಿ ಎರಡು ಮಾತು ಬಂದರೆ ಆದಷ್ಟು ಬೇಗ ಮರೆತು ಬಿಡಿ.ಅದನ್ನೇ ಮುಂದೆ ಇಟ್ಟುಕೊಂಡು ವೈಮನಸ್ಸು ಬೆಳೆಸಬೇಡಿ ಎಂದು..ಮಗನನ್ನೂ ಅದೇ ರೀತಿ ಬೆಳೆಸಿದ್ದೇವೆ..ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಮಾಡುವವನಲ್ಲ.ನಮ್ಮ ಈ ರೀತಿಯ ನಡವಳಿಕೆಯ ವಾತಾವರಣದಲ್ಲಿ ಬಾಳುವ ಸೊಸೆಯೂ ಕ್ರಮೇಣ ಅದೇ ಅಭ್ಯಾಸ ವನ್ನು ರೂಢಿಸಿಕೊಳ್ಳುತ್ತಾಳೆ ಎಂಬುದು ನನ್ನ ಭಾವನೆ.. ಅವಳೂ ಸುಸಂಸ್ಕೃತ ಮನೆತನದಲ್ಲಿಯೇ ಬೆಳೆದವಳು.
ಅಕಸ್ಮಾತ್ ಸ್ವಲ್ಪ ಮಟ್ಟಿಗೆ ನಿರಾಸೆ ಹುಟ್ಟಿಸಿದರೂ .. ಸಂಪೂರ್ಣ ಸುಳ್ಳಾಗಲಾರದು ಎಂದು ನನ್ನ ಅಭಿಪ್ರಾಯ..ಸೊಸೆಗೂ ಕುಟುಂಬ ವರ್ಗ ಇರುತ್ತದೆ.ಕಷ್ಟ ಸುಖದ ಅರಿವಿರುತ್ತದೆ..."ಎಂದು ಮಮತಮ್ಮ ಹೇಳುತ್ತಿದ್ದರೆ..ಗಿರಿಜೆಗೆ ಮಾತ್ರ ಅವಳ ಮಾತಿನಲ್ಲಿ ನಂಬಿಕೆ ಬರಲಿಲ್ಲ.

"ನಿಜವಾಗಿಯೂ ನಿನ್ನ ಮಗಳಂದಿರಿಬ್ಬರೂ ಅತ್ತೆ ಮಾವನ ಜೊತೆಗೆ ವಾಸಿಸುತ್ತಿದ್ದಾರಾ..?" ಎಂದು ಪುನಃ ಪ್ರಶ್ನಿಸಿದಳು..

ಹೌದೆಂದ.. ಮಮತಾ ಮಗಳಂದಿರ ಕುಟುಂಬದ ಫೊಟೋ ತೋರಿಸಿದಳು..
"ಇದೆಲ್ಲ ಹಳ್ಳಿಯಲ್ಲಿ ಆಗುತ್ತೆ ಅನಿಸುತ್ತದೆ. ನಂಗಂತೂ ಈ ಪೇಟೆಯಲ್ಲಿ ಈ ತರಹ ಒಟ್ಟಿಗೆ ಇರುವ ಕುಟುಂಬ ಯಾವುದೂ ಕಂಡಿಲ್ಲ ಮಮತಾ.."ಎಂದಳು..
ಮಾತಿನ ಓಟ ಸಾಗಿತು.ಸಂಜೆ ಮನೆಗೆ ತೆರಳಿದ ಗಿರಿಜೆಗೆ ಮಮತಳ ಮಾತು ತಲೆಯೊಳಗೆ ಕೊರೆಯುತ್ತಿತ್ತು.ತಾನು ಮಗನಿಗೆ ಮದುವೆಯಾದ ಆರಂಭದಲ್ಲೇ ಸೊಸೆಯ ಮೇಲೆ ಅಧಿಕಾರ ಚಲಾಯಿಸಿದ್ದು,ನನ್ನ ಮಾತೇ ನಡೆಯಬೇಕೆಂದು ಹಠ ಸಾಧಿಸಿದ್ದನ್ನು ನೆನಪಿಸಿಕೊಂಡು ನನ್ನ ಈ ಗುಣದಿಂದಲೇ ಮಗ ಹೆಂಡತಿಯ ಜೊತೆ ಬೇರೆ ಮನೆಯಲ್ಲಿ ವಾಸಿಸಲು ಆರಂಭಿಸಿದರೋ ಏನೋ ..ಮಗ ಹೇಳಿದ್ದು ಅದೇ ತಾನೇ ನಮ್ಮಿಂದಾಗಿ ಈ ಮನೆ ರಣಾಂಗಣ ವಾಗುವುದು ಬೇಡ ಎಂದು.. ನಾನು ಆ ತಪ್ಪನ್ನು ಮಾಡದೇ ಇದ್ದಿದ್ದರೆ , ಪ್ರೀತಿಯಿಂದ ಕಾಣುತ್ತಿದ್ದರೆ ಇವತ್ತು ಕೂಡ ಮಗ-ಸೊಸೆಯೊಂದಿಗೆ ಇದೇ ಮನೆಯಲ್ಲಿ ಬಾಳಬಹುದಿತ್ತು. ಮಮತಾಗೆ ಇದ್ದ ಬುದ್ಧಿ ನನಗೆ ಇರಲಿಲ್ಲವಲ್ಲ...ಎಂದು ಯೋಚಿಸತೊಡಗಿದಳು.

            ********


         ಶಶಿ ತನ್ನದೇ ಆದ ಧಾಟಿಯಲ್ಲಿ ಯೋಚಿಸುತ್ತಿದ್ದಳು. ಸೊಸೆಯಾಗಿ ಬರುವ ಮಹತಿ ಮೊದಲೇ ನಾನು ಹಳ್ಳಿಗೆ ಹೊಂದಿಕೊಳ್ಳುವುದಿಲ್ಲ ಎಂಬ ಸೂಚನೆಯನ್ನು ನೀಡಿದ್ದಾಳೆ. ಆದರೂ ಅಪರೂಪಕ್ಕೆ ಸಿಕ್ಕ ಈ ಸಂಬಂಧವನ್ನು ಬೇಡ ಎನ್ನುವಂತೆಯೂ ಇಲ್ಲ.ಈಗ ನಿಶ್ಚಿತಾರ್ಥಕ್ಕೆ ಅಮ್ಮನನ್ನು ಕರೆದುಕೊಂಡು ಹೋದರೆ "ನಿನಗೆ ಆ ಕೆಲಸ ಬರುತ್ತಾ ..? ಈ ಕೆಲಸ ಬರುತ್ತಾ ..?"ಎಂದೆಲ್ಲ ಅಮ್ಮ ಕೇಳದೆ ಇರಲಾರರು. ಎಷ್ಟಾದರೂ ಹಿರಿಯವರು ..ಅವರ ಬುದ್ಧಿ ಅವರು ಬಿಡುವುದುಂಟೆ. ಇದರಿಂದ ನೇರನುಡಿಯ ಹೆಣ್ಣಿನ ಕಡೆಯವರಿಗೆ ನೋವಾಗಿ ಎಲ್ಲಿಯಾದರೂ ಸಂಬಂಧ ಮುರಿದರೆ.. ಹೌದು ಅದಕ್ಕಾಗಿ ಅಮ್ಮನನ್ನು ನೆಪಹೇಳಿ ಬಾರದಂತೆ ಮಾಡಿರುವ ನನ್ನ ನಡೆ ಸರಿಯಾಗಿದೆ. ಎಂದು ತನ್ನ ನಡೆತೆಯನ್ನು ಸರಿಯೆಂದು ತರ್ಕಿಸಿದಳು.


              *****

        ಬೆಂಗಳೂರಿನ ಸತ್ಯನಾರಾಯಣ ರಾಯರ ಮನೆ ನಿಶ್ಚಿತಾರ್ಥಕ್ಕೆ ತಯಾರಾಗಿತ್ತು . ಮಗಳು ಮಹತಿ ಅಂದವಾಗಿ ಅಲಂಕಾರ ಮಾಡಿಕೊಂಡು  ತಯಾರಾಗಿದ್ದಳು. ವರ ಮುರಳಿ ಕಡೆಯವರು ಕೆಲವೇ ಕೆಲವು ಆಪ್ತ ಬಂಧುಗಳೊಂದಿಗೆ ಆಗಮಿಸಿದರು. ನಿಶ್ಚಿತಾರ್ಥವು ಯಾವುದೇ ಅಡೆತಡೆಯಿಲ್ಲದೆ ಸಾಂಗವಾಗಿ ನೆರವೇರಿತು. ನೆಂಟರಿಷ್ಟರ ಮಾತುಗಳಿಗೆಲ್ಲ ಮಹತಿಯ ಉತ್ತರ ಬಹಳ ನೇರವಾಗಿತ್ತು. ಚಿಕ್ಕಂದಿನಿಂದಲೇ ಮುಕ್ತವಾಗಿ ಬೆಳೆದವಳು ಮಹತಿ. ಒಂದು ತಿಂಗಳಲ್ಲಿ ಮುರಳಿ ಮದುವೆ ನಡೆಯುವುದು ನಿಶ್ಚಯವಾಯಿತು. ಶಶಿ ಬಹಳ ಖುಷಿಯಿಂದ ಇದ್ದಳು.ತಮ್ಮನ ಮಗಳಿಗಿಂತ ರೂಪಸಿ ,ಉನ್ನತ ಹುದ್ದೆಯಲ್ಲಿರುವ ಯುವತಿ ತನಗೆ  ಸೊಸೆಯಾಗಿ ಬರುತ್ತಿದ್ದಾಳೆ ಎಂಬುದು ಅವಳಿಗೆ ಮತ್ತಷ್ಟು ಆನಂದ.ಮುರಳಿ  ತನ್ನ ಮಡದಿಯನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು, ಅವಳನ್ನು ಸ್ವಲ್ಪವೂ  ನೋಯಿಸದಂತೆ ಬದುಕಬೇಕು ಎಂದೆಲ್ಲ ಕನಸು ಕಂಡಿದ್ದ.


        ಮಹತಿ ಮುರಲಿಯ ಜೊತೆಗೆ ಸ್ವಲ್ಪ ಅತಿಯೆನಿಸುವಷ್ಟು ಹತ್ತಿರವಿದ್ದಳು.ತುಂಟಾಟ ನೋಡುತ್ತಿದ್ದರೆ ಹಳೆಯ ಜೋಡಿಗಳಿಗೂ ಕಚಗುಳಿಯಿಡುವಂತಿತ್ತು.ಶಶಿಗೆ ಇದು ಅಸಮಾಧಾನವನ್ನು ಉಂಟುಮಾಡಿತು.ಮಹತಿಗೆ ಅಂತೂ ಅದೇ ಅಭ್ಯಾಸ ಆಗಿರಬಹುದು.. ಆದರೆ ಮುರಲಿ..?? ಇವನಾದರೂ ಸಭ್ಯತೆಯಿಂದ ವರ್ತಿಸಬಾರದೇ ಎಂದು ಅವಳ ಒಳಮನಸ್ಸು ಹೇಳುತ್ತಿತ್ತು.ಮುಂದೆ ಸರಿಯಾದಾರು ಎಂದು ತನಗೆ ತಾನೇ ಸಮಾಧಾನ ಹೇಳಿಕೊಂಡಳು..ವಿವಾಹವಾದ ನಂತರವೂ ಇಂತಹ ಅತಿರೇಕದ ನಡತೆ ಪ್ರದರ್ಶಿಸಿದರೆ ಹೇಳದೆ ಬಾಯಿಮುಚ್ಚಿ ನಾನು ಸುಮ್ಮನಿರಲಾರೆ ಎಂದಿತ್ತು ಅವಳೊಳಗಿನ ಅತ್ತೆತನ.

               *******

     ಸೌಜನ್ಯಳಿಗೆ ತಾನು ಪತಿಯ ಗೆಳೆಯರ ಮನೆಯಲ್ಲಿ,ಒಂದೇ ಕೋಣೆಯಲ್ಲಿ ಬದುಕುತ್ತಿದ್ದಾಗ ಎಷ್ಟು ಬಾರಿ ಅಮ್ಮನಲ್ಲಿ ಸಾರಿ ಕೇಳಿ ತವರಿಗೆ ಹೋಗೋಣವೆ ಎಂದು ಅನಿಸುತ್ತಿತ್ತು. ಇದೇ ವಿಷಯದಲ್ಲಿ ಪತಿಯೊಂದಿಗೆ ಆಗಾಗ ಸಣ್ಣ ಮಟ್ಟಿನ ಜಗಳವಾಗುತ್ತಿತ್ತು.ಜಗಳ ಆದರೂ ಕೂಡ ಸ್ವಲ್ಪವೇ ಹೊತ್ತಿನಲ್ಲಿ ಅದನ್ನು ಮರೆತು ಅದರ ಎರಡರಷ್ಟು ಪ್ರೀತಿಸುತ್ತಿದ್ದ ಕೇಶವ.ಬೆಳಗ್ಗೆ ಜಗಳಾಡಿ ಹೋದ ಕೇಶವನ ಬಗ್ಗೆ ದಿನವಿಡೀ ಸಿಡುಕಿನಿಂದ ಮನಸೋ ಇಚ್ಛೆ ತನ್ನೊಳಗೆ ಬಯ್ಯುತ್ತಿರುತ್ತಿದ್ದಳು ಸೌಜನ್ಯ.ಸಂಜೆ ಕೇಶವ ಬರುವಾಗ ಮೊಳ ಮಲ್ಲಿಗೆ ಹೂವು ತಂದು ಮುಡಿಸಿದಾಗ, ಬಿಸಿ ಬಿಸಿ ಕಡಲೆ ತಂದು ಬಾಯಿಯೊಳಗೆ ತುರುಕಿದಾಗ ಅವನ ಕಣ್ಣ ನೋಟಕ್ಕೆ ಅವಳ ಸಿಡುಕೆಲ್ಲ ಜರ್ರನೆ ಇಳಿದು ,ಅವನ ತೋಳಲ್ಲಿ ಮೈಮರೆಯುತ್ತಿದ್ದಳು.ತನಗಿದುವೇ ಸ್ವರ್ಗ ಎಂಬ ಭಾವ ಮೂಡುತ್ತಿತ್ತು.ಇದನ್ನೆಲ್ಲಾ ಈಗ ಯೋಚಿಸುತ್ತಾ ಕುಳಿತ ಸೌಜನ್ಯಳಿಗೆ ತನ್ನ ಪತಿ ಸ್ವಲ್ಪ ಒರಟನೇ... ಆದರೇನಂತೆ ಒರಟಾಗಿರುವವರಿಗೆ ಮಡದಿಯ ಮೇಲೆ ಪ್ರೀತಿ ಹೆಚ್ಚು..ನನ್ನಲ್ಲಿ ಜಗಳಾಡದೆ ಮತ್ತೆ ಯಾರಲ್ಲಿ ಜಗಳಾಡುತ್ತಾರೆ..?? ಮನಸ್ಸಲ್ಲಿ ಇದ್ದದ್ದನ್ನೆಲ್ಲ ಹೇಳಿ ಜಗಳಾಡಿದರೇ ಮನಸ್ಸು ಹಗುರಾಗಿ ಹೂವಾಗುವುದು.. ಮತ್ತೆ ಬೆಟ್ಟದಷ್ಟು ಪ್ರೀತಿ ತೋರುತ್ತಾ ಬಳಿಸೇರಲು ಮನವು ತವಕಿಸುವುದು.ಏನೇ ಆಗಲಿ ಸಮಾಜದಲ್ಲಿ ಮದುವೆಯಾದ ಹೆಣ್ಣು ಕಷ್ಟವೋ ಸುಖವೋ ಪತಿಯೊಂದಿಗೆ ಬಾಳಿದರೆ ಗೌರವ. ಪತಿಯ ಮನೆಯೇ ಅವಳಿಗೆ ಭದ್ರವಾದ ನೆಲೆಗಟ್ಟು.
ಎಂದು ಯೋಚಿಸುತ್ತಾ ತನ್ನ ಪತಿ ಬರುವ ಹೊತ್ತಿಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಬೇಕು ಎಂದು ಅಡುಗೆ ಮನೆ ಕಡೆಗೆ ತೆರಳಿದಳು.


ಮುಂದುವರಿಯುವುದು....

✍️... ಅನಿತಾ ಜಿ.ಕೆ.ಭಟ್.
 01-07-2020.














Monday, 29 June 2020

ಜೀವನ ಮೈತ್ರಿ ಭಾಗ ೯೬(96)



ಜೀವನ ಮೈತ್ರಿ ಭಾಗ ೯೬


     ಮಮತಮ್ಮ ಬೆಂಗಳೂರಿನ ಮಗನ ಮನೆಗೆ       ಬಂದು ಬಹಳ ಖುಷಿಯಾದರು.ಹಳ್ಳಿಯಂತೆ ಮಣ್ಣನ್ನು ಮೆಟ್ಟಬೇಕು ಅಂತಿಲ್ಲ, ಅಲ್ಲಿ ಇಲ್ಲಿ ಹುಳು ಹುಪ್ಪಟೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಅಂದವಾದ ನಯವಾದ ಗ್ರಾನೈಟ್ ನೆಲ. ಗುಡಿಸಿ ಒರೆಸುವುದು ಬಹಳ ಸುಲಭ. ಸಾರಣೆಯ ನೆಲದಷ್ಟು ಒರಟಾಗಿ ಇಲ್ಲದಿದ್ದುದರಿಂದ ಅತ್ತಿಂದಿತ್ತ ಓಡಾಡುವಾಗ ಬಹಳ ಜಾಗರೂಕರಾಗಿರಬೇಕು.ಬಾಲ್ಕನಿಯಲ್ಲಿ ನಿಂತರೆ ವಿಶಾಲವಾಗಿ ಸುತ್ತಮುತ್ತಲಿನ ಪ್ರದೇಶಗಳು ಎಲ್ಲವೂ ಕಾಣಿಸುತ್ತವೆ.ಸಂಜೆಯಾದರೆ ಹಲವಾರು ಜನ ವಾಕಿಂಗ್ ಮಾಡುವುದು, ಮಕ್ಕಳು ಆಟವಾಡುವುದು ಎಲ್ಲಾ ನೋಡಲು ಮಮತಮ್ಮನಿಗೆ ಬಹಳ ಹಿತವಾಗಿತ್ತು.

     ಅಡುಗೆಮನೆ ಉಸ್ತುವಾರಿಯನ್ನು ಮಮತಮ್ಮ ನಿರ್ವಹಿಸಿದರು. ಮಗ-ಸೊಸೆಗೆ  ಇಷ್ಟವಾಗುವ ತಿಂಡಿಗಳನ್ನು ಮಾಡಿದರು. "ನಾನು ಆಫೀಸಿನಿಂದ ಬಂದ ಮೇಲೆ ಮಾಡುತ್ತೇನೆ ಅತ್ತೆ" ಎಂದು ಹೇಳಿ ಮೈತ್ರಿ ಬೆಳಗ್ಗೆ ಹೊರಡುತ್ತಿದ್ದಳು."ನಾನು ಮಾಡಿದರೆ ಏನು..? ನಿನಗೂ ಸ್ವಲ್ಪ ಉಪಕಾರ " ಎಂದು ನಯವಾಗಿಯೇ ಸೊಸೆಗೆ ಹೇಳಿ ತಾನೇ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ನೆರೆಮನೆಯ ಶೈನಿ ಒಂದು ದಿನ ಸಂಜೆ ಇವರನ್ನು ನೋಡಿ ಮಾತಿಗೆಳೆದಳು.ಮಾತನಾಡುತ್ತಾ ಆತ್ಮೀಯರಾದರು ಇಬ್ಬರೂ." ನಿಮ್ಮ ಸೊಸೆಗೆ ಏನು ಕೊಬ್ಬು .. ಆಕೆ ಎಲ್ಲಾ ಕೆಲಸವನ್ನು ಗಂಡನಲ್ಲಿ ಮಾಡಿಸುತ್ತಾಳೆ. ಕೈತುಂಬಾ ಸಂಬಳ ಬರುತ್ತೆ ಎಂದು ಅಹಂಕಾರ ಅವಳಿಗೆ. "ಎಂದು ಅತ್ತೆಯ ಕಿವಿತುಂಬಿಸಿದಳು.

"ಇಲ್ಲ.. ಹಾಗೇನಿಲ್ಲ ..ಅವಳು ಬಹಳಷ್ಟು ಕೆಲಸಗಳನ್ನು ಮಾಡ್ತಾಳೆ.ಅಚ್ಚುಕಟ್ಟಾಗಿ ಕೆಲಸ ಮಾಡುವ ಕಲೆ ಆಕೆಗೆ ಒಲಿದಿದೆ.." ಎಂದು ಹೇಳಿ ಆಕೆಯ ಬಾಯಿಮುಚ್ಚಿಸಿ "ನನಗೀಗ ಸ್ವಲ್ಪ ಕೆಲಸವಿದೆ "ಎಂದು ಒಳಗೆ ಬಂದರು.
ಸಂಜೆ ಬಂದು ಮಗನಲ್ಲಿ ವಿಷಯ ಹೇಳಿಕೊಂಡಾಗ ಮಗನು "ಆಕೆಯ ಬಗ್ಗೆ ಎಚ್ಚರದಿಂದಿರಬೇಕಾಗಿದೆ.ಆಕೆ ಮೈತ್ರಿಯ ತಲೆಯು ಹಾಳು ಮಾಡಿಬಿಡುತ್ತಾಳೆ" ಎಂದ.

"ಇನ್ನೊಬ್ಬರ ಮಾತನ್ನು ಕೇಳಿದರೆ ಕಷ್ಟ."

"ಹೌದಮ್ಮ.. ನಾನು ಮೈತ್ರಿಗೆ ಅದನ್ನೇ ಹೇಳುತ್ತಿದ್ದೇನೆ."

"ನೋಡಿ ಯಾರು ಏನೇ ಅನ್ನಲಿ .. ನಾನು ಹೊರಗೆ ದುಡಿಯುವುದು  ಬೇಡ ಅನ್ನಲ್ಲ.. ಆದರೆ ಮಗು ಮಾತ್ರ ಈಗ ಬೇಡ ಎನ್ನುವ ನಿರ್ಧಾರ ಮಾಡಬೇಡಿ.."

ಅಮ್ಮನ ಮಾತನ್ನು ಕೇಳಿ ನಸುನಕ್ಕು ತಲೆಯಲ್ಲಾಡಿಸಿದ ಕಿಶನ್ ‌

ಅಮ್ಮ ಮುಂದುವರೆಸುತ್ತಾ "ವಿದ್ಯಾಭ್ಯಾಸ, ಮದುವೆ, ಸಂತಾನ- ಇವೆಲ್ಲ ಯಾವಾಗ ಆಗಬೇಕೋ, ಆಗಲೇ ಆದರೆ ಚಂದ. ಮುಂದೆ ಹಾಕುತ್ತಾ ಹೋದರೆ ನಮಗೆ ಬೇಕೆಂದಾಗ ಅವುಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ.ಆದ್ದರಿಂದ ಈ ವಿಚಾರದಲ್ಲಿ ಮಾತ್ರ ಉದ್ಯೋಗದ ನೆಪ ಹಿಡಿದು  ಮುಂದೆ ಹಾಕಬೇಡಿ."

ಎಂದಾಗ ಮೈತ್ರಿಯೂ ಅಲ್ಲಿಗೆ ಆಗಮಿಸಿದಳು. ಅವಳ ಕಣ್ಣಲ್ಲಿ ಕಣ್ಣಿಟ್ಟು ನಕ್ಕ ಕಿಶನ್ "ಏನು.. ಗೊತ್ತಾಯ್ತಾ ?"ಅಂದ.

"ನನಗೇನು ಗೊತ್ತು ..ನೀವಿಬ್ರು ಏನು ಮಾತಾಡಿದ್ದು ಅಂತ.."ಎಂದು ಕಣ್ಣು ಮಿಟುಕಿಸಿದಳು.

"ಅದೇ ..ಆದಷ್ಟು ಬೇಗ ಮುಂದಿನ ಪ್ಲಾನ್ ಮಾಡಬೇಕಂತೆ." ಎಂದ ಆಕೆಯ ಹೆಗಲ ಮೇಲೆ ಕೈಯ್ಯಿರಿಸಿ ಅವಳ ಮೊಗವನ್ನು ದಿಟ್ಟಿಸುತ್ತಾ..

 "ಈಗಲೇನಾ ..ಇಷ್ಟು ಬೇಗ.ಸ್ವಲ್ಪ ಸಮಯ ನಾನು ದುಡಿದು ಒಂದು ಚೂರು ಕೈಯಲ್ಲಿ ದುಡ್ಡು ಮಾಡಿಕೊಳ್ಳಬೇಕು."ಎನ್ನುತ್ತಾ ಕಣ್ಣರಳಿಸಿದಳು.

"ದುಡ್ಡು ಆಮೇಲಾದರೂ ಆಗುತ್ತೆ ..ಆದರೆ ಇದೆಲ್ಲಾ ಸಮಯ ಮೀರಿದರೆ ಮತ್ತೆ ಕಷ್ಟ. ನನಗೆ ಆದಷ್ಟು ಬೇಗ ಅಜ್ಜಿಯ ಪಟ್ಟ ಕೊಟ್ಟುಬಿಡಿ..."
ಎಂದಾಗ ಮೈತ್ರಿಯ ಮುಖ ಕೆಂಪೇರಿತ್ತು .ರಂಗೇರಿದ ಗುಳಿಕೆನ್ನೆಯ ಚೆಲುವೆಯನ್ನು ನೋಡಿ ಸಂತಸ ಪಟ್ಟ ಕಿಶನ್...



               *******


      ಕೇಶವನಿಗೆ ಅಪ್ಪ ಅಮ್ಮನ ನೆನಪು  ಬಂದು ಆಗಾಗ ಕಣ್ಣಂಚು ಒದ್ದೆಯಾಗುತ್ತಿತ್ತು. ಆದರೆ ಈ ಪರಿಸ್ಥಿತಿಯಲ್ಲಿ ಅಪ್ಪ ಅಮ್ಮನಲ್ಲಿ ಮಾತನಾಡಲು ಮುಜುಗರಪಡುತ್ತಿದ್ದ. ಮಾತನಾಡಿದರೆ ತನ್ನ ಸ್ಥಿತಿಗತಿಯನ್ನು ಹೇಳದೆ ಅಡಗಿಸಿಡಲು ಸಾಧ್ಯವಿಲ್ಲ. ಅಮ್ಮನಂತೂ ಕೇಳಿಯೇ ಕೇಳುತ್ತಾರೆ. ಆಗ ನಾನು ಕೂಡ ಭಾವುಕನಾಗಬಹುದು ಎಂದು ಯೋಚಿಸುತ್ತಿದ್ದ..ಒಂದು ತಿಂಗಳಲ್ಲಿ ನಮ್ಮದೇ ಆದ ಪುಟ್ಟ ಬಾಡಿಗೆ ಮನೆ ಮಾಡಿಕೊಂಡು,ನಂತರ ನಾನೇ ಕರೆ ಮಾಡುತ್ತೇನೆ ಎಂದು ನಿರ್ಧರಿಸಿದ..


        ಕೇಶವನಿಗೆ ಎರಡನೇ ತಿಂಗಳ ಸಂಬಳ ಬಂದಿತ್ತು. ಕೆಲವೇ ಸಾವಿರ ಸಂಬಳವನ್ನು ಮತ್ತೂ ಮತ್ತೂ  ಎಣಿಸಿ ಕಣ್ಣಿಗೊತ್ತಿಕೊಂಡನು. ಸೌಜನ್ಯ ತಾನು ದುಡಿದ ಕೆಲವು ಸಾವಿರವನ್ನು ಅವನ ಜೇಬಿನಲ್ಲಿಟ್ಟಳು. ಮೊದಲು ತಿಂಗಳಿಗೆ ಇಷ್ಟು ಹಣವನ್ನು ತನ್ನ ಮೇಕಪ್ , ಡ್ರೆಸ್ ಎಂದು ವಿನಿಯೋಗಿಸುತ್ತಿದ್ದವಳು  ಈಗ ಉಳಿತಾಯದ ಪಾಠವನ್ನು ಕಲಿತಿದ್ದಾಳೆ. ಜೀವನವೇ ಕಲಿಸಿದೆ ಅಂದರೆ ತಪ್ಪಾಗಲಾರದು.ಇಬ್ಬರು ಸೇರಿ ಬಾಡಿಗೆ ಮನೆ  ಹುಡುಕಾಟದಲ್ಲಿ ತೊಡಗಿದರು.


        ಅದೊಂದು ಪುಟ್ಟದಾದ  ಓಣಿ.ಓಣಿಯ ಇಕ್ಕೆಲಗಳಲ್ಲಿ ಹಳೆಯದಾದ ಮನೆಗಳು.  ಕಾಂಪೌಂಡ್ ರಕ್ಷಣೆ ಇಲ್ಲದ ಸಾಲು ಮನೆಗಳು.ಅತ್ತಿತ್ತ ಓಡಾಡುವ ಮಂದಿ.ಓಣಿಯೇ ಮಕ್ಕಳ ಆಟದ ಮೈದಾನ..ಒಂದು ಸಾಧಾರಣವಾದ ,ಹಳೆಯ ತಾರಸಿಮನೆ.  ಒಂದು ಸಣ್ಣ ಹಾಲ್ , ಒಂದು  ಬೆಡ್ ರೂಮ್,ಗೂಡಿನಂತಿರುವ ಅಡುಗೆ ಕೋಣೆ, ವಾಶ್ ರೂಮ್. ಅದಕ್ಕೆ 5000 ರೂಪಾಯಿ ಬಾಡಿಗೆ ಕೊಟ್ಟು ಕೇಶವ ಸೌಜನ್ಯ  ವಾಸಿಸಲು ನಿರ್ಧರಿಸಿದರು . ಇಂತಹ ಓಣಿಯೆಂದರೆ ಅಸಹ್ಯ ಪಡುತ್ತಿದ್ದ ಸೌಜನ್ಯಳಿಗೆ ಈಗ ಅನಿವಾರ್ಯವಾಗಿತ್ತು. ಕೇಶವನ ಅಮ್ಮ ಕೊಟ್ಟ ದುಡ್ಡು  ಉಪಯೋಗಕ್ಕೆ ಬಂತು.

         ಒಂದು ಭಾನುವಾರ ಇಬ್ಬರು ಸೇರಿ ಆ ಮನೆಯನ್ನೆಲ್ಲ ಸ್ವಚ್ಛಗೊಳಿಸಿದರು. ಬರೀ ಧೂಳು ಕಸವೇ ತುಂಬಿದ ಮನೆಯನ್ನು ಸ್ವಚ್ಛಗೊಳಿಸಲು ಒಂದು ದಿನ ಬೇಕಾಯಿತು.   ಒಂದು ಶುಭ ಮುಹೂರ್ತದಲ್ಲಿ ಹಾಲುಕ್ಕಿಸಿ ಮನೆಯೊಳಗೆ ಪ್ರವೇಶಿಸಿದರು . ಮಡದಿಯ ಮುಖವನ್ನು ನೋಡುತ್ತಾ "ಕಷ್ಟಪಟ್ಟು ದುಡಿದು ಬಾಡಿಗೆ ಮನೆ ಮಾಡಿಕೊಂಡೆವು.ಹೀಗೇ ಮುಂದೆ  ಒಂದೊಂದೇ ಸೌಕರ್ಯಗಳನ್ನು ಮಾಡಿಕೊಳ್ಳೋಣ "ಎಂದು ಹೇಳಿ ಮಡದಿಯ ಮೇಲೆ ಪ್ರೀತಿಯ ಮಳೆಗೆರೆದ.ಗೆಳೆಯನ ಮನೆಯಲ್ಲಿ ಒಂದು ರೂಮಿನಲ್ಲಿ ಇಕ್ಕಟ್ಟಿನಲ್ಲಿ ಬದುಕುತ್ತಿದ್ದವರು ಇಂದು ಸ್ವಚ್ಛಂದವಾಗಿ ಹಾರಾಡುವ ನಲ್ಮೆಯ ಜೋಡಿ ಪಕ್ಷಿಗಳಂತಾದರು.


     ಅದೇ ದಿನ ಸಂಜೆ ಕೇಶವ ಅಮ್ಮನಿಗೆ ಕರೆ ಮಾಡಿದ. ಮಗನ ಒಂದು ಕರೆಗಾಗಿ ... ಅಮ್ಮಾ ಎಂಬ ಸವಿನುಡಿಗಾಗಿ.... ಕಾದು ಕಾದು ರೋಸಿಹೋಗಿದ್ದ ಸುಮಾ ಮಗನ ದನಿ ಕೇಳಿ ...ಮಾತಿಗಿಂತ ಅತ್ತದ್ದೇ ಹೆಚ್ಚು.


      ಬೆಂಗಳೂರಿನ ಬದುಕಿನಲ್ಲಿ ಒಂದೊಂದೇ ಭದ್ರವಾದ ಹೆಜ್ಜೆಯಿಡುತ್ತಾ ಸಾಗುತ್ತಿದ್ದ ಕೇಶವ  ಸೌಜನ್ಯ ಇದ್ದುದರಲ್ಲಿ ಸಂತೃಪ್ತಿಯಿಂದ ಬದುಕಲು ಕಲಿತರು.ಇಬ್ಬರ ಅನ್ಯೋನ್ಯವಾದ ಪ್ರೇಮದ ನಡುವೆ ಸೌಕರ್ಯಗಳ ಕೊರತೆ ಅಡ್ಡಿಯಾಗಲಿಲ್ಲ.

             *******

     ಶಶಿ ಮತ್ತು ಶಂಕರ ರಾಯರು ಮಗ ಮುರಳಿಯ ಮದುವೆ ವಿಚಾರದಲ್ಲಿ ನಿರತರಾಗಿದ್ದರು. ಮುರಳಿಗೆ ತನ್ನ  ಮದುವೆಯಾಗುವ ಹುಡುಗಿ ತನಗೆ ಸರಿಸಮವಾದ ಉದ್ಯೋಗ ಹೊಂದಿದ್ದಾಳೆ ಎಂಬುದು ಬಹಳ ಖುಷಿಯ ವಿಚಾರವಾಗಿತ್ತು
. ನಿಶ್ಚಿತಾರ್ಥ ಮಹತಿಯ ಮನೆಯಲ್ಲೇ ನಡೆಯುವುದೆಂದು ನಿಶ್ಚಯವಾಯಿತು.ಶಶಿ ಹಾಗೂ ಶಂಕರ ರಾಯರು ತಮ್ಮ ಕಡೆಯಿಂದ ಕರೆದುಕೊಂಡು ಹೋಗುವ ನೆಂಟರಿಗೆಲ್ಲಾ ಕರೆ ಮಾಡಿ ವಿಷಯ ತಿಳಿಸಿದರು.ಶಾಸ್ತ್ರಿ ನಿವಾಸದಿಂದ ಒಬ್ಬರನ್ನು ಬನ್ನಿ ಎಂದಿದ್ದರು. ಆದರೆ ಭಾಸ್ಕರ್ ಶಾಸ್ತ್ರಿಗಳು ಮಾತ್ರ ಉದಾಸೀನ ಮಾಡಿದರು.ಮಹಾಲಕ್ಷ್ಮಿಅಮ್ಮನಿಗೆ ತಾನಾದರೂ ಹೋಗಬೇಕು ಎಂಬ ಆಸೆ.ಗಂಡ ಮಗ ಒಪ್ಪಿಗೆಯಿತ್ತರು. ಶಶಿಯಲ್ಲಿ ಹೇಳಿಯೂ ಆಯ್ತು. ಮಹಾಲಕ್ಷ್ಮಿ ಅಮ್ಮ  ಹೋಗುವುದೆಂದು  ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು.ಇನ್ನು ಎರಡು ದಿನ ಇರುವಾಗ ಶಶಿ ಕರೆಮಾಡಿ "ವಾಹನದಲ್ಲಿ ಜನ ಭರ್ತಿಯಾಗಿದೆ ,ಸೀಟು ಉಳಿದಿಲ್ಲ ,ಅಮ್ಮ ನೀನು ಮದುವೆಗೆ ಬಾ.." ಎಂದಾಗ ಅಮ್ಮನಿಗೆ ಬಹಳ ದುಃಖವಾಯಿತು.ನನಗೆ ಒಬ್ಬಳಿಗೆ ಒಂದು ಸೀಟು ಇಲ್ಲವೇ ..? ಎಂದು ಮನದಲ್ಲಿ ಕೊರಗಿ ಕಣ್ತುಂಬಿಕೊಂಡರು.


       ಸೀದಾ ಒಳಗೆ ಹೋಗಿ ಅಡುಗೆಮನೆಯಲ್ಲಿದ್ದ ಸೊಸೆ ಮಂಗಳಮ್ಮನಲ್ಲಿ ವಿಷಯ ಹೇಳಿ ಕಣ್ಣಂಚಿನಿಂದ ನೀರು ಒರೆಸಿದರು. "ಏನು ಮಾಡೋದು ಅತ್ತೆ .ಅವರ ಮನೆಯ ವಿಷಯದಲ್ಲಿ ಅವರು ನಿರ್ಧರಿಸಿದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಬೇಸರಿಸಬೇಡಿ ಮದುವೆಗೆ ಹೋಗೋಣ." ಎಂದು ಅತ್ತೆಯನ್ನು ಸಮಾಧಾನ ಮಾಡಿದರು. ಸಂಜೆ ಬೆಂಗಳೂರಿನಿಂದ ಗಾಯತ್ರಿ ಕರೆ ಮಾಡಿದಾಗ ಅವಳ ಬಳಿ ತಿಳಿಸಿದರು."ಹೋಗಲಿ ಬಿಡಿ ಅತ್ತೆ.. ನೀವು ಅವರ ನಡೆ-ನುಡಿಗೆ ತಲೆಕೆಡಿಸಿಕೊಳ್ಳಬೇಡಿ .ಹೇಗೂ ಬೆಂಗಳೂರಿಗೆ ಹೊರಡುವ ತಯಾರಿ ಮಾಡಿದ್ದೀರಲ್ಲ ...ಭಾನುವಾರ ಮಹೇಶನೊಂದಿಗೆ ಬಂದುಬಿಡಿ. ನಮ್ಮಲ್ಲಿ ಕೆಲವು ದಿನ ಇದ್ದು ,ನಂತರ ಮೈತ್ರಿಯ ಮನೆಗೆ ಭೇಟಿ ನೀಡಿ , ಸಾವಕಾಶವಾಗಿ ಊರಿಗೆ ಹೋಗಬಹುದು. "ಎಂದಾಗ ಮಹಾಲಕ್ಷ್ಮಿ ಅಮ್ಮನಲ್ಲಿ ಮತ್ತೊಮ್ಮೆ ಬೆಂಗಳೂರಿಗೆ ಹೋಗುವ ಆಸೆ ಚಿಗುರಿತು. ಸಂಜೆ ಶಾಲೆಯಿಂದ ಮಗ ಬಂದೊಡನೆ ಎಲ್ಲವನ್ನು ತಿಳಿಸಿದರು ಅಮ್ಮ. ಆಯಾಸಗೊಂಡು ಶಾಲೆಯಿಂದ ಹಿಂದಿರುಗಿದ್ದ ಶಾಸ್ತ್ರಿಗಳಿಗೆ ಕೋಪ ನೆತ್ತಿಗೇರಿತು. "ಎಂತಹ ಬುದ್ಧಿ ಶಶಿಯಕ್ಕನದು.. ಅಮ್ಮನನ್ನು ಕರೆದೊಯ್ಯುತ್ತೇನೆ ಎಂದು ಒಪ್ಪಿ, ನಂತರ ಏಕಾಏಕಿ ಸಾಧ್ಯವಿಲ್ಲ ಎನ್ನುವುದೇ..?" ಎಂದು ಶಶಿಯ ಮೇಲೆ ಹರಿಹಾಯ್ದರು.


     ಮಗ ಸಮಾಧಾನಗೊಂಡ ಮೇಲೆ ಮಹಾಲಕ್ಷ್ಮಿ ಅಮ್ಮ ಗಾಯತ್ರಿ ಹೇಳಿದ ವಿಚಾರವನ್ನು ಮಗನು ಮುಂದಿಟ್ಟರು.ಭಾಸ್ಕರ ಶಾಸ್ತ್ರಿಗಳು "ನನ್ನದೇನು ಅಭ್ಯಂತರವಿಲ್ಲ" ಎಂದರು. ಶ್ಯಾಮಶಾಸ್ತ್ರಿಗಳು "ಈಗ ಶಂಕರನ ಮನೆಗೆ ಹೋಗುವುದು ಅಷ್ಟು ಅನಿವಾರ್ಯವೇ..?" ಎಂದು ಪ್ರಶ್ನಿಸಿದರು. ಅವರಿಗೆ ಮಡದಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತಹ ಭಾವನೆ.ಆಗಾಗ ಬೇಕಾದಂತೆ ಕಾಫಿ ಚಹಾ ತಿಂಡಿ ಕೊಡುತ್ತಿದ್ದ ಮಡದಿ ಜೊತೆಯಲ್ಲಿ ಇಲ್ಲದಿದ್ದರೆ ಅಸಮಾಧಾನ. ಇನ್ನೊಮ್ಮೆ ನಾವಿಬ್ಬರೂ ಜೊತೆಯಾಗಿ ಬೆಂಗಳೂರಿಗೆ ಹೋಗೋಣ ಎಂದು ಪುಸಲಾಯಿಸಿದರು.ಆದರೆ ಮಗನ ಒಪ್ಪಿಗೆ ದೊರೆತ ಕಾರಣ ಮಹಾಲಕ್ಷ್ಮಿ ಅಮ್ಮ ಭಾನುವಾರ ಬೆಂಗಳೂರಿಗೆ ಹೋಗಲು ಸಿದ್ಧರಾದರು.


ಮುಂದುವರೆಯುವುದು...

✍️.. ಅನಿತಾ ಜಿ.ಕೆ .ಭಟ್ .
29-06 -2020.



Saturday, 27 June 2020

ಮದರಂಗಿಯ ರಂಗು ಮಾಸುವ ಮುನ್ನ




ಮದರಂಗಿಯ ರಂಗು ಮಾಸುವ ಮುನ್ನ

  " ಏಯ್...ಅದಲ್ಲ ರಾಜನಿಗೆ ಚಹಾಗೆ ಹಾಲು..ಅದು ನಿನ್ನೆಯ ಹಾಲು..ಕೆಳಗಡೆ ಇದೆ ನೋಡು.ಈಗ ತಾನೇ ಹಿಂಡಿ ತಂದ ನೊರೆ ಹಾಲು.ಅದನ್ನು ಹಾಕಿ ಚಹಾ  ಮಾಡಿ ಕೊಡು.."ಎಂಬ ಅತ್ತೆಯ ಏರುದನಿಗೆ ಹೆದರಿದಳು ಮೃದುಲಾ..ಆಕೆ ಮೊದಲು ತೆರೆದಿದ್ದ ನಿನ್ನೆಯ ಹಾಲಿನ ಪಾತ್ರೆಯಿಂದ ಹಾಲು ಹಾಳಾದ ವಾಸನೆ ಅವಳ ಮೂಗಿಗೆ ಬಡಿದಿತ್ತು.


       ಅತ್ತೆ ಹೇಳಿದ ಪಾತ್ರೆಯಿಂದ ನೊರೆ ಹಾಲು ಬಗ್ಗಿಸಿ,ಚಹಾ ಮಾಡಲು ಹೊರಟಳು.ನಿನ್ನೆ ಬೆಳಿಗ್ಗೆಯೇ ಚಹಾ ಮಾಡುವಾಗ ಅತ್ತೆಯ ಕೈಯಿಂದ " ಏನು ನಿನ್ನಮ್ಮ ಒಂದು ಲೋಟ ಚಹಾ ಮಾಡೋಕೂ ಕಲಿಸಲಿಲ್ವಾ?" ಎಂಬ ಮಾತು ಕೇಳಿ ಅಳು ನುಂಗಿಕೊಂಡಿದ್ದಳು.ಸಂಜೆ ಅತ್ತೆಯೇ ಮುಂದೆ ನಿಂತು ಚಹ ಮಾಡಲು ಹೇಳಿ ಕೊಟ್ಟಿದ್ದರು.


     ನೆರಿಗೆ ಮೇಲೆತ್ತಿ ಸೊಂಟಕ್ಕೆ ಕುತ್ತಿ, ಅತ್ತಿಂದಿತ್ತ ಓಡಾಡುತ್ತಿದ್ದ ಅತ್ತೆ ರಾಧಮ್ಮ.."ನೋಡು ಚಹಾ ಮಾಡುತ್ತಾ ಸುಮ್ಮನೆ ನಿಲ್ಲುವುದಲ್ಲ.. ಅಲ್ಲಿ ಒಲೆಯ ಪಕ್ಕ ದೋಸೆ ಹಿಟ್ಟಿದೆ.ದೋಸೆ ಕಾವಲಿ ಇಟ್ಟು ದೋಸೆ ಹುಯ್ಯಿ.."ಎಂದಾಗ ಅಳುಕಿನಿಂದಲೇ ಕಾವಲಿಗೆಯಿಟ್ಟು ದೋಸೆ ಮಾಡಲು ಹೊರಟವಳಿಗೆ ದೋಸೆ ಸರಿ ಎದ್ದು ಬಂದರೆ ಸಾಕು.. ಚೆನ್ನಾಗಿ ಆದರೆ ಸಾಕಪ್ಪಾ..ಎಂದೆಲ್ಲ ಚಿಂತೆ.. ಅಲ್ಲಿ ದೋಸೆ ಮಾಡುತ್ತಿದ್ದಂತೆ ಚಹಾ ಕುದಿದು ಮೇಲೆ ಬಂತು.ಉಕ್ಕುವುದೊಂದು ಬಾಕಿ. ಒಳ್ಳೆ ಪರಿಮಳ ಬರುತ್ತಿದೆ ..ಪತಿರಾಯರಿಗೆ ಖಡಕ್ ಚಹಾ ನನ್ನ ಕೈಯಿಂದ. ಎಂದುಕೊಳ್ಳುತ್ತಾ ಖುಷಿಯಿಂದ ಸೋಸಿದಳು ಮೃದುಲಾ.


       ದೋಸೆ ಕಾವಲಿಗೆ ಬಿಸಿಯಾಗುತ್ತಿತ್ತು. ಅವಳ ಮನಸ್ಸು ಯೋಚನೆಯಲ್ಲಿ ತೊಡಗಿತು. ಮದುವೆಯಾಗಿ ಕೇವಲ ನಾಲ್ಕು ದಿನವಾಗಿತ್ತು ಅಷ್ಟೇ. ಅಪ್ಪ ಅಮ್ಮನ ಮುದ್ದಿನ ಮಗಳು ಮೃದುಲಾ. ಮಗಳ ಯಾವ ಆಸೆಯನ್ನು ನಿರಾಸೆ ಮಾಡಲಿಲ್ಲ ಅಪ್ಪ ಅಮ್ಮ.ಮಗಳನ್ನು ಅವಳಿಷ್ಟದಂತೆ ಓದಿಸಿ  ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದರು.ಮಗಳ ಇಷ್ಟದಂತೆಯೇ ಆಭರಣಗಳನ್ನು ವಿನ್ಯಾಸಗೊಳಿಸಿ, ಅವಳಿಷ್ಟದ ಬಣ್ಣದ ಉಡುಗೆ ತೊಡುಗೆಗಳನ್ನು   ಖರೀದಿಸಿ ಮದುವೆಗೆ ಏರ್ಪಾಟು ಮಾಡಿದ್ದರು.ಅಮ್ಮ ಮಗಳಿಗೆ ಆಗಾಗ "ಮನೆಕೆಲಸ ,ಅಡುಗೆ ಕೆಲಸವನ್ನು ಕಲಿತುಕೋ "ಎಂದು ತಾಕೀತು ಮಾಡಿದರೆ..ಮಗಳು ಮುಖ ಊದಿಸಿಕೊಂಡು ಅಪ್ಪನ ಬಳಿ ತೆರಳುತ್ತಿದ್ದಳು.."ನನ್ನ ಮುದ್ದು ಮಗಳಿಗೇನೂ ಕಷ್ಟ ಕೊಡಬೇಡ.ಮದುವೆಯಾದ ಮೇಲೆ ಜವಾಬ್ದಾರಿ ತಾನಾಗಿಯೇ ಬರುತ್ತೆ..".ಎನುವ ಅಪ್ಪನನ್ನು ಕಂಡರೆ ಮಗಳಿಗೂ ಎಲ್ಲಿಲ್ಲದ ಅಕ್ಕರೆ.."ನನ್ನ ಮುದ್ದಿನ ಅಪ್ಪ.." ಎನ್ನುತ್ತಾ ಅಪ್ಪನನ್ನು ಹೊಗಳಿ ಅಟ್ಟಕ್ಕೇರಿಸಿ ತನ್ನ ಕೆಲಸ ಸಲೀಸಾಗಿ ಸಾಧಿಸುತ್ತಿದ್ದಳು.


       ಮದುವೆ ಹಿಂದಿನ ದಿನ ಮೆಹಂದಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಮೃದುಲಾಳ ಗೆಳೆಯ-ಗೆಳತಿಯರು, ಕುಟುಂಬದವರು ಎಲ್ಲರೂ ಸೇರಿ ಸಂಭ್ರಮಿಸಿದ್ದರು. ಅವಳ ಗೆಳತಿ ಶಿಲ್ಪ ಮದುಮಗಳ ಕೈಗೆ ಬಹಳ ಚೆನ್ನಾಗಿ ಮೆಹಂದಿ ಡಿಸೈನ್ ಹಾಕಿದಳು. ಶಿಲ್ಪಾಳ ಚಾಕಚಕ್ಯತೆಯನ್ನು ಎಲ್ಲರೂ ಕೂಡ ಹೊಗಳಿದ್ದರು.  ಮೆಹಂದಿ ಚೆನ್ನಾಗಿ ರಂಗು ಬಂದಾಗ ತನ್ನ ಕೈಯನ್ನು ತಾನೇ ನೋಡಿ ನಕ್ಕು ನಾಚಿ ರಂಗೇರಿದ್ದಳು.ಗೆಳೆಯರ ರೇಗಿಸುವಿಕೆಯಲ್ಲಿ  ತಾನೇ ಕಳೆದುಹೋಗಿದ್ದಳು.ರಾಜ್ ನ ಜೊತೆ ತನ್ನ ಭವಿಷ್ಯದ ಬದುಕನ್ನು ನೆನೆದು 'ವಾವ್..!! ನಾನೆಷ್ಟು ಲಕ್ಕೀ.. ಹ್ಯಾಂಡ್ ಸಮ್, ಲವ್ಲೀ ಬಾಯ್ ..ನನಗೆ ಸಿಕ್ಕಿದ್ದಾರೆ..ನಿನ್ನ ಪ್ರತಿ ಹೆಜ್ಜೆಗೂ ನನ್ನ ರಕ್ಷೆಯಿದೆ..ನಿನ್ನೆಲ್ಲಾ ಕೆಲಸಗಳಿಗೆ ನನ್ನ ಬೆಂಬಲವಿದೆ" ಎಂದು ಹೇಳುತ್ತಿದ್ದ ರಾಜ್'ನನ್ನು ಮನಸಲ್ಲೇ ಆರಾಧಿಸಿದಳು.



      ಮದುವೆಯ ಕಾರ್ಯಕ್ರಮಗಳೆಲ್ಲವೂ ಸುಸೂತ್ರವಾಗಿ ನೆರವೇರಿ ಮೃದುಲ ಪತಿಯ ಮನೆಗೆ ಕಾಲಿಟ್ಟಳು. ಕಂಗಳ ತುಂಬಾ ಕನಸ ತೇರು. ಅಪ್ಪ-ಅಮ್ಮ ತಾವೇ ಆಯ್ಕೆಮಾಡಿದ ಅಳಿಯ ರಾಜ್. ಮೃದುಲಳಿಗೂ ಬಹಳವೇ ಇಷ್ಟವಾಗಿದ್ದ. ಮದುವೆಗೆ ಮುನ್ನವೇ ಸಾಕಷ್ಟು ಬಾರಿ ಅವಳನ್ನು ಭೇಟಿಯಾಗಿದ್ದ. ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿದ್ದರು. ನವ ಜೋಡಿಯ ಜೀವನ ಆರಂಭವಾಯಿತು. ಮದುವೆಗೂ ಮೊದಲು ಓದು, ಮನರಂಜನೆಯಲ್ಲಿ ಮುಳುಗಿದ್ದ ಮೃದುಲಾಳಿಗೆ ಅಡುಗೆಯಂತೂ ಸ್ವಲ್ಪವೂ ಬರುತ್ತಿರಲಿಲ್ಲ. ಅಮ್ಮ ಕಲಿಯೆಂದರೆ "ಅದೇನು ಮಹಾವಿದ್ಯೆನಾ ?ನಾನು ಯೂಟ್ಯೂಬ್ ನೋಡಿ ಕಲಿಯಬಲ್ಲೆ..ಅಲ್ಲದೆ ನಾನೇನೂ ಒಬ್ಬಳೇ ಇರಲ್ಲ ಅಲ್ಲಿ..ನನ್ನ ರಾಜ್ ನನ್ನ ಜೊತೆ ಇರ್ತಾರೆ.. " ಎಂದು ಅಮ್ಮನಿಗೆ ಎದುರು  ಆಡುತ್ತಿದ್ದವಳಿಗೆ ಈಗ ಅಮ್ಮನ ಮಾತುಗಳು ಎಲ್ಲವೂ ಅರ್ಥವಾಗುತ್ತಿದೆ.




"ಏನೇ ದೋಸೆ ಮಾಡಿದ್ದೀಯಾ .." ಎಂಬ ಅತ್ತೆಯ ಮಾತಿಗೆ ವಾಸ್ತವಕ್ಕೆ  ಬಂದಿದ್ದಳು. ದೋಸೆ ಕಾವಲಿಗೆ ಮೇಲೆ ಸರಿಯಾಗಿ ತುಪ್ಪ ಸವರಿ ದೋಸೆ ಹಿಟ್ಟು ಹಾಕಿದಳು. ವೃತ್ತಾಕಾರವಾಗಿ ದೋಸೆ ಮಾಡಲು ಹೋಗಿ ಸಾಧ್ಯವೇ ಆಗಲಿಲ್ಲ. ದೋಸೆ ಹಿಟ್ಟು ಎದ್ದು ಬರುವಂತಾಯಿತು. ಆದರೂ ಛಲ ಬಿಡದೆ ಪ್ರಯತ್ನಪಟ್ಟು ಅಂದವಾದ ದೋಸೆ ಮಾಡಿದಳು.
"ಅತ್ತೆ ..ದೋಸೆ ಮಾಡಿಟ್ಟಿದ್ದೀನಿ..."ಎಂದಳು...
ಅತ್ತೆ ಮಗ ರಾಜನನ್ನು ತಿಂಡಿ ತಿನ್ನಲು ಕರೆದರು.ಮೃದುಲಾ ಗಂಡನಿಗೆ ತಟ್ಟೆ ಇಟ್ಟು ಬಡಿಸಲು ಹೊರಟಳು. ರಾಜ್ ಮಡದಿಯ ಕಡೆ ನೋಡಿ ನಸುನಕ್ಕು ತಿಂಡಿ ಚಹಾ ಸೇವಿಸುತ್ತಿದ್ದ.ಇದನ್ನು ಕಂಡ
ಅತ್ತೆ ಅವಳನ್ನು ಕಣ್ಣು ಕೆಕ್ಕರಿಸಿ ನೋಡಿ,..

" ಏನೇ ಇದು  ಚಹಾ ಇಷ್ಟು ಕಪ್ಪಗಾಗಿದೆ..? ದೋಸೆಯೆಲ್ಲ ದಪ್ಪ ದಪ್ಪವಾಗಿದೆಯಲ್ಲಾ.." ಎನ್ನುತ್ತಾ ಮಗನನ್ನು ನೋಡಿ "ಏನು ಜನಾನೋ ಏನೋ.. ಹೆಣ್ಣುಮಕ್ಕಳಿಗೆ ಸ್ವಲ್ಪಾನೂ ಅಡುಗೆ ಕಲಿಸಲ್ಲ.."ಎಂದಾಗ ಮೃದುಲಾಳ ಕಣ್ಣು ತುಂಬಿ ಬಂತು.. ರಾಜ್ ಏನೂ ಮಾತನಾಡದೆ ತಲೆತಗ್ಗಿಸಿ ಚಹಾ ಕುಡಿದು  ದೋಸೆ ತಿಂದು ಹೊರಟರು. ಮಾವನವರು ತಿಂಡಿಗೆ ಬರುತ್ತಿದ್ದಂತೆ ಗಡಿಬಿಡಿಯಲ್ಲಿ  ಅತ್ತೆ ಒಲೆಯ  ಮೇಲೆ ನೀರಿಟ್ಟು ಚಹಾ ಪುಡಿ ಹಾಕಿ ಕುದಿಸಿ ,ನಿನ್ನೆಯ ಹಾಲಿನ ಪಾತ್ರೆಯಿಂದ ಹಾಲು ತೆಗೆದು ಸೇರಿಸಿ, ಚಹಾ ಮಾಡಿ ಮಾವನ ಮುಂದಿಟ್ಟರು."ಆ ಕಡೆ ಸರಿ ..ನೀನು ಹೀಗೆ ದೋಸೆ ಮಾಡಿದರೆ ಯಾವಾಗ ಆಗೋದು"ಎನ್ನುತ್ತಾ ತಾನು ತುಂಬಾ ಹಿಟ್ಟು  ಹಾಕಿ ದಪ್ಪ ದಪ್ಪ ದೋಸೆ ಮಾಡಿದರು.. ಅಯ್ಯೋ ನಾನೀಗ ಇದಕ್ಕಿಂತ ಸುಂದರವಾಗಿ, ತೆಳ್ಳಗಾಗಿ ದೋಸೆ ಮಾಡಿದ್ದರೆ ನನ್ನನ್ನು ಆಡಿದರಲ್ಲ.. !!!! ನೊರೆಯ ಹಾಲಿನಿಂದ ಚೆನ್ನಾಗಿ ಚಹಾ ಮಾಡಿದರೂ  ಮಾತು ಕೇಳಬೇಕಾಯಿತು. ಆದರೆ ಮಾವನಿಗೆ ಮಾಡಿಕೊಟ್ಟದ್ದು ಹಾಳಾದ ಹಾಲಿನಿಂದ ಚಹಾ ಮತ್ತು ಅತಿಯಾಗಿ ದಪ್ಪವಾದ ದೋಸೆ...ತಾನು ಸಿನಿಮಾಗಳಲ್ಲಿ ಕಂಡಂತಹ,ಕಾದಂಬರಿಗಳಲ್ಲಿ ಓದಿದಂತಹ ಸನ್ನಿವೇಶವನ್ನು ಇನ್ನು ಇಲ್ಲಿ ಎದುರಿಸಬೇಕಾಗುತ್ತದೋ ಏನೋ...ನಿನಗೆ ಬೆಂಬಲ ನೀಡುತ್ತೇನೆ ಎಂದು ಭರವಸೆ ನೀಡಿದ್ದ ರಾಜ್ ಕೂಡಾ ಕಣ್ಣೆತ್ತಿಯೂ ನೋಡದೆ ಹೊರಟು ಹೋದರಲ್ಲ  ಎಂದುಕೊಂಡವಳಿಗೆ ಕಂಠ ಬಿಗಿದು ಬಂದು ರೂಮಿಗೆ ಓಡಿದಳು.





      ರೂಮಿಗೆ ಬಂದ ರಾಜ್ ಮಡದಿಯ ಕಣ್ಣೀರನ್ನು ಒರೆಸಿ ಕಣ್ಣಲ್ಲಿ ಕಣ್ಣಿಟ್ಟು ಕಂಡ.. ಮದರಂಗಿ ಇನ್ನೂ ಆರಿರದ ಅವಳ ಅಂಗೈ ಮೇಲೆ ತನ್ನ ಅಂಗೈಯನಿಟ್ಟ.. "ನನ್ನ ಸ್ವೀಟಿ " ಎನ್ನುತ್ತಾ ಮುಂಗೈ ಮೇಲಿನ ಮದರಂಗಿಯ ಚಿತ್ತಾರವನ್ನು ಸವರಿ ಸಂಭ್ರಮಿಸಿದವನಿಗೆ ಅದರ ಹಿಂದಿನ ಅವಳ ನೋವು ಅರಿವಾಗಲೇಯಿಲ್ಲ..ಮದರಂಗಿಯ ರಂಗು ಆರುವ ಮುನ್ನವೇ ಅವಳ ಮನಸು ಮುದುಡಿಕೊಂಡಿತು."ಶಿಲ್ಪಾ...ಈ ಮದರಂಗಿಯ ರಂಗು  ಕೋಣೆಯ ಒಳಗೆ ಮಾತ್ರ...ಅದರಾಚೆ ಏನು ಮಾಡಿದರೂ ರಾಂಗ್... ರಾಂಗ್..."ಎನ್ನುತ್ತಾ ಮದರಂಗಿಯ ಚಿತ್ತಾರವನ್ನು ಬಿಡಿಸಿದ ಗೆಳತಿಯಲ್ಲಿ ಕೂಗಿ ಹೇಳಬೇಕೆನಿಸಿತು.




✍️... ಅನಿತಾ ಜಿ.ಕೆ.ಭಟ್.
27-06-2020.

ಕನ್ನಡ ಪ್ರತಿಲಿಪಿ... ದೈನಿಕ ವಿಷಯ... ಮದರಂಗಿಯ ರಂಗಿನ ಹಿಂದೆ.... ಈ ವಿಷಯಕ್ಕೆ ಬರೆದ ಕಥೆ..


ಸೋಂಕಿನ ಕಾಲದಲ್ಲಿ ಅಮ್ಮನೆಂಬ ಶಿಕ್ಷಕಿ ರಕ್ಷಕಿ

ಸಾಮೂಹಿಕ ಸೋಂಕಿನ ಕಾಲದಲ್ಲಿ ಅಮ್ಮನೆಂಬ ಶಿಕ್ಷಕಿ,ರಕ್ಷಕಿ



     "ನಿಮ್ಮ ಮಕ್ಕಳಿಗೆ ಆನ್ಲೈನ್ ಪಾಠ ಶುರುವಾಯಿತಾ ? " ಇದು ಶಾಲಾಮಕ್ಕಳ ಪೋಷಕರು ಒಬ್ಬರಿಗೊಬ್ಬರು ಸಿಕ್ಕಾಗ ಮೊದಲು ಕೇಳುವ ಪ್ರಶ್ನೆ.ಮಕ್ಕಳ  ಶಿಕ್ಷಣವೆಂಬುದು ಓದು ಬರಹದ ಚೌಕಟ್ಟಿನ ಕೋಣೆಯೊಳಗಿದ್ದು , ಹೊರಜಗತ್ತಿಗೆ ತೋರುವ ಅಂಕಗಳಿಕೆಯೇ ಬಾಗಿಲಾಗಿಬಿಟ್ಟಿದೆ.ಚೌಕಟ್ಟಿನೊಳಗಿನ ಜ್ಞಾನಕ್ಕೆ ಮಹತ್ವ ನೀಡದೆ ಬಾಗಿಲಲ್ಲಿ ನೇತಾಡಿಸಿರುವ ಅಂಕಪಟ್ಟಿಗೆ ಪ್ರಾಧಾನ್ಯತೆ.ಇದನ್ನೆಲ್ಲಾ ಬುಡಮೇಲು ಮಾಡಲು ಸಾಧ್ಯವಿಲ್ಲದಿದ್ದರೂ, ಬಲವಾಗಿ ಅಲುಗಾಡಿಸಿಬಿಟ್ಟಿದೆ ಕೊರೋನಾ ಕೊವಿಡ್ ಮಹಾಮಾರಿ.


       "ಮನೆಯೆ ಮೊದಲ ಪಾಠಶಾಲೆ ..ಜನನಿ ತಾನೇ ಮೊದಲ ಗುರುವು" ಎನ್ನುವ ಸಾಲುಗಳಿಗೆ ಬೆಲೆ ನೀಡಲು ಇದು ಸಕಾಲ.ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತಹ ಶಿಕ್ಷಣವನ್ನು ನೀಡುವ ಕೆಲಸವೀಗ ಅಮ್ಮನ ಹೆಗಲ ಮೇಲಿದೆ. ಅಂಕಗಳಿಕೆಯ ಅಳತೆಗೋಲಿಗೆ ಸಿಗದಂತಹ ಸುರಕ್ಷತೆ,ಸ್ವಚ್ಛತೆ,ಉಳಿತಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ,ಕೆಮ್ಮುವಾಗ ಸೀನುವಾಗ ಟಿಶ್ಯೂ ಪೇಪರ್ ಬಳಸಿ ಜಾಗರೂಕತೆಯಿಂದ ಕಸದ ಬುಟ್ಟಿಗೆ ಹಾಕುವುದು, ಮಾಸ್ಕ್ ಸರಿಯಾದ ಕ್ರಮದಲ್ಲಿ ಧರಿಸುವುದು,ಆಗಾಗ ಕೈ ತೊಳೆದುಕೊಳ್ಳುವುದನ್ನು ಅಮ್ಮ, ಪೋಷಕರು ಮಕ್ಕಳಿಗೆ ಕಲಿಸಬೇಕಿದೆ . ಎಲ್ಲದಕ್ಕೂ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆರಳು ತೋರುವಂತಿಲ್ಲ.ನಮ್ಮ ಕುಟುಂಬಕ್ಕೆ ನಾವೇ ಆರೋಗ್ಯ ರಕ್ಷಕ ಸಿಬ್ಬಂದಿ.ನಮ್ಮ ಮಕ್ಕಳಿಗೆ ನಾವೇ ಶಿಕ್ಷಕಿಯರು.

   
         ರಜಾ ದಿನಗಳ ಸಮಯ ಹಿಂದೆಂದಿಗಿಂತಲೂ ಅಧಿಕವಾಗಿ ಮುಂದುವರಿಯುತ್ತಿದೆ.. ಮುಂದಿನದೂ ಖಚಿತವಿಲ್ಲ.ಅಂದಾಗ ಮಕ್ಕಳು ಮನೆಯಲ್ಲಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗುವಂತೆ ಮಾಡಬೇಕಾಗುತ್ತದೆ.ಸದಾ ಆನ್ಲೈನ್ ಮನರಂಜನೆ ಪುಟ್ಟ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಎಳೆಯ ಮಕ್ಕಳಿಗೆ ಆನ್ಲೈನ್ ಪಾಠ ಬೇಡವೆಂದು ಸರ್ಕಾರವೇ ನಿರ್ಧರಿಸಿದೆ.ಹಿಂದಿನ ತರಗತಿಯನ್ನು ಪರೀಕ್ಷೆ ಬರೆಯದೆ ಉತ್ತೀರ್ಣರಾದ ಮಕ್ಕಳಿಗೆ ಮುಂದಿನ ವರ್ಷ ದ ಪಠ್ಯದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಲು ಅಮ್ಮನೇ ಶಿಕ್ಷಕಿಯಾಗಬೇಕು.ಇದೀಗ ಆನ್ಲೈನ್ ನಲ್ಲಿ ಪಠ್ಯ ಪುಸ್ತಕಗಳು ಲಭ್ಯವಾಗುತ್ತಿವೆ. ಡೌನ್ಲೋಡ್ ಮಾಡಿ ಪ್ರಿಂಟ್ ಹಾಕಿಕೊಂಡು ನಿಗದಿತ ವೇಳಾಪಟ್ಟಿಯನ್ನು  ತಯಾರಿಸಿ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು.ಮಧ್ಯೆ ಬ್ರೇಕ್, ಡ್ರಾಯಿಂಗ್ , ಪೈಂಟಿಂಗ್, ಕ್ರಾಫ್ಟ್ ನಂತಹ ಚಟುವಟಿಕೆಗಳೂ ಇರಲಿ.ಅಂತರ್ಜಾಲ, ಟಿವಿಯ ಕಾರ್ಯಕ್ರಮಗಳಲ್ಲಿ ಮುಳುಗಿದ ಮಕ್ಕಳಿಗೆ ಬದಲಾವಣೆ.ಅಮ್ಮಂದಿರಿಗೆ ಹಲವು ವರ್ಷಗಳಿಂದ ಬಳಸದೇ ಮರೆತು ಬಿಟ್ಟಿದ್ದ ತಮ್ಮ ಜ್ಞಾನವನ್ನು ಮತ್ತೆ ಒರೆಗೆ ಹಚ್ಚುವ ಸುಸಂದರ್ಭ.


       ಇಲ್ಲಿ ಸಿಲೆಬಸ್ ಎನ್ನುವುದು ಜ್ಞಾನಾರ್ಜನೆಗೆ ಮಾತ್ರ ಸೀಮಿತ.ಶಾಲೆ ಆರಂಭವಾದಾಗ ಇದೇ ಸಿಲೆಬಸ್ ಇರುವುದೋ ಅಥವಾ ಬೇರೆಯೋ..ಆ ಶಾಲೆಯ ಪಠ್ಯ ಬೇರೆ..ಈ ಶಾಲೆಯ ಟೆಕ್ಸ್ಟ್ ಬುಕ್ ಬೇರೆ ಎಂಬ ಗೊಂದಲಗಳನ್ನೆಲ್ಲ ಬದಿಗಿರಿಸಿ ..ದುಂಡಾಗಿ ಚೊಕ್ಕವಾಗಿ ಬರೆಯಲು,ತಪ್ಪಿಲ್ಲದಂತೆ ಓದಲು , ಓದಿದ್ದನ್ನು ತಾವೇ ಅರ್ಥೈಸಿಕೊಳ್ಳಲು ಅವಕಾಶ ನೀಡಿ.ಸಂಶಯ ಬಂದಲ್ಲಿ ನಿವಾರಿಸುವ ಹೊಣೆ ಹೊತ್ತುಕೊಳ್ಳಿ.ಮಕ್ಕಳಿಗೆ ಇಂದು ಸ್ವಯಂಕಲಿಕೆ ಎಂಬುದೊಂದು ವಿಧಾನವೇ ಮರೆಯುವಂತಿದೆ.ಕೇವಲ ಹೇಳಿಕೊಟ್ಟದ್ದನ್ನು ಬಡಬಡಿಸುವ ಅಭ್ಯಾಸ ರೂಢಿಯಾಗುತ್ತಿದೆ. ಅಮ್ಮ ನೀಡುವ ಶಿಕ್ಷಣ ಇದಕ್ಕಿಂತ ಭಿನ್ನವಾಗಿರಲಿ.


      ದೈನಂದಿನ ಖರ್ಚುವೆಚ್ಚಗಳ ಲೆಕ್ಕಾಚಾರ ಮಕ್ಕಳ ಕೂಡು ,ಕಳೆ ,ಗುಣಾಕಾರ ,ಭಾಗಾಕಾರದ ಲೆಕ್ಕಗಳಾಗಲಿ.ಪರಿಸರ ಅಧ್ಯಯನದಲ್ಲಿ ಬರುವಂತಹ ವಿಷಯಗಳನ್ನು ಮನೆಯ ಸುತ್ತಮುತ್ತ ಗಮನಿಸುವ,ಅರಿಯುವ ತಂತ್ರವನ್ನು ಅನುಸರಿಸಿ.ಉದಾಹರಣೆಗೆ ಎರೆಹುಳುಗಳ ಬಗ್ಗೆ ಪಠ್ಯದಲ್ಲಿದ್ದರೆ ಗಿಡಗಳ ಬುಡದಲ್ಲಿ ಇರುವ ಎರೆಹುಳನ್ನು ಅವರೇ ಹುಡುಕಲಿ. ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳ ವ್ಯತ್ಯಾಸವನ್ನು ಎರಡು ಗಿಡಗಳಿಗೆ ಈ ರೀತಿ ಗೊಬ್ಬರವನ್ನು ನೀಡಿ ತಿಳಿದುಕೊಳ್ಳಲಿ.


       ತಾಯಿ ಮತ್ತು ಮಕ್ಕಳ ನಡುವಿನ ಸಂಭಾಷಣೆ,ಸಂವಹನಕ್ಕೆ ಈಗ ಬೇಕಾದಷ್ಟು ಸಮಯವಿದೆ.ಮೊದಲಿನಂತೆ ಬೆಳಿಗ್ಗೆ ಬೇಗ ಏಳು, ಗಡಿಬಿಡಿಯಲ್ಲಿ ತಿಂಡಿ ತಿಂದು ಹೊರಡು,ಬಂದ ಮೇಲೆ ಹೋಂ ವರ್ಕ್, ಪ್ರಾಜೆಕ್ಟ್ ಮಾಡು ಎಂಬ ಯಾವುದೇ ಒತ್ತಡವಿಲ್ಲ.ಅಮ್ಮ ತಾನು ಬೆಳೆದ ರೀತಿ,ತನ್ನ ಶಾಲಾ ಜೀವನ,ಹಿರಿಯರಿಂದ ಕಲಿತ ಜೀವನ ಪಾಠ,ಎದುರಿಸಿದ ಸವಾಲುಗಳನ್ನು ಮಗುವಿನೊಂದಿಗೆ ಹಂಚಿಕೊಳ್ಳಬೇಕು.ಮಕ್ಕಳಿಗೆ ಕಷ್ಟವೇನೆಂದೇ ತಿಳಿಸದೇ ಬೆಳೆಸುವುದಕ್ಕಿಂತ ಕಷ್ಟವಿದ್ದರೂ ಧೈರ್ಯದಿಂದ ಮುನ್ನುಗ್ಗುವ ಛಲವನ್ನು ಬೆಳೆಸುವುದು ಮುಖ್ಯ.



   ಉಣ್ಣುವ ಪ್ರತಿಯೊಂದು ಅಗುಳು ಅನ್ನದ ಮಹತ್ವವನ್ನು ತಿಳಿಸಿ ಅದನ್ನು ಬೆಳೆಯುವ ರೈತರ ಶ್ರಮ,ಪಡಿಪಾಟಲು ಕಣ್ಣಿಗೆ ಕಟ್ಟುವಂತೆ ವಿವರಿಸಿ..ಇಂದಿನ ಮಕ್ಕಳಿಗೆ ಎಲ್ಲವನ್ನೂ ಚಿತ್ರದ ಮೂಲಕ ನೋಡಿ ಕಲ್ಪನಾಶಕ್ತಿ, ಗ್ರಹಿಸುವ ಶಕ್ತಿ ಸಾಮರ್ಥ್ಯ ಎಲ್ಲೋ ಅಡಗಿಬಿಟ್ಟಿದ್ದೆ.ಮತ್ತೆ ಜಾಗೃತವಾಗಲಿ...ನಮ್ಮ ಮಾತುಗಳನ್ನು ಕೇಳುತ್ತಾ ಹೋದಂತೆ ಕಲ್ಪಿಸಿಕೊಳ್ಳುವ ಅಭ್ಯಾಸ ಬೆಳೆಯಬೇಕು..ಅದು ಹೇಗೆ?..ಇದು ಏಕೆ ?ಎಂದು ಪ್ರಶ್ನಿಸಿ ಉತ್ತರ ಪಡೆದುಕೊಳ್ಳುವ ಚಾಕಚಕ್ಯತೆ ಮುಂದುವರಿಯಲಿ.


   ಸಾರ್ವತ್ರಿಕ ಸೋಂಕಿನ ಕಾರಣದಿಂದ ಮಕ್ಕಳಿಗೆ ದೈಹಿಕ ಸ್ವಚ್ಛತೆಯ ಅಗತ್ಯವನ್ನು ಈಗ ಹೇಳಲೇಬೇಕಾದ ಮತ್ತು ಶಿಸ್ತು ಬದ್ಧವಾಗಿ ರೂಢಿಸಬೇಕಾದ ಸಮಯ.."ಅಮ್ಮಾ ..ಈ ವೈರಸ್ ಎಷ್ಟು ಸಮಯ ಇರುತ್ತೆ.?.ಸೋಂಕು ಹೇಗೆ ಬರುತ್ತೆ?..ನನಗೂ ಬಂದರೆ ಏನು ಮಾಡಲಿ ? "ಎಂಬೆಲ್ಲ ಪ್ರಶ್ನೆಗಳಿಗೆ ...ಮೊದಲು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ನೀಡಿ..ನಂತರ ನಿಮ್ಮದೇ ರೀತಿಯಲ್ಲಿ ವಿವರಿಸಿ.ಆಗ ತಾನು ಓದಿ ತಿಳಿದ ವಿಚಾರ ಮತ್ತು ಸುತ್ತಮುತ್ತಲಿನ ಈಗ ನಡೆಯುತ್ತಿರುವ ಸೋಂಕು ಹರಡುವಿಕೆಯನ್ನು ತನ್ನದೇ ಆದ ರೀತಿಯಲ್ಲಿ ಮಗು ಅರ್ಥೈಸಿಕೊಂಡು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತದೆ.


      ನಮ್ಮ ಅಭಿಪ್ರಾಯಗಳನ್ನು ಮಕ್ಕಳ ಮೇಲೆ ಹೇರದೆ ಪ್ರತಿಯೊಂದು ವಿಷಯದಲ್ಲೂ ಅವರದೇ ಆದ ನಿಲುವುಗಳನ್ನು ಹೊಂದುವಂತೆ ಮಾಡುವುದು ಅಮ್ಮನೆಂಬ ಶಿಕ್ಷಕಿಯ ಕೈಯಲ್ಲಿದೆ.ಅವಸರವಿಲ್ಲದ ಕಲಿಕೆ ಮಕ್ಕಳನ್ನು ಪ್ರಬುದ್ಧರನ್ನಾಗಿ ಮಾಡುತ್ತದೆ.ಮಕ್ಕಳ ಬೆಳವಣಿಗೆ, ಶಿಸ್ತು ಬದ್ಧವಾದ ನಡವಳಿಕೆಗೆ ಅಮ್ಮನ ಮಾರ್ಗದರ್ಶನ ಅತೀ ಅಗತ್ಯವಾಗಿದೆ.


     
✍️... ಅನಿತಾ ಜಿ.ಕೆ.ಭಟ್.
28-06-2020.




   
   

Friday, 26 June 2020

ಜೀವನ ಮೈತ್ರಿ ಭಾಗ ೯೫(95)


ಜೀವನ ಮೈತ್ರಿ ಭಾಗ ೯೫


         ಮೈತ್ರಿ  ಟ್ರೈನಿಂಗ್  ಮುಗಿದು  ಉದ್ಯೋಗಕ್ಕೆ ಸೆಲೆಕ್ಟ್ ಆದಳು.ಮನೆಯವರಲ್ಲಿ ಹೇಳಿ ಆಶೀರ್ವಾದವನ್ನು ಪಡೆದುಕೊಂಡಳು.ತಮ್ಮನಲ್ಲಿ "ನನಗಿನ್ನು ಪ್ರತೀ ತಿಂಗಳು ಸಂಬಳ ಬರುತ್ತೆ "ಅಂತ ಕೊಚ್ಚಿಕೊಂಡಳು.."ನನ್ನ ಮುದ್ದಿನ ಅಕ್ಕ.. ಇನ್ನು ನಂಗೆ ಆಗಾಗ ಗಿಫ್ಟ್, ದುಡ್ಡು ಕೊಡ್ತಾನೇ ಇರ್ತಾಳೆ.." ಅಂತ ತಾನೂ ಬಿಡದೇ ರೇಗಿಸಿದ..
ನೆರೆಮನೆಯ ಶೈನಿಗೆ ಸಿಹಿ ಹಂಚಿದ್ದೂ ಆಯಿತು.ಅಷ್ಟು ದೂರ ಹೋಗೋದು, ತಡವಾಗಿ ಮನೆಗೆ ವಾಪಾಸಾಗುವುದು ಕಷ್ಟ ಅಲ್ವಾ ..!! ಅಂತ ಅವಳ ಬಾಯಿಯಿಂದ ಹೇಳಿಸಿಕೊಂಡೂ ಮುಖ ಸಣ್ಣ ಮಾಡಿದ್ದೂ ಆಯಿತು.ಅದನ್ನು ಕೇಳಿಸಿಕೊಂಡ ಕಿಶನ್ "ಇನ್ನೊಬ್ಬರು ಸಾವಿರ ಮಾತು ಹೇಳಬಹುದು.ಎಲ್ಲವನ್ನೂ ತಲೆಗೆ ತೆಗೆದುಕೊಳ್ಳಬಾರದು.ನಮಗೆ ಏನು ಬೇಕು, ಯಾವುದು ಬೇಡ ಎಂಬ ನಿರ್ಧಾರವನ್ನು ನಾವೇ ತೆಗೆದುಕೊಳ್ಳಬೇಕು.ಇನ್ನೊಬ್ಬರು ನಮ್ಮ ಒಳಿತಿಗಾಗಿ ಹೇಳುತ್ತಾರೋ ..ಅವರೊಳಗಿನ ಹುಳುಕಿಗಾಗಿ ಹೇಳುತ್ತಾರೋ.. ಅವರಿಗೇ ಗೊತ್ತು.ನಮ್ಮ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬೇರೆಯವರು ಹೇಳಿದ್ದಕ್ಕೆಲ್ಲಾ ಪ್ರಾಶಸ್ತ್ಯ ಕೊಡಬೇಡ."ಎಂದು ಮಡದಿಗೆ ಬೋಧಿಸಿದ.


        ಮೈತ್ರಿಗೀಗ ಪತಿಯೊಂದಿಗೆ ದಿನವೂ ಬೆಳ್ಳಂಬೆಳಗ್ಗೆ ಆಫೀಸಿಗೆ ಓಡುವ ತರಾತುರಿ.ಮನೆಗೆ ಬಂದಾಗ ಕೆಲಸಗಳು ಕೈಬೀಸಿ ಕರೆಯುತ್ತಿರುತ್ತವೆ. ಅದೆಲ್ಲದರ ಮಧ್ಯೆ ಒಮ್ಮೆ ಊರಿಗೆ ಹೋಗಲೇಬೇಕು ಎಂಬ ಹಪಹಪಿ.ಕಿಶನ್ ಗೂ ಅಪ್ಪ ಅಮ್ಮನ ನೋಡಬೇಕೆಂಬ ಬಯಕೆಯಾಯಿತು. ಸೋಮವಾರ ಮಂಗಳವಾರ ರಜೆ ಹಾಕಿ ಒಂದು ಶುಕ್ರವಾರ ರಾತ್ರಿ ಊರಿಗೆ ಹೊರಟರು. ಶನಿವಾರ ಬೆಳ್ಳಂಬೆಳಗ್ಗೆ ಕಿಶನ್ ಮನೆ ಕುಂಪೆಯ 'ಶಂಕರ ನಿಲಯ'ಕ್ಕೆ ಆಗಮಿಸಿದರು..ಮಳೆ ತುಂತುರು ಹನಿ ಬೀಳಲಾರಂಭಿಸಿತು.ಬಿಸಿಲಿನ ಬೇಗೆಗೆ ಕಾದ ಕಾವಲಿಯಂತಾದ ಭೂಮಿಗೆ ವರುಣನ ಕೃಪೆಯಿಂದ ಪನ್ನೀರ ಸಿಂಚನವಾಯಿತು. ಮಳೆಯ ಸಿಂಚನಕ್ಕೆ ಪುಳಕಗೊಂಡ ಭೂದೇವಿಯ ಮಡಿಲಿನಿಂದ ಹೊರಹೊಮ್ಮುವ ಮಣ್ಣಿನ ಸುವಾಸನೆಯನ್ನು ಆಘ್ರಾಣಿಸಿದಳು ಮೈತ್ರಿ..ಕಾರಿನಿಂದಿಳಿದವಳು ಮೇಲ್ಮುಖವಾಗಿ ನೋಡಿ ಪುಟ್ಟ ಮಕ್ಕಳಂತೆ ನಾಲಿಗೆಯನ್ನು    ಮಳೆಹನಿಗೊಡ್ಡಿ ಸಂಭ್ರಮಿಸಿದಳು. ಅವಳೊಳಗಿನ ಮುಗ್ಧ ಮನಸ್ಸಿಗೆ ತಲೆದೂಗಿದ ಪತಿ ತಾನೂ ಅವಳ ಜೊತೆ ಮಳೆಹನಿಯನ್ನು ನಾಲಿಗೆಯಲ್ಲಿ ಹಿಡಿದು ಖುಷಿ ಅನುಭವಿಸಿದ.ಜೀವನದಲ್ಲಿ ಇಂತಹ ಸಣ್ಣಪುಟ್ಟ ಸಂತಸವನ್ನೂ ಅನುಭವಿಸಬಹುದೆಂದು ಮಡದಿಯನ್ನು ನೋಡಿ ಕಲಿತ.ಕಾರಿನಿಂದ ಬ್ಯಾಗ್ ಕೆಳಗಿಡುತ್ತಿದ್ದಂತೆ ಅಂಗಳದಂಚಿನ ಮರದಿಂದ ಹಲಸಿನ ಹಣ್ಣಿನ ಪರಿಮಳ ಅವಳ ನಾಸಿಕಕ್ಕೆ ಬಡಿಯಿತು.ಸಂಪಿಗೆಯ ಹೂಗಳು,ಉದಯ ಮಲ್ಲಿಗೆ ಅರಳಲಾರಂಭಿಸಿ ಸುವಾಸನೆಯನ್ನು ಹರಡಿದವು.ಕಂಪನ್ನು ದೀರ್ಘ ಉಸಿರಿನಲ್ಲಿ ಒಳಗೆಳೆದುಕೊಂಡಳು ಮೈತ್ರಿ.



       ಮಮತಮ್ಮ ಗಣೇಶ ಶರ್ಮರಿಗೆ ಬಹಳ ದಿನಗಳ ನಂತರ ಮಗ ಸೊಸೆಯನ್ನು ನೋಡಿದ  ಸಂಭ್ರಮ. ಇವರಿಗೂ ಅಷ್ಟೇ...ಗಡಿಬಿಡಿಯ ಬದುಕಿನಲ್ಲಿ ನಾಲ್ಕು ದಿನದ ಬ್ರೇಕ್ ಬಹಳ ಖುಷಿಯಾಯ್ತು. ಕಿಶನ್ ಮೈತ್ರಿ ಮನೆಯವರಿಗೆಂದು ಉಡುಗೊರೆಗಳನ್ನು ತಂದಿದ್ದರು.ಕೊಟ್ಟಾಗ "ನಮಗೆ ಇದೆಲ್ಲ ಯಾಕೆ ಮಕ್ಕಳೇ "ಅಂದರು ಇಬ್ಬರೂ..
ಮೈತ್ರಿ ತನ್ನ ಟ್ರೈನಿಂಗ್ ವಿಷಯವನ್ನೆಲ್ಲ ಅತ್ತೆಯಲ್ಲಿ ಹಂಚಿಕೊಂಡಳು. ಅವರಿಗೆ ಸೊಸೆಯ ಮಾತುಗಳು ಕೇಳಲು ಬಹಳ ಆಸಕ್ತಿದಾಯಕವಾಗಿದ್ದವು.


      ವಿಧವಿಧವಾದ ಅಡುಗೆಗಳನ್ನು  ಮಾಡಿದರು.ಹಲಸಿನ ಕಾಯಿ ದೋಸೆ,ಹಪ್ಪಳ,ಚಿಪ್ಸ್,ಪಲ್ಯ,ಹಲಸಿನ ಹಣ್ಣಿನ ಸಿಹಿಕಡುಬು,ಗೆಣಸಾಲೆ , ಮಾವಿನ ಹಣ್ಣಿನ ಸಾಸಿವೆ, ರಸಾಯನ .. ಎಲ್ಲವನ್ನು "ನಿಮಗೆ ಬೆಂಗಳೂರಿನಲ್ಲಿ ಇದೆಲ್ಲ ಸಿಗಲಾರದು "ಎಂದು ಮಮತ ಮಾಡಿಕೊಟ್ಟರು..ಈ ಸಾರಿ ಮೈತ್ರಿ ಎಲ್ಲಾ ಅಡುಗೆಗಳನ್ನು ಹೇಗೆ ಮಾಡುವುದು ಎಂದು ಅತ್ತೆಯಲ್ಲಿ ಕೇಳಿ ನೋಟ್ ಮಾಡಿಕೊಳ್ಳುತ್ತಿದ್ದಳು. ಭಾನುವಾರ ಮೇದಿನಿ ಚಾಂದಿನಿ ಅವರ ಕುಟುಂಬವು ಆಗಮಿಸಿ ಆಗಮಿಸಿ ಅಣ್ಣ ಅತ್ತಿಗೆಯೊಂದಿಗೆ ಸಂಭ್ರಮಿಸಿತು. ಎರಡು ದಿನಗಳಲ್ಲಿ ಕಿಶನ್ ತಂದೆಯೊಂದಿಗೆ ತೋಟ ,ಗದ್ದೆ, ಗುಡ್ಡೆ ಎಲ್ಲಾ ಸುತ್ತಿ  ಕೃಷಿ ಕಾರ್ಯಗಳಲ್ಲಿ  ಕೈಜೋಡಿಸಿದ. ಮುಂದೆ ಹಾಗೆ ಮಾಡೋಣ ಹೀಗೆ ಮಾಡೋಣ ಎಂದು ಅಪ್ಪ-ಮಗ ಇಬ್ಬರೂ ಚರ್ಚಿಸುತ್ತಿದ್ದರು.


        ಮೈತ್ರಿ  ಮನೆಯೊಳಗಿದ್ದು ಅತ್ತೆಗೆ ಮನೆ ಕೆಲಸಕ್ಕೆ ಸಹಕರಿಸುತ್ತಿದ್ದಳು. ಅತ್ತೆ ಹವ್ಯಕರ ಶೈಲಿಯ ಹಲವಾರು ತಿಂಡಿಗಳನ್ನು ಹೇಗೆ ಮಾಡುವುದು ಎಂದು ವಿವರಿಸಿದರು. ಫ್ಲಾಟಿನ   ಬದುಕಿನ ಬಗ್ಗೆ ತಮಗೆ ಇದ್ದ ಕುತೂಹಲಕ್ಕೆ ಸೊಸೆಯ ಉತ್ತರ ಸಮಾಧಾನ ನೀಡಿತ್ತು. ಅವರ ಮನದೊಳಗೆ 'ನಾನು ಒಮ್ಮೆ ಬೆಂಗಳೂರಿಗೆ ಬರಬೇಕಿತ್ತು 'ಎಂಬ  ಇಂಗಿತವನ್ನು ಗಮನಿಸಿದಳು.

"ಈ ಸಾರಿ ಹೋಗುವಾಗ ನೀವೂ ಬನ್ನಿ  ಅತ್ತೆ" ಎಂದು ಅವರನ್ನು ಕರೆದಳು.

"ನಾನು ಬಂದರೆ ಇಲ್ಲಿ ಮಾವನಿಗೆ ಮನೆ, ದನದ ಕೊಟ್ಟಿಗೆ ಕೆಲಸ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ "ಎಂದು ಮಮತಾ ಜಾರಿಕೊಂಡರು.
ಇವರು ಬಂದ ಸಂಗತಿ ಗೊತ್ತಾಗಿ ತಾನೂ ಮಾತನಾಡಿಸಿ ಬರಬೇಕೆಂದಿದ್ದ ನೆರೆಮನೆಯ ಕೆಲಸದ ಹೆಣ್ಣು ಲಚ್ಚಿಮಿ ಕಳೆದ ಸಲದ ಎಚ್ಚರಿಕೆಯನ್ನು ನೆನೆದು ಸುಮ್ಮನಾದಳು.
ಮದುಮಗಳು ಮೊದಲಿಗಿಂತ ದಪ್ಪ ಆಗಿದ್ದಾಳಾ,ಕೆಲಸ ಮಾಡುತ್ತಾಳಾ , ಮನೆಯಲ್ಲಿ ದುಬಾರಿ ಬಟ್ಟೆ ಧರಿಸುತ್ತಾಳಾ ಎಂಬೆಲ್ಲ ಅವಳ ಕೂತೂಹಲ ಮಣ್ಣಾಯಿತು.

       ಸೋಮವಾರದಂದು ತವರು ಮನೆಗೆ ಹೋಗುವ ಸಂಭ್ರಮದಲ್ಲಿ ಇದ್ದಳು ಮೈತ್ರಿ. ಬೆಂಗಳೂರಿಂದ ಬರುವಾಗ ಮನೆಯವರಿಗೆ ತಂದಿದ್ದ ವಸ್ತುಗಳನ್ನು ತೆಗೆದುಕೊಂಡು ಬೆಳ್ಳಂಬೆಳಗ್ಗೆ ಹೊರಟರು. ಮನೆ ತಲುಪುತ್ತಿದ್ದಂತೆ ಅಜ್ಜ ಹೊರಗಿನ ಜಗಲಿಯಲ್ಲಿ ಕಾದುಕುಳಿತಿದ್ದರು. ನಗುನಗುತ್ತಾ ಬರಮಾಡಿಕೊಂಡ ಅಜ್ಜನ ಮುಖದಲ್ಲಿ ಪುಳ್ಳಿಯಲ್ಲಿ ಮಾತನಾಡದೆ ಎಷ್ಟು ಸಮಯವಾಯಿತು ಕಾತರವಿತ್ತು. ಅಜ್ಜಿ ಹೊರಗೆ ಬಂದವರೆ ".ಪುಳ್ಳೀ..ಕಂಪ್ಯೂಟರ್ ನೋಡಿ ನಿನ್ನ ಕಣ್ಣಸುತ್ತ ಕಪ್ಪಾಗಿದೆಯಲ್ಲ" ಎಂದು  ರಾಗ ಎಳೆದಾಗ..

"ಅಡ್ಡಿಯಿಲ್ಲ ಅಜ್ಜಿ.. ಕನ್ನಡಕ  ಹಾಕಿಕೊಳ್ಳದಿದ್ದರೂ ಇಂತಹ ಸೂಕ್ಷ್ಮಗಳನ್ನು ಗುರುತಿಸುತ್ತಾರೆ. "ಅಂದುಕೊಂಡು ನಕ್ಕಳು. ಮಂಗಳಮ್ಮನಿಗೆ ಮಗಳು ಅಳಿಯನಿಗೆ ಬೇಕು ಬೇಕಾದಂತೆ ಅಡುಗೆ ಮಾಡುವ ಸಂಭ್ರಮ. ಮಗಳು ಬರುವ ಮುನ್ನವೇ ಅವಳಿಗೆ ಏನು ತಿನ್ನಬೇಕು ಆಸೆಯಾಗಿದೆ ಕೇಳಿಕೊಂಡು ತಯಾರುಮಾಡುವ ಆಲೋಚನೆಯಲ್ಲಿದ್ದರು. ಉದ್ದಿನ ಚಕ್ಕುಲಿ,ಖಾರಕಡ್ಡಿ,ಉಂಡಲ ಕಾಳು, ಬಾಳೆಹಣ್ಣಿನ ಹಲ್ವಾ ಮಾಡಿಟ್ಟಿದ್ದರು.  ಮಹೇಶ ಅಕ್ಕನಿಗೆ.." ನಿಮ್ಮ ಹೆಸರಿನಲ್ಲಿ ನಮಗೂ ರುಚಿಕರ ಅಡುಗೆ ಸೌಭಾಗ್ಯ.. ಹೀಗೆ ಆಗಾಗ ಬರುತ್ತಿರಿ ಅಕ್ಕ..." ಎಂದು ಅಕ್ಕನಿಗೆ ಕಿಚಾಯಿಸಿದ.

      ಅಪ್ಪ ಭಾಸ್ಕರ ಶಾಸ್ತ್ರಿಗಳು ಮಗಳ ಉದ್ಯೋಗ ,ಪೇ ಸ್ಕೇಲ್ ,ಸಹೋದ್ಯೋಗಿಗಳ ಬಗ್ಗೆ ವಿಚಾರಿಸಿಕೊಂಡರು.ಅಳಿಯನಲ್ಲಿ ಮಹೇಶನ ಮುಂದಿನ ವಿದ್ಯಾಭ್ಯಾಸಕ್ಕೆ ಸಲಹೆಗಳನ್ನು ಕೇಳಿದರು.ನಾನಾ ಕೋರ್ಸ್ ಗಳ, ಫೀಸ್, ಕಾಲೇಜು,ಹಾಸ್ಟೆಲ್... ಬಗ್ಗೆ ಚರ್ಚಿಸಿದರು.ಮಂಗಳವಾರ ಬೆಳಗ್ಗೆ ಭಾಸ್ಕರ ಶಾಸ್ತ್ರಿಗಳು,ಮಂಗಳಮ್ಮ, ಕಿಶನ್ ಮೈತ್ರಿ ಮಹೇಶ್ ಎಲ್ಲರೂ ಗ್ರಾಮ ದೇವಿ ಶ್ರೀ ರಾಜರಾಜೇಶ್ವರಿಯ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಅಲ್ಲಿಂದ ಹೊರಬರುತ್ತಿದ್ದಂತೆ ಬಿಳಿ ಬಣ್ಣದ ಗೋವಿನ ಕೆಚ್ಚಲಿನಿಂದ ಅದರ ಪುಟ್ಟ ಬಿಳಿ ಕಪ್ಪು ಬಣ್ಣದ ಕರು ಹಾಲುಕುಡಿಯುತ್ತಿತ್ತು.
ದೇವಳದ ಸಮೀಪದಲ್ಲಿದ್ದ ಮನೆಯವರು ತಮ್ಮ
ದನದ ಹಾಲು ಹಿಂಡಿ ಮೇಯಲು ಬಿಟ್ಟಿದ್ದರು.ಮಂಗಳಮ್ಮ ಮಗಳು ಅಳಿಯನಲ್ಲಿ ತಮ್ಮ ಕೈಯಲ್ಲಿದ್ದ ಬಾಳೆಹಣ್ಣುಗಳನ್ನು ಕೊಟ್ಟು "ಗೋವಿಗೆ ತಿನಿಸಿ"ಎಂದರು.ಇಬ್ಬರೂ ಬಾಳೆಹಣ್ಣುಗಳನ್ನು ಗೋವಿಗೂ ಕರುವಿಗೂ ತಿನಿಸಿ ಅವುಗಳ ಮೈದಡವಿದರು.ಮನೆಗೆ ಬಂದಾಗ ಬೇಯಲು ಇಟ್ಟು ಹೋಗಿದ್ದ ಇಡ್ಲಿ ಬೆಂದಿತ್ತು.ಮಂಗಳಮ್ಮ ತೆಂಗಿನಕಾಯಿ ತುರಿದು,ಬಾಳೆಹಣ್ಣು ತುಂಡುಗಳನ್ನಾಗಿ ಮಾಡಿಟ್ಟು ಹೋಗಿದ್ದರು.ಅಜ್ಜಿ ಮೆಂತೆ ಕೊದಿಲು, ಬಾಳೆಹಣ್ಣಿನ ರಸಾಯನ ಸಿದ್ಧಪಡಿಸಿದ್ದರು.ಅಜ್ಜಿ,ಮಂಗಳಮ್ಮ ಬಡಿಸಿದರು.ಎಲ್ಲರೂ ಸವಿದರು.


    ಮಧ್ಯಾಹ್ನ ವಿಶೇಷವಾಗಿ ಅತಿರಸ ತಯಾರಿಸಿದ್ದರು ಅಜ್ಜಿ.ಮಂಗಳಮ್ಮ ಬೆಳೆದ ಹಲಸಿನ ಕಾಯಿಯ ಪಲ್ಯ,ದೀಗುಜ್ಜೆ ಸಾಂಬಾರ್,
ಹಲಸಿನ ಹಣ್ಣಿನ ಪಾಯಸ ತಯಾರಿಸಿದ್ದರೆ ಮಹೇಶ್ ಅಕ್ಕ ಭಾವನಿಗೆಂದು ಮಾವಿನ ಹಣ್ಣಿನ ಐಸ್ ಕ್ರೀಮ್ ತಯಾರಿಸಿದ್ದ.ಮೈತ್ರಿಯೂ ಸಹಕರಿಸಿದಳು..ಅಜ್ಜ ಕಿಶನ್ ಬಳಿ ಕುಳಿತು ಯೋಗಕ್ಷೇಮ ವಿಚಾರಿಸಿ ಕೊಂಡರು.ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲ ಬಹಳವಿತ್ತು ಅವರಿಗೆ.

    ಸಂಜೆ ಅಲ್ಲಿಂದ ಹೊರಟು ಕಿಶನ್ ಮನೆ ಕುಂಪೆ ಶಂಕರ ನಿಲಯಕ್ಕೆ ತಲುಪಿದರು. ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿದ್ದರು.. ಈ ಬಾರಿ ಮಮತಮ್ಮನನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದರು.


              *******



       ಕೇಶವ ಅತ್ತೆ ಮಾವನಲ್ಲಿ ಜಗಳ ಮಾಡಿಕೊಂಡು ಬಂದವನು ಗೆಳೆಯರ ಸಹಾಯ ಪಡೆದು ಪತ್ನಿಯೊಂದಿಗೆ ಬದುಕುತ್ತಿದ್ದ. ಗೆಳೆಯರ  ಮನೆಯಲ್ಲಿ ಒಂದು ರೂಮನ್ನು ತಾನು ಪಡೆದುಕೊಂಡು ಪುಟ್ಟ ಸ್ಟವ್ ಇಟ್ಟುಕೊಂಡು ಅಡುಗೆ ಮಾಡುತ್ತಿದ್ದರು. ತಮ್ಮದೇ ಆದ ಬಾಡಿಗೆ ಮನೆ ಮಾಡಿಕೊಳ್ಳಲು ಒಂದು ತಿಂಗಳು ಕಳೆಯಲಿ.. ಕೈಯಲ್ಲಿ ಸ್ವಲ್ಪ ಸಂಪಾದನೆ ಆಗಲಿ ಎಂದು ಕಾಯುತ್ತಿದ್ದರು. ವಿಶಾಲವಾದ ಮನೆಯಲ್ಲಿ ಬೆಳೆದ ಸೌಜನ್ಯಳಿಗೆ ಇದು ಬಹಳ ಕಿರಿಕಿರಿ ಅನಿಸುತ್ತಿತ್ತು. ಆಕೆಯ ಕಿರಿಕಿರಿಯನ್ನು ಗಮನಿಸಿದರೂ ಕೇಶವನಿಗೆ ಇದಲ್ಲದೆ ಬೇರೆ ದಾರಿ ಇರಲಿಲ್ಲ. ಸೌಜನ್ಯ ಭರತನಾಟ್ಯ ಪ್ರೋಗ್ರಾಮ್, ಹಾಡುಗಾರಿಕೆಯ ಅವಕಾಶ ಇದೆ ಎಂದು ಗೊತ್ತಾದರೆ ಸೀದಾ ಹೊರಟು ಬಿಡುತ್ತಿದ್ದಳು. ಅಷ್ಟಾದರೂ ಸಂಪಾದನೆ ಆಗಲಿ ಎಂದು. ಎಲ್ಲದಕ್ಕೂ ಪತಿಯ ಅಲ್ಪಸ್ವಲ್ಪ ಸಂಪಾದನೆ ಎಲ್ಲಿ ಸಾಕಾಗುತ್ತದೆ...?  ಎಂಬುದು ಅವಳ ವಾದ.ಸಂಪೂರ್ಣವಾಗಿ ನಿರಾಕರಿಸಲು ಕೇಶವನಿಗೂ ಮನಸ್ಸಾಗಲಿಲ್ಲ. ತಡರಾತ್ರಿ ಅವಳನ್ನು ವಾಪಾಸ್ ಕರೆದುಕೊಂಡು ಬರಲು ಕೇಶವ ತನ್ನ ಗೆಳೆಯರ ಬೈಕನ್ನು ಎರವಲು ಪಡೆಯುತ್ತಿದ್ದ.



ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
26-06-2020.


Wednesday, 24 June 2020

ಜೀವನ ಮೈತ್ರಿ ಭಾಗ ೯೪(94)



ಜೀವನ ಮೈತ್ರಿ ಭಾಗ ೯೪


          ಅಮ್ಮ ತಮ್ಮ ಒಂದು ವಾರ ಇದ್ದು ಹೊರಟು ನಿಂತಾಗ ಮೈತ್ರಿಗೆ ಬಹಳ ದುಃಖವಾಯಿತು. ಅಮ್ಮನಿದ್ದಾಗ ಅವಳಿಗೆ ಮನೆಯ ಕೆಲಸಗಳೆಲ್ಲ ಬಹಳ ಸಲೀಸಾಗಿತ್ತು. "ಶನಿವಾರ-ಭಾನುವಾರ ಬಿಡುವು ಮಾಡಿಕೊಂಡು ಮನೆ ಕಡೆ ಬನ್ನಿ "ಎಂದು ಹೇಳಿ ಮಂಗಳಮ್ಮ ಮಗಳ ಮನೆಯಿಂದ ತೆರಳಿದರು. ಮೈತ್ರಿ, ಕಿಶನ್ ಇಬ್ಬರೂ ಬಸ್ಸು ಹತ್ತಿಸಿ ಬಾಯ್ ಬಾಯ್ ಹೇಳಿದರು.


    ಅಮ್ಮ ಹೋಗಿ ಕೆಲವೇ ದಿನಗಳಲ್ಲಿ ಮುಟ್ಟಾದ ಅವಳಿಗೆ ನಿಶ್ಶಕ್ತಿ ,ಸೊಂಟನೋವು  ಬಹಳವಾಗಿ ಕಾಡುತ್ತಿತ್ತು. ಮೊದಲಬಾರಿ ಪತಿಯ ಮನೆಯಲ್ಲಿ ಮುಟ್ಟಾದಾಗ ದೂರ ಕುಳಿತುಕೊಂಡು ಬೇಜಾರಾಗಿದ್ದರೆ, ಅವಳಿಗೆ ಈಗ ಮೂರು ದಿನದ ಮಟ್ಟಿಗೆ ಮನೆಕೆಲಸದಲ್ಲಿ ಬಿಡುವು ಸಿಕ್ಕರೆ ಸಾಕಪ್ಪ ..ಎನಿಸುತ್ತಿತ್ತು. ಕಿಶನ್ ಎಲ್ಲದರಲ್ಲೂ ಮೈತ್ರಿಗೆ ಸಹಕರಿಸುತ್ತಿದ್ದರೂ ಅವಳ ತಿಂಗಳ ಮುಟ್ಟಿನ ನೋವನ್ನು ಅವಳೇ ಅನುಭವಿಸಬೇಕು.ಎಷ್ಟು ಬಾರಿ 'ನನಗೆ ಈ  ಟ್ರೈನಿಂಗ್, ಉದ್ಯೋಗ ಬೇಡವಾಗಿತ್ತು ' ಅಂದುಕೊಂಡಳು.ಟ್ರೈನಿಂಗಿಗೆ ಹಾಜರಾಗಿ ಎಲ್ಲರೊಂದಿಗೆ ಬೆರೆತಾಗ ಅದೇ ಖುಷಿ ಎನಿಸುತ್ತಿತ್ತು. ದೈಹಿಕ ಯಾತನೆ,ಆಯಾಸವೆಲ್ಲ ಮರೆತೇ ಹೋಗುತ್ತಿತ್ತು.


                *********


      ಬಾರಂತಡ್ಕದ ಬಂಗಾರಣ್ಣನ ಮನೆ ಕಳೆಗುಂದಿದೆ.  ಮಗ ಸೊಸೆ ಮನೆಯಿಂದ ದೂರವಾಗಿ ಎರಡು ತಿಂಗಳು ಕಳೆದರೂ ವಾಪಸ್ಸಾಗಿರಲಿಲ್ಲ. ಬಂಗಾರಣ್ಣನಿಗೆ ಅವರನ್ನು ವಾಪಸ್  ಕರೆಸಿಕೊಳ್ಳುವ ಮನಸ್ಸೂ ಇರಲಿಲ್ಲ. ಸುಮ ಮಾತ್ರ ಹಗಲು-ರಾತ್ರಿ ಮಗನದೇ ಕನವರಿಕೆಯಲ್ಲಿ ಕೊರಗಿ ಕೊರಗಿ ಸಣ್ಣಗಾಗಿದ್ದರು.ಮೊದಲೆಲ್ಲಾ ಊರಲ್ಲಿದ್ದ ಮದುವೆ-ಮುಂಜಿ ಪೂಜೆಗಳಲ್ಲಿ ತಪ್ಪದೆ ಹಾಜರಾಗುತ್ತಿದ್ದರು. ಈಗ ಜನರೊಡನೆ ಬೆರೆಯಲು ಹಿಂಜರಿಕೆ ಕಾಡುತ್ತಿದೆ. ಎಲ್ಲರೂ ಕೇಶವನ ಬಗ್ಗೆ ಕೇಳುವವರೇ. ಅವರಿಗೆಲ್ಲ ಏನು ಉತ್ತರಿಸಲಿ ಎಂದು ಯೋಚಿಸುತ್ತಾ ಅವರ ಕಂಠ ಬಿಗಿಯುತ್ತಿತ್ತು.ಹೆತ್ತ ಕರುಳಿನ ಸಂಕಟವನ್ನರಿತು ನಾವು ವರ್ತಿಸಬೇಕು,ನೋವಿನ ವಿಷಯವನ್ನು ಮತ್ತೆ ಕೆದಕಬಾರದು ಎಂಬ ವಿವೇಚನೆ ಎಲ್ಲರಿಗೂ ಇಲ್ಲವಲ್ಲ...!!

       ಇತ್ತೀಚಿನ ದಿನಗಳಲ್ಲಂತೂ ಸುಮಾಗೆ ರಾತ್ರಿ ಸ್ವಲ್ಪವೂ ನಿದ್ದೆ ಬರುತ್ತಿರಲಿಲ್ಲ. ಮಗ ಕೇಳಿದಂತೆ ಅವನಿಗೆ ಬೇಕಾದ ಅಗತ್ಯ ಸರ್ಟಿಫಿಕೇಟ್, ಬ್ಯಾಂಕ್  ಸೇವಿಂಗ್  ರೆಕಾರ್ಡ್ ಎಲ್ಲವನ್ನೂ ಬಹಳ ಮುತುವರ್ಜಿಯಿಂದ ಅಮ್ಮ ಕಳುಹಿಸಿದ್ದರು. ಮಗನಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾಳಜಿ ಅವರಲ್ಲಿತ್ತು.  ಅಷ್ಟು ಮಾಡಿಯೂ ಸಹ ಇತ್ತೀಚೆಗೆ ಒಂದು ತಿಂಗಳಿನಿಂದ ಆತನ ಕರೆ ಬಂದೇ ಇಲ್ಲ. ಅಮ್ಮನೇ ಸ್ವತಃ ಕರೆ ಮಾಡಿದರೂ ಕೂಡ ಕರೆ ಸ್ವೀಕರಿಸುತ್ತಿಲ್ಲ. ಇದನ್ನೆಲ್ಲಾ ಯಾರ ಬಳಿ ಹೇಳಿಕೊಳ್ಳಲಿ ಎಂದು  ಕೇಶವನ ತಾಯಿ ಸಂಕಟಪಡುತ್ತಿದ್ದರು.




        *********

       ಶೇಷಣ್ಣ ಮಾತ್ರ ತನಗೆ ಸಿಕ್ಕಿದ ಕಮಿಷನ್'ನಿಂದ ಬಹಳ ಸಂತಸಗೊಂಡು, ಬಹಳ ಮುತುವರ್ಜಿಯಿಂದ ಇನ್ನೂ ಹಲವರಿಗೆ ಸಂಬಂಧ ಕುದುರಿಸುವ ಪ್ರಯತ್ನ ನಡೆಸಿದ್ದ . ಅವನಿಗೆ ಶ್ರೀಮಂತ ಕುಳಗಳು ಎಂದರೆ ಭಾರಿ ಅಚ್ಚುಮೆಚ್ಚು. ಈ ಬಾರಿ  ಅವನ ಬೇಟೆ ಶಶಿಯ ಮಗ ಮುರಳಿ. ವೆಂಕಟ್ ಯಾವುದೋ ಯಕ್ಷಗಾನ ಕಾರ್ಯಕ್ರಮದಲ್ಲಿ ಕಂಡಾಗ ತನ್ನ ಅಣ್ಣನ ಮದುವೆ ವಿಚಾರ ಪ್ರಸ್ತಾಪಿಸಿದ. ಈಗ ಶೇಷಣ್ಣನ ಲಿಸ್ಟಿನಲ್ಲಿ ಇದ್ದ ವರಗಳ ಬಗ್ಗೆ ಪೈಕಿ ಮುರಲಿ ಈಗ ಹೆಚ್ಚು ಡಿಮಾಂಡ್ ಇರುವಂತಹ ವರನಾಗಿದ್ದ.'ಇದು ನನ್ನ ಕೈ ತಪ್ಪಿ ಹೋಗಬಾರದು ' ಎಂಬ ಅವನ ಆಸೆಯಂತೆ ಪ್ರತಿವಾರ ಶಶಿಗೆ ಮತ್ತು ಶಂಕರ ರಾಯರಿಗೆ ಫೋನ್ ಮಾಡಿ ಅಲ್ಲೊಬ್ಬಳು ಹುಡುಗಿಯಿದ್ದಾಳೆ, ಇಲ್ಲೊಬ್ಬಳು ಇದ್ದಾಳೆ ಎಂದು ಹೇಳುತ್ತಲೇ ಇದ್ದ.


     ಶಶಿಯ ಕಂಡಿಶನ್ ಲಿಸ್ಟ್ ಸ್ವಲ್ಪ ಉದ್ದವಿತ್ತು. ಅದಕ್ಕೆ ತಕ್ಕಂತೆ ಹುಡುಗಿ ಹುಡುಕುವುದು ಸವಾಲಿನ ಕೆಲಸ ಎಂದು ಅರಿತ ಶೇಷಣ್ಣ ಒಂದು ಉಪಾಯ ಹೆಣೆದ. ಮೊದಲು ಲಿಸ್ಟಿನಲ್ಲಿದ್ದ ವಿಷಯಗಳನ್ನು ಕಂಠಪಾಠ ಮಾಡಿಕೊಂಡು. ..ನಂತರ ಅವನು ಹೇಳುತ್ತಿದ್ದ ಹುಡುಗಿಯರಿಗೆಲ್ಲ ಆ ಲಕ್ಷಣಗಳಲ್ಲಿ ಕೆಲವನ್ನು ಸೇರಿಸಿ ಹೇಳುತ್ತಿದ್ದ..
'ಏನಾದರೂ ಆಗಲಿ ನನ್ನ ಜೇಬು ತುಂಬಿದರೆ  ಸಾಕು' ಎಂಬುದು ಅವನ ಆಶಯ.


        ಬೆಂಗಳೂರಿನಲ್ಲಿದ್ದ ಒಬ್ಬ ಇಂಜಿನಿಯರ್ ಕೂಸಿನ ವಿಷಯ ಶೇಷಣ್ಣನಿಗೆ ತಿಳಿದದ್ದೇ ತಡ.. ಶಂಕರ ರಾಯರಿಗೆ ಸುದ್ದಿ ಮುಟ್ಟಿಸಿದ. ಬಹಳ ವೇಗವಾಗಿ ಜಾತಕ ಪಟವನ್ನು ಕೂಡ ಕಳುಹಿಸುವ ವ್ಯವಸ್ಥೆ ಮಾಡಿದ. ಶಂಕರ ರಾಯರಿಗಿಂತಲೂ ಶಶಿ ತರಾತುರಿಯಲ್ಲಿದ್ದರು. ಜಾತಕ ಕೈಗೆ ಸಿಕ್ಕಿದಾಗ ಫೋಟೋದಲ್ಲಿದ್ದ ಹುಡುಗಿ ಬಹಳ ಲಕ್ಷಣವಾಗಿದ್ದಳು. ಶ್ರೀಮಂತ ಕುಳ ಎಂದು ಶೇಷಣ್ಣ ಹೇಳಿದ್ದಾರೆ. ಒಳ್ಳೆಯ ವಿದ್ಯಾವಂತೆ  ಕೂಡ. ಮತ್ತೆ ಯಾಕೆ ತಡ ಇವತ್ತು ಹೋಗಿ ಜಾತಕ ತೋರಿಸಿಕೊಂಡು ಬನ್ನಿ ಎಂದು ದುಂಬಾಲು ಬಿದ್ದರು.

       ಜಾತಕ ತೋರಿಸಲು ಮನೆಯಿಂದಲೇ ನಕ್ಷತ್ರ ಜಾತಕ ಕುಂಡಲಿ  ಹೇಳಿದರು ಶಂಕರರಾಯರು. ಅರ್ಧಗಂಟೆಯಲ್ಲಿ ಸಾಧಾರಣವಾಗಿ ಹೊಂದಾಣಿಕೆಯಿದೆ ಎಂದು ಉತ್ತರ ಬಂದಿತ್ತು. ಶಶಿ ಖುಷಿಯಿಂದ ಹುಚ್ಚೆದ್ದು ಕುಣಿದಂತೆ ಮಾಡುತ್ತಿದ್ದಳು. ಮಾತುಕತೆ ಮುಂದುವರಿದು ಎರಡೇ ದಿನದಲ್ಲಿ ಬೆಂಗಳೂರಿಗೆ ಹೋಗುವ ಸಿದ್ಧತೆಯಲ್ಲಿದ್ದರು. ಶಾಸ್ತ್ರೀ ನಿವಾಸಕ್ಕೆ ಕರೆ ಮಾಡಿ ವಿಷಯ ತಿಳಿಸಿ ಸೋದರಮಾವ ಬರಬೇಕೆಂದು ಕೋರಿಕೊಂಡರು. ಬೆಂಗಳೂರಿನಲ್ಲಿದ್ದ ಶಂಕರ ಶಾಸ್ತ್ರಿಗಳಿಗೆ ಫೋನ್ ಮಾಡಿ "ನಿಮಗೆ ಹೇಗೆ ಹೇಗಾದರೂ ಸಮೀಪವೇ. ಒಂದು ಘಳಿಗೆ ಬರಲೇಬೇಕು" ಒತ್ತಾಯಿಸಿದರು.


        ಭಾಸ್ಕರ ಶಾಸ್ತ್ರಿಗಳು ಅಕ್ಕನ ಮಾತುಗಳಿಗೆ ಹೂಂಗುಟ್ಟಿದರೂ ಅವರಿಗೆ ಹೋಗುವ ಆಸಕ್ತಿ ಇರಲಿಲ್ಲ. ಮಂಗಳಮ್ಮ ಒತ್ತಾಯ ಮಾಡುವ ಗೋಜಿಗೂ ಹೋಗಲಿಲ್ಲ. ಮಹಾಲಕ್ಷ್ಮಿ ಅಮ್ಮ ಮಾತ್ರ ಆಗಾಗ ಮಗನಿಗೆ ಹೇಳುತ್ತಲೇ ಇದ್ದರು "ಸೋದರಮಾವನಾಗಿ ನೀನು ಹೋಗಬೇಕಾದದ್ದು ಕರ್ತವ್ಯ" ಎಂದು.ತನ್ನ ಎಲ್ಲ ಕರ್ತವ್ಯಗಳನ್ನು ಪಾಲಿಸುವುದರಲ್ಲಿ ಎಂದೂ ತಪ್ಪದ ಭಾಸ್ಕರ ಶಾಸ್ತ್ರಿಗಳು ಶಶಿ ಅಕ್ಕನ ಮನೆಯ ವಿಚಾರದಲ್ಲಿ ಮಾತ್ರ  ನಿರುತ್ಸಾಹಿ ಯಾಗಿದ್ದರು. ಅದಕ್ಕೆ ಕಾರಣ ಕಣ್ಮುಂದೆ ಇದ್ದಂತೆ ಭಾಸವಾಗುತ್ತಿತ್ತು. ಶಂಕರ ಶಾಸ್ತ್ರಿಗಳು ಹೋಗುವ ಬಯಕೆ ವ್ಯಕ್ತಪಡಿಸಿದಾಗ ಗಾಯತ್ರಿ.. "ಅಲ್ಲ ರೀ ..ನಿಮಗೆ ಏನು ಅತೀ ಅಗತ್ಯ... ಮೊನ್ನೆ ತಾನೇ ನಮ್ಮ ಮನೆಯ ಮದುವೆಯಲ್ಲಿ ಶಶಿಯತ್ತಿಗೆ ಹೇಗೆ ನಡೆದುಕೊಂಡಿದ್ದರು ನೋಡಿದ್ದೀರಲ್ಲ..ಮರೆತೇ ಬಿಟ್ಟಿರಾ..?"

"ಆದರೆ ಮುರಳಿ ಹಾಗಲ್ಲ ಕಣೆ ..ಒಳ್ಳೆಯ ಹುಡುಗ."

      "ಮುರಳಿ ಒಳ್ಳೆಯವನೇ.. ಶಂಕರ ಭಾವನೂ ಒಳ್ಳೆಯವರೇ. ಆದರೆ ಕೆಟ್ಟಬುದ್ದಿಯ ಶಶಿ ಅತ್ತಿಗೆಗೆ ಸ್ವಲ್ಪ ತಿದ್ದಿಕೊಳ್ಳುವ ಮನಸ್ಸಾದರೂ ಬರಲಿ. ದುರ್ಗುಣಗಳನ್ನು ನಾವು ತಲೆಗೆ ಹಾಕಿಕೊಳ್ಳದೆ ಸಹಿಸುತ್ತೇವೆ ಎಂದಾದರೆ ಮತ್ತಷ್ಟು ಅದೇ ಬುದ್ಧಿಯನ್ನು ಮುಂದುವರಿಸುತ್ತಾರೆ.. ಕೆಲವೇ ವರ್ಷದಲ್ಲಿ ನಮ್ಮ ಮಗಳಿಗೆ ಮದುವೆ ಮಾಡುವ ಸಂದರ್ಭ ಬರಲಿದೆ ನೆನಪಿರಲಿ.."

      ಶಂಕರ ಶಾಸ್ತ್ರಿಗಳು ಮಡದಿಯ ಮಾತನ್ನು ಮೀರಿ ಹೋಗುವ ಉತ್ಸಾಹ ತೋರಲಿಲ್ಲ.  ಮುರಳಿಗೆ ಕೂಸು ನೋಡುವ ಶಾಸ್ತ್ರ ಸೋದರಮಾವನ ಅನುಪಸ್ಥಿತಿಯಲ್ಲಿ ನಡೆಯಿತು.ಮುರಲಿ ,ಶಶಿ,ಶಂಕರರಾಯರು,ಬೆಂಗಳೂರಿನಲ್ಲಿರುವ ಶಶಿಯ ಗೆಳತಿ ಮತ್ತು ಶೇಷಣ್ಣ ಇಷ್ಟೇ ಜನ ಹೋಗಿದ್ದರು.ಹುಡುಗಿ ಇಂಜಿನಿಯರಿಂಗ್ ಓದಿ ಮುರಲಿಯಷ್ಟೇ ಸಂಪಾದಿಸುವ ಉದ್ಯೋಗದಲ್ಲಿದ್ದಳು."ಉದ್ಯೋಗ ಬಿಡುವ ಯೋಚನೆ ನನಗಿಲ್ಲ" ಎಂದಳು.

"ನಮಗೂ ಅಂತಹ  ಬೇಡಿಕೆಯೇನಿಲ್ಲ.ನಿನ್ನಿಷ್ಟದಂತೆ ಇರಬಹುದು."ಎಂದರು.

"ಹಳ್ಳಿಯೆಂದರೆ ನನಗಿಷ್ಟ.ಆದರೆ ದನದ ಹಾಲು ಕರೆಯಲು , ಸೆಗಣಿ ಬಾಚಲು ನನ್ನಿಂದಾಗದು ಎಂದು ಮೊದಲೇ ಹೇಳುತ್ತೇನೆ "ಎಂದಳು..

ಶಶಿ ನಗುನಗುತ್ತಾ..."ಆಗಲಮ್ಮ..ನಾವೇನೂ ಸೊಸೆಯನ್ನು ಮನೆಚಾಕರಿ ಕೆಲಸಕ್ಕೆಂದು ಕರೆಸಿಕೊಳ್ಳುತ್ತಿಲ್ಲ "ಎಂದರು..

"ನಾವು ಬೆಂಗಳೂರಿನಲ್ಲೇ ಸೆಟ್ಲ್ ಆಗುವುದಾದರೆ ಮಾತ್ರ ಮುಂದುವರಿಯುವುದು. ." ಎಂದಳು..

"ಹಾಗೆಯೇ ಮಾಡೋಣ.. ಹಳ್ಳಿಗಳಲ್ಲಿ ಇಲ್ಲಿನಷ್ಟು ಸಂಪಾದನೆಯಿಲ್ಲ .. ದುಡಿಮೆಗೆ  ಜನ ಸಿಗುತ್ತಿಲ್ಲ..ಆದರೆ ಪರಿಸರ ಶುದ್ಧವಾಗಿದೆ.ತಾಜಾ ತರಕಾರಿ,ಹಣ್ಣು ಹಂಪಲುಗಳು ದೊರೆಯುತ್ತವೆ.. ನಾವು ಹಳ್ಳಿಯಲ್ಲೇ ಉಳಿಯುತ್ತೇವೆ.ಮಗನ ಕುಟುಂಬ ಬೇಕಾದಾಗ ಬಂದು ಹೋಗುತ್ತಿರಲಿ".ಎಂದರು..

ಎಲ್ಲಾ ಕಂಡೀಷನ್ ಗಳಿಗೆ ಮರಲಿಯ ಕಡೆಯವರು ಒಪ್ಪಿದ ನಂತರ ಹುಡುಗಿ ಮಹತಿಯ ತಂದೆ ತಾಯಿ "ನಾವು ನಾಳೆ ಉತ್ತರಿಸುತ್ತೇವೆ "ಎಂದರು.

    ಮಹತಿಯ ತಂದೆ ಸತ್ಯ ನಾರಾಯಣ ರಾಯರು ಬಿಸ್ನೆಸ್ ಮ್ಯಾನ್..ತಾಯಿ ಸ್ವರ್ಣ ಗೃಹಿಣಿ.ತಮ್ಮದೇ ಆದ ಫ್ಯಾಕ್ಟರಿಯಲ್ಲಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.ನಗರದಲ್ಲಿ ದೊಡ್ಡ ಬಂಗಲೆಯಂತಹ ಮನೆ,ಹೊರವಲಯದಲ್ಲಿ ವಿಶಾಲವಾದ ಎಸ್ಟೇಟ್ ಎಲ್ಲವೂ ಇತ್ತು.ಆದರೆ ಮಗಳ ಜಾತಕ ಎಲ್ಲಿಗೆ ಕಳುಹಿಸಿದರೂ ವಾಪಸ್ ಬರುವುದು ಏಕೆಂದು ತಿಳಿಯುತ್ತಿರಲಿಲ್ಲ.ನಾನಾ ಜ್ಯೋತಿಷಿಗಳಲ್ಲಿ ತೋರಿಸಿ ಹೋಮ ಹವನಗಳನ್ನೆಲ್ಲ ಮಾಡಿಸಿದ್ದರು.. ನಂತರ ಇದೇ ಮೊದಲ ಬಾರಿಗೆ ಜಾತಕ ಹೊಂದಾಣಿಕೆಯಾಗಿ ಹುಡುಗನ ಕಡೆಯವರು ಆಗಮಿಸಿದ್ದರು..


ಮನೆಗೆ ಹಿಂದಿರುಗಿದ ದಿನವೇ" ನಮಗೆ ಹುಡುಗ ಓಕೆ "ಎಂಬ ಉತ್ತರ ಸತ್ಯನಾರಾಯಣ ರಾಯರು ಹೇಳಿದ್ದನ್ನು ತಲುಪಿಸಿದ್ದರು ಶೇಷಣ್ಣ.ಮನೆಯವರಿಗೆ ಆನಂದವಾಗಿತ್ತು.

      ತವರಿನಿಂದ ಯಾರೂ ಆಗಮಿಸದೇ
ಇದ್ದುದಕ್ಕೆ ಕೇರ್ ಮಾಡದ ಶಶಿ "ನೀವು ಬರದಿದ್ದರೆ ಏನಂತೆ..?  ನಮಗೆ ಒಳ್ಳೆಯ ಸಂಬಂಧವೇ ದೊರೆತಿದೆ" ಎಂದು ತಮ್ಮ ಎದೆ ತಟ್ಟಿಕೊಂಡರು. ತವರಿನವರಿಗೆ ,ಶಂಕರರಾಯರ ಅಣ್ಣ,ತಂಗಿಯರಿಗೆ ತಿಳಿಸುವ ಗೋಜಿಗೇಹೋಗದೆ ಮಾಣಿಮನೆ ನೋಡುವ ಶಾಸ್ತ್ರವೂ ತರಾತುರಿಯಲ್ಲಿ ಮುಗಿಯಿತು.
ಶಶಿ ಅಮ್ಮನಿಗೆ ಫೋನ್ ಮಾಡಿ ಭಾವಿ ಸೊಸೆಯನ್ನು ಹಾಡಿಹೊಗಳಿದರು. ಶಶಿಯತ್ತಿಗೆಯ ಬುದ್ಧಿ ತಿಳಿದಿದ್ದ ಮಂಗಳಮ್ಮ   'ಮುಂದೆಯೂ ಇದೇ ಭಾವನೆಯನ್ನು ಉಳಿಸಿಕೊಂಡರೆ ಒಳ್ಳೆಯದು' ಎಂದು ಭಾವಿಸಿದರು.


ಮುಂದುವರಿಯುವುದು ...


✍️...ಅನಿತಾ ಜಿ.ಕೆ.ಭಟ್ .
24-06-2020.


Tuesday, 23 June 2020

ಮುದ್ದು ಗೊಂಬೆ




ಮುದ್ದುಗೊಂಬೆ


ಅಮ್ಮಾ..ಇದು ನನ್ನದೇ ಗೊಂಬೆ
ಯಾರಿಗೂ ಕೊಡಲಾರೆ
ಅಣ್ಣನು ಆಟಕೆ ಕೇಳಿದರೆ
ಕೊಡಿಸಿರಿ ಅವಗೆ ಬೇರೆ||

ಅಪ್ಪನು ತಂದಿಹ ಮುದ್ದಿನಗೊಂಬೆಯ
ದಿನವೂ ನಾನೇ ಮೀಯಿಸುವೆ
ಮೀಯಿಸಿ ಬೊಟ್ಟು ಪೌಡರ್ ಹಾಕಿ
ಲಾಲಿಯ ಹಾಡಿ ಮಲಗಿಸುವೆ||

ಅಳುತ ಎದ್ದರೆ ಸೊಂಟಕೆ ಸೆರಗನು ಕುತ್ತಿ
ಮಗುವನು ಎತ್ತಿ ಮುದ್ದಿಸುವೆ
ಮಣ್ಣಿ ಹಾಲು ಬೇಗನೆ ಕಾಯಿಸಿ
ಪುಟ್ಟನೆ ಚಮಚದಿ ತಿನ್ನಿಸುವೆ||

ಶಾಲೆಗೆ ನಾನು ಹೋಗಲೇ ಏನು
ಮುದ್ದಿನ ಗೊಂಬೆಯ ಬಿಟ್ಟು
ದಿನವಿಡೀ  ಗೊಂಬೆಗೆ ಕಾವಲು ನೀನೇ
ಅಣ್ಣಗೆ ಮುಟ್ಟಲು ಕೊಟ್ಟರೆ ಸಿಟ್ಟು||

ಒಂಟಿ ಗೊಂಬೆಗೆ ಆಟಕೆ ಬೇಕು
ಇನ್ನೊಂದು ಮುದ್ದು ಪುಟಾಣಿ
ಒಂದರ ಕೈಯೊಳು ಇನ್ನೊಂದರ
ಕೈಯಿರಿಸಿ ಶಾಲೆಗೆ ಹೋಗುವೆ ಕಾಣಿ||

✍️... ಅನಿತಾ ಜಿ.ಕೆ.ಭಟ್.
24-06-2020.
ಚಿತ್ರ ಹವಿಸವಿ ಕೃಪೆ

ಮಕ್ಕಳ ನೀರಾಟ






ಬಾಲರ ನೀರಾಟ


ಝುಳು ಝುಳು ಹರಿಯುವ
ತಿಳಿನೀರಲಿ ಖುಷಿಯ ಆಟ
ಬೊಗಸೆಯ ಜೋಡಿಸಿ
ಬಳುಕುವ ಮೀನ ಹಿಡಿವನೋಟ||


ಆಚೆಯ ದಡಕೂ ಈಚೆಯ ಕಡೆಗೂ
ಸಂಧಿಸುವ ಕಾಲು ಸಂಕ
ತುಂಟತನದ ಬಾಲರಿಗೆ
ನೀರಲಿ ಆಡುವ ತವಕ||


ಹಲಸಿನ ಮರವೋ ಕೆಸವಿನ ಸೊಪ್ಪೋ
ತುಂಬಿದೆ ಹಸಿರೇ ಹಸಿರು
ಮಳೆಯೋ ಬಿಸಿಲೋ ಏನೇಬರಲಿ
ಚಿಣ್ಣರಿಗೆ ಆಟವೆ ಉಸಿರು||


ಬಾಲ್ಯದ ದಿನಗಳ ಸ್ವಚ್ಛಂದತೆಗೆ
ಆಟಿಕೆ ಏನೂ ಬೇಡ
ಬೆಳೆಯುತ ಮುಂದಕೆ,ಬೆಳೆವುದು
ಬೇಡಿಕೆ ಪಟ್ಟಿಯು ಕೂಡಾ||


ಅಂಗಿಯೆ ಇರದ ಭಂಗಿಯ
ಮಗುವಿಗೆ ನೀರಲಿ ಮೋಜು
ಬಿಂಗಿಯ ಬಿಡದಿಹ ಹರೆಯ
ಮೀನನು ಹಿಡಿಯುವ ಗೌಜು||


✍️... ಅನಿತಾ ಜಿ.ಕೆ.ಭಟ್.
24-06-2020.


ಗಡಿಕಾಯುವ ಯೋಧರಿಗೆ ಗೌರವಾರ್ಪಣೆ


ಯೋಧರಿಗೆ ಗೌರವ ಸಲ್ಲಿಸೋಣ

ನಡುಗುವ ಚಳಿಯಲು
ಗಡಿಯನು ಕಾಯುವ
ಗಂಡೆದೆ ವೀರರ ನೆತ್ತರಕೋಡಿಗೆ
ಮಿಡಿದಿದೆ ಭಾರತ ಜನತೆ||೧||

ಹೊಂಚನು ಹಾಕಿ ನರಿಬುದ್ಧಿಯ
ಸಂಚನು ಚೀನಾ ಹೂಡಿ
ಮಿಂಚಿನ ಕಾರ್ಯಾಚರಣೆಗಿಳಿದರು
ಕೆಚ್ಚೆದೆ ಶೂರರು ನೋಡಿ||೨||

ನಮ್ಮಯ ಲಡಾಕ್ ಪ್ರಾಂತದಲಿ
ಸುಮ್ಮನೆ ಕಾಲಿಡುವಿರೇಕೆ?
ಕಿಮ್ಮತ್ತಿಲ್ಲದೆ ರುಂಡಚೆಂಡಾಡಿ
ಯಮನೆಡೆ ಅಟ್ಟುವೆವು ಜೋಕೆ||೩||

ನುಗ್ಗುವ ಯತ್ನದಲಿದ್ದವರನು
ಬಗ್ಗು ಬಡಿದು ಧರೆಗುರುಳಿಸಿ
ಕುಗ್ಗದೆ ಎದೆಯನು ನೀಡಿದ ಯೋಧರು
ಹಿಗ್ಗಿನಿಂದಲೇ ತಾಯರಕ್ಷಣೆಗೈದರು||೪||

ಚೋರ ಚೀನಾದ ದುರುಳತನಕೆ
ವೀರ ಮರಣವ ತಾವು ಪಡೆದು
ಭಾರತಾಂಬೆಯ ವೀರಶೂರ ಕಲಿಗಳು ವಿರಮಿಸಿಹರು ಬಾವುಟಹೊದ್ದು||೫||

ಸ್ವದೇಶೀ ವಸ್ತುಗಳ ಬಳಸುತ
ವಿದೇಶೀ ಚೀನಾದ ಮಾಲುಗಳ ತ್ಯಜಿಸಿ
ಅದರ ಮದವಡಗಿಸಿ,ಪಾಠಕಲಿಸಿ
ಯೋಧರಿಗೆ ಗೌರವ ಸಲ್ಲಿಸೋಣ||೬||

✍️... ಅನಿತಾ ಜಿ.ಕೆ.ಭಟ್.
24-06-2020.

ನಮ್ಮ ಮನೆ ಕೈ ತೋಟ... ಫೇಸ್ಬುಕ್ ಗ್ರೂಪ್ ನ ಥೀಂ..ನಮ್ಮ ಕೈತೋಟದ ಶ್ವೇತ ಪುಷ್ಪಗಳಿಂದ ಯೋಧರಿಗೆ ನುಡಿನಮನ ಅರ್ಪಿಸೋಣ...ಇದರಲ್ಲಿ ಪ್ರಕಟಿಸಿದ ಬರಹ..ಮತ್ತು ಹೂವು..

Monday, 22 June 2020

ಜೀವನ ಮೈತ್ರಿ ಭಾಗ ೯೩(93)




ಜೀವನ ಮೈತ್ರಿ ಭಾಗ ೯೩



         ಮೈತ್ರಿಗೆ ನಿದ್ದೆ ಸುಳಿಯುತ್ತಲೇ ಕಿಶನ್ ಫ್ಲಾಟಿನ ಕಡೆಗೆ ಆಗಮಿಸಿದ.ರಸ್ತೆಯಲ್ಲಿ ಬರುತ್ತಿದ್ದಾಗಲೇ ಮನೆಯತ್ತ ಕಣ್ಣುಹಾಯಿಸಿದವನಿಗೆ ಮನೆಯೊಳಗೆ ಮಂದಬೆಳಕು ಕಾಣಿಸಿದಾಗ 'ನನ್ನ ಮುದ್ಗೊಂಬೆ ಮಲಗಿರಬೇಕು ..ಛೇ.. ಎಷ್ಟು ಲೇಟಾಗಿಹೋಯ್ತು..'ಎಂದುಕೊಂಡ.ಲಿಫ್ಟ್ ಬರಲು ಇನ್ನೂ ಐದು ನಿಮಿಷ ಕಾಯಬೇಕು ಎಂದು ಸೀದಾ ಮೆಟ್ಟಿಲೇರುತ್ತಾ ಹೊರಟ.ಮನೆಯ ಬಾಗಿಲಿನ ಮುಂದೆ ನಿಂತಾಗ ಲಿಫ್ಟ್ ನಿಂದ ಪಕ್ಕದ ಮನೆಯವರು ಬಂದದ್ದನ್ನು ಕಂಡು ನಂಗೂ ಕಾಯಬಹುದಿತ್ತು ಎಂದುಕೊಂಡ.ಕಾಲಿಂಗ್ ಬೆಲ್ ಮಾಡಿದಾಗ.. ಮೈತ್ರಿ ಎಚ್ಚರಗೊಂಡು ನಿದ್ದೆಯ ಜೊಂಪಿನಲ್ಲಿ ಬಾಗಿಲು ತೆರೆದಳು.ಕಿಶನ್ ಬಾಗಿಲನ್ನು ಹಾಕಿದ. ಅಷ್ಟೇ..ಮಾತಿಲ್ಲ..ಮೌನ...ಕಣ್ಣಲ್ಲೇ ಸಂಭಾಷಣೆ...ಆಲಿಂಗನದಲ್ಲೇ ಉಪಚಾರ..ನಿದ್ದೆಯ ಜೊಂಪಿನಲ್ಲಿದ್ದವಳಿಗೆ ಪ್ರೀತಿಯಿಂದ ಕಚಗುಳಿಯಿಟ್ಟ.ಅವನ ಪ್ರೇಮದ ಹಸಿವನ್ನು ಮೊದಲು ತಣಿಸಲು ಸಂಪೂರ್ಣವಾಗಿ ತಲೆಬಾಗಿದಳು ಮೈತ್ರಿ...ಬರದ ಹೊಲಕೆ ವರ್ಷಧಾರೆಯು ತಂಪುಣಿಸಿದಂತೆ ಪರಸ್ಪರ ಅನುರಾಗದ ಸಿಂಚನ ಇಬ್ಬರನ್ನು  ತಣ್ಣಗಾಗಿಸಿತು.ಅರ್ಥಪೂರ್ಣ ಸಾಂಗತ್ಯದಲ್ಲಿ ಒಲವಿನ ಗೀತೆ ಹಾಡಿದರು ಕಿಶನ್ ಮೈತ್ರಿ.


                  *******


         ಹೀಗೆ ದಿನಗಳುರುಳಿದವು.ಅವರ ಸರಸಮಯ ದಾಂಪತ್ಯಕ್ಕೆ ತಿಂಗಳು ತುಂಬಿತು..ಮೈತ್ರಿ ನೆರೆಹೊರೆಯ ಹೆಣ್ಣು ಮಕ್ಕಳ ಸ್ನೇಹ ಸಂಪಾದಿಸಿದಳು.ಹಗಲು ಒಬ್ಬಳೇ ಕುಳಿತು ಉದಾಸೀನ ಆದಾಗ ಸಮಯ ಕಳೆಯಲು ಹರಟೆಗೆ ಜತೆಯಾಗುತ್ತಿದ್ದರು.ಒಂದು ದಿನ ಶೈನಿ ಎನ್ನುವ ಮಹಿಳೆ "ನೀವು ಇಂಜಿನಿಯರಿಂಗ್ ಓದಿ ಮನೆಯಲ್ಲಿ ಸುಮ್ಮನೆ ಕುಳಿತು ಕೊಳ್ಳುವುದಾ.. ಜಾಬ್ ಮಾಡಿ..ನಿಮ್ಮದೇ ಅಂತ ಸ್ವಲ್ಪ ದುಡ್ಡು ಕೈಲಿದ್ದರೆ ಮುಂದೆ ನಿಮಗೇ ಒಳ್ಳೆಯದು."ಎಂದು ತಲೆಯೊಳಗೆ ಸಣ್ಣ ಹುಳ ಬಿಟ್ಟಳು.ಮೈತ್ರಿಗೂ ಸರಿಯೆನಿಸಿತು.ಮುಂದುವರಿಸುತ್ತಾ "ನನ್ನ ಆಫೀಸಲ್ಲೇ ಕೆಲಸ ಇದೆ..ಮನೆಗೆ ಹತ್ತಿರವೂ ಆಗುತ್ತೆ.. "ಎಂದಾಗ ಮೈತ್ರಿ ಖುಷಿಯಿಂದ "ನೋಡೋಣ "ಎಂದಳು.. ಮನಸು ಕೈತುಂಬಾ ದುಡ್ಡೆಣಿಸುವ ಕನಸು ಕಂಡಿತ್ತು.

       ಸಂಜೆ ಕಿಶನ್ ಆಫೀಸಿನಿಂದ ಹಿಂತಿರುಗಿದಾಗ ಅವನ ಮೂಡ್ ಚೆನ್ನಾಗಿದ್ದಾಗ ಹೇಳಿ ಒಪ್ಪಿಸಬೇಕು ಎಂದು ನಿರ್ಧರಿಸಿದಳು.. ಅದರಂತೆ ಕಿಶನ್  ಮುಂದೆ ಬೇಡಿಕೆ ಸಲ್ಲಿಸಿದಳು. ಇದುವರೆಗೆ ಕೇಳದ ಹೊಸ ಬೇಡಿಕೆ ಕಂಡು ಅವನಿಗೂ ಸ್ವಲ್ಪ ಅಚ್ಚರಿಯಾಯಿತು.  ಮಡದಿಯ ಬಳಿ ಸಮಾಧಾನಚಿತ್ತದಿಂದ "ನಾನು ದುಡಿದು ತಂದರೆ ಸಾಲದೇ..ನೀನು ಮನೆಯಲ್ಲಿದ್ದುಕೊಂಡು ಶುಚಿರುಚಿಯಾದ ಅಡುಗೆ ಮಾಡುತ್ತಾ,ಮನೆ ನಿಭಾಯಿಸುತ್ತಾ ಇದ್ದರೆ ನನಗೂ ಅನುಕೂಲ..ನಮ್ಮ ಮನಸ್ಸಿಗೂ ನೆಮ್ಮದಿ.ನನ್ನ ದುಡಿಮೆ ನಮ್ಮ ಕುಟುಂಬಕ್ಕೆ ಸಾಕು.." ಎಂದ.

"ಹಾಗಲ್ಲ ಈಗ ದುಡಿಯದಿದ್ದರೆ ಮತ್ತೆ ಯಾವಾಗ ಹೆಣ್ಣಿಗೆ ದುಡಿದು ಸಂಪಾದಿಸುವ ಅವಕಾಶ ಸಿಗುವುದು..? ಮುಂದೆ ಅವಕಾಶಗಳು ಬಹಳ ಕಡಿಮೆ. ಮಕ್ಕಳಾದ ಮೇಲೆ ಮಗುವಿನ ಲಾಲನೆ ಪಾಲನೆಗೆ ಅವಳ ಬದುಕು ಮೀಸಲಾಗುತ್ತದೆ. ಈಗಲಾದರೂ ದುಡಿಯಬೇಕೆಂಬ, ನನ್ನ ಕಾಲ ಮೇಲೆ ನಿಲ್ಲಬೇಕೆಂಬ ಆಸೆಯನ್ನು ಈಡೇರಿಸಿ ಕೊಳ್ಳುತ್ತೇನೆ."


"ನಾನು ಬೇಡವೆನ್ನುತ್ತಿಲ್ಲ .ಆದರೆ ಉದ್ಯೋಗ ಮನೆ ಎರಡನ್ನು ನಿಭಾಯಿಸುವುದು ಸ್ವಲ್ಪ ಸವಾಲಿನ ಕೆಲಸ."

"ಸವಾಲು ತೆಗೆದುಕೊಂಡು  ಮುನ್ನುಗ್ಗಬೇಕೆಂದು ಇದ್ದೇನೆ."


"ಸರಿ ನಿನ್ನ ಆಸೆಯಂತೆ ಆಗಲಿ ..ನಾನು ನಿನ್ನ ಆಸೆಗೆ ತಣ್ಣೀರು ಎರಚುವುದಿಲ್ಲ.."


     ಗಂಡನ ಒಪ್ಪಿಗೆ ದೊರೆತಾಗ ಮೈತ್ರಿಯ ಮುಖದಲ್ಲಿ ಆನಂದದ ಎಳೆಯೊಂದನ್ನು ಗಮನಿಸಿದ ಕಿಶನ್.ಮನೆಯಲ್ಲಿ ಏನು ಹೇಳುತ್ತಾರೋ ,ಶಾಸ್ತ್ರಿ ಕುಟುಂಬದಲ್ಲಿ ಇದುವರೆಗೆ ಯಾರೂ ಮಕ್ಕಳು ಉದ್ಯೋಗಕ್ಕೆ ಹೋದದ್ದಿಲ್ಲ .ಇವಳನ್ನು ಕಳುಹಿಸಿದರೆ ನನಗೆ ಮಾವ ಅತ್ತೆ ಏನಾದರೂ ಅಂದರೆ..?ಹೀಗೇ ಒಂದಲ್ಲ.. ಹಲವಾರು ಯೋಚನೆಗಳು ತಲೆಯಲ್ಲಿ ಸುಳಿದವು. ಆದರೂ ಮಡದಿಗೆ ಬೇಸರವಾಗಬಾರದೆಂದು ಆಕೆಯಲ್ಲಿ ಬಯೋಡೇಟಾ ತಯಾರಿಸಿಡು ಎಂದ.


ಮರುದಿನ ಆಫೀಸಿನಲ್ಲಿ ತನ್ನ ಬಾಸ್ ಗೆ ಅಹವಾಲು ಸಲ್ಲಿಸಿದ. ನನ್ನ ಮಡದಿ ಎಂಜಿನಿಯರಿಂಗ್ ಪದವೀಧರೆ. ಎಲ್ಲಾದರೂ ಅವಕಾಶ ಇದ್ದರೆ ತಿಳಿಸಿ. ಬಾಸ್ ಗೆ ಕಿಶನ್ ಮೇಲೆ ಸದ್ಭಾವನೆಯಿದೆ. ಒಳ್ಳೆಯ ವ್ಯಕ್ತಿ.. ಕೆಲಸವನ್ನು ಸಮಯಕ್ಕೆ ಸರಿಯಾಗಿ ಚಾಚೂ ತಪ್ಪದೇ ಮುಗಿಸಿಕೊಡುವವ ಕಿಶನ್ ಎಂದು. ಹಾಗಾಗಿ ಆತ ಕೇಳಿದಾಗ "ನೋಡೋಣ .."ಎಂದು ಉತ್ತರಿಸಿದರು. ಕೆಲವೇ ತಿಂಗಳಲ್ಲಿ ಆತನ ಟೀಮಿನಿಂದ ಈಗಷ್ಟೇ ಸೇರಿದ  ಯುವತಿ ಮದುವೆಯಾಗಿ ತೆರಳುವ ಕಾರಣ ಆಕೆಯ ಸ್ಥಾನ ಖಾಲಿಯಾಗುತ್ತದೆ. ಅಲ್ಲಿಗೆ ನೇಮಿಸಿದರೆ ಹೇಗೆ ಎಂಬ ಯೋಚನೆ. ಯೋಚನೆ ಬಂದಾಗಲೇ ಬೆಲ್ ಮಾಡಿ ಕಿಶನ್ ನನ್ನು ಚೇಂಬರಿಗೆ ಕರೆಸಿಕೊಂಡರು."ಇನ್ನು ಎರಡು ಮೂರು ತಿಂಗಳಿನಲ್ಲಿ ಒಂದು ಪೋಸ್ಟ್ ಖಾಲಿಯಾಗಲಿರುವುದು .ಅದಕ್ಕೆ ನಿಮ್ಮ ಮಡದಿಯನ್ನು ಸೇರಿಸಿಕೊಳ್ಳಬಹುದು. ಆದರೆ ಅದಕ್ಕೂ ಮುನ್ನ ಟ್ರೈನಿಂಗ್ ಪಡೆದುಕೊಳ್ಳಬೇಕು.ನಾಳೆಯಿಂದಲೇ ಟ್ರೈನಿಂಗ್ ಗೆ ಹಾಜರಾಗಬೇಕು.. "

"ಸರಿ ಸರ್.."ಎಂದ ಕಿಶನ್..

"ಹ್ಞಾಂ..ವಿಷಯ ಗೌಪ್ಯವಾಗಿರಲಿ..ಈಗ ಒಂದು ಹೊಸ ಬ್ಯಾಚ್ ಆರಂಭವಾಗುತ್ತಿದೆ.ಬಹುತೇಕ ಕ್ಯಾಂಪಸ್ ಸೆಲೆಕ್ಷನ್ ಆದವರೇ ಇರುವುದು.ಅವರ ಜತೆ ನಿಮ್ಮ ಮಡದಿಯನ್ನು  ಸೇರಿಸಿಕೊಳ್ಳೋಣ."

ಒಪ್ಪಿದ ಕಿಶನ್..ಮನೆಗೆ ಬಂದು ವಿಷಯ ತಿಳಿಸಿದಾಗ "ನಿಮ್ಮ ಕಂಪೆನಿಯಲ್ಲಾ "..ರಾಗ ಎಳೆದಳು ಮೈತ್ರಿ..
"ಹೌದು.. ಏನು ಈ ರೀತಿ ಕೇಳುತ್ತಿದ್ದೀಯಾ."

"ಅಲ್ಲ ದೊಡ್ಡ ಕಂಪೆನಿ.. ಕೈತುಂಬಾ ಕೆಲಸ.."

ಆವಳ ಮನಸಿನಲ್ಲಿ ಶೈನಿ ಹೇಳಿದ ಮನೆ ಹತ್ತಿರ ಕೆಲಸ ಎಂಬ ಮಾತೇ ಕೊರೆಯುತ್ತಿತ್ತು.

"ಕೆಲಸಕ್ಕೆ ಸೇರಬೇಕೆಂದವಳು ನೀನೇ.ಇವತ್ತು ನಿನಗೋಸ್ಕರ ಬಾಸ್ ನ ಕೇಳಿದೆ.ಅವಕಾಶ ದೊರೆತಾಗ ಹೀಗೆ ಅಂದರೆ ಹೇಗೆ..?"ಎಂದ ಗಂಭೀರವಾಗಿ..

"ಆಯ್ತು..ನಾಳೇನೇ ಬರಲು ರೆಡಿ "ಎಂದು ಬಾಯಿ ಮಾತಿನಲ್ಲಿ ಹೇಳಿದರೂ ಒಳಗೆ ಅಳುಕಿತ್ತು.ಬೆಳಗ್ಗೆ ಏಳೂವರೆಗೆ ಮನೆ ಬಿಟ್ಟರೆ ವಾಪಾಸಾಗುವಾಗ ಗಂಟೆ ಏಳಾಗುತ್ತದೆ.ಮತ್ತೆ ಮನೆ ನಿಭಾಯಿಸಬೇಕು.. ಉಫ್.. ಕಷ್ಟವಿದೆ.. ಆದರೂ ನೋಡೋಣ.. ಎಂದು ವಾರಕ್ಕೆ ಬೇಕಾದ ಡ್ರೆಸ್ ತೆಗೆದಿಟ್ಟು ಇಸ್ತ್ರಿ ಹಾಕಿದಳು.


       ಬೆಳಗ್ಗೆ ನಾಲ್ಕಕ್ಕೆ ಅಲಾರಾಂ ಇಟ್ಟು ಮನೆಕೆಲಸ ಎಲ್ಲವನ್ನೂ ಮಾಡಿ ಏಳೂವರೆಗೆ ಹೊರಟಾಗ ಮೈಬೆವರಿತ್ತು..ಶರೀರ ಆಯಾಸವಾಗಿತ್ತು.ಆಕೆಯನ್ನು ಟ್ರೈನಿಂಗ್ ಸ್ಥಳಕ್ಕೆ ಬಿಟ್ಟು ತನ್ನ ಆಫೀಸ್ ಕಟ್ಟಡತ್ತ ಬೈಕ್ ಚಲಾಯಿಸಿದ ಕಿಶನ್.. ಎಲ್ಲರೂ ಅವರವರ ಕಾಲೇಜು ಸಹಪಾಠಿ ಗಳೊಂದಿಗೆ ಹರಟುತ್ತಿದ್ದರೆ ಮೈತ್ರಿ ಏಕಾಂಗಿ.ಆಕೆಯ ಕಾಲೇಜಿನವರು ಯಾರೂ ಇರಲಿಲ್ಲ.ಟ್ರೈನಿಂಗ್ ಸೆಷನ್ ಆರಂಭವಾಗುತ್ತಿದ್ದಂತೆ ಅವಳ ಆತಂಕ ತುಸು ಕಡಿಮೆಯಾಯಿತು.ಮನಸು ಅವರು ಹೇಳಿಕೊಡುತ್ತಿದ್ದ ವಿಷಯಗಳತ್ತ ಹೊರಳಿತು.ಹೀಗೆ ಮೈತ್ರಿ ಟ್ರೈನಿಂಗ್ ಗೆ, ಕಿಶನ್ ಆಫೀಸಿಗೆ ಹೋಗುತ್ತಾ ಮೂರು ತಿಂಗಳುಗಳು ಕಳೆದವು.


         ಮನೆಯಿಂದ ಒತ್ತಡಗಳು ಬರಲಾರಂಭಿಸಿದವು.'ಊರಿಗೆ ಯಾವಾಗ ಬರುತ್ತೀರಿ 'ಎಂದು.. ಮೈತ್ರಿಯ ಟ್ರೈನಿಂಗ್ ಮುಗಿದ ಬಳಿಕ ಬರುತ್ತೇವೆಂದರೂ ಅವರಿಗೆ ಮಕ್ಕಳನ್ನು ನೋಡುವ ಬಯಕೆ.. ಕಿಶನ್ ಮತ್ತು ಮೈತ್ರಿ ಇಬ್ಬರ ಹೆತ್ತವರಿಗೂ .. ಮಹೇಶ್ "ಅಮ್ಮ.. ಅಕ್ಕನಿಗೆ ಸಮಯವಿಲ್ಲದಿದ್ದರೆ ನಾವೇ ಹೋಗಿ ಮಾತನಾಡಿ ಬರೋಣ" ಎನ್ನುತ್ತಿದ್ದ..ಮಂಗಳಮ್ಮನಿಗೂ ಅದೇ ಆಸೆ.. ಭಾಸ್ಕರ್ ಶಾಸ್ತ್ರಿಗಳು ಒಪ್ಪಿಗೆ ನೀಡಿದರು.ಮಹೇಶನಿಗೂ ಪರೀಕ್ಷೆ ಮುಗಿದ ರಜೆಯಿತ್ತು.ಅಮ್ಮ ಮಗ ಬೆಂಗಳೂರಿಗೆ ಪಯಣ ಬೆಳೆಸಿದರು..

     ಅವರು ಬರುವ ಖುಷಿ.. ಮನೆಯನ್ನು ಒಪ್ಪ ಓರಣವಾಗಿ ಇಡುವುದು ಕಷ್ಟ ..ಹೇಗೋ ಗಂಡನ ಸಹಾಯ ಪಡೆದು ಮನೆಯ ಮೂಲೆ ಮೂಲೆಗಳಲ್ಲಿ ಸ್ವಚ್ಛಗೊಳಿಸಿದಳು.ತರಕಾರಿ ಒಂದು ವಾರಕ್ಕೆ ತಕ್ಕ ತಂದು ತೊಳೆದು ಒಣಗಿಸಿ ಜೋಡಿಸಿಟ್ಟಳು.. ಅಷ್ಟೆಲ್ಲ ಮಾಡುವಾಗ ಅವಳಿಗಂತೂ ಸೊಂಟಸೋಪಾನವಾಗಿತ್ತು.. ಆಫೀಸಿನಲ್ಲಿಯೇ ಕುಳಿತು ಕುಳಿತು ಸಾಕಾಗುತ್ತಿತ್ತು..


   
      ಬಸ್ಸಿನಿಂದಿಳಿಯುವಲ್ಲಿಗೆ ಹೋಗಿ ಕಿಶನ್ ಅತ್ತೆ ಮತ್ತು ಭಾವನನ್ನು ಮನೆಗೆ ಕರೆದುಕೊಂಡು ಬಂದ.ಅಮ್ಮ ತಮ್ಮನನ್ನು ಕಂಡಾಗ ಅವಳಿಗೆ ..ತಬ್ಬಿ ಬಿಡುವಷ್ಟು ಆನಂದ..ಅಮ್ಮನಿಗೂ ಹಾಗೇ ..ತಮ್ಮ ಅಕ್ಕನನ್ನು ಛೇಡಿಸುವುದನ್ನು ಕಡಿಮೆ ಮಾಡಲಿಲ್ಲ.. ಅಕ್ಕ ಬೆಂಗಳೂರು ಶೈಲಿಯ ಪುಟ್ಟ ಲೋಟದಲ್ಲಿ ತಮ್ಮನಿಗೆ ಕಾಫಿ ನೀಡಿದಾಗ "ಓಹೋ.. ನಾನು ನಿನ್ನ ಪುಟ್ಟ ತಮ್ಮ ಅಂತ ಪುಟಾಣಿ ಲೋಟದಲ್ಲಿ ಕೊಟ್ಟಿದೀಯಾ.."

ಅಂದಾಗ ನಗುತ್ತಾ ಅವನಿಗೆ ಅದರ ಹಿಂದಿನ ಘಟನೆಯನ್ನು ವಿವರಿಸಿದಳು.ಅಮ್ಮನಲ್ಲಿ ಎಷ್ಟು ಮಾತನಾಡಿದರೂ ಮುಗಿಯುತ್ತಿರಲಿಲ್ಲ ಮೈತ್ರಿಗೆ."ಅಕ್ಕಾ ನೀವಿಬ್ಬರು ಕಾಲರ್ ಮೈಕ್ ಹಾಕಿಕೊಳ್ಳಿ..ಕೆಲಸ ಮಾಡುತ್ತಾ ಬೇರೆ ಬೇರೆ ರೂಮಿನಲ್ಲಿದ್ದಾಗಲೂ ನಿರಾಂತಕವಾಗಿ ಪಟ್ಟಾಂಗ ಹೊಡೆಯಬಹುದು.."ಎಂದಾಗ..

ಕಿಶನ್ ಗೆ ನಗೆ ತಡೆಯಲಾಗಲಿಲ್ಲ.ಕಿಶನ್ ಗೆ ಸ್ವಲ್ಪ ಕಪ್ಪಗಾದ ಚಪಾತಿ ಬಡಿಸಿ ತಮ್ಮನಿಗೆ ಹದವಾಗಿ ಬೆಂದ ಚಪಾತಿ ಬಡಿಸಿದಾಗ ಕಿಶನ್ ಕೂಡ ಬಿಡದೆ "ನೋಡು ಅಕ್ಕನಿಗೆ ಗಂಡನಿಗಿಂತ ತಮ್ಮನೆಂದರೆ ಪಂಚಪ್ರಾಣ.."ಎಂದು ರೇಗಿಸಿದ.


ವಾರಾಂತ್ಯದಲ್ಲಿ ಅಮ್ಮ, ತಮ್ಮನನ್ನು ಸುತ್ತಾಡಲು ಕರೆದೊಯ್ದರು.ಶಾಪಿಂಗ್ ಮಾಡಿಸಿದರು.
ಒಂದು ವಾರ ಅಮ್ಮನಿದ್ದುದು ಅವಳಿಗೆ ಅಡುಗೆ ಕೇಲಸದಿಂದ ಮುಕ್ತಿ ಸಿಕ್ಕಿತು.ಸ್ವಲ್ಪ ನಿರಾಳವೆನಿಸಿತು.ರುಚಿಯಾದ ಅಡುಗೆ ಅಮ್ಮನೇ ಮಾಡಿ ಬಡಿಸಿದರು.ಸಾಂಬಾರು ಪುಡಿ,ಸಾರಿನ ಪುಡಿ ,ರಸಂ ಪುಡಿ ಪುಳಿಯೋಗರೆ, ಪುಲಾವ್ ಪುಡಿಗಳನ್ನು ಮಾಡಿಟ್ಟರು.

   ಒಂದು ದಿನ ಅಮ್ಮ ಮಗಳನ್ನು ತರಾಟೆಗೆ ತೆಗೆದುಕೊಂಡರು."ನಿನಗೆ ಉದ್ಯೋಗ ಅನಿವಾರ್ಯವಾಗಿತ್ತಾ..?"

"ಈಗ ಸ್ವಲ್ಪ ಸಮಯ ದುಡಿದರೆ ಬಂತು.. ಮತ್ತೆ ಹೆಣ್ಣುಮಕ್ಕಳಿಗೆ ದುಡಿಯಲು ಕಷ್ಟವಾಗುತ್ತೆ.."

"ಸಂಜೆ ಬರುವಾಗಲೇ ಸೊಂಟ ನೋವು ಅನ್ನುತ್ತೀಯಾ.. ಬೆಳಗ್ಗೆ ಏಳುವಾಗಲೇ ಗ್ಯಾಸ್ಟ್ರಿಕ್ ಅನ್ನುತ್ತೀಯಾ.. ಅರ್ಧಂಬರ್ಧ ತಿಂಡಿ ತಿಂದು ಉದ್ಯೋಗಕ್ಕೆ ಓಡುವುದನ್ನು ನಾನು ಬಂದಾಗಿನಿಂದ ಕಾಣುತ್ತಿದ್ದೇನೆ.. ಹೀಗೆ ಮಾಡಿದರೆ ಇಬ್ಬರ ಆರೋಗ್ಯ ವೂ ಹದಗೆಟ್ಟೀತು.."ಎಂದಾಗ ಮೈತ್ರಿ ಸುಮ್ಮನಿದ್ದಳು.ಅಮ್ಮ ಹೇಳುವುದರಲ್ಲೂ ಹುರುಳಿದೆ ಎನಿಸಿತ್ತು ಅವಳಿಗೆ..

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
22-06-2020.

Sunday, 21 June 2020

ಹಲಸಿನ ಹಣ್ಣಿನ ಗೆಣಸಲೆ




           ಹಲಸಿನ ಹಣ್ಣಿನ ಗೆಣಸಲೆ




        ಹಲಸಿನ ಹಣ್ಣು ದೊರಕುವ ಸಮಯದಲ್ಲಿ ಒಮ್ಮೆಯಾದರೂ ಸವಿಯಬೇಕಾದ ರುಚಿಗಳಲ್ಲಿ ಗೆಣಸಲೆಯೂ ಒಂದು.ಇದು ಕರಾವಳಿಯ ವಿಶೇಷ ತಿನಿಸು..

ಬೇಕಾಗುವ ಸಾಮಗ್ರಿಗಳು:-


      ಎರಡು ಕಪ್ ದೋಸೆ ಅಕ್ಕಿ, ನಾಲ್ಕೈದು ಕಪ್ ಹಲಸಿನ ಹಣ್ಣಿನ ತೊಳೆ /ಸೊಳೆ, ತೆಂಗಿನತುರಿ ಒಂದು ಕಪ್,ಬೆಲ್ಲ ಒಂದು ಕಪ್, ರುಚಿಗೆ ತಕ್ಕಷ್ಟು ಉಪ್ಪು.


ಮಾಡುವ ವಿಧಾನ:-

      ಬಾಳೆ ಎಲೆಗಳನ್ನು ಅಡಿ ಮೇಲೆ ಎರಡೂ ಬದಿಗಳಲ್ಲಿ ತೊಳೆದು ನೀರು ಬಸಿಯುವಂತೆ ಇಡಿ.ಒಲೆ /ಸ್ಟವ್ ಮೇಲೆ ಚೆನ್ನಾಗಿ ಬಾಡಿಸಿಕೊಳ್ಳಿ.ನಂತರ ನೀರು ಮುಟ್ಟಿಸಿದ ಬಟ್ಟೆಯಲ್ಲಿ ಅಡಿ ಮೇಲೆ ಎರಡು ಬದಿ ಒರೆಸಿಕೊಳ್ಳಿ.


       ಅಕ್ಕಿಯನ್ನು ಎರಡರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ತೊಳೆದಿಡಿ.ಹಲಸಿನ ಹಣ್ಣನ್ನು ತುಂಡುಮಾಡಿ ಸೊಳೆ ಬಿಡಿಸಿ ಇಟ್ಟುಕೊಳ್ಳಿ.ಮಿಕ್ಸಿ ಜಾರಿನಲ್ಲಿ ಸ್ವಲ್ಪ ಸೊಳೆಯನ್ನು ಹಾಕಿ ಗರ್ ಮಾಡಿ.ಸೊಳೆ ತುಂಡಾದರೆ ಸಾಕು.ನಣ್ಣಗಾಗುವುದು ಬೇಡ.ಹೀಗೆ ಸೊಳೆಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಬಾಣಲೆಗೆ ಹಾಕಿಕೊಳ್ಳಿ.ಬೆಲ್ಲ, ತೆಂಗಿನಕಾಯಿ ತುರಿಯೊಂದಿಗೆ ಕಾಯಿಸಿ.ಸ್ವಲ್ಪ ಗಟ್ಟಿಯಾದರೆ ಸಾಕು..
ಅಕ್ಕಿಯನ್ನು ಉಪ್ಪಿನೊಂದಿಗೆ ಗಟ್ಟಿಯಾಗಿ ರುಬ್ಬಿ.


ವಿಧಾನ ಒಂದು:-

      ರುಬ್ಬಿದ ಅಕ್ಕಿಯ ಹಿಟ್ಟನ್ನು ಪಾತ್ರೆಗೆ ಹಾಕಿಟ್ಟುಕೊಳ್ಳಿ.ಅದಕ್ಕೆ ಕಾಯಿಸಿ ಪಾಕ ಮಾಡಿದ ಮಿಶ್ರಣವನ್ನು ಸೇರಿಸಿ.ಚೆನ್ನಾಗಿ ತಿರುವಿ.
       ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಕಾಯಲು ಇಡಿ.
ಬಾಳೆಲೆಯ ಮೇಲೆ ಒಂದೆರಡು   ಸೌಟು ಮಿಶ್ರಣವನ್ನು ಹಾಕಿ ಮಡಚಿ ಇಡ್ಲಿ ಪಾತ್ರೆಯೊಳಗಿಟ್ಟು ಹಬೆಯಲ್ಲಿ ಬೇಯಿಸಿ.


ವಿಧಾನ ಎರಡು:-


        ಗಟ್ಟಿಯಾಗಿ ರುಬ್ಬಿದ ಒಂದು ಸೌಟು ಅಕ್ಕಿ ಹಿಟ್ಟನ್ನು ಬಾಳೆಲೆಯ ಮೇಲೆ ವೃತ್ತಾಕಾರವಾಗಿ ಸಾಮಾನ್ಯ ಗಾತ್ರದ ಚಪಾತಿಯಷ್ಟು ಹರಡಿ.ಅದರೊಳಗೆ ಮಧ್ಯದಲ್ಲಿ ಕಾಯಿಸಿದ ಹಲಸಿನ ಹಣ್ಣಿನ ಮಿಶ್ರಣವನ್ನು ಇಟ್ಟು ಮಡಚಿ ಹಬೆಯಲ್ಲಿ ಬೇಯಿಸಿ.

       ಸುಮಾರು ಅರ್ಧ ಗಂಟೆಯವರೆಗೆ ದೊಡ್ಡ ಉರಿಯಲ್ಲಿ ಬೇಯಿಸಿ ,ನಂತರ ಉರಿ ಮಧ್ಯಮ ಮಾಡಿಕೊಳ್ಳಬಹುದು.ಸುಮಾರು ಒಂದು ಗಂಟೆ ಬೇಯಿಸಬೇಕು.ಆಗ ಗೆಣಸಲೆ ಸಿದ್ಧ.
ತುಪ್ಪ ,ತೆಂಗಿನ ಎಣ್ಣೆ ,ಜೇನು, ಚಟ್ನಿಯೊಂದಿಗೆ ಗೆಣಸಲೆಯನ್ನು ಸವಿಯಿರಿ.

       ಈ ಗೆಣಸಲೆ ತಯಾರಿಕೆಯಲ್ಲಿ ಹಲವಾರು ವಿಧಾನಗಳಿವೆ.ಕೆಲವು ಕಡೆ ಹಲಸಿನ ಹಣ್ಣು  ,ಬೆಲ್ಲ ,ತೆಂಗಿನಕಾಯಿತುರಿಯನ್ನು ಪಾಕ ಮಾಡದೆ ಬಳಸುತ್ತಾರೆ(ನೀರು ಬಿಟ್ಟುಕೊಳ್ಳುವ ಸಾಧ್ಯತೆ ಹೆಚ್ಚು).ಅಳತೆಗಳೂ ಕುಟುಂಬದಿಂದ ಕುಟುಂಬಕ್ಕೆ ಭಿನ್ನವಾಗಿರುತ್ತದೆ.ಕೆಲವರು ಅರಶಿನ ಎಲೆಯಲ್ಲೂ ,ಸಾಗುವಾನಿ ಎಲೆಯಲ್ಲೂ ಇದನ್ನು ಮಾಡುತ್ತಾರೆ.


          ಹಲಸಿನ ಹಣ್ಣು ದೊರೆಯದೆ ಇರುವಂತಹ ಸಮಯದಲ್ಲೂ ಅಕ್ಕಿ, ತೆಂಗಿನಕಾಯಿ ತುರಿ ,ಬೆಲ್ಲ, ಉಪ್ಪು.. ಇವಿಷ್ಟು ಬಳಸಿ ಗೆಣಸಲೆಯನ್ನು ತಯಾರಿಸಬಹುದು.

✍️... ಅನಿತಾ ಜಿ.ಕೆ.ಭಟ್.
22-06-2020.



ಯೋಗ ನಮ್ಮ ದೇಹಕ್ಕೆ ಸುಗಮ ಸಂಗೀತವಾಗಲಿ



ಯೋಗ ನಮ್ಮ ದೇಹಕ್ಕೆ ಸುಗಮ ಸಂಗೀತವಾಗಲಿ

ಸಪ್ತ ಸ್ವರಗಳು ಶ್ರುತಿಯಲಿ
ಬೆರೆತರೆ ಸುಸ್ವರ ಸಂಗೀತ
ಅಷ್ಟಾಂಗಗಳ ಸಿದ್ಧಿಯಲಿ
ಪಡೆವುದು ಯೋಗ ಸಮಾಧಿ||


ಶ್ರುತಿ ಲಯ ತಾಳ ಬಾಳಲಿ
ಹೊಂದಿರೆ ಬಾಳೇ ಸಂಗೀತ
ಧ್ಯಾನ ಪ್ರಾಣಾಯಾಮ ಯೋಗ
ಕಾಪಾಡಲು ಸಮಚಿತ್ತ||


ಬೇಗುದಿಯೆಲ್ಲ ದೂರೀಕರಿಸುವ
ಶಾಂತಿಯೇ ಇಂಪಿನ ಆಲಾಪ
ರೋಗ ರುಜಿನಗಳು ಓಡುವ
ನಿತ್ಯದ ಯೋಗದ ಸಲ್ಲಾಪ||


ದಾಸವರೇಣ್ಯರ ಭದ್ರಬುನಾದಿ
ಕರ್ನಾಟಕ ಸಂಗೀತ
ಪತಂಜಲಿ ಮಹರ್ಷಿಗಳು ನೀಡಿದ
ಕೊಡುಗೆ ಯೋಗಶಾಸ್ತ್ರ||


ಸುಗಮ ಸಂಗೀತ ಭಕ್ತಿ ಭಾವದಿ ಪರಾಕಾಷ್ಠೆ
ಸೂರ್ಯನಮಸ್ಕಾರ ಪ್ರಾಣಾಯಾಮದಿ ನಿಷ್ಠೆ
ಸಂಗೀತದ ರಾಗ,ಓಂಕಾರದ ಝೇಂಕಾರ
ಸುಂದರ ಜೀವನ, ಮನವು ಸುಮಧುರ||


ಯೋಗ ನಮ್ಮ ದೇಹಕ್ಕೆ
ಸುಗಮ ಸಂಗೀತವಾಗಲಿ
ಯೋಗ ನಮ್ಮ ದೇಶಕ್ಕೆ
ಆರೋಗ್ಯದ ಹೆಗ್ಗುರುತಾಗಲಿ||

                         
✍️... ಅನಿತಾ ಜಿ.ಕೆ.ಭಟ್
21-06-2020.

Friday, 19 June 2020

ದಾಹ-ಹಣದ ವ್ಯಾಮೋಹ


                



     ದಾಹ




        ಸುಮತಿಯ ತಂದೆ ಶಿವರಾಯರು " ಮಗಳೇ...ನಾಳಿನ ಕಾರ್ಯಕ್ರಮಕ್ಕೆ   ವನಜ ಅತ್ತೆ  ಮನೆಗೆ  ನೀನು ಹೋಗುವುದು... ಆಯ್ತಾ"ಎಂದು  ಹೇಳಿದಾಗ ಮನಸ್ಸಿಲ್ಲದ ಮನಸ್ಸಿನಿಂದಲೇ "ಅಪ್ಪಾ... ನಾನು ಹೋಗದಿದ್ದರೆ ಆಗದೇ.. ಪ್ರತಿ ಸಾರಿ ಹೋಗುತ್ತೇವೆ. ಈ ಸಲ ಬೇಡ.. ಆಗದೇ.."ಎಂದು ಕೇಳಿದಳು ಸುಮತಿ.. "ಮಗಳೇ ... ನಾನು ನೀನೂ ಹೋಗೋಣ ಎಂದು ಆಲೋಚಿಸಿದ್ದೆ.. ಆದರೇನು ಮಾಡುವುದು ತಾಯಿಯ ತವರಿನಲ್ಲಿ  ನಾಳೆಯೇ ಪಾಲು ಪಂಚಾಯಿತಿಗೆ ಇದೆ. ತಾಯಿಯನ್ನು ಕರೆದುಕೊಂಡು ಹೋಗಲೇಬೇಕು."
"ಅಪ್ಪ ... ತಾಯಿಗೆ ಅಲ್ಲಿಂದ ಪಾಲಿನ ಹಣ ಸಿಗುವುದೇ.?" ಎಂದು ಸುಮತಿ ಕೇಳಿದಾಗ  ದೂರದಲ್ಲಿದ್ದ ತಾಯಿ ಕೇಳಿಸಿಕೊಂಡು ತನ್ನ ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಒಳಗೆ ಬಂದು.. "ಮಗಳೇ ನಾನು ತವರಿನ ಪಾಲು ಪಂಚಾತಯತಿಗೆ ಹೋಗುವುದು ಆಸ್ತಿಯಲ್ಲಿ ಪಾಲು ಕೇಳಲು ಅಲ್ಲ. ನನಗೆ ತವರಿನ ಆಸ್ತಿ ,ಹಣ ಯಾವುದೂ ಬೇಡ .ಅಣ್ಣ-ತಮ್ಮಂದಿರ ಪ್ರೀತಿ ವಿಶ್ವಾಸ ಅಷ್ಟೇ ಸಾಕು. ನಿನ್ನಪ್ಪ ದುಡಿದು ತಂದುದರಲ್ಲಿ  ಗಂಜಿಯನ್ನುಂಡು ಸಂತೃಪ್ತಿಯಿಂದ ಬದುಕುತ್ತೇನೆ.ಅಲ್ಲಿ ನಾನು ಸಹಿ ಹಾಕದಿದ್ದರೆ ನನ್ನ ಅಣ್ಣತಮ್ಮಂದಿರಿಗೂ ಪಾಲಿನ ವ್ಯವಹಾರ ಪೂರ್ಣವಾಗುವುದಿಲ್ಲ ಅದಕ್ಕಾಗಿ ಹೋಗುತ್ತಿದ್ದೇನೆ. " ಎಂದು ಮಗಳಿಗೆ ವಿವರವಾಗಿ ತಿಳಿಸಿದರು.ಅಮ್ಮನ ಮಾತುಗಳನ್ನು ಕೇಳಿದ ಸುಮತಿಗೆ ಅಮ್ಮನಲ್ಲಿ ಗೌರವ ಭಾವನೆ ಮೂಡಿತು.



        ಶಿವರಾಯರು ಮತ್ತು ಸೀತಮ್ಮನವರು  ಪುಟ್ಟಭೂಮಿಯಲ್ಲಿ ಕೃಷಿ ಮಾಡುತ್ತಾ ಮಕ್ಕಳಿಬ್ಬರನ್ನು ಓದಿಸುತ್ತಿದ್ದರು.ಕಾಡುಪ್ರಾಣಿಗಳ ಉಪಟಳದಿಂದಾಗಿ ಕೃಷಿಯಲ್ಲಿ ಹೆಚ್ಚಿನ ಲಾಭವಿಲ್ಲದೆ ಇದ್ದರೂ ಶಿವರಾಯರು ಮೈ ಮುರಿದು ತಾವೇ ಸ್ವತಃ ಕೃಷಿ ಮಾಡುತ್ತಿದ್ದುದರಿಂದ ಸ್ವಲ್ಪ ಉಳಿತಾಯವಾಗುತ್ತಿತ್ತು. ಜೊತೆಗೆ  ಸೀತಮ್ಮ ನಾಲ್ಕು ದನಗಳನ್ನು ಸಾಕುತ್ತಾ ಡೈರಿಗೆ ಹಾಲು ಹಾಕುತ್ತಾ ಸ್ವಲ್ಪ ಸಂಪಾದನೆಯನ್ನು ಮಾಡುತ್ತಿದ್ದರು.ಇದು ಮಕ್ಕಳ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅವರ ಶುಲ್ಕವನ್ನು ಭರಿಸಲು ನೆರವಾಗುತ್ತಿತ್ತು. ಇದ್ದುದರಲ್ಲಿ   ಪ್ರೀತಿಯಿಂದ ಬದುಕುತ್ತಿದ್ದ ಸಂಸಾರ ಶಿವರಾಯರು ಮತ್ತು ಸೀತಮ್ಮನವರದು..


        ಸುಮತಿ ಅಪ್ಪನ ಮಾತಿಗೆ ಎದುರಾಡದೆ ವನಜತ್ತೆ ಮನೆಗೆ ಹೊರಟಳು.ಹೊರಡುವಾಗ ಅವಳಿಗೆ ಬಹಳ ಮುಜುಗರವಾಗಿತ್ತು .ಏಕೆಂದರೆ ಅವಳದು ಹಳೆಯದಾದ ಬಣ್ಣ ಮಾಸಿದ ಲಂಗ ರವಿಕೆ . ಎಲ್ಲರಂತೆ ಕಿವಿಗೆ ಚಿನ್ನದ ಬೆಂಡೋಲೆಯಿಲ್ಲ.ಅಪ್ಪ ಜಾತ್ರೆಯಿಂದ ತೆಗೆದುಕೊಟ್ಟ ಮುತ್ತಿನ ಬೆಂಡೋಲೆ.ಕುತ್ತಿಗೆಗೆ ಹತ್ತು ರೂಪಾಯಿಯ ಮಣಿಸರ. ಅಲ್ಲಿ ಯಾರೂ  ಬಣ್ಣ ಮಾಸಿದ ಬಟ್ಟೆಯನ್ನು ಹಾಕಿಕೊಂಡು ಬರುವುದಿಲ್ಲ ,ಜಾತ್ರೆ ಸಂತೆಯ ಬೆಂಡೋಲೆ, ಸರವನ್ನು ತೊಡುವವರಿಲ್ಲ..ಎಲ್ಲರೂ ಬೆಲೆಬಾಳುವ ದಿರಿಸುಗಳನ್ನು ಆಭರಣಗಳನ್ನು ತೊಡುವವರೇ.. ಎಂದು ಕಣ್ಣಂಚಿನಲ್ಲಿ ನೀರು ತುಂಬಿತ್ತು .ಆದರೂ ಕಷ್ಟದಲ್ಲಿ  ಬದುಕುತ್ತಿದ್ದ ಅಪ್ಪ ಅಮ್ಮನಲ್ಲಿ ತೋಡಿಕೊಂಡು ಅವರನ್ನು ನೋಯಿಸುವ ಮನಸ್ಸಿರಲಿಲ್ಲ. ಸುಮತಿ ಅತ್ತೆಯ ಮನೆಗೆ ತಲುಪಿದಳು .



      ಅಲ್ಲಿ ಆಗಲೇ ದೊಡ್ಡದಾದ ಅವರ ಮನೆಯನ್ನು ಬಹಳ ಅಂದವಾಗಿ ಸಿಂಗರಿಸಿದ್ದರು. ಮನೆಯ ಮುಂದೆ ಆಗಾಗ ಸಿರಿವಂತಿಕೆಯ ದ್ಯೋತಕವಾದ ಐಷಾರಾಮಿ ಬಿಳಿ ಕಾರುಗಳು ಬಂದು ನಿಲ್ಲುತ್ತಿದ್ದವು. ಅವುಗಳಿಂದ ಲಲನಾ ಮಣಿಯರು, ಮಕ್ಕಳು ಅಂದ ಚಂದದ ದಿರಿಸುಗಳನ್ನು ಹಾಕಿ ಬರುವಾಗ ಅವಳ ಮನವು ತನಗೂ ಹೀಗೇ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಶಾಭಾವ ಮೂಡಿಮರೆಯಾಗುತ್ತಿತ್ತು.ಅಮ್ಮ ತವರಿನ ಪಾಲಿನಲ್ಲಿ ಸ್ವಲ್ಪ ಹಣ ಪಡೆದರೆ ನನಗೂ ,ತಂಗಿಗೂ ಇಂತಹದೊಂದು ಪ್ರತಿ ಬಟ್ಟೆ,ಚಿನ್ನದ ಬೆಂಡೋಲೆಯಾದರೂ ಮಾಡಿಸಬಹುದಿತ್ತು ಎಂದು ಅವಳ ಆಲೋಚನೆಗಳು ಸಾಗುತ್ತಲೇಯಿದ್ದವು.


          ಸುಮತಿಯಲ್ಲಿ ಆಕೆಯ ವನಜತ್ತೆ " ಆ ಕೆಲಸ ಮಾಡು.. ಈ ಕೆಲಸ ಮಾಡು.." ಎಂದು ಹೇಳುತ್ತಲೇ ಇದ್ದರು .ಆತ್ತೆ ಹೇಳಿದ್ದನ್ನು ಚಾಚೂ ತಪ್ಪದೆ ನಾಜೂಕಾಗಿ ಮಾಡುತ್ತಿದ್ದಳು ಸುಮತಿ.ಅತ್ತೆಯ ಮಕ್ಕಳೆಲ್ಲ ತಮ್ಮ ಸಿರಿವಂತ ನೆಂಟರೊಂದಿಗೆ ಹರಟುತ್ತಿದ್ದರು. ಬಡ ಮಾವನ ಮಗಳು ಸುಮತಿ ಅವರಿಗೆ ಇಷ್ಟವಾದಂತಿರಲಿಲ್ಲ.ವನಜ ಬಡವರ ಮನೆಯಲ್ಲಿ ಬೆಳೆದರೂ ಅವಳ ಅಂದಚಂದಕ್ಕೆ ಮಾರುಹೋಗಿ ಸಿರಿವಂತರು ಹೆಣ್ಣುಕೇಳಿಕೊಂಡು ಬಂದಿದ್ದರು.ವನಜ ಶ್ರೀಮಂತರ ಸೊಸೆಯಾದ ಮೇಲೆ ತವರಿನವರೆಂದರೆ ಅಸಡ್ಡೆಯಿಂದ ಕಾಣತೊಡಗಿದಳು.


          ವನಜತ್ತೆಯ ನಾದಿನಿ ಮಾಲತಿಯ ಕುಟುಂಬ ಆಗಮಿಸಿತು ..ಬಹಳ ಸಿರಿವಂತ ಕುಟುಂಬ. ಧಾರಾಳವಾಗಿ ಮೂರು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿ, ಸರಕಾರಿ ನೌಕರಿ...ಎಲ್ಲವೂ ಇರುವ ಜಮೀನ್ದಾರಿ ಕುಟುಂಬ ಅವರದು. ಅವರು ಬರುತ್ತಿದ್ದಂತೆ ವನಜತ್ತೆ ಬಾಯ್ತುಂಬಾ ಮಾತನಾಡುತ್ತಾ ಪ್ರೀತಿಯಿಂದ ಸ್ವಾಗತಿಸಿ ಉಪಚರಿಸಿದರು.ಸುಮತಿಗೆ ಒಳಗೆ ರೂಮಿನಲ್ಲಿ
ಕೈಗೆ ಕೆಲಸ ನೀಡಿದರು.


         ಕಾರ್ಯಕ್ರಮದಲ್ಲಿ  ಎಲ್ಲ ವಿಷಯಕ್ಕೂ ನಾದಿನಿಯನ್ನು ಬಹಳ ಗೌರವಿಸುತ್ತಿದ್ದರು. ವನಜತ್ತೆಯ ಕಣ್ಣಿಗೆ ಸಿರಿವಂತರೇ ಕಾಣುತ್ತಿದ್ದರು ವಿನಹ ಅವರ ತವರಿನಿಂದ ಬಂದ ಬಡ ಕುವರಿ ಕಾಣಿಸುತ್ತಿರಲಿಲ್ಲ. ಸುಮತಿ ತನ್ನ ಮನೋವೇದನೆಯನ್ನು ಯಾರಿಗೂ ಹೇಳದೆ ತನ್ನ ಪಾಡಿಗೆ ತಾನು ಮೂಲೆಯಲ್ಲಿದ್ದರು.. ತಾನು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಹೇಗಾದರೂ ಸಂಪಾದನೆ ಮಾಡಿ ಅಪ್ಪ-ಅಮ್ಮನ ಕಷ್ಟವನ್ನು ಕೊನೆಗಾಣಿಸಬೇಕು ,ತಾನೂ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳಬೇಕು ಎಂದು ಹಂಬಲಿಸುತ್ತಿದ್ದಳು.


          ಸುಮತಿ ಕೆಲಸ ಮುಗಿಸಿ ರೂಮಿನಿಂದ ಹೊರಬಂದು ಹಾಲ್ ನಲ್ಲಿ ಕುಳಿತಳು. ಆಕೆಯ ಮುಂದೆ ಮಾಲತಿ ಬಂದು ಕುಳಿತರು. ವನಜತ್ತೆಯ ಗಂಡ ಮಾವನೂ ಬಂದು ಕುಳಿತರು.. ಅಣ್ಣ ತಂಗಿ ಇಬ್ಬರೂ ಮಾತನಾಡುವುದಕ್ಕೆ ಆರಂಭಿಸಿದರು... ಮಾತನಾಡುತ್ತಾ ಕೌಟುಂಬಿಕ ಸುದ್ದಿಗಳೆಲ್ಲ ಬಂದವು.ಇತ್ತೀಚೆಗೆ ಊರಿನಲ್ಲಿದ್ದ ತಮ್ಮ ಹಿರಿಯರಿಂದ ಬಂದಂತಹ ಬೆಲೆಬಾಳುವ ಆಸ್ತಿಯ ಪಾಲಾಗಿತ್ತು. ಅದರಲ್ಲಿ ಹೆಣ್ಣು ಮಗಳಾದ ಮಾಲತಿಗೆ ಹತ್ತುಲಕ್ಷವನ್ನು ಕೊಡುವುದು ಆಗಿ ನಿರ್ಧರಿಸಿದ್ದರು ಎಂದು ಅವರ  ಮಾತುಕತೆ ನಡೆಯುತ್ತಿತ್ತು.."ಅಣ್ಣ ....ನನಗೆ ತವರಿನಿಂದ ಪಾಲಿನಲ್ಲಿ ಅಷ್ಟಾದರೂ ದೊರೆತಿರುವುದು ಬಹಳ ಒಳ್ಳೆಯದು.."ಎಂದರು ಮಾಲತಿ.
"ಓಹ್... ಅದರಲ್ಲಿ ಉತ್ಪ್ರೇಕ್ಷೆ ಏನಿಲ್ಲ.."ಎಂದರು ಮಾವ.
ಮಾಲತಿ ಮುಂದುವರೆಸುತ್ತಾ "ನನ್ನ ಅತ್ತೆಗೆ ಅವರ ತವರಿನಿಂದ ಅಡಿಕೆ ತೋಟದ ಪಾಲಿನಲ್ಲಿ ಪ್ರತಿ ವರ್ಷ  ಅಡಿಕೆ ಮಾರಿದ ಹಣ ಬರುತ್ತಿದೆ. ಇನ್ನು ಮೈದುನನ ಹೆಂಡತಿಗೆ ಆಕೆಗೂ ತವರಿನಿಂದ 10 ಲಕ್ಷ ಕೊಟ್ಟಿದ್ದಾರೆ...  ನನಗೆ ತವರಿನಿಂದ ಏನೂ  ಸಿಗದಿದ್ದರೆ ನಾನು ಅವರ ದೃಷ್ಟಿಯಲ್ಲಿ ಬಹಳ ಸಣ್ಣವಳಾಗಿಬಿಡುತ್ತೇನೆ. ಈಗ ಹತ್ತು ಲಕ್ಷವಾದರೂ ಕೊಟ್ಟದ್ದು ನನಗೆ ಬಹಳ ಖುಷಿಯಾಯಿತು.... ಇಲ್ಲದಿದ್ದರೆ ಅವರೆದುರು ತಲೆತಗ್ಗಿಸಬೇಕಾಗುತ್ತಿತ್ತು."ಎಂದು ಹೇಳುತ್ತಿದ್ದಳು..
ಮಾವ "ತಂಗಿ ...ನಿನಗೆ ಸಲ್ಲಬೇಕಾದದ್ದು ಅಣ್ಣ ಕೊಟ್ಟಿದ್ದಾರೆ..ಇನ್ನು ಸ್ವಲ್ಪ ಕೊಡಬಹುದಿತ್ತು.. ನನಗೂ ಸ್ವಲ್ಪ ಕಡಿಮೆ ಆಯಿತು ಪಾಲಿನಲ್ಲಿ ಸಿಕ್ಕಿದ ಹಣ... " ಎಂದು ಅವರ ಆಸ್ತಿ ಪಾಲಿನ ಸುದ್ದಿ ಮಾತನಾಡುತ್ತಿದ್ದರು.


        ಇದನ್ನೆಲ್ಲ ಕೇಳಿದ ಸುಮತಿಗೆ ತನ್ನ ತಾಯಿಯನ್ನು ನೆನೆದು ಹೋಯಿತು.. ತಾನೆಷ್ಟು ಕಷ್ಟದಲ್ಲಿ ಬೆಂದರೂ ಸಹ ತನ್ನ ತವರಿನಿಂದ ಏನನ್ನೂ ಬೇಡದ ಮಮತಾಮಯಿ, ಸ್ವಾಭಿಮಾನಿ ಆಕೆ,ಅಪ್ಪನ ಜೊತೆ ಕೆಲಸಕಾರ್ಯಗಳಲ್ಲಿ ಹೆಗಲು ನೀಡಿ ಬೆವರುಸುರಿಸಿ  ದುಡಿದು ಉಣಬಡಿಸುವಾಕೆ..ಆದರೆ ಇವರೆಲ್ಲ ಕೂತು ತಿಂದರೂ ಕರಗದಷ್ಟು ಧನಕನಕಗಳಿದ್ದರೂ ತವರಿನ ಪಾಲಿನಲ್ಲಿ ಎಷ್ಟು ಬರುತ್ತದೆ ..? ಎಂದು ಲೆಕ್ಕ ಹಾಕಿ ಅದನ್ನೇ ತಮ್ಮ ಗೌರವ ಎಂದುಕೊಳ್ಳುತ್ತಿದ್ದಾರೆ.. ನನ್ನ ತಾಯಿಯ ಎದುರಿನಲ್ಲಿ ಇವರೆಲ್ಲ ಎಷ್ಟು ಕುಬ್ಜರು...!
ಶ್ರೀಮಂತಿಕೆಯ ಹೆಸರಿನಲ್ಲಿ ತವರಿನ ಪ್ರೀತಿ ,ಮಮತೆ ಅನ್ನೋದನ್ನೇ ಮರೆತು ತವರೆಂದರೆ ಹಣಪಡೆವ ತಾಣ ಎಂದು ತಿಳಿದುಕೊಂಡಿರುತ್ತಾರೆ. ಸಿರಿವಂತರ ಈ ಹಣದ ದಾಹವನ್ನು ಕಂಡು 'ಹಣ ಕಂಡರೆ ಹೆಣವೂ ಬಾಯಿಬಿಡುತ್ತದೆ' ಎಂಬ ನುಡಿಗಟ್ಟು ಇಂತಹವರನ್ನು ನೋಡಿಯೇ ಹುಟ್ಟಿರಬೇಕು ಎಂದುಕೊಂಡಳು...


✍️... ಅನಿತಾ ಜಿ.ಕೆ.ಭಟ್.
20-06-2020.
     


ಹಲಸಿನ ಹಣ್ಣಿನ ಕಡುಬು/ ಕೊಟ್ಟಿಗೆ




ಹಲಸಿನ ಹಣ್ಣಿನ ಕಡುಬು/ಕೊಟ್ಟಿಗೆ
       ಹಲಸಿನ ಹಣ್ಣು ದೊರೆಯುವ ಸಮಯದಲ್ಲಿ ಹಲಸಿನ ಹಣ್ಣಿನ ಕಡುಬು ಬಹಳ ಸಾಮಾನ್ಯವಾಗಿ ಮಾಡುವ ತಿಂಡಿ.ಸಿಹಿಪ್ರಿಯರಿಗೆ ಈ ಕಡುಬು ಸಿಹಿ ಇಷ್ಟವಿಲ್ಲದವರಿಗೆ ಸೌತೆಕಾಯಿ ಕಡುಬು ಮಾಡುವ ರೂಢಿಯೂ ಕೆಲವು ಮನೆಗಳಲ್ಲಿದೆ.ಬಿಸಿ ಬಿಸಿ ಕಡುಬು ಎಣ್ಣೆ ಅಥವಾ ತುಪ್ಪದ ಜೊತೆ ತಿನ್ನಲು ಬಲು ರುಚಿ.

ಬೇಕಾಗುವ ಸಾಮಗ್ರಿಗಳು:-

      ಎರಡು ಕಪ್ ದೋಸೆ ಅಕ್ಕಿ, ನಾಲ್ಕು ಕಪ್ ಹಲಸಿನ ಹಣ್ಣಿನ ಸೊಳೆ/ತೊಳೆ, ಉಪ್ಪು, ತೆಂಗಿನ ತುರಿ ಅರ್ಧ ಕಪ್,ಬೆಲ್ಲ ಅರ್ಧ ಕಪ್ ಅಥವಾ ರುಚಿಗೆ ತಕ್ಕಷ್ಟು.
( ಶುಂಠಿ ತುಂಡು,ಕಾಳುಮೆಣಸು .. ಇವನ್ನೆಲ್ಲ ಕೆಲವರು ಬಳಸುತ್ತಾರೆ.ಬೇಕಾದಲ್ಲಿ ಬಳಸಬಹುದು.. ನಾನು ಬಳಸುವುದಿಲ್ಲ)


ಮಾಡುವ ವಿಧಾನ:-


      ಬಾಳೆ ಎಲೆಗಳನ್ನು ಅಡಿ ಮೇಲೆ ಎರಡೂ ಬದಿಗಳಲ್ಲಿ ತೊಳೆದು ನೀರು ಬಸಿಯುವಂತೆ ಇಡಿ.ಒಲೆ /ಸ್ಟವ್ ಮೇಲೆ ಚೆನ್ನಾಗಿ ಬಾಡಿಸಿಕೊಳ್ಳಿ.ನಂತರ ನೀರು ಮುಟ್ಟಿಸಿ ಬಟ್ಟೆಯಲ್ಲಿ ಅಡಿ ಮೇಲೆ ಎರಡು ಬದಿ ಒರೆಸಿಕೊಳ್ಳಿ.


       ಅಕ್ಕಿಯನ್ನು ಎರಡರಿಂದ ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ತೊಳೆದಿಡಿ.ಹಲಸಿನ ಹಣ್ಣನ್ನು ತುಂಡುಮಾಡಿ ಸೊಳೆ ಬಿಡಿಸಿ ಇಟ್ಟುಕೊಳ್ಳಿ.ಮಿಕ್ಸಿ ಜಾರಿನಲ್ಲಿ ಸ್ವಲ್ಪ ಸೊಳೆಯನ್ನು ಹಾಕಿ ಗರ್ ಮಾಡಿ.ಸೊಳೆ ತುಂಡಾದರೆ ಸಾಕು.ನಣ್ಣಗಾಗುವುದು ಬೇಡ.ಹೀಗೆ ಸೊಳೆಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಪಾತ್ರೆಗೆ ಹಾಕಿಕೊಳ್ಳಿ.


      ಅಕ್ಕಿ, ತೆಂಗಿನತುರಿ,ಬೆಲ್ಲದ ಪುಡಿ, ಉಪ್ಪು ಎಲ್ಲವನ್ನು ಜೊತೆಗೆ ರುಬ್ಬಿ ಪಾತ್ರೆಯಲ್ಲಿದ್ದ ಹಲಸಿನ ಹಣ್ಣಿನ ತುಂಡುಗಳ ಜೊತೆ ಸೇರಿಸಿ ಚೆನ್ನಾಗಿ ಹೊಂದಿಕೊಳ್ಳುವಂತೆ ತಿರುವಿ.ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಕಾಯಲು ಬಿಡಿ.


       ಈ ಮಿಶ್ರಣವನ್ನು ತಯಾರು ಮಾಡಿಟ್ಟ ಬಾಳೆ ಎಲೆಯ ಮೇಲೆ ಒಂದೆರಡು ಸೌಟಿನಷ್ಟು ಹಾಕಿ ಬಾಳೆಲೆಯ ಮೇಲಿನ ಬದಿ ಮಡಚಿ.ಅದರ ಮೇಲೆ ಕೆಳಗಿನ ಬದಿ ಮಡಚಿ.ನಂತರ ಎರಡೂ ಬದಿಯನ್ನು ಮಡಚಿ,ಕವಚಿ ಇಡಿ.ಇದನ್ನು ಬಿಸಿಯಾಗುತ್ತಿರುವ ಇಡ್ಲಿ ಪಾತ್ರೆಯಲ್ಲಿ ಒಂದರ ಮೇಲೊಂದರಂತೆ ಇಡುತ್ತಾ ಬನ್ನಿ.ಪೂರ್ತಿ ಇಟ್ಟಾದ ಮೇಲೆ ಮುಚ್ಚಳ ಹಾಕಿ ದೊಡ್ಡ ಉರಿಯಲ್ಲಿ ಬೇಯಿಸಿ.ಅರ್ಧ ಗಂಟೆಯಲ್ಲಿ ಉರಿ ಸಣ್ಣ ಮಾಡಿ.ಒಂದು ಗಂಟೆ ಹಬೆಯಲ್ಲಿ ಬೆಂದರೆ ಬಿಸಿ ಬಿಸಿ ಕಡುಬು ತಿನ್ನಲು ತಯಾರಾಗುತ್ತದೆ..


        ಬಾಳೆ ಎಲೆ ಸಿಗದಿದ್ದವರು ಅಥವಾ ಅದನ್ನು ಸ್ವಚ್ಛಗೊಳಿಸುವಷ್ಟು ಸಮಯವಿಲ್ಲದಿದ್ದರೆ ಮೇಲಿನ ಹಿಟ್ಟನ್ನು ಇಡ್ಲಿ ತಟ್ಟೆಗೆ ಎಣ್ಣೆ ಅಥವಾ ತುಪ್ಪ ಸವರಿ ಬೇಯಿಸಬಹುದು.ಅಥವಾ ಬಟ್ಟಲಿನಲ್ಲಿ ಹಾಕಿ ಬೇಯಿಸಬಹುದು.

          ಬಿಸಿ ಕಡುಬಿಗೆ ಎಣ್ಣೆ ಅಥವಾ ತುಪ್ಪ ಸವರಿ ತಿನ್ನಲು ಬಲು ರುಚಿ.ಅಲ್ಲದೇ ಇದನ್ನು ತೆಂಗಿನಕಾಯಿ ಚಟ್ನಿ, ಶುಂಠಿ ಚಟ್ನಿಯೊಂದಿಗೆ ಕೂಡ ತಿನ್ನಲು ಕೊಡಬಹುದು.


✍️... ಅನಿತಾ ಜಿ.ಕೆ.ಭಟ್.
20-06-2020.

ಜೀವನ ಮೈತ್ರಿ ಭಾಗ ೯೨(92)



ಜೀವನ ಮೈತ್ರಿ ೯೨



       ಬೆಳಗ್ಗೆ ಮನೆಯವರೆಲ್ಲರೂ ಬೇಗನೆದ್ದು ಶ್ರೀ ಮಧೂರು ಮಹಾಗಣಪತಿಯ ಮಹಾಗಣಪತಿ ದೇವಾಲಯಕ್ಕೆ ಹೊರಟರು.ಮೈತ್ರಿಯ ತಾಯಿಯೂ ಜತೆಗಿದ್ದರು. ದಾರಿಯ ಮಧ್ಯದಲ್ಲಿ  ಭಾಸ್ಕರ ಶಾಸ್ತ್ರಿಗಳು ಮತ್ತು ಮಹೇಶ ಕೂಡ ಜೊತೆಯಾದರು. ಎರಡೂ ವಾಹನಗಳು  ಒಂದರ ಹಿಂದೆ ಒಂದು ಸಾಗಿದವು.ಮಧೂರು ಗಣಪನ ಸನ್ನಿಧಾನವನ್ನು ತಲುಪಿದವು.ಸುಂದರವಾದ ಪರಿಸರ.ಸುತ್ತಲೂ ಹಸಿರಿನಿಂದ ಕಂಗೊಳಿಸುವ ಮರಗಿಡಗಳು.
ಎರಡೂ ಕುಟುಂಬದ ಸಂಪ್ರದಾಯದಂತೆ ನವಜೋಡಿ ತಮ್ಮ ಬಾಳು ನಿರ್ವಿಘ್ನವಾಗಿ ಸಾಗುವಂತೆ ಶ್ರೀ ಮಹಾಗಣಪತಿ ಬೇಡಿಕೊಂಡರು. ಅಲ್ಲಿ ದೇವರಿಗೆ ಅರ್ಚನೆ ಮಾಡಿಸಿ 'ಅಪ್ಪ ಪ್ರಸಾದ 'ಸ್ವೀಕರಿಸಿದರು.  ನಂತರ ಕೆಲವೇ ಕಿಲೋಮೀಟರ್ ದೂರದಲ್ಲಿ ಇರುವಂತಹ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಅಮ್ಮನವರ ಆಶೀರ್ವಾದವನ್ನು ಪಡೆದುಕೊಂಡು... ನಂತರ ಮೈತ್ರಿಯ ಅಜ್ಜನ ಮನೆಯಲ್ಲಿ ನವ ವಧೂವರರಿಗೆ ಏರ್ಪಾಡಾಗಿದ್ದ ಔತಣ ಕೂಟಕ್ಕೆ ತೆರಳಿದರು. ಅಲ್ಲಿ ಸಾಂಪ್ರದಾಯಿಕವಾದ ಅದ್ದೂರಿ ಭೋಜನವನ್ನು ಏರ್ಪಡಿಸಲಾಗಿತ್ತು. ಊಟದ ನಂತರ ಭಾಸ್ಕರ ಶಾಸ್ತ್ರಿಗಳು,ಮಂಗಳಮ್ಮ ಮಗಳು ಅಳಿಯ ಹಾಗೂ ಮಗಳ ಅತ್ತೆ ಮಾವನವರನ್ನು ಮನೆಗೆ ಬರುವಂತೆ ಆಹ್ವಾನಿಸಿದರು. ಕಿಶನ್ ಮನೆಯವರು ಮೈತ್ರಿಯ ತವರಿನ ಚಡಪಡಿಕೆಯನ್ನು ನೋಡಿ  ಶಾಸ್ತ್ರಿ ನಿವಾಸಕ್ಕೆ ಒಮ್ಮೆ ಭೇಟಿ ಕೊಡೋಣ ಎಂದು    ಶಾಸ್ತ್ರಿ ನಿವಾಸಕ್ಕೆ ಆಗಮಿಸಿದರು.


         ಮನೆಯಲ್ಲಿ ಇದ್ದಂತಹ ಅಜ್ಜ-ಅಜ್ಜಿ  ಸ್ವಾಗತಿಸಿದರು. ಅಷ್ಟೇಕೆ.. ಮೈತ್ರಿ ಬಂದದ್ದು ಕಂಡಾಗ ಕೊಟ್ಟಿಗೆಯಲ್ಲಿದ್ದ ದನಗಳೂ ಅಂಬಾಕಾರಗೈಯತೊಡಗಿದವು. . ಕಾರನ್ನು ಕಂಡಾಗ  ಬೊಗಳುತ್ತಿದ್ದ ನಾಯಿ ಮೈತ್ರಿಯನ್ನು ಕಂಡಾಗ ಸುಮ್ಮನಾಗಿತ್ತು. ಸೇಸಪ್ಪ ,ಜಿನ್ನಪ್ಪ, ಸರಸು ಎಲ್ಲರೂ ಮೈತ್ರಿ ಅಕ್ಕ ಬಂದಿದ್ದಾರೆ ಎಂದು  ಮನೆ ಹಿಂಬದಿಯ ಜಗುಲಿಗೆ ಬಂದು ಇಣುಕಿ ಮಾತನಾಡಿಸಿ ಹೋದರು.


        ಮಂಗಳಮ್ಮ ಎಲ್ಲರಿಗೂ ಗಡಿಬಿಡಿಯಲ್ಲಿ ಬಾಯಾರಿಕೆ ತಯಾರಿಸಿದರು. ಮೈತ್ರಿ ಒಂದು ನಿಮಿಷ ಕುಳಿತುಕೊಳ್ಳದೆ ಮನೆ , ಅಂಗಳದ ಸುತ್ತ ಮುತ್ತ ಎಲ್ಲಾ ಕಡೆ ಸುತ್ತು ಹಾಕಿ ಬಂದಳು. ಅಜ್ಜಿ ಮೈತ್ರಿಯಲ್ಲಿ "ಒಂದು ವಾರ ಕುಳಿತುಕೋ..ಪುಳ್ಳಿ.." ಎಂದರು.. ಅವಳಿಗೂ ಅದೇ ಆಸೆಯಾಗಿತ್ತು. ಅದನ್ನು ಕೇಳಿದ ಕಿಶನ್ ಕಣ್ಣಲ್ಲಿ ಮೈತ್ರಿಗೆ "ಬೇಡ ಕಣೇ.." ಎಂದು ಕೋರಿಕೆ ಸಲ್ಲಿಸುತ್ತಿದ್ದ.. ಮೈತ್ರಿಯ  ಅತ್ತೆ "ನಮ್ಮದೇನೂ ಅಭ್ಯಂತರವಿಲ್ಲ ಕುಳಿತುಕೊಳ್ಳುವುದಕ್ಕೆ" ಎಂದರು. ಮಾವ ಗಣೇಶ ಶರ್ಮ ಕೂಡ ಮಡದಿಯ ಮಾತಿಗೆ ಬೆಂಬಲಿಸಿದರು. ಕಿಶನ್ ನ ಎದೆ ಢವಢವ ಹೊಡೆದುಕೊಳ್ಳುತ್ತಿತ್ತು. ಇವರೆಲ್ಲರೂ ಸೇರಿ ಒಂದು ವಾರ ಮೈತ್ರಿಯನ್ನು ನನ್ನಿಂದ ದೂರವಿಡುತ್ತಾರೆಂದು.


       ಮಂಗಳಮ್ಮ ಬಾಯಾರಿಕೆ ತಂದು ಎಲ್ಲರಿಗೂ ನೀಡಿದರು. ಬಾಳೆಹಣ್ಣಿನ ಸವಿಯಾದ ಹಲ್ವ ಇತ್ತು. ಮದುವೆಗೆಂದು ತೆಗೆದಿಟ್ಟಿದ್ದ ಬಾಳೆಹಣ್ಣುಗಳು ಒಮ್ಮೆಲೆ ಹಣ್ಣಾಗಿದ್ದವು.  ಅದನ್ನೆಲ್ಲ ಮಂಗಳಮ್ಮ ತುಪ್ಪ ಸಕ್ಕರೆ ಹಾಕಿ ಚೆನ್ನಾಗಿ ಪಾಕಮಾಡಿ ಹಲ್ವ ತಯಾರಿಸಿದ್ದರು. ಭಾಸ್ಕರ ಶಾಸ್ತ್ರಿಗಳು ಮಡದಿಯಲ್ಲಿ "ಹಲ್ವಾ   ಮೈತ್ರಿಯ ಮನೆಗೆ ಪ್ಯಾಕ್ ಮಾಡು "ಎಂದರು. ಕಿಶನಿಗೆ ಈಗ ಸ್ವಲ್ಪ ಧೈರ್ಯ ಬಂತು. ಮಾವ ಮೈತ್ರಿಯನ್ನು ಕುಳಿತುಕೊಳ್ಳಲು ಹೇಳುತ್ತಿಲ್ಲ ಎಂದು. ಮಂಗಳಮ್ಮ ಹಲ್ವಾ ಎರಡು ಪ್ರತ್ಯೇಕ  ಪ್ಯಾಕೆಟ್ ಮಾಡಿ ತಂದುಕೊಟ್ಟರು ..ಒಂದು ಬೆಂಗಳೂರಿಗೆ ...ಒಂದು ಮಗಳ ಅತ್ತೆ-ಮಾವನಿಗೆ ಎಂದು. ಕಿಶನ್ ಮುಖದಲ್ಲಿ ಈಗ ನಗೆ ಮೂಡಿತು. ಅಬ್ಬಾ ...!!!! ಇವರು ಮೈತ್ರಿಯನ್ನು ಕೂರಿಸಿಕೊಳ್ಳುತ್ತಿಲ್ಲ .. ಅಷ್ಟೇ ಸಾಕು ಎಂದು.ಭಾಸ್ಕರ ಶಾಸ್ತ್ರಿಗಳು ಮತ್ತು ಮಂಗಳಮ್ಮನಿಗೆ ಮಗಳನ್ನು ಕೂರಿಸಿಕೊಳ್ಳುವ ಬಯಕೆ ಇದ್ದರೂ ಹೇಳಿಕೊಳ್ಳಲಿಲ್ಲ.ಈಗಲೇ  ಹೇಳಿದರೆ ಅಳಿಯನಿಗೆ ವಿರಹ ವೇದನೆಯನ್ನು ತಡೆಯಲು ಸಾಧ್ಯವಿಲ್ಲ ಎಂದು . ಮೈತ್ರಿಗೆ ಅಮ್ಮ ಕುಳಿತುಕೊಳ್ಳಲು ಹೇಳಲಿಲ್ಲ ಎಂದು ಒಂದು ಕಡೆ ಸಂತೋಷ ಇನ್ನೊಂದು ಕಡೆ ದುಃಖ ಎರಡೂ ಜೊತೆ ಜೊತೆಯಲಿ ಆಯ್ತು. ಕಿಶನ್ ನ ಬಿಟ್ಟಿರುವುದು ಕಷ್ಟ. ತವರಿನಲ್ಲಿ ಒಂದೆರಡು ದಿನವಾದರೂ ಕುಳಿತುಕೊಳ್ಳಬೇಕೆಂದು ಬಯಕೆ. ಆ ಕಡೆಯೂ ಅಲ್ಲ ಈ ಕಡೆಯೂ ಅಲ್ಲ ಎನ್ನುವಂತಾಗಿತ್ತು ಅವಳ ಮನಸ್ಥಿತಿ.


      ಒಂದೆರಡು ಗಂಟೆಗಳ ಕಾಲ ತವರಿನಲ್ಲಿ ಕಳೆದು ಮನೆಗೆ ಹಿಂದಿರುಗುವಾಗ ಮೈತ್ರಿ ಗೆ ಕಣ್ತುಂಬಿ ಬಂದಿತ್ತು. ಅಮ್ಮ ಸಮಾಧಾನ ಮಾಡಿ  "ಇನ್ನೊಮ್ಮೆ ಬಂದಾಗ ಕುಳಿತುಕೊಳ್ಳುವಿಯಂತೆ" ಎಂದರು. ಏನೋ ನೆನಪಾದವರಂತೆ ಒಳಗಡೆ ಹೋಗಿ ಕೈಯಲ್ಲಿ ಪುಸ್ತಕ ಹಿಡಿದು ತಂದರು. "ಮಗಳೇ... ಇದು ಕಡೆಂಬಿಲ ಸರಸ್ವತಿ ಅಮ್ಮನವರು ಬರೆದಂತಹ ಅಡುಗೆ ಪುಸ್ತಕ. ಸಾಮಾನ್ಯವಾಗಿ ಹವ್ಯಕರು ಮಾಡುವ ಸಾಂಪ್ರದಾಯಿಕ ಅಡುಗೆಗಳೆಲ್ಲವನ್ನೂ ಸರಿಯಾದ ಅಳತೆಯಲ್ಲಿ ಇದರಲ್ಲಿ ಬರೆದಿದ್ದಾರೆ. ನಿನಗೇನಾದರೂ ಅಡುಗೆ ಮಾಡುವಾಗ ಸಂಶಯ ಬಂದರೆ ಇದನ್ನು ಉಪಯೋಗಿಸಿಕೋ. ಹಾಗೆಯೇ ಹೊಸ ಹೊಸ ರುಚಿಗಳನ್ನು ಮಾಡಿ ಅಳಿಯನಿಗೆ ತಿನಿಸು "ಎಂದು ಹೇಳಿ ಅಳಿಯನ ಮುಖವನ್ನು ನೋಡಿದರು. ಅಳಿಯನ ಮುಖ ಅರಳಿತ್ತು. ಇಂಥ ಅತ್ತೆಯವರು ಸಿಕ್ಕಿದ್ದು ನನ್ನ ಪುಣ್ಯ ಎಂದುಕೊಂಡ ಕಿಶನ್.

"ಅಕ್ಕಾ... ಚಕ್ಕುಲಿ, ಕೋಡುಬಳೆ ಮಾಡಿದಾಗ ಮರೆಯದೆ ನಮಗೂ ಪಾರ್ಸೆಲ್ ಮಾಡು .."ಎಂದ ಮಹೇಶ್..

"ನೀನು ಹೀಗೇ ಏನಾದರೂ ಹೇಳ್ತಿ ಅಂತ ಗೊತ್ತಿತ್ತು ನಂಗೆ.."

"ಹೌದು.. ಮತ್ತೆ.. ಸ್ವೀಟ್ ಮಾಡಿ ಭಾವಂಗೆ ತಿನ್ಸು..ನಮಗೆ ಅದೆಲ್ಲ ಬೇಡಪ್ಪಾ.. ಚಕ್ಕುಲಿ, ಕೋಡುಬಳೆ ಸಾಕು.."

ತಮ್ಮನ ಮಾತಿಗೆ ನಕ್ಕು ಕಾರಿನಲ್ಲಿ ಕುಳಿತಳು ಮೈತ್ರಿ.


       ಕಾರು ಸ್ಟಾರ್ಟ್ ಆಯ್ತು.. ಮುಂದೆ ಹೋಗುತ್ತಿದ್ದಂತೆ ಮೈತ್ರಿ ಹಿಂದಿರುಗಿ ಮನೆಯವರನ್ನೆಲ್ಲ ನೋಡುತ್ತಾ ಬಾಯ್ ಮಾಡಿದಳು. ತವರುಮನೆಯ ಮಾಳಿಗೆಯ ತುದಿ ಕಾಣುವವರೆಗೂ ನೋಡುತ್ತಿದ್ದಳು. ಹೃದಯ ಭಾರವಾಗಿತ್ತು. ಕಿಶನ್ ಕನ್ನಡಿಯಲ್ಲಿ ಮಡದಿಯ ಭಾವುಕವಾದ ಮುಖಭಾವವನ್ನು ಗಮನಿಸುತ್ತಿದ್ದ. ಆದರೆ ಜೊತೆಯಲ್ಲಿ ಅಪ್ಪ-ಅಮ್ಮ ಇದ್ದಾಗ ಅವನಿಗೆ ಸಮಾಧಾನ ಪಡಿಸಲು ಸಾಧ್ಯವಾಗಲಿಲ್ಲ. ಮನೆಗೆ ತಲುಪಿದ ನಂತರ ಬೆಂಗಳೂರಿಗೆ ಹೊರಟು ನಿಂತರು.


        ಎಂದಿನಂತೆ ಗಣೇಶ್ ಶರ್ಮ ತಮ್ಮ ಮಗನಿಗೆ ಹಳ್ಳಿಯಿಂದ ಕೊಂಡೊಯ್ಯಲು ತೆಂಗಿನಕಾಯಿ, ತರಕಾರಿ, ಬಾಳೆಗೊನೆ ಎಲ್ಲವನ್ನು ಸಂಗ್ರಹಮಾಡಿ ಇಟ್ಟಿದ್ದರು. ಕಾರಿಗೆ ತುಂಬಿಸಿ ಕಳುಹಿಸುವಾಗ ಅವರಿಗೂ ಮಗ-ಸೊಸೆ ಇಲ್ಲೇ ಸನಿಹದಲ್ಲಿ ಇದ್ದರೆ ಒಳ್ಳೆಯದಿತ್ತು ಎಂದು ಅನಿಸದೇ ಇರಲಿಲ್ಲ.ಆದರೂ ಮಗನ ಸಂಪಾದನೆ ಬೆಂಗಳೂರಿನಲ್ಲಿ ಚೆನ್ನಾಗಿದೆ.. ಇಲ್ಲಿದ್ದರೆ ಅಷ್ಟು ಸಂಪಾದನೆ ಮಾಡುವುದು ಅಸಾಧ್ಯ ಎಂದು ತಮ್ಮನ್ನು ತಾವು ಸಮಾಧಾನಿಸಿಕೊಂಡರು.



        ಮನೆಯಿಂದ ಹೊರಟು ಬೆಂಗಳೂರು ನಗರ ತಲುಪುವಾಗ  6:30 ಆಗಿತ್ತು. ಕಿಶನ್ ಗೆ ಆಫೀಸ್ ಗೆ ಹೋಗಬೇಕು. ತರಾತುರಿಯಲ್ಲಿ ಬೆಳಗಿನ ತಿಂಡಿ ಮಾಡಿಕೊಟ್ಟಳು ಮೈತ್ರಿ. ಬೇಗಬೇಗನೆ ಆಫೀಸಿಗೆ ತಯಾರಾಗಿ ತಿಂಡಿ ತಿಂದು ಹೊರಡುವ ಗಡಿಬಿಡಿಯಲ್ಲಿ ಮೈತ್ರಿಯನ್ನೊಮ್ಮೆ ತಬ್ಬಿ "ಸಂಜೆ ಬರ್ತೀನಿ ಕಣೇ.. ಕಾಯ್ತಾ ಇರು..ನಿನ್ನೆಯದ್ದು ಇವತ್ತಿಂದು ಎಲ್ಲ ಸೇರಿಸಿ ಪ್ರೀತಿಯ ಹಬ್ಬವನ್ನೇ ಆಚರಿಸೋಣ"ಎಂದು ಗುಳಿಕೆನ್ನೆಗೊಂದು ಸಿಹಿಗುಳಿಗೆಯನಿತ್ತು ಬಾಯ್ ಮಾಡಿದ..


   ಪತಿ ಆಫೀಸಿಗೆ ತೆರಳುತ್ತಿದ್ದಂತೆ ಜಾಡ್ಯ ಅವಳನ್ನು ಆವರಿಸಿತ್ತು..ಅಗತ್ಯದ ಕೆಲಸಗಳನ್ನು ಮಾಡಿ ಹಾಸಿಗೆಯಲ್ಲಿ ವಿರಮಿಸೋಣ ಸ್ವಲ್ಪ ಹೊತ್ತು ಎಂದು ಮಲಗಿದವಳಿಗೆ ಕಣ್ಣಿಗೆ ನಿದ್ದೆ ಆವರಿಸಿತು.. ಮಧ್ಯಾಹ್ನ ಎದ್ದವಳಿಗೆ ಒಬ್ಬಳಿಗೆ ಅಡುಗೆ ಮಾಡಿಕೊಳ್ಳಲು ಬೇಸರ..ಅನ್ನವಿಟ್ಟು... ಮೊಸರಲ್ಲಿ ಊಟಮಾಡೋಣ ಇವತ್ತು ಎಂದುಕೊಂಡಳು.. ಆಗಲೇ ಕಿಶನ್ ಎರಡು ಸಲ ಕರೆ ಮಾಡಿದ್ದು ತಿಳಿದು ಕರೆ ಮಾಡಿದಳು.
"ರೀ.. ಫೋನ್ ಮಾಡಿದ್ರಾ.."

"ಹೂಂ..ಕಣೇ..ಊಟ ಮಾಡಿದ್ಯಾ..ಅಲ್ಲ.. ಅಡುಗೆ ಮಾಡಿದ್ಯಾ ಇಲ್ವಾ.. ಒಬ್ಬಳಿಗೆ ಅಡುಗೆ ಮಾಡಿಕೊಳ್ಳಲು ಉದಾಸೀನ ಮಾಡಬೇಡ.."

ಇವರಿಗೆ ಹೇಗೆ ಗೊತ್ತಾಯಿತು ನನ್ನ ಉದಾಸೀನ ಎಂದುಕೊಳ್ಳುತ್ತಾ
"ಇವತ್ತು ಮೊಸರನ್ನ.."

"ಮನೆಯಿಂದ ತಂದ ಅಲಸಂಡೆ ಇದೆ ..ಪಲ್ಯ ಮಾಡು..ದೀಗುಜ್ಜೆ ಕೊಟ್ಟಿದ್ದಾರೆ ..ಸಾಂಬಾರ್ ಮಾಡು..ಊಟದ ವಿಷಯದಲ್ಲಿ ಅಸಡ್ಡೆ ಮಾಡಬೇಡ.."

"ಹೂಂ.."ಎಂದಳು ನೀರಸವಾಗಿ..

"ಅಂದ ಹಾಗೆ ಮುದ್ಗೊಂಬೆ.. ಇವತ್ತು ಹಿರಿಯ ಅಧಿಕಾರಿಗಳೊಂದಿಗೆ ಮೀಟಿಂಗ್ ಇದೆ.ಅಟೆಂಡ್ ಮಾಡಲೇಬೇಕು.ತಪ್ಪಿಸಿಕೊಳ್ಳುವ ಹಾಗಿಲ್ಲ.. ಬರೋದು ಲೇಟಾಗಬಹುದು ಕಣೇ.. ಪ್ಲೀಸ್.. ಇವತ್ತೊಂದಿನ ಅಷ್ಟೇ...ಬೇಸರ ಮಾಡ್ಕೋಬೇಡ ಬಂಗಾರೀ..."

    ಗಂಡನ ಮಾತಿಗೆ ಹೂಂಗುಟ್ಟಿದಳು.. ಇವತ್ತು ಆರಂಭ..ಮುಂದೆ ಇಂತಹದ್ದೆಲ್ಲ ಮಾಮೂಲಿ ಸಂಗತಿ.. ಉದ್ಯೋಗ ಅಂದ ಮೇಲೆ ಒತ್ತಡಗಳು ಇದ್ದೇ ಇರುತ್ತವೆ...ಮೈತ್ರಿ ಅಡುಗೆ ಮಾಡಲು ತೆರಳಿದಳು.ಗಂಡ ಹೇಳಿದ ಅಡುಗೆಯನ್ನು ರಾತ್ರಿಗೂ ಆಗುವಂತೆ ಸ್ವಲ್ಪ ಹೆಚ್ಚೇ ಮಾಡಿಟ್ಟಳು.ತಾನುಂಡು ಮನೆಯ ಕೆಲಸಗಳಲ್ಲಿ ತಲ್ಲೀನಳಾದಳು.ಮನೆಯಿಂದ ಬರುವಾಗ ತಂದಂತಹ ವಸ್ತುಗಳನ್ನು ಒಪ್ಪ ಓರಣವಾಗಿ ಜೋಡಿಸಿ ಇಡಲು ಒಂದು ತಾಸೇ ಹಿಡಿಯಿತು.ಬಟ್ಟೆ ಒಗೆಯುವುದು,ಗುಡಿಸಿ ನೆಲಒರೆಸಿ ಆಗುವಷ್ಟು ಹೊತ್ತಿಗೆ ಸಂಜೆಯಾಗಿತ್ತು. ಮನಸು ಖಾಲಿಯಾದ ಭಾವ.ಬಾಲ್ಕನಿಯ ಬಳಿ ನಿಂತು ಸುತ್ತಲೂ ದಿಟ್ಟಿಸತೊಡಗಿದಳು.ಕೆಳಗಡೆ ಪುಟ್ಟ ಮಕ್ಕಳು ಆಟವಾಡುತ್ತಿದ್ದಾರೆ.ಮಧ್ಯ ವಯಸ್ಸಿನವರು,ವೃದ್ಧರು ವಾಕಿಂಗ್ ಮಾಡುತ್ತಿದ್ದರು.ತಾನು ಒಬ್ಬಂಟಿ ಎನಿಸತೊಡಗಿತು.ಕಣ್ಣು ಗೋಡೆಯಲ್ಲಿರುವ ಗಡಿಯಾರದ ಕಡೆಗೆ ವಾಲಿತು.ಯಾವತ್ತೂ ಕಿಶನ್ ಬರುವ ಸಮಯ.. ಇವತ್ತು ಎಷ್ಟು ಹೊತ್ತಾಗುತ್ತೋ ಏನೋ..


    ಸ್ನಾನ ಮುಗಿಸಿ ಬಂದು ದೇವರಿಗೆ ದೀಪ ಹಚ್ಚಿ ನಮಸ್ಕರಿಸಿದಳು.ಹಿಂದೆ ಕಲಿತಿದ್ದ ಶಾಸ್ತ್ರೀಯ ಸಂಗೀತದ ರಾಗಗಳನ್ನು ಮೆಲುಕು ಹಾಕತೊಡಗಿದಳು.ಸ್ವಲ್ಪ ಮನಸು ಚೇತರಿಸಿದರೂ...ಸಮಯ ಎಷ್ಟು ನಿಧಾನವಾಗಿ ಚಲಿಸುತ್ತಿದೆ ಎನಿಸಿತು.. ಮೊಬೈಲ್ ಟಿವಿ ಎರಡೂ ಬೇಡವೆನಿಸಿತು.. ಕಿಶನ್ ನ ಸನಿಹಕ್ಕೀಗ ಮನವು ಹಂಬಲಿಸುತ್ತಿತ್ತು.

    ಗೋಡೆಗೆರಗಿ ಕುಳಿತಿದ್ದವಳಿಗೆ ನಿದ್ರೆಯ ಜೊಂಪು ಕಣ್ಣಿಗೆ ಹತ್ತಿತು.ಒಮ್ಮೆಲೇ ಡೋರ್ ಬೆಲ್ ಆದಾಗ ಫಕ್ಕನೇ ಎದ್ದು ಕಿಶನ್ ಬಂದಿರಬೇಕು ಎಂದು ಬಾಗಿಲು ತೆರೆದಳು.ಯಾರೂ ಇರಲಿಲ್ಲ..ನಂಗೆ ಕನಸು ಬಿತ್ತಾ..ಷ್.. ಎನ್ನುತ್ತಾ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡಳು.


     ಕಿಶನ್ ಮೀಟಿಂಗ್ ನಲ್ಲಿ  ಹಿರಿಯ ಅಧಿಕಾರಿಗಳ ಸಲಹೆಗಳನ್ನು ನೋಟ್ ಮಾಡಿಕೊಂಡ.ಮುಂದಿನ ಪ್ರೋಜೆಕ್ಟ್ ನ ರೂಪುರೇಷೆಗಳನ್ನು ಮಂಡಿಸುತ್ತಿದ್ದಾಗ ಗಮನವಿಟ್ಟು ಆಲಿಸುತ್ತಿದ್ದ.ಕೆಲವು ಸಮಸ್ಯೆಗಳನ್ನು ಅಧಿಕಾರಿಗಳು ಸಭೆಯ ಮುಂದಿಟ್ಟಾಗ ಕಿಶನ್ ಸಮಸ್ಯೆ ಯನ್ನು ಬಗೆಹರಿಸಲು ತನ್ನ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ಸೂಚಿಸಿದ.ಅಧಿಕಾರಿಗಳು ಮೆಚ್ಚಿ ಭೇಷ್ ಎಂದರು.

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
19-06-2020.

Thursday, 18 June 2020

ಬಲಿತ ಪಪ್ಪಾಯಿಯ ದೋಸೆ


        

   ಪಪ್ಪಾಯ ದೋಸೆ


        ಬಲಿತ ಪಪ್ಪಾಯ ಕಾಯಿಗಳಿಂದ ದೋಸೆ ಮಾಡಬಹುದೆಂದು ಇತ್ತೀಚೆಗೆ ಗೆಳತಿ ತಿಳಿಸಿದ್ದಳು.ಪಪ್ಪಾಯ ಸ್ವಲ್ಪ ಉಷ್ಣವೆನಿಸಿದರೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು:-

ಎರಡು ಕಪ್ ದೋಸೆ ಅಕ್ಕಿ,ಎರಡು ಕಪ್ ಬಲಿತ ಪಪ್ಪಾಯಿಯ ತುಂಡುಗಳು,ಅರ್ಧ ಕಪ್ ತೆಂಗಿನತುರಿ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:-
ಪಪ್ಪಾಯಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ನೀರಿನಲ್ಲಿ ಹತ್ತು ನಿಮಿಷ ಹಾಕಿಡಿ.ನಂತರ ನೀರು ಬದಲಾಯಿಸಿ ಒಮ್ಮೆ ತೊಳೆದುಕೊಳ್ಳಿ.(ಅದರಲ್ಲಿದ್ದ ಮೇಣದ ಅಂಶ ತೆಗೆಯಲು).
ದೋಸೆ ಅಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿ ಇಡಬೇಕು.ಚೆನ್ನಾಗಿ ತೊಳೆದುಕೊಂಡ ನಂತರ ಪಪ್ಪಾಯ ಹೋಳುಗಳು, ತೆಂಗಿನಕಾಯಿ ತುರಿಯೊಂದಿಗೆ ನೆನೆಸಿದ ಅಕ್ಕಿಯನ್ನು ಕಡೆಯಿರಿ.ಹಿಟ್ಟು ನುಣ್ಣಗಾಗಬೇಕು.ಉಪ್ಪು ಸೇರಿಸಿಕೊಳ್ಳಿ..ಕಾವಲಿಯನ್ನು ಬಿಸಿ ಮಾಡಿ ಎಣ್ಣೆ ಅಥವಾ ತುಪ್ಪ ಹಾಕಿ ದೋಸೆ ಹುಯ್ಯಿರಿ...ಕಲರ್ ಫುಲ್ ದೋಸೆ ಎರಡೇ ನಿಮಿಷದಲ್ಲಿ ಸಿದ್ಧ. ಚಟ್ನಿಯೊಂದಿಗೆ ದೋಸೆಯನ್ನು ಸವಿಯಿರಿ..

✍️... ಅನಿತಾ ಜಿ.ಕೆ.ಭಟ್.
19-06-2020.


Wednesday, 17 June 2020

ಹಲಸಿನಕಾಯಿ ದೋಸೆ


       ಹಲಸಿನ ಕಾಯಿ ದೋಸೆ


   ಹಲಸಿನಕಾಯಿ ದೊರೆಯುವ ಈ ಸಮಯದಲ್ಲಿ ಗರಿಗರಿಯಾಗಿ ಎದ್ದು ಬರುವ ಹಲಸಿನ ಕಾಯಿ ದೋಸೆ ಎಲ್ಲರ ಫೇವರಿಟ್ ದೋಸೆ.ತನ್ನ ಬಣ್ಣ ಹಾಗೂ ರುಚಿಯಿಂದ ಎಲ್ಲರ ಬಾಯಲ್ಲೂ ನೀರೂರಿಸುವ ತಾಕತ್ತು ಹಲಸಿನಕಾಯಿ ದೋಸೆಗಿದೆ.
ಬೇಕಾಗುವ ಸಾಮಗ್ರಿಗಳು:-
ಎರಡು ಕಪ್ ಅಕ್ಕಿ, ನಾಲ್ಕು ಕಪ್ ಹಲಸಿನ ಸೊಳೆ, ಉಪ್ಪು (ಕೆಲವು ಹಲಸಿನಸೊಳೆಗೆ ಅಕ್ಕಿ ಬಹಳ ಕಡಿಮೆ ಸಾಕು.. ದೋಸೆ ಹಿಟ್ಟು ಕಡೆಯುವಾಗ ಹದ ನೋಡಿಕೊಳ್ಳಬೇಕು)
ಮಾಡುವ ವಿಧಾನ:-
ಹಲಸಿನ ಕಾಯಿಯನ್ನು ತುಂಡು ಮಾಡಿ ಸೊಳೆ ತೆಗೆದಿಡಿ.ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿದ ದೋಸೆ ಅಕ್ಕಿಯೊಂದಿಗೆ ಸೊಳೆ ಸೇರಿಸಿ ರುಬ್ಬಿ.ಉಪ್ಪು ರುಚಿಗೆ ತಕ್ಕಷ್ಟು ಹಾಕಿ.ಹಿಟ್ಟು ಸಾಮಾನ್ಯ ಉದ್ದಿನ ದೋಸೆ ಹಿಟ್ಟಿನ ಹದಕ್ಕಿರಲಿ.ಕಾವಲಿಗೆ ಬಿಸಿಮಾಡಿ ದೋಸೆ ತೆಳ್ಳಗೆ ಹರವಿ.ಎಲ್ಲಾ ಸರಿಯಾದರೆ ರೋಸ್ಟ್ ಆಗಿ ಬರುವುದು.(ದೋಸೆ ಸರಿಯಾಗಿ ಏಳದಿದ್ದರೆ ಸ್ವಲ್ಪ ಅಕ್ಕಿ ಹಿಟ್ಟು ಕಲಸಿ ಹಾಕಬಹುದು..)ಪ್ರತಿ ಬಾರಿ ದೋಸೆ ಮಾಡುವಾಗಲೂ ಕಾವಲಿಗೆ ಎಣ್ಣೆ ಹಾಕಿಕೊಳ್ಳುವುದು ಬೇಡ..ದೋಸೆಯ ಮೇಲೆ ಎಣ್ಣೆ ಹಾಕಿಕೊಳ್ಳಬಹುದು.
ಇದನ್ನು ಜೇನು ,ಕೊಬ್ಬರಿ ಚಟ್ನಿಯೊಂದಿಗೆ ಸೇವಿಸಿದರೆ ರುಚಿಕರ.


✍️... ಅನಿತಾ ಜಿ.ಕೆ.ಭಟ್.
18-06-2020.



ಜೀವನ ಮೈತ್ರಿ ಭಾಗ ೯೧(91)


ಜೀವನ ಮೈತ್ರಿ ಭಾಗ ೯೧


       ಪುರೋಹಿತರು ಮಂತ್ರೋಚ್ಛಾರಣೆ ಮಾಡುತ್ತಾ ಹವಿಸ್ಸನ್ನು ಹೋಮಕ್ಕೆ ಅರ್ಪಿಸುತ್ತಿದ್ದರು.ಕಿಶನ್ ಮೈತ್ರಿ ತಾವು ಹಸ್ತ ಮುಟ್ಟಿಕೊಳ್ಳುತ್ತಿದ್ದರು.ಪರಿಕರ್ಮಿ ಬಾಲಣ್ಣ ತಯಾರಿಸಿದ್ದ ಅಷ್ಟದ್ರವ್ಯವನ್ನು,ದನದ ತುಪ್ಪವನ್ನು ಹೋಮಕ್ಕೆ ಸುರಿಯುತ್ತಿದ್ದಂತೆ ಹೋಮದಿಂದ ವಿಶೇಷವಾದ ಪರಿಮಳ ಮನೆಯೆಲ್ಲ ಪಸರಿಸಿತು.ಹೋಮದ ಮುಂದೆ ಕುಳಿತು ಪುರೋಹಿತರು ಹೇಳಿದಂತೆ ಮಾಡುತ್ತಿದ್ದ ಮೈತ್ರಿಗೆ ತವರಿನ ಕನವರಿಕೆ.ದೇಹ ಯಾಂತ್ರಿಕವಾಗಿ ಇಲ್ಲಿದ್ದರೂ ಮನಸ್ಸು ..'ಎಷ್ಟು ಹೊತ್ತಾಯಿತು ಬರಲೇಯಿಲ್ಲ' ಎನ್ನುತ್ತಾ ರಚ್ಚೆ ಹಿಡಿದು ಪ್ರಶ್ನಿಸುತ್ತಿತ್ತು.


   ಅಂಗಳದ ತುದಿಯಲ್ಲಿ ಕಾರೊಂದು ಬಂದು ನಿಂತದ್ದೇ ತಡ ಅವಳೊಳಗೆ ಪುಳಕ.ಮನವು ಕುಣಿದಾಡಿತು.ಕಾರಿನಿಂದಿಳಿದ ಅಮ್ಮನ ಸೀರೆಯಂಚು ಕಂಡಾಗ ಮೈತ್ರಿಗೆ ನಿಟ್ಟುಸಿರು.ಬೆನ್ನು ಹಾಕಿ ನಿಂತಿರುವ ಅಮ್ಮನ ಕಪ್ಪಾದ ಉದ್ದ ಜಡೆ, ತಲೆಯಲ್ಲಿ ಮಂಗಳೂರು ಮಲ್ಲಿಗೆ ಹೂವಿನ ಮಾಲೆ,ಮತ್ತೊಂದು ಕೇಸರಿಗುಲಾಬಿ ಹೂವನ್ನು ಕಂಡೊಡನೇ ಓಡಿ ಹೋಗಿ ಅಮ್ಮನನ್ನು ಬರಸೆಳೆದು ಅಪ್ಪಿ ಹಿಡಿಯಬೇಕೆನ್ನುವ ಹಂಬಲ.. ಆದರೆ...ಪುರೋಹಿತರು 'ಈಗ ಅರ್ಧ ಗಂಟೆ ಇಲ್ಲಿಂದ ಏಳುವಂತಿಲ್ಲ 'ಎಂದು ಖಡಾಖಂಡಿತವಾಗಿ ಹೇಳಿದರು.

     ಓಹ್...ಕಾರಿನಿಂದಿಳಿದು ನಗುನಗುತ್ತಾ ಬರುತ್ತಿದ್ದಾನೆ ಕೀಟಲೆ ಕಿಟ್ಟಪ್ಪ ಮಹೇಶ್...!! ಎಷ್ಟು ದಿನವಾಯಿತು ಇವನ ಛೇಡಿಸುವ ಮಾತಿಲ್ಲದೇ...ಹಿಂದಿನಿಂದ ಬರುತ್ತಿದ್ದರು...ಅಮ್ಮ..ಅದೇನೋ ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದಾರಲ್ಲ... ಬಹುಶಃ ನನಗಾಗಿಯೇ ಇರಬೇಕು..ಮಗಳೆಂದರೆ ಬಲು ಅಕ್ಕರೆ ಅಮ್ಮನಿಗೆ.. ಎಂದಿನಂತೆ ಸರಳವಾಗಿಯೇ ಬಂದಿದ್ದಾರೆ ಅಮ್ಮ..ಒಳ್ಳೆಯ ಸೀರೆ, ತುಂಬಾ ಆಭರಣ ಇದ್ದರೂ ಅಮ್ಮ ಅದೆಲ್ಲ ಬದಿಗಿಟ್ಟು ಸಾಧಾರಣ ಅಲಂಕಾರದಲ್ಲಿ ಮುಖದ ಮೇಲೆ ಮಂದಹಾಸವರಳಿಸಿಕೊಂಡು ಬರುತ್ತಿದ್ದಾರೆ.ಅಪ್ಪಾ...ಯಾವಾಗಲೂ ಗಂಭೀರವಾಗಿ ಇರುತ್ತಿದ್ದ ಅಪ್ಪನ ಮುಖದಲ್ಲಿ ಇಂದು ನನಗೆ ಯಾವ ಗಂಭೀರತೆಯೂ ಕಾಣುವುದಿಲ್ಲ..ಅಲ್ಲ ನಾನು ನೋಡುವ ರೀತಿ ಬದಲಾಗಿದೆಯೋ ...ಎಂದೆಲ್ಲ ಮೈತ್ರಿ ಕುಳಿತಲ್ಲಿಂದಲೇ ಲೆಕ್ಕ ಹಾಕುತ್ತಿದ್ದಳು.


      ಮಂಗಳಮ್ಮ ಒಳಗೆ ಬಂದವರೇ ಮಗಳ ಬಳಿ ಬಂದು ಮಾತನಾಡಿದರು.ಮಗಳು ಅಳಿಯನನ್ನು ಹೋಮದ ಬುಡದಲ್ಲಿಯೇ ಮಾತನಾಡಿಸಿ ಮಗಳಿಗೆ-ಅಮ್ಮನಿಗೆ ಒಮ್ಮೆಯ ಕಾತುರತೆ ಕಡಿಮೆಯಾದ ಮೇಲೆ ಅಮ್ಮ ಬಾಯಾರಿಕೆ ಕುಡಿಯಲು ತೆರಳಿದರು.ಅಪ್ಪ ಬಾಯಾರಿಕೆ ಕುಡಿದು ಬಂದಾಗ ಕಿಶನ್ ಮೈತ್ರಿ ಇಬ್ಬರೂ ತಾವಿದ್ದಲ್ಲಿಂದಲೇ ಕುಶಲ ವಿಚಾರಿಸಿಕೊಂಡರು.ಇನ್ನು ತಮ್ಮ .. ಅವನನ್ನು ಇಲ್ಲಿಂದ ಮಾತನಾಡಿಸಿದರೆ ಸಾಲದು ಮೈತ್ರಿಗೆ.ಹತ್ತಿರ ಹೋಗಿ ಅವನ ಜೊತೆ ತರ್ಲೆ ಮಾಡಿದ್ರೇ ಸಮಾಧಾನ.


     ಹೋಮ ಪೂರ್ಣಾಹುತಿ ಆಗುತ್ತಿದ್ದಂತೆ ಇದ್ದ ಸ್ವಲ್ಪವೇ ಬಿಡುವಿನಲ್ಲಿ ತಮ್ಮನೆಡೆಗೆ ಧಾವಿಸಿದಳು ಮೈತ್ರಿ.."ಏನೋ ತರ್ಲೆ ತಮ್ಮ ಸಮಾಚಾರ..?"

"ಏನಮ್ಮ ಮಹಾರಾಣಿಯವರೇ..ತಾವೇ ಹೇಳಬೇಕು.."

"ಸಿಇಟಿ ,ನೀಟ್ ಪರೀಕ್ಷೆಗಳಿಗೆಲ್ಲ ಓದಿ ಆಯ್ತಾ..?ಈಗ ತೊಂದರೆ ಕೊಡೋಕೆ ಯಾರು ಇಲ್ವಲ್ಲಾ.."

"ಓದಿ ಮುಗಿಯೋದುಂಟೇ.. ? ಹೌದು.. ಲಾಲ್ ಬಾಗ್ ಹೇಗಿತ್ತು.. ? ಲಾಲ್ ಬಾಗ್ ಅನ್ನು ಲವ್ ಬಾಗ್ ಮಾಡ್ಬಿಟ್ರೋ ಹೇಗೆ..?"

"ನೀನು ಹೀಗೇನೇ..ಬದಲಾಗೋದೇ ಇಲ್ಲ.."

"ನೀನು ಅಷ್ಟೇ ಅಕ್ಕಾ..ಬದಲಾಗಲೇ ಇಲ್ಲ.. ಮೊದಲಿನಂತೆ ನನ್ನನ್ನು ಗದರಿಸೋದು ಬಿಟ್ಟಿಲ್ಲಾ.. ಹೌದು ಭಾವಂಗೂ ದಿನಾ ಹೀಗೇ ಕ್ಲಾಸ್ ತೆಗೋತೀಯಾ ಹೇಗೆ..?"

ಅಷ್ಟರಲ್ಲಿ ಭಾವನೂ ಆಗಮಿಸಿದರು..
ಇವರ ಮಾತುಕತೆ ಕೇಳಿದವರೇ "ಹೆಡ್ ಮಿಸ್ ಎದುರು ಮಾತಾಡಲು ಭಯ .. ಆಮೇಲೆ ಪನಿಶ್ಮೆಂಟ್ ಕೊಟ್ರೆ ಭಯ..ಊಟತಿಂಡಿ ಸರಿಯಾಗಿ ಸಿಗ್ಬೇಕಲ್ಲ.."

"ಹೌದ್ ಹೌದು ಭಯ... ನಾಟಕ ಸಾಕು.."ಎನ್ನುತ್ತಾ ಕಣ್ಣಲ್ಲೇ ಕಿಚಾಯಿಸಿದಳು.

"ನಮ್ಮಕ್ಕಾ ... ಹೇಗೆ.. ನಳಪಾಕ ಮಾಡಿ ಎಕ್ಸ್ಪರ್ಟ್ ಆದ್ರಾ ..ನಿಮ್ಮ ಟ್ರೈನಿಂಗಲ್ಲಿ.."

"ಅಕ್ಕನ ಕೈಯಡುಗೆ ಉಂಡು ಎರಡು ಕೆಜಿ ತೂಕ ಹೆಚ್ಚಾಗಿದೆ..ಇನ್ನೀಗ ನಂಗೆ ಡಯಟ್ ಮಾಡಿಸೋಕೆ ಒಂದು ವಾರ ತವರಲ್ಲಿರಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದಾಳೆ ನಿಮ್ಮಕ್ಕ.."

"ಎಲ್ಲ ಛೇಡಿಸೋಕೆ ಮಾತ್ರ...ಅದಕ್ಕೆಲ್ಲಿ ಬಿಡ್ತೀರಿ ನೀವು.."
ಎಂದಾಗ ಪುರೋಹಿತರು ಕರೆದರು.ಮೈತ್ರಿ ಕಿಶನ್ ತೆರಳಿದರು.


      ಕಾರ್ಯಕ್ರಮ ಮುಗಿದು ಊಟವಾದ ಬಳಿಕ ಮೈತ್ರಿ ಅಪ್ಪನಲ್ಲಿ ಮಾತನಾಡುತ್ತಿದ್ದಳು..ಅಪ್ಪ ತಗ್ಗಿದ ದನಿಯಲ್ಲಿ "ಮಗಳೇ.. ಬೆಂಗಳೂರು ಹೇಗಾಗುತ್ತದೆ..? ವಾತಾವರಣ ಹಿಡಿಸುತ್ತಾ..?" ಎಂದೆಲ್ಲ ಕೇಳುತ್ತಿದ್ದರೆ ಅಂದು ಏರುದನಿಯಲ್ಲಿ ಮಾತನಾಡಿಸುತ್ತಿದ್ದ ಅಪ್ಪ ಇವರೇನಾ..? ಎಂಬ ಪ್ರಶ್ನೆ ಅವಳೊಳಗೆ ಮೂಡಿತ್ತು.ಅಳಿಯಂದಿರ ಉದ್ಯೋಗ,ಮನೆಗೆ ಬರುವ ಸಮಯ ,ಆಫೀಸು ಎಲ್ಲವನ್ನೂ ಕುತೂಹಲದಿಂದ ತಿಳಿದುಕೊಂಡರು..ಇದು ಅಪ್ಪನ ಕರ್ತವ್ಯವೂ ಕೂಡಾ.ನಂತರ ಭಾಸ್ಕರ ಶಾಸ್ತ್ರಿಗಳು ಅಳಿಯ ಕಿಶನ್ ನಲ್ಲಿ ಸ್ವಲ್ಪ ಹೊತ್ತು ಮಾತನಾಡಿದರು.

      ಅಮ್ಮ ಮಗಳು ಒಬ್ಬರಿಗೊಬ್ಬರು ಅಂಟಿಕೊಂಡೇ ಇದ್ದರು ಎಂದರೂ ತಪ್ಪಿಲ್ಲ.ಎರಡು ವಾರದ ಮನೆಯ ಸುದ್ದಿಯನ್ನು ಮೈತ್ರಿ ಕೇಳಿ ತಿಳಿದುಕೊಂಡಳು.ಅಜ್ಜ, ಅಜ್ಜಿಯನ್ನು ವಿಚಾರಿಸಿಕೊಂಡಳು.ಮಗಳು ಅಡುಗೆಯ ಗಡಿಬಿಡಿಯಲ್ಲಿ ಮಾಡಿದ ಅವಾಂತರಗಳು, ಲಾಲ್ ಬಾಗ್ ಸುತ್ತಿದ್ದು ,ಮಾಲ್, ಸಿನಿಮಾ,ಚಿಕ್ಕಪ್ಪನ ಮನೆಗೆ ಹೋದದ್ದು ಎಲ್ಲವೂ ವರದಿಯಾಗಿತ್ತು.ಅದಕ್ಕಿಂತ ಹೆಚ್ಚಾಗಿ ಪರಸ್ಪರ ಹಂಚಿಕೊಳ್ಳಲೇಬೇಕೆಂಬ ಉತ್ಕಟತೆ ಅವರಲ್ಲಿತ್ತು..


     ಹೊರಡುತ್ತಿದ್ದಂತೆ ಅಪ್ಪ ಮೈತ್ರಿಯನ್ನು ಕರೆದು "ಇವತ್ತು ಅಮ್ಮ ಇಲ್ಲಿ ನಿಲ್ಲುತ್ತಾರೆ.. " ಎಂದಾಗ ಮೈತ್ರಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.ತಮ್ಮನಿಗೆ ಬಾಯ್ ಮಾಡಿ ಬೆನ್ನ ಮೇಲೊಂದು ಪ್ರೀತಿಯ ಗುದ್ದು ಕೊಟ್ಟು ಕಳುಹಿಸಿದಳು.ಅಪ್ಪ "ಮಗಳೇ ..ನಾಳೆ ಅಮ್ಮನನ್ನೂ ಅಳಿಯಂದಿರನ್ನೂ ಕರೆದುಕೊಂಡು ಬಾ" ಎಂದು ಹೇಳಿದರು.ವಿಷಯವೇನೆಂದು ತೀಳಿದಿರದ ಆಕೆ ಸುಮ್ಮನೆ ತಲೆಯಲ್ಲಾಡಿಸಿದಳು.


      ಮೈತ್ರಿ ಮನೆ ಕೆಲಸಗಳಲ್ಲಿ ಅತ್ತೆಗೆ ಸಹಾಯ ಮಾಡುತ್ತಾ , ಅಮ್ಮನಲ್ಲಿ ಮಾತನಾಡುತ್ತಾ ಇದ್ದರೆ ಕಿಶನ್ ಮಾತ್ರ ಒಂಟಿತನ ಅನುಭವಿಸುತ್ತಿದ್ದ.ಬೆಂಗಳೂರಲ್ಲಿದ್ದಾಗ ಸದಾ ಮಡದಿಯ ಹಿಂದೆಯೇ ಸುತ್ತಿ ಕೀಟಲೆ ಮಾಡುತ್ತಾ , ಮುದ್ದಿಸುತ್ತಾ,ಆಗಾಗ ಬಿಗಿದಪ್ಪಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದವನ ಹೃದಯವೀಗ ಅವಳ ಸನಿಹಕ್ಕೆ ಹಾತೊರೆಯುತ್ತಿತ್ತು.ಅವಳಿಗೆ ತನ್ನ ನೆನಪೇ ಇಲ್ಲವೇನೋ ಎಂಬಂತೆ ಭಾಸವಾಯಿತು ಕಿಶನ್ ಗೆ.ಬರುವಾಗ ಹಾಕಿದ್ದ ಬಟ್ಟೆಯನ್ನು ಒಗೆಯಲು ಕೊಂಡೊಯ್ಯಲು ರೂಮಿನೊಳಗೆ ಕಾಲಿಟ್ಟಳು ಮೈತ್ರಿ.ಅದನ್ನರಿತ ಕಿಶನ್ ತಾನು ಹಿಂಬಾಲಿಸಿದ.ಮೆಲ್ಲನೆ ಹಿಂದಿನಿಂದ ಬಂದು ಬಾಗಿಲು ಸರಿಸಿ ತೋಳುಗಳ ಬಿಗಿಯಾಗಿಸಿ ತನಗೆ ಬೇಕಾದಷ್ಟು ಮಧುವ ಹೀರಿದ.ಅವಳು ಕೈಯಲ್ಲಿ ಹಿಡಿದಿದ್ದ ಬಟ್ಟೆಗಳ ಕೆಳಗೆ ಹಾಕಿ ತನ್ನವನಿಗೆ ಸಾಥ್ ನೀಡಿದಳು.ತಾನು ಎಲ್ಲರೊಂದಿಗೆ ಹರಟುತ್ತಿದ್ದರೂ ಮನದಲ್ಲಿ ನಿನ್ನ ಸನಿಹ ಸುಖದ ಹಂಬಲ ಇದ್ದೇ ಇದೆ ಇನಿಯ.. ಎಂದು ತನ್ನ ಅನುರಾಗದ ನಡೆಯಲ್ಲೇ ವಿವರಿಸಿದಳು.ತುಟಿ ಕೆಂಪೇರಿತ್ತು ,ಕೆನ್ನೆ ರಂಗೇರಿತ್ತು.   "ಮತ್ತೆ ಸಿಗುವೆ" ಎಂದು ಸವಿಯಾಗಿ ಕಿವಿಯಲ್ಲುಸುರಿ ಜಾರಿಕೊಂಡಳು ಕಿಶನ್ ನ ಪ್ರೀತಿಯ ಹರಿಣಿ..ಮುದ್ದಿನರಗಿಣಿ..ಅವಳು ಹೋಗುತ್ತಲೇ ಅವನ ಕಣ್ಣುಗಳೂ ಅವಳನ್ನು ಹಿಂಬಾಲಿಸಿದವು.


     ಮಂಗಳಮ್ಮ ಮಮತಾ ಇಬ್ಬರೂ ತಮ್ಮ ಮಕ್ಕಳ ಸುದ್ದಿ ಮಾತನಾಡುತ್ತಾ ಮನೆಯನ್ನು ಒಪ್ಪ ಓರಣವಾಗಿಸಿದರು.ಮೈತ್ರಿ ಅಂಗಳದ ತುದಿಯಲ್ಲಿ ಇದ್ದ ಕಲ್ಲಿನಲ್ಲಿ ಬಟ್ಟೆಯೊಗೆದು ತಂದು ಜಗಲಿಯ ಬದಿಯಲ್ಲಿದ್ದ ಹಗ್ಗದಲ್ಲಿ ನೇತುಹಾಕಿದಳು.ಬೇಗನೆ ಸ್ನಾನ ಮುಗಿಸಿ ಬಂದವಳಲ್ಲಿ ಅತ್ತೆ "ನೀನು ದೀಪ ಹಚ್ಚು" ಎಂದರು..ದೇವರ ದೀಪ ಹಚ್ಚಿದಳು.ಅವಳ ಕಣ್ಣುಗಳಲ್ಲಿ ನಿದ್ದೆ ತೂಗುತ್ತಿತ್ತು.ಆದರೂ ಇಲ್ಲಿ ಹಾಗೆಲ್ಲ ಬೇಗ ಮಲಗಲು ಅವಳಿಗೂ ಸಂಕೋಚ.ಬೇಗಬೇಗನೆ ಕಿಶನ್ ನಲ್ಲಿ ಸ್ನಾನ ಜಪ ಮುಗಿಸಲು ಹೇಳಿದಳು.ಅದೆಲ್ಲ ಮುಗಿಯುತ್ತಿದ್ದಂತೆ ಊಟಕ್ಕಿಟ್ಟಿದ್ದಳು ಮೈತ್ರಿ.ಅವಳ ಅವಸರವನ್ನು ಅಮ್ಮಂದಿರಿಬ್ಬರೂ ಅರ್ಥೈಸಿಕೊಂಡು ಎಲ್ಲರಿಗೂ ಊಟದ ಏರ್ಪಾಡು ಮಾಡಿದರು.


     ಮಾವ ಮತ್ತು ಕಿಶನ್ ಗೆ ಬಡಿಸುತ್ತಿದ್ದ ಮೈತ್ರಿ ಯಲ್ಲಿ ನೀನೂ ಕುಳಿತುಕೋ ಎಂದರು ಅತ್ತೆ.ಅವಳೂ ಊಟ ಮುಗಿಸಿದಳು.ಅಮ್ಮ ಅತ್ತೆಗೆ ಬಡಿಸಲು ಮುಂದಾದಳು."ನಮಗೆ ನಾವೇ ಬಡಿಸಿಕೊಳ್ಳುತ್ತೇವೆ.ನೀವು ಇನ್ನು ಹೋಗಿ .ಆಯಾಸ ಪರಿಹರಿಸಿಕೊಳ್ಳಿ" ಎಂದರು.ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟದ್ದೂ ಹಾಲು ಎಂಬಂತಾಯಿತು..ನಸುನಾಚುತ್ತಾ ಮಲಗಲು ತೆರಳಿದಳು ಮೈತ್ರಿ.ಆಕೆ ಹಾಸಿಗೆ ಹಾಸುತ್ತಿದ್ದಂತೆ ರೂಮಿಗಾಗಮಿಸಿದ ಪತಿರಾಯ.ಬಾಗಿಲು ಭದ್ರಪಡಿಸಿದ.ಹಿಂದಿನಿಂದ ಕೈಯಲ್ಲಿ ಆವರಿಸಿದ..ನಿನ್ನೆ ರಾತ್ರಿಯ ಪ್ರಯಾಣದ ಆಯಾಸ,ಲಲ್ಲೆಗೆರೆದು ಜೊತೆಯಾಡಲು ಸಾಧ್ಯವಾಗದ ವಿರಹ ಎರಡೂ ಕೊನೆಯಾಗುವಂತೆ ಉಸಿರೊಳಗೆ ಉಸಿರು ಬೆರೆಸಿ ಒಂದಾಯಿತು ಎಳೆಯ ನವಜೋಡಿ .ಹರುಷದ ಹೊನಲನ್ನು ಹರಿಸಿ ಪತಿಯ ಸಂತೋಷಪಡಿಸಿದಳು ಪತ್ನಿ.

     ದಾಂಪತ್ಯದ ಸವಿಯುಂಡ ದಂಪತಿ ಪರಸ್ಪರ ಮಾತನಾಡಿದರು.ಮೈತ್ರಿಯ ಬಳಿ ನಾಳೆ ಬೆಳಿಗ್ಗೆ ಬೇಗನೆದ್ದು ಮಧೂರು ಮಹಾಗಣಪತಿಯ ದೇವಸ್ಥಾನಕ್ಕೆ ಹೊರಡಬೇಕು.ಮಾವ ಇವತ್ತು ನನ್ನಲ್ಲಿ ಹೇಳಿದ್ದಾರೆ ಎಂಬುದನ್ನು ತಿಳಿಸಿದ..ಹೇಗೆ ,ಎಷ್ಟು ಹೊತ್ತಿಗೆ ಹೋಗುವುದು ಎಲ್ಲ ವಿಷಯವನ್ನು ಮೈತ್ರಿಯಲ್ಲಿ ಹಂಚಿಕೊಂಡ ಕಿಶನ್..ಶುಭಮಿಲನ,ಶುಭಸಂವಾದವು ಶುಭರಾತ್ರಿಗೆ ಮುನ್ನುಡಿ ಬರೆಯಿತು.


ಮುಂದುವರಿಯುವುದು..

✍️...ಅನಿತಾ ಜಿ.ಕೆ.ಭಟ್.
17-06-2020.







Tuesday, 16 June 2020

ಹೂವಿನ ಗಿಡಗಳ ಆಯ್ಕೆ ನನ್ನಿಂದಾಗದು ...ಅದಕ್ಕೆ ಹೆಣ್ಣುಮಕ್ಕಳೇ ಸರಿ..


ಹೂವಿನ ಗಿಡದ ಆಯ್ಕೆ ನನ್ನಿಂದಾಗದು.. ಅದಕ್ಕೆ ಹೆಣ್ಣುಮಕ್ಕಳೇ ಸರಿ..


   ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇಂತಹ ಮಾತು ಕೇಳಿಬರುತ್ತದೆ.ನಮ್ಮಲ್ಲೂ  ಕೂಡ. ಹೆಣ್ಣುಮಕ್ಕಳಿಗೆ ಹೂವಿನಗಿಡಗಳು ಎಂದರೆ ಪಂಚಪ್ರಾಣ. ನನಗೂ ಕೂಡ ಹೂವಿನ ಗಿಡಗಳೆಂದರೆ ಬಲು ಇಷ್ಟ ಅದರಲ್ಲೂ ಜರ್ಬೆರಾ,ಕಸಿಗುಲಾಬಿ, ಸೇವಂತಿಗೆ ಅತ್ಯಂತ ಪ್ರಿಯ. ಪ್ರತಿವರ್ಷ ಮಳೆಗಾಲ ಬಂದಾಗ ಒಂದು ಸಲ ಹೂವಿನ ನರ್ಸರಿಗೆ ಭೇಟಿಕೊಡುವ ಅಭ್ಯಾಸ. ಆದರೆ ಈ ವರ್ಷ ಕೊರೋನಾದಿಂದಾಗಿ ಸ್ವಲ್ಪ ತಡೆ ಬಿದ್ದಿದೆ.



     ಅಂಗಳದ ಬದಿಯಲ್ಲಿ ಒಂದಾದರೂ ಕಸಿ ಗುಲಾಬಿ ಗಿಡ ಇರಬೇಕೆಂದು ನನ್ನ ಹಂಬಲ. ಎಲ್ಲಾದರೂ ಹೊರಗಡೆ ಹೋಗುವಾಗ, ಕಾರ್ಯಕ್ರಮಗಳಿಗೆ ಹೋಗುತ್ತಿದ್ದರೆ ಜಡೆಗೊಂದು‌ ಹೂ ಮುಡಿಯುವ ಅಭ್ಯಾಸವಿರುವ ನನಗೆ  ಬಟನ್ ರೋಸ್  ಆಪ್ತ. ಊರ ಗುಲಾಬಿ ಗಿಡಗಳು ಇದ್ದರೂ ಅದರಲ್ಲಿರುವ ಹೂವುಗಳು ಒಂದು ದಿನ ಅಥವಾ ಎರಡು ದಿನ ಮುಡಿಯಲು ಯೋಗ್ಯ. ನಂತರ ಎಸಳು ಉದುರಿಸಿಕೊಳ್ಳುತ್ತವೆ.ಕಸಿ ಗುಲಾಬಿ ಹಾಗಲ್ಲ... ಐದಾರು ದಿನ ಎಸಳುಗಳು ಗಟ್ಟಿಯಾಗಿ ನಿಲ್ಲುತ್ತವೆ. ಹೀಗಾಗಿ ಕಸಿ ಗುಲಾಬಿಯ ಮೇಲೆ ಚೂರು ಹೆಚ್ಚು ವ್ಯಾಮೋಹ.



      ಕೇಸರಿ ಹಳದಿ ಮಿಶ್ರಿತ ಗುಲಾಬಿ ಹೂವಿನ ಗಿಡವೊಂದಿತ್ತು . ಆದರೆ ಅದು ಎರಡು ಮೂರು ವರ್ಷಗಳ ನಂತರ ಈಗ ಸತ್ತುಹೋಯಿತು.ಈಗ ಹೋಗಿ ತರೋಣವೆಂದರೆ ಕೋವಿಡ್'ನಿಂದಾಗಿ ಮನೆಯಿಂದ ಮಕ್ಕಳನ್ನು ಕರೆದುಕೊಂಡು ಪತಿಯೊಂದಿಗೆ ಹೊರಗೆ ಹೋಗಲು ಧೈರ್ಯ ಇಲ್ಲ.ಆದ್ದರಿಂದ ಜೂನ್ ತಿಂಗಳ ಆರಂಭವಾಗುತ್ತಿದ್ದಂತೆಯೇ "ನನಗೊಂದು ಕಸಿ ಗುಲಾಬಿ ಗಿಡ ತಂದುಕೊಡಿ" ಎಂದು ಪತಿಗೆ ಹೇಳಿದೆ.







     "ಹೂವಿನ ಹೂವಿನ ಗಿಡದ ಆಯ್ಕೆ ನನ್ನಿಂದಾಗದು. ಸೀರೆ ಆಯ್ಕೆಗೆ ,ಹೂವಿನ ಗಿಡದ ಆಯ್ಕೆಯ ಹೆಣ್ಣು ಮಕ್ಕಳೇ ಸರಿ. ನಮಗೆ ಅದರ ಬಣ್ಣ, ಎಸಳುಗಳ ಗಾತ್ರ, ಅದು-ಇದು ನನಗೆ ಗೊತ್ತೇ ಆಗುವುದಿಲ್ಲ..."ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಪತಿರಾಯರು. "ನಿಮಗೆ ಚಂದ ಕಂಡದ್ದನ್ನು ತನ್ನಿ.. ಸಾಕು ಈ ವರ್ಷ".ಎಂದು ಗಿಡ ತರುವ ಜವಾಬ್ದಾರಿಯನ್ನು ಅವರ ಹೆಗಲಿಗೇರಿಸಿಬಿಟ್ಟೆ. ನರ್ಸರಿಗೆ ಭೇಟಿ ಕೊಟ್ಟರು. ಅಲ್ಲಿ ಹೋದಾಗ ತಿಳಿಯಿತು ಬೆಂಗಳೂರು ಹಾಗೂ ಚೆನ್ನೈನಿಂದ ಪ್ರತಿವರ್ಷ ಮಳೆಗಾಲದ ಆರಂಭದಲ್ಲಿ ಬರುತ್ತಿದ್ದ ಗಿಡಗಳು ಲಾಕ್ ಡೌನ್ ನಿಂದಾಗಿ ಇನ್ನೂ ಬಂದಿಲ್ಲ.. ಎಂದು... "ಸರಿ "ಎಂದು ನಾನಲ್ಲೇ ಮರೆತುಬಿಟ್ಟಿದ್ದೆ.


      ನಿನ್ನೆ ಸಂಜೆ ಇದ್ದಕ್ಕಿದ್ದಂತೆಯೇ ಎರಡು ಗುಲಾಬಿ ಹೂವಿನ ಗಿಡಗಳನ್ನು ತಂದಿದ್ದರು..  ಒಂದಂತೂ ಬಹಳ ಅಪರೂಪದ ಬಣ್ಣ, ಇನ್ನೊಂದು ನನ್ನಿಷ್ಟದ ಬಣ್ಣ.. ನನಗಂತೂ ಬಹಳ ಹಿಡಿಸಿತು." ನನಗೆ ಆಯ್ಕೆಮಾಡಲು ತಿಳಿಯಲ್ಲ" ಎಂದು ಹೇಳುತ್ತಾ ಒಳ್ಳೆಯ ಸೆಲೆಕ್ಷನ್ ಮಾಡಿದ್ದಾರೆ.. ಗಿಡಗಳನ್ನು ಬಹಳ ಜೋಪಾನವಾಗಿ ನೆಡಲು ಸಹಕರಿಸಿದರು.


      ದೊಡ್ಡಗಾತ್ರದ ಗುಲಾಬಿ ಹೂವಿನಿಂದ  ಬಟನ್ ರೋಸ್ ಗಿಡಗಳ ಪೋಷಣೆ ಸುಲಭ.ಗಿಡದ ತುಂಬಾ ಚಿಗುರುಗಳು ಕಾಣಿಸಿಕೊಂಡು ಗೊಂಚಲಾಗಿ ಹೂಗಳನ್ನು ಕೊಡುತ್ತವೆ.ವರ್ಷವಿಡೀ ಹೂವಿನಿಂದ ಕಂಗೊಳಿಸುತ್ತವೆ.ಹೂಗಳ ಗಾತ್ರ ಸಣ್ಣದಾಗಿದ್ದರೂ ಆಕರ್ಷಕ ವಾಗಿರುತ್ತವೆ.ಮುಡಿದುಕೊಳ್ಳಲು ಹದಾ.


      ಅಂಗಳದ ಮುಂದೆ ಹೂವರಳಿದರೆ ಅತ್ತಿತ್ತ ಸಾಗುವಾಗ, ಗಿಡಗಳಿಗೆ ನೀರುಣಿಸುವಾಗ ನನ್ನ ಕಣ್ಣುಗಳು ಅದನ್ನೇ ಹಿಂಬಾಲಿಸುತ್ತವೆ. ಮನಸಿಗೂ ಆನಂದ.ಹೂವಿನ ಸೌಂದರ್ಯವನ್ನು ವೀಕ್ಷಿಸಲು ಅಂಗಳಕ್ಕೆ ದೃಷ್ಟಿ ಹಾಯಿಸುವುದೂ ಇದೆ.ಕಸಿ ಗುಲಾಬಿ ಪ್ರಿಯರಿಗೆ ನಾಟಿ ಮಾಡಲು ಬಟನ್ ರೋಸ್ ಒಳ್ಳೆಯ ಆಯ್ಕೆ.ನಮ್ಮ ಕರಾವಳಿಯ ವಾತಾವರಣಕ್ಕೆ ಸೂಕ್ತ.ತರತರದ ಹೂವಿನ ಗಿಡಗಳು ನರ್ಸರಿಗೆ ಬಂದಿವೆ. ಕೊಳ್ಳುವವರಿಗೆ ,ನೆಡುವವರಿಗೆ ಈ ಸಮಯ ಸೂಕ್ತವಾಗಿದೆ.



✍️... ಅನಿತಾ ಜಿ.ಕೆ.ಭಟ್.
17-06-2020.