ಸಂತು ಮೊಬೈಲನ್ನು ಒಮ್ಮೆ ನೋಡಿದ.ಗೆಳೆಯನ ಮುಖವನ್ನೊಮ್ಮೆ ದಿಟ್ಟಿಸಿದ.ರಮೇಶ ಆವನ ಇಂಗಿತವನ್ನರಿತು ಜೇಬಿನಿಂದ ಸಿಗರೇಟ್ ಪ್ಯಾಕೆಟ್ ತೆಗೆದು ಅವನತ್ತ ಚಾಚಿದ.. ಸಂತು ಒಂದನ್ನು ತೆಗೆದುಕೊಂಡು ಒಂದು ದಮ್ ಏರಿಸಿಯೇಬಿಟ್ಟ...
ಅಷ್ಟರಲ್ಲಿ ಪುನಃ ಗಮನ ಮೊಬೈಲ್ ಕಡೆಗೆ.. ಸಿಗ್ನಲ್ ಬಂದೇ ಬಿಟ್ಟಿತು..🛣️🚦🕛 🏍️ನಿಂತಿರುವಲ್ಲಿಂದ ಹೈವೇಯಲ್ಲಿ ಸಾಗಿ ಸಿಗ್ನಲ್ ಇರುವಲ್ಲಿಗೆ ರಾತ್ರಿ ಹನ್ನೆರಡು ಗಂಟೆಗೆ ಬೈಕಿನಲ್ಲಿ ಬಂದು ನಮ್ಮ ಜೊತೆಯಾಗಬೇಕು ಎಂದು ಆ ಸಿಂಬಲ್ ಅನ್ನು ಓದಿಕೊಂಡ ಸಂತು...
ರಮೇಶನನ್ನು ಹಿಂದೆ ಕೂರಿಸಿಕೊಂಡು ರೈನ್ ಕೋಟ್, ಹೆಲ್ಮೆಟ್ ಧರಿಸಿ ಹೊರಟರು.ಹೇಳಿದ ಜಾಗಕ್ಕೆ ಸರಿಯಾದ ಸಮಯಕ್ಕೆ ತಲುಪಿದರು.ಸ್ವಲ್ಪ ಹೊತ್ತಿನಲ್ಲಿ ಬೈಕೊಂದು ಪಕ್ಕದಲ್ಲಿ ಬಂದು ನಿಂತಿತು.ಪರಸ್ಪರ ಸಂಧಿಸಬೇಕೆಂದುಕೊಂಡವರು ನಾವೇ ಎಂದು ಖಚಿತಪಡಿಸಿಕೊಂಡರು.ಹ್ಯಾರಿಸ್ ಮತ್ತು ಸಲೀಂ ಬೈಕ್ ನಲ್ಲಿ ಮುಂದೆ ಸಾಗಿದರು.ಸಂತು ಮತ್ತು ರಮೇಶ್ ಹಿಂಬಾಲಿಸಿದರು..
ಅಮಾವಾಸ್ಯೆಯ ರಾತ್ರಿಯಲ್ಲಿ ಪಯಣವು ಸತ್ಯಾಪುರದತ್ತ ಸಾಗಿತು..ದಟ್ಟ ಕಾಡು..ಮಳೆಗಾಲ ಬೇರೆ.. ಸುತ್ತಲೂ ಜೀರುಂಡೆಗಳ ಝೇಂಕಾರ ,ಎತ್ತರ ತಗ್ಗು ಹೊಂಡ ಗುಂಡಿಯಿರುವ ಮಣ್ಣ ಮಾರ್ಗ..
ಎದುರಿನಿಂದ ಎರಡು ಹೊಳೆವ ವಸ್ತು ಕಂಡಿತು ಹ್ಯಾರಿಸ್ ಗೆ.. ಒಮ್ಮೆಲೇ ಬ್ರೇಕ್ ಒತ್ತಿದ.. ಅಬ್ಬಾ..!!ಎಂಬ ಉದ್ಗಾರದೊಂದಿಗೆ ಕೆಳಗೆ ಬೀಳುವಂತಾದ ಸಲೀಂ ಬ್ಯಾಲೆನ್ಸ್ ಮಾಡಿಕೊಂಡ..
ಎದುರಿನಿಂದ ಬೆಳಕು ಹತ್ತಿರ ಹತ್ತಿರ ಬಂದಂತೆ ಕಂಡಿತು.. ಹೆದರಿ ಹೋದರು..ಹಿಂದಿನಿಂದ ಬಂದ ಸಂತು ಕೂಡಾ ಅಲ್ಲಿಯೇ ಬೈಕ್ ನಿಲ್ಲಿಸಿದ.ಬೆಳಕುಮತ್ತಷ್ಟು ಪ್ರಖರವಾಯಿತು... ಬೈಕ್ ಮುಂದೆ ಚಲಾಯಿಸಲು ಧೈರ್ಯ ಬರಲಿಲ್ಲ..
ಸ್ವಲ್ಪ ಹೊತ್ತಿನಲ್ಲಿ ಬೆಳಕು ಕಾಣುವುದು ನಿಂತಿತು.ಆದರೆ ಹೆದರಿದ ಹ್ಯಾರಿಸ್, ಸಲೀಂ ಇಲ್ಲಿಯೇ ವ್ಯವಹಾರ ಮುಗಿಸಿ ಬಿಡೋಣ ಎಂದು ಸಂತು ಹಾಗೂ ರಮೇಶನಲ್ಲಿ ಹೇಳಿದರು..
ಬೈಕ್ ರಸ್ತೆ ಬದಿಯಲ್ಲಿ ನಿಲ್ಲಿಸಿ ಅಲ್ಲಿ ಹತ್ತಿರದಲ್ಲೇ ಇರುವ ಕಟ್ಟೆಯಲ್ಲಿ ಕುಳಿತುಕೊಂಡರು...ದೂರದಿಂದ ನರಿಗಳು ಕೂಗುವುದು ಕೇಳಿಬರುತ್ತಿತ್ತು..
ಸಿಗರೇಟ್ ದಮ್ ಎಳೆದುಕೊಂಡರು... ಹ್ಯಾರಿಸ್ ತಾನು ತಂದ ಗಾಂಜಾ ಪ್ಯಾಕೆಟ್ ತೆಗೆದನು.. ಸಂತು ಗೆ ರೇಟ್ ಹೇಳಿದ... ಅವನು ದುಡ್ಡು ಎಣಿಸುತ್ತಿದ್ದ.. ಅಷ್ಟರಲ್ಲಿ ಹಿಂದಿನಿಂದ ಟಕ್..ಟಕ್...ಟಕ್..ಶಬ್ದ ಬಲವಾಗಿ ಇವರತ್ತವೇ ನಡೆದು ಬರುತ್ತಿದ್ದಂತೆ ಭಾಸವಾಯಿತು.
ನಿರ್ಜನ ಪ್ರದೇಶ ವನ್ನು ಆಯ್ದುಕೊಂಡರೂ ಭಯ ಬೆನ್ನಟ್ಟಿ ಬಂದಿತ್ತು.. ಪೋಲೀಸರು ಇಲ್ಲಿ ಬರಲಾರರು ಎಂಬ ಧೈರ್ಯದಿಂದ ಇಲ್ಲಿ ಬಂದರೆ ಅದಕ್ಕಿಂತಲೂ ಭಯಾನಕವಾದ ಅನುಭವ...
ಸಂತು ಹಣ ಕೊಡಲು ಕೈ ಮುಂದೆ ಚಾಚಿದ್ದಾನೆ...ಕೈ ನಡುಗುತ್ತಿದೆ...ಟಕ್ ಟಕ್...ಶಬ್ದ ಜೋರಾಗುತ್ತಿದೆ... ಪೊಟ್ಟಣವನ್ನು ಪಡೆದುಕೊಂಡು ಓಡಿ ಹೋಗಬೇಕೆಂದುಕೊಂಡನು.. ಅಷ್ಟರಲ್ಲಿ ಬಂದೇ ಬಿಟ್ಟಿತು.. ಹಿಂದೆಯೇ... ನಿಂತಿದೆ...
"ನೋಡಿ ಮಕ್ಕಳಾ."..ಏರು ಧ್ವನಿಯಲ್ಲಿ ಕರೆದಂತೆ ಭಾಸವಾಯಿತು.. ಆಜಾನುಬಾಹು ಶರೀರ... ಕೈಲೊಂದು ಕೋಲು... ಮೈತುಂಬಾ ವಿಚಿತ್ರ ಅಲಂಕಾರ...ಈಗಲೇ ನುಂಗಿಬಿಡುವಂತೆ ಕಾಣಿಸುವ ನೋಟ..
ಹ್ಯಾರಿಸ್, ಸಲೀಂ ಥರ ಥರ ನಡುಗಿದರು.. ಸಂತು ,ರಮೇಶ್ ಭಯಭೀತರಾಗಿ ಕೈಮುಗಿದು ನಿಂತರು..
"ನೋಡಿ ಮಕ್ಕಳಾ... ಇದು ಸತ್ಯಾಪುರ..ಇಲ್ಲಿ ಕಳ್ಳಕೆಲಸ ಮಾಡುವಹಾಗಿಲ್ಲ...ಕೆಟ್ಟ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನ ಹಾಳುಮಾಡಿಕೊಳ್ಳಬೇಡಿ..."ಎನ್ನುತ್ತಾ ಒಂದು ತೀಕ್ಷ್ಣ ದೃಷ್ಟಿ ಹರಿಸಿ, ಹಿಂದಿರುಗಿ ಟಕ್ ಟಕ್ ಎಂಬ ಸದ್ದಿನೊಂದಿಗೆ ಗಂಭೀರವಾಗಿ ಹೆಜ್ಜೆಹಾಕಿತು..ಆ ಆಕೃತಿ..
ಅಬ್ಬಾ...!!!!!...ಬೆವತೇ ಹೋಗಿದ್ದರು..ಒಂದುಕ್ಷಣ ಉಸಿರೇ ನಿಂತಂತಾಗಿತ್ತು ...
ಆಕೃತಿ ಕಣ್ಮರೆಯಾಯಿತು.... ಸಂತು ಹಣ ಹ್ಯಾರಿಸ್ ಗೆ ನೀಡಿದ... ಹ್ಯಾರಿಸ್ ತಂದಿದ್ದ ಗಾಂಜಾ,ಇನ್ನಿತರ ಮಾದಕ ವಸ್ತುಗಳ ನ್ನು ಪಡೆದುಕೊಂಡು ಭದ್ರವಾಗಿ ತನ್ನ ಉಡುಪುಗಳ ಒಳಗಿರಿಸಿದ.... ರೈನ್ ಕೋಟ್ ಮತ್ತೆ ಮೊದಲಿನಂತೆ ಹಾಕಿಕೊಂಡ...
ಹೊರಡುವ ಆಲೋಚನೆ ಮಾಡಿದರು.. ಬೈಕ್ ಏರಿ ಸ್ಟಾರ್ಟ್ ಮಾಡಲು ತೊಡಗಿದರು.. ಸ್ಟಾರ್ಟ್ ಆಗುತ್ತಲೇ ಇಲ್ಲ..ಎರಡು ಬೈಕ್ ಕೂಡ...
ಒಂದು ಗಂಟೆ ಹೊತ್ತು ಪ್ರಯತ್ನಿಸಿದರೂ ಸ್ಟಾರ್ಟ್ ಆಗಲಿಲ್ಲ..ಕಟ್ಟೆಯತ್ತ ತೆರಳಿದರು ಪುನಃ....ಇದ್ದ ಒಂದು ಪ್ಯಾಕೆಟ್ ಬಿಸ್ಕಿಟ್ ತಿಂದು ನೀರು ಕುಡಿದು ಅಲ್ಲೇ ಗಲೀಜು ಮಾಡಿದರು..
ಪುನಃ ಟಕ್ ಟಕ್ ಶಬ್ದ ಜೋರಾಗಿ ಕೇಳಿ ಬಂತು..
"ಏನು ಮಕ್ಕಳೇ.. ನಾನು ಹೇಳಿದ್ದು ತಿಳೀಲಿಲ್ವೇ
...ಕಳ್ಳ ಕೆಲಸ ಮಾಡಿದ್ದಲ್ಲದೇ..ಈ ಸ್ಥಳದಲ್ಲಿ ಗಲೀಜು ಮಾಡುತ್ತಿದ್ದೀರಾ..."ಜೋರಾಗಿ ಗದರುತ್ತಾ...ಸಂತುವಿನ ಕೆನ್ನೆಗೆ "ಫಟಾರ್ "ಎಂದು ಒಂದೇಟು ಹೊಡೆದೇ ಬಿಟ್ಟಿತು...
ಕಣ್ಣುಕತ್ತಲೆ ಬಂದಂತಾಗಿ ಬಿದ್ದದ್ದಷ್ಟೇ ಗೊತ್ತು...
ಹ್ಯಾರಿಸ್ ,ಸಲೀಂ... ರಮೇಶ್ ಕಡೆ ತಿರುಗಿತು..."ಹೂಂ.. ಏನು ನೋಡ್ತಾ ನಿಂತಿದ್ದೀರಿ...ಮಾಡಬಾರದ್ದು ಮಾಡಿ.."ಎನ್ನುತ್ತಾ ಫಟಾರೆಂದು ಕೈ ಬೀಸಿಯೇ ಬಿಟ್ಟಿತು...
.
.
.
ಸಂತು.. ಮೆಲ್ಲಗೆ ಕಣ್ಣು ಬಿಡಲು ಪ್ರಯತ್ನಿಸಿದ..ಕಣ್ಣೊಡೆಯಲೂ ಕೂಡಾ ಭಯ.. ಮೆಲ್ಲನೆ ಪ್ಯಾಂಟ್ ಜೇಬು ತಡಕಾಡಿದ.. ಮೊಬೈಲ್ ತೆಗೆದುಕೊಂಡು ಸಮಯ ನೋಡಲು ಮೆಲ್ಲ ಕಣ್ಣಗಲಿಸಿದ...ಓಹೋ ಗಂಟೆ ಐದೂವರೆ... ಬೆಳಿಗ್ಗೆ ಆಯಿತು... ಇನ್ನು ತಡಮಾಡಿದರೆ ನಮ್ಮನ್ನು ಕಂಡು ಯಾರಿಗಾದರೂ ಅನುಮಾನ ಬಂದರೆ ಕಷ್ಟ.. ಎಂದುಕೊಂಡು ... ಹ್ಯಾರಿಸ್ ಸಲೀಂ ರಮೇಶನನ್ನು ತಟ್ಟಿ ಎಬ್ಬಿಸಿದ.. ಎಲ್ಲರಲ್ಲೂ ಭಯವೇ ಆವರಿಸಿತ್ತು...
ಮೆಲ್ಲಗೆ ಎದ್ದು ಹೊರಡಲು ತಯಾರಾದರು.ಬೈಕ್ ಸ್ಟಾರ್ಟ್ ಮಾಡಿ ನೋಡಿದರು.. ಸುಲಭದಲ್ಲಿ ಸ್ಟಾರ್ಟ್ ಆಯ್ತು...ನಿನ್ನೆ ರಾತ್ರಿ ಹಾಗಿದ್ದರೆ ನಮ್ಮ ಬೈಕಿಗೆ ಏನಾಗಿತ್ತು..? ಏಕೆ ಸ್ಟಾರ್ಟ್ ಆಗುತತ್ತಿರಲಿಲ್ಲ...?? ಪ್ರಶ್ನೆ ಗೆ ಭಯವೇ ಉತ್ತರವಾಗಿತ್ತು...
ಸತ್ಯಾಪುರದ ಗಡಿ ದಾಟುವ ಹೊತ್ತು..ಎದುರಿನಿಂದ ಪೋಲೀಸ್ ಜೀಪು ಬರುತ್ತಿತ್ತು... ಬೈಕನ್ನು ಕಂಡು ನಿಲ್ಲಿಸಲು ಹೇಳಿದರು..ಸಿಕ್ಕಿಹಾಕಿಕೊಳ್ಳುವ ಭಯದಿಂದ ಬೈಕ್ ನಿಲ್ಲಿಸದೆ ವೇಗವಾಗಿ ಚಲಾಯಿಸಿದರು...
ಪೋಲೀಸರಿಗೆ ಅನುಮಾನ ಬಂದು ಹತ್ತಿರದ ಎಲ್ಲ ಸ್ಟೇಷನ್ ಗೂ ಸುದ್ದಿ ರವಾನಿಸಿದರು...ಹಿಂದಿನಿಂದ ಬರುತ್ತಿದ್ದ ಮತ್ತೊಂದು ಪೋಲೀಸ್ ಜೀಪ್ ಇವರಿಗೆ ಸ್ಕೆಚ್ ಹಾಕಿತು.. ಸುಲಭದಲ್ಲಿ ಪೋಲೀಸರ ಕೈಗೆ ಸಿಕ್ಕಿಬಿದ್ದರು..
ನಾಲ್ವರಿಗೂ ಆ ಭಯಾನಕ ಆಕೃತಿಯ ನೆನಪಾಯಿತು... "ಮಕ್ಕಳೇ ಕೆಟ್ಟ ಕೆಲಸ ಮಾಡಬೇಡಿ" ಎಂದು ಹೇಳಿದ್ದು ನೆನಪಾಯಿತು...ಹಿತನುಡಿಯ ಕೇಳದೆ ಈಗ ಪೋಲೀಸರ ಅತಿಥಿಯಾಗಬೇಕಾಗಿ ಬಂತು.. ಎಂದು ಮರುಗಿದರು..
ಸತ್ಯಾಪುರದಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಸತ್ಯದೈವವೇ ಹೋರಾಡಿ ಕೈಗೆ ಕೋಳ ತೊಡಿಸಿತು..ಎಂಬ ಸುದ್ದಿ ಊರೆಲ್ಲಾ ಹಬ್ಬಿತು..ಸತ್ಯಾಪುರದ ಸತ್ಯದೈವದ ಮಹಿಮೆ ಮನೆಮಾತಾಯಿತು...ಕೆಟ್ಟ ಕೆಲಸ ಮಾಡಿದರೆ ಸತ್ಯದೈವಕ್ಕೆ ಹರಕೆ ಹೇಳುತ್ತೇನೆ ಎಂದು ಹೇಳಿ ಹೆದರಿಸುವ ಪರಿಪಾಠ ಸತ್ಯಾಪುರದಲ್ಲಿ ಮುಂದುವರಿದಿದೆ..
#ಧೂಮಪಾನ ಆರೋಗ್ಯಕ್ಕೆ ಹಾನಿಕರ.
#ಮಾದಕದ್ರವ್ಯ ವಹಿವಾಟು ಕಾನೂನುಬಾಹಿರ.
🙏
✍️... ಅನಿತಾ ಜಿ.ಕೆ.ಭಟ್.
14-12-2019.
ಕಥೆ ಚೆನ್ನಾಗಿದೆ
ReplyDeleteಧನ್ಯವಾದಗಳು 💐🙏
ReplyDelete