Monday, 30 August 2021

ಶ್ರೀ ಕೃಷ್ಣ

 


#ಶ್ರೀ ಕೃಷ್ಣ

ನೀಲವರ್ಣ ಚಂದಿರವದನ
ಕೊಳಲನೂದುವ ಶ್ರೀಕೃಷ್ಣ
ಗೊಲ್ಲಕುಮಾರ ಮೆಲ್ಲುವ ಬೆಣ್ಣೆಯ
ಬಲ್ಲಿದನಿವ ಚೆಲು ಶ್ರೀಕೃಷ್ಣ||೧||

ಕಸ್ತೂರಿ ತಿಲಕ ನೆತ್ತಿಲಿ ಗರಿಯು
ಎತ್ತಿದ ಗೋವರ್ಧನ ಗಿರಿಯ
ಸುತ್ತುತ ಗೋಪಿಕೆಯರ ಸಂಗದಿ
ಇತ್ತಿಹ ಪರಿಶುದ್ಧ ಪ್ರೇಮದಯಾ||೨||

ಗೀತೆಯ ಸಾರವ ಪಾರ್ಥಗೆ ಅರುಹಿದ
ಅಚ್ಯುತ ಮುಕುಂದ ಕೇಶವ
ಭೀತಿಯ ಕಳೆದು ಭಕುತರ ಸಲಹುವ
ಶ್ಯಾಮ ಮುರಾರಿ ಮಾಧವ||೩||

ಬಡಕುಚೇಲನ ಸ್ನೇಹಕೆ ಒಲಿದಿಹ
ಕುಂಜವಿಹಾರಿ ಜನಾರ್ದನ
ಧರ್ಮದ ರಕ್ಷೆಗೆ ಓಗೊಡುತಿರುವ
ವಾಸುದೇವ ದೇವಕೀನಂದನ||೪||

✍️... ಅನಿತಾ ಜಿ.ಕೆ.ಭಟ್.
30-08-2021.ಯೂಟ್ಯೂಬ್'ನಲ್ಲಿ ಕೇಳಲು ಕೆಳಗಿನ ಲಿಂಕ್ ಬಳಸಿ..

https://youtu.be/7C3y7M1NkHc

Saturday, 28 August 2021

ಆಸರೆ

 


     "ಆಸರೆ" ಇದು ಕಾಲ್ಪನಿಕ ಕಥೆ. ಯಾರ ಜೀವನಕ್ಕಾದರೂ ಹೋಲಿಕೆಯಾಗುತ್ತಿದ್ದರೆ ಅದು ಕಾಕತಾಳೀಯ ಮಾತ್ರ.

🌴 ಆಸರೆ🌴
""""""""""""""""""
      ಅಂದು ಕೃಷ್ಣ ರಾಯರಿಗೂ ರಾಧಮ್ಮನಿಗೂ ಸಂತಸದ ದಿನ. ಬೇಸಗೆ ರಜೆಗೆಂದು ಮಗ ಸೊಸೆ ಮೊಮ್ಮಕ್ಕಳು ಊರಿಗೆ ಬಂದಿದ್ದಾರೆ. ಹಳ್ಳಿಯ ಸೊಗಡಿನ ಅಡುಗೆ ತಯಾರಿಯ ಸಂಭ್ರಮವೋ ಸಂಭ್ರಮ. ಹಲಸಿನ ಹಣ್ಣು, ಮಾವಿನ ಹಣ್ಣು ತಿಂದು ಖುಷಿಪಟ್ಟ ಮೊಮ್ಮಕ್ಕಳು ನಾವು ರಜೆಯಿಡೀ ಇಲ್ಲೇ ಕಳೆಯುವುದಾಗಿ ಹೇಳಿದರು.

       ರಾಯರು ಮಗ ಮತ್ತು ಮೊಮ್ಮಕ್ಕಳೊಡನೆ ತೋಟದತ್ತ ಸಂಜೆ ತೆರಳಿದರು. ಮೊಮ್ಮಕ್ಕಳು ಅಲ್ಲೇ ಕಂಡ ಮಾವಿನ ಹಣ್ಣುಗಳನ್ನು ಹೆಕ್ಕಲು, ಮರಕ್ಕೆ ಕಲ್ಲುಹೊಡೆಯಲು ಶುರುಮಾಡಿದರು. ತಂದೆ, ಮಗ ಇಬ್ಬರೂ ತೋಟದಲ್ಲಿ ಮಾತನಾಡುತ್ತಾ ಕುಳಿತರು.

"ನೋಡು ಮಗಾ.. ಕಳೆದ ಮುಂಗಾರಿಗೆ ಈ ಭಾಗಕ್ಕೆ ಸಿಡಿಲು ಬಡಿದು ಹಲವು ಅಡಿಕೆ ತೆಂಗು ಮರಗಳು ಸತ್ತವು. ಮತ್ತೆ ಕೆಲವು ಗಾಳಿಯ ಅಬ್ಬರಕ್ಕೆ ಮುರಿದವು. ಫಸಲು ಚೆನ್ನಾಗಿ ಬಂದರೂ ತೆಂಗಿಗೆ ಮಂಗನ ಉಪದ್ರ ವಿಪರೀತ. ಮನೆ ಖರ್ಚಿಗೆ, ಗಾಣದಲ್ಲಿ ಎಣ್ಣೆ ತೆಗೆಯುವಷ್ಟು ತೆಂಗಿನಕಾಯಿಯನ್ನು ಮಂಗಗಳು ಉಳಿಸುವುದೇ ನಮ್ಮ ಭಾಗ್ಯ. ಇನ್ನು ಕಾಡುಹಂದಿ, ನವಿಲುಗಳು ಭತ್ತದ ಗದ್ದೆಗೆ ದಾಳಿಯಿಟ್ಟರೆ ನಮಗೆ ಸಿಗುವುದು ಚೂರುಪಾರು ಅಷ್ಟೇ. ವೈಭವದ ಕೃಷಿಯ ಕಥೆ. ಇಂದಿನ ವ್ಯಥೆ" ಎಂದು ಅಳಲು ತೋಡಿಕೊಂಡರು.

"ಅಪ್ಪಾ... ಅದಕೆಲ್ಲ ತಲೆಕೆಡಿಸಿಕೊಳ್ಳುವುದರ  ಬದಲು ಈ ಭೂಮಿಯನ್ನು ಮಾರೋಣ. ಕೋಟಿಗಟ್ಟಲೆ ದುಡ್ಡು ಬರುತ್ತದೆ. ಆ ದುಡ್ಡಲ್ಲಿ ನಗರದಲ್ಲಿ ನಾಲ್ಕಾರು ಮನೆ ಕಟ್ಟಿ ಬಾಡಿಗೆಗೆ ಕೊಡೋಣ. ನೀವು ನನ್ನ ಜೊತೆ ಬೆಂಗಳೂರಿಗೆ ಬಂದುಬಿಡಿ.
ಕೃಷಿಯಲ್ಲಿ ಎಷ್ಟು ದಿನ ಒದ್ದಾಡುವುದು ಸುಮ್ಮನೆ" ಎಂದು ಸುಧೀರ್ ತಂದೆಗೆ ಹೇಳಿದ.

       ರಾಯರು ಸಮ್ಮತಿಸಲಿಲ್ಲ. ಹಿರಿಯರಿಂದ ಬಳುವಳಿಯಾಗಿ ಬಂದ ಭೂಮಿಯನ್ನು ಮಾರುವುದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ.

     ಕೆಲವು ವರ್ಷಗಳ ನಂತರ ಸುಧೀರ್ ಕೆಲಸ ಮಾಡುತ್ತಿದ್ದ ಕಂಪೆನಿ ಆರ್ಥಿಕ ಕುಸಿತದಿಂದಾಗಿ ನೆಲಕಚ್ಚಿತು. ಕೆಲಸ ಕಳೆದುಕೊಂಡನು. ಬೇರೆ ಕಡೆ ಪ್ರಯತ್ನಿಸಿದನು. ಆರು ತಿಂಗಳಿನಿಂದ ಎಷ್ಟೇ ಪ್ರಯತ್ನಪಟ್ಟರೂ ಬೇರೆ ಉದ್ಯೋಗ ದೊರಕಲಿಲ್ಲ. ಕಂಗೆಟ್ಟುಹೋಯಿತು. ಬದುಕಿನ ಮುಂದಿನ ದಾರಿ ಯೋಚಿಸಬೇಕಾಯಿತು.
ಮನೆ ಸಾಲದ ಕಂತು ಕಟ್ಟಲಾಗದೆ ಬೆಟ್ಟದಂತೆ ಬೆಳೆಯಿತು. ನಿರ್ವಾಹವಿಲ್ಲದೆ ತಂದೆಗೆ ವಿಷಯ ತಿಳಿಸಿದ ಸುಧೀರ್.

"ಏನೂ ಚಿಂತಿಸಬೇಡ. ನಮ್ಮ ಹಿರಿಯರ ಭೂಮಿಯಿದೆ ನಮ್ಮನ್ನು ಪೊರೆಯಲು. ಇನ್ನು ಆ ಕಂಪೆನಿ ಈ ಕಂಪೆನಿ ಎಂದು ವಿದೇಶೀಯ ಕಂಪೆನಿಗಳ ಮುಂದೆ ಕೈ ಚಾಚಬೇಡ. ನಮ್ಮದೇ ಭೂಮಿಯಲ್ಲಿ ದುಡಿದು ಸುತ್ತಮುತ್ತಲಿನ ನಾಲ್ಕಾರು ಕುಟುಂಬಗಳಿಗೆ ಕೆಲಸ ಕೊಟ್ಟು ಸ್ವಂತ ಕಾಲ ಮೇಲೆ ನಿಲ್ಲುವಿಯಂತೆ. ಆದಷ್ಟು ಬೇಗ ಬಾ" ಎಂದು ಕೃಷ್ಣ ರಾಯರು ಮಗನಿಗೆ ಹೇಳಿದರು.

         ಸುಧೀರ್ ಗೆ ತಂದೆಯ ನುಡಿ ಹಿತವೆನಿಸಿತು. ಭರವಸೆಯನ್ನು ಮೂಡಿಸಿತು. ಬೆಂಗಳೂರಿನಲ್ಲಿದ್ದ ಮನೆಯನ್ನು ಖಾಲಿ ಮಾಡಿ ಬಾಡಿಗೆಗೆ ಕೊಟ್ಟು ತನ್ನೂರಿನತ್ತ ಪ್ರಯಾಣ ಬೆಳೆಸಿದರು. ಸಿಕ್ಕ ಬಾಡಿಗೆಯಲ್ಲಿ ಸಾಲದ ಕಂತು ಕಟ್ಟಿ ತನ್ನ ಜಮೀನಿನಲ್ಲಿ ಶ್ರಮವಹಿಸಿ ದುಡಿಯುತ್ತಿದ್ದಾನೆ ಸುಧೀ.

      ತಂತ್ರಜ್ಞಾನ ವನ್ನು ಕೃಷಿಯಲ್ಲಿ ಬಳಸಿಕೊಂಡು ತನ್ನ ಭೂಮಿಯ ಫಸಲಿಗೆ ತಾನೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದ್ದಾನೆ. ಅಲ್ಲದೆ ಸುತ್ತಲಿನ ಹಳ್ಳಿಯ ರೈತರಿಗೆ ಮಾರುಕಟ್ಟೆಯ ತಂತ್ರಜ್ಞಾನ, ಯಾವ ಸಮಯಕ್ಕೆ ಯಾವ ಬೆಳೆ ಹೇಗೆ ಬೆಳೆಯಬಹುದು ಎಂಬ ಮಾಹಿತಿಯನ್ನು ಕೂಡ ಕೊಡುತ್ತಿದ್ದಾನೆ. ಹಲವಾರು ಕೃಷಿ ತಜ್ಞರನ್ನು ತನ್ನೂರಿಗೆ ಕರೆಸಿಕೊಂಡು ರೈತರ ಜೊತೆ ಕೃಷಿ ಸಂವಾದ ಏರ್ಪಡಿಸುತ್ತಿದ್ದಾನೆ.

      ಒಂದು ದಿನ ತೋಟದಲ್ಲಿ ಅಡ್ಡಾಡುತ್ತಿದ್ದಾಗ ರಾಯರು ಮಗನನ್ನು ಅಲ್ಲೇ ಬಂಡೆಯ ಮೇಲೆ ಕೂರಿಸಿಕೊಂಡು ಹೇಳಿದರು "ನೀನು ಎಲ್ಲಿ ಬೆಂಗಳೂರಿನಲ್ಲಿ ನೆಲೆಯಾಗಿ ಬಿಡುತ್ತೀಯೋ... ಭೂಮಿ ತಾಯಿಯನ್ನು ಚಿಲ್ಲರೆ ಕಾಸಿಗೆ ಮಾರಿಬಿಡುತ್ತೀಯೋ ಎಂಬ ಆತಂಕ ನನಗಿತ್ತು. ಪಟ್ಟಣದ ಬದುಕು ಪಾಠ ಕಲಿಸಿತು. ಮತ್ತೆ ಹಿರಿಯರ ಹಸಿರ ಸಿರಿಯನ್ನು ಬೆಳಗಿಸುತ್ತಿದ್ದೀಯ. ನನಗೀಗ ಬಲು ಸಂತೃಪ್ತಿ ಆಗಿದೆ. ಇದೇ... ಇದೇ... ಭೂಮಿ ನಮಗೆ ಕಷ್ಟದಲ್ಲಿ ಆಶ್ರಯ ಕೊಟ್ಟದ್ದು.. ತುತ್ತು ಅನ್ನ ಕೊಟ್ಟದ್ದು... ಮರೆಯಬೇಡ.." ಎಂದಾಗ ಇಬ್ಬರ ಕಣ್ಣಿಂದಲೂ ನೀರ ಹನಿ ಭೂಮಿತಾಯಿಯ ಒಡಲಿಗೆ ಉದುರಿತು.

✍️... ಅನಿತಾ ಜಿ.ಕೆ.ಭಟ್.
24-12-2019.

ವೇದಿಕೆ: ಕಥಾ ಕವನಗಳ ಸಂಕಲನ
ದತ್ತಸಾಲು: ಅಪ್ಪ ಮಗ ಇಬ್ಬರೂ ತೋಟದಲ್ಲಿ ಕುಳಿತು ಮಾತನಾಡುತ್ತಿದ್ದಾರೆ.

Thursday, 19 August 2021

ಲಕ್ಷ್ಮಿಯೇ ಬಾರಮ್ಮಾ


#ಲಕ್ಷ್ಮಿಯೇ ಬಾರಮ್ಮಾ

ನೊಸಲಲಿ ಸಿಂಧೂರ ಶೋಭಿತೆ
ನೂಪುರಧಾರಿಣಿ ಲಕ್ಷ್ಮಿಯೇ ಬಾರಮ್ಮಾ
ನಸುನಗೆ ಚೆಲ್ಲುತ ಮನವನು ಮುದದಿ
ಬೆಳಗುವ ಮಂಗಳೆ ನೀನಮ್ಮಾ||೧||

ವಾರಿಧಿಮಥನದಿ ನಾಟ್ಯವನಾಡುತ
ನಾರಿಯ ರೂಪದಿ ಬಂದವಳೇ
ಹರಿಯ ಭಾಮಿನಿ ತ್ರಿಲೋಕಜನನಿ
ಸಿರಿವರಗಳನು ಕೊಡುವವಳೇ||೨||

ಮಿಂದುಮಡಿಯಲಿ ಚಂದದಿ ಭಜಿಸಲು
ಬಂದು ನೀನು ನೆಲೆಸಮ್ಮಾ
ಮಂದಮತಿಯ ಕುಂದುಗಳನು ಮನ್ನಿಸಿ    ಎಂದೆಂದೂ  ಹರಸಮ್ಮಾ||೩||

ವೆಂಕಟರಮಣಿ ಹಿರಣ್ಮಯಿ ರೂಪಿಣಿ
ಕನಕರತ್ನ ಮಣಿ ಮಾಲೆಯಲಿ
ಸಂಕಟಹಾರಿಣಿ ಕಿರೀಟಧಾರಿಣಿ
ಪೂಜಿಸುವೆನು ತನ್ಮಯ ನೋಟದಲಿ||೪||

ದೀಪವ ಬೆಳಗಿಸಿ ಸುಮಗಳನರ್ಪಿಸಿ
ಜಪಿಸುವೆ ನಿನ್ನಯ ನಾಮವನು
ತಾಪವನಳಿಸಿ ಕಷ್ಟಕೋಟಿಯಕರಗಿಸೆ
ಈ ಪರಿ ಬೇಡುವೆನು||೫||

✍️... ಅನಿತಾ ಜಿ.ಕೆ.ಭಟ್.

ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. 💐 ಲಕ್ಷ್ಮೀದೇವಿಯು ಸಕಲ ಸೌಭಾಗ್ಯಗಳನ್ನು ನೀಡಿ ಸನ್ಮಂಗಲವನ್ನುಂಟುಮಾಡಲಿ..🙏



Sunday, 15 August 2021

ಸೋಜಿಗದ ನೇಸರ





#ಸೋಜಿಗದ ನೇಸರ

ಕತ್ತಲೆ ಮುಸುಕನು
ಜಾರಿಸಿ ಮೆಲ್ಲನೆ
ರವಿಯು ಇಣುಕಿಹನು||
ಹಕ್ಕಿಯ ಚಿಲಿಪಿಲಿ
ಗಾಯನ ಕೇಳಿ
ಹೊಂಗಿರಣವ ಸೂಸಿಹನು||೧||

ಎಲೆಗಳ ಇಬ್ಬನಿ
ಸರ್ರನೆ ಕರಗಲು
ಎಂಥಾ ಸೋಜಿಗವು||
ಮೊಗ್ಗುಗಳೆಲ್ಲ
ಅವನೆಡೆ ದಿಟ್ಟಿಸಿ
ಅರಳುತ ನಲಿದಿಹವು||೨||

ಬೆಳಗಿನ ಕಿರಣದಿ
ಮೈಯನು ಒಡ್ಡಲು
ತುಂಬುವ ಡಿ ಜೀವಸತ್ವ||
ಜಗವನು ಬೆಳಗುವ
ಭಾನು ಪ್ರಕಾಶಕೆ
ಎಲ್ಲರೊಂದೇ ಎಂಬ ತತ್ವ||೩||

ಗುಡುಗಿನ ಸದ್ದಿಗೂ
ಮಿಂಚಿನ ಥಳುಕಿಗೂ
ಅಂಜದೆ ನಿಂತಿಹ ಸೂರ್ಯ||
ರಜೆಯನು ಬಯಸದೆ
ನೆಪವನು ಹೇಳದೆ
ಮಾಡುವ ನಿತ್ಯವೂ ಕಾರ್ಯ||೪||

✍️... ಅನಿತಾ ಜಿ.ಕೆ.ಭಟ್.

#momspressoshortstories

#momspresso kannada ದ ಶಿಶುಗೀತೆ ರಚನಾ ಸವಾಲಿಗಾಗಿ ರಚಿಸಿದ ಹಾಡು.

#ಶಿಶುಗೀತೆ #ಮಕ್ಕಳಸಾಹಿತ್ಯ #ಅಭಿನಯಗೀತೆ




Friday, 13 August 2021

ನಾಗರಪಂಚಮಿ ಹಬ್ಬ

 


#ನಾಗರಪಂಚಮಿ ಹಬ್ಬ

ಬಂದಿದೆ ಈ ದಿನ ಪಂಚಮಿಹಬ್ಬ
ಎಲ್ಲರೂ ಒಂದುಗೂಡೋಣ
ನಾಗದೇವನಿಗೆ ಭಕ್ತಿಲಿ ನಮಿಸಿ
ಹಾಲಭಿಷೇಕವ ಮಾಡೋಣ||೧||

ಕ್ಷೀರವು ಬಿಂದಿಗೆ ಎಳನೀರಿರಲಿ
ಕೇದಿಗೆ ಸಂಪಿಗೆ ಸಿಂಗಾರ ಪುಷ್ಪಗಳು
ಅರಸಿನ ಗಂಧ ಹಣ್ಣುಕಾಯಿ
ದೀಪ ಧೂಪ ಮಂಗಳವಾದ್ಯಗಳು||೨||

ಅರಸಿನೆಲೆ ಕಡುಬು ತಂಬಿಟ್ಟುಂಡೆ
ವಿಧವಿಧ ನೈವೇದ್ಯ ವಾಸುಕಿಗೆ
ಅರಿಯದ ತಪ್ಪನು ಮನ್ನಿಸೆ ಬೇಡುವ
ಒಡೆಯನು ನಾಗನು ಈ ಧರೆಗೆ||೩||

ಶ್ರಾವಣ ಶುಕ್ಲ ಪಂಚಮಿ ದಿನದಲಿ
ನಾಡಿಗೆ ಉಲ್ಲಾಸ ಸಡಗರವು
ಮಿಂದು ಮಡಿಯಲಿ ಸಕಲಭಾಗ್ಯವ
ಬೇಡಲು ಪೂರ್ಣ ಅನುಗ್ರಹವು||೪||

ಪಿತನನು ಕೊಂದ ನಾಗನಕುಲವ
ನಾಶಗೈಯುವೆನೆಂಬ ಶಪಥದಲಿ
ಯಜ್ಞದಿ ನಿರತ ರಾಜನ ಕಂಡು
ಋಷಿಯದೋ ಮಣಿಸಿದ ಕುಶಲದಲಿ||೫||

ಯಜ್ಞವು ನಿಂತಿಹ ಪುಣ್ಯದ ದಿನವದು
ಒಡಹುಟ್ಟು ಬಾಂಧವ್ಯದ ದ್ಯೋತಕವು
ತವರಿನ ಕುಲವದು ಬೆಳಗುತಲಿರಲು
ಅಣ್ಣತಂಗಿಯ ಪೂಜೆಯ ಸತ್ಫಲವು||೬||

ಆಭರಣವು ಹರನಿಗೆ ಶಯನಕೆ ಹರಿಗೆ
ಒದಗಿದ ಶೇಷಗೆ ಕರಮುಗಿದು
ಸೊಬಗಿನ ಹಚ್ಚ ಹಸುರಿನ ಬನದಲಿ
ಧನ್ಯರಾಗುವ ತನಿಯೆರೆದು||೭||

✍️... ಅನಿತಾ ಜಿ.ಕೆ.ಭಟ್.
13-08-2021. ಚಿತ್ರ ಕೃಪೆ: ಅಂತರ್ಜಾಲ.




Thursday, 12 August 2021

ಬಾಗುತಿರು ಹಿರಿಯರಿಗೆ

 




#ಬಾಗುತಿರು ಹಿರಿಯರಿಗೆ

ಹಿತವ ಬಯಸುವರಾರು ಹೊಸಕಿಹಾಕುವರಾರು
ಅರಿಯದೆ ಹೋದೆಯಾ ಮೂಢನಾಗಿ
ಒಳಿತು ಬಯಸುವ ಹೃದಯ ಸನಿಹವಿರುತಿರಲು
ಬಾಗುತಿರು ಹಿರಿಯರಿಗೆ ವಿಧೇಯನಾಗಿ||೧||

ಅಹಮಿಕೆಯ ಕೋಟೆಯೊಳು ತಾನೆಂದು
ಬೀಗದಿರು ಹಸನಾಗೆ ಬೆವರಿಳಿಸಿದವರ ಮರೆತು
ನಿನ್ನ ಪದವಿಯಲವರ ವರುಷಗಳ ಕನಸಿಹುದು
ತ್ಯಾಗವದು ಎಳೆಯರಿಗೆ ಬಾಳಿದರ ಅರಿತು||೨||

ಮುಂದಿರುವ ಗುರಿಗಿಂದು ಗುರುವಾಗಿ ನಿಂದಿಹರು
ಬಾರದೆಲೆ ಕಷ್ಟಗಳು ಸರಮಾಲೆಯಂತೆ
ಬಾಳಮುಸ್ಸಂಜೆಯಲಿ ತುಸುಪ್ರೀತಿಯನು ತೋರು
ಹರಸುವರು ಮನದುಂಬಿ ಮಗುವಿನಂತೆ||೩||

ಬಿಂಕಬಿಗುಮಾನಬಿಡು ಬಿಗಿಗೊಳಿಸು ಬಂಧವನು
ಜನನಿಜನಕರ ಸೇವೆ ಪುಣ್ಯತಮವು
ಶಂಕರನು ಮೆಚ್ಚುವನು ಶರಣೆಂಬ ಚರಣವನು
ಮನೆಯೆ ಮಂದಿರವಾಗಿ ಸಕಲಗೆಲುವು||೪||

✍️... ಅನಿತಾ ಜಿ.ಕೆ.ಭಟ್.
19-07-2021.


ಕಲೆಯ ತಾಣ

 


ಕಲೆಯ ತಾಣ

ಕವಿಮನಸ ಗೆದ್ದಿರುವ ಬಳಗವಿದುಕಾಣಿ
ಸವಿಗಾನದಿಂಚರವು ಕೇಳುತಿಹುದಿಲ್ಲಿ||ಪ||
ಅಕ್ಕಂದಿರಣ್ಣಂದಿರು ಹಿರಿಕಿರಿಯರೊಡಗೂಡಿ
ಭಜಿಸುತಿರೆ ಸುರಲೋಕ ಬಂದಿಳಿವುದಿಲ್ಲಿ||ಅ.ಪ.||

ಚಿಗುರೊಡೆದ ಬಾಲಪ್ರತಿಭೆಗಳ ಪೋಷಿಸಿ
ಹರಸಿ ಹಾರೈಸುವರು ತುಂಬುಮನದಿ
ಹಲವು ಕಲೆಗಳು ಮಿನುಗುತಿರೆ ಮೇಳೈಸಿ
ನಲಿಯುತಿದೆ ಮನವು ಮುದದಿ||೧||

ಮನೆಯೆಂಬ ಸೆರೆಮನೆಲಿ ನರಳುತಿಹ ಮೆಲ್ಲುಸಿರು
ಅರಳುತಿದೆ ಪ್ರೇರಣೆಯ ಬೆಳಕಿನಲ್ಲಿ
ಎಂದೋ ಕಾಡಿದ ಭಾವ ಮುಸುಕಮರೆಯನು ತೊರೆದು
ಮೆರೆಯುತಿದೆ ಅಭಿಮಾನದ ಹೊಳಹಿನಲ್ಲಿ||೨||

ಹಾಡಹಾರವ ಮಾಡಿ ವಾದ್ಯನಾದವಗೈದು
ಅರ್ಚಿಸುವ ಸರಸ್ವತೀ ಸನ್ನಿಧಾನ
ಮೆಚ್ಚಿಬರುತಿಹ ಜನರ ಕರೆದು ಬಾಗಿಲಿನೊಳಗೆ
ಸಂತಸವಬಡಿಸುವ ಕಲೆಯತಾಣ||೩||

ಸೇವೆಯಲಿ ಸಂತೃಪ್ತಿಪಡುತಿರುವ ಗಡಣದ
ಸಾರಥ್ಯವಿಹುದು ತೆರೆಮರೆಯಲಿ
ದೇಶಭಾಷೆಯ ಗಡಿಮೀರಿ ಅನುದಿನವು ಸಂಗೀತದಾಲಾಪದ ತೊರೆಹರಿಯಲಿ||೪||

✍️.. ಅನಿತಾ ಜಿ.ಕೆ.ಭಟ್.

#ಕಲಾಚಾವಡಿಯ ಮೊದಲ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ಬರೆದ ಹಾಡು.

ವಿಶ್ವಮಾನ್ಯೆ ಭಾರತಿ

 


ಹಬ್ಬವಾಗಲಿ... ನಿತ್ಯ ಹಬ್ಬವಾಗಲಿ...
ತಾಯ್ನೆಲದ ವಿಜಯಘಮಲು ಹಬ್ಬಿಹರಡಲಿ||ಪ||
ಜ್ಯೇಷ್ಠವೆನಿಸಲಿ... ಬಲಿಷ್ಠವೆನಿಸಲಿ...
ಭಾರತಿಯ ವೀರಕುಲವು ಅನಂತವಾಗಲಿ||ಅ.ಪ||

ಭವ್ಯ ಇತಿಹಾಸವಿರುವ ನಮ್ಮ ನೆಲದ ಸಂಸ್ಕೃತಿ
ಜಗದಗಲಕೂ ಶ್ರೇಷ್ಠವೆನಿಪ ಅಸಂಖ್ಯ ಮೇರುಕೃತಿ
ಬೇಡಿಬಂದರಾಶ್ರಯ ಸಕಲಹಿತಸದಾಶಯ
ವಿಶ್ವಮಾನ್ಯೆ ಅಗ್ರಗಣ್ಯೆ ನಮ್ಮ ಮಾತೆ ಭಾರತಿ||೧||

ಹಸಿರನುಟ್ಟ ಮಂಗಳೆ ಕೆಣಕಿದರೆ ಭದ್ರಕಾಳಿ
ದಾಸ್ಯ ಕಳಚಿ ಅರಳಿಹಳು ಬಾನೆತ್ತರಕೆ
ಸಕಲಸಾಧುಸಂತರ ಪಾಮರರಮಹಿಮರ
ಹಿರಿಮೆಯಿದೆ ತ್ಯಾಗವಿದೆ ದಿಗ್ದರ್ಶನಕೆ||೨||

ದೇಶದೊಳಗೆ ದ್ವೇಷರೋಷ ನಾಶವಾಗಲಿ
ಜನತೆಯಲ್ಲಿ ಸಮತೆಭಾವ ಬಿತ್ತಿ ಬೆಳೆಯಲಿ
ಉಕ್ಕಿಹರಿವ ನದಿಗಳಂತೆ ಶಾಂತಿಪ್ರೀತಿ ಮೊರೆಯಲಿ
ಸಹಬಾಳ್ವೆಯ ಐಕ್ಯಪಥವು ಹಿಗ್ಗಿನಲಿಯಲಿ||೩||

✍️... ಅನಿತಾ ಜಿ.ಕೆ.ಭಟ್.

Friday, 6 August 2021

ಮುದ್ದಣನಿಗಾಗಿ ಕಾದ ಮನೋರಮೆ

     


     ಒಂದೇ ಸಮನೆ ಅಂಬಾ ಎನ್ನುತ್ತಿರುವ ಕರುವಿಗೆ ಒಂದು ಹಿಡಿ ಬೈಹುಲ್ಲನ್ನು ಹಾಕಿ ಬೆನ್ನು ನೇವರಿಸಿ,"ಇರು... ಗೌರಿ.. ಸ್ವಲ್ಪ ಮಳೆ ಕಡಿಮೆಯಾಗಲಿ. ಮತ್ತೆ ಹಸಿ ಹುಲ್ಲು ತಂದು ಹಾಕುತ್ತೇನೆ. ಈಗ ಇದನ್ನು ತಿಂದು ಸಮಾಧಾನದಿಂದ ಮಲಗಿಕೋ.." ಎನ್ನುತ್ತಾ ದನದ ಕೊಟ್ಟಿಗೆಯಿಂದ ಹೊರಗಡೆ ಬರುವಾಗಲೇ ಕರು ಬೈಹುಲ್ಲನ್ನು ಮೂತಿಯಿಂದ  ಕೆಳಗೆ ತಳ್ಳಿತ್ತು."ನೀನು ಹೀಗೇ ಏಕೆ ಹಠ ಮಾಡುತ್ತಿ..ನಂಗೂ ಈ ಮಳೆಗೆ ಹುಲ್ಲು ತರುವುದೆಷ್ಟು ಕಷ್ಟ..ನಿಂಗೇನು ಗೊತ್ತು.." ಎನ್ನುತ್ತಾ ಅಂಗಳಕ್ಕೆ ಬಂದು  ಈಗ ಮಳೆ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ ಎಂದು ನಿಟ್ಟುಸಿರು ಬಿಟ್ಟಳು.


ಬಿಸಿ ಬಿಸಿ ಕಾಫಿ ಕುಡಿದು ಹುಲ್ಲು ತರಲು ಹೋಗಲೇಬೇಕು..ಪಾಪ ಬಾಯಿ ಬಾರದ ಹಸು, ಕರು. ಅವುಗಳಿಗೂ ಬೇಜಾರಾಗಿರುತ್ತೆ ಮೂರು ದಿನದಿಂದ ಒಣಗಿದ ಬೈಹುಲ್ಲನ್ನೇ ತಿಂದು. ಸತತ ಮಳೆಯಿಂದಾಗಿ ಹೊರಗೆ ಹೋಗಲು ಆಗಿಲ್ಲ ರಮೆಗೆ. ಕಾಫಿಯೊಂದಿಗೆ ರಸ್ಕ್ ತಿನ್ನೋಣವೆಂದು ಕರಡಿಗೆ ತೆಗೆದರೆ ಮಿನ್ನಿಪುಚ್ಚೆ ಹಾಜರು. ಮಿಯಾಂವ್ ಎನ್ನುತ್ತಾ ರಮೆಯ ಕಾಲಿಗೇ ಸುತ್ತತೊಡಗಿತು. ರಮೆ ರಸ್ಕ್ ತಿನ್ನುವಾಗ ಮಿನ್ನಿ ಎಲ್ಲಿದ್ದರೂ ಓಡಿ ಬಂದು ತನಗೂ ಪಾಲು ಕೇಳುತ್ತಿತ್ತು..ಧಾರಾಕಾರವಾಗಿ ಸುರಿವ ಮಳೆಗೆ ಹೊರಗೆ ಹೋಗಲಾಗದ ಅವಳ ಮನದಲ್ಲೂ ನೆನಪುಗಳ ಸುರಿಮಳೆ. ಒಮ್ಮೊಮ್ಮೆ ಜೋರಾಗಿ, ಮಗದೊಮ್ಮೆ ತುಂತುರು ಹನಿಯಂತೆ ಹಿತವಾಗಿ, ಮತ್ತೊಮ್ಮೆ ಬಿರುಗಾಳಿಗಿಂತಲೂ ಬಿರುಸಾಗಿ.. ಮಳೆ ಹೇಗಿದ್ದರೂ ತನ್ನ ಜೊತೆಗಿರುವ ಎಲ್ಲರನ್ನೂ ತೋಯಿಸುತ್ತವೆ. ಆದರೆ ನೆನಪುಗಳ ಮಳೆಯಲ್ಲಿ ತೋಯುವವಳು ತಾನೊಬ್ಬಳೇ..

        ರಾಮಚಂದ್ರ ರಾಯರು ಮತ್ತು ಸಾವಿತ್ರಮ್ಮನ ಮೊದಲ ಮಗಳೇ ರಮೆ.. ಪೂರ್ಣಹೆಸರು ಮನೋರಮೆ. ನಂತರ ಸಾಲಾಗಿ ನಾಲ್ಕು ಹೆಣ್ಣು, ಮೂರು ಗುಂಡು ಮಕ್ಕಳು. ಏಳನೇ ತರಗತಿ ಮುಗಿಯುತ್ತಲೇ "ಇನ್ನು ಓದಿದ್ದು ಸಾಕು.. ಮನೆಕೆಲಸ ಮಾಡುವುದು ಕಲಿತುಕೋ" ಎಂದು ಓದು ಬಿಡಿಸಿದರು ರಾಮಚಂದ್ರ ರಾಯರು. ತಮ್ಮ ತಂಗಿಯರಿಗೆ ಹೆಚ್ಚು ಓದಲು ಅವಕಾಶ ದೊರೆತಿದ್ದರೂ ಎಂದೂ ಹಲುಬಿದವಳಲ್ಲ ರಮೆ. ಅವರಿಗೆ ಬೇಕಾದ ಸಹಾಯ ಮಾಡಿಕೊಟ್ಟು ಓದಲು ಬೆಂಬಲ ನಿಡುತ್ತಿದಳು.


      

ಹದಿನೆಂಟು ತುಂಬುತ್ತಲೇ "ಇನ್ನು ಜಾತಕ ಹೊರಗೆ ಹಾಕೋಣ" ಎಂದ ತಂದೆಯ ಮಾತಿಗೆ ಒಪ್ಪಿಗೆ ಸೂಚಿಸಿದಳು ಹೆತ್ತವರು ಹಾಕಿದ ಗೆರೆಯನ್ನು ದಾಟದ ವಿಧೇಯ ಮಗಳು ರಮೆ. ನೂರಾರು ಕಡೆ ಜಾತಕ ಕೊಟ್ಟರೂ ಒಂದೂ ಮುಂದುವರಿಯಲಿಲ್ಲ. ಹೆಸರು ಮನೋರಮೆಯಾದರೂ ತನ್ನ ಪಾಲಿನ ಮುದ್ದಣ ಇನ್ನೂ ಬರಲಿಲ್ಲವೇಕೆ? ಎಂದು ಕಾತರಿಸುತ್ತಿದ್ದಳು.ಜೋಯಿಸರಲ್ಲಿ ಜಾತಕ ತೋರಿಸಿದಾಗ ಅವರು ಹೇಳಿದ ಮಾತುಗಳನ್ನು ಕೇಳಿ ಅವಳು ಬಿಕ್ಕಿ ಬಿಕ್ಕಿ ಅತ್ತಿದ್ದಳು. ಅತ್ತಿದ್ದು ವಾರಗಟ್ಟಲೇ.. ಆ ಸಮಯದಿಂದ ಆಕೆ ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕಿದವಳು.

     ಒಡಹುಟ್ಟಿದವರು ಮದುವೆಯಾಗಿ ತಮ್ಮದೇ ಸಂಸಾರ ಹೂಡಿದರೂ ಅವರೆಡೆಗೆ ದೃಷ್ಟಿ ಹಾಯಿಸದೆ ನಿರ್ಲಿಪ್ತತೆಯಿಂದ ಬದುಕಿದವಳು.ಮಗಳೋ ಸೊಸೆಯೋ ಆಗಮಿಸಿದಾಗ ರಮೆ ಬೆಳೆಸಿದ ಗುಲಾಬಿಯೋ, ಮಲ್ಲಿಗೆಯೋ ಮುಡಿಸಿ, "ಈಗ ತುಂಬಾ ಆಗುತ್ತೆ ಹೂವು.. ನೀವು ಇಲ್ಲೇ ಇದ್ದಿದ್ದರೆ ದಿನವೂ ಮುಡಿಯಬಹುದಿತ್ತು" ಎಂದು ರಾಗವೆಳೆಯುತ್ತಿದರು ಸಾವಿತ್ರಮ್ಮ. ಮಗನಿಗೆ ಆ ತರಕಾರಿ ಪ್ರೀತಿ, ಮೊಮ್ಮಗಳಿಗೆ ಇದು ಪ್ರೀತಿ ಎನ್ನುತ್ತಾ ತರಕಾರಿಗಳನ್ನು ಕೈಚೀಲಗಳಿಗೆ ತುಂಬಿ ಕೊಡುತ್ತಿದ್ದರು. ಅವರೆಲ್ಲರೂ ತೆರಳಿದ ಬಳಿಕ ಅದೆಲ್ಲವನ್ನೂ ತನ್ನ ಹಸುಗೂಸಿನಂತೆ ಪಾಲಿಸಿ ಪೋಷಿಸುವ ರಮೆಯನ್ನು  "ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳುವುದೆಂದರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ" ಎಂದು ಕಣ್ಣುಕೆಕ್ಕರಿಸಿದರೆ ರಮೆ ಕಿವುಡಿಯಂತೆ ತನ್ನ ಕಾರ್ಯಕ್ಕೆ ತೆರಳುತ್ತಿದ್ದಳು.ವಯಸ್ಸಾದ ಹೆತ್ತಬ್ಬೆಯ ಒಡಲ ಸಂಕಟದ ಮಾತು ಇದು ಎಂದು ತನ್ನನ್ನು ತಾನೇ ಸಂತೈಸಿ ಮರೆತು ಬಿಡುತ್ತಿದ್ದಳು. ಯೌವ್ವನದ ಬಯಕೆಗಳನ್ನು ತೋರಗೊಡದೆ ತನ್ನೊಳಗೆ ಅದುಮಿಟ್ಟುಕೊಂಡಿದ್ದಳು.

     ತಂದೆ ತಾಯಿ ಅಗಲಿದ ನಂತರ ಒಡಹುಟ್ಟಿದವರು "ಒಂದೊಂದು ತಿಂಗಳಿಗೆ ನಮ್ಮಲ್ಲಿಗೆ ಬಂದು ಇರು" ಎಂದು ಕರೆದರು. ಹೋದವಳಿಗೆ ಒಂದು ವಾರವಾದಾಗಲೇ ತನ್ನಿಂದಾಗಿ ಅವರ ಖಾಸಗಿ ಜೀವನಕ್ಕೆ ಧಕ್ಕೆಯಾಗುತ್ತಿದೆ ಎಂದು ಅರಿತುಕೊಂಡು ಬೇಗನೆ ತನ್ನ ಗೂಡಿಗೆ ಮರಳಿದಳು.ಅಂದು ಮನೆತುಂಬಾ ಜನರಿದ್ದ ಮನೆ ಇಂದು ಬೀಕೋ ಎನ್ನುತ್ತಿದೆ. ಗತವೈಭವದ ಪಳೆಯುಳಿಕೆಯಂತೆ ಭಾಸವಾಗುತ್ತಿದೆ. ವಿಶಾಲವಾದ ಚಾವಡಿಯ ಹಲಸಿನಮರದ ಬಾಜಿರಕಂಬಗಳು ಚಹಾಪುಡಿಯಂತಹ ಹುಡಿಯುದುರಿಸಿ ತಮಗೂ ವಯಸ್ಸಾಯಿತು, ಆರೋಗ್ಯ ಹದಗೆಡುತ್ತಿದೆ ಎಂದು ಸಾರುತ್ತಿವೆ. ಮಳೆಬಂದಾಗ ಸೋರುವ ಮಾಡು ಮನೆಯಲ್ಲಿ ಅಲ್ಲಲ್ಲಿ ಪುಟ್ಟ ಪಾತ್ರೆಗಳನ್ನಿರಿಸಿ ನೀರು ಸಂಗ್ರಹಿಸಬೇಕಾದ ಪರಿಸ್ಥಿತಿ ತಂದೊಡ್ಡಿವೆ. ಆದರೂ ಅವೆಲ್ಲವನ್ನೂ ಬಲು ಅಚ್ಚುಕಟ್ಟಿನಿಂದ ನಿಭಾಯಿಸುವವಳು ರಮೆ. ಹತ್ತಾರು ಜಾನುವಾರುಗಳಿದ್ದ ದನದ ಕೊಟ್ಟಿಗೆ ಇಂದು ಒಂದು ದನ ಕರುವಿಗೆ ಸೀಮಿತವಾಗಿದೆ.. ಆದರೆ ಹಸಿರು....? ಮನೆಯಂಗಳದ ಸುತ್ತ ಮುತ್ತ ಹೂವಿನ ಗಿಡಗಳು ಮೊದಲಿಗಿಂತಲೂ ಸುಂದರವಾಗಿ ನಳನಳಿಸುತ್ತಿವೆ. ತಾಜಾ ಹಣ್ಣುತರಕಾರಿಗಳು ಗಿಡಮರಗಳಲ್ಲಿ ತೂಗಿ, ರಮೆಗೆ ಆದಾಯವನ್ನು ತಂದುಕೊಡುತ್ತಿವೆ. ಅಡಿಕೆ, ತೆಂಗು, ಬಾಳೆಯ ತೋಟವು ಫಲಭರಿತವಾಗಿವೆ.. ಇದೆಲ್ಲ ರಮೆಯ ಮೌನಸಾಧನೆ. ರಮೆ, ದನ, ಕರು, ನಾಯಿ ಮತ್ತು ಬೆಕ್ಕು.. ಇವಿಷ್ಟೇ ಈ ಮನೆಯ ಸದಸ್ಯರು. ಯಾರದೂ ಚುಚ್ಚುಮಾತಿಲ್ಲ. ಮೆಚ್ಚುವ ನಡೆಯಿಲ್ಲ.

      ಕೊನೆಯ ತಮ್ಮ ಸುರೇಶ ತನ್ನ ಕಂಪೆನಿಯ ಕೆಲಸದ ನಿಮಿತ್ತ ಅಮೇರಿಕಾದಿಂದ ಭಾರತಕ್ಕೆ ಬರುತ್ತೇನೆ ಎಂದಿದ್ದ. ಜೊತೆಗೆ ಮಡದಿ ಮಕ್ಕಳನ್ನೂ ಕರೆದುಕೊಂಡು ಬಾ ಎನ್ನಲು ರಮೆ ಮರೆಯಲಿಲ್ಲ. ಎಲ್ಲರೂ ಬಂದರು. ಮಾವನ ಮನೆಯಲ್ಲಿ ಉಳಿದುಕೊಂಡ ಸುರೇಶ ಒಂದೆರಡು ಗಂಟೆಗಳಿಗೆ ತನ್ನ ಮನೆಗೆ ಭೇಟಿನೀಡಿದ. "ಅಕ್ಕಾ.. ನೀನು ಎಷ್ಟು ದಿನಾಂತ ಒಬ್ಬಳೇ ಇರುತ್ತೀಯ ಇಲ್ಲಿ.. ವಯಸ್ಸಾಗುತ್ತಾ ನಿನಗೂ ಕೆಲಸ ಮಾಡಲು ಕಷ್ಟ.. ಅದಕ್ಕೇ ನಾವೆಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಈ ಆಸ್ತಿಯನ್ನು ಮಾರೋಣ..ಬಂದ ದುಡ್ಡನ್ನು ಹಂಚಿಕೊಳ್ಳೋಣ.. ನಿನಗೆ ಬಂದ ದುಡ್ಡಲ್ಲಿ ನೀನು ಯಾವುದಾದರೂ ಅನಾಥಾಶ್ರಮದಲ್ಲಿ ಯಾವುದೇ ಜಂಜಾಟವಿಲ್ಲದೇ ಸುಖವಾಗಿರು" ಹೊರಡುವಾಗ ಹೇಳಿದ ಮಾತು ಅವಳ ಗಂಟಲುಬ್ಬುವಂತೆ ಮಾಡಿತು. ಇವನಿಗೇ ನಾನು ಅ ಆ ಇ ಈ ಬರೆಯಲು ಕಲಿಸಿ, ಹಾಲು, ತುಪ್ಪ ಮಾರಿದ ದುಡ್ಡನ್ನು ಜೋಪಾನವಾಗಿ ತೆಗೆದಿರಿಸಿ ಕಾಲೇಜು ಫೀಸು ಕಟ್ಟಿದ್ದು.. ಎಂದು ಯೋಚಿಸಿ ಕಣ್ಣಾಲಿಗಳು ತುಂಬಿ ಬಂದವು.


"ಇಲ್ಲ. ನಾನು ಒಬ್ಬಂಟಿಯಲ್ಲ. ದನ, ಕರು, ಬೆಕ್ಕು, ನಾಯಿ, ಹಸಿರು ಸಸ್ಯರಾಶಿ ಎಲ್ಲವೂ ನನ್ನ ಜೊತೆಗಿವೆ. ನನ್ನಲ್ಲಿ ಮಾತನಾಡುತ್ತಿವೆ. ಅವುಗಳ ಮೂಕಭಾಷೆ ನನಗೆ ತಿಳಿಯುತ್ತದೆ. ನಾನು  ಮನೆಯನ್ನು ದುರ್ಗತಿಗೆ ತಳ್ಳುವಂತಹ ಗ್ರಹಗತಿಯನ್ನು ಹೊಂದಿದವಳು ಎಂದು ಜೋಯಿಸರು ಹೇಳಿದ್ದನ್ನು ಸುಳ್ಳುಮಾಡಿ ಇಂದು ಯಾರ ಆಸರೆಯೂ ಇಲ್ಲದೆ ಭೂಮಿತಾಯಿ ನಳನಳಿಸಿ ಹಸಿರಾಗಿ ಬೆಳಗುವಂತೆ ಮಾಡಿದ್ದೇನೆ. ಈ ಭೂಮಿ ಈ ಪರಿಸರ ಸುಭಿಕ್ಷವಾಗಿದೆ. ನನ್ನ ಕೊನೆಯ ಉಸಿರು ಇರುವವರೆಗೂ ಈ ಭೂಮಿ ನನಗಾಸರೆ ನೀಡೀತು"ಎಂದುತ್ತರಿಸಿ ಗದ್ಗದಿತಳಾದಳು. "ನೀನು ಯಾರು ಹೇಳಿದರೂ ಕೇಳುವವಳಲ್ಲ. ಹಠಮಾರಿ.. ನನಗೆ ಗೊತ್ತು" ಎನ್ನುತ್ತಾ ಸುರೇಶ ಹೊರಟು ನಿಂತ.ಅವನು ಹೋದ ಮೇಲೆ ಅದೆಷ್ಟು ಹೊತ್ತು ಗತಬದುಕಿನ ಮೆಲುಕಿನಲ್ಲಿ ಮೈಮರೆತಿದ್ದಳೋ..! ಅವಳಿಗೆ ಎಚ್ಚರವಾದದ್ದು ಕರು ಅಂಬಾ.. ಅಂದಾಗ.

      ಇವತ್ತು ಸುರೇಶ, ಇನ್ನೊಂದು ದಿನ ದೊಡ್ಡ ತಮ್ಮ ಸದಾಶಿವ, ಮತ್ತೊಂದು ದಿನ ದಿನಕರ, ಆಗಾಗ ತಂಗಿಯಂದಿರಿಂದ ಈ ಮಾತು ಕೇಳುತ್ತಲೇ ಇರಬೇಕಾದೀತು ಕೊನೆಯ ತನಕವೂ ಎಂಬುದು ಖಚಿತವಾಗಿತ್ತು..

    ಮಳೆ ಕೊಂಚ ಬಿಡುವು ಪಡೆದುಕೊಳ್ಳುವ ಲಕ್ಷಣ ಕಂಡಿತು. ಕತ್ತಿ ಹಿಡಿದು ಹೊರಟವಳನ್ನು ಕಂಡು ಅಂಬಾ ಎಂದ ಕರುವಿನಲ್ಲಿ "ಈಗ ಹುಲ್ಲು ತಂದು ಹಾಕುವೆ" ಪ್ರೀತಿಯಿಂದ ತಲೆನೇವರಿಸಿ ಹೇಳಿ ಹೊರಟಳು.

✍️... ಅನಿತಾ ಜಿ.ಕೆ.ಭಟ್.
03-08-2021.

Momspresso Kannadaದ 'ಅಂತ್ಯವಿಲ್ಲದ ಕಥೆ' ಎಂಬ ವಾರದ ಬ್ಲಾಗ್ ಸವಾಲಿಗಾಗಿ ಬರೆದಿರುವ ಕಥೆ.

ಜೋಡೆತ್ತು




ಜೋಡೆತ್ತು

ನಡೆಯೋಣ ಬಾ ಹೀಗೆ ಜೋಡಿಯಾಗಿ
ಹೂಡೋಣ ಒಡೆಯನ ಕೂಳಿಗಾಗಿ||ಪ|| ಮೂಡಣದ  ಕರಿಮೋಡ ಸಾಲಾಗಿ
ಧರೆಗಿಳಿವ ಮುನ್ನ ಮುತ್ತಹನಿಯಾಗಿ||ಅ.ಪ.||

ಹದವಾಗಿ ಹೆಜ್ಜೆ ಒಂದೊಂದೆ ಇರಿಸಿ
ನೇಗಿಲ ಹೊರೆಗೆ ಹೆಗಲಾಗಿ
ಮಳೆಚಳಿಸುಡುಬಿಸಿಲು ಹಸಿಕೆಸರ
ಲೆಕ್ಕಿಸದೆ ದುಡಿಯೋಣ ನಾವು ಪೈರಿಗಾಗಿ||೧||

ಆಗೊಮ್ಮೆ ಈಗೊಮ್ಮೆ ಒದೆಗೆಬೆನ್ನೊಡ್ಡಿ
ನಡೆದಾಗ ಹೊಲವು ಹಸನಾಗಿ
ಭೂತಾಯಿ ಬಸಿರು ಹಸಿರಾಗಿ ತೊನೆದು
ನಿಂತಾಗ ದಣಿವು ನಲಿವಾಗಿ||೨||

ನಮ್ಮೊಳಗೆ ಎಂದೂ ಭೇದಬೇಡ
ಸಾಗೋಣ ಕಾಯಕದಿ ಮನವನಿರಿಸಿ
ಕಾಳಗದಿ ತಾಡಿದರೆ ಸೋಲುನೋವು
ಮನದೊಳಗೆ ವಿರಸವನು ಬೆಳೆಸಿ||೩||

ನಮ್ಮಯ ಸೇವೆ ಒಡೆಯನಬೆವರಹನಿ
ನೆಲದಾಯಿ ಹರಸಿದರೆ ಫಸಲು
ಹಸಿದಿಹ ಹೊಟ್ಟೆಗೆ ಅನ್ನವನೀಯುವ
ಕಾಯಕವೆ ಜಗದಲಿ ಮಿಗಿಲು||೪||

✍️ಅನಿತಾ ಜಿ.ಕೆ.ಭಟ್.
23-03-2021.

ಈ ಹಾಡನ್ನು ರಾಗಸಂಯೋಜನೆ ಮಾಡಿ ಮಧುರವಾಗಿ ಹಾಡಿದ್ದಾರೆ ಕಲ್ಪನಾ ಸುರೇಶ್ ಜೈನ್. ಕೆಳಗಿನ ಲಿಂಕ್ ಬಳಸಿ ವಿಡಿಯೋ ವೀಕ್ಷಿಸಿ...

https://youtu.be/65X_GTjlJ5k