#ನಾಗರಪಂಚಮಿ ಹಬ್ಬ
ಬಂದಿದೆ ಈ ದಿನ ಪಂಚಮಿಹಬ್ಬ
ಎಲ್ಲರೂ ಒಂದುಗೂಡೋಣ
ನಾಗದೇವನಿಗೆ ಭಕ್ತಿಲಿ ನಮಿಸಿ
ಹಾಲಭಿಷೇಕವ ಮಾಡೋಣ||೧||
ಕ್ಷೀರವು ಬಿಂದಿಗೆ ಎಳನೀರಿರಲಿ
ಕೇದಿಗೆ ಸಂಪಿಗೆ ಸಿಂಗಾರ ಪುಷ್ಪಗಳು
ಅರಸಿನ ಗಂಧ ಹಣ್ಣುಕಾಯಿ
ದೀಪ ಧೂಪ ಮಂಗಳವಾದ್ಯಗಳು||೨||
ಅರಸಿನೆಲೆ ಕಡುಬು ತಂಬಿಟ್ಟುಂಡೆ
ವಿಧವಿಧ ನೈವೇದ್ಯ ವಾಸುಕಿಗೆ
ಅರಿಯದ ತಪ್ಪನು ಮನ್ನಿಸೆ ಬೇಡುವ
ಒಡೆಯನು ನಾಗನು ಈ ಧರೆಗೆ||೩||
ಶ್ರಾವಣ ಶುಕ್ಲ ಪಂಚಮಿ ದಿನದಲಿ
ನಾಡಿಗೆ ಉಲ್ಲಾಸ ಸಡಗರವು
ಮಿಂದು ಮಡಿಯಲಿ ಸಕಲಭಾಗ್ಯವ
ಬೇಡಲು ಪೂರ್ಣ ಅನುಗ್ರಹವು||೪||
ಪಿತನನು ಕೊಂದ ನಾಗನಕುಲವ
ನಾಶಗೈಯುವೆನೆಂಬ ಶಪಥದಲಿ
ಯಜ್ಞದಿ ನಿರತ ರಾಜನ ಕಂಡು
ಋಷಿಯದೋ ಮಣಿಸಿದ ಕುಶಲದಲಿ||೫||
ಯಜ್ಞವು ನಿಂತಿಹ ಪುಣ್ಯದ ದಿನವದು
ಒಡಹುಟ್ಟು ಬಾಂಧವ್ಯದ ದ್ಯೋತಕವು
ತವರಿನ ಕುಲವದು ಬೆಳಗುತಲಿರಲು
ಅಣ್ಣತಂಗಿಯ ಪೂಜೆಯ ಸತ್ಫಲವು||೬||
ಆಭರಣವು ಹರನಿಗೆ ಶಯನಕೆ ಹರಿಗೆ
ಒದಗಿದ ಶೇಷಗೆ ಕರಮುಗಿದು
ಸೊಬಗಿನ ಹಚ್ಚ ಹಸುರಿನ ಬನದಲಿ
ಧನ್ಯರಾಗುವ ತನಿಯೆರೆದು||೭||
✍️... ಅನಿತಾ ಜಿ.ಕೆ.ಭಟ್.
13-08-2021. ಚಿತ್ರ ಕೃಪೆ: ಅಂತರ್ಜಾಲ.
🙏🙏
ReplyDelete🙏 ಧನ್ಯವಾದಗಳು..
Delete