Friday, 25 February 2022

ಪ್ರಿಯತಮೆ. #ಕವನ

 


#ಪ್ರಿಯತಮೆ

ಜೀವನದಿ ಭರವಸೆಯ ಚಿಲುಮೆ
ನಗುಮೊಗದ ಚೆಲುವೆ ನನ್ನ ಪ್ರಿಯತಮೆ
ಹೂ ಮನಸಿನ ಪ್ರೇಮವಾಣಿಯ ಸರದಾರಿಣಿ
ಸದಾ ಹಿತವ ಬಯಸುವ ನನ್ನ ರಮಣಿ||೧||

ಕಣ್ಣಂಚಲಿ ಸೆಳೆವ ತುಂಬು ಮಾಂತ್ರಿಕತೆ
ಒಲವ ಬಂಧನದ ಮೋಹಕ ಸುಮಲತೆ
ನಿತ್ಯವೂ ಜೊತೆನಡೆವ ಮಧುರ ಬಂಧನ
ಸವಿಬಾಳ ಹಾದಿಗೆ ಇವಳೇ ನನ್ನ ಚೇತನ||೨||

ಎಂದೆಂದೂ ಮರೆಯಲಾರೆ ನಿನ್ನ ಸ್ಫೂರ್ತಿಯ
ನಡೆವೆನು ನುಡಿದಂತೆ ಇಲ್ಲ ತಿಳಿ ಅತಿಶಯ
ಕಣ್ಮುಚ್ಚಿದರೂ ಕಾಣುವುದು ನಿನ್ನದೇ ಬಿಂಬ
ಆವರಿಸಿರುವೆ ನೀ ನನ್ನ ಮನದ ತುಂಬ||೩||

✍️... ಅನಿತಾ ಜಿ.ಕೆ.ಭಟ್.
04-02-2022.

#ಪ್ರತಿಲಿಪಿಕನ್ನಡ ದೈನಿಕ ಕವನ
#ದೈನಿಕ ವಿಷಯ- ಪ್ರಿಯತಮೆ


ಜೀವನ್ಮುಖಿ #ಒಂದು ಸಣ್ಣ ಪ್ರಶಂಸೆ

       



   ಜೀವನದ ಪ್ರತಿಯೊಂದು ಖುಷಿಯ ಘಳಿಗೆಗಳನ್ನು ಮೆಲುಕು ಹಾಕುವಂತಾಗಬೇಕು. ಎಂದೋ ಮರು ನೆನಪಿಸಿ ಮತ್ತದೇ ಖುಷಿಯ ಉಯ್ಯಾಲೆಯಲ್ಲಿ ಕುಳಿತು ತೂಗಬೇಕು ಎಂಬುದು ಸಾಕ್ಷಿಯ ಆಸೆ. ಅದಕ್ಕಾಗಿ ಆಕೆ ಹೆಚ್ಚು ಅವಲಂಬಿಸಿದ್ದು ನೆಚ್ಚಿಕೊಂಡದ್ದು ಸಾಮಾಜಿಕ ಜಾಲತಾಣವನ್ನು. ಪ್ರತಿದಿನದ ಅವಳ ಚಟುವಟಿಕೆಗಳನ್ನು ಹಂಚಿಕೊಂಡರೆ ಅವಳಿಗೆ ಸಮಾಧಾನ. ಆ ದಿನ ಎಲ್ಲಿಗಾದರೂ ಸಮಾರಂಭಕ್ಕೆ ಹೋದರೆ ನಾಲ್ಕಾರು ಫೊಟೋಗಳನ್ನು ಫೇಸ್ಬುಕ್, ವಾಟ್ಸಪ್ ಸ್ಟೇಟಸ್ ಗಳಲ್ಲಿ ಅಪ್ಲೋಡ್ ಮಾಡುವುದು, ಅಡುಗೆಗಳ ಫೊಟೋ ಹಂಚಿಕೊಳ್ಳುವುದು ಅವಳ ಜಾಯಮಾನ. ಸಮಾನಮನಸ್ಕ ಸ್ನೇಹಿತರ ಪರಸ್ಪರ ಪ್ರೋತ್ಸಾಹ ಅವಳಿಗೆ ಜೀವನದಲ್ಲಿ ಹೊಸ ಹುರುಪನ್ನು ತಂದುಕೊಟ್ಟಿತ್ತು.

      ಹೊಸ ಹೊಸ ಸ್ನೇಹಿತ ಸ್ನೇಹಿತೆಯರು ದೊರೆತು ಅವಳ ಆಪ್ತ ಪ್ರಪಂಚವೇ ಹಿರಿದಾದಂತಾಯಿತು.
ಮುಖ ಮಾತ್ರ ಕಾಣುವ ಪರದೆ ಬಲು ಸುಂದರ. ಮುಖಾಮುಖಿಯಾಗುವಾಗ ಸಮಾಜದಲ್ಲಿನ ಓರೆಕೋರೆಗಳೆಲ್ಲ ಎದ್ದುಕಾಣುವಂತೆ ಇಲ್ಲಿ  ಕಾಣುವುದು ತೀರಾ ಅಲ್ಪ. ಸಾಕ್ಷಿಯ ಆಸಕ್ತಿಗಳೂ ವಿಶಾಲವಾಗುತ್ತಾ ಹೋದವು. ಅದಕ್ಕೆ ತಕ್ಕಂತೆ ಪ್ರೋತ್ಸಾಹದ ಹೊಳೆಯೇ ಹರಿದಾಗ ಆ ಪ್ರತಿಭೆ ಮಿಂಚುವುದರಲ್ಲಿ ಎರಡು ಮಾತಿಲ್ಲ.

     ವಿವಿಧ ಭಂಗಿಗಳಲ್ಲಿ ಫೊಟೋ ಹಂಚಿಕೊಳ್ಳುವ ಸಾಕ್ಷಿಯ ಸೌಂದರ್ಯಕ್ಕೆ ಜನ ತಲೆದೂಗಿದರು. ಉಡುಪುಗಳನ್ನು ತೊಟ್ಟುಕೊಳ್ಳುವಲ್ಲಿ ಅವಳ ಕುಶಲತೆಯೂ ಎಲ್ಲರ ಗಮನಸೆಳೆಯಿತು. ನಾನಾ ಮುಖಭಾವದಲ್ಲಿ ಅತ್ಯಂತ ಸುಂದರ ಭಂಗಿಯಲ್ಲಿ ಫೊಟೋ ಕ್ಲಿಕ್ ಮಾಡಲು ಬಹಳ ಬೇಗನೇ ಕಲಿತುಕೊಂಡಳು. ಸಾಂಪ್ರದಾಯಿಕ ಉಡುಪುಗಳಲ್ಲೇ ಆಗಲಿ ಫ್ಯಾಷನ್ ಉಡುಪುಗಳಲ್ಲೇ ಆಗಲಿ ಅವಳ ಕಲಾತ್ಮಕ ಭಂಗಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಿತ್ತು.

        ಆರಂಭದಲ್ಲಿ ಮನೆಯವರೆಲ್ಲರ ಪ್ರೋತ್ಸಾಹ ಚೆನ್ನಾಗಿತ್ತು. ದಿನಗಳೆದಂತೆ ಆಕೆಗೆ ತನ್ನ ಕುಟುಂಬಕ್ಕಿಂತ ಜಾಲತಾಣದ ಸೆಳೆತವೇ ಹೆಚ್ಚಾಯಿತು. ಮನೆಯವರ ನೇರ ನುಡಿಗಿಂತ ಬಣ್ಣದ ಮಾತುಗಳು ಹಿತವಾಯಿತು. ತನ್ನ ಬಗ್ಗೆ ಹಿಂದಿದ್ದ ಅಭಿಮಾನ ಮುಂದೆ ಹೆಚ್ಚುತ್ತಲೇ ಹೋಯಿತು. ಆತ್ಮವಿಶ್ವಾಸದ ಹೆಜ್ಜೆಗಳನ್ನಿರಿಸಿದಳು.
ತನಗೆ ಸಾಟಿ ಯಾರಿಲ್ಲ ಎಂಬ ಸಣ್ಣದೊಂದು ಭಾವ ಅವಳಿಗರಿವಿಲ್ಲದೆಯೇ ಮನಸಿನೊಳಗೆ ಹೊಕ್ಕು ಬಿಟ್ಟಿತು.

       ಫೊಟೋ ಶೂಟ್ ಮಾಡುವುದಷ್ಟೇ ಅಲ್ಲ ಫೊಟೋದ ಹಿನ್ನೆಲೆಯ ಬಗ್ಗೆಯೂ ಗಮನಹರಿಸ ತೊಡಗಿದಳು. ವಿವಿಧ ವಿನ್ಯಾಸದ ಹಿನ್ನೆಲೆಗಾಗಿ ಖರ್ಚುವೆಚ್ಚಗಳೂ ಮಾಡಬೇಕಾಗಿ ಬಂತು. ಪತಿ ತನಗೆ ಆರ್ಥಿಕವಾಗಿ ಕಷ್ಟವಾದರೂ ಮಡದಿಯ ಆಸೆಯನ್ನು ಈಡೇರಿಸಲು ಕೈ ಜೋಡಿಸಿದರು. ಸಾಕ್ಷಿ ಸಾಮಾಜಿಕ ಜಾಲತಾಣ ತನಗೆ ಹೊಸಬಗೆಯ ಅವಕಾಶವೊಂದನ್ನು ಕೊಟ್ಟಿದೆ ಎಂದು ಸಂಭ್ರಮಿಸಿದಳು. ಅವಳ ಫೊಟೋಗಳನ್ನು ಕೊಳ್ಳಲು ಗ್ರಾಹಕರೂ ಮುಂದೆ ಬಂದರು. ಹಲವು ಕವಿಗಳಿಗೆ ಹಾಡುಗಳಿಗೆ ಸ್ಫೂರ್ತಿಯಾದಳು. ಕೆಲವು ವೇದಿಕೆಗಳು ಇಂತಹ ಭಂಗಿಯಲ್ಲೊಂದು ಫೊಟೋ ಶೂಟ್ ಮಾಡಿ ಕಳುಹಿಸಿಕೊಡಿ ಎಂದು ಬೇಡಿಕೆಯಿಟ್ಟು ಶುಲ್ಕವನ್ನು ಪಾವತಿಸಿದವು.

     ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸೌಂದರ್ಯ ಸಾಧನಗಳನ್ನು ಬಳಸತೊಡಗಿದಳು. ಯಾರಾದರೂ "ಈ ಫೊಟೋ ಚೆನ್ನಾಗಿ ಬಂದಿಲ್ಲ ಮೇಡಂ.. ಇನ್ನೊಂದು ಚೂರು ಬೇರೆ  ಭಂಗಿಯಲ್ಲಿ ಇರಲಿ" ಎಂದರೆ ತಕ್ಷಣ ಅವರ ಬೇಡಿಕೆಗೆ ಸ್ಪಂದಿಸಿ ಫೊಟೋ ಶೂಟ್ ಮಾಡಿ ಕಳುಹಿಸಿ ತನ್ನ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದಳು.

     ಹವ್ಯಾಸವು ಉದ್ಯಮದ ರೂಪ ಪಡೆಯಲಾರಂಭಿಸಿತು. ಗ್ರಾಹಕರ ಸೇವೆಯೇ ತನ್ನ ಸಂತೃಪ್ತಿ ಎಂಬಂತೆ ಫೋಟೋ ಶೂಟ್ ಮಾಡುವುದರಲ್ಲೇ ತೊಡಗಿಕೊಂಡಳು. ಅವಳ ಯಶಸ್ಸನ್ನು ಕಂಡ ಹಲವು ಮಂದಿ ಇದೇ ದಾರಿಯನ್ನು ಹಿಡಿದರು. ಎಲ್ಲವೂ ಹೊಸಮುಖಗಳು. ಹಲವು ಕಲಾತ್ಮಕತೆ. ವಿಭಿನ್ನವಾದ ನೈಪುಣ್ಯತೆ. ಸಹಜ ಸೌಂದರ್ಯ... ಇತ್ಯಾದಿ  ಅಂಶಗಳು ಜನರನ್ನು ಆಕರ್ಷಿಸಿದವು.

       ಸಾಕ್ಷಿಯ ಫೋಟೋಗಳನ್ನು ನೋಡಿ ಆಸ್ವಾದಿಸುತ್ತಿದ್ದವರು ಪ್ರೋತ್ಸಾಹಿಸುತ್ತಿದ್ದವರು ಈಗ ಹೊಸ ಮುಖಗಳತ್ತ ವಾಲಿದರು. ಸಾಕ್ಷಿಯ ಫೋಟೋಗಾಗಿ ಕಾಯುತ್ತಿದ್ದವರು, ಈಗ ಹೊಸ ಮುಖಗಳ ಚೆಲುವನ್ನು ಕಣ್ತುಂಬಿಸಿಕೊಳ್ಳಲು ಕಾದು ಕುಳಿತರು. ವಿಪರೀತ ಬೋಲ್ಡ್ ಭಂಗಿಯ ಫೊಟೋಗಳನ್ನು ಸೆರೆಹಿಡಿಯಲು ಆಸಕ್ತಿಯಿಲ್ಲದ ಸಾಕ್ಷಿ ಸ್ವಲ್ಪ ಹಿಂದೆ ಬಿದ್ದಳು. ಬೋಲ್ಡ್ ಆಗಿರುವಂತಹ, ರಸಿಕರನ್ನು ರಂಜಿಸುವಂತೆ ಹೊಸಮುಖಗಳಿಗೆ ತನ್ನೆದುರೇ ಬಹಳಷ್ಟು ಬೇಡಿಕೆ ಸಿಕ್ಕಾಗ ಅವಳಿಗೆ ಉತ್ಸಾಹ ಕುಂದಿತು.

     ಆದರೆ ಹವ್ಯಾಸವನ್ನು ನಿಲ್ಲಿಸಲು ಮಾತ್ರ ಮನಸ್ಸು ಬರುತ್ತಿಲ್ಲ, ಏಕೆಂದರೆ ಅಂತಹ ಪ್ರತಿಭೆಯೂ ಎಲ್ಲರಲ್ಲೂ ಇರುವುದಿಲ್ಲ. ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು ಮತ್ತು ಅದು ಈಗ ಅವಳಿಗೆ ಪ್ರಪಂಚವೇ ಆಗಿತ್ತು. ಇನ್ನು ಯಾವ ನಿಟ್ಟಿನಲ್ಲಿ ಹೊಸತನವನ್ನು ಪ್ರಯತ್ನಿಸಬಹುದು ಎಂದು ಆಲೋಚಿಸುತ್ತಾ ಹಲವು ಪ್ರಯೋಗಗಳಿಗೆ ತನ್ನನ್ನೇ ತಾನು ನೋಡಿಕೊಂಡಳು. ಆದರೆ ಹೊಸ ಪ್ರಯೋಗಗಳು ತನ್ನ ನಿರೀಕ್ಷೆಯಂತೆಯೇ ಮುಂದೆ ಸಾಗದೆ ನೆಲಕಚ್ಚಿದವು.

       ಅವಳಿಗೆ ಒಂದು ರೀತಿಯ ವೇದನೆ ಆರಂಭವಾಯಿತು. ಒಮ್ಮೆಲೆ ಬಂದ ಪ್ರೋತ್ಸಾಹದ ಸುರಿಮಳೆ ಈಗ ಇಳಿಮುಖವಾದಾಗ ಸಣ್ಣದೊಂದು ಜಿಗುಪ್ಸೆ ತನ್ನ ಕಾಡುತ್ತಿತ್ತು. ತಾನು ಸೋತೆನೇ?  ತನಗೂ ಮುಂದೆ ಬರುವ ಶಕ್ತಿ ಇಲ್ಲವೇ? ಎಲ್ಲವನ್ನೂ ಕಳೆದುಕೊಂಡೆ ಎಂಬುದೆಲ್ಲ ಮನಸ್ಸಲ್ಲಿ ಸುಳಿಯಲಾರಂಭಿಸಿತು. ಆಗ ಸಾಕ್ಷಿಯ ಮಂಕುತನವನ್ನು ಅರ್ಥಮಾಡಿಕೊಳ್ಳಲು  ಜಾಲತಾಣದ ಯಾವ ಮಂದಿಯೂ ಇರಲಿಲ್ಲ.

      ಹೊಸ ಆಶಾಕಿರಣವಾಗಿದ್ದ ಸಾಮಾಜಿಕ ಜಾಲತಾಣ ಆಕೆಯ ಮನಸ್ಸು ಕೆಡಿಸಿತ್ತು. ಈ ಕ್ಯಾಮೆರಾ ಮುಂದಿನ ಬದುಕು ಇಷ್ಟೇ ಎಂದುಕೊಂಡಳು. ಇಲ್ಲ ಇನ್ನು ಕೆಲವು ಸಮಯದವರೆಗೆ ಏನನ್ನು ಮಾಡುವುದಿಲ್ಲ. ಆಮೇಲೆ ನೋಡೋಣ ಎಂದು ಹಿಂದೆ ಸರಿದಳು. ಸಾಕ್ಷಿಯು ಸದಾ ಅಸಹನೆ ಅತ್ಯಂತ ಉದ್ವೇಗದಿಂದ ಬಳಲುತ್ತಿರುವುದು ನೋಡಿ ಅವಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡವರು ಕುಟುಂಬದವರು. ಪ್ರೀತಿಯಿಂದ ಆಕೆಯ ಜೊತೆ ನಿಂತರು. ಸಾಕ್ಷಿ ಕೆಲವು ದಿನಗಳ ಬಳಿಕ ಮತ್ತೆ ಫೊಟೋ ಅಪ್ಲೋಡ್ ಮಾಡಲಾರಂಭಿಸಿದಳು. ಆದರೆ ಬೇಡಿಕೆ ಮೊದಲಿನಂತಿಲ್ಲ. ಯಾರೂ ಅತಿಯಾಗಿ ಹೊಗಳುತ್ತಿಲ್ಲ. ಫೊಟೋ ನೋಡುವ ಕುತೂಹಲವೂ ಇಲ್ಲ. ಒಂದು ಸಣ್ಣ ಪ್ರಶಂಸೆಯೂ ಇಲ್ಲ. ಅವಳ ಅಸಹಾಯಕತೆಗೆ ಕೊನೆಯಿಲ್ಲ.

                    *****
         
         ಅಂದು ಕೂಡ ಮಂಕಾಗಿ ಬಿದ್ದುಕೊಂಡಿದ್ದವಳಲ್ಲಿ ತನ್ನ ಬದುಕು ಮುಳುಗಿ ಹೋಯಿತು ಎಂಬ ಭಾವ ಅಲೆಅಲೆಯಾಗಿ ಸುತ್ತಿ ಬರತ್ತಿತ್ತು. ಏಳಲು ಉತ್ಸಾಹವಿಲ್ಲ. ಎಲ್ಲವೂ ಅಯೋಮಯ.
"ಸಾಕ್ಷಿ.." ಎಂಬ ಪತಿಯ ಕರೆಗೆ ಓಗೊಟ್ಟು ಕೋಣೆಯಿಂದ ಬಂದಳು.
"ಬೇಗ ಬೇಗ ರೆಡಿಯಾಗಿ ಬಾ.."
ಎಂದಾಗ ಪ್ರಶ್ನಿಸುವ ಮನಸ್ಸಾಗದೆ ಹೊರಟು ನಿಂತಳು. ಎಲ್ಲಿಗೆ ಏನು ಎಂದು ವಿಚಾರಿಸುವ ಗೋಜಿಗೆ ಹೋಗಲಿಲ್ಲ. ಮನದೊಳಗೆ ಮಾತ್ರ ಆಲೋಚನೆಗಳ ಮಹಾಪೂರವೇ ಹರಿಯುತ್ತಿತ್ತು.

     ತುಂಬು ಸಂಭ್ರಮದಿಂದ ಕೂಡಿದ್ದ ಆ ವಾತಾವರಣ ಹೊಸದಾಗಿತ್ತು. ಗಾಳಿಗೆ ತೂಗುತ್ತಿದ್ದ ಮರಗಳು ಒಣಗಿದ ಎಲೆಗಳನ್ನು ಉದುರಿಸುತ್ತಿದ್ದವು. ಹಕ್ಕಿಗಳು ಉಲಿಯುತ್ತಿದ್ದವು.
ಒಳಗೆ ಸಾಗುತ್ತಿದ್ದಂತೆ ಮಿಸೆಸ್ ಸಾಕ್ಷಿ ಅವರಿಗೆ ನಮ್ಮ ಕಾರ್ಯಕ್ರಮಕ್ಕೆ ಸುಸ್ವಾಗತವನ್ನು ಕೋರುತ್ತಿದ್ದೇವೆ ಎಂಬ ಉದ್ಘೋಷ ಕೇಳಿಬಂತು.
ಚಪ್ಪಾಳೆಯ ಸದ್ದು ಕಿವಿಗಪ್ಪಳಿಸಿದವು. ಅತ್ಯಂತ ಗೌರವದಿಂದ ಬರಮಾಡಿಕೊಂಡು ದೀಪಬೆಳಗಿಸಿ ಉದ್ಘಾಟಿಸಲು ಕೋರಿಕೊಂಡರು. ಸುತ್ತಲೂ ನೆರೆದಿದ್ದ ವಿಶೇಷ ಚೇತನ ಮಕ್ಕಳೆಲ್ಲರೂ ನಗುತ್ತಾ ಹಚ್ಚುವೆವು ಸಂತಸದ ದೀಪ.. ಬಾಳನ್ನು ಬೆಳಗುವ ದೀಪ.. ಎಂದು ಹಾಡಿನ ಮೂಲಕ ಚಾಲನೆ ನೀಡಿದರು.

       ವಿಶೇಷ ಚೇತನ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಂದುವರಿದು, ಮಿಸೆಸ್ ಸಾಕ್ಷಿಯವರ ಪರಿಚಯ ಮಾಡಿಕೊಟ್ಟರು. ಅವರು ಹೇಳುತ್ತಿದ್ದ ಒಂದೊಂದು ಪದವೂ ಅವಳಿಗೆ ಅಪ್ಯಾಯಮಾನವಾಗಿದ್ದು, ಸಾಧನೆ ಮಾಡಬೇಕಾದರೆ ಬೇರೇನೂ ಬೇಡ ಮನಸ್ಸಿದ್ದರೆ ಸಾಕು ಎಂಬ ಮಾತು ಬಹಳ ಮನಮುಟ್ಟಿತು.  ಇಂದಿನಿಂದ ನನ್ನ ಫೊಟೋ ತೆಗೆದುಕೊಂಡು ನಾನು ವಿಜ್ರಂಭಿಸುವುದರ ಬದಲು ಇಂತಹ ಮಕ್ಕಳ ಬದುಕು ಮುಂದೆ ಹಲವರಿಗೆ ಪ್ರೇರಣೆಯಾಗುವಂತೆ, ಇವರ ಫೊಟೋಗಳೆಲ್ಲ ಸಾಧನೆಯೊಂದಿಗೆ ರಾರಾಜಿಸುವಂತೆ ಮಾಡಬೇಕು ಎಂದು ನಿರ್ಧರಿಸಿದಳು. ಕಾರ್ಯಕ್ರಮದಿಂದ ಹೊರಡುವಾಗ ಅವಳ ಮನದಲ್ಲಿ ಮೂಡಿದ್ದ ಗೆಲುವು, ಅವಳ ನಿರ್ಧಾರ ಪತಿಯ ಹೃದಯ ತುಂಬುವಂತೆ ಮಾಡಿತು.

✍️... ಅನಿತಾ ಜಿ.ಕೆ.ಭಟ್.
17-02-2022.

#ಪ್ರತಿಲಿಪಿ ಕನ್ನಡ ದೈನಿಕ ವಿಷಯಾಧಾರಿತ ಕಥೆ
#ವಿಷಯ- ಒಂದು ಸಣ್ಣ ಪ್ರಶಂಸೆ



ಬಂದು ಬಿಡು ಪ್ರಿಯೇ...

 


#ಬಂದುಬಿಡು ಪ್ರಿಯೇ...

ಹೇ.. ಪ್ರಿಯೇ.. ನನ್ನೀ ಬರಡು ಹೃದಯದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದವಳೇ..

         ಕಳೆದ ಆರು ತಿಂಗಳಿನಿಂದ ನನ್ನ ಬದುಕು ಅದೆಷ್ಟು ಚೇತೋಹಾರಿಯಾಗಿತ್ತು. ಒಂದು ಕ್ಷಣವೂ ಬೇಸರ ಮೂಡಿರಲಿಲ್ಲ. ದಿನದಿಂದ ದಿನಕ್ಕೆ ಲವಲವಿಕೆ ಹೆಚ್ಚುತ್ತಾ ಹೋಗಿತ್ತು. ನೀ ಬರುವಾಗ ನನ್ನೊಳಗಿದ್ದ ಆತಂಕವನ್ನು ಅದು ಹೇಗೆ ನನ್ನೆದೆಯಿಂದ ಹೊರಹಾಕಿದೆಯೋ ನೀನೇ ಬಲ್ಲೆ. ಎಂತಹಾ ಚಮತ್ಕಾರ ಅಡಗಿತ್ತು ನಿನ್ನ ಇರುವಿಕೆಯಲ್ಲಿ. ಮನೆಯ ಒಂದೊಂದು ಮೂಲೆಯೂ ಇಂದು ನಾನಾ ಕಥೆಗಳನ್ನು ನನಗೆ ನೆನಪಿಸುತ್ತಿವೆ. ನಾವಾಡಿದ ಮಾತುಗಳನ್ನೆಲ್ಲ ನೆನಪಿಟ್ಟು ಮರು ಪಿಸುಗುಡುತ್ತಿವೆ. ಹಜಾರದ ಕಿಟಕಿಯಂಚು ನನ್ನನ್ನು ಬಾ.. ಬಾ.. ಎಂದು ಕರೆದಂತೆ ಭಾಸವಾಗುತ್ತಿದೆ. ನಿನ್ನೊಡನೆ ಬೆಳದಿಂಗಳೂಟ ಮಾಡಿದ್ದು ಇನ್ನೂ ನಾಲಿಗೆಯನ್ನು ನೀರೂರಿಸುತ್ತಿದೆ. ಚಂದಿರನ ಮಂದ ಬೆಳಕು ನಮ್ಮನ್ನು ಕೆಣಕಿ ಕಚಗುಳಿಯಿಟ್ಟದ್ದು ಇಂದೋ ನಿನ್ನೆಯೋ ನಡೆದಂತಿದೆ. ಶಶಿಯ ತಂಪಿನ ಓಕುಳಿಯಲ್ಲಿ ನನ್ನ ತೋಳುಗಳಲ್ಲಿ ನೀನು ಕರಗಿಹೋದದ್ದು ನೆನೆದು ಈಗಲೂ ತೋಳುಗಳನ್ನೊಮ್ಮೆ ಬಿಗಿದು ಕಣ್ಮುಚ್ಚಿ ನಿನ್ನನ್ನೇ ಆವಾಹಿಸಿ ನೆನಪಿಸಿಕೊಂಡರೆ ಮೈ ಜುಂ ಎನ್ನುತ್ತದೆ.

       ಗುಡುಗು ಮಿಂಚಿನ ಭಯಕ್ಕೆ ಕಂಗಾಲಾದ ನಿನ್ನನ್ನು ಬೆಚ್ಚಗೆ ನನ್ನೆದೆಗಾನಿಸಿ ಮಗುವಿನಂತೆ ಮುಚ್ಚಟೆ ಮಾಡಿದ್ದು ನೆನಪಿದೆಯಾ.. ಮೊದಲ ಬಾರಿ ನಿನ್ನ ಕಿರುಬೆರಳು ಸೋಕಿದಾಗ ವಿದ್ಯುತ್ ಪ್ರವಹಿಸಿದಂತಾಗಿದ್ದು ನನಗೆ ಮಾತ್ರವಾ ಅಂದುಕೊಂಡಿದ್ದೆ. ನನ್ನ ಊಹೆ ಸುಳ್ಳಾಗಿತ್ತು, ನಿನಗೂ ಅದಕ್ಕಿಂತ ಭಿನ್ನವಾಗಿರಲಿಲ್ಲ ಆ ಸ್ಪರ್ಶ ಎಂದು ನಿನ್ನ ಬಾಯಿಂದಲೇ ಕೇಳಿ ಮತ್ತೆ ರೋಮಾಂಚನಗೊಂಡಿದ್ದೆ.

     ಬಹಳ ವರುಷಗಳಿಂದ ಯಾರಿಂದಲೂ ಬಿಡಿಸಲಾಗದ ಆ ಚಟವನ್ನು ಬಿಡಿಸಿದ ಮಾಂತ್ರಿಕ ಶಕ್ತಿ ನೀನು. ಸ್ವತಃ ನಾನೇ ಹಲವು ಬಾರಿ ಕಠಿಣ ನಿರ್ಧಾರ ಮಾಡಿದರು ಮತ್ತೆ ತಡೆಯಲಾರದೆ ಅದಕ್ಕೇ ದಾಸನಾಗಿದ್ದೆ. ಆದರೆ ನಿನ್ನ ಸನಿಹದಲ್ಲಿ ಅದಾವುದರ ಪರಿವೆಯೂ ನನಗಿರಲಿಲ್ಲ ಎಂಬುದೇ ಈಗ ಅಚ್ಚರಿ ಮೂಡಿಸುತ್ತಿದೆ. ಈಗ ನಿನ್ನ ವಿರಹ ತಾಳಲಾರದೆ ಮತ್ತದೇ ಜಂಗಮವಾಣಿಯ ಸಂಗದಲ್ಲಿ ಬಿದ್ದಿದ್ದೇನೆ. ಬಿಡಿಸಲು ನೀನೇ ಬರಬೇಕು. ಬೇಗ ಬರುವೆಯೇನೇ...?

     ಪ್ರತೀ ಸಂಜೆಯೂ ನಿನ್ನ ಜೊತೆಗೆ ಕುಳಿತು ನಿನ್ನ ಕಿವಿಗೆ ಮಾತ್ರ ಕೇಳುವಂತೆ ಪ್ರೇಮಗೀತೆಯನ್ನು ಗುನುಗುತ್ತಾ ಬಾಲ್ಕನಿಯಲ್ಲಿ ಕುಳಿತಾಗ ಮೈಗೆ ಮೈ ತುಸು ಜಾಸ್ತಿಯೇ ಅಂಟಿಸುತ್ತಿದ್ದೆ! ಪೋರಿ ನೀನು.. ನನ್ನ ಹೃದಯ ಚೋರಿ!!  ಆಗಾಗ ಯಾರೊಂದಿಗಾದರೂ ಜಗಳಾಡುತ್ತಲೇ ಇರುತ್ತಿದ್ದ ನಾನು ನಿನ್ನೊಂದಿಗೆ ಒಮ್ಮೆಯೂ ಜಗಳವಾಡದಿದ್ದುರ ಹಿಂದೆ ನಿನ್ನದೇ ಕೈವಾಡ ಇರೋದು ಗೊತ್ತಾಯ್ತಾ.. ನನ್ನ ಕೋಪವನ್ನು  ಕಣ್ಣಲ್ಲೇ ಕೊಂದು ಬಿಡುತ್ತಿದ್ದ ಪಾತಕಿ ನೀನು. ಅರ್ಥಾತ್ ಕೋಪಪಾತಕಿ! ಪ್ರೇಮಾರಾಧಕಿ..!!

    ನಾನು ನಿನ್ನ ಹೆಸರನ್ನೇ ಮರೆತಿದ್ದೇನೆ. ಆದರೆ ನನ್ನುಸಿರು ಮಾತ್ರ ನಿನ್ನುಸಿರಿನ ಗತಿಯೊಂದಿಗೇ ಸಾಗುತ್ತಿದೆ. ಹೃದಯ ನಿನ್ನ ಜೊತೆ ತಾಳಹಾಕುತ್ತಿದೆ. ಕೊಂಕು ಹುಡುಕುವ ಬುದ್ಧಿಯೆಲ್ಲಾ ಮೆದುಳಿನಿಂದಲೇ ಮರೆಯಾಗಿದೆ. ಕೆಡುನುಡಿಗಳ ಮೀಸೆಯಡಿಯಲ್ಲಿ ಹುದುಗಿಸಿಬಿಟ್ಟ ನೀನೇ.. ನನ್ನವಳೇ.. ಎಂದು ಬರುವೆ.. ಹೇಳೇ.. ಹೇಳಿ ಬಿಡು.. ನಾನಿನ್ನು ಕಾಯಲಾರೆ.. ಒಂದೊಂದು ಕ್ಷಣವೂ ಕಷ್ಟವಾಗುತ್ತಿದೆ ನನಗೆ..

      ನಾನು ‌ನಿನ್ನ ನೋಯಿಸಿದ್ದರೆ ಸಾರಿ ಕಣೆ.. ನೂರೊಂದು ಸಲ ಸಾರಿ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ನಿನ್ನಡುಗೆಯ ಘಮವಿಲ್ಲದೆ ನಾಲಿಗೆ ಹಠ ಹಿಡಿಯುತ್ತಿದೆ. ನಿನ್ನ ಕಾಲ್ಗೆಜ್ಜೆಯ ಘಲ್ ಘಲ್ ಧ್ವನಿಗೆ ಎದೆಯೊಳಗೆ ಏಳುತ್ತಿದ್ದ ಪುಳಕವೆಲ್ಲ ತಟಸ್ಥವಾಗಿವೆ. ನಿನ್ನ ಬಳೆಗಳ ಕಿಣಿ ಕಿಣಿ ಕಲರವ ಕೇಳದೆ ನಿದ್ದೆ ಹತ್ತಿರವೇ ಸುಳಿಯುತ್ತಿಲ್ಲ. ನಮ್ಮಿಬ್ಬರ  ಬೆಸುಗೆಯನ್ನು ಕಂಡು ಉರಿಯುತ್ತಿದ್ದ ತಲೆದಿಂಬು ಕೂಡಾ ಇಂದು ನನ್ನನ್ನು ಅಣಕಿಸುತ್ತಿದೆ. ಅವಳಿದ್ದರೆ ನನ್ನ ನೆನಪಿಲ್ಲ ನಿನಗೆ.. ಈಗ ನಾನೇ ಗತಿ ನೋಡು ಎಂದು ಹೀಯಾಳಿಸಿ ನನ್ನ ಲೀಟರ್ ಗಟ್ಟಲೆ ಕಣ್ಣೀರನ್ನು ತನ್ನೊಳಗೆ ಹಿಡಿದಿಡದೆ ಸತಾಯಿಸುತ್ತಿದೆ. ಪ್ರಿಯೇ.. ಪ್ರಾಣಕಾಂತೆ.. ಅರ್ಥಮಾಡಿಕೊಳ್ಳೇ...

     ನಿನಗೆಂದು ಸಂಜೆ ಎರಡು ಮೊಳ ಮಲ್ಲಿಗೆ ಹೂವು ತಂದು ಮುಡಿಗೆ ಮುಡಿಸುವೆ. ಬೆಳಗ್ಗೆ ಬೇಗನೆದ್ದು ಕೇಸರಿ ದಳಗಳನ್ನು ಹಾಕಿದ ಬಿಸಿ ಹಾಲು  ನಿನ್ನ ಕೈಗೆ ನಾನೇ ಕೊಡುವೆ.. ಹ್ಞೂಂ.. ಚೂರೇ ಚೂರು ಮುಂದುವರಿದು ನೀನೊಪ್ಪಿದರೆ ನಾನೇ ಕುಡಿಸುವೆಯೆಂದು ಹೇಳಬೇಕಿಲ್ಲ ತಾನೇ.. ನಿನ್ನ ಕೆನ್ನೆ ರಂಗೇರಿರಬಹುದೆಂದು ನನಗನಿಸುತ್ತದೆ.. ಅಷ್ಟೇ ಅಲ್ಲ.. ನಸುನಾಚಿ ರಂಗೇರಿದ ಕದಪು ಕಣ್ಣ ಮುಂದೆ ಬಂದು ಮನವು ರಚ್ಚೆ ಹಿಡಿದಿದೆ.. ಒಂದು ಬಿಗಿಯಾದ ಬಾಹು ಬಂಧನ.. ಹಣೆಮೇಲೆ ಸಿಹಿ ಮುತ್ತು.. ಮುಂಗುರುಳಲ್ಲೊಮ್ಮೆ ಕೈಯಾಡಿಸಿ  ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕೆನಿಸುತ್ತಿದೆ.

    ಎಷ್ಟು ದಿನವೇನೇ ರೆಸ್ಟು..? ಆ ರೆಸ್ಟಿಗೂ ಬೇಸರವಾಗಿರಬೇಕು ಕಣೆ.. ಬಂದುಬಿಡು.. ಸಹಚಾರಿಣಿಯಾಗಿ ಅನುದಿನವೂ ನನ್ನೊಲವಿನ ಬಲೆಯಲ್ಲಿ ಬಂಧಿಯಾಗಿ ಬಿಡು.. ತವರು ಮನೆ ವಾಸ ಸಾಕು ಕಣೇ.. ಅದಕ್ಕಿಂತ ನೂರುಪಟ್ಟು ಹೆಚ್ಚು ಪ್ರೇಮ ಧಾರೆಯೆರೆಯಲು ಸಿದ್ಧನಿದ್ದೇನೆ. ನಿನ್ನ ಉದರದಲ್ಲಿರುವ ನಮ್ಮೊಲವಿನ ಕುಡಿಗೆ ಅಪಾಯವಾಗದಂತೆ ನಿನ್ನ ಮೆರೆಸುವೆ. ಬಟ್ಟೆ ಬರೆ ಒಗೆಯಲು ವಾಷಿಂಗ್ ಮೆಷಿನ್ ಗೆ ಹಾಕಿ ತೆಗೆಯುವ ಒಣಗಿಸಿ ಮಡಚಿ ಇಸ್ತ್ರಿ ಹಾಕುವ ಕೆಲಸವೆಲ್ಲ ನನ್ನದೇ. ಪಾತ್ರೆ ತೊಳೆಯುವುದು ನೆಲವೊರೆಸುವುದು ಇನ್ನು ನಾನೇ.. ಒಮ್ಮೆ ಬರುವ ಆಲೋಚನೆ ಮಾಡಲಾರೆಯಾ.. ನವಮಾಸ ಪರ್ಯಂತ ಕಾದು ಕುಳಿತರೆ ಹುಚ್ಚನಾದೇನು ಪ್ರಿಯೇ.. ನಿನ್ನ ಸನಿಹದ ಅಮಲು ಅತಿಯಾಗಿದೆ..

   ನಿನ್ನ ಮಡಿಲಲ್ಲೊಮ್ಮೆ ತಲೆಯಿಟ್ಟು ಮಲಗಬೇಕು. ಮಗುವಿನಂತೆ ಮುದ್ದಿಸುವೆಯಾ..?
ಮುಂಜಾನೆಯ ಮಂಜಿನಲ್ಲಿ ನಿನ್ನ ಜೊತೆ ನಾಲ್ಕೇ ನಾಲ್ಕು ಹೆಜ್ಜೆ ನಡೆಯಬೇಕು.. ಹ್ಞೂಂ..ಎನ್ನುವೆಯಾ..? ಹಸಿರು ಬಣ್ಣದ ಝರಿಯಂಚಿನ ರೇಶ್ಮೆ ಸೀರೆಯಲ್ಲೊಮ್ಮೆ ನಿನ್ನ ನೋಡಬೇಕು.. ನಾನೇ ನೆರಿಗೆ ಹಿಡಿಯಬೇಕು.. ಆಗ ನಿನ್ನ ಮೊಗದ ಮೇಲೇಳುವ ಮಂದಹಾಸವನ್ನು ಕಣ್ತುಂಬಿಸಿಕೊಳ್ಳಬೇಕು.  ಮನಸು ಮಾಡೆಯಾ..? ಮನಸಾರೆ ಮುದ್ದಿಸಿ ಗಲ್ಲದ ಮೇಲೆ ಪ್ರೇಮದುಂಗುರವನು ಒತ್ತಬೇಕು... ಒಲ್ಲೆಯೆನಬೇಡ.. ಕರೆದೊಯ್ಯಲು ಯಾವಾಗ ಬರಲಿ ಹೇಳು.. ನೀನು ಹ್ಞೂಂ.. ಎಂದರೂ ಸಾಕು.. ನಾನು ನಿನ್ನ ಮುಂದೆ ಹಾಜರಾಗುತ್ತೇನೆ.. ಪ್ರೇಮ ಪಲ್ಲಕ್ಕಿಯಲ್ಲಿ ನಿನ್ನ ಕುಳ್ಳಿರಿಸಿ ಈ ಮನೆಗೆ ವಾಪಸು ಕರೆತರುತ್ತೇನೆ.. ಬಂದು ಬಿಡು ಪ್ರಿಯೇ..

                         ಇಂತಿ ನಿನ್ನ ಆಜ್ಞಾಪಾಲಕ,
                              ನಿನ್ನವ 💞💞

✍️... ಅನಿತಾ ಜಿ.ಕೆ.ಭಟ್.
17-12-2021.

#ಪ್ರತಿಲಿಪಿ ಕನ್ನಡ ದೈನಿಕವಿಷಯಾಧಾರಿತ_ಕಥೆ
#ದೈನಿಕವಿಷಯ_ಸಹಚಾರಿಣಿ
#ನವರಸದ ನವರಂಗು ಸ್ಪರ್ಧೆ, ನವರಸ_ ಶೃಂಗಾರ

#ಮಾಮ್ಸ್‌ಪ್ರೆಸೊ ಕನ್ನಡ- ದಿನಕ್ಕೊಂದು ಬ್ಲಾಗ್- ವಿಷಯ- ನನ್ನುಸಿರ ಭಾವ ನೀನು- ಶೀರ್ಷಿಕೆ- ನೀನಿಲ್ಲದೆ ನನ್ನುಸಿರೇ ನಿಲ್ಲುವಂತಾಗಿದೆ... ಬರಲಾರೆಯಾ...-ಉತ್ತಮ ಬರಹ



ಹೃದಯದಿಂದರಳಿದ ಸೌಂದರ್ಯ #ನಿಲುಗನ್ನಡಿ

 




#ಹೃದಯದಿಂದರಳಿದ ಸೌಂದರ್ಯ

     ಶಾಂತಲಾ ಹೊರಡುವ  ಗಡಿಬಿಡಿಯಲ್ಲಿದ್ದ  ಕಾರಣ ಸೊಸೆ ಮಾನ್ವಿಯನ್ನು ಅಷ್ಟಾಗಿ ಗಮನಿಸಿರಲಿಲ್ಲ. ಶಾಂತಲಾಳಿಗಿಂತ ಮೊದಲೇ ಹೊರಟಾಗಿದ್ದ ಅವಳನ್ನು ದೀಪು ತನ್ನ ಹೊಸ ಬೈಕಿನಲ್ಲಿ ಕುಳ್ಳಿರಿಸಿ ರೊಂಯ್ಯನೆ ಕರೆದೊಯ್ದಿದ್ದ. ಹೊರಡುವಾಗ "ಅಮ್ಮಾ.. ನೀನು ಹೊರಟು ನಿಲ್ಲು.. ಇವಳನ್ನು ಬಿಟ್ಟು ಬರುತ್ತೇನೆ" ಎಂದಿದ್ದ.

ಶಾಂತಲಾ ಹೊರಟದ್ದು ಮನೆಯ ಒಳಭಾಗದಲ್ಲಿದ್ದ ಒಂದು ಕೋಣೆಯಲ್ಲಿ. ಅದು ಬರೀ ಕತ್ತಲೆ ಕೋಣೆ. ಹಳೆಯ ಹಂಚಿನ ದೊಡ್ಡದಾದ ಮನೆ. ಮಸುಕು ಮಸುಕಾದ ಬೆಳಕಿನ ಕೋಣೆಗಳು. ಟಾರ್ಚ್ ಇಲ್ಲದಿದ್ದರೆ ಬರಿಕಣ್ಣಿಗೆ ಸುಲಭವಾಗಿ ಏನೂ ಕಾಣಿಸುವುದಿಲ್ಲ. ಬಾಗಿಲಿನ ಸಮೀಪ ಅಲ್ಪಸ್ವಲ್ಪ  ಬೆಳಕು ಪ್ರತಿಫಲನವಾಗಿ ಮಬ್ಬು ಬೆಳಕು ಕೋಣೆಯೊಳಗೆ ಹರಡಿದೆ. ಅಂತಹ ಕೋಣೆಯಲ್ಲಿ ಮೂಲೆಮೂಲೆಯಲ್ಲಿ ಏನೇನು ಇರುವುದು ಎಂದು ಶಾಂತಲಾಳಿಗಷ್ಟೇ ತಿಳಿದಿರುವುದು. ಮತ್ತು ಬೇಕಾದ್ದನ್ನು ಒಂದು ಅಂದಾಜಿನಲ್ಲೇ  ಕೈ ಹಾಕಿ ಹುಡುಕಿ ತೆಗೆಯಲು ಸಾಧ್ಯವಾಗುವುದು.  ಅಲ್ಲಿಯೇ ಮೂಲೆಯಲ್ಲಿದ್ದ ಕಪಾಟಿನಿಂದ ತನ್ನ ಸೀರೆ ರವಿಕೆಯನ್ನು ತೆಗೆದುಕೊಂಡು ಉಟ್ಟು ಹೊರಗೆ ಬಂದು ನಿಂತಿದ್ದಳು.

        ಸೀರೆ ಒಂದು ಉಟ್ಟಾಯ್ತು. ಮುಖಕ್ಕೆ ಪೌಡರ್ ಹಚ್ಚಿ ಆಗಿಲ್ಲ. ಕ್ರೀಂ ಎಲ್ಲಾ ಹಚ್ಚುವ ಅಭ್ಯಾಸ ಇಲ್ಲ. ನನಗೂ ವಯಸ್ಸಾಗಿದೆ. ಸೀರೆಯ ನೆರಿಗೆ ಮಾಡಿದ್ದು ಸಾಮಾನ್ಯವಾಗಿ ಆಗಿದೆ.. ಸಾಕು.. ಸೆರಗು ಅಷ್ಟೇನೂ ಸರಿ ಬಂದಿಲ್ಲ. ಆದರೂ ಇದಕ್ಕಿಂತ ಚೆನ್ನಾಗಿ ಹಾಕಲು ನನಗೂ ತಿಳಿಯುವುದಿಲ್ಲ.  ಇನ್ನೆಷ್ಟು ಬೇಕು ಈ ವಯಸ್ಸಿನಲ್ಲಿ.. ಸಾಕಲ್ಲವೇ? ಎಂದು ಯೋಚಿಸುತ್ತಾ ಅಂಗಳದಲ್ಲಿದ್ದ ಗುಲಾಬಿ ಗಿಡದಿಂದ ಎರಡು ಗುಲಾಬಿ ಹೂಗಳನ್ನು ಕೊಯ್ದು ತಂದಳು. "ನಾನು ಸೊಸೆಗೆ ಹೂ ಕೊಟ್ಟಿಲ್ಲ" ಎನ್ನುತ್ತಾ ಒಂದನ್ನು ತಾನು ಮುಡಿದು ಇನ್ನೊಂದನ್ನು ಸೊಸೆಗೆಂದು ಕೈಯಲ್ಲಿ ಹಿಡಿದುಕೊಂಡಳು.

     ಆಗಲೇ ಬೈಕ್ ಬಂದ ಸದ್ದು ಕೇಳಿತು. "ಅಮ್ಮಾ.. ಹೊರಟಾಯಿತಾ..?" ಎಂದ ಮಗ. ಬೈಕ್ ಏರಿ ಹೆದರಿ ಹೆದರಿ ಕುಳಿತ  ಅಮ್ಮನ ಕೈಯಲ್ಲಿದ್ದ ಹೂಗಳನ್ನು ಕಂಡು "ಅವಳೆಲ್ಲಿ ಮುಡಿತಾಳೆ ಗುಲಾಬಿಯನ್ನು.. ಸುಮ್ಮನೆ ನೀನು ಮುಡ್ಕೋ.. ಆಮೇಲೆ ಗಟ್ಟಿ ಹಿಡ್ಕೋ ಅಮ್ಮಾ.." ಎಂದ ಮಗರಾಯನಲ್ಲಿ.. "ಹಾಗೆಲ್ಲ ಹೇಳಬಾರದು ಕಣೋ.. ಹೆಣ್ಣುಮಕ್ಕಳು ಹೂ ಮುಡಿಯಬೇಕು" ಎಂದು ಜೋಪಾನವಾಗಿ ಕೈಯಲ್ಲಿ ಹಿಡಿದುಕೊಂಡರು.

        ಅದು ಶ್ರೀ ದುರ್ಗಾ ಕಲ್ಯಾಣ ಮಂಟಪ. ಆ ಊರಿನಲ್ಲಿ ಮದುವೆ ನಡೆಯುವುದು ಹೆಚ್ಚಾಗಿ ಅದೇ ಕಲ್ಯಾಣ ಮಂಟಪದಲ್ಲಿ. ಮಾರ್ಗದ ಹತ್ತಿರವಿದ್ದು ಬಸ್ಸಿನಲ್ಲಿ ಬರುವರಿಗೆ ಹೋಗುವವರಿಗೆ ಅತ್ಯಂತ ಔಚಿತ್ಯಪೂರ್ಣವಾದ ಜಾಗದಲ್ಲಿದೆ. ಶಾಂತಲಾ ಮಗನೊಂದಿಗೆ ಕೈ ಕಾಲು ತೊಳೆದು ಒಳಗೆ ಪ್ರವೇಶಿಸುತ್ತಿದ್ದಂತೆಯೇ... ಅಲ್ಲಿ ಹಾಲಿನ ಒಂದು ಬದಿಯಲ್ಲಿ ಹಾಕಲಾಗಿದ್ದ ನಿಲುಗನ್ನಡಿಯಲ್ಲಿ ತನ್ನ ಚೆಲುವನ್ನು ದಿಟ್ಟಿಸುತ್ತಿದ್ದ ಸೊಸೆ ಮಾನ್ವಿ ಕಂಡಳು. ಅತ್ತೆಯನ್ನು ಕಾಣುತ್ತಲೇ ಕನ್ನಡಿಯ ನೇರದಿಂದ ಈಚೆ ಬಂದು ತನ್ನ ತಲೆಕೂದಲನ್ನು ಒಮ್ಮೆ ತನ್ನೆರಡು ಬೆರಳುಗಳಲ್ಲಿ ಹರವಿಕೊಂಡಳು. ಶಾಂತಲಾ ಅದನ್ನು ನೋಡುತ್ತಲೇ 'ಇವಳೇಕೆ ಹೀಗೆ ಕೂದಲು ಬಿಟ್ಟು ಬಿಟ್ಟಿದ್ದಾಳೆ. ಒಂದು ಹೇರ್ ಬ್ಯಾಂಡ್ ಆದರೂ ಹಾಕಿಕೊಳ್ಳಬಾರದಾ?' ಎಂದುಕೊಂಡರು..  ಶಾಂತಲಾ ಮಾನ್ವಿಯ ಹತ್ತಿರ ಬಂದು "ನೋಡು ಮಾನ್ವಿ.. ನಾನು ನಿನಗೆಂದು ಗುಲಾಬಿಯ ಹೂವನ್ನು ತಂದಿದ್ದೇನೆ. ಮೊದಲು ಕೂದಲನ್ನು ಒಂದು ಕ್ಲಿಪ್ ಹಾಕಿ ಹಾರದಂತೆ ಮಾಡು. ನಂತರ  ಅದರ ಮೇಲೊಂದು ನಸು ಕೆಂಪುಹಳದಿ ಮಿಶ್ರಿತಬಣ್ಣದ ಗುಲಾಬಿ ಮುಡಿದುಕೋ.. ಎಷ್ಟು ಚೆಂದ ಕಾಣುತ್ತದೆ... ಗೊತ್ತಾ..?" ಎಂದರು.

"ಅತ್ತೆ ಕೂದಲು ಹೀಗೆ ಹಾರಾಡುತ್ತಿದ್ದರೇನೇ ಚಂದ. ಸಾರಿ ಉಟ್ಟಾಗ ಕೂದಲನ್ನು ಬಿಗಿದು ಕಟ್ಟಿದರೆ ನನಗೆ ಏನು ಚಂದ ಕಾಣಲ್ಲಪ್ಪ. ನಾನು ಹೀಗೇ ಬಿಡುತ್ತೇನೆ. ನನಗೆ ಗುಲಾಬಿ ಹೂವು ಎಲ್ಲಾ ಮುಡಿಯಲು ಇಷ್ಟವೇ ಇಲ್ಲ. ಮಲ್ಲಿಗೆ ಹೂವಾದರೆ ಮಾತ್ರ ಒಂದು ತುಂಡು ಮುಡಿಯ ಬಲ್ಲೆ.." ಎಂದು ಹೇಳಿದಾಗ ಶಾಂತಲಾ ಮುಖ ಸಪ್ಪೆ ಮಾಡಿಕೊಂಡು ಆಚೆ ಹೋದರು. ಈಗಿನ ಹೆಣ್ಣುಮಕ್ಕಳೇ ಇಷ್ಟೇ. ಹೆಚ್ಚು ಹೇಳಿ ನಾನು ನನ್ನ ನಾಲಿಗೆಯನ್ನು  ಕೆಡಿಸಿಕೊಳ್ಳಲಾರೆ. ಎಂದುಕೊಂಡರು.

     ಶಾಂತಲಾ ತನ್ನ ಬಂಧು ವರ್ಗದವರಲ್ಲೆಲ್ಲ ಮಾತನಾಡುತ್ತಾ ಇದ್ದರು. ಅಪರೂಪಕ್ಕೆ ಕಂಡ ಗೆಳತಿಯರು ಸಂಬಂಧಿಕರನ್ನು ಮಾತನಾಡಿಸುವುದು ಎಂದರೆ ಶಾಂತಲಾ ಎಲ್ಲಿಲ್ಲದ ಉತ್ಸಾಹ. ಅದರ ಮಧ್ಯೆ ಮಧ್ಯೆ ನಿಲುಗನ್ನಡಿಯಲ್ಲಿ ತನ್ನ ರೂಪವನ್ನು ತಾನೆ ದಿಟ್ಟಿಸುತ್ತಾ ಆನಂದಿಸುತ್ತಿದ್ದ ಸೊಸೆ ಮಾನ್ವಿ ಅನ್ನು ನೋಡಿ 'ಅಬ್ಬ ಇವಳಿಗೇನು ಕೊಬ್ಬು!' ಅಂದುಕೊಳ್ಳುತ್ತಿದ್ದರು.
ಇಪ್ಪತ್ತೈದರ ಹರೆಯದ ಮಾನ್ವಿ ನೋಡಲು ತೆಳ್ಳಗೆ ಬೆಳ್ಳಗಿದ್ದು ರೇಶಿಮೆಯಷ್ಟು ನಾಜೂಕಿನ ಕೂದಲಿನವಳು, ಕಪ್ಪಾದ ಹುಬ್ಬು, ಚೂಪಾದ ನೀಳ ನಾಸಿಕ, ಸೇಬಿನಂತಹ ಗಲ್ಲ, ಬಟ್ಟಲು ಕಂಗಳು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅವಳ ಎದುರಿನಲ್ಲಿ ಶಾಂತಲಾ ತನ್ನ ಸೌಂದರ್ಯದ ಬಗ್ಗೆ ಸ್ವಲ್ಪ ಕೀಳರಿಮೆಯನ್ನು ಹೊಂದಿ ಹಿಂದೆ ನಿಲ್ಲುತ್ತಿದ್ದರು. ಮುಕ್ಕಾಲಂಶ ಬೆಳ್ಳಗಾದ ತಲೆಕೂದಲು.. ಸುಕ್ಕುಗಟ್ಟಿದ ಮುಖ.. ಸದಾ ಕೆಲಸ ಮಾಡುತ್ತಾ ಒರಟಾದ ಕೈಗಳು.. ಒಡೆದ ಹಿಮ್ಮಡಿ... ಅಂದಗೆಟ್ಟ ಉಗುರುಗಳು.. ಅವರಿಗೆ ಸೊಸೆಯನ್ನು ನೋಡುವಾಗ ತನ್ನ ಶರೀರದ ಬಗ್ಗೆ ತಾನೇ ಹಿಂಸೆ ಪಡುವಂತೆ ಆಗುತ್ತಿತ್ತು.. ಸೊಸೆ ಜೊತೆ ನಿಂತುಕೊಳ್ಳಲು ಇದಕ್ಕೇ ಹಿಂಜರಿಯುತ್ತಿದ್ದರು. ಎಲ್ಲರೂ ಆಕೆಗಿಂತ ಅತ್ತೆ ಕಡಿಮೆ ಸುಂದರಿ ಎಂದು ಭಾವಿಸಬಹುದು ಎಂಬುದು ಮನದಲ್ಲಿದ್ದ ಅಳುಕು. ಮಾನ್ವಿ ಆಗಾಗ ನಿಲುಗನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದರೂ ಶಾಂತಲಾ ಮಾತ್ರ  ಕನ್ನಡಿಯಲ್ಲಿ  ತನ್ನನ್ನು ಕಾಣದಂತೆ ಎಚ್ಚರಿಕೆವಹಿಸಿ ಅತ್ತಿತ್ತ ಹೋಗುತ್ತಿದ್ದರು.

       ಮದುವೆಯ ಸಮಾರಂಭ ಎಲ್ಲ ಮುಗಿದು ಊಟ ಮಾಡಿ ಹೊರಡುವ ಸಮಯವಾಯಿತು. ಶಾಂತಲಾ ಮಗ ದೀಪುವನ್ನು ಕರೆದು "ಮಗಾ.. ನನ್ನನ್ನು ನೀನು ಈಗ ಮೊದಲು ಕರೆದುಕೊಂಡು ಹೋಗು.. ಈಗ ಸ್ವಲ್ಪ ಹೊತ್ತಿನಲ್ಲಿ ನೀವು ಬೆಂಗಳೂರಿಗೆ ಹೊರಡುತ್ತಿದ್ದೀರಲ್ಲ.. ನಿಮಗೆಲ್ಲ ತಯಾರಿ ಮಾಡಬೇಕಲ್ಲ.." ಎಂದಾಗ ಅಲ್ಲಿ ಹತ್ತಿರ ಬಂದ ಮಾನ್ವಿ "ದೀಪು.. ಇಲ್ಲಿ ತುಂಬಾ ಸೆಖೆಯಾಗುತ್ತಿದೆ. ನನಗಿನ್ನು ಮನೆಗೆ ಹೋಗಿ ಪುನಃ  ಹೊರಡಬೇಕು ಎಷ್ಟು ಕೆಲಸ ಇದೆ. ಎರಡು ಮೂರು ದಿನಕ್ಕೆ ಬೇಕಾದಷ್ಟು ಬಟ್ಟೆಬರೆ ಎಲ್ಲ ಪ್ಯಾಕ್ ಮಾಡಬೇಕಷ್ಟೇ.. ನನ್ನನ್ನೇ ಮೊದಲು ಕರೆದುಕೊಂಡು ಹೋಗು.." ಎಂದು ಮುಖ ಚಿಕ್ಕದು ಮಾಡುತ್ತಾ ಬೇಡಿಕೊಂಡಾಗ ದೀಪು ಮೊದಲು ಪ್ರಾಶಸ್ತ್ಯ ಕೊಟ್ಟದ್ದು ಮಾನ್ವಿಗೆ.. "ಅಮ್ಮಾ... ಇವಳನ್ನೇ ಮೊದಲು ಬಿಟ್ಟು ಬರುತ್ತೇನೆ.. ಅವಳಿಗೆ ಈಗಲೇ ಹೊರಡಬೇಕು ಅಲ್ವಾ.." ಎಂದಾಗ ಇಷ್ಟು ವರ್ಷ ಕೈತುತ್ತನಿತು ಸಾಕಿದ ಮಗನೇ ನನ್ನನ್ನು ಕಡೆಗಣಿಸಿ ಅವಳನ್ನು ಮೆರೆಸುತ್ತಾನಲ್ಲ ಎಂದು ಭಾವಿಸುತ್ತಾ ಹಲುಬಿದರು.

      ಮಗ ದೀಪು ಪದವಿ ಓದಿ ಮನೆಯ ಸಮೀಪದಲ್ಲೇ ಇದ್ದ ಪಂಚಾಯತ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸರ್ಕಾರಿ ಕೆಲಸ. ಪ್ರೈವೇಟ್ ಆಗಿ ಎಂಎ ಕೂಡ ಓದಿಕೊಂಡಿದ್ದ. ಸರ್ವಿಸ್ ಆದಂತೆ ಮುಂದೆ ಬಡ್ತಿ ಸಿಗಬಹುದು. ಇದನ್ನೆಲ್ಲಾ ನೋಡಿಕೊಂಡು ಮಾನ್ವಿಯಂತಹ ಇಂಜಿನಿಯರಿಂಗ್ ಹುಡುಗಿ ಮದುವೆಯಾಗಿದ್ದು. ಅಷ್ಟು ಒಳ್ಳೆ ಹುಡುಗಿ ಸಿಕ್ಕಿದ್ದು ನಮ್ಮ ಅದೃಷ್ಟವೇ ಸರಿ ಎಂದುಕೊಳ್ಳುತ್ತಿದ್ದರು ಶಾಂತಲಾ ದಂಪತಿ. ಆದರೆ ಮಗ ದೀಪು ಮಾನ್ವಿಗೆ  ಮೊದಲು ಮಣೆ ಹಾಕಿದಾಗ ವಿಚಲಿತಗೊಳ್ಳುತ್ತಿದ್ದವರು ಶಾಂತಲಾ. ಇವತ್ತು ಸಂಜೆ ದೀಪು ತನ್ನ ಆಫೀಸ್ ಕೆಲಸದ ಮೇಲೆ ಬೆಂಗಳೂರಿಗೆ ಹೋಗುವವನಿದ್ದ. ಆಫೀಸ್ ಕೆಲಸ ಒಂದು ದಿನ, ಹೆಚ್ಚಾದರೆ ಒಂದೂವರೆ ದಿನ.  ನವವಿವಾಹಿತ ಜೋಡಿ ಇನ್ನು ಹನಿಮೂನ್ ಎಂದು ಎಲ್ಲೂ ಹೋಗಿಲ್ಲ. ಬೆಂಗಳೂರಿಗೆ ಹೋದಾಗ ಎರಡು ಮೂರು ದಿನವಾದರೂ  ಅಲ್ಲಿ ಸ್ವಲ್ಪ ಸುತ್ತಾಡಿ ಬರಬಹುದು ಎಂದು ಮಾನ್ವಿಯನ್ನು ಜೊತೆಯಲ್ಲಿ ಕರೆದೊಯ್ಯುವ ಸಿದ್ಧತೆ ಮಾಡಿದ್ದರು.
ಅವರಿಗೆ ಹೊರಡುವಾಗ ಒಂದಷ್ಟು ತಿನಿಸುಗಳನ್ನು ಕಟ್ಟಿ ಕೊಡಬೇಕೆಂದು ಎಲ್ಲವನ್ನೂ ಮಾಡಿ ಡಬ್ಬದಲ್ಲಿ ಇರಿಸಿದ್ದರು ಶಾಂತಲಾ. ಅದನ್ನೆಲ್ಲ ಕೈಹಾಕಿ ಮಾನ್ವಿ ತೆಗೆದುಕೊಳ್ಳುವವಳೂ ಅಲ್ಲ..
ಎಲ್ಲವನ್ನು ತುಂಬಿಸಿ ಪ್ಯಾಕ್ ಮಾಡಿ ಶಾಂತಲಾಳೇ ಕೊಡಬೇಕಾಗಿತ್ತು. ಸಾಲದ್ದಕ್ಕೆ ಸಂಜೆ ಹೊತ್ತು ಹಟ್ಟಿಯಲ್ಲಿದ್ದ ದನವನ್ನು ಹಾಲು ಹಿಂಡಬೇಕು. ತನ್ನ ವೇಳೆಗೆ ಆಗುತ್ತಲೇ ಅದು ಜೈವಿಕ ಗಡಿಯಾರದಂತೆ ಅಂಬಾ.. ಎನ್ನುತ್ತಾ ಕೂಗಲು ಆರಂಭಿಸುತ್ತದೆ. ತಡವಾದರೆ ಪತಿ ಶೇಖರ ರಾಯರಂತೂ ಹಾಲು ಹಿಂಡುವುದಕ್ಕೆ ಹೋಗಲಾರರು. ಮನೆಗೆ ಹೋಗಿ ಈ ಝರಿ ಸೀರೆಯನ್ನು ಬದಲಾಯಿಸಿ ನಿತ್ಯದ ಕಾಟನ್ ಸೀರೆ ಉಟ್ಟು ಹಾಲು ಹಿಂಡಿ... ಮಗ ಸೊಸೆಗೆ ಕಾಫಿ ತಿಂಡಿ ಮಾಡಿ ಕೊಟ್ಟು ಬೇಕಾದ್ದನ್ನು ತುಂಬಿಸಿ ಕೊಟ್ಟು... ಅಬ್ಬಬ್ಬಾ ಎಷ್ಟೊಂದು ಕೆಲಸ ಇದೆ.. ಈ ಮಾನ್ವಿಗಾದರೂ ಏನಿದೆ ಕೆಲಸ..? ಉಟ್ಟಿದ್ದ ಸೀರೆಯನ್ನು ಅಲ್ಲೇ ಬಿಚ್ಚಿ ಹಾಕಿ ಅದೇನೋ  ಕುರ್ತಾ ಅಂತೆ.. ಅದನ್ನು ಮೇಲಿಂದ ಸುರಿದು, ಕೆಳಗಿನಿಂದ ಲೆಗ್ಗಿನ್ಸ್ ಅನ್ನು ಏರಿಸಿಕೊಂಡರಾಯಿತು.. ಆದರೂ ತಾನೇ ಮೊದಲು ಹೋಗಬೇಕೆಂಬ ಹಠ ಇವಳಿಗೆ.. ಶಾಂತಲಾ ಇದೆಲ್ಲ ಯೋಚಿಸುತ್ತಿದ್ದಂತೆಯೇ ದೀಪುವಿನ ಆಗಮನವಾಯಿತು.

      "ಬಾ ಅಮ್ಮಾ.. ನಡಿ ಹೋಗೋಣ ಮನೆಗೆ" ಎಂದು ಕರೆದ. ಮಗನೊಂದಿಗೆ ಬೈಕಿನಲ್ಲಿ ಕುಳಿತು ಹೊರಟರು. ಮನಸ್ಸಿನಲ್ಲಿ ಕಾರಿದ್ದರೆ ಎಲ್ಲರೂ ಜೊತೆಗೆ  ಹೋಗಬಹುದಿತ್ತು ಎಂಬ ಆಲೋಚನೆಯೂ ಮೂಡಿತು. ಇರಲಿ.. ಇನ್ನೊಂದೆರಡು ವರ್ಷ ಕಳೆದಾಗ ಹೊಸ ಕಾರನ್ನು ಕೊಳ್ಳೋಣವಂತೆ ಎಂದುಕೊಂಡರು. ಮನೆಗೆ ತಲುಪಿ,  ಒಳಗೆ ಸಾಗಿದಾಗ ಹಜಾರದಲ್ಲಿ ಫ್ಯಾನಿನಡಿಯಲ್ಲಿ ಕುಳಿತ ಮಾನ್ವಿ ತಲೆಕೂದಲನ್ನು ಹರಡಿ ನಿಲುಗನ್ನಡಿಯ ಮುಂದೆ ನಿಂತು ಮುಖಕ್ಕೆ ಅದೇನ್ನನ್ನೋ ಉಜ್ಜಿಕೊಳ್ಳುತ್ತಿದ್ದಳು. ಒಮ್ಮೆಲೇ ಸಿಟ್ಟು ನೆತ್ತಿಗೇರಿತು ಶಾಂತಲಾಳಿಗೆ. ಮಾಡಲು ಎಷ್ಟೊಂದು ಕೆಲಸವಿದೆ. ಅದನ್ನೆಲ್ಲ ಬಿಟ್ಟು, ಬೇಗನೆ ಬಂದವಳು ಮಾಡಿಕೊಳ್ಳುತ್ತಿರುವುದು ಆದರೂ ಏನು..? ಎಂದು ಕೋಪ ನುಂಗಿಕೊಂಡರು.. ಅತ್ತೆಯ ಮುಖ ನೋಡಿ ಅರಿತ ಮಾನ್ವಿ "ಅತ್ತೇ.. ನನಗೆ ಹಾಲಿನಲ್ಲಿ ಸೆಖೆಗೆ ಮುಖವೆಲ್ಲ ಉರಿದು ಕೆಂಪಾಗಿದೆ. ಅದಕ್ಕೆ ಸ್ವಲ್ಪ ಮುಖಕ್ಕೆ ಹಣ್ಣಿನ ಫೇಸ್ ಪ್ಯಾಕ್ ಹಾಕಿಕೊಳ್ಳುತ್ತಿದ್ದೆ ನೋಡಿ.." ಎನ್ನುತ್ತಾ ಕನ್ನಡಿಯಿಂದ ಮುಖ ಕೀಳದೆ ಉಲಿದಳು.. "ನಿನಗೆ ಸಹಜ ಸೌಂದರ್ಯವಿದ್ದರೂ ಸೌಂದರ್ಯದ ಚಿಂತೆ.. ನನಗೆ ನನ್ನ ಆರೋಗ್ಯವೂ, ಸೌಂದರ್ಯವೂ ಕೆಟ್ಟು ಹೋಗುತ್ತಿದ್ದರೂ ಕೆಲಸದ ಚಿಂತೆ.." ಎಂದು ಹೇಳಿ ಅವಳ ಉತ್ತರಕ್ಕೂ ಕಾಯದೆ ಒಳನಡೆದರು.

       ಬೇಗಬೇಗನೆ ತನ್ನ ಝರಿ ಸೀರೆಯನ್ನು ತೆಗೆದಿಟ್ಟು ನಿತ್ಯದ ಹಳೆಯ ಕಾಟನ್ ಸೀರೆ ಉಟ್ಟು, ಕೈಯಲ್ಲೊಂದು ಚೊಂಬು ಹಿಡಿದು ಸೀದಾ ಕೊಟ್ಟಿಗೆಗೆ ನಡೆದರು. ದನ ಗಂಗೆ  ಒಂದೇ ಸಮನೆ ಅಂಬಾ ಎನ್ನುತ್ತಿತ್ತು. ಕರುವನ್ನು ಬಿಟ್ಟು ಅದಕ್ಕೆ ಹಾಲುಣಿಸಿ ನಂತರ ತಾವು ಬಿಂದಿಗೆಗೆ ಹಾಲು ಹಿಂಡಲಾರಂಭಿಸಿದರು. ಒಂದು ಬಿಂದಿಗೆ ಹಾಲನ್ನು ತಂದು ಮಗ-ಸೊಸೆ ಗಂಡನಿಗೆ ಚಹಾ ಮಾಡಿ, ಕುರುಕುಲು ತಿಂಡಿಗಳನ್ನು  ತೆಗೆದುಕೊಂಡು ಹೋಗಿ ಹಜಾರದಲ್ಲಿ ಇಟ್ಟರು. ಎಲ್ಲರೂ ಚಹಾ ತಿಂಡಿಯನ್ನು ಸೇವಿಸುತ್ತಿದ್ದಂತೆ ಇನ್ನೊಂದಷ್ಟು ಎಣ್ಣೆ ತಿಂಡಿಯನ್ನು ಪ್ಯಾಕ್ ಮಾಡಿದರು..

      ಐದೂವರೆ ಹೊತ್ತಿಗೆ ಮಗ-ಸೊಸೆ  ಹೊರಟು ನಿಂತರು. ಸೊಸೆಯ ಮುಖವನ್ನು ಸ್ಪಷ್ಟವಾಗಿ ವೀಕ್ಷಿಸಿದರು ಶಾಂತಲಾ. ಇಷ್ಟೊಂದು ಮೃದುವಾದ ತ್ವಚೆ ಇದ್ದರೂ ಮತ್ತೂ ಏನೇನೋ ಮೆತ್ತಿಕೊಳ್ಳುವುದು ಯಾಕಪ್ಪಾ?  ಎಂದು ಭಾವಿಸಿದರು. ಆ ಮಾತುಗಳನ್ನೆಲ್ಲ ತನ್ನೊಳಗೆ ನುಂಗಿಕೊಂಡರು. "ಅಮ್ಮಾ.. ಬೈಕಿನಲ್ಲಿ ನಗರದವರೆಗೆ ಹೋಗಿ, ಅಲ್ಲಿಂದ ಬಾಡಿಗೆ ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದೇವೆ. ನಂತರ ಟ್ರೈನ್ನಲ್ಲಿ ಬೆಂಗಳೂರಿಗೆ ಪ್ರಯಾಣ."
"ಮಗಾ.. ದೀಪು. ಸರಿ ಜಾಗರೂಕತೆಯಿಂದ ಹೋಗಿಬನ್ನಿ" ಎಂದು ಹೇಳುತ್ತಾ ಕಳುಹಿಸಿಕೊಟ್ಟರು ಶಾಂತಲಾ ಮತ್ತು ಶೇಖರರಾಯರು.

      ಮಗ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಹಿಂದಿನ ಸೀಟಿನಲ್ಲಿ ಹತ್ತಿ ಕುಳಿತ ಮಾನ್ವಿ ಮೆಲ್ಲಗೆ ತನ್ನ ಕೈಗಳಿಂದ ಪತಿಯನ್ನು ತಬ್ಬಿಹಿಡಿದಳು. ಅವರಿಬ್ಬರ ನಡುವೆ ಸಣ್ಣದೊಂದು ಅನುರಾಗದ ಅನುಬಂಧ ಕಂಡ ಹಿರಿಯ ದಂಪತಿಗಳಿಗೂ ಕಚಗುಳಿ ಇಟ್ಟಂತೆ ಆಯ್ತು. ಬೈಕ್ ಕಣ್ಣನೋಟದಿಂದ ಮುಂದಕ್ಕೆ ಸಾಗುವವರೆಗೆ ಇಬ್ಬರು ನೋಡುತ್ತಾ  ನಿಂತರು. "ಎಷ್ಟು ವರ್ಷದಿಂದ ಹೇಳುತ್ತಾ ಇದ್ದೆ.. ನೀವು ಒಂದು ದ್ವಿಚಕ್ರವಾಹನ ಕೊಳ್ಳಿ.. ಎಂದು. ನೀವು ಕೇಳಿದಿರಾ..? ಮಗ ಕೊಂಡುಕೊಂಡ. ಸೊಸೆಯನ್ನು ಎಷ್ಟು ನಾಜೂಕಾಗಿ ಕರೆದೊಯ್ಯುತ್ತಾನೆ ನೋಡಿ. ಅವರಿಗಿದೆ ಆ ಭಾಗ್ಯ.  ನನಗೆ ಇಲ್ಲವಲ್ಲ.."
"ಎಲಾ ಇವಳೇ.. ಬೈಕಿನಲ್ಲಿ ಕುಳಿತು ಪತಿಯನ್ನು ಮೆದುವಾಗಿ ಬಳಸಿ ಹಿಡಿಯಬೇಕೆಂದೆನೂ ಇಲ್ಲ.. ಹಾಗೆಯೇ ತಬ್ಬಿ ಹಿಡಿಯಬಹುದು.." ಎಂದಾಗ ಶಾಂತಲಾರ ಮುಖ ರಂಗೇರಿತ್ತು.
"ಇದಕ್ಕೇನು ಕಮ್ಮಿ ಇಲ್ಲ ನೀವು.. ಮಾತಿನಲ್ಲಿ ರೈಲು ಬಿಡುವುದಕ್ಕೆ'' ಎಂದು ಛೇಡಿಸಿದರು.
ಬಿರಬಿರನೆ ಒಳಗೆ ನಡೆಯುತ್ತಿದ್ದ ಶಾಂತಲಾರನ್ನು ಹಿಂಬಾಲಿಸಿದ ರಾಯರು ಮೆಲ್ಲನೆ ಆಕೆಯ ಕೈಹಿಡಿದು ನಿಲ್ಲಿಸಿ ಹೆಗಲ ಮೇಲೆ ಕೈಯಿಟ್ಟು.. ಮುಖವನ್ನೇ ದಿಟ್ಟಿಸಿದರು.. ನುಣುಚಿಕೊಳ್ಳುತ್ತಿದ್ದ ಶಾಂತಲಾರನ್ನ ಮತ್ತಷ್ಟು ಬಲವಾಗಿ ಹಿಡಿದು  "ಏನೀಗ.. ನಮ್ಮ ನಡುವಿನ ಅನುರಾಗದ ಅನುಬಂಧ ಕಡಿಮೆಯಾಗಿದೆ ಎಂದು ನಿನ್ನ ಭಾವನೆಯೇ... ನೀನೆಂದಿಗೂ ನನ್ನ ಪಾಲಿಗೆ ಸೌಂದರ್ಯವತಿ.. ನಾನು ರಸಿಕ ಮಹಾರಾಜ..." ಎನ್ನುತ್ತಾ ಮಡದಿಯ ಮುಖವನ್ನು ತನ್ನತ್ತ ತಿರುಗಿಸಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು...
"ಥೂ.. ಹೋಗೀಪಾ ನನಗೆ ಕೆಲಸವಿದೆ" ಎನ್ನುತ್ತಾ ಹಜಾರದಿಂದ ವೇಗವಾಗಿ ನಡೆದು ಬಂದು ಒಳಗೆ ಸಾಗುತಿದ್ದವರು ನಿಲುಗನ್ನಡಿಯಲ್ಲಿ ತನ್ನ ಮುಖವನ್ನೊಮ್ಮೆ ದಿಟ್ಟಿಸಿಕೊಂಡರು.. ಮುಖದ ಮೇಲೆ ಅರಳಿದ ಮಂದಹಾಸದಿಂದ ತನ್ನನ್ನು ಮತ್ತಷ್ಟು ಸುಂದರವಾಗಿ ಕಂಡಿತು ಅವರಿಗೆ..
ಹಾಗೆಯೇ ಒಂದರೆಗಳಿಗೆ ತಲ್ಲೀನರಾಗಿ ಕನ್ನಡಿಯ ಮುಂದೆ ನಿಂತರು.. ಮುಖದ ಮೇಲೆ ಅರಳಿದ ಗೆಲುವಿನ ನಗೆಯಿಂದ ಮುಖದ ಸುಕ್ಕುಗಳು ಹೆಚ್ಚು ಕಾಣಲಿಲ್ಲ ಅವರಿಗೆ.. ಹಿಂದಿನಿಂದ ರಾಯರ ಆಗಮನವಾಗುತ್ತಿದ್ದಂತೆಯೇ ಮುಖದ ಸೌಂದರ್ಯ ಮತ್ತೆ  ಇಮ್ಮಡಿಗೊಂಡಂತೆ ಕಂಡಿದ್ದು.. "ಸೊಸೆಯ ಮುಖ ಮೇಕಪ್ಪು ಬಳಿಯುವ ಸೌಂದರ್ಯವಾದರೆ, ನಿನ್ನದು ಹೃದಯದಿಂದ ಪರಿಪಕ್ವವಾದ ಸೌಂದರ್ಯ ಕಣೆ" ಎನ್ನುತ್ತಾ ರಾಯರು ಹಿಂದಿನಿಂದ ಬಳಸಿದರೆ ಶಾಂತಲಾ ಅವರ ಎದೆಗೊರಗಿ ನಗುತ್ತಿದ್ದರು.. ಅಲ್ಲಿದ್ದದ್ದು ಬರೀ ನಿಷ್ಕಲ್ಮಶ ನಗು, ಪರಿಶುದ್ಧ ಪ್ರೇಮ.. ನಲುವತ್ತು ವರುಷಗಳಿಂದ ಒಂದಾಗಿ ಬೆರೆತ ಎರಡು ನಿಷ್ಕಲ್ಮಶ ಹೃದಯಗಳು... ಎಲ್ಲದಕ್ಕೂ ನಿಲುಗನ್ನಡಿ ಸಾಕ್ಷಿಯಾಗಿತ್ತು.

✍️... ಅನಿತಾ ಜಿ.ಕೆ.ಭಟ್.
24-02-2022.
#ಪ್ರತಿಲಿಪಿಕನ್ನಡ ದೈನಿಕಕಥೆ
#ವಿಷಯ ನಿಲುಗನ್ನಡಿ


ಅಣ್ಣನ ಚೀಲ #ಸಹೋದ್ಯೋಗಿ

 


#ಅಣ್ಣನ ಚೀಲ

         ಬೆಳಗ್ಗೆ ತಾನೇ ತಿಂಡಿ ತಯಾರಿಸಿಕೊಂಡು ತಿಂದು ಹೊರಡಲನುವಾದ ಮುರಾರಿ. ವಾರದಲ್ಲೆರಡು ದಿನ ಇದೇ ರೂಢಿ. ಪತ್ನಿ ಮಾಲಾ ಮಕ್ಕಳಿಬ್ಬರನ್ನು ಬೆಳಗ್ಗೆ ಬೇಗನೆ ಎಬ್ಬಿಸಿ ಸ್ಕೇಟಿಂಗ್ ಕ್ಲಾಸಿಗೆ ವಾರದಲ್ಲೆರಡು ದಿನ  ಕರೆದೊಯ್ಯುವುದರಿಂದ ಆ ದಿನಗಳಲ್ಲಿ ಮುರಾರಿಯೇ ಬೆಳಗಿನ ತಿಂಡಿ ತಯಾರಿಸುವುದು ಅವರು ಅನುಸರಿಸಿಕೊಂಡು ಬಂದಂತಹ ಹೊಂದಾಣಿಕೆಯ ಪದ್ಧತಿ. ಪತ್ನಿ ಮಾಡಿಟ್ಟಿದ್ದ ಉದ್ದಿನ ದೋಸೆ ಹಿಟ್ಟಿನಿಂದ ತನಗೂ, ಪತ್ನಿ, ಮಕ್ಕಳಿಗೂ ತಕ್ಕಷ್ಟು ದೋಸೆ ಎರೆದು ತೆಂಗಿನಕಾಯಿ ಚಟ್ನಿ ತಯಾರಿಸಿದ. ತನಗೆ ಬೇಕಾದಷ್ಟು ತಿಂದು ಉಳಿದ ದೋಸೆ ಹಾಟ್ ಬಾಕ್ಸ್ ನಲ್ಲಿ ಹಾಕಿಟ್ಟ. ಆಗಲೇ ಮಾಲಾ ಮತ್ತು ಮಕ್ಕಳು ಆಗಮಿಸಿದರು. "ಅಪ್ಪಾ.. ಇವತ್ತು ನಾವು ಬರುವುದು ಸ್ವಲ್ಪ ತಡವಾಯಿತು. ಸ್ಕೂಲ್ ಬಸ್ ಹೋಗೋ ಸಮಯ ಆಯ್ತು. ಸ್ವಲ್ಪ ಇರಿ.. ಈಗ ಬರ್ತೀವಿ.. ಸ್ಕೂಲ್ ಗೆ ಡ್ರಾಪ್ ಮಾಡಿ.." ಎಂದಾಗ ಇಲ್ಲವೆನ್ನಲಾಗದೆ ಮಕ್ಕಳಿಗೆ ತಟ್ಟೆ ಇಟ್ಟು ಚಟ್ನಿ ದೋಸೆ ಬಡಿಸಿದ. ಗಡಿಬಿಡಿಯಲ್ಲಿ ತಿಂದು ಕೈತೊಳೆದು ಹೊರಟರು ಮಕ್ಕಳು. ಅವರನ್ನು ಶಾಲೆಗೆ ಡ್ರಾಪ್ ಮಾಡುತ್ತಿದ್ದಂತೆ ಫೋನ್ ಕರೆ ಬಂತು. ಕರೆ ಸ್ವೀಕರಿಸಿದ. " ಹಲೋ ಮುರಾರಿ.. ಹೇಗಿದ್ದೀಯಪ್ಪಾ.. ಇವತ್ತು ಆಫೀಸಿಗೆ ಬರ್ತೀ ತಾನೇ..?"
"ಹೂಂ ಅಣ್ಣಾ.. ಇನ್ನೇನು ಹತ್ತು ನಿಮಿಷಕ್ಕೇ ತಲುಪುತ್ತೇನೆ.."
"ಸರಿ.. ಇಲ್ಲಿ ನಿಮ್ಮತ್ತಿಗೆ ಅದೇನೋ ತಿಂಡಿ ತೀರ್ಥ ಎಂದೆಲ್ಲ ನಿನಗೆಂದು ತುಂಬಿಸುತ್ತಿದ್ದಾಳೆ ಚೀಲದಲ್ಲಿ.. ಅದಕ್ಕೆ ಒಂದು ಮಾತು ನಿನ್ನನ್ನು ಕೇಳಿಯೇ ತರುತ್ತೇನೆ ಎಂದು ಕರೆ ಮಾಡಿದೆ. ಮಾಲಾ ಮತ್ತು ಮಕ್ಕಳು ಚೆನ್ನಾಗಿದ್ದಾರಾ...?"

"ಹೂಂ ಅಣ್ಣಾ.. ಎಲ್ಲರೂ ಆರೋಗ್ಯದಿಂದಿದ್ದಾರೆ.. ಮನೆ ಕಡೆ ಅಪ್ಪ, ಅತ್ತಿಗೆ, ಮಕ್ಕಳು ಎಲ್ಲಾ ಕ್ಷೇಮ ತಾನೇ..?"
"ಹೌದು ಕಣೋ..ಎಲ್ಲಾ ಆರಾಮ.. ಮತ್ತೆ ಸಿಗೋಣ.."
ಎನ್ನುತ್ತಾ ಫೋನಿಟ್ಟ ಮುರಾರಿಯ ಅಣ್ಣ ರಾಜೇಶ.

      ನಿಜಕ್ಕೂ ನಾನು ಪುಣ್ಯ ಮಾಡಿರಬೇಕು ಇಂತಹ ಅಣ್ಣ ಅತ್ತಿಗೆಯನ್ನು ಪಡೆಯಲು ಎಂದು ಮನತುಂಬಿ ಬಂತು ಮುರಾರಿಗೆ. ಅಮ್ಮ ನಮ್ಮನ್ನು ಅಗಲಿ ಐದು ವರ್ಷಗಳಾದವು. ಆದರೆ ಆ ಪ್ರೀತಿ ಬತ್ತದಂತೆ ನೋಡಿಕೊಂಡವರು ದೇವತೆಯಂತಹ ಅತ್ತಿಗೆ ಮಮತಾ. ಹೆಸರಿಗೆ ತಕ್ಕಂತೆ ಮಮತಾಮಯಿ. ನನ್ನ ತಾಯಿಯ ಒಡನಾಟದಲ್ಲೇ ಅಡುಗೆಯನ್ನು ಕಲಿತವರು, ಬಂಧುಬಾಂಧವರನ್ನು ಉಪಚರಿಸುವ ಪರಿಯನ್ನು ಕಲಿತವರು. ಈಗ ಅಮ್ಮನ ನಂತರ ಅದನ್ನೇ ಮುಂದುವರಿಸುತ್ತಾರೆ. ಚೂರೂ ಪ್ರೀತಿ ಕಾಳಜಿಯಲ್ಲಿ ಲೋಪ ಬಾರದಂತೆ ನಡೆದುಕೊಳ್ಳುವ ಅವರ ನಡೆನುಡಿಗೆ ನಾನೆಂದೋ ತಲೆಬಾಗಿದ್ದೆ.

      ಅಮ್ಮ ಅಂದು ನನಗೆ ಬ್ಯಾಂಕಿನಲ್ಲಿ ಉದ್ಯೋಗ ದೊರೆತಾಗ ಖುಷಿ ಪಟ್ಟಿದ್ದರು. ಆದರೆ ದೂರದೂರದ ಊರುಗಳಿಗೆ ಟ್ರಾನ್ಸ್ಫರ್ ಆಗುತ್ತಿದ್ದಾಗ "ನಮ್ಮೂರಿಗೆ ಯಾವಾಗ ಬರುತ್ತೀ ಕಣೋ?" ಎಂದು ಪದೇ ಪದೇ ಕೇಳುತ್ತಿದ್ದರು. ಆದರೆ ಅಮ್ಮನಿರುವಾಗ ಒಂದೇ ಒಂದು ಬಾರಿ ಕೂಡಾ ನಮ್ಮೂರಿಗೆ ಟ್ರಾನ್ಸ್ಫರ್ ಸಿಗುವ ಭರವಸೆಯೂ ದೊರೆತಿರಲಿಲ್ಲ. ಆದರೆ ಅಮ್ಮ ನಮ್ಮನ್ನಗಲಿ ಎರಡೇ ವರ್ಷದಲ್ಲಿ ಊರಿನ ಸಮೀಪದ ನಗರಕ್ಕೆ ನನಗೆ ವರ್ಗಾವಣೆ ಆಯಿತು. ನನಗೆ ತುಂಬಾ ಸಂತಸವಾಗಿತ್ತು. ಅಣ್ಣ ಅತ್ತಿಗೆ ಖುಷಿಯಿಂದ "ಇನ್ನು ಬಾಡಿಗೆ ಮನೆ ಎಲ್ಲ ಹುಡುಕಲು ಹೋಗಬೇಡ. ಇಲ್ಲೇ ನಮ್ಮ ಜೊತೆಗೆ ಇರು. ಅಮ್ಮನ ಆಸೆಯೂ ಅದೇ ಆಗಿತ್ತು. ಎಲ್ಲರೂ ಜೊತೆಯಲ್ಲಿ ಇರಬೇಕೆಂದು. ಈಗ ಅಮ್ಮನಿಲ್ಲದಿದ್ದರೂ ಅಪ್ಪನಿದ್ದಾರೆ. ಅವರು ಕಂಡು ಖುಷಿಪಡುತ್ತಾರೆ. ಇಲ್ಲಿಯೇ ಜೊತೆಯಲ್ಲಿ ಬದುಕೋಣ." ಎಂದಿದ್ದರು.

        ವಿಷಯ ತಿಳಿದ ಮಾಲಾ ರೊಚ್ಚಿಗೆದ್ದಿದ್ದಳು. "ಏನು ನಿಮ್ಮ ಹಳ್ಳಿಯ ಹಂಚಿನ ಮನೆಯಲ್ಲಿ ನಾನು ಮಕ್ಕಳು ಇರುವುದೇ? ಅದು ನಮ್ಮಿಂದಾಗದು. ನೀವು ಬೇಕಾದರೆ ಅಲ್ಲೇ ಇರಿ. ನಾವು ಶಾಲೆ, ಮಕ್ಕಳ ಸಂಗೀತ, ಸ್ಕೇಟಿಂಗ್, ಕರಾಟೆ, ಡ್ರಾಯಿಂಗ್ ತರಗತಿಗಳಿಗೆ ಹೋಗಲು ಅನುಕೂಲವಾಗುವಂತೆ ಬಾಡಿಗೆ ಮನೆ ನೋಡುತ್ತೇವೆ." ಮಡದಿಯ ಮಾತನ್ನು ಮೀರಲಾಗದೆ, ಅಣ್ಣ ಅತ್ತಿಗೆಯನ್ನೂ ನೋಯಿಸಲಾಗದೆ ಒದ್ದಾಡಿದ್ದ ಮುರಾರಿ. ಕೊನೆಗೂ ಮಾಲಾಳ ಮಾತಿಗೇ ಮನ್ನಣೆ ನೀಡಬೇಕಾಯಿತು.

      ಆಫೀಸಿಗೆ ತಲುಪಿ ಒಂದು ಗಂಟೆಯಲ್ಲಿ ಅಣ್ಣ ರಾಜೇಶ,  ಅತ್ತಿಗೆ ಮಮತಾ ಇಬ್ಬರೂ ಮ್ಯಾನೇಜರ್ ಆಗಿದ್ದ ಮುರಾರಿಯ ಛೇಂಬರಿಗೆ ಆಗಮಿಸಿದರು. ಅಣ್ಣನ ಕೈಯಲ್ಲಿ ದೊಡ್ಡದೊಂದು ಚೀಲವಿತ್ತು. ಅತ್ತಿಗೆಯ ಹೆಗಲಲ್ಲಿ ವ್ಯಾನಿಟಿ ಬ್ಯಾಗಿತ್ತು. ಅದೂ ಇದೂ ಮಾತನಾಡುತ್ತಾ ವ್ಯಾನಿಟಿ ಬ್ಯಾಗಿನಿಂದ ಮೈಸೂರು ಪಾಕ್ ತೆಗೆದುಕೊಟ್ಟರು ಅತ್ತಿಗೆ. ಅಮ್ಮನ ಕೈರುಚಿಯ ಮೈಸೂರು ಪಾಕ್ ನೆನಪಾಯಿತು ಮುರಾರಿಗೆ. ಅತ್ತಿಗೆ ಮಾಡಿದರೂ ಹಾಗೆಯೇ ಇರುತ್ತದೆ. ಆದರೆ ಈಗಲೇ ತಿಂದು ನೋಡುವ ಹಾಗಿಲ್ಲವಲ್ಲ ಎಂಬ ಕಸಿವಿಸಿ ಮುರಾರಿಗೆ. ಅಣ್ಣ "ಈ ಚೀಲವನ್ನು ನೀನು ಹೀಗೇ ತೆಗೆದುಕೊಂಡು ಹೋಗು ಮನೆಗೆ.." ಎಂದರು. ಮಾತುಕತೆಯ ನಂತರ ಅವರನ್ನು ಬೀಳ್ಕೊಟ್ಟ ಮುರಾರಿ.

            ಬ್ಯಾಂಕಿನಲ್ಲಿ ಕ್ಲರ್ಕ್ ಆಗಿದ್ದ ಸುನಂದಾ ಯಾವುದೋ ವಿಷಯವನ್ನು ಚರ್ಚಿಸಲೆಂದು ಮ್ಯಾನೇಜರಿನ ಛೇಂಬರಿನೊಳಗೆ ಬಂದಳು. ಮಾತಾನಾಡಿದ ನಂತರ "ಸರ್.. ಆ ಚೀಲ ಭಾರೀ ದೊಡ್ಡದಿದೆ. ಏನು ತಂದಿದ್ದಾರೆ ನಿಮ್ಮಣ್ಣ?" ಎಂದು ಕೇಳಿಯೇ ಬಿಟ್ಟಳು.
"ಹಾಂ.. ಹಾಗೇನಿಲ್ಲ. ಹಳ್ಳಿಯಿಂದ ಬರುವಾಗ ತಾವು ಬೆಳೆದ ತರಕಾರಿ ಹಣ್ಣು ತಂದಿರಬಹುದು.."
ಸ್ವಲ್ಪ ಬಾಗಿದಳು ಸುನಂದಾ..
"ಸರ್.. ಉಪ್ಪಿನಕಾಯಿ ಬಾಟಲಿ.."
"ಹೂಂ.. ನಮ್ಮತ್ತಿಗೆಯ ಕೈಯಲ್ಲಿ ತಯಾರಾಗಿರೋ ತಾಜಾ ಉಪ್ಪಿನಕಾಯಿ."
"ಸರ್.. ನಾನಿವತ್ತು ಬರೀ ಊಟ ತಂದಿದೀನಿ. ನೆಂಚಿಕೊಳ್ಳೋದಕ್ಕೆ ಸ್ವಲ್ಪ ಉಪ್ಪಿನಕಾಯಿ ನಂಗೂ ಕೊಡ್ತೀರಾ..?" ಇಲ್ಲವೆನ್ನಲಾಗದೆ ಮುರಾರಿ "ಹೂಂ.." ಎಂದ.
ಮಧ್ಯಾಹ್ನದ ವೇಳೆಗೆ ಉಪ್ಪಿನಕಾಯಿ ಬಾಟಲಿ ಹೊರತೆಗೆಯಲೇ ಬೇಕಾಯಿತು. ಕ್ಷಣಮಾತ್ರದಲ್ಲಿ ಎಲ್ಲರೂ "ನನಗೆ ಸ್ವಲ್ಪ.. ನನಗೆ ಸ್ವಲ್ಪ.." ಅನ್ನುತ್ತಾ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಬಾಟಲಿ ಅರ್ಧ ಖಾಲಿಯಾಗಿಬಿಟ್ಟಿತು. "ವಾವ್...ನೀವು ಅದೃಷ್ಟವಂತರು. ನಿಮ್ಮತ್ತಿಗೆಯ ಕೈ ರುಚಿ ತುಂಬಾ ಚೆನ್ನಾಗಿದೆ." ಎಂದು ಹೊಗಳಿದ್ದೇ ಹೊಗಳಿದ್ದು. ಊಟವಾದ ಬಳಿಕವೂ ಕೈಯನ್ನು ಆಗಾಗ ಮೂಗಿಗೆ ಹಿಡಿದು ಆಹಾ ಮಾವಿನಕಾಯಿಯ ಪರಿಮಳ ಎನ್ನುತ್ತಿದ್ದರು.

    ಮುಂದಿನ ಸಲ ರಾಜೇಶ ಬ್ಯಾಂಕಿಗೆ ಬಂದಾಗ ಸಹೋದ್ಯೋಗಿಗಳೇ "ಬನ್ನಿ ಸರ್.. ಬನ್ನಿ ಸರ್.." ಎಂದು ಸ್ವಾಗತಿಸಿದ್ದರು. ಕೈಯಲ್ಲೊಂದು ಚೀಲವಿದ್ದುದನ್ನು ಕಂಡು ಇವತ್ತೇನಿರಬಹುದು ಎಂದು ಕುತೂಹಲವೂ ಇತ್ತು. ಅವರು ಮ್ಯಾನೇಜರ್ ಮುರಾರಿಯವರಲ್ಲಿ ಮಾತನಾಡಿ ಹೊರ ಹೋಗುತ್ತಿದ್ದಂತೆ ಕ್ಯಾಷಿಯರ್ ಪರಿಣಿತಾ ಬಂದಿದ್ದಳು. ಮಾತಿನುದ್ದಕ್ಕೂ ಅವಳ ಕಣ್ಣು ಚೀಲದ ಮೇಲಿತ್ತು. ಅದು ಮುರಾರಿಯ ಗಮನಕ್ಕೂ ಬಂತು. "ಸರ್..ಇದೇನು ಬಾಟಲಿಯಲ್ಲಿ.. ಕಳ್ಳಭಟ್ಟಿ ಏನಾದರೂ.."
"ಥೂ.. ಏನ್ ಮೇಡಂ ನೀವು.. ನಾವು ಅಂತಹದ್ದೆಲ್ಲ ತಯಾರಿಸುವುದು ಬಿಡಿ, ಕಣ್ಣೆತ್ತಿಯೂ ನೋಡುವವರಲ್ಲ. ಇದು ಶುದ್ಧ ಜೇನುತುಪ್ಪ.."
"ಹಾಂ.. ಜೇನುತುಪ್ಪ..ವಾವ್.. ನಿಮ್ಮ ಹಳ್ಳಿಯ ಮನೆಯಲ್ಲಿ ಅದೂ ತಯಾರಿಸುತ್ತಾರಾ..?"
"ಹೌದು... ನಮ್ಮಣ್ಣನಿಗೆ ಜೇನುಸಾಕಣೆಯೂ ಗೊತ್ತಿದೆ. ಪ್ರತೀ ವರ್ಷ ಜೇನು ಹುಳುಗಳನ್ನು ಸಾಕಿ ಜೇನುತುಪ್ಪ ಸಂಗ್ರಹಿಸಿ ಮಾರಾಟ ಮಾಡುತ್ತಾನೆ.."
"ಹೋ.. ಹೌದಾ.. ಸರ್.. ಇವತ್ತು ನಾನು ಬುತ್ತಿಗೆ ದೋಸೆ ಮಾತ್ರ ತಂದಿದ್ದೇನೆ. ಸ್ವಲ್ಪ ಜೇನುತುಪ್ಪ ಕೊಟ್ಟರೆ ಅದರಲ್ಲದ್ದಿ ತಿನ್ನುತ್ತೇನೆ.. ಏನೂ ಅಂದುಕೊಳ್ಳಬೇಡಿ ಪ್ಲೀಸ್."
ಅನಿವಾರ್ಯವಾಗಿ ಜೇನುತುಪ್ಪವನ್ನು ಕೂಡಾ ಹಂಚಲೇಬೇಕಾಯಿತು. ಅದೂ ಎಲ್ಲರೂ "ಟೇಸ್ಟ್ ನೋಡುತ್ತೇವೆ.." ಎಂದು ಹೇಳುತ್ತಾ ಒಂದೊಂದೇ ಚಮಚ ತೆಗೆದುಕೊಂಡು ಅರ್ಧಾಂಶ ಖಾಲಿಯಾಗಿ ಬಿಟ್ಟಿತು.

       ಇನ್ನು ಅಣ್ಣನಲ್ಲಿ ಬಾಡಿಗೆ ಮನೆಗೆ ತೆಗೆದುಕೊಂಡು ಹೋಗಲು ಹೇಳಬೇಕು. ಇಲ್ಲಿಗೆ ತಂದರೆ ಹಂಚಿಯೇ ಸಾಕಾಗುತ್ತದೆ ಎಂದುಕೊಂಡ ಮುರಾರಿ. ಅಣ್ಣ ಅತ್ತಿಗೆಯೊಡನೆ ಮಾತನಾಡುವಾಗ ಅದನ್ನು ಪ್ರಸ್ತಾಪಿಸಿದ. "ಆಗಲಿ..." ಎಂದರು ಅಣ್ಣ ಅತ್ತಿಗೆ.

      ಅಂದು ಅತ್ತಿಗೆ ಮಮತಾ ಮಾಲಾಳಿಗೆ ಕರೆಮಾಡಿದರೂ ತೆಗೆಯಲಿಲ್ಲವೆಂದು ಮುರಾರಿಗೆ ಫೋನ್ ಮಾಡಿದರು. "ಸಾರಿ.. ಅತ್ತಿಗೆ.. ಅವಳು ಮಕ್ಕಳನ್ನು ಸ್ಕೇಟಿಂಗ್ ಕಾಂಪಿಟೇಶನ್ ಗೆಂದು ಕರೆದುಕೊಂಡು ಹೋಗಿದ್ದಾಳೆ." ಎಂದ ಮುರಾರಿ.
"ಹಾಗಾದರೆ ಅಣ್ಣ ನಿನ್ನ ಬ್ಯಾಂಕಿಗೇ ಬರಲಿಯಾ" ಕೇಳಿದಾಗ "ಹೂಂ..ಬ್ಯಾಂಕಿಗೆ ಬರಲಿ" ಎಂದು ಹೇಳಿದ ಮುರಾರಿ ತನ್ನ ಕೆಲಸದೊತ್ತಡದಲ್ಲಿ ಮರೆತೇಬಿಟ್ಟ.

        ಎಂದಿನಂತೆ ರಾಜೇಶ್ ಬಂದಾಗ ಕ್ಲಾರ್ಕಿನಿಂದ ಹಿಡಿದು ಕ್ಯಾಷಿಯರ್ ತನಕ ಎಲ್ಲರೂ ಪ್ರೀತಿಯಿಂದ ಮಾತನಾಡಿಸಿದರು. ಮುರಾರಿ ಅರ್ಜೆಂಟ್ ಮೀಟಿಂಗಿನಲ್ಲಿದ್ದ. ಹಾಗಾಗಿ ಚೀಲವನ್ನು ಛೇಂಬರಿನ ಹೊರಗೆ ಇಟ್ಟು ಹೋದರು ರಾಜೇಶ್.
"ಹೂಂ..ಅಡ್ಡಿಲ್ಲ..ನಾವು ಸರ್ ಗೆ ಹೇಳ್ತೀವಿ" ಎಂದಳು ಅಟೆಂಡರ್.

      ಆಫೀಸರ್ ವಾಸುದೇವ್ ಚೀಲದತ್ತ ನೋಡಿ "ಏನೋ ಘಮ ಬಡಿಯುತ್ತಿದೆ" ಎಂದರು. "ಅದೇ ಸರ್ ನನ್ನ ಮೂಗೂ ಆಗದಿಂದ ಅದನ್ನೇ ಹೇಳುತ್ತಿದೆ" ಎಂದಳು ಸುನಂದಾ. ಅಟೆಂಡರ್ ಮೆಲ್ಲಗೆ ಚೀಲವನ್ನು ಸರಿಸಿ ನೋಡಿದಳು. "ವಾವ್.. ಹಲಸಿನ ಹಣ್ಣು.. ಮಲ್ಲಿಗೆ ಹೂವು.."
ಸುನಂದಾ ಪರಿಣಿತಾ ಎಲ್ರೂ "ಹಲಸಿನ ಹಣ್ಣು ಅವರಿಗೇ ಇರಲಿ. ಆ ಮಲ್ಲಿಗೆ ಹೂವು ಕೊಡೇ.."ಎಂದು ದುಂಬಾಲು ಬಿದ್ದರು.
"ಅಯ್ಯೋ ನಂದಲ್ಲ ಮಾರಾಯ್ತಿ.. ಮ್ಯಾನೇಜರಿಂದು" ಎಂದು ಜಾರಿಕೊಂಡಳು ಅಟೆಂಡರ್.

     ಪರಿಣಿತಾ ಚೀಲದತ್ತ ಬಾಗಿ.. "ಏ.. ಮಲ್ಲಿಗೆ ಹೂವೂ ಇದೆ.. ಮೊಗ್ಗು ಬೇರೆನೇ ಇದೆ.. ಹೂವು ಸಂಜೆ ಸರ್ ಮನೆಗೆ ಮುಟ್ಟುವಾಗ ಬಾಡುತ್ತೆ. ಅದನ್ನು ಮಾಲೆ ಹೆಣೆದು ಬಿಡೋಣ.. ಮೊಗ್ಗು ಮಾಲಾ ಮೇಡಂಗಾಯ್ತು.." ಎಂದಾಗ ಸುನಂದಾಳಿಗೂ ಸ್ವಲ್ಪ ಉಮೇದು ಬಂತು.

    "ಯಾವುದಕ್ಕೂ ಮ್ಯಾನೇಜರ್ ಸಾಹೇಬರನ್ನು ಕೇಳದೆ ಮುಟ್ಟಬೇಡಿ" ಎಂದರು ವಾಸುದೇವ್. ಮಲ್ಲಿಗೆ ಕಾಣುತ್ತಿದೆ. ಮಾಲೆ ಹೆಣೆಯಲು ನೂಲು ರೆಡಿಯಾಗಿದೆ. ಆದರೆ ಒಪ್ಪಿಗೆ ಕೇಳುವುದೊಂದೇ ಬಾಕಿ.. ಅಟೆಂಡರ್ ಫೈಲ್ ಗೆ ಸಹಿ ಹಾಕಿಸಲು ಮ್ಯಾನೆಜರಿನ ಛೇಂಬರಿನೊಳಗೆ ಹೋದಾಗ ಅವಳಲ್ಲಿ ಒಪ್ಪಿಗೆ ಕೇಳಲು ಹೇಳಿದರು. ಅವಳೂ ಪ್ರಸ್ತಾಪಿಸಿದಳು. "ಮಲ್ಲಿಗೇನಾ .. ಹೂಂ ತೆಗೆದುಕೊಳ್ಳಿ" ಎಂದಿದ್ದೇ ತಡ.. ಎಲ್ಲರೂ ಮಲ್ಲಿಗೆಯನ್ನು ಹಂಚಿಕೊಂಡರು. ಕ್ಯಾಷಿಯರ್ ಮೇಡಂ ತನ್ನ ಕೌಂಟರಿನಲ್ಲೇ ಮಧ್ಯೆ ಮಧ್ಯೆ ಬಿಡುವು ಮಾಡಿಕೊಂಡು ಹೂ ಮಾಲೆ ಹೆಣೆದು ತನ್ನ ಉದ್ದ ಜಡೆಗೆ ನೇತಾಡಿಸಿ ಖುಷಿಪಟ್ಟರು. ಪರಿಣಿತಾಳ ಪೋನಿ ಟೈಲ್ ಅತ್ತಿತ್ತ ಓಲಾಡುವಾಗ ಮಲ್ಲಿಗೆಯೂ ಓಲಾಡಿ ಘಮ ಬೀರುತ್ತಿತ್ತು.

      ಊಟದ ಸಮಯಕ್ಕೆ ಛೇಂಬರಿನಿಂದ ಹೊರಬಂದ ಮುರಾರಿಗೆ ತನ್ನ ಸಹೋದ್ಯೋಗಿ ಹೆಣ್ಣು ಮಕ್ಕಳ ಮಲ್ಲಿಗೆ ಮಾಲೆಯ ಸಂಭ್ರಮ ಕಂಡು ಹೃದಯ ತುಂಬಿ ಬಂತು. "ನನ್ನ ಮಡದಿ ಮಕ್ಕಳನ್ನು ಸ್ಕೇಟಿಂಗ್ ಕಾಂಪಿಟೇಶನ್ ಗೆಂದು ಕರೆದುಕೊಂಡು ಹೋಗಿರುವುದರಿಂದ ಬರುವುದು ಎರಡು ದಿನವಾಗುತ್ತದೆ. ಈ ಮೊಗ್ಗು ಕೂಡಾ ನಿಮಗೇ ಇರಲಿ" ಎಂದು ಕೊಟ್ಟಾಗ ಅವರ ಮುಖ ಅರಳಿದ್ದು ಕಂಡು ಮಲ್ಲಿಗೆ ಗಿಡ ನೆಟ್ಟು ಸಾಕಿ ಬೆಳೆಸಿದ ಅಮ್ಮ ಅತ್ತಿಗೆಯರನ್ನು ನೆನಪಿಸಿಕೊಂಡ.

"ಸಾರ್ ನಮಗೆ ಏನಿಲ್ವಾ..? ಇದು ಬರೀ ಅನ್ಯಾಯ" ಎಂದರು ವಾಸುದೇವ್..
ಚೀಲದಲ್ಲೇನಿದೆ ಎಂದು ನೋಡಿ ಹಲಸಿನ ಹಣ್ಣನ್ನು ಎಲ್ಲರಿಗೂ ಹಂಚಿದಾಗ ಒಂದೇ ಕುಟಂಬದವರೇನೋ ಎಂಬ ಭಾವನೆ ಮೂಡಿತು ಮುರಾರಿಗೆ..
"ಸರ್.. ಇಷ್ಟೆಲ್ಲಾ ಫಲಭರಿತ ಭೂಮಿಯಿರುವ ನೀವು ನಿಜಕ್ಕೂ ಅದೃಷ್ಟವಂತರು" ಎಂದು ಎಲ್ಲರೂ ಅಂದಾಗ ಮುರಾರಿ ಮಾತ್ರ ಮೂಕನಾಗಿದ್ದ.
ಫಲವತ್ತಾದ ಆಸ್ತಿಯಿದ್ದರೇನು..? ಅದನ್ನು ನಮ್ಮೊಂದಿಗೆ ಅನುಭವಿಸಬೇಕಿದ್ದ ಮಡದಿ ಮಕ್ಕಳಿಗೆ ಭೂಮಿಯೆಂದರೆ ಅಸಡ್ಡೆ. ಮಣ್ಣೆಂದರೆ ಅಲರ್ಜಿ. ತಾಜಾ ಹಣ್ಣುಹಂಪಲುಗಳೆಂದರೆ  ತಾತ್ಸಾರ ಎಂದು ಮನದಲ್ಲೇ ಚಿಂತಿಸಿ ವಿಷಾದದ ನಗೆ ನಕ್ಕ ಮುರಾರಿ.

✍️... ಅನಿತಾ ಜಿ.ಕೆ.ಭಟ್.
18-02-2022.
#ಪ್ರತಿಲಿಪಿಕನ್ನಡ ದೈನಿಕಕಥೆ
#ವಿಷಯ ಸಹೋದ್ಯೋಗಿ


ವರವಾದ ಮಳೆ

 


#ವರವಾದ ಮಳೆ

       "ಅಮ್ಮ ಏನಾದರೊಂದು ಉಪಾಯ ಮಾಡಿ ಈ ಮದುವೆಯನ್ನು ತಪ್ಪಿಸು" ಎಂದು  ಅನುರಾಧಾ ಬೆಳಗ್ಗಿನಿಂದಲೂ ಗೋಳಾಡುತ್ತಿದ್ದಳು. ಸೀತಮ್ಮನವರಿಗೆ ಅವಳ ದೈನ್ಯತೆಯನ್ನು ಕಂಡು ಕರುಳು ಹಿಂಡುತ್ತಿತ್ತು. ತಾವಾದರೂ ಏನು ಮಾಡಲು ಸಾಧ್ಯ? ಎಂದು ಯೋಚಿಸಿದವರಿಗೆ ತಲೆಯೆಲ್ಲ ಸಿಡಿಯುವುದು ಬಿಟ್ಟರೆ ಮತ್ತೇನೂ ಉಪಾಯ ಮೂಡಲಿಲ್ಲ. ನನಗೆ ಅಧಿಕಾರ ಇರುವುದು ಇಷ್ಟೇ ಅಲ್ಲವೇ? ಗಂಡನ ಆಸೆ-ಆಕಾಂಕ್ಷೆಗಳನ್ನು ಪೂರೈಸುವುದು, ಬಯಸಿದ ಸುಖವನ್ನು ಮೊಗೆದು ಮೊಗೆದು ಉಣಬಡಿಸುವುದು, ನವಮಾಸ ಹೊರುವುದು, ಸಾಕಿ ಬೆಳೆಸುವುದು.. ಮತ್ತೆ ಯಾವುದಕ್ಕೂ ನನ್ನನ್ನು ಕೇಳುವುದೂ ಇಲ್ಲ, ನಾನು ಹೇಳುವ ಪ್ರಶ್ನೆಯೂ ಇಲ್ಲ. ನಾನಾಗಿ ಹೇಳಿದರೆ ಕೇಳಿಸಿಕೊಳ್ಳುವ ತಾಳ್ಮೆಯೂ ಇಲ್ಲ, ಕೆಲವೊಮ್ಮೆ ಸಿಡುಕಿನ ಆರ್ಭಟವೇ ಮತ್ತೆ ನಾನು ಕೇಳಬೇಕಾಗುವುದು. ಎನ್ನುತ್ತಾ ಕೈಚೆಲ್ಲಿ ಕುಳಿತಿದ್ದರು ಸೀತಮ್ಮ. "ಎಳೆಯ ಕೂಸಿನ ನೋವನ್ನು ನೀನೇ ಕಡಿಮೆ ಮಾಡು ತಾಯೇ" ಎಂದು ಜಗನ್ಮಾತೆಗೆ ಕೈಮುಗಿದು ಸೆರಗೊಡ್ಡಿ ಬೇಡಿದರು.

          "ಮಧ್ಯಾಹ್ನದ ಊಟಕ್ಕೆ ಅಂದಾಜು ಹತ್ತು ಜನರು ಇರಬಹುದು" ಎಂದು ಹೇಳಿ ತೋಟದತ್ತ ಕೆಲಸದಾಳುಗಳೊಂದಿಗೆ ತೆರಳಿದ್ದರು ಉಮಾಪತಿರಾಯರು. ಒಲ್ಲದ ಮನಸ್ಸಿನಿಂದಲೇ ಅಡುಗೆ ಮಾಡಿದರು ಸೀತಮ್ಮ. ಅಡುಗೆ ಎಂದರೆ ಬರಿ ಒಂದು ಬಗೆಯಲ್ಲ. ಉಮಾಪತಿ ರಾಯರಿಗೆ ಕನಿಷ್ಠ ಮೂರು ಬಗೆಯಾದರೂ ಇರಲೇಬೇಕು. ಹೃದಯ ಹಿಂಡುವ ಯಾತನೆಯಲ್ಲೂ ಸಾಂಬಾರು, ಸಾರು, ಸೆಂಡಿಗೆ, ಪಲ್ಯ, ತಂಬುಳಿ ಇಷ್ಟನ್ನು ತಯಾರಿಸಿದರು. ಊಟದ ಸಮಯಕ್ಕೆ ಉಮಾಪತಿ ರಾಯರ ಇಬ್ಬರು ತಮ್ಮಂದಿರು, ಅವರ ಪತ್ನಿಯರು, ಒಬ್ಬರು ಅಕ್ಕ, ಒಬ್ಬರು ತಂಗಿ ಅವರ ಗಂಡಂದಿರೊಂದಿಗೆ ಬಂದಿದ್ದರು. ಇವರೊಂದಿಗೆ  ಉಮಾಪತಿ ರಾಯರು ನಗುನಗುತ್ತಾ ಮಾತನಾಡಿ ವರನ ವಿಚಾರವನ್ನು ಹೇಳುತ್ತಿರುವಾಗ ಒಳಗಿನಿಂದ ಕೇಳಿಸಿಕೊಳ್ಳುತ್ತಾ ತಮ್ಮ ಸೆರಗಿನ ತುದಿಯಲ್ಲಿ ಕಣ್ಣಂಚನ್ನು ಒರೆಸಿಕೊಳ್ಳುತ್ತಿದ್ದರು ಸೀತಮ್ಮ. ಉಮಾಪತಿ ರಾಯರಿಗೆ ಅದು ಪ್ರತಿಷ್ಠೆ. ಸೀತಮ್ಮನವರಿಗೆ ಅದು ಕರುಳಬಳ್ಳಿಯ ಆಸೆಯನ್ನು ಪೂರೈಸಲಾಗದ ಸಂಕಟ. ತನ್ನ ಸಂಕಟವನ್ನು ಅತ್ತಿಗೆಯಂದಿರಾದರೂ ಅರ್ಥಮಾಡಿಕೊಂಡಾರೇನೋ ಎಂದು ಸೀತಮ್ಮನವರು ಆಶಿಸಿದ್ದು ಸುಳ್ಳಾಗಿತ್ತು. ಉಮಾಪತಿ ರಾಯರ ದೊಡ್ಡ ಅಕ್ಕನಂತೂ  "ಇದು ಸರಿಯಾದ ಸಮಯ.  ನಮ್ಮ ಕಾಲಕ್ಕೆ ಹದಿನಾಲ್ಕು ವರ್ಷಕ್ಕೆ ವಿವಾಹ ಮಾಡಿದರು ನಮ್ಮ ತಂದೆಯವರು. ಈಗ ಅನುರಾಧಳಿಗೆ ಹದಿನಾರನೇ ವಯಸ್ಸು. ಈ ವಯಸ್ಸಿನಲ್ಲಿ ಮದುವೆ ಮಾಡುವುದು ಈಗಿನ ಕಾಲಕ್ಕೆ ಸೂಕ್ತ. ಕಾಲೇಜು ಓದು ಎಂದೆಲ್ಲ ಹೇಳುತ್ತಾ ಯಾರ್ಯಾರೊಂದಿಗೋ  ಓಡಿದರೆ ನಮ್ಮ ಮಾನ ಮರ್ಯಾದೆಯೇ ಹರಾಜು ಆಗುವುದು. ಅಷ್ಟಾಗಿಯೂ ಓದಿ ಕಲಿತು ಮಾಡುವುದೇನಿದೆ...? ಎಷ್ಟು ಓದಿದರೂ ಅಡುಗೆಮಾಡುವುದು, ಕಸ ಮುಸುರೆ ತಿಕ್ಕುವುದು ತಪ್ಪದು ಹೆಣ್ಣಿಗೆ.." ಎಂದು ಇಡೀ ಮನೆಗೆ ಕೇಳುವಂತೆ ಹೇಳುತ್ತಿದ್ದಾಗ ಅನುರಾಧಾಳಿಗಿಂತ ಹೆಚ್ಚು ಸೀತಮ್ಮನವರು ದುಃಖಿಸಿದರು. ತನ್ನ ಅಗಲವಾದ ಶರೀರವನ್ನು ಹಿಡಿಯಷ್ಟಕ್ಕೆ ಕುಗ್ಗಿಸಿಕೊಂಡು ಅವರು ಅಳುತ್ತಿದ್ದರೆ ಅವರ ಮಕ್ಕಳೆಲ್ಲರೂ ಏನೂ ತೋಚದೆ ಪಿಳಿಪಿಳಿ ನೋಡುತ್ತಿದ್ದರು. ಒಬ್ಬ ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ನೋವು ತಿಳಿಯುವುದಿಲ್ಲವೇ ಎಂಬ ಒಂದು ವಾಕ್ಯ ಬಿಟ್ಟು ಮತ್ತೇನನ್ನೂ ಅವರು ಉಸುರಲಿಲ್ಲ.

        ಎರಡನೇ ಅತ್ತಿಗೆ "ನಮ್ಮ ಮನೆ ಹತ್ತಿರ ಒಬ್ಬಳು ಓಡಿ ಹೋಗಿದ್ದಾಳೆ... ಮತ್ತೊಬ್ಬಳು ಕಲಿಯುತ್ತೇನೆ ಎಂದು ಫಾರಿನ್ ಗೆ ತೆರಳಿದವಳು  ವಿವಾಹದ ವಯಸ್ಸು ಮೀರಿದರೂ ಇನ್ನೂ ವಿವಾಹವಾಗಿಲ್ಲ.." ಎನ್ನುತ್ತಾ ನಕಾರಾತ್ಮಕ ಸುದ್ದಿಗಳನ್ನೇ ಉಮಾಪತಿ ರಾಯರ ಕಿವಿಗೆ ತುಂಬಿಸುತ್ತಿದ್ದರು. ಇದನ್ನೆಲ್ಲ ಕೇಳಿ ಸೀತಮ್ಮ ಹಾಗೆಯೇ ಕುಸಿದು ಕುಳಿತರು.

                ******

          ಉಮಾಪತಿ ರಾಯರು ಮತ್ತು ಸೀತಮ್ಮನವರದು ಅರ್ಕುಳದ ಒಂದು ಸಾಂಪ್ರದಾಯಿಕ ಮನೆತನ. ಹಿಂದಿನಿಂದಲೂ ಸಂಪ್ರದಾಯಗಳಿಗೆ ಒತ್ತು ನೀಡುತ್ತಾ ಬಂದ ಮನೆತನ ಕಾಲಕ್ಕೆ ತಕ್ಕಂತೆ ಸ್ವಲ್ಪವೇ ಸ್ವಲ್ಪ ಬದಲಾವಣೆಗೆ ಒಡ್ಡಿಕೊಂಡಿತ್ತು. ಅದೇನೆಂದರೆ ಹಳೆಯ ರೇಡಿಯೋ ಇದ್ದ ಜಾಗದಲ್ಲಿ ಹೊಸ ದೂರದರ್ಶನವೊಂದು ಬಂದು ಕುಳಿತಿತ್ತು. ಹಳೆಯ ಎತ್ತಿನ ಬಂಡಿ ಇದ್ದ ಜಾಗಕ್ಕೆ ಹೊಸದೊಂದು ಜೀಪು ಬಂದು ಸೇರಿತ್ತು. ಹಿಂದಿನ ಕಾಲದ ಏತಗಳು ಪಳೆಯುಳಿಕೆಯಾಗಿ ಹೊಸ ಪಂಪ್ ಸೆಟ್ಟುಗಳು ಬಂದಿದ್ದವು. ಗದ್ದೆಗಳಲ್ಲಿ ಕಬ್ಬುಗಳನ್ನು ಬೆಳೆದು ಗಾಣದಲ್ಲಿ ಹಾಲು ತೆಗೆದು ಬೆಲ್ಲ ತಯಾರಿಸುತ್ತಿದ್ದ  ಪರಿಪಾಠ ಹೋಗಿ ಈಗ ಉಳ್ಳಾಲ ಬೆಲ್ಲವನ್ನು ತರಿಸುವ ಅಭ್ಯಾಸ ರೂಢಿಸಿಕೊಂಡಿದ್ದರು. ನಿಧಾನವಾಗಿ ಒಂದೊಂದೇ ಪದ್ಧತಿಗಳಲ್ಲಿ ಬದಲಾವಣೆಗಳು ಬರುತ್ತಿದ್ದವು.  ಈಗಿನ ಕಾಲಕ್ಕೆ ತಕ್ಕಂತೆ ಸಂಪೂರ್ಣವಾಗಿ ಬದಲಾಗುವ ಮಾತೇ ಇರಲಿಲ್ಲ.

          ಹಿರಿಯೂರಿನ ಸೀತಮ್ಮ ತಮ್ಮ ಹದಿಮೂರನೇ ವಯಸ್ಸಿನಲ್ಲಿ ದೊಡ್ಡವಳಾದಾಗ ಅವರ ಮನೆಯಲ್ಲಿ ಕನ್ಯೆಗೆ ಆರತಿ ಬೆಳಗುವ ಸಮಾರಂಭ ಏರ್ಪಡಿಸಿದ್ದರು. ಇದರ ಸುದ್ದಿ ತಿಳಿದ ಉಮಾಪತಿ ರಾಯರ ತಂದೆಯೇ ತಮ್ಮ ಮಗನ ಸಲುವಾಗಿ ವಿವಾಹ ಪ್ರಸ್ತಾಪವನ್ನಿಟ್ಟರು. ಉಮಾಪತಿ ರಾಯರಿಗೆ ಮೂವತ್ತು ವರ್ಷ ವಯಸ್ಸು. ಆಗಿನ ಕಾಲಕ್ಕೆ ಗಟ್ಟಿ ಕುಳವಾಗಿದ್ದ ಅರ್ಕುಳ ಮನೆತನಕ್ಕೆ ಹಿಂದೆ ಮುಂದೆ ನೋಡದೆ ಸೀತಮ್ಮನವರನ್ನು ಮದುವೆ ಮಾಡಿಕೊಡಲಾಗಿತ್ತು. ದೊಡ್ಡ ಮನೆತನ, ಮನೆತುಂಬ ಜನ, ಹಿರಿಯ ಸೊಸೆ ಸೀತಮ್ಮ. ಉಮಾಪತಿ ರಾಯರ ಅಕ್ಕ ತಂಗಿಯರೆಲ್ಲ ಹದಿಮೂರು ಹದಿನಾಲ್ಕನೇ ವಯಸ್ಸಿಗೆ ಮದುವೆಯಾಗಿ ಪತಿಯ ಮನೆಗೆ ತೆರಳಿದ್ದರು.  ಉಮಾಪತಿ ರಾಯರು ಹಾಗೂ ಅವರ ಅಜ್ಜ, ಅಜ್ಜಿ, ತಂದೆ, ತಾಯಿ, ತಮ್ಮಂದಿರು, ಅವರ ಕುಟುಂಬ ಒಟ್ಟಿಗೆ ಬಾಳುತ್ತಿದ್ದರು.

       ಮೇಲ್ನೋಟಕ್ಕೆ ಇವರದು ಅನ್ಯೋನ್ಯ ದಾಂಪತ್ಯವಾಗಿದ್ದರೂ ಪರಸ್ಪರ ಅನುರಾಗ, ಅರ್ಥಮಾಡಿಕೊಂಡದ್ದು ಕಡಿಮೆಯೇ. ಉಮಾಪತಿ ರಾಯರ ಸಿಟ್ಟಿಗೆ ಭಯ ಬೀಳುತಿದ್ದರು ಸೀತಮ್ಮ. ವಯಸ್ಸಿನಲ್ಲಿಯೂ ಸಾಕಷ್ಟು ಹಿರಿಯರಾಗಿದ್ದ ಕಾರಣ ಪರಸ್ಪರ ಆಲೋಚನೆಗಳು ಒಂದಕ್ಕೊಂದು ಹೊಂದಿಕೊಳ್ಳುತ್ತಿರಲಿಲ್ಲ. ಸೀತಮ್ಮನವರ ಎಳೆಯ ವಯಸ್ಸಿನ ಆಸೆ ಬೇಡಿಕೆಗಳು ಉಮಾಪತಿರಾಯರಿಗೆ ಅರ್ಥವಾಗುತ್ತಿರಲಿಲ್ಲ.
ಮದುವೆಯಾದ ಮರು ವರ್ಷಕ್ಕೇ ಹುಟ್ಟಿದ ಮಗ ಧನಂಜಯ. ಮತ್ತೆರಡು ವರ್ಷದಲ್ಲಿ ಹುಟ್ಟಿದವಳು ಅನುರಾಧ. ಮತ್ತೆ ಎರಡು ಮೂರು ವರ್ಷದಲ್ಲಿ ಒಂದು ಗಂಡು ಎರಡು ಹೆಣ್ಣು ಮಕ್ಕಳು ಜನಿಸಿದರು. ಆಗಾಗ ಗರ್ಭಪಾತವಾಗಿದ್ದೂ ಇದೆ.
ಸೀತಮ್ಮನವರಿಗೆ ಎಲ್ಲವೂ ಇದ್ದರೂ ಏನೋ ಕಳೆದುಕೊಂಡಂತಹ ಭಾವ ಸದಾ ಕಾಡುತ್ತಿತ್ತು.

         ಅನುರಾಧಾ ಹತ್ತನೇ ತರಗತಿ ಮುಗಿಸಿ ಮನೆಯ ಸಮೀಪದಲ್ಲಿದ್ದ ಕಾಲೇಜಿಗೆ ತೆರಳುತ್ತಿದ್ದಳು. ಆಕೆ ಕಲಿಯುವುದರಲ್ಲಿ ಮುಂದೆ. ಚಿತ್ರಕಲೆ, ಸಂಗೀತ, ನೃತ್ಯ, ರಂಗೋಲಿ ಬಿಡಿಸುವುದು.. ಇತ್ಯಾದಿಗಳಲ್ಲಿ ಅವಳದು ಎತ್ತಿದ ಕೈ. ಪ್ರತಿ ವರ್ಷ ಶಾಲೆಯ ವಾರ್ಷಿಕೋತ್ಸವದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದಳು. ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿ. ಮುಂದೆ ನೀನು ಏನಾಗಬೇಕು ಎಂದು ಕೇಳಿದರೆ ಆಕೆ "ನಾನು ಸಂಗೀತದಲ್ಲಿ ಏನಾದರೂ ಸಾಧನೆ ಮಾಡಬೇಕು, ವಿಜ್ಞಾನ ಶಿಕ್ಷಕಿಯಾಗಿ ಬೇಕು.." ಎಂದು ಹೇಳುತ್ತಿದ್ದಳು. ಆದರೆ ಆಕೆಯ ಸಂಗೀತ ಸಾಧನೆಗೆ ಎಳ್ಳಷ್ಟೂ ಪ್ರೋತ್ಸಾಹ ಮನೆಯಲ್ಲಿರಲಿಲ್ಲ. ಉಮಾಪತಿ ರಾಯರಿಗೆ ಹೆಣ್ಣುಮಕ್ಕಳು ಎಲ್ಲರೆದುರು ಹಾಡುತ್ತಾ ಕುಳಿತರೆ ಆಗದು. ಕೆಂಡದಂತಹ ಸಿಟ್ಟು. ಒಮ್ಮೆಯಂತೂ ಅನುರಾಧಾ ಸ್ಪರ್ಧೆಗೆಂದು ಹಾಡೊಂದನ್ನು ಅಭ್ಯಾಸ ಮಾಡುತ್ತಿದ್ದಾಗ ನಾಗರ ಬೆತ್ತ ಹಿಡಿದು ಬಂದಿದ್ದರು. ಅದೇ ಕೊನೆ. ಮತ್ತೆ ಅವಳೆಂದೂ ಮನೆಯಲ್ಲಿ ಅಭ್ಯಾಸವೇ ಮಾಡುತ್ತಿರಲಿಲ್ಲ. ಅವಳ ಹಾಡಿನ ಅಭ್ಯಾಸ ಏನಿದ್ದರೂ ಶಾಲೆಯಲ್ಲಿ ಮಾತ್ರ.

            ಫೆಬ್ರವರಿ ತಿಂಗಳ ಮೊದಲನೆಯ ವಾರ. ಉಮಾಪತಿ ರಾಯರು ಸೀತಮ್ಮನವರನ್ನು ಕರೆದು "ಇವತ್ತು ನಮ್ಮ ಮನೆಗೆ ಶಾಸ್ತ್ರಿಗಳು ಬರುವವರಿದ್ದಾರೆ. ವಿಶೇಷ ಅಡುಗೆ ಮಾಡು" ಎಂದಿದ್ದರು. ಶಾಸ್ತ್ರಿಗಳು ಬರುವ ವಿಚಾರ ಏನಿದೆ? ಎಂದು ಯೋಚಿಸುತ್ತಿದ್ದಾಗ ಸೀತಮ್ಮನವರಿಗೆ ಏನೂ ಹೊಳೆದಿರಲಿಲ್ಲ. ಉಮಾಪತಿ ರಾಯರು ತಾವೇ ಜೀಪು ಕೊಂಡೊಯ್ದು ಶಾಸ್ತ್ರಿಗಳನ್ನು ಮನೆಗೆ ಕರೆತಂದಿದ್ದರು. ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತು. ಅವರಿಗೆ ಕೈ ಕಾಲು ಮುಖ ತೊಳೆಯಲು ನೀರು ಕೊಟ್ಟು, ಕುಡಿಯಲು ನೀರು ಕೊಟ್ಟರು, ಬಾಯಾರಿಕೆಗೆಂದು ಚಹಾ ಮಾಡಲು ಒಳಗೆ ತೆರಳಿದಾಗ "ನನಗೆ ಬರಿ ಮಜ್ಜಿಗೆ ನೀರು ಸಾಕು ಸೀತಮ್ಮ" ಎಂದಿದ್ದರು.. ಮಜ್ಜಿಗೆ ನೀರು ಕೊಟ್ಟು ಇನ್ನೇನು ಅಡುಗೆಗಳಿಗೆ ಒಗ್ಗರಣೆ ಹಾಕಬೇಕೆಂದು ಒಳಹೋದರು ಸೀತಮ್ಮ.

        ಸೀತಮ್ಮ ಒಗ್ಗರಣೆ ಹಾಕುತ್ತಿದ್ದಾರೆ. ಉಮಾಪತಿ ರಾಯರು ಅನುರಾಧಾಳ ಜಾತಕವನ್ನು ಶಾಸ್ತ್ರಿಗಳ ಮುಂದಿಟ್ಟಿದ್ದಾರೆ. ಶಾಸ್ತ್ರಿಗಳು ಜಾತಕ ನೋಡುತ್ತಾ "ಈಗ ಈ ಕನ್ಯೆಗೆ ಹದಿನಾರನೇ ವಯಸ್ಸು ನಡೆಯುತ್ತಿದೆ. ಇದು ಇವಳಿಗೆ ವಿವಾಹಯೋಗ್ಯ ಕಾಲ. ಈ ತಿಂಗಳಿನ ಕೊನೆಯವರೆಗೆ ಈಕೆಗೆ ಕಂಕಣ ಬಲವಿದೆ. ಈಗ ವಿವಾಹವಾಗಬೇಕು. ಇಲ್ಲವೆಂದಾದರೆ ಮತ್ತೆ ಆಕೆಗೆ ಕಂಕಣ ಬಲವಿರುವುದು ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ. ಆಗಲೂ ಹಲವು ಗ್ರಹ ದೋಷಗಳಿವೆ. ವಿವಾಹಕ್ಕೆ ಸಂಕಷ್ಟ ಎದುರಾಗಬಹುದು. ಅಥವಾ ಯಾರದಾದರೂ ಜೊತೆ ಪ್ರೇಮ ವಿವಾಹವಾಗುವ ಆಲೋಚನೆಯನ್ನು ಮಾಡಬಹುದು."
ಇದನ್ನು ಕೇಳಿದ ಉಮಾಪತಿ ರಾಯರು "ಈಗಲೇ ವಿವಾಹ ಮಾಡೋಣ" ಎಂದು ಸನ್ನದ್ಧರಾದರು.. ಇದನ್ನು ಕೇಳಿಸಿಕೊಂಡ ಸೀತಮ್ಮನವರ ತಲೆ ಒಗ್ಗರಣೆಯ ಸಾಸಿವೆಯಂತೆಯೇ ಚಟಪಟ ಸಿಡಿಯಲಾರಂಭಿಸಿತು, ರೋಷವು ಕುದಿಯಲು ಆರಂಭವಾಯಿತು. ಎಷ್ಟೊಂದು ಕನಸು ಕಂಡಿದ್ದು ಪಾಪ ಆ ಕೂಸು.. ಇವಕ್ಕೆಲ್ಲ ಎಂತಾದರೂ ಬುದ್ಧಿ ಇದೆಯಾ.. ಅಲ್ಲ ಹೆಣ್ಣು ಮಗು ಅಂದ್ರೆ ಏನು ಗ್ರಹಿಸಿದ್ದು ಇವರೆಲ್ಲ.. ಬರಿಯ ಸೇವೆಗಷ್ಟೇ ಸೀಮಿತವಾ.. ಆಕೆಗೂ ಒಂದು ಮನಸ್ಸಿದೆ ಅನ್ನೋದು ಮರೆತೇ ಹೋಗಿದೆಯಾ.. ಸಿಟ್ಟು ನೆತ್ತಿಗೇರಿತು. ಆದರೆ ಯಾರೊಂದಿಗೂ ತೋರಿಸುವ ಹಾಗಿರಲಿಲ್ಲ.

        ಉಮಾಪತಿರಾಯರು ಅಲ್ಲಿಂದಲೇ ಕೂಗಿದರು "ಏ..ಸೀತಾ.. ಊಟಕ್ಕೆ ಇಡು.."
ಸೀತಮ್ಮ ಒಗ್ಗರಣೆ  ಸಟ್ಟುಗವನ್ನು ಕುಕ್ಕುತ್ತಾ 'ಊಟ ವಂತೆ ಊಟ..! ಕೆಲವು ದಿನ ಕಳೆದು ಮದುವೆಯಂತೆ.. ಏನು ಮದುವೆ ಎಂದರೆ ಆಟವಾ.. ಹೆಣ್ಣಿನ ಬಾಳೆಂದರೆ ಇವರಿಗೆ ಎಷ್ಟು ಅಲ್ಪ..' ಎಂದುಕೊಳ್ಳುತ್ತಿರುವಾಗಲೇ ಉಮಾಪತಿ ರಾಯರು ಶಾಸ್ತ್ರಿಗಳನ್ನು ಊಟದ ಪಡಸಾಲೆಗೆ ಕರೆದುಕೊಂಡು ಬಂದರು. ಮನೆಯ ಹಿಂದಿನ ನಳ್ಳಿಯಲ್ಲಿ ಕೈ ತೊಳೆದು ಬಂದು ಊಟಕ್ಕೆ ಕುಳಿತರು. ಸೀತಮ್ಮ ಎಲ್ಲ ಬಗೆಯನ್ನು ಅಚ್ಚುಕಟ್ಟಾಗಿ ಬಡಿಸಿದರು. ಅವರ ಮುಖದಲ್ಲಿ ನಗುವಿರಲಿ.. ಬಾಯಿಮಾತಿನ ಉಪಚಾರವೂ ಇರಲಿಲ್ಲ.. ಒಡಲಬೇಗೆ ಅವರನ್ನು ಸುಡುತ್ತಿತ್ತು..

ಊಟ ಮಾಡಿ ಕವಳ ಬಾಯಿಗೆ ಹಾಕಿಕೊಂಡು ಊರ ಹರಟೆ ಕೊಚ್ಚಿದರು ಇಬ್ಬರೂ. ಅರ್ಧಗಂಟೆಯ  ಸಣ್ಣದೊಂದು ನಿದ್ದೆ ತೆಗೆದರು. ಎದ್ದು ಬಂದ ಶಾಸ್ತ್ರಿಗಳು ತಟ್ಟನೆ ಏನೋ ನೆನಪಾದಂತೆ... "ನನಗೆ ಇತ್ತೀಚೆಗೆ ಯಾರೋ ಒಬ್ಬರು ಒಬ್ಬ ಹುಡುಗನ ಜಾತಕ ಕೊಟ್ಟು ಹೋಗಿದ್ದರು. ಹೇಗೂ ನಿಮ್ಮ ಮಗಳಿಗೆ ಒಂದು ತಿಂಗಳೊಳಗೆ ವಿವಾಹವೂ ಆಗಬೇಕಲ್ಲ. ಜಾತಕ ಸರಿಹೊಂದುವುದೋ ಎಂದು ನೋಡಬಹುದು.." ಎಂದು ಹೇಳಿದಾಗ ಉಮಾಪತಿ ರಾಯರು ಆ ಬಗ್ಗೆ ವಿಚಾರಿಸಿಕೊಂಡರು.. ವಿಷಯ ಎಲ್ಲವನ್ನೂ ತಿಳಿದುಕೊಂಡಾಗ "ಸರಿ ಹಾಗಾದರೆ.. ಇಬ್ಬರ ಜಾತಕ ಎಷ್ಟರಮಟ್ಟಿಗೆ ಹೊಂದಾಣಿಕೆಯಾಗುತ್ತದೆ ನೋಡೋಣ" ಎಂದೇ ಬಿಟ್ಟರು.

           ಶಾಸ್ತ್ರಿಗಳು ತಮ್ಮ ದೊಡ್ಡದಾದ ಬಟ್ಟೆಯ ಚೀಲದಲ್ಲಿ ಆ ಹುಡುಗನ ಜಾತಕವನ್ನು ಅರಸಿದರು. ಆ ಜಾತಕವನ್ನು ತೆಗೆದು ಇಬ್ಬರ ಜಾತಕವನ್ನು ಹೋಲಿಕೆ ನೋಡುತ್ತಿದ್ದರು. ಜಾತಕದೊಂದಿಗೆ ಒಂದು ಫೋಟೋ ಕೂಡ ಇತ್ತು. ಅದನ್ನು ಎತ್ತಿ ಪಕ್ಕದಲ್ಲಿ ಇರಿಸಿದ್ದರು. ಚಹಾ ಕೊಡಲು ಬಂದ ಸೀತಮ್ಮನವರಿಗೆ ಅದು ಕಾಣಿಸಿತ್ತು. ನೋಡಲು ಮೂವತ್ತು ವರ್ಷ ಮೀರಿದವರ ತರಹ ಇದ್ದಾನೆ. ನೆತ್ತಿಯ ಮೇಲೆ ಕೂದಲುಗಳು ಉದುರಿ ಹೋಗುತ್ತಿವೆ.. ನೋಡುವುದಕ್ಕೂ ಅಷ್ಟೇನೂ ಯೋಗ್ಯನಲ್ಲ.. ಅಂತಹವನಿಗೆ ನಮ್ಮ ಚೆಲುವೆ, ಚುರುಕುಮತಿ ಅನುರಾಧಾಳನ್ನು ಈಗಲೇ ಕೊಟ್ಟು ಬಿಡಬೇಕೇ.. ಮದುವೆ ಮಾಡಿ ಮುಗಿಸಬೇಕು ಎಂಬ ಆತುರವಾದರೂ ಯಾಕೋ.." ಎಂದುಕೊಳ್ಳುತ್ತಲೇ  ಚಹಾವನ್ನು ಅಲ್ಲಿಟ್ಟು ತೆರಳಿದರು.

           "ಜಾತಕ ಬಹಳ ಚೆನ್ನಾಗಿ ಕೂಡಿಬರುತ್ತಿದೆ. ಇನ್ನೆರಡು ದಿನಗಳಲ್ಲಿ ವರನ ಕಡೆಯವರನ್ನು ವಧುಪರೀಕ್ಷೆಗೆಂದು ಕರೆದುಕೊಂಡು ಬರುತ್ತೇನೆ" ಎಂದು ಹೇಳಿದ ಶಾಸ್ತ್ರಿಗಳು ಹೊರಟು ನಿಂತಿದ್ದರು. ಅಂದಿನಿಂದ ಸೀತಮ್ಮನವರ ವೇದನೆ ಹೇಳತೀರದು. ಮಾತಿಲ್ಲದೆ ಮೂಕರಾಗಿದ್ದರು. ಎಲ್ಲವನ್ನೂ ನೋಡುತ್ತಿದ್ದರೂ ನಿರ್ಭಾವುಕ ವ್ಯಕ್ತಿಯಂತೆ ಉಮಾಪತಿರಾಯರು ತನ್ನ ಹಠವೇ ನಡೆಯಬೇಕು ಎಂಬಂತೆ ವರ್ತಿಸುತ್ತಿದ್ದರು. ವಿಷಯ ತಿಳಿದ ಅನುರಾಧಳ ಮನದ ನೋವನ್ನು ಬಣ್ಣಿಸಲು ಸಾಧ್ಯವಿಲ್ಲ. ಒಮ್ಮೆ "ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಹೊರಟಿದ್ದಳು. ಸೀತಮ್ಮ "ಏನಾದರಾಗಲಿ ಮಗಳೇ.. ಆತ್ಮಹತ್ಯೆ ಒಂದು ಮಾಡಿಕೊಳ್ಳಬೇಡ.. ನೋಡೋಣ ಏನಾದರೂ ಅನುಕೂಲ ಆಗಬಹುದು. ಇಲ್ಲದಿದ್ದರೆ ಬಂದ ಜೀವನವನ್ನೇ ಎದುರಿಸಿ ಧೈರ್ಯದಿಂದ ಬದುಕು.. ಈಗ ನಾನು ಬದುಕುತ್ತಿಲ್ಲವೇ.." ಎಂದು ಸಮಾಧಾನಿಸಿದರು. ಓರಗೆಯ ಗೆಳತಿಯರನ್ನೆಲ್ಲಾ ನೋಡಿ, ಅವರ ಮನೆಯಲ್ಲಿ ದೊರೆಯುವ ಸ್ವಾತಂತ್ರ್ಯವನ್ನು ಕಂಡು ''ನಾನು ಕಡುಬಡವರ ಮನೆಯಲ್ಲಿ ಜನಿಸಿದರೂ ತೊಂದರೆ ಇರುತ್ತಿರಲಿಲ್ಲ.. ಇಂತಹ ಹಠಮಾರಿ ಸಾಂಪ್ರದಾಯಿಕ ಮನೆತನದಲ್ಲಿ ಹುಟ್ಟುವುದರಿಂದ.. ಇಲ್ಲಿ ನನ್ನ ಕನಸುಗಳಿಗೆಲ್ಲ ಕೊಳ್ಳಿ ಇಡುತ್ತಿದ್ದಾರೆ..'' ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.. ಬೆಳ್ಳಗಿನ ಹುಡುಗಿಯ ಮುಖವಿಡೀ ಅತ್ತು ಅತ್ತು.. ಕೆಂಪಾಗಿತ್ತು ಕಣ್ಣುಗಳಿಂದ ನೀರೇ ಬತ್ತಿಹೋಗಿತ್ತು..

               *****

"ಸಂಜೆ ನಾಲ್ಕು ಗಂಟೆಗೆ ಅವರೆಲ್ಲಾ ಬರುತ್ತಿದ್ದಾರೆ. ಅನುರಾಧ ಸೀರೆ ಉಟ್ಟು ತಯಾರಾಗಲಿ.. ಅವರಿಗೆ ಉಪ್ಪಿಟ್ಟು ಅವಲಕ್ಕಿ ಕ್ಷೀರ ಕಾಫಿ ಚಹಾ ಎಲ್ಲ ತಯಾರು ಮಾಡಿಡು..'' ಎಂದು ಹೇಳಿ ಹೊರ ಹೋಗಿದ್ದರು ಉಮಾಪತಿ ರಾಯರು. ತನ್ನದೇ ಹಳೆಯ ಸೀರೆಯನ್ನು ತೆಗೆದು ಮಗಳಿಗೆ ಉಡಿಸಲು ಹೊರಟ ಸೀತಮ್ಮನವರ ಕೈ ನಡುಗುತ್ತಿತ್ತು. ಹದಿನೆಂಟುವರ್ಷ ಆಗಬೇಕು ಮದುವೆಗೆ ಎಂದು ಕಾನೂನು ಇದೆ. ಆದರೆ ಇಂತಹ ಹಠಮಾರಿಗಳು ಕಾನೂನಿಗೂ ತಲೆಬಾಗುವುದಿಲ್ಲವಲ್ಲ.. ಎಂದು ಕೊರಗುತ್ತಿದ್ದರು. ಮನಸ್ಸಿಲ್ಲದೇ ಸೀರೆಯುಟ್ಟ ಅನುರಾಧಾ ಬಾಡಿದ ಮೊಗ್ಗಿನಂತೆ ಕಾಣುತ್ತಿದ್ದಳು. ಅವಳಲ್ಲಿ ಎಂದಿನಂತೆ ಲವಲವಿಕೆ ಇರಲಿಲ್ಲ.

           ನಾಲ್ಕು ಗಂಟೆಯಾಗುತ್ತಿದ್ದಂತೆ ಉಮಾಪತಿ ರಾಯರು ಪಂಚೆಯನ್ನು ಆಗಾಗ ಎತ್ತಿಕಟ್ಟುತ್ತಾ ಒಳಗಿನ ಪಡಸಾಲೆಗೊಮ್ಮೆ ಹೊರಗಿನ ಹಜಾರಕ್ಕೆ ಒಮ್ಮೆ ಅತ್ತಿಂದ ಇತ್ತ ಸಾಗುತ್ತಿದ್ದರು. ಬಾನಂಚಿನಲ್ಲಿ ಒಮ್ಮೆಲೆ ಕಾರ್ಮೋಡ ಆವರಿಸಿತು. ತಂಗಾಳಿ ಬೀಸಲಾರಂಭಿಸಿತು. "ಎಲ್ಲೋ ಮಳೆ ಬಂದಿರಬೇಕು" ಎಂದು ನೆರೆದಿದ್ದವರೆಲ್ಲ ಕುಳಿತು ಮಾತನಾಡಿಕೊಂಡರು. ಗುಡುಗು ಮಿಂಚಿನ ಅರ್ಭಟವೂ ಕೇಳಿಬಂತು. ಕೆಲವೇ ಕ್ಷಣದಲ್ಲಿ ಧೋ.. ಎಂದು ಮಳೆ ಸುರಿಯಲು ಆರಂಬಿಸಿತು.. "ಈ ಹೊತ್ತಿನಲ್ಲಿ ಮಳೆ ಬರಬೇಕಾ?.. ವರನ ಕಡೆಯವರಿಗೆ ಬರಲು ರಗಳೆ"  ಎಂದು ಚಿಂತಿಸುತ್ತಿದ್ದರು ಉಮಾಪತಿ ರಾಯರು.. ಸಂಜೆ ಐದೂವರೆಯವರೆಗೂ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ವರನ ಕಡೆಯವರ ಪತ್ತೆಯೇ ಇರಲಿಲ್ಲ. ಬಂದವರೆಲ್ಲಾ "ಇವರನ್ನು ಇವತ್ತು ಕಾಣುವುದಿಲ್ಲ" ಎಂದು ಹೊರಡಲಾರಂಭಿಸಿದವು.

      
          ಉಮಾಪತಿರಾಯರಿಗೆ ಯಾಕೆ ಬರಲಿಲ್ಲ ಎಂಬ ಯೋಚನೆ ಕಾಡಿತು.. ರಾತ್ರಿಯಾದರೂ ವರನ ಕಡೆಯವರು ಮಾತ್ರ ಆಗಮಿಸಲಿಲ್ಲ. ಒಂದು ವಾರದ ಬಳಿಕ ಶಾಸ್ತ್ರಿಗಳ ಕಡೆಯಿಂದ ಪತ್ರವೊಂದು ಬಂದಿತ್ತು.. ಒಕ್ಕಣೆ ಹೀಗಿತ್ತು..

         ಉಮಾಪತಿ ರಾಯರಿಗೆ ಶಾಸ್ತ್ರಿಗಳ ಕಡೆಯಿಂದ ನಮಸ್ಕಾರಗಳು.. ನಾವೆಲ್ಲರೂ ಕ್ಷೇಮ. ನೀವೂ ಕ್ಷೇಮವೆಂದು ಭಾವಿಸುತ್ತೇನೆ. ಮೊನ್ನೆ ತಮ್ಮ ಮಗಳ ವಧುಪರೀಕ್ಷೆಗೆಂದು ವರನ ಕಡೆಯವರನ್ನು  ಕರೆದುಕೊಂಡು ಬರುವುದಾಗಿ ತಿಳಿಸಿದ್ದೆ. ಆದರೆ ಆ ದಿನ ವರನ ಕಡೆಯವರು ಹೊರಡುವ ಸಮಯದಲ್ಲಿ ವಿಪರೀತ ಗುಡುಗು-ಮಿಂಚಿನ ಮಳೆಯಾಗಿದ್ದರಿಂದ... ಅವರ ಮನೆಯ ಸಮೀಪದ ನದಿಯ ಸೇತುವೆಯು ಒಂದೆರಡು ಗಂಟೆಯಲ್ಲೇ ನೀರಿನಲ್ಲಿ ಮುಳುಗುವ ಸಾಧ್ಯತೆಯಿದ್ದಿದ್ದು, ಅವರು ಬಂದರೆ ವಾಪಸ್ ಮನೆ ಸೇರುವುದು ಅಸಾಧ್ಯವಾಗಿತ್ತು. ಆದ್ದರಿಂದ ಆ ದಿನ ಬರಲಾಗಲಿಲ್ಲ. ಬೇರೆ ದಿನ ಬನ್ನಿ ಎಂದು ಕೋರಿಕೊಂಡೆ. ಆದರೆ ಮೊದಲ ಬಾರಿಯೇ ವಿಘ್ನ ಎದುರಾದ್ದರಿಂದ ಅವರು ಈ ಸಂಬಂಧವನ್ನು ನಿರಾಕರಿಸಿದರು. ಆದ್ದರಿಂದ ತಮ್ಮ ಮಗಳಿಗೆ ಬೇರೆಯವರನ್ನು ಹುಡುಕಬಹುದು ಎಂದು ಈ ಮೂಲಕ ತಿಳಿಸುತ್ತಿದ್ದೇನೆ..
                         
                      ಇಂತಿ
             ‌         ಶಾಸ್ತ್ರಿಗಳು..

       ಪತ್ರವನ್ನು ಓದುತ್ತಿದ್ದಂತೆಯೇ ಉಮಾಪತಿ ರಾಯರು ಕೋಪಗೊಂಡು ಪತ್ರವನ್ನು ಎರಡು ಚೂರಾಗಿ ಮಾಡಿದರು. ಆಗಿನಿಂದ ಪತಿರಾಯರು ಓದುತ್ತಿದ್ದುದನ್ನು ಕೇಳಿಸಿಕೊಂಡ ಸೀತಮ್ಮನವರು ಹರ್ಷದಿಂದ ಕುಣಿದಾಡಿದರು. "ತಾಯೇ ಜಗನ್ಮಾತೆಯೇ ಇದೆಲ್ಲ ನಿನ್ನ ಮಾಯೆ" ಎಂದು ತಲೆಬಾಗಿದರು..

" ಈ ಫೆಬ್ರವರಿ ತಿಂಗಳ ಕೊನೆಯವರೆಗೆ ಮಾತ್ರ ಆಕೆಗೆ ಕಂಕಣಬಲ ಇರುವುದು ಅಂದರೆ ಇನ್ನು ಮೂರು ವಾರಗಳು ಮಾತ್ರ.. ಈ ಮೂರು ವಾರದಲ್ಲಿ ವಧು ಪರೀಕ್ಷೆ, ನಿಶ್ಚಿತಾರ್ಥ, ಮದುವೆ.. ಅಬ್ಬಬ್ಬಾ ಇದು ಸಾಧ್ಯವೇ ಇಲ್ಲ.. ಏನಿದ್ದರೂ ಮುಂದಿನ ಬಾರಿಗೆ ಕಂಕಣಬಲ ಬಂದಾಗ ವಿಚಾರ ಮಾಡಬೇಕಷ್ಟೇ.." ಎನ್ನುತ್ತಾ ಬಾಯಿಗೆ ಕವಳ ಜಡಿದು ತೋಟದತ್ತ ಸಾಗಿದರು ಉಮಾಪತಿ ರಾಯರು..

      ಸೀತಮ್ಮನವರು ಕಾಲೇಜಿಗೆ ಹೋದ ಮಗಳು ಬರುವಾಗ ಅವಳಿಗೊಂದು ಸಿಹಿ ಮಾಡಿರಬೇಕೆಂದು ಅಡುಗೆ ಮನೆಯತ್ತ ತೆರಳಿದರು.. ಸಿಹಿ ತಿನಿಸಿನೊಂದಿಗೆ ಸಿಹಿಸುದ್ದಿ ಹೇಳಲು ಕಾಯುತ್ತಿದ್ದರು.

                    *****

         ಅನುರಾಧಾ  ನಗರದ ಶಾಲೆಯೊಂದರಲ್ಲಿ ಶಿಕ್ಷಕಿಯಾದಳು. ಪುಟಾಣಿ ಮಕ್ಕಳಿಗೆ ಪಾಠ ಮಾಡುತ್ತಾ, ಹಾಡು ಹೇಳಿಕೊಡುತ್ತಾ, ನೃತ್ಯ ಕಲಿಸುತ್ತಿದ್ದಳು. ಶಿಕ್ಷಕ ಸೇವೆಯಲ್ಲೇ ತನ್ನನ್ನು ತೊಡಗಿಸಿಕೊಳ್ಳುವ ಆಲೋಚನೆ ಮಾಡಿದಳು. ಮಹಿಳಾ ಉದ್ಯೋಗಿಗಳ ವಸತಿಗೃಹದಲ್ಲಿ ವಾಸಮಾಡುತ್ತಿದ್ದ ಅನುರಾಧಾ ಇದರ ಜೊತೆಗೆ ತನ್ನದೇ ಸಂಪಾದನೆಯಿಂದ ಸಂಗೀತಾಭ್ಯಾಸವನ್ನು ಆರಂಭಿಸಿದಳು. ಅಲ್ಲಿ ಆಕೆಗೆ ಯಾವುದೇ ಅಡೆತಡೆ ಇರಲಿಲ್ಲ. ಅವಳದೇ ಕ್ಷೇತ್ರದಲ್ಲಿದ್ದ ಅಧ್ಯಾಪಕರೊಬ್ಬರು ಅವಳ ಚುರುಕುತನವನ್ನು ಮೆಚ್ಚಿಕೊಂಡಿದ್ದು, ಅವರ ಪೋಷಕರು ಉಮಾಪತಿ ರಾಯರ ಮುಂದೆ ಸಂಬಂಧ ಬೆಳೆಸುವ ಮಾತುಗಳನ್ನಾಡಿದ್ದರು. ಶಾಸ್ತ್ರಿಗಳು ಅಂದಂತೆ ಪ್ರೇಮ ವಿವಾಹವೆಂದರೆ ಕದ್ದು ಮುಚ್ಚಿ ಪ್ರೀತಿಸಿ ಓಡಿ ಹೋಗುವುದೇ ಆಗಬೇಕಾಗಿಲ್ಲ.. ಬದಲಾಗಿ ವರನೇ ವಧುವನ್ನು ಮೆಚ್ಚಿ ಕೈಹಿಡಿಯಲು ಮುಂದೆ ಬರುವುದು ಕೂಡ ಆಗಬಹುದು ಎಂಬುದಕ್ಕೆ ಅನುರಾಧಾಳ ಜೀವನವೇ ಉದಾಹರಣೆಯಾಗಿ ನಿಂತಿದೆ.. ಅನುರಾಧಾ, ಸೀತಮ್ಮ, ಮನೆಮಕ್ಕಳೆಲ್ಲರೂ ತುಂಬಾ ಸಂತೋಷದಿಂದ ವಿವಾಹದ ಸಿದ್ಧತೆಯಲ್ಲಿ ತೊಡಗಿದರು. ಅನುರಾಧಾ ನಗುನಗುತ್ತಾ ಪತಿಗೃಹ ಪ್ರವೇಶ ಮಾಡಿದಳು.

✍️... ಅನಿತಾ ಜಿ.ಕೆ.ಭಟ್.
25-02-2022.
#ದೈನಿಕ ವಿಷಯಾಧಾರಿತ ಕಥೆ- ಪ್ರತಿಲಿಪಿ ಕನ್ನಡ
#ಅಕಾಲಿಕ ಮಳೆ


Sunday, 20 February 2022

ನೆಂಪಿರಲಿ ಮಗಳೇ... (ಹವ್ಯಕ ಅಮ್ಮನ ಬುದ್ಧಿಮಾತು)

 


#ನೆಂಪಿರಲಿ ಮಗಳೇ..

ಜೀವನ ಹೇಳಿರೆ ಎಂತರ ಕೂಸೇ
ಅಲ್ಲ ಬರಿ ಆಡಂಬರ ಶೋಕಿ
ಸಿಹಿಕಹಿ ಅನುಭವವ ಸಮವಾಗಿ ಸ್ವೀಕರಿಸಿ
ಹಿಗ್ಗದ್ದೆ ಕುಗ್ಗದ್ದೆ ಬಾಳೆಕ್ಕು ಬದುಕಿ||೧||

ಅಬ್ಬೆ ಅಪ್ಪನ ನೀತಿಯ ಮಾತು
ಕಠೋರ ಕಾಂಬದು ಅಷ್ಟೇ
ಬರಿ ಭಂಡ ಹೊಗಳಿಕೆ ಬಣ್ಣದಮಾತು
ದಾರಿಗೆ ಮುಳ್ಳಕ್ಕು ಕೂಸೇ||೨||

ಕಲ್ತಂಥ ವಿದ್ಯೆ, ಹಿಡಿತಲ್ಲಿ ಬುದ್ಧಿ
ಇದ್ದರೆ ಜೀವನ ಸಾಗುಗು ಚೆಂದ
ಹೂವಿನಹಾಸಿಗೆ ಕಲ್ಲಿನದಾರಿಯೇ ಆಗಲಿ
ಮೆಟ್ಟಿ ನಡೆಯೆಕ್ಕು ಧೈರ್ಯಂದ||೩||

ಹೋಲಿಕೆ ಮಾಡದ್ದೆ ಹೊಂದಾಣಿಕೆಲಿ
ಬದ್ಕೆಕ್ಕು ಗೆಂಡನ ಜತೆಲಿ
ದೀಪದ ಬುಡಲ್ಲೂ ಕಸ್ತಲೆ ಇದ್ದು
ನಡೆಯೆಕ್ಕು ಬೆಣ್ಚಿಯ ಹೊಡೇಲಿ||೪||

ಪೈಸೆಯ ಸಿರಿತನ ಬೆಡಗು ಬಿನ್ನಾಣ
ಶಾಶ್ವತ ಅಲ್ಲ ಮಗಳೇ..
ಗುಣವಂತ ಅಳಿಯ ಬಡವನೇ ಆದರೂ
ಬೆಗರಿಳಿಸಿ ಸವಿಯ ಉಣುಸುಗು ಮಗಳೇ..||೫||

✍️... ಅನಿತಾ ಜಿ.ಕೆ.ಭಟ್.
21-02-2022.
#ವಿಶ್ವ ಮಾತೃಭಾಷೆಯ ದಿನ
#ಹವ್ಯಕಭಾಷಾ ಕವನ

#ಸಾಂದರ್ಭಿಕ ಚಿತ್ರ ಕೃಪೆ ಅಂತರ್ಜಾಲ.


ಒತ್ತಾಯ ಮಾಡೆಡ ಅಮ್ಮ.. ಹವ್ಯಕ ಕೂಸಿನ ರಗಳೆ/ಅರ್ಗೆಂಟು)


#ಒತ್ತಾಯ ಮಾಡೆಡ ಅಮ್ಮ.. (ಹವ್ಯಕ ಕೂಸಿನ ರಗಳೆ/ಅರ್ಗೆಂಟು)

ಒತ್ತಾಯ ಮಾಡೆಡ ಅಮ್ಮ...
ಒತ್ತಾಯ ಮಾಡೆಡ ಅಮ್ಮ...
ಅಮ್ಮಾ ಎನಗೀಗಲೆ ಮದುವೆ ಬೇಡ
ಅಪ್ಪಯ್ಯ ಕಾಲಿಗೆ ಬೀಳ್ತೆ ಆನೀಗ ಮದುವೆ ಆವ್ತಿಲ್ಲೆ..||

ರೂಪತ್ತೆಯನೋಡ್ಲೆ ಹದಿನೈದು ಮಾಣ್ಯಂಗ ಬೈಂದವಡ
ಉಪ್ಪಿಟ್ಟವಲಕ್ಕಿಕ್ಷೀರ ಗಮ್ಮತ್ತು ಹೊಡದ್ದವಡ
ಇಲ್ಲದ್ದ ಕೊರತೆ ಹುಡ್ಕಿ ಕೂಸು ಬೇಡ ಹೇಳಿದ್ದವಡ
ಅವ್ರ ಮಾಣಿಯ ಕೊರತೆ ಅವಕ್ಕೆ ಕಾಣ್ತೇ ಇಲ್ಲೆಡ||೧||

ಒತ್ತಾಯ ಮಾಡೆಡ ಅಮ್ಮ ಎನಗೀಗ ಮದುವೆ ಬೇಡ
ಅಪ್ಪಯ್ಯ ಕಾಲಿಗೆ ಬೀಳ್ತೆ ಆನೀಗ ಮದುವೆ ಆವ್ತಿಲ್ಲೆ||

ಆಚಮನೆ ಶಾರಕ್ಕನ ಮಗಳಿಂಗೆ ಮದುವೆ ಆಯಿದಲ್ದಾ
ಗೆಂಡನ ಮನೆಲಿ ಹತ್ತೆಕ್ರೆ ತೋಟ ಇದ್ದಡ
ಕೆಲಸಕ್ಕೆಲ್ಲಾ ಆಳುಕಾಳು ತುಂಬಾ ಇದ್ದವಡ
ಮಾವ ಮಾತ್ರ ಆಸ್ತಿಯೆಲ್ಲಾ ಪೇಟೆಲಿಪ್ಪ ಮಗಂಗೆ ಬರೆತ್ತೆ ಹೇಳ್ತನಡ
ಹುಳ್ಕುನ್ಯಾಯಂದ ಕೂಸಿಂಗೆ ನಿದ್ದೆ ಬತ್ತಿಲ್ಲೆಡ..
ನಿತ್ಯ ನಿದ್ದೆ ಬತ್ತಿಲ್ಲೆಡ||೨||

ಒತ್ತಾಯ ಮಾಡೆಡ ಅಮ್ಮ.. ಎನಗೀಗ ಮದುವೆ ಬೇಡ
ಕೃಷಿಕ ಮಾಣಿಯಂತೂ.. ಎನಗೆ ಬೇಡವೇ ಬೇಡ||

ಎನ್ನ ಫ್ರೆಂಡು ಸಹನಂಗೆ ಬೆಂಗ್ಳೂರ್ ಮಾಣಿ ಸಿಕ್ಕಿದ್ದ
ಕೈ ತುಂಬಾ ಕಾಂಚಾಣ ಅರಮನೇಲಿ ಮೆರೆಸಿದ್ದ
ಹಗಲು ಇರುಳು ಕೆಲಸ ಹೇಳಿ ಒದ್ದಾಡ್ತಾಡ
ಗಂಡಹೆಂಡ್ತಿ ಸರಿಬರದೆ ಡೈವೋರ್ಸ್ ಆಗ್ತವಡ
ಮನೆ ಹಣ ಮಕ್ಳು..ಎಲ್ಲಾ ಪಾಲು ಮಾಡ್ತ್ವಡಾ||೩||

ಒತ್ತಾಯ ಮಾಡೆಡ ಅಮ್ಮ.. ಎನಗೀಗ ಮದುವೆ ಬೇಡ
ಅಪ್ಪಯ್ಯ ಕಾಲಿಗೆ ಬೀಳ್ತೆ.. ಆನೀಗ ಮದುವೆ ಆವ್ತಿಲ್ಲೆ||

ಬೊಡ್ಡಿ ಸಂಧ್ಯಾ ಮದುವೆಯಾಗಿ ಕಡ್ಡಿಯಾಗ್ಹೋಯ್ದು
ಅತ್ತೆ ನಾದ್ನಿ ಕಾಟಕೊಟ್ಟು ಬದ್ಕೇ ಬರಡಾಯ್ದು
ಅಪ್ಪಮ್ಮನ ದೂರಿದ್ರಂತೂ ಕಿವುಡಿ ಆವ್ತಡ
ಎದುರಾಡಿದ್ರೆ ಗುರಿಯಿಸೋ ಗಂಡ ಅವ್ನಡ
ವರ್ಷಕ್ಕೊಂದ್ರಿ ಅಪ್ಪನ್ಮನೆಗೆ ಬಂದ್ರೆ ಹೆಚ್ಚಡ||೪||

ಇದರೆಲ್ಲ ನೋಡಿದ್ಮೇಲೆ... ಆನು ಮದುವೆ ಆವ್ತಿಲ್ಲೆ
ಅಪ್ಪಮ್ಮ ಇಲ್ಕೇಳಿ.. ಆನೀಗ ಮದುವೆ ಆವ್ತಿಲ್ಲೆ||

ಹತ್ತಾರು ಕಡೇಲಿ ಜಾತ್ಕ ಕೊಟ್ಟೆ ಅಪ್ಪಯ್ಯ
ಜಾತ್ಕ ಸರಿ ಇಲ್ಲೇಳಿ ಕೇಳಿ ಕೇಳಿ ಸಾಕಾತಪ್ಪಯ್ಯ
ಮಾಣಿ ಜಾತ್ಕಲ್ಲಿ ತೊಂದ್ರೆ ಗಿಂದ್ರೆ ಏನೂ ಇರ್ತಿಲ್ಯಾ
ಮಾಣಿಗುದೇ ಅಕ್ಕತಂಗಿ ಆರೂ ಇರ್ತವಿಲ್ಯಾ??||೫||

ಅಪ್ಪಮ್ಮ ಇಲ್ಕೇಳಿ... ಆನು ಮದುವೆ ಆವ್ತಿಲ್ಲೆ
ಆನ್ಯಾವ ಮಾಣೀಗೂ ಕಮ್ಮೀಯಿಲ್ಲೆ||

ಒಳ್ಳೆ ವಿದ್ಯೆ ಉದ್ಯೋಗ ಇದ್ದು ಅಷ್ಟೇ ಸಾಕೆನಗೆ
ನೆಮ್ಮದಿಂದ ಬದುಕ್ತಾ ಇರ್ತೆ ಕೆಲವರ್ಷ ಹೀಂಗೆ
ಅಪ್ಪಮ್ಮನ ಜವಾಬ್ದಾರಿ ಹೆಗಲಲ್ಹೊತ್ಗೊಂಡು
ಹಾಯಾಗಿರ್ತೆ ಎನ್ನಷ್ಟಕ್ಕೇ ದುಡ್ದು ತಿಂದ್ಗೊಂಡು||೬||

ಅಪ್ಪಮ್ಮ ಇಲ್ಕೇಳಿ... ಆನೀಗ ಮದುವೆ ಆವ್ತಿಲ್ಲೆ..
ಆನ್ಯಾವ ಮಾಣೀಗೂ ಕಮ್ಮೀಯಿಲ್ಲೆ...||

ಒತ್ತಾಯ ಮಾಡೆಡ ಅಮ್ಮ..
ಒತ್ತಾಯ ಮಾಡೆಡ ಅಮ್ಮ..
ಅಮ್ಮ ಎನಗೀಗಲೆ ಮದುವೆ ಬೇಡ..
ಅಪ್ಪಯ್ಯ ಕಾಲಿಗೆ ಬೀಳ್ತೆ ಆನೀಗ ಮದುವೆ ಆವ್ತಿಲ್ಲೆ..||

✍️... ಅನಿತಾ ಜಿ.ಕೆ.ಭಟ್.

#ಸಾಂದರ್ಭಿಕ ಚಿತ್ರ ಕೃಪೆ ಅಂತರ್ಜಾಲ.

#ವಿಶ್ವ ಮಾತೃಭಾಷೆಯ ದಿನ
#ಹವ್ಯಕ ಭಾಷಾ ಕವನ(ಎರಡು ವರ್ಷಗಳ ಹಿಂದೆ ಬರೆದಿಟ್ಟದ್ದು, ಇತ್ತೀಚೆಗೆ ಹಳೆ ಡೈರಿಯಲ್ಲಿ ಸಿಕ್ಕಿದ್ದು..)
#ಗಂಭೀರವಾಗಿ ಪರಿಗಣಿಸದಿರಿ...


Sunday, 13 February 2022

ಮುಂಜಾನೆ ಮುತ್ತೈದೆ #ಪ್ರದಕ್ಷಿಣೆ

 



#ಮುಂಜಾನೆ ಮುತ್ತೈದೆ

ಹೊತ್ತಾರೆ ಎದ್ದು ಮುತ್ತೈದೆ ಸಿರಿದೇವಿ
ನೆತ್ತಿಯ ಮೇಲೆ ನೀರೆರೆದು| ಮಡಿಯುಟ್ಟು
ಒತ್ತುವಳು ಹಣೆಮೇಲೆ ಕುಂಕುಮವ||೧||

ಶಿರವಸ್ತ್ರದಿ ನೀಳವೇಣಿಯ ಬಿಗಿದು
ಸರಸರನೆ ನಡೆದು ದೀಪವ| ಬೆಳಗಿ
ಕರಮುಗಿದು ಒಳಿತನು ಬೇಡುವಳು||೨||

ಹೊಸ್ತಿಲ ಮುಂದೆ ಶುಚಿಯನು ಮಾಡಿ
ಶಿಸ್ತಿಲಿ ರಂಗೋಲಿ ಬರೆದು| ಬಣ್ಣವ ತುಂಬಿ
ಕಸ್ತೂರಿಕಡ್ಡಿಲಿ ಆರತಿ ಬೆಳಗುವಳು||೩||

ಮನೆಯ ಮುಂದಿರುವ ಶ್ರೀ ತುಳಸಿಮಾತೆಗೆ
ವಿನಯದಿ ಪ್ರದಕ್ಷಿಣೆ ಗೈಯುತ| ಜಲವೆರೆದು
ಮನಸಾರೆ ಶ್ರೀಹರಿಯ ನಮಿಸುವಳು||೪||

✍️... ಅನಿತಾ ಜಿ.ಕೆ.ಭಟ್.
14-02-2022.

#ಪ್ರತಿಲಿಪಿ ಕನ್ನಡ ದೈನಿಕ ವಿಷಯಾಧಾರಿತ ಕವನ
#ವಿಷಯ: ಪ್ರದಕ್ಷಿಣೆ

ಒಲವೆಂದರೆ....

 




#ಒಲವೆಂದರೆ...

ಕತ್ತಲೆಯ ಕೂಪದಲಿ ಬೆಳಕಿನ
ಕಂದೀಲಲ್ಲವೇ ಒಲವು
ಪ್ರತಿಕ್ಷಣವು ಮಿಡಿವ ತುಡಿವ
ಹೃದಯದ ಭಾವವೇ ಒಲವು...||೧||

ಜಗವೆಲ್ಲ ಇರಿದರೂ ಬಾಚಿತಬ್ಬುವ
ಆ ತೋಳಲ್ಲವೇ ಒಲವು
ಮನದ ತೊಳಲಾಟದಲಿ ಭರವಸೆಯ
ಚಿಲುಮೆಯೇ ಒಲವು...||೨||

ಸೋತರೂ ಗೆದ್ದರೂ ಸಮನಾಗಿ
ಬೆನ್ನುತಟ್ಟುವುದಲ್ಲವೇ ಒಲವು
ಸುಖದಪಲ್ಲಂಗದಲಿ ಸುಧೆಯಾಗಿ
ಹರಿಯುವುದೇ ಒಲವು...||೩||

ಮಾತಿನಲಿ ಅರಳದ ಪುಟಗಳ
ತೆರೆದು ಓದುವುದಲ್ಲವೇ ಒಲವು
ಕಣ್ಣಸನ್ನೆಯಲಿ ಉಲಿದು ಉಲ್ಲಾಸವ
ಬಿತ್ತುವುದೇ ಒಲವು...||೪||

ಬಾಳತಿರುವಲಿ ಜೊತೆನಿಲುವ
ದೃಢಚಿತ್ತವಲ್ಲವೇ ಒಲವು
ಕೇಳದೆಯೇ ದೇವ ನೀಡುವ
ಸುಂದರ ಭಿಕ್ಷೆಯೇ ಒಲವು...||೫||

✍️... ಅನಿತಾ ಜಿ.ಕೆ.ಭಟ್.

Monday, 7 February 2022

ವಿಶೇಷ ಅಭಿಮಾನಿ

 



      ಅಂದು ಚುಮುಚುಮು ಚಳಿಯನ್ನು ಲೆಕ್ಕಿಸದೆ ಬೇಗನೆ ಎದ್ದಿದ್ದೆ.. ಅದೆಂತಹ ಹುರುಪು ಈ ಚಳಿಗಾಲದಲ್ಲೂ ಅಂತೀರಾ..? ಹೌದು ಈ ಹೆಣ್ಣುಮಕ್ಕಳು ಒಂಥರಾ ವಿಚಿತ್ರ. ಅದರಲ್ಲೂ ವಿವಾಹಿತ ಮಹಿಳೆಯರು ಮತ್ತೂ ವಿಚಿತ್ರ. ಅವರ ನಡತೆ ಎಲ್ಲಿ ಯಾವಾಗ ಹೇಗೆ ಎಂದು ಊಹಿಸುವುದು ಕಷ್ಟ. ಹಾಗೆಯೇ ನಾನೂ ಕೂಡಾ. ದಿನಕ್ಕೆ ಒಂದೆರಡು ಬಗೆ ತಿಂಡಿ ಅನ್ನ ಸಾಂಬಾರು ಮಾಡುವಲ್ಲಿ ಬೇಸತ್ತು ಹೋಗುವ ನಾನು, ಅಂದು ಮಾಡಿದ್ದು ಮನೆಯ ನಾಲ್ಕು ಮಂದಿ ಸದಸ್ಯರಿಗೆ ನಾಲ್ಕು ವಿಧದ ತಿಂಡಿ. ಸಾಂಬಾರು ಚಟ್ನಿ.. ವಿಶೇಷವೇನಿಲ್ಲ.. ಯಾರೂ ಕೂಡಾ ನನಗೆ ಅದು ಮೆಚ್ಚಲ್ಲ, ಇದು ಇಷ್ಟವಾಗಿಲ್ಲ, ನಾನು ತಿನ್ನಲಾರೆ ಎಂದೆಲ್ಲ ಹಠ ಹಿಡಿದು ನನ್ನ ಹೊರಡುವ ಉತ್ಸಾಹಕ್ಕೆ ತಣ್ಣೀರೆರಚುವುದು ಬೇಡವೆಂದು ನಿರ್ಧರಿಸಿ, ಇಷ್ಟೆಲ್ಲಾ ಬೇಯಿಸಿ ಡೈನಿಂಗ್ ಟೇಬಲ್ ಮೇಲೆ ಜೋಡಿಸಿಟ್ಟೆ.

      ಇಷ್ಟೆಲ್ಲಾ ಭಯಂಕರ ತಯಾರಿ ಮಾಡಿ ಏನು ಟ್ರಿಪ್ ಹೋಗ್ತಾರೆ ಅಂದುಕೊಂಡಿರಾ ಇಲ್ಲ.. ಪಿಕ್ ನಿಕ್ ಹೋಗೋದಾ ಅಲ್ಲ.. ಅಲ್ಲವೇ ಅಲ್ಲ.. ನನ್ನ ತವರ ಕಡೆಯ ವಿವಾಹವೊಂದಕ್ಕೆ ಹೋಗುವ ತಯಾರಿ ಅಷ್ಟೇ. ಕೊರೋನಾದ ಕಾರಣದಿಂದ ತವರ ಕಡೆಯ ಬಂಧುಗಳನ್ನು ಕಾಣದೆ ವರುಷವೆರಡು ಕಳೆದಿತ್ತು. ಈ ಮದುವೆಯ ನೆಪದಲ್ಲಾದರೂ ಎಲ್ಲರನ್ನೂ ನೋಡಿ ಮಾತನಾಡಿ ಬರಬಹುದೆಂಬ ಸಣ್ಣ ಆಸೆ. ಮದುವೆ ಇದ್ದುದು ದೇವಾಲಯದ ಪಕ್ಕದ ಮಂಟಪದಲ್ಲಿ ಆದ್ದರಿಂದ ಬೆಳಗ್ಗೇ ತಲೆಗೆ ಸ್ನಾನ ಮಾಡಿ ಕೂದಲು ಒಣಗಲು ಬಿಟ್ಟಿದ್ದೆ.

      ನನ್ನ ಈ ಸಂಭ್ರಮದ ಕ್ಷಣಕ್ಕೆ ಕಾಟ ಕೊಡಲೆಂದೇ ಗಂಟಲು ಗೊರ ಗೊರ ಎನ್ನುತ್ತಾ ಹಣೆ ಬಿಸಿಯೇರಿತ್ತು. ಮದುವೆಗೆ ಹೋಗುವ ಮಾರ್ಗದಲ್ಲಿ ವೈದ್ಯರ ಕ್ಲಿನಿಕ್ ಗೆ ಭೇಟಿ ಕೊಡುವ ಎಂಬ ಪತಿಯ ಮಾತನ್ನು ಸರಾಸಾಗಾಟಾಗಿ ತಳ್ಳಿ ಹಾಕಿದೆ. ಏಕೆಂದರೆ ನನ್ನ ದುರಾದೃಷ್ಟಕ್ಕೆ ಎಲ್ಲಿಯಾದರೂ ಇಂತಹಾ ಪರಿಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದರೆ... ನನ್ನ ಆಸೆಯೆಲ್ಲ ಠುಸ್ ಆದೀತು. ಅದಕ್ಕಿಂತ ಹೆಚ್ಚಾಗಿ ಕಳೆದ ತಿಂಗಳು ತವರ ಕಡೆಯ ವಿವಾಹವೊಂದರಲ್ಲಿ ಅನಾನುಕೂಲದಿಂದ ಭಾಗವಹಿಸದಿದ್ದುದು ಭಾರೀ ವಿವಾದ ಹುಟ್ಟಿಸಿತ್ತು. "ನೀವೆಲ್ಲ ಹೊರಡುತ್ತಿರಿ. ನಾನು ಬೇಗ ಡಾಕ್ಟರ್ ಕ್ಲಿನಿಕ್ ಗೆ ಹೋಗಿ ಚೆಕಪ್ ಮಾಡಿಸಿ ಔಷಧವನ್ನು ತರುತ್ತೇನೆ" ಎಂದು ಚೂಡಿದಾರ್ ಸಿಕ್ಕಿಸಿಕೊಂಡು ಹೊರಟೇ ಬಿಟ್ಟೆ.. ಪತಿರಾಯ.." ಏ.. ನಿಲ್ಲು ಮಾರಾಯ್ತಿ.. ಎಂತ ಅವಸರ ನಿಂಗೆ.. ಇವತ್ತು ನಾನು ಮನೇಲಿದ್ದೇನೆ.. ಕರ್ಕೊಂಡು ಹೋಗ್ತೇನೆ" ಎಂದರೂ ಕೇಳದೆ ಚಪ್ಪಲಿ ಮೆಟ್ಟಿ ಗೇಟು ದಾಟಿ ಸಾಗಿದ್ದೆ.

        ಇನ್ನೂ ಬಾಗಿಲು ತೆರೆಯದ ಕ್ಲಿನಿಕ್ ನ ಮುಂದೆ ನಿಂತು ಕಾದೆ. ನನ್ನ ಜೊತೆ ಇನ್ನಿಬ್ಬರೂ ಸರತಿಯಲ್ಲಿ ಸೇರಿಕೊಂಡರು. ವೈದ್ಯರಿಗೆ ಬೆಳಗ್ಗೆಯೇ  ಗಿರಾಕಿಯಾಗಿ ಮದ್ದಿನೊಂದಿಗೆ ಮನೆಸೇರಿದೆ. "ಇಷ್ಟು ಬೇಗ ಬಂದ್ಯಾ.. ವೈದ್ಯರು ಇಷ್ಟು ಬೇಗ ಕ್ಲಿನಿಕ್ ಓಪನ್ ಮಾಡ್ತಾರಾ.. ಕ್ಯೂ ಇರಲಿಲ್ಲವಾ.." ಎಂಬೆಲ್ಲ ಪ್ರಶ್ನೆಗಳಿಗೆ "ಉತ್ತರಿಸಲು ಸಮಯವಿಲ್ಲ" ಎಂದು ಹೇಳಿ ಹತ್ತೇ ನಿಮಿಷದಲ್ಲಿ ಹೊರಟು ತಯಾರಾದೆ.

      ಅಂತೂ ಇಂತೂ ಹನ್ನೊಂದು ಗಂಟೆಗೆ ಶ್ರೀ ರಾಮನ ದೇವಾಲಯದ ಆವರಣವನ್ನು ತಲುಪಿದೆವು. ನನ್ನ ಪಾಲಿಗೆ ಅದು ಭಕ್ತಿಭಾವದ ವಾತಾವರಣ. ಶ್ರೀ ರಾಮನ ಪರಮ ಪವಿತ್ರ ಮಠ. ಸುಮಾರು ಮೂವತ್ತು ವರುಷಗಳ ಕೆಳಗೆ ಲಂಗ ದಾವಣಿ ತೊಟ್ಟು, ಎರಡು ಜಡೆ ಹೆಣೆದು ಹಚ್ಚ ಹಸಿರಿನ ಗದ್ದೆಯ ಹುಣಿಯಲ್ಲಿ(ಬದು) ನಡೆಯುತ್ತಾ ನನ್ನ ಅಮ್ಮ, ದೊಡ್ಡಮ್ಮ ಒಡಹುಟ್ಟಿದವರೊಂದಿಗೆ ಮೊತ್ತ ಮೊದಲ ಬಾರಿಗೆ ಆ ಕ್ಷೇತ್ರಕ್ಕೆ ಬಂದಿದ್ದೆ. ತುಂಬು ಸಂಭ್ರಮದಿಂದ ನಲಿದಿದ್ದೆ. ಹಿರಿಯ ಯತಿವರ್ಯರು ಭಾಗವಹಿಸಿದ್ದ ಆ ಕಾರ್ಯಕ್ರಮವು ನಮ್ಮೂರಿನ ಪಾಲಿಗೆ ಐತಿಹಾಸಿಕ ಕಾರ್ಯಕ್ರಮವಾಗಿತ್ತು. ಇನ್ನೂ ಆ ಸಂಭ್ರಮದ ಚಿತ್ರಣಗಳು ಮನಃಪಟಲದಲ್ಲಿ ಅಚ್ಚೊತ್ತಿ ನಿಂತಿವೆ.

     ಈಗ ನನ್ನಿಬ್ಬರು ಮಕ್ಕಳ ನಿಗಾವಹಿಸುತ್ತಾ, ಪತಿಯ ಜೊತೆ ನಡೆಯುತ್ತಾ, ಮೆಲ್ಲನೇ ನಡೆಯುತ್ತಿರುವ ನನ್ನಮ್ಮನ ಕಾಳಜಿ ವಹಿಸುತ್ತಾ ಶ್ರೀರಾಮನಿಗೆ ಪ್ರದಕ್ಷಿಣೆ ಹಾಕಿದೆವು. ಮನದೊಳಗೆ ಹೇಳಲಾರದ ಸಂತೃಪ್ತಿ ಮನೆಮಾಡಿತ್ತು. ಮೂವತ್ತು ವರ್ಷಗಳ ಹಿಂದೆ ನನ್ನ ಕೈ ಹಿಡಿದು ಜೋಪಾನ ಮಾಡಿದ್ದ ಅಮ್ಮ... ಈಗ ನಾನು ಅಮ್ಮನಿಗೆ ಅದೇ ಬೆಚ್ಚನೆಯ ಪ್ರೀತಿಯನ್ನು ಹೊದೆಸುವ ಅನುಪಮ ಕ್ಷಣ...

     ಮುಖದ ಮೇಲಿನ ಮಾಸ್ಕ್ ಸರಿಸದೇ ಸಭಾಂಗಣದಲ್ಲಿ ಆಸೀನರಾದೆವು. ಬಂಧುಗಳನ್ನು ಸ್ವಲ್ಪ ಅಂತರದಿಂದಲೇ ಪ್ರೀತಿಯಿಂದ ಮಾತಾನಾಡಿಸಿದೆವು. ಹರಟಿದೆವು.. ಮಾತನಾಡುತ್ತಲೇ ಬಹುತೇಕರು ತಾವೂ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ತಿಳಿಸಿದರು. ವಿವಾಹ ಮಂಟಪದಿಂದ ಸ್ವಲ್ಪ ದೂರದಲ್ಲಿ ಹಿಂದೆ ನಾನೂ ಪತಿಯೂ ಕುಳಿತೆವು.
ಆಗ ಒಬ್ಬ ಮಹಿಳೆ ನಮ್ಮತ್ತಲೇ ಬಂದರು. ನನ್ನ ಕುರ್ಚಿಯ ಹಿಂದೆ ನಿಂತರು. ನಾನು "ಆರಾಮವಾಗಿದ್ದೀರಾ..?" ಎಂದು ಕೇಳುತ್ತಲೇ ಕ್ಷೇಮ ಸಮಾಚಾರ ವಿಚಾರಿಸಿದೆ. ಒಂದೆರಡು ಮಾತು ಮಾತನಾಡಿದರು.
"ನೀನು ಬರೀತೀಯಂತೆ.. !!"
"ಹೌದು.."
"ಸಂಸ್ಕಾರದ ಬಗ್ಗೆ ಬರೆದಿದ್ದೀಯಂತೆ.."
ನಾನು  ಮೌನಿಯಾದೆ. ಕಳೆದು ಮೂರು ವರ್ಷಗಳಿಂದ ಬರೆಯುತ್ತಿರುವ ನನಗೆ ನನ್ನ ಲೇಖನದ ಶೀರ್ಷಿಕೆ, ಸಾಲುಗಳು, ವಿಷಯವಸ್ತುಗಳು ತಕ್ಷಣವೇ ನೆನಪಿಗೆ ಬರುವುದಿಲ್ಲ.
ಮುಖದ ಮೇಲೊಂದು ವಿಕೃತ ನಗೆ ಮೂಡಿಸಿ,
"ಹೇಳು.. ಸಂಸ್ಕಾರ ಅಂದರೇನು? ಹೇಳು.." ಎಂದರು..
"ನೋಡಿ.. ನಾನು ಯಾವುದಾದರೂ ವಿಷಯ ಕೊಟ್ಟಾಗ, ಸಿಕ್ಕಾಗ ಅದರ ಬಗ್ಗೆ ಏನು ಬರೆಯಬಹುದು ಎಂದು ಯೋಚಿಸಿ ನನಗೆ ತಿಳಿದಂತೆ ಬರೆಯುತ್ತೇನೆಯೇ ಹೊರತು.. ಆ ಬರಹದಲ್ಲಿ ಇರುವುದೆಲ್ಲ ನನ್ನ ವೈಯಕ್ತಿಕ ಜೀವನದ ತತ್ವ ಆದರ್ಶಗಳೇ  ಅಲ್ಲ. ಯಾವ ಬರಹವನ್ನೂ ಕೂಡಾ ವೈಯಕ್ತಿಕವಾಗಿ ಪರಿಗಣಿಸದಿರಿ.." ಎಂದೆ..
ಊಹೂಂ.. ಅವರಿಗೆ ಸಮಾಧಾನವಾಗಲಿಲ್ಲ.
ನನ್ನ ಬೆನ್ನ ಹಿಂದಿನಿಂದ ನನ್ನ ಎಡ ಭುಜದತ್ತ ತಮ್ಮ ಬಲಗೈಯನ್ನು ಮುಂದೆ ಚಾಚಿ, ತೋರು ಬೆರಳನ್ನು ಅಲ್ಲಾಡಿಸುತ್ತಾ, "ಹೇಳು.. ಭಾರೀ ಬರೀತೀಯಂತೆ.. ಭಾರೀ ಗೊತ್ತುಂಟಂತೆ.. ಸಂಸ್ಕಾರ ಅಂದರೇನು..? ಏನು ಗೊತ್ತುಂಟು ನಿನಗೆ ಸಂಸ್ಕಾರದ ಬಗ್ಗೆ ಬರೆಯುವಷ್ಟು.. ?" ಧ್ವನಿ ಏರಿತ್ತು.

      "ಸಂಸ್ಕಾರವೆಂದರೆ ಹಿರಿಯರನ್ನು ಗೌರವಿಸಬೇಕು. ಎಲ್ಲರನ್ನೂ ಮಾನವೀಯ ದೃಷ್ಟಿಯಿಂದ ನೋಡಬೇಕು. ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಿರಿಯರನ್ನೂ ಪ್ರೀತಿಯಿಂದ ಕಾಣಬೇಕು. ಅವರ ಮಾತುಗಳಿಗೂ ಕಿವಿಗೊಡಬೇಕು.." ಎಂದಷ್ಟೇ ಹೇಳಿ ನಿಲ್ಲಿಸಿದೆ.

    ಕಣ್ಣು ದೊಡ್ಡದು ಮಾಡಿ.. "ಹೌದು.. ಇದೆಲ್ಲ ಇದೆಯಾ ನಿನ್ನಲ್ಲಿ..? ಇದೆಲ್ಲಾ ಇದ್ದಿದ್ದರೆ ನೀನು ಹೀಗೆ ಮಾಡುತ್ತಿದ್ದೀಯಾ.. ನಿನ್ನಮ್ಮ ನಿನಗೆ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ ಅಂತ ಬರೆದಿದ್ದೀಯಂತೆ.. ಅವರೇನು ಸಂಸ್ಕಾರ ಕಲಿಸಿದ್ದಾರೆ ನಿನಗೆ.. ಸಂಸ್ಕಾರ ಕಲಿಸಿದ್ದರೆ ತಿಂಗಳ ಹಿಂದೆ ನಡೆದ ನಮ್ಮ ಮಗನ ವಿವಾಹ ಸಮಾರಂಭಕ್ಕೆ ಬಾರದೆ ಇರುತ್ತಿದ್ದೆಯಾ..?" ವಾಗ್ಝರಿ ಹರಿಯುತ್ತಲೇ ಇತ್ತು..

"ಖಂಡಿತಾ ನಿಮ್ಮ ಮಗನ ವಿವಾಹ ಸಮಾರಂಭಕ್ಕೆ ಬರಬೇಕೆಂಬ ಮನಸು ನನಗಿತ್ತು. ಆದರೆ ಅನಿವಾರ್ಯ ವೈಯಕ್ತಿಕ ಕಾರಣಗಳಿಂದ ಬರಲಾಗಲಿಲ್ಲ.. ಹಿಂದಿನ ಕಾರ್ಯಕ್ರಮಗಳಿಗೆಲ್ಲ ಕುಟುಂಬ ಸಮೇತರಾಗಿ ಬಂದಿದ್ದೇವೆ.. ಮುಂದೆಯೂ ಬರುತ್ತೇವೆ.." ಎಂದು ಸಮಾಧಾನದಿಂದಲೇ ಉತ್ತರಿಸಿದೆ..
ಆದರೂ ಆಕೆಗೆ ತೃಪ್ತಿ ಆಗಿಲ್ಲ.

"ಏನು ಕಲಿಸಿದ್ದಾಳೆ ನಿನ್ನ ತಾಯಿ ಸಂಸ್ಕಾರ.. ನಿನ್ನಲ್ಲಿ ತುಂಬಾ ಮಾತನಾಡುವುದಿದೆ ನನಗೆ.. ಕೇಳಿದರೆ ನಿನಗೆ ಕೋಪ ಬರಬಹುದು.. ಆದರೆ ನಾನು ಬಿಡಲಾರೆ.. ನಾನೇನು ನಿನ್ನ ಬರಹವನ್ನು ಯಾವತ್ತೂ ಓದುವುದಿಲ್ಲ. ನನ್ನಲ್ಲಿ ದೊಡ್ಡ ಫೋನಿಲ್ಲ.. ನನ್ನ ಇಬ್ಬರು ಮಗಳಂದಿರು ಓದುತ್ತಾರೆ. ದೊಡ್ಡ ಮಗಳು ಕೇಳಿದಳು.. ಅನಿತಕ್ಕನಿಗೆ ತಂದೆ ತಾಯಿ ಏನು ಸಂಸ್ಕಾರ ಕಲಿಸಿದ್ದಾರೆ ಎಂದು.."
ಎನ್ನುತ್ತಾ ಬೆರಳು ಝಳಪಿಸುತ್ತಿದ್ದರು. ನಾನು ಅಕ್ಷರಶಃ ಕಂಗಾಲಾದೆ.
ಆಕೆ ನಿಲ್ಲಿಸುವ ಲಕ್ಷಣ ಕಾಣಿಸುತ್ತಿಲ್ಲ. ಸುತ್ತಲೂ ಬಹಳಷ್ಟು ಜನ ಬಂಧು ಬಾಂಧವರಿದ್ದಾರೆ. ಅವರೆಲ್ಲರೂ ಗಮನಿಸುವಾಗ ನನಗೆ ಸಂಕೋಚವಾಗುತ್ತಿದೆ. ಆದರೆ ಆಕೆಗೆ ಅದು ಗಮನಕ್ಕೆ ಬರುತ್ತಲೇ ಇಲ್ಲ.

     ಕೊನೆಗೆ ನಾನೇ ಅಂದೆ.. "ನೋಡಿ ನಿಮ್ಮಿಂದ ನಾನು ಸಂಸ್ಕಾರ ಕಲಿಯಬೇಕಾಗಿಲ್ಲ.. ನನಗೆ ನನ್ನ ಹೆತ್ತವರು ಕಲಿಸಿದ ಸಂಸ್ಕಾರ.. ನಾನು ಬದುಕಿನಲ್ಲಿ ಅಳವಡಿಸಿಕೊಂಡ ಸಂಸ್ಕಾರ ಸಾಕು.." ಎಂದೆ..
ನನ್ನ ಹಿಂದಿನಿಂದ ತೆರಳಿ , ಒಂದು ಕುರ್ಚಿಯ ಆಚೆ ಕುಳಿತಿದ್ದ ನನ್ನ ಪತಿಯ ಹಿಂದೆ ನಿಂತರು.
"ಯಾಕೆ ನನ್ನ ಮಗನ ಮದುವೆಗೆ ಬರಲಿಲ್ಲ..?" ಅವರು ನಗುತ್ತಾ ನನ್ನತ್ತ ನೋಡಿದರು. ಅವರಿಗೆ ವ್ಯಾವಹಾರಿಕ ಜಂಜಾಟದಲ್ಲಿ ಅದು ಯಾವಾಗ ಇತ್ತು ಎಂಬುದೇ ಮರೆತುಹೋಗಿತ್ತು.
ಆದರೂ ಆಕೆ ಹೇಳುತ್ತಲೇ ಹೋದರು. ತಕ್ಷಣ ಆ ದಿನದ ಅನಾನುಕೂಲ ನೆನಪಾದ ಪತಿ ಕಾರಣವನ್ನು ಹೇಳಿದರು. ಆದರೂ ಆಕೆ ಬಿಡುವ ಲಕ್ಷಣವಿಲ್ಲ. ನಮ್ಮ ಮನೆಯವರು ಹೇಳಿದ ನೈಜ ಕಾರಣಗಳಿಗೆಲ್ಲ ವಾದಿಸಿ ಎದುರುತ್ತರ ನೀಡಿದ ಆಕೆ ಕೊನೆಗೆ ಬಂದು ನಿಂತದ್ದು ಸಂಸ್ಕಾರ ಶಬ್ದಕ್ಕೆ.
"ನಿನ್ನ ಹೆಂಡತಿ ತಂದೆ ತಾಯಿ ಸಂಸ್ಕಾರ ಕಲಿಸಿದ್ದಾರೆ ಎಂದೆಲ್ಲ ಭಾರೀ ಬರೆಯುತ್ತಾಳಂತೆ.. ಇದೇನಾ ಅವಳ ಸಂಸ್ಕಾರ.. ಇದೇನಾ ಇಷ್ಟು ಕಲಿತ ನಿನ್ನ ಸಂಸ್ಕಾರ.. ನಿನ್ನ ಅತ್ತೆಮಾವನವರು ಏನು ಸಂಸ್ಕಾರ ಕಲಿಸಿದ್ದಾರೆ ಆಕೆಗೆ..?"
ಪತಿ ಮಾತನಾಡಲಿಲ್ಲ. ಅರ್ಥವಾಗದಂತಹ ಮನಸ್ಥಿತಿಯಲ್ಲಿರುವವರಿಗೆ  ಹೇಳುವುದು ವ್ಯರ್ಥ ಎಂದು ಸುಮ್ಮನಾದರು.
ಅಲ್ಲಿಂದ ಹೊರಟು ಹೋದರು.

      ನಂತರ ನಾಲ್ಕಾರು ಬಾರಿ ನನ್ನ ಪತಿಯ ತಲೆ ಕಂಡ ಕೂಡಲೇ ಬೆನ್ನು ಬಿಡದ ಬೇತಾಳನಂತೆ ಬಂದು ಬೆರಳು ಝಳಪಿಸುತ್ತಾ, ಇನ್ನೇನೇನೋ ಹೇಳುತ್ತಾ ಸಂಸ್ಕಾರ ಪದಕ್ಕೇ ಅಂಟಿಕೊಳ್ಳುತ್ತಿದ್ದರು.. ಪತಿಗೆ ಬಹಳ ಕಿರಿಕಿರಿಯಾಗಿತ್ತು.. ಸಾಧು, ಗಂಭೀರ ಸ್ವಭಾವದ, ಯಾರ ತಂಟೆಗೂ ಹೋಗದ ಪತಿಗೆ ಬಹಳ ನೋವಾಯಿತು. ಆದರೂ ಸಂಯಮ ಕಳೆದುಕೊಳ್ಳಲಿಲ್ಲ.

        ಹೊರಡುವ ಸಮಯದಲ್ಲಿ ನಾನು ಅಮ್ಮನಲ್ಲಿ ಈ ವಿಚಾರವನ್ನು ಹಂಚಿಕೊಂಡೆ. ಆಕೆ ಎಲ್ಲಿದ್ದಳೋ.. ಸರಸರನೆ ಓಡುತ್ತಾ ಬಂದರು. "ಅಮ್ಮನಲ್ಲಿ ದೂರುಕೊಡುತ್ತೀಯಾ..?" ಎನ್ನುತ್ತಾ ದುರುಗುಟ್ಟಿ ನೋಡಿದರು. ನನ್ನಮ್ಮನ ಮುಖವನ್ನು ದಿಟ್ಟಿಸುತ್ತಾ.. "ನೋಡು ಇವಳಿಗೇನು ಸಂಸ್ಕಾರ ಕಲಿಸಿದ್ದಿ.. ನನ್ನ ಮಗಳಂದಿರು ಕೇಳುತ್ತಿದ್ದಾರೆ. ದೊಡ್ಡಮ್ಮ ಏನು ಸಂಸ್ಕಾರ ಕಲಿಸಿದ್ದಾರೆ...?"

"ಅವಳೇನು ಮಾಡಿದ್ದಾಳೆ ನಿನಗೆ.. ನಿನ್ನ ಮಗನ ಮದುವೆಗೆ ಆಕೆಗೆ ಬರಲು ಸಾಧ್ಯವಾಗಿಲ್ಲ. ಹಿಂದೆ ಬಂದಿದ್ದಳು. ಮುಂದೆ ಬರುತ್ತಾಳೆ.." ಎಂದರು ಅಮ್ಮ..
ನನ್ನ ಮೇಲೆ ಮತ್ತೆ ಏನೇನೋ ಹೇಳುತ್ತಾ ಬಂದರು..
"ನೋಡಿ.. ನನ್ನಮ್ಮ ತಾನು ಬದುಕಿ ತೋರಿಸಿದ ಸಂಸ್ಕಾರದಲ್ಲಿ ನಾನು ನಡೆಯುತ್ತೇನೆ. ಹೋಗಿ ಬರುವೆ.." ಎನ್ನುತ್ತಾ ಅಮ್ಮನಿಗೆ ಕೈ ಬೀಸಿ ಹೊರಟರೆ..
ನನ್ನ ಹಿಂದೆಯೆ ಹತ್ತು ಹೆಜ್ಜೆ ಓಡುತ್ತಾ ಬಂದು "ಏಯ್ ನಿಲ್ಲು ನಿಲ್ಲು.. ನಿನ್ನಲ್ಲಿ ಏನೆಲ್ಲ ಕೇಳುವುದಿದೆ ನನಗೆ ಎಂದು ಹೇಳುತ್ತಲೇ ಇದ್ದರು.." ನಾನು ಹಿಂದಿರುಗಿ ನೋಡದೆಯೇ ಬಿರುಸಾಗಿ ಸಾಗಿದೆ..

     ಶ್ರೀ ರಾಮನ ಮುಂದೆ ಕರ ಜೋಡಿಸಿ ನಿಂತೆ. ಏನಿದೆಲ್ಲಾ... ನನಗೆ ಒಂದೂ ತಿಳಿಯುತ್ತಿಲ್ಲ.. ಬರವಣಿಗೆ ಎಂಬ ಹವ್ಯಾಸ ಇಂತಹ ಇಕ್ಕಟ್ಟನ್ನೂ ತಂದೊಡ್ಡುತ್ತದೆಯೇ..  ಕಾಪಾಡು ತಂದೆ ಶ್ರೀ ರಾಮಚಂದ್ರ.. ಎಂದು  ದೀನಳಾಗಿ ಶರಣಾಗಿ ನಿಂತೆ.. ಮನಸ್ಸಿನ ಅಲ್ಲೋಲಕಲ್ಲೋಲ ಒಮ್ಮೆಲೇ ಶಾಂತವಾಗಿ ತೃಪ್ತಭಾವ ನನ್ನನ್ನಾವರಿಸಿತು. "ಹೋಗಿ ಬಾ ಮಗಳೇ.. ಶುಭವಾಗಲಿ.." ಎಂಬ ಲಹರಿ  ಗಾಳಿಯಲ್ಲಿ ಮೆಲುವಾಗಿ ತೂರಿ ಬಂದಂತಾಯಿತು..

      ಅಷ್ಟಕ್ಕೂ ಇದಕ್ಕೆಲ್ಲ ಕಾರಣವಾದದ್ದು  ಮಾಮ್ಸ್‌ಪ್ರೆಸೊ ಬ್ಲಾಗ್. ಎರಡು ವರ್ಷಗಳ ಹಿಂದೆ ವಾರದ ಸವಾಲಿನಲ್ಲಿ "ನಿಮ್ಮ ತಾಯಿಯಲ್ಲಿ ನೀವು ಕಂಡ ಆದರ್ಶ ಗುಣಗಳು" ಎಂಬ ವಿಷಯಕ್ಕೆ ನಾನು ಬರೆದ "ನನಗೆ ನನ್ನಮ್ಮನೇ ಮಾದರಿ" ಎಂಬ ಸಣ್ಣ ಲೇಖನ. ಇದರಲ್ಲಿ ನನ್ನಮ್ಮನಲ್ಲಿ ನಾನು ಗುರುತಿಸಿದ್ದ ಅಂಶಗಳನ್ನು ಬರೆದಿದ್ದೆ. ಅಲ್ಲಿ ಬರೆದದ್ದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲ. ಅಮ್ಮನ ಬಗ್ಗೆ ಕಡಿಮೆಯೇ ಬರೆದಿದ್ದೇನೆ ಹೊರತು ವೈಭವೀಕರಿಸಿಲ್ಲ. ಅಷ್ಟಕ್ಕೂ ನಾನು ಬರೆದಿರುವುದು ನನ್ನ ದೃಷ್ಟಿಯಲ್ಲಿ ನನ್ನ ಅಮ್ಮನ ಬಗ್ಗೆ ಇರುವ ಭಾವವೇ ಹೊರತು ಇನ್ನಾರದೋ ದೃಷ್ಟಿಕೋನದಿಂದ ಅಳೆದು ಬರೆದಿದ್ದಲ್ಲ. ಆದರೂ ಬ್ಲಾಗ್ ನ ಒಂದು ವಾಕ್ಯ, ಒಂದು ಶಬ್ದವೇ ಇಷ್ಟೆಲ್ಲಾ  ಮಾತುಗಳಿಗೆ ಕಾರಣವಾಗಿರುವುದು ಬಲು ನೋವಿನ ಸಂಗತಿ. ಬರೆಯುವುದು ನಮ್ಮ ಹವ್ಯಾಸವೇನೋ ಹೌದು. ಆದರೆ ಇಂತಹ ಘಟನೆಗಳು ನಡೆದಾಗ ಮನಸು ಮೂಕವಾಗಿ ರೋದಿಸುತ್ತದೆ. ನಮ್ಮದೇ ಶ್ರಮದಿಂದ ಹವ್ಯಾಸವೊಂದನ್ನು ರೂಪಿಸಿಕೊಂಡಾಗ, ಅದನ್ನು ಕಂಡು ಮನಸು ಹುಳ್ಳಗೆ ಆಗುವುದಾರೆ ನಾವೇನು ಮಾಡಲು ಸಾಧ್ಯ.?

✍️... ಅನಿತಾ ಜಿ.ಕೆ.ಭಟ್.
03-02-2022.
#ಪ್ರತಿಲಿಪಿ ಕನ್ನಡ
#ದೈನಿಕವಿಷಯ_ ಸಾಹಿತ್ಯಾಭಿಮಾನಿ


Wednesday, 2 February 2022

ನಮ್ಮನೆ ದೋಸೆಯಲ್ಲಿ ತೂತೇ ಇಲ್ಲ ಕಣ್ರೀ...

 


ನಮ್ಮನೆ ದೋಸೆಯಲ್ಲಿ ತೂತೇ ಇಲ್ಲ ಕಣ್ರೀ..

          ಅದು ಆಧುನಿಕವಾಗಿ ನಿರ್ಮಿಸಲಾದ ವಠಾರ. ಏಳೆಂಟು ಆರ್ ಸಿ ಸಿ ಮನೆಗಳು ಎರಡು ಸಾಲುಗಳಲ್ಲಿ ಎದುರುಬದುರಾಗಿ ಕಟ್ಟಲ್ಪಟ್ಟಿದ್ದವು. ಮಧ್ಯದಲ್ಲಿ ಖಾಲಿ ಸೈಟುಗಳಿದ್ದು  ತೀರಾ ಕಾಂಕ್ರೀಟ್ ಕಾಡು ಎಂಬ ಭಾವನೆ ಮೂಡದಂತೆ ಹಸಿರು ಹೊತ್ತು ನಿಂತಿದ್ದವು. ಮರಗಿಡಗಳು ತಾನಾಗಿಯೇ ಹುಟ್ಟಿದವು, ನೆಟ್ಟು ಬೆಳೆಸಿದವು ಎಲ್ಲವೂ ಫಲ, ನೆರಳು ನೀಡುತ್ತಾ ಪಟ್ಟಣದ ನಡುವೆ ಹಳ್ಳಿಯ ತಂಪಿನ ವಾತಾವರಣವನ್ನು ಸೃಷ್ಟಿಸಿದ್ದವು. ಆ ವಠಾರದ ಮೊದಲ ಮನೆ ಮುಕುಂದ ರಾಯರದು. ಅವರ ಪತ್ನಿ  ಮಾಧವಿ. ಒಬ್ಬನೇ ಮಗ ಮಿಹಿರ. ಪತಿ ಪತ್ನಿ ಇಬ್ಬರೂ ದುಡಿಯುತ್ತಿದ್ದು ಮಗನನ್ನು ಬಹಳ ಮುದ್ದಿನಿಂದ ಸಲಹಿದ್ದರು. ವಠಾರಕ್ಕೇ ದೊಡ್ಡ ಸೈಟ್, ದೊಡ್ಡ ಮನೆ ಅವರದ್ದು ಎಂಬ ಹೆಮ್ಮೆ ಅವರಿಗೆ.

     ನೆರೆಹೊರೆಯ ಮನೆಗಳಲ್ಲಿ ಸುರೇಶ್ ನಯನಾ, ವೇದಾಂತ್ ಗಾಯತ್ರಿ ವಾಸಿಸುತ್ತಿದ್ದರು. ಕೊನೆಯ ಮನೆ ಕೆಲವು ತಿಂಗಳುಗಳಿಂದ ಖಾಲಿ ಇದ್ದು ಇಪ್ಪತ್ತು ದಿನದ ಹಿಂದೆ ಯುವ ದಂಪತಿ ಆಕಾಶ್ ಚಿತ್ರಾ ಎರಡು ವರ್ಷದ ಮಗುವಿನೊಂದಿಗೆ ವಾಸಿಸಲಾರಂಭಿಸಿದ್ದರು. ಪ್ರತಿದಿನ ಸಂಜೆ ವಠಾರದ ಮಕ್ಕಳೆಲ್ಲ ಸೇರಿ ಆಡುತ್ತಿದ್ದರು. ಹೀಗೆ ಆಡುವ ಮಕ್ಕಳನ್ನು ಹೆಚ್ಚಾಗಿ ಮಾಧವಿ ತಮ್ಮ ಕಂಪೌಂಡಿನೊಳಗೆ ಕರೆಯುತ್ತಿದ್ದಳು. ತಮ್ಮ ಒಬ್ಬನೇ ಮಗನಿಗೆ ಆಟಕ್ಕೆ ಜತೆಯಾದರೂ ಆದೀತೆಂದು. ಒಂಟಿಯಾಗಿ ಬೆಳೆದ ಮಿಹಿರನಿಗೂ ಒಮ್ಮೊಮ್ಮೆ ಆಡಲು ಯಾರಿಲ್ಲವೆಂದು ಬೇಸರವೆನಿಸಿದಾಗ ಅಕ್ಕಪಕ್ಕದ ಮಕ್ಕಳನ್ನೆಲ್ಲ ಯಾವ ಹೊತ್ತಿಗಾದರೂ ಸರಿ ಮನೆಗೆ ಕರೆಯುತ್ತಿದ್ದ.

     ಅಂದು ಮಾತ್ರ ಮಿಹಿರನೊಂದಿಗೆ ಆಟವಾಡಲು ಯಾವ ಮಕ್ಕಳೂ ಇರಲಿಲ್ಲ. "ಅಮ್ಮಾ ಅಮ್ಮಾ.. ಆ ಕೊನೆಯ ಮನೆಯಲ್ಲಿರುವ ಪಾಪು ಜೊತೆ ಆಡಲಾ..?" ಕೇಳಿದ.
"ಪರಿಚಯವಿಲ್ಲದವರ ಮನೆಗೆ ಹೋಗಿ ಕರೆಯುವುದು ಹೇಗೆ?" ಎಂದಳು ಅಮ್ಮ ಮಾಧವಿ..
"ಬೇಡ ಕರೆಯಲ್ಲ.. ನಾನಲ್ಲಿಯೇ ಆಡುತ್ತೇನೆ" ಎಂದು ಅಮ್ಮನ ಉತ್ತರಕ್ಕೂ ಕಾಯದೆ ಓಡಿದ ಮಿಹಿರ.

     ಕಾಲಿಂಗ್ ಬೆಲ್ ಸದ್ದಾದಾಗ ಯಾರೆಂದು ಕಿಟಕಿಯಿಂದ ನೋಡಿದಳು ಚಿತ್ರಾ. ಓಹೋ ಆ ಮೊದಲ ಮನೆಯ ಹುಡುಗನಂತೆ ತೋರುತ್ತಿದೆ
ಎಂದುಕೊಳ್ಳುತ್ತಾ ಬಾಗಿಲು ತೆಗೆದಾಗ ಒಂದೇ ಉಸಿರಿನಲ್ಲಿ.. "ಆಂಟಿ ಆಂಟಿ.. ನಾನು ನಿಮ್ಮ ಪಾಪುವಿನ ಜೊತೆ ಆಟವಾಡಲಾ?" ಎಂದ..
"ಹೂಂ.. ಆಗಬಹುದು.. ಅದಕ್ಕೇನಂತೆ..ಆಡು" ಒಪ್ಪಿದಳು ಚಿತ್ರಾ. ಸ್ವಲ್ಪ ಹೊತ್ತಿನ ಬಳಿಕ ಅವನಮ್ಮ ಹೊರಗಿನಿಂದ ಕರೆಯಲಾರಂಭಿಸಿದರು.
"ಮಿಹಿರ್ ಆಟವಾಡಿದ್ದು ಸಾಕು ಬಾ.."
"ನನಗೆ ಆಟವಾಡಿ ಆಗಿಲ್ಲ" ಎಂಬುದು ಅವನ ಉತ್ತರ.
ಪದೇ ಪದೇ ಅಮ್ಮ ಕರೆದಾಗ "ಆಂಟಿ ಇವನನ್ನು ನಮ್ಮನೆಗೆ ಕರೆದುಕೊಂಡು ಹೋಗಲಾ.. ಅಮ್ಮ ಕರೀತಾರೆ.. ಇನ್ನು ಅಲ್ಲಿ ಆಡ್ತೀವಿ" ಎಂದ..
" ಆಯ್ತು.. ನಾನೂ ಬರ್ತೀನಿ.. ಭಾರೀ ತುಂಟ ಇವನು.." ಎಂದು ಚಿತ್ರ ತಾನೂ ಹಿಂಬಾಲಿಸಿದಳು.

      ಮಕ್ಕಳು ಮನೆಯ ಒಳಗೂ ಹೊರಗೂ ಆಟವಾಡಿದರು. ಚಿತ್ರಾ ಹೊರಗೆ ನಿಂತಿದ್ದಳು. ಚಿತ್ರಾ ನೆರೆಹೊರೆಯ ಹೆಂಗಸರಿಗೆ ಸರಿಯಾಗಿ ಕಾಣಸಿಕ್ಕಿದ್ದು ಆಗಲೇ. ಆಚೆ ಮನೆ ನಯನಾ ಕೂಡ ಏನೋ ನೆಪ ಹೇಳಿ ಬಂದಳು. ಈಚೆ ಮನೆ ಗಾಯತ್ರಿ ವಾಕಿಂಗ್ ಎಂದು ಆಚೆಯಿಂದೀಚೆ ವೇಗವಾಗಿ ನಡೆಯುತ್ತಿದ್ದವಳು ವಾಕಿಂಗ್ ನಿಲ್ಲಿಸಿ ಸೇರಿಕೊಂಡಳು. ವಠಾರದ ಹೆಂಗಸರೆಲ್ಲ ಸೇರಿದರೆ ಕೇಳಬೇಕೇ.. ಮಾತುಕತೆ.. ಹರಟೆ..

"ಮಾಧವಿ.. ನೀವು ನಿನ್ನೆ ಸಂಜೆ ಎಲ್ಲಿಗೆ ಹೋಗಿದ್ದಿರಿ..?"

"ನಿನ್ನೆ ಸಂಡೆ ಅಲ್ವಾ ಗಾಯತ್ರಿ.. ಮನೆಯಲ್ಲಿ ಕೂತುಕೊಳ್ಳಲು ಬೋರ್ ಅದಕ್ಕೇ ಸಂಜೆ ಸಿಟಿ ರೌಂಡ್ಸ್.."

"ಅಂದ್ರೆ ಹೋಟೇಲ್, ಐಸ್ ಕ್ರೀಮ್ ಪಾರ್ಲರ್‌ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿರಬಹುದು.."
ಎಂದು ಕಣ್ಣರಳಿಸುತ್ತಾ ನುಡಿದಳು ನಯನಾ.

"ಹೂಂ.. ಮಗ ಹಠ ಹಿಡಿದ.. ಹೋಟೇಲ್ ರೂಪಾ ಕಂಫರ್ಟ್ಸ್ ಗೆ ಹೋಗಬೇಕೆಂದು.. ಹಾಗೆ.."

"ಹೂಂ.. ಗೊತ್ತಿತ್ತು.. ನಂಗೆ.. ಬ್ಯಾಟಿಂಗ್ ಮಾಡೋಕೇ ಹೋಗಿದ್ದೂಂತ.. ಹೌದು ಏನೇನ್ ಸ್ಪೆಷಲ್ ಅಲ್ಲಿ..?" ಕೇಳಿದಳು ಗಾಯತ್ರಿ..

"ಮಸಾಲಾ ದೋಸೆ, ಮತ್ತೇನೋ ನಾರ್ತ್ ಇಂಡಿಯನ್ ಡಿಶ್ ಆರ್ಡರ್ ಮಾಡಿದ್ರಪ್ಪಾ.. ಎಲ್ಲಾ ಅಪ್ಪ ಮಗಂದು ಕಾರುಬಾರು..ನಂದೇನಿಲ್ಲ.. ಸುಮ್ಮನೆ.. ಸ್ವಲ್ಪ ಟೇಸ್ಟ್ ನೋಡೋದಷ್ಟೇ.. ಎಂದು ನಕ್ಕಳು ಮಾಧವಿ.

"ಕಳೆದ ವಾರ ಹೋಟೇಲ್ ಏಶಿಯನ್ ಥ್ರಿಲ್ ಗೆ ಹೋಗಿದ್ದಿರಂತೆ ಅಲ್ವಾ.. ನಿಮ್ಮ ಮಗ ಮಿಹಿರ ಹೇಳಿದ್ದು ಕೇಳಿ ನಮ್ಮ ಮಗನೂ ಹೋಗಬೇಕೆಂದು ಹಠ ಹಿಡಿದಿದ್ದ. ಸೋ ಮುಂದಿನವಾರ ಹೋಗಬೇಕೂಂತ ಇದೀವಿ.." ಎಂದಳು ಗಾಯತ್ರಿ..

"ಹೂಂ.. ಹೋಗಿ ಹೋಗಿ.. ಸೂಪರ್ ಆಗಿರುತ್ತದೆ ಐಟಂಸ್ ಎಲ್ಲಾ.. ಭರ್ಜರಿ ಭೋಜನ ಮಾಡಿ ಬನ್ನಿ.." ನಗುನಗುತ್ತಾ ನುಡಿದಳು ಮಾಧವಿ.

ನಯನಾಳ ಮುಖ ಸ್ವಲ್ಪ ಬಾಡಿತ್ತು. ಚಿತ್ರಾ ಅವರ ಮಾತಿನಲ್ಲಿ ಗಮನವಿಲ್ಲದಂತೆ ತನ್ನ ಮಗನತ್ತಲೆ ನೋಡುತ್ತಿದ್ದಳು..
"ಅಲ್ಲ ನಿಮ್ಮ ಹೆಸರೇನು?" ಪ್ರಶ್ನೆಸಿದರು ಗಾಯತ್ರಿ ಚಿತ್ರಾಳತ್ತ ತಿರುಗಿ..
"ನನ್ನ ಹೆಸರು ಚಿತ್ರಾ.." ಎಂದಳು ಚುಟುಕಾಗಿ.

"ಹಾಂ.. ಚೆನ್ನಾಗಿದೆ ಹೆಸರು.. ಯಾವೂರು..?"
"ಚಿತ್ತೂರು.."

"ಅಲ್ಲಾ ನೀವು ಸಂಡೇ ಎಲ್ಲಿಗೂ ಹೋಗೋದಿಲ್ವಾ..? ಎರಡು ವಾರದಿಂದ ಗಮನಿಸುತ್ತಿದ್ದೇನೆ. ಸಂಡೇ ಮನೆಯಲ್ಲಿಯೇ ಇರುತ್ತೀರಿ.." ಮಾಧವಿ ಪ್ರಶ್ನಿಸಿದಳು.

"ಅಗತ್ಯವಿದ್ದರೆ ಹೋಗುತ್ತೇವೆ. ಇಲ್ಲದಿದ್ದರೆ ವಾರವಿಡೀ ದುಡಿವ ಪತಿಗೆ ಆ ದಿನ ವಿಶ್ರಾಂತಿ. ಕುಟುಂಬದ ಜೊತೆ ಸಮಯಕಳೆಯುತ್ತಾ ಮನೆಯಲ್ಲಿಯೇ ಇರುತ್ತೇವೆ."

"ನೀವು ಹೋಟೇಲಿಗಾದ್ರೂ ಹೋಗೋದಿಲ್ವಾ ಸಂಡೇ..!!??" ಕಣ್ಣರಳಿಸಿ ಆಶ್ಚರ್ಯದಿಂದ ಪ್ರಶ್ನಿಸಿದಳು ಮಾಧವಿ..

"ಇಲ್ಲ..."

"ಆಗಾಗ ಪಿಕ್ನಿಕ್.. ಅಥವಾ ವರ್ಷಕ್ಕೊಮ್ಮೆ ಟೂರ್???"

"ಹೋಗೋದಿಲ್ಲ.."

"ಎಂತಾ ಕಂಜೂಸ್ ಮಾರಾಯರೇ ನೀವು.. ಅಲ್ಲ ಅಷ್ಟು ದುಡ್ಡು ಕಟ್ಟಿಟ್ಟು ಏನು ಮಾಡಲಿಕ್ಕುಂಟು.. ಹೋಗುವಾಗ ಗಂಟುಮೂಟೆ ಕಟ್ಟಿ ಒಯ್ಯಲಿಕ್ಕಿಲ್ಲವಲ್ಲ.. ಇರುವಷ್ಟು ದಿನ ಮಜಾವಾಗಿ ಕಳೆಯಬೇಕು.. " ಮಾಧವಿ ಹೇಳುತ್ತಲೇ ಇದ್ದಳು.

     ಮಾತನ್ನು ಅರ್ಧಕ್ಕೆ ತಡೆದು "ನಮಗೆ ಬೇಕಾದ ತಿಂಡಿ ತಿನಿಸನ್ನು ಮನೆಯಲ್ಲಿ ಶುಚಿರುಚಿಯಾಗಿ ತಯಾರಿಸಿಕೊಳ್ಳುತ್ತೇವೆ. ಹೊರಗಡೆ ಹೋಗುವುದಿದ್ದರೆ ಮನೆಯಲ್ಲಿ ಆಹಾರ ಸೇವಿಸಿಯೇ ತೆರಳುತ್ತೇವೆ.  ಅಗತ್ಯವಿದ್ದರೆ ಮಾತ್ರ ಹಿತಮಿತವಾಗಿ ಹೋಟೇಲೂಟ. ಆಗಾಗ ನಮ್ಮ ಊರುಗಳಿಗೆ ತೆರಳುತ್ತೇವೆ. ತವರೂರು, ಪತಿಯ ಮನೆ ಎರಡೂ ಹಳ್ಳಿಯಲ್ಲಿ. ಅಲ್ಲಿಗೆ ಹೋದಾಗ ತೋಟ-ಗುಡ್ಡ ಕೆರೆ-ತೊರೆ ದರ್ಶನವಾಗುತ್ತದೆ.
ಪ್ರಶಾಂತ ವಾತಾವರಣ ಮನಸಿಗೆ ತುಂಬಾ ಹಿತವಾಗುತ್ತದೆ. ಇದಕ್ಕಿಂತ ಹೆಚ್ಚಿನ ಸಂತಸವನ್ನರಸಿ ಟೂರ್ ಎಂದು ಹೋಗುವುದಿಲ್ಲ." ಎಂದುತ್ತರಿಸಿ ನಿಲ್ಲಿಸಿದಳು ಚಿತ್ರಾ.

"ಚಿತ್ರಾ.. ನಿಮ್ಮೂರು ಚಿತ್ತೂರಿಗೆ ಹೋಗುವಾಗ ದಾರಿ ಮಧ್ಯೆಯಾದರೂ ಹೋಟೇಲಿಗೆ ಭೇಟಿ ಕೊಡೋದಿಲ್ವಾ..?" ಮತ್ತೆ ಅಂತಹದೇ ಪ್ರಶ್ನೆ ಎಸೆದಿದ್ದಳು ಮಾಧವಿ.

"ಅಪರೂಪ.. ಮಗನಿಗೆ ಅಗತ್ಯವಿರುವ ಆಹಾರ ನಾನೇ ಮಾಡಿ ತೆಗೆದುಕೊಂಡು ಹೋಗುತ್ತೇನೆ. ಒಂದೂವರೆ ಗಂಟೆಯಲ್ಲಿ ತಲುಪುತ್ತೇವೆ.."

"ಆದರೂ.. ಹೋಟೇಲಿಗೆ ಹೋಗುವುದೆಂದರೆ ಮಜಾವೇ ಬೇರೆ.. ನಾವು ಚಿತ್ತೂರು ಕಡೆ ಫಂಕ್ಷನ್‌ಗೆ ಹೋಗುವುದಿದ್ದರೆ ಮಧ್ಯೆ 'ಬಿಟಿ ಚಹಾ' ಅಂತೂ ಮಿಸ್ ಮಾಡೋದೇ ಇಲ್ಲ. ಫಂಕ್ಷನ್‌ನಲ್ಲಿ ಊಟ ಮಾಡಿದರೂ ಬರುವಾಗ 'ಗಿರಿಪ್ರಸಾದ್' ಹೋಟೇಲಿಗೆ ಹೋಗದಿದ್ರೆ ಹೇಗೆ..? ತುಂಬಾ ಕುರೆ ಮಾಡೋದು ಒಳ್ಳೆಯದಲ್ಲ."

"ಮನೆಯಡುಗೆ ಆರೋಗ್ಯಕ್ಕೆ ಹಿತ. ಆಗಾಗ ಬಾಯಿ ಚಪಲಕ್ಕಾಗಿ ಹೋಟೇಲ್ ಭೋಜನ ಮಾಡುವುದು
ಅನಾರೋಗ್ಯವನ್ನು ನಾವೇ ಆಹ್ವಾನಿಸಿದಂತೆ. ಮತ್ತೆ ಅವರವರ ಬದುಕಿನ ಶೈಲಿ ಅವರಿಚ್ಛೆಯಂತೆ" ಎಂದಳು ಚಿತ್ರಾ..

"ನಾವು ಪ್ರತೀ ಸಂಡೆ ಎಲ್ಲಾದರೂ ಹೋಗೇ ಹೋಗ್ತೀವಿ.. ವರ್ಷಕ್ಕೊಮ್ಮೆ ನಾರ್ತ್ ಇಂಡಿಯಾ ಟೂರ್ ಹೋದಾಗ ತುಂಬಾ ಹೊಸ ಆಚಾರ ವಿಚಾರಗಳನ್ನು ಕಲಿಯುತ್ತೇವೆ. ಸೌತ್ ಇಂಡಿಯಾ ಎಲ್ಲ ಕಡೆ ಮೊದಲೇ ಸುತ್ತಾಡಿ ಆಗಿದೆ. ಮಗ ಮಿಹಿರ ಚಿಕ್ಕವನಿದ್ದಾಗ ಸೌತ್ ಇಂಡಿಯಾ ಟೂರ್.. ಈಗ ಮಗ ದೊಡ್ಡವನಾದ ಮೇಲೆ ನಾರ್ತ್ ಇಂಡಿಯಾ ಟೂರ್.. ತುಂಬಾ ಖುಷಿಯಾಗುತ್ತದೆ. ಜೀವನವನ್ನು ಎಂಜಾಯ್ ಮಾಡಬೇಕು.." ಮಾತನಾಡುತ್ತಲೇ ಇದ್ದಳು ಮಾಧವಿ.

      ಚಿತ್ರಾಳ ತಲೆಯಲ್ಲಿ ಚಿಂತನ ಮಂಥನ ಶುರುವಾಗಿತ್ತು. ನಯನಾಳ ಮುಖವೂ ಸ್ವಲ್ಪ ಇರುಸುಮುರುಸಾದಂತೆ ತೋರಿತು.
" ಹೋಟೇಲ್‌ನಲ್ಲಿ ತಿಂದರೆ, ಟೂರ್ ಹೋದರೆ ಮಾತ್ರ ಜೀವನ ಸಾರ್ಥಕ ಆಗೋದಾ? ಬದುಕಿನಲ್ಲಿ ಮಹತ್ವ ಕೊಡಬೇಕಾದ, ಸಾಧಿಸಬೇಕಾದ ಅದೆಷ್ಟೋ ವಿಷಯಗಳಿವೆ" ಎಂದಳು ನಯನಾ. "ಹಾಗೇನೂ ಅಲ್ಲ. ಆದರೂ ಎಂಜಾಯ್ ಈಗ ಮಾಡದಿದ್ದರೆ ಮತ್ತೆ ಯಾವಾಗ ಮಾಡುವುದು?" ಎಂದಳು ಮಾಧವಿ.

      ಜೀವನದಲ್ಲಿ ಒಂದು ಘಳಿಗೆಯಲ್ಲಿ ನಡೆದ ವಾಹನ ಅಪಘಾತ ಸುರೇಶ್‌ನಯನಾರ ಕೌಟುಂಬಿಕ ಬದುಕನ್ನೇ ಬುಡಮೇಲಾಗಿಸಿತ್ತು. ಬದುಕಿ ಉಳಿದದ್ದೇ ಮಕ್ಕಳ ಪುಣ್ಯ ಎಂದು ನಂಬಿದ್ದರು. ಕೈ ಹಿಡಿದಿದ್ದ ಬಿಸ್ನೆಸ್ ನೆಲಕಚ್ಚಿತ್ತು. ವರುಷ ಒಂದಾದಾಗ ಸ್ವಲ್ಪ ಚೇತರಿಸಿಕೊಂಡು ಸಣ್ಣ ಉದ್ಯೋಗವೊಂದನ್ನು ಹಿಡಿದು ಕಷ್ಟದಲ್ಲಿ ಸಂಸಾರ ನಡೆಸುತ್ತಿದ್ದರು. ತಿಂಗಳ ಕೊನೆಗೆ ಕೈಬರಿದಾಗುವುದು ಸಾಮಾನ್ಯ ಆಗಿಹೋಗಿತ್ತು. ಮಕ್ಕಳ ವಿದ್ಯಾಭ್ಯಾಸ ಸಾಲದ ಮೂಲಕವೇ ನಡೆಯುತ್ತಿತ್ತು. ಜೀವನದ ಸಿಹಿಕಹಿಗಳನ್ನು ಅನುಭವಿಸಿದ್ದಳು ನಯನಾ.

      ಮಾಧವಿ ತನ್ನದೇ ಧಾಟಿಯಲ್ಲಿ ತನ್ನ ಮಾತುಗಳನ್ನು ಸಮರ್ಥಿಸಿಕೊಂಡಳು. ನಮ್ಮ ಮನೆಯ ದೋಸೆಯಲ್ಲಿ ತೂತೇ ಇಲ್ಲ ಕಣ್ರೀ.. ನಿಮ್ಮೆಲ್ಲರ ಮನೆಯ ದೋಸೆಯಲ್ಲಿ ತೂತುಗಳೇ ಹೆಚ್ಚು.. ಎಂಬಂತಿತ್ತು ಅವಳ ವಾದ.. ವಾರವಿಡೀ ಇಬ್ಬರೂ ಹೊರಗಡೆ ದುಡಿದು ವಾರಾಂತ್ಯದಲ್ಲಿ ಮೋಜು ಮಸ್ತಿ ಮಾಡಿದರೆ, ಮನಬಂದಂತೆ ತಿರುಗಿದರೆ  ಅದೇ ಖುಷಿ ಅವರಿಗೆ. ಅದು ಅವರ ಜೀವನಶೈಲಿ ಆಗಿತ್ತು.
ಹಾಗೆಂದು ಎಲ್ಲರೂ ಅದನ್ನೇ ಆದರ್ಶವಾಗಿ ಇಟ್ಟುಕೊಂಡು ಬದುಕಲಾಗದು. ಅವರವರ ಧ್ಯೇಯೋದ್ದೇಶ ಅವರವರಿಗೆ ಹೆಚ್ಚು ಎನ್ನುವುದು ನಯನಾಳ ವಾದ.

     ಚಿತ್ರಾ ಸುಮ್ಮನಿದ್ದು ಕೇಳಿಸಿಕೊಳ್ಳುತ್ತಾ ಇದ್ದಳು. ಎಳವೆಯಿಂದಲೂ ಹಣವೆಂದರೆ ದೇವರೆಂದೇ, ಲಕ್ಷ್ಮಿ ಎಂದೇ ಪೂಜಿಸಲು ಹಿರಿಯರು ಕಲಿಸಿದ್ದರು. ಅಗತ್ಯವಿದಷ್ಟೇ ಖರ್ಚು ಮಾಡಬೇಕು. ಹನಿಗೂಡಿ ಹಳ್ಳವೆಂಬ ಮಾತಿನಂತೆ ಒಂದೊಂದು ರೂಪಾಯಿಯೂ ಮೌಲ್ಯಯುತವಾದದ್ದು. ಆಪತ್ಕಾಲಕ್ಕೆ ಕೂಡಿಟ್ಟ ದುಡ್ಡು ನೆರವಿಗೆ ಬರುವುದು. ಮೋಜು ಮಸ್ತಿಯೆಂದು ಹಣವನ್ನು ನೀರಿನಂತೆ ಖರ್ಚು ಮಾಡಬಾರದು ಎಂಬುದು ಅವಳ ನಿಲುವು. ಹಾಗೆಂದು ತನ್ನ ನಿಲುವನ್ನು ಇನ್ನೊಬ್ಬರ ಮೇಲೆ ಹೇರಲು ಹೋಗುವುದು ಸರಿಯಲ್ಲ ಎಂದು ಸುಮ್ಮನಿದ್ದಳು.

       ನಯನಾ ಗಾಯತ್ರಿ ನಿಂತು ಮಾತನಾಡಿ ಕಾಲು ನೋಯುತ್ತೆ ನಾವು ಮನೆಗೆ ಹೋಗುತ್ತೇವೆ ಅಂದಾಗ, "ಅಯ್ಯೋ ಒಳಗೆ ಕರೆಯಲು ಮರೆತೆ.. ಬನ್ನಿ ಬನ್ನಿ ಒಳಗೆ.." ಅಂದಳು ಮಾಧವಿ.
ಚಾವಡಿಯಲ್ಲಿ ಸೋಫಾದಲ್ಲಿ ಕುಳಿತು ಮಾತನಾಡಲಾರಂಭಿಸಿದರು. "ಸೆಖೆ ವಿಪರೀತ ಇದೆ ಮಾಧವಿ.. ಸ್ವಲ್ಪ ಫ್ಯಾನ್ ಹಾಕು ಕಣೇ.." ಎಂದಳು ಗಾಯತ್ರಿ..
"ಹಾಂ.. ಫ್ಯಾ..ನಾ.. ಆ ಕಡೆಯದ್ದೆರಡು, ಈ ಕಡೆಯದ್ದೆರಡು ಕಿಟಕಿಯ ಬಾಗಿಲುಗಳು ತೆರೆದೇ ಇವೆ. ಎಷ್ಟು ಚೆನ್ನಾಗಿ ಗಾಳಿ ಬೀಸುತ್ತಿದೆ. ಬೇಕಾದರೆ ಇನ್ನೂ ಹಾಕಿರುವ ಒಂದೊಂದು ಕಿಟಕಿ ಬಾಗಿಲನ್ನೂ ತೆಗೆಯುತ್ತೇನೆ" ಎಂದು ಹೇಳುತ್ತಾ ಎರಡೂ ಕಡೆಯ ಕಿಟಕಿಯ ಎಲ್ಲಾ ಬಾಗಿಲುಗಳನ್ನು ತೆರೆದರು. ಅವಳ ಪ್ರಕಾರ ತಂಗಾಳಿ ಬೀಸುತ್ತಿತ್ತು. ನಯನಾ, ಗಾಯತ್ರಿ ಮತ್ತು ಚಿತ್ರಾರ ಮೈಯಿಂದ ಬೆವರು ನೀರಿಳಿಯುತ್ತಿತ್ತು. ಗಾಯತ್ರಿ ತಾರಸಿಯತ್ತ ಕಣ್ಣು ಹಾಯಿಸಿದಳು.
"ಗಾಯತ್ರಿ.. ಫ್ಯಾನ್ ಇದೆ ನಮ್ಮಲ್ಲಿ. ಆದರೆ ನಾವು ಬಳಸುವುದು ಕಡಿಮೆ. ಸುಮ್ಮನೆ ಯಾಕಲ್ವಾ ಕರೆಂಟ್ ಖರ್ಚು ಮಾಡೋದು. ಇಡೀ ದೇಶಕ್ಕೇ ಆಗಬೇಕಲ್ವಾ ಕರೆಂಟ್.."

ನಯನಾ ಚಿತ್ರಾ ಮುಖ ಮುಖ ನೋಡಿಕೊಂಡರು. ಚಿತ್ರಾಳ ಮಗ ಬಂದು "ಅಮ್ಮಾ.. ಸೆಖೆ.. ಬಾಯಾರಿಕೆ ಆಗ್ತಿದೆ.. ಕೋಲ್ಡ್ ವಾಟರ್ ಬೇಕು" ಅಂದ. "ಕೊಡ್ತೀನಿ.." ಅಂದ ಮಾಧವಿ ಒಳಹೋದಂತೆ ಎಲ್ಲರೂ ಹಿಂಬಾಲಿಸಿದರು. 'ಅರೆ.. ಕರೆಂಟ್ ಹೋಯ್ತಾ.. ಫ್ರಿಡ್ಜ್ ನ ಸ್ಟೆಬಿಲೈಸರಿನಲ್ಲಿ ಲೈಟ್ ಕಾಣುತ್ತಿಲ್ಲ." ಎಂದಳು ನಯನಾ..
"ಅದು ನಾನು ಆಫ್ ಮಾಡಿದೆ ಈಗಷ್ಟೇ. ಫ್ರಿಡ್ಜ್ ಕೂಲಿಂಗ್ ಇದ್ದರೆ ಸಾಕಲ್ವಾ..?"
"ಫ್ರಿಡ್ಜ್ ಆಫ್ ಮಾಡಿಯೇ ಇಡುವುದಾದರೆ ಬೇಗ ಕೆಡುತ್ತೆ ಮಾಧವಿ" ಎಂದಳು ನಯನಾ.
"ಏನಾಗಲ್ಲ.. ನಾವು ಆರೇ ಗಂಟೆ ಆನ್ ಇಡೋದು. ಬೆಳಗ್ಗೆ ಆನ್ ಮಾಡೋದು. ಡ್ಯೂಟಿಗೆ ಹೋಗುವಾಗ ಆಫ್. ಪುನಃ ಬಂದು ಆನ್ ಮಾಡುವುದು ತಂಪಾದ ನಂತರ ಆಫ್.. ರಾತ್ರಿ ದೋಸೆ ಹಿಟ್ಟು ಇಟ್ಟು ಆನ್ ಮಾಡಿ ಎರಡು ಗಂಟೆಯಲ್ಲಿ ಪುನಃ ಆಫ್‌ಮಾಡುವುದು "
ಎನ್ನುತ್ತಾ ನೀರು ಕೊಟ್ಟಳು.
"ತಂಪಿಲ್ಲಮ್ಮಾ ತುಂಬಾ.."
"ಬೇಕಾದರೆ ಕುಡಿ, ಇಲ್ಲದಿದ್ದರೆ ಮನೆಗೆ ಹೋಗೋಣ ನಡೆ" ಎಂದಳು ಚಿತ್ರಾ ತನ್ನ ಮಗನಲ್ಲಿ.. ಮಾತಾಡದೆ ಕುಡಿದು ಲೋಟವನಿಟ್ಟು ತೆರಳಿದ ಮಿಹಿರನೊಡನೆ ಆಡಲು.

      ಕತ್ತಲಾಗುತ್ತ ಬಂತು. ಮಗು ಹೊರಡುತ್ತಲೇ ಇಲ್ಲ. ಹೆಂಗಸರ ಮಾತೂ ನಿಲ್ಲುತ್ತಿಲ್ಲ. "ಏ.. ಏ.. ನಾನು ಸೀರಿಯಲ್ ನೋಡೋ ಟೈಂ.. ಹೊರಡುತ್ತೇನೆ" ಎಂದಳು ನಯನಾ..
"ಟಿವಿ ಹಾಕೋಣ.. ಅದನ್ನು ನಾನೂ ನೋಡುತ್ತೇನೆ" ಎಂದು ಟಿವಿ ಆನ್ ಮಾಡಿದಳು ಮಾಧವಿ.
"ಸ್ವಲ್ಪ ಲೈಟ್ ಹಾಕು ಮಾಧವಿ.. ಈ ಟಿವಿಯ ಲೈಟ್ ಕಣ್ಣಿಗೆ ಬಡೀತಿದೆ.. " ಎಂದಳು ಗಾಯತ್ರಿ.

"ಟಿವಿ ನೋಡಲು ಲೈಟ್ ಟಿವಿಯಲ್ಲೇ ಇದೆ.. ಬೇರೆ ಲೈಟ್ ಯಾಕೆ.? ನಾವು ರಾತ್ರಿ ಮನೆಯ ಮಧ್ಯದ ಡೈನಿಂಗ್ ಏರಿಯಾದಲ್ಲಿ ಮಾತ್ರ ಒಂದು ಟ್ಯೂಬ್ ಲೈಟ್ ಆನ್ ಮಾಡುವುದು. ಮತ್ತೆ ಯಾವ ರೂಮಲ್ಲೂ ಆನ್ ಮಾಡುವುದಿಲ್ಲ ಅದೇ ಬೆಳಕು ಸಾಕಾಗುತ್ತದೆ."

"ಮಿಹಿರ ಹೋಂವರ್ಕ್ ಮಾಡುವಲ್ಲಿ ಕೂಡಾ ಲೈಟ್ ಹಾಕಲ್ವಾ..?" ನಯನಾ ಪ್ರಶ್ನಿಸಿದಳು.
"ಅವನನ್ನು ಟ್ಯೂಬ್ ಲೈಟ್ ಇರುವ ಡೈನಿಂಗ್ ಏರಿಯಾದಲ್ಲಿ ಓದೋಕೆ ಕೂರಿಸ್ತೀನಿ. ನಮ್ಮ ಊಟಾನೂ ಅಲ್ಲಿಯೇ. ಟಾಯ್ಲೆಟ್ ಬಾತ್ ರೂಮ್‌ನಲ್ಲಿ ಮಾತ್ರ ಬೇಕಾದಾಗ ಲೈಟ್ ಹಾಕ್ಕೊಳ್ತೀವಿ.." ಸಮಜಾಯಿಸುತ್ತಾ ಹೇಳಿದಳು ಮಾಧವಿ.
"ಹೌದಾ.."ಎನ್ನುತ್ತಾ ಎಲ್ಲರೂ ಆಶ್ಚರ್ಯಪಟ್ಟರು.

"ಸರಿ ನಾವಿನ್ನು ಹೊರಡೋಣ.. ನಮಗೆ ಸ್ನಾನ ಆಗಬೇಕು ಪುಟ್ಟಾ.. ಮಿಹಿರನಿಗೂ ಫ್ರೆಶ್ ಆಗಬೇಕಷ್ಟೇ. ಶಾಲೆಯಿಂದ ಬಂದು ಸೀದಾ ಆಡಲು ಬಂದಿದ್ದಾನೆ" ಎಂದಳು ಚಿತ್ರಾ..

"ಅರೆ.. ರಾತ್ರಿ ಪುನಃ ಸ್ನಾನ.. ಇಲ್ಲಪ್ಪಾ.. ಬೆಳಗ್ಗೆ ಸ್ನಾನ ಮಾಡಿದರೆ ಮುಗೀತು.. ಮತ್ತೆ ಬೇಕಿದ್ದರೆ ಕೈಕಾಲು ಮುಖ ತೊಳೆಯುವುದಷ್ಟೇ.. ಸುಮ್ಮನೆ ನೀರು ಖರ್ಚು.. ಕಾರ್ಪೊರೇಷನ್ ನೀರು ಇಡೀ ನಗರಕ್ಕೆ ಆಗಬೇಡವಾ..? "
ಚಿತ್ರಾಳಿಗೆ ನಗು ಬಂದರೂ ಕಷ್ಟಪಟ್ಟು ತಡೆದುಕೊಂಡಳು. ನಯನಾ ಗಾಯತ್ರಿ ಮುಖಮುಖ ನೋಡಿಕೊಂಡರು.

      ಗಾಯತ್ರಿ ಮತ್ತು ನಯನಾ ತಮ್ಮ ಮನೆಗೆ ಹೊರಟರು.. ಚಿತ್ರಾ ಮಗನನ್ನು ಕರೆದುಕೊಂಡು ಹೊರಟಳು. ಎಲ್ಲರ ಮನೆಯ ದೋಸೆಯಲ್ಲೂ ತೂತು ಹುಡುಕಿ, ತನ್ನ ಮನೆಯ ದೋಸೆಯಲ್ಲಿ ಮಾತ್ರ ತೂತೇ ಇಲ್ಲ. ಭಾರೀ ಚಂದವಿದೆ.. ಎಂದು ವಾದಿಸುತ್ತಿದ್ದವರ ಮನೆಯ ದೋಸೆಯೂ ತೂತೇ, ಅಷ್ಟೇ ಏಕೆ..?  ಕಾವಲಿಯೇ ತೂತು!! ಎಂಬುದು ಅವರೆಲ್ಲರಿಗೂ ಮನದಟ್ಟಾಗಿತ್ತು.

✍️... ಅನಿತಾ ಜಿ.ಕೆ.ಭಟ್.
17-01-2022.

#ಮಾಮ್ಸ್‌ಪ್ರೆಸೊ ಕನ್ನಡದ ದಿನಕ್ಕೊಂದು ಬ್ಲಾಗ್ ಬರಹ. ಉತ್ತಮ ಬರಹವೆಂದು ಆಯ್ಕೆಯಾಗಿದೆ. ವಿಷಯ- ಎಲ್ಲರ ಮನೆಯ ದೋಸೆಯೂ...



ಬೆವರ ಹನಿ- ಬಹುಮಾನಿತ ಕಥೆ

 


#ಬೆವರ ಹನಿ

   ರೋಹಿಣಿ ರೊಯ್ ರೊಯ್ಯನೆ ಬೀಸುವ ತಂಗಾಳಿಗೆ ಮುಖವೊಡ್ಡಿ ಮೆಲ್ಲನೆ ಕಣ್ಣು ಬಿಟ್ಟಳು. ಹಲವು ದಿನಗಳಿಂದ ಬಯಸಿದ ಪರಿಸರವು ಅವಳಲ್ಲಿ ಹುಮ್ಮಸ್ಸನ್ನು ತುಂಬಿಸಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಬಸ್ಸನ್ನು ಇಳಿಯುವ ಜಾಗ ಬಂದು ಬಿಡುತ್ತದೆ. ಮೇಲಿದ್ದ ಲಗೇಜ್ ಬ್ಯಾಗುಗಳನ್ನು ಕೆಳಗಿರಿಸಿಕೊಂಡು ಒಮ್ಮೆ ಕಣ್ಣಾಡಿಸಿದಳು. ಹೌದು ಎಲ್ಲವೂ ಸರಿಯಾಗಿದೆ.

     "ಆದರ್ಶನಗರ .. ಇಳ್ಕೊಳ್ಳಿ" ಎಂದಾಗ ಆಗಲೇ ಸೀಟಿನಿಂದೆದ್ದು ಲಗೇಜ್ ಬ್ಯಾಗ್ ಹಿಡಿದಿದ್ದ ರೋಹಿಣಿ ಲಗುಬಗೆಯಿಂದ ಕೆಳಗಿಳಿದಳು. ಬಸ್ ಮುಂದಿನ ತಿರುವಿನತ್ತ ಚಲಿಸಿ ಮರೆಯಾಯಿತು.ಚುಮು ಚುಮು ಚಳಿಗೆ ಬೆಚ್ಚಗಿನ ಸ್ವೆಟರ್ ಸಾಥ್ ಕೊಡುತ್ತಿತ್ತು. ಇಂತಹಾ ಚಳಿಗೆ ಸ್ವೆಟರ್ ಇಲ್ಲದೆ ಬರಿಗಾಲಲ್ಲಿ ಅಪ್ಪನ ಬೆರಳು ಹಿಡಿದು ಅಂಗಳದ ತುಂಬಾ ಓಡಾಡಿದ್ದೆಲ್ಲ ಅವಳ ಸವಿನೆನಪಿನ ಜೋಳಿಗೆಯಲ್ಲಿ ಹಿತವಾಗಿ ಕುಳಿತು ಕಾಡಿತು. ಹೆಜ್ಜೆ ಬಿರುಸಿನಿಂದ ಮುಂದಿಡುತ್ತಿದ್ದಳು. ಎಲೆಗಳ ಮೇಲೆ ಇಬ್ಬನಿ ಹನಿಗಳು ಟಪ್ ಟಪ್ ಸದ್ದು ಮಾಡುತ್ತಾ ಬೀಳುತ್ತಿದ್ದವು. ಹುಲ್ಲ ಹಾಸಿನ ಮೇಲೆ ಮುತ್ತಿನ ಮಾಲೆಯಂತೆ ಸಿಂಗರಿಸಿಕೊಂಡಿದ್ದ ಮಂಜಿನ ಹನಿಗಳು ಅವಳಿಗೆ ಸ್ವಾಗತವನ್ನು ಕೋರುತ್ತಿದ್ದವು.

           ಅಂದು ನಡೆದಾಡಿದ ಅದೇ ಹಾದಿ. ಅದೇ ಗಿಡಮರಗಳು. ಅದೇ ಸಿಹಿನೀರ ತೊರೆ. ಮುಂಜಾನೆಯ ಹಕ್ಕಿಗಳ ಕಲರವ. ಆದರೆ ಇಂದು ಮಾತ್ರ ಅವಳಿಗೆ ಇದೆಲ್ಲವೂ ಹೊಸದರಂತೆ ತೋರುತ್ತಿದ್ದವು. ಕೇವಲ ಕೆಲವು ತಿಂಗಳಿಗೇ ನಾಲ್ಕು ವರುಷ ಕಳೆದಂತೆ ಭಾಸವಾಗಿತ್ತು. ಮನೆಯಂಗಳ ಮುಟ್ಟುತ್ತಿದ್ದಂತೆ ತಾನು ಇಷ್ಟಪಟ್ಟು ಬೆಳೆಸಿದ್ದ ಟಾಮಿ ಒಮ್ಮೆ "ಬೌ ಬೌ" ಎಂದು ಬೊಗಳಿ, ನಂತರ "ಕುಂಯ್ ಕುಂಯ್" ಎಂದು ಬಾಲ ಅಲ್ಲಾಡಿಸಿ ತನ್ನ ಪ್ರೀತಿಯನ್ನು ತೋರ್ಪಡಿಸಿತ್ತು. ಅವಳ ಕಣ್ಣು ಮನೆಯ ಮುಂಬಾಗಿಲಿನತ್ತ ನೆಟ್ಟಿತ್ತು. ಕೈಕಾಲು ತೊಳೆದು ಒಳಹೊಕ್ಕವಳು "ಅಪ್ಪಾ.." ಎಂದು ಕರೆದರೂ ಸುಳಿವಿಲ್ಲ. ನಾನು ಬರುತ್ತೇನೆಂದು ಗೊತ್ತಿದ್ದೂ ಎಲ್ಲಿಗೆ ಹೋಗಿದ್ದಾರೆ ಎಂದು ಯೋಚಿಸುತ್ತಿದ್ದಂತೆ ದನದ ಕೊಟ್ಟಿಗೆಯಿಂದ "ಅಂಬಾ.." ಎಂಬ ಧ್ವನಿ ಬಂದಾಗ ಸೀದಾ ಅಲ್ಲಿಗೆ ತೆರಳಿದಳು.

        ಹಾಲು ಕರೆದು ದನಗಳಿಗೆ ಮೇವು ಹಾಕುತ್ತಿದ್ದ ಗಿರಿಧರ ರಾಯರು "ಮಗಳೇ.." ಎಂದು ಕರೆದು ಹಾಲಿನ ಬಿಂದಿಗೆ ಹಿಡಿದು ಬಂದರು. "ಅಪ್ಪಾ.." ಎಂದ ರೋಹಿಣಿ ಅಪ್ಪನ ಬಳಿಸಾರಿ ಅಪ್ಪನ ಹೆಗಲಿಗೆ ಹೆಗಲಾನಿಸಿ, ಹಿಂದಿನಿಂದ ತನ್ನ ಕೈ ಬಳಸಿ ನಿಂತು ಅಪ್ಪನ ಪ್ರೀತಿಯಲ್ಲಿ ಕಳೆದು ಹೋದಳು.

"ಮಗಳೇ.. ನೀನು ಇನ್ನೂ ಹುಡುಗಾಟಿಕೆ ಬಿಟ್ಟಿಲ್ಲ.. ನನ್ನ ಮೈಯ್ಯಲ್ಲಿ ಸೆಗಣಿ ಇರಬಹುದು, ಇರು ಹಾಲು ಒಳಗಿಟ್ಟು ತೊಳೆದುಕೊಂಡು ಬರುತ್ತೇನೆ..""ಅಪ್ಪಾ.. ನಾನೇ ಒಯ್ಯುತ್ತೇನೆ.. ಕೊಡಿ" ಎಂದು ಹಾಲಿನ ಬಿಂದಿಗೆ ತೆಗೆದುಕೊಂಡು ಒಳಗೆ ಹೋದಳು. ರಾಯರು ಕೈ ಕಾಲು ತೊಳೆದು ಅಂಗಿ ಬದಲಿಸಿ ಒಳಬಂದರು."ಅಪ್ಪಾ.. ಬನ್ನಿ ಇಲ್ಲಿ.." ಅಪ್ಪನ ಕಿರುಬೆರಳು ಹಿಡಿದ ಅವಳ ಧ್ವನಿಯಲ್ಲಿ ಸಂಭ್ರಮವಿತ್ತು. ಮಗಳ ಜೊತೆ ನಡೆದರು ರಾಯರು.

     ತಾನು ತಂದಿದ್ದ ಬ್ಯಾಗಿನ ಜಿಪ್ ತೆರೆದು ಒಂದು ನುಣ್ಣಗಿನ ಸ್ವೆಟರ್ ಅಪ್ಪನಿಗೆ ತೊಡಿಸಿದಳು. ಟೋಪಿ ತಲೆಗಿಟ್ಟಳು. "ಇನ್ನು ಚಳಿಗಾಲದಲ್ಲಿ ಇದನ್ನು ಹಾಕಿಕೊಳ್ಳಬೇಕು ಅಪ್ಪ.. ಆರೋಗ್ಯ ಜೋಪಾನವಾಗಿ ಕಾಪಾಡಿಕೊಳ್ಳಬೇಕು.ಅಪ್ಪಾ.. ಇದು ಡ್ರೈ ಫ್ರೂಟ್ಸ್. ಇದು ಶರ್ಟ್ ಪೀಸ್, ಇದು ನಿಮಗೆ ರಾತ್ರಿ ಹೊರಗಡೆ ಹೋಗಲು ಬೇಕಾದಾಗ ಬಳಸಲು ಒಳ್ಳೆಯ ಟಾರ್ಚ್ .." ತಂದಿದ್ದ ವಸ್ತುಗಳನ್ನು ತೋರಿಸುತ್ತಾ ಅವಳ ಮಾತು ಸಾಗುತ್ತಲೇ ಇತ್ತು."ಮಗಳೇ.. ಇದೆಲ್ಲ ನಂಗ್ಯಾಕಮ್ಮ.. ನಂಗೆ ಇದಾವುದೂ ಬೇಡ... ನೀನು ನಿನಗೆ ಬೇಕಾದ್ದನ್ನು ಕೊಂಡಿದ್ದರೆ
ಸಾಕಿತ್ತು. "
"ಹೌದು.. ನಿಮಗೆ ಯಾವುದೂ ಬೇಡ.." ಮುಖ ಊದಿಸಿಕೊಂಡಳು."ಇನ್ನೂ ಚಿಕ್ಕ ಮಕ್ಕಳಂತೆ ಆಡುವುದನ್ನು ಬಿಟ್ಟಿಲ್ಲ ನೀನು.." ಎಂದರು ಬೆನ್ನು ಸವರುತ್ತಾ.."ಇದೆಲ್ಲ ನಿಮಗಂತಲೇ ತಂದಿದ್ದು.. ಬೇಡವೆಂದರೆ ನನಗೆ ಬೇಸರವಾಗದಿರುತ್ತಾ..?"
"ಈಗಷ್ಟೇ ಬಂದಿದ್ದಿ.. ತಿಂಡಿ ತಿಂದು ಮಾತಾಡೋಣ.. ನಡಿ ಒಳಗೆ.. ನೀನು ಬರುತ್ತೀ ಎಂದು ಮುಳ್ಳುಸೌತೆ ಕಡುಬು ಮಾಡಿಕೊಟ್ಟಿದ್ದೇವೆ. ಮೊನ್ನೆಯಷ್ಟೇ ತೆಗೆದ ಜೇನುತುಪ್ಪ ಇದೆ.. ಗಟ್ಟಿ ಮೊಸರಿದೆ.. ಹಾಕಿ ತಿನ್ನುವಿಯಂತೆ.." ಮರುಮಾತನಾಡದೆ ಅಪ್ಪ ಹಿಂದೆ ತೆರಳಿ ಅಪ್ಪನಡುಗೆಯ ಸವಿ ಸವಿದಳು.
ಬೆಂಗಳೂರಿನ ಪಂಚತಾರಾ ಹೋಟೆಲಿನಲ್ಲಿ ಕೂಡಾ ಸಿಗಲಾರದಂತಹ ಅಪ್ಪನ ಕೈ ರುಚಿ ಅವಳಿಗೆ ತುಸು ಹೆಚ್ಚೇ ತಿನ್ನುವಂತೆ ಮಾಡಿತು.

        ಅಪ್ಪನ ಜೊತೆ ಮಾತನಾಡುತ್ತಾ ನಿಂತವಳಿಗೆ ಹೊತ್ತು ಹೋದದ್ದೇ ತಿಳಿಯಲಿಲ್ಲ. ಅಪ್ಪನ ಶರೀರ ಬಹಳವೇ ಕುಂದಿದ್ದು  ಅಪ್ಪನ ಬಗ್ಗೆ ಕಾಳಜಿ ವಹಿಸಬೇಕು ನಾನು ಎಂಬ ಜವಾಬ್ದಾರಿಯನ್ನು ಮೂಡಿಸಿತು. "ಮಗಳೇ.. ನಿನಗೆ ರಾತ್ರಿ ಪ್ರಯಾಣ ಮಾಡಿ ದಣಿವಾಗಿರುತ್ತದೆ. ವಿಶ್ರಾಂತಿ ಪಡೆದುಕೋ.."ಎಂದು ಹೇಳಿ ತನ್ನ ಕೆಲಸದತ್ತ ಸಾಗಿದರು ಗಿರಿಧರ ರಾಯರು. ಯೋಚಿಸುತ್ತಾ ಮಲಗಿದ ರೋಹಿಣಿಗೆ ನಿದ್ದೆ ಕಣ್ಣಿಗೆ ಸುಳಿಯಲೇ ಇಲ್ಲ.

             ***********

      ಅಂದು ನನ್ನಮ್ಮ ತನ್ನ ಹೊಟ್ಟೆಯ ಮೇಲೆ ನನ್ನ ಪುಟ್ಟ ಕೈಯನ್ನು ತೆಗೆದುಕೊಂಡು ಹೋಗಿ "ರೋಹಿಣಿ.. ನಿಂಗೆ ಆಟವಾಡಲು ಪಾಪು ಕೊಟ್ಟಿದ್ದಾನೆ ದೇವರು.. " ಎಂದಿದ್ದರು."ಅಮ್ಮ ನಂಗೆ ತಂಗಿ ಪಾಪೂನೇ ಬೇಕೂಂತ ದೇವರತ್ರ ಹೇಳಮ್ಮಾ.." ಎಂದು ಅಮ್ಮನಲ್ಲಿ ಗೋಗರೆದು ಅಮ್ಮನ ಹೊಟ್ಟೆಗೊಂದು ಸಿಹಿಮುತ್ತನಿತ್ತಿದ್ದೆ. ಅಂದಿನಿಂದ ದಿನವೂ ಅಮ್ಮನ ಹೊಟ್ಟೆಗೆ ಮುತ್ತನಿಟ್ಟು ತಂಗಿ ಯಾವಾಗ ಬರ್ತಾಳಮ್ಮ ಎಂದು ಕೇಳುತ್ತಲೇ ಇದ್ದೆ. ನನಗೂ ಕುತೂಹಲವಿತ್ತು. ತಂಗಿ ಹೇಗಿರ್ತಾಳೆ ಅಂತ ನೋಡಲು.  ಅಮ್ಮನಲ್ಲಿ ಆಗಾಗ ಎತ್ತಿಕೋ ಎಂದು ಪೀಡಿಸುತ್ತಿದ್ದವಳು, ತಂಗಿಗೆ ನೋವಾಗಬಹುದು. ನಾನು ನಿನ್ನ ಕಿರುಬೆರಳು ಹಿಡಿದ ಬರುತ್ತೇನೆ ಎಂದು ಹೇಳುತ್ತಿದ್ದೆ. ಅಮ್ಮನೇ ಕಥೆ ಹೇಳಿ ಮಲಗಿಸಬೇಕೆಂದು ಅಳುತ್ತಿದ್ದವಳು ಅಪ್ಪನ ಎದೆಹರವಿನಲ್ಲಿ ಮಲಗಿ ಕಥೆ, ಪುರಾಣ ವಾಚನವನ್ನು ಕೇಳುತ್ತಾ ನಿದ್ರಿಸಲು ಆರಂಭಿಸಿದೆ.

      ಒಂದು ದಿನ ಬೆಳ್ಳಂಬೆಳಗ್ಗೆ ಎದ್ದಾಗ ಅಮ್ಮನಿರಲಿಲ್ಲ. ಅಜ್ಜಿ ನನ್ನನ್ನು ಕರೆದು "ಅಮ್ಮ ನಿನಗೆ ಪುಟ್ಟ ಪಾಪು ತರಲು ಹೋಗಿದ್ದಾರೆ" ಎಂದು ಹೇಳಿದರೂ ನಾನೂ ಹಠಿಹಿಡಿದು ದಿನವಿಡೀ ಅತ್ತಿದ್ದೆ. "ಇನ್ನು ಕೆಲವು ದಿನವಷ್ಟೇ, ಬರುತ್ತಾಳೆ" ಎಂದರೂ ನನ್ನ ರಂಪ ನಿಂತಿರಲಿಲ್ಲ.

    ಎರಡು ದಿನದ ಬಳಿಕ ಶಾಲೆಯಿಂದ ಬಂದಾಗ ದಂಗಾಗಿ ಹೋದೆ. ಅಮ್ಮ ಬಿಳಿ ಬಟ್ಟೆ ಹೊದ್ದು ಮನೆ ಜಗಲಿಯಲ್ಲಿ ಮಲಗಿದ್ದರು. ಅಪ್ಪ ಕಣ್ಣೀರಿಡುತ್ತಿದ್ದರು. ಅಜ್ಜಿ ನನ್ನನ್ನು ಎತ್ತಿಕೊಂಡು "ತಂಗಿ ತುಂಬಾ ಹಠ ಮಾಡಿದಳು ಅಮ್ಮನ ಹೊಟ್ಟೆಯಿಂದ ಹೋರಬರಲು. ನೋವು ಸಹಿಸಲಾರದೆ ಅಮ್ಮ ದೇವರನ್ನು ಸೇರಿಕೊಂಡಳು." ಎಂದರೆ ಒಪ್ಪಲಾಗಲೇ ಇಲ್ಲ ನನಗೆ. ಅಂದಿನಿಂದ ಅಪ್ಪನೇ ನನಗೆ ಅಮ್ಮ. ಒಂದು ದಿನವೂ ಬೈಯಲಿಲ್ಲ, ಹೊಡೆಯಲಿಲ್ಲ, ನನ್ನ ಹಠ ಅಳುವಿಗೆಲ್ಲ ಅವರ ಪ್ರೀತಿಯ ಅಪ್ಪುಗೆಯೇ ಉತ್ತರವಾಗಿತ್ತು. ಎಷ್ಟೇ ನೋವಾದರೂ ಅಪ್ಪನ ದೇಹದ ಬೆವರ ವಾಸನೆ ಸೋಕಿದಾಗ ಸಮಾಧಾನವಾಗುತ್ತಿತ್ತು.

     ಒಂದು ದಿನ ಅಜ್ಜಿ ಅಪ್ಪನಲ್ಲಿ ಮಾತಾನಾಡುವುದು ನನ್ನ ಕಿವಿಗೆ ಬಿದ್ದಿತು "ಇನ್ನು ಎಷ್ಟು ದಿನ ಹೀಗೆ ಒಬ್ಬಂಟಿಯಾಗಿ ಇರುತ್ತೀಯಾ.. ರೋಹಿಣಿಗೆ ಒಬ್ಬಳು ಅಮ್ಮ ಬೇಕು" ಅದಕ್ಕೆ ಅಪ್ಪ ಏನು ಹೇಳಿದರೋ ಇಲ್ಲವೋ ನನಗೆ ಸ್ಪಷ್ಟವಾಗಿ ಕೇಳಿಸಲಿಲ್ಲ. ಆದರೆ ನನಗೆ ಮಾತ್ರ ಇನ್ನೊಬ್ಬ ಹೊಸ ಅಮ್ಮ ಬರುತ್ತಾಳೆ ಎಂದು ಖುಷಿ ಆಗಿತ್ತು. ಆದರೆ ತುಂಬಾ ದಿನವಾದರೂ ಹೊಸ ಅಮ್ಮ ಬರದೇ ಇದ್ದಾಗ ಅಜ್ಜಿಯಲ್ಲಿ ನಾನೇ ಕೇಳಿದೆ. ಅದಕ್ಕೆ ಅಜ್ಜಿ "ನಿನ್ನನ್ನು ಬೇರೆ ಅಮ್ಮನ ಕೈಗೊಪ್ಪಿಸುವುದು ನಿನ್ನಪ್ಪನಿಗೆ ಇಷ್ಟವಿಲ್ಲವಂತೆ ಪುಟ್ಟಿ. ಅಪ್ಪನೇ ನಿನಗೆ ಅಮ್ಮನ ಪ್ರೀತಿಯನ್ನೂ ಕೊಟ್ಟು ಬೆಳೆಸುತ್ತಾನಂತೆ. ನಾನು ಹೇಳಿ ಒಪ್ಪಲಿಲ್ಲ. ಬೇಕಾದರೆ ನೀನೇ ಒಮ್ಮೆ ಹೇಳಿ ನೋಡು. ನನಗೆ ಹೊಸ ಅಮ್ಮನನ್ನು ತನ್ನಿ ಎಂದು ಗೋಗರೆದರೆ, ಆಗ ಒಪ್ಪಲೂಬಹುದು." ಎಂದಿದ್ದರು. ನಾನು ಅಪ್ಪನ ಬಳಿ ಓಡಿ ಹೋಗಿ ಕೇಳಿಯೇ ಬಿಟ್ಟೆ. ಹೊಸ ಅಮ್ಮ ಬಂದರೆ ತಂಗಿಯನ್ನೋ ತಮ್ಮನನ್ನೋ ತಂದು ಅವರನ್ನು ಮಾತ್ರ ಪ್ರೀತಿ ಮಾಡಿದರೆ.. ನಿನ್ನನ್ನು ಯಾರು ಪ್ರೀತಿ ಮಾಡುವುದು ಮಗಳೇ.. ನಾನೇ ತಾನೇ..?ಹಾಗಾಗಿ ಹೊಸ ಅಮ್ಮನನ್ನು ತರದೇ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ.. ನಿನಗೆ ನಾನು, ನನಗೆ ನೀನು.. ಆಯ್ತಾ ಎಂದು ಹಣೆಗೊಂದು ಮುತ್ತನಿಟ್ಟು ಹೇಳಿದ್ದರು. ಮುಗ್ಧವಾಗಿ ಅಡ್ಡಡ್ಡ ಉದ್ದುದ್ದ ತಲೆಯಾಡಿಸಿದ್ದೆ.

      ನನಗೆ ಯಾವುದಕ್ಕೂ ಕಡಿಮೆಯಾಗದಂತೆ ಅಜ್ಜಿ, ಅಪ್ಪ ಇಬ್ಬರೂ ನೋಡಿಕೊಂಡಿದ್ದರು. ಮೆಡಿಕಲ್ ಸೀಟು ಸಿಕ್ಕರೂ ಅಪ್ಪನನ್ನು ಬಿಟ್ಟು ಹಾಸ್ಟೆಲಿನಲ್ಲಿ ಉಳಿದುಕೊಳ್ಳಲು ಇಷ್ಟವಿಲ್ಲದೆ ನಾನು ಮನೆಗೆ ದಿನಾ ಹೋಗಿ ಬರುವಂತೆ ಇಂಜಿನಿಯರಿಂಗ್ ಆಯ್ಕೆ ಮಾಡಿದಾಗ ಸ್ವಲ್ಪವೂ ವಿಚಲಿತರಾಗದೆ ಸಮ್ಮತಿಸಿದ್ದರು. ಒಂದು ದಿನವೂ ಶಾಲೆಯ ವರದಿ ಅಪ್ಪನಿಗೆ ಒಪ್ಪಿಸದ ದಿನವಿಲ್ಲ.

      ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದಾಗ ಅಜ್ಜಿಯೂ ಕಾಲನ ಕರೆಗೆ ಓಗೊಟ್ಟು ಹೊರಟು ನಿಂತಾಗ  ಅಪ್ಪನ ಕಣ್ಣಲ್ಲಿನ ನೋವಿನ ಭಾವ ಕಂಡಿದ್ದೆ ನಾನು.. ನನ್ನೆದುರು ನಗುನಗುತ್ತಲೇ ಇರುತ್ತಿದ್ದ ಅಪ್ಪನ ಹೃದಯದ ನೋವುಗಳು ಇತ್ತೀಚೆಗೆ ನನಗೆ ಅರಿವಾಗತೊಡಗಿದ್ದವು.

      ನಾನು ಕ್ಯಾಂಪಸ್ ಸೆಲೆಕ್ಷನ್ ‌ನಲ್ಲಿ ದೊರೆತ ಉದ್ಯೋಗಕ್ಕೆಂದು ಕಣ್ಣೀರಿಡುತ್ತಾ ಹೊರಟು ನಿಂತಾಗ, ಅವರೇ ನನಗೆ ಧೈರ್ಯ ತುಂಬಿದ್ದರು. "ಇಂದಲ್ಲ ನಾಳೆ ಪರಸ್ಪರ ಅಗಲಿಕೆ ಇದ್ದದ್ದೇ. ನಿನ್ನ ಬದುಕಿನ ಹಾದಿಗೆ ನಮ್ಮ ಬಾಂಧವ್ಯ ಅಡ್ಡಿಯಾಗಬಾರದು..." ಎಂದೆಲ್ಲ ಹೇಳಿ ನನ್ನನ್ನು ಖುಷಿಯಿಂದ ಬೆಂಗಳೂರಿಗೆ ಹೊರಡುವಂತೆ ಮಾಡಿದ್ದರು. ನನ್ನನ್ನು ಬೆಂಗಳೂರಿನಲ್ಲಿ ಪಿಜಿಯಲ್ಲಿ ಬಿಟ್ಟು ಹೊರಟಾಗ ಅಪ್ಪ ನಗುತ್ತಲೇ ಕೈಬೀಸಿದರೂ ನಾಲ್ಕು ಹೆಜ್ಜೆ ನಡೆದು ಕಣ್ಣೀರೊರೆಸಿಕೊಂಡದ್ದು ನನಗೆ ತಿಳಿದಿತ್ತು. ಮತ್ತೂ ನಾಲ್ಕು ಹೆಜ್ಜೆ ನಡೆದು ಮುಖದ ಮೇಲೆ ಬಲವಂತದ ನಗು ತಂದುಕೊಂಡು ಹಿಂದಿರುಗಿ ನೋಡಿ, ದೂರದಿಂದಲೇ ಕೈಬೀಸಿದ್ದರು. ನನಗೆ ಪಿಜಿಯಲ್ಲಿ, ಆಫೀಸಿನಲ್ಲಿ ಹೊಸ ಗೆಳತಿಯರೆಲ್ಲ ದೊರೆತರು. ಆದರೆ ಅಪ್ಪ ಮಾತ್ರ ಒಬ್ಬಂಟಿಯಾದರು.

        ಬಣ್ಣಮಾಸಿದ್ದರೂ, ಹರಿದು ಹೋಗಿದ್ದರೂ ಹೊಸದು ಬಟ್ಟೆ ಕೊಳ್ಳುವ ಆಸಕ್ತಿ ಇಲ್ಲದ ಅಪ್ಪನಿಗೆ ನನ್ನ ಮೊದಲ ಸಂಪಾದನೆಯಲ್ಲಿ ಬಟ್ಟೆಬರೆ ತರಬೇಕೆಂದು ನಿರ್ಧರಿಸಿದ್ದೆ. ಅಂತೆಯೇ ಮತ್ತೇನೇನು ಬೇಕೋ ಎಲ್ಲವನ್ನೂ ತೆಗೆದಿರಿಸಿಕೊಂಡು ಹೊರಟು ಬಂದಿದ್ದೆ.. ನಾನು ಏನೇ ಕೊಂಡರೂ ಅಪ್ಪನ ನನಗೆ ತೋರಿದ ಪ್ರೀತಿ ಕಾಳಜಿಯ ಮುಂದೆ ಅದು ಏನೇನೋ ಅಲ್ಲ ಎಂದು ನನಗೂ ತಿಳಿದಿದೆ.. ಎಂದು ಯೋಚಿಸುತ್ತಿದ್ದ ರೋಹಿಣಿ, ಹೊರಗಿನಿಂದ ಅಪ್ಪ ಬಂದಾಗ ಎದ್ದು ಬಂದಳು.

"ಮಗಳೇ.. ನಿನಗಿಷ್ಟ ಅಂತ ಪೇರಳೆ ಹಣ್ಣು, ಅನಾನಾಸು ಎಲ್ಲ ಕೊಯ್ದು ತಂದಿದ್ದೇನೆ ನೋಡು..." ಎಂದು ಕೈಗಿತ್ತರು. ಮಧ್ಯಾಹ್ನದ ಬಿಸಿಲಿನ ಝಳಕ್ಕೆ ದಣಿದ ಗಿರಿಧರ ರಾಯರ ಹಣೆಯ ಮೇಲೆ ಬೆವರ ಹನಿ ಸಾಲುಗಟ್ಟಿ ತೊಟ್ಟಿಕ್ಕುತ್ತಿತ್ತು.

     "ರೋಹಿಣಿ.. ನಿನಗೇನು ವಿಶೇಷ ಅಡುಗೆ ಮಾಡಲಿ ಇವತ್ತು..?" ಎಂದು ಕೇಳಿದಾಗ "ಅಪ್ಪಾ.. ಇವತ್ತು ನಾನೇ ನಿಮಗೆ ಅಡುಗೆ ಮಾಡಿ ಬಡಿಸುತ್ತೇನೆ.. ಅದೇ ಸ್ಪೆಷಲ್.. " ಎಂದಳು ನಗುತ್ತಾ.."ನನಗೆ ನಿನ್ನ ಕೈರುಚಿ ಸವಿಯುವ ಭಾಗ್ಯ ಇದೆ ಇವತ್ತು.." ಎಂದು ಅಪ್ಪ ನಕ್ಕಾಗ ಗುಳಿಯಾಳಕ್ಕಿಳಿದ ಕಣ್ಣುಗಳಲ್ಲಿ ಸಾರ್ಥಕತೆಯ ಭಾವ ಕಂಡಂತಾಯಿತು ರೋಹಿಣಿಗೆ. ಗೋಡೆಯ ಮೇಲೆ ವರ್ಣಚಿತ್ರದಲ್ಲಿದ್ದ ಅಮ್ಮ ತುಟಿಯಂಚಿನಲ್ಲಿ ನಸುನಕ್ಕಂತೆ ಭಾಸವಾಗಿ ರೋಹಿಣಿಯ ಕಣ್ಣಂಚು ತೇವವಾಯಿತು.

✍️... ಅನಿತಾ ಜಿ.ಕೆ.ಭಟ್.

ಮಾಮ್ಸ್‌ಪ್ರೆಸೊ ಕನ್ನಡದಲ್ಲಿ 2021ರ ಡಿಸೆಂಬರ್ ತಿಂಗಳ ಟಾಪ್ ಬ್ಲಾಗ್ ಬರಹಗಳ ಸ್ಪರ್ಧೆಯಲ್ಲಿ ಸ್ಥಾನ ಪಡೆದ ಕಥೆ.

ವಾರದ ಸವಾಲು "ತ್ಯಾಗವೆಂಬ ತೈಲ'' ಎಂಬ ವಿಷಯದಡಿ ರಚಿಸಿದ ಕಥೆ.