ಧರೆಗಿಳಿದು ಬಂದಿದೆ ನವ ಶ್ರಾವಣ
ಧಾರೆಯನು ಮಿತಗೊಳಿಸಿಹನು ವರುಣ
ಇನಿಯನಿಗೆ ಕೈಬಳೆ ಸದ್ದಿನ ಮರುಶ್ರವಣ
ತವರ ನೆನಪಿಗೆ ಪಂಚಮಿಯೆ ಕಾರಣ||
ವರ್ಷ ಋತುವಿನಲಿ ಬರುವುದು ಶ್ರಾವಣ
ಹರ್ಷವುಕ್ಕಿಸುವ ಹಬ್ಬಗಳ ಆಚರಣೆ
ಸ್ವಾಗತಿಸಿದೆ ಭೂರಮೆಯ ಹಸಿರು ತೋರಣ
ವರಮಹಾಲಕ್ಷ್ಮಿ ವ್ರತದ ವೈಭವದ ಚಿತ್ರಣ||
ಆಷಾಢ ಕಳೆದು ವಿರಹ ದೂರಾಯಿತಣ್ಣ
ಸನಿಹದಲಿ ನವವಧು ನಾಚಿ ಕೆನ್ನೆಕೆಂಬಣ್ಣ
ಮನೆಮನದ ತುಂಬೆಲ್ಲ ರಂಗು ಚೆಲ್ಲಿ
ಬೆಳೆವ ಪೈರು ಮುದವು ರೈತನ ಮೊಗದಲ್ಲಿ||
ಸ್ವಾತಂತ್ರ್ಯೋತ್ಸವಕೆ ಸಿದ್ಧ ತಾಯಿ ಭಾರತಿ
ನಾಗರಪಂಚಮಿಯ ಸಂಭ್ರಮದಿ ಗರತಿ
ಲಕ್ಷ್ಮೀ ಪೂಜೆಯಲಿ ಎಷ್ಟೊಂದು ಭಕುತಿ
ಸಡಗರದಿ ಅಲಂಕರಿಸಿಹಳು ಮನೆಯೊಡತಿ||
ಶ್ರಾವಣದಿ ಹೊಸ್ತಿಲ ಗಂಗೆಯ ಪೂಜಿಸಿ
ಸೋಣೆಹುಲ್ಲ ಗಂಗೆಗರ್ಪಿಸಿ ನಮಸ್ಕರಿಸಿ
ವಿರಮಿಸುತಿರುವ ಕೃಷಿಕ ಮೆಲ್ಲುವ ತಾಂಬೂಲ
ಸೋದರನ ರಾಖಿಗೆ ಮುಖವು ಮೊರದಗಲ||
ಕೊಳಲನೂದುತ ಬಂದಿಹ ಬೆಣ್ಣೆ ಕೃಷ್ಣ
ಬಂದಿದೆ ನೈವೇದ್ಯ ಭಕ್ಷ್ಯ ಗಳ ದಿಬ್ಬಣದ
ಮೂಡಣದಿ ಮೂಡಿಹ ರವಿಯ ಹೊಂಬಣ್ಣ
ಭೂರಮೆಯ ಸಿಂಗಾರ ಹಸಿರು ಬಣ್ಣ||
ಸಂತಸವ ತಂದಿದೆ ಹೊಸ ಶ್ರಾವಣ...
ತುಂಬಿದೆ ಕಣಕಣದಲಿ ನವಚೇತನ...
✍️... ಅನಿತಾ ಜಿ.ಕೆ.ಭಟ್.
02-07-2019
👏👏👏
ReplyDelete💐🙏 ಥ್ಯಾಂಕ್ಯೂ...
ReplyDelete