Friday, 31 July 2020

ಸತ್ಯನಾರಾಯಣ ಪೂಜೆಯ ಹಾಡು-೩

      

        ಸತ್ಯನಾರಾಯಣ ಪೂಜೆಯ ಹಾಡು-೩

ಸತ್ಯನಾರಾಯಣ ಪ್ರಸಾದವಾ ಕೊಡಿಸೊ ನಮಗೆ
ನಿತ್ಯ ದೀರ್ಘಾಯು ಸೌಖ್ಯವಾ ಮತ್ತು ತೀರ್ಥ ಪ್ರಸಾದವಾ ಕೊಡಿಸೊ ನಮಗೆ
ಉತ್ತಮದ ಸಪಾದ ಭಕ್ಷ್ಯವಾ
ಅತ್ಯಧಿಕವಾದ ಪಾದವಾ ನಂಬಿಪೂಜೆ ಭಕ್ತಿಯಿಂದ ಮಾಳ್ಪೆ ಮಾಧವಾ
ಸತ್ಯ ವೈಷ್ಣ ರಹಿತನಾದಿತ್ಯ
ಕೋಟಿ ಸುಪ್ರಕಾಶ 
ದೈತ್ಯನಾಶ ಇಂದಿರೇಶ ಶಕ್ತಿ ಭಕ್ತಿ ಮುಕ್ತಿ||ಸತ್ಯ||



ಆದಿಮಧ್ಯಂತ ರಹಿತನೇ ನಿಮ್ಮ ಕಥೆಯ 
ಓದಿ ಕೇಳಿ ಮಾಡ್ವೆ ಪ್ರಾರ್ಥನೆ ಆಲಿಸುವ ಜನರು ಸುಮ್ಮನೇ ತಮ್ಮ ಮರಣ 
ಹಾದಿಯನ್ನು ನೋಡಲಾತನೇ
ಗೋಧಿ ಕ್ಷೀರ ಶರ್ಕರಘೃತಾದಿ ಬಾಳೆ ಹಣ್ಣುಗಳನು ಸ-
ಪಾದಭಕ್ಷ್ಯ ಮಾಡಿ ನಿಮಗೆ 
ಮೋದದಿಂದ ಒಪ್ಪಿಸುವೆನು||ಸತ್ಯ||

ವೃದ್ಧ ಮಿತ್ರರನ್ನು ಪೊರೆದೆಯಾ ಕ್ಷತ್ರಿ ವೈಶ್ಯ 
ಶೂದ್ರರನ್ನು ಪೊರೆದೆಯಾ
ನಿದ್ರೆ ಜಾಗ್ರ ಸ್ವಪ್ನಮಿತ್ರಯಾ ಎನ್ನ ದಾ-
ರಿದ್ರ್ಯವಾ ನಾಶಮಾಡೆ ಚೆಲುವಯಾ
ಕದ್ರುಪುತ್ರ ಶಯನ ಸಾಮೋದವಾಗಿ
 ಇರುವ ದೇವ ಭದ್ರವಾಗಿ ಇರುವ ಶ್ರೀ 
ರುದ್ರ ಮಿತ್ರ ಕಮಲ ನೇತ್ರ||ಸತ್ಯ||

ಕವಿತೆ ವನಿತೆ ಸಕಲ ಭಾಗ್ಯವೂ ಕನಿಂದ 
ಭವನಿ ಭಟ್ಟು ಬರಲು ಅಯೋಗ್ಯವೂ
ಅವನಿ ನೆವನದಲ್ಲಿ ಪಾಂ-
ಡವರ ಪಕ್ಷ ನಿಂತು ಕೌ-
ರವರ ಸೋಲಿಸಿ ದಂತಲಿರುವ 
ಪವನಜಾಕ್ಷ ಇತ್ಯಪ್ರಷ್ಠಿ ||ಸತ್ಯ||

ಅಂತು ಇಂತೆಂಬ ಮಹಿಮೆಯಾ ಪೊಗಳೆಲಾ
 ಸಂತರಂಗ ಸಾಧ್ಯನಿರ್ಣಯಾ
ಕಂತು ಜನಕ ರಕ್ಷಿಸೆಮ್ಮಯಾ ಸಕಲಭಾಗ್ಯ 
ಸಂತತಿಯ ಕೊಡಿ ಜಗನ್ಮಯ
ಅಂತ ರಹಿತನಾದ ವೇದಾಂತಪುರ ನಿವಾಸ ಶ್ರೀ
ಕಾಂತ ವಿಷ್ಣುಮೂರ್ತಿ ಏಕಾಂತದಲ್ಲಿ ವಂದಿಸುವೆನು||ಸತ್ಯ||


-ಸಂಗ್ರಹ

ಬೇಡಿದ ಭಕ್ತಗೆ ಇಷ್ಟಾರ್ಥಗಳನ್ನು ಕರುಣಿಸುವ ದೇವ ಸತ್ಯನಾರಾಯಣ.ಕರಾವಳಿ ಭಾಗದ ಹವ್ಯಕರಲ್ಲಿ ಸತ್ಯನಾರಾಯಣ ದೇವರ ಪೂಜೆಯನ್ನು ಪುರೋಹಿತರು ಮಂತ್ರೋಚ್ಛಾರಣೆಯ ಮೂಲಕ  ನೆರವೇರಿಸಿದಾಗ ಹೆಂಗಳೆಯರು ಹಾಡಿನ ಮೂಲಕ ಸತ್ಯನಾರಾಯಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ.ಇಂತಹ ಹಾಡುಗಳ ರಚನೆಕಾರರು ಯಾರು ಎಂಬುದು ತಿಳಿಯದಿದ್ದರೂ ಓಲೆಗರಿಗಳಲ್ಲಿ ನಮೂದಾಗಿ,ಒಬ್ಬರಿಂದ ಇನ್ನೊಬ್ಬರು ಕಲಿತು ಹಾಡನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದರು.ಪುಸ್ತಕಗಳ ಬಳಕೆ ಆರಂಭವಾದಾಗ ಹಲವರು ಹಸ್ತಪ್ರತಿ ಮಾಡಿಟ್ಟುಕೊಂಡರು.ಹೀಗೆ ಪಸರಿಸಿದಾಗ ಒಂದೇ ಹಾಡಿನಲ್ಲಿ ಹಲವಾರು ಬದಲಾವಣೆಗಳಾದವು ಉಚ್ಛಾರಣೆ, ಅಲ್ಪಪ್ರಾಣ ಮಹಾಪ್ರಾಣ, ಪದಪ್ರಯೋಗ.. ಇತ್ಯಾದಿ.ನನಗೆ ದೊರೆತ ಹಸ್ತಪ್ರತಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವಷ್ಟು ಜ್ಞಾನ ನನಗಿಲ್ಲ.ನನಗೆ ತಿಳಿದಿರುವ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೇನಾದರೂ  ಬದಲಾವಣೆ ಮಾಡಬೇಕೆಂದು ಕಂಡುಬಂದಲ್ಲಿ ತಿಳಿಸಬಹುದು.

-ಅನಿತಾ ಜಿ.ಕೆ.ಭಟ್.
31-07-2020.

Sunday, 26 July 2020

ನಿನ್ನ ಬಾಳಿಗೆ ನೀನೆ ಶಿಲ್ಪಿ





ನಿನ್ನ ಬಾಳಿಗೆ ನೀನೆ ಶಿಲ್ಪಿ

ನಡೆದಾಡುವ ಹಾದಿಯಲಿ
ಏರು ತಗ್ಗುಗಳಿಹುದು
ಕಡೆಗಣಿಸದೆ ಜತನದಲಿ
ಗುರಿಯ ಮುಟ್ಟುವ ಕನಸು ಕಾಣು||೧||

ಅಂಬರದ ಅಂಚಿನಲಿ ಸಂಭ್ರಮ
ಬೀಸಿದಂತೆ ಕಲ್ಲು ಹಿಟ್ಟು
ತುಂಬಿಹರಿದ ನದಿಯಸಂಗಮ
ಹಾಸಿಕೆನ್ನೀರ ಹುಡುಕಿ ನೆಲೆಗಟ್ಟು||೨||

ಖಾಲಿಪುಟದಂತೆ ಬದುಕಿಹುದು
ಗೀಚುವ ಕವಿಯು ನೀನಾಗು
ಬೇಲಿಯಿರದ ಶರಧಿಯದು
ಬಾಚಿಕೋ ಜಯದ ಸೊಬಗು||೩||

ಮನವಿರಲಿ ಕಾರ್ಯದೊಳು ನೆಟ್ಟು
ಚಂಚಲತೆ ಸೋಕದಂತೆ
ದಿನರಾತ್ರಿ ಶ್ರಮನಿಯಮ ಬಿಗಿಯಿಟ್ಟು
ಹಚ್ಚುದಾರಿಗೆ ಬೆಳಕು ದೀಪದಂತೆ||೪||

ನಿನ್ನ ಬಾಳಿಗೆ ನೀನೆ ಶಿಲ್ಪಿಯಾಗು
ಉಳಿಪೆಟ್ಟು  ಸಹಿಸಿಯೇ ಮೂರ್ತಿ
ಚಿನ್ನಧನಕೂ ಮೀರಿ ಸಂಪನ್ನನಾಗು
ಕೇಳುವಂತೆ ಜಗದಗಲ ನಿನ್ನ ಕೀರ್ತಿ||೫||


✍️... ಅನಿತಾ ಜಿ.ಕೆ.ಭಟ್.
26-07-2020.
   





Friday, 24 July 2020

ಸತ್ಯನಾರಾಯಣ ಪೂಜೆಯ ಹಾಡು-೨ ಪ್ರಸಾದ ಬೇಡುವ ಹಾಡು



ಸತ್ಯನಾರಾಯಣ ಪೂಜೆಯ ಹಾಡು - ೨
ಪ್ರಸಾದ ಬೇಡುವ ಹಾಡು

ಸತ್ಯನಾರಾಯಣ ಪ್ರಸಾದವ|
ಕೊಡಿಸು ನಮಗೆ | ನಿತ್ಯ ದೀರ್ಘಾಯು ಸೌಖ್ಯವಾ|| ಪ||

ಸತ್ಯವೃಷ್ಣ ರಹಿತನಾ|ದಿತ್ಯಕೋಟಿ ಸುಪ್ರಕಾಶ|
ದೈತ್ಯನಾಶ ಇಂದಿರೇಶ |ಶಕ್ತಿ ಯುಕ್ತಿ ಭಕ್ತಿ ಮುಕ್ತಿ
|| ಅ. ಪ||

ಆದಿ ಮಧ್ಯಾಂತ ರಹಿತನೇ| ನಿನ್ನ ಕಥೆಯ ಓದಿ ಕೇಳಿ ಮಾಡ್ವೆ ಪ್ರಾರ್ಥನೆ|
ಗೋಧಿ ಕ್ಷೀರ ಶರ್ಕರಾ |
ಘೃತ್ಯಾದಿ ಬಾಳೆಹಣ್ಣುಗಳಾ |
ಸಪಾದ ಭಕ್ಷ್ಯಗಳನು
ಮಾಡಿ ಮೋದದಿಂದ ಅರ್ಪಿಸುವೆನು||೧||

ನಿದ್ರೆ ಜಾಗ್ರ ಸ್ವಪ್ನ ಮಿತ್ರೆಯಾ|
ಎನ್ನ ದಾರಿದ್ರ್ಯ ನಾಶ ಮಾಡು ಚಿನ್ಮಯಾ|
ಖದ್ರು ಪುತ್ರ ಶಯನ ಸಾ|ಮುದ್ರ ನಾಗಿ ಮೆರೆವ ದೇವ|
ಭದ್ರವಾಗಿರೂವ ಶ್ರೀ ರುದ್ರ ಮಿತ್ರ ಕಮಲನೇತ್ರ||೨||

ಕಂತು ಜನಕ ರಕ್ಷಿಸೆನ್ನಯಾ | ಸಕಲ ಸೌಭಾಗ್ಯ ಸಂತತಿಯ ಕೊಡು ಜಗನ್ಮಯಾ|
ಅಂತರಹಿತನಾದ ವೇ|ದಾಂತ ಸುರನಿವಾಸ ಶ್ರೀ|ಕಾಂತ ವಿಷ್ಣುಮೂರ್ತಿಯೇ |ಏಕಾಂತದಿಂದ ವಂದಿಸುವೆನು||೩||

- ಸಂಗ್ರಹ



        ಬೇಡಿದ ಭಕ್ತಗೆ ಇಷ್ಟಾರ್ಥಗಳನ್ನು ಕರುಣಿಸುವ ದೇವ ಸತ್ಯನಾರಾಯಣ.ಕರಾವಳಿ ಭಾಗದ ಹವ್ಯಕರಲ್ಲಿ ಸತ್ಯನಾರಾಯಣ ದೇವರ ಪೂಜೆಯನ್ನು ಪುರೋಹಿತರು ಮಂತ್ರೋಚ್ಛಾರಣೆಯ ಮೂಲಕ  ನೆರವೇರಿಸಿದಾಗ ಹೆಂಗಳೆಯರು ಹಾಡಿನ ಮೂಲಕ ಸತ್ಯನಾರಾಯಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ.ಇಂತಹ ಹಾಡುಗಳ ರಚನೆಕಾರರು ಯಾರು ಎಂಬುದು ತಿಳಿಯದಿದ್ದರೂ ಓಲೆಗರಿಗಳಲ್ಲಿ ನಮೂದಾಗಿ,ಒಬ್ಬರಿಂದ ಇನ್ನೊಬ್ಬರು ಕಲಿತು ಹಾಡನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದರು.ಪುಸ್ತಕಗಳ ಬಳಕೆ ಆರಂಭವಾದಾಗ ಹಲವರು ಹಸ್ತಪ್ರತಿ ಮಾಡಿಟ್ಟುಕೊಂಡರು.ಹೀಗೆ ಪಸರಿಸಿದಾಗ ಒಂದೇ ಹಾಡಿನಲ್ಲಿ ಹಲವಾರು ಬದಲಾವಣೆಗಳಾದವು ಉಚ್ಛಾರಣೆ, ಅಲ್ಪಪ್ರಾಣ ಮಹಾಪ್ರಾಣ, ಪದಪ್ರಯೋಗ.. ಇತ್ಯಾದಿ.ನನಗೆ ದೊರೆತ ಹಸ್ತಪ್ರತಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವಷ್ಟು ಜ್ಞಾನ ನನಗಿಲ್ಲ.ನನಗೆ ತಿಳಿದಿರುವ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೇನಾದರೂ  ಬದಲಾವಣೆ ಮಾಡಬೇಕೆಂದು ಕಂಡುಬಂದಲ್ಲಿ ತಿಳಿಸಬಹುದು.

✍️... ಅನಿತಾ ಜಿ.ಕೆ.ಭಟ್.
24-07-2020.

               ********


ಸೀಬೆ/ಪೇರಳೆ ಹಣ್ಣಿನ ಹಲ್ವಾ 😋


       
                       ಪೇರಳೆ/ಸೀಬೆ ಹಣ್ಣಿನ ಹಲ್ವಾ

     ಪೇರಳೆ/ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ.ಇದರಲ್ಲಿ ವಿಟಮಿನ್ ಸಿ ಮತ್ತು ಖನಿಜಾಂಶಗಳು ಹೇರಳವಾಗಿದ್ದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಲು ಸಹಕಾರಿ.ಈ ಗುಣಗಳಿಂದಾಗಿ ಬಡವರ ಸೇಬು ಎಂದೇ ಕರೆಯಲ್ಪಡುತ್ತದೆ.ದಿನಕ್ಕೊಂದು ಅಥವಾ ಎರಡು ತಾಜಾ ಪೇರಳೆ ಹಣ್ಣುಗಳ ಸೇವನೆಯಿಂದ ದೇಹವನ್ನು ಕಾಯಿಲೆಗಳನ್ನು ದೂರವಿಡಬಹುದು.ಒಮ್ಮೆಲೇ ಹತ್ತಾರು ಹಣ್ಣುಗಳು ಸಿಕ್ಕಾಗ ಹಲ್ವಾ ತಯಾರಿಸಬಹುದು.



ಬೇಕಾಗುವ ಸಾಮಗ್ರಿಗಳು:-
ಪೇರಳೆ ಹಣ್ಣಿನ ಪೇಸ್ಟ್ -2 ಕಪ್
ಸಕ್ಕರೆ-1ಕಪ್
ತುಪ್ಪ-1/2ಕಪ್
ಗೋಧಿ ಹುಡಿ-1/2ಕಪ್
ಏಲಕ್ಕಿ

ಮಾಡುವ ವಿಧಾನ:-
ಬಲಿತ ಪೇರಳೆಯನ್ನು ಸೀಳಿ ಎರಡು ಭಾಗಗಳಾಗಿ ಮಾಡಿಕೊಂಡು , ಸ್ವಲ್ಪ ನೀರು ಹಾಕಿ ಕುಕ್ಕರ್ ನಲ್ಲಿ ಮೂರು ಸೀಟಿ ಕೂಗಿಸಿ ಬೇಯಿಸಿಕೊಳ್ಳಿ.ತಣ್ಣಗಾದ ನಂತರ ಹಣ್ಣಿನ ತುಂಡುಗಳನ್ನು ನೀರಿನಿಂದ ತೆಗೆದುಕೊಂಡು ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಿ...ಸೋಸಿಕೊಳ್ಳಿ.ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಗೋಧಿ ಹುಡಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ.ನಂತರ ಪೇರಳೆ ಹಣ್ಣಿನ ರುಬ್ಬಿದ ಮಿಶ್ರಣವನ್ನು ಹಾಕಿ ತುಪ್ಪ ಹಾಕಿ ತಿರುವಿ.ಹಸಿವಾಸನೆ ಹೋದ ನಂತರ ಗೋಧಿ ಹುಡಿ ,ಸಕ್ಕರೆ ಹಾಕಿ ತಿರುವುತ್ತಿರಿ.ಪಾಕ ತಳಬಿಟ್ಟು ಬಂದಾಗ ಏಲಕ್ಕಿಪುಡಿ ಬೆರೆಸಿ... ತುಪ್ಪ ಸವರಿದ ತಟ್ಟೆಗೆ ಹಾಕಿ ಕತ್ತರಿಸಿ ..ಬಿಸಿ ಬಿಸಿ ಪೇರಳೆ ಹಲ್ವಾ ರೆಡಿ.


✍️ ... ಅನಿತಾ ಜಿ.ಕೆ.ಭಟ್.
24-07-2020.


Wednesday, 22 July 2020

ಸತ್ಯನಾರಾಯಣ ಪೂಜೆಯಹಾಡು-೧ :ಪ್ರಸಾದ ಬೇಡುವ ಹಾಡು


  

   ಸತ್ಯನಾರಾಯಣ ಪೂಜೆ ಹಾಡು        

    ಬೇಡಿದ ಭಕ್ತಗೆ ಇಷ್ಟಾರ್ಥಗಳನ್ನು ಕರುಣಿಸುವ ದೇವ ಸತ್ಯನಾರಾಯಣ.ಕರಾವಳಿ ಭಾಗದ ಹವ್ಯಕರಲ್ಲಿ ಸತ್ಯನಾರಾಯಣ ದೇವರ ಪೂಜೆಯನ್ನು ಪುರೋಹಿತರು ಮಂತ್ರೋಚ್ಛಾರಣೆಯ ಮೂಲಕ  ನೆರವೇರಿಸಿದಾಗ ಹೆಂಗಳೆಯರು ಹಾಡಿನ ಮೂಲಕ ಸತ್ಯನಾರಾಯಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವ ಪದ್ಧತಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ.ಇಂತಹ ಹಾಡುಗಳ ರಚನೆಕಾರರು ಯಾರು ಎಂಬುದು ತಿಳಿಯದಿದ್ದರೂ ಓಲೆಗರಿಗಳಲ್ಲಿ ನಮೂದಾಗಿ,ಒಬ್ಬರಿಂದ ಇನ್ನೊಬ್ಬರು ಕಲಿತು ಹಾಡನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿದ್ದರು.ಪುಸ್ತಕಗಳ ಬಳಕೆ ಆರಂಭವಾದಾಗ ಹಲವರು ಹಸ್ತಪ್ರತಿ ಮಾಡಿಟ್ಟುಕೊಂಡರು.ಹೀಗೆ ಪಸರಿಸಿದಾಗ ಒಂದೇ ಹಾಡಿನಲ್ಲಿ ಹಲವಾರು ಬದಲಾವಣೆಗಳಾದವು ಉಚ್ಛಾರಣೆ, ಅಲ್ಪಪ್ರಾಣ ಮಹಾಪ್ರಾಣ, ಪದಪ್ರಯೋಗ.. ಇತ್ಯಾದಿ.ನನಗೆ ದೊರೆತ ಹಸ್ತಪ್ರತಿಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವಷ್ಟು ಜ್ಞಾನ ನನಗಿಲ್ಲ.ನನಗೆ ತಿಳಿದಿರುವ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ಪ್ರಕಟಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೇನಾದರೂ  ಬದಲಾವಣೆ ಮಾಡಬೇಕೆಂದು ಕಂಡುಬಂದಲ್ಲಿ ತಿಳಿಸಬಹುದು.

ಸತ್ಯನಾರಾಯಣ ಪೂಜೆಯ
ಪ್ರಸಾದ ಬೇಡುವ ಹಾಡು -೧

ಕರುಣಿಸೆಮಗೆ ಸುಪ್ರಸಾದವ ಸತ್ಯದೇವ 
ಶಿರದಿ ಮೆರೆವ ಶ್ರೇಷ್ಠ ಪುಷ್ಪವ
ದುರಿತ ಹರ ಸಪಾದ ಭಕ್ಷ್ಯವ ನೀಡು ಎಮಗೆ 
ಹರುಷದಿಂದ ಶ್ರೀರ ಮಾಧವ ||ಪಲ್ಲವಿ||

ನಿರತ ನಿನ್ನ ಪೂಜೆ ಮಾಡಿ
ಪರಮ ಭಾಗ್ಯವೆಮಗೆ ನೀಡಿ 
ಪೊರೆಯಬೇಕೆನುತ್ತ ಬೇಡಿ
ಎರಗಿ ನಿಂದೆ ನಿನ್ನ ನೋಡಿ ||೧||

   ನಾದ ಬಿಂದು ಜ್ಯೋತಿ ರೂಪನೇ ನಿನ್ನ ಭಜಿಪ 
ಸಾಧು ಸಂತರನ್ನು ಪೊರೆವನೇ 
ಮೇಧಿನೀಯ ದುರುಳ ಹರಣ
ಸಾಧಿಸುತ್ತ ಶ್ರೇಷ್ಠ ಶರಣ
ರಾಧಮನುಜರೆರಗೆ ಕರುಣ
ನಾದ ನೀನು ತೋರಿ ಚರಣ ||೨||

  ಉರಗ ಶಯನ ಪದ್ಮನಾಭನೇ ಅಘವಿನಾಶ 
ಕರುಣ ನಯನ ಮಾರ ಜನಕನೇ  
ದುರುಳ ದಮನ ಲೋಕ ಪಾಲನೇ
ಸುರೇಶವಂದ್ಯ ಗರುಡಗಮನ ಲಕ್ಷ್ಮಿಲೋಲನೇ 
ಧರೆಯೊಳಧಿಕ ವೆನಿಪ ಕೊಲ್ಲಪುರದಿ ವಾಸಿತೆ ದೇವಿ 
ಸೋದರನೆ ಎಮ್ಮ ತಪ್ಪನೊಪ್ಪಿ 
ಪೊರೆಯೆನುತ್ತಲೆರಗಿ ಬೇಡ್ವೇ ||೩||

- ಸಂಗ್ರಹ

ಅನಿತಾ ಜಿ.ಕೆ.ಭಟ್.
22-07-2020.

Tuesday, 21 July 2020

ಜೀವನ ಮೈತ್ರಿ ಭಾಗ ೧೧೦(110)



ಧಾರಾವಾಹಿಯ ಕೊನೆಯ ಸಂಚಿಕೆ.ತಪ್ಪದೇ ಓದಿ .

ಜೀವನ ಮೈತ್ರಿ ಭಾಗ ೧೧೦


   ಮಗ....ಸೊಸೆ ಹಾಗೂ ಮೊಮ್ಮಗುವಿನ ಜೊತೆಗೆ ಆಗಮಿಸಿದ ಖುಷಿಯಲ್ಲಿ ಸುಮಾ ನಗುನಗುತ್ತಾ ಎಲ್ಲರನ್ನೂ ಉಪಚರಿಸಿದರು. ಬಹಳ ದಿನಗಳ ನಂತರ ಅಮ್ಮನ ಕೈಯಡುಗೆಯನ್ನು ಉಂಡ ಕೇಶವನಿಗೆ ಬಲು ತೃಪ್ತಿಯಾಗಿತ್ತು. ಸೌಜನ್ಯಳಿಗೆ ಈ ಮನೆಯಲ್ಲಿ ಮೊದಲ ದಿನ.ಅವಳ ಮಗುವಿಗೂ ಮೊದಲ ದಿನ.ಪ್ರಯಾಣಿಸಿ ಬಂದ ಮಗಳ ಹಠವೂ ಜೋರಾಗಿಯೇ ಇತ್ತು. ಕೇಶವನೂ ರಮಿಸಲು ಪ್ರಯತ್ನಿಸುತ್ತಿದ್ದ. ಆದರೂ ಮಗು ಜೋರಾಗಿ ಅಳುತ್ತಿದ್ದಾಗ ಬಂಗಾರಣ್ಣ ಏನೋ ನೆನಪಾದವರಂತೆ ಸೀದಾ ಮನೆಯ ಮಾಳಿಗೆಗೆ ತೆರಳಿದರು.ಅಲ್ಲಿಂದ ಒಂದು ದೊಡ್ಡ ಗೋಣಿಕಟ್ಟಲ್ಲಿ ಏನೋ ಭಾರವಾದ ವಸ್ತುವನ್ನು ಹಿಡಿದುಕೊಂಡು ಬಂದು.. "ಸುಮಾ.. ಇದನ್ನು ಸ್ವಚ್ಛಗೊಳಿಸಿ ಕೊಡು "ಎಂದರು.ಅವರು ಜೋಪಾನವಾಗಿ ಶುಚಿಗೊಳಿಸಿ ಕೊಟ್ಟಾಗ ಮುಂದಿನ ತಯಾರಿಮಾಡಿದ್ದರು ಬಂಗಾರಣ್ಣ.. ಕೋಣೆಯಲ್ಲಿ ಛಾವಣಿಯ ಅಡ್ಡಕ್ಕೆ ಹಗ್ಗ ಸಿಕ್ಕಿಸಿ ತೊಟ್ಟಿಲನ್ನು ಕಟ್ಟಿಯೇ ಬಿಟ್ಟರು ಅಜ್ಜ ಅಜ್ಜಿ.. ಸುಮಾ ದಪ್ಪದ ತಲೆದಿಂಬನ್ನಿಟ್ಟು ಬೆಚ್ಚಗೆ ಹಾಸಿ ಕೊಟ್ಟರು ..ಕೇಶವ ಮಗಳನ್ನು ಮಲಗಿಸಿದ.. ಸುಮಾ ...'ಜೋ ಜೋ..ಶ್ರೀ ಕೃಷ್ಣ ಪರಮಾನಂದ..ಜೋ ಜೋ..ಗೋಪಿಯ ಕಂದಾ ಮುಕುಂದಾ..ಜೋ..ಜೋ.."ಎಂದು ಹಾಡುತ್ತಾ ತೊಟ್ಟಿಲನ್ನು ತೂಗಿದಾಗ..ಅಜ್ಜಿಯ ಹಾಡಿನ ಮೋಡಿಗೆ ಮಗು ನಿದಿರೆಗೈಯಿತು..ಎಲ್ಲರು ನಿರಾಳರಾದರು.


       ಒಂದೂವರೆ ವರುಷದಿಂದ ಹರುಷವಿಲ್ಲದೆ ಸ್ತಬ್ದವಾದಂತಿದ್ದ ಮನೆಯಲ್ಲಿ ಮತ್ತೆ ಲವಲವಿಕೆ ತುಂಬಿತು.ಮರುದಿನ ಬೆಳಿಗ್ಗೆ ಅಂಗಳದಲ್ಲಿ ಕಾರು ನಿಂತಿದ್ದನು ಕಂಡ ಕೆಲಸದವರು ಮೊದಲು ಚಾವಡಿಗೆ ಇಣುಕಿ ಬಂದವರು ಯಾರೆಂದು ಸ್ಪಷ್ಟ ಪಡಿಸಿಕೊಂಡರು.'ಸಣ್ಣ ದನಿ ಮನೆಗೆ ಬಂದಿದ್ದಾರೆ' ಎಂಬ ಸುದ್ದಿ ಕ್ಷಣಮಾತ್ರದಲ್ಲಿ ಊರಿಡೀ ಹಬ್ಬಿತು.ಸುಮಾ ಮಗನಲ್ಲಿ ಕೆಲವು ದಿನ ರಜೆ ಹಾಕಿ ನಿಲ್ಲಲು ಒತ್ತಾಯಿಸಿದರು.ರೇಖಾ ನರಸಿಂಹ ರಾಯರು ಬೆಂಗಳೂರಿಗೆ ವಾಪಾಸಾದರು.ಮಗನ ಉದ್ಯೋಗ ಬಾಡಿಗೆ ಮನೆಯ ವಿಚಾರಗಳನ್ನು ತಿಳಿದುಕೊಂಡ ಅಮ್ಮ ಮಗನಲ್ಲಿ "ಇನ್ನು ಇಲ್ಲಿಯೇ ಇರಿ .." ಎಂದು ಒತ್ತಾಯಿಸಿದರು. ಯಾವುದಕ್ಕೂ ಯೋಚನೆ ಮಾಡಲು ಸ್ವಲ್ಪ ಕಾಲಾವಕಾಶ ಬೇಕು ಎಂದ ಕೇಶವ.


ಸಮಯ ಸಂದರ್ಭ ನೋಡಿಕೊಂಡು ಸೌಜನ್ಯಳಲ್ಲಿ ವಿಚಾರ ಚರ್ಚಿಸಿದ. ಅವಳು ನಿಧಾನವಾಗಿ ಆಲೋಚಿಸಿದಳು..ತವರಿನಲ್ಲಿಯೇ ತುಂಬಾ ಸಮಯ ಉಳಿದುಕೊಳ್ಳಲು ನನಗೆ ಅಭ್ಯಂತರವಿಲ್ಲದಿದ್ದರೂ ಕೇಶವನಿಗೆ ಅಲ್ಲಿ ಹೊಂದಿಕೆಯಾಗುವುದು ಕಷ್ಟ.ಅವನ ಸ್ವಭಾವವೇ ಹಾಗೆ. ಸ್ವಾಭಿಮಾನಿಯೋ .. ಒರಟನೋ.. ಮೂಗಿನ ತುದಿಯಲ್ಲಿ ಕೊಪವಿರುವವನೋ..ಮಗದೊಮ್ಮೆ ಮೃದು ಹೃದಯಿಯೋ...ಏನೆಂದೂ ಹೇಳಲಾಗದ ಸ್ವಭಾವ ಅವನದು.ಇನ್ನು ಸಂಬಳವೋ  ಬೆಂಗಳೂರಿನ ಜೀವನ ಶೈಲಿಗೆ ಅತಿ ಕಡಿಮೆ..ಬಾಡಿಗೆ ಮನೆ ವಾಸ್ತವ್ಯವೂ ಕಷ್ಟ..ಅನಿವಾರ್ಯವಾದರೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು.. ಇಲ್ಲಿ ಎಲ್ಲ ಅನುಕೂಲ ಗಳಿದ್ದು..ಹಿರಿಯರಿಂದ ಬಂದಂತಹ ಫಲವತ್ತಾದ ಕೃಷಿಭೂಮಿ ಇರುವಾಗ ಅಲ್ಲಿ ಒದ್ದಾಡುವುದಕ್ಕಿಂತ ಇಲ್ಲಿನ ಬಾಳುವುದೇ ಚಂದ..ಗೌರವ ಕೂಡಾ.. ನಾನಂತೂ ಹಳ್ಳಿಯಾದರೂ ಎಲ್ಲ ಸೌಕರ್ಯಗಳಿದ್ದರೆ ಹೊಂದಿಕೊಳ್ಳಬಲ್ಲೆ ಎಂದೇ ಮದುವೆಗೆ ಒಪ್ಪಿದವಳು.ಅತ್ತೆಯಂತೂ ತೀರಾ ಜೋರಿನವರಲ್ಲ.ಮತ್ತೇನು ಹಳ್ಳಿಯಾದರೆ..?
ಎಂದು ಯೋಚಿಸಿ "ನನಗೆ ಹಳ್ಳಿ ಓಕೆ "ಎಂದಳು.


ನಾಲ್ಕೈದು ದಿನವಿದ್ದು ಹೊರಡುವ ಮುನ್ನ ಅಪ್ಪನೂ  "ಕೃಷಿ ಮಾಡುವುದು ಇಷ್ಟವಿದ್ದರೆ ಇಲ್ಲಿಯೇ ಇರುವುದಕ್ಕೆ ನನ್ನದೇನೂ ಆಕ್ಷೇಪವಿಲ್ಲ" ಎಂದರು.. ಅಂದರೆ ಅಪ್ಪನಿಗೆ ನನ್ನ ಮತ್ತು ಸೌಜನ್ಯ ಮೇಲಿನ ಕೋಪ ಆರಿದೆ ಅಂದ ಹಾಗಾಯ್ತು.. ಎಂದುಕೊಳ್ಳುತ್ತಾ "ಸರಿ ಅಪ್ಪಾ.. ಆದಷ್ಟು ಬೇಗ ತಿಳಿಸುತ್ತೇನೆ "ಎಂದನು ಕೇಶವ.


    ಹಳ್ಳಿಗೆ ವಾಪಾಸಾಗುವುದೆಂದು ನಿರ್ಧರಿಸಿದರು ಕೇಶವ ಸೌಜನ್ಯ ... ಸೌಜನ್ಯಳ ಅಪ್ಪ ಅಮ್ಮನ ಒಪ್ಪಿಗೆಯನ್ನು ಪಡೆದರು.ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ ಕೆಲವೇ ಸಮಯದಲ್ಲಿ ಬಾರಂತಡ್ಕಕ್ಕೆ ಆಗಮಿಸಿದರು.



        *******


ಅಂದು ಬೆಳ್ಳಂಬೆಳಗ್ಗೆ ಮೈತ್ರಿ,ಮಂಗಳಮ್ಮ, ಪುಟಾಣಿ ಮಗು, ಮಹಾಲಕ್ಷ್ಮಿ ಅಮ್ಮ ಎಲ್ಲರೂ ಹೊರಟು ನಿಂತಿದ್ದರು.ಒಂಭತ್ತು ಗಂಟೆಗೆ ಕಿಶನ್ ತಂದೆಯೊಡನೆ ಆಗಮಿಸಿದ.ಬಾಣಂತನ ಮಾಡಿದ ಅಮ್ಮ, ಅಜ್ಜಿಗೆ  ಸೀರೆ ಹಾಗೂ ಶ್ಯಾಮ, ಭಾಸ್ಕರ ಶಾಸ್ತ್ರಿಗಳಿಗೆ ವೇಸ್ಟಿ ಕೊಟ್ಟು ನಮಸ್ಕರಿಸಿದರು.ಸೋದರ ಮಾವ ಮಹೇಶನಿಗೆ ಒಂದು ಟೀ ಶರ್ಟ್ ಕೊಟ್ಟರು ಭಾವ.ಸರಸುಗೆ ಸೀರೆ , ದುಡ್ಡು ಕೊಟ್ಟರು.ಎಲ್ಲರಿಗೂ ಬಾಣಂತನದ ಮರ್ಯಾದೆಯನ್ನು ಕೊಟ್ಟಾದಾಗ...ಹಳದಿ ಬಣ್ಣದಿಂದ ಕಂಗೊಳಿಸುವ ಹಲಸಿನ ಮರದ ತೊಟ್ಟಿಲನ್ನು ವಾಹನದಲ್ಲಿಟ್ಟರು ಭಾಸ್ಕರ ಶಾಸ್ತ್ರಿಗಳು.ತೊಟ್ಟಿಲ ಮಗುವನ್ನು , ಚೊಚ್ಚಲ ಬಾಣಂತಿಯನ್ನು ಕಳುಹಿಸಿಕೊಟ್ಟರು ಶ್ಯಾಮ ಶಾಸ್ತ್ರಿಗಳು. ಅವರೊಬ್ಬರನ್ನು ಬಿಟ್ಟು ಉಳಿದವರೆಲ್ಲ ಮೈತ್ರಿ ಕಿಶನ್ ನ ಮನೆಗೆ ತೆರಳಿದರು.


      ಅಂಗಳದಲ್ಲಿ ಎರಡು ಕಾರುಗಳು ಬಂದು ನಿಲ್ಲುತ್ತಿದ್ದಂತೆ ಮೇದಿನಿ ,ಚಾಂದಿನಿ ಇಬ್ಬರೂ ಜೊತೆಯಾಗಿ ಬಂದು ಅತ್ತಿಗೆ ಹಾಗೂ ಮಗುವನ್ನು ಸ್ವಾಗತಿಸಿದರು.ಮಮತಮ್ಮ ಹಾನ ತಂದು ಸೊಸೆಯ ಕಾಲು ತೊಳೆದು ದೃಷ್ಟಿ ತೆಗೆದು ಮನೆಯೊಳಗೆ ಕರೆದೊಯ್ದರು.

     ಮಧ್ಯಾಹ್ನ ವಿಶೇಷ ಅಡುಗೆ ತಯಾರಾಗಿತ್ತು.ಎಲ್ಲರೂ ಸವಿದರು.ಮಂಗಳಮ್ಮ ಮಗಳೊಂದಿಗೆ ಉಳಿದುಕೊಂಡು ಭಾಸ್ಕರ ಶಾಸ್ತ್ರಿಗಳು,ಮಹಾಲಕ್ಷ್ಮಿ ಅಮ್ಮ,ಮಹೇಶ ಮನೆಗೆ ತೆರಳಿದರು.

     ಆ ದಿನ ರಾತ್ರಿ ಹೊಸ ತೊಟ್ಟಿಲನ್ನು ಅಲಂಕರಿಸಿ ಸಿಹಿ ತಿನಿಸುಗಳನ್ನು ಮಾಡಿ ಪುಟಾಣಿ ಮಗುವನ್ನು ಮಲಗಿಸಿ ಸೋದರತ್ತೆಯರು ಸಾಂಪ್ರದಾಯಿಕವಾಗಿ ತೊಟ್ಟಿಲು ತೂಗಿದರು.ಬಣ್ಣಬಣ್ಣದ ಬೆಲೂನ್, ಹೂಗಳನ್ನು ನೋಡುತ್ತಿದ್ದ ಪುಟಾಣಿ ಹಾ..ಹೂ..ಆ.. ಎಂದು ತಾನೂ ಅವರೊಡನೆ ದನಿಗೂಡಿಸುತ್ತಿದ್ದ, ಖುಷಿಯಿಂದ ಕೈ ಕಾಲು ಬಡಿಯುತ್ತ ಜೊಲ್ಲು ಸುರಿಸುತ್ತಿದ್ದ.

ಮಗುವಿಗೆ ಏನೆಂದು ಹೆಸರಿಡೋಣ ಎಂದು ಚರ್ಚೆಯಾಗುತ್ತಿತ್ತು.ಒಬ್ಬೊಬ್ಬರು ಒಂದೊಂದು ಹೆಸರನ್ನು ಹೇಳಿದರು.. ಕಿಶನ್ ಎಲ್ಲರ ಮಾತಿಗೆ ನಗುತ್ತಾ.."ಸಪ್ತಗಿರಿಯೊಡೆಯ ಶ್ರೀ ವೆಂಕಟೇಶನನ್ನು ಧ್ಯಾನಿಸುತ್ತಾ ಅವನನ್ನು ಭುವಿಗೆ ತಂದವಳು ಅವನಮ್ಮ.ಆದ್ದರಿಂದ ಆ ವೆಂಕಟೇಶನ ಹೆಸರನ್ನೇ ಇಡಬೇಕೆಂದಿದ್ದೇವೆ...ಮಗುವಿಗೆ ಈಶನ್ ಎಂಬುದಾಗಿ ಹೆಸರಿಡುವುದೆಂದು ನಾವಿಬ್ಬರೂ ನಿರ್ಧರಿಸಿದ್ದೇವೆ " ಎಂದಾಗ ಎಲ್ಲರೂ ಸಮ್ಮತಿಸಿದರು.


ಮೈತ್ರಿ ಮತ್ತು ಮಗನನ್ನು ಮನೆಗೆ ಕರೆದುಕೊಂಡು ಬಂದು ಕಿಶನ್ ಬೆಂಗಳೂರಿಗೆ ತೆರಳಿದ. ಕೆಲವೇ ದಿನಗಳಲ್ಲಿ ಅವನ ನಾಮಕರಣ, ಮರುದಿನದಿಂದಲೇ ನಾಗನಕಟ್ಟೆ,ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ,ದೈವದ ಕೋಲ ಜರುಗಲಿತ್ತು.ಕೆಲಸಗಳು ಭರದಿಂದ ಸಾಗಿತ್ತು.


         *****


       ಮಗುವಿನ ನಾಮಕರಣಕ್ಕೆ ನೆಂಟರಿಷ್ಟರೆಲ್ಲ ಆಗಮಿಸಿದ್ದರು.ಬೆಂಗಳೂರಿನಿಂದ ಶಂಕರ ಶಾಸ್ತ್ರಿಗಳು ಕುಟುಂಬ, ಸಾವಿತ್ರಿ ಅತ್ತೆ,ಶಶಿ ಅತ್ತೆ,ಮಂಗಳಮ್ಮನ ತಂಗಿ ಗಂಗಾ ಮತ್ತವಳ ಕುಟುಂಬ,ಮಂಗಳಮ್ಮನ ಅಣ್ಣನ ಕುಟುಂಬ,ಕಿಶನ್'ಕಡೆಯವರು ಎಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ನಾಮಕರಣ ನಡೆಯಿತು.ಮಗುವಿಗೆ ಈಶನ್ ಎಂದು ನಾಮಕರಣ ಮಾಡಿ ಸಿಹಿ ಉಣಿಸಿದರು ಅಪ್ಪ, ಅಮ್ಮ ,ಹಿರಿಯರೆಲ್ಲರೂ.

     ಮರುದಿನ ನಾಗನ ಕಟ್ಟೆಯ ಪುನರ್ ಪ್ರತಿಷ್ಠಾ ಮಹೋತ್ಸವ ಇದ್ದುದರಿಂದ ಕೆಲವು ನೆಂಟರೂ ಉಳಿದುಕೊಂಡಿದ್ದರು.ಶಂಕರ ಶಾಸ್ತ್ರಿಗಳ ಕುಟುಂಬ ಶಾಸ್ತ್ರೀ ನಿವಾಸಕ್ಕೆ ತೆರಳಿ ಉಳಿದುಕೊಂಡು ಪುನಃ ಮರುದಿನ ಆಗಮಿಸಿತು..

ಶಶಿ ಮತ್ತು ಶಂಕರ ರಾಯರು ಆಗಮಿಸಿದರು.ಮಹತಿ ಮತ್ತು ಮುರಲಿ ಬಹಳ ಸಮಯದ ನಂತರ ಊರಿಗೆ ಬಂದಿದ್ದರು.ಅವರನ್ನೂ " ದೈವದ ಕೋಲ ನೋಡಲು ಚೆನ್ನಾಗಿರುತ್ತದೆ.ನೀನಿನ್ನೂ ನೋಡಿಲ್ಲವಲ್ಲ ಮಹತಿ " ಎಂದು ಶಂಕರ ರಾಯರು ಒತ್ತಾಯಿಸಿ.. ಮಗ ಸೊಸೆಯನ್ನು ಕರೆದುಕೊಂಡು ಬಂದರು.ಊರಿಗೆ ವಾಪಾಸಾಗಿದ್ದ ಕೇಶವ ಕೂಡಾ " ನಮ್ಮ ಹಿರಿಯರು ಹೋಗುತ್ತಿದ್ದ ದೈವಸ್ಥಾನದ ಪುನರ್ ಪ್ರತಿಷ್ಠೆ..ಎಲ್ಲರೂ ಹೋಗಿ ಪ್ರಸಾದ ಸ್ವೀಕರಿಸಲೇ ಬೇಕು "ಎಂದು ಅಪ್ಪ ಹೇಳಿದಾಗ ಒಪ್ಪಿ.. ಮನೆಯವರೊಂದಿಗೆ ಆಗಮಿಸಿದರು.ಶೇಷಣ್ಣ ಎರಡು ಮೂರು ದಿನದ ಹಿಂದಿನಿಂದಲೇ ಸ್ವಯಂಸೇವಕನಾಗಿ ಕೆಲಸ ಕಾರ್ಯಗಳಲ್ಲಿ ಕೈಜೋಡಿಸಿದ್ದರು.


        ಪುನರ್ ಪ್ರತಿಷ್ಠಾ ಕಾರ್ಯಕ್ರಮವಾಗಿ ದೈವದ ಕೋಲ ಆರಂಭವಾಯಿತು.ದೈವ ತನ್ನ ಕಟ್ಟೆಗೆ ಸುತ್ತು ಬರುತ್ತಿತ್ತು.ಜೊತೆಯಲ್ಲಿ ಹಿಮ್ಮೇಳದ ವೃಂದ, ಗಣೇಶ ಶರ್ಮ ಇದ್ದರು.ಸುತ್ತು ಬಂದು ಕಟ್ಟೆಯ ಮುಂದಿನ ಭಾಗದಲ್ಲಿ ಎಲ್ಲರನ್ನೂ ದಿಟ್ಟಿಸುತ್ತಾ ನಿಂತಿತು.ಎಲ್ಲರೂ ಬೇಗಬೇಗನೆ ಎದ್ದು ನಿಂತು ನಿಂತಲ್ಲೇ ನಮಸ್ಕರಿಸಿದರು.ಮೈತ್ರಿಯ ಮಡಿಲಲ್ಲಿ ಪುಟ್ಟ ಕಂದ ಈಶನ್ ಮಲಗಿದ್ದ.ಆದ್ದರಿಂದ ಅವಳು ಏಳುವ ನಿರ್ಧಾರ ಮಾಡಲಿಲ್ಲ.ದೈವಪಾತ್ರಿ ಅವಳೆಡೆಗೆ ಬೊಟ್ಟು ಮಾಡುವುದನ್ನು ನೋಡಿದ ಮಮತಮ್ಮ ದೂರದಿಂದಲೇ ಅವಳಿಗೆ "ಏಳು.. ಏಳು "..ಎಂದು ಕೈ ಸನ್ನೆ ಮಾಡಿದರು. ಮಗುವನ್ನು ಹೆಗಲಿಗೆ ಹಾಕಿಕೊಂಡು ಎದ್ದಳು ಮೈತ್ರಿ.ದೈವಪಾತ್ರಿಯ ಪಕ್ಕದಲ್ಲಿ ನಿಂತಿದ್ದ ಗಣೇಶ ಶರ್ಮ "ನಮ್ಮ ಸೊಸೆ ಹಾಗೂ ಮೊಮ್ಮಗು" ಎಂದರು..

"ಓಹೋ..ನಿಮ್ಮ ಹೊಸ ತಲೆಮಾರು.."ಎಂದಿತು.

"ಹೂಂ.."

"ಎಡ್ಡೆ ಆವಾಡ್ ಎಡ್ಡೆ ಆವಾಡ್..ಪೊಸ ಪೀಳಿಗೆ ಸುಖ ಸಂತೋಷ ನೆಮ್ಮದಿಡ್ ಬದ್ಕಾಡ್.. (ಒಳ್ಳೆಯದಾಗಲಿ..ಮುಂದಿನ ಪೀಳಿಗೆ ಸುಖ ಸಂತೋಷ ನೆಮ್ಮದಿಯಿಂದ ಬದುಕಲಿ)ಎನ್ನುತ್ತಾ ಒಂದು ತುಂಡು ಮಲ್ಲಿಗೆ ಹೂವನ್ನು ಅವಳತ್ತ ಎಸೆಯಿತು.ಮೈತ್ರಿ ಕೈ ಮುಂದೊಡ್ಡಿದಾಗ ಅಂಗೈಗೇ ಬಂದು ಬಿದ್ದುದು ಅವಳಿಗೂ ಮನಸ್ತೃಪ್ತಿಯಾಯಿತು.


    ದೈವದ ಕೋಲಕ್ಕೆ ಬಂದಿದ್ದ ಬಾರಂತಡ್ಕದವರು ದೈವಸ್ಥಾನದ ಮುಂಭಾಗದಲ್ಲಿ ಕುಳಿತುಕೊಂಡಿದ್ದರು.... ಮೊದಲ ಬಾರಿಗೆ ದೈವದ ಕೋಲ ವೀಕ್ಷಿಸಿದಳು ಸೌಜನ್ಯ.ಮೈತ್ರಿಯನ್ನು ಕಂಡ ಕೇಶವ ಕೈ ಮುಗಿದು ನಮಸ್ಕರಿಸಿದ.ಮನಸಲ್ಲಿ ಆ ದೈವದಲ್ಲಿ "ನಾನು ಇವಳ ವಿಚಾರದಲ್ಲಿ ಮಾಡಹೊರಟಿದ್ದ ನೀಚ ಕೆಲಸಗಳಿಗೆಲ್ಲ ಕ್ಷಮೆ ಕೋರುತ್ತೇನೆ "ಎಂದು ದೈವವನ್ನು ಬೇಡಿಕೊಂಡಿದ್ದ.. ಮೆಲ್ಲನೆ ತನ್ನ ಮಗಳನ್ನೊಮ್ಮೆ ದಿಟ್ಟಿಸಿದ.."ತನಗೂ ಇಂತಹ ಮುದ್ದಾದ ಮಗಳಿದ್ದಾಳೆ..ನನ್ನ ಮಗಳಿಗೂ ಏನೂ ತೊಂದರೆಯಾಗದಂತೆ ನಡೆಸು ದೈವವೇ "ಎಂದು ಬೇಡಿಕೊಂಡ.ಅದ್ಯಾವುದೂ ತಿಳಿದಿರದ ಮೈತ್ರಿ ತನ್ನ ಗಂಡನನ್ನು ಅವನಿಗೆ ಪರಿಚಯಿಸಿದಳು.ಪತಿಗೂ ಅವನನ್ನು ವೆಂಕಟ್ ಭಾವನ ಗೆಳೆಯ ಎಂದು ಪರಿಚಯ ಮಾಡಿಕೊಟ್ಟಳು. ಶಶಿಯತ್ತೆಯ ಮಗ ಸೊಸೆ ಕೂಡಾ ಬಂದಿದ್ದರು.ವೆಂಕಟ್ ಕೂಡಾ ಬಂದಿದ್ದ..ಎಲ್ಲರೂ ಪ್ರಸಾದ ಭೋಜನವನ್ನು ಸ್ವೀಕರಿಸಿ ಖುಷಿಯಿಂದ ಮರಳಿದರು.


    ಮೈತ್ರಿ,ಈಶಾನ್ ನನ್ನು ಕರೆದುಕೊಂಡು ಇನ್ನೆರಡು ದಿನದಲ್ಲಿ ಕಿಶನ್ ಬೆಂಗಳೂರಿಗೆ ಪಯಣ ಬೆಳೆಸುವ ಯೋಚನೆಯಲ್ಲಿದ್ದನು.. ದೈವದ ಅಭಯವೂ ದೊರೆಯಿತು.ಕಿಶನ್ ಮೈತ್ರಿಯ ಜೀವನ ಸುಖಕರವಾಗಿರಲೆಂದು ನಾವೂ ನೀವೂ ಹಾರೈಸೋಣವೇ....


            ‌       🙏 ಶುಭಂ 🙏



ನಮಸ್ಕಾರ ಓದುಗರೇ...

     ಧಾರಾವಾಹಿಯ ಪ್ರತೀ ಕಂತನ್ನು ಓದಿ ನೀವು ಪ್ರತಿಕ್ರಿಯಿಸುತ್ತಿದ್ದ ರೀತಿ ನನ್ನನ್ನು ಆದಷ್ಟು ಬೇಗನೆ ಮುಂದಿನ ಕಂತನ್ನು ಬರೆಯುವಂತೆ ಪ್ರೇರೇಪಿಸುತ್ತಿತ್ತು. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಚಿರ ಋಣಿ.ಇದು ನನ್ನ ಮೊದಲ ಸುದೀರ್ಘ ಧಾರಾವಾಹಿ.. ಚೊಚ್ಚಲ ಪ್ರಯತ್ನದಲ್ಲಿ ತಪ್ಪುಗಳು ಅನೇಕ.ಎಲ್ಲವನ್ನೂ ಮನ್ನಿಸಿ ,ಸಹಿಸಿ ,ಬೆಂಬಲಿಸಿದ ನಿಮ್ಮ ರೀತಿ ನನ್ನ ಬರವಣಿಗೆಗೆ ಶಕ್ತಿಯನ್ನು
ನೀಡಿತು. ಸಾಂಪ್ರದಾಯಿಕ ತುಂಬು ಕುಟುಂಬದ ಒಳಿತು ಕೆಡುಕುಗಳನ್ನು ಬಿಂಬಿಸುವ   ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡಿದ್ದೇನೆ.ಸಾಂಪ್ರದಾಯಿಕ ತುಂಬು ಕುಟುಂಬದಲ್ಲಿ ಎಲ್ಲವೂ ಒಳಿತೇ ಅಲ್ಲ..ಹಾಗೆಂದು ಹುಳುಕುಗಳೇ ವಿಜ್ರಂಭಿಸುವುದೂ ಅಲ್ಲ.ಒಳಿತು-ಕೆಡುಕು, ಸಿಹಿ-ಕಹಿ ,ನೋವು-ನಲಿವುಗಳ ಹೂರಣ ... ಕುಟುಂಬ ಒಡೆಯುವುದು ಸುಲಭ.ಆದರೆ ಅದೇ ಪ್ರೀತಿ, ಕಾಳಜಿ ,ಮನೆ ಯಜಮಾನನ ನಾಯಕತ್ವದ ಗುಣ ವಿಭಕ್ತ ಕುಟುಂಬದಲ್ಲಿ ಉಳಿಸಿಕೊಳ್ಳಲು ಕಷ್ಟವಿದೆ.

    ಭಾಸ್ಕರ ಶಾಸ್ತ್ರಿಗಳ ಪಾತ್ರ ಬಹಳಷ್ಟು ಮಂದಿಗೆ ವಿಚಿತ್ರ ಅನಿಸಬಹುದು. ಆದರೆ ಅಂತಹ ವ್ಯಕ್ತಿಗಳು ಸಮಾಜದಲ್ಲಿ ಅಲ್ಲಲ್ಲಿ ಕಾಣಸಿಗುತ್ತಾರೆ.ಮಡದಿ ಮಕ್ಕಳಿಗಿಂತ ತಂದೆ ತಾಯಿ ಒಡಹುಟ್ಟಿದವರೇ ತುಸು ಹೆಚ್ಚೆಂದು ಭಾವಿಸುವ ,ತನ್ನದೇ ಆದ ಒಂದು ಆದರ್ಶವನ್ನಿಟ್ಟುಕೊಂಡು ಬಾಳುವ ಹಲವು ಮಂದಿ ಇರುತ್ತಾರೆ.

     ಮಂಗಳಮ್ಮನಂತೆ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುವ ಅಮ್ಮಂದಿರು,ಶಶಿಯಂತೆ ಎರಡು ಬುದ್ಧಿಯವರು,ಕೇಶವನಂತಹ ಹಠವಾದಿಗಳು,ಮುರಲಿಯಂತೆ ಮಡದಿ ಆಡಿಸಿದಂತೆ ಕುಣಿಯಲೇಬೇಕಾದ ಅನಿವಾರ್ಯತೆ ಇರುವವರು ,ಮಹತಿ, ಸೌಜನ್ಯ ಳಂತಹ ಪಾತ್ರ,ಮಹೇಶನಂತಹ ಕಿಲಾಡಿಗಳು ಸಮಾಜದಲ್ಲಿ ನಿತ್ಯವೂ ನಾವು ವ್ಯವಹರಿಸುವವರಲ್ಲೇ ಕಾಣಸಿಗುತ್ತಾರೆ.

       ಬರೆಯುತ್ತಾ ಸಾಗಿದಂತೆ ಮೈತ್ರಿ ಕೇವಲ ಪಾತ್ರವಾಗಿರಲಿಲ್ಲ .ನಮ್ಮ ಮನೆ ಮಗಳೇನೋ ಎಂಬಷ್ಟು ಆಪ್ತವಾಗಿತ್ತು ನಮಗೆ. ಕೆಲವೊಮ್ಮೆ ಧಾರಾವಾಹಿ ಬರೆಯುತ್ತಿದ್ದಾಗ ಇಣುಕುತ್ತಿದ್ದ ಪತಿ. .. "ಅದೆಷ್ಟು ಗೋಳು ಹೊಯಿಸುತ್ತಿ ಆ ಮೈತ್ರಿಯನ್ನ ಅವಳಪ್ಪನ ಕೈಲಿ..ಬೇಗ ಒಮ್ಮೆ ಮದುವೆ ಮಾಡಿ ಕಿಶನ್ ಜೊತೆ ಗಂಡನಮನೆಗೆ ಕಳುಹಿಸಿ ಬಿಡು..ಸುಖವಾಗಿರಲಿ ಪಾಪ.."ಎಂದದ್ದೂ ಇದೆ..


    ಈ ಧಾರಾವಾಹಿಯನ್ನು ಕನ್ನಡ ಪ್ರತಿಲಿಪಿಯಲ್ಲಿ ಮೊದಲು ಪ್ರಕಟಿಸುತ್ತಿದ್ದೆ.ನನ್ನ ಬ್ಲಾಗ್ ನಲ್ಲಿ ಪ್ರಕಟಿಸಲು ಏನೋ ಸಣ್ಣ ಅಳುಕು,ಸಂಕೋಚ ನನ್ನನ್ನು ಕಾಡುತ್ತಲಿತ್ತು.ಪ್ರೇಮಿಗಳ ನಡುವಿನ ಸಂಭಾಷಣೆ, ಕೌಟುಂಬಿಕ ಚಿತ್ರಣವನ್ನು ಫೇಸ್ಬುಕ್ ನಲ್ಲಿರುವ ಬಂಧುಮಿತ್ರರು ಹೇಗೆ ಸ್ವೀಕರಿಸುತ್ತಾರೋ ಏನೋ.. ಎಂಬುದಾಗಿ..ಆಗ ಧೈರ್ಯ ತುಂಬಿ ಪ್ರಕಟಿಸುವಂತೆ ಹುರಿದುಂಬಿಸಿ, ಬ್ಲಾಗ್ ನ ತಾಂತ್ರಿಕ ನಿರ್ವಹಣೆಯಲ್ಲಿ ಸದಾ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡಿದವರು ನನ್ನ ಆಪ್ತ ಗೆಳತಿ ಶ್ರೀಮತಿ ಅಶ್ವಿನಿ ಜೋಯಿಸ್.. ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು 🙏

     ಪ್ರತಿ ಗೃಹಿಣಿಗೂ ಕೌಟುಂಬಿಕ ಜವಾಬ್ದಾರಿಗಳಿರುತ್ತವೆ. ಅಂತೆಯೇ ನನಗೂ ಕೂಡ.ಅವುಗಳನ್ನು ನಿಭಾಯಿಸುತ್ತಾ ಧಾರಾವಾಹಿಯನ್ನು ಬರೆಯಲು ಕುಟುಂಬದ ಬೆಂಬಲ ಅತೀ ಅವಶ್ಯಕ.ಪತಿ ಡಾ||ಜಿ.ಕೆ.ಭಟ್. ಹಾಗೂ ಮಕ್ಕಳಿಬ್ಬರ ತಾಳ್ಮೆ, ಸಹಕಾರದಿಂದ ಇಷ್ಟು ಕಂತುಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು.ಬೆನ್ನೆಲುಬಾಗಿ ನಿಂತ ಕುಟುಂಬಕ್ಕೂ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.🙏

     ಮತ್ತೊಮ್ಮೆ ಮಗದೊಮ್ಮೆ ... ಪ್ರೋತ್ಸಾಹಿಸಿದ ಎಲ್ಲ ಓದುಗರಿಗೂ , ಪ್ರಕಟಿಸಲು ಅನುಮತಿ , ಅವಕಾಶ ನೀಡಿದ ಕನ್ನಡ ಪ್ರತಿಲಿಪಿ ವೇದಿಕೆಗೂ,ಎಲ್ಲ ಫೇಸ್ಬುಕ್ ಬಳಗಗಳಿಗೂ ನನ್ನ ಅನಂತಾನಂತ ಧನ್ಯವಾದಗಳು 💐🙏



✍️... ಅನಿತಾ ಜಿ.ಕೆ.ಭಟ್.
22-07-2020.

Sunday, 19 July 2020

ಜೀವನ ಮೈತ್ರಿ ಭಾಗ ೧೦೯(109)




ಜೀವನ ಮೈತ್ರಿ ಭಾಗ ೧೦೯


       ಗಣೇಶ ಶರ್ಮ ನಾಗನ ಬನ ಮತ್ತು ದೈವದ ಕಟ್ಟೆಯ ಕಾಮಗಾರಿಗಳನ್ನು ವೀಕ್ಷಿಸಿದರು.ಇನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ.ಈಗಲೇ ಜೋಯಿಸರಲ್ಲಿ ಪುನರ್ ಪ್ರತಿಷ್ಠಾ ಕಲಶಾದಿ ಕಾರ್ಯಕ್ರಮಗಳಿಗೆ ಶುಭ ಮುಹೂರ್ತವನ್ನು ಕೇಳುವುದು ಉಚಿತವೆಂದು ನಿರ್ಧರಿಸಿದರು.ಅಂತೆಯೇ  ದಿನ ನಿಗದಿ ಮಾಡಲಾಯಿತು.ಕಿಶನ್ ಕೂಡಾ ಹದಿನೈದು ದಿನಗಳಿಗೊಮ್ಮೆ ಬಂದು ಕಾರ್ಯಕ್ರಮದ ಕರೆಯೋಲೆ ಅಚ್ಚುಹಾಕಿಸುವುದು, ಹಂಚುವುದು,ಆದಷ್ಟು ಬೇಗ ಕೆಲಸ ಮುಂದುವರಿಯುವಂತೆ ನೋಡಿಕೊಳ್ಳಲು ತಂದೆಯೊಡನೆ ಕೈ ಜೋಡಿಸುತ್ತಿದ್ದ.ಒಂದು ಶನಿವಾರ ಭಾನುವಾರ ಮಾವನ ಮನೆಗೆ ತೆರಳಿ ಮಡದಿ ಮಗುವಿನ ಜತೆ ಕಳೆದರೆ ಮುಂದಿನ ಸರದಿ ತನ್ನ ಮನೆ ಕಡೆಗೆ.ಹೀಗೆ ಎರಡೂ ಕಡೆ ನಿಭಾಯಿಸುತ್ತಿದ್ದ.


      ಕಿಶನ್ ಬಂದ ದಿನ ಮಗನನ್ನು ಅವನ ಕೈಗೆ ನೀಡುವ ಮೈತ್ರಿಗೆ ಸ್ವಲ್ಪ ಬಿಡುವು ಸಿಗುತ್ತಿತ್ತು.ಕಿಶನ್ ಮಗನಿಗೆ ಲಾಲಿ ಹಾಡಿದರೆ ಅವನೋ ಪಿಳಿಪಿಳಿ ಕಣ್ಣುಗಳಿಂದ ಅಪ್ಪನ ಮುಖವನ್ನೇ ನೋಡುತ್ತಾ ನಿದಿರೆಗೆ ಜಾರುತ್ತಿದ್ದ.. ಮಧ್ಯದಲ್ಲಿ ಎಚ್ಚರಾದರೆ ಬೇಗನೆ ಓಡಿ ಬಂದು ಮತ್ತೆ ಲಾಲಿ ಹಾಡಿ ತೊಟ್ಟಿಲು ತೂಗುತ್ತಿದ್ದ.ಆಗಾಗ ಒದ್ದೆ ಮಾಡಿಕೊಂಡರೆ ತಾನೇ ಬಟ್ಟೆ ಬದಲಾಯಿಸಿ ಅವನನ್ನು ಬೆಚ್ಚಗೆ ಮಲಗಿಸುತ್ತಿದ್ದ.."ನನಗೆ ನೀಡುತ್ತಿದ್ದ ಪ್ರೀತಿಯಲ್ಲಿ ನೀನು ಪಾಲುಪಡೆದೆಯಾ ಪುಟ್ಟ?" ಎನ್ನುತ್ತಾ ಹಲುಬುತ್ತಿದ್ದಳು ಮೈತ್ರಿ..


       ಮಗು ತಡರಾತ್ರಿ ರಂಪ ಮಾಡಿದರೂ ಕಿಶನ್ ಹಾಜರು..ರಮಿಸಲು ಏನೆನೋ ಕಸರತ್ತು.ರಮಿಸಿದ ಮೇಲೆಯೇ ತಾನೂ ಮಲಗುತ್ತಿದ್ದುದು.ಇದನ್ನು ಕಂಡ ಅಜ್ಜಿ "ಇವನೊಬ್ಬನೇ ಇಷ್ಟು ಕಕ್ಕುಲಾತಿಯ ಮನುಷ್ಯ ನಾನು ಕಂಡಿದ್ದು" ಎಂದು ಆಡಿದ್ದರು..ಅವರೇನೇ ಅಂದರೂ ತಲೆಕೆಡಿಸಿಕೊಳ್ಳದೆ ಮಗುವನ್ನೆತ್ತಿ ಮುದ್ದುಮಾಡಲು ಮುಂದೆ ಬರುತ್ತಿದ್ದ.ತಿಂಗಳೆರಡು ಆಗುವಾಗಲೇ ಬೊಂಬೆಗಳು ದೊಡ್ಡ ಬಕೆಟಿನಷ್ಟಾಗಿದ್ದವು.ಅವುಗಳ ನಾನಾ ರಾಗಗಳು, ಆಟಗಳನ್ನು ನೋಡಿ ಮಗುವೇಕೆ..ಅಜ್ಜ ಅಜ್ಜಿಯೇ ಕಣ್ಣು ಬಾಯಿ ಬಿಡುತ್ತಿದ್ದರು.


         *****

ಸೌಜನ್ಯಳಲ್ಲಿ" ಮಗಳೇ... ನಾವು ಒಮ್ಮೆ ಅಜ್ಜಿ ಮನೆಯ ಗ್ರಾಮದೇವರ ಸನ್ನಿಧಾನಕ್ಕೆ ತೆರಳಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಬೇಕಿತ್ತು.. ಯಾವಾಗ ಹೋಗೋಣ...?"ಎಂದರು ಅಮ್ಮ ರೇಖಾ.


"ಅಮ್ಮಾ...ಈಗಲೇ ಅವಸರವೇನು..ನಮ್ಮ ಪುಟಾಣಿ ಸ್ವಲ್ಪ ದೊಡ್ಡವಳಾಗಲಿ.ನನ್ನ ಗಂಡನಿಗೂ ಒಳ್ಳೆಯ ಉದ್ಯೋಗ ಸಿಕ್ಕಾಗ ಹೋದರಾಯಿತು.."ಎಂದಳು ಸೌಜನ್ಯ.

"ಅದು...ಅದು..."

"ಅದೂ..ಇಲ್ಲ..ಇದೂ ಇಲ್ಲ..ನೀವಿಬ್ಬರೇ ಮನೆಯಲ್ಲಿದ್ದಾಗ ದೈವ ದೇವರು ,ಪೂಜೆ ಪುನಸ್ಕಾರ ಅಂತ ತೊಡಗಿಸಿಕೊಂಡಿದ್ದಿರಿ.ಅದರ ಒಂದು ಭಾಗವಿದು..ನಂಗೆ ಗೊತ್ತಿಲ್ವಾ ..ನನ್ನ ಅಪ್ಪ ಅಮ್ಮನ ಗುಟ್ಟು.."ಎಂದು ನಸುನಕ್ಕಳು..


ಮಗಳು ಅಳಿಯ ಮನೆಬಿಟ್ಟು ಹೋದವರು ವಾಪಾಸಾಗದಿದ್ದಾಗ ಆತಂಕಗೊಂಡ ರೇಖಾ ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟುಕೊಂಡಿದ್ದರು.ನಡೆದ ಘಟನೆಗಳನ್ನು ಅಚಾತುರ್ಯದಿಂದ ನಡೆದುಹೋಯಿತು ಮರೆತುಬಿಡೋಣ ಎಂದು ಹೇಳಿ ಮಗಳು ಅಳಿಯನನ್ನು ಪುನಃ ಕರೆತರಲು ಮನಸು ಹೇಳುತ್ತಿತ್ತು.ಆದರೆ ಒಂದು ರೀತಿಯ ಅಹಂ,ಅಲ್ಲ ...ತಾನುಹಿರಿಯಳು ಅವರೇ ತಗ್ಗಲಿ ಎಂಬ ಭಾವವೋ,ಅಲ್ಲ.. ಅಷ್ಟು ಕಡಿಮೆ ಸಂಪಾದನೆಯಲ್ಲಿ ಬೆಂಗಳೂರಿನಲ್ಲಿ ಜೀವಿಸಲು ಸಾಧ್ಯವಿಲ್ಲ.ಹಾಗಾಗಿ ವಾಪಾಸು ಬಂದೇ ಬರುತ್ತಾರೆ ಎಂಬ ಮೊಂಡು ಧೈರ್ಯವೋ... ಒಟ್ಟಾರೆಯಾಗಿ ಅವರಿಗೆ ಮಗಳು ಅಳಿಯನನ್ನು ಮನವೊಲಿಸಿ ಕರೆತರುವ ಬುದ್ಧಿಮೂಡಲಿಲ್ಲ. ಆಗ ಹೊಳೆದದ್ದು ತನ್ನ ತವರಿನ ಗ್ರಾಮ ದೇವಾಲಯ ಶ್ರೀ ವನದುರ್ಗೆಯ ಪವಿತ್ರ ಸನ್ನಿಧಾನ.ಅಲ್ಲಿಗೆ ಹರಕೆ ಹೊತ್ತರೆ ಎಂತಹ ಕಷ್ಟಗಳೂ ಹೂವೆತ್ತಿದಂತೆ ನಿವಾರಣೆಯಾಗಿ ಮನಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ. ಹೀಗೆ ಹರಕೆ ಹೊತ್ತಕೊಂಡಿದ್ದರು ರೇಖ..ಈಗ ಆ ತಾಯಿ ಎಲ್ಲಾ ವಿಧದಿಂದಲೂ ಮಂಗಳವನ್ನೇ ಉಂಟುಮಾಡಿದಾಗ ಅವಳ ಹರಕೆ ತೀರಿಸಬೇಡವೇ.. ಆದಷ್ಟು ಬೇಗನೇ ತೀರಿಸಬೇಕೆನ್ನುವುದು ಅವರ ಬಯಕೆ.


"ಸೌಜನ್ಯ..ಹಾಗಲ್ಲಮ್ಮ..ಹರಕೆ ಹೊತ್ತಿದ್ದೀನಿ.ಈಗ ಅದನ್ನು ತೀರಿಸಲೇಬೇಕು.. ತುಂಬಾ ತಡಮಾಡಬಾರದು ಮಗಳೇ..ಎಲ್ಲರೂ ಜೊತೆಗೆ ಹೋಗೋಣ..ನಿಮ್ಮ ವಿವಾಹ ಸಮಾರಂಭದ ನಂತರ ಆ ಕಡೆಗೆ ತೆರಳಿಲ್ಲ.ಈಗಲಾದರೂ ಹೋಗಿ ಪೂಜೆ ಮಾಡಿಸಿ ಬರೋಣ.."

"ಸರಿ ಅಮ್ಮ..ನಿಮ್ಮಿಷ್ಟಕ್ಕೆ ನನ್ನದೇನೂ ಅಭ್ಯಂತರವಿಲ್ಲ.. "ಎಲ್ಲರೂ ಚರ್ಚಿಸಿ ಮುಂದಿನ ಶುಕ್ರವಾರ ವನದುರ್ಗಾ ದೇವಾಲಯಕ್ಕೆ ತೆರಳುವುದೆಂದು ನಿಶ್ಚಯವಾಯಿತು.ಮೊದಲೇ ಕರೆ ಮಾಡಿ ಬರುವ ವಿಷಯ,ಮಾಡಿಸುವ ಪೂಜೆಯ ವಿವರ ನೀಡಿದರು. ಅಂತೆಯೇ ಗುರುವಾರವೇ ಕುಟುಂಬದ ಸದಸ್ಯರು ಕರಾವಳಿಯತ್ತ ಪಯಣಿಸಿದರು. ರೇಖಾಳ ತವರಿಗೆ ಹೋಗಿ ಅಲ್ಲಿ ಸ್ನಾನ , ತಿಂಡಿ ಮುಗಿಸಿ ದೆವಾಲಯಕ್ಕೆ ತೆರಳಿದರು.


     ವನದುರ್ಗಾ ದೇವಿಯ ದೇವಾಲಯ ಇರುವುದು ಹಚ್ಚಹಸುರಿನ ವನಸಿರಿಯ ಮಡಿಲಲ್ಲಿ.ಎಂತಹವರೂ ಕೂಡ ಮೆಚ್ಚಿಕೊಳ್ಳುವ ಸುಂದರ ತಾಣ. ಬಹಳ ಶಕ್ತಿಯುತ ಸನ್ನಿಧಾನ. ಇಲ್ಲಿ ಕೆಟ್ಟ ಯೋಚನೆ ಅಪ್ಪಿ ತಪ್ಪಿಯೂ ಮಾಡುವಂತೆಯೇ ಇಲ್ಲ.ಮಾಡಿದರೆ ಅದು ಘಟಿಸಿಯೇ ತೀರುವುದು.ದೇವಾಲಯಕ್ಕೆ ರಸ್ತೆಯಿಲ್ಲ.ಒಂದು ಮೈಲಿ ದೂರದಲ್ಲಿ ವಾಹನ ನಿಲ್ಲಿಸಿ ಅಡಕೆ,ಬಾಳೆ ತೆಂಗಿನ ತೋಟದ ಮಧ್ಯದಲ್ಲಿ ನಡೆದುಕೊಂಡು ಬರಬೇಕು.ವಿಶಾಲವಾದ ಗದ್ದೆಗಳ ಬದುವಿನಲ್ಲಿ ನೀರ ಕಣಿಯಲ್ಲಿ ಹರಿಯುವ ಶುಭ್ರ ನೀರಿನ ಝುಳುಝುಳು ನಾದವನ್ನು ಆಸ್ವಾದಿಸುತ್ತಾ ಮುಂದುವರಿಯಬೇಕು.ನಂತರ ಹತ್ತಿರ ಹತ್ತಿರ ಸೊಂಪಾಗಿ ಬೆಳೆದು ನಿಂತು ಆಕಾಶ ನೋಡುತ್ತಿರುವ ಮರಗಿಡಗಳ ಮಧ್ಯೆ ಬೆಟ್ಟವೇರಿದಾಗ ಸಿಗುವುದು ವನದೇವಿಯ ಸನ್ನಿಧಾನ.ವರುಷವಿಡೀ ಆರದ ಎಂದೂ ಬತ್ತಿದ ಇತಿಹಾಸವಿರದ  ದೇವಾಲಯದ ಸರಸ್ಸು ಮನಸೆಳೆಯುತ್ತದೆ..ಅದರಿಂದ ಹರಿದು ಬರುವ ನೀರಿನಲ್ಲಿ ಕಾಲುತೊಳೆದು ಒಳಗೆ ತೆರಳಿದರು.


       ದೇವಾಲಯಕ್ಕೆ ಪ್ರದಕ್ಷಿಣೆ ಬಂದು ಅರ್ಚಕರಿಂದ ತೀರ್ಥ ಪ್ರಸಾದ ಸ್ವೀಕರಿಸಿದರು. ನಂತರ ತಾವು ಮಾಡಬೇಕಿದ್ದ ಪೂಜಾಕಾರ್ಯಕ್ಕೆ ಎಲ್ಲ ಸಿದ್ಧತೆಯೂ ನಡೆದಿದೆ ಎಂದು ಪುರೋಹಿತರು ಹೇಳಿದಾಗ ಪೂಜೆಗೆ ಕುಳಿತರು.


      ದೇವಾಲಯದ ಮುಖಮಂಟಪದ ಎದುರಿನ ಜಗಲಿಯಲ್ಲಿ ಒಂದು ವಿವಾಹ ಕಾರ್ಯಕ್ರಮ ಜರಗುತ್ತಿತ್ತು.ಹೆಣ್ಣುಮಕ್ಕಳಿಗೆ ವಿವಾಹ ಸಂಬಂಧ ಸರಿಯಾಗಿ ಕೂಡಿಬರದಿದ್ದಲ್ಲಿ ವನದುರ್ಗಾ ಸನ್ನಿಧಿಯಲ್ಲಿ ಮದುವೆ ಮಾಡುತ್ತೇವೆ ಎಂದು ಹರಕೆ ಹೊತ್ತುಕೊಳ್ಳುವುದು ಆ ಊರಿನವರ ನಂಬಿಕೆ.


      ಪೂಜೆ ಸಂಪೂರ್ಣಗೊಳ್ಳುವ ಹಂತದಲ್ಲಿತ್ತು. ಪುರೋಹಿತರಿಗೆ ಕ್ರಿಯಾದಕ್ಷಿಣೆ ನೀಡಿ ನಮಸ್ಕರಿಸುವ ಹೊತ್ತು.ಆಗ ಎದುರಿನಿಂದ ಬರುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕೇಶವ. ಗುರುತುಹಿಡಿದ. ಒಂದು ಕ್ಷಣ ಮೈ ಬೆವರಿದಂತಾಯಿತು .ಕೈ ನಡುಗಿದಂತಾಯಿತು. ಶರೀರದ ಶಕ್ತಿಯೆಲ್ಲಾ ಉಡುಗಿದಂತಾಯಿತು.. ಪುರೋಹಿತರು "ವೀಳ್ಯದೆಲೆ ,ತೆಂಗಿನಕಾಯಿ, ತುಲಸಿದಳ ಹಿಡಿದುಕೊಳ್ಳಿ" ಎಂದರೂ ಕೇಶವನ ಅರಿವಿಗೆ ಬಂದಿರಲಿಲ್ಲ."ರೀ..."ಎಂದಳು ಸೌಜನ್ಯ.. ಸಾವರಿಸಿಕೊಂಡ ಕೇಶವ ಪುರೋಹಿತರು ಹೇಳಿದಂತೆ ಮುಂದುವರಿಸಿದ.

         ಕಾರ್ಯಕ್ರಮ ಮುಗಿದು ಹೊರಡಲನುವಾದವರಿಗೆ ಅರ್ಚಕರು.."ನೀವು ಪ್ರಸಾದ ಭೋಜನ ಸ್ವೀಕರಿಸಿ ಹೋಗಬಹುದು.ನಿತ್ಯವೂ ನಮ್ಮದೇ ಅಡುಗೆಯ ಊಟ.ಇಂದು ಮದುವೆಯ ಊಟವೇ ವನದುರ್ಗೆಯ ಪ್ರಸಾದ ಭೋಜನ..."ಎಂದಾಗ ಕೇಶವ ಹೊರಡುವ ಆತುರ ತೋರಿದರೂ ರೇಖಾ "ನಿಲ್ಲೋಣ .."ಎಂದರು.ನಿರ್ವಾಹವಿಲ್ಲದೆ ಮುಳ್ಳಿನ ಮೇಲೆ ಕುಳಿತಂತಿದ್ದ ಕೇಶವ.


       ಅರ್ಚಕರ ಸಾಲಿನಲ್ಲಿ ಇವರಿಗೂ ಬಾಳೆಲೆಗಳನ್ನು ಇರಿಸಿದ್ದರು.ಪ್ರತಿಯೊಬ್ಬರೂ ಬಾಳೆಲೆಗಳಿಗೆ ನೀರು  ಚಿಮುಕಿಸಿ ತೊಳೆದು ಸ್ವಚ್ಛಗೊಳಿಸಿದರು.ಮದುವೆಯ ಕಡೆಯವರು ಬಡಿಸುತ್ತಾ ಬಂದರು.ಕೇಶವ ಪಂಕ್ತಿಯ ಒಂದು ಬದಿಯಲ್ಲಿದ್ದ.ಅವನ ಬಾಳೆಗೆ ಮೊದಲು.ಬಡಿಸುವ ವ್ಯಕ್ತಿ ಪಾಯಸವನ್ನು ಬಾಳೆಲೆಯ ಅಂಚಿಗೆ ಬಡಿಸಿದರು.ಕೇಶವ ತಲೆಯೆತ್ತಿ ನೋಡಿದ.ಆ ವ್ಯಕ್ತಿಯೂ ಮುಖವನ್ನು ದಿಟ್ಟಿಸಿದರು.ಮುಂದೆ ಬಡಿಸುತ್ತಾ ಸಾಗಿದರು.ಕೇಶವನ ಮನದಲ್ಲಿ ಬಲವಾದ ಅಲೆಯೊಂದು ಎದ್ದಿತು.


       ಊಟದ ಬಳಿಕ ಸೌಜನ್ಯ , ರೇಖಾ ನರಸಿಂಹ  ರಾಯರು ಅಲ್ಲಿಯೇ ಅಡ್ಡಾಡುತ್ತಾ ಪ್ರಕೃತಿಯನ್ನು  ಆನಂದಿಸುತ್ತಿದ್ದರು .ಆದರೆ ಕೇಶವನಿಗೆ ಒಮ್ಮೆ ಹೋದರೆ ಸಾಕಿತ್ತು. ಮಗಳನ್ನೆತ್ತಿಕೊಂಡು ಹೊರಗಡೆ ಸಾಗಿದ.ರೇಖಾ ಕೇಶವನನ್ನು ಹುಡುಕುತ್ತಾ ಬಂದರು."ಇಲ್ಲಿ ಬಾ " ಎಂದು ಒತ್ತಾಯಿಸಿ ಕರೆದೊಯ್ದರು.ಸೌಜನ್ಯಳೂ ಅಲ್ಲಿದ್ದಳು.ದೇವಾಲಯದ ಹೊರಾಂಗಣದ ಜಗಲಿಯ ಎದುರು ನಿಂತು .."ನೋಡಿ ಕೇಶವ, ಸೌಜನ್ಯ...ಈಗ ಹಿರಿಯರೊಬ್ಬರಿಗೆ ಈ ಪುಟಾಣಿಯನ್ನು ಎತ್ತಿಕೊಳ್ಳಲು ನೀಡಿ ಅವರ ಆಶೀರ್ವಾದ ಪಡೆದುಕೊಳ್ಳಬೇಕು"ಎಂದರು..ಇಬ್ಬರೂ ಮುಖ ಮುಖ ನೋಡಿಕೊಂಡರು."ಬನ್ನಿ .." ಎಂದು ದೇವಸ್ಥಾನದ ಬಲಭಾಗಕ್ಕೆ ತಿರುಗಿ ನಾಲ್ಕು ಹೆಜ್ಜೆ ಮುಂದೆ ಸಾಗಿದಾಗ...ಕೇಶವ ಸೌಜನ್ಯ ಇಬ್ಬರೂ ಒಮ್ಮೆ ಸ್ತಬ್ಧರಾದರು..
.


.
.
.
.
.
.
.
.
.
.
.
.
.
.
ಅಲ್ಲಿದ್ದವರು ಬರುತ್ತಿದ್ದವರ ಕಡೆಗೇ ನೋಡುತ್ತಿದ್ದರು.ಕೇಶವ ಮಗಳನ್ನು ಅವರ ಕೈಗೆ ನೀಡಲು ನಿಧಾನಿಸಿದ.. ರೇಖಾ ತಾನೇ ಮಗುವನ್ನೆತ್ತಿ ಅವರ ಕೈಯಲ್ಲಿ ನೀಡಿದಳು.ಅಪರಿಚಿತರಾದರೂ ಮುದ್ದುಬಂಗಾರಿ ಸ್ವಲ್ಪವೂ ಅಳಲಿಲ್ಲ.ಬದಲಾಗಿ ಮೆಲ್ಲನೆ ಕನ್ನಡಕದತ್ತ ಕೈ ಚಾಚಿದಳು.ಕನ್ನಡಕ ಅವಳ ಪುಟ್ಟ ಬೆರಳುಗಳ ಎಳೆತಕ್ಕೆ ಸಿಲುಕಿ ಬಿಟ್ಟಿತು..

ಅಜ್ಜನಿಗೂ ಮೊಮ್ಮಗಳ ತುಂಟಾಟಕ್ಕೆ ನಗೆಯುಕ್ಕಿತು.ತನ್ನ ಕನ್ನಡಕವನ್ನೆಳೆದ ಮೊಮ್ಮಗಳನ್ನು ಮನಸಾರೆ ಮುದ್ದಿಸಿದರು.ಕೇಶವನ ಕಣ್ಣುಗಳು ಮಂಜಾದವು.ಅವನಂತೂ ನಮಸ್ಕರಿಸಲು ಬಾಗುವ ಬದಲು ಪಕ್ಕದಲ್ಲಿದ್ದ ಕಂಬಕ್ಕೊರಗಿ ಬಿಕ್ಕಳಿಸತೊಡಗಿದ.ಹಿಂದಿನಿಂದ ಬಂದವರೇ.. ಒಂದು ಕೈಯಲ್ಲಿ ಮೊಮ್ಮಗಳನ್ನು ಎತ್ತಿಕೊಂಡು ಇನ್ನೊಂದು ಕೈಯಲ್ಲಿ ಬೆನ್ನು ಸವರುತ್ತಾ "ಮಗನೇ..ಹೇಗಿದ್ದೀಯಾ..?"ಎನ್ನುತ್ತಿದ್ದರೆ ಅವನ ಕಣ್ಣಂಚಿನಿಂದ ಒಂದೇ ಸಮನೆ ಹನಿಗಳು ಕೆಳಗಿಳಿದು ನೆಲಸೇರುತ್ತಿದ್ದವು.


      ಬಂಗಾರಣ್ಣ ಮಗನನ್ನು ಸಮಾಧಾನಿಸಿ ಮಾತನಾಡಿದರು. ಮನೆಗೆ ಕರೆಮಾಡಿ  "ಮಗ ಸೊಸೆ ಬರುತ್ತಿದ್ದಾರೆ.. ರಾತ್ರಿ ಊಟಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಡು" ಎಂದರು..

ರೇಖಾಳ ತವರಿಗೆ ಹೋಗಿ ವಿಶ್ರಾಂತಿ ಪಡೆದು ತಮ್ಮ ಲಗೇಜ್ ತೆಗೆದುಕೊಂಡು ಎಲ್ಲರೂ ಸಂಜೆ ಬಾರಂತಡ್ಕದತ್ತ ಹೊರಟರು.

          ********

      ಮಗನ ಆಗಮನದ ಸುದ್ದಿ ಕೇಳುತ್ತಿದ್ದಂತೆ ಆ ತಾಯಿ ಹೃದಯ ಕಣ್ತುಂಬಿಕೊಂಡು ಹರುಷದಿಂದ ಕುಣಿದಾಡಿತ್ತು.. ಅಂದು ವಧೂಗೃಹಪ್ರವೆಶದ ದಿನ ಅವನಿಗಿಷ್ಟದ ಹೆಸರು ಪಾಯಸ,ಹೋಳಿಗೆ ಮಾಡಿದ್ದರೂ ಒಂದು ಹಿಡಿಯೂ ಮಗನ ಉದರ ಸೇರಲಿಲ್ಲವಲ್ಲಾ ಎಂದು ಕೊರಗುತ್ತಿದ್ದ ಅಮ್ಮ ಅದೆಲ್ಲವನ್ನೂ ತನ್ನ ಕೈಯಾರೆ ಮಾಡಿ ಮಗನ ಕುಟುಂಟದ ಆಗಮನಕ್ಕೆ ಕಾದು ಕುಳಿತಿದ್ದರು.


      ಗೋಧೂಳಿಯ ಸಮಯ..ಹಕ್ಕಿಗಳ ಹಿಂಡು ಗೂಡು ಸೇರುತ್ತಿತ್ತು.ದಿನಕರ ತನ್ನ ದಿನದ ಪಯಣದ ಆಯಾಸ ಪರಿಹರಿಸಲು ಪಡುಗಡಲಾಚೆ ತೆರಳಿದ..ಶುಭ ಶುಕ್ರವಾರ ಮುದ್ದು ಪುಟಾಣಿ ಭಾಗ್ಯಲಕ್ಷ್ಮಿಯೊಂದಿಗೆ ಮನೆ ಮಗನನ್ನು ಸ್ವಾಗತಿಸಲು ಸುಮಾ ಮನೆಬಾಗಿಲಲ್ಲಿ ನಿಂತಿದ್ದರು.. ಕಾರು ಅಂಗಳಕ್ಕಿಳಿಯುತ್ತಿದ್ದಂತೆ ಓಡಿ ಕಾರಿನ ಬಳಿಗೆ ಬಂದ ತಾಯಿ ಪುಟಾಣಿ ಭಾಗ್ಯಲಕ್ಷ್ಮಿಯನ್ನೆತ್ತಿಕೊಂಡು ಮಗನನ್ನು ತಬ್ಬಿಹಿಡಿಕೊಂಡು " ಮಗನೇ ...ಈ ಅಮ್ಮನನ್ನು ನೋಡಲು ಇಂದಾದರೂ ಬಂದೆಯಲ್ಲಾ..." ಎನ್ನುತ್ತಿದ್ದಾಗ ಎಲ್ಲರ ಕಣ್ಣುಗಳೂ ತೇವವಾಗಿದ್ದವು..ಬಂಗಾರಣ್ಣ ತನ್ನ ದುಡುಕಿನ ನಡತೆಗೆ ಪರಿತಪಿಸಿದರು..

ರೇಖಾ ಮಂಗಳಮ್ಮನ 'ಕೋರಿಕೆ'ಯನ್ನು ಈಡೇರಿಸಿದರು.

ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
20-07-2020.

Friday, 17 July 2020

ಜೀವನ ಮೈತ್ರಿ ಭಾಗ ೧೦೮(108)



ಜೀವನ ಮೈತ್ರಿ ಭಾಗ ೧೦೮


      ಮೈತ್ರಿಯನ್ನು ಲೇಬರ್ ವಾರ್ಡಿಗೆ ದಾಖಲಿಸಿ ಸ್ವಲ್ಪ ಹೊತ್ತಿಗೆ ಡಾಕ್ಟರ್ ಮಾಯಾ ಆಗಮಿಸಿದರು.ಅವಳನ್ನು ಪರೀಕ್ಷಿಸಿ ನೋವು ಬರಲು ಔಷಧಿಗಳನ್ನು  ಬರೆದುಕೊಟ್ಟರು. ಮೈತ್ರಿಗೆ ಡ್ರಿಪ್ ಹಾಕಲು ಆರಂಭಿಸಿದಾಗ ಸಣ್ಣದಾಗಿ ಬರುತ್ತಿದ್ದ ನೋವು ಜೋರಾಗಲಾರಂಭಿಸಿತು. ಒಮ್ಮೆ ಸುಸೂತ್ರವಾಗಿ ಹೆರಿಗೆಯಾದರೆ ಸಾಕು ಎನಿಸುವಷ್ಟು ಯಾತನೆ ಅನುಭವಿಸುತ್ತಿದ್ದಳು. ಹತ್ತಿರದ ಕೋಣೆಯಿಂದ ಕಿರುಚಾಟ ಕೇಳಿದಾಗ ಅವಳಿಗೆ ಮತ್ತಷ್ಟು ಮೈ ಬೆವರುತ್ತಿತ್ತು.

       ಮುಂದಿನ ಬಾರಿ ವೈದ್ಯೆ ಬಂದಾಗ ಸಣ್ಣಗೆ ಕಂಪಿಸುತ್ತಿದ್ದವಳನ್ನು ಕಂಡು "ಹೆದರಬೇಡಮ್ಮ..ಏನಾಗಲ್ಲ..ನಾನಿದ್ದೇನೆ.. ಸ್ವಲ್ಪ ಹೊತ್ತಲ್ಲಿ ನಿನಗೆ  ಹೆಚ್ಚು ನೋವಾಗದಂತೆ ತಾಯಿಯ ಪಟ್ಟ ಕೊಡಿಸುತ್ತೇನೆ.. " ಎಂದು ಧೈರ್ಯ ತುಂಬಿದರು.ಕಿಶನ್ ಹೊರಟಿರಬಹುದಾ,ಅವನಿಗೀಗ ಏನು ಫೀಲ್ ಆಗುತ್ತಿರಬಹುದು,ನನ್ನ ಬಗ್ಗೆ ಯೋಚಿಸುತ್ತಿರಬಹುದಾ,ಅಲ್ಲ ಬರೀ ಮಗು ಹೆಣ್ಣೋ ಗಂಡೋ ಎಂಬ ಧ್ಯಾನದಲ್ಲಿರಬಹುದಾ..ಎಂದೆಲ್ಲ ಯೋಚಿಸುತ್ತಿದ್ದಳು ಬಿಟ್ಟು ಬಿಟ್ಟು ಬರುತ್ತಿದ್ದ ನೋವನ್ನು ಮರೆಯಲು.

       ಗಂಟೆಯಿಂದ ಗಂಟೆಗೆ ಅವಳ ನೋವು ತಾರಕಕ್ಕೇರುತ್ತಿತ್ತು. ಪಕ್ಕದ ಕೋಣೆಯಿಂದ ಕಿರುಚಾಟ ನಿಂತು ಮಗುವಿನ ಅಳು ಕೇಳಿಬಂತು.. ಇನ್ನು ವೈದ್ಯೆ ನನ್ನದೇ ಹೆರಿಗೆ ಮಾಡಿಸುತ್ತಾರೆ ಎಂದುಕೊಂಡು ಬರುತ್ತಿರುವ ಬೇನೆಗೆ ಕಣ್ಣೀರು ಸುರಿಸುತ್ತಿದ್ದಳು. ಇಲ್ಲ..ವೈದ್ಯೆಯ ಆಗಮನದ ಸುಳಿವಿಲ್ಲ.. ಇನ್ನೆಷ್ಟು ಹೊತ್ತು ಈ ಸಂಕಟ.. ಎಂದುಕೊಳ್ಳುತ್ತಾ ದಾದಿಯನ್ನು ಕೇಳಿದಳು..ಆಕೆ ಪರೀಕ್ಷಿಸಿ.."ಇನ್ನೂ ಸರಿಯಾಗಿ ಗರ್ಭದ್ವಾರ ಓಪನ್ ಆಗಿಲ್ಲಮ್ಮ...ಒಂದೆರಡು ಗಂಟೆ ಬೇಕು" ಎಂದಾಗ..ಅವಳೆದೆ ಧಸಕ್ಕೆಂದಿತು. ಇದನ್ನೇ ಸಹಿಸಲು ಕಷ್ಟ...ಇನ್ನು ಹೆಚ್ಚು...ಉಫ್...ಈ ತಾಯ್ತನವೆಂಬುದು ಸುಲಭವಾಗಿ ದಕ್ಕುವಂತಹುದಲ್ಲ.. ಎಂದು ಭಾವುಕಳಾದಳು.

        ಎರಡು ಗಂಟೆಯ ಬಳಿಕ ವೈದ್ಯರು ಆಗಮಿಸಿದರು.ಇನ್ನು ಸ್ವಲ್ಪವೇ ಹೊತ್ತು ಎಂದರು ಪರೀಕ್ಷಿಸುತ್ತಾ.. ಬಳಿಯಲ್ಲಿ ನಿಂತಿದ್ದ ವೈದ್ಯೆ "ನಿನಗೇನು ಹವ್ಯಾಸಗಳಿವೆ ?" ಎಂದು ಮಾತಿಗೆಳೆದರು. ನನಗೆ ಹಾಡುವುದೆಂದರೆ ಇಷ್ಟವೆಂದಳು.. "ಓಹ್..ಹಾಗಾದರೆ ಪಕ್ಕನೆ ನೆನಪಾಗುವ ಒಂದು ಹಾಡು ಹಾಡಿ..ಇನ್ನೊಂದು ನೋವಿನ ಆವರ್ತನೆ ಬರುವ ಮುನ್ನ" ಎಂದರು..ಅವಳಿಗೂ ಮನಸು ರಿಲ್ಯಾಕ್ಸ್ ಆಗಲು ಏನಾದರೂ ಬೇಕಿತ್ತು..' ಪವಡಿಸೋ ಪರಮಾತ್ಮ ಶ್ರೀ ವೆಂಕಟೇಶ '..ಗೀತೆಯ ನಾಲ್ಕು ಸಾಲುಗಳನ್ನು ಹಾಡಿದಾಗ .. ಮತ್ತೆ ನೋವು ಆರಂಭವಾಯಿತು..ಅಲ್ಲಿಗೆ ಹಾಡು ನಿಲ್ಲಿಸಬೇಕಾಯಿತು. ಅವಳ ಹಾಡಿಗೆ ತಲೆದೂಗಿದರು ದಾದಿಯರು ಮತ್ತು ವೈದ್ಯೆ.ದಾದಿಯರು ಆ ಕ್ಷಣಗಳನ್ನು ವಿಡಿಯೋ ಮಾಡಿಕೊಂಡಿದ್ದರು..ಹಾಡಿನ ತುಣುಕನ್ನು ಮತ್ತೆ ಮತ್ತೆ ಕೇಳುತ್ತಾ ತಂಡ ಹೆರಿಗೆಗೆ ಸಜ್ಜಾದಾಗ ಮೈತ್ರಿ ಹಾಡಿನಲ್ಲೇ ತಲ್ಲೀನಳಾಗಿದ್ದಳು.ಕೆಲವೇ ಕ್ಷಣಗಳಲ್ಲಿ  ಮೈತ್ರಿ ಚೀರುತ್ತಿದ್ದಂತೆ ಡಾಕ್ಟರ್ ಮಾಯಾ ಮಗುವನ್ನು ತಮ್ಮ ಕೈಯಲ್ಲಿ ಹಿಡಿದಿದ್ದರು..ಅಮ್ಮನ ಹಾಡನ್ನು ಕೇಳುತ್ತಾ ಮಗು ಭುವಿಗಿಳಿಯಿತು.."ನೋಡಿ ಪರಮಾತ್ಮ ನಿಮ್ಮ ಮಡಿಲಲ್ಲೇ ಪವಡಿಸಿದ್ದಾನೆ.."ಎನ್ನುತ್ತಾ ಅವಳ ಬಳಿ ಮಗುವನ್ನು ಹಿಡಿದಾಗ ಅವಳಿಗೋ ಪರಮಾನಂದದ ಅಶ್ರುಧಾರೆ ಸುರಿಯಿತು..ಮಗುವಿನ ಪುಟ್ಟ ಬೆರಳುಗಳನ್ನು ಹಿಡಿದು ಸಿಹಿಮುತ್ತನಿತ್ತಳು.


       ದಾದಿ ಮಗುವನ್ನು ಸ್ವಚ್ಛಗೊಳಿಸಿ ಅಮ್ಮನ ಮಡಿಲಲ್ಲಿ ಮಲಗಿಸಿದರು.ಹೊರಗಡೆ ತೆರಳಿ ಪೇಷೆಂಟ್ ಮೈತ್ರಿ ಪಾರ್ಟಿ ಎಂದು ಕರೆದಾಗ ಕಿಶನ್,ಮಂಗಳಮ್ಮ ಮುಂದೆ ಬಂದರು.."ಗಂಡು ಮಗು .. ಕಂಗ್ರಾಟ್ಸ್ " ಎಂದು ಹೇಳಿ ಒಳಗೆ ಕರೆದೊಯ್ದು ಮಗುವನ್ನು ಕಿಶನ್'ನ ಕೈಗಿತ್ತರು.."ನಿಮ್ಮ ಮಗ ಅಮ್ಮನ ಹಾಡನ್ನು ಕೇಳುತ್ತಾ ಭೂಮಿಗೆ ಬಂದ ಅದೃಷ್ಟ ವಂತ.."ಎಂದಾಗ ಕಿಶನ್ ಗೆ ರೋಮಾಂಚನವಾಯಿತು..ಮಗನ ಪುಟ್ಟ ಕೆಂಪಗಿನ ಮುಖ,ಇಷ್ಟೇ ಇಷ್ಟು ಸಣ್ಣ ಬೆರಳುಗಳು,ಉದ್ದವಾದ ಉಗುರುಗಳು,ಮುದ್ದಾದ ಪಾದವ ಮೆದುವಾಗಿ ಸ್ಪರ್ಶಿಸಿದ."ಬಂಗಾರು.. ನಿನ್ನ ನೋಡಲು ಎಷ್ಟು ಕಾತುರನಾಗಿದ್ದೆ ಗೊತ್ತಾ..ಅಮ್ಮಂಗೆ ಜಾಸ್ತಿ ನೋವು ಕೊಡದೆ ಹೊರಗೆ ಬಾ.. ಅಂದಾಗ ಕೇಳಿಸಿಕೊಂಡವನಂತೆ ಮೆದುವಾಗಿ ಒದೆಯುತ್ತಿದ್ದೆಯಂತೆ..!! ಅಮ್ಮ ನನ್ನ ಕೈ ಉದರದ ಮೇಲಿರಿಸಿ ತೋರಿಸುತ್ತಿದ್ದಳು.. ಹೂಂ..ತುಂಟ..ಅಮ್ಮನಂತೆಯೇ ಮುಖ,ಗಲ್ಲ,ಆದರೆ ತಲೆಕೂದಲು ಮಾತ್ರ ನನ್ನಂತೆ.."ಎಂದುಕೊಳ್ಳುತ್ತಾ ಬಿಳಿ ಹತ್ತಿಬಟ್ಟೆಯಲ್ಲಿ ಸುತ್ತಿದ್ದ ತನ್ನ ಪ್ರೇಮದ ಕುಡಿಯನ್ನು ಎದೆಗಾನಿಸಿದ.

ಮೈತ್ರಿಯ ಆರೋಗ್ಯವನ್ನು ವಿಚಾರಿಸಿದ ನಂತರ ಇಬ್ಬರನ್ನು exit ಬಾಗಿಲಲ್ಲಿ ಹೊರಗಡೆ ಹೋಗುವಂತೆ ತಿಳಿಸಿದರು."ಓಹೋ ...ಇಲ್ಲೊಂದು ದ್ವಾರವಿದೆ..ನನಗದು ತಿಳಿದಿರಲಿಲ್ಲ.." ಎಂದುಕೊಳ್ಳುತ್ತಾ ಹೊರಬಂದಾಗ ಇಲ್ಲಿ ಬಹಳಷ್ಟು ಮಂದಿ ಕುಳಿತಿದ್ದನ್ನು,ದಾದಿಯರು ಹೆಚ್ಚು ಬಳಸುತ್ತಿದ್ದುದನ್ನು ಕಂಡು ನಾನೂ ಈ ಬಗ್ಗೆ ಗೊತ್ತಿದ್ದರೆ ಮೈತ್ರಿಯನ್ನು ಆಗಾಗ ವಿಚಾರಿಸಿಕೊಳ್ಳುತ್ತಿದ್ದೆ ಎಂದುಕೊಂಡರು ಮಂಗಳಮ್ಮ ಮನದಲ್ಲೇ.


      ಹತ್ತಿರದ ಬಂಧುಗಳಿಗೆ ವಿಷಯ ತಿಳಿಸಿದರು.
ಬೆಳಿಗ್ಗೆ ಮೈತ್ರಿಯನ್ನು ವಾರ್ಡಿಗೆ ಶಿಫ್ಟ್ ಮಾಡಿದ್ದರು.ಗಣೇಶ ಶರ್ಮ ,ಮಮತಮ್ಮನೂ ಮೊಮ್ಮಗುವನ್ನು ನೋಡಲು ಆಗಮಿಸಿದರು.ಮಹೇಶ ಬೆಳಗ್ಗೆಯೇ ಬಂದಿದ್ದ ಅಳಿಯನನ್ನು ನೋಡಲು..ಎಲ್ಲರಿಗೂ ಪುಟ್ಟ ರಾಜಕುಮಾರನ ಆಗಮನ ಸಂತಸವನ್ನು ತಂದಿತ್ತು.

        ಅಜ್ಜಿ ಮಹಾಲಕ್ಷ್ಮಿ ಅಮ್ಮ ಮನೆಯಲ್ಲಿ ಇದ್ದುಕೊಂಡು ಮೈತ್ರಿಯ ಬಾಣಂತನಕ್ಕೆ ತಯಾರು ಮಾಡುತ್ತಿದ್ದರು.ಎರಡು ತಿಂಗಳಿಗೆ ಮೊದಲೇ ತೋಟದಿಂದ ದೊಡ್ಡ ಗಾತ್ರದ ಕೆಲವು ಅಡಕೆ ಹಾಳೆಯನ್ನು ಕೊಯ್ದು ತಂದು ಅದರ ಮೇಲೆ ಭಾರವಿಟ್ಟು ಚಪ್ಪಟೆಯಾಗಿ ಮಾಡಿ ಜೋಪಾನ ಮಾಡಿದ್ದರು.ಅದನ್ನೆಲ್ಲ ಹೊರತೆಗೆದು ಚೆನ್ನಾಗಿ ಒರೆಸಿ ಮೈತ್ರಿಯ ರೂಮಿನಲ್ಲಿಟ್ಟರು ."ಪುಟ್ಟ ಮಕ್ಕಳನ್ನು ಪ್ಲಾಸ್ಟಿಕ್ ಶೀಟ್ ಮೇಲೆ ಬಟ್ಟೆ ಹಾಕಿ ಮಲಗಿಸುವುದರಿಂದ ಇದು ಉತ್ತಮ.ಮಕ್ಕಳ ದೇಹಕ್ಕೆ ಆಧಾರ ನೀಡುತ್ತದೆ.ಒಣಗಿಸಿದ ಚಪ್ಪಟೆ ಅಡಿಕೆ ಹಾಳೆಯ ಮೇಲೆ ದಪ್ಪನೆ ಬಟ್ಟೆ ಹಾಸಿ ಮಗುವನ್ನು ಮಲಗಿಸಿದರೆ ಸುಖ ನಿದ್ರೆ.ಪ್ರಯಾಣಿಸುವಾಗ ಬಳಸಿದರೆ ,ಮಗುವಿಗೆ ಅತಿ ಆಯಾಸವಾಗದು.ಹಾಗಾಗಿ ಮನೆಗೆ ವಾಪಾಸಾದ ಮೇಲೆ ಹಠವೂ ಕಡಿಮೆ."ಎಂದು ತನ್ನ ಅನುಭವವನ್ನು ಸರಸುವಿನ ಜೊತೆ ಹಂಚಿಕೊಂಡರು.ಅವಳೂ "ಹೌದಮ್ಮ.. ಹೌದು.."ಎಂದು ದನಿಗೂಡಿಸಿದಳು.
ಬಾಣಂತಿಗೆಂದೇ ಹಲವು ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಾಣಂತಿ ತೈಲ ಮಾಡಿಟ್ಟರು. ಮಗುವಿನ ಮೈಗೆ ಹಚ್ಚಲು ಬೇಕಾಗುವ ಕೆಂಪೆಣ್ಣೆಯನು ತಯಾರಿಸಿಟ್ಟರು. ಸರಸು ಕೂಡ ಸಹಕರಿಸಿದ್ದಳು. ಬಾಣಂತಿಯ ಸ್ನಾನದ ಮತ್ತು ಬಾಣಂತಿ,ಮಗುವಿನ ಬಟ್ಟೆ ಒಗೆಯುವ ಜವಾಬ್ದಾರಿ ಅವಳಿಗೆ ವಹಿಸಿದರು.ಮಗುವಿನ ಮೈಗೆ ಹಚ್ಚಲು ಗಂಧ ಚಂದನದ ಕೊರಡನ್ನು ತೆಗೆದಿರಿಸಿದರು.ಪುಟ್ಟ ಮಗುವಿಗೆಂದು ಶ್ಯಾಮ ಶಾಸ್ತ್ರಿಗಳ ಹಳೆಯ ಮುಂಡು ವೇಸ್ಟಿಗಳನ್ನೆಲ್ಲ ಚೆನ್ನಾಗಿ ತೊಳೆದು ಮಡಚಿಟ್ಟಿದ್ದರು. ಸಂಜೆ ಮನೆಗೆ ಮಹೇಶ ಬಂದಾಗ ಅಜ್ಜಿಯ ತಯಾರಿಯನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟ.

       "ಎಂತ ಪುಳ್ಳಿ..ಹಾಂಗೆ ನೋಡ್ತೆ..ಇದೆಲ್ಲ ಎನಗೆ ನೆಂಪು ಒಳಿತ್ತಿಲ್ಲೆ..ಎಲ್ಲ ಒಂದು ಪುಸ್ತಕಲ್ಲಿ ಬರೆದಿಡು..ನಿನ್ನ ಕಾಲಕ್ಕೆ ನಾನಿರುತ್ತೇನೋ ಇಲ್ಲವೋ.. ಆಗ ಉಪಯೋಗಕ್ಕೆ ಬಕ್ಕು"..
"ಏನೂ.."ಎಂದು ಮಹೇಶ ಕಣ್ಣರಳಿಸಿದ ಅಜ್ಜಿಯ ಮುಂದಾಲೋಚನೆಗೆ.

        "ಅಜ್ಜಿ.. ಪುಸ್ತಕದಲ್ಲಿ ಬರೆಯೋದಕ್ಕಿಂತ ಈ ಲ್ಯಾಪ್ ಟಾಪ್ ನಲ್ಲಿ ಬರೆದರೆ ಒಳ್ಳೆಯದು..ಯಾವ ಕಾಲಕ್ಕೂ ಅಳಿಸಿ ಹೋಗುವುದಿಲ್ಲ..." ಎನ್ನುತ್ತಾ ಅಪ್ಪ ಇಂಜಿನಿಯರಿಂಗ್ ಗೆ ಸೇರಿಸಿ ಕೆಲವೇ ದಿನಗಳಲ್ಲಿ ತೆಗೆದುಕೊಟ್ಟ ಲ್ಯಾಪ್ ಟಾಪ್ ಹೊರತೆಗೆದ.ಅಜ್ಜಿಗೆ ಖುಷಿಯೋ ಖುಷಿ.ಅಜ್ಜಿ ಹೇಳುತ್ತಾ ಹೋದಂತೆ ಟೈಪ್ ಆಯಿತು..ಅಜ್ಜಿಗೇನು ಸಂಭ್ರಮ ಹೊಸ ತಂತ್ರಜ್ಞಾನ ಕಂಡು.. ಮತ್ತೆ ಅವರ ಪಟವೂ ಅದರ ಮೇಲೆ ಕಂಡಾಗ ಪುಳ್ಳಿಯ ಬೆನ್ನು ತಟ್ಟಿದರು."ಇದನ್ನು ಜೋಪಾನವಾಗಿ ಇಡು..ಪುಳ್ಳಿ.." ಎಂದರು.

        ಕಿಶನ್ ಆಸ್ಪತ್ರೆಯಲ್ಲಿ ಇದ್ದುಕೊಂಡು ಮಂಗಳಮ್ಮ ಮೈತ್ರಿಗೆ ಸಹಕರಿಸುತ್ತಿದ್ದ. ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್ ಆಗಿ ಶಾಸ್ತ್ರೀ ನಿವಾಸಕ್ಕೆ ಚೊಚ್ಚಲ ಬಾಣಂತನಕ್ಕೆ ಮೈತ್ರಿಯ ಸುಖಾಗಮನವಾಯಿತು. ಮಂಗಳಮ್ಮ ಮೈತ್ರಿಯ ಕೊಣೆಯಲ್ಲಿದ್ದು ಮಗುವನ್ನೂ ಬಾಣಂತಿಯನ್ನೂ ನೋಡಿಕೊಂಡರೆ,ಅಜ್ಜಿ ಮನೆಕೆಲಸ ನಿಭಾಯಿಸುತ್ತಿದ್ದರು . ಸರಸು ಬಾಣಂತಿ ಮೀಯಿಸಿದರೂ ಮಗುವನ್ನು ಮಂಗಳಮ್ಮನೇ ಸ್ನಾನ ಮಾಡಿಸುತ್ತಿದ್ದರು.ಮೈಗೆ ಎಣ್ಣೆ ಹಚ್ಚಿ, ವಿಶಾಲವಾದ ಬಚ್ಚಲು ಮನೆಯಲ್ಲಿ ದೊಡ್ಡ ಹಂಡೆಯಲ್ಲಿ  ಕಾಯಿಸಿದ ಬಿಸಿ ಬಿಸಿ ನೀರ ಸ್ನಾನ ಮಾಡುವುದು ಮೈತ್ರಿಗೂ ಬಲು ಹಿತವಾಗಿತ್ತು.


       ದಿನಗಳು ಉರುಳುತ್ತಿದ್ದವು.ಒಮ್ಮೊಮ್ಮೆ ರಾತ್ರಿಯಿಡೀ ಅತ್ತು ರಂಪ ಮಾಡುವ ಪೋರ ಹಗಲಿಡೀ ಸುಖವಾಗಿ ನಿದ್ರಿಸುತ್ತಿದ್ದ.ಇನ್ನೊಮ್ಮೆ ಸಂಪೂರ್ಣ ಅದಲು ಬದಲು.ಜೋರಾಗಿ ಅತ್ತರೆ ಯಾರ ಕೈಯಲ್ಲೂ ಸಮಾಧಾನವಾಗದ ತುಂಟ ಸೋದರ ಮಾವನ ಮಡಿಲಲ್ಲಿ ಮಲಗಿ ಸಿನೆಮಾ ಹಾಡುಗಳನ್ನು ಕೇಳಿದಾಗ ಶಾಂತನಾಗುತ್ತಿದ್ದ .. ಶ್ಯಾಮ ಶಾಸ್ತ್ರಿಗಳು "ಎಲಾ ಇವನಾ.. !!! ಮಹಾ ತುಂಟನಾಗುತ್ತಾನೋ ಹೇಗೆ..?" ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದರು.


      ಸಾಂಪ್ರದಾಯಿಕ ಬಾಣಂತನದಲ್ಲಿ ಎರಡು ತಿಂಗಳು ಪೂರೈಸಿದಳು ಮೈತ್ರಿ.ತೆಳ್ಳಗೆ ಬೆಳ್ಳಗಿದ್ದ ಮೈತ್ರಿ ಮೈ ಕೈ ತುಂಬಿಕೊಂಡು ಗುಂಡು ಗುಂಡಗೆ ಆಗಿದ್ದಳು.ಮೂರುತಿಂಗಳು ತುಂಬಿದಾಗ  ತೊಟ್ಟಿಲ ಮಗುವನ್ನು ಕರೆದೊಯ್ಯುವುದೆಂದು ನಿರ್ಧರಿಸಲಾಯಿತು.

     ಅಜ್ಜ  ತೋಟದ ಬದಿಯಲ್ಲಿದ್ದ ಹಲಸಿನ ಮರವನ್ನು ಕೊಯ್ಯಲು ಹೇಳಿದರು.ಅದರಿಂದ ಹಲಗೆ ಮಾಡಿ ,ಮಗುವಿಗೆ ತೊಟ್ಟಿಲು ಮಾಡಬೇಕೆಂದು ಅವರಾಸೆ.ಅವರಾಸೆಯಂತೆ ಸುಂದರವಾದ ಹಲಸಿನ ಮರದ ತೊಟ್ಟಿಲು ಸಿದ್ಧವಾಯಿತು..  ಮರದ ಕೆಲಸ ಮಾಡುವ ಎಪ್ಪತ್ತು ವರ್ಷದ ಬಾಬು ಆಚಾರಿ ಮನೆಗೇ ಬಂದು ತೊಟ್ಟಿಲನ್ನು ಮಾಡಿಕೊಟ್ಟರು.


       *****


      ಕೇಶವ ಮಾವನ ಮನೆಯಲ್ಲೇ ಇದ್ದು ಉದ್ಯೋಗಕ್ಕೆ ಹೋಗುತ್ತಿದ್ದ. ಮಗಳ ಬಾಣಂತನ ಮುಗಿಸಿ ರೇಖಾ ಕೂಡಾ ಉದ್ಯೋಗಕ್ಕೆ ತೆರಳಲಾರಂಭಿಸಿದರು. ಮನೆಯಲ್ಲಿ ಸೌಜನ್ಯಳಿಗೆ ಮಗುವನ್ನು ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿತ್ತು. ಒಮ್ಮೆ ಸಂಜೆಯಾದರೆ ಸಾಕು ಎನಿಸುತ್ತಿತ್ತು. ತಂದೆ ಮನೆಗೆ ಬಂದಾಗ ಅವರ ಕೈಗೆ ಮಗುವನ್ನು ಕೊಟ್ಟು ತನ್ನ ಕೆಲಸಗಳನ್ನು ಬೇಗ ಬೇಗನೆ ಮುಗಿಸಿ ಬಿಡುತ್ತಿದಳು.

       ನರಸಿಂಹ ರಾಯರು ತಮ್ಮ ಗುರುತು ಪರಿಚಯದವರಲ್ಲಿ ಅಳಿಯನಿಗೆ ಒಳ್ಳೆಯ ಉದ್ಯೋಗ ದೊರಕಿಸಿಕೊಡಲು ಪ್ರಯತ್ನಿಸಿದರು. ಕೆಲವು ಕಡೆ ಹೋಗಿ ಇಂಟರ್ವ್ಯೂ ಗೆ ಹಾಜರಾದ ಕೇಶವ.ಗಂಡನಿಗೊಂದು ಒಳ್ಳೆಯ ಕೆಲಸ ಸಿಗಲಿ ಎಂದು ಸೌಜನ್ಯ ದಿನವೂ ಪ್ರಾರ್ಥಿಸುತ್ತಿದ್ದಳು.


ಮುಂದುವರಿಯುವುದು..

✍️ ಅನಿತಾ ಜಿ.ಕೆ.ಭಟ್.
10-07-2020.


ಸಲಿಲ - ಸರಸ



          ಸಲಿಲ-ಸರಸ

ಬರಡಾದ ನೆಲಕಿಂದು
ನೀರಹನಿ ತಂಪುಣಿಸಿ
ಸೀರೆಹಸಿರನು ಉಡಿಸಿದೆ...|
ತರಳೆಯ ಮನವಿಂದು
ಗರಿಗೆದರಿ ಕುಣಿಯುತಿರೆ
ಕಾರಣವು ಪ್ರೇಮದ ವರ್ಷಧಾರೆ..||


ಬಾಯ್ದೆರೆದು ಬೀಜವದು
ಕಾಯ್ದು ಎಳೆ ಚಿಗುರನು
ತೊಯ್ದು ತಾ ಗಿಡಮೂಡಿದೆ..|
ಆಯ್ದು ತುಂತುರು ಹನಿಯ
ನೇಯ್ದು ಹೃದಯದ ಗೂಡಲಿ
ಕಾಯ್ದಿಹಳು ಇನಿಯನ ಕಣ್ಣಂಚಲಿ..||


ನಾಲಿಗೆಯ ಹೊರಚಾಚಿ
ಉಲಿಯುತಲಿ ನಲಿಯುತಲಿ
ಸಲಿಲದೊಡಗೂಡಿ ಸರಸವಾಡಿ ..|
ಕಲಿಸಿಹಳು  ತನ್ನವಗೆ ಜಿನುಗುವ
ಮಳೆಹನಿಯ ಹೀರಿ ಹಿಗ್ಗಲು
ಕಾಲಕಾಲದ ಸೊಬಗು ಸವಿಯಲು..||


ಖಗಮೃಗವು ಗಿಡಮರವು
ಆಗಿಹುದು ಬೆದರಿ ಒದ್ದೆ ಮುದ್ದೆ
ಕೂಗುತಿದೆ ತೊರೆ ನೊರೆಯುತ..|
ಆಗಸದಿ ಕೋಲ್ಮಿಂಚು; ಸುಳಿಮಿಂಚು
ಆಗಮನ ಇನಿಯನ ರಸನೋಟಕೆ
ಬೀಗುವಳು ಬೆಚ್ಚನೆಯ ಬಂಧನದಲಿ..||


ಹದವಾಗಿ ಮಳೆಯಾಗಿ
ವಿಧವಿಧದ ಬೆಳೆಬೆಳೆದು
ಉದರಭರಿಸೆ ಫಸಲು ತೆನೆಗೂಡಲಿ..|
ಕಳೆಯಾಗಿ ಬಂದಿರುವ ಕೋವಿಡ್
ಕೊಳೆತೊಳೆದು; ಮನೆಮನವು
ಇಳೆಯಲಿ ಬೆಳಗಿ ಹರುಷಗೊಳಲಿ...||


✍️... ಅನಿತಾ ಜಿ.ಕೆ.ಭಟ್.
17-07-2020.


momspresso Kannada ದಲ್ಲಿ 'ಮಾನ್ಸೂನ್,ಹೆಣ್ಮಕ್ಕಳ ಸಂಭ್ರಮ' ವಿಷಯಕ್ಕಾಗಿ ಬರೆದ ಕವನ..

Wednesday, 15 July 2020

ಜೀವನ ಮೈತ್ರಿ ಭಾಗ ೧೦೭(107)




ಜೀವನ ಮೈತ್ರಿ ಭಾಗ ೧೦೭


   ಮೈತ್ರಿಯನ್ನು ಪರೀಕ್ಷಿಸಲು ಡಾಕ್ಟರ್ ಶಾಂತ ಬಂದರು.. ಆಕೆಯನ್ನು ಪರಿಕ್ಷಿಸಿ
"ಇವತ್ತು ಡಿಸ್ಚಾರ್ಜ್ ಮಾಡ್ತೀನಿ.. ಇನ್ನು ಮನೆಯಲ್ಲಿ ಕೇರ್ ತೆಗೆದುಕೊಳ್ಳಿ..ತುಂಬಾ ಹೊತ್ತು ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಒಳ್ಳೆಯದಲ್ಲ.ಪುನಃ ಈ ತರಹ ಆದರೆ ತುಂಬಾ ಅಪಾಯಕಾರಿ.."ಎಂದು ಎಚ್ಚರಿಸಿದರು.

ಡಿಸ್ಚಾರ್ಜ್ ಆಗಿ ಮನೆಗೆ ಬಂದಾಗ ಕಿಶನ್ ...ಮೈತ್ರಿಗೆ 'ಉದ್ಯೋಗದಿಂದ ರಜೆ ಪಡೆದುಕೊಳ್ಳುವುದು ಒಳಿತು' ಎಂದು ಸಲಹೆಯಿತ್ತನು..ಮಂಗಳಮ್ಮನದೂ ಅದೇ ಮಾತು.." ತುಂಬಾ ಹೊತ್ತು ಒಂದೇ ರೀತಿ ಕುಳಿತು ಕೊಳ್ಳದೆ.. ಕೆಲಸ ಸ್ವಲ್ಪ ದಿನ ಮಾಡುವೆ " ಎನುವ ಮೈತ್ರಿ.. 'ಮಗುವಾದ ನಂತರ ಹೇಗೂ ಉದ್ಯೋಗ ಮಾಡಲು ಕಷ್ಟ.ಈಗಲೇ ಸ್ವಲ್ಪ ಹಣ ಮಾಡಿಕೊಳ್ಳುತ್ತೇನೆ' ..ಎಂದು ಅವಳ ಭಾವನೆ.ಕಿಶನ್ ಗೆ ಸಿಟ್ಟು ಬಂದಿತು.ಮುಖ ಕೆಂಪೇರಿತ್ತು.ಆದರೂ ರೇಗದೆ ಮನಸು ಹತೋಟಿಯಲ್ಲಿಟ್ಟು ತನ್ನ ರೂಮಿಗೆ ಹೋಗಿ ಬಟ್ಟೆಗೆ ಇಸ್ತ್ರಿ ಹಾಕುತ್ತಿದ್ದ.'ಮಡದಿಗೆ ನಾನೇನು ಕಡಿಮೆ ಮಾಡಿದ್ದೇನೆ ..ಆದರೂ ಅವಳ ಹಠ ಅವಳು ಬಿಡುವುದಿಲ್ಲವಲ್ಲ.ಏನಾದರೂ ತೊಂದರೆಯಾದರೆ ಮತ್ತೆಷ್ಟು ಸವಾಲನ್ನು ಎದುರಿಸಬೇಕಾದೀತು ಎಂಬುದೆಲ್ಲ ಇವಳಿಗೆ ತಿಳಿಯುವುದಿಲ್ಲವಲ್ಲ.'. ಎಂದು ಯೋಚಿಸುತ್ತಿದ್ದ.


      ಮಂಗಳಮ್ಮ ಮಗಳ ಮನೆಯಲ್ಲಿ ನಿಂತು ಮಗಳ ಆರೈಕೆಯಲ್ಲಿ ತೊಡಗಿದರು.ಮೈತ್ರಿ ಆರೋಗ್ಯ ಜೋಪಾನವಾಗಿ ನೋಡಿಕೊಂಡು ಮನೆಯಿಂದಲೇ ಕೆಲಸ ನಿಭಾಯಿಸಿದಳು. ಮನೆಯಲ್ಲಿ ಗಣೇಶ ಶರ್ಮ ಸೊಸೆಯ ಸೀಮಂತಕ್ಕೆ ಮುಹೂರ್ತ ನೋಡಿದರು.ಕಿಶನ್ ಗೆ ತಿಳಿಸಿದರು.ಮಂಗಳಮ್ಮ, ಮೈತ್ರಿ, ಕಿಶನ್ ಮೂವರೂ ರೈಲಿನಲ್ಲಿ ತಮ್ಮೂರಿಗೆ ಪ್ರಯಾಣಿಸಿದರು.ಇಂತಹ ಸಂದರ್ಭದಲ್ಲಿ ರೈಲು ಪ್ರಯಾಣವೇ ಒಳ್ಳೆಯದೆಂದು ನಿರ್ಧರಿಸಿದ್ದರು.ಅಂತೂ ಏನೂ ತೊಂದರೆಯಾಗದೆ ಮನೆ ತಲುಪಿದಾಗ ಕುಟುಂಬ ನಿಟ್ಟುಸಿರು ಬಿಟ್ಟಿತು.


        ಸೀಮಂತದ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ವಿಪರೀತ ಅದ್ದೂರಿಯಿಲ್ಲದೆ ಸರಳವಾಗಿ ನೆರವೇರಿತು. ನಂತರ ಕಿಶನ್ ಮಡದಿಯನ್ನು ತವರಿಗೆ ಕಳುಹಿಸಿ ಕೊಡುವ ಸಂದರ್ಭದಲ್ಲಿ ಎದುರಿಗೆ ಏನೂ ತೋರಿಸಿಕೊಳ್ಳದಿದ್ದರೂ ಒಳಗೊಳಗೇ ನರಳಿದ.ಇದುವರೆಗೆ ಅವಳೊಂದಿಗೆ ಕಳೆದ ಖುಷಿಯ ಕ್ಷಣಗಳೆಲ್ಲ ನೆನಪಿಗೆ ಬಂದು ಹೃದಯ ಭಣಗುಟ್ಟುತ್ತಿತ್ತು.


       ತವರಿಗೆ ಬಂದ ಮೈತ್ರಿಗೆ ಎಲ್ಲರ ಅಕ್ಕರೆ, ಆರೈಕೆ ಹಿತವಾಗಿತ್ತು.ಬೆಳ್ಳಂಬೆಳಗ್ಗೆ ಅಜ್ಜನ ಪೂಜೆಯ ಮಂತ್ರಘೋಷ,ಅಜ್ಜಿಯ ಕುಂಕುಮಾರ್ಚನೆ, ಸ್ತೋತ್ರ ಪಠಣ,ಸಂಜೆ ಅಪ್ಪನ ಯಕ್ಷಗಾನದ ಪದಗಳು .. ಮೈತ್ರಿಗೂ ಮೈತ್ರಿಯ ಗರ್ಭದಲ್ಲಿರುವ ಭ್ರೂಣಕ್ಕೂ ಕಿವಿಗೆ ತಂಪನೀಯುತ್ತಿದ್ದವು.ಬಸುರಿಗೆಂದು ಅಮ್ಮ ತರತರದ ಅಡುಗೆಗಳನ್ನು ಮಾಡುತ್ತಿದ್ದರು.ಅಜ್ಜಿ ಆರೋಗ್ಯಕರವಾದ ಕುಡಿಗಳನ್ನು ಕೊಯ್ದು ತಂದು ತಂಬುಳಿ ,ಚಟ್ನಿ ಮಾಡಿ ಕೊಡುತ್ತಿದರು.


         *******

ತವರುಮನೆ ಸೇರಿದ ಸೌಜನ್ಯಳಿಗೆ  ತಾಯಿ ರೇಖಾ ತಾನು ಉದ್ಯೋಗದಿಂದ ರಜೆ ಪಡೆದು ಬಾಣಂತನ ಮಾಡಿದರು.ಸುನೀತ ಸಹಾಯಕ್ಕೆ ಬರತೊಡಗಿದಳು.ನರಸಿಂಹರಾಯರ ಖಿನ್ನತೆಗೆ ಮೊಮ್ಮಗಳೇ ಔಷಧವಾದಳು.ಸಂಜೆ ಆಫೀಸಿನಿಂದ ಮರಳಿದರೆ ಅಜ್ಜನ ಮಡಿಲಲ್ಲೇ ಮೊಮ್ಮಗಳು.ಅವಳಿಗೆಂದು ಲಾಲಿಯ ಹಾಡು, ದೇವರನಾಮಗಳನ್ನು ಹೇಳತೊಡಗಿದರು. ಮಗಳಿಗಿಂತಲೂ ಎರಡುಪಟ್ಟು ಮೊಮ್ಮಗಳನ್ನು ಹಚ್ಚಿಕೊಂಡರು ಅಜ್ಜ ನರಸಿಂಹ ರಾಯರು.ರೇಖಾ 'ಈಗಲಾದರೂ ಪತಿ ಸರಿಹೋದರಲ್ಲ' ಎಂದು ಖುಷಿಪಟ್ಟರು.ಕೇಶವ ದಿನವೂ ಮಾವನ ಮನೆಯಿಂದಲೇ ಕೆಲಸಕ್ಕೆ ಹೋಗಲಾರಂಭಿಸಿದ.


                ******


        ಬೆಂಗಳೂರಿನಲ್ಲಿ ಒಬ್ಬನೇ ಇರುವಾಗ ಕಿಶನ್ ಮೈತ್ರಿಯನ್ನು ನೆನಪಿಸಿಕೊಂಡು ಕಣ್ತುಂಬಿಕೊಳ್ಳುತ್ತಿದ್ದ . ಮೊದಲಿನಂತೆ ಹಾಯ್ಕುಗಳು,ಪ್ರೇಮಕವಿತೆಗಳನ್ನು ಬರೆದು ಮೈತ್ರಿಗೆ ಕಳುಹಿಸಿ ತನ್ನ ನೋವನ್ನು ಮರೆಯುತ್ತಿದ್ದ.ಮೈತ್ರಿ ತವರಿಂದಲೇ ಆಫೀಸಿನ ಕೆಲಸಗಳನ್ನು ಮಾಡುತ್ತಿದ್ದಳು..ಅಜ್ಜಿ ಮಾತ್ರ ಈ ವಿಷಯದಲ್ಲಿ ಮೊಮ್ಮಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು..''ಹೀಗೆ ಇಡೀ ದಿನ ಕುಳಿತೇ ಇದ್ದರೆ ಹೆರಿಗೆ ಕಷ್ಟವಾದೀತು.. ಆರೋಗ್ಯ ಹಾಳಾದೀತು'' ಎಂದು.. ಒಂಭತ್ತು ತಿಂಗಳು ಭರ್ತಿಯಾದಾಗ ಮೈತ್ರಿ ಉದ್ಯೋಗ ಮಾಡುವುದು ನಿಲ್ಲಿಸಿ ತಾಯ್ತನದ ರಜೆ ಪಡೆದುಕೊಂಡಳು.


      ಒಂಭತ್ತು ತಿಂಗಳಾದಾಗ  ಕಿಶನ್ ಬಂದು ಮೈತ್ರಿಯನ್ನು ವೈದ್ಯರಲ್ಲಿಗೆ ಕರೆದೊಯ್ದು ಚೆಕಪ್ ಮಾಡಿಸಿಕೊಂಡು ಬಂದ."ಇನ್ನು ನಾಲ್ಕು ದಿನ ಕಾಯೋಣ.ನಂತರ ನೋವು ಬಾರದಿದ್ದರೂ ಅಡ್ಮಿಟ್ ಮಾಡಿ".ಎಂದರು ತವರಿನ ಸಮೀಪದ ಖಾಸಗಿ ನರ್ಸಿಂಗ್ ಹೋಂ ನ ವೈದ್ಯೆ ಮಾಯಾ.. ಕಿಶನ್ ವಿಷಯವನ್ನು ಮಾವ ಅತ್ತೆಯ ಬಳಿ ಅರುಹಿ ಬೆಂಗಳೂರಿಗೆ ಪಯಣ ಬೆಳೆಸಿದ.


    ದೈಹಿಕ ವ್ಯಾಯಾಮ ಇನ್ನು ಸ್ವಲ್ಪ ಅಗತ್ಯವೆಂದು ವೈದ್ಯೆಯೂ ಹೇಳಿದ್ದರಿಂದ ಮೈತ್ರಿ ಮನೆಕೆಲಸಕ್ಕೆ ಅಮ್ಮನಿಗೆ ಸಹಕರಿಸುತ್ತಿದಳು.. ತನ್ನ ಬಟ್ಟೆ ತೊಳೆಯುವುದು..ಎಲರ ಬಟ್ಟೆ ಒಣಹಾಕುವುದು, ಮಡಚಿಡುವುದು ಇತ್ಯಾದಿಯೆಲ್ಲ ಅವಳೇ ಮಾಡುತ್ತಾ ಮನೆಯ ಅಂಗಳದಲ್ಲಿ ಬೆಳಿಗ್ಗೆ ಸಂಜೆ ವಾಕಿಂಗ್ ಮಾಡುತ್ತಿದ್ದಳು.ದಿನವೂ ಒಂದು ಗಂಟೆ ಸಂಗೀತಾಭ್ಯಾಸ ಮಾಡುತ್ತಿದ್ದಳು.ತನ್ನ ಕಾಲೇಜಿನ ಗೆಳತಿಯರಿಗೆಲ್ಲ ಕರೆ ಮಾಡಿ ಮಾತನಾಡುತ್ತಾ ಸಮಯ ಕಳೆಯುತ್ತಿದ್ದಳು.



       ಒಂದು ದಿನ ಸಂಜೆಯ ವೇಳೆಯಲ್ಲಿ ಸಣ್ಣಗೆ ನೋವು ಹೊಟ್ಟೆಯ ಅಡಿಭಾಗದಲ್ಲಿ ಕಾಣಿಸಿಕೊಳ್ಳಲು ಆರಂಭವಾಯಿತು.ಭಾಸ್ಕರ ಶಾಸ್ತ್ರಿಗಳು ಮಂಗಳಮ್ಮ ಮಗಳನ್ನು ಆಸ್ಪತ್ರೆಗೆ ಕರೆದೊಯ್ದರು.ಕಿಶನ್ ಗೂ, ಅವನ ಮನೆಯವರಿಗೂ ವಿಷಯ ತಿಳಿಸಿದರು.ವೈದ್ಯೆ ಬಂದು ಚೆಕಪ್ ಮಾಡಿ ಹೆರಿಗೆ ನೋವು ಆರಂಭವಾದ ಕಾರಣ ಡ್ರಿಪ್ ಹಾಕಿದರು.ಮಂಗಳಮ್ಮನಲ್ಲಿ "ಭ್ರೂಣದ ಬೆಳವಣಿಗೆ ಆಗಿದೆ.ಇನ್ನು ಕಾಯುವುದು ಬೇಡ..ಹೆರಿಗೆಗೆ ಪ್ರಯತ್ನಿಸೋಣ"ಎಂದರು. ಭಾಸ್ಕರ ಶಾಸ್ತ್ರಿಗಳು ಅಳಿಯನಿಗೆ ಕರೆ ಮಾಡಿ ತಿಳಿಸಿದರು.ಕಿಶನ್ ಕೂಡಲೇ ಹೊರಟ..


      ಭಾಸ್ಕರ ಶಾಸ್ತ್ರಿಗಳು ಮಂಗಳಮ್ಮ ಲೇಬರ್ ರೂಮಿನ ಹೊರಗೆ ರಾತ್ರಿ ಕಾಯುತ್ತಿದರು. ಭಾಸ್ಕರ ಶಾಸ್ತ್ರಿಗಳು ಊಟ ಮಾಡಿಕೊಂಡು ಬಂದರು .ಮಂಗಳಮ್ಮ ಅದಕ್ಕೂ ಹೋಗಲಿಲ್ಲ."ನನಗೆ ಮಗಳು ನೋವಿನಲ್ಲಿ ಇರುವಾಗ ಅನ್ನ ಗಂಟಲಿನಲ್ಲಿ ಇಳಿಯದು" .. ಎಂದು ಮಗಳಿಗಾಗಿ ತಾಯಿ ಕೊರಗುತ್ತಿದ್ದರು..ಏನೂ ಸುದ್ದಿ ಬರುವ ಲಕ್ಷಣವಿಲ್ಲದಾಗ ಭಾಸ್ಕರ ಶಾಸ್ತ್ರಿಗಳು  ರೂಮಿಗೆ ಬಂದು ಮಲಗಿಕೊಂಡರು..ಮಂಗಳಮ್ಮನಿಗೆ ಮಾತ್ರ ಮನಸು ಬರಲಿಲ್ಲ.ಮಗಳು ಎಷ್ಟು ನೋವನುಭವಿಸುತ್ತಿದ್ದಾಳೋ ಏನೋ..ವೈದ್ಯೆ,ದಾದಿಯರು ಚೆನ್ನಾಗಿ ನೋಡಿಕೊಂಡರೆ ಸಾಕು.. ಎಂದು ಯೋಚಿಸುತ್ತಾ ಕಚ್ಚುತ್ತಿದ್ದ ಸೊಳ್ಳೆಯನ್ನು ಬಡಿದು ಓಡಿಸುತ್ತಿದ್ದಾಗ ಅತ್ತೆ ಮಹಾಲಕ್ಷ್ಮಿ ಅಮ್ಮ ಕರೆ ಮಾಡಿ  ವಿಚಾರಿಸಿದರು.."ಇನ್ನೂ ಹೆರಿಗೆ ಆಗಿಲ್ಲ ಅತ್ತೆ..ಎಷ್ಟು ಹೊತ್ತಾಯಿತು..ಪಾಪ ಕಷ್ಟವಾಗುತ್ತಿದೆಯೋ ಏನೋ ... ಕೇಳೋಣವೆಂದರೆ ದಾದಿಯರು ಒಬ್ಬರೂ ಹೊರಗೆ ಬರುವುದು ಕಾಣುತ್ತಿಲ್ಲ ಅತ್ತೆ" ಎಂದವರಿಗೆ ಅಳುವೇ ಬಂದಿತ್ತು."ನೀನು ತಾಯಿಯಾಗಿ ಹೀಗೆ ಅತ್ತರೆ ಹೇಗೆ.. ಧೈರ್ಯದಿಂದ ಇರು.". ಎಂದರು ಅತ್ತೆ..

ಬೆಳಗಿನ ಜಾವ...ಮಂಗಳಮ್ಮ ಕಾದು ಕಾದು ಸಣ್ಣಗೆ ನಿದ್ದೆ ತೂಗಿದರು.ಫಕ್ಕನೆ ಒಮ್ಮಿಂದೊಮ್ಮೆಲೆ ಯಾರೋ ಕೂಗಿದಂತಾಯಿತು..ಎಚ್ಚರಾದರೆ ಯಾರೂ ಇಲ್ಲ.. ಹೂಂ..ಬರೀ ಕನಸು.. ಮೈತ್ರಿ ಒಳಗೆ ಕಣ್ಣೀರು ಸುರಿಸುತ್ತಿರಬಹುದು..ನನಗೋ ಇಲ್ಲಿ ಹಾಳು ನಿದ್ದೆಯ  ಜೊಂಪು..!! ಎನ್ನುತ್ತಾ ಹೋಗಿ ಮುಖ ತೊಳೆದು ಬಂದು ಕುಳಿತರು.

     ಆ ಕಡೆಯಿಂದ ಯಾರೋ ನಡೆದು ಬರುವ ಸಪ್ಪಳ ಕೇಳಿಸುತ್ತಿತ್ತು.ಯಾರಾದರೂ ಪೇಷೆಂಟ್ ಪಾರ್ಟಿ ಇರಬಹುದು ಎಂದು ಆ ಕಡೆಗೆ ನೋಡಲಿಲ್ಲ..ತನ್ನ ಸಮೀಪಕ್ಕೆ ಬಂದಂತಾಯಿತು.."ಅತ್ತೇ"..ಅಂದಾಗ" ಓಹೋ.. ಅಳಿಯ... ಹ್ಞಾಂ..." ಎಂದವರ ಮುಖ ನೋಡಿದಾಗ ಕಿಶನ್ ಗೆ ತಾಯಿಯ ಸಂಕಟ ತಿಳಿದು ಕರುಳು ಹಿಂಡಿದಂತಾಯ್ತು. ಮುಖದಲ್ಲಿ ಎಂದಿನಂತೆ ನಗೆಯಿಲ್ಲ...ಲವಲವಿಕೆಯಿಲ್ಲ.

"ಕಿಶನ್... ನಿನ್ನೆ ರಾತ್ರಿಯೇ ಕರೆದೊಯ್ದಿದ್ದಾರೆ..ಇನ್ನೂ ಹೆರಿಗೆಯಾಗಿಲ್ಲ.ಯಾರೂ ಹೊರಗೆ ಬಂದಿಲ್ಲ.. ಪ್ಲೀಸ್ ಒಮ್ಮೆ ವಿಚಾರಿಸಿ ನೋಡು ''ಎಂದರು..


ಕಿಶನ್ ವಿಚಾರಿಸಲೆಂದು ಲೇಬರ್ ರೂಮಿನ ಬಾಗಿಲಿನತ್ತ ಸಾಗಿದ..ಒಬ್ಬ ನರ್ಸ್ ಹೊರಗೆ ಬಂದರು..ಪೇಷೆಂಟ್ ಯಮುನಾ ಪಾರ್ಟಿ ಎಂದರು..ಆ ಪೇಷೆಂಟಿನ ಕಡೆಯವರು ಒಳಗೆ ಹೋದರು.ಕಿಶನ್ ತನ್ನವಳ ಬಗ್ಗೆ ದಾದಿಯಲ್ಲಿ ವಿಚಾರಿಸಿದ."ಅವರನ್ನು ನೋಡಿಕೊಂಡ ಶುಶ್ರೂಷಕಿಯೇ ಬಂದು ಹೇಳುವರು ಸರ್.."ಎಂದು ಹೇಳಿ ಒಳಗೆ ತೆರಳಿದಳು.. ಕಿಶನ್ ಗೂ ತನ್ನ ಮೈತ್ರಿಗೆ ಏನಾಗಿದೆಯೋ..ಯಾಕಿವರು ಏನೂ ಹೇಳುತ್ತಿಲ್ಲ ಎಂಬುದೇ ಚಿಂತೆಯಾಯಿತು..

ಸ್ವಲ್ಪ ಹೊತ್ತಿನ ಬಳಿಕ ಶುಶ್ರೂಷಕಿಯೊಬ್ಬರು ಬಾಗಿಲಲ್ಲಿ ನಿಂತು ಪೇಷೆಂಟ್ ಮೈತ್ರಿ ಪಾರ್ಟಿ ಎಂದಾಗ ಧಿಗ್ಗನೆದ್ದು ತೆರಳಿದ ಕಿಶನ್..ಮಂಗಳಮ್ಮನೂ ಹಿಂಬಾಲಿಸಿದರು..

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
16-07-2020.

Monday, 13 July 2020

ಜೀವನ ಮೈತ್ರಿ ಭಾಗ ೧೦೬(106)




ಜೀವನ ಮೈತ್ರಿ ಭಾಗ ೧೦೬



     ಕೇಶವನ ಹೃದಯಕ್ಕೆ ಮಂಗಳಮ್ಮನ ಮಾತು ನಾಟಿತು.ಮಡದಿಯ ಕೈಯಲ್ಲಿದ್ದ ಮಗಳ ಮುದ್ದು ಮುಖ ನೋಡಿ ಅವಳ ಭವಿಷ್ಯವನ್ನು ಒಮ್ಮೆ ಊಹಿಸಿಕೊಂಡವನು,ತಡಮಾಡದೆ ತನ್ನ ಕೈಯನ್ನು ಜೇಬಿನೆಡೆಗೆ ಕೊಂಡೊಯ್ದ.. ಸೌಜನ್ಯಳ ಎದೆ ಬಡಿದುಕೊಳ್ಳುವುದು ಅವಳ ಕಿವಿಗಳಿಗೂ ಕೇಳಿಸುತ್ತಿತ್ತು.ಮಾವನವರ ಮೊಬೈಲ್ ನಂಬರ್ ಹುಡುಕಿ ಕರೆಮಾಡಿ ವಿಷಯ ತಿಳಿಸಿದ.ತಾನೂ ಮಾತನಾಡಬೇಕೆಂದು ಬಯಸಿದ ಸೌಜನ್ಯಳಿಗೆ ತೀರಾ ನಿರಾಸೆಯಾಯಿತು.'ಹೇಳಿ ಕೊಟ್ಟ ಬುದ್ಧಿ ಎಷ್ಟಾದರೂ ಇಷ್ಟೇ..'. ಎಂದು ಮರುಗಿದಳು.

     ಮಂಗಳಮ್ಮನ ನಿರೀಕ್ಷೆಯೂ ಪೂರ್ಣವಾಗಿ ಫಲಿಸಲಿಲ್ಲ.ಆದರೂ ಅವರು ಭರವಸೆ ಕಳೆದುಕೊಳ್ಳದೆ ,ಸೌಜನ್ಯಳ ಬಳಿ ಬಂದು ಅವಳ ಬೆನ್ನು ಸವರಿ, "ಮಗುವನ್ನು ಚೆನ್ನಾಗಿ ನೋಡಿಕೋ.. ಏನಾದರೂ ಸಲಹೆ ಬೇಕಾದರೆ ಕೇಳು "ಎನ್ನುತ್ತಾ ತನ್ನ ಸಂಪರ್ಕ ಸಂಖ್ಯೆ ಕೊಟ್ಟು ,ಕೇಶವನಲ್ಲಿ ನಸುನಕ್ಕು ತನ್ನ ರೂಮಿಗೆ ಬಂದರು.


      ಸ್ವಲ್ಪ ಹೊತ್ತಿನ ಬಳಿಕ ಕ್ಯಾಬ್ ಏನು ಇನ್ನೂ ಬಂದಿಲ್ಲ..ಎಂದು ಕೇಶವ ಚಾಲಕನಿಗೆ ಕರೆ ಮಾಡಿದಾಗ.. "ಆಸ್ಪತ್ರೆಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಇದ್ದೇನೆ.. ಟ್ರಾಫಿಕ್ ಜಾಮ್ ಆಗಿದೆ.. ಕ್ಲಿಯರ್ ಆಗಲು ಅರ್ಧ ತಾಸಿಗಿಂತ ಜಾಸ್ತಿ ಹೊತ್ತು ಹಿಡಿದೀತು.. ತಲುಪಿದಾಗ ನಾನೇ ಕರೆ ಮಾಡುವೆ "ಎಂದ..

ಈಗ ಕಾಯುವ ಕೆಲಸ.. ಸೌಜನ್ಯ ಮಲಗಿಕೊಂಡಳು.ಕೇಶವ ತನ್ನ ಆಲೋಚನೆಗಿಂತ ಭಿನ್ನವಾಗಿ ನಡೆದ ಬೆಳವಣಿಗೆಗಳಿಂದ ವಿಚಲಿತನಾದಂತೆ ಕಂಡುಬಂದ.ಮನದೊಳಗೆ ಏನೋ ಲೆಕ್ಕಾಚಾರ ಹಾಕುತ್ತಾ ರೂಮು ಬಾಲ್ಕನಿ ಮಧ್ಯೆ ಓಡಾಡುತ್ತಿದ್ದ..ಮಾನಸಿಕ ಅಸ್ಥಿರತೆ ಇದ್ದಂತಿತ್ತು.


       ರೂಮ್ ಬಾಗಿಲು ಬಡಿದಾಗ..ಕೇಶವ.."ಡ್ರೈವರ್ ಆಗಿರಬೇಕು..ಇವ ಕರೆ ಮಾಡಿದರೆ ಸಾಕಿತ್ತು.". ಎನ್ನುತ್ತಾ ಬಾಗಿಲು ತೆಗೆದ..ಮಲಗಿದ್ದ ಸೌಜನ್ಯ ಎದ್ದು ಕುಳಿತಳು..
.
.
.
.
.
.
.
.
.
ಬಂದವರನ್ನು ನೋಡಿ ಕೇಶವ ಅವಾಕ್ಕಾದನು.. ಸೌಜನ್ಯಳಿಗೆ ಒಮ್ಮೆಲೇ ಉಂಟಾದ ಶಾಕಿನಿಂದ ಪ್ರಜ್ಞೆ ತಪ್ಪಿತು..
.
.
.
.
.
.
.
.
ಅಳುತ್ತಾ ಅಮ್ಮ ರೇಖಾ,ಅಪ್ಪ ನರಸಿಂಹ ರಾಯರು ಮಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದಾಗ ಎಚ್ಚರಾದಳು..ತಾನು ಬಾಣಂತಿ ಎಂಬುದನ್ನು ಮರೆತು ಇಬ್ಬರನ್ನೂ ಬಾಚಿ ತಬ್ಬಿ ಅಳುತ್ತಿದ್ದ ಮಡದಿಯನ್ನು ಕಂಡ ಕೇಶವನಿಗೆ ತಾನೆಷ್ಟು ದೊಡ್ಡ ತಪ್ಪು ಮಾಡಿದ್ದೆ ಎಂಬುದರ ಅರಿವಾಯಿತು.ಇಬ್ಬರೂ ಮಲಗಿದ್ದ ಮೊಮ್ಮಗಳನ್ನು ಎತ್ತಿ ಆಡಿಸಿ ಖುಷಿಪಟ್ಟರು..ಆಗ ಎಚ್ಚರಾದ ಮಗಳಿಗೆ ಸೌಜನ್ಯ "ನೋಡು.. ನಿನ್ನ ಅಜ್ಜಿ ಅಜ್ಜ ಬಂದಿದ್ದಾರೆ" ಎನ್ನುವ ಅವಳ ದನಿಯಲ್ಲೇ ಸಂಭ್ರಮವಿತ್ತು..


       "ಅಳಿಯಂದಿರೇ..ಹೇಗೂ ಲಗೇಜ್ ಪ್ಯಾಕ್ ಮಾಡಿ ಆಗಿದೆ.. ಕಾರಲ್ಲಿಡೋಣ.. ಬನ್ನಿ.. ನಮ್ಮನೆಗೇ ಹೋಗೋಣ.. ಚೊಚ್ಚಲ ಬಾಣಂತಿಗೆ ಆರೈಕೆ ತವರಲ್ಲೇ ಆದರೆ ಚಂದ ...ಕೆಟ್ಟ ಘಳಿಗೆಯನ್ನು ಮರೆತು ಮತ್ತೆ ಮೊದಲಿನಂತೆ ಇರೋಣ.." ಎಂದಾಗ ಮಾವನವರ ಮಾತನ್ನು ತಳ್ಳಿ ಹಾಕುವಂತಿರಲಿಲ್ಲ ಕೇಶವನ ಪರಿಸ್ಥಿತಿ...".ಸರಿ ..."ಎಂದು ಒಪ್ಪಿದ.. ಕ್ಯಾಬ್ ಡ್ರೈವರ್ ಗೆ ಫೋನ್ ಮಾಡಿ ಪ್ರಯಾಣ ಕ್ಯಾನ್ಸಲ್ ಮಾಡಿದ..


  ‌‌  ಸೌಜನ್ಯ ಅಮ್ಮನಲ್ಲಿ ಮಾತನಾಡುತ್ತಾ ಮಂಗಳಮ್ಮನ ಸಹಕಾರವನ್ನು ಕೊಂಡಾಡಿದಳು.ರೇಖಾಳಿಗೂ ಅವರನ್ನೊಮ್ಮೆ ಮಾತನಾಡಿಸಬೇಕೆಂದೆನಿಸಿ ಅವರ ರೂಮ್ ಹುಡುಕಿಕೊಂಡು ಹೋಗಿ ಅವರ ಉಪಕಾರವನ್ನು ನೆನೆಸಿಕೊಂಡು ಭಾವುಕರಾದರು.."ಅಳಿಯನ ಮನಸ್ಸನ್ನು ಬದಲಾಯಿಸಿದ ನಿಮಗೆ ಏನು ಕೊಟ್ಟರೂ ಕಡಿಮೆಯೇ "ಎಂದಾಗ ..
"ನನಗೇನೂ ಕೊಡುವುದು ಬೇಡ..ನಿಮ್ಮಿಂದ ಒಂದು ಕೆಲಸ ಮಾಡಲು ಸಾಧ್ಯವೇ.?".ಎಂಬ ಕೋರಿಕೆಯನ್ನು ಸಲ್ಲಿಸಿದರು..ಮಂಗಳಮ್ಮನ ಮಾತುಗಳನ್ನು ಕೇಳಿ  "ಖಂಡಿತ ಪ್ರಯತ್ನಿಸುತ್ತೇವೆ..ನಿಮ್ಮ ಸಹೃದಯತೆಗೆ ಚಿರ ಋಣಿ.. "ಎಂದು ಮರಳಿದರು..

ಆ ಕೋರಿಕೆ ಏನು..?


                  *****


        ನರಸಿಂಹ ರಾಯರು ಅಳಿಯನ ಕರೆ ಬಂದಾಗ ಬಹಳ ಖುಷಿಯಿಂದ ಸ್ವೀಕರಿಸಿದರು. "ಮಗಳ ಹೆರಿಗೆಯಾಗಿದೆ.ಮೊಮ್ಮಗಳು ಬಂದಿದ್ದಾಳೆ" ... ಅಂದಾಗ ಮತ್ತಷ್ಟು ಹಿಗ್ಗಿದರು.. ಕೂಡಲೇ ಮಡದಿಗೆ ತಿಳಿಸಿದರು.ಗಂಡನ ಮಾತನ್ನು ಅರ್ಧ ಕೇಳುತ್ತಿದ್ದಂತೆಯೇ.. ರೇಖಾ.."ರೀ..ನಾವು ಆಸ್ಪತ್ರೆಗೆ ಹೋಗೋಣ ಈಗಲೇ.. "ಎಂದು ಗಡಿಬಿಡಿಯಲ್ಲಿ ಕೈಗೆ ಸಿಕ್ಕಿದ್ದನ್ನು ಬ್ಯಾಗಿಗೆ ತುಂಬಿಸಿ ವ್ಯಾನಿಟಿ ಬ್ಯಾಗನ್ನು ಹೆಗಲಿರಗೇರಿಸಿ ಸರಸರನೆ ಮೆಟ್ಟಲಿಳಿದು ತೆರಳಿದರು.ಇದನ್ನು ಕಂಡ ಸಹೋದ್ಯೋಗಿಗಳು.. "ಏನು ರೇಖಾ ಮೇಡಂ.. ಇಷ್ಟು ಅರ್ಜೆಂಟಾಗಿ ಓಡಿದ್ದು.. ಏನಾದರೂ ಹೆಚ್ಚು ಕಮ್ಮಿಯಾಯಿತಾ...?"

"ಮುಖದಲ್ಲಿ ಗಾಬರಿ ಇರಲಿಲ್ಲ.. ಮಂದಹಾಸವಿತ್ತು..."

"ಮೀಟಿಂಗ್ ಕ್ಯಾನ್ಸಲ್ ಮಾಡಿ ಸರ್ ಕೂಡಾ ಹೋದರಂತೆ.."

"ಹೇಳಿ ಹೋಗು ಕಾರಣ.. .." ಅಂತ ಇನ್ನೊಬ್ಬರು ಗುನುಗುನಿಸಿದರು..ಹೀಗೆ ಸಹೋದ್ಯೋಗಿಗಳು ತಮ್ಮಲ್ಲೇ ಚರ್ಚಿಸುತ್ತಿದ್ದರು.

ನರಸಿಂಹ ರಾಯರು ಕಾರನ್ನು ಎಂದಿನಿಂದ ವೇಗವಾಗಿಯೇ ಚಲಾಯಿಸುತ್ತಿದ್ದರು.. "ರೀ..ಮೆಲ್ಲ.. "ಎಂದು ರೇಖಾ ಎಚ್ಚರಿಸಿದರೂ.. ಅವರಿಗೆ ಮಗಳು.. ಮೊಮ್ಮಗಳನ್ನು ನೋಡುವ ತವಕ ಅತಿಯಾಗಿತ್ತು..

"ರೀ... ನೀವು ಹೇಳಿದ ದಿನಾಂಕ ನೋಡಿದರೆ.. ನಾವು ಸಂಕಷ್ಟಿ ವ್ರತ ಮಾಡಿದ್ದೆವಲ್ಲ..ಅದೇ ದಿನ ಮಗಳು ಹೆತ್ತಿದ್ದು.. ನಿಜಕ್ಕೂ ವ್ರತ ಮಾಡಿದ್ದಕ್ಕೋ ಏನೋ ನಮಗೆ ಮಗಳನ್ನು ಮತ್ತೆ ನೋಡುವ ಭಾಗ್ಯ ದೊರೆತಿದ್ದು.."

"ನೋಡು..ರೇಖಾ ಈಗಲೇ ಎಚ್ಚರಿಸುತ್ತೇನೆ.‌ನಾಲಿಗೆ ಇದೆಯೆಂದು ಅವರಲ್ಲಿ ಏನೆಲ್ಲ ಮಾತನಾಡಬೇಡ..ಪ್ರತೀ ಮಾತೂ ಆಡುವ ಮುನ್ನ ಯೋಚಿಸು.. ಇನ್ನೊಮ್ಮೆ ನನ್ನಿಂದ ಮಗಳನ್ನು ದೂರಮಾಡಬೇಡ.. ಪ್ಲೀಸ್"

"ಆಯ್ತು ರೀ..ಮಾತು ಕಡಿಮೆ ಮಾಡುತ್ತೇನೆ..."

"ಮಾತು ಕಡಿಮೆ ಮಾಡಿದರೆ ಮಾತ್ರ ಸಾಲದು ಬುದ್ಧಿಯೂ ಹಿಡಿತದಲ್ಲಿರಲಿ.."

"ಹೂಂ.. ಸರಿ..ಸರಿ.."

"ಮಗಳನ್ನು ಬಾಣಂತನಕ್ಕೆ ಮನೆಗೆ ಕರೆದುಕೊಂಡು ಬರೋಣ..ಅಳಿಯನೂ ಇಲ್ಲಿಯೇ ಇರಲಿ..ಬಾಣಂತನ ಮುಗಿಸಿ  ಬೇಕಾದಲ್ಲಿ ಅವರ ಮನೆಗೆ ತೆರಳಲಿ.. ಇಲ್ಲಿರುವುದು ಅವರಿಗೆ ಇಷ್ಟವಿಲ್ಲದಿದರೆ.."

"ಹಾಗೇ ಆಗಲಿ..."

"ಅಲ್ಲಿವರೆಗೆ ನಿನ್ನ ನಾಲಿಗೆಗೆ ಕಂಟ್ರೋಲ್ ನೀನೇ ಹಾಕಿಕೋ.."

"ಸರಿ ಅಂದೆ ಆಗಲೇ.."

ಎನ್ನುತ್ತಾ ಆಸ್ಪತ್ರೆಗೆ ಬಂದು ತಲುಪಿದರು.ರಿಸೆಪ್ಷನ್ ನಲ್ಲಿ ಮಗಳ ಹೆಸರು ಹೇಳಿ ರೂಮು ಹುಡುಕಿ ಬರುತ್ತಿದ್ದಾಗ ಇಬ್ಬರೂ ವೇಗವಾಗಿ ಹೆಜ್ಜೆ ಹಾಕುತ್ತಿದ್ದರು.. ಅವರ ಕಂಗಳಲ್ಲಿ ಮಗಳನ್ನು ನೋಡುವ ಕಾತರ..ಮೊಮ್ಮಗಳನ್ನು ಎತ್ತಿ ಮುದ್ದಿಸುವ ಹಂಬಲವಿತ್ತು.


          *****

ಮುರಲಿಯ ಗೃಹಪ್ರವೇಶ ಸಮಾರಂಭಕ್ಕೆ ಊರಿನಿಂದ ಶಂಕರ ರಾಯರು, ವೆಂಕಟ್ ಬಂದಿದ್ದರು.. ಗಾಯತ್ರಿ ಶಂಕರ ಶಾಸ್ತ್ರಿಗಳು ತೆರಳಿದರು..ಮತ್ತೆ ಹೆಚ್ಚಿನವರು ಮಹತಿಯ ಕಡೆಯವರು ಮತ್ತು ಸಹೋದ್ಯೋಗಿಗಳು.ಎಲ್ಲದಕ್ಕೂ ಮಹತಿಯ ತವರ ಬೆಂಬಲ ,ಮುಂದಾಳುತ್ವ ಎದ್ದು ಕಾಣುತ್ತಿತ್ತು.ಮನೆ ಅದ್ದೂರಿಯಾಗಿತ್ತು.ಶಂಕರ ಶಾಸ್ತ್ರಿಗಳು
"ಶಶಿಯಕ್ಕ ಏನು ಬರಲಿಲ್ಲವಂತೆ ..?"ಎಂದು ಮಡದಿಯಲ್ಲಿ ಕೇಳಿದರು..
"ನನಗೂ ಗೊತ್ತಿಲ್ಲ.ಆದರೆ ಬಂದರೂ ಇಲ್ಲಿನ ಏರ್ಪಾಡು ಅವರಿಗೆ ಹಿಡಿಸುತ್ತಿರಲಿಲ್ಲ.ಕಳೆದ ಬಾರಿ ಬಂದು ಆದ ಅವಾಂತರ ಮನಸಿಂದ ಮಾಸಿರಲಿಕ್ಕಿಲ್ಲ.. "ಎಂದರು ಗಾಯತ್ರಿ.

"ಹೌದು ಮತ್ತೆ..ಅದೆಲ್ಲ ನಿಮಗೆ ಹೆಂಗಸರಿಗೇ ನೆನಪಿರುವುದು ನನಗೆ ಯಾವತ್ತೇ ಮರೆತು ಹೋಗಿದೆ ನೋಡು.. " ಎನ್ನುತ್ತಾ ಮಡದಿಯನ್ನು ದಿಟ್ಟಿಸಿದರು..

"ಹುಟ್ಟು ಬುದ್ಧಿ ಘಟ್ಟ ಹತ್ತಿದರೂ ಬಿಡದು ಎಂಬ ಮಾತು ಶಶಿಯತ್ತಿಗೆಯಂತಹವರಿಗೆ ಸರಿಯಾಗಿ ಅನ್ವಯಿಸುತ್ತದೆ.ಅತ್ತೆಯೂ ಮೊದಲೆಲ್ಲ ಬೆಂಗಳೂರಿಗೆ ಬಂದಾಗ ಅದೇ ರೀತಿ ಮಾಡುತ್ತಿದ್ದರಲ್ಲ..ಈಗ ತುಂಬಾ ಬದಲಾಗಿದ್ದಾರೆ..."

"ಹೌದು..ಶಶಿಯೂ ಬದಲಾಗುತ್ತಾಳೆ ನೋಡು..ಇಲ್ಲದಿದರೆ ಅಪರೂಪಕ್ಕಾದರೂ ಮಗನ ಮನೆಗೆ ಬರಬೇಕು ಅನಿಸಿದಾಗ ಬರಲು ಸಾಧ್ಯವಾದೀತಾ...?"

"ಹೌದು..ತನ್ನ ಲಾಭಕ್ಕೆ ತಕ್ಕಂತೆ ಬುದ್ಧಿಯನ್ನೂ ತಿದ್ದಿಕೊಳ್ಳುವ ಗುಣ ಅವರಿಗೆ ರಕ್ತಗತವಾಗಿ ಬಂದಿದೆ.. "ಎಂದಾಗ

"ಸಮಯ ಸಿಕ್ಕಾಗ ನೀನು ಹೀಗೆ  ನನ್ನಮ್ಮನನ್ನು ಆಡುವ ಅಭ್ಯಾಸ ಇನ್ನೂ ಬಿಟ್ಟಿಲ್ಲ.."

ಎಂದಾಗ ರೇಖಾ ನಸುನಕ್ಕು "ಅದು ಗಂಡಸರನ್ನು ಬೊಗಸೆಯೊಳಗಿಟ್ಟುಕೊಳ್ಳುವ ಕಲೆ "ಎಂದು ಹೇಳುತ್ತಾ ಒಳಗೆ ತೆರಳಿದಳು..


        ********



ನಾಗನ ಕಟ್ಟೆಯ ಜೀರ್ಣೋದ್ಧಾರದ ಕೆಲಸಕ್ಕೆ ಕೈ ಹಾಕಿದ್ದ ಗಣೆಶ ಶರ್ಮರಿಗೆ ಮಗನ ಕರೆ ಭರವಸೆ ತುಂಬಿತು.. ಕಿಶನ್ ಕರೆ ಮಾಡಿ "ಅಪ್ಪಾ..ನನಗೆ  ನನಗೆ ಮುಂಭಡ್ತಿ ದೊರೆತಿದೆ..  ನಾನು ಪ್ರತಿ ತಿಂಗಳೂ ಇನ್ನೂ ಹೆಚ್ಚು ಹಣ ಕೊಡಬಲ್ಲೆ..ಜಾಸ್ತಿಯಾದ ನನ್ನ ಸಂಬಳದ ಹಣ ನಾಗನ ಕಟ್ಟೆಯ ದುರಸ್ತಿಗೆ.. " ಎಂದಾಗ "ಎಲ್ಲ ಆ ನಾಗ,ಪರಿವಾರ ದೈವಗಳ ಮಹಿಮೆ" ಎಂದರು..

ಸೊಸೆಯ ಆರೋಗ್ಯ ವಿಚಾರಿಸಿಕೊಂಡರು.."ಈಗ ಮೈತ್ರಿಯ ಆರೋಗ್ಯ ಸುಧಾರಿಸಿದೆ.. ಬಹುಶಃ ನಾಳೆ  ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು ಎಂದನು..



ಮುಂದುವರಿಯುವುದು..

✍️ ಅನಿತಾ ಜಿ.ಕೆ.ಭಟ್.
14-07-2020.

ಜೀವನ ಮೈತ್ರಿ ಭಾಗ ೧೦೫(105)




ಜೀವನ ಮೈತ್ರಿ ಭಾಗ ೧೦೫


       ಮಂಗಳಮ್ಮ ಮೆಲ್ಲನೆ ರೂಮಿನೊಳಗೆ ಕಾಲಿಟ್ಟರು.ಮಗುವನ್ನು ಸಮಾಧಾನಪಡಿಸಿ ಹಾಲುಣಿಸಲು ಹರಸಾಹಸ ಪಡುತ್ತಿದ್ದ ಸೌಜನ್ಯ ಅಪರಿಚಿತ ಹೆಣ್ಣುಮಗಳನ್ನು ಕಂಡು ಪಕ್ಕನೆ ಬದಿಯಲ್ಲಿದ್ದ ಶಾಲನ್ನು ತನ್ನೆದೆಯ ಮೇಲೆ ಹೊದೆದಳು.ಮಂಗಳಮ್ಮ ಅವಳತ್ತ ಸಾಗಿ "ಮಗು ಒಂದೇ ಸಮನೆ ಅಳುತ್ತಿದೆ.. ಹಾಗಾಗಿ ಒಮ್ಮೆ ನೋಡಿ ಹೋಗೋಣ ಅಂತ ಬಂದೆ.." ಎನ್ನುತ್ತಾ ಮಗುವಿನತ್ತ ದೃಷ್ಟಿ ಹಾಯಿಸಿದರು. ಅಳುತ್ತಿದ್ದ ಮಗುವನ್ನು..., ತನ್ನ ಕೈಗಳನ್ನು ಮುಂದಕ್ಕೆ ಚಾಚಿ ಸೌಜನ್ಯಳ ಮಡಿಲಿನಿಂದ ಎತ್ತಿಕೊಂಡರು.ಹದವಾಗಿ ಕೈಯಲ್ಲಿ ತೂಗುತ್ತಾ ಮೈಗೆ ಅವುಚಿ ಹಿಡಿದರು.ಒಂದೇ ಗತಿಯಲ್ಲಿ ಮಂಗಳಮ್ಮ ಆಡಿಸುತ್ತಿದ್ದರೆ ಮಗು ಅಳು ನಿಲ್ಲಿಸಿ ಸುಮ್ಮನಾಗಿತ್ತು.ಉಸಿರು ಎಕ್ಕಿ ಎಕ್ಕಿ ಬರುತ್ತಿತ್ತು.


   ಮಗುವನ್ನು ಸೌಜನ್ಯಳ ಹತ್ತಿರ ತಾನೇ ಹಿಡಿದುಕೊಂಡು ಹಾಲುಣಿಸಲು ಆಕೆಗೆ ನೆರವಾದರು.ಆಗಲೇ ಸುಸ್ತಾಗಿದ್ದ ಸೌಜನ್ಯಗೆ ಬಹಳ ಅನುಕೂಲವಾಯಿತು.ಸ್ತನ್ಯಪಾನ ಮಾಡುತ್ತಾ ಮಗು ನಿದಿರೆಗೆ ಜಾರಿತು.ಮಗುವನ್ನೆತ್ತಿ ಬೆಡ್'ನ ಬದಿಯಲ್ಲಿ ಮಲಗಿಸಿ ಸ್ವಲ್ಪವೂ ಅಲ್ಲಾಡದಂತೆ ಕೈಸಡಿಲಿಸಿ ಬದಿಗೆ ದಿಂಬನಿಟ್ಟರು.ಕಷ್ಟಪಡುತ್ತಿದ್ದ ಸೌಜನ್ಯಳ ರಟ್ಟೆ ಹಿಡಿದು ಮಲಗಲು ಸಹಕರಿಸಿದರು.ಅವಳ ಮೇಲೆ ಬೆಡ್ ಶೀಟ್ ಎಳೆದು ಒಂದು ಮುಗುಳ್ನಗು ಸೂಸಿ .."ನಾನಿನ್ನು ಬರುವೆ.. "ಎನ್ನುತ್ತಾ ಹೊರ ನಡೆದರು.

ಅರೆ.. ನಾನು ಈ ಅಪರಿಚಿತೆಯನ್ನು ಯಾರೆಂದು ಕೇಳಲೇಯಿಲ್ಲವಲ್ಲ.. ಎಂದುಕೊಂಡವಳಿಗೆ ಅವರನ್ನು ಕರೆದು ಮಾತನಾಡಿಸಿ ಧನ್ಯವಾದ ಹೇಳೋಣ ಅನಿಸಿ,ಕರೆದಳು.. ಏನೆಂದು ಕರೆಯಲಿ ಎಂದು ಯೋಚಿಸುತ್ತಿದ್ದವಳು
"ಅಮ್ಮಾ.." ಎಂದು ಕರೆದಳು..
ಆ ದನಿ ಕೇವಲ ಆಕೆಯ ಗಂಟಲಿನಿಂದ ಬಂದಿರಲಿಲ್ಲ..ಅವಳ ಅಂತರಂಗದ ದನಿಯಾಗಿತ್ತು..ತನ್ನಮ್ಮನ ನೆನಪು ಒತ್ತರಿಸಿ ಬಂದಿತ್ತು.

ಅವಳ ಕರೆಗೆ ಓಗೊಟ್ಟು ಹೆಜ್ಜೆ ನಿಧಾನಿಸಿದರು ಮಂಗಳಮ್ಮ..

"ತುಂಬಾ ಉಪಕಾರವಾಯಿತು ನಿಮ್ಮಿಂದ" ಎಂದಳು..

"ಇದೆಲ್ಲ ದೊಡ್ಡ ಉಪಕಾರವೇನಲ್ಲ ಬಿಡಿ.ಇಲ್ಲೇ ಹೋಗುತ್ತಿದ್ದಾಗ ನೋಡಿಕೊಂಡೆನಷ್ಟೇ.."

 ಎನ್ನುತ್ತಾ ತೆರಳಿದರು.ಅವರಿಗೆ ಮಗಳು ಎಚ್ಚರಿಸಿದ್ದು ನೆನಪಾಗಿತ್ತು.ಹೆಚ್ಚು ಮಾತನಾಡುವುದು ಅವರ ಉದ್ದೇಶವೂ ಆಗಿರಲಿಲ್ಲ.ತನ್ನ ಮನಸ್ಸು ಹೇಳಿದಷ್ಟನ್ನು ಮಾಡಿ ಸಂತೃಪ್ತಿಯಿಂದ ತೆರಳಿದರು.


        ಯಾರಾದರೂ ಹಿರಿಯ ಮಹಿಳೆಯನ್ನು ಹುಡುಕಿ ಬರೋಣ ಎಂದು ಹೊರಟಿದ್ದ ಕೇಶವ ನಿರಾಶನಾಗಿ ಹಿಂದಿರುಗಿದ.ಬಾಣಂತನ ಮಾಡುವ ಕೆಲವು ಹೆಂಗಸರಂತೂ ತಿಂಗಳಿಗೆ ಇಪ್ಪತ್ತು ಸಾವಿರ ಕೇಳಿದ್ದರು.ತನ್ನ ಸಂಬಳವೇ ಅದರ ಆಸುಪಾಸಿನಲ್ಲಿದ್ದ  ಮೇಲೆ ಅವನಾದರೂ ಹೇಗೆ ಅಷ್ಟು ಸಂಬಳ ಕೊಟ್ಟಾನು..?ರೂಮಿನೊಳಗೆ ಬಂದಾಗ 'ಯಾರಾದರೂ ಸಿಕ್ಕರಾ?' ಎಂದು ಕೇಳುವ ಸೌಜನ್ಯಳಿಗೆ ಹೇಗೆ ಮುಖ ತೋರಿಸಲಿ ? ಎಂದು ಸಂಕೋಚದಿಂದಲೇ ಒಳಗೆ ಬಂದ..ಮಗು ತಾಯಿ ಇಬ್ಬರೂ ನಿದ್ರಿಸುತ್ತಿದ್ದರು..ಎರಡು ದಿನಗಳಿಂದ ಬಳಲಿದ ಸೌಜನ್ಯ ಚೆನ್ನಾಗಿ ನಿದ್ರಿಸಲಿ..ಮಗು ಕೂಡಾ ಅಳು ನಿಲ್ಲಿಸಿ ಮಲಗಿದೆ.. ಎಂದು ಸುಮ್ಮನೆ ಬಾಲ್ಕನಿಯಲ್ಲಿ ನಿಂತ.


      ಎಚ್ಚರಾದ ಸೌಜನ್ಯ ನಡೆದದ್ದನ್ನು ತಿಳಿಸಿದಳು.
"ಇಲ್ಲಿ ಮೋಸಗಾರ್ತಿಯರೂ ಇರುತ್ತಾರೆ.. ಯಾರಾದರೂ ಗುರುತು ಪರಿಚಯ ಇಲ್ಲದವರು ನಾನಿಲ್ಲದ ವೇಳೆ ಬಂದರೆ ಒಳಗೆ ಬಿಡಬೇಡ.. ಹೆಚ್ಚು ಕಮ್ಮಿಯಾದರೆ.. "ಎಂದ...ಮಡದಿ ಮಗಳ ಸುರಕ್ಷತೆಯ ದೃಷ್ಟಿಯಿಂದ..

"ಅವರು ಮೋಸಗಾರ್ತಿಯಂತೆ ನನಗನಿಸಲಿಲ್ಲ.."ಎಂದಳು ಸೌಜನ್ಯ.


                ‌*****

      ಗಣೇಶ ಶರ್ಮ ಮನೆಗೆ ಜೋಯಿಸರನ್ನು ಕರೆಸಿ ನಾಗನಕಟ್ಟೆ ದೈವಸ್ಥಾನದ ಪುನರ್ನಿರ್ಮಾಣದ ವಿಷಯದಲ್ಲಿ ಪ್ರಶ್ನಾಚಿಂತನೆ ನಡೆಸಿದರು.ಜೋಯಿಸರ ಮಾತು "ಆದಷ್ಟು ಬೇಗ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡು ಮುಂದುವರಿಯಬೇಕು.ಇಲ್ಲದಿದ್ದರೆ ಒಂದಿಲ್ಲೊಂದು ತೊಂದರೆ ತಪ್ಪಿದ್ದಲ್ಲ.ಅನಾವಶ್ಯಕ ವಿಳಂಬ ಬೇಡ.ಶುಭ ಮುಹೂರ್ತದಲ್ಲಿ ಆರಂಭಿಸಿ."ಎಂದಾಗಿತ್ತು.ಗಣೇಶ ಶರ್ಮ ಒಪ್ಪಿ.. ಮುಹೂರ್ತ ನೋಡಲು ಹೇಳಿದರು.ಅಂತೆಯೇ ಜೋಯಿಸರು ಹೇಳಿದ ಮುಹೂರ್ತದ ದಿನಕ್ಕೆ ಕೆಲಸಗಾರರನ್ನು ,ಪುರೋಹಿತರನ್ನೂ ಬರಹೇಳಿ ಸಂಕಲ್ಪ ಮಾಡಿಕೊಂಡು ಶಿಥಿಲವಾದ ಕಟ್ಟೆಯನ್ನು ಕೆಡವಿ ಪುನರ್ನಿರ್ಮಾಣ ಆರಂಭಿಸಿದರು.


    ಕಟ್ಟೆಯನ್ನು ಕೆಡವಿ ಕೇವಲ ಹತ್ತೇ ನಿಮಿಷದಲ್ಲಿ ನಾಲ್ಕು ನಾಗರ ಹಾವುಗಳು ನಾಲ್ಕು ದಿಕ್ಕಿನಿಂದ ಸರಸರನೆ ಹರಿದು ಬಂದು ಹೆಡೆಯೆತ್ತಿ ನಿಂತಿದ್ದವು.ಕೆಲಸಗಾರರು ಭಯದಿಂದ ದೂರಸರಿದರು.ಅಲ್ಲಿದ್ದ ಪುರೋಹಿತರು ತನ್ನ ಕೌಳಿಗೆಯಲ್ಲಿದ್ದ ತೀರ್ಥಪ್ರೋಕ್ಷಣೆಗೈದು ... "ಮತ್ತೆ ವ್ಯವಸ್ಥಿತವಾಗಿ ಕಟ್ಟೆ ಕಟ್ಟಿ ...,ಸಂಪ್ರೋಕ್ಷಣೆ,ತಂಬಿಲ.. ಎಲ್ಲವನ್ನೂ ಶಾಸ್ತ್ರೋಕ್ತವಾಗಿ ನೆರವೇರಿಸುತ್ತೇವೆ "ಎಂದು ವಚನವಿತ್ತರು..ನಂತರ ಹೆಡೆ ಕೆಳಗೆ ಮಾಡಿ ಸರಿದು..ಅಗೆಯುವ ಕಾರ್ಯಕ್ಕೆ ಅಡ್ಡಿಮಾಡದೆ ತೆರಳಿದವು.

     ಕೆಲಸ ಆರಂಭವಾಯಿತು.ದೊಡ್ಡ ಮೊತ್ತವನ್ನು ಹೊಂದಿಸುವುದು ಹೇಗೆಂಬುದು ಗಣೇಶ ಶರ್ಮರ ಚಿಂತೆಯಾಗಿತ್ತು.ತಮ್ಮ ಜಾಗದಲ್ಲಿದ್ದ ನಾಗನಬನ,ದೈವದಕಟ್ಟೆಗೆ ಊರವರಿಂದ ಚಂದಾ ಸಂಗ್ರಹಿಸುವುದು ಅವರಿಗೂ ಹಿತವಿಲ್ಲ.ಅವರಿಷ್ಟದಂತೆ ಕೊಟ್ಟರೆ ಮಾತ್ರ ಸ್ವೀಕರಿಸಬೇಕು.ಎಂಬುದು ಅವರ ಇಂಗಿತ.ಮಗನಲ್ಲಿತಿಳಿಸಿದಾಗ "ಅಪ್ಪಾ..ನಾನು ತಿಂಗಳಿಗೆ ಹತ್ತು ಸಾವಿರ ಕೊಡಬಲ್ಲೆ "ಎಂದ..
"ಆಗಲಿ.. ಮುಂದೆ ಕೈಯಲ್ಲಿ ಹಣವಿದ್ದಂತೆ ಕೆಲಸ ಮುನ್ನಡೆಸಿಕೊಂಡು ಹೋಗೋಣ.. ಎಲ್ಲಾ ಅವನ ಮೇಲೆ ಭಾರ "ಎಂದರು.


         ******


        ಮುರಲಿ ಹೊಸ ಫ್ಲಾಟ್ ಕೊಂಡುಕೊಂಡ.ಮುರಲಿ ಮಹತಿ ಇಬ್ಬರ ಹೆಸರಿನಲ್ಲಿತ್ತು ಮನೆ.. ಇಬ್ಬರೂ ಸ್ವಲ್ಪ ಲೋನ್ ಮಾಡಿದ್ದರು.ಮುರಲಿಯಿಂದ ಸ್ವಲ್ಪ ಹೆಚ್ಚೇ ಮಹತಿ ಹಣ ಹೂಡಿದ್ದಳು.ಒಳಾಂಗಣ ವಿನ್ಯಾಸ ಮಹತಿಯ ಆಲೋಚನೆಗೆ ತಕ್ಕಂತೆ ಮಾಡಿಸುವ ಪ್ಲಾನ್ ಮಾಡಿದರು.ಮುರಲಿಯದು ಸಾಮಾನ್ಯ ಸೌಕರ್ಯ ಸಾಕು ಎಂಬ ಆಲೋಚನೆ.ಮಹತಿ ಅದ್ದೂರಿತನವನ್ನು ಬಯಸಿದಳು.ಮಡದಿಯ ಮಾತಿಗೆ ಇಲ್ಲವೆನ್ನಲಾಗಲಿಲ್ಲ.ಅಷ್ಟು ಖರ್ಚು ಮಾಡುವುದು ವ್ಯರ್ಥವೆಂದು ಕಂಡರೂ ...ಮಹತಿಯ ಆಸೆಯಂತೆ ಮನೆಯ ವಿನ್ಯಾಸ ಕಾರ್ಯ ಆರಂಭವಾಯಿತು. ಅವಳ ತಂದೆ ತಾಯಿಯೂ ಮಗಳಿಗೆ ಒತ್ತಾಸೆಯಾಗಿ ನಿಂತಿದ್ದರು.ತವರಿನ ಪ್ರತಿಷ್ಠೆಗೆ ಕುಂದು ಬಾರದಂತೆ ಮನೆ ಸಜ್ಜಾಯಿತು.


       ಗೃಹ ಪ್ರವೇಶ ದಿನಾಂಕ ನಿಗದಿಮಾಡಿಕೊಂಡರು. ಮಹತಿಯ ತವರಿನ ಪರಿಚಯದ ಅರ್ಚಕರು,ಅಡುಗೆಯವರನ್ನು ಹೇಳಬೇಕೆಂಬ ಮಹತಿಯ ಹಠವೇ ಗೆದ್ದಿತು.ನೆಂಟರೂ ಬಹುತೇಕ ಮಹತಿಯ ಕಡೆಯವರೇ ಲಿಸ್ಟ್'ನಲ್ಲಿದ್ದರು.ಮುರಲಿ " ಮನೆಗೆ ತೆರಳಿ ಅಪ್ಪ ಅಮ್ಮನನ್ನು ಕರೆದು ಬರೋಣ ಬಾ" ಎಂದು ಮಹತಿಯನ್ನ ಕರೆದ.. ಅವಳು "ನನಗೆ ಬರಲು ಮನಸ್ಸಿಲ್ಲ" ಎಂದು ತಿರಸ್ಕರಿಸಿದಳು.ಮುರಲಿ ಒಬ್ಬನೇ ಹೋಗಬೇಕಾಗಿ ಬಂತು.ತಂದೆ, ತಮ್ಮನಲ್ಲಿ ವಿಷಯ ತಿಳಿಸಿ "ಬನ್ನಿ .."ಎಂದು ಕರೆದ..ತಾಯಿಯಲ್ಲಿ ಹೇಳಲು ಮನಸ್ಸು ಬರಲಿಲ್ಲ.ಏಕೆಂದರೆ ಹೊಸಮನೆಯ, ಗೃಹಪ್ರವೇಶದ ಹಲವು ಸಂಗತಿಗಳು ತನಗೇ ಹಿತವಾಗಲಿಲ್ಲ.ಮತ್ತೆ ಈ ಹಠಮಾರಿ ಅಮ್ಮನಿಗೆ ಹಿಡಿಸೀತೇ.. ಏನಾದರೂ ಅದು ಹಾಗಲ್ಲ..ಹೀಗೆ..ಅದೇಕೆ ಹೀಗೆ ಮಾಡಿದಿರಿ..ಎಂದೆಲ್ಲ ಕ್ಯಾತೆ ತೆಗೆದರೆ ಎಲ್ಲರ ಮುಂದೆ  ಮಾನ ಹರಾಜು ಹಾಕಿಯಾಳು ಮಹತಿ..ಸುಮ್ಮನೆ ಎಲ್ಲರ ಮುಂದೆ ಅತ್ತೆ ಸೊಸೆ ಜಗಳಮಾಡಿದರು ಎಂದಾಗುವುದಕ್ಕಿಂತ ಅಮ್ಮನನ್ನು ಕರೆಯದಿರುವುದೇ ಲೇಸು..ಅಪ್ಪ ತಮ್ಮನಾದರೆ ಹಾಗಲ್ಲ..ಎಂದು ಅವನ ಭಾವನೆ.


        ******

        ಮರುದಿನ ಆಫೀಸಿಗೆ ಹೋಗುವುದು ಕೇಶವನಿಗೆ ಅನಿವಾರ್ಯವಾಗಿತ್ತು.ಮಗು ಅಳುತ್ತಿದ್ದಾಗ ಮಂಗಳಮ್ಮ ಬಂದು ಸಮಾಧಾನಪಡಿಸಿ,ಸೌಜನ್ಯಳಿಗೂ ಸಹಕರಿಸಿದರು.ಸೌಜನ್ಯಳಿಗೆ ಅವರ ಮೇಲೆ ಗೌರವ ಮೂಡಿತು .

        ಮತ್ತೆರಡು ದಿನಗಳಲ್ಲಿ, "ಸೌಜನ್ಯಳಿಗೆ ಡಿಸ್ಚಾರ್ಜ್  ಮಾಡುತ್ತೇನೆ, ತಾಯಿ ಮಗು ಆರೋಗ್ಯವಾಗಿ ಇದ್ದಾರೆ "ಎಂದರು ವೈದ್ಯೆ ಶಾಂತಾ.. ಕೇಶವನಿಗೆ ಒಮ್ಮೆ ಬಾಣಂತಿಗೆ ಸಹಕರಿಸಿದ ಹಿರಿಯರನ್ನು ನೋಡಿ ಧನ್ಯವಾದ ಸಮರ್ಪಿಸಬೇಕು ಎಂದು ಮನಸ್ಸಾಯಿತು.ಅವರಿದ್ದ ಕೊಠಡಿಯ ನಂಬರ್ ಸೌಜನ್ಯಳಲ್ಲಿ ಕೇಳಿದಾಗ ಆಕೆಗೂ ತಿಳಿದಿರಲಿಲ್ಲ.
"ಸರಿ ..ನಾನು ಬಿಲ್ ಮಾಡಿಸಿ , ಪಾವತಿಸಿ, ಡಿಸ್ಚಾರ್ಜ್ ಸಮ್ಮರಿ ತೆಗೆದುಕೊಂಡು ಬರುತ್ತೇನೆ..ಅವರು ಬಂದರೆ ವಿಚಾರಿಸು" ಎಂದು ಹೇಳಿ ತೆರಳಿದ.

      ಈಗ ಮಂಗಳಮ್ಮ ಮಗುವನ್ನು ಸಂತೈಸುವುದನ್ನು ನೋಡಿ ಸೌಜನ್ಯ ತಾನೂ ಕಲಿತು ಕೊಂಡಿದ್ದಳು.ಸ್ನಾನ ಮಾಡಿಸುವುದು ಹೇಗೆಂದು ನರ್ಸ್ ತೋರಿಸಿಕೊಟ್ಟಿದ್ದರೂ, ಪುನಃ ಮಂಗಳಮ್ಮನಲ್ಲಿ ಕೇಳಿ ತಿಳಿದುಕೊಂಡಿದ್ದಳು.
ಮಗು ಅಳುವ ಸದ್ದು ಕೇಳಲಿಲಿಲ್ಲವೆಂದು ಮಂಗಳಮ್ಮನೂ ಹೋಗುವ ಆತುರ ತೋರಲಿಲ್ಲ.

      ಕೇಶವ ವಾಪಾಸಾಗಿ ..ಹಿರಿಯರು ಬಂದಿದ್ದಾರಾ? ಕೇಳಿ..ಬ್ಯಾಗ್ ಪ್ಯಾಕ್ ಮಾಡಲು ಆರಂಭಿಸಿದ.ಹೋಗುವ ಮೊದಲು ಅವರು ಮಾತಿಗೆ ಸಿಗುವರೋ ಇಲ್ಲವೋ....ಆ ಪೇಷೆಂಟ್ ಡಿಸ್ಚಾರ್ಜ್ ಆಗಿ ಬಿಟ್ಟರೋ ಏನೋ..ಯಾರಿಗೆ ಗೊತ್ತು.. ಎಂದಿತು ಅವನ ಮನ.


ರೂಮಿನಲ್ಲಿ ಆದ ಸದ್ದಿಗೆ ಮಗು ಎಚ್ಚರವಾಗಿ ಅಳತೊಡಗಿತು.ಸೌಜನ್ಯಳಿಂದ ಸಮಾಧಾನ ಪಡಿಸುವುದು ಸಾಧ್ಯವಾಗದೆ..ಕೇಶವ ಎದೆಗಾನಿಸಿ ರಮಿಸಿದರೂ ಊಹೂಂ..ಅಳು ನಿಲ್ಲಲಿಲ್ಲ.ಕೆಳಗಡೆ ಹೋಗಿದ್ದ ಮಂಗಳಮ್ಮ ಬರುವಾಗ ಅಳು ಕೇಳಿ ಬಾಗಿಲು ಸದ್ದು ಮಾಡಿದರು.. ಸೌಜನ್ಯ ಬಾಗಿಲು ತೆರೆದಳು.


         ಕೇಶವ ಅವರನ್ನು ನೋಡಿ ಅವಾಕ್ಕಾಗಿ ನಿಂತ.ಮಂಗಳಮ್ಮ ಮಗುವಿನತ್ತ ಬಾಗಿ ಮಗುವನ್ನೆತ್ತಿ ಸಮಾಧಾನಿಸಿ ಸೌಜನ್ಯಳ ಕೈಗೆ ಹಾಲುಣಿಸಲು ನೀಡಿದರು.ಕೇಶವ ತನ್ನೆರಡು ಕೈಗಳನ್ನು ಮುಗಿದು "ನನ್ನನ್ನು  ಕ್ಷಮಿಸಿ...ನಿಮ್ಮಿಂದ ತುಂಬ ಉಪಕಾರವಾಯಿತು.."ಎಂದ -ಮನದೊಳಗೆ ತಾನು ಮೈತ್ರಿಯ ಮೇಲೆ ಸೇಡು ತೀರಿಸಲು ಹೊರಟಿದ್ದು ನೆನಪಾಗಿ,ನಾನೀಗ ಅಂತಹದೇ ಒಬ್ಬ ಮಗಳಿಗೆ ತಂದೆಯಾಗಿದ್ದೇನೆ ಎಂಬ ಜವಾಬ್ದಾರಿ ಮೂಡಿ-

"ಛೇ.. ನೀವು ನನಗೆ ಕೈಮುಗಿಯುವುದು ಬೇಡ.ಅಷ್ಟೆಲ್ಲಾ ದೊಡ್ಡ ಕೆಲಸ ನಾನೇನೂ ಮಾಡಿಲ್ಲ."ಎಂದರು -ಕೇಶವ ಹಿಂದೆ ಹೂಡಿದ್ದ ಕುತಂತ್ರವನ್ನರಿಯದೆ-


"ತುಂಬಾ ತುಂಬಾ ಧನ್ಯವಾದಗಳು.. "ಎನ್ನುತ್ತಾ ಅವರ ಕಾಲಿಗೆ ನಮಿಸಲು ಬಾಗಿದ.-ತಾನು ಮಾಡಲು ಹೊರಟಿದ್ದ ತಪ್ಪನ್ನು ನನೆದು ಕಣ್ಣುಗಳು ತುಂಬಿದವು-

"ಕೇಶವ್..ನನ್ನ ಕಾಲಿಗೆ ನಮಸ್ಕರಿಸುವುದು ಬೇಡ.. ನಿಜವಾಗಿಯೂ ನಿನಗೆ ..ನನಗೆ ನಮಸ್ಕರಿಸಬೇಕು,ಧನ್ಯವಾದ ಹೇಳಬೇಕೆಂದಿದ್ದರೆ ನನ್ನದೊಂದು ಮಾತಿದೆ.. ಅದನ್ನು ನಡೆಸಿಕೊಟ್ಟರೆ ಸಾಕು..ನನಗೆ ಧನ್ಯವಾದ ಅರ್ಪಿಸಿದಂತೆ.."

"ಹೇಳಿ..ಏನದು ಮಾತು..?"ಎಂದ ಅಳುಕುತ್ತಾ..

"ನಿನ್ನ ಜೀವನದಲ್ಲಿ ನಿನಗೆ ಎರಡನೇ ತಾಯಿಯ ಸ್ಥಾನವನ್ನು ತುಂಬಿದ ಹೆಣ್ಣನ್ನು ಮನನೋಯಿಸದೆ, ಅವಳನ್ನು ಹೊತ್ತು ಹೆತ್ತು ಸಾಕಿ ಸಲಸಿದ ಆ ಮಾತಾಪಿತರಿಗೆ ಕೈ ಮುಗಿದು ಕ್ಷಮಿಸಿ ಎಂದು ಕೇಳಿಕೋ.. ಅವರ ಕಾಲಿಗೆ ನಮಸ್ಕರಿಸಿ ಧನ್ಯವಾದ ಸಮರ್ಪಿಸು.."ಎಂದರು .


ಕೇಶವನ ಕಂಗಳು ತುಂಬಿದವು..


ಮುಂದುವರಿಯುವುದು..



✍️... ಅನಿತಾ ಜಿ.ಕೆ.ಭಟ್.
13-07-2020.



Friday, 10 July 2020

ಜೀವನ ಮೈತ್ರಿ ಭಾಗ ೧೦೪(104)




ಜೀವನ ಮೈತ್ರಿ ಭಾಗ ೧೦೪



      ಸೌಜನ್ಯಳಿಗೆ  ಎರಡೇ ದಿನದಲ್ಲಿ ಹೆರಿಗೆ ನೋವು ಸ್ವಲ್ಪ ಮಟ್ಟಿಗೆ ಕಾಣಿಸಲು ಆರಂಭವಾಯಿತು.ಶುಶ್ರೂಷಕಿಯರು ಅವಳನ್ನು ಲೇಬರ್ ವಾರ್ಡ್ ಗೆ ವರ್ಗಾಯಿಸಿದರು.ರಾತ್ರಿ ಕೇಶವ ಬಿಸಿ ಅಡುಗೆ ಮಾಡಿ ತಂದಾಗ ಸೌಜನ್ಯ ರೂಮಿನಲ್ಲಿರಲಿಲ್ಲ.. ಸೀದಾ ಹೋಗಿ ಕೌಂಟರಿನಲ್ಲಿ ವಿಚಾರಿಸಿದ. ಹೆರಿಗೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಅವಳನ್ನೊಮ್ಮೆ ನೋಡಬೇಕೆನಿಸಿತು.. ಶುಶ್ರೂಷಕಿಯರ ಒಪ್ಪಿಗೆ ಕೇಳಿದ.ಒಳಗೆ ತೆರಳಿ ಅವಳಿದ್ದ ನಂಬರ್ ನ ಕೊಠಡಿಯ ಬಾಗಿಲ ಬಳಿ ನಿಂತ.ಬಾಗಿಲು ತೆರೆದಿತ್ತು.ಮಡದಿಯ ಮೊಗವನ್ನು ದೂರದಿಂದಲೇ ದಿಟ್ಟಿಸಿದ.ಅವಳ ಮುಖ ಕಳೆಗುಂದಿತ್ತು.ನೀಲಿ ಗೌನ್ ಧರಿಸಿ ಮಲಗಿದ್ದ ಅವಳ ಕಣ್ಣಂಚಿನಿಂದ ನೀರು ಸುರಿಯುತ್ತಿತ್ತು.


      ಮೆಲ್ಲನೆ ಒಳಗಡಿಯಿಟ್ಟ.. ಗಂಡನನ್ನು ಕಂಡೊಡನೆಯೇ ಕಣ್ಣೀರು ಒರೆಸಿಕೊಂಡಳು.ತನ್ನ ಕೈಯನ್ನು ಅವಳ ಹಣೆಯ ಮೇಲಿಟ್ಟು ಹಿಂದಕ್ಕೆ ಸವರಿದ..ಕಣ್ಣಲ್ಲಿ ಒಲವಿನ ಮಹಾಪೂರವೇ ಹರಿಸಿದ.ಉದರವನ್ನು ನೇವರಿಸಿ "ನೋವಾಗುತ್ತಿದೆಯ ಎಂದಾ.. ?"
"ಆಗೊಮ್ಮೆ ಈಗೊಮ್ಮೆ ಬರುತ್ತಿದೆ "ಎಂದವಳ ಕಣ್ಣಂಚು ಒದ್ದೆಯಾಗುತ್ತಿದ್ದುದನ್ನು ಕಂಡು ಕಣ್ಣೀರೊರೆಸಿದ.
ಒರೆಸುತ್ತಿದ್ದ ಪತಿಯ ಕೈಗಳನ್ನು ತಡೆದು ..

"ಈ ಕಣ್ಣೀರನ್ನು ಹೊರಗಿನಿಂದ ಒರೆಸುವ ಬದಲು ಮನಸಿನಾಳದಿಂದಲೇ ಒರೆಸುವಿರಾ..?"

 ಎಂದವಳು ಪತಿಯೆಡೆಗೆ ದೈನ್ಯತೆಯ ನೋಟ ಬೀರಿದಳು..
ಕೇಶವ ಮೌನವಾಗಿದ್ದ..ಸೌಜನ್ಯಳ ನೋಟವನ್ನು ಎದುರಿಸಲು ಸಾಧ್ಯವಾಗಲಿಲ್ಲ.ಅವಳೆಡೆಗೆ ಬಾಗಿ ಹಣೆಯ ಮೇಲೊಂದು ಸಿಹಿಮುತ್ತನಿಟ್ಟ.ಅವಳ ಕೈಗಳ ಮೇಲೆ ಕೈಗಳನಿಟ್ಟು "ನಾನಿದ್ದೇನೆ.... ನಿನ್ನ ಹಾಗೂ ಮಗುವಿನ ಕಾಳಜಿ ,ಜವಾಬ್ದಾರಿ ನನ್ನ ಹೆಗಲ ಮೇಲಿದೆ "ಎಂದ.

"ನಿಮ್ಮ ವಂಶದ ಕುಡಿಯನ್ನು ಹೊತ್ತು ಹೆತ್ತು ಕೊಡುತ್ತಿದ್ದೇನೆ.ನನ್ನ ಒಂದು ಮಾತನ್ನು ನಡೆಸಿಕೊಡುವಿರಾ ..?".ಎಂದವಳ ಕಂಠ ಬಿಗಿದಿತ್ತು.. ಮಾತು ಕೊಡಿ ನನಗೆ ಎನ್ನುವಂತೆ ಕೈ ಮುಂದೆ ಮಾಡಿದಳು..ಕೇಶವ ತನ್ನ ಕೈ ಹಿಂದೆ ಸರಿಸಿದ..


   ಶುಶ್ರೂಷಕಿಯರು ಹಾಗೂ ವೈದ್ಯೆ ಆಗಮಿಸಿದರು..ಕೇಶವನನ್ನು ರೂಮಿನಿಂದ ಹೊರಗೆ ಕಳುಹಿಸಿದರು.ಸೌಜನ್ಯಳನ್ನು ಪರೀಕ್ಷಿಸಿದರು ವೈದ್ಯರು..." ಅಮ್ಮಾ.. " ಎಂದು ನೋವಿನಿಂದ ಚೀರುವ ಅವಳ ದನಿ ಕೇಳಿ ಕೇಶವನ ಕರುಳು ಕಿವುಚಿ ಬಂದಂತಾಯಿತು.

"ನೋವು ಬರುತ್ತಿದೆಯಾ?"ಎಂದು ಕೇಳಿದರು ವೈದ್ಯೆ.

"ಬಿಟ್ಟು ಬಿಟ್ಟು ಬರುತ್ತಿದೆ.."

ವೈದ್ಯೆ ಆಕೆಗೆ ಚಿಕಿತ್ಸೆ ನೀಡಿದ ವಿವರದ ಮೇಲೆ ಕಣ್ಣಾಡಿಸಿದರು.ಕೇಶವನನ್ನು ಒಳಗೆ ಬರಲು ಹೇಳಿದರು.

       "ಇವತ್ತು ಇವರಿಗೆ ಡ್ರಿಪ್ ಜೊತೆ ನೋವು ಬರುವ ಔಷಧಿ ಹಾಕಿದೀವಿ.ಆದರೂ ಸರಿಯಾಗಿ ನೋವು ಬಂದಿಲ್ಲ.ಹೆರಿಗೆಯಾಗುವಷ್ಟು ಗರ್ಭಪಾತ್ರ ಓಪನ್ ಆಗಿಲ್ಲ.. ಇವತ್ತು ಅವರಿಗೂ,ಮಗುವಿಗೂ ಆಯಾಸವಾಗಿದೆ.ಇನ್ನು ರೆಸ್ಟ್ ಮಾಡಲಿ.. ವಾರ್ಡ್ ನ ರೂಮಿಗೆ ಶಿಫ್ಟ್ ಮಾಡುತ್ತಿದ್ದೇವೆ.. ಆಹಾರ ಸೇವಿಸಲಿ.ನಾಳೆ ಬೆಳಿಗ್ಗೆ ಪುನಃ ಡ್ರಿಪ್ ಹಾಕೋಣ.."ಎಂದರು.

"ಸರಿ .."ಎಂದ ಕೇಶವ..

     ರೂಮಿಗೆ ಕರೆದುಕೊಂಡು ಬಂದ ಮಡದಿಗೆ ಬಿಸಿ ಬಿಸಿ ಗಂಜಿ ಕೊಟ್ಟ ಪತಿ.ಪತಿಯ ಬಲವಂತಕ್ಕೆ ಸ್ವಲ್ಪ ತಿನ್ನುವ ಶಾಸ್ತ್ರ ಮಾಡಿ ಮಲಗಿದಳು.ಶಾರೀರಿಕ ಆಯಾಸದಷ್ಟೇ ಮಾನಸಿಕ ಬಳಲಿಕೆಯೂ ಇತ್ತು.ಪತಿ ಹೀಗೇಕೆ ಮಾಡುತ್ತಿದ್ದಾರೆ..? ಇಂತಹ ಸಂದರ್ಭದಲ್ಲಿ ಕೂಡ ನನ್ನ ಮಾತಿಗೆ ಬೆಲೆಕೊಡಬಾರದೇ..? ನನ್ನ ಮನದಿಂಗಿತಕ್ಕಿಂತ ಅವರ  ಅಹಂ ಹೆಚ್ಚಾಯಿತೇ..?ಎಂದೆಲ್ಲ ಯೋಚಿಸುತ್ತಿದ್ದವಳಿಗೆ ಯಾವಾಗ ನಿದಿರೆ ಹತ್ತಿತೋ ತಿಳಿಯಲಿಲ್ಲ..


      ಮರುದಿನ ಕೇಶವ ರಜೆ ಹಾಕಿ ಆಸ್ಪತ್ರೆಯಲ್ಲಿ ನಿಂತಿದ್ದ.ಬೆಳ್ಳಂಬೆಳಗ್ಗೆ ಮನೆಗೆ ತೆರಳಿ ಅಡುಗೆ ಮಾಡಿ ತಂದವನು ತಾನೇ ಮಡದಿಗೆ ತುತ್ತನುಣಿಸಿ ...ಅವಳ ಹಣೆ ಉದರದ ಮೇಲೆಲ್ಲ  ತನ್ನಧರವನೊತ್ತಿ "ನಿನಗೆ ನಾನು..ನನಗೆ ನೀನು .".ಎಂದ...ಅವಳೂ ಅಷ್ಟೇ..'ನನ್ನ ಹಣೆಯಲ್ಲಿ ಇಷ್ಟೇ ಬರೆದಿದ್ದಿರಬೇಕು' ಎಂದು ಇದ್ದುದರಲ್ಲೇ ಸಂತೃಪ್ತಿ ಪಟ್ಟಕೊಂಡಳು. ಬಶೀರನೊಂದಿಗಿನ ಗೃಹ ಬಂಧನದ ಬಾಳಿಗಿಂತ.. ಪ್ರೀತಿ, ಕಾಳಜಿ ತೋರುವ ಪತಿ ಸಿಕ್ಕಿರುವುದೇ ನನ್ನ ಸೌಭಾಗ್ಯ ಎಂದುಕೊಳ್ಳಲೇ.. ಅಥವಾ ಇವನೂ ನನ್ನ ಭಾವನೆಗಳನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲವಲ್ಲಾ ಎಂದು ನೊಂದುಕೊಳ್ಳಲೇ ಎಂದು ತನ್ನೊಳಗಿನ ಸಂದಿಗ್ಧತೆಯ ಬಗ್ಗೆ ಚಿಂತಿಸುತ್ತಿದ್ದಳು.
ತನ್ನ ತನುವು ಬಯಸಿದಾಗಲೆಲ್ಲ ಬಂದು ಹದ್ದಿನಂತೆ ಕುಕ್ಕಿ ಕುಕ್ಕಿ ರಸ ಹೀರಿ,ತನ್ನ ಕಾಮದ ಹಸಿವು ನೀಗಿದಾಗ,ತನಗೂ ಈ ದೇಹಕೂ ಏನೂ ಸಂಬಂಧವಿಲ್ಲವೆಂದು ಬಿಸುಟಿ ತೆರಳುತ್ತಿದ್ದ ಬಶೀರನಿಗಿಂತ....ನನ್ನವರನ್ನಲ್ಲದಿದ್ದರೂ ನನ್ನನ್ನಾದರೂ ಪ್ರೀತಿಯಿಂದ ಕಾಣುವ ಪತಿ ಕೇಶವನೇ ಮೇಲು..ಇಂದಲ್ಲದಿದ್ದರೂ ಮುಂದೊಂದು ದಿನ ಪತಿಯ ಧೋರಣೆ ಬದಲಾಗಬಹುದು..ಎಂದು ಯೋಚಿಸುತ್ತಾ ದೀರ್ಘವಾಗಿ ಉಸಿರೆಳೆದುಕೊಂಡಳು.

       ಶುಶ್ರೂಷಕಿ ಬಂದು ಸೌಜನ್ಯಳನ್ನು ಲೇಬರ್ ರೂಮಿಗೆ ಕರೆದೊಯ್ದರು.ಕೇಶವನ ಕೈಗೆ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಕೊಟ್ಟು "ಇದನ್ನು ತಂದು ಕೊಡಿ" ಎಂದರು.ಔಷಧ ತಂದುಕೊಟ್ಟ ಕೇಶವ ಹೊರಗೆ ಕಾಯುತ್ತಾ ಕುಳಿತಿದ್ದ..ಒಳಗಿನಿಂದ ಯಾರ ಚೀರಾಟ ಕೇಳಿದರೂ 'ತನ್ನವಳೇ ಅಳುತ್ತಿರುವಳೇನೋ' ಎಂಬಂತೆ ಕಿವಿ ನಿಮಿರಿಸಿ ಮರುಗುತ್ತಿದ್ದ.ಮರುಕ್ಷಣ' ಅವಳಿಗೇನೂ ತೊಂದರೆಯಾಗದೆ ಕಂದನನ್ನು ಭುವಿಗಿಳಿಸುವಂತೆ ಮಾಡಪ್ಪಾ 'ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದ.


            *******

         ಬೆಳಿಗ್ಗೆ ಆಫೀಸಿಗೆ ಹೊರಡುವ ಸಮಯ.ನರಸಿಂಹ ರಾಯರು ಇನ್ನೂ ಹೊರಟಿರಲಿಲ್ಲ..ಹೊರಡುವ ಸೂಚನೆಯೂ ಇಲ್ಲದಿದ್ದಾಗ ರೇಖಾ ಪತಿಯಲ್ಲಿ "ಇವತ್ತು ಆಫೀಸಿಗೆ ಹೋಗೋದಿಲ್ವಾ..?". ಎಂದಾಗ

"ಇಲ್ಲ ..." ಎಂದರು.

"ಕಾರಣ...?"

"ಎಲ್ಲದಕ್ಕೂ ಕಾರಣ ಹೇಳಬೇಕಾ..? ನನಗಿವತ್ತು ಹೋಗಬೇಕೆಂದು ತೋರುತ್ತಿಲ್ಲ.."

"ನೋಡಿ.. ನೀವು ಹೀಗೆ ಏನೋ ಯೋಚನೆ ಮಾಡಿಕೊಂಡು ಮನೆಯಲ್ಲಿ ಕುಳಿತರೆ ನನಗೂ ಆಫೀಸಿಗೆ ಹೋಗಲು ಸಾಧ್ಯವಾಗುವುದಿಲ್ಲ.. ಬನ್ನಿ..ಹೊರಡೋಣ.."

"ಇಲ್ಲ ..ನಾನಿವತ್ತು ಬರಲ್ಲ.‌ನೀನು ಬೇಕಾದರೆ ಹೋಗು..

"ಹಾಗೆಂದರೆ ಅದೆಲ್ಲ ಆಗದು.."ಎಂದು ಆಕ್ಷೇಪಿಸಿದರು ರೇಖಾ.

"ಇವತ್ತು ಸಂಕಷ್ಟಿ ವ್ರತ ಮಾಡಬೇಕೆಂದಿದ್ದೇನೆ .."

"ಹೌದಾ..ಹಾಗಾದರೆ ನಾನೂ ನಿಮ್ಮನ್ನು ಸೇರಿಕೊಳ್ಳುತ್ತೇನೆ ..ಅದೇನು ವ್ರತವೋ..? ಅದರಿಂದೇನು ಒಳಿತಾಗುತ್ತೋ ನೋಡೋಣ..ನಾನೂ ಕಟ್ಟುನಿಟ್ಟಿನ ವ್ರತ ಅನುಸರಿಸುತ್ತೇನೆ.."

ಇಬ್ಬರೂ ಆಫೀಸಿಗೆ ತೆರಳದೆ ನಿಷ್ಠೆಯಿಂದ ವ್ರತವನಾಚರಿಸಿದರು..

                   *****

         ಮಂಗಳಮ್ಮ ,ಭಾಸ್ಕರ ಶಾಸ್ತ್ರಿಗಳು ಬೆಂಗಳೂರು ತಲುಪಿದರು.ಆಸ್ಪತ್ರೆಗೆ ಬಂದ ಅಪ್ಪ ಅಮ್ಮನನ್ನು ಕಂಡು ಕಣ್ಣು ತುಂಬಿಕೊಂಡಳು ಮೈತ್ರಿ.. "ಏನಾಯ್ತು ಮಗಳೇ.. ?"ಎಂದು ಮಗಳನ್ನು ಆಪ್ತವಾಗಿ ವಿಚಾರಿಸಿಕೊಂಡರು ಮಂಗಳಮ್ಮ.

"ನಾಲ್ಕೈದು ದಿನ ಸಂಪೂರ್ಣ ಬೆಡ್ ರೆಸ್ಟ್ ಮಾಡಲು ಸೂಚಿಸಿದ್ದಾರೆ "ಎಂದರು ಗಾಯತ್ರಿ..

"ಹೌದಾ..ಏನೂ ಅಪಾಯ ಆಗದಿದ್ದರೆ ಸಾಕು.."ಎಂದವರ ಮನಸ್ಸಿನಲ್ಲಿ ಅತ್ತೆಯ ಮಾತು ಸುಳಿಯುತ್ತಿತ್ತು..

             *****

      ಸೌಜನ್ಯಳ ನೋವು ತಾರಕ್ಕೇರಿತ್ತು.. ಸಹಿಸಲೂ ಅಸಾಧ್ಯವಾಗಿತ್ತು.ದಾದಿಯರ ಚುಚ್ಚು ಮಾತು ಅದಕ್ಕಿಂತಲೂ ತೀಕ್ಷ್ಣವಾಗಿತ್ತು.ವೈದ್ಯೆ ಇದ್ದಾಗ ಸರಿ ಇದ್ದು ಸಹಕರಿಸುತ್ತಿದ್ದ ದಾದಿಯರು ಅವರಾಚೆ ಪೇಷೆಂಟ್ ನೋಡಲು ತೆರಳಿದರೆ "ಏನು ನಿನ್ನ ಅಳು..ನಿನ್ನಮ್ಮ ಹೆತ್ತಿಲ್ಲವಾ..? ಊರಲ್ಲಿ ಯಾರಿಗೂ ಹೆರಿಗೆ ನೋವಿಲ್ಲವಾ..ಬರೀ ನಿನಗೊಬ್ಬಳಿಗೇನಾ...?" ಎಂದು ಗದರಿಸಿ ತಮ್ಮ ಹಸ್ತದಿಂದ ಬಲಾತ್ಕರಿಸುತ್ತಿದ್ದರೆ ಅವಳಿಗೆ ಒಮ್ಮೆ ತನ್ನ ಜೀವ ಹೋಯಿತೇನೋ ಅನಿಸುತ್ತಿತ್ತು.


       ಸತತ ಆರು ಗಂಟೆಗಳ ನರಳಾಟ.. "ನೋಡಮ್ಮ ಇದು ಅಂತಿಮ ಹಂತ..ಗರ್ಭಪಾತ್ರ ಓಪನ್ ಆಗಿ ಮಗುವನ್ನು ಹೊರದೂಡಲು ಸಜ್ಜಾಗಿದೆ..ನೀನೀಗ ನೋವು ನುಂಗಿ ಮನಸ್ಸು ಮಾಡಬೇಕು" ಎಂದರು ಡಾಕ್ಟರ್ ಶಾಂತ..


       ಕಣ್ಣ ಮುಂದೆ ವೈದ್ಯೆ,ದಾದಿಯರ ತಂಡ ಸಜ್ಜಾಗಿ ನಿಂತದ್ದು ಕಾಣಿಸಿತು.ತನ್ನ ಶಕ್ತಿಮೀರಿ ಪ್ರಯತ್ನಿಸಿದಳು........ ಅಮ್ಮಾ...ಎನ್ನುವ ಚೀತ್ಕಾರ........ವೈದ್ಯೆಯ ಕೈಯಲ್ಲಿ ರಕ್ತದಲ್ಲಿ ಅದ್ದಿದ ಪುಟ್ಟ ಆಕೃತಿಯನ್ನು ಕಂಡು ಸಮಾಧಾನ ಪಟ್ಟುಕೊಂಡಳು ತಾಯಿ."ಕಂಗ್ರಾಟ್ಸ್ ಅಮ್ಮಾ..ಮಗಳಿಗೆ ಜನ್ಮ ನೀಡಿದ್ದೀರಿ.."ಎಂದು ಉದ್ಗಾರವೆತ್ತಿದರು ಡಾಕ್ಟರ್ ಶಾಂತ.ಮಗುವಿನ ಅಳು ಸೌಜನ್ಯಳ ಕಿವಿಗೆ ಬಿದ್ದಿತು.ಸ್ವಚ್ಛಗೊಳಿಸಿ ಸೌಜನ್ಯಳ ಕೈಗಿತ್ತು..."ಮುದ್ದುಮಗಳು ನಿಮ್ಮ ಮಡಿಲು ತುಂಬಿದ್ದಾಳೆ "ಎಂದರು ದಾದಿ.
ಮಗುವನ್ನು ನೋಡಿ ಕಣ್ತುಂಬಿ ಕೊಂಡ ಸೌಜನ್ಯ. 'ನೀನೂ ನನ್ನಂತೆ ಹೆಣ್ಣಾಗಿ ಹುಟ್ಟಿದೆಯಲ್ಲಾ.. ನನ್ನಷ್ಟು ನೋವು ನಿನಗೆಂದೂ ಬಾರದಿರಲಿ...'ಎಂದು ಮನದಾಳದಲ್ಲಿ ದುಃಖಿಸುತ್ತಾ ಮುದ್ದಿಸಿದಳು.ಅಮ್ಮ ಅಪ್ಪನ ಅನುಪಸ್ಥಿತಿ ಸೌಜನ್ಯಳಿಗೆ ಬಹಳವೇ ಕಾಡುತ್ತಿತ್ತು.ಹಠಮಾರಿ ಪತಿಯ ಬಗ್ಗೆ ಕ್ರೋಧವೂ ಉಕ್ಕುತ್ತಿತ್ತು.

ದಾದಿ ಹೊರಗಡೆ ಬಂದು..

"ಪೇಷೆಂಟ್ ಸೌಜನ್ಯ ಪಾರ್ಟಿ"

ಎಂದು ಕೂಗಿದಳು ನರ್ಸ್..ಕೇಶವ ಒಳಗೆ ತೆರಳಿದ..

"ಕಂಗ್ರಾಟ್ಸ್..ಮುದ್ದಾದ ಮಗಳಿಗೆ ತಂದೆಯಾಗಿದ್ದೀರಿ.."ಎಂದರು ನರ್ಸ್.
ಮಗಳನ್ನು ತಂದೆಯ ಕೈಗಿಟ್ಟರು ..ಪುಟ್ಟ ಭಾಗ್ಯ ಲಕ್ಷ್ಮಿಯ ಮುಖ ನೋಡಿದ ಕೇಶವ.. ಮೆಲ್ಲಗೆ ಎದೆಗವಚಿಕೊಂಡ.

       ಕೇಶವನನ್ನು ಹೊರಗೆ ಕಳುಹಿಸಿದರು. ಮೊದಲ ಬಾರಿಗೆ ಎದೆಹಾಲು ಕುಡಿಸಲು ದಾದಿಯರು ಸಹಕರಿಸಿದರು. ಸೌಜನ್ಯ ಮೊದಲ ಬಾರಿಗೆ ಅಮೃತ ಪಾನ ಮಾಡಿಸಿದ ಧನ್ಯತೆಯಲ್ಲಿ ಮಿಂದೆದ್ದಳು. ಅವಳನ್ನು ರೂಮಿಗೆ ಶಿಫ್ಟ್ ಮಾಡಿದರು.ಈಗ ಎರಡು ಗಂಟೆಗೊಮ್ಮೆ ಹಾಲು ಕುಡಿಸುವ ಕೆಲಸ ಅವಳ ಹೆಗಲ ಮೇಲಿತ್ತು.


       ಅವಳಿಗೆ ಎದ್ದು ಸರಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.ಸಹಕರಿಸಲು ಜೊತೆಗೆ ಹೆಣ್ಣುಮಕ್ಕಳು ಯಾರೂ ಇಲ್ಲ.ಮಗು ಜೋರಾಗಿ ಅಳುವುದನ್ನು ಕೇಳಿ ಆಗಾಗ ದಾದಿಯರು ಬರುತ್ತಿದ್ದರು.ಒಮ್ಮೆ ಮಗು ಜೋರಾಗಿ ಆಳುತ್ತಿದ್ದಾಗ ವೈದ್ಯರು ಬಂದರು..

"ಏನಮ್ಮಾ ಜೊತೆಗೆ ಯಾರೂ ಹೆಣ್ಣುಮಕ್ಕಳಿಲ್ವಾ..ಏನು ಲವ್ ಮಾಡಿ ಓಡಿಬಂದವರಾ ?"

ಎಂದು ಏರು ದನಿಯಲ್ಲಿ ಗದರಿದರು.ಸೌಜನ್ಯಳು ಮುಖ ಸಣ್ಣಗಾಗಿಸಿ ಕುಳಿತಳು.ಅವಳಿಗೆ ನಿಭಾಯಿಸುವುದು ಕಷ್ಟ.ಕೇಶವನಾದರೂ ಎಷ್ಟು ಸಹಕರಿಸಿಯಾನು.. ? ಅವನಿಗೆ ಅನುಭವವಿಲ್ಲ..

              ****

       ಮಂಗಳಮ್ಮ ಮಗಳನ್ನು ನೋಡಿಕೊಳ್ಳುತ್ತಾ ಸಮಯ ಸಿಕ್ಕಾಗ ಕಾರಿಡಾರ್ ನಲ್ಲಿ ಸ್ವಲ್ಪ ಅತ್ತಿಂದಿತ್ತ ನಡೆದಾಡುತ್ತಿದ್ದರು.ಹಳ್ಳಿ ಮನೆಯಲ್ಲಿ ದಿನವಿಡೀ ಓಡಾಡಿ ಕೆಲಸ ಮಾಡುತ್ತಿದ್ದವರಿಗೆ ಇಲ್ಲಿ ದೇಹ ಜಡವಾದಂತೆ ಭಾಸವಾಗುತ್ತಿತ್ತು. ಹೀಗೆ ಅಡ್ಡಾಡುತ್ತಿದ್ದವರಿಗೆ ಹತ್ತಿರದ ರೂಮಿನಲ್ಲಿ ಡಾಕ್ಟರ್ ಶಾಂತ ಆಡಿದ ಮಾತುಗಳು ಕಿವಿಗೆ ಬಿದ್ದವು.


         ಮೈತ್ರಿಯಲ್ಲಿ ಹಂಚಿಕೊಂಡರು.
"ಏನಮ್ಮಾ ನೀನು... ಇಲ್ಲಿ ಇನ್ನೊಬ್ಬರ ವಿಚಾರಕ್ಕೆ ಹೋಗಬಾರರು..ಕಂಡವರನ್ನೆಲ್ಲ ಮಾತನಾಡಿಸಲು ಹೋಗಬೇಡ.ಇದು ನಮ್ಮ ಹಳ್ಳಿಯಲ್ಲ ಪಟ್ಟಣ.ರಾಜಧಾನಿ .. ಬೆಂಗಳೂರು"
ಮಗಳ ಮಾತಿಗೆ ನಕ್ಕು ಸುಮ್ಮನಾದರು.

ಮರುದಿನ ಅಲ್ಲೇ ಅಡ್ಡಾಡುವಾಗ ಜೋರಾಗಿ ಆಳುತ್ತಿತ್ತು ಮಗು.ದಾದಿಯರು ಅತ್ತ ಸುಳಿಯಲಿಲ್ಲ.ಕರುಣೆಯಿಂದ ತಾನೇ ಹೋಗಿ ತಿಳಿಸಿದರು.
"ಅದ್ಯಾವುದೋ ಲವ್ ಕೇಸು.. ಮರ್ಯಾದೆ ಇಲ್ಲದ ಜನ.. ಆಸ್ಪತ್ರೆಯಲ್ಲಿ ಬಾಣಂತಿಯ ಜೊತೆಗೆ ಹೆಣ್ಣುಮಕ್ಕಳು  ಇರಬೇಕು ಎನ್ನುವ ಜ್ಞಾನ ಬೇಡವಾ.. ಗಂಡನಾದವನಿಗೆ ಅಷ್ಟೂ ತಿಳಿಯಬೇಡವಾ..?"ಎಂದು ನಿಕೃಷ್ಟವಾಗಿ ಮಾತನಾಡಿದರು.

ರೂಮಿಗೆ ಬಂದ ಮಂಗಳಮ್ಮ
"ಮಗಳೇ ಹತ್ತಿರದ ರೂಮಿನಲ್ಲಿ ಜೋರಾಗಿ ಮಗು ಅಳುತ್ತಿದೆ.. ನನಗೂ ಈಗ ಇಲ್ಲಿ ಕೆಲಸವೇನಿಲ್ಲ.. ಸ್ವಲ್ಪ ಸಹಾಯ ಮಾಡಲೇ ..ಪಾಪ.. ತಾಯಿ ಇಲ್ಲವೋ. ಅಥವಾ ಜೊತೆ ಬರುವಂತೆಯಿರಲಿಲ್ಲವೋ.. ಏನೋ..ಕರುಣೆಯುಕ್ಕುತ್ತೆ ಮಗುವಿನ ಅಳುಕೇಳಿ.."

"ಬೇಡಮ್ಮಾ ಬೇಡ...ನಿಮಗೆ ಎಷ್ಟು ಹೇಳಿದರೂ ಮತ್ತದೇ ಮಾತು.. ಅವರು ಯಾರೋ.. ಯಾವೂರಿನವರೋ ಏನೋ.. ನಮಗೇಕೆ ಅವರ ಉಸಾಬರಿ...ಹೀಗೆಲ್ಲ ಉಪಕಾರಕ್ಕೆ ಹೊರಟರೆ ನಾನು ಅಪ್ಪಂಗೆ ಹೇಳ್ತೀನಿ.."

ಮಗಳ ಮಾತಿಗೆ ಸಹಾಯ ಮಾಡಬೇಕೆನ್ನುವ ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟರು.

ಮೆಡಿಕಲ್ಸ್ ನಿಂದ "ಮೈತ್ರಿಯವರ ಔಷಧ ತೆಗೆದು ಕೊಂಡು ಹೋಗಲು ಬನ್ನಿ "ಎಂದು ಫೋನ್ ಬಂತು.ಮಗಳಮ್ಮ ಹೊರಟರು.ಆ ರೂಮು ದಾಟುತ್ತಿದ್ದಂತೆ ಕಿವಿ ನೆಟ್ಟಗಾಗಿತ್ತು.ಒಂದೇ ಸಮನೆ ಮಗು ಅಳುತ್ತಿತ್ತು..ಅಳುಕಿನಿಂದಲೇ ಮೆಲ್ಲಗೆ ಬಾಗಿಲು ತಟ್ಟಿದರು ಮಂಗಳಮ್ಮ.

ಮುಂದುವರಿಯುವುದು...

✍️.... ಅನಿತಾ ಜಿ.ಕೆ.ಭಟ್.
10-07-2020.

Wednesday, 8 July 2020

ಜೀವನ ಮೈತ್ರಿ ಭಾಗ ೧೦೩(103)



ಜೀವನ ಮೈತ್ರಿ ಭಾಗ ೧೦೩


      ದಿನಗಳು, ತಿಂಗಳುಗಳು ಶರವೇಗದಲ್ಲಿ ಉರುಳುತ್ತಿದ್ದವು. ತಿಂಗಳು ತುಂಬುತ್ತಿದ್ದಂತೆ ಸೌಜನ್ಯ  ತನ್ನ ತವರನ್ನು ಬಹಳ ಹಚ್ಚಿಕೊಂಡಿದ್ದಳು.ಹಠಮಾರಿ ಪತಿ ಕೇಶವ ಮಾತ್ರ ಮತ್ತೆ ಮಾವನ ಮನೆಯ ಕಡೆ ತಲೆಹಾಕಲು ನಿರಾಕರಿಸುತ್ತಿದ್ದ.ಬಾಣಂತನಕ್ಕೆ ಒಬ್ಬ ವಯಸ್ಸಾದ ಹೆಂಗಸನ್ನು ಮಾತನಾಡಿ ವ್ಯವಸ್ಥೆ ಮಾಡಿದ್ದ ಕೇಶವ.ಸೌಜನ್ಯ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದಳು.ಪತಿಯ ಕಾಳಜಿಯ ವ್ಯವಸ್ಥೆ ಬೇಡವೆನ್ನಲಾಗದು...ತವರಿನ ಆಸರೆಗೆ ಮನಸು ಬಯಸದೆ ಸುಮ್ಮನಾಗದು. ತುಂಬು ಗರ್ಭಿಣಿಯ ಆರೈಕೆ, ಬಾಣಂತನ ..ತಿಳಿದವರು ಯಾರು ಬೇಕಾದರೂ ಮಾಡಬಹುದು.ಆದರೆ ಅಮ್ಮ ಮಾಡಿದಂತಾಗುತ್ತದೆಯೇ..? ಪುಟ್ಟ ಮನೆ ,ಸಣ್ಣ ಸಂಪಾದನೆಯಲ್ಲಿ ಬದುಕುವುದು ಗರ್ಭಿಣಿ ಸೌಜನ್ಯಗೆ ಸಾಕುಸಾಕಾಗಿ ಹೋಗಿತ್ತು.ಆದರೆ ಪತಿಯ ಮಾತನ್ನು ಮೀರುವಂತಿಲ್ಲ..ಒಂದೊಂದು ಸಲ ನಾನಿಷ್ಟು ವಿದ್ಯೆ ಸಂಪಾದಿಸಿದ್ದೂ ವ್ಯರ್ಥ.. ಅದರಿಂದ ದುಡಿಮೆ ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ..ಎಂದೆಲ್ಲ ಯೋಚಿಸಿ ಖಿನ್ನತೆಗೆ ಜಾರುತ್ತಿದ್ದಳು.

       ನರಸಿಂಹ ರಾಯರು ಮಗಳು ಅಳಿಯ ದೂರವಾದ ಮೇಲೆ ಮಡದಿಯಲ್ಲಿ ಮಾತನಾಡುವುದನ್ನೇ ಕಡಿಮೆ ಮಾಡಿದ್ದರು.ತಾನಾಯಿತು ತನ್ನ ಉದ್ಯೋಗ, ಆಧ್ಯಾತ್ಮ ಚಿಂತನೆಗಳಾಯಿತು ಎಂದು ಬದುಕುತ್ತಿದ್ದರು.ರೇಖಾಗೆ ತನ್ನ ಮುಂಗೋಪದಿಂದಾದ ಎಡವಟ್ಟನ್ನು ತಾನೇ ಸರಿಪಡಿಸಬೇಕಷ್ಟೇ . ಇಲ್ಲವಾದಲ್ಲಿ ಮಗಳು ಅಳಿಯನಂತೆ ಪತಿಯೂ ದೂರವಾದರೆ..ಎಂಬ ಚಿಂತೆ ಮೂಡುತ್ತಿತ್ತು.


      ಸೌಜನ್ಯಗೆ ಒಂಭತ್ತು ತಿಂಗಳು ತುಂಬಿತು.ಕೇಶವ ಮಡದಿಯನ್ನು ತಪಾಸಣೆಗಾಗಿ ಡಾಕ್ಟರ್ ಶಾಂತ ಅವರ ಬಳಿ ಕರೆದೊಯ್ದನು.ಡಾಕ್ಟರ್  ..".ಇನ್ನು ಕೆಲವೇ ದಿನಗಳಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ.ಇಲ್ಲಿಯೇ ಉಳಿಯುವುದು ಒಳಿತು" ಎಂದರು.ಹಲವು ದಿನ ನಿಂತರೆ ಆಸ್ಪತ್ರೆ ಬಿಲ್ ಕಟ್ಟಲು ಸಾಧ್ಯವೇ ಎಂಬ ಚಿಂತೆ ಕೆಶವನಿಗೆ.ಅವನ ಚಿಂತೆಯನ್ನು ಕಂಡು "ಏನ್ರೀ..ನೀವು..ಮಡದಿ ಮಗುವಿನ ಆರೋಗ್ಯ ಮುಖ್ಯವಾ..? ಅಲ್ಲ.. ದುಡ್ಡು ಖರ್ಚಾಗದಿರುವುದು ಮುಖ್ಯವೋ..? ಅಷ್ಟೂ ದುಡ್ಡಿಲ್ಲದಿದ್ದರೆ ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆ ಇದೆ.ಅಲ್ಲಿ ನೋಡಿಕೊಳ್ಳಿ..
"ಎಂದರು..ಕೊನೆಗೆ ಕೇಶವ ಒಪ್ಪಿದ.


      ಆಸ್ಪತ್ರೆಯಲ್ಲಿ ಸೌಜನ್ಯಳನ್ನು ಜೊತೆಗೆ ನಿಲ್ಲಲು ಬಾಣಂತನ ಮಾಡಲು ಒಪ್ಪಿದ್ದ ಹಿರಿಯ ಹೆಂಗಸನ್ನು ಕೇಳಿಕೊಂಡರು.ಆಕೆ ಕೇಶವ ಕೊಡುವೆನೆಂದು ಹೇಳಿದ್ದಕ್ಕಿಂತ ಹೆಚ್ಚಿನ ದುಡ್ಡಿಗೆ ಬೇರೊಂದು ಮನೆಗೆ ಬಾಣಂತಿಯ ಆರೈಕೆಗೆ ತೆರಳಿ ಆಗಿತ್ತು. ಕೇಶವ  ಮುಂದೆ ಏನು ಮಾಡಬಹುದೆಂದು ಯೋಚಿಸತೊಡಗಿದ.. ಏನಾದರೂ.. ಧೈರ್ಯದಿಂದ ಎದುರಿಸಬೇಕು ಎಂದುಕೊಂಡ ಕೇಶವ.. ಸಂಜೆ ಆಫೀಸಿನಿಂದ ಮನೆಗೆ ತೆರಳಿ ಅಡುಗೆ ಮಾಡಿ ತರುತ್ತಿದ್ದ ಆಸ್ಪತ್ರೆಗೆ..ಮತ್ತೆ ಆಸ್ಪತ್ರೆಯಲ್ಲಿ ಸೌಜನ್ಯಳ ಜೊತೆಗಿದ್ದು ಬೆಳ್ಳಂಬೆಳಗ್ಗೆ ಪುನಃ ಮನೆಗೆ ತೆರಳಿ ಅಡುಗೆಮಾಡಿ ಬಿಸಿ ಬಿಸಿ ತಂದುಕೊಡುತ್ತಿದ್ದ. ನಂತರ ತನ್ನ ಉದ್ಯೋಗಕ್ಕೆ ತೆರಳುತ್ತಿದ್ದ.ಮಧ್ಯದಲ್ಲಿ ಔಷಧ ಏನಾದರೂ ಬೇಕಾದರೆ ತಂದುಕೊಡುವಂತೆ ನರ್ಸ್ ನಲ್ಲಿ ಹೇಳಿ ವ್ಯವಸ್ಥೆ ಮಾಡಿ ಹೋಗುತ್ತಿದ್ದ.

    ಆಸ್ಪತ್ರೆಯಲ್ಲಿ ಒಬ್ಬಳೇ ಮಲಗಿರುತ್ತಿದ್ದ ಸೌಜನ್ಯಳ ಕಣ್ಣಂಚಿನಿಂದ ಕೆಲವೊಮ್ಮೆ ಹನಿಗಳು ತೊಟ್ಟಿಕ್ಕುತ್ತಿದ್ದವು.ಹೆಣ್ಣಿಗೇಕೆ ಈ ಸತ್ವ ಪರೀಕ್ಷೆ..ಹೆಣ್ಣಿಗೇಕೆ ಗಂಡ ಹೇಳಿದಂತೆಯೇ ನಡೆಯಬೇಕೆಂಬ ಸಾಮಾಜಿಕ ಕಟ್ಟುಪಾಡುಗಳು.. ಗಂಡು ತನ್ನಿಚ್ಛೆಯಂತೆ ಬದುಕಬಹುದಾದರೆ ಹೆಣ್ಣಿಗೇಕೆ ಆ ಸ್ವಾತಂತ್ರ್ಯ ಇಲ್ಲ..ಅಂತಹ ಮುಕ್ತ ವಾತಾವರಣವಿದ್ದರೆ ನಾನೀಗ ಅಮ್ಮ ಅಪ್ಪನ ಮಡಿಲಲ್ಲಿ ನನ್ನ  ತುಂಬು ಗರ್ಭದ ಜತೆ ಕನಸು ಕಾಣುತ್ತಾ ಇರುತ್ತಿದ್ದೆ.. ಎಂದೆಲ್ಲ ಯೋಚನೆಗಳು ಬರಬೇಡವೆಂದರೂ ಮತ್ತೆ ಮತ್ತೆ ಬಂದು ಕಾಡುತ್ತಿದ್ದವು.

           ********


       ಗರ್ಭಿಣಿ ಮೈತ್ರಿಗೆ ಆರು ತಿಂಗಳುಗಳು ತುಂಬಿದವು. ಆಫೀಸಿಗೆ ಹೋಗುವುದು ಕಷ್ಟವೆಂದು ಮನೆಯಲ್ಲೇ ಕುಳಿತು ಕಾರ್ಯ ನಿರ್ವಹಿಸಲು ಕಂಪೆನಿಯಿಂದ ಒಪ್ಪಿಗೆ ಪಡೆದಿದ್ದಳು.ಆವಳಿಗೆ ಸತತ ಕುಳಿತು ಕಾರ್ಯನಿರ್ವಹಿಸಲು ಕಷ್ಟವಾಗತೊಡಗಿತು. ಬೆನ್ನು ಮತ್ತು ಹೊಟ್ಟೆ ನೋವು ತೀವ್ರವಾಯಿತು. ಊರಿನಿಂದ ಕರೆಮಾಡಿದ ಹಿರಿಯರು ಆರೋಗ್ಯದ ಅನುಪಾನ, ಮನೆಮದ್ದುಗಳನ್ನು ಹೇಳುತ್ತಿದ್ದರು.. ಏನು ಮಾಡಿದರೂ ಕಡಿಮೆಯಾಗಲಿಲ್ಲ.ತಡೆಯಲು ಅಸಾಧ್ಯವಾದಾಗ ವೈದ್ಯರಲ್ಲಿಗೆ ಕರೆದೊಯ್ಯಬೇಕಾಯಿತು. ಡಾಕ್ಟರ್ ಪರಿಶೀಲಿಸಿ "ಗರ್ಭಪಾತ್ರದ ಕೆಳಭಾಗ ತೆಳ್ಳಗಾಗಿದೆ. ಇನ್ನು ಬಹಳ ಜಾಗ್ರತೆ ಬೇಕು. ಎರಡು ದಿನ ಫುಲ್ ಬೆಡ್ ರೆಸ್ಟ್ ಬೇಕು.. ಅದಕ್ಕೋಸ್ಕರ  ಅಡ್ಮಿಟ್ ಆಗಿ" ಎಂದು ಹೇಳಿದರು. ಶಾಸ್ತ್ರಿ ನಿವಾಸದಲ್ಲಿ ಸಹಜವಾಗಿಯೇ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು. ಅಜ್ಜಿ "ಅವಳು ಕೆಲಸ ಬಿಡುವುದೇ ಒಳಿತು.ತುಂಬ ಹೊತ್ತು ಕುಳಿತುಕೊಂಡು ಕಂಪ್ಯೂಟರ್ ಮುಂದೆ ಕೆಲಸ ಮಾಡುವುದು ಬೇಡ "ಎಂದು ಒಂದೇ ಸಮನೆ ಹೇಳುತ್ತಿದ್ದರು.ಗರ್ಭಿಣಿಗೆ ಅತ್ತಿತ್ತ ಓಡಾಡುವ, ಬೇರೆ ಬೇರೆ ಭಂಗಿಯಲ್ಲಿ ಕೆಲಸ ಮಾಡುವ ಅವಕಾಶ ಬೇಕು .. ಎಂದು ಅವರ ಅಭಿಪ್ರಾಯವಾಗಿತ್ತು.

    ಮಂಗಳಮ್ಮನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಬೇಗ ಬೇಗನೆ ಬಟ್ಟೆ ಬರೆಯನ್ನು ತುಂಬಿಸಿಕೊಂಡು ರೆಡಿಯಾಗಿದ್ದರು.ಹೆಣ್ಣು ಮಕ್ಕಳು ಯಾರು ಜೊತೆಗಿಲ್ಲದೆ ಆಸ್ಪತ್ರೆಯಲ್ಲಿ ಮಗಳು ಹೇಗೆ ಇರುತ್ತಾಳೋ ಎಂದು ಆತಂಕ ಒಂದು ಕಡೆ.ಅಳಿಯ ಕಿಶನ್ ಚೆನ್ನಾಗಿ ನೋಡಿಕೊಂಡಾನು ಎಂಬ ಭರವಸೆ ಮತ್ತೊಂದು ಕಡೆ.ಭಾಸ್ಕರ ಶಾಸ್ತ್ರಿಗಳು ಮಡದಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೊರಟರು ‌.ಸದಾ ಅಕ್ಕನನ್ನು ರೇಗಿಸುತ್ತಿದ್ದ ತಮ್ಮ ಮಹೇಶನ ಮುಖ ಕಳೆಗುಂದಿತು..

      ವಿಷಯ ತಿಳಿಯುತ್ತಿದ್ದಂತೆ ಶಂಕರ ಶಾಸ್ತ್ರಿಗಳು,ಗಾಯತ್ರಿ ಆಸ್ಪತ್ರೆಗೆ ಧಾವಿಸಿದ್ದರು.ಮೈತ್ರಿಯ ಜೊತೆಗೆ ಗಾಯತ್ರಿ ಚಿಕ್ಕಮ್ಮ ತಾನು ನಿಂತಳು.."ಅಕ್ಕ ಬರುವಲ್ಲಿವರೆಗೆ ನಾನು ನಿಲ್ಲುತ್ತೇನೆ.. ನೀವು ಒಂದು ದಿನ ರಜೆ ಹಾಕಿ ಮನೆಕಡೆ ನೋಡಿಕೊಳ್ಳಿ "ಎಂದು ಪತಿಯಲ್ಲಿ ಹೇಳಿದರು..


                  *****

          ಮುರಳಿ ಹಾಗೂ ಮಹತಿಯ ಸಂಸಾರ ಒಂದು ಗತಿಯಲ್ಲಿ ಸಾಗುತ್ತಿತ್ತು. ಮುರಳಿ ಯಾವುದಕ್ಕೂ ಮಡದಿಯನ್ನು ಆಕ್ಷೇಪಿಸುತ್ತಿರಲಿಲ್ಲ... ಒತ್ತಾಯಿಸುತ್ತಿರಲಿಲ್ಲ.. ಊರಿಗೆ ನಾಲ್ಕು ಸಲ ಹೋಗಿ ಬಂದಾಗಲೂ ಒಬ್ಬನೇ ಹೋಗಿ ಬಂದಿದ್ದ.ಮಡದಿಯಲ್ಲಿ ಬರುತ್ತೀಯಾ...ಎಂದು ಕೇಳುತ್ತಿದ್ದ.. ಅವಳು ನಾನು ಬರುವುದಿಲ್ಲ ..ಎಂದರೆ ಅಷ್ಟೇ.. ಮುಂದೆ  ಮಾತನಾಡುವುದು ಬಿಟ್ಟು ತಾನೇ ಹೋಗಿಬರುತ್ತಿದ್ದ.

       ಅಮ್ಮ ಶಶಿ ಆರಂಭದಲ್ಲಿ ಮುರಲಿಯಲ್ಲಿ ಹೆಚ್ಚು ಮಾತನಾಡದಿದ್ದರೂ ನಂತರ ಕೆಟ್ಟ ಘಟನೆಯನ್ನು ಮರೆತು ಬಿಟ್ಟಿದ್ದರು..ಮಗನಲ್ಲಿ ಬಾಯ್ತುಂಬಾ ಮಾತನಾಡಿ ,ಮಹತಿಯ ಸುದ್ದಿಯನ್ನು ಕೇಳುತ್ತಿದ್ದರು...ಮಗ ಬಂದನೆಂದರೆ ಅವನಿಗೆ ಇಷ್ಟವಾದ ಅಡುಗೆ ,ತಿಂಡಿಗಳನ್ನು ತಪ್ಪದೇ ಮಾಡಿ ಇಡುತ್ತಿದ್ದರು..ಹಣ್ಣು ಹಂಪಲು ತರಕಾರಿಗಳನ್ನು ಬೆಂಗಳೂರಿಗೆ ಕೊಟ್ಟು ಕಳುಹಿಸುತ್ತಿದ್ದರು. ಆದರೆ ಅವುಗಳು ಯಾವುವೂ ಮಹತಿಯ ಮನಸ್ಸನ್ನು ಬದಲಾಯಿಸಲಿಲ್ಲ. ಒಮ್ಮೆ ಆಕೆಗೆ ಋಣಾತ್ಮಕ ಭಾವನೆ ಬಂದರೆ ಮುಗಿಯಿತು. ಅಷ್ಟು ಬೇಗನೆ ಮನಸ್ಸು ಬದಲಾಗುವುದಿಲ್ಲ..ದೇಹದ ಗಾಯ ಬೇಗ ಮಾಸುತ್ತದೆ ..ಆದರೆ ಮನಸ್ಸಿಗಾದ ಗಾಯ ಮಾಸಲು ಸಮಯ ಬೇಕು.. ಕೆಲವೊಮ್ಮೆ ಗಾಯಮಾಸುವುದೇ ಇಲ್ಲ.ವರ್ಷಾನುಗಟ್ಟಲೆ ಉಳಿದು ಬಿಡುತ್ತವೆ.


       ಮುರಳಿಗೆ ಉದ್ಯೋಗ ಸಿಕ್ಕಿದ ನಂತರ ಪ್ರತಿ ತಿಂಗಳು ಅವನ ಸಂಬಳದಲ್ಲಿ ನಿರ್ದಿಷ್ಟ ಮೊತ್ತ ತಂದೆ-ತಾಯಿಗೆ ಕಳುಹಿಸಿಕೊಡುತ್ತಿದ್ದ. ಯಾವಾಗ ಶಶಿ ಮತ್ತು ಮಹತಿಗೆ ಕಿತ್ತಾಟವಾಯಿತೋ ಅಂದಿನಿಂದ  ಮನೆಗೆ ಹಣ ಕಳುಹಿಸುವುದು ನಿಲ್ಲಿಸಿದ. ಮುರಲಿಗೆ ತಾಯಿಯ ನಡೆಯಿಂದ ಬಹಳವೇ ಬೇಸರವಾಗಿದೆ. ಜೊತೆಗೆ ಮಹತಿ ಎಲ್ಲಾ ಹಣಕಾಸಿನ ವಿಚಾರದಲ್ಲಿ ಬಹಳ ಶಿಸ್ತಿನಿಂದ ಲೆಕ್ಕಚಾರ ಇಡುತ್ತಿದ್ದಳು. ಗಂಡನ ಸಂಪಾದನೆ ಒಂದು ಚೂರೂ ಹೊರ ಹೋಗದಂತೆ ಎಚ್ಚರವಹಿಸಿ ಗಂಡನಿಗೆ ಸಲಹೆ ನೀಡುತ್ತಿದ್ದಳು.ಮಹತಿಯೊಂದಿಗಿನ ಬೇಸರ ಅವಳ ಕಾಳಜಿ,ಅನುರಾಗ ಬಾಂಧವ್ಯದಲ್ಲಿ ಬಹಳ ಬೇಗ ದೂರವಾಗಿತ್ತು..ನವ ಜೋಡಿ ಶೃಂಗಾರ ಭಾವದ ಗುಂಗಿನಲ್ಲಿ ಮತ್ತೆ ಒಟ್ಟಾಗಿ ತಮ್ಮ ಭವಿಷ್ಯದತ್ತ ಗಮನಹರಿಸಿದರು.



       "ನೀವು ಕಷ್ಟಪಟ್ಟು ದುಡಿದ ಹಣವನ್ನು ಬೇಕಾಬಿಟ್ಟಿ ಮನೆಯವರಿಗೆ ಕಳುಹಿಸುತ್ತಿದ್ದರೆ ಅವರಿಗೆ ಅದರ ಬೆಲೆ ತಿಳಿದಿರುವುದಿಲ್ಲ. ಆದ್ದರಿಂದ ಆ ರೀತಿ ಹಣ ಕಳುಹಿಸುವುದು ಬೇಡ .. ಅಲ್ಲಿ ನಿಮ್ಮ ತಮ್ಮನೂ ಇದ್ದಾನೆ ..ಅವನೂ ದುಡಿದು ಸಂಪಾದಿಸಲಿ.". ಎಂದು ಖಡಕ್ಕಾಗಿ ಹೇಳಿದಳು. "ಅವರ ಜೀವನಕ್ಕೆ ತಕ್ಕ ದುಡಿಯುವಂತಹ ಶಕ್ತಿ ಅವರಿಗಿದೆ. ಇಲ್ಲದಿದ್ದಲ್ಲಿ ಇಷ್ಟು ಕಾರುಬಾರು ಮಾಡುತ್ತಿರಲಿಲ್ಲ. .."ಎಂಬುದು ಅವಳ ವಾದ. ಮುರಲಿಗೆ ಮಡದಿಯ ಮಾತನ್ನು ತಿರಸ್ಕರಿಸುವಂತೆ ಇರಲಿಲ್ಲ .


         ವೆಂಕಟನಿಗೆ ಹೇಳುವಂತಹ ಸಂಪಾದನೆ ಏನೂ ಇರಲಿಲ್ಲ. ಇದ್ದದ್ದು ಅವನ ಖರ್ಚಿಗೆ, ಮನೆಗೆ ಸಣ್ಣಪುಟ್ಟ ಸಾಮಾನುಗಳನ್ನು ತರುವುದಕ್ಕೆ ಸರಿಹೋಗುತ್ತಿತ್ತು. ಹಿರಿಯರಿಂದ ಬಂದ ಸಾಗುವಳಿ ಭೂಮಿ ಧಾರಾಳವಿತ್ತು..ತೀರಾ ಇತ್ತೀಚಿನವರೆಗೂ ಮುತುವರ್ಜಿಯಿಂದ ಕೃಷಿ ಮಾಡಿಸುತ್ತಿದ್ದರು. ಆದರೆ ಈಗ ಮಗನ ಸಂಪಾದನೆ ಕುಳಿತಲ್ಲಿಗೇ ಸಿಗುತ್ತಿದ್ದುದರಿಂದ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿರಲಿಲ್ಲ.. ಹಿಂದೆ ದುಡಿದು ಕೂಡಿಟ್ಟ ದುಡ್ಡಿದ್ದರೂ ಅದನ್ನು ಬಳಸದೆ ಜೋಪಾನವಾಗಿ ಇಟ್ಟಿದ್ದರು.ಮಗನ ಸಂಪಾದನೆಯಿಂದ ಖುಷಿಯಾಗಿದ್ದ ಶಂಕರ ರಾಯರು ಶಶಿ ದಂಪತಿಗಳಿಗೆ ಈಗ ಒಮ್ಮಿಂದೊಮ್ಮೆಲೆ  ಕೈ ಕಟ್ಟಿದಂತಾಯಿತು.

      ಮಹತಿ ಹಠಮಾರಿಯಾದರೂ ಬಹಳ ಬುದ್ಧಿವಂತೆ.. ತನ್ನ ಕುಟುಂಬದ ಒಳಿತಿಗಾಗಿ ಸದಾ ಚಿಂತನೆ ಮಾಡುತ್ತಿರುವವಳು. ಅವಳ ದೂರದರ್ಶಿತ್ವ, ಹಣವನ್ನು ಕೂಡಿಡುವ ಕ್ರಮ ಮುರಳಿಗೆ ಇಷ್ಟವಾಗಿತ್ತು. ಮಹತಿ ಉದ್ಯೋಗಕ್ಕೆ ಸೇರಿದಂದಿನಿಂದಲೇ ಎಲ್ಲ ಹಣವನ್ನು ಕೂಡಿಡುತ್ತಿದ್ದಳು. ಅವಳ ಖರ್ಚಿಗೆ ಅಪ್ಪ ಕೊಡುತ್ತಿದ್ದ ದುಡ್ಡು ಸಾಕಾಗುತ್ತಿತ್ತು.. ಇದರಿಂದ ಅವಳಲ್ಲಿ ಮುರಳಿಗಿಂತ ಅಧಿಕ ಉಳಿತಾಯದ ಹಣವಿತ್ತು.


       "ನಾವು ಒಂದು ಫ್ಲ್ಯಾಟ್ ಕೊಳ್ಳೋಣ" ಎಂದು  ಮಹತಿ ಪತಿಯನ್ನು ಒತ್ತಾಯಿಸಿದಳು. ಇಬ್ಬರ ಉಳಿತಾಯದ ಹಣ ,ಮಾಡಿಸಿದ ಎಲ್ಐಸಿ ಪಾಲಿಸಿಗಳು ಹಾಗೂ ತೆಗೆದುಕೊಳ್ಳಬಹುದಾದ ಲೋನ್ ಎಲ್ಲವನ್ನು ಮಹತಿ ನಿಖರವಾಗಿ ಲೆಕ್ಕ ಹಾಕಿಕೊಂಡು ಪ್ಲಾನ್ ಮಾಡಿದ್ದಳು. ಮನೆ ಹುಡುಕಾಟ ಆರಂಭವಾಯಿತು. ತಮ್ಮ ಉದ್ಯೋಗಕ್ಕೆ ಅನುಕೂಲವಾಗುವಂತಹ ಸ್ಥಳದಲ್ಲಿ ಇರುವ ಫ್ಲಾಟುಗಳ ಕಡೆಗೆ ಗಮನಹರಿಸಿದರು.ಮಗಳು ಅಳಿಯ ಮನೆ ಹುಡುಕುವುದು ಗೊತ್ತಾದ ಕೂಡಲೇ ಸತ್ಯನಾರಾಯಣ ರಾಯರು ಅಳಿಯನಲ್ಲಿ "ಏನಾದರೂ ಸಹಾಯ ಬೇಕಾದರೆ ಕೇಳಲು ಹಿಂಜರಿಯಬೇಕಿಲ್ಲ "ಎಂದರು.


       ಮುರಳಿ ಮಹತಿ ಆಗಾಗ ಮಹತಿಯ ತವರು ಮನೆಗೆ ತೆರಳುತ್ತಿದ್ದರು. ಅಲ್ಲಿ ಬಹಳ ಗೌರವಾದರಗಳು ದೊರೆಯುತ್ತಿದ್ದವು.ಅಷ್ಟೇ ಅಲ್ಲದೆ ಸತ್ಯನಾರಾಯಣರವರು ಮತ್ತು ಸ್ವರ್ಣ ಎಲ್ಲಾ ವಿಧದಿಂದಲೂ ಮಗಳು ಅಳಿಯನ ಕಾಳಜಿ ಮಾಡುತ್ತಾ, ಸಲಹೆ ಕೊಡುತ್ತಾ, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಧೈರ್ಯ ತುಂಬುತ್ತಿದ್ದರು. ಇದರಿಂದಾಗಿ ಮುರಳಿ ದಿನದಿಂದ ದಿನಕ್ಕೆ ಮಡದಿಯ ತವರಿನ ಕಡೆಗೆ ವಾಲುತ್ತಿದ್ದ.. ಅವರೇ ಆಪ್ತವಾಗತೊಡಗಿದರು.. ಸ್ವಲ್ಪ ಸ್ವಲ್ಪವೇ ತನ್ನ ತಂದೆ-ತಾಯಿ, ತಮ್ಮನಿಂದ ಮಾನಸಿಕವಾಗಿ ದೂರವಾಗುತ್ತಿದ್ದ..


ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
09-07-2020.



Tuesday, 7 July 2020

ಜೀವನ ಮೈತ್ರಿ ಭಾಗ ೧೦೨(102)



ಜೀವನ ಮೈತ್ರಿ ಭಾಗ ೧೦೨


     ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ಶಂಕರ ಶಾಸ್ತ್ರಿಗಳು "ಮುರಲಿ.. " ಎನ್ನುತ್ತಾ ಏನೋ ಹೇಳಲು ಹೊರಟರು.ಅವರು ಹೇಳಿದ್ದಕ್ಕೆ ಸುಮ್ಮನೆ ತಲೆಯಾಡಿಸಿದ ಮುರಲಿ.

       ಕಾರಿನಿಂದ ಇಳಿದು ಮನೆಯೊಳಗೆ ತೆರಳಿ ಮಹೇಂದ್ರ ಗುಪ್ತಗೆ ಕರೆ ಮಾಡಿದರು.ನಾಲ್ಕನೇ ಬಾರಿ ರಿಂಗಾಗುತ್ತಿದ್ದಾಗ ಎತ್ತಿದ ಮಹೇಂದ್ರ ಗುಪ್ತ ಅವರಲ್ಲಿ ಶಂಕರ ಶಾಸ್ತ್ರಿಗಳು ವಿಷಯವನ್ನು ಸೂಕ್ಷ್ಮವಾಗಿ ಅರುಹಿ ಸಹಾಯ ಕೋರಿದರು.ನಾಳೆ ಬೆಳಿಗ್ಗೆ ನೋಡೋಣ ಎಂದರು ಮಹೇಂದ್ರ.

ಮಾವ..ಮುರಲಿಯಲ್ಲಿ "ಈಗ ಮಲಗೋಣ.. ಬೆಳಗ್ಗೆ ನೋಡೋಣ.."ಎಂದರು..ಮಲಗಿದರೂ ಮುರಲಿಗೆ ನಿದ್ರೆ ಸ್ವಲ್ಪವೂ ಸುಳಿಯಲಿಲ್ಲ..ತನ್ನ ನಡತೆಯಲ್ಲಿನ ತಪ್ಪು,ಅಮ್ಮನ ನಡವಳಿಕೆ,ಮಹತಿಯ ಹಠಮಾರಿತನ ಎಲ್ಲವನ್ನೂ ಮನದ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದ.

                      *****

        ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ಮಹತಿ ಬೆಳ್ಳಂಬೆಳಗ್ಗೆ ಯಾರೆಲ್ಲ ಕರೆ ಮಾಡಿದ್ದಾರೆಂಬ ಕುತೂಹಲ ತಡೆಯಲಾರದೆ ಸ್ವಿಚ್ ಆನ್ ಮಾಡಿದಳು.ಕಾಕತಾಳೀಯವಾಗಿ ಮಹೇಂದ್ರ ಗುಪ್ತ ಅದೇ ಸಮಮದಲ್ಲಿ ಕರೆಮಾಡಿದರು..ಅಯ್ಯೋ...ಈಗ ಏನು ಮಾಡಲಿ.. ನಿನ್ನೆ ಫುಲ್ ಮೂಡ್ ಆಫ್ ಆಗಿದ್ದಾಗ ಏನಾದರೂ ಎಡವಟ್ಟು ಮಾಡಿದೀನಾ.. ಅಥವಾ ನನ್ನ ಪರ್ಸನಲ್ ವಿಚಾರ ಗೊತ್ತಾಗಿದೆಯಾ..ಪರ್ಸನಲ್ ವಿಚಾರ ಗೊತ್ತಾಗುವ ಛಾನ್ಸೇ ಇಲ್ಲ.. ಬಾಸ್ ನ ಕರೆ ಸ್ವೀಕರಿಸದಿದ್ದರೆ ಆಫೀಸಿನಲ್ಲಿ ಎಲ್ಲರೆದುರು ಮಾನ ತೆಗೆಯೋದು ಗ್ಯಾರಂಟಿ.. ಎಂದು ಯೋಚಿಸುತ್ತಾ ಫೋನ್ ಕರೆ ಸ್ವೀಕರಿಸಿದಳು.

"ಹಲೋ ...ಮಹತಿ... ಗುಡ್ ಮಾರ್ನಿಂಗ್..
.. ನಿನ್ನೆ ನೀವು ಮನೆಗೆ ಒಯ್ದಿದ್ದ ಫೈಲು ಅಗತ್ಯವಾಗಿ ಇವತ್ತು ಬೆಳಿಗ್ಗೆ ಏಳುಗಂಟೆಗೆ ನನ್ನ ಕೈಗೆ ಸಿಗಬೇಕು.ಎಂಟೂರವರೆಗೆ ಹೈಯರ್ ಆಫೀಸರ್ಸ್ ಜತೆ ಮೀಟಿಂಗ್ ಇದೆ.ಅದಕ್ಕೂ ಮುನ್ನ ಇದನ್ನೆಲ್ಲ ರೆಡಿ ಇಟ್ಟುಕೊಳ್ಳಬೇಕು.ನಿಮ್ಮ ಮನೆ ವಿಳಾಸ ಹೇಳಿದರೆ ಅಲ್ಲೇ ಬಂದು ಕಲೆಕ್ಟ್ ಮಾಡಿಕೊಳ್ತೀನಿ.."ಎಂದಾಗ ಮಹತಿ 'ಇನ್ನೇನು ಮಾಡಲಿ..ಹೇಗೆ ಅಡ್ರೆಸ್ ಹೇಳಲಿ'..ಎಂದು ಪೇಚಿಗೆ ಸಿಲುಕಿದಳು.

         ಹೇಳದೆ ಬೇರೆ ದಾರಿಯಿರಲಿಲ್ಲ.. ಹೇಳಿದಳು.."ಸರಿ..ಇನ್ನು ಮೂವತ್ತು ನಿಮಿಷದಲ್ಲಿ ಅಲ್ಲಿ ಇರ್ತೇನೆ "ಎಂದರು ಬಾಸ್..

ಮುರಲಿ,ಶಂಕರ ಶಾಸ್ತ್ರಿಗಳು, ಮಹೇಂದ್ರ ಗುಪ್ತ ಮೂವರೂ ಮಹೇಂದ್ರ ಅವರ ವಾಹನದಲ್ಲಿ ತೆರಳಿದರು.ಮಹೇಂದ್ರಗುಪ್ತ ಮಾತ್ರ ಕಾರಿನಿಂದಿಳಿದರು.ಮಹತಿ ಫೈಲ್ ಹಿಡಿದು ಗೇಟಿನೆದುರು ಕಾಯುತ್ತಿದ್ದಳು.ಜತೆಗೊಬ್ಬಳು ತರುಣಿಯೂ ಇದ್ದಳು.ಫೈಲ್ ತೆಗೆದುಕೊಂಡ ಮಹೇಂದ್ರ ಗುಪ್ತ "ನಿಮಗಿನ್ನೊಂದು ಫೈಲ್ ಕೊಡುತ್ತೇನೆ.ಬೆಳಗ್ಗೆ ಹತ್ತೂವರೆಯಷ್ಟು ಹೊತ್ತಿಗೆ ಅದನ್ನು ರೆಡಿಮಾಡಿಡಿ..ಕಾರಿನಲ್ಲಿದೆ ಬನ್ನಿ ಕೊಡುತ್ತೇನೆ "ಎಂದರು.ಮಹತಿ ಕಾರಿನೆಡೆಗೆ ಹೆಜ್ಜೆ ಹಾಕಿದಳು.

ಕಾರಿನ ಸಮೀಪಕ್ಕೆ ಬಂದಾಗ .. ಹ್ಞಾಂ..ತನ್ನ ಕಣ್ಣನ್ನೇ ನಂಬದಾದಳು.. ಹಬ್ಬೀ ಮುರಲಿ ..!! ಶಂಕರ ಶಾಸ್ತ್ರಿಗಳು..!! ತಲೆಸುತ್ತು ಬರುವುದೊಂದು ಬಾಕಿ.ತನ್ನನ್ನು ಹುಡುಕಲು ಹೆಣೆದ ಬಲೆಯಿದು ಎಂದು ಕ್ಷಣದಲ್ಲೇ ಅರಿತಳು.. ಬಾಸ್'ನ ಎದುರು ತಲೆತಗ್ಗಿಸಿದಳು..


ಮಹತಿಯು ಮೌನವಾಗಿದ್ದಳು.ಮುರಲಿ ಕಾರಿನಿಂದಿಳಿದು ಮಡದಿಯ ಕೈಯನ್ನು ಹಿಡಿದು "ಸಾರಿ..ಕಣೇ..ಬಾ..ಮನೆಗೆ ಹೋಗೋಣ.." ಎಂದ..ಮಹತಿಯ ಜತೆಗಿದ್ದವಳು.".ಏನು..ಏನು ನಡೀತಾ ಇದೆ ಇಲ್ಲಿ.. "ಎನ್ನುತ್ತಾ ಮುರಲಿಯಲ್ಲಿ.. "ಯಾಕೋ.. ಅವಳ ಕೈ ಹಿಡಿದುಕೊಂಡಿದ್ದೀಯಾ .?". ಎಂದಳು.

"ನಮಸ್ತೇ..ನಾನು ಮುರಲಿ...ಮಹತಿ ನನ್ನ ಮಡದಿ "ಎಂದ ವಿನಯದಿಂದ..

"ಓಹ್..ಹಾಗೋ..ನನಗೆ ತಿಳಿದಿರಲಿಲ್ಲ..ಸಾರೀ.."ಎಂದಳು..ಮಹತಿಯ ಕಡೆಗೆ ತಿರುಗಿ" ಮತ್ತೆ ಯಾಕೆ ಇಲ್ಲಿ ಬಂದೆ ನೀನು.." ಎನ್ನುತ್ತಾ ಮಹತಿಯ ನಡೆಯನ್ನು ಆಕ್ಷೇಪಿಸಿದಳು..
ಮಹತಿಯ ಕಣ್ಣುಗಳಿಂದ ನೀರು ಜಿನುಗಲು ಆರಂಭವಾಯಿತು.ಮುರಲಿ ಅವಳ ಕಣ್ಣಂಚಿನಿಂದ ಜಿನುಗುತ್ತಿದ್ದ ನೀರು ಕೆಳಗೆ ಬೀಳದಂತೆ ಕಾಯ್ದ.."ಬಾ ಹೋಗೋಣ.. "ಎಂದು ಮನೆಗೆ ಕರೆದೊಯ್ಯುವ ಯೋಚನೆ ಮಾಡಿದ.

"ನನ್ನದೊಂದು ಕಂಡೀಷನ್ ಇದೆ" ಎಂದಳು ಗದ್ಗದಿತಳಾಗಿ..

"ಏನದು ಹೇಳು.."

"ನನಗೆ ನನ್ನಿಚ್ಛೆಯಂತೆ ಬದುಕಲು ಅವಕಾಶವಿದೆ ಎಂದಾದರೆ ಮಾತ್ರ ವಾಪಾಸಾಗುತ್ತೇನೆ. ಇಲ್ಲವಾದಲ್ಲಿ ನೀವು ,ನಿಮ್ಮಮ್ಮನೇ ಇದ್ದುಕೊಳ್ಳಿ.. ನಾನು ನನ್ನ ಹಾದಿಯನ್ನು ನೋಡಿಕೊಳ್ಳುತ್ತೇನೆ. ಪರರ ಹಂಗಿನಲ್ಲಿ ನಿತ್ಯವೂ ಚುಚ್ಚುನುಡಿ ಕೇಳುತ್ತಾ ಬಾಳಲು ನನಗಿಷ್ಟವಿಲ್ಲ.."ಎಂದಳು..

"ಅಮ್ಮ ಊರಿಗೆ ತೆರಳಿದ್ದಾರೆ.ಇನ್ನು ನಾನು ನೀನು ಇಬ್ಬರೇ ಇರೋದು.. ನಾನು ನಿನ್ನ ಇಷ್ಟಕ್ಕೆ ಭಂಗ ತರುವವನಲ್ಲ.. ಪ್ಲೀಸ್..ಬಾ.."
ಎಂದಾಗ ಹೊರಟಳು ಮಹತಿ...ಪ್ರಕರಣ ಸುಖಾಂತ್ಯವಾಯಿತೆಂದು ನಿಟ್ಟುಸಿರು ಬಿಟ್ಟರು ಶಂಕರ ಶಾಸ್ತ್ರಿಗಳು.

        ‌.           *******

        ದಿಢೀರನೆ ಬೆಂಗಳೂರಿನಿಂದ ಮಡದಿ ವಾಪಾಸಾಗುವ ಸುದ್ದಿ ಕೇಳಿ ಶಂಕರರಾಯರಿಗೆ ಸ್ವಲ್ಪ ಅನುಮಾನ ಹುಟ್ಟಿಕೊಂಡಿತು.ಶಶಿ ಏನಾದರೂ ಅಧಿಪತ್ಯ ಸಾಧಿಸಲು ನೋಡಿ ಸಂಬಂಧ ಹಳಸಿರಬಹುದೇ.. ನಿನ್ನೆ ನಾನು ಮಾತನಾಡಿದಾಗ ಎರಡು ದಿನಗಳ ನಂತರ ಬರುತ್ತೇನೆ ಎಂದವಳು ಇಂದೇ ಹೊರಟಿದ್ದಾಳೆಂದರೆ..ಯಾವುದಕ್ಕೂ ಮನೆಗೆ ಬಂದ ಮೇಲೆ ಕೇಳಿ ನೋಡೋಣ..

ವೆಂಕಟ್ ಬಸ್ ಇಳಿಯುವಲ್ಲಿಗೆ ಹೋಗಿ ಅಮ್ಮನನ್ನು ಕರೆದುಕೊಂಡು ಬರುವಾಗ "ಏನಮ್ಮಾ.. ಇದ್ದಕ್ಕಿದ್ದಂತೆ ಬಂದುಬಿಟ್ಟೆ..?"ಎಂದು ಕೇಳಿದ.

"ಏನು ಹುಡುಗೀರೋ ಏನೋ..ಈಗಿನ ಕಾಲದವರು..ಬುದ್ಧಿವಾದ ಹೇಳುವಂತೆಯೇ ಇಲ್ಲ..ಅವರು ಮಾಡಿದ್ದೇ ಸರಿ...ಅಲ್ಲ ಸ್ವಲ್ಪವೂ ತಿಳಿಹೇಳಬಾರದಾ..?"

"ಏನಾಯ್ತಮ್ಮಾ..ಅಂತಹದ್ದು..?"

"ಅರೆಬರೆ ಮೈ ತೋರುವ ಬಟ್ಟೆ ಧರಿಸುವ ಅಗತ್ಯವೇನು..?ಹೊಟ್ಟೆಗೆ ಬಟ್ಟೆಗೆ ಕೊರತೆಯಿದೆಯೇ..?ನಮ್ಮ ಸಂಪ್ರದಾಯ ಹೀಗಿದೆ..ಇದರಂತೆ ನಡೆದುಕೋ ಎಂದರೆ ತಪ್ಪಾ..ನನಗೂ ಮದುವೆಯಾದ ಆರಂಭದಲ್ಲೇ ನಮ್ಮತ್ತೆ ಮನೆಯ ಸಂಪ್ರದಾಯ ನೇಮ ನಿಷ್ಠೆ ಗಳನ್ನು ತಿಳಿಸಿ ಹೇಳುತ್ತಿದ್ದರು.."
ಅಮ್ಮನ ಮಾತುಗಳನ್ನು ಕೇಳಿದ ವೆಂಕಟ್'ಗೆ ಪರಿಸ್ಥಿತಿ ಅರಿವಾಯಿತು..


              *******


       ಮಹತಿಯ ಬಾಸ್ ಮಹೇಂದ್ರ ಗುಪ್ತ, ಶಂಕರ ಶಾಸ್ತ್ರಿಗಳ ಹಳೆವಿದ್ಯಾರ್ಥಿ.ಮಹತಿಯನ್ನು ಹುಡುಕುವ ಉಪಾಯ ಮಾಡುತ್ತಿದ್ದಾಗ ಶಂಕರ ಶಾಸ್ತ್ರಿಗಳಿಗೆ ತಮ್ಮ ವಿದ್ಯಾರ್ಥಿಯ ಸಹಾಯ ಪಡೆದುಕೊಳ್ಳೋಣ ಎಂದೆನಿಸಿತು.ಮಹೇಂದ್ರ ಗುಪ್ತ ಕೂಡಾ ತನ್ನ ಲೆಕ್ಚರರ್ ಮಾತಿಗೆ ಬೆಲೆಕೊಟ್ಟು ಅವಳನ್ನು ಹುಡುಕಲು ಯೋಜನೆ ರೂಪಿಸಿದರು.

      ಅವಳು ಇರುವ ಸ್ಥಳ ತಿಳಿದು ಅಲ್ಲಿಗೆ ತೆರಳುವ ದಾರಿಯುದ್ದಕ್ಕೂ ಮಾವ, ಅಳಿಯ ಮುರಲಿಗೆ ಬುದ್ಧಿಮಾತು ಹೇಳಿದರು.ಇನ್ನು ಮುಂದೆ ಹೀಗಾಗದಂತೆ ನೋಡಿಕೋ ಎಂದರು..

"ಮುರಲಿ... ಮದುವೆಯಾದ ಮೇಲೆ ಮಡದಿಯ ಮನಸ್ಸನ್ನು ಅರ್ಥಮಾಡಿಕೊಂಡು ನಡೆಯಬೇಕು.ಮಹತಿ ನೇರ ನಡೆನುಡಿಯ ಹೆಣ್ಣುಮಗಳು.ಇಂತಹವರಿಗೆ ಎಲ್ಲರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಬಹುದು.ಹಾಗೆಂದು ನಾವು ತೀರಾ ಒತ್ತಡ ಹೇರಬಾರದು.ಅಮ್ಮ ಶಶಿಗೆ ಜೊತೆಯಾಗಿ ತಂದೆ ಇದ್ದಾರೆ.ಸಣ್ಣಮಗ ವೆಂಕಟನೂ ಇದ್ದಾನೆ.ಈಗ ಮಹತಿಗೆ ನೀನೇ ಬೇಕು.ನೀನೂ ಅವಳ ಮಾತಿಗೆ ಬೆಲೆಕೊಡದಿದ್ದರೆ ಅವಳಾದರೂ ಏನು ಮಾಡಿಯಾಳು...? ತವರಿನಲ್ಲಿ ಎಲ್ಲವನ್ನೂ ಹೇಳಿಕೊಳ್ಳಲು ಸಾಧ್ಯವಿಲ್ಲ.

       ಅಮ್ಮ ಮಗನನ್ನು ಪ್ರೀತಿಯಿಂದಲೇ ನಡೆಸಿಕೊಳ್ಳಬಹುದು.ಆದರೆ ಸೊಸೆಯನ್ನು ಅಷ್ಟೇ ಆದರದಿಂದ ನಡೆಸಿಕೊಂಡ ಉದಾಹರಣೆಗಳು ಸಿಗುವುದು ವಿರಳ.ಇದ್ದರೆ ಅದು ಕುಟುಂಬದ ಸೌಭಾಗ್ಯ. ಸೊಸೆಯಾದವಳಲ್ಲಿ ತಗ್ಗಿ ಬಗ್ಗಿ ನಡೆಯುವ ವಿನಯವಿದ್ದರೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ.ಇಲ್ಲವಾದಲ್ಲಿ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ.ನೇರ ನಡೆಯವರು ಮೇಲ್ನೋಟಕ್ಕೆ ಒರಟರಂತೆ ಕಂಡರೂ ಅವರೊಳಗೂ ಮೃದು ಹೃದಯವಿದೆ.ಕುಟುಂಬದ ಕಾಳಜಿಯಿದೆ.ಅವರನ್ನು ಅರ್ಥೈಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.
ಅಮ್ಮ ಮಡದಿಯನ್ನು ಆಡಿದರೆ  ... ಇಷ್ಟು ಮುಂದುವರಿಯುವ ಮುನ್ನವೇ ಅಮ್ಮಾ ..ಸುಮ್ಮನಿರು..ಅವಳಿಷ್ಟದಂತಿರಲಿ..ಅಂದರೂ ತಪ್ಪಿಲ್ಲ..ಅದು ನಿನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಇರುವ  ಮಾರ್ಗ
ಅಥವಾ ಮಡದಿಯ ಮನವೊಲಿಸಿ ಅಮ್ಮ ಹೇಳಿದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡ.. ಎಂದು ರಮಿಸಿ ,ಅಲ್ಲಿಯೇ ತಿಳಿಗೊಳಿಸಬೇಕು.


      ನನಗೆ ಇಂತಹ ವಿಚಾರ ಬಂದಾಗ ಯಾವಾಗಲೂ ಮಂಗಳತ್ತೆ ನೆನಪಾಗುತ್ತಾರೆ.. ಅಜ್ಜಿ ಆಗಾಗ ಏನಾದರೊಂದು ತಗಾದೆ ತೆಗೆಯುತ್ತಲೇ ಇರುತ್ತಾರೆ.. ಭಾಸ್ಕರ ಮಾವನೂ ಅಮ್ಮನ ಕಡೆಯೇ..ಪಾಪ..ಮಂಗಳತ್ತೆ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಏನೂ ಆಗಿಲ್ಲವೆಂಬಂತೆ ಬದುಕುತ್ತಾರೆ..ಇಂತಹ ತಾಳ್ಮೆ ಎಲ್ಲರಲ್ಲಿಯೂ ಹುಡುಕುವುದು ತಪ್ಪು.ಗಾಯತ್ರಿ ಅತ್ತೆಯನ್ನು ಹಾಗೆ ಅಂದದ್ದೇ ಆದಲ್ಲಿ ಆಕೆ ತಿರುಗಿ ನಾಲ್ಕು ಮಾತಿನೇಟು ಬೀಸಿಯೇ ತನ್ನಿಚ್ಛೆಯಂತೆ ಬದುಕುತ್ತಿದ್ದಳು.. ಗಾಯತ್ರಿಯ ಈ ನಡವಳಿಕೆ ಗೊತ್ತಿದ್ದ ಕಾರಣ ಅಜ್ಜಿ ಸಣ್ಣ ಸೊಸೆಯನ್ನು ಆಡಲು ಹಿಂಜರಿಯುತ್ತಾರೆ.ಹೊಂದಾಣಿಕೆ ಮಾಡಿಕೊಳ್ಳುವ ದೊಡ್ಡ ಸೊಸೆಯೇ ಅವರ ಟಾರ್ಗೆಟ್..ಇದೇ ಅಭ್ಯಾಸ ಶಶಿಗೂ ಬಂದಿದೆ.ಈಗ ಮಡದಿಯನ್ನು ಸುಖವಾಗಿ ನೋಡಿಕೊಳ್ಳುವುದು ನಿನ್ನ ಜವಾಬ್ದಾರಿ.ಒಮ್ಮೆ ಸಂಸಾರ ಹಾಳಾದರೆ ಮತ್ತೆ ಹಳಿಗೆ ತರುವುದು ಸುಲಭದ ಮಾತಲ್ಲ.ಅಮ್ಮ ಇಂದು ಮುನಿದರೆ ಇನ್ನು ಕೆಲವು ಸಮಯದಲ್ಲಿ ಮರೆತಾರು..ಉದ್ಯೋಗದಲ್ಲಿದ್ದು ಸ್ವಾತಂತ್ರ್ಯ ಬಯಸುವ ಹೆಣ್ಣು ಸಿಡುಕಿನಿಂದ ತೆರಳಿ ವಿಚ್ಛೇದನಕ್ಕೆ ಮುಂದಾದರೆ ಕಷ್ಟ..ಅಹಂ ಎಂಬುದು ಸಂಸಾರವನ್ನು ಹಾಳು ಮಾಡದಂತೆ ಕಾಪಾಡಿಕೋ.."
ಮಾವನ ಅನುಭವದ ಹಿತನುಡಿಗಳು ಅಕ್ಷರಶಃ ಸತ್ಯ ಎಂದೆನಿಸಿತು ಮುರಲಿಗೆ.

                   ********

         ತನ್ನ ಜೊತೆಗೆ ಮನೆಗೆ ಹಿಂದಿರುಗಿದ ಮಹತಿಯನ್ನು ರಮಿಸಬೇಕು, ಸಮಾಧಾನಿಸಿ ಸಂತಸಪಡಿಸಬೇಕು ಎಂದುಕೊಂಡಿದ್ದ ಮುರಲಿ.ಆದರೆ ಮಹತಿ ಅದನ್ನೆಲ್ಲ ಬಯಸಲಿಲ್ಲ.ಅತ್ತೆಯ ಮೇಲಿನ ಅವಳ ಸಿಟ್ಟನ್ನೆಲ್ಲಾ ಹೊರಹಾಕಿದಳು.ಮುರಲಿಯನ್ನೂ ಮಾತಿನಿಂದ ಚುಚ್ಚಿದಳು.ಮೌನವಾಗಿ ಕೇಳಿಸಿಕೊಂಡ ಮುರಲಿ.ಗಂಡ ಏನೂ ಪ್ರತಿಕ್ರಿಯೆ ಕೊಡದಿದ್ದಾಗ ತಾನೇ ಆಯಾಸಗೊಂಡು  ಮಾತಿನ ಪ್ರಹಾರವನ್ನು ನಿಲ್ಲಿಸಿದಳು.ಆಫೀಸಿಗೆ ಹೊರಡತೊಡಗಿದಳು.ಮುರಲಿಯೂ ಹೊರಟ.ಮಾತಿಲ್ಲ ..ನಗೆಯಿಲ್ಲ..ನವಜೋಡಿಯ ನಡುವೆ ತುಂಟತನವಿಲ್ಲ..ಅಹಂ, ನೇರ ನುಡಿ ಎಲ್ಲವನ್ನೂ ನುಂಗಿಹಾಕಿತ್ತು... ಉದ್ಯೋಗ, ಸಂಪಾದನೆ ಇದ್ದರೂ ಮಧುರವಾದ, ಸರಸಮಯ ಭಾವನೆಗಳಿಗೆ ಬರವಿತ್ತು.


ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
08-07-2020.


Monday, 6 July 2020

ಜೀವನ ಮೈತ್ರಿ ಭಾಗ ೧೦೧(101)




ಜೀವನ ಮೈತ್ರಿ ಭಾಗ ೧೦೧



        ಗಣೇಶ ಶರ್ಮರ ಮನೆ ಕುಂಪೆಯ 'ಶಂಕರನಿಲಯ' ಖುಷಿಯಿಂದ ತುಂಬಿದ್ದ ಇಂತಹ ಸಂದರ್ಭದಲ್ಲಿ ಮನೆ ಮುಂದೆ ನಾಗರಹಾವೊಂದು ಹೆಡೆಯೆತ್ತಿ ನಿಂತಿತ್ತು.ಅದನ್ನು ಕಂಡ ಮಮತಮ್ಮ ಹೌಹಾರಿದರು.ಗಂಡನನ್ನು ಕೂಗಿದರು..ಗಣೇಶ ಶರ್ಮ ಬಂದವರೇ ನಾಗಪ್ಪನನ್ನು ಕಂಡು "ನಾಗಪ್ಪಾ.. ಹೀಗೆ ಕಾಣಿಸಿಕೊಂಡು ಭಯಪಡಿಸಬೇಡ. ನಿನಗೆ ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇನೆ. ಮಗನ ಮದುವೆಯಾಯಿತು ..ಸಿಹಿ ಸುದ್ದಿಯೂ ಬಂತು..ಆದರೂ ನನ್ನ ಕಟ್ಟೆ ಇನ್ನೂ ಸರಿ ಮಾಡಲು ಹೊರಟಿಲ್ಲ ಏಕೆ?.. ಎಂದು ತಾನೇ ನಿನ್ನ ಅಹವಾಲು.. ದೀಪಾವಳಿ ಹಬ್ಬದ ನಂತರ ಒಂದು ಶುಭ ಮುಹೂರ್ತದಲ್ಲಿ ನಾಗನಕಟ್ಟೆಯ ಪುನರುತ್ಥಾನ ಕಾರ್ಯವನ್ನು ಕೈಗೊಳ್ಳುತ್ತೇವೆ..ಅಲ್ಲಿಯವರೆಗೆ ತೊಂದರೆ ಕೊಡದಿರು.."ಎನ್ನುತ್ತಾ ಕೈಮುಗಿದಾಗ ಎತ್ತಿದ ಹೆಡೆಯನ್ನು ಕೆಳಗೆ ಹಾಕಿ ಸರ್ರನೆ ಹರಿದು ಹೋಯಿತು..ಇಬ್ಬರೂ ನಿಟ್ಟುಸಿರು ಬಿಟ್ಟರು.ಇವತ್ತೇ ಈ ಸಮಾಚಾರ ಮಗನಲ್ಲಿ ಮಾತನಾಡಬೇಕು.ನಾಗನ ಕಟ್ಟೆ ,ದೈವದ   ಕಟ್ಟೆ ನಿರ್ಮಾಣದ ಖರ್ಚು ಲಕ್ಷ ದಾಟಬಹುದು. ಎಂದು ಮನದಲ್ಲೇ ಲೆಕ್ಕಾಚಾರ ಹಾಕಿದರು.


             ********


     ಶಶಿ ಮುರಲಿಯ ಮನೆಗೆ ಹೋಗುವ ವಿಚಾರ ಗಂಡನಲ್ಲಿ ಪ್ರಸ್ತಾಪಿಸಿದಾಗ ಶಂಕರ ರಾಯರು "ಈಗಲೇ ಬೇಡ..ಮದುವೆಯಾದ ಹೊಸದರಲ್ಲಿ ಅವರದೇ ಆಸೆ, ಆಕಾಂಕ್ಷೆಗಳಿರುತ್ತವೆ.ಅವರ ಮಧ್ಯೆ ಇನ್ನೊಬ್ಬರು ಯಾಕೆ..? ಕೆಲವು ಸಮಯದ ಬಳಿಕ ಹೋಗಬಹುದು ಎಂದರು. ಶಶಿ ಮಾತ್ರ ತನ್ನ ಹಠ ಬಿಡಲಿಲ್ಲ."ಹಾಗಾದರೆ ನಿನ್ನಿಷ್ಟ "ಎಂದರು ಶಂಕರ ರಾಯರು.ಶಶಿ ಹೊರಡುವ ತಯಾರಿ ಮಾಡಿದಳು.ಮಗ ವೆಂಕಟನಲ್ಲಿ ಕರೆದೊಯ್ದು ಬಿಡುವಂತೆ ಕೇಳಿಕೊಂಡಳು.ವೆಂಕಟ್ ಅಮ್ಮನನ್ನು ಕರೆದುಕೊಂಡು ಅಣ್ಣನ ಮನೆಗೆ ಬಂದ.ತಾನೂ ಎರಡು ದಿನ ಉಳಿದುಕೊಳ್ಳುವ ಪ್ಲಾನ್ ಹಾಕಿದ್ದ.ಅಣ್ಣನಲ್ಲಿಗೆ ಬಂದಾಗ ಏನನಿಸಿತೋ ಏನೋ..ಒಂದೇ ದಿನದಲ್ಲಿ ವಾಪಾಸಾದ. ಹೊರಡುವ ಮುನ್ನ "ಅಮ್ಮ ನೀನು ಒಂದು ವಾರದಲ್ಲಿ ಬಾ..ನನಗೆ ಮತ್ತು ಅಪ್ಪನಿಗೆ ಇಬ್ಬರಿಗೇ ಮನೆ ನಿರ್ವಹಣೆ ಕಷ್ಟ".ಎಂದಿದ್ದ.


      ಅತ್ತೆ ಮನೆಯಲ್ಲಿದ್ದಾರೆಂದು ಮಹತಿ ಅಡುಗೆ ಮನೆ ಕಡೆ ತಲೆಹಾಕುವ ಗೋಜಿಗೆ ಹೋಗಲಿಲ್ಲ.ಸೊಸೆ ತನ್ನ ಪಾಡಿಗೆ ತಾನು ಇರುವುದನ್ನು ಕಂಡು ಶಶಿಗೂ ಸರಿಕಾಣಲಿಲ್ಲ. ಸಣ್ಣ ಪುಟ್ಟ ಕೆಲಸಗಳಿಗೆ ಕರೆಯುತ್ತಿದ್ದರು.ಆಗಾಗ ಸಲಹೆಗಳನು ಕೊಡುತ್ತಾ ,ಹೇಗೆ ಅಡುಗೆ ಮಾಡಬೇಕೆಂದು ಹೇಳಿಕೊಡುತ್ತಿದ್ದರು .ಮಹತಿಗೆ ಇದು ಕಿರಿಕಿರಿ ಎನಿಸಿತು.ರಾತ್ರಿ ಮಲಗುವ ಕೋಣೆಗೆ ತೆರಳಿದ ಮೇಲೆ ಗಂಡನಿಗೆ ಅತ್ತೆಯ ಮೇಲೆ ದೂರಿನ ಪಟ್ಟಿಯೇ ಇರುತ್ತಿತ್ತು.ಎರಡು ಮೂರು ದಿನ ಹೀಗೇ ನಡೆಯಿತು.ಮಡದಿ ಎಷ್ಟೇ ದೂರಿದರೂ ಮುರಲಿ ತುಟಿ ಪಿಟಿಕ್ ಎನ್ನಲಿಲ್ಲ.ಅಮ್ಮನೂ ಆಗಾಗ 'ಮಹತಿಗೂ ಅಡುಗೆ ಕಲಿಯುವಂತೆ ಹೇಳು' ಎಂದು ಹೇಳುತ್ತಿದ್ದರೆ ಅದಕ್ಕೂ ಅವನ ಮೌನವೇ ಉತ್ತರ.

         ನಾಲ್ಕನೇ ದಿನ ಶಶಿ ಬೇಕೆಂದೇ ಸ್ವಲ್ಪ ತಡವಾಗಿ ಎದ್ದರು.ಸೊಸೆ ಏನು ಮಾಡುತ್ತಾಳೆ ನೋಡೋಣ. ಎಂದು...ಅತ್ತೆಯಿದ್ದಾರೆಂದು ನಂಬಿದ ಅವಳೂ ಎಂದಿನಿಂದ ಹೆಚ್ಚು ಹೊತ್ತು ಸುಖವಾಗಿ ನಿದ್ರಿಸಿದ್ದಳು.ಎದ್ದು ಬಂದು ನೋಡಿದಾಗಲೇ ತಿಳಿದದ್ದು ಅತ್ತೆ ಎದ್ದಿಲ್ಲವೆಂದು.ಆಫೀಸಿಗೂ ಬೇಗ ಹೋಗಬೇಕು.. ತಿಂಡಿಯೂ ಮಾಡಬೇಕು.. ಗಡಿಬಿಡಿಯಲ್ಲಿ ಅಡುಗೆ ಮಾಡುತ್ತಾ ಮುರಲಿಯ ಸಹಾಯ ಕೇಳಿದಳು.ಅವನೂ ಸಹಾಯಕ್ಕೆ ನಿಂತ.ಶಶಿಗೆ ಸಿಟ್ಟು ಬಂತು.

"ಗಂಡನಲ್ಲಿ ಏಕೆ ಕೆಲಸ ಮಾಡಿಸುತ್ತಿ.ಅವನ ದುಡಿಮೆ ಆಫೀಸಿನಲ್ಲಿ .. ಗಂಡು ಹೊರಗೆ ದುಡಿಯುವುದು.. ಹೆಣ್ಣು ಮನೆಯೊಳಗೆ ಜವಾಬ್ದಾರಿ ನಿಭಾಯಿಸುವುದು.. ನೀನೇ ಸ್ವಲ್ಪ ಬೇಗ ಎದ್ದು ಮಾಡಬಾರದಾ.. ಹೆಣ್ಣುಮಕ್ಕಳು ಅಡುಗೆ ಮಾಡಲು ಕಲಿತುಕೊಳ್ಳಬೇಕು"ಎಂದರು.

ಮಹತಿಗೂ ಕೋಪ ಬಂತು.ಆಕೆಯೂ "ನಾನೂ ಮನೆಯಲ್ಲಿ ಸುಮ್ಮನೆ ಕುಳಿತಿಲ್ಲ ನಿಮ್ಮಂತೆ.ಹೊರಗೆ ದುಡಿಯುವ ಹೆಣ್ಣು ನಾನು.ಇಬ್ಬರೂ ಮನೆ ಕೆಲಸಗಳಿಗೆ ಹೆಗಲು ಕೊಡುವುದು ಸರಿಯಾದ ವಿಚಾರ"ಎಂದಳು.ಇದರಿಂದ ಇಬ್ಬರಲ್ಲೂ ಅಸಮಾಧಾನ ಉಂಟಾಯಿತು.

      ಮಹತಿ ಚಹಾ ಮಾಡಿದಾಗ "ಚಹಾ ಮಾಡುವುದು ಹಾಗಲ್ಲ.."ಎಂದರು.ಇಬ್ಬರೂ ಮಾಡುವ ವಿಧಾನ ಬೇರೆಯಾದರೂ ಎರಡೂ ರುಚಿಸುತ್ತಿತ್ತು ಮುರಲಿಗೆ.ಇಬ್ಬರೂ ತಮ್ಮ ಕ್ರಮವನ್ನೇ ಸಮರ್ಥಿಸಿಕೊಂಡರು.ಮುರಲಿ ತಟಸ್ಥನಾಗಿದ್ದ.ಮಹತಿಯ ಆಧುನಿಕ ಸಂಸ್ಕೃತಿಯ ಉಡುಗೆ ತೊಡುಗೆಯನ್ನು ನೋಡಿ...

 "ನನ್ನ ಸೊಸೆಗೆ ಮಾನ ಮುಚ್ಚುವಷ್ಟು ಬಟ್ಟೆ ಕೊಂಡುಕೊಳ್ಳಲು ನಮ್ಮಲ್ಲಿ ಆರ್ಥಿಕ ಶಕ್ತಿಯಿದೆ.ಮಗ.. ಅವಳಿಗೆ ಮೈತುಂಬ ಮುಚ್ಚಿಬರುವಂತಹ ಬಟ್ಟೆ ಕೊಡಿಸು.."ಎಂದದ್ದೇ ತಡ..ಮಹತಿ ಅತ್ತೆಗೆ ಮನಬಂದಂತೆ ಬಯ್ಯತೊಡಗಿದಳು.

"ನನ್ನ ದೇಹ,ನನ್ನ ಬಟ್ಟೆ,ನನ್ನ ಫ್ಯಾಷನ್ ಬಗ್ಗೆ ಮಾತನಾಡಲು ನೀನ್ಯಾರು.. ???"  ಎನ್ನುತ್ತಾ ಉರಿದುಹೋದಳು..ಶಶಿಯು ತಾನೇನೂ ಕಮ್ಮಿಯಿಲ್ಲ ಎಂಬಂತೆ ಮುಂದುವರಿಸಿದಳು..

        ಜಗಳ ಜೋರಾಗಿ ಮಹತಿ ತಿಂಡಿ ತಿನ್ನದೆ ಹೊರಟಳು.ಮುರಲಿ ಮನವೊಲಿಸಲು ಯತ್ನಿಸಿದ.. ಅವಳು ತನ್ನ ಹಠ ಸಡಿಲಿಸಲಿಲ್ಲ.ಅಮ್ಮ ತನ್ನದೇ ಸರಿ ಎಂಬ ಗುಂಗಿನಲ್ಲಿದ್ದರು.ಮುರಲಿ ದಿಕ್ಕು ತೋಚದೇ ಕುಳಿತ.. ಸಂಜೆ ಬಂದ ಮೇಲೆ ಸಮಾಧಾನಪಡಿಸಿದರಾಯಿತು .. ಎಂದು ಕೊಳ್ಳುತ್ತಾ ತನ್ನ ಆಫೀಸಿಗೆ ಹೊರಟವನಿಗೆ ಮನದ ತುಂಬಾ ಆತಂಕದ ಯೋಚನೆಗಳು..

       ಮುರಲಿ ಆಫೀಸಿನಿಂದ ಹಿಂದಿರುಗಿದಾಗ ಮಹತಿ ಇನ್ನೂ ಬಂದಿರಲಿಲ್ಲ.ಅಮ್ಮನ ಸಿಟ್ಟೂ ಪೂರ್ತಿ ಇಳಿದಂತೆ ಕಾಣಲಿಲ್ಲ.ಮಹತಿಗೆ ಕರೆಮಾಡಿದರೂ ಸ್ವೀಕರಿಸುತ್ತಿರಲಿಲ್ಲ.ಎಂಟು ಗಂಟೆವರೆಗೆ ಕಾದ ಮುರಲಿ ,ನಂತರ ಮಾವನ ಮನೆಗೆ ಕರೆಮಾಡಿ ವಿಚಾರಿಸಿದ.ಅಲ್ಲಿಗೂ ಹೋಗಿರಲಿಲ್ಲ."ಏನು ಸಮಾಚಾರ ?" ಎಂದು ಅತ್ತೆ ಪ್ರಶ್ನಿಸಿದರೆ..ಹೇಳಲು ಮುರಲಿಯ ನಾಲಿಗೆ ತಡವರಿಸಿತು."ಏನಿಲ್ಲ .." ಎಂದು ಫೋನಿಟ್ಟ.ಅವಳ ಗೆಳತಿಗೂ ಕರೆಮಾಡಿದ. ಅವರಿಗೂ ತಿಳಿದಿಲ್ಲ ಎಂಬ ಉತ್ತರ ಬಂದಾಗ ತಲೆಮೇಲೆ ಕೈಹೊತ್ತು ಕುಳಿತ ಮುರಲಿ.


       ಛೇ.. ನಾನು ತಪ್ಪು ಮಾಡಿದೆ.ಅಮ್ಮನ ಬಾಯಿ ಮುಚ್ಚಿಸಬೇಕಿತ್ತು..ಅಲ್ಲಲ್ಲ ಅಮ್ಮನನ್ನು ಈಗ ಬರುವುದೇ ಬೇಡ ಎನ್ನಬೇಕಿತ್ತೇನೋ... ಮಹತಿಗೆ ಹಾಗೆಲ್ಲ ಕೋಪಿಸಿಕೊಳ್ಳಬೇಡ ಎಂದು ಮೆದುವಾಗಿ ಗಲ್ಲ ಸವರಿ ಹೇಳಬೇಕಿತ್ತೇನೋ ..ಆ ದಿನ ಮಹತಿಯ ಮೇಲೆ ಬಲವಂತ ಮಾಡಲು ಹೋಗಬಾರದಿತ್ತು.ಅವಳ ಮನವೊಲಿಸಿ ತನುವ ಬಯಸಬೇಕಿತ್ತು..ಛೇ..ನನಗಿದು ತಿಳಿಯಲೇ ಇಲ್ಲ..ನಾನು ದಡ್ಡ..ಬರೀ ದಡ್ಡ... ಎಂದು ಯೋಚಿಸುತ್ತಿದ್ದವನ ಕಣ್ಣಿಂದ ನೀರು ಸುರಿಯುತ್ತಿತ್ತು..ಮಹತಿ ಒಂದು ಅವಕಾಶ ಕೊಡು..ತಿದ್ದಿಕೊಳ್ಳುವೆ..ಮುದ್ದಿನಿಂದ ನೋಡಿಕೊಳ್ಳುವೆ ಎಂದು ಅವನ ಹೃದಯ ರೋದಿಸುತ್ತಿತ್ತು.. ಆದರೆ ಮಹತಿ ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದಾಳಾ ..??

       ಪೋಲೀಸ್ ಕಂಪ್ಲೇಂಟ್ ಕೊಡಲಾ.. ಏನಾದರೂ ಹೆಚ್ಚು ಕಮ್ಮಿಯಾದರೆ ಏನು ಮಾಡುವುದು..ಮಾವನೂ ಪ್ರಭಾವಿ ವ್ಯಕ್ತಿ... ಅಪ್ಪನಲ್ಲಿ ಹೇಳಲಾ.. ತಮ್ಮನಲ್ಲಿ ಹಂಚಿಕೊಳ್ಳಲಾ..ಎಂದು ಯೋಚಿಸುತ್ತಾ ಬೆವತುಹೋದವನಿಗೆ ಅಮ್ಮ ಮಾಡಿಟ್ಟ ಬಿಸಿ ಗಂಜಿಯೂ ಬೇಡವಾಗಿತ್ತು..

"ಏನೂ ಚಿಂತಿಸಬೇಡ.. ಸಂಸಾರದಲ್ಲಿ ಇದೆಲ್ಲ ಇದ್ದದ್ದೇ..ಅಹಂಕಾರ ಇಳಿದಾಗ ಬರದೇ ಎಲ್ಲಿಗೆ ಹೋಗುತ್ತಾಳೆ..? " ಸೊಸೆಯ ಬಗ್ಗೆ ತನ್ನ ಅಸಡ್ಡೆಯನ್ನು ಹೊರಹಾಕಿದರು ಅಮ್ಮ ಶಶಿ..

"ಏನಮ್ಮಾ ನೀನು..ನಿನ್ನ ಮಗಳಾಗಿದ್ದರೆ ಹೀಗೆ ಹೇಳುತ್ತಿದ್ದಿಯಾ ..ನೀನೂ ಇಲ್ಲಿರುವಾಗ ಸ್ವಲ್ಪ ಹೊಂದಾಣಿಕೆಯ ಗುಣ ಬೆಳೆಸಿಕೊಳ್ಳಬೇಕು.." ಎಂದು ಹೇಳಿಯೇಬಿಟ್ಟ..

"ಹೌದು ಹೌದು..ಹೆಂಡತಿ ಬಂದ ಮೇಲೆ ನಾನು ನಿನಗೆ ಹೊರೆಯಾಗಿದ್ದೇನೆ..ಬೇಡವೆಂದಾದರೆ ಇಂದೇ ಹೊರಟುಹೋಗುವೆ.. ರಾತ್ರಿ ಹನ್ನೊಂದು ಗಂಟೆವರೆಗೆ ಊರಿಗೆ ಬಸ್ ಇದೆ.ನನ್ನನ್ನು ಹತ್ತಿಸಿ ಬಿಡು.. ನಾನು ತೆರಳುತ್ತೇನೆ.." ಎಂದು ಹೇಳಿ ಸರಸರನೆ ತನ್ನ ಬಟ್ಟೆಗಳನ್ನು ಜೋಡಿಸಿಕೊಂಡರು..

       ಮಡದಿ ಮನೆಗೆ ಬಂದಿಲ್ಲ..ಅಮ್ಮ ಹೊರಡುವ ಮಾತನಾಡುತ್ತಿದ್ದಾರೆ. ಅಬ್ಬಾ..ಈಗ ನಾನೇನು ಮಾಡಲಿ.. ಇಬ್ಬರಿಗೂ ನಾನೊಂದು ಮಾತಾಡಿದರೂ ಹೆಚ್ಚಾಗುತ್ತದೆ.. ಅರ್ಥಮಾಡಿಕೊಳ್ಳುವ ಬುದ್ಧಿ ,ವಿವೇಕ ಇಬ್ಬರಿಗೂ ಇಲ್ಲ.. ಎನ್ನುತ್ತಾ ತಮ್ಮನಲ್ಲಿ "ಅಮ್ಮನನ್ನು ಕಳುಹಿಸಿಕೊಡಲೇ ??"ಎಂದು ಕೇಳಿದ.. "ಸರಿ.. ಬಸ್ ಹತ್ತಿಸು..ಬೆಳಗಿನ ಜಾವ ನಾನು ಕರೆದುಕೊಂಡು ಬರುತ್ತೇನೆ " ಎಂದು ಒಪ್ಪಿದ ವೆಂಕಟ್.. ಅಮ್ಮನಿಗೆ ಟಿಕೆಟ್ ಮಾಡಿ ಬಸ್ ಹತ್ತಿಸಿ ಬಿಟ್ಟ..


    ಇನ್ನು ಏನು ಮಾಡಲಿ..? ಮನೆಗೆ ವಾಪಸ್ ಹೋಗಲೋ..ಅಲ್ಲ ಮಾವನ ಮನೆಗೆ ಹೋಗಿ ಮಹತಿಯ ಸಂಗತಿ ಅರುಹಲೋ.. ಎಂದು ತಳಮಳದಲ್ಲಿದ್ದವನಿಗೆ ಮಾವ ಶಂಕರ ಶಾಸ್ತ್ರಿಗಳ ನೆನಪಾಯಿತು.. ಮಾವನಲ್ಲಿ ಹೇಳುತ್ತೇನೆ.ಅವರಿಗೆ ಅಮ್ಮನ ಸ್ವಭಾವವೂ ಗೊತ್ತು.. ಎಂದು ತಡರಾತ್ರಿ ಮಾವನ ಮನೆಗೆ ತೆರಳಿದ.ಹೊತ್ತಲ್ಲದ ಹೊತ್ತಿನಲ್ಲಿ ಕಾಲಿಂಗ್ ಬೆಲ್ ಒತ್ತಿದ ಅಳಿಯನನ್ನು ಕಂಡು ಗಾಬರಿಗೊಂಡರು
ಶಾಸ್ತ್ರಿಗಳು.ಒಂದೇ ಉಸಿರಿನಲ್ಲಿ ನಡೆದ ಘಟನೆಯನ್ನು ಸೂಕ್ಷ್ಮವಾಗಿ ತಿಳಿಸಿದ ಮುರಲಿ..ಅಳಿಯನ ಅಸಹಾಯಕತೆಯನ್ನು ಕಂಡು ಮುಂದೆ ಏನು ಮಾಡಬಹುದೆಂದು ಯೋಚಿಸತೊಡಗಿದರು.. ಶಂಕರ ಶಾಸ್ತ್ರಿಗಳು..


ಮಹತಿಯ ತಂದೆ ತಾಯಿಗೆ ವಿಚಾರವನ್ನು ತಿಳಿಸುವುದೇ ಲೇಸೆಂದು ನಿರ್ಧರಿಸಿದರು.‌ಹಾಗೇ ಪೋಲೀಸ್ ಕಂಪ್ಲೇಂಟ್ ಕೊಡೋಣ ಎಂದು ಹೊರಡಲನುವಾದರು..


               ******


      ಮಗಳು ಅಳಿಯ ಮನೆಯಿಂದ ಹೊರಬಿದ್ದ ಮೇಲೆ ಮಾನಸಿಕವಾಗಿ ನರಸಿಂಹ ರಾಯರು ಜರ್ಝರಿತರಾದರು.ಸದಾ ಆಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿದರು.ದೇವರ ಸ್ತೋತ್ರ ಪಠಣ, ವೇದಾಧ್ಯಯನ,ಪುರಾಣ ವಾಚನಗಳಲ್ಲಿ ತೊಡಗಿಸಿಕೊಂಡರು.ಮಡದಿ ರೇಖಾಳಲ್ಲಿ ಅಗತ್ಯಕ್ಕೆ ತಕ್ಕವೇ ಮಾತು.ಮೌನವೇ ಹೆಚ್ಚು.ಉದ್ಯೋಗದ ಸ್ಥಳದಲ್ಲಿಯೂ ಮೊದಲಿನ ಲವಲವಿಕೆ ಇರಲಿಲ್ಲ.ರೇಖಾ ಗಂಡನ ಮಾನಸಿಕ ಆರೋಗ್ಯದ ಬಗ್ಗೆ ಚಿಂತಿತರಾದರು.ತನ್ನಿಂದಾಗಿ ಮಗಳು ಅಳಿಯ ಮನೆಯಿಂದ ಹೊರಗೆ ಹೋಗುವಂತಾಯಿತು ಎಂದು ನಿಧಾನವಾಗಿ ಅವರ ಮನಸ್ಸು ಒಪ್ಪಿಕೊಂಡಿತು.ತನ್ನ ತಪ್ಪನ್ನು ಮುಂದೆಯಾದರೂ ತಿದ್ದಿಕೊಂಡು ತಾಳ್ಮೆ, ಹೊಂದಾಣಿಕೆ ಗುಣವನ್ನು ಬೆಳೆಸಿಕೊಳ್ಳಬೇಕು.ಇಲ್ಲದಿದ್ದರೆ ನಮ್ಮ ಕುಟುಂಬವೇ ಇದಕ್ಕೆ ತಕ್ಕ ಬೆಲೆ ತೆರಬೇಕಾದೀತು.. ಎಂಬುದನ್ನು ಅರಿತರು.


ಮುಂದುವರಿಯುವುದು..

✍️...ಅನಿತಾ ಜಿ.ಕೆ .ಭಟ್
07-07-2020.