Monday, 29 March 2021

ಕೌಟುಂಬಿಕ ಬಾಂಧವ್ಯದ ಸೂಕ್ಷ್ಮಸುಳಿಗಳು ಮತ್ತು ಸಮಾಜ, ಮಾಧ್ಯಮ, ಸಾಮಾಜಿಕ ಜಾಲತಾಣಗಳು

 


#momspresso Kannada_ ವಾರದ ಬ್ಲಾಗಿಂಗ್ ಸ್ಪರ್ಧೆ

#ನಾನೂ ಬರೆಯುತ್ತೇನೆ
#ಸಂಬಂಧಗಳ ಸುಳಿಯಲ್ಲಿ ಬದುಕು

        ಕುಟುಂಬವು ನಮಗೆ ಸುರಕ್ಷಿತ ಭಾವವನ್ನು ಮೂಡಿಸುವ, ಸಂತಸದ ಹೊನಲನ್ನು ಹರಿಸುವ, ದುಃಖ ದುಮ್ಮಾನಗಳಲ್ಲಿ ಬೆಂಬಲವಾಗಿ ನಾವಿದ್ದೇವೆ ಎಂದು ಧೈರ್ಯ ನೀಡುವ ಒಂದು ಸೀಮಿತ ವ್ಯವಸ್ಥೆ. ಪತಿ ಪತ್ನಿ ಮಕ್ಕಳು ಎಂಬ ಸಣ್ಣ ಕುಟುಂಬದಿಂದ ಹಿಡಿದು ಹತ್ತಾರು ಮಂದಿ ಕೂಡಿಬಾಳುವ ಅವಿಭಕ್ತ ಕುಟುಂಬದವರೆಗೆ ಎಲ್ಲಾ ಕಡೆಯು ಬಾಂಧವ್ಯಗಳು ಸಿಹಿಕಹಿಯ ಹೂರಣ. ಕಹಿಯನ್ನು ನುಂಗಿಕೊಂಡು ಸಿಹಿಯನ್ನು ಅನುಭವಿಸಿ, ಮೆಲುಕು ಹಾಕಿ ಬದುಕಿದರೆ ಬಾಳು ಸುಗಮವಾಗಿ ಸಾಗಲು ಸಾಧ್ಯ.

       ಕೌಟುಂಬಿಕ ಬಾಂಧವ್ಯಗಳಲ್ಲಿ ಪತಿಪತ್ನಿ ಸಂಬಂಧ, ಅತ್ತೆಮಾವ ಮಗಸೊಸೆ ಸಂಬಂಧ, ಅತ್ತಿಗೆ ನಾದಿನಿ, ಅತ್ತಿಗೆ ಭಾವಮೈದುನಂದಿರು, ಸೊಸೆಯ ತವರಸಂಬಂಧ, ಪತಿಯ ಕುಟುಂಬದ ಬಂಧುಬಾಂಧವರು, ಅತ್ತೆಸೊಸೆ ಬಾಂಧವ್ಯ ..
ಹೀಗೆ  ಜಾಲ ದೊಡ್ಡದು. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಜಾಣ್ಮೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕಾಗುತ್ತದೆ. ನೀರು ಹೇಗೆ ತಾನು ಆವರಿಸಿದ ಪಾತ್ರೆಯ/ಜಾಗದ ಆಕಾರಕ್ಕೆ ಹೊಂದಿಕೊಳ್ಳುವುದೋ ಹಾಗೆಯೇ ನಾವು ಕೂಡಾ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ.

       ಕುಟುಂಬದಲ್ಲಿ ಪತಿಪತ್ನಿ ಸಂಬಂಧ ಪ್ರಮುಖವಾದುದು. ಅಲ್ಲಿ ಸಂಶಯ, ಭಿನ್ನತೆ ಮೂಡದಂತೆ ಎಚ್ಚರಿಕೆವಹಿಸುವುದು ಅಗತ್ಯ. ಏರುಪೇರುಗಳಾದಲ್ಲಿ ಕೂಡಲೇ ತಮ್ಮೊಳಗೆ ಬಗೆಹರಿಸಿಕೊಳ್ಳುವ ಕ್ರಮ ರೂಢಿಸಿಕೊಳ್ಳಬೇಕು. ಎಲ್ಲವನ್ನೂ ಇನ್ನೊಬ್ಬರ ಮುಂದಿರಿಸಿದರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ. ಸಮಸ್ಯೆಗಳು ಮತ್ತಷ್ಟೂ ಜಟಿಲವಾಗುವ ಸಾಧ್ಯತೆ ಇದೆ. ತೀರಾ ಅನಿವಾರ್ಯವಾದಾಗ ಆಪ್ತರ ಸಲಹೆ ಪಡೆದುಕೊಂಡು ಮುಂದುವರಿಯಬೇಕು. ಇನ್ನೊಂದು ಅತ್ಯಂತ ಹೆಚ್ಚು ಸದ್ದುಮಾಡುವ, ಸುದ್ದಿಯಲ್ಲಿರುವ, ಕೌಟುಂಬಿಕ ಗುದ್ದಾಟಗಳಿಗೆ ಕಾರಣವಾಗುವ ಬಾಂಧವ್ಯವೆಂದರೆ ಅತ್ತೆಸೊಸೆ ಬಾಂಧವ್ಯ. ಸೊಸೆ ಮಾಡಿದ ಕೆಲಸಗಳಲ್ಲಿ, ಆಡಿದ ಮಾತುಗಳಲ್ಲಿ ತಪ್ಪನ್ನೇ ಹುಡುಕುವ ಅತ್ತೆ, ಅತ್ತೆಯ ನಡತೆ, ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ ನೊಂದುಕೊಳ್ಳುವ, ಪತಿಯ ಬಳಿ ಹೇಳಿ ಅಲವತ್ತುಕೊಳ್ಳುವ ಸೊಸೆ. ಈ ಕಿತ್ತಾಟ ಎಲ್ಲಾ ಕುಟುಂಬಗಳಲ್ಲಿಯೂ ಸರ್ವೇ ಸಾಮಾನ್ಯ. ಕೆಲವು ಕಡೆ ವಿಪರೀತಕ್ಕೆ ಹೋಗಲೂಬಹುದು. ಅತ್ತೆಸೊಸೆ ಬಾಂಧವ್ಯ ದಲ್ಲಿ ಸಮಾಜ, ಮಾಧ್ಯಮ, ಸಾಮಾಜಿಕ ಜಾಲತಾಣಗಳ ನಡೆಯ ಕುರಿತು ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.

          ಎಂದಿನಂತೆ ಅಂದೂ ಕೂಡ ಬೆಳಗ್ಗೆ ವಾಟ್ಸಪ್, ಫೇಸ್ಬುಕ್ ಮೇಲೆ ಕಣ್ಣಾಡಿಸಿದೆ. ವಿಡಿಯೋವೊಂದು ಮನಕಲುಕಿತ್ತು. ಸಮಾಜದಲ್ಲಿ ಸಾವಿರಕ್ಕೊಂದು ಕುಟುಂಬದಲ್ಲಿ ನಡೆವ ವಿಚಾರವನ್ನು  ಸರ್ವೇ ಸಾಮಾನ್ಯ ಎಂಬಂತೆ ಬಿಂಬಿಸಲಾಗಿತ್ತು. ಒಂದು ಕುಟುಂಬದ ಚಿತ್ರಣ. ಮುಂಗೋಪಿ, ಕಟು ಹೃದಯಿ ಸೊಸೆ. ತನ್ನ ವೃದ್ಧ ಅತ್ತೆ ಮಾವನನ್ನು ಪೀಡಿಸಿ ಕಿರುಕುಳ ನೀಡಿ ವೃದ್ಧಾಶ್ರಮಕ್ಕೆ ಸೇರಿಸಲು ಕಾರಣಳಾದವಳು. ಇದು ವಿಡಿಯೋದ ಸಾರಾಂಶ. ಇದನ್ನು ಕಂಡು ನನಗೆ ಸ್ವಲ್ಪ ವಿಚಿತ್ರ ಅನಿಸಿತು. ಅದೆಷ್ಟು ಸೊಸೆಯಂದಿರು ತಮ್ಮ ಅತ್ತೆ ಮಾವನ ಕಿರುಕುಳ ತಾಳಲಾರದೇ ಉರುಳಿಗೆ ಕೊರಳೊಡ್ಡಿದ್ದಾರೋ ಏನೋ..ಎಷ್ಟು ಜನ ಮೌನಗೌರಿಯಾಗಿ ಎಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದಾರೋ ಏನೋ...ಅಂತಹ ವಿಷಯಗಳು ಸುದ್ದಿಯಾಗುವುದಿಲ್ಲ.

       ಹೆಣ್ಣೊಬ್ಬಳು ತಾಯ್ತಂದೆಯರ ಪ್ರೀತಿಯಲ್ಲಿ ಬೆಳೆಯುತ್ತಾಳೆ. ಮದುವೆಯೆಂಬ ಮೂರಕ್ಷರದ ಬಂಧನದೊಂದಿಗೆ ಗಂಡನ ಮನೆಗೆ ಸೇರುತ್ತಾಳೆ. ಕೆಲವರಿಗೆ ಇದು ಅನುರಾಗ ಬಂಧನವಾದರೆ ಇನ್ನು ಕೆಲವರಿಗೆ ಸಹಿಸಲೂ ಆಗದ ಬಿಡಿಸಿಕೊಳ್ಳಲೂ ಆಗದ ಬಂಧನ. ಸೊಸೆಯಾಗಿ ಮನೆಗೆ ಬಂದ ಮಹಾಲಕ್ಷ್ಮಿಯನ್ನು ಪ್ರೀತಿಯಿಂದ ಕಾಣಬೇಕು. ತಪ್ಪಾಗುತ್ತಿದ್ದರೆ ಪ್ರೀತಿಯಿಂದ ತಿಳಿಹೇಳಬೇಕು. ಆಗಾಗ ತವರುಮನೆಗೆ ತೆರಳುವ ಅವಕಾಶ ನೀಡಬೇಕು. ಆಕೆಯ ತವರ ಬಂಧುಗಳು ಬಂದಾಗ ಮನೆಗೆ ಬರುವ ಇತರ ಬಂಧುಗಳಿಗೆ ಹೇಗೆ ಉಪಚರಿಸುತ್ತೇವೆಯೋ ಹಾಗೇ ಉಪಚರಿಸಬೇಕು. ಈ ರೀತಿ ಪ್ರೀತಿಯ ವಾತಾವರಣದಲ್ಲಿ ಬದುಕಿದ ಸೊಸೆ ತನ್ನ ಅತ್ತೆ ಮಾವನನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವಳು ಎಂಬುದರಲ್ಲಿ ಎರಡು ಮಾತಿಲ್ಲ.

          ಆದರೆ ಎಲ್ಲ ಸೊಸೆಯಂದಿರಿಗೂ ಈ ತರಹದ ಅತ್ತೆ ಮಾವ ದೊರೆಯುವುದಿಲ್ಲ. ಸೊಸೆಯ ಪ್ರತಿಯೊಂದು ಕೆಲಸದಲ್ಲೂ ತಪ್ಪನ್ನೇ ಹುಡುಕುವುದು, ತವರುಮನೆಯನ್ನು ಹಳಿಯುವುದು, ರೂಪದ ವಿಷಯದಲ್ಲಿ ಕೊಂಕು ನುಡಿಯುವುದು, ಎಷ್ಟು ಕೆಲಸ ಮಾಡಿದರೂ ಸಮಾಧಾನವಾಗದಿರುವುದು, ಸಿಕ್ಕಸಿಕ್ಕವರಲ್ಲಿ ದೂರುವುದು.... ಇತ್ಯಾದಿಗಳು ಹಲವು ಸೊಸೆಯಂದಿರ ಬಾಳನ್ನು ಹೈರಾಣವಾಗಿಸುತ್ತದೆ.
ಅತ್ತ ತವರು ಮನೆಯಲ್ಲೂ ಇದನ್ನು ಹೇಳಿಕೊಳ್ಳಲಾಗದೇ; ಇತ್ತ ಸಹಿಸಲೂ ಆಗದೆ ಹೆಣ್ಣುಮಗಳು ಮೌನಗೌರಿಯಾಗಿ ಬಿಡುತ್ತಾಳೆ. ಗಾಣದೆತ್ತಿನಂತೆ ಹಗಲಿರುಳು ದುಡಿದರೂ ಬೆಲೆಯಿಲ್ಲವಲ್ಲಾ ಎಂದು ಕೊರಗುತ್ತಾಳೆ. ಇದೇ ಕೊರಗು ಮುಂದೆ ಹಠಕ್ಕೆ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಕಾರಣವಾಗಬಹುದು. ಅದನ್ನೇ ಬಲ್ಲವರು ಹೇಳಿದ್ದು "ಅತ್ತೆಗೊಂದು ಕಾಲ ಸೊಸೆಗೊಂದು ಕಾಲ" ಎಂದು.

         ಆಕೆ ಆಶಾ. ಸುಸಂಸ್ಕೃತ ಮನೆತನದ ಕುವರಿ. ಹಿರಿಯರಿಗೆ ಎದುರು   ಮಾತನಾಡಬಾರದು ಎಂಬುದನ್ನು ಅರೆದು ಕುಡಿಸಿ ಬೆಳೆಸಿದ್ದಾರೆ ಆಕೆಯ ಹೆತ್ತವರು. ಎಲ್ಲರೊಂದಿಗೆ ನಗುನಗುತ್ತಲೇ ಬೆರೆತು ಚುರುಕಾಗಿ ಕಾಲೊನಿ ತುಂಬಾ ಓಡಾಡುತ್ತಿದ್ದಳು ಮದುವೆಯಾಗಿ ಬಂದ ಹೊಸದರಲ್ಲಿ.
ಆಕೆಯ ಅತ್ತೆ ಎಪ್ಪತ್ತೈದರ ಆಸುಪಾಸಿನವರು. ಮೊದಲೆಲ್ಲ ತನ್ನ ಮಗನಿಗೆ ಹುಡುಗಿ ಸಿಗಲಿಲ್ಲ ಎಂದು
ಕೊರಗುತ್ತಿದ್ದ ;  ಒಮ್ಮೆಮಗನಿಗೆ ಹೆಣ್ಣು ಸಿಕ್ಕರೆ ಸಾಕು ಅನ್ನುತ್ತಿದ್ದ ಆಕೆ , ಸೊಸೆ ಮನೆಗೆ ಕಾಲಿಡುತ್ತಿದ್ದಂತೆ ಬದಲಾಗಿಬಿಟ್ಟಳು. ಆರಂಭದಿಂದಲೇ ಸೊಸೆಗೆ ಹಾಗೆ ಮಾಡು, ಹೀಗೆ ಮಾಡಿದ್ದು ಸರಿಯಿಲ್ಲ ಎಂದು ಬೀದಿಗೂ ಕೇಳುವಂತೆ ಗದರುತ್ತಿದ್ದಳು. ತಾನು ಒಂದು ಕುರ್ಚಿಯಲ್ಲಿ ಕುಳಿತು ಆದೇಶವನ್ನು ಮಾಡುತ್ತಿದ್ದಳೇ ಹೊರತು ಒಂದು ಕೆಲಸಕ್ಕೂ ಸೊಸೆಗೆ ಕೈ ಜೋಡಿಸಿದವಳಲ್ಲ. ಆಶಾ ಮನೆಗೆಲಸ ಪೂರೈಸಿ ಹೊರಗೆ ಉದ್ಯೋಗಕ್ಕೂ ತೆರಳುತ್ತಿದ್ದಳು. ಇದೇ ವಾಡಿಕೆ ಆಕೆ ಗರ್ಭಿಣಿಯಾದ ಎಂಟೂವರೆ ತಿಂಗಳವರೆಗೆ ನಡೆಯಿತು. ನಂತರ ಉದ್ಯೋಗಕ್ಕೆ ರಜೆ ಹಾಕಿದ ಮೇಲೆ ತುಸು ವಿಶ್ರಾಂತಿ ದೊರೆಯಿತೋ ಏನೋ ಪಾಪ...

       ಗಂಡು ಮಗುವಿನ ತಾಯಿಯಾದಳು ಆಶಾ. ಬಾಣಂತನದ ನಲುವತ್ತನೇ ದಿನವೇ ವಾಪಸ್ ಕರೆಸಿಕೊಂಡಿದ್ದಳು ಅತ್ತೆ, ಮನೆಗೆಲಸ ಮಾಡಲು ಜನವಿಲ್ಲವೆಂದು. ಮನೆಗೆಲಸ, ಪುಟ್ಟಮಗುವಿನ ಆರೈಕೆ, ಕಟು ಮಾತುಗಳಿಂದ ಸೊರಗಿದ್ದಾಳೆ ಆಶಾ. ಕೃಶವಾದ ಆಶಾಳನ್ನು ನೋಡಿದರೆ ಅಪೌಷ್ಟಿಕತೆ ಎದ್ದು ಕಾಣುತ್ತದೆ. ಅಪರೂಪಕ್ಕೊಮ್ಮೆ ನೆರೆಹೊರೆಯವರನ್ನು ಕಂಡಾಗ ಬಲವಂತವಾಗಿ ಮುಖದ ಮೇಲೊಂದು ಹೂ ನಗೆ ಚಿಮ್ಮಿಸುತ್ತಾಳೆ. ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಮೂಟೆ ಕಟ್ಟಿ ಬಿಸಾಕಿದ್ದಾಳೆ. ವಯೋಸಹಜ ದೌರ್ಬಲ್ಯವೋ ಏನೋ ಒಮ್ಮೊಮ್ಮೆ ಆಕೆಯ ಅತ್ತೆಯ ಏರುದನಿ ಕಾಲೊನಿ ದಾಟಿ ಮುಖ್ಯ ರಸ್ತೆಯವರೆಗೆ ಕೇಳಿಸುತ್ತದೆ.

         ಆಶಾಳ ಗಂಡನೂ ಈ ವಿಷಯದಲ್ಲಿ ಮೌನಿ. ಹಾಗೆಂದು ಆಶಾಳ ಅತ್ತೆ ನೆರೆಹೊರೆಯವರ ಪಾಲಿಗೆ ಕೆಟ್ಟವಳಲ್ಲ. ನಗುಮೊಗದಿಂದಲೇ ಮಾತಾಡಿಸುವವಳು ಸೊಸೆಗೆ ಮಾತ್ರ ಬಿಗಿ. ಆದರೂ ಅತ್ತೆಯನ್ನು ವೃದ್ಧಾಶ್ರಮಕ್ಕೆ ಸೇರಿಸುವಂತೆ ಕುಮ್ಮಕ್ಕು ನೀಡಿಲ್ಲ ಆಶಾ. ಅತ್ತೆಸೊಸೆ ಜಗಳವಂತೂ ನಡೆದೇ ಇಲ್ಲ. ಏಕೆಂದರೆ ಇತ್ತೀಚೆಗೆ ತನ್ನ ಬಾಯಿಗೆ ಹಾಕಿದ ಬೀಗವನ್ನು ಆಶಾ ತೆಗೆದೇ ಇಲ್ಲ. ಅತ್ತೆಯ ಬಗ್ಗೆ ಗಂಡನಲ್ಲಿ ಚಾಡಿ ಹೇಳಿ ತಾಯಿ ಮಗನ ಮಧ್ಯೆ ಬಿರುಕು ಮೂಡಿಸಿಲ್ಲ ಆಶಾ..
ಗೆಳತಿ ಆಶಾ..... ಮೌನಗೌರಿಯಾಗಿಬಿಟ್ಟಿದ್ದಾಳೆ.....
ಮೂಕಪ್ರಾಣಿಯಾಗಿಬಿಟ್ಟಿದ್ದಾಳೆ....
ಇಪ್ಪತ್ತೈದರ ಹರೆಯದ ಈಕೆಯ ಮೂಕರೋದನ ಯಾರಿಗೂ ಕೇಳಿಸುತ್ತಿಲ್ಲ...

      ಇದು ಗೆಳತಿ ಆಶಾಳ ಕಥೆ. ಇಂತಹ ನೂರಾರು ಆಶಂದಿರು ನಮ್ಮ ಸಮಾಜದಲ್ಲಿ ಇದ್ದಾರೆ. ಅಂತಹವರ ನೋವಿನ ವಿಡಿಯೋಗಳು ಪ್ರಸಾರವಾಗುತ್ತಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿಲ್ಲ. ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದು ಬೊಬ್ಬಿರಿಯುವ ಮಾಧ್ಯಮಗಳು ಚಕಾರವೆತ್ತುವುದಿಲ್ಲ. ಸಮಾಜವು ಅತ್ತೆಯಂದಿರ ಕಟು ನಡತೆಯನ್ನು ತಿದ್ದುವ ಪ್ರಯತ್ನ ಮಾಡುವುದೇ ಇಲ್ಲ. ಬದಲಾಗಿ  ಸೊಸೆಯ ಮೇಲೆ ಆಪಾದನೆ ಹೊರಿಸಿ ಸಮ್ಮನಾಗುತ್ತದೆ.

     ಎಷ್ಟೋ ಒಳ್ಳೆಯ ಅತ್ತೆಯಂದಿರೂ ಇದ್ದಾರೆ. ಮದುವೆಯ ಸಂದರ್ಭದಲ್ಲಿ ಅರ್ಧಕ್ಕೆ ನಿಂತಿದ್ದ ಸೊಸೆಯ ಓದಿಗೆ ಬೆಂಬಲವಾಗಿ ನಿಂತು, ಉದ್ಯೋಗಕ್ಕೆ ತೆರಳುವ ಸೊಸೆಯಂದಿರಿಗೆ ಮನೆಗೆಲಸ ಹೊರೆಯಾಗದಂತೆ ನೋಡಿಕೊಳ್ಳುವ ಸಹೃದಯಿ ಅತ್ತೆಯಂದಿರೂ ಇದ್ದಾರೆ. ಸೊಸೆಯ ಬಸಿರು ಬಾಣಂತನ ಸಂದರ್ಭದಲ್ಲಿ ತಾಯಂದಿರ ಸ್ಥಾನ ತುಂಬಿದವರಿದ್ದಾರೆ. ಸೊಸೆ ಉದ್ಯೋಗಕ್ಕೆ ತೆರಳಿದಾಗ ಮೊಮ್ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿಯನ್ನು ಹೊತ್ತವರಿದ್ದಾರೆ. ದೂರದೂರಿಗೆ ವರ್ಗಾವಣೆ ಆದಾಗ ಮೊಮ್ಮಕ್ಕಳ ಪಾಲಿಗೆ ತಾವೇ ಅಮ್ಮನ ಪ್ರೀತಿಯನ್ನುಣಿಸಿದವರಿದ್ದಾರೆ.

      ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಮನೆ ನಿಭಾಯಿಸಿಕೊಂಡು ಹೋಗುವ ಸೊಸೆಯಂದಿರಿದ್ದರೂ, ಸೊಸೆಯಂದಿರು ಹಿರಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ರೂವಾರಿಗಳು ಎಂದು ಬಿಂಬಿತವಾಗುತ್ತಿರುವುದು ಬೇಸರದ ಸಂಗತಿ.
ಅಂತಹ ವಿಷಯಗಳನ್ನು like, comment, forward /ಮೆಚ್ಚು, ಪ್ರತಿಕ್ರಿಯಿಸು,  ಹಂಚಿಕೊಳ್ಳುವ ಮುನ್ನ ತುಸು ಯೋಚಿಸಬೇಕು. ವೃದ್ಧಾಶ್ರಮಕ್ಕೆ ಹಿರಿಯರನ್ನು ಸೇರಿಸಲು ಹಲವಾರು ಕಾರಣಗಳಿರಬಹುದು. ಮನೆಯ ಎಲ್ಲ ವಿಷಯಗಳೂ ಸೊಸೆಯ ಹಿಡಿತದಲ್ಲಿ ಇರುತ್ತದೆಯೆಂಬುದು ತಪ್ಪು ಕಲ್ಪನೆ. ತೀವ್ರ ಅನಾರೋಗ್ಯ, ಉದ್ಯೋಗದಿಂದಾಗಿ ಆರೈಕೆಮಾಡಲು ಸಮಯ ಸಿಗದಿರುವುದು, ಸೊಸೆಯೂ ವಯೋಸಹಜ ಖಾಯಿಲೆಗಳಿಂದ ಹೈರಾಣವಾಗಿರುವುದು, ರಾತ್ರಿ ಹಿರಿಯರ ಆರೈಕೆಯ ಸಲುವಾಗಿ ನಿದ್ದೆಗೆಟ್ಟು ಹಗಲು ಮನೆಕೆಲಸ ನಿಭಾಯಿಸಲು ಸಾಧ್ಯವಾಗದಿದ್ದಾಗ ಸಹಾಯಕಿಯೂ ಸಿಗದಿರುವುದು..... ಇತ್ಯಾದಿ ಕಾರಣಗಳಿರಬಹುದು.

       ಇತ್ತೀಚೆಗೆ ಒಂದು ಕುಟುಂಬದಲ್ಲಿ ಮಲಗಿದಲ್ಲೇ ಆದ ವಯೋವೃದ್ಧ ಮಹಿಳೆಯನ್ನು ಹತ್ತು ವರ್ಷಗಳ ಕಾಲ ರಾತ್ರಿ ನಿದ್ದೆಗೆಟ್ಟು ಸೇವೆಗೈದು ಮಗಸೊಸೆ ಇಬ್ಬರೂ ಅನಾರೋಗ್ಯಕ್ಕೆ ಒಳಗಾಗಿದ್ದರು. ಸೊಸೆಯ ಆರೋಗ್ಯ ತೀವ್ರ ಏರುಪೇರಾಗಿ ಬದುಕುವ ಭರವಸೆಯೇ ಇಲ್ಲದಿದ್ದಾಗಲೂ, ವಯೋವೃದ್ಧರ ಇತರ ಐವರು ಮಕ್ಕಳಲ್ಲಿ ಒಬ್ಬರೂ ನೋಡಿಕೊಳ್ಳಲು ಬರದೇಯಿದ್ದಾಗ ಅನಿವಾರ್ಯವಾಗಿ  ವೃದ್ಧಾಶ್ರಮಕ್ಕೆ ಸೇರಿಸಬೇಕಾಯಿತು.

     ವಿಡಿಯೋ ಮಾಡಿ ಬಿತ್ತರಿಸುವಲ್ಲಿ ವೃದ್ಧಾಶ್ರಮ ಎಂಬ ವಾಣಿಜ್ಯ ವಹಿವಾಟನ್ನು ಭಾರತದ ಕುಟುಂಬ ವ್ಯವಸ್ಥೆಯ ಒಳಗೆ ತೂರುವ ಹುನ್ನಾರವೂ ಇರಬಹುದು. ಕುಟುಂಬವನ್ನು ಒಡೆದು ತಮ್ಮ ಜೇಬು ತುಂಬಿಸುವ ಕುತಂತ್ರ ಇರಲೂಬಹುದು.
ಈ ಬಗ್ಗೆಯೂ ಎಚ್ಚರಿಕೆ ಅತ್ಯಗತ್ಯ. ಇದು ಯಾರನ್ನೂ ದೂಷಿಸುವ ಉದ್ದೇಶದಿಂದ ಬರೆದ ಬರಹವಲ್ಲ. ನನ್ನ ಅನಿಸಿಕೆ ವ್ಯಕ್ತಪಡಿಸಿದ್ದೇನೆ ಅಷ್ಟೇ. ಇದರ ಮೇಲೆ ಕಟು ಟೀಕೆ, ಚರ್ಚೆ ಬೇಡ. ಭಾರತೀಯ ಸಂಸ್ಕಾರವನ್ನು ಪಾಲಿಸುವ ಎಲ್ಲಾ ಅತ್ತೆಸೊಸೆಯಂದಿರು ಹಾಗೂ ಅವರ ಕುಟುಂಬದ ಬಗ್ಗೆ ನನಗೆ ಗೌರವವಿದೆ.

ಕೌಟುಂಬಿಕ ಬಾಂಧವ್ಯವು ಕೆಡದಂತೆ ಅನುಸರಿಸಬಹುದಾದ ಕೆಲವು ಸೂತ್ರಗಳು:-

1.ಗಂಡುಮಕ್ಕಳಿಗೆ ಜವಾಬ್ದಾರಿಯುತವಾಗಿ ಬದುಕುವುದನ್ನು ಕಲಿಸುವುದು. ತಮ್ಮ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಳ್ಳುವುದನ್ನು , ಇತರರ ಭಾವನೆಗಳನ್ನು ಗೌರವಿಸುವ ಗುಣವನ್ನು ಬೆಳೆಸುವುದು.
ಹೆಣ್ಣಮಕ್ಕಳಿಗೆ ಕೆಲಸ ಕಾರ್ಯಗಳು, ಸಂಸ್ಕಾರಗಳನ್ನಷ್ಟೇ ಕಲಿಸಿದರೆ ಸಾಲದು ; ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಲು, ತಾಳ್ಮೆ, ಹೊಂದಾಣಿಕೆಯಿಂದ ಬದುಕಲು ಕಲಿಸಿ. ತೀರಾ ಅನ್ಯಾಯವಾದಾಗ ದನಿಯೆತ್ತುವ ಅಭ್ಯಾಸ ತಪ್ಪಲ್ಲ ಎಂಬುದನ್ನು ಮನವರಿಕೆ ಮಾಡಿ ಕೊಡಿ.

2.ಸೊಸೆ ಆಗಮಿಸುತ್ತಿದ್ದಾಳೆ ಎಂದಾದರೆ ಮೊದಲು ಆಕೆಯನ್ನು ಮಗಳಂತೆ ಕಾಣಬೇಕು, ಸಣ್ಣಪುಟ್ಟ ತಪ್ಪುಗಳನ್ನು ಕ್ಷಮಿಸಿ ಸ್ನೇಹಿತರಂತೆ ವರ್ತಿಸಬೇಕು ಎಂಬ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಿ.

3.ಮೊದಲೆಲ್ಲ ಮಗ ಪ್ರತಿಯೊಂದಕ್ಕೂ ಅಮ್ಮಾ.. ಎನ್ನುತ್ತಾ ಬೆನ್ನ ಹಿಂದೆ ಬರುತ್ತಿದ್ದ, ಪ್ರಮುಖ ಕಾರ್ಯಗಳಿಗೆಲ್ಲಾ ಅಪ್ಪನ ಸಲಹೆಗಳನ್ನು ಕೇಳುತ್ತಿದ್ದ, ಸೊಸೆ ಬಂದ ಮೇಲೆ ಬದಲಾಗಿದ್ದಾನೆ. ಎಲ್ಲಾ ಅವಳ ಕುಮ್ಮಕ್ಕಿನಿಂದ ಎಂದು ಸೊಸೆಯ ಮೇಲೆ ಗೂಬೆಕೂರಿಸಬೇಡಿ. ಸೊಸೆ ಮಗನ ಕಷ್ಟಸುಖದಲ್ಲಿ ಭಾಗಿಯಾಗುವವಳು, ಆಪ್ತಗೆಳತಿ, ಪ್ರಾಣಸಖಿ.. ಅಂದ ಮೇಲೆ ಮಗನಿಗೂ ಅವಳ ಆಲೋಚನೆಗಳು, ಸಲಹೆಗಳು ಹಿತವಾಗುವುದರಲ್ಲಿ ತಪ್ಪಿಲ್ಲ.. ಅವಳನ್ನು ಹಚ್ಚಿಕೊಂಡರೆ ಸಂಕಟಪಡದೆ ಖುಷಿಪಡಿ.

4.ಸೊಸೆ ತನ್ನ ಹೆತ್ತವರು, ಒಡಹುಟ್ಟಿದವರನ್ನು ಬಿಟ್ಟು ಪತಿಯ ಮೇಲೆ ಭರವಸೆಯಿಟ್ಟು ಬಂದಿರುತ್ತಾಳೆ. ಮಗ ಅವಳಿಗೆ ನಿರಾಸೆ ಮಾಡಬಾರದು ಎಂಬ ಮನಸ್ಸು ಹಿರಿಯ ಸದಸ್ಯರಿಗಿರಲಿ.

5.ಅತ್ತೆಮಾವ ಒಂದೆರಡು ಮಾತು ಆಡಿದರೆ ತನಗೇನೂ ಅವಮಾನವಲ್ಲ, ಅದು ತನ್ನ ಹಿತದೃಷ್ಟಿಯಿಂದ ಎಂಬ ಭಾವನೆ ಸೊಸೆಯಾದವಳು ಬೆಳೆಸಿಕೊಳ್ಳಬೇಕು.

6.ತನ್ನ ಪತಿ ತನಗೆ ಮಾತ್ರ ಗಮನಕೊಡಬೇಕು ಎಂಬ ನಿರ್ಬಂಧ ಬೇಡ. ತಾನು ಬರುವುದಕ್ಕಿಂತ ಮೊದಲು ಅವನಿಗೂ ಆಪ್ತೇಷ್ಟರ ಬಳಗವಿತ್ತು ಎಂಬುದು ಪತ್ನಿಗೆ ನೆನಪಿರಲಿ.

7.ತನ್ನನ್ನು ಪ್ರೀತಿಸುವ, ಮನದಾಸೆ ತಿಳಿದು ನಡೆವ ಪತಿಯನ್ನು ಸಾಕಿ, ಸಲಹಿ, ಬೆಳೆಸಿದವರ ಶ್ರಮಕ್ಕೆ ಗೌರವಕೊಡುವುದು ಸೊಸೆಯಾದವಳ ಧರ್ಮ. ಅವರ ಆರೋಗ್ಯದ ಕಾಳಜಿ ತನ್ನ ಜವಾಬ್ದಾರಿ ಎಂಬ ಉದಾರತೆಯಿರಲಿ.

8.ಮೊನ್ನೆಮೊನ್ನೆ ಬಂದವಳಿಗೆ ಮನೆಯ ಜವಾಬ್ದಾರಿ, ಅಡುಗೆ ಮನೆಯ ಅಧಿಕಾರ ಕೊಡಲಾರೆ, ಮಗನಿಗೇನು ಗೊತ್ತು ವ್ಯವಹಾರ.. ಹಣದ ಕಪಾಟಿನ ಬೀಗದಕೈ ನಾನು ಮಗನಿಗೆ ಹಸ್ತಾಂತರಿಸಲಾರೆ ಎಂದು ಹಿರಿಯರಾದವರು ಹಠ ಹಿಡಿಯದೆ ಜವಾಬ್ದಾರಿಯನ್ನು ಹಸ್ತಾಂತರಿಸಿ. ಬೆಂಬಲವಾಗಿ ನಿಂತು ಮಾರ್ಗದರ್ಶನ ಮಾಡಿ. ಬಿಟ್ಟುಕೊಟ್ಟು ಬೆನ್ನುತಟ್ಟುವುದರಲ್ಲೂ ಹಿರಿತನವಿದೆ.

9.ನಾದಿನಿಯರು, ಭಾವಮೈದುನಂದಿರು ತನಗೂ ಅಕ್ಕತಂಗಿ ತಮ್ಮಂದಿರಂತೆ ಎಂದು ಬಗೆದು ಅಪರೂಪಕ್ಕೆ ಆಗಮಿಸುವ ಅವರನ್ನು ಪ್ರೀತಿಯಿಂದ ಸತ್ಕರಿಸುವುದು ಸೊಸೆಯಾದವಳ ಸದ್ಗುಣವಾಗಿರಲಿ.

10.ಸೊಸೆಯ ತವರ ಕಡೆಯ ಬಂಧುಗಳು ಆಗಮಿಸಿದಾಗ ಸತ್ಕರಿಸಿ ಉಪಚರಿಸಿ. ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಂಬಂಧಗಳು ಹಳಸುವಂತೆ ಮಾಡದಿರಿ.

      ಕುಟುಂಬದ ಸದಸ್ಯರ ಪ್ರತಿ ನಡತೆಯನ್ನು ಬೆಳೆಯುತ್ತಿರುವ ಮಕ್ಕಳು ಗಮನಿಸುತ್ತಿರುತ್ತಾರೆ. ಅರಿವಿಲ್ಲದೆಯೇ ಅವರೊಳಗೆ ಅದೇ ಗುಣ ಬೆಳೆಯುತ್ತದೆ. ಪ್ರೀತಿಸುವ ಗುಣವಿರುವ ಕುಟುಂಬದಲ್ಲಿ ಬೆಳೆದ ಮಕ್ಕಳು ಅದನ್ನೇ ರೂಢಿಸಿಕೊಂಡರೆ .. ದ್ವೇಷ ಅಸೂಯೆಗಳೇ ತಾಂಡವವಾಡುವ ಪರಿಸರದಲ್ಲಿ ಬೆಳೆದವರಿಗೆ ಸದಾ ಕಚ್ಚಾಡುವ ಅಭ್ಯಾಸ ಬೆಳೆಯುತ್ತದೆ. ಬಾಂಧವ್ಯವನ್ನು ಕೆಡದಂತೆ ಕಾಪಾಡಿ ಕುಟುಂಬವು ನಗುನಗುತ್ತಾ ಬಾಳುವಂತೆ ಮಾಡುವುದು ಕುಟುಂಬದ ಪ್ರತೀ ಸದಸ್ಯನ ಕೈಯಲ್ಲಿದೆ.

✍️... ಅನಿತಾ ಜಿ.ಕೆ.ಭಟ್.
18-09-2020.

Tuesday, 23 March 2021

ಜೋಡೆತ್ತು

 


#ಜೋಡೆತ್ತು

ನಡೆಯೋಣ ಬಾ ಹೀಗೆ ಜೋಡಿಯಾಗಿ
ಹೂಡೋಣ ಒಡೆಯನ ಕೂಳಿಗಾಗಿ||

ಹದವಾಗಿ ಹೆಜ್ಜೆ ಒಂದೊಂದೆ ಇರಿಸಿ
ನೇಗಿಲಹೊರೆಗೆ ಹೆಗಲಾಗಿ
ಮಳೆಚಳಿಸುಡುಬಿಸಿಲು ಹಸಿಕೆಸರ
ಲೆಕ್ಕಿಸದೆ ದುಡಿಯೋಣ ಪೈರಿಗಾಗಿ..||

ಆಗೊಮ್ಮೆ ಈಗೊಮ್ಮೆ ಒದೆಗೆಎದೆಯೊಡ್ಡಿ ನಡೆಯುವುದೀ  ಶ್ರಮಯಾನ
ಭೂತಾಯಿ ಬಸಿರು ಹಸಿರಾಗಿ ತೊನೆದು
ನಿಂತಾಗ ಧನ್ಯವೀ ಮೈಮನ||

ನಾ ಹೆಚ್ಚು ನೀ ಕಮ್ಮಿ ಭೇದವನೆಣಿಸದೆ
ದುಡಿದರೇ ಇಲ್ಲಿ ಇಂಬು
ಸೋಲಹುದು ನೋವಹುದು ಒಗ್ಗಟ್ಟುಮರೆತು    ತಾಡಿದರೆ ನೀಲಿ ಕೊಂಬು||

ನಮ್ಮಯ ಸೇವೆ ಒಡೆಯನಬೆವರಹನಿ
ನೆಲದಾಯಿ ಹರಸಿದರೆ ಫಸಲು
ಹಸಿದಿರುವ ಹೊಟ್ಟೆಗೆ ಅನ್ನವನೀಯುವ
ಕಾಯಕ ಜಗದಲಿ ಮಿಗಿಲು||

✍️ಅನಿತಾ ಜಿ.ಕೆ.ಭಟ್.
24-03-2021.

#momspressokannada #ದಿನದಚಿತ್ರ


Sunday, 21 March 2021

ಕೊಳಲ ಗಾನ

 

#ಕೊಳಲಗಾನ

ಕೃಷ್ಣ ನಿನ್ನ ಕೊಳಲಗಾನ
ಕೇಳಲೆನಿತು ಸುಮಧುರ
ಹರಿವ ಯಮುನೆ ತಟದಿ
ಮೋಹಗೊಳಿಪ ಸುಸ್ವರ||೧||

ರಾಧೆಯೊಲಿದ ವೇಣುನಾದ
ಮನದಾಳದಿ ಮಾರ್ದನಿ
ಮುರಳಿಯೊಲುಮೆ ನಿತ್ಯ ಬಯಸಿ
ಕನಸಿನಲ್ಲಿ ಇನಿದನಿ||೨||

ಕೋಗಿಲೆಯು ಹಾಡು ಮರೆತು
ಆಲಿಸುತ ನಿನ್ನ ಇಂಪು
ಗರಿಬಿಚ್ಚಿಹ ನವಿಲುಗಳ
ಕುಣಿತ ನೋಟ ಸೊಂಪು||೩||

ಪ್ರೀತಿ ಲಹರಿಯು  ಶರಧಿಯಾಗಿ
ಚಿತ್ತ ಮುತ್ತಿಹೆ ಮಾಧವ
ನಿನ್ನ ಪ್ರೇಮದ ಭಾವಬೆಸುಗೆಯು
ಬರಿಯ ರಾಧೆಗೇಕೆ ಕೇಶವ?||೪||

✍️..ಅನಿತಾ ಜಿ.ಕೆ.ಭಟ್.
21-03-2021.

ದತ್ತ ಚಿತ್ರ 👇








Friday, 19 March 2021

ಪ್ರೀತಿ

 




#ಪ್ರೀತಿ

ಮುಗಿಲಬಾಗಿಲಲಿಣುಕಿ ಕದಿರೆಸೆವ
ರವಿಗೆ ಇಬ್ಬನಿ ಇಳೆಯ ಪ್ರೀತಿ||
ಸಾಗರದಂಚಿನಲಿ ಮುಳುಗೆದ್ದು
ಬರುವಾಗ ತಂದಾನ ಮತ್ತದೇ ಪ್ರೀತಿ||೧||

ಹಾಲ್ಗೆನ್ನೆ ಹಸುಳೆಯ ಅಳುಕೇಳಿ ಬಂದೆತ್ತಿ
ರಮಿಸುವ ಅಮ್ಮನ ಪ್ರೀತಿ||
ಹಾಲ್ಜೇನನುಣಿಸಿ ಅಪ್ಪಿ ಮುದ್ದಾಡಿ
ಹರಸುವ ಅವ್ವನ ಪ್ರೀತಿ||೨||

ಕುಡಿನೋಟದರಸಿಯ ಕಡೆತನಕ ಕಾಯುವೆ
ನುಡಿದಿಹ ಒಡೆಯನ ಪ್ರೀತಿ||
ದುಡಿದುಂಬ ಬಡವನು ಮಡದಿಗೆ
ತೊಡಿಸುವ ವಜ್ರವೈಢೂರ್ಯವೆ ಪ್ರೀತಿ||೩||

ಹಣ್ಣಿನಮರದಲಿ ಗಿಣಿಯನು ತೋರಿಸಿ
ಕೆಣಕುವ ಅಣ್ಣನ ಪ್ರೀತಿ||
ಸಣ್ಣವನೀನೆಂದು ಬಣ್ಣಿಸಿ ಹೊಗಳುವ
ಕಣ್ಣಲಿ ಸೋದರ ಪ್ರೀತಿ||೪||

ಅಳತೆಗೆ ನಿಲುಕದೆ ಎದೆಯನ್ನಾಳುವ
ಮಧುರಾನುಭವ ಪ್ರೀತಿ||
ಸೃಷ್ಟಿಯಸೊಬಗಿನ ಕಣಕಣದಲ್ಲಿ
ಅಡಗಿಹ ಸವಿಯದು ಪ್ರೀತಿ||೫||

✍️ ಅನಿತಾ ಜಿ.ಕೆ.ಭಟ್.
19-03-2021.



Saturday, 13 March 2021

ಮುಗ್ಧತೆ

 


#ಮುಗ್ಧತೆ


ಅರರೇ....
ಯಾಕ್ ಹಿಂಗೇ ನಗ್ತೀಯಾ ನಿಂಗೀ
ಇದು ನನ್ನಪ್ಪ ತಂದಿರೋ ಕೆಂಪಂಗಿ...

ನಿನ್ನ ನಗುವಲ್ಲಿ ತುಂಬೈತೆ ಸೆಳೆತ
ಅದರ್ಮುಂದೆ ಸೋತೈತೆ ಅಯಸ್ಕಾಂತ...

ನಾ ಕೊಡ್ಲೇ ನಿನ್ ಬಾಯ್ಗೆ ಕವಳಾ
ಆಗೋಯ್ತು ಬಾಯ್ಬಣ್ಣ ಹವಳಾ...

ತೋಟಕ್ಕೆ ನಾ ಬರುವೆ ನಿನ್ ಕೂಡೇ
ಅಪ್ಪಮ್ಮಂಗೆ ಹೇಳ್ಬೇಡ ನೋಡೇ...

ಮಡಿ ಮಡಿ..ದೂರ ಸರಿ ಅಂದಾರು ಅಜ್ಜಿ
ಜತೆಗೂಡಿ ಆಡಲು ನಂಗ್ಬೇಕು ನಿಂಗಿ ಅಜ್ಜಿ...

ಹೀಗೆಲ್ಲ ಅನ್ಬೇಡಿ ಅಣ್ಣೇರ ಬಾಲೆ
ಕೋಪಮಾಡ್ಯಾರು ದನಿ ನನ್ನ್ ಮ್ಯಾಲೇ..

ತೋಟ್ದಲ್ಲಿ ಕೆಲ್ಸ ಇನ್ನೂ ಮುಗ್ದಿಲ್ಲೆ ಮಾಣೀ
ತರಗೆಲೆ ತರಲು ಹಿಡೀಬೇಕೀಗ ಗೋಣಿ..

ನಾ ಕೆಲ್ಸದೋಳು ನಂಗೆ ಬೈರಾಸು ಮುಂಡಾಸು
ನೀನೀ ಮನೆಯ ಬೆಳಕು ನಿನ್ನ ನಗುವೆಂಥಾ ಸೊಗಸು...

ತುಂಟಾಟ ಬಿಟ್ಟು ಮಲಗು ಅಮ್ಮನ ಮಡಿಲಲಿ
ಹಾಡೋಳು ನಿನ್ನಮ್ಮ ಚೆಂದದ ಜೋಗುಳದ ಲಾಲಿ...

ಚೆಂದಾಗಿ ಬಾಳು ದನಿಮನೆಯ ಕಂದಾ
ಆಳಾಗಿ ದುಡಿವ ನನಗದುವೇ ಆನಂದ...

✍️... ಅನಿತಾ ಜಿ.ಕೆ.ಭಟ್.
13-03-2021.
ಚಿತ್ರ ಕೃಪೆ:- ಹವಿಸವಿ ಬಳಗ.


Friday, 12 March 2021

ಅತಿಥಿ ದೇವೋಭವ- ಸೊಸೆಯನ್ನು ಬೆಂಬಲಿಸಿದ ಮಾವ

 



       'ಅತಿಥಿ ದೇವೋಭವ' ಎಂದು ಸಂಸ್ಕೃತದಲ್ಲಿ ಒಂದು ನುಡಿಯಿದೆ. ಅತಿಥಿಗಳನ್ನು ದೇವರೆಂದೇ ಭಾವಿಸಿ ಸತ್ಕರಿಸಬೇಕೆಂಬುದು ಅದರ ತಾತ್ಪರ್ಯ.

ಅತಿಥಿ ಅಂದರೆ ತಿಥಿಯನ್ನು ನೋಡದೆಯೆ ಬರುವವರು, ಹೇಳದೆಯೆ ಅನಿರೀಕ್ಷಿತವಾಗಿ ಬಂದವರು ಎಂಬುದಾಗಿ ಅರ್ಥ. ಆದರೆ ನಾವಿಂದು  ಮೊದಲೇ ತಿಳಿಸಿ ಬರುವವರಿಗೂ,  ಆಮಂತ್ರಿಸಿ ಬರುವವರಿಗೂ ಅಭ್ಯಾಗತರು ಎನ್ನುವ ಬದಲು ಅತಿಥಿಗಳೆಂದೇ ಹೇಳುವುದು ಅಭ್ಯಾಸವಾಗಿಬಿಟ್ಟಿದೆ. ಮನೆಗೆ ಯಾರಾದರೂ ಬರುತ್ತಾರೆಂದರೆ ಗೃಹಿಣಿಯರ ಕೈಕಾಲುಗಳಲ್ಲಿ ಮಿಂಚಿನ ಓಟ ಆರಂಭವಾಗುತ್ತದೆ. ಮನೆಯನ್ನು ಒಪ್ಪ ಓರಣವಾಗಿ ಇಡುವುದರಿಂದ ಆರಂಭಿಸಿ, ಅಡುಗೆ, ಸಿಹಿತಿನಿಸು ಮಾಡುವುದರವರೆಗೂ ಅವಳ ಗೌಜಿ ಮುಂದುವರಿಯುತ್ತದೆ. ಕೆಲವೊಮ್ಮೆ ಮಾಡಬೇಕು ಮಾಡಬೇಕು ಅಂದು ಕೊಂಡು ಮುಂದೂಡುತ್ತಿದ್ದ ಬಲೆತೆಗೆಯುವ ಕೆಲಸ, ರೂಮುಗಳ ಸ್ವಚ್ಛತೆ, ಕಿಟಿಕಿ ಬಾಗಿಲುಗಳನ್ನು ಒರೆಸುವ ಕೆಲಸಗಳೆಲ್ಲ ಫಟಾಫಟ್ ಮಾಡಿಬಿಡುವಂತೆ ಅವಳೊಳಗೆ ಉತ್ಸಾಹ ತುಂಬುವುದೇ ಆಗ.

       ಮನೆಯವರು ಸಹಕರಿಸಿದರೆ ಖುಷಿಪಡುವ ಗೃಹಿಣಿ, ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಟಿವಿ ನೋಡುತ್ತಾ ಪೈಪರ್ ಓದುತ್ತಾ ಕಾಲಕಳೆದರೆ ಬೇಸರಿಸಿಕೊಳ್ಳುವುದು, ವಟಗುಟ್ಟುವುದು ಇದ್ದೇ ಇರುತ್ತದೆ. ಮಕ್ಕಳಲ್ಲಂತೂ ಬಂದವರೆದುರು ನೀವು ಹೀಗಿರಬೇಕು, ಹಾಗಿರಬಾರದು, ಇಂತಹಾ ಪ್ರಶ್ನೆ ಗಳನ್ನು ಕೇಳಲೇಬಾರದು ಎಂಬೆಲ್ಲ ಆಜ್ಞೆಗಳನ್ನು ಹೊರಡಿಸುತ್ತಲೇ ಇರುತ್ತಾಳೆ. "ಹೋಗಿಯಮ್ಮಾ ನೀವು.. ನಮಗೇನೂ ಅಷ್ಟೂ ಗೊತ್ತಾಗಲ್ವಾ..." ಎಂಬ ಉಡಾಫೆಯ ಉತ್ತರ ಸಿಗುವುದೂ ಸಹಜ.ಬರುವವರಿಗೆ ಸಿಹಿ ಇಷ್ಟವೋ ಖಾರ ಇಷ್ಟವೋ ತಿಳಿದುಕೊಂಡು ಸಿಹಿತಿನಿಸು ಅಥವಾ ಕುರುಕಲು ತಿಂಡಿ ತಯಾರಿಸಿ ಡಬ್ಬದೊಳಗೆ ಮುಚ್ಚಿಡುತ್ತೇವೆ. ಆಗಾಗ ಬಂದು ತೆಗೆದುಕೊಳ್ಳುವ ಮಕ್ಕಳಿಗಂತೂ.. "ನೆಂಟರು ಬರುವವರೆಗೆ ಉಳಿಸಿ ಆಯ್ತಾ" ಅಂತ ಹೇಳುತ್ತಾ ಇರಬೇಕಾಗುತ್ತದೆ. ಅಡುಗೆ ಏನು ಮಾಡಲಿ ಅಂತ ಗಂಡನನ್ನೊಮ್ಮೆ ಕೇಳಿದಂತೆ ನಾಟಕ ಮಾಡಿ ತನಗೆ ಸರಿಕಂಡಂತೆಯೇ ಅಡುಗೆ ಮಾಡಲು ಹೊರಡುತ್ತಾಳೆ. ಅದಾಗಿಲ್ಲ ಇದಾಗಿಲ್ಲ ಅಂತ  ನೆಂಟರು ಬರುವವರೆಗೂ ಗಡಿಬಿಡಿ ಮುಗಿಯುವುದಿಲ್ಲ.


       ನೆಂಟರು ಬಂದಾಗ ಅವರಿಗೆ ಕೈ ಕಾಲು ತೊಳೆಯಲು ನೀರು ಕೊಟ್ಟು, ಒರೆಸಿಕೊಳ್ಳಲು ಟವೆಲ್ ನೀಡಿ ಒಳಗೆ ಕರೆದುಕೊಂಡು ಹೋಗಿ, ಸಾವಕಾಶವಾ ಎಂದು ವಿಚಾರಿಸಿಕೊಂಡು  ಬೆಲ್ಲ, ನೀರು ಕೊಟ್ಟು  ಉಪಚರಿಸುವುದು ನಮ್ಮ ಪದ್ಧತಿ. ನಂತರ ತಿಂಡಿ ಕಾಫಿಯ ಸತ್ಕಾರ. ಬಂದವರನ್ನು ಪ್ರೀತಿಯಿಂದ, ಗೌರವದಿಂದ ಬಹುವಚನದಿಂದಲೇ ಮಾತನಾಡಿಸುವುದು ಸಂಪ್ರದಾಯ. ಇದು ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದ ಕ್ರಮವಾಗಿದ್ದು ನಮ್ಮ ಮಕ್ಕಳಿಗೂ ಇದನ್ನೇ ಕಲಿಸುತ್ತಿದ್ದೇವೆ.

       ಗೃಹಿಣಿ ಎಷ್ಟೇ ಆಯಾಸವಾದರೂ ಬಂದವರೆದುರು ತೋರಿಸಿಕೊಳ್ಳಲು ಹೋಗುವುದಿಲ್ಲ. ನಗುಮೊಗದಿಂದಲೇ ಸ್ವಾಗತಿಸಿ ಉಪಚರಿಸುವ ಅವಳ ಪರಿ ಅನನ್ಯ. ಮಾಡಿದ ಎಲ್ಲಾ ಅಡುಗೆಯ ಬಗೆಗಳಿಗೂ ಉಪ್ಪು, ಖಾರ, ಸಿಹಿ ಪ್ರಮಾಣ ಹದವಾಗಿಯೇ ಇರಲಪ್ಪಾ ಎಂದು ಮನದೊಳಗೆ ಬೇಡಿಕೊಳ್ಳುತ್ತಾಳೆ.

         ನಮ್ಮ ಮನೆ ಕಟ್ಟುತ್ತಾ ಇದ್ದಂತಹ ಸಂದರ್ಭದಲ್ಲಿ ಕಾಮಗಾರಿಯನ್ನು ವೀಕ್ಷಿಸಲು ಮಾವನವರು ಬರುವವರಿದ್ದರು. ಅವರ ಜೊತೆ ಬಂಧುವೊಬ್ಬರನ್ನೂ "ಬನ್ನಿ.. ಹೋಗೋಣ.. ಮಗ ಮನೆ ಕಟ್ಟಿಸುತ್ತಿದ್ದಾನೆ.. ನೋಡಿಬರೋಣ.." ಎಂದು ಒತ್ತಾಯಿಸಿ ಕರೆದುಕೊಂಡು ಬಂದಿದ್ದರು. ಬಂದಾಗ ಬಾಯಾರಿಕೆ ನೀಡಿ, ಎಲ್ಲರಿಗೂ ತಿಂಡಿ ಕಾಫಿ ಕೊಟ್ಟು ಇಪ್ಪತ್ತು ಕಿಮೀ ದೂರದ ಸೈಟ್ ಕಡೆಗೆ ಕರೆದುಕೊಂಡು ಹೋಗಿ ತೋರಿಸಿ ಬಂದೆವು. ಸೈಟಿಗೆ ಹೋಗಲು ಇದ್ದುದರಿಂದ ನಾನು ಬೆಳಗ್ಗೆಯೇ ಅಡುಗೆ ಮಾಡಿಟ್ಟಿದ್ದೆ. ಬಂದಾಗ ನಮ್ಮವರು "ಅವರಿಗೆ ಖಾರ ಖಾರದ ಅಡುಗೆ ಆಗಬೇಕು" ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದರು. ಆಗ ನಮ್ಮ ಮಕ್ಕಳಿಬ್ಬರೂ ಚಿಕ್ಕವರಾದ್ದರಿಂದ ಸಾಂಬಾರ್ ತುಂಬಾ ಖಾರವೇನೂ ಮಾಡುತ್ತಿರಲಿಲ್ಲ. ನೆಂಟರಿಗೆಂದೇ ಸ್ವಲ್ಪ ಜಾಸ್ತಿಯೇ ಖಾರ ಮಾಡಿದ್ದೆ ಆ ದಿನ. ಆದರೂ ಪತಿ ಹೇಳಿದ ಮೇಲೆ ಇನ್ನೂ ಖಾರ ಬೇಕೇನೋ ಅಂದುಕೊಂಡು ಬೇಗನೇ ದೇವಸ್ಥಾನದ ಶೈಲಿಯ ಸಾರು ಕೂಡಾ ತಯಾರಿಸಿ, ಊಟಕ್ಕೆ ಕರೆದೆ.

       ಎಲ್ಲರಿಗೂ ಪಂಕ್ತಿ ಹಾಕಿದೆ. ಸಣ್ಣ ಮಗನಿಗೆ ಒಮ್ಮೆ ಊಟಮಾಡಿಸಿದ್ದರೂ ಸಹ "ಆನೂ ಕೂರ್ತೆ" ಅಂತ ಪುನಃ ಎಲ್ಲರೊಂದಿಗೆ ಕುಳಿತುಕೊಂಡ. ಅವನಿಗೆ ದೊಡ್ಡವರ ಜೊತೆಗೆ ಕುಳಿತುಕೊಳ್ಳಲು ಸಡಗರ. ಮಕ್ಕಳು ಆಗಾಗ ಅದು ಬೇಕು, ಇದು ಬೇಕು  ಅನ್ನುತ್ತಿದ್ದಾಗ ಮಾವನವರು "ಅನಿತಾ.. ನೀನು ಎಲ್ಲವನ್ನೂ ಇಲ್ಲಿ ತಂದಿಡು. ಬಡಿಸಲು ಸುಲಭ" ಅಂದರು. ಎಲ್ಲವನ್ನೂ ಪಂಕ್ತಿಯ ಮುಂದೆಯೇ ಇಟ್ಟು ಬಡಿಸತೊಡಗಿದೆ. ಸಾರನ್ನ ಮೊದಲಿಗೆ ಬಡಿಸಿದೆ. ನಂತರ ಸಾಂಬಾರಿನ ಸರದಿ. ಸಾಂಬಾರು ಅನ್ನ ಎರಡು ತುತ್ತು ಉಂಡ ನೆಂಟರು " ಇದೇನು ಹೀಗೆ .. ಒಂಥರಾ ಇದೆ.. ಬಹಳ ಸಪ್ಪೆ ಇದೆ.." ಎಂದು ಏನೇನೂ ಕುಂದುಕೊರತೆಗಳನ್ನು ಹೇಳಲಾರಂಭಿಸಿದರು. ನನಗೋ ಒಂಥರಾ ದಿಗಿಲು.. ಏನು ಮಾಡಲಪ್ಪಾ ಈಗ ಅಂತ.. ಅವರ ಪಕ್ಕದಲ್ಲೇ ಕುಳಿತಿದ್ದ ಮಾವನವರು ಎದುರಿಟ್ಟಿದ್ದ ಉಪ್ಪಿನಕಾಯಿಯ ಬಾಟಲಿಯನ್ನು ಪಕ್ಕಕ್ಕೆ ಎಳೆದುಕೊಂಡು ಅದರಿಂದ ಒಂದು ಚಮಚ ಉಪ್ಪಿನಕಾಯಿ ತಾವೇ ಬಡಿಸಿಕೊಂಡು "ನೋಡಿ.. ಸಪ್ಪೆಯಾದರೆ ಹೀಗೆ ಉಪ್ಪಿನಕಾಯಿ ಸೇರಿಸಿಕೊಂಡು ಊಟ ಮಾಡಿ" ಅಂದರು.. ನಾನು ಮಾವನವರ ಆ ಕ್ಷಣದ ಬೆಂಬಲಕ್ಕೆ ಬೆರಗಾಗಿ ನೋಡುತ್ತಲೇ ನಿಂತುಬಿಟ್ಟಿದ್ದೆ. ಬಂಧುಗಳು ಮರುಮಾತನಾಡದೆ ಊಟಮಾಡಿ ಎದ್ದರು.

       ಮಾವನವರು ಆ ಕ್ಷಣ  ನೀಡಿದ ಸಲಹೆ ಎಲ್ಲರಿಗೂ ಉಪಯುಕ್ತ. ಸೊಸೆಯಾದವಳಿಗಂತೂ ಇದಕ್ಕಿಂತ ಹೆಚ್ಚು ಇನ್ನೇನು ಬೇಕು. ಅಡುಗೆಯ ರೀತಿ, ಉಪ್ಪು ಖಾರದ ಪ್ರಮಾಣ ಎಲ್ಲವೂ ಒಬ್ಬೊಬ್ಬರಲ್ಲಿ ಒಂದೊಂದು ತರಹ ಇರುವುದು ನಿಜವೇ. ಆದರೆ ಪ್ರೀತಿಯಿಂದ ಬಡಿಸುವಾಗ ಸಂತೃಪ್ತಿಯಿಂದ ಹೊಟ್ಟೆತುಂಬಾ ಉಣ್ಣಲು ಅದೊಂದು ದೊಡ್ಡ ತೊಂದರೆಯಾಗುವಂತೆ ಇರಲೂ ಇಲ್ಲ. ಸಣ್ಣ ವಿಷಯವನ್ನೂ ದೊಡ್ಡದಾಗಿ ಬಿಂಬಿಸಹೊರಟವರಿಗೆ ಮಾವನವರು ಉತ್ತಮ ಜೀವನ ಪಾಠವನ್ನೇ ಕಲಿಸಿದ್ದರು. ಕೆಲವು ತಿಂಗಳ ಹಿಂದೆ ಮಾವನವರನ್ನು ಕಳೆದುಕೊಂಡ ನಂತರ ನನಗಂತೂ ಈ ಘಟನೆ ಆಗಾಗ ನೆನಪಾಗುತ್ತಲೇ ಇರುತ್ತದೆ.

        ನೆಂಟರು ಬರುವ ಮೊದಲು ಹೇಗೋ ತಯಾರಿಗಳು ಆಗಿಬಿಡುತ್ತವೆ. ಆದರೆ ಸಾವಾಲಾಗುವುದು ನಂತರದ ಸ್ವಚ್ಛತಾ ಕಾರ್ಯ. ಪುಟ್ಟ ಮಕ್ಕಳಿರುವ ಮನೆಯಲ್ಲಿ ಸಿಹಿ ತಿಂಡಿ, ಕುರುಕಲು ತಿಂಡಿಗಳನ್ನು ಆಚೀಚೆ ಅಡ್ಡಾಡುತ್ತಾ ತಿಂದರಂತೂ ನೆಲವೆಲ್ಲಾ ಕಾಲಿಗಂಟಿದಂತೆ ಭಾಸವಾಗುತ್ತದೆ. ಇಡೀ ಮನೆಯ ನೆಲವೊರೆಸುವ ಕೆಲಸ ಜರೂರಾಗಿ ಆಗಲೇಬೇಕಾಗುತ್ತದೆ. ತೊಳೆಯಲು ಪಾತ್ರೆಗಳ ರಾಶಿ, ಕೆಳಗಿರಿಸಿದ ಹೊಸ ಪಾತ್ರೆಗಳನ್ನೆಲ್ಲ ಮತ್ತೆ ಯಥಾಸ್ಥಾನದಲ್ಲಿ ಇರಿಸುವುದು.. ಉಳಕೊಳ್ಳಲು ಬಂದವರಾಗಿದ್ದರೆ ಬಟ್ಟೆಗಳನ್ನು ತೊಳೆದು ಮಡಚಿಡುವ ಕೆಲಸಗಳು ಹೀಗೆ .. ಹತ್ತು ಹಲವು ಕೆಲಸಗಳು ಗೃಹಿಣಿಯ ಮುಂದಿರುತ್ತವೆ. ಕೆಲಸಗಳು ಹೆಚ್ಚಾಗುತ್ತವೆಂದು ಗೃಹಿಣಿ ನೆಂಟರನ್ನು ಆಹ್ವಾನಿಸದೇ ಇರುವುದಾಗಲಿ, ಬಂದಾಗ ಅಸಡ್ಡೆ ತೋರುವುದಾಗಲೀ ಎಂದಿಗೂ ಮಾಡಳು. ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಉಂಟಾಗುತ್ತದೆ. ಬಂಧು ಬಳಗದ ಜೊತೆಯ ಖುಷಿಯ ಕ್ಷಣಗಳು ಬಾಳಿನ ಪುಟಗಳಲ್ಲಿ ಅಚ್ಚಳಿಯದೆ ನಿಂತಿರುತ್ತವೆ.

✍️... ಅನಿತಾ ಜಿ.ಕೆ.ಭಟ್.
13-03-2021.

ಚಿತ್ರ ಕೃಪೆ:- ಅಂತರ್ಜಾಲ.

ಕೈ ತುತ್ತು

 


#ಕೈ ತುತ್ತು

ತಾಯಿಯು ಕೊಡುವ
ಕೈ ತುತ್ತು
ಉಂಡವಗಲ್ಲವೇ
ರುಚಿಗೊತ್ತು !!

ಕಂದಗೆ ಉಣ್ಣಲು
ಮನಸೇ ಇಲ್ಲ
ಕಥೆಯನು ಹೆಣೆದು
ಚಂದ್ರನ ಕರೆದು
ಅನ್ನವ ಬಾಯಿಗೆ
ತುರುಕುವಳಲ್ಲ!!

ಕಂದಗೆ ಕಣ್ಣಲಿ
ನಿದ್ರೆಯ ಜೊಂಪು
ತಾಯ ಕಂಠದಲಿ
ಜೋಗುಳ ಇಂಪು!!

ಕಂದನು ನಿದ್ರೆಗೆ
ಜಾರುತಲಿರಲು
ಕಾಲಿಗೆ ಚಕ್ರವ
ಕಟ್ಟುವಳಲ್ಲ!!

ಅರೆಬರೆ ಕೆಲಸವ
ಅಂದದಿ ಮುಗಿಸಿ
ಆ ಕಡೆ ಈ ಕಡೆ
ಒಪ್ಪ ಓರಣವಾಗಿಸಿ!!

ಕಂದನ ದಿಟ್ಟಿಸಿ
ನೋಡುವಳಲ್ಲ
ಒಡಲಿನ ಕುಡಿಯನು
ಹರಸುವಳಲ್ಲ!!

ದೇವನು ವೀಕ್ಷಿಸಿ
ಮೆಚ್ಚಿಹನಲ್ಲ
ಭೂಲೋಕದಿ ಕಂದಗೆ
ಜನನಿಯೆ ಶ್ರೀರಕ್ಷೆ ಎಂದಿಹನಲ್ಲ!!

✍️..ಅನಿತಾ ಜಿ.ಕೆ.ಭಟ್.
12-03-2021.


Thursday, 11 March 2021

ಬನ್ನಿ ಎಲ್ಲರೂ ಸೇರಿ ಕುಣಿಯೋಣ

 


#ಬನ್ನಿ ಎಲ್ಲರೂ ಸೇರಿ ಕುಣಿಯೋಣ

ಮಹಾಶಿವ ದೇವನ ಭಜಿಸೋಣ
ಮನದ ನೋವನು ಮರೆಯೋಣ
ಆನಂದದಿ ತಲೆಬಾಗಿ ಕುಣಿಯೋಣ
ಬನ್ನಿ.. ಎಲ್ಲರೂ ಸೇರಿ ಕುಣಿಯೋಣ||೧||

ಊರದೇವರ ಜಾತ್ರೇಯಂತೆ
ಶಿವನ ತೇರು ಎಳೆಯುವರಂತೆ
ಭವದ ಚಿಂತೆಯ ಕಳೆಯುವನಂತೆ
ಬನ್ನಿ... ಎಲ್ಲರೂ ಸೇರಿ ಕುಣಿಯೋಣ||೨||

ಗೆಜ್ಜೆಯ ನಾದಕೆ ಮುದಗೊಂಡ ಮನವು
ಹೆಜ್ಜೆಯ ತಾಳಕೆ ಪರಶಿವನ ಒಲವು
ಲಜ್ಜೆಯ ಬಿಟ್ಟು ನಲಿದರೆ ಗೆಲುವು
ಬನ್ನಿ... ಎಲ್ಲರೂ ಸೇರಿ ಕುಣಿಯೋಣ||೩||

ವರುಷಕ್ಕೊಮ್ಮೆ ಕುಣಿದು ಭಜನೆ
ಹರುಷವೆಮ್ಮ ದಣಿದ ಬದುಕಿಗೆ
ಪರಿಷೆಗೆಮ್ಮ ಹಾಡುನೃತ್ಯ ಮೆರುಗು
ಬನ್ನಿ... ಎಲ್ಲರೂ ಸೇರಿ ಕುಣಿಯೋಣ||೪||

ದೇವ ಕಾಯೋ ಊರಿನೆಲ್ಲ ಜನರ
ಪಚ್ಚೆ ಪೈರು ಹೊಟ್ಟೆಬಟ್ಟೆ ಬಡವರ
ನಿನ್ನನಾಮ ಸೇವೆಗೈವ ಭಕುತಿಬಂಟರ
ಬನ್ನಿ... ಎಲ್ಲರೂ ಸೇರಿ ಕುಣಿಯೋಣ||೫||

ಬನ್ನಿ... ಎಲ್ಲರೂ ಸೇರಿ ಕುಣಿಯೋಣ
ತೇರು ಬರುವುದು ಸೇರಿ ಕುಣಿಯೋಣ
ಶಿವನ ಪಾದಸೇವಿಸಿ ಧನ್ಯರಾಗೋಣ
ವಿಷಕಂಠನ ನೆನೆದು ವೈಷಮ್ಯ ಮರೆಯೋಣ||೬||

ಬನ್ನಿ... ಎಲ್ಲರೂ ಸೇರಿ ಕುಣಿಯೋಣ....
ಬನ್ನಿ .. ಎಲ್ಲರೂ ಭಜಿಸಿ ನಲಿಯೋಣ....

✍️... ಅನಿತಾ ಜಿ.ಕೆ.ಭಟ್.
12-03-2021.
ಚಿತ್ರ ಕೃಪೆ:- ಕಥಾಗುಚ್ಛ


Wednesday, 10 March 2021

ಶಿವ ನಮನ

 



#ಶಿವ_ನಮನ

ಶಿವಶಂಕರ.. ಕರುಣಾಕರ..
ಬಿಲ್ವಪ್ರಿಯ.. ರಕ್ಷಮಾಂ ಚಿನ್ಮಯ..||ಪ||

ನಂದಿವಾಹನ ಹರ ಅಂಬಿಕೆಯರಸ
ಮಾರನ ರಿಪು ಪುಲಿದೊಗಲ ಹಾಸು
ವಂದಿಪೆ ಶಿರಬಾಗಿ ಮದಮೋಹ ನಾಶ
ಸುರಸಂಪೂಜಿತ ಸುಗುಣನೆ ಹರಸು||೧||

ಕೃತ್ತಿವಾಸ ಶುಭಕಾಯ ನೀಲಕಂಧರ
ಪ್ರಭಂಜನಪ್ರಿಯ ಉಮಾಮನೋಹರ
ಭವತಾರಕ ಶಿವ ವಿಶೇಷ ಮಹಿಮ
ಯಶಕಾರಕ ಶರಣು ದೇವದೇವೋತ್ತಮ||೨||

ಢಮರುಗಧರ ನಾಟ್ಯಭೈರವ
ತಮವನಳಿಸೋ ಪಂಚಾಕ್ಷರ ಶಿವ
ನಾಮವ ನುತಿಸೆ ಅಭಯವನೀವ
ದಮನಿತ ದುರ್ದನುಜಾಸುರ, ದೇವ||೩||

ತೋಷಗೊಳುವೆ ನಿನ್ನ ಸೇವೆಯೊಳು
ಈಶ ಸುರೇಶ ಗಿರೀಶ ಸರ್ವೇಶ
ಹರ್ಷವ ಸುರಿಸು ಧರೆಯೊಳು
ಶ್ರೀಶ ನಟೇಶ ಮಹೇಶ ಗೌರೀಶ...||೪||

✍️... ಅನಿತಾ ಜಿ.ಕೆ.ಭಟ್.
10-03-2021.

#ಸೌಹಾರ್ದ ಬಳಗ
#ಸಿಗ್ನೇಚರ್ ಲೈನ್
#ಈಶ ನಿನ್ನ ಸೇವೆಯಲ್ಲೇ ತೋಷವನ್ನು ಕಾಣುವೆ



ಕರುಣಿಸೋ ಸೋಮನಾಥೇಶ್ವರ

 



#ಕರುಣಿಸೋ ಸೋಮನಾಥೇಶ್ವರ#

ಓಂಕಾರರೂಪನೆ ವಿಶ್ವೇಶ್ವರನೇ
ಶಂಕರ ಶಶಿಧರ ಶಂಭುಶಿವ
ಕಿಂಕರನಾಗುವೆ ಉರಗಭೂಷಣ
ಮಂಕನು ಕಳೆಯೋ ಸಾಂಬಶಿವ||೧||

ಭಾಗೀರಥೀಧರನೆ ಭಕ್ತವತ್ಸಲನೆ
ಭಾಗ್ಯವನೀಯೋ ನಾಟ್ಯಪ್ರಿಯ
ತ್ರಿಗುಣನಾಮ ತ್ರಿಕಾಲಜ್ಞಾನಿಯೇ
ಸುಗುಣಸಂಪನ್ನ ದಯಾಮಯ||೨||

ಕುಂದಿರದೆ ಕಾಯೋ ಕೈಲಾಸವಾಸ
ಕಂದರ್ಪಹರ ಗಿರಿಜಾವಲ್ಲಭ
ಇಂದುಶೇಖರ ಪೊರೆ ನಾ ನಿನ್ನ ದಾಸ
ಇಂದು ನಿನಗೀವೆ ಮಂದಾರಸೌರಭ||೩||

ಈಶ  ಸದಾ ನಿನ್ನ ಸೇವೆಯಲ್ಲಿ
ತೋಷವನ್ನು ಕಾಣುವೆ
ಆಶಾಪಾಶ  ಕಳೆಯಲೆಂದು
ಕಾಶೀಪುರಾಧೀಶನನ್ನು ಬೇಡುವೆ ||೪||

ಚರಣ ತಳದಲಿ ತೃಣವಾಗಿಸೆನ್ನನು
ಧರಣಿಯಲ್ಲಿ ಭಜಿಪೆ ದಿವ್ಯನಾಮ
ಕರುಣಿಸೋ ಸೋಮನಾಥೇಶ್ವರ
ಹರಣಕೆ ಮುಕ್ತಿಯಾ ಫಲಸುಮ||೫||

✍️... ಅನಿತಾ ಜಿ.ಕೆ.ಭಟ್.
10-03-2021.

#ಸೌಹಾರ್ದ ಬಳಗ
#ಸಿಗ್ನೇಚರ್ ಲೈನ್:- ಈಶ ನಿನ್ನ ಸೇವೆಯಲ್ಲೇ ತೋಷವನ್ನು ಕಾಣುವೆ.