Sunday, 27 March 2022

ಗಾಂಧಾರಿ ಮೆಣಸು

 




#ಗಾಂಧಾರಿ ಮೆಣಸು

ತರತರದ ಮೆಣಸುಗಳ ಮೆಚ್ಚುತಲಿ
ಸವಿಯುತಲಿ ನನ್ನನೆಂದೂ ಮರೆಯದಿರಿ
ಖಾರದಿ ಸುಂಯ್ಯೆನುತ ಪರಿಮಳದಿ ಘಮ್ಮೆನಲು
ಯಾವಡುಗೆಗೂ ಸೈ ನಾನೇ ಗಾಂಧಾರಿ||೧||

ಕರಾವಳಿಯ ತೀರ ಮಲೆನಾಡ ಮಣ್ಣಿನಲಿ
ನಾನಿದ್ದರೇ ರುಚಿಯು ಗೊಜ್ಜುಸಾರು
ಜೀರಿಗೆ ಮೆಣಸು ಸೂಜಿ ಮೆಣಸು ಕಕ್ಕೆ
ಮುನ್ಚಿ ಹೀಗೆನಗಿಹುದು ಹಲವು ಹೆಸರು||೨||

ವಿಷವನುಣ್ಣುತ ಬೆಳೆದ ಹಲವು ತಳಿಗಳ
ಮೆಣಸು ಕಣ್ಣಿಗಷ್ಟೇ ಬರಿ ಅಂದ ಚಂದ
ಔಷಧಿಯೆ ಆಗುವೆನು ಎಲ್ಲೆಲ್ಲೂ ಬೆಳೆಯುವೆನು
ಸಣ್ಣಗಾತ್ರದಿ ಹೊಳೆವೆ ಪಚ್ಚೆಕೆಂಪಿನಿಂದ||೩||

ನಾಲಿಗೆಗೆ ಕಟುವಾದ ರುಚಿಯನ್ನು ತೋರುವೆ
ಉದರದೊಳಗಿಳಿಯುತಲಿ ಗುಣವು ತಂಪು
ಚಿಲಿಪಿಲಿ ಗುಬ್ಬಕ್ಕ ಕಾಗಕ್ಕನಿಗೆ ಪ್ರಿಯವು
ಗಿಳಿಗಳಿಗೆ ಆಗಾಗ ನನ್ನದೇ ನೆಂಪು||೪||

ಬೇಡದೆಯೆ ಏನನೂ ಹಿತ್ತಲಲಿ ಬೆಳೆಯುವೆ
ಮಾರುಕಟ್ಟೆಯಲೀಗ ಬೆಲೆಯುಳ್ಳ ಮೆಣಸು
ನೋಡದೆಯೆ ಕಣ್ಣೆತ್ತಿ ಕಿತ್ತೆಸೆಯದಿರಿ, ಗುಣವ
ಅರಿಯುತ ಬರಲಿ ಬಳಸುವ ಮನಸು||೫||

✍️... ಅನಿತಾ ಜಿ.ಕೆ.ಭಟ್.
28-03-2022.

Wednesday, 23 March 2022

ಅಂದು- ಇಂದು




#ಅಂದು- ಇಂದು
------------------

ಅಂದು ನಾನಾಗಿದ್ದೆ
ಬಲು  ಚೂಟಿ ತುಂಟಿ
ಇಂದು ಕಂಡೊಡನೆಯೇ
ಕರೆಯುವರೆನ್ನ ಆಂಟಿ!!೧||

ಅಂದು ಬಲು ಪ್ರಿಯವಾಗುತಿತ್ತು
ಎಥ್ನಿಕ್ ಡೇ, ಸಾರಿ ಡೇ
ಇಂದು ನಾ ಹಠಹಿಡಿಯಬೇಕಾಗಿದೆ
ಚೂಡಿ, ಕುರ್ತಾ ತೊಡುವುದ ಬಿಡೆ!!೨||

ಅಂದು ಶಾಲಾಕಾಲೇಜಿಗೆ ಪಯಣ
ನಡೆಯುತಲಿ ದಿನಕೊಂದು ಮೈಲಿ
ಇಂದು ರೋಗ ರುಜಿನ ಬರದಂತೆ
ನಡೆಯುವುದು ಜೀವನಶೈಲಿ!!೩||

ಅಂದು ಖರೀದಿ ಸಮಯದಿ
ಹಾಕುತಿದ್ದೆ ಪೈಸೆಗೆ ಪೈಸೆ ಲೆಕ್ಕ
ಇಂದು ರಶೀದಿ ಕಂಡರೆ ಬರುವರು
ಎಟಿಎಂ ಕಾರ್ಡ್ ಹಿಡಿದು ಪಕ್ಕ!!೪||

ಅಂದು ಅಳೆಯುತಿದ್ದರು ನೋಡಿ
ಪರೀಕ್ಷಾ ಗ್ರೇಡ್ ಮಾರ್ಕ್
ಇಂದು ದಿಟ್ಟಿಸುತ ಬೆಳ್ಳಿಕೇಶ 
ಮುಖದ ಮೇಲಿನ ಸುಕ್ಕು!!೫||

ಅಂದು ಅರ್ಧ ಗಂಟೆಯಲಿ ಅಡುಗೆಯ
ಕೆಲಸ ಹಿಡಿಯುತಿತ್ತು ಬೋರು
ಇಂದು ನಾವೇ ಇರಲಿ, ನೆಂಟರೆ ಬರಲಿ
ಅಡುಗೆಮನೆಯಲೇ ಕಾರುಬಾರು!!೬||

ಅಂದು ಹಳ್ಳಿಯ ಹಸಿರ ಪರಿಸರದಿ
ಸ್ವಚ್ಛ ಶುದ್ಧ ಉಸಿರು
ಇಂದು ನಗರದ ಕಾಂಕ್ರೀಟು ಕಾಡೊಳಗೆ
ಗೃಹಿಣಿಯೆಂಬ ಹೆಸರು!!೭||

ಅಂದು ಗುನುಗುತಲಿದ್ದೆ ಆಗಾಗ
ಪ್ರೇಮ ಚಿತ್ರದ ಗೀತೆಯನು
ಇಂದು ಕಲಿತಿಹೆ ಲಾಲಿ, ಜೋಗುಳವ
ಮಲಗಿಸಲೆಂದು ಮಕ್ಕಳನು!!೮||

ಅಂದು ಆಗಾಗ ಒರೆಸಲು
ತಪ್ಪದು ಕೈಲೊಂದು ಟವೆಲು
ಈಗಲೂ ಕ್ಷಣಕೊಮ್ಮೆ ನೇವರಿಸಲು
ಬೇಕೇಬೇಕು ಕೈಲಿ ಮೊಬೈಲು!!೯||

ಅಂದು ಓದಿ ಬರೆಯಲು
ಆಗ್ರಹಿಸುತಿದ್ದರು ಅಮ್ಮ
ಇಂದು ಅದೇ ಆದೇಶ ಮಕ್ಕಳಿಗೆ
ನಾನಾಗಿ ಶಿಸ್ತಿನ ಅಮ್ಮ!!೧೦||

ಅಂದು ಹೊಟ್ಟೆ ತುಂಬಲು
ಸೇವಿಸುತಿದ್ದೆ ಆಹಾರ
ಇಂದು ಹೊಟ್ಟೆ ಬೆಳೆಯದಂತೆ
ಶರೀರವಾಗದಂತೆ ವಿಕಾರ!!೧೧||

ಅಂದು ಎಲ್ಲರ ನಗುಮುಖವೂ
ಕೊಡುತಿತ್ತು ಮುಗ್ಧ ಖುಷಿ
ಇಂದು ತಿಳಿಯುತಿದೆ ಮತಿಗೆ
ನಗುವಿನ ಮುಖವಾಡ ಹುಸಿ!!೧೨||

ಅಂದು ಕನ್ನಡಿ, ಪೌಡರ್, ಬಿಂದಿ, ಬಟ್ಟೆಗೆ
ಸೆಳೆಯುವ ಮೋಹದ ಚಿಟ್ಟೆ
ಇಂದು ಬೆಣ್ಣೆಯ ಮಾತು, ಬಣ್ಣದ ಥಳಕಿಗೂ
ಬಗ್ಗದೆ ಮಾನಿನಿ ದಿಟ್ಟೆ!!೧೩||


✍️... ಅನಿತಾ ಜಿ.ಕೆ.ಭಟ್.
23-03-2022.

#ಫೇಸ್ಬುಕ್ ಬರಹ ವೇದಿಕೆಯೊಂದರಲ್ಲಿ "ಮದುವೆಯ ಮೊದಲು ಮತ್ತು ಮದುವೆಯ ನಂತರ ನಿಮ್ಮಲ್ಲಾದ ಬದಲಾವಣೆ" ಎಂಬ ಥೀಂ ಕಂಡಾಗ ಬರೆಯಬೇಕೆನಿಸಿದ ಸಾಲುಗಳು.. 






Monday, 21 March 2022

ಗುಲಾಬಿ

 


#ಚೆಂಗುಲಾಬಿ

ಬಣ್ಣಗಳು ಹಲವಾರು ಪರಿಮಳ ಬಗೆಬಗೆ
ಹೆಸರೊಂದೇ ಚೆಂಗುಲಾಬಿ
ಹಸಿರನಡುವಲಿ ಅರಳಿ ನಸುನಗೆಯ ಬೀರಿ
ಕಳೆಯುವೆ ಮನದ ಬೇಗುದಿ||೧||

ನೇಸರನ ಎದುರುಗೊಂಬುವೆ ಮುಗುಳಾಗಿ
ಮುತ್ತಿನ ಮಣಿಮಾಲೆ ತೊಟ್ಟು
ಸುಪ್ರಭಾತವ ಕೋರುವ ದುಂಬಿಯನೂಡುವೆ
ಸವಿಯಾದ ಮಕರಂದವನಿಟ್ಟು||೨||

ಮೃದುವಾದ ಪಕಳೆಯ ಕೋಮಲೆ ನಿಂದಿಹೆ
ಮೈತುಂಬಾ ಮುಳ್ಳನು ಸಹಿಸಿ
ಬದುಕಿನ ಕಠಿಣತೆ ಒಡಲೊಳಗೆ ಅಡಗಿಸುತ
ಚಿಗುರಿರಿ ಏಳಿಗೆಯ ಬಯಸಿ||೩||

ಸೌಗಂಧಸೂಸಿ ಕಣ್ಮನಸೆಳೆವ ಕ್ಷಣವದು ಕ್ಷಣಿಕ
ಬಲುದಿನದ ಶ್ರಮವಿರಲಿ ಹಿಂದೆ
ಮೊಗ್ಗನು ಕೊರೆವ ಹೂವನು ತಿನುವ ಕಟುಕ
ಕೀಟಗಳನೆದುರಿಸಿ ಸಾಗುತಿರಿ ಮುಂದೆ||೪||

✍️... ಅನಿತಾ ಜಿ.ಕೆ.ಭಟ್.
21-03-2022.
#ವಿಶ್ವ ಕಾವ್ಯದಿನದ ಶುಭಾಶಯಗಳು. 💐




Thursday, 17 March 2022

ಮಕ್ಕಳಲ್ಲಿನ ಮುಗ್ಧತೆ

 

           ಮುಗ್ಧತೆ ಎಂಬ ವಿಷಯ ಬಂದಾಗ ಮೊದಲು ನೆನಪಾಗುವುದು ಮಕ್ಕಳು. ಅವರ ಮುಗ್ಧ ನಡತೆ, ತುಂಟತನ, ಮಾತುಗಳು ಎಲ್ಲವನ್ನೂ  ಮೆಲುಕು ಹಾಕುವಾಗ ಏನೋ ಖುಷಿ, ಆನಂದ. ಬೆಳೆದಂತೆ ಅವರ ಮುಗ್ಧತೆ ಮಾಯವಾಗಿ ಬಿಡುವಾಗ ಮನದೊಳಗೆ ಸಣ್ಣ ತಲ್ಲಣ.       

         ನಾವು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ. ದೇವರ ಪೂಜೆಗೆ ಹೂವು ಬೇಕೆಂದು ನಾನು ಕುಂಡಗಳಲ್ಲಿ ಗೌರಿ ಹೂವಿನ ಬೀಜಗಳನ್ನು ಹಾಕಿದ್ದೆ. ಅದು ಬೆಳೆದು ಹೂಬಿಡಲು ಆರಂಭವಾಗಿತ್ತು. ತುಳಸಿ ತುಂಬೆ ಗಿಡಗಳೂ ಸಹಾ ಇದ್ದವು. ಬೆಳಗ್ಗೆ ಪತಿ ಸ್ನಾನ ಮಾಡಿ ಹೂಗಳನ್ನು ಕೊಯ್ದು ತಂದಿದ್ದರು. ನಂತರ ಜಪ ತಪ ಬೆಳಗಿನ ಪೂಜೆಯಲ್ಲಿ ನಿರತರಾಗಿದ್ದರು. ಸಣ್ಣ ಮಗ ಎದ್ದು ಅತ್ತಿತ್ತ ಪೋಕರಿ ಮಾಡುವುದರಲ್ಲಿ ನಿರತನಾಗಿದ್ದ. ದೀಪ ಬೆಳಗಿದ್ದು ಕಂಡರೆ ಸೀದಾ ಬಂದು ಕೈಹಾಕಿ ಸುಟ್ಟುಕೊಳ್ಳುತ್ತಿದ್ದ. ಪದೇ ಪದೇ ಇದೇ ಪುನರಾವರ್ತನೆ ಆದಾಗ ಸ್ವಲ್ಪ ಸಮಯ ದೀಪ ಬೆಳಗಿ ಕೂಡಲೆ ಆರಿಸಿ ಬಿಡುವುದನ್ನು ರೂಢಿಸಿಕೊಂಡಿದ್ದೆ. ಹೀಗಾಗಿ ಅವನಿಗೆ ದೇವರ ಪೂಜೆಯಲ್ಲಿ ವಿಶೇಷ ಆಕರ್ಷಣೆ(ತಂಟೆ ಮಾಡಲು)ಏನೂ ಉಳಿದಿರಲಿಲ್ಲ. ಆದರೂ ಆ ದಿನ ಅಪ್ಪ ಪೂಜೆ ಮಾಡುವುದನ್ನು ನೋಡುತ್ತಾ ಪಕ್ಕದಲ್ಲೇ ಕುಳಿತಿದ್ದ.

       ಊರಿನಿಂದ ಹಲಸಿನ ಮರದ ಒಂದು ಮಣೆ ಮಾಡಿಸಿ ತಂದಿದ್ದೆವು. ಅದರಲ್ಲಿ ದೇವರ ಫೊಟೋ ಇಟ್ಟು ಹೂವು ಇಡುತ್ತಿದ್ದೆವು. ಅಪ್ಪ ಹೂವು ಇಡುವುದನ್ನು ನೋಡುತ್ತಿದ್ದ ಪೋರ ಒಮ್ಮೆಲೇ ಬಾಗಿ ಒಂದು ಗೌರಿ ಹೂವನ್ನು ಮಣೆಯಿಂದ ತೆಗೆದು ಕೆಳಗಿಟ್ಟ. ಪುನಃ ಮತ್ತೊಂದು ಕೆಳಗಿಟ್ಟ, ಅಪ್ಪನ ಮುಖ ನೋಡಿದ. ಊಹೂಂ ಏನೂ ಬದಲಾವಣೆ ಕಾಣಲಿಲ್ಲ ಅನಿಸುತ್ತದೆ ಅವನಿಗೆ. ಮುಂದುವರಿಸಿದ. ಬೇಗ ಬೇಗ ಅಪ್ಪ ಇಟ್ಟ ಹೂವನ್ನೆಲ್ಲ ಕೆಳಗಿಟ್ಟ. ಈಗಲೂ ಅಪ್ಪನದು ಅದೇ ನಿರ್ಲಿಪ್ತತೆ. ದೇವರ ಫೊಟೋವನ್ನೂ ಕೆಳಗಿಟ್ಟ. ಮತ್ತೆ ತಾನೇ ಮಣೆ ಏರಿ ಕುಳಿತುಕೊಂಡ. ದೇವರಿಗಿಡಲು ಒಂದೇ ಒಂದು ಗೌರಿ ಹೂ ಬಾಕಿಯಿತ್ತು. ಅದನ್ನು ಅವನ ತಲೆಯಲ್ಲಿ ಇಟ್ಟು ಬಿಟ್ಟರು. ಈಗ ಪೂಜೆ ಮಾಡುತ್ತಿದ್ದ ಪತಿಗೂ ನಗು. ಹಿಂದೆ ನಿಂತು ಇದನ್ನೆಲ್ಲ ಗಮನಿಸುತ್ತಿದ್ದ ನನಗೂ ನಗು.. ನಮ್ಮಿಬ್ಬರ ನಗುವನ್ನು ಕಂಡ ಅವನು ಅದೇನೋ ಸಾಧಿಸಿದೆನೆಂಬಂತೆ ಖುಷಿಯಿಂದ "ಪೀಪಿ ಪೀಪಿ"(ಹೂವು) ಎನ್ನುತ್ತಾ ತನ್ನ ತಲೆ ಮೇಲಿನ ಹೂವನ್ನು ಮುಟ್ಟುಕೊಂಡು ಬೀಗುತ್ತಿದ್ದ.

                **********

        ನಮ್ಮ ಸಣ್ಣ ಮಗನಿಗಾಗ ಮೂರೂವರೆ ವರ್ಷ. ಹೊಸ ಸೈಟ್ ತೆಗೆದುಕೊಂಡು ಮನೆ ಕಟ್ಟಿ ಗೃಹಪ್ರವೇಶಕ್ಕೆ ಎಲ್ಲರನ್ನೂ ಆಮಂತ್ರಿಸುತ್ತಿದ್ದೆವು. ಇಲ್ಲಿ ಹೋಮ, ಪೂಜಾ ಕಾರ್ಯಕ್ರಮ ಮಾಡಿ, ಎಲ್ಲರನ್ನೂ ಆಮಂತ್ರಿಸಿ, ಊಟ ಬಡಿಸುವುದಿದೆ. ನಂತರ ನಾವು ಇಲ್ಲೇ ಇರುವುದು ಎಂದು ನಮ್ಮ ಮಕ್ಕಳಿಗೆ ಹೇಳಿದ್ದೆವು. ಹಲವರ ಮನೆಗೆ ತೆರಳಿ "ಮನೆ ಒಕ್ಕಲಿಗೆ ಬನ್ನಿ" ಎಂದು ಕರೆಯುವುದನ್ನು ಸಣ್ಣ ಮಗ ಕೇಳಿಸಿಕೊಂಡಿದ್ದ.  ಇವನಿಗೂ ಸಮಾರಂಭಗಳಿಗೆ ಅಥವಾ ಎಲ್ಲಿಗೇ ಆದರೂ ಹೋಗುವುದೆಂದರೆ ಪಂಚಪ್ರಾಣ. ಆದರೆ ಇನ್ನೂ ಮನೆ ಒಕ್ಕಲಿಗೆ ಹೊರಡುವ ಲಕ್ಷಣ ಕಾಣುತ್ತಿಲ್ಲ.  ಎಂದು ಅನಿಸಿತ್ತೋ ಏನೋ.. ಮನೆ ಒಕ್ಕಲಿಗೆ ಇನ್ನು ವಾರವೋ, ಮೂರ್ನಾಲ್ಕು ದಿನವೋ ಇರುವಾಗ, ಒಂದು ದಿನ ಇದ್ದಕ್ಕಿದ್ದಂತೆ ಅವನ ಸಂಶಯ ಹೊರ ಹಾಕಿದ್ದ. "ಅಪ್ಪಾ.. ಮನೆ ಒಕ್ಕಲು.. ಬನ್ನಿ ಹೇಳಿದ್ದಲ್ಲಾ.. ಎಲ್ಲಿ ಅಪ್ಪಾ ಮನೆ ಒಕ್ಕಲು.. ನಾವೂ ಹೋಪನಾ..?" ಎಂದು ಮುಗ್ಧವಾಗಿ ಕೇಳಿದ. ನಮಗೆ ನಗು ಬಂದಿತ್ತು.. ನಂತರ ಅವನಿಗೆ ಪುನಃ ವಿವರಿಸಿ ಹೇಳಿದಾಗ ಒಪ್ಪಿಕೊಂಡಿದ್ದ.

                 *******

       ಒಬ್ಬರು ಹಿರಿಯರು ನಮ್ಮ ದೊಡ್ಡ ಮಗನನ್ನು ಕಂಡಾಗ "ಇವನು ಗಿಡ್ಡ" ಎನ್ನುತ್ತಿದ್ದರು. ಆಗ ನಾನು "ಕೆಲವರು ಎಳೆಯ ಪ್ರಾಯದಲ್ಲಿ ಬೇಗ ಬೆಳವಣಿಗೆ ಹೊಂದಿ, ನಂತರ ಹದಿಹರೆಯದಲ್ಲಿ ಸ್ವಲ್ಪ ನಿಧಾನವಾಗಿ ಬೆಳೆಯುತ್ತಾರೆ. ಮತ್ತೆ ಕೆಲವರು ಎಳವೆಯಲ್ಲಿ ನಿಧಾನವಾಗಿ ಬೆಳವಣಿಗೆ ಹೊಂದುತ್ತಾ, ಹದಿಹರೆಯಕ್ಕೆ ಕಾಲಿಟ್ಟಾಗ ಒಮ್ಮಿಂದೊಮ್ಮೆಲೇ ಬೆಳವಣಿಗೆ ಹೊಂದುತ್ತಾರೆ. ಎರಡು ಮೂರು ವರ್ಷದಲ್ಲಿ ಅವರ ಚಹರೆಯೇ ಬದಲಾಗುತ್ತದೆ" ಎಂದು ಉತ್ತರಿಸಿದ್ದೆ. ಇದನ್ನು ನಾನು ನನ್ನ ಪ್ರೌಢಶಾಲೆ ದಿನಗಳಲ್ಲಿ ಗಮನಿಸಿದ್ದೆ. ಕೆಲವರು ಪ್ರೌಢಶಾಲೆಗೆ ಸೇರುವಾಗ ಉದ್ದವಿದ್ದವರು ನಂತರ ವಿಶೇಷವಾಗಿ ಎತ್ತರದಲ್ಲಿ ಬದಲಾವಣೆ ಆಗದವರೂ ಇದ್ದರು. ಕೆಲವರು ಎಂಟನೇ ತರಗತಿಯಲ್ಲಿ ಪುಟ್ಟ ಮಕ್ಕಳಂತೆ ಕಾಣುತ್ತಿದ್ದವರು ಹತ್ತನೇ ತರಗತಿ ಮುಗಿಯುತ್ತಿದ್ದಂತೆ ಬರೋಬ್ಬರಿ ಉದ್ದ, ದಪ್ಪ ಆದವರೂ ಇದ್ದರು. ಒಬ್ಬೊಬ್ಬರ ಶಾರೀರಿಕ ಬೆಳವಣಿಗೆ ಒಂದೊಂದು ರೀತಿ ಎಂದು ಅರಿವಾಗಿತ್ತು.

       ಆ ಹಿರಿಯರು ಕೆಲವು ಬಾರಿ ಅದೇ ರೀತಿ ಹೇಳಿದ್ದಿದೆ. ನಾನು ನಕ್ಕು ಸುಮ್ಮನಾಗುತ್ತಿದ್ದೆ. ಮತ್ತೆಲ್ಲೂ ಚರ್ಚಿಸುವುದಾಗಲೀ, ತಲೆ ಕೆಡಿಸಿಕೊಳ್ಳುವುದಾಗಲೀ ಮಾಡಲಿಲ್ಲ. ಇತ್ತೀಚೆಗೆ ಕೊರೋನಾ ದೆಸೆಯಿಂದ ಮೂರು ವರ್ಷಗಳಿಂದ ಅವರನ್ನು ಭೇಟಿಯಾಗಲಿಲ್ಲ. ಇತ್ತೀಚೆಗೆ ಭೇಟಿಯಾದಾಗ, ಅವರನ್ನು ಕಂಡವನೇ ಹತ್ತಿರ ಹೋಗಿ "ಈಗ ನಾನು ಉದ್ದವಾ.. ನೀವಾ..?" ಎಂದಿದ್ದ ಮುಗ್ಧವಾಗಿ ನಗುತ್ತಾ ದೊಡ್ಡ ಮಗ.
"ನೀನೇ ಉದ್ದ ಕಣೋ.. ಎಷ್ಟೆತ್ತರ ಬೆಳೆದಿದ್ದೀ.. ಗುರುತೇ ಸಿಗಲಿಲ್ಲ ನನಗೆ" ಎಂದರು. ಮೂರು ವರ್ಷಗಳಲ್ಲಿ ಎರಡು ಫೀಟ್ ಎತ್ತರ ಬೆಳೆದಿದ್ದ.
ಮಕ್ಕಳು ತಾವು ಕೇಳಿಸಿಕೊಂಡದ್ದನ್ನು  ಕೆಲವನ್ನೆಲ್ಲಾ ಬಹಳ ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾರೆ.

✍️... ಅನಿತಾ ಜಿ.ಕೆ.ಭಟ್.
18-03-2022.

#ಪ್ರತಿಲಿಪಿಕನ್ನಡ ದೈನಿಕವಿಷಯಾಧಾರಿತ
#ವಿಷಯ ಮುಗ್ಧತೆ #ಚಿತ್ರ ಕೃಪೆ- ಅಂತರ್ಜಾಲ


Tuesday, 15 March 2022

ಪುತ್ರ ಸಂತಾನ ವ್ಯಾಮೋಹ ಎಲ್ಲೆಮೀರಿದಾಗ

 




       ಅಂದು 'ಶುಭಾಂಶು' ಮನೆಯಲ್ಲಿ ಸಡಗರವು ತುಂಬಿತ್ತು. ಆ ಮನೆಗೆ ಬಾಣಂತಿ, ಮಗು ಬರುವವರಿದ್ದರು. ಅವರ ಬರುವಿಕೆಗಾಗಿ ಎಲ್ಲರೂ ಕಾದುಕುಳಿತಿದ್ದರು. ರಾಧಾಬಾಯಿಯವರು ಒಂದು ದಿನ ಮುಂಚಿತವಾಗಿಯೇ ಬಂದು ಬಾಣಂತಿಯ ಆರೈಕೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಸನತ್ ತನ್ನ ಅಕ್ಕನ ಪುಟ್ಟ ಮಗನನ್ನು ಬರಮಾಡಿಕೊಳ್ಳಲು ತುಂಬಾ ಉತ್ಸಾಹದಲ್ಲಿದ್ದ. ಅವನು ಹೇಗಿರಬಹುದು ಅಕ್ಕನಂತೆಯಾ? ಭಾವನಂತೆಯಾ? ಎಂಬೆಲ್ಲ ಕುತೂಹಲ ಅವನಲ್ಲಿ ಮನೆಮಾಡಿತ್ತು. ಜಗನ್ನಿವಾಸ ರಾಯರು ಮಗಳು ಮತ್ತು ಮೊಮ್ಮಗನನ್ನು ಬರಮಾಡಿಕೊಳ್ಳುವ ಆತುರದಲ್ಲಿ ಅತ್ತಿಂದಿತ್ತ ಸಾಗಿ ಯಾವ ಕೆಲಸ ಬಾಕಿಯಿದೆ ಎಂದು ಹುಡುಕಿ ಮಾಡುತ್ತಿದ್ದರು. ಬಾಣಂತನಕ್ಕೆ ಹಿರಿಯ ಮಹಿಳೆ ರಾಧಾಬಾಯಿ ಸಿಕ್ಕರು ಎಂಬ ಸಮಾಧಾನವೂ ರಾಯರಿಗಿತ್ತು . ಉಮಾಳಿಗೆ ಒಬ್ಬಳಿಗೇ ಬಾಣಂತನ ಕೆಲಸಗಳನ್ನು ಮನೆ ಕೆಲಸದೊಂದಿಗೆ ಮಾಡಿಕೊಳ್ಳಲು ಕಷ್ಟವಾಗಬಹುದು ಎಂದು ಸಹಾಯಕರನ್ನು ಹುಡುಕಿದಾಗ, ಸುಲಭವಾಗಿ ಯಾರು ಸಿಗದಿದ್ದಾಗ ಜಗನ್ನಿವಾಸ ರಾಯರು ತಲೆಮೇಲೆ ಕೈಹೊತ್ತು ಕುಳಿತಿದ್ದರು. ಅಂತಹ ಸಂದರ್ಭದಲ್ಲಿ ದೂರದ ಸಂಬಂಧಿ ರಾಧಾಬಾಯಿ ತಾನು ಒಪ್ಪಿಕೊಂಡರು. ಹೂವೆತ್ತಿದಂತೆ ಕೆಲಸ ಸಲೀಸಾಯಿತು ಎಂದುಕೊಂಡರು ರಾಯರು.

           ಬಾಣಂತಿ ಮಗು ಆಗಮಿಸಿದ ಮೊದಲ ದಿನದಿಂದಲೇ ಎಲ್ಲಾ ಆರೈಕೆ ಅನುಪಾನಗಳಲ್ಲಿ ರಾಧಾಬಾಯಿ ಅವರದ್ದು ಎತ್ತಿದ ಕೈ. ತಾನೂ ಹೆತ್ತು, ಮಗಳಂದಿರ ಬಾಣಂತನವನ್ನೂ ಮಾಡಿ ಅನುಭವವಿದ್ದ ಹಿರಿಜೀವ ರಾಧಾ ಬಾಯಿಯವರು. ಅವರ ಮಾತಿನಂತೆ ಎಲ್ಲವನ್ನೂ ನಿಭಾಯಿಸುತ್ತಾ ಸಹಕರಿಸುತ್ತಿದ್ದರು ಉಮಾ. ರಾತ್ರಿಯಿಡೀ ಅಳುವ ಮಗುವಿನೊಂದಿಗೆ ತಾನು ನಿದ್ದೆ ಬಿಟ್ಟು ಕುಳಿತು, ಮಗುವಿನ ಲಾಲನೆ ಪಾಲನೆಯನ್ನು ರಾಧಾಬಾಯಿ ಮಾಡುತ್ತಿದ್ದರು. "ತೂಗಿರೆ ರಂಗನ.. ತೂಗಿರೆ ಕೃಷ್ಣನ.. ತೂಗಿರೆ ಅಚ್ಯುತಾನಂತನ.." ಎನ್ನುತ್ತಾ ಜೋಗುಳ ಹಾಡು ಹಾಡಿ, ಹಳೆಯ ಧೋತಿಯನ್ನು ಮನೆಯ ಛಾವಣಿಯ ಅಡ್ಡಕ್ಕೆ ಬಿಗಿದು ಇಳಿಬಿಟ್ಟ ಜೋಲಿಯಲ್ಲಿ ಮಲಗಿಸುತ್ತಿದ್ದರು. ಬಾಣಂತಿಯ ಪಥ್ಯಗಳ, ಆಹಾರ ಕ್ರಮಗಳ  ಮಾರ್ಗದರ್ಶನವನ್ನು ಉಮಾಳಿಗೆ ನೀಡುತ್ತಿದ್ದರು.

        ಬೆಳಗ್ಗೆ ಬೇಗನೆ ಎದ್ದು, ಹಂಡೆಯಲ್ಲಿ ನೀರು ತುಂಬಿಸಿ, ಕಟ್ಟಿಗೆ ತೆಂಗಿನ ಸಿಪ್ಪೆಯಿಂದ ಬೆಂಕಿ ಮಾಡಿ ನೀರು ಬಿಸಿಬಿಸಿ ಕಾಯಲು ಬಿಡುತ್ತಿದ್ದರು. ಒಂಭತ್ತು ಗಂಟೆ ಆಗುವ ಮುನ್ನವೇ ಬಾಣಂತಿ ಮತ್ತು ಮಗುವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಿಸುತ್ತಿದ್ದರು. ನಂತರ ಇಬ್ಬರಿಗೂ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸುತ್ತಿದ್ದರು. ತದನಂತರವೂ ರಾಧಾಬಾಯಿ ಬಾಣಂತಿ ಮಗುವಿನ ಬಟ್ಟೆಯನ್ನು  ಕೆಲಸದ ಪಾರಕ್ಕನಿಗೆ ಒಗೆಯಲೆಂದು ಕೊಟ್ಟು ಬರುವುದು, ಸಣ್ಣಪುಟ್ಟ ಹಳ್ಳಿ ಮದ್ದುಗಳ ತಯಾರಿ, ಅಡುಗೆ ಕೆಲಸಗಳಲ್ಲಿ ಕೈ ಜೋಡಿಸುವುದು.. ಇತ್ಯಾದಿಗಳಲ್ಲಿ ನಿರತರಾಗಿರುತ್ತಿದ್ದರು.

           ಹೀಗೆ ಐದಾರು ದಿನ ಕಳೆಯುವಾಗ ರಾಧಾಬಾಯಿ ಅವರಿಗೆ ಒಂದು ಫೋನ್ ಕರೆ ಬಂದಿತ್ತು. ಮಾತನಾಡಿ ಫೋನಿಟ್ಟವರು ಮಂಕಾಗಿದ್ದರು. ಇದನ್ನು ಉಮಾ  ಗಮನಿಸಿದರೂ ರಾಧಾಬಾಯಿ ಹೇಳದಿದ್ದ ಮೇಲೆ ತಾನೇ ಕೇಳುವುದು ಸರಿಯಲ್ಲ ಎಂದು ಸುಮ್ಮನಾದರು. ಇದು ಮುಂದಿನ ವಾರವೂ ಪುನರಾವರ್ತನೆಯಾಯಿತು. ಈ ಸಲ ಮಾತ್ರ ರಾಧಾ ಬಾಯಿಯವರು "ನೋಡು ಉಮಾ... ವೇದಾವತಿ ಕರೆ ಮಾಡಿದ್ದಾಳೆ. ನೀನು ಮನೆಗೆ ಹೋಗೋದು ಯಾವಾಗ? ಅಲ್ಲಿ ನಿನ್ನ ಸೊಸೆಗೆ ಕಷ್ಟವಾಗುವುದಲ್ಲವೇ.. ಎಂದು ಹೇಳುತ್ತಿದ್ದಾಳೆ."

        
        "ಹೌದೇ.. ರಾಧತ್ತೆ.. ಎರಡು ತಿಂಗಳ ಮಟ್ಟಿಗಾದರೂ ನೀವಿಲ್ಲಿ ಇದ್ದರೆ ನನಗೆ ಅನುಕೂಲ.. ನಿಮಗೆ ಇಲ್ಲಿ ಕಷ್ಟವಾಗದಂತೆ ನಾವು ನೋಡಿಕೊಳ್ಳುತ್ತೇವೆ. "
"ಹೌದು.. ನನ್ನ ಮಗ ಸೊಸೆಯ ಒಪ್ಪಿಗೆ ಪಡೆದು ಬಂದಿದ್ದೇನೆ. ಆದರೂ ವೇದಾವತಿ ಯಾಕೆ ಹೀಗೆ  ಮಾತನಾಡುತ್ತಿದ್ದಾಳೆ..? ತಿಳಿಯುತ್ತಿಲ್ಲ ನನಗೆ.."
"ಯಾವುದಕ್ಕೂ ನೀವೊಮ್ಮೆ ನಿಮ್ಮ ಮಗ ಸೊಸೆಯನ್ನು ಕೇಳಿನೋಡಿ" ಎಂದರು ಉಮಾ.

       ಸನತ್ ಕಾಲೇಜಿನಿಂದ ಬಂದೊಡನೆ ಅಳಿಯನನ್ನು ಎತ್ತಿ ಮುದ್ದಾಡುತ್ತಿದ್ದ. ಹೊರಗಿನ ಜಗಲಿಗೆ ಎತ್ತಿಕೊಂಡು ಹೋಗಿ ಒಂದು ಸುತ್ತು ಹಾಕಿ ಬರುತ್ತಿದ್ದ. ಅಮ್ಮ "ಸನತ್... ಪುಟ್ಟ ಮಗುವಿಗೆ ತಂಪಾದ ಗಾಳಿ ಬಡಿಯುತ್ತೆ ಕಣೋ.. ಶೀತವಾದೀತು.." ಎಂದರೂ ಅವನು ಕೇಳುವವನಲ್ಲ. ಜಗನ್ನಿವಾಸ ರಾಯರೂ ಅಷ್ಟೇ ಆಗಾಗ ಮೊಮ್ಮಗನನ್ನು ಏರುಸ್ವರದಲ್ಲಿ ಮಾತನಾಡಿಸಿ, ಯಕ್ಷಗಾನದ ಪದಗಳನ್ನು ಹೇಳಿ, ಜೋ ಜೋ ಶ್ರೀ ಕೃಷ್ಣ ಪರಮಾನಂದ.. ಜೋ ಜೋ ಗೋಪಿಯ ಕಂದಾ ಮುಕುಂದ.. ಎನ್ನುತ್ತಾ ಹಾಡು ಹೇಳಿ ಮುದ್ದಿಸಿ ಹೋಗುತ್ತಿದ್ದರು.

       ಕೆಲವು ದಿನಗಳ ಬಳಿಕ ರಾಧಾಬಾಯಿ ತನ್ನ ಮನೆಗೆ ಕರೆ ಮಾಡಿ ಮಾತನಾಡಿದರು. ಸೊಸೆ ನಗುನಗುತ್ತಾ "ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ. ನೀವು ಆರಾಮವಾಗಿ ಎರಡು ತಿಂಗಳು ಬಿಟ್ಟು ಬನ್ನಿ ಅತ್ತೆ.." ಎಂದಾಗ ಸೊಸೆಯ ಮಾತನ್ನು ಕೇಳಿದ ರಾಧಾಬಾಯಿ ಅವರಿಗೆ ಸಮಾಧಾನವಾಯಿತು. ಬಂದ ಕಾರ್ಯ ಪೂರ್ಣಗೊಳಿಸಿ ತೆರಳುವೆನೆಂದರು.


       ಆದರೆ ವೇದಾವತಿಯ ಕರೆ ಬರುವುದು ಮಾತ್ರ ಕಡಿಮೆಯಾಗಲಿಲ್ಲ. ವಾರಕ್ಕೆರಡು ಬಾರಿ ಕರೆ ಮಾಡಿ ಬಾಣಂತಿ ಮಗುವಿನ ಬಗ್ಗೆ ಎಲ್ಲ ಮಾಹಿತಿಯನ್ನು ಚೂರೂ ಬಿಡದೆ ವಿಚಾರಿಸಿಕೊಂಡು.. ''ನೀನು ಯಾಕೆ ಇನ್ನೂ ಅಲ್ಲೇ ಇದ್ದೀಯ? ಮನೆಗೆ ಹೋಗು ನಿನ್ನ ಮೊಮ್ಮಗುವಿಗೆ ವಿಪರೀತ ಜ್ವರವಂತೆ, ಹಠಮಾಡುತ್ತದಂತೆ.." ಎಂದು ಹೇಳುತ್ತಿದ್ದರು. ಮಗದೊಮ್ಮೆ ನಿನ್ನ ಮಗನಿಗೆ ಸೊಂಟ ಉಳುಕಿದೆಯಂತೆ, ಸೊಸೆಗೆ ಕೈಗೆ ತಾಗಿದೆಯಂತೆ, ರಾತ್ರಿಯೆಲ್ಲ ನಿದ್ದೆಗೆಟ್ಟು ನಿನ್ನ ಆರೋಗ್ಯ ಏರುಪೇರಾದರೆ ಏನು ಮಾಡುವುದು..?.... ಪದೇ ಪದೇ ಹೀಗೆ ಹೇಳುವಾಗ ರಾಧಾಬಾಯಿ ಅವರಿಗೆ ಇರುಸುಮುರುಸು. ಅಲ್ಲದೆ ವೇದಾವತಿಯವರು ರಾಧಾಬಾಯಿಯವರಿಗೂ ಉಮಾಳಿಗೂ ಇಬ್ಬರಿಗೂ ಸಂಬಂಧಿ. ಅಂದಮೇಲೆ ಅವರ ಮಾತು ಕೇಳದಿರುವುದು ಕಷ್ಟ. ತನ್ನ ಸೊಸೆಯಲ್ಲಿ ತನ್ನ ವಿರುದ್ಧ ಏನಾದರೂ ಛೂ.. ಬಿಟ್ಟರೆ ಎಂದು ಕೂಡ ಸ್ವಲ್ಪ ಅಂಜಿಕೆಯಾಯಿತು ರಾಧಾ ಬಾಯಿಯವರಿಗೆ.

       ರಾಧಾಬಾಯಿಯವರಿಗೆ ಬಾಣಂತನ ಪೂರ್ತಿ ಮಾಡಿ ಹೋಗಬೇಕೆಂಬ ಆಸೆ ಇದ್ದರೂ, ವೇದಾವತಿಯ ಒತ್ತಡದಿಂದಾಗಿ ಅರ್ಧದಲ್ಲಿ ಹೋಗುವ ನಿರ್ಧಾರವನ್ನು ಕೈಗೊಂಡರು. ಜಗನ್ನಿವಾಸ ರಾಯರು ಮತ್ತು ಉಮಾ ಹಲವು ಬಾರಿ, ಎರಡು ತಿಂಗಳಾಗಿ ಹೋಗಬಹುದು ಎಂದು ಒತ್ತಾಯಿಸಿದರೂ ಅವರಿಗೆ ನಿಲ್ಲುವ ಧೈರ್ಯ ಬರಲಿಲ್ಲ. ಮನೆಗೆ ತೆರಳಿದ  ರಾಧಾಬಾಯಿ ಮನೆಯವರಲ್ಲಿ ವಿಚಾರಿಸಿದರು. ಅವರಿಗೂ ವೇದಾವತಿಯ ನಡತೆಯ ಹಿನ್ನೆಲೆ ಏನು ತಿಳಿದಿರಲಿಲ್ಲ.


       ರಾಧಾಬಾಯಿ ಮನೆಗೆ ಹಿಂದಿರುಗಿದ್ದಾರೆ ಎಂದು ತಿಳಿದು ಸುಮಾರು ದಿನ ಕಳೆದರೂ ವೇದಾವತಿಯ ಕರೆ ಬಂದಿರಲಿಲ್ಲ. ತಿಂಗಳು ಕಳೆವಾಗ ವೇದಾವತಿ ಕರೆ ಮಾಡಿದಾಗ ಉಪಾಯವಾಗಿ ಮಾತಿಗೆಳೆದರು ರಾಧಾಬಾಯಿ. "ನೋಡು.. ವೇದಾ.. ಉಮಾ ಮಗಳು ತುಂಬಾ ಅದೃಷ್ಟವಂತೆ..."
"ಹೌದಕ್ಕಾ.. ಹೌದು..."
"ಒಳ್ಳೆಯ ಕಡೆ ಸಂಬಂಧವೂ ಕೂಡಿಬಂದಿತ್ತು. ಈಗ ಮೊದಲನೆಯದೇ ಗಂಡು ಮಗು ಎಂಬ ಸಂಭ್ರಮ."
"ಹೌದು.. ಅಷ್ಟು ಮಾತ್ರವಲ್ಲದೆ, ನೀನು ಕೂಡ ಅಲ್ಲಿ ಹೋಗಿ ಅವರಿಗೆ ಸಹಕರಿಸಿ ಅವರ ಸಂಭ್ರಮವನ್ನು ಹೆಚ್ಚು ಮಾಡಿದೆ."
"ಅಯ್ಯೋ.. ನಾನೇನು ಮಾಡಿದೆ? ಈ ಮುದುಕಿ ಏನು ಮಾಡಿಯಾಳು? ಸಲ್ಪ ಅಲ್ಲಿ ಸ್ವಲ್ಪ ಇಲ್ಲಿ ಕುಳಿತು,  ಕುಳಿತಲ್ಲಿಂದಲೇ ಹೇಳುತ್ತಿದ್ದೆ ಅಷ್ಟೇ."

"ಅದನ್ನಾದರೂ ಯಾಕೆ ಮಾಡಬೇಕು.? ನಮಗೆಲ್ಲಾ ಗಂಡು ಮಗು ಇಷ್ಟು ಸುಲಭದಲ್ಲಿ ದಕ್ಕಿದೆಯೇ..?"

"ಅದೆಲ್ಲ ನಮ್ಮ ಹಣೆಬರಹ ವೇದಾ"

"ಅಲ್ಲ ಕಣೇ ಅಕ್ಕಾ.. ನನಗೆ ನಾಲ್ಕು ಹೆಣ್ಣು ಮಕ್ಕಳಾದ ನಂತರ ಐದನೆಯದು ಗಂಡು.. ಮೊದಲನೇ ಮಗು ಹೆಣ್ಣಾದಾಗ ಮೂದಲಿಸಿದರು ನನ್ನ ಅತ್ತೆ, ಗಂಡ. ತವರಿನವರೆಲ್ಲ ನನ್ನ ಅಣ್ಣನಿಗೆ ಗಂಡು ಮಗು ಹುಟ್ಟಿದೆ ಎಂದು ನನ್ನನ್ನು ತಾತ್ಸಾರದಿಂದಲೇ ಕಂಡರು. ಬಾಣಂತನ ಮುಗಿಸಿ ಗಂಡನ ಮನೆಗೆ ಬಂದಾಗ ಸಿಕ್ಕಿದ್ದು ಬರೀ ಇರಿವ ಮಾತುಗಳ ಸ್ವಾಗತ.."

"ನನ್ನದು ಬೇರೆ ಇಲ್ಲ ಕಥೆ.. ಆರು ಹೆಣ್ಣು ಹೆತ್ತವಳು ಯಾರಿಗೂ ಬೇಡ ಎಂದು ಮೂದಲಿಸುತ್ತಿದ್ದರು. ಕೊನೆಗೆ ದೇವರು ಕಣ್ಣು ಬಿಟ್ಟ.. ಏಳನೆಯದು ಗಂಡು ಹುಟ್ಟಿದ.. ಆಗಲೇ ಆಪರೇಷನ್ ಮಾಡಿಸಿಕೊಂಡೆ.. ಈಗ ಯಾರಾದರೂ ನಿಮಗೆ ಎಷ್ಟು ಮಕ್ಕಳು ಎಂದರೆ ಹೇಳಲೂ ಸಂಕೋಚವಾಗುತ್ತದೆ.. ಈಗಿನವರಿಗೆಲ್ಲ ಒಂದೋ ಎರಡೋ ಮಕ್ಕಳು ಇರುವಾಗ ನಮ್ಮನ್ನು ನೋಡಿ ನಕ್ಕಾರು.. ಎಂದು ಅಳುಕಾಗುತ್ತಿದೆ.."

"ಹೌದು.. ನನಗೂ ಹಾಗೇ ಅನಿಸುತ್ತದೆ.  ನಾವೆಲ್ಲ ಎಷ್ಟು ತಿರಸ್ಕಾರದ ನುಡಿ ಕೇಳಬೇಕಾಗಿ ಬಂದಿತ್ತು. ಆದರೆ ಈಗ ಉಮಾ ಮಗಳಿಗೆ.. ಅಬ್ಬಾ ಅದೆಷ್ಟು ಸಂಭ್ರಮ ಅಷ್ಟು ಸುಲಭವಾಗಿ... ಬಾಣಂತನಕ್ಕಾದರೂ ಸ್ವಲ್ಪ ಕಷ್ಟಪಡಲಿ.. ನೀನೇಕೆ ಸಹಾಯಕ್ಕೆ ಹೊರಟೆ.. ಬದುಕಿನ ಕಷ್ಟ ಅವರಿಗೂ ತಿಳಿಯಲಿ.."

"ಅದೆಲ್ಲ ನಮ್ಮ ಕಾಲದಲ್ಲಿ ವೇದಾ..  ಈಗ ಹೆಣ್ಣುಮಕ್ಕಳನ್ನೂ ಬಲು ಪ್ರೀತಿಯಿಂದ ಸಾಕುತ್ತಾರೆ. ಅಲ್ಲದೆ ಉಮಾಳ ಮಗಳು-ಅಳಿಯ ವಿದ್ಯಾವಂತರು. ಹೆಣ್ಣು ಮಗು ಹುಟ್ಟಿದರೂ ಅಷ್ಟೇ ಪ್ರೀತಿಯಿಂದ ಸಾಕಿ ಸಲಹುತ್ತಿದ್ದರು. ಅಷ್ಟಕ್ಕೂ ನನ್ನನ್ನು ಬರಲು ಹೇಳಿರುವುದು ಹೆರಿಗೆಗೂ ಮುನ್ನವೇ.. ಗಂಡು ಮಗುವೆಂದು ತಿಳಿದು ನನ್ನನ್ನು ಬರಲು ಹೇಳಲಿಲ್ಲ.. ಗಂಡಾದರೂ ಹೆಣ್ಣಾದರೂ ಹೆತ್ತವರಿಗೆ ಮಕ್ಕಳು ಅಲ್ಲವೇ ವೇದಾ.."

"ಗಂಡೆಂಬ ಅಹಂ ಅವರ ತಲೆಗೆ ಏರಬಾರದು ಎಂದರೆ ಸ್ವಲ್ಪ ಅವರೂ ಕಷ್ಟ ಪಡಬೇಕು. ನಮ್ಮಷ್ಟಲ್ಲದಿದ್ದರೂ ಕಿಂಚಿತ್ತಾದರೂ... ದೇವರು ಕೆಲವರಿಗೆ ಅನ್ಯಾಯ ಮಾಡಿ ಕೆಲವರಿಗೆ ಮಾತ್ರ ಹರಸುತ್ತಾನೆ.. ಆತನದೂ ತಾರತಮ್ಯವೇ.."

"ಹೆಣ್ಣುಮಕ್ಕಳನ್ನು ಕೂಡ ಈಗ  ವಿದ್ಯಾಭ್ಯಾಸ ನೀಡಿ ಸಾಕಿ ಸಲಹಿದರೆ ಅವರು ಕೂಡ ಹೆತ್ತವರಿಗೆ ಇಳಿವಯಸ್ಸಿನಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಾರೆ. " ಎಂದರು ರಾಧಾ ಬಾಯಿ.

"ಏನೇ ಆದರೂ.. ನೋಡಿ... ನಾವು ನಾಲ್ಕು ಹೆಣ್ಣುಮಕ್ಕಳನ್ನು ಕಲಿಸಿ ಮದುವೆ ಮಾಡಲು ಎಷ್ಟು ಪ್ರಯಾಸಪಟ್ಟೆವು. ಈಗ ಮಗನ ವಿದ್ಯಾಭ್ಯಾಸಕ್ಕೆ ಪರದಾಡುವಂತಾಗಿದೆ.. ಅಂತಹದ್ದರಲ್ಲಿ ಉಮಾಳ ಮಗಳಿಗೆ.. ಬಯಸದೆ ಬಂದ ಭಾಗ್ಯವೇ ಸರಿ.."

       ಅವಳ ಮಾತುಗಳನ್ನು ಕೇಳಿದ ರಾಧಾಬಾಯಿ ಅವರಿಗೆ... ವೇದಾವತಿ ಪದೇ ಪದೇ ಕರೆ ಮಾಡಿ  "ನೀನು ಮನೆಗೆ ಹೋಗು'' ಎಂದು ಹೇಳುತ್ತಿದ್ದುದರ.. ಹಿಂದಿನ ಕಹಿಸತ್ಯ ಅರ್ಥವಾಯಿತು. ಅತಿಯಾದ ಪುತ್ರವ್ಯಾಮೋಹದಿಂದ, ಅರ್ಥಾತ್ ಗಂಡುಸಂತಾನದ ವ್ಯಾಮೋಹದಿಂದ, ಉಮಾಳ ಮಗಳ ಮೇಲೆ ಮತ್ಸರಗೊಂಡಿದ್ದ ವೇದಾಳ ಮನಸ್ಥಿತಿಯ ಬಗ್ಗೆ ಮರುಕ ಹುಟ್ಟಿತು. ಸೊಸೆಯಾಗಿ ಮನೆ ಬೆಳಗಲು, ಸಖಿಯಾಗಿ ಸುಖವುಣಿಸಲು, ಮಡಿಲಾಗಿ ಮಮತೆಯನು ಧಾರೆಯೆರೆಯಲು, ಹಿರಿಯಜ್ಜಿಯಾಗಿ ಮಾರ್ಗದರ್ಶನ ಮಾಡಲು, ಸಹೋದರಿಯಾಗಿ ಬಾಂಧವ್ಯ ಬೆಸೆಯಲು ಹೆಣ್ಣು ಬೇಕು. ಆದರೆ ಒಡಲಲ್ಲಿ ಕುಡಿಯೊಡೆದಾಗ ಮಾತ್ರ ಗಂಡಾದರೇ ಬೆಲೆ ಹೆಚ್ಚು ಎಂಬ ಪುತ್ರ ವ್ಯಾಮೋಹವನ್ನು ಇಂದಿಗೂ ಸಡಿಲಿಸದ ವೇದಾವತಿಯನ್ನು ಕಂಡು ಇಂಥವರನ್ನು ಈ ಜನ್ಮದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಅಥವಾ ಅಂತಹದೊಂದು ಪವಾಡ ನಡೆಯಬೇಕಾದರೆ ಅದು ಭಗವಂತನಿಂದ ಮಾತ್ರ ಸಾಧ್ಯ ಎಂದುಕೊಂಡರು ರಾಧಾ ಬಾಯಿ.

✍️... ಅನಿತಾ ಜಿ.ಕೆ.ಭಟ್.
16-03-2022.

#ಪ್ರತಿಲಿಪಿಕನ್ನಡ ದೈನಿಕ ಕಥೆ
#ವಿಷಯ ಪುತ್ರ ವ್ಯಾಮೋಹ

       

Monday, 7 March 2022

ಮಹಿಳಾ ಶಕ್ತಿ

 


#ಮಹಿಳಾ ಶಕ್ತಿ

ಸಹನೆಯಲಿ ಇಳೆಯಾಗಿ ಕಷ್ಟದಲಿ ಶಿಲೆಯಾಗಿ
ತನ್ನವರ ಕ್ಷೇಮಕೆ ತೇಯುವವಳು
ನೋವಿನಲಿ ಹೆಗಲಾಗಿ ‌ಸುಖದಲ್ಲಿ ಸಖಿಯಾಗಿ
ಸುತ್ತಲೂ ನಗೆಬಿಲ್ಲ ಹರಡುವವಳು||೧||

ಮಹಿಳೆಯವಳು... ಮಹಿಮೆಯವಳು..
ತ್ಯಾಗವವಳು.. ಪ್ರೇಮವವಳು...

ಬಳಲಿಕೆಯ ಬೇಗೆಯಲಿ ಮನದ ತೊಳಲಾಟದಲಿ
ನೆರಳಾಗಿ ಕೊರಳಾಗಿ ತಬ್ಬುವವಳು
ತರುವಿನಾಸರೆಯಿರಲು ಮೊಗ್ಗಾಗಿ ಹೂಬಿರಿದು
ಕಂಪೀವ ಲತೆಯಂತೆ ಹಬ್ಬುವವಳು||೨||

ತನ್ನತನವನು ಮರೆತು ಪರರ ಹಿತವನೆಬಯಸಿ
ದುಡಿವವಳ ತುಳಿಯದೆಯೆ ಸೇವೆಮಾಡಿ
ಮಹಿಳಾಶಕ್ತಿಯ ಪ್ರೀತಿತ್ಯಾಗಸಹನೆಯ ಸ್ಮರಿಸಿ
ಶ್ರೇಷ್ಠತೆಯನರಿತು ನಿತ್ಯ ಗೌರವವ ನೀಡಿ||೩||

ಮಹಿಳೆಯವಳು.. ಮಹಿಮೆಯವಳು..
ತ್ಯಾಗವವಳು.. ಪ್ರೇಮವವಳು..

✍️... ಅನಿತಾ ಜಿ.ಕೆ.ಭಟ್.
08-03-2022.
ವಿಶ್ವ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 💐


ನಮ್ಮವ್ವ #ಚಿತ್ರಕವನ




#ನಮ್ಮವ್ವ

ಕಟ್ಟಿಗೆ ಒಲೆಯುರಿಸಿ ರೊಟ್ಟಿಯ ತಟ್ಟಿ
ತಟ್ಟೆಯನಿರಿಸಿ ಬಡಿಸ್ತಾಳ| ನಮ್ಮವ್ವ
ಹೊಟ್ಟೆ ತುಂಬಲು ತೃಪ್ತಿ ಪಡುತಾಳ||೧||

ಮಣ್ಣಿನ ಮಡಿಕೆಯಲಿ ತಣ್ಣನೆ ನೀರಿರಿಸಿ
ಉಣ್ಣಲು ಅನ್ನವ ಮಾಡುತಾಳ| ನಮ್ಮವ್ವ
ಬಣ್ಣಿಸಿ ಕಥೆಯ ಹೇಳುತಾಳ||೨||

ಹೊಗೆ ಹಬ್ಬಿ ನಿಂದರೂ ಬೇಗೆಲಿ ಮಿಂದರೂ
ನಗುನಗುತಾ ಮಾತನಾಡುತಾಳ| ನಮ್ಮವ್ವ
ಲಗುಬಗೆಯಿಂದಲೆ ದುಡೀತಾಳ||೩||

ನೆಲವು ಸೆಗಣಿಯದಿರಲಿ ಗೋಡೆ ಇಟ್ಟಿಗೆಯಿರಲಿ
ಒಲವಿಂದ ಬದುಕಿ ಬಾಳತಾಳ| ನಮ್ಮವ್ವ
ಛಲದಿಂದ ಮುಪ್ಪನ್ನೂ ಎದುರಿಸ್ಯಾಳ||೪||

ದುಡಿಯುವ ಮನಸಿರಲು ವಯಸಿನ ಹಂಗ್ಯಾಕ
ಕಾಡದು ಕಾಯಿಲೆ ನೂರೆಂಟು| ನಮ್ಮವ್ವ
ಹುಡುಗ ಹುಡುಗೀರನೆಲ್ಲ ಮೀರಿಸ್ತಾಳ||೫||

ಕಪ್ಪಾದ ಪಾತ್ರೆಯ ಸಿಪ್ಪೆಲಿ ಉಜ್ಜುಜ್ಜಿ ನೀರೆರೆದು
ಒಪ್ಪಾನೆ ಫಳಫಳ ಮಾಡುತಾಳ| ನಮ್ಮವ್ವ
ಉಪ್ಹುಳಿಖಾರ ಜೀವ್ನಕ್ಹದವಾಗಿ ಬೆರೆಸ್ಯಾಳ||೬||

ಶಿವನಿಂದ ಈ ಜನುಮ ಅವನದೆ ಆಟವು
ಬವಣೆಯು ಸುಖವೂ ಶಿವಲೀಲೆ| ನಮ್ಮವ್ವ
ದೇವಗೆ ಧನ್ಯತೆ ಹೇಳ್ತಾಳ||೭||

✍️... ಅನಿತಾ ಜಿ.ಕೆ.ಭಟ್.
07-03-2022.
#ಮಾಮ್ಸ್‌ಪ್ರೆಸೊ ದಿನದ ಚಿತ್ರಕ್ಕೆ ಬರೆದ ಸಾಲುಗಳು...
#momspressokannadashortstories




Tuesday, 1 March 2022

ಸ್ಟಿಕ್ಕರ್ ಹೋಗಿ ಸಿಂಧೂರ ಬಂತು.. ಢುಂ ಢುಂ ಢುಂ

 


     ಸಹಜ ಸೌಂದರ್ಯವತಿ ಸ್ಮಿತಾ ದಂತದ ಬೊಂಬೆಯಂತೆ ಶೋಭಿಸುತ್ತಿದ್ದಳು. ಅವಳ ನೀಳ ದಟ್ಟವಾದ ಕಪ್ಪನೆಯ ಕೂದಲಿಗೆ ಮಲ್ಲಿಗೆಯನ್ನು ಸುಂದರವಾಗಿ ಮುಡಿಸಿದ್ದರು. ಮದುಮಗಳ ಅಲಂಕಾರ ಮಾಡಲು ಇಬ್ಬರು ಸೋದರತ್ತೆಯರದೂ ಎತ್ತಿದ ಕೈ ಎಂದ ಮೇಲೆ ಕೇಳಬೇಕೇ? ಸಾಂಪ್ರದಾಯಿಕವಾಗಿ ಮಂಗಳೂರು ಮಲ್ಲಿಗೆಯ ಚೆಂಡನ್ನು ಮುಡಿಸಿ ಅಲ್ಲಲ್ಲಿ ಕೆಂಗುಲಾಬಿಯ ಪಕಳೆಗಳನ್ನು ಮುತ್ತಿನೊಂದಿಗೆ ಜೋಡಿಸಿ ಕುತ್ತಿದ್ದರು. "ಮುಖದ ಮೇಕಪ್ ಮಾತ್ರ ನಾವೇ ಮಾಡುವುದು" ಎಂದು ಸ್ಮಿತಾಳ ಗೆಳತಿಯರೆಲ್ಲ ಮುಂದೆ ಬಂದಿದ್ದರು. ಮೊದಲಾಗಿ ಸ್ಮಿತಾಳೇ ಅವರಿಗೆ ಬರಹೇಳಿದ್ದಳು.

"ನಿಂಗೆ ಮುಖಕ್ಕೆ ಕ್ರೀಂ ಬೇಡಮ್ಮಾ.. ನೀನೇ ಬೆಣ್ಣೆ ಹುಡುಗಿ ತರಹ ಇದ್ದೀ.."
"ಬಿಡಲ್ಲ ಕಣೇ.. ಹಚ್ಚಿ ಬಿಡ್ತೀವಿ.. ಅರ್ಧ ಇಂಚು ದಪ್ಪಕ್ಕೆ..."
"ಲಿಪ್ ಸ್ಟಿಕ್ ಹಚ್ತೀವಿ.. ಅದನ್ನೂ ತಿಂದು ಬಿಡಬೇಡ.. ತಿಂಡಿ ತಿನ್ನೋ ಭರದಲ್ಲಿ.."
"ಗೌರಮ್ಮನ ತರಹ ಬಿಂದಿ ಇಡಲೇನೇ..?"
"ದೃಷ್ಟಿ ಬೊಟ್ಟು ಎಲ್ಲರಿಗೂ ಕಾಣುವಂತೇ ಇಟ್ಟು ಬಿಡ್ತೀನಿ.. ನೋಡು.."
ಏನೇನೋ ರೇಗಿಸುವಿಕೆ ಗೆಳತಿಯರ ಗುಂಪಲ್ಲಿ ನಡೆಯುತ್ತಲೇ ಮೇಕಪ್ ಸಾಗಿತ್ತು.

ಅಲ್ಲಿಗೆ ಸ್ಮಿತಾಳ ಅಜ್ಜಿ ಸೌಭದ್ರಮ್ಮ ಆಗಮಿಸಿದರು. ಮೊಮ್ಮಗಳ ಅಲಂಕಾರ ಎಲ್ಲಿಯವರೆಗೆ ಮುಟ್ಟಿತು ಎಂದು ನೋಡಿ ಕಣ್ತುಂಬಿಸಿಕೊಳ್ಳುವ ತವಕ ಅಜ್ಜಿಗೆ.
"ಪೇಂಟ್ ಮೆತ್ತಿದಾಂಗೆ ಮೆತ್ತಿದ್ದು ಕಾಣ್ತಿದೆ. ಸಿಂಧೂರ ಕಾಣುವುದೇ ಇಲ್ಲ ಹಣೆಯಲ್ಲಿ.." ಅಜ್ಜಿಯ ಕಣ್ಣುಗಳು ಸೂಕ್ಷ್ಮವಾಗಿ ಮೊಮ್ಮಗಳನ್ನು ಸ್ಕ್ಯಾನ್ ಮಾಡಿದವು
"ಇದೆ ಅಜ್ಜಿ.. ನೋಡಿ ಇಲ್ಲಿ.. ಫ್ಯಾನ್ಸಿ ಸ್ಟಿಕ್ಕರ್ ಹಾಗಾಗಿ ಮಿನುಗುತ್ತೆ. ನಿಮಗೆ ಬೇಗ ಕಾಣಿಸಿಲ್ಲ." ಎಂದಳು ಮದುಮಗಳು ಸ್ಮಿತಾ.
"ಅಲ್ವೇ.. ಅದೆಂತ.. ನುಸಿ ಪಿಟ್ಟೆಯಂತೆ.. ಸ್ವಲ್ಪ ದೊಡ್ಡದಾಗಿ ಕಾಣುವಂತೆ ಹಾಕಬೇಕು." ಎಂದು ಅಸಮಾಧಾನ ವ್ಯಕ್ತಪಡಿಸಿದರು ಅಜ್ಜಿ.
"ಅಜ್ಜೀ.. ಅದೆಲ್ಲ ಈಗಿನ ಕಾಲದ ಫ್ಯಾಷನ್.. ನಿಮಗೆ ಗೊತ್ತಾಗಲ್ಲ.."
"ಎಂತ ಪೇಷನೋ ಎಂತದೋ.. ಹ್ಞಾಂ.. ಕುತ್ತಿಗೆಗೆ ಆಭರಣ ಇನ್ನೂ ತೊಡಿಸಿಯೇ ಆಗಿಲ್ಲ.. ಏ.. ಶ್ಯಾಮಲಾ..ಎಲ್ಲಿದ್ದೀ..?" ಎಂದು ಮಗಳನ್ನು ಕೂಗಿದರು.. ತಮ್ಮ ಕುತ್ತಿಗೆಯಲ್ಲಿದ್ದ ಮೂರು ತಲೆಮಾರುಗಳ ಹಿಂದಿನ ಹನ್ನೆರಡು ಪವನಿನ ಪವನದ ಸರವನ್ನು ಮದುಮಗಳಿಗೆ ತೊಡಿಸಲೆಂದು ತೆಗೆದು ಶ್ಯಾಮಲಾರ ಕೈಗಿತ್ತರು.
"ಅಮ್ಮಾ.. ಇದೆಂತ.. ಆಂಟಿಕ್ ಪೀಸ್ ತರಹ ಇದೆ.. ನನಗಿದು ಸೂಟ್ ಆಗಲ್ಲಮ್ಮ.. ಪ್ಲೀಸ್.."

"ನೋಡು ಮಗಳೇ.. ಹಾಗೆ ಹಿರಿಯರು ಮದುಮಗಳಿಗೆಂದು ಕೈಯೆತ್ತಿ ಕೊಟ್ಟದ್ದನ್ನು ಬೇಡವೆನ್ನಬಾರದು. ಅದು ಅವರ ಆಶೀರ್ವಾದ ಎಂದು ತಿಳಿದುಕೋ. ಹೂಂ.." ಎನ್ನುತ್ತಾ ಹೂವಿನ ಜಡೆಯನ್ನು ಸ್ವಲ್ಪ ಮೇಲೆತ್ತಿ ಸರವನ್ನು ತೊಡಿಸಿದರು.

"ಅಲಂಕಾರ ಮುಗೀತಾ.. ವಧುವನ್ನು ಕರೆದುಕೊಂಡು ಬರಲಿ ಸೋದರಮಾವ.." ಹೇಳಿದರು ಪುರೋಹಿತರು. "ಇನ್ನೊಂದು ಐದೇ ನಿಮಿಷದಲ್ಲಿ ರೆಡಿ" ಎಂಬ ಉತ್ತರ ಬಂತು ಡ್ರೆಸ್ಸಿಂಗ್ ರೂಮಿನಿಂದ.
ಮಂಟಪಕ್ಕೆ ಸಾಲಂಕೃತಳಾದ ವಧುವನ್ನು ಕರೆದುಕೊಂಡು ಬಂದರು. 'ಸುಮುಹೂರ್ತೇ ಸಾವಧಾನೌ ಸುಲಗ್ನೇ ಸಾವಧಾನೌ..' ಋತ್ವಿಜರ ವೇದಘೋಷ ಸುತ್ತಲೂ ಧನಾತ್ಮಕ ಕಂಪನವನ್ನು ಉಂಟುಮಾಡಿತ್ತು. ವಧೂವರರು ಪರಸ್ಪರ ಹೂ ಮಾಲೆಯನ್ನ ಬದಲಾಯಿಸಿಕೊಂಡರು.
ಧಾರೆಯ ಕಾರ್ಯಕ್ರಮ ನಡೆಯುತ್ತಲಿತ್ತು.

     ವಿಡಿಯೋ ಗ್ರಾಫರ್ ಮತ್ತು ಫೊಟೋ ಗ್ರಾಫರ್ ಪರಸ್ಪರ ಪ್ರಶ್ನಾರ್ಥಕವಾಗಿ ಮುಖ ಮುಖ ನೋಡಿಕೊಂಡರು. ವಧುವಿನ ಹಿಂದೆ ಕುಳಿತಿದ್ದ ಸೋದರತ್ತೆಯ ಸಮೀಪ ಬಂದು ಏನೋ ಹೇಳಿದ ಫೊಟೋಗ್ರಾಫರ್. "ಹ್ಞಾಂ.. ಹೌದಾ?" ಎಂಬಂತೆ ಆಶ್ಚರ್ಯದಿಂದ ಮದುಮಗಳ ಹತ್ತಿರ ಬಂದು ಬಾಗಿ ನೋಡಿ "ಓಹ್.." ಎಂದು ಹಣೆಗೆ ಕೈಯಿಟ್ಟುಕೊಂಡರು. ಮದುಮಗ ಕಣ್ಸನ್ನೆಯಲ್ಲೇ ಮದುಮಗಳಿಗೆ ಪರಿಸ್ಥಿತಿಯ ಸಂದೇಶ ರವಾನಿಸಿದ. ಸ್ಮಿತಾ ಒಮ್ಮೆಲೇ ಬೆವರತೊಡಗಿದಳು. ತನ್ನ ಟವೆಲಿನಿಂದ ಹಣೆಯಿಂದ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡಳು. ಗೌರವರ್ಣದ ಮುಖ ಗಾಬರಿಯಿಂದ ಕೆಂಪಡರಿತು.

         ಒಂದಿಬ್ಬರು ಹೆಣ್ಣುಮಕ್ಕಳು ಡ್ರೆಸ್ಸಿಂಗ್ ರೂಮಿನವರೆಗೆ ಹೋಗಿ ಬೀಗ ಹಾಕಿದೆ ಎಂದು ವಾಪಸಾದರು. ಈಗ ಬೀಗದ ಕೈ ಹಿಡಿದುಕೊಂಡಿದ್ದ ಮದುಮಗಳ ಚಿಕ್ಕಪ್ಪನ ಹುಡುಕಲು ತೆರಳಿದರು ಕೆಲವರು. ಯಾರದ್ದಾದರೂ ಬ್ಯಾಗಿನಲ್ಲಿ ಬಿಂದಿ ಇದೆಯಾ ಪರಸ್ಪರ ಹೆಂಗಳೆಯರು ಪ್ರಶ್ನಿಸಿಕೊಂಡರು. ಪುರೋಹಿತರು ತಮ್ಮ ಹಿಂದೆ ಇಟ್ಟಿದ್ದ ವೈದಿಕ ಕ್ರಿಯಾಭಾಗಗಳ ಸಲಕರಣೆಗಳ ಮಧ್ಯದಲ್ಲಿದ್ದ ಕುಂಕುಮದ ಕರಡಿಗೆಯನ್ನು ಮುಂದೆ ಹಿಡಿದು ಕನ್ನಡಿಯನ್ನೂ ಮದುಮಗಳಿಗೆ ನೀಡಿದರು. ಸ್ಮಿತಾ ಸ್ವಲ್ಪ ಹಿಂದೆ ಮುಂದೆ ನೋಡಿದಳು.
"ಏ.. ಮಿಸ್ ಇಂಡಿಯಾ.. ಹಾಕ್ಕೊಳ್ಳೇ ಶುದ್ಧ ಕುಂಕುಮ.."
ಅಲ್ಲೇ ನಿಂತಿದ್ದ ಮದುಮಗಳ ತಮ್ಮ ಹೇಳುತ್ತಿದ್ದಂತೆ ನಗುವಿನ ಅಲೆಯೊಂದು ಎದ್ದಿತು. ಫ್ಯಾಷನ್ ಪ್ರಿಯೆ
ಅಕ್ಕನನ್ನು ಆಗಾಗ ಮಿಸ್ ಇಂಡಿಯಾ ಎಂದು ರೇಗಿಸುವುದು ತಮ್ಮ ಸುಧಾಂಶುವಿನ ಪ್ರೀತಿಯ ಅಭ್ಯಾಸಗಳಲ್ಲೊಂದು. ತಮ್ಮನ ಮಾತಿಗೆ ಯಾವತ್ತೂ 'ಮಾಡ್ತೀನಿ ಇರು ನಿಂಗೆ' ಎಂದು ಮತ್ತೆ ಕೆಣಕಲು ಹೋಗುತ್ತಿದ್ದ ಸ್ಮಿತಾ ಇಂದು ಮಾತ್ರ ಕಣ್ತುಂಬಿಸಿಕೊಂಡಿದ್ದಳು.

       ಬೆರಳುಗಳನ್ನು ಕುಂಕುಮದ ಕರಡಿಗೆಗೆ ಅದ್ದಿ  ಹಣೆಗೆ ಬೊಟ್ಟನಿಟ್ಟಳು. ಹಣೆಯಲ್ಲಿ ಹೆಣ್ಣಿನ ಸೌಂದರ್ಯ ಪ್ರತೀಕವಾದ ಸಿಂಧೂರ ಎದ್ದುಕಾಣುತ್ತಿತ್ತು. ಫ್ಯಾನ್ಸಿ ಸ್ಟಿಕ್ಕರ್ ಉದುರಿ ಬೋಳಾಗಿದ್ದ ಹಣೆಗೆ ಕಳೆ ಬಂದಿತು. "ಸ್ಟಿಕ್ಕರ್ ಹೋಗಿ ಸಿಂಧೂರ ಬಂತು.. ಢುಂ.. ಢುಂ.. ಢುಂ" ಎಂದ ಸುಧಾಂಶು. ಮತ್ತೊಮ್ಮೆ ಸಭಾಮಂಟಪ ಗೊಳ್ಳೆಂದು ನಗೆಗಡಲಲ್ಲಿ ತೇಲಿತು. ಸ್ಟಿಕ್ಕರ್ ತರಲೆಂದು ಹೋಗಿದ್ದವರು ಸ್ಟಿಕ್ಕರ್ ಪ್ಯಾಕೆಟ್ ಹಿಡಿದು  ಬಂದು ತಾವೂ ನಗುವಿನ ಅಲೆಯಲ್ಲಿ ಕಳೆದುಹೋದರು. ಧಾರೆಯ ಕಾರ್ಯಕ್ರಮವನ್ನು ವೀಕ್ಷಿಸಲು ಮಂಟಪದ ಸಮೀಪದಲ್ಲಿ ಕುರ್ಚಿಯನ್ನಿರಿಸಿ ಕುಳಿತುಕೊಂಡಿದ್ದ ಸೌಭದ್ರಮ್ಮನವರಿಗೆ ಮೊಮ್ಮಗಳ ಹಣೆಯಲ್ಲಿ ಸಿಂಧೂರ ಎದ್ದು ಕಂಡಿತು. "ಈಗ ಮೊಮ್ಮಗಳ ಅಲಂಕಾರ ಪರಿಪೂರ್ಣವಾಯಿತು.." ಎಂದರು.


    ವರುಷಗಳು ಹಲವು ಉರುಳಿದರೂ ಈಗಲೂ ಅಕ್ಕನನ್ನು ಕಂಡಾಗ ಅಪರೂಪಕ್ಕಾದರೂ "ಸ್ಟಿಕ್ಕರ್ ಹೋಗಿ ಸಿಂಧೂರ ಬಂತು.. ಢುಂ.. ಢುಂ.. ಢುಂ.." ಎಂದು ಆ ಘಟನೆಯನ್ನು ನೆನಪಿಸಿ ಛೇಡಿಸುತ್ತಾನೆ ತಮ್ಮ ಸುಧಾಂಶು.

✍️... ಅನಿತಾ ಜಿ.ಕೆ.ಭಟ್.
28-12-2021.
#ಮಾಮ್ಸ್‌ಪ್ರೆಸೊ ಕನ್ನಡದ ವಾರದ ಸವಾಲು 'ಮದುವೆ ಮನೆಯ ಅವಾಂತರ'ಕ್ಕಾಗಿ ಬರೆದಿರುವುದು.

ಮುನ್ನಡೆಸು ಸೋಮನಾಥೇಶ್ವರ




#ಮುನ್ನಡೆಸು ಸೋಮನಾಥೇಶ್ವರ

ಕರಮುಗಿದು ಬೇಡುವೆ ಕರುಣಿಸಿ ಕಾಯೋ
ಕರಗಿಸುತ ಕಷ್ಟಗಳ ಕರುಣಾಕರ
ವರಗಳನು ನೀಡೋ ಹರಹರ ಮಹದೇವ
ಹರಸುತಿರು ಅನುದಿನ ಪರಮೇಶ್ವರ||೧||

ತುಂಬೆಎಕ್ಕ ಬಿಲ್ವಪತ್ರೆಯ ಅರ್ಪಿಸುವೆ ನಿನಗೆ
ನಂಬಿ ನೀ ನಡೆಸೋ ಸಹಸ್ರಾಕ್ಷ
ತುಂಬಿಕೊಂಡಿಹ ತಮವನೆಲ್ಲ ನೀಗಿಸಿ ಬೆಳಗೆ
ಹಂಬಲಿಸಿಹೆ ದಯೆತೋರು ಫಾಲಾಕ್ಷ||೨||

ಸಂಕಟವನಳಿಸೋ ತವನಾಮವ ಧ್ಯಾನಿಸುವೆ
ಕಿಂಕರನ ಅನುಗ್ರಹಿಸು ಗುಣಸಾಂದ್ರ
ಅಂಕೆಯಿಲ್ಲದ ಮತಿಗೆ ಸತ್ಯಪಥವನೇ ತೋರೋ
ಶಂಕಿಸದೆ ಹರಸೈ ವೃಂದಾರಕೇಂದ್ರ||೩||

ಜಯ ಅಭಯಂಕರ ಜಯ ಶಿವಶಂಕರ
ಜಯ ದೇವೋತ್ತಮ ಶರಣರನು ಉದ್ಧರಿಸು
ಜಯ ನಂದಿವಾಹನ ಜಯ ಭೂತಭಾವನ
ಜಯ ಸೋಮನಾಥೇಶ್ವರ ನಿರತ ಮುನ್ನಡೆಸು||೪||

✍️... ಅನಿತಾ ಜಿ.ಕೆ.ಭಟ್.
01-03-2022.


ಶಿವ ನಾಮಸ್ಮರಣೆ

 


#ಶಿವ ನಾಮಸ್ಮರಣೆ

ಶಶಿಧರ ಶುಭಕರ ಗೌರೀಪ್ರಿಯ
ಭವಹರ ನಟವರ ಬಿಲ್ವಪ್ರಿಯ||ಪ||

ಸುಜನರ ಪೋಷಕ ಮಂಗಳಕಾರಕ
ನೀಲಕಂಠ ಶಿವ ಸರ್ವೇಶ
ತ್ರಿಲೋಕನಾಥ ಸೃಷ್ಟಿಸ್ಥಿತಿಲಯಕಾರಣ
ಗಜಚರ್ಮಾಂಬರ ಗಿರಿಜೇಶ||೧||

ಶರಣ ರಕ್ಷಕ ಪಂಚಾಕ್ಷರ ಪೂಜಿತ
ಢಮರುನಿನಾದ ಪರಮಹರ್ಷಿತ
ಶಾಂಭವಿಪ್ರೀಯ ಸ್ಮಶಾನ ವಾಸಿ
ಉಗ್ರರೂಪಿ ಹರ ಗಣೇಶಪಿತ||೨||

ಸಕಲಪಾಪಹರಣ ಉರಗಧಾರಣ
ತಮಹಾರಕ ಸಾಮಗಾನ ಈಶ್ವರ
ನಿರ್ವಿಕಾರ ಉಮಾಮನೋಹರ
ವಿಶ್ವೋದ್ಧಾರಕ ಶರಣು ಶಂಕರ||೩||

✍️... ಅನಿತಾ ಜಿ.ಕೆ.ಭಟ್.