Tuesday, 27 April 2021

ಹನುಮ ನಮನ


#ಹನುಮ ನಮನ

ಆಂಜನೇಯನೇ ವೀರಹನುಮನೇ
ನೀನಾಗು ದೇಹದ್ವಾರದ ಪಾಲಕ|| ಪ||

ಪವನತನಯನೇ ನಿನ್ನಾಜ್ಞೆ ಮೀರಿ
ನುಸುಳಿದ ಶತ್ರುಕಣದ ನಿರ್ನಾಮಕ||ಅ.ಪ.||

ಹನುಮ ನಿನ್ನಯ ಪುಣ್ಯ ನಾಮವ
ಸ್ಮರಣೆ ಮಾಡುವೆ ಅನುದಿನ
ಜನುಮಪಡೆದ ಭುವಿಯಲಾಗಲಿ
ರೋಗದಣುವಿನ ಮರ್ದನ||೧||

ಸೀತಾಮಾತೆಯ ಶೋಕವಳಿಸಿದ
ಶ್ರೀರಾಮ ದೂತ ಮಾರುತಿ
ಚಿಂತಾಸಾಗರದೊಳಗೆ ಮುಳುಗಿದ
ಸಕಲಜೀವಕೂ ನೀ ಗತಿ||೨||

ವಾಯುವೇಗದಿ ಇಳೆಗೆ ಸುಳಿದು
ರಕ್ಷಿಸೆಮ್ಮನು ವಜ್ರಕಾಯ
ಭಯವನೀಗುತ ಧೈರ್ಯತುಂಬುತ
ಅಮಿತಪರಾಕ್ರಮಿ ನೀಡುಜಯ||೩||

ಕಾಣದಣುವಿನ ಹಠವನಳಿಸಲು
ಸೂಕ್ಷ್ಮ ರೂಪದಿ ಹರಸು ನೀ
ಸಂಜೀವಿನಿಯ ತಂದು ರೋಗಕ್ರಿಮಿಯ
ವಿಕಟರೂಪದಿ ಸಂಹರಿಸು ನೀ ||೪||

✍️... ಅನಿತಾ ಜಿ.ಕೆ.ಭಟ್.

27-04-2021.




2 comments: