Saturday, 26 September 2020

ಸೀರೆರವಿಕೆ,ಚೂಡೀದಾರ್ ಟಾಪ್'ಗಳ ಗೋಳು

 


ಸೀರೆರವಿಕೆ, ಚೂಡಿದಾರ್ ಟಾಪ್'ಗಳ ಗೋಳು

ಆಗಲ್ಲಪ್ಪ ಇನ್ನು ಮುಂದೆ
ಮೂರು ಸ್ಟಿಚ್ಚು ಬಿಡಿಸಿಕೊಂಡೆ
ನಿನ್ನ ಕೆಟ್ಟಕೊಬ್ಬು ತಾಳಲಾರೆ| ಕಾಪಾಡೆಯಾ..

ಆರು ತಿಂಗಳು ಮೂಲೆಲಿ ನಿಂದೆ
ಮುಗ್ಲು ವಾಸ್ನೆ ಸಹಿಸಿಕೊಂಡೆ
ನೋಡಿ ನನ್ನ ಕಣ್ಣೀರಧಾರೆ|ದಯೆತೋರೆಯಾ..

ರುಚಿಯ ಅಡಿಗೆ ನೀನು ತಿಂದೆ
ಅಂಗಾಂಗ ಪುಷ್ಟಿ ಮಾಡಿಕೊಂಡೆ
ಬೇಡಿಕೊಂಬೆ ಮನಸಾರೆ |ತೂಕ ಇಳಿಸೆಯಾ..

ನಿನ್ನ ದೇಹ ತುರುಕಲೆಂದು
ನಾ ಮೂಲರೂಪ ಕಳೆದುಕೊಂಡೆ
ಇನ್ನು ಚೂರೂ ಹಿಗ್ಗಲಾರೆ|ನನ್ನ ಮಿತಿಯನರಿಯೆಯಾ..

(ಶಿವಪ್ಪಾ ಕಾಯೋ ತಂದೆ-ಗೀತರಚನೆಕಾರರಾದ
ಲಾವಣಿ ನಂಜಪ್ಪನವರ ಕ್ಷಮೆ ಕೋರುತ್ತಾ..)

✍️... ಅನಿತಾ ಜಿ.ಕೆ.ಭಟ್.
26-09-2020.


Friday, 25 September 2020

ಗಂಧರ್ವಗಾನ ಪಂಚಭೂತಗಳಲ್ಲಿ ಲೀನ-ನನ್ನ ಅಚ್ಚುಮೆಚ್ಚಿನ ಗಾಯಕರಿಗೆ ನುಡಿನಮನ

 


ಗಂಧರ್ವಗಾನ ಪಂಚಭೂತಗಳಲ್ಲಿ ಲೀನ

     ಸಂಗೀತ ಕ್ಷೇತ್ರದ ಮೇರು ಗಾಯಕರಾದ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಅವರೇ ಸಾಟಿ. ಅತ್ಯಂತ ಪ್ರತಿಭಾವಂತ, ಸದಾ ಹೊಸತನ್ನು ಕಲಿಯಲು ತುಡಿಯುತ್ತಿದ್ದ, ನಿಗರ್ವಿ ವ್ಯಕ್ತಿ ಬಾಲಸುಬ್ರಹ್ಮಣ್ಯಂ ಅವರು.ಹಾಡಿನ ಸಂದರ್ಭಕ್ಕೆ ತಕ್ಕಂತೆ ದನಿ ನೀಡುವ ಇವರ ಚತುರತೆಗೆ ಸಂಗೀತ ಪ್ರೇಕ್ಷಕರು ಫಿದಾ ಆಗಿದ್ದರು.ಸಂಗೀತ ಕ್ಷೇತ್ರದಲ್ಲಿ ಮೈಲುಗಲ್ಲನ್ನು ಸೃಷ್ಟಿಸಿದ್ದರೂ ಕೂಡ ನಾನು ಸಂಗೀತ ಕಲಿತೇ ಇಲ್ಲ,ನನಗೆ ಶಾಸ್ತ್ರೀಯ ಸಂಗೀತ ಜ್ಞಾನ ಇಲ್ಲ ಎನ್ನುವ ಮುಗ್ಧತೆ ಅವರದು. ಎಳವೆಯಲ್ಲಿಯೇ ಎಸ್ಪಿಬಿ ಅವರ ಹಾಡುಗಳನ್ನು ಕೇಳುತ್ತಿದ್ದ ನಮಗಂತೂ ಅವರ ಅಗಲುವಿಕೆಯಿಂದ ಶೂನ್ಯಭಾವ ಆವರಿಸಿದೆ.

       ಅವರು ಈಟಿವಿಯಲ್ಲಿ ನಡೆಸಿಕೊಡುತ್ತಿದ್ದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದ ಮೂಲಕ ಕನ್ನಡಿಗರೆಲ್ಲರಿಗೆ ಅತ್ಯಂತ ಆಪ್ತ ಕುಟುಂಬ ಸದಸ್ಯರಾಗಿಬಿಟ್ಟಿದ್ದರು.ಯಾವಾಗ ಭಾನುವಾರ ಬರುತ್ತೋ,ರಾತ್ರಿ ತುಂಬಿ ಹಾಡುವೆನು ಕಾರ್ಯಕ್ರಮ ಶುರುವಾಗುತ್ತೋ ಅಂತ ಚಾತಕಪಕ್ಷಿಯಂತೆ ಕಾಯುವ ಸರದಿ ನಮ್ಮದಾಗಿತ್ತು. ಕನ್ನಡದ ಅಪರೂಪದ ವಚನಗಳನ್ನು,ಜನಪದ ಸೊಗಡಿನ ಹಾಡಿನ ಸಾಲುಗಳನ್ನು ಹಾಡಿ ಆರಂಭಿಸುತ್ತಿದ್ದ ಕಾರ್ಯಕ್ರಮದಲ್ಲಿ ;ಎಲೆಮರೆಯ ಕಾಯಿಯಂತಿದ್ದ ಅನೇಕ ಕನ್ನಡಿಗರನ್ನು ನಾಡಿಗೆ ಪರಿಚಯಿಸಿದ್ದರು. ಅವರ ಅನುಭವದ ಬಗ್ಗೆ ಅದೆಷ್ಟು ತನ್ಮಯತೆಯಿಂದ ವಿಚಾರಿಸಿಕೊಳ್ಳುತ್ತಿದ್ದರು....!! ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ಅವರು ನೀಡುತ್ತಿದ್ದ ಪ್ರೋತ್ಸಾಹ, ಸಲಹೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಕಾರ್ಯಕ್ರಮ ಕೊನೆಗೊಳಿಸುವ ಮುನ್ನ ಸಮಾಜಕ್ಕೆ ಹಿತನುಡಿ ಎಂದು ಕೆಲವು ಸಾಲುಗಳನ್ನು ಆಡುತ್ತಿದ್ದುದು ಕಾರ್ಯಕ್ರಮಕ್ಕೊಂದು ಮೆರುಗನ್ನು ಕೊಟ್ಟಿತ್ತು.ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರಿಗೂ ಆಪ್ತವಾಗಿತ್ತು.

    'ವೀಕೆಂಡ್ ವಿದ್ ರಮೇಶ್' ಕಾರ್ಯಕ್ರಮದಲ್ಲಿ ಎಸ್ಪಿಬಿ ಅತಿಥಿಯಾಗಿ ಭಾಗವಹಿಸುತ್ತಾರೆ ಅಂದಾಗ ಕನ್ನಡನಾಡು ಇಡೀ ತುದಿಗಾಲಲ್ಲಿ ನಿಂತು. ಅವರ ಜೀವನ,ಕುಟುಂಬ,ಸಾಧನೆಯ ಬಗ್ಗೆ ಎಲ್ಲರಲ್ಲೂ ಕುತೂಹಲ ಇತ್ತು. ತಮ್ಮ ಜೀವನದ ಘಟನೆಗಳನ್ನು ಅವರು ಹೇಳುತ್ತಾ ಹೋಗುತ್ತಿದ್ದಂತೆ ಇವರು ನಮ್ಮ ಕುಟುಂಬದ ಆಪ್ತರಲ್ಲೊಬ್ಬರು ಎಂಬ ಭಾವನೆ ಮೂಡಿತ್ತು.. ಮೂಲತಃ ತೆಲುಗು ಭಾಷಿಕರಾದರೂ ಕನ್ನಡದ ಮೇಲೆ ಅದೆಷ್ಟು ಪ್ರೀತಿ,ಅಭಿಮಾನ!!. ಕನ್ನಡಿಗರೆಂದರೆ ನನಗೆ ಅತ್ಯಂತ ಆಪ್ತ ಎಂದು ಅದೇ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

     ಅವರು ಹಾಡಿರುವ ಭಕ್ತಿಗೀತೆಗಳು ಕೇಳುತ್ತಲೇ ನಮ್ಮ ದಿನವು ಆರಂಭವಾಗುತ್ತಿತ್ತು. ಚಿತ್ರಗೀತೆಗಳು ಕಲಾರಸಿಕರನ್ನು ತನ್ನತ್ತ ಸೆಳೆಯುತ್ತಾ ಅದ್ಭುತ ಯಶಸ್ಸನ್ನು ಗಳಿಸುತ್ತಿದ್ದವು. ಆಂಧ್ರದ ಚಿತ್ತೂರಿನ ಸಮೀಪದ ಗ್ರಾಮವೊಂದರಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದವರು ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ. ಅಪ್ಪ ಹರಿಕಥಾ ವಿದ್ವಾಂಸರು. ಬಾಲ್ಯದಲ್ಲಿ ತಂದೆಯ ಜೊತೆ ಸೇರಿಕೊಂಡು ಹಾರ್ಮೋನಿಯಂ ಮತ್ತು ಕೊಳಲನ್ನು ಕಲಿತುಕೊಂಡಿದ್ದರು. ಇಂಜಿನಿಯರಿಂಗ್ ಪದವಿ ಓದಿದ್ದರೂ ಅಂತಿಮ ಪರೀಕ್ಷೆಯ ಬರೆಯಲಾಗಲಿಲ್ಲ ಎಂದು 'ವೀಕೆಂಡ್ ವಿದ್ ರಮೇಶ್' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದ ನೆನಪು. ಇವರ ಧ್ವನಿಯನ್ನು ಗುರುತಿಸಿದ ಜಾನಕಮ್ಮ ಇವರನ್ನು ಹಾಡುವಂತೆ ಪ್ರೋತ್ಸಾಹಿಸಿದ್ದರು. ಹಾಗೆಯೇ ಸ್ಪರ್ಧೆಯೊಂದರಲ್ಲಿ ಹಾಡಿದ 'ರಾಗಂ ಅನುರಾಗಂ' ಗೀತೆ ಅವರ ಬದುಕಿನಲ್ಲಿ ಮಹತ್ವದ ತಿರುವು ದೊರಕಿಸಿಕೊಟ್ಟಿತು. ಎಸ್ಪಿಬಿ ಅವರಿಗೆ ಮಹಮ್ಮದ್ ರಫಿ ಅವರ ಹಾಡುಗಳೆಂದರೆ ಬಲು ಪ್ರಿಯವಂತೆ. ಸದಾ ಹಾಡುವುದರಲ್ಲಿ ತಲ್ಲೀನರಾಗಿರುತ್ತಿದ್ದರು . ಎಸ್ಪಿಬಿ ಅವರಿಗೆ ಕುಟುಂಬದವರ ಜೊತೆ ಹೆಚ್ಚು ಬೆರೆಯಲು ಆಗಲಿಲ್ಲವಂತೆ. "ಮಕ್ಕಳ ಆಟ ಪಾಠವನ್ನು ನೋಡುತ್ತಾ ಅವರ ಬೆಳವಣಿಗೆಯನ್ನು ಸಂಭ್ರಮಿಸಲು ನನಗೆ ಸಾಧ್ಯವೇ ಆಗಲಿಲ್ಲ. ನನ್ನ ಮಕ್ಕಳು ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎಂದು ಕೂಡ ನನಗೆ ಗೊತ್ತಿರಲಿಲ್ಲ. ಅಪರೂಪಕ್ಕೊಮ್ಮೆ ನೀನು ಯಾವ ತರಗತಿ..? ಓದು ಹೇಗೆ ನಡೆಯುತ್ತಿದೆ ..?ಎಂದು ಅವರಲ್ಲೇ ಕೇಳುತ್ತಿದ್ದೆ. ಇದೆಲ್ಲವನ್ನೂ ನನ್ನ ಶ್ರೀಮತಿಯವರ ನಿಭಾಯಿಸುತ್ತಿದ್ದರು.."ಎಂದು ಅವರ ಮನದಾಳದ ನುಡಿಯನ್ನು ವೀಕೆಂಡ್ ವಿದ್ ರಮೇಶ್ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಜಾನಕಮ್ಮನ ಜೊತೆ ಅವರ ಹಾಡಿರುವ ಹಾಡುಗಳು ,ಚಿತ್ರಾ ಅವರ  ಜೊತೆ ಹಾಡಿರುವ ಹಾಡುಗಳು ಜನರನ್ನು ಮೋಡಿ ಮಾಡಿದ್ದವು.

     'ಕಾಣದಂತೆ ಆಕ್ರಮಿಸಿದ  ವೈರಿ ಕೊರೋನಾ' ಎಂದು ಜಯಂತ ಕಾಯ್ಕಿಣಿಯವರ ಜಾಗೃತಿ ಗೀತೆಯನ್ನು ಹಾಡಿ ಕೊನೆಗೆ ಕೊರೋನಾದಿಂದಲೇ ಪಂಚಭೂತಗಳಲ್ಲಿ ಲೀನವಾಗಿರುವುದು ಖೇದಕರ.ಅವರ ದೇಹ ಅಳಿದರೂ ಮಾಧುರ್ಯ ತುಂಬಿದ ಗಾಯನದ ಮೂಲಕ ಅವರು ಅಮರರಾಗಿದ್ದಾರೆ.ಇನ್ನೊಮ್ಮೆ ಹುಟ್ಟಿ ಬನ್ನಿ ಎಸ್ಪಬಿ ..ಮತ್ತೊಮ್ಮೆ ಹಾಡಿ ಎದೆತುಂಬಿ..ಬೀಳ್ಕೊಡುತಿಹೆವು ಕಂಬನಿತುಂಬಿ..🙏🙏

✍️... ಅನಿತಾ ಜಿ.ಕೆ.ಭಟ್.
26-09-2020.

Tuesday, 22 September 2020

ಹಲಸಿನ ಬೀಜದ ಹಲ್ವಾ/ಹಲಸಿನ ಬೇಳೆ ಹಲ್ವಾ/ಬೇಳೆ ಹಲ್ವಾ/jackfruit seed halwa..#ಅಡುಗೆ

 


ಹಲಸಿನ ಬೀಜದ ಹಲ್ವಾ

     ಈ ವರ್ಷ ಫುಡ್ ಬ್ಲಾಗ್'ಗಳಲ್ಲಿ, ಫೇಸ್ಬುಕ್'ನ ಅಡುಗೆ ಗ್ರೂಪ್'ಗಳಲ್ಲಿ ಬಹಳವೇ ಪ್ರಚಾರಕ್ಕೆ ಬಂದಂತಹ ಹೊಸ ರುಚಿ ಹಲಸಿನ ಬೀಜದ ಹಲ್ವಾ/ಬೇಳೆ ಹಲ್ವಾ/ಹಲಸಿನ ಬೇಳೆ ಹಲ್ವಾ. ಈ ಪಾಕ ಮೊದಲೇ ಇತ್ತಾ..? ಇತ್ತೀಚೆಗೆ ಯಾರಾದರೂ ಅನ್ವೇಷಿಸಿದರೋ ನನಗಂತೂ ಗೊತ್ತಿಲ್ಲ. ಆದರೆ ಲಾಕ್ಡೌನ್ ಸಮಯದಲ್ಲಿ ಎಲ್ಲಾ ಕಡೆಯೂ ಬಹಳ ಹೊಗಳಿಸಿಕೊಂಡಿತ್ತು.
ಎಲ್ಲರೂ ಅದರ ಸವಿ ರುಚಿಯನ್ನು ಹೊಗಳುವುದನ್ನು ಕಂಡು ನನಗೂ ಒಮ್ಮೆ ಪ್ರಯತ್ನಿಸಬೇಕೆಂದು ಅನಿಸಿತು.

     ಹಲಸಿನ ಬೀಜ ಪೌಷ್ಟಿಕಾಂಶದ ಆಗರ.ಆದರೂ ಜನ ಎಳೆ ಹಲಸಿನಕಾಯಿ, ಬಲಿತ ಹಲಸಿನಸೊಳೆ, ಹಣ್ಣು ಹಲಸಿನ ಸೊಳೆಗೆ ಕೊಡುವಷ್ಟು ಮಹತ್ವ ಹಲಸಿನ ಬೀಜಕ್ಕೆ ಕೊಡುತ್ತಿಲ್ಲ. ಹಲಸಿನಕಾಯಿಯನ್ನು ಕೊರೆದು ಸೊಳೆಯನ್ನು ಬಳಸಿ ಹಲಸಿನ ಬೀಜವನ್ನು ದನಕ್ಕೆ ನೀಡುವುದು ಹೆಚ್ಚು.(ಕೆಲವರು ಬಿಸಾಡುವುದು ಸಾಮಾನ್ಯ).ಹಲಸಿನ ಬೀಜದಿಂದ ದನದ ಹಾಲಿನ ಉತ್ಪಾದನೆ ಹೆಚ್ಚುತ್ತದೆ.ಅಡುಗೆಯಲ್ಲಿ ಬಳಸುವುದಾದರೆ ಸೌತೆಕಾಯಿ ಪಲ್ಯ ,ಸೌತೆಕಾಯಿ ಹುಳಿ ಮೇಲೋಗರ ಮಾಡುವಾಗ ಸಾಮಾನ್ಯವಾಗಿ ಬಳಸುತ್ತಾರೆ. ಇದಲ್ಲದೆ ಅಪರೂಪಕ್ಕೆ ಬೇಳೆ ಉಂಡೆ, ಬೇಳೆ ಹೋಳಿಗೆ  ಇತ್ಯಾದಿ ಮಾಡುವುದು ಇದೆ. ಇತ್ತೀಚೆಗೆ ಬೇಳೆ/ಹಲಸಿನ ಬೀಜದ ಲಾಡು , ಖಾರಕಡ್ಡಿ,ಕರ್ಜಿಕಾಯಿ, ವಡೆ,ಪರೋಟ ಪ್ರಚಲಿತಕ್ಕೆ ಬರುತ್ತಿದೆ.ಲಾಕ್ ಡೌನ್'ನಿಂದಾಗಿ ಸ್ಥಳೀಯವಾಗಿ ಉಪೇಕ್ಷಿತವಾಗಿದ್ದ ಆಹಾರವಸ್ತುವೊಂದು ಮುನ್ನಲೆಗೆ ಬಂದಿರುವುದು ಸಂತೋಷದ ಸಂಗತಿ.

ಬೇಳೆ ಹಲ್ವಾ/ ಹಲಸಿನ ಬೀಜದ ಹಲ್ವಾ ಮಾಡಲು ಬೇಕಾದ ಸಾಮಗ್ರಿಗಳು:-

ಬೇಯಿಸಿದ ಬೇಳೆಯ ಪೇಸ್ಟ್- 2 ಕಪ್
ಸಕ್ಕರೆ -ಮುಕ್ಕಾಲು ಕಪ್
ತುಪ್ಪ- ಕಾಲು ಕಪ್(ಬೇಕಾದಲ್ಲಿ ಜಾಸ್ತಿ ಹಾಕಬಹುದು)
ಸಲ್ಪ ಹಾಲು, ಏಲಕ್ಕಿ ಪುಡಿ ,ಗೋಡಂಬಿ ದ್ರಾಕ್ಷಿ

ಮಾಡುವ ವಿಧಾನ:-

    ಹಲಸಿನ ಬೀಜವನ್ನು ಸ್ವಚ್ಛಗೊಳಿಸಿ ಹೊರಗಿನ ಸಿಪ್ಪೆ ,ಕಪ್ಪಾದ ಭಾಗವನ್ನು ಪ್ರತ್ಯೇಕಿಸಿ.ನಂತರ ಕುಕ್ಕರಿನಲ್ಲಿ ಹಲಸಿನ ಬೀಜ ಸರಿಯಾಗಿ ಮುಳುಗುವುದರಿಂದಲೂ ಸ್ವಲ್ಪ ಜಾಸ್ತಿ ನೀರು ಹಾಕಿ 8-9 ಸೀಟಿ ಕೂಗಿಸಿ.ತಣ್ಣಗಾದ ಮೇಲೆ ಸ್ವಲ್ಪ ಹಾಲು ಬಳಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. (ಅಥವಾ ಹಾಲಲ್ಲೇ ಬಾಏಯಿಸಿಕೊಂಡು,ಅದೇಹಾಲಿನಲ್ಲಿ ರುಬ್ಬಬಹುದು)ಬಾಣಲೆಗೆ ರುಬ್ಬಿದ ಮಿಶ್ರಣ, ಸ್ವಲ್ಪ ತುಪ್ಪ ಹಾಕಿ ತಿರುವುತ್ತಿರಿ. ಸ್ವಲ್ಪ ಗಟ್ಟಿಯಾದ ನಂತರ  ಸಕ್ಕರೆ, ತುಪ್ಪ ಹಾಕಿ ಕಾಯಿಸಿ. ಪಾಕ ತಳ ಬಿಡುತ್ತ ಬಂದಾಗ ಏಲಕ್ಕಿ ಪುಡಿ ಬೆರೆಸಿ ಗೋಡಂಬಿ ದ್ರಾಕ್ಷಿ ಬೇಕಾದರೆ ಹಾಕಿ.ಹಾಕದಿದ್ದರೂ ರುಚಿಗೆ ಕೊರತೆಯಾಗುವುದಿಲ್ಲ.ತುಪ್ಪ ಸವರಿದ ತಟ್ಟೆಯ ಮೇಲೆ ಹರಡಿ. ಈಗ ಪುಷ್ಟಿಕರವಾದ ಹಲಸಿನ ಬೀಜದ ಹಲ್ವಾ/ಬೇಳೆ ಹಲ್ವಾ ಸವಿಯಲು ಸಿದ್ಧ.

      ನಾನಿದನ್ನು ತಯಾರು ಮಾಡಿದಾಗ ಮನೆಯವರೆಲ್ಲ ಬಹಳ ಇಷ್ಟಪಟ್ಟರು.ಅದರಲ್ಲಂತೂ ಮಕ್ಕಳು ನಮ್ಮ ಕಡೆ ಮಾಡುವ ಸಪಾದ ಭಕ್ಷ್ಯದ ರುಚಿಯನ್ನು ಇದರಲ್ಲಿ ಕಂಡುಕೊಂಡರು. ಯಾಕೆಂದರೆ ಸತ್ಯನಾರಾಯಣ ಪೂಜೆಗೆ ಮಾಡುವ ಸಪಾದ ಭಕ್ಷ್ಯ ಸುಮ್ಮನೆ ಮಾಡುವ ಕ್ರಮವಿಲ್ಲ. ಅತ್ಯಂತ ರುಚಿಕರವಾದ ಸಪಾದ ಭಕ್ಷ್ಯ ಎಲ್ಲರಿಗೂ ಇಷ್ಟ.  ಹಲಸಿನ ಬೀಜದ ಹಲ್ವವನ್ನು ಸಪಾದ ಭಕ್ಷ್ಯ ಎಂದುಕೊಂಡು ಸ್ವಾಹ ಮಾಡುತ್ತಿದ್ದರು ಮಕ್ಕಳು. ಹಾಗಾಗಿ ಅಮ್ಮನಲ್ಲೂ ರೆಸಿಪಿಯನ್ನು ಹಂಚಿಕೊಂಡೆ. ಅಮ್ಮನೂ ತಯಾರಿಸಿ ರುಚಿಕರವಾಗಿದೆ.. ಆಗಾಗ ಮಾಡುತ್ತಿರಬಹುದು ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಮತ್ತೆ ಯಾಕೆ ತಡ ಹಲಸಿನ ಬೀಜವಿದ್ದರೆ ನೀವು ಮಾಡಿ ನೋಡಿ. ಖಂಡಿತ ಇದನ್ನು ಆವಿಷ್ಕರಿಸಿದವರಿಗೆ ಒಂದು ಸಲಾಂ ಹೊಡೆಯೋಣ ಅಂತಲೇ ಅನಿಸುತ್ತದೆ.

✍️...ಅನಿತಾ ಜಿ.ಕೆ.ಭಟ್.
23-09-2020.


ನಾನೊಬ್ಬಳು ಹೆಣ್ಣು..#ಕವನ

 


ನಾನೊಬ್ಬಳು ಹೆಣ್ಣು

ಹುಟ್ಟಿದಾಗಲೇ ಜಗಕೆಲ್ಲ ತಿರಸ್ಕಾರ
ನಾನಾದೆನೆಂದು ಹೆಣ್ಣು
ಹೆತ್ತವಳಿಗೆ ಆರದ ವಾತ್ಸಲ್ಯ ಮಮತೆ
ಕಾಲ್ಗೆಜ್ಜೆ ಸಪ್ಪಳ ಮನೆತುಂಬಿತು
ಮನೆಯಂಗಳವು ನನ್ನ ಸಂತಸಕೆ ಸಾಕ್ಷಿಯಾಯಿತು
ಬೀದಿ ತುಂಬ ನಕ್ಕುನಲಿದೆ
ಸ್ವಚ್ಛಂದದಿ ಹಾರಾಡುವ ಹಕ್ಕಿಯಾದೆ
ಗರಿಬಿಚ್ಚಿ ಕುಣಿವ ನವಿಲಾದೆ....

ಅದೊಂದು ದಿನ ಜಗಕೆ ಕಾಲಿಟ್ಟ ವಸಂತ ಋತು
ನನ್ನೊಳಗೆ ಅದೇ...ಅದೇ..ಹೆಣ್ತನದ ಋತು
ಸುತ್ತೆಲ್ಲರ ದೃಷ್ಟಿಯಲಿ ನಾನೀಗ ಪ್ರೌಢ ಹೆಣ್ಣು
ಕಾಮುಕರಿಗೋ ನನ್ನ ಮೇಲೆ ವಕ್ರಕಣ್ಣು....

ಬೀದಿಯಾಟಕೆ ಬಿತ್ತು ಬೇಲಿ
ಇಣುಕಿದೆ ಕಿಟಿಕಿ ಸಂದಿಯಲಿ
ಹಾಡುತಿದೆ ಕೋಗಿಲೆ ಇಂಪಾಗಿ;ನಾನೋ ಮೂಲೆಗುಂಪಾಗಿ
ಯಾಕೀ ಬಂಧನವೊ ತಿಳಿಯದು ಮನಕೊಂದೂ
ಋತುವ ನಿಂದಿಸಿದೆ ಯಾಕೆ ಬಂದೆಯೆಂದು.....

ಕರೆಯುತಿರುವೆ ಓ.. ನನ್ನ ಪ್ರೇಮಿಯೇ
ವಸಂತ ಶರತ ಶಿಶಿರ ಯಾರಾದರೂ ಸರಿಯೇ
ಜಗದ ಷರತ್ತುಗಳ ಮುರಿಯಲು ಬನ್ನಿ
ನನ್ನ ಕನಸುಗಳಿಗೆ ನೀರೆರೆಯ ಬನ್ನಿ
ಕತ್ತಲಗೋಡೆಯೊಳಗೆ ಕರಗಿರುವ ಹೆಣ್ಣ ಬಾಳಿಗೆ
ಸಂತಸದ ಸೆಲೆಯಾಗಬನ್ನಿ..

                             ಇಂತಿ...
                             ನಾನೊಬ್ಬಳು ಹೆಣ್ಣು.

✍️... ಅನಿತಾ ಜಿ.ಕೆ.ಭಟ್.
22-09-2020.

ಚಿತ್ರ :ಹವಿಸವಿ ಕೃಪೆ




ನಾನೊಬ್ಬಳು ದ್ವಾದಶೀ..#ಕವನ

 


💃 ನಾನೊಬ್ಬಳು ದ್ವಾದಶೀ 💃

ಸುತ್ತಲೂ ಚೆಲ್ಲಿದೆ ಇರುಳ ಹಾಸು
ಕಂಗಳಲಿ ತುಂಬಿದೆ ಬಣ್ಣದ ಕನಸು
ಬಡವಿ ನಾ ಬರಿ ಹನ್ನೆರಡರ ವಯಸು
ಮರೆಯಲಿ ನಿಂತು ಕೊರಗಿದೆ ಮನಸು||

ಖುಷಿಯ ಅಲೆಯಲಿ ತೇಲುತಿದ್ದೆ
ಕಾಲ ಗೆಜ್ಜೆಯ ಕುಣಿಸಿ ಆಡುತಿದ್ದೆ
ಮನೆ ಮನದ ಒಳಹೊರಗೆ
ಉಕ್ಕಿದೆ ಸಂತಸದ ಹೊನಲೆನಗೆ||

ಧರೆಗಿಂದು ಬಂದಿಹನು ವಸಂತ ಋತು
ನನ್ನೊಳಗೆ ಅದೇ...ಹೆಣ್ತನದ ಋತು
ಸುತ್ತೆಲ್ಲರ ದೃಷ್ಟಿಯಲಿ ನಾ ಪ್ರೌಢಹೆಣ್ಣು
ಸಹಿಸಲಾರೆನು ನಾ ಕಾಮದ ಓರೆಗಣ್ಣು||

ಗೆಳೆಯರ ಜೊತೆಯಾಟಕೆ ಬಿತ್ತು ಬೇಲಿ
ಇಣುಕುವೆನು ಹೀಗೆ ಮರದ ಸಂದಿಯಲಿ
ಕೋಗಿಲೆಯ ಇಂಪಾದ ಗಾನ; ನನಗೇಕೆ ಈ ಬಂಧನ
ಷರತ್ತುಗಳ ವಿಧಿಸಿರುವುದೇಕೆ ಈ ಜೀವನ||

ಕೈಬಳೆ ತೊಟ್ಟು ಮಲ್ಲೆಮಾಲೆ ಮುಡಿದು
ಕನ್ನಡಿಯ ಮುಂದೆ ನಿಲುವ ವಯಸಿದು
ಪ್ರಜ್ಞಾವಂತ ಮನುಜರೇ...
ಮೌಢ್ಯತೆಯ ಗೋಡೆಗಳ ಕೆಡವ ಬನ್ನಿ
ಕತ್ತಲೆಯಲಿ ಕರಗಿರುವ ದ್ವಾದಶಿಯ
ಮೊಗದಿ ನಗುವ ತನ್ನಿ||

                       ಇಂತಿ,
                                ನಿಮ್ಮ ಪ್ರೀತಿಯ,
                                   ದ್ವಾದಶಿ...                  

                       🙏🙏

✍️...ಅನಿತಾ ಜಿ.ಕೆ.ಭಟ್.
22-09-2020.




ಒಗ್ಗಟ್ಟಿನಲಿ ಬಲವು..#ಕವನ

 



     ಒಗ್ಗಟ್ಟಿನಲಿ ಬಲವು

ದುಡಿದು ದಣಿದಿದೆ ದೇಹ
ಸುಕ್ಕುಗಟ್ಟಿದ ಚರ್ಮ
ಸಾರುತಿಹುದಿಲ್ಲಿ ಬಾಳ ಮರ್ಮ||

ಒಂದೊಂದು ಗೆರೆಯಲಿ
ನೂರಾರು ಬವಣೆ
ಹೊತ್ತು ಸಾಗಿದ ಬಾಳ ಹೊಣೆ||

ಹಿರಿಯರನು ಅನುಸರಿಸಿ ಕಿರಿಜೀವ
ನಡೆಸುತಿದೆ ದರಬಾರು
ಆಗೊಮ್ಮೆ ಈಗೊಮ್ಮೆ ಮಿತಿಯಿರದ ಕಾರುಬಾರು||

ಎಳೆಯ ಚಿಗುರದು
ಇನ್ನೂ ಮಾಗಿಲ್ಲ ಜಗದಲಿ
ಮುಗ್ಧತೆಯ ಎಳಸು ಕೈಗಳಲಿ||

ಹಿರಿಕಿರಿಯರ ಬೆವರು
ಅರಿವಿರದ ಹೊಸ ತಲೆಮಾರು
ಜೊತೆ ಸೇರಿ ಎಳೆವ ಬಾಳ ತೇರು||

ಹಸನಾದ ಜೀವನವು
ಹಸಿರಾದ ಹೊಲವು
ಬಸಿರಾದ ಒಲವು
ಒಗ್ಗಟ್ಟಿನಲಿ ಬಲವು
ಸಾರುತಿದೆ ಪಟವು||

✍️... ಅನಿತಾ ಜಿ.ಕೆ.ಭಟ್.
22-09-2020.

ಚಿತ್ರ :ಹವಿಸವಿ ಕೃಪೆ

Sunday, 20 September 2020

ಬದಲಾದ ಮನಸು...#ಪುಟ್ಟಕಥೆ, ಕೌಟುಂಬಿಕ ಕಥೆ


 ಬದಲಾದ ಮನಸು 


ಮಗ... "ಈಗೀಗ ಸೊಂಟನೋವು,ಮೈ ಕೈ ನೋವು ಬಹಳ ಕಣೋ... ಕುಂತ್ರೆ ಏಳೋದು ಕಷ್ಟ... ನಿಂತ್ರೆ ಮಂಡಿಯೆಲ್ಲ ನೋವು..ಮಲಗಿದ್ರಂತೂ ಎಲ್ಲ ಸಂಕಟ ಒಟ್ಟಿಗೇ ಬರುತ್ತಪ್ಪಾ...ಮನೆ ಕೆಲ್ಸ ಮಾಡೋದೇ ಕಷ್ಟ ಆಗುತ್ತೆ ಕಣೋ..‌ಈ ಕಸ ಗುಡ್ಸೋದು ಪಾತ್ರೆ ತೊಳ್ಯೋದು ಯಾರ್ಗೂ ಬೇಡ ಕಣೋ...ಅಬ್ಬಬ್ಬಾ..ಮೊದ್ಲೆಲ್ಲಾ ಬೆಳಗಿನಿಂದ ರಾತ್ರಿಯವರೆಗೆ ದುಡೀತಿದ್ದೆ..ಈಗ

ನಂಗೂ ವಯಸ್ಸಾಯ್ತು ಕಣೋ...ಯಾರಾದ್ರೂ ಕೆಲ್ಸದ ಹೆಂಗ್ಸನ್ನು ಮಾಡು ಮಗಾ..."


ಎಲ್ಲವನ್ನೂ ಕೇಳಿಸಿಕೊಂಡ ಶಿವು ಮಾತ್ರ ಒಂದು ಮಾತೂ ಆಡದೆ ಮುಖ ತಿರುಗಿಸಿ,ತನ್ನ ಮಗನನ್ನು ಕರೆದುಕೊಂಡು ಬೈಕ್ ನಲ್ಲಿ ಕೂರಿಸಿ ವೇಗವಾಗಿ ಬೈಕ್ ಓಡಿಸಿದ.ತಲೆಯಲ್ಲಿ ಯೋಚನೆಗಳು ಅದಕ್ಕಿಂತಲೂ ವೇಗವಾಗಿ ಸಾಗುತ್ತಿದ್ದವು.ಈ ಅಮ್ಮನಿಗೇನು ಗೊತ್ತು ನನ್ನ ಕಷ್ಟ.ಮನೆಕೆಲಸದ ಹೆಂಗಸರು ಸುಮ್ಮನೆ ಬರುತ್ತಾರೆಯೇ..? ಅವರಿಗೆ ದಿನಕ್ಕೆ ಒಂದು ಗಂಟೆ ಕೆಲಸ ಮಾಡಿದರೂ ತಿಂಗಳಿಗೆ ಮೂರು ಸಾವಿರ ರೂಪಾಯಿ ಕೊಡಲೇಬೇಕು.ಸ್ವಲ್ಪ ಹೆಚ್ಚು ಕೆಲಸವಿದ್ದರೆ ಪ್ರತ್ಯೇಕ ವಸೂಲಿ ಮಾಡುತ್ತಾರೆ.ನಾನೇನು ದುಡ್ಡಿನ ಮರ ನೆಟ್ಟಿದ್ದೀನಾ..ಇಂತಹದ್ದಕ್ಕೆಲ್ಲಾ ಖರ್ಚು ಮಾಡೋದಕ್ಕೆ.ಮನೇಲಿ ಇರೋದು ನಾಲ್ಕು ಜನ.ನಾವು ಮೂವರೂ ಹೊರಗೆ ಹೋಗ್ತೀವಿ.ಸಂಜೆ, ರಾತ್ರಿ ಆಗುತ್ತೆ ವಾಪಾಸಾಗುವಾಗ.ನಮ್ಮಿಂದ ಮನೆಯ ನೆಲ ಹೆಚ್ಚೇನೂ ಕೆಸರಾಗಲ್ಲ.ಶೂಸಾಕ್ಸ್ ಹಾಕ್ಕೊಂಡೇ ಮನೆಯಿಂದ ಹೊರಗೆ ಹೋಗೋದು.ಕಾಲಿಗೆಲ್ಲಿ ಕೆಸರಾಗುತ್ತೆ.ಇನ್ನು ಕಸವಂತೂ ಅಲ್ಲಲ್ಲಿ ಬೀಳಲು ಸಾಧ್ಯವೇ ಇಲ್ಲ.ಮಗ ಬೆಳಗ್ಗೆದ್ದು ತಿಂಡಿ, ಸ್ನಾನ ಮುಗಿಸಿಕೊಂಡು ಶಾಲೆಗೆ ಹೊರಡೋದು.ಸಂಜೆ ಬಂದು ತಿಂಡಿ ತಿಂದು ಟ್ಯೂಷನ್ ಕ್ಲಾಸ್ ಗೆ ಹೋಗ್ತಾನೆ.ರಾತ್ರಿ ಚೂರೇ ಚೂರು ಕಾರ್ಟೂನ್ ನೋಡ್ತಾನೆ ಅಷ್ಟೇ.. ನಾನು ಚಿಕ್ಕವನಾಗಿದ್ದಾಗ ಮಾಡುತ್ತಿದ್ದಂತೆ ಕಸದ ರಾಶಿ ಇವನು ಮಾಡಲ್ಲ..ಅವನಮ್ಮನೂ ಅದಕ್ಕೆಲ್ಲ ಬಿಡಲ್ಲ.ಪಾತ್ರೆ ಸ್ವಲ್ಪ ಇರತ್ತೆ.ಮಡದಿಯೂ ಸೇರ್ತಾಳೆ ತೊಳ್ಯೋದಕ್ಕೆ..ಮತ್ತೇನು ಕಷ್ಟ ಕಸ ಗುಡ್ಸೋದು,ಪಾತ್ರೆ ತೊಳ್ಯೋದು,ನೆಲ ಒರ್ಸೋದು..?


      ಇಬ್ಬರು ದುಡಿದರೂ ತಿಂಗಳ ಕೊನೆಯಲ್ಲಿ ಬರಿದಾಗುತ್ತಿದೆ ಜೇಬು..ಮನೆ ಲೋನ್,ಮಗನ ಶಾಲೆಯ ಫೀಸು,ಅಪ್ಪ ಮಾಡಿದ ಸಾಲ,ತಂಗಿಯರ ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಗೆಂದು ಗೆಳೆಯರ ಬಳಿ ಕೈಚಾಚಿದ್ದ ದುಡ್ಡು...ಇದನ್ನೆಲ್ಲ ತೀರಿಸಬೇಡವೇ..?ಇನ್ನೆಲ್ಲಿಂದ ಕೆಲಸದವಳಿಗೆ ಸಂಬಳ ಕೊಡಲಿ..ನಾನೇನೂ ದೊಡ್ಡ ಅಧಿಕಾರಿಯಲ್ಲ.ಅಷ್ಟು ಓದಿಸಲೂ ಅಪ್ಪನಿಗೆ ಸಾಧ್ಯವಾಗಿರಲಿಲ್ಲ.ಸಂಬಳದ ಜೊತೆ ಗಿಂಬಳವಂತೂ ಪಡೆಯುವವನಲ್ಲ.ನನ್ನ ಪರಿಸ್ಥಿತಿಯನ್ನು ಸ್ವಲ್ಪವಾದರೂ ಅರ್ಥಮಾಡಿಕೊಳ್ಳಬೇಡವೇ...


    ಯೋಚಿಸುತ್ತಿದ್ದಂತೆಯೇ ಮಗನ ಶಾಲೆಯ ಸಮೀಪದ ಸಿಗ್ನಲ್ ಬಂತು.ವಾಹನಗಳು ಸರತಿಯ ಸಾಲಿನಲ್ಲಿದ್ದವು.ತಾನೂ ಕಾಯಬೇಕಾದಾಗ ಕಣ್ಣು ಪಕ್ಕಕ್ಕೆ ಹೊರಳಿಸಿದ.ವಯಸ್ಸಾದ ಹೆಂಗಸೊಬ್ಬಳು ರಸ್ತೆ ದಾಟಲು ಸಾಧ್ಯವಾಗದೇ ವಾಹನ ದಟ್ಟಣೆಯಲ್ಲಿ ಸಿಲುಕಿದ್ದಳು.ಅದನ್ನು ಕಂಡ ಒಬ್ಬ ಶಾಲಾ ಬಾಲಕ ತನ್ನ ಮಣಭಾರದ ಪುಸ್ತಕದ ಹೊರೆ, ಬುತ್ತಿ ಚೀಲದ ಜೊತೆ ಅಜ್ಜಿಯ ಚೀಲವನ್ನೂ ಹಿಡಿದುಕೊಂಡ.ಅಜ್ಜಿಯ ಕೈ ಹಿಡಿದು ಮೆಲ್ಲನೆ ರಸ್ತೆ ದಾಟಿಸಿದ.ಅಜ್ಜಿಯ ಮೊಗದಲ್ಲಿ ಮಂದಹಾಸ ಅರಳಿತು.ಬಾಲಕನ ತಲೆ ನೇವರಿಸಿ ಟಾ ಟಾ ಹೇಳಿದರು ಅಜ್ಜಿ.ಇದನ್ನು ಗಮನಿಸಿದ ಶಿವುನ ಕಣ್ಣುಗಳು ಮಂಜಾದುವು.ಬಾಲಕನ ನಡತೆ ಅವನ ತಪ್ಪನ್ನು ಎತ್ತಿ ತೋರಿಸಿತು.ಮನಸ್ಸನ್ನು ಬದಲಾಯಿಸಿತು.ಮಗನನ್ನು ಶಾಲೆಗೆ ಬಿಟ್ಟು ತಾನು ಕಛೇರಿಗೆ ಹೋಗದೆ ಸೀದಾ ಬೈಕನ್ನು ಮನೆಯ ಕಡೆಗೆ ತಿರುಗಿಸಿದ.


ಬೈಕಿನ ಶಬ್ದ ಕೇಳಿ ಹೊರಬಂದ ತಾಯಿಗೆ ನಮಿಸಿ ಕ್ಷಮೆ ಕೇಳಿದ.. "ಇನ್ನು ಮುಂದೆ ಮನೆಕೆಲಸಕ್ಕೆ ನಾನೇ ನಿನಗೆ ಸಹಾಯ ಮಾಡುತ್ತೇನೆ.. ನೀನೆಷ್ಟು ಗೋಗರೆದರೂ ಕಿವಿಗೇ ಹಾಕಿಕೊಳ್ಳದ ನನ್ನ ಕ್ಷಮಿಸಿಬಿಡಮ್ಮ .". ಎಂದು ಹೇಳುತ್ತಿದ್ದಂತೆಯೇ ಅಮ್ಮ ಮಗನನ್ನು ತಬ್ಬಿ ಬೆನ್ನು ನೇವರಿಸಿದಳು."ಕ್ಷಮಿಸುವಂತಹ ತಪ್ಪು ನೀನೇನೂ ಮಾಡಿಲ್ಲ ಮಗ..ಕೆಲಸದವಳನ್ನು ನೇಮಿಸುವುದು ಕಷ್ಟವಾಗುತ್ತದೆ ಅಂತ ನನಗೂ ಗೊತ್ತು..ಆದರೂ ಶರೀರ ಸಹಕರಿಸದಿದ್ದಾಗ ಹೇಳಿ ಹೋಗುತ್ತದೆ.ಬಾಯಿಯನ್ನು ತಡೆಯೋಕಾಗಲ್ಲ ..ಮಗ"

"ಇನ್ನು ಮುಂದೆ ಹಾಗಾಗಲ್ಲ.ನಾನೂ ನಿನಗೆ ಮನೆಗೆಲಸದಲ್ಲಿ ಸಹಾಯ ಮಾಡುವೆ.."

ಎಂದಾಗ ತಾಯಿಯ ಕಣ್ಣಿಂದ ಹನಿಗಳು ಪಟಪಟನೆ ಉದುರಿದವು.


ಉದ್ಯೋಗದಲ್ಲಿರುವ ದಂಪತಿಗಳಿಗೆ ಮನೆ ನಿರ್ವಹಣೆಯ ಸೂತ್ರಗಳು:-

1.ಪ್ರತಿಯೊಂದು ಕೆಲಸಕ್ಕೂ ಸಮಯವನ್ನು ನಿಗದಿ ಮಾಡಿಕೊಳ್ಳಿ. ಪ್ರತಿದಿನವೂ ಅದೇ ಸಮಯಕ್ಕೆ ಕೆಲಸವನ್ನು ಮುಗಿಸುತ್ತಿದ್ದರೆ  ನಂತರ ವೇಗವಾಗಿ ಪೂರ್ಣಗೊಳಿಸಲು ಅಭ್ಯಾಸವಾಗುತ್ತದೆ.

2.ಕುಟುಂಬದ ಹಿರಿಯ ಸದಸ್ಯರಿಂದ ಯಾವುದೇ ಕೆಲಸದಲ್ಲಿ ತಪ್ಪಾದಾಗ ,ಮಾತುಗಳು ಒರಟು ಅನ್ನಿಸಿದಾಗ ಓವರ್ ರಿಯಾಕ್ಷನ್ ಬೇಡ. ಸಹಜವಾಗಿ ಸ್ವೀಕರಿಸಿ.


3.ಹಿರಿಯರನ್ನು ಇತರರಿಗೆ ಹೋಲಿಸದಿರಿ. ಪ್ರತಿಯೊಬ್ಬರಿಗೂ ಅವರದೇ ಆದ ಇತಿಮಿತಿಗಳು ,ಸ್ವಭಾವಗಳು ಇರುತ್ತವೆ.ಇದರಿಂದ ಮನನೊಂದು ಅವರ ಉತ್ಸಾಹವು ಕುಗ್ಗಬಹುದು.

4.ನಮ್ಮ ಮಕ್ಕಳು ನಮ್ಮನ್ನು ಹೇಗೆ ಗೌರವಿಸಬೇಕು ಅದೇ ರೀತಿ ನಾವು ನಮ್ಮ ತಂದೆ ತಾಯಿ ಜೊತೆ ವರ್ತಿಸಬೇಕು. ಮಕ್ಕಳು ಅನುಸರಿಸುವುದು ನಮ್ಮನ್ನು ನೋಡಿಯೇ ಹೊರತು ನಮ್ಮ ಉಪದೇಶವನ್ನು ಕೇಳಿ ಅಲ್ಲ.

5.ಹಿರಿಯರಿಗೆ ಗೌರವ ಕೊಡಿ. ತಮ್ಮ ಜೀವನಪೂರ್ತಿ ಅವರು ಮಕ್ಕಳ ಸುಖಕ್ಕಾಗಿ ವ್ಯಯಿಸಿದ್ದಾರೆ ಎಂಬುದು ನೆನಪಿನಲ್ಲಿರಲಿ.

6.ಒಳ್ಳೆಯ ಗುಣ ,ಅತ್ಯುತ್ತಮವಾಗಿ ಮೂಡಿ ಬಂದ ಕೆಲಸಗಳಿಗೆ ಪ್ರೋತ್ಸಾಹವಿರಲಿ. ಆಗಾಗ ಅವರ ಸಾಮರ್ಥ್ಯ, ಯುಕ್ತಿಯನ್ನು ಹೊಗಳಿ. ಪ್ರೀತಿಯ ನುಡಿಗಳು,ಹೊಗಳಿಕೆಯ ಮಾತುಗಳು ಅವರಿಗೆ ಶಕ್ತಿಯ ಟಾನಿಕ್.

7.ಎಳೆಯ ಮಕ್ಕಳಿಗೆ ಸಣ್ಣಪುಟ್ಟ ಕೆಲಸಗಳಲ್ಲಿ ಕೈಜೋಡಿಸುವ ಅದನ್ನು ಕಲಿಸಿ. ಆಗ ಮನೆಯಲ್ಲಿರುವ ಹಿರಿಯರಿಗೂ ಅನುಕೂಲ. ಊಟವಾದ ನಂತರ ಬಟ್ಟಲು ತೆಗೆಯುವುದು, ತೊಳೆಯುವುದು,ತನ್ನ ಬಟ್ಟೆಗಳು ಒಣಗಿದಾಗ ಮಡಚುವುದು.. ಇದನ್ನೆಲ್ಲ ಮಾಡಿದರೆ ಮನೆ ನಿರ್ವಹಣೆ ಹಿರಿಯರಿಗೆ ಭಾರವೆನಿಸದು.

8.ಓದಿದ ಪೇಪರನ್ನು ಎಲ್ಲೆಲ್ಲೋ ಎಸೆಯದೆ ಅಚ್ಚುಕಟ್ಟಾಗಿ ಟೀಪಾಯ್ ಮೇಲೆ ಇಟ್ಟು ಹಳೆಯ ಪೇಪರ್'ಗಳನ್ನು ಪ್ರತ್ಯೇಕವಾಗಿ ಇಡಿ. ಮಕ್ಕಳ ಆಟಿಕೆಗಳನ್ನೆಲ್ಲ ಪ್ರತ್ಯೇಕವಾದ ಬಾಕ್ಸಿನಲ್ಲಿ ಹಾಕಿಡಲು ಕಲಿಸಿ.ಕಸವನ್ನು ಕಂಡಾಗ ಕಸದಬುಟ್ಟಿಗೆ ಹಾಕಿ.ಇದರಿಂದ ಮನೆಯೂ ಅಚ್ಚುಕಟ್ಟಾಗಿರುತ್ತದೆ,ಗುಡಿಸಲು ಸುಲಭ.

9.ನಿಮ್ಮಿಂದ, ನಿಮ್ಮ ನುಡಿಗಳಿಂದ ಏನಾದರೂ ತಪ್ಪಾದರೆ ಮುಲಾಜಿಲ್ಲದೆ ಕ್ಷಮೆ ಕೇಳಿ. ಕ್ಷಮೆ ಕೇಳುವುದು ದೊಡ್ಡ ಗುಣ.ಸಣ್ಣ ವಿಷಯವನ್ನೇ ದೊಡ್ಡದು ಮಾಡಿ ರಾದ್ಧಾಂತ ಎಬ್ಬಿಸುವುದು ಉತ್ತಮವಲ್ಲ.

10.ಉದ್ಯೋಗದಲ್ಲಿರುವ ದಂಪತಿಯ ಮಕ್ಕಳ ಜವಾಬ್ದಾರಿ ,ಮನೆಯ ನಿರ್ವಹಣೆ ಎಲ್ಲವೂ ಹಿರಿಯರ ಕರ್ತವ್ಯವಲ್ಲ. ಆದರೂ ಅವರು ಕೈಜೋಡಿಸುವುದು ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ,ಅನುಕೂಲಕ್ಕಾಗಿ ಎಂಬುದು ಮನಸ್ಸಿನಲ್ಲಿರಲಿ.

11.ವಯಸ್ಸಾದಂತೆ ಶಾರೀರಿಕ ದೌರ್ಬಲ್ಯದೊಂದಿಗೆ ಮಾನಸಿಕ ದೌರ್ಬಲ್ಯವೂ ಕಾಡುತ್ತದೆ. ಎಷ್ಟೋ ಮಾತುಗಳು ಅವರ ಹಿಡಿತದಲ್ಲಿರುವುದಿಲ್ಲ. ಆಡಿದ ಮೇಲೆ ಅವರೇ ಕೊರಗುತ್ತಾರೆ.ಆದ್ದರಿಂದ ಎಲ್ಲವನ್ನು ಗಂಭೀರವಾಗಿ ಪರಿಗಣಿಸದೆ,ಎದುರಾಡದೆ ಸುಮ್ಮನೆ ಬಿಟ್ಟುಬಿಡಿ. ಕುಟುಂಬದ ದೃಷ್ಟಿಯಿಂದಲೂ ಕ್ಷೇಮ,ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಹಿತಕರ.

12.ಹಿರಿಯರಿಗೂ ಒಂದೇ ತೆರನಾದ ಬದುಕು ಬೇಸರವಾಗುತ್ತದೆ .ಆಗಾಗ ಏನಾದರೂ ಅವರಿಗೆ ಇಷ್ಟವಾಗುವ ,ಬಹಳ ಸಮಯದಿಂದ ಬಯಸುತ್ತಿದ್ದ ಸರ್ಪ್ರೈಜ್ ಗಿಫ್ಟ್ ಕೊಡಿ.ಗಿಫ್ಟ್ ಸಣ್ಣದೇ ಇರಲಿ ಅಥವಾ ದೊಡ್ಡದೇ ಆಗಿರಲಿ ಅದರಿಂದ ಅವರಿಗಾಗುವ ಖುಷಿ ಮಾತ್ರ ಅವರ್ಣನೀಯ.

13.ಉದ್ಯೋಗದ ಮಿತ್ರರು ಮನೆಗೆ ಆಗಮಿಸಿದಾಗ ಅವರ ಮುಂದೆ ಹಿರಿಯರ ಬಗ್ಗೆ ಗೌರವಯುತವಾಗಿ, ಅಭಿಮಾನಪೂರ್ವಕವಾಗಿ ಕೆಲವು ಮಾತುಗಳನ್ನು ಆಡಿ. ಇದು ಹಿರಿಯರ ಉತ್ಸಾಹವನ್ನು ನೂರ್ಮಡಿಗೊಳಿಸುತ್ತದೆ.

14.ಹಿರಿಯರಿಗೆ ಶನಿವಾರ-ಭಾನುವಾರ ರಿಲ್ಯಾಕ್ಸ್ ಆಗಲು ಅವಕಾಶ ನೀಡಿ. ತಮ್ಮ ಪ್ರೀತಿಪಾತ್ರರೊಂದಿಗೆ ಫೋನ್'ನಲ್ಲಿ ಸಂಭಾಷಣೆ ಮಾಡಲು ಅವರ ಇಷ್ಟದ ಹವ್ಯಾಸಕ್ಕಾಗಿ ಸಮಯ ಕೊಡಿ. ಕೆಲಸಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ಕೈಜೋಡಿಸಿ.

15.ಆಗಾಗ ಹಿರಿಯರನ್ನು ಕೂಡ ಪ್ರವಾಸಕ್ಕೆ ,ಸಮಾರಂಭಗಳಿಗೆ ಕರೆದೊಯ್ಯಿರಿ ಅಥವಾ ಆಪ್ತಬಂಧುಗಳೊಡನೆ ತೆರಳಲು ಅವಕಾಶ ಕಲ್ಪಿಸಿ .ಹತ್ತಾರು ಜನರೊಂದಿಗೆ ಬೆರೆತಾಗ,ಹೊಸ ತಾಣಗಳನ್ನು ಸಂದರ್ಶಿಸಿದಾಗ ಅವರ ಮನಸ್ಸು ಉಲ್ಲಾಸಗೊಳ್ಳುತ್ತದೆ.

16.ಅವರ ಪ್ರತಿಯೊಂದು ಖರ್ಚುವೆಚ್ಚಗಳಿಗೂ ನಿಮ್ಮ ಮುಂದೆ ಕೈಯೊಡ್ಡುವಂತೆ ಮಾಡದಿರಿ. ತಿಂಗಳಿಗೆ ಒಂದು ನಿರ್ದಿಷ್ಟ ಮೊತ್ತವನ್ನು ಅವರ ಕೈಗಿಡಿ. ಆಗ ಅವರಿಗೂ ಉಲ್ಲಾಸ ಮೂಡುತ್ತದೆ.

ಉದ್ಯೋಗದಲ್ಲಿರುವ ದಂಪತಿಗೆ ಮನೆ ನಿರ್ವಹಣೆ ಮಾಡಲು ಹಿರಿಯರ ಸಹಕಾರ ಅತ್ಯಗತ್ಯ. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾದದ್ದು ಕೂಡ ಕಿರಿಯರ ಕರ್ತವ್ಯ.ಕುಟುಂಬದ  ಹಿರಿ-ಕಿರಿಯ ಸದಸ್ಯರೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಅರ್ಥಮಾಡಿಕೊಂಡು ನಡೆದರೆ ಆ ಕುಟುಂಬವು ಯಶಸ್ವಿಯಾಗುವುದರಲ್ಲಿ ಸಂಶಯವೇ ಇಲ್ಲ.



✍️... ಅನಿತಾ ಜಿ.ಕೆ.ಭಟ್.

20-09-2020.ಚಿತ್ರ:ಹವಿಸವಿಕೃಪೆ.

ಹವಿಸವಿ ವಾರದ ಚಿತ್ರಕಥಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.

Momspresso Kannada, Pratilipi Kannada ದಲ್ಲಿ ಕಥೆ &ಲೇಖನ ಪ್ರಕಟವಾಗಿದೆ.


ಪ್ರಿಯ ಓದುಗರೇ.. ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home,> ಸಂಕೇತಗಳನ್ನು ಬಳಸಿಕೊಳ್ಳಬಹುದು.ಸುಮಾರು 250ಕ್ಕೂ ಮಿಕ್ಕಿ ಬರಹಗಳು ಲಭ್ಯ.

View web version ಗೆ ಹೋಗಿ.ಅಲ್ಲಿ ಫಾಲೋ/follow ಮಾಡಲು ಆಪ್ಷನ್ ಇದೆ.ನನ್ನನ್ನು ಫಾಲೋ ಮಾಡಬಹುದು.





    

ಕುಚ್ಚಿ ತೆಗವನಾ...#ಹವ್ಯಕಭಾಷಾ ಬರಹ

 




ಕುಚ್ಚಿ ತೆಗವನಾ ...


    ಎಂತಾ ಹೇಳುದಪ್ಪ ಈ ಲಾಕ್ ಡೌನ್ ನ ಫಜೀತಿಗಳ.ಮಕ್ಕಳ ಪರೀಕ್ಷೆ ಗೌಜಿಲಿ ಕುಚ್ಚಿ ತೆಗೆಶುದು "ಈಗ ಬೇಡ.ಪರೀಕ್ಷೆ ಕಳುದಿಕ್ಕಿಸಾಕು" ಹೇಳಿ ಯಾವ ಮುಹೂರ್ತಲಿ ಎನ್ನ ನಾಲಗೆ ಹೇಳಿತ್ತೋ ದೇವರಿಂಗೇ ಗೊಂತು.ಕುಚ್ಚಿ ಉದ್ದ ಬಪ್ಪಗ ಸೆಲೂನ್ ಬಂದ್ ಆತನ್ನೆ..ಇಬ್ಬರ ತಲೆಕಸವುದೇ ತಲೆಂದ ಕೆಳಯಿಳುದು ಕೆಮಿವರೆಗೆ ಹಣೆವರೆಗೆ ಎತ್ತಿತ್ತು.ನೆತ್ತಿಲೊಂದು ಜೊಟ್ಟು ಕಟ್ಟಿ ನವಿಲುಗರಿ ಸಿಕ್ಕಿಸಿರೆ ಎರಡುದೆ ಪುಟ್ಟು ಕಿಟ್ಟಚಾಮಿಗಳೇ .. .. ರಜೆಲಿ ಎಂತ ಕೆಲಸ ಇವಕ್ಕೆ..ತಿಂಬದು..ಆಡುದು..ತಲೆ ತೊರುಸುದು..ಬೆಗರಿರೆ ಶವರಿನಡಿಲಿ ನಿಂದು ಮಿಂದಿಕ್ಕಿ ಬಪ್ಪದು..ತಲೆ ಸರಿ ಉದ್ದದ್ದೆ ನೀರರಿಶಿಗೊಂಡು ಬಂದರೆ ಭಾರೀ ಖುಷಿ.. "ಆಹಾ.. ಎಷ್ಟು ತಂಪಾವ್ತು ಹೇಳುಗು.."

     ಹೀಂಗೆ ಬಿಟ್ಟರಾಗ ಹೇಳಿ "ಕುಚ್ಚಿ ತೆಗವನಾ" ಹೇಳಿಗೊಂಡು ಮಕ್ಕಳ ಹಿಂದೆ ಬಿದ್ದೆ.ಅಷ್ಟಪ್ಪಗ ಚೆಂದ ಬಾಚಿಕ್ಕಿ  ಇದು ಹೊಸ ಸ್ಟೈಲ್ ಹೇಳಿ ಒಂದು ಸ್ಮೈಲ್ ಕೊಟ್ಟಿಕ್ಕಿ ನಡೆಗು."ಹೇನುತುಂಬುಗನ್ನೆ ..ಎನಗೆಡಿಯ ಹೇನು ಬಾಚಿ ಟಿಕ್ ಟಿಕ್ ಕುಟ್ಟಿ ಸಾಯಿಸುಲೆ" ಹೇಳುವಗ "ಮತ್ತೆ ನಿಂಗೊಗೆಂತಾರು ಕೆಲಸ ಬೇಕನ್ನೆ.. ಒಂದು ಕೆಲಸಾತು ಇರಲಿ.."ಹೇಳಿದವು ಎರಡು ಜನದೇ...ಅಂಬಗಳೋ°.. ಪುರುಸೊತ್ತು ಇಪ್ಪದು ಇವಕ್ಕೆ. ಎನಗೆ ಒಂದು ಮಿನಿಟು ಕೂಪಲೂ ಪುರುಸೊತ್ತಿಲ್ಲೆ.

        ಸೆಕೆಯಪ್ಪಗ ಕುಚ್ಚಿಯ ಹಿಡಿದಿಡುದು ಎಳವಲೆ ಸುರುಮಾಡಿದ ಕುಞ್ಞಿಮಾಣಿ.."ಕುಚ್ಚಿ ತೆಗವನಾ" ಹೇಳುವ ರಾಗ ಸುರುಮಾಡಿದೆ ಪುನಃ.. "ಅದೊಂದು ಬಿಟ್ಟು ಬೇರೆಂತಾರು ಹೇಳಮ್ಮ".ಹೇಳಿದ..ದೊಡ್ಡ ಮಗ ಅಂತೂ ಎರಡು ಕೈಲಿ ಒಟ್ಟಿಂಗೆ ತಲೆತೊರುಸುಲೆ ಸುರುಮಾಡಿಯಪ್ಪಗ "ಹಾಂಗೆ ಎರಡು ಕೈಲಿ ಒಟ್ಟಿಂಗೆ ತಲೆತೊರುಸುಲಾಗಡ..ನಿನ್ನ ಅಜ್ಜಿ ಹೇಳಿದ್ದು..ಬೇಕಾರೆ ಒಂದೇ ಕೈಲಿ ತೊರುಸಿಗ.." "ಅಬ್ಬಬ್ಬಾ.. ನಿಂಗಳ ಅಜ್ಜಿ ಶಾಸ್ತ್ರಂಗೊ ಮುಗಿವಲೇ ಇಲ್ಲೆ.."ಹೇಳುವ ಸಸಾರ..

        ಈ ಕುಚ್ಚಿ ತೆಗವದು ಹೇಳುವಗ ನೆಂಪಾವುತ್ತು  ಎನ್ನಪ್ಪನ ಮನೆಗೆ ಕುಚ್ಚಿತೆಗವಲೆ ಬಂದುಗೊಂಡಿದ್ದ ರುಕ್ಮಯ ಭಂಡಾರಿಯ.ತಿಂಗಳಿಂಗೊಂದರಿ ತಪ್ಪದ್ದೆ ಬಕ್ಕು.. ಒಂದು ಮೆಟ್ಟುಕತ್ತಿ ಅದಕ್ಕೆ ಕೂಪಲೆ.ಈಗಾಣಾಂಗೆ ತಿರುಗುವ ಕುರ್ಶಿ ಎಲ್ಲ ಇಲ್ಲೆ.ಇನ್ನೊಂದು ಮೆಟ್ಟುಕತ್ತಿ ಕುಚ್ಚಿ ತೆಗೆಶಿಗೊಂಬವಕ್ಕೆ ಕೂಪಲೆ..ಎಂಗ ಮಕ್ಕೊ ಎಲ್ಲಾ ಸಾಲಾಗಿ ಚಿಟ್ಟೆಲಿ ಕೂಪೆಯೊ°.ಎಂತಕೆ ಕುಚ್ಚಿ ತೆಗೆಶುಲಾ..? ಅಲ್ಲಪ್ಪಾ...ಅಪ್ಪ ,ದೊಡ್ಡಪ್ಪ, ಅಜ್ಜ ಮೂರು ಜನರ ಕುಚ್ಚಿ ತೆಗೆಶಿಯಪ್ಪಗ ಊರ ಮೇಗಾಣ ಶುದ್ದಿಗೊ ಎಲ್ಲ ರುಕ್ಮಯ ಭಂಡಾರಿಯ ಬಾಯಿಲ್ಲೆ  ಕಥೆಯಾಂಗೆ ಹೆರಬಕ್ಕು.ಎಂಗೊಗೆ ಕೇಳುಲೆ ಭಾರೀ ಖುಷಿ..ಎಲ್ಲಿಂದಲೋ ಇರುಳು ನಡಕ್ಕೊಂಡು ಬಪ್ಪಗ ಕುಲೆ ಹೆದರಿಸಿದ್ದು,ಕಲ್ಲಿಡ್ಕಿದ್ದು,ಆರದೋ ಪೊಣ್ಣು ಇನ್ನಾರದೋ ಆಣನೊಟ್ಟಿಂಗೆ ಎಸ್ಕೇಪ್ ಆದ್ದು,ಭಾರೀ ಒಳ್ಳೆ ಮನುಷ್ಯಂಗೆ ಊರಿಲ್ಲೇ ಇಲ್ಲದ್ದ ಅಪರೂಪದ ಖಾಯಿಲೆ ಬಂದು ತೀರಿಹೋದ್ದು,  ಆರೋ ಸಾಲ ಮಾಡಿ ಕಟ್ಟುಲೆಡಿಯದ್ದೆ ಸೋತದು ..ಹೀಂಗಿದ್ದದೆಲ್ಲ ಶುದ್ದಿ ಬಕ್ಕು.ಭಂಡಾರಿ ಹೇಳುದರ ಕೇಳುವಗ ಎಂಗಳ ಕಣ್ಣಮುಂದೆ ಆ ಚಿತ್ರಂಗ ಎಲ್ಲ ಮೂಡುಗು.ಅಷ್ಟು ಲಾಯಕಲಿ ಹೆಳುಗಪ್ಪ ಭಂಡಾರಿ.ಮತ್ತೆ ಮಧ್ಯಾಹ್ನ ಊಟ ಉಂಡಿಕ್ಕಿ ಅಪ್ಪನೋ ದೊಡ್ಡಪ್ಪನೋ ಹತ್ತೋ ಇಪ್ಪತ್ತೋ ರೂಪಾಯಿ ಕೊಟ್ಟದರ ಸುರುಟಿ ಸುರುಟಿ ಸಪೂರ ಮಾಡಿ .. ಸುತ್ತಿದ ಬೆಳಿಮುಂಡಿನ ಸೊಂಟದ ಜಾಗೆಲಿ ಎಡೆಂಗೆ ಮಡುಗಿ ಮುಂಡಿನ ಹೆರಂಗೊಂದರಿ ತಿರ್ಪುಗು.ಅಲ್ಲಿಗೆ ಪೈಸೆ ಭದ್ರ ಹೇಳಿಯೇ ಲೆಕ್ಕ.

        ಈಗ ಎನ್ನ ಮಕ್ಕೊಗೆ ಆನೇ ಭಂಡಾರಿ ಆಯೆಕ್ಕಾದ ಕಾಲ ಬಂತು ಹೇಳಿ "ಕುಚ್ಚಿ ತೆಗವ" ಹೇಳಿ ರಜ ಸ್ವರ ಏರಿಸಿ ಹೇಳಿದೆ.ಅದೇ ಧಾಟಿಲಿ ದೊಡ್ಡ ಮಗನುದೇ "ಬೇಡ ..ಎನಗೆ ಸೆಲೂನಿಲೇ ಆಯೆಕ್ಕು" ಹೇಳಿದ°.ಬೆಂಬಿಡದ ಭೂತದ ಹಾಂಗೆ  ಅವನ ಹಿಂದೆಯೇ ಹೋದೆ.ಮನೆಗೆ ಎರಡು ಸುತ್ತು ಓಡಿದ..ಎನ್ನನ್ನೂ ಓಡಿಸಿದ ಹೇಳುವ."ನಟ ಬೆಶಿಲಿಂಗೆ ನಿನ್ನದು ಲಾಕ್ ಡೌನ್ ಎಕ್ಸರ್ಸೈಜಾ.." ಹೇಳಿ ಕಾಲೆಳೆದ ಯಜಮಾನರ ಮೇಲೆ ಪಿಸುರೂ ಬಂತಿಕ್ಕಿತ್ತು.ಅಲ್ಲ ಮಾಣಿಯಂಗಳ ಕುಚ್ಚಿ ಕೂಸುಗಳ ಬಾಬ್ ಕಟ್ ನಾಂಗೆ ಕಂಡರೂ ಕುಚ್ಚಿ ತೆಗವಲೆ ಹೆರಡದ್ದ ಗೆಂಡ ಎನ್ನ ಹಾಸ್ಯ ಮಾಡುಲೆ ಹೆರಡುದಂಬಗ.. ಎಂತಾ ಹೇಳೆಕ್ಕು..ಎನಗೂ ಹಠ ಬಂತು..ಕುಚ್ಚಿ ತೆಗದೇ ಸಿದ್ಧ ಹೇಳಿ ಶಪಥ ಮಾಡಿಗೊಂಡೆ.

         ಒಳಬಪ್ಪಗ ಕುಞ್ಞಿ ಮಾಣಿ ಚಿಟ್ಟೆಲಿ ಕೂದುಗೊಂಡಿದ್ದ."ಕುಚ್ಚಿ ತೆಗವೊ° ಮಗ° " ಹೇಳಿದ್ದಕ್ಕೆ ಪ್ರತ್ಯುತ್ತರ ಎಂತ ಬಯಿಂದಿಲ್ಲೆ.'ಮೌನಂ ಸಮ್ಮತಿ ಲಕ್ಷಣಂ' ಹೇಳಿ ಶಾಲೆಲಿ ಸಂಸ್ಕೃತ ಮಾಷ್ಟ್ರ° ಅರದು ಕುಡಿಶಿದ್ದು ಮರದ್ದಿಲ್ಲೆ.ಇದುವೇ ಸಮಯ ಹೇಳಿ ಕತ್ತರಿ ,ಹಣಿಗೆ ತೆಕ್ಕೊಂಡು ಬಂದೆ.ಏಪ್ರನ್ ಹಾಯ್ಕೊಂಡಿತ್ತಿದ್ದೆ."ಅದ.. ಅಮ್ಮ ಕೂದಲು ಆಪರೇಷನ್ ಗೆ ಹೆರಟವದ" ಹೇಳಿ ದೊಡ್ಡ ಮಾಣಿ ಕೆಣಕ್ಕಲೆ ಸುರುಮಾಡಿದ ಕುಞ್ಞಿಮಾಣಿಯ.

       ಒಂದು ಕುರ್ಶಿಲಿ ಕೂರಿಸಿ ಕೊರಳಿಂಗೊಂದು ಹರ್ಕಟೆ ಬೈರಾಸ ಬಿಗುದು ..ಕುಚ್ಚಿ ತೆಗವಲೆ ಸುರುಮಾಡೆಕ್ಕಾರೆ ಮದಲು ನಾಲ್ಕು ಸರ್ತಿ ಸೆಲೂನಿನವರ ಸ್ಟೈಲಿಲಿ ಕತ್ತರಿಯ ಕಚಕ್ ಕಚಕ್ ಮಾಡಿದೆ .ಎದುರೆ ಹಣೆಗೆ ಬೀಳುದರ ತೆಗಕ್ಕೊಂಡು ಬಪ್ಪದ್ದೆ ಇವು ಬಂದವು."ಅದು ರಜಾ ಓರೆಯಾತು  ಹೇಳಿಗೊಂಡು.." ಸರಿ ಮಾಡುಲೇಳಿ ರಜ ಕತ್ತರ್ಸಿದೆ..ಈಗ ಹೆಚ್ಚಾತು ಹೇಳೆಕ್ಕಾ..ನೆತ್ತಿಂದಲೂ ರಜ ಕುಚ್ಚಿ ತೆಗದಪ್ಪಗ ನೆತ್ತಿ ಬೋಳುಕಾಣ್ತು ಹೇಳಿದವು.ಅಮರಿಗೊಂಡಿದ್ದ ದೊಡ್ಡ ಮಾಣಿಯೂ ಬಂದ."ಅಮ್ಮಾ ಹಿಂದಾಣೊಡೆ ಲೆಫ್ಟಿಲಿ ತೆಳ್ಳಂಗಾಯಿದು ರೈಟಿಂದ.." ..ರೈಟ್ ಹೇಳಿ ಕತ್ತರಿಯ ಬಲಮಂಡೆಗೆ ತಿರುಗಿಸಿ ಕಚಕ್ ಕಚಕ್ ಮಾಡಿದೆ.ಕೆಮಿ ಹತ್ತರೆ ತೆಗವಗ ಅದು ಹಾಂಗಲ್ಲ ಹೀಂಗೆ ಹೇಳಿ ವಾದಕ್ಕಿಳಿವಲೆ ಹೆರಟಪ್ಪಗ ..ಕುಞ್ಞಿಮಾಣಿ "ನಿಂಗ ಹೀಂಗೆ ಡಿಸ್ಟರ್ಬ್ ಮಾಡಿದರೆ ಇಬ್ರಿಂಗೂ ಈಗ ಆನೇ ಹೇರ್ ಕಟ್ ಮಾಡ್ತೆ" ಹೇಳುವಗ ಈ ಲೂಟಿ ತಮ್ಮ ಮಾಡಿರೂ ಮಾಡಿಕ್ಕುಗು ಹೇಳಿ ದೊಡ್ಡ ಮಾಣಿ ಪದ್ರಾಡ್..ಕುಚ್ಚಿ ತೆಗದಪ್ಪಗ ಕುಞ್ಞಿಮಾಣಿಯ ಒಪ್ಪ ಕಾಣ್ತು ನೋಡು ಹೇಳಿ ಅಲ್ಲಿಯೇ ಕಿಟಕಿಯ ಗ್ಲಾಸಿಲಿ ತೋರಿಸಿದೆ."ಯಬ್ಬಾ..ಮೋರೆಕರೆ ಇಷ್ಟು ಬೋಳುಮಾಡಿದ್ದಿರಾ" ...ಕೇಳಿಕ್ಕಿ ಮೋರೆಕುಞ್ಞಿ ಮಾಡಿದ .."ಈಗ ತಲೆಯೊಳ ಗಾಳಿ ಹೊಗ್ಗುತ್ತಪ್ಪಾ ರಜಾ.".ಹೇಳಿಗೊಂಡು ಅವನೇ ಸಮಾಧಾನಪಟ್ಟುಗೊಂಡು ಅಣ್ಣನ ದಿನಿಗೇಳಿದ."ಬಾ..ಈಗ ನಿನಗೆ ಆನೇ ಭಂಡಾರಿ " ಹೇಳಿ..ಅವ ಪಿಳಿಪಿಳಿ ಕಣ್ಣು ಮಾಡಿಗೊಂಡು "ಬೇಡ...ಬೇಡ" ಹೇಳಿದರೆ ..ಈಗ ಅಪ್ಪಂಗೂ ಉಮೇದು ಬಂದು ಹಿಡುದು ಕೂರಿಸಿ ಕುಚ್ಚಿ ತೆಗವ ಶಾಸ್ತ್ರಸುರು ಮಾಡಿದವು.ಆಚೊಡೇಂಗೆ ಸರಿ ಮಾಡುಲೆ ಈಚೊಡೇಂದ ..ಈಚೊಡೇಂಗೆ ಸರಿಮಾಡುಲೆ ಆಚೊಡೇಂದ ತೆಗದಪ್ಪಗ ಮಂಡೆ ಬೋಳಾತು ಹೇಳುವ°...

       ಈಗ ಎರಡು ಮಾಣಿಯಂಗಳೂ ಅಪ್ಪಂಗುದೇ ಎಂಗ ಹೇರ್ ಕಟ್ ಮಾಡ್ತೆಯ ಹೇಳಿದವು..ಲೆಫ್ಟ್ ಸೈಡ್ ದೊಡ್ಡ ಮಾಣಿಯಡೊ ರೈಟಿಲಿ ಕುಞ್ಞಿಮಾಣಿಯಡೊ..ಹೀಂಗೆ ಕುಚ್ಚಿತೆಗದರೆ ವಿದೂಷಕನಾಂಗೆ ಕಾಂಗು ಹೇಳಿದೆ...ದೊಡ್ಡವ ಹಿಂದೆ ಕುಞ್ಞಿಮಾಣಿ ಮುಂದೆ ತೆಗೇರಿ ಹೇಳಿ ಒಪ್ಪಿಸಿದೆಯ.ಕುಚ್ಚಿ ತೆಗವಲೆ ಸುರುಮಾಡಿಯಪ್ಪಗ ಕುಞ್ಞಿಮಾಣಿ ಕೇಳಿದ "ಎದುರಾಣ ಹೊಡೇಲಿ  ತಲೆಕಸವೇ ಇಲ್ಲೆಪ್ಪ..ಆನೇಂಗೆ ಕುಚ್ಚಿತೆಗವದು..? " ಕರೆಬರಿಲಿದ್ದದರನ್ನೇ ತೆಗವ ಶಾಸ್ತ್ರ ಮಾಡಿಯಾತು.

      ಅಂತೂ ಇಂತೂ ಮೂರು ಜನರದ್ದೂ ಕುಚ್ಚಿ ತೆಗದೂ ಆತು ...ಹೊಸ ಕೆಲಸ ಕಲ್ತಾಂಗೂ ಆತು..ಎಂತಾದರುದೇ ನಮ್ಮ ಕೆಲಸ ನಾವೇ ಮಾಡಿಗೊಂಬಗ ಒಂದು ಖುಷಿಯೇ ಬೇರೆ ಅಲ್ಲದಾ...

✍️... ಅನಿತಾ ಜಿ.ಕೆ.ಭಟ್.
20-09-2020.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವಿಷು ವಿಶೇಷ ಸ್ಪರ್ಧೆಗೆ ಬರದ ಹಾಸ್ಯಲೇಖನ.(ಐನೂರು ಶಬ್ದಗಳ ಮಿತಿ).

ಬರಹದ ಕೆಳಗಡೆ ಇರುವ Home,> ಸಂಕೇತಗಳನ್ನು ಬಳಸಿಕೊಳ್ಳಬಹುದು.view web version ಗೆ ಹೋದರೆ ಅಲ್ಲಿ ಫಾಲೋ/follow ಮಾಡುವ ಆಪ್ಷನ್ ಸಿಗುತ್ತದೆ.ಫಾಲೋ ಮಾಡಬಹುದು.


ಸರೋಜಮ್ಮನ ತಾಕತ್ತು..#ಪುಟ್ಟಕಥೆ

 


ಸರೋಜಮ್ಮನ ತಾಕತ್ತು

    ಸರೋಜಮ್ಮ ಸೀರೆ ನೆರಿಗೆ ಮೇಲೆತ್ತಿಕೊಂಡು ಗಡಿಬಿಡಿಯಲ್ಲಿ ಅತ್ತಿಂದಿತ್ತ ಓಡಾಡುತ್ತ ಎಲ್ಲ ಕೆಲಸಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು."ಏ..ನೀಲಮ್ಮ ಅಂಗಳಕ್ಕೆ ಸೆಗಣಿ ಸಾರಿಸಬೇಕು...ಕೊಟ್ಟಿಗೆಯಿಂದ ಸೆಗಣಿ ಹೆಕ್ಕಿ ತಾ..ಚಂದ್ರು...ಮಾರ್ಗದ ಹೊಂಡಗುಂಡಿಯೆಲ್ಲ ಮಣ್ಣು ಹಾಕಿ ಮುಚ್ಚಿ ಸುತ್ತ ಮುತ್ತ ಬೆಳೆದಿರುವ ಸಸ್ಯಗಳ ಸವರಿ ವಾಹನ ನಿಲುಗಡೆ ವ್ಯವಸ್ಥೆ ಮಾಡು"ಹೀಗೆ ಎಲ್ಲ ಕೆಲಸದಾಳುಗಳಿಗೂ ಕೆಲಸ ಹೇಳುತ್ತಿದ್ದರು ಅರುವತ್ತರ ಹರೆಯದ ಸರೋಜಮ್ಮ.ತನ್ನ ಕೊನೆಯ ಮಗ ಗಿರೀಶನ ಮದುವೆಯ ಆರತಕ್ಷತೆ ಕಾರ್ಯಕ್ರಮ ಮನೆಯಲ್ಲಿ ಪಡೆಯುವುದರಿಂದ ಸಿದ್ಧತೆಯಲ್ಲಿ ತೊಡಗಿದ್ದರು.

ಅಷ್ಟರಲ್ಲಿ ಮನೆಯ ಫೋನ್ ರಿಂಗುಣಿಸಿತು.ಫೋನ್ ಎತ್ತಿದ ಸರೋಜಮ್ಮ"ಹಲೋ..."ಅಂದರು.
ಅತ್ತ ಕಡೆಯಿಂದ"ರೋಜತ್ತೆ... ನಾನು..ಶಾರಿ ಮಾತಾಡ್ತಾ ಇರೋದು... ಹೇಗೆ ಮದುವೆ ತಯಾರಿ ಭರದಿಂದ ಸಾಗ್ತಾ ಇದ್ದೋ ಹೇಗೆ..?"

"ಏನೇ...ಶಾರಿ.. ಅಪರೂಪಕ್ಕೆ ಫೋನ್ ಮಾಡಿದೆ... ಆಮಂತ್ರಣ ಪತ್ರಿಕೆ ತಲುಪಿದೆ ತಾನೇ..?ಲಗ್ನಕ್ಕೆ ಎಲ್ಲರನ್ನೂ ಕರ್ಕೊಂಡು ಬರ್ಬೇಕು..ನಿನ್ನ ಗಂಡನನ್ನೂ ಎರಡು ದಿನ ರಜೆ ಹಾಕ್ಸಿ ಕರ್ಕೊಂಬಾ ...ಎಲ್ಲ್ರೂ ಕ್ಷೇಮ ತಾನೇ..."

"ರೋಜತ್ತೆ..ನಾವೆಲ್ರೂ ಆರಾಮಾಗಿದೀವಿ.ಅಂದಹಾಗೆ ನನ್ನ ಮಗಳು ಅಳಿಯ ಫಾರಿನ್ ನಿಂದ ಬೆಂಗಳೂರಿಗೆ ಬಂದಿದಾರೆ.ಊರಲ್ಲಿರೋ ತಾಯಿ ಮನೆಗೆ ಅವರನ್ನು ಕರ್ಕೊಂಡು ಬಂದಿದೀನಿ.ಅವ್ರಿಗೆ ಗಿರೀಶನ ಲಗ್ನಕ್ಕಂತೂ ಬರೋಕಾಗಲ್ಲ.ಈ ದಿನ ಮಧ್ಯಾಹ್ನ ಕ್ಕೆ ನಿಮ್ಮನೆಗೆ ಬಂದು ನಿಮ್ಮನ್ನು ಮಾತಾಡಿಸಿಕೊಂಡು ಹೋಗೋಣಾಂತ ಇದೀವಿ..."

"ಸಂತೋಷ...ಶಾರೀ... ಹಾಗೇ ಆಗ್ಲಿ.. ಬೇಗನೆ ಬನ್ನಿ"ಎಂದರು ಸರೋಜಮ್ಮ.ಶಾರೀ ಹೊಸದಾಗಿ ಮದುವೆಯಾದ ಮಗಳು ಅಳಿಯನ ಜೊತೆ ಬಂದಾಗ ಸಿಹಿ ಅಡುಗೆ ಮಾಡಬೇಕಲ್ವೇ... ಏನು ಮಾಡುವುದು? .. ಎಂದು ಯೋಚಿಸಿದ ಸರೋಜಮ್ಮನಿಗೆ ಹೊಳೆದದ್ದು.. ಮೊನ್ನೆ ತಾನೇ ತಂದಿಟ್ಟ ಹೆಸರುಬೇಳೆ...ಪಾಯಸ ಮಾಡಲು ಹಸಿ ತೆಂಗಿನಕಾಯಿಯ ಹಾಲು ಆದರೆ ರುಚಿ. ಆದರೆ ಈ ಸೆಖೆಗೆ ತೆಂಗಿನಕಾಯಿ ಒಣಗಿಯೇ ಹೋಗಿದೆ.ಚೆನ್ನಾಗಿ ಹಾಲು ಬರದು.ಏನು ಮಾಡುವುದು??.. ಎಂದು ಯೋಚಿಸಿದವರಿಗೆ ಪಕ್ಕದಲ್ಲಿರುವ ಗಿರೀಶನನ್ನು ಕಂಡಿತು.

"ಗಿರೀಶ ಒಮ್ಮೆ ತೋಟಕ್ಕೆ ಹೋಗಿ ಅಲ್ಲಿ ಕೆಲಸ ಮಾಡುತ್ತಿರುವ ಲಿಂಗಪ್ಪನಲ್ಲಿ ಎರಡು ಹಸಿ ತೆಂಗಿನಕಾಯಿ ಕೀಳಲು ಹೇಳಿ ತೆಕ್ಕೊಂಡು ಬರ್ತೀಯಾ.."ಎಂದು ಕೇಳಿದರು...

"ಏನಮ್ಮ ನೀನು ಹೇಳೋದು...ನಾನೀಗಷ್ಟೇ ಪೇಟೆಗೆ ಹೋಗಿ ಬಂದೆ... ಈಗ ಇನ್ನೊಂದಿಷ್ಟು ಕೆಲಸವಿದೆ.ನಂಗೆ **ಗಡ್ಡ ಕೆರ್ಕೊಂಬಲೂ ಟೈಮಿಲ್ಲೆ**...ಇನ್ನು ತೋಟಕ್ಕೋಗಿ ತೆಂಗಿನಕಾಯಿ ತರೋದಕ್ಕೆ ಹೇಳ್ತೀಯಾ..", ಎಂದು ಉಡಾಫೆಯ ಉತ್ತರ ನೀಡಿದ..

"ಅಲ್ಲ ಮದುವೆ ನಿಗದಿಯಾದಂದಿನಿಂದ ನೋಡ್ತಾ ಇದ್ದೀನಿ... ಕೈಲಿ ಮೊಬೈಲ್ ಹಿಡ್ಕೊಂಡು ಸವರ್ತೀಯಲ್ಲ...ಅದಕ್ಕೆಲ್ಲ ಸಮಯವಿದೆ.. ಮನೆಕೆಲಸ ಹೇಳಿದರೆ ಹೀಗೆ...ಅಲ್ವೇನೋ...ಏನಿದೆ ಆ ಮೊಬೈಲಲ್ಲಿ... ನಾನೂ ಒಂಚೂರು ನೋಡ್ತೀನಿ "ಅಂತ ಬಗ್ಗಿದರು....

ತಾನು ಮದುವೆಯಾಗುವ ಹುಡುಗಿ ಜೊತೆ ಚಾಟ್ ಮಾಡುವುದು ಅಮ್ಮನಿಗೆ ಗೊತ್ತಾದರೆ ಮುಜುಗರ ಆಗುತ್ತೆ ಅಂತ ಮೊಬೈಲ್ ಜೇಬಲ್ಲಿ ತೂರಿಸಿ...ಸರ್ರನೆ ತೋಟದತ್ತ ಹೆಜ್ಜೆ ಹಾಕಿದ ಗಿರೀಶ.

✍️... ಅನಿತಾ ಜಿ.ಕೆ.ಭಟ್.
20-09-2020.ಚಿತ್ರ :ಹವಿಸವಿ ಕೃಪೆ.


Friday, 18 September 2020

ಬಿದ್ದಾಗ ಎದ್ದು ನಿಲ್ಲಿ..#ಪುಟ್ಟ ಲೇಖನ


 ಜೀವನದಲ್ಲಿ ಏರಿಳಿತಗಳು ಸರ್ವೇಸಾಮಾನ್ಯ.ಬಿದ್ದಾಗ ಎದ್ದು ಆತ್ಮವಿಶ್ವಾಸದಿಂದ ನಡೆಯುವುದು ಜಾಣತನ.ನೋವೆಂದು ಕಣ್ಣೀರುಗರೆಯುತ್ತಾ ಕುಳಿತರೆ ಒಮ್ಮೆ ಎಲ್ಲರೂ ದಿಟ್ಟಿಸಿನೋಡಿ ಕಂಬನಿಯೊರೆಸಿ ತೆರಳುತ್ತಾರೆಯೇ ವಿನಃ ದಿನವೂ ಜೊತೆಗೆ ನಿಲ್ಲಲಾರರು.ನಮ್ಮೊಡನೆ ಸದಾ ಇರುವುದು ನಮ್ಮ ಧೈರ್ಯ,ಛಲವೇ ಹೊರತು ಪರರ ಕರುಣೆಯಲ್ಲ.

        ಅವಳದು ಪತಿ, ಇಬ್ಬರು ಹೆಣ್ಣುಮಕ್ಕಳ ಪುಟ್ಟ ಕುಟುಂಬ.ಬಾಳಿನ ಅರ್ಧದಾರಿಯಲ್ಲೇ ಬಾರದ ಲೋಕಕ್ಕೆ ತೆರಳಿದರು ಪತಿರಾಯರು.ನಾಲ್ಕಾರುದಿನ ಬಂಧುಗಳು ಜೊತೆಗಿದ್ದರು.ಕೊನೆಗೆ ಅವಳೂ ಇಬ್ಬರು ಮಕ್ಕಳು ಮಾತ್ರವೇ ಉಳಿದರು.ಬೆನ್ನಹಿಂದೆ ಏನೇನೋ ಆಡುವವರು,ಉಪಕಾರ ಮಾಡದಿದ್ದರೂ ಚುಚ್ಚಿ ಮನನೋಯಿಸುವವರ ಮಾತಿಗೆ ಎದುರಾಡದೆ,ವಿಚಲಿತಳಾಗದೆ ಗುರಿಯೆಡೆಗೆ ದೃಷ್ಟಿನೆಟ್ಟಳು.ಇದ್ದ ತುಂಡು ಭೂಮಿಯಲ್ಲಿ ಬೆವರು ಸುರಿಸಿ ದುಡಿದು, ವ್ಯವಹಾರಜ್ಞಾನ ಸಂಪಾದಿಸಿ ಬದುಕಿನ ಬಂಡಿಯನೆಳೆದಳು.ಮಕ್ಕಳಿಬ್ಬರನ್ನೂ ದಡ ಸೇರಿಸಿದ ಅವಳ ಮೊಗದಲ್ಲೀಗ ಹೆಮ್ಮೆಯ ಕಳೆಯಿದೆ.ನೊಂದವರಿಗೆ ಮಾದರಿಯಾಗಿದ್ದಾಳೆ.

       ಚರಿತ್ರೆಯನ್ನು ಬದಲಿಸಲು ಸಾಧ್ಯವಿಲ್ಲ;ಆದರೆ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು.ಸೋಲುಂಡಾಗಲೇ ಗೆಲ್ಲುವ ಹಂಬಲ ಹೆಚ್ಚಾಗುವುದು.ಹಿನ್ನಡೆಯಾದಾಗ ಕುಗ್ಗದೆ ,ಸವಾಲುಗಳಿಗೆ ಜಗ್ಗದೆ ಮುನ್ನಡೆಯುವ ಛಲವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು.

✍️ ಅನಿತಾ ಜಿ.ಕೆ.ಭಟ್.

17-09-2020.

ಮಾಮ್ಸ್ಪ್ರೆಸೊ ಕನ್ನಡದ 'ನೂರು ಶಬ್ದದ ಕಥೆ' ವಿಭಾಗದಲ್ಲಿ ಬಹುಮಾನಿತ ಬರಹ.



Thursday, 17 September 2020

ಬೆಳಗು ನೀ ಹೊಳೆವ ಮೊಗದವಳೇ..#ಕವನ

 


ಬೆಳಗು ನೀ ಹೊಳೆವ ಮೊಗದವಳೇ

ತೆಗೆಯಣ್ಣ ತೆಗೆಯಣ್ಣ ನನದೊಂದು ಚಿತ್ರ
ನಸುನಗುತ ಕೂತಿರುವೆ ಬೆರಳಿಟ್ಟು ಹಲ್ಲ ಹತ್ರ...||

ನಾನೆಂದೂ ಕ್ಯಾಮೆರಾವ ಕಂಡಿಲ್ಲವಣ್ಣ
ನೀಕೊಡುವ ಪೆಪ್ಪರಮೆಂಟಿಗೆ ಕಾದಿಹೆನಣ್ಣ...||

ಅಂಗಿ ಕೊಳಕಿದ್ದರೆ ನನಗಿಲ್ಲ ಚಿಂತೆ
ಪಟವ ಅಂಗಡಿಯಲ್ಲಿ ತೊಳೆದೇ ಕೊಡುವರಂತೆ...||

ಸೆಂಟ್, ಪೌಡರು ನಾ ಹಾಕಿಲ್ಲವಣ್ಣ
ಪರಿಮಳವೋ ವಾಸನೆಯೋ ಪಟಕಿಲ್ಲವಲ್ಲಣ್ಣ...||

ಹುಬ್ಬುಗಳ ಮೇಲಮ್ಮ ಕಾಡಿಗೆಯ ತೀಡಿಲ್ಲ
ಪುಟ್ಟ ಕಂಗಳಿಗೆ ಸುಂದರವೆ ಜಗವೆಲ್ಲ...||

ಜಗಲಿಯಲಿ ಕಾವಿ ಮಾಸಿಹೋಗಿಹುದು
ಅಣ್ಣಾ..ನಿನಕಂಡು ನನ್ನಾಸೆ ಚಿಗುರುತಿಹುದು...||

ತಂಗೆಮ್ಮ ತಂಗೆಮ್ಮ ನಿನ್ನ ಮುಗ್ಧತೆಗೆ
ಮಾರುಹೋಗಿಹೆನು ಚೈತನ್ಯ ಚಿಲುಮೆಗೆ...||

ಚಂದಿರನು ಕೂಡ ಸೆರಗ ಸರಿಸಿ
ತಂದಿಹನು ತಂಪು ಬೇಗೆ ಹರಿಸಿ...||

ಅಂತರಂಗವು ಶುದ್ಧ ಸ್ಫಟಿಕದಂತೆ
ಮುಖದ ಮೇಲೆ ಪ್ರತಿಬಿಂಬವಂತೆ...||

ಮುಂಗಾರು ಬಂದು ಕೊಳೆಯೆಲ್ಲ ತೊಳೆದು
ಕಳೆಯಾಗಿ  ಬೆಳಗು ನೀ ಹೊಳೆವ  ಮೊಗದವಳೇ...||

✍️... ಅನಿತಾ ಜಿ.ಕೆ.ಭಟ್.
18-09-2020.

ಚಿತ್ರ: ಹವಿಸವಿ ಕೃಪೆ

ಹವಿಸವಿ ಭಾವ ಚಿತ್ರಗೀತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಕವನ.


Wednesday, 16 September 2020

ಹಸಿರ ಸಿರಿ.....#ಕವನ

 


  ಹಸಿರ ಸಿರಿ


ಹದವಾದ ಮಳೆ
ರೈತನ ಮೊಗದಿ ಕಳೆ
ತಂಪಾಗಿಹಳು ಇಳೆ
ಉತ್ತು ಬಿತ್ತಿ ಬೆಳೆ....||

ಸೆಳೆಯುತಿದೆ ಹಸಿರು
ಹರಿಸುತಿಹ ಬೆವರು
ದುಡಿಯುತಿಹ ಕಾರ್ಮಿಕರು
ಛಲಬಿಡದ ಶ್ರಮಿಕರು....||

ಲಾಭ ಕಾಣದ ರೈತ
ನಿಂತಿಹನು ಸೋತು
ಧರೆಯೊಳಿಟ್ಟ ನಂಬುಗೆ
ನೀಡಲಿ ಅನ್ನ ಹಸಿವಿಗೆ....||

ಪಚ್ಚೆ ಪೈರಿನ ದೇಗುಲ
ಋಣ ತೀರಿಸದ ಸಂಕುಲ
ಸಲಹುತಿದೆ ಸಕಲ
ತುರ್ತು ಬೇಕಿದೆ ಬೆಂಬಲ....||

ಸಮವಸ್ತ್ರದಿ ಭೂರಮೆ
ಕಾಡುತಿದೆ ನನ್ನೀ ಭ್ರಮೆ
ಪಾಡ್ದನ ಹಾಡಿನ ಗರಿಮೆ
ಹಿರಿಕಿರಿಯರುತ್ಸಾಹ ಚಿಲುಮೆ
ಬೆಲೆಕಟ್ಟಲಾಗದ ದುಡಿಮೆ
ಕರುನಾಡ ಹಸಿರ ಸಿರಿ ಹಿರಿಮೆ....||

✍️... ಅನಿತಾ ಜಿ.ಕೆ.ಭಟ್.
16-09-2020.

ಹವಿಸವಿಯ ಭಾವ ಚಿತ್ರಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕವನ.

ಪೊರಕೆ ಸೇವೆ..#ಹಾಸ್ಯಕಥೆ

 


ಪೊರಕೆ ಸೇವೆ


"ಹಲೋ..ಶಂಕ್ರಣ್ಣಾ...ಹೇಗಿದ್ದೆ?ನಮ್ಮ 'ಸ್ನೇಹಿತರ ಬಳಗ'ದ ಈ ತಿಂಗಳ ಸಾಮಾಜಿಕ ಕಾರ್ಯ ನಡೀಬೇಕಲ್ಲ.... ನಾವು ಇಲ್ಲೇ ಹತ್ರ ಇರುವ ಶಂಕರ ಮಠದ ಆವರಣದಲ್ಲಿ ಸ್ವಚ್ಛತೆ ಮಾಡುವುದೆಂದು ಕಳೆದ ತಿಂಗಳೇ ನಿರ್ಧರಿಸಿದ್ದು ನೆನಪಿದೆ ತಾನೇ?"ಎಂದ ಗೆಣಪ್ಪಣ್ಣ.

"ಓಹೋ..ಹೌದಲ್ದ  ...ಈಗ ನೆಂಪಾತು ನೋಡು..ಮರ್ತೇ ಬಿಟ್ಟಿದ್ದೆ.ಸರಿ..ಯಾವಾಗಾವ್ತು..?ಎಂದ ಶಂಕ್ರಣ್ಣ.

"ನೋಡು... ಶಂಕ್ರಣ್ಣ.. ನಾಡಿದ್ದು ಭಾನುವಾರ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ..ಆ ಹೊತ್ತಿಗೆ ಸರಿಯಾಗಿ ಸದಸ್ಯರೆಲ್ಲರೂ ಸೇರಬೇಕು.ಹಿಡಿ,ಕಸ ಸಂಗ್ರಹ ಚೀಲ, ಟೊಪ್ಪಿ, ಗ್ಲೌಸ್, ನೀರು ಏನೇನು ಬೇಕೋ ಎಲ್ಲಾ ಅವರವರೇ ತರುವುದು."ಎಂದು ಸವಿವರ ನೀಡಿದ ಗೆಣಪ್ಪಣ್ಣ.

"ಹ್ಞೂಂ.. ಸರಿ."ಎಂದು ಫೋನಿಟ್ಟ ಶಂಕ್ರಣ್ಣ.

ಒಪ್ಪಿದ್ದೆಲ್ಲ ನಿಜ.. ಆದರೆ ತಲೆಯಲ್ಲಿ ಹುಳ ಕೊರೆಯಲು ಈಗ ಶುರುವಾಯಿತು.ಕಳೆದ ತಿಂಗಳ ಸಾಮಾಜಿಕ ಕಾರ್ಯ ರಕ್ತದಾನ ಶಿಬಿರ ಕ್ಕೆ ಹೋಗಿ ರಕ್ತದಾನ ಮಾಡಿದ್ದಕ್ಕೆ ಹೆಂಡತಿ ಮಾಡಿದ ಕಂಠದಾನ ಇನ್ನೂ ಮರೆತಿಲ್ಲ.ಈಗಿನ್ನು ಊರು ಗುಡಿಸೋ ಕಾರ್ಯ ಬೇರೆ ಕೇಡು... ಎಂದು ಶಂಕ್ರಣ್ಣ ಗೊಣಗಿಕೊಂಡ.

ಉಪಾಯವಾಗಿ ಆ ದಿನಕ್ಕೆ ಮುನ್ನಾ ದಿನ ವೇ ಹೆಂಡ್ತೀನ ತವರಿಗೆ ಕಳಿಸೋ ಚಿಂತನೆ ಮಾಡಿದ .ಅದು ಹೇಗೋ ಫಲಪ್ರದವಾಯಿತು.ತಾನು ಗೆದ್ದೆ ಎಂದು ಬೀಗಿದ.

ಮರುದಿನ ಬೆಳಗ್ಗೆ 9 ಗಂಟೆಗೆ 'ಸ್ನೇಹಿತರ ಬಳಗ'ದ ಎಲ್ಲರೂ ತಲೆಗೆ ಬಿಳಿ ಟೊಪ್ಪಿ, ಕೈಗೆ ಗ್ಲೌಸ್, ಪೊರಕೆ,ಕಸ ಸಂಗ್ರಹಿಸುವ ಚೀಲದೊಂದಿಗೆ ಸಿದ್ಧವಾದರು ಫೊಟೋಗೆ...ಅಲ್ಲಲ್ಲ.... ಸ್ವಚ್ಛತಾ ಕಾರ್ಯಕ್ರಮ ದ ಉದ್ಘಾಟನೆಗೆ.

ಉದ್ದುದ್ದ ಭಾಷಣ ಬಿಗಿದು ಉದ್ಘಾಟನೆ ನೆರವೇರಿಸಿದರು.ಫೊಟೋ ತೆಗೆದು ವಾಟ್ಸಪ್, ಫೇಸ್ಬುಕ್ ಗಳಿಗೆ ಹಾಕಿಯಾಯಿತು.ಮೆಲ್ಲಮೆಲ್ಲಗೆ ಸ್ವಚ್ಛತೆ ಆರಂಭಿಸಿದರು.

ಹತ್ತು ಗಂಟೆಯಾದರೂ ಶಂಕ್ರಣ್ಣನ ಪತ್ತೆಯಿಲ್ಲ."ಶಂಕ್ರಣ್ಣ ಬತ್ತೆ ಹೇಳಿದ್ದ.. ಕಾಣ್ತಾ ಇಲ್ಲೆ" ಹೇಳಿ ಎಲ್ಲರೂ ಅಂದುಕೊಂಡರು.

ಅಷ್ಟರಲ್ಲಿ ಪೆಚ್ಚು ಮೋರೆ ಹಾಕಿಕೊಂಡು ಬಂದ ಶಂಕರಣ್ಣನನ್ನು ಎಲ್ಲರೂ ಉಪಾಧ್ಯಕ್ಷರೇ ತಡವಾಗಿ ಬಂದರೆ ಹೇಗೆ..? ಎಂದು ತರಾಟೆಗೆ ತೆಗೆದುಕೊಂಡರು."ಹಿಡಿ (ಪೊರಕೆ)ಒಂದೂ ಕಾಣಿಸಿದ್ದಿಲ್ಲೆಪ್ಪಾ ...ಹುಡುಕಿ ತಡವಾಗಿ ಹೋಯಿತು"ಎಂದ..

ಮುಂದುವರಿಸುತ್ತಾ "ಹೆಂಡ್ತಿ ಕೈಯಿಂದ ಮಂಗಳಾರತಿ ಮಾಡಿಸಿಕೊಳ್ಳುವುದು ತಪ್ಪಿಸಲು ತವರಿಗೆ ಕಳಿಸಿದೆ.ಬೆಳಗ್ಗೆ ಬೇಗೆದ್ದು ತಿಂಡಿ ಮಾಡಿ ಸಾಂಗವಾಗಿ ಹೊರಟುನಿಂತು ಹಿಡಿಸೂಡಿ (ಪೊರಕೆ) ಹುಡುಕಿದೆ.ಅದೆಲ್ಲಿ ಬಚ್ಚಿಟ್ಟಿದ್ದಳೋ ಅರ್ಧಗಂಟೆ ತಡಕಾಡಿದರೂ ಸಿಗಲೇಯಿಲ್ಲ.ಕೊನೆಗೆ ಹೆಂಡ್ತಿಗೆ ಫೋನ್ ಮಾಡಿದೆ.... ಇದುವರೆಗೆ ನಾನು ತವರಿಗೆ ಹೋದಾಗ ಪೊರಕೆ  ಹಿಡಿದು ಗುಡಿಸದ ನೀವು ಇಂದೇಕೆ ಹುಡುಕುತ್ತಿರುವುದು ? ಊರು ಗುಡಿಸುವ ಉಸಾಬರಿಗೆ ಏನಾದರೂ ಹೊರಟಿದ್ದೀರೋ ಹೇಗೆ?..ಎಂದು ನನ್ನಾಕೆ ಕೇಳಬೇಕೇ..

ಉತ್ತರ ಕೊಡಲೇಬೇಕಾದ ಸಂಕಟ ಎದುರಾಯಿತು.ಅಂತೂ ಗುಟ್ಟಾಗಿಟ್ಟದ್ದು ರಟ್ಟಾಗಿಹೋಯ್ತು.ಪೊರಕೆಸೇವೆ ,ಮಂಗಳಾರತಿ ಎರಡೂ ಫೋನಲ್ಲೇ ಮಾಡಿ ಪೊರಕೆ ಅಡಗಿಸಿಡುವ ಜಾಗ ಹೇಳಿಬಿಟ್ಳು.ಕಾರ್ಯ ಕೆಟ್ಟೋಯ್ತು ಎಂದು ಸಪ್ಪೆಮೋರೆ ಮಾಡ್ಕೊಂಡು ಪೊರಕೆ ಹಿಡ್ಕೊಂಡು ಬಂದ್ಬಿಟ್ಟೆ.."..

ಉರಿಬಿಸಿಲಲ್ಲೂ ಗೊಳ್ಳೆಂದು ಎಲ್ಲರೂ ನಕ್ಕುಬಿಟ್ಟರು.

✍️... ಅನಿತಾ ಜಿ.ಕೆ.ಭಟ್.
16-09-2020.


ಚಿತ್ರ :ಹವಿಸವಿ ಕೃಪೆ

Tuesday, 15 September 2020

ಆರೋಗ್ಯಕರ ಚಕ್ಕೋತ ಜ್ಯೂಸ್/pomelo juice #ಅಡುಗೆ

 


ಆರೋಗ್ಯಕರ ಚಕ್ಕೋತ

    ದೊಡ್ಡ ಗಾತ್ರದಲ್ಲಿರುವ ಚಕ್ಕೋತ ಕಾಯಿಗಳು ನಿಂಬೆ,ಮೋಸಂಬಿ,ಕಿತ್ತಳೆ ಹಣ್ಣನ್ನು ಹೋಲುತ್ತವೆ.ಗುಣದಲ್ಲಿಯೂ ಅವುಗಳಂತೆಯೇ ವಿಟಮಿನ್ ಸಿ ಅಧಿಕವಾಗಿರುವ ಹಣ್ಣು. ಚಕ್ಕೋತವು ದಪ್ಪನೆಯ ಸಿಪ್ಪೆಯನ್ನು ಹೊಂದಿದ್ದು  ಒಳಗೆ ಎಸಳುಗಳನ್ನು ಬಿಳಿಯ ಪದರ ಆವರಿಸಿರುತ್ತದೆ. ಅವುಗಳನ್ನು ಬಿಡಿಸಿದರೆ ನಸುಗೆಂಪು  ಬಣ್ಣದ ದೊಡ್ಡದಾದ ಎಸಳುಗಳು ಸಿಹಿ ಮಿಶ್ರಿತ ಒಗರು ರುಚಿಯನ್ನು ಹೊಂದಿದೆ .ಕೆಲವೊಮ್ಮೆ ಸ್ವಲ್ಪ ಕಹಿ ಇರಬಹುದು. ಇದು ತಿನ್ನಲು ಬಹಳ ರುಚಿಕರ ಎಂದೆನಿಸದಿದ್ದರೂ ಆರೋಗ್ಯಕ್ಕೆ ಮಾತ್ರ ಹಿತಕರ.
ಇದರಲ್ಲಿ ವಿಟಮಿನ್ ಎ , ವಿಟಮಿನ್ ಬಿ ಮತ್ತು ಸಿ ಜೀವಸತ್ವಗಳು ಹೇರಳವಾಗಿದ್ದು, ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತವೆ.

     ಚಕ್ಕೋತ ಹಣ್ಣನ್ನು ಹಾಗೆಯೇ ತಿನ್ನಲು ಹೆಚ್ಚಿನವರು ಇಷ್ಟಪಡುತ್ತಾರೆ. ಇದರಿಂದ ಜ್ಯೂಸ್, ಸಲಾಡ್'ಗಳನ್ನು ಸಹ ಮಾಡಬಹುದು. ಇದು ಕಾಯಿಲೆಗಳಿಗೆ ರಾಮಬಾಣ.
ನಿಂಬೆಹಣ್ಣು ಕಿತ್ತಳೆಹಣ್ಣಿನಂತೆ ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಮೂತ್ರನಾಳದ ಸೋಂಕು ನಿವಾರಿಸುವ ಗುಣ ಹೊಂದಿದೆ. ಹೃದಯದ ಆರೋಗ್ಯಕ್ಕೂ ಉತ್ತಮ.ವಿಟಮಿನ್-ಸಿ ಹೇರಳವಾಗಿರುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಶೀತ,ಅಲರ್ಜಿ , ಅಸ್ತಮಾ ಸಮಸ್ಯೆ ಇರುವವರಿಗೆ ಉತ್ತಮ.

ಚಕ್ಕೋತ ಜ್ಯೂಸ್ :-

ಚಕೋತ ಹಣ್ಣುಗಳನ್ನು  ಸುಲಿದು ಒಳಗಿನ ಬಿಳಿಯ ಪದರವನ್ನು ತೆಗೆದು ತಿರುಳನ್ನು ಆಯ್ದು ಇಟ್ಟುಕೊಳ್ಳಬೇಕು. 1 ಕಪ್ ತಿರುಳಿಗೆ ,ಕಾಲು ಕಪ್ ಸಕ್ಕರೆ , ಸ್ವಲ್ಪ ನೀರು (ಬೇಕಾದಲ್ಲಿ ಚಿಟಿಕೆ ಉಪ್ಪು)ಹಾಕಿ ಮಿಕ್ಸಿಗೆ ಹಾಕಿ ಜ್ಯೂಸ್ ತಯಾರಿಸಿಕೊಂಡು, ರುಚಿ ನೋಡಿ ಬೇಕಾದಲ್ಲಿ ಸಕ್ಕರೆ ಸೇರಿಸುವುದು. ಇದನ್ನು ನೀರು ಬೆರೆಸಿ ಸೋಸಿ . ಬಹಳ ರುಚಿಕರವಾದ ಜ್ಯೂಸ್ ಅಲ್ಲದಿದ್ದರೂ ಆರೋಗ್ಯವರ್ಧಕ ಜ್ಯೂಸ್.

✍️..ಅನಿತಾ ಜಿ.ಕೆ.ಭಟ್.
16-09-2020.

ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home ,> ಸಂಕೇತಗಳನ್ನು ಬಳಸಿಕೊಳ್ಳಬಹುದು


ಚಂದ್ರಚಕೋರಿ #ಕವನ



ಚಂದ್ರಚಕೋರಿ


ಅಂಕೆಯಿಲ್ಲದ ಶಂಕರೀ
ಆಟದಿ ತನ್ಮಯ ಕುವರಿ
ಇಚ್ಛಿತ ನಾಟ್ಯಮಯೂರಿ
ರವಿಯು ನಿನ್ನಲಿ ಮಂಡಿಯೂರಿ
ಬೇಡುತಿಹ ಬೆಂಗದಿರ ಬಳಿ ತೂರಿ...
ಯಾರೀ ಬೆಡಗಿ ಚಂದ್ರಚಕೋರಿ...

ಚೈತನ್ಯದ ಚಿಲುಮೆಯೀ ಬಂಗಾರಿ
ಒಂಟಿಯಾಗಿ ಜಗವ ಗೆಲ್ಲಹೊರಟ ಪೋರಿ
ಕುಂಟಾಬಿಲ್ಲೆ ಆಡುತ ಮೈಮರೆತವಳೇ
ಬಾಲ್ಯದಾಟವು ಜೀವನದ ರಸನಿಮಿಷಗಳೇ...

ಬಿಸಿಲು ನೆರಳಿನಾಟ ಜೀವನದ ಜಂಜಾಟ
ಹರಡಿದ ಕೇಶ ಸರಳತೆಯ ವೇಷ
ಪುಟ್ಟ ಕಾಲ್ಗಳಿಗೆ ಗೆಜ್ಜೆಯ ಶೃಂಗಾರ
ಲಂಗ ದಾವಣಿಯಲ್ಲಿ ಸಂತೃಪ್ತ ಬಾಲೆ...

ಆಟಿಕೆಗಳ ಬಯಕೆಯಿಲ್ಲ
ಸುತ್ತುವ ಕಾಲ್ಗಳು ಚಪ್ಪಲಿಯ ಬೇಡಿಲ್ಲ
ವೈಭವೋಪೇತ ಧಿರಿಸುಗಳ ಕಂಡಿಲ್ಲ
ಜೀವೋಲ್ಲಾಸ ಮಂದಹಾಸಕೆ ಕೊರತೆಯಿಲ್ಲ...

ಕಂಗಳಲಿ ಕಂಡ ಕನಸುಗಳ ಮಾಲೆ
ಅಂತರಂಗದೊಳು ಭಾವದ ಸರಮಾಲೆ
ಸಿರಿಲಕ್ಷ್ಮಿ ಕುವರಿಯಂತಿಪ್ಪ ಬಾಲೆ
ಹರಿಸುತಿಹಳು  ಸಂತಸದ ಅಲೆ...

✍️... ಅನಿತಾ ಜಿ.ಕೆ.ಭಟ್.
15-09-2020.


ಚಿತ್ರ- ಹವಿಸವಿ ಕೃಪೆ

ತಾಯಿ ಭಾರತಿಯ ಕರೆ #ಕವನ

 


ತಾಯಿ ಭಾರತಿಯ ಕರೆ

ಓ ನನ್ನ ಮಡಿಲ ಕಂದಗಳಿರಾ....
ಹದಿನೆಂಟರ ಗಡಿ ದಾಟಿದವರಾ
ಎಲ್ಲರೂ ಮತದಾನ ಮಾಡಬನ್ನಿ
ನನಗೊಬ್ಬ ರಕ್ಷಕನ ಆಯ್ದು ತನ್ನಿ...||

ಜಾತಿ ಧರ್ಮ ದ್ವೇಷವ ಬಿತ್ತುವ
ಭ್ರಷ್ಟರ ಅಯೋಗ್ಯರ ಮೂಲೆಗಿಟ್ಟು
ಸಾಮರಸ್ಯ ಅಭಿವೃದ್ಧಿಯ ಚಿಂತನೆಗೆ
ಪ್ರಜಾತಂತ್ರ ನೀಡಿರುವ ಹಕ್ಕು||

ಅಮೂಲ್ಯ ಮತ ದೇಶಕೆ ವರದಾನ
ಪಂಚವರ್ಷದ ಪ್ರಗತಿಯ ಯಾನ
ಅವಸಾನ ತಡೆದು ಅನುದಾನ ಬಳಕೆ
ಬಲಿಬೇಡ ಹಣ ಅರಿವೆ ಹೆಂಡಕೆ||

ಎನ್ನೊಡಲ ಕೊಳ್ಳೆ ಹೊಡೆವ
ಕುಟಿಲ ಧುರ್ಯೋಧನರು ಬೇಡ
ರಜವೆಂದು ಮಜದಲ್ಲಿ ಮೈಮರೆಯಬೇಡ
ಪಣತೊಟ್ಟೆನ್ನ ಹೊಂಗನಸ ಸಾಕಾರಮಾಡು||

ಬೆರಳಲಿ ಅಳಿಸದ ಚಿತ್ರ ಬರೆಸಿ
ತಾಯನುಳಿಸಿ ಎತ್ತರಕೇರಿಸುವ
ಗರಿಮೆ ವಿಶ್ವದೆಲ್ಲೆಡೆ ಪಸರಿಸುವ
ದಕ್ಷ ಸರಕಾರವ ಅಧಿಕಾರಕ್ಕೆ ತನ್ನಿ||

ಓ ನನ್ನ ಮಡಿಲ ಕಂದಗಳಿರಾ...
ಸಮರ್ಥ ನಾಯಕನ ಆರಿಸಬನ್ನಿ...
ನಿಮ್ಮೆಲ್ಲ ಕಾರ್ಯಗಳ ಬದಿಗಿಟ್ಟು ಬನ್ನಿ...

✍️... ಅನಿತಾ ಜಿ.ಕೆ.ಭಟ್.
15-09-2020.

ಚಿತ್ರಕೃಪೆ:ಹವಿಸವಿ.

ಚುನಾವಣಾ ಸಂದರ್ಭದಲ್ಲಿ ಚಿತ್ರಕವನ ಸ್ಪರ್ಧೆಗೆ ಬರೆದ ಕವನ.


Monday, 14 September 2020

ಉಗಿಯಬಂಡಿ ಬಾಳಬಂಡಿ..#ಕವನ

 



ಉಗಿಯ ಬಂಡಿ _ ಬಾಳ ಬಂಡಿ

ಚುಕುಬುಕು ರೈಲಿನ ಬಂಡಿ
ವೇಗದಿ ಸಾಗುತ ಏನೇನ್ ಕಂಡಿ ?||

ಹಳಿಯ ಮೇಲಿನ ಹಳೆಯ ಬಂಡಿ
ಗಿಜಿಗುಟ್ಟುವ ಜನರಿಗೆ ಹವೆಯದು ಥಂಡಿ ||

ನಿತ್ಯವು ದುಡಿದು ಬಾಳಿನ ಬಂಡಿ
ಎಳೆಯಲು ಏರುವ ಸಾಮಾನ್ಯರ ದಂಡು||

ರೈಲಿನ ಪಯಣ ಬಡವರಿಗೆ ಸ್ವರ್ಗ
ಟಿಕೆಟ್ ದರವು ಬಲು ಅಗ್ಗ ||

ಬಡವರಿಗುಂಟು ಸಾಮಾನ್ಯದ ಬೋಗಿ
ಸಿರಿಕರಿಗೆಂದೇ'ತಂಪುಹವಾ'ವಿಶೇಷವಾಗಿ
ಇನ್ನೂ ಚೆಂದಿದೆ  'ನಿದ್ರಾ ಬೋಗಿ'
ಸಾಲದಿದ್ದರೆ ಮಹಡಿ ಹತ್ತಿ ಹೋಗಿ ||

ಕನಸುಗಳ ಬೆನ್ನೇರಿ;ಉಗಿಬಂಡಿಯ ಮೇಲೇರಿ
ದೂರದೂರಿಗೆ ಪಯಣಗೈದವರೆಷ್ಟೋ
ಹತ್ತಿದವರ ಭಾರವೆನದೆ ಹೊತ್ತು
ಗಮ್ಯ ಸ್ಥಾನವ ಮುಟ್ಟಿಸಿ ಬಿಟ್ಟೆ ||

ಯಾರೋ ಹತ್ತಿ ಇನ್ನಾರೋ ಇಳಿದರು
ಬಾಳದಾರಿಯಲಿ ಸಿಕ್ಕ ಸಹಪಯಣಿಗರು
ನಿತ್ಯದ ಓಟದಿ ಸವೆದಿಹುದು ಗಾಲಿ
ದಿನದ ಜಂಜಾಟದಿ ಮನುಜ ಬೆಂಡಾಗಿ ಬಳಲಿ ||

ರೈಲಮ್ಮ ನಿನ್ನ ಮಡಿಲು
ಭಿಕ್ಷುಕರ,ಕಳ್ಳರ,ಇಲಿಗಳ ಒಡಲು
ಎಂದೆಂದಿಗೂ ಆಗದಿರಲಿ ||

✍️.. ಅನಿತಾ ಜಿ.ಕೆ.ಭಟ್.

14-09-2020.

ಚಿತ್ರ ಕೃಪೆ : ಹವಿಸವಿ ಬಳಗ.


ಕಮಲದ ಕೆರೆ...#ಕವನ


 ಕಮಲದ ಕೆರೆ

ನಮ್ಮೂರ ಕೆರೆಯಲ್ಲಿ|ಮುಂಜಾನೆ ಹೊತ್ತಿನಲಿ||

ಹೂವರಳಿಸಿ ನಕ್ಕೋಳು|
ನೀನು ತಾನೇ||ಕಮಲಾ...!!ನೀನೇ ತಾನೇ ||1||

ತಿಳಿನೀರ ಪ್ರಶಾಂತ ಪರಿಸರ
ಹಸಿರೆಲೆಗಳು ನಯನಮನೋಹರ ||
ಮಾಡಬೇಕಿಲ್ಲೆನಗೆ ವಾಯುವಿಹಾರ
ಕೈಬೀಸಿ ಕರೆಯುತಿದೆ ಪದ್ಮಸಂಸಾರ||2||

ಗುಲಾಬಿ ಬಣ್ಣದ ಸರೋಜ ಹೂವೇ
ದುಂಬಿಯ ಬಳಗವ ನೀ ಕರೆವೆ||
ಪಾಚಿಯ ಪದರವ ಸೃಷ್ಟಿಸುವೆ
ಆಮ್ಲಜನಕ ಪ್ರಮಾಣ ಹೆಚ್ಚಿಸುವೆ
ಕಂಡ ಬಂಡೆಯು ಮೂಕವಿಸ್ಮಿತವೇ !! ||3||

ಕನ್ನಡಿ ಏತಕೆ ಪಂಕಜ ನಿನಗೆ??
ಜಲವೇ ದರ್ಪಣ ಹಿಡಿದಿದೆ ನಿನಗೆ||
ತಾವರೆ ಅಂದಕೆ ಮನಸೋತು
ನೇಸರತೇಜವು ಸ್ಪರ್ಶಿಸಿತು
ಜಲವದು ಚಿತ್ರವ ಚಿತ್ರಿಸಿತು||4||

ಕೆಸರಲಿ ಅರಳುವ ಹೂವೇ..
ದೇವಗೆ ನೀ ಬಲುಪ್ರಿಯವೇ||
ಕಮಲದೆಲೆಯೇ..ನೀರನಂಟಿಸಿಕೊಳದೇ
ಹನಿನೀರ ಮುತ್ತಾಗಿಸಿ ನಗುವೇ..
ಬೇಕೆನಗೀಗ ನಿನ್ನಂಥ ಬಾಳುವೆ ||5||

     

 ✍️ಅನಿತಾ ಜಿ.ಕೆ.ಭಟ್.

14-09-2020.

ಗೋ ಮಾತೆ...#ಕವನ

 



ಗೋಮಾತೆ

ಗೋವು ಜಗಕೆಲ್ಲ ಮಾತೆ
ಕರುವಿಗೂ ಜನರಿಗೂ ಅಮೃತದಾತೆ
ಮುಕ್ಕೋಟಿ ದೇವತೆಗಳಿಗೆ ಆಶ್ರಯದಾತೆ
ಹಾಲು ಕರೆವಳು ವಾತ್ಸಲ್ಯದಲಿ ನನ್ನ ಜನ್ಮದಾತೆ||

ಹಸಿ ಸೊಪ್ಪು ಹುಲ್ಲು
ಇಲ್ಲದಿರೆ ಬೈಹುಲ್ಲು
ಪುಷ್ಟಿಗೆ ಹಿಂಡಿ ಕೊಡಲು
ಬಿಂದಿಗೆ ತುಂಬ ನೊರೆಹಾಲು
ಒಡಲಿಗೆ ತಂಪು ತಂಬಾಲು
ಹಾಲು ಮೊಸರು ಬೆಣ್ಣೆ
ತುಪ್ಪ ಮಜ್ಜಿಗೆ
ಊಟದಿ ನಿನ್ನದೇ ಬಹುಪಾಲು||

ಗೋಮೂತ್ರದಲಿ ಸಕಲವ್ರಣ ಪರಿಹಾರ
ಗೋಮಯವು ಗಿಡಗಳಿಗೆ ಆಹಾರ
ಬಳಿದರೆ ಮನೆ,ಅಂಗಳ ಸುಂದರ
ಕೆಟ್ಟ ಸೂಕ್ಷ್ಮಾಣುಜೀವಿ ಸಂಹಾರ||

ಛಂಗನೆ ನೆಗೆವ ಕರು
ದನದ ಹಟ್ಟಿಗೆ ಸಿಂಗಾರ
ಕಟ್ಟುವರು ಹಾಕಿ ದಾರ
ತುಂಟಾಟ ಹೆಚ್ಚಿದರೆ
ಮುಂದೆ ಮೂಗುದಾರ||

ಈಗ ಗೋವಿಗೆ ಸಿಗುತಿಲ್ಲ
ಸ್ವಚ್ಛಂದ ವಿಹಾರ
ನಂದಿಯ ಮಮಕಾರ
ಸೂಜಿಯಲೇ ಪರಿಹಾರ?
ಆಸೆಯಾಗದೇ ಅದಕೂ
ಬೇಕೆಂದು ಸಂಸಾರ||

ಸಕಲ ಕಾರ್ಯಕೂ ಶುಭಕರ
ಮಾಡುವೆವು ಮುಟ್ಟಿ ನಮಸ್ಕಾರ
ತೀರಿಸುವುದೆನಿತು ಗೋವಿನ ಋಣ
ಮಾರಿಬಿಡುವರಲ್ಲ ಪಡಕೊಂಡು ಹಣ||

ಗೋವು ಆಗದಿರಲಿ
ಕಟುಕರ ಪಾಲು
ಇನಿತು ಬೇಡುವೆ ದಿನಾಲೂ
ಹೀಗೆ ನೊಂದು ಬರೆಯಲು
ಆಗಬಹುದೇ ರಕ್ಕಸರ
ಮನಸು ಬದಲು?||

✍️... ಅನಿತಾ ಜಿ.ಕೆ.ಭಟ್.
14-09-2020.

ಚಿತ್ರ ಕೃಪೆ:ಹವಿಸವಿ ಬಳಗ

ಒಂದೂವರೆ ವರ್ಷದ ಹಿಂದೆ ಬರೆದ ಕವನ 02-03-2019.
ಹವಿಸವಿ ಬಳಗದ ವಾರದ ಚಿತ್ರಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.(ನಾನು ಈ ಕವನವನ್ನು ಬರೆದು ಅಧಿಕೃತವಾಗಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟಿವಳು .ಮೊದಲ ಕವನ..ಮೊದಲ ಗೆಲುವು..ಮೊದಲ ಹೆಜ್ಜೆ...)



Sunday, 13 September 2020

ಮುಟ್ಟು... ಗುಟ್ಟು../menstrual cup/ಮುಟ್ಟಿನ ಬಟ್ಟಲು

 


         ರಾಧಾ ತನ್ನ ಮಗಳಿಗೆ ಎರಡು ಜಡೆ ಹೆಣೆದು ತುದಿಗೆ ರಿಬ್ಬನ್ ಹಾಕಿ ಮೇಲೆ ಕಟ್ಟಿದಳು.ಅಂದದ ಮಲ್ಲಿಗೆ ದಂಡೆಯನ್ನು ಮುಡಿಸಿದಳು.ಅವಳ ಅಂದಕೆ ಮನಸೋತು ತನ್ನದೇ ದೃಷ್ಟಿ ತಾಗೀತೋ ಎಂದು ತನ್ನೆರಡು ಕೈಗಳಿಂದ ಮಗಳ ತಲೆನೇವರಿಸಿ ನೆಟಿಗೆ ತೆಗೆದಳು.ಬುತ್ತಿಚೀಲ ,ಪಾಠಿ ಚೀಲ ಎರಡನ್ನೂ ತಂದು ಮನೆಯ ಹೊರಗಿನ ಜಗಲಿಯಲ್ಲಿರಿಸಿದಳು.

      ಮಗಳು ಯಶಾ ಅಪ್ಪನು ಬರುವುದನ್ನೇ ಕಾಯುತ್ತಿದ್ದಳು.ಆಗಲೇ ಶಾಲೆಗೆ ತಡವಾಗಿತ್ತು.
"ಅಪ್ಪಾ... ನೀವು ಹೀಗೆ ದಿನವೂ ನಿಧಾನವಾಗಿ ಹೊರಡುತ್ತಿದ್ದರೆ ನಾನಿನ್ನು ಶಾಲಾವಾಹನದಲ್ಲೇ ಹೋಗುತ್ತೇನೆ..."  ಮಗಳ ದನಿಯಲ್ಲಿನ ಜವಾಬ್ದಾರಿ,ಸ್ಪಷ್ಟತೆಯನ್ನು ಗಮನಿಸಿದರು ಜಯಂತ ರಾಯರು ...
"ಇಲ್ಲ..ಮಗಳೇ..ನಾಳೆಯಿಂದ ಹೀಗಾಗಲ್ಲ... ಬೆಳಗ್ಗೆ ಬೇಗ ಹೊರಡುತ್ತೇನೆ... ಸರೀನಾ ಪುಟ್ಟಿ....ನೋಡೇ ರಾಧಾ..ಮಗಳೂ ನಿನ್ಹಂಗೇ...ಈಗಲೇ ನನ್ನನ್ನು ಗದರಿಸುತ್ತಾಳೆ...."
"ಹೌದು.. ನಾನು ನಿಮ್ಮನ್ನು ಗದರಿಸೋದಾ...
ಮದುವೆಗೆಲ್ಲ ಹೊರಡೋದಿದ್ರೆ ಇನ್ನೂ ಮೇಕಪ್ ಮುಗಿದಿಲ್ವಾ...ಅಂತ ನೀವೇ ನನ್ನ ತಲೆತಿನ್ನೋದು ತಾನೇ...."
"ಆಯ್ತು.. ಮಹಾತಾಯಿ.. ಇನ್ನು ಯಾರನ್ನು ಲೇಟಾದ್ರೆ ಗದರಲ್ಲ...ನಾನೇ ಬೇಗ ಸಿದ್ಧನಾಗಿ ಎಲ್ಲರನ್ನೂ ಹೊರಡಿಸ್ತೀನಿ..ಸರೀನಾ.."ಎನ್ನುತ್ತಾ ಮೆಲ್ಲಗೆ ಹೆಂಡ್ತಿಯ ಸೊಂಟವ ಬಳಸಿ ಸಿಹಿ ನೋಟ ಬೀರಿ... ಹೊರಟು ನಿಂತ.
ಅಪ್ಪ ಮಗಳು ಇಬ್ಬರೂ ಜೊತೆಯಾಗಿ ಹೊರಟರು.. ರಾಧಾ ಇಬ್ಬರನ್ನೂ ಕಳುಹಿಸಿ ಕೊಟ್ಟು ಸೋಫಾದ ಮೇಲೊಮ್ಮೆ ಕುಳಿತು ದಣಿವಾರಿಸಿಕೊಂಡಳು.ನಂತರ ನಿತ್ಯದ ಸ್ವಚ್ಛತೆಯ ಕೆಲಸಗಳು ಆಕೆಗೆ ಇದ್ದದ್ದೇ...

     ಎಷ್ಟು ಬೇಗ ಮಕ್ಕಳು ಬೆಳೆದು ಬಿಡುತ್ತಾರೆ.ಮೊನ್ನೆಮೊನ್ನೆ ಮಗ ಮನೆಯಲ್ಲಾಡಿದ ನೆನಪು.ಪಟ್ಟ ತಂಗಿಯ ಎತ್ತಲು ಹರಸಾಹಸ ಪಡುತ್ತಿದ್ದ .. ಆಕೆ ಅತ್ತರೆ ತಾನೇ ಸಮಾಧಾನಮಾಡಿ ನಕ್ಕು ನಗಿಸುತ್ತಿದ್ದ .ಈಗ ದೂರದೂರಿಗೆ ಇಂಜಿನಿಯರಿಂಗ್ ಓದಲು ತೆರಳಿದ್ದಾನೆ..ಮಗಳೂ ವಯಸ್ಸಿಗಿಂತ ಹೆಚ್ಚೇ ಪ್ರಬುದ್ಧಳಾಗುತ್ತಿದ್ದಾಳೆ.

      ಮಗಳನ್ನು ಶಾಲೆಗೆ ಬಿಟ್ಟು  ಜಯಂತ್ ರಾಯರು ಆಫಿಸಿಗೆ ತೆರಳಿದರು.ಮಾಡಬೇಕಾದ ಕೆಲಸಗಳತ್ತ ಗಮನಹರಿಸಿದರು.ಮಕ್ಕಳ ಭವಿಷ್ಯಕ್ಕೆಂದು ಕಟ್ಟುತ್ತಿದ್ದ ಇನ್ಶೂರೆನ್ಸ್ ಪಾಲಿಸಿಯ ಹಣ ಕಟ್ಟುವುದಿತ್ತು.. ಲೆಕ್ಕಾಚಾರ ಹಾಕಿಕೊಂಡರು.ಈಗ ಕಟ್ಟಿದ ದುಡ್ಡು ಮಗಳ ವ್ಯಾಸಂಗಕ್ಕೆ ಎಷ್ಟು ದೊರಕಬಹುದು...ಮದುವೆ ವಯಸ್ಸಿಗೆ ಬಂದಾಗ ಮೆಚ್ಯೂರ್ ಆಗಬಹುದೇ..ಎಷ್ಟು ದೊರಕಬಹುದು...ಮಗನ ವಿದ್ಯಾಭ್ಯಾಸಕ್ಕೆ ಈಗ ಒಂದು ಪಾಲಿಸಿ ಮೆಚ್ಯೂರ್ ಆಗಿ ಬಹಳ ಉಪಕಾರವಾಯಿತು. ಇನ್ನೊಂದು ಅವನಿಗೆ ಇಪ್ಪತ್ತೆಂಟು ವರ್ಷವಾದಾಗ ಮೆಚ್ಯೂರ್ ಆಗುತ್ತೆ... ಮದುವೆ ಖರ್ಚಿಗೆ ಸ್ವಲ್ಪ ಅನುಕೂಲ ಆದೀತು...ಎಂದೆಲ್ಲ ಲೆಕ್ಕಾಚಾರ ಹಾಕಿ ಪಾಲಿಸಿಗೆ ಹಣಕಟ್ಟಿ ಬಂದು ಮತ್ತೆ ಕೆಲಸದಲ್ಲಿ ತಲ್ಲೀನರಾದರು.

     ಸಂಜೆ ಮಗಳನ್ನು ಮನೆಗೆ ಕರೆದೊಯ್ಯುವ ಹೊತ್ತಾದಾಗ ಹೊರಟು ನಿಂತರು.ದಿನವೂ ಸಂಜೆ ಮಗಳನ್ನು ಮನೆಗೆ ಬಿಟ್ಟು ಪುನಃ ಆಫೀಸಿಗೆ ಬಂದು ಎಂಟು ಗಂಟೆವರೆಗೂ ದುಡಿಯುತ್ತಿದ್ದರು ಜಯಂತರಾಯರು.

        ಮಗಳಿಗಿಂತ ಮೊದಲೇ ಶಾಲಾವಠಾರ ತಲುಪಿ ಜಯಂತರಾಯರು ತಡ ಆಗಿ ಮಗಳಿಂದ ಬೈಸಿಕೊಳ್ಳೋದು ತಪ್ಪಿತು.ಯಾವತ್ತಿನಿಂದ ನಿಧಾನವಾಗಿ ಸೋತ ಮುಖದಿಂದ ಬಂದ ಮಗಳನ್ನು ಕಂಡು ಅಚ್ಚರಿಗೊಂಡರು.
"ಏನಾಯ್ತು ಮಗಳೇ.."
"ಏನಿಲ್ಲಪ್ಪ... ಮನೆಗೆ ಹೋಗೋಣ"

        ಮಗಳ ವರ್ತನೆಯಲ್ಲಿನ ಬದಲಾವಣೆಗೆ ಕಾರಣ ತಿಳಿಯುವ ಕುತೂಹಲ.ತಂದೆಯ ಪ್ರಶ್ನೆಗಳಿಗೆಲ್ಲ ಸರಿಯಾಗಿ ಉತ್ತರಿಸದೆ ಔದಾಸೀನ್ಯ ತೋರುತ್ತಿರುವ ಯಶಾ.

      ಮನೆಗೆ ತೆರಳಿದಾಗ ರಾಧಾ ಬಿಸಿ ಬಿಸಿ ಕಾಫಿ, ಗೋಳಿಬಜೆ ಮಾಡಿ ಇಟ್ಟಿದ್ದರು..ಗೋಳಿಬಜೆ ಚಪ್ಪರಿಸಿ ಕಾಫಿಹೀರಿದ ಜಯಂತರಾಯರಿಗೆ ಮಗಳ ದುಗುಡ ಮರೆತೇ ಹೋಯಿತು.
"ರಾಧಾ ಬಾಯ್.. "ಎಂದು ಹೇಳಿ ಆಫೀಸಿಗೆ ಹೊರಟರು..

          ಪತಿಯನ್ನು ಕಳುಹಿಸಿಕೊಟ್ಟು ಒಳಗೆ ಬಂದ ರಾಧಾ ಮಗಳನ್ನು ಕಾಣದೇ
"ಯಶಾ ..."ಎಂದು ಕರೆದರು..ಕರೆಂಟೂ ಹೋಗಿತ್ತು...
ಅವಳ ಸುದ್ದಿಯೇ ಇಲ್ಲ..
"ಎಲ್ಲಿದ್ದೀಯಮ್ಮಾ... " ಎಂದು ಪುನಃ ಕೂಗಿದರು.

ಮಗಳು ತನ್ನ ಕೋಣೆಯ ಮೂಲೆಯಲ್ಲಿ ಕುಳಿತಿರುವುದನ್ನು ಅರಿತರು.
"ಏನಾಯ್ತು ಯಶಾ ಬಾರಮ್ಮ ಇತ್ತ.."
"........."ಮಾತಿಲ್ಲ.
ರಾಧಾ ತಾನೇ ಮಗಳ ಬಳಿ ತೆರಳಿ ಮಗಳನ್ನು ಹೊರಗೆ ಕರೆತಂದರು.
"ಯಾರಾದರೂ ಏನಾದರೂ ಅಂದರಾ.."
"ಊಹೂಂ..."
"ಟೀಚರ್ ಹೇಳಿದ ಹೋಂವರ್ಕ್ ಮಾಡೋಕೆ ಮರೆತಿದ್ದೀಯ..."

"ಊಹೂಂ..."
"ತಲೆನೋವು ಏನಾದರೂ ಬಂತಾ..."
"ಊಹೂಂ..."
"ಹೊಟ್ಟೆ ನೋವೂ ಆಗ್ತಾ ಇದೆಯಾ..."
"ಹೂಂ.."

        ಅಮ್ಮನ ಮಾತನ್ನು ಕೇಳಿದ ಯಶಾ ಬಿಕ್ಕಳಿಸಲು ಆರಂಭಿಸಿದಳು.
"ಸ್ವಲ್ಪ ನೀರು ಕುಡಿ.. ಆಮೇಲೆ ಆಯುರ್ವೇದ ಅರಿಷ್ಠ ಕೊಡುವೆ ಸರಿಹೋದೀತು.ಜಂಕ್ಫುಡ್ ತಿನ್ಬೇಡ ಅಂದ್ರೆ ಕೇಳಲ್ಲ.ಮಧ್ಯಾಹ್ನ ಗೆಳತಿಯರ ಜೊತೆ ಸೇರಿ ಏನಾದ್ರೂ ಹಾಳು ಮೂಳು ತಿಂಡಿ ತಿಂದಿರಬೇಕು.."
"ಅಮ್ಮಾ... ಅದು..."
"ಅದೇನು..."
"ಅಲ್ಲ..."ಬಿಕ್ಕಿ ಅಳುತ್ತಿದ್ದಾಳೆ
"ಏನಮ್ಮಾ..ನನ್ಹತ್ರ ಹೇಳದೆ ಅತ್ತುಕೊಂಡು ಕೂತರೆ ಪರಿಹಾರ ಸಿಗುತ್ತಾ.."
"ಅಮ್ಮಾ...ಅದೂ ..ಬ್ಲಡ್ ಬರ್ತಾ ಇದೆಯಮ್ಮಾ..."
"ಓಹೋ..ಅದಾ.. ವಿಷಯ.. ಅದ್ಕೇ ಹೆದರೋದು ಬೇಡ..."
"ಅಲ್ಲಮ್ಮಾ.. ನಾನೇನು ಮಾಡಲಿ..ಶಾಲೆಗೆ ಹೇಗೆ ಹೋಗಲಿ...ಬಟ್ಟೆ ಗಲೀಜಾಗುತ್ತಲ್ಲ.."
"ಎಲ್ಲ ನಾನು ಹೇಳಿಕೊಡ್ತೀನಿ ಬಾ.."
"ಅಮ್ಮಾ.. ಈ ರೀತಿ ಆಗಿ ನಾನು..."
"ಏನಿಲ್ಲ ಮಗಳೇ.. ನೀನು ಆರೋಗ್ಯವಾಗಿ ಇದೀಯಾ ಅಂತ ಅರ್ಥ...ನೀನೀಗ ಮೊದಲು ಫ್ರೆಶ್ ಆಗಿ ಬಾ..."
ಮಗಳಿಗೆ ಸ್ವಚ್ಛತೆಯ ಪಾಠ ಹೇಳಿದರು ಅಮ್ಮ..

            "ಮುಟ್ಟು ಹೆಣ್ಣಿನ ಸಹಜ ಕ್ರಿಯೆ.ಅದಕ್ಕೆ ಭಯಪಡುವುದು ಬೇಡ.ಪ್ರತೀ ಮಾಸವೂ ದೇಹದಲ್ಲಿನ ಮಲಿನ ರಕ್ತ ಹೊರಹೋಗುವ ಪ್ರಕ್ರಿಯೆ."
"ರಕ್ತ ಹೋಗಿ ನನ್ನ ದೇಹದಲ್ಲಿರೋದು ಕಡಿಮೆಯಾಗಿಬಿಟ್ರೆ ...ನನಗೇನಾದ್ರೂ ಆದ್ರೆ.."
"ಏನೂ ಆಗೋಲ್ಲ ಮಗಳೇ...ಆಗ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ."

        ಮಗಳಿಗೆ ಶುಚಿತ್ವದ ಮಹತ್ವವನ್ನು ಹೇಳಿದ ರಾಧಾ ಸ್ಯಾನಿಟರಿ ಪ್ಯಾಡ್ ಧರಿಸುವ ವಿಧಾನವನ್ನು ತಿಳಿಸಿಕೊಡುತ್ತಾಳೆ.ಕೈಯಲ್ಲೊಂದು ಹೊಸ ಕ್ಯಾಲೆಂಡರ್ ಕೊಟ್ಟು ಪ್ರತೀ ತಿಂಗಳು ಮುಟ್ಟಾದ ದಿನವನ್ನು ತಪ್ಪದೇ ನಮೂದಿಸಲು ತಿಳಿಸುತ್ತಾಳೆ.
ಅಮ್ಮನ ಆತ್ಮೀಯ ಸಲಹೆಯಿಂದ ಯಶಾ ನಿರಾಳವಾಗಿ ಅಮ್ಮ ಮಾಡಿಕೊಟ್ಟ ತಿಂಡಿ ತಿಂದು ಹೋಂವರ್ಕ್ ಮಾಡಲು ತೊಡಗುತ್ತಾಳೆ.

       ಮಗಳಿಗೆ ಅಗತ್ಯವಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ತಾಯಿ ಸಿದ್ಧಪಡಿಸುವತ್ತ ಗಮನ ಹರಿಸುತ್ತಾಳೆ.ಮರುದಿನ ಮಗಳನ್ನು ಶಾಲೆಗೆ ಕಳುಹಿಸುವ ಮೊದಲು ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡುತ್ತಾಳೆ.ಮಗಳು ಯಾವುದೇ ಅಸಹ್ಯ, ಅಂಜಿಕೆಯಿಲ್ಲದೆ ಶಾಲೆಗೆ ತೆರಳುತ್ತಾಳೆ.

       ರಾಧಾ ನಂತರ ತನ್ನ ಗೆಳತಿ ಶೋಭಾಗೆ ಕರೆಮಾಡಿದಳು.ಕೆಲವು ದಿನಗಳ ಹಿಂದೆ ಶೋಭಾ ತನ್ನ ಮಗಳ ಬಗ್ಗೆ ಹೇಳಿಕೊಂಡಿದ್ದಳು.ಆದ್ದರಿಂದ ಸಮಾನ ವಯಸ್ಸಿನ ಹೆಣ್ಣು ಮಕ್ಕಳ ತಾಯಿ ಆಗಿರೋದರಿಂದ ಒಮ್ಮೆ ಅವಳಲ್ಲಿ ವಿಷಯ ಚರ್ಚಿಸೋಣ ಎಂದು ಅನಿಸಿತು.

          "ಹಲೋ.. ಶೋಭಾ.. ನಾನು ಕಣೆ.. ರಾಧಾ.."
"ಓಹೋ...ಏನೇ ಇದ್ದಕ್ಕಿದ್ದ ಹಾಗೆ ಬೆಳಗ್ಗೇನೇ ನನ್ನ ನೆನಪು... ಆರಾಮಾಗಿ ಇದೀಯಾ ತಾನೇ..."
"ಚೆನ್ನಾಗಿದೀನಿ ಗೆಳತಿ..ನನ್ನ ಮಗಳ ವಿಷಯ ನಿನ್ನ ಹತ್ತಿರ ಮಾತಾಡೋಣ ಅಂತ"
"ಹೇಳು..."
"ನಿನ್ನೆ ನನ್ನ ಮಗಳು....ಮುಟ್ಟಾದಳು...ಮೊದಲ ಬಾರಿಗೆ ಆತಂಕ ಸಹಜ.. ಧೈರ್ಯ ಹೇಳಿ ಕೆಲವು ಮುಖ್ಯ ಅಂಶಗಳನ್ನು ಹೇಳಿಕೊಟ್ಟೆ...ನಮ್ಮ ಕಾಲದಂತಲ್ಲ ನೋಡು ಈಗ..."
"ಕಾಲ ಯಾವುದಾದರೂ ಹೆಣ್ಣು ಹೆಣ್ಣೇ..ನಮ್ಮ ಬಾಲ್ಯದ ಕಾಲದಲ್ಲಿ ಬಟ್ಟೆಗಳನ್ನು ಬಳಸಿ ಸ್ರಾವವನ್ನು ಹೊರಚೆಲ್ಲದಂತೆ ತಡೆಯುತ್ತಿದ್ದೆವು..ನಂತರ ಸ್ಯಾನಿಟರಿ ಪ್ಯಾಡ್ ಬಳಕೆ ಆರಂಭವಾಯಿತು.."
"ಹೌದಲ್ವೇ... ನಮ್ಮಷ್ಟು ಈಗಿನ ಮಕ್ಕಳು ಕಷ್ಟಪಡಬೇಕಾಗಿಲ್ಲ."
"ಸ್ಯಾನಿಟರಿ ಪ್ಯಾಡ್ ಮತ್ತು ಟ್ಯಾಂಪೂನ್ ಬಳಸುವುದರಿಂದ ಉಂಟಾಗುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಮಣ್ಣಿನಲ್ಲಿ ಸೇರಬೇಕಾದರೆ ಇಪ್ಪತ್ತೈದು ವರುಷಗಳೇ ಬೇಕಂತೆ..ಈಗ ಅದರ ಬದಲಿಗೆ ಹೊಸ ಸಾಧನವೊಂದನ್ನು ಅನ್ವೇಷಣೆ ಮಾಡಿದ್ದಾರೆ ರಾಧಾ.."
"ಹೌದಾ..ಅದ್ಯಾವುದಮ್ಮಾ....ನಾನಿನ್ನೂ ತಿಳಿದುಕೊಂಡಿಲ್ಲ.."
"ಅದನ್ನು ಮುಟ್ಟಿನ ಬಟ್ಟಲು ಅಥವಾ ಮೆನ್ಸ್ಟ್ರುವಲ್ ಕಪ್ ಎಂದು ಹೇಳುತ್ತಾರೆ..."
"ಹಾಗಂದರೆ ಏನೇ..."
"ವೈದ್ಯಕೀಯ ದರ್ಜೆಯ ಉತ್ತಮ ಗುಣಮಟ್ಟದ ಸಿಲಿಕೋನ್ ಎಂಬ ರಾಸಾಯನಿಕ ಸಂಯುಕ್ತ ಪದಾರ್ಥದಿಂದ ಇದನ್ನು ತಯಾರಿಸುತ್ತಾರೆ.ಗಂಟೆಯಾಕಾರದ ಕಪ್ ಇದಾಗಿದೆ...."
"ಹೇಗೆ ಬಳಸುವುದು ಕಣೇ..."
"ಇದು ಸುಲಭವಾಗಿ ಬಾಗುತ್ತೆ ರಾಧಾ... ಇದನ್ನು ಇಂಗ್ಲಿಷ್ ನ C ಆಕಾರದಲ್ಲಿ ಮಡಚಿ ಯೋನಿಯೊಳಗೆ ತೂರಿಸಬೇಕು.ನಂತರ ನಮ್ಮ ಬೆರಳುಗಳ ಸಹಾಯದಿಂದ ಒಳಗೆ ಸೇರಿಸಿದಾಗ ಅಲ್ಲಿ ಗಾಳಿಯಿಲ್ಲದ ಸ್ಥಿತಿ..ನಿರ್ವಾತ ಸ್ಥಿತಿ ಏರ್ಪಡುತ್ತದೆ.ಇದರಿಂದ ಕಪ್ ಯೋನಿಯ ಗೋಡೆಯ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ."

       "ಬಿಗಿಯಾಗಿ ನಿಲ್ಲುತ್ತಾ..ಜಾರೋದಿಲ್ವಾ.."
"ಮೊದಲ ಬಾರಿಗೆ ಧರಿಸುವಾಗ ಎಚ್ಚರದಿಂದಿರಬೇಕು.. ಅದರೊಳಗೆ ಸ್ರಾವವು ಶೇಖರಗೊಳ್ಳುತ್ತದೆ.ಸಮಾನ್ಯವಾಗಿ ಎಂಟರಿಂದ ಹನ್ನೆರಡು ಗಂಟೆಯ ನಂತರ ತೆಗೆದು ಚೆಲ್ಲಿ ಸ್ವಚ್ಛಗೊಳಿಸಬೇಕು..ಅತಿಯಾದ ಸ್ರಾವವಿದ್ದರೆ ನಾಲ್ಕರಿಂದ ಎಂಟು ಗಂಟೆಗಳ ಅಂತರದಲ್ಲಿ ಸ್ವಚ್ಛಗೊಳಿಸಬೇಕು..."
"ಈ ಸಾಧನವನ್ನು ಅಳವಡಿಸುವಾಗ ನೋವಾಗುತ್ತಾ ಶೋಭಾ"
"ಇಲ್ಲ ಕಣೇ.. ಆದರೆ ಹಾಕುವಾಗ ತೆಗೆಯುವಾಗ ಮನಸ್ಸು ಶಾಂತವಾಗಿರಬೇಕು.ಮನಸ್ಸು ಪ್ರಶಾಂತತೆಯಿಂದ ಇದ್ದಾಗ ಮಾಂಸಖಂಡಗಳೂ ಸಡಿಲವಾಗಿದ್ದು ಯಾವುದೇ ನೋವನ್ನುಂಟುಮಾಡುವುದಿಲ್ಲ..."
"ಇದರಿಂದೇನಾದರೂ ಸೋಂಕು ತಗಲುವ ಸಾಧ್ಯತೆ ಇದೆಯೇ.."
"ಇಲ್ಲ..ಇದರಿಂದ ಯಾವುದೇ ಸೋಂಕು ತಗಲುವ ಭಯವಿಲ್ಲ.ಹಾಕಿಕೊಂಡು ಯಾವುದೇ ಅಡೆತಡೆಯಿಲ್ಲದೆ ಕೆಲಸಕಾರ್ಯಗಳಲ್ಲಿ ತೊಡಗಬಹುದು.ಸ್ಯಾನಿಟರಿ ಪ್ಯಾಡ್ ಅಥವಾ ಬಟ್ಟೆಯಂತೆ ಇದು ಅಹಿತದ ಅನುಭವವನ್ನು ಉಂಟುಮಾಡುವುದಿಲ್ಲ.."
"ಹೌದೇ...ಹೆಣ್ಣುಮಕ್ಕಳ ಪಾಲಿಗೆ ವರದಾನ ಅಂತ ಹೇಳಬಹುದು.. ಅಲ್ವಾ.."
"ಹೂಂ.. ರಾಧಾ.. ಒಂದು ಮುಟ್ಟಿನ ಬಟ್ಟಲು ಸುಮಾರು ಆರೇಳು ವರ್ಷಗಳವರೆಗೆ ಬರಬಹುದು.. ಬೆಲೆ ಸುಮಾರು ₹300 ರಿಂದ ₹400 ಇರಬಹುದು.. ಸ್ಯಾನಿಟರಿ ಪ್ಯಾಡ್ ಗೆ ಹೋಲಿಸಿದರೆ ತುಂಬಾ ಅಗ್ಗವಾಗಿದೆ ನೋಡು..."
"ಹೌದು.. ಶೋಭಾ.. ಆದರೆ ಇದು ಎಲ್ಲಿ ಸಿಗಬಹುದು ಹೇಳು"
"ಇದು ನಿನ್ನ ಕೈಯಳತೆಯಲ್ಲೇ ಸಿಗುತ್ತೆ ಕಣೇ.."
"ಹೌದಾ..ಎಂತ ಹೇಳ್ತಿ..."
"ರಾಧಾ..ನಿನ್ನ ಕೈಲಿರೋ ಫೋನಿಂದ ಆನ್ಲೈನ್ ಶಾಪಿಂಗ್ ಮಾಡು... ಅಮೆಜಾನ್ ನಲ್ಲಿ ಆರ್ಡರ್ ಮಾಡಮ್ಮ..ನಾಳೆನೇ ನಿನ್ನ ಮನೆಬಾಗಿಲಿಗೆ ತಂದು ಕೊಡುತ್ತಾರೆ..."
"ಹೌದಾ ಶೋಭಾ.. ಇನ್ನು ತಡಮಾಡುವುದಿಲ್ಲ...ಈಗಲೇ ಬುಕ್ ಮಾಡುತ್ತೇನೆ.. ನನಗೊಂದು ನನ್ನ ಮಗಳಿಗೊಂದು ... ಬಾಯ್..."

ಆನ್ಲೈನ್ ಮಾರುಕಟ್ಟೆಯ ಮೂಲಕ ಮುಟ್ಟಿನ ಕಪ್ ಆರ್ಡರ್ ಮಾಡಿ... ಡೆಬಿಟ್ ಕಾರ್ಡ್ ಮೂಲಕ ಹಣಪಾವತಿ ಮಾಡಿದಳು.. ರಾಧಾ...ಮೊಬೈಲ್ ನಲ್ಲಿ ಗೂಗಲ್ ನಲ್ಲಿ ಅದರ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿದುಕೊಂಡಳು....ಮಗಳ ಮುಟ್ಟಿನ ಸಮಯದಲ್ಲಿ ತಾಯಿ ಆಕೆಗೆ ಯಾವ ರೀತಿ ಮಾನಸಿಕ ಬೆಂಬಲ ನೀಡಬೇಕು ಎಂಬುದನ್ನೆಲ್ಲ ಗೂಗಲ್ ನಿಂದ ತಿಳಿದುಕೊಂಡಳು.ಮಗಳ ಜೊತೆಗೆ ಹಂಚಿಕೊಂಡಳು..
ಗೂಗಲ್ ಬಾಬಾಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲ್ದಪ್ಪಾ...ಎಂದುಕೊಂಡಳು.

ಮರುದಿನ ಮಧ್ಯಾಹ್ನದ ಒಳಗೆ ಮುಟ್ಟಿನ ಕಪ್ ನ್ನು ಹಿಡಿದು ಮನೆಬಾಗಿಲಲ್ಲಿ ನಿಂತಿದ್ದ ಡೆಲಿವರಿ ಬಾಯ್..  ಪಡೆದುಕೊಂಡರು ರಾಧಾ..ಕುತೂಹಲದಿಂದ ಪೊಟ್ಟಣವನ್ನು ತೆರೆದರು ರಾಧಾ...ಹೆಣ್ಮಕ್ಕಳ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಡೆದ ವಿಜ್ಞಾನದ ಆವಿಷ್ಕಾರಗಳು ಮೆಚ್ಚುಗೆಯಾದವು ರಾಧಾಳಿಗೆ.ತಮ್ಮ ಕಾಲದ ಕಷ್ಟದ ದಿನಗಳನ್ನು ಸ್ಮರಿಸಿಕೊಂಡಳು..

ಯಶಾ ತನ್ನ ದೇಹದ ಬದಲಾವಣೆಗಳನ್ನು ಸಹಜವಾಗಿ ಸ್ವೀಕರಿಸಿದಳು.ಅಮ್ಮನ ಕಾಳಜಿಯ ನುಡಿಗಳು ಅವಳಲ್ಲಿ ಉತ್ಸಾಹ ಮೂಡಿಸಿದವು.
ಆಧುನಿಕ ಸವಲತ್ತುಗಳು ಅವಳ ಮುಟ್ಟಿನ ಸಮಯವನ್ನು ತಾಪತ್ರಯಗಳಿಲ್ಲದೆ ಕಳೆಯಲು ಸಹಕರಿಸಿದವು.

ಯಶಾ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಳು.ಹೆಸರಿಗೆ ತಕ್ಕಂತೆ ಯಶವನ್ನೇ ಬಾಳಿನುದ್ದಕ್ಕೂ ಕಂಡವಳು.ಆಗಲೇ ತಂದೆಯಲ್ಲಿ "ಅಪ್ಪಾ.. ನನಗೊಂದು ಮೊಬೈಲ್ ಕೊಡಿಸಿ" ಎಂದು ದುಂಬಾಲು ಬಿದ್ದಿದ್ದಳು.
"ಈಗಲೇ ಏಕೆ.." ಎಂದು ಅಪ್ಪನ ವಾದ.ತಂಗಿಯ ಆಸೆ ಅಣ್ಣ ಮಹೇಶನಿಗೆ ತಿಳಿಯಿತು.ಈ ಸಲ ಬೇ‌ಸಿಗೆ ರಜೆಯಲ್ಲಿ ಊರಿಗೆ ಬರುವಾಗ ತಂಗಿಗೊಂದು ಸ್ಮಾರ್ಟ್ ಫೋನ್ ತಂದೇಬಿಟ್ಟ..ತನ್ನಣ್ಣ ತಂದುಕೊಟ್ಟ ಮೊಬೈಲ್ ನಲ್ಲಿ ಮುಳುಗಿದಳು ಯಶಾ..

ತನಗೆ ಬೇಕಾದ ಆಪ್ ಗಳನ್ನೆಲ್ಲ ಡೌನ್ಲೋಡ್ ಮಾಡಿಕೊಂಡಳು.ಫ್ರೆಂಡ್ಸ್ ಜೊತೆ ಚಾಟಿಂಗ್ ಎಲ್ಲ ಖುಷಿಯಿಂದ ನಡೆಸುತ್ತಿದ್ದಳು.ಒಂದು ದಿನ ಅಪರಿಚಿತ ವ್ಯಕ್ತಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ.. ಆಕೆ ಸ್ವೀಕರಿಸಲಿಲ್ಲ.ನಂತರ ಮೆಸೇಂಜರ್ ನಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ.ಯಶಾ ನಿರ್ಲಕ್ಷ್ಯ ಮಾಡಿದಳು.ಮನೆಯವರಿಗೆ ಏನೂ ಹೇಳಿಕೊಳ್ಳಲಿಲ್ಲ.ಆಕೆಗೆ ನಿತ್ಯವೂ ಅವನಿಂದ ಆತಂಕ ತಪ್ಪಿದ್ದಲ್ಲ.

ಎರಡು ವರ್ಷಗಳ ಅವಧಿ ಹೇಗೋ ಕಳೆಯಿತು.ಯಶಾಳ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕಡಿಮೆಯಾಯಿತು.ಒಂದು ದಿನ ಇದ್ದಕ್ಕಿದ್ದಂತೆ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ.ಆಕೆಯ ಮುಟ್ಟಿನ ವಿವರಗಳನ್ನು ಹೇಳುತ್ತಿದ್ದ..ಹೊಟ್ಟೆನೋವಿನ ವಿಷಯ ಪ್ರಸ್ತಾಪಿಸಿ ಸಲಹೆ ಕೊಡುತ್ತಿದ್ದ."ಸ್ರಾವ ಜಾಸ್ತಿ ಇದೆಯಾ ಮುದ್ದು ಬಂಗಾರಿ.".ಅನ್ನುತ್ತಿದ್ದ.. ಇವನಿಗೆ ನನ್ನ ಸಂಗತಿ ಹೇಗೆ ತಿಳಿಯುವುದು ಎಂದೇ ಆಕೆಗೆ ಸೋಜಿಗದ ಸಂಗತಿಯಾಯಿತು...ತನ್ನ ಖಾಸಗಿ ವಿಷಯವನ್ನು ಗೆಳತಿಯರು ಬಹಿರಂಗ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿತು.

ಒಂದು ದಿನ ಧೈರ್ಯ ಮಾಡಿ ತನ್ನ ಗೆಳತಿಯರಲ್ಲಿ ವಿಷಯ ತಿಳಿಸಿದಳು.
"ಯಾರಾದರೂ ನನ್ನ ಗೌಪ್ಯ ಮಾಹಿತಿ ಕೇಳಿದರೆ ಹೇಳಬೇಡಿ ಪ್ಲೀಸ್ "...ಎಂದೂ ಗೋಗರೆದಳು.ಆಗ ಗೆಳತಿ ಮೇಘಾ..
"ನಾವು ಯಾರೂ .. ಯಾರ ಬಳಿಯೂ ನಿನ್ನ ಮಾಹಿತಿ ನೀಡಿಲ್ಲ,ನೀಡುತ್ತಿಲ್ಲ.. ಆದರೂ ಆತನಿಗೆ ತಿಳಿಯುವುದು ಎಂದಾದರೆ ನೀನೊಮ್ಮೆ ಮನೆಯವರಿಗೆ ಇದನ್ನು ತಿಳಿಸುವುದು ಒಳಿತು.."ಎಂದು ಸಲಹೆ ನೀಡಿದಳು.

ಗೆಳತಿಯ ಸಲಹೆಯಂತೆ ತನ್ನ ತಾಯಿಯಲ್ಲಿ ತಿಳಿಸಿದಳು.ರಾಧಾ ತನ್ನ ಗಂಡನಲ್ಲಿ ವಿಷಯವನ್ನು ಚರ್ಚಿಸಿದಳು.ಎರಡು ದಿನ ರಾಧಾ ತನ್ನ ಬಳಿಯೇ ಇಟ್ಟುಕೊಂಡಳು ಫೋನನ್ನು..ಆಕೆಯ ಬಳಿಯೂ ಆಕೆಯ ಡೇಟಿಂಗ್ ಬಗ್ಗೆ ಮಾಹಿತಿ ನೀಡಿ.. ನನಗೆ ನಿನ್ನ ಬಗ್ಗೆ ತಿಳಿದಿದೆ ಎಂಬುದಾಗಿ ಹೇಳಲಾರಂಭಿಸಿದ.ಜಯಂತ ರಾಯರು ಇನ್ನು ಈ ಫೋನ್ ನನ್ನ ಬಳಿ ಇರಲಿ ಎಂದು ಹೇಳಿ ಇಟ್ಟುಕೊಂಡರು..ಆ ವ್ಯಕ್ತಿ ನಾಪತ್ತೆ..ಕಾಟಕೊಡುವುದು ನಿಲ್ಲಿಸಿದ..

ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗ ಪಡೆದ ಕೆಲವು ತಿಂಗಳ ಬಳಿಕ ಅಣ್ಣ ಮಹೇಶ ಊರಿಗೆ ಬಂದಿದ್ದ..ಅಣ್ಣನ ಬಳಿ ಏನೋ ಚರ್ಚಿಸಲು ಆಕೆ ಅಪ್ಪನಲ್ಲಿ ಕೇಳಿ ಫೋನ್ ತೆಗೆದುಕೊಂಡಳು.. ಸ್ವಲ್ಪವೇ ಹೊತ್ತಾಗಿದ್ದು.. ಆಗಲೇ ಆ ಅಪರಿಚಿತ ವ್ಯಕ್ತಿ ಮತ್ತೆ "ನಿನಗಿಂದು ತುಸು ಹೊಟ್ಟೆನೋವಿದೆಯಾ ... ನಾನು ಮನೆಮದ್ದು ಹೇಳಲೇ ಬಂಗಾರಿ..."ಅಂದ..

ಇದನ್ನು ಕಂಡ ಮಹೇಶನಿಗೆ ಸಿಟ್ಟು ಬಂತು.ತಕ್ಷಣ... ಹೀಗೆ ಸಮ್ಮನಿದ್ದರೆ ಆಗದು ಎಂದು ಸೈಬರ್ ಪೋಲೀಸರಿಗೆ ದೂರುಕೊಡುವ ಸಿದ್ಧತೆಗೆ ತೊಡಗಿದ.ಜೊತೆಗೆ ತನ್ನ ಇಂಜಿನಿಯರ್ ಮಿತ್ರ ಗಿರಿಯಲ್ಲೂ ಹಂಚಿಕೊಂಡ.
ಮಿತ್ರ ಗಿರಿ "ಕೆಲವು ಹೊಸದಾಗಿ ಆವಿಷ್ಕಾರಗೊಂಡ ಆಪ್ ಗಳಿವೆ...ಎಂ.ಐ.ಎ.ಲೇಡಿ ಮತ್ತು ಕಾಮ ಎಂಬಿತ್ಯಾದಿ ಆಪ್ ಗಳು ಮಹಿಳೆಯರ,ಬಾಲಕಿಯರ ಅತಿಸೂಕ್ಷ್ಮ ಮಾಹಿತಿಯನ್ನು ಟ್ರ್ಯಾಕ್ ಮಾಡುತ್ತವೆ.ಹೆಣ್ಣುಮಕ್ಕಳ ದೇಹದ ತೂಕ,ಆಕಾರ,ಮುಟ್ಟಿನ ದಿನಾಂಕ,ಸ್ರಾವ, ಲೈಂಗಿಕ ಸಂಪರ್ಕ, ಗರ್ಭನಿರೋಧಕ ಬಳಕೆ ,ಬಳಸಿದ ಗರ್ಭನಿರೋಧಕ ಯಾವುದು, ಹೇಗೆ,ಯಾವ ಸಮಯ ಎಂಬ ಮಾಹಿತಿಯನ್ನು ಫೇಸ್ಬುಕ್ ಗೆ ತಲಪಿಸುತ್ತದೆ."ಎಂದು ಹೇಳಿದನು.

"ಇಂತಹ ಯಾವುದೇ ಆಪ್ ಡೌನ್ಲೋಡ್ ಮಾಡಿಕೊಳ್ಳಲಿಲ್ಲ"ಎಂದ ಮಹೇಶ..

"ಅದನ್ನು ಡೌನ್ಲೋಡ್ ಮಾಡಬೇಕಾಗಿಲ್ಲ..ಮಹೇಶ..ಕುತೂಹಲಕ್ಕೆಂದು ಒಮ್ಮೆ ಇಂತಹದ್ದರೊಳಗೆ ಇಣುಕಿದರೆ ಸಾಕು.. ಅದು ನಿಮ್ಮ ಗೌಪ್ಯ ಮಾಹಿತಿಯನ್ನು ಸಂಗ್ರಹಸಿಕೊಳ್ಳುತ್ತದೆ ..ಸದಾ ಕಾಲ ನಿಮ್ಮ ಮೇಲೆ ನಿಗಾ ಇಟ್ಟಿರುತ್ತದೆ... ಅದರಿಂದಲೇ ಗಂಡುಮಕ್ಕಳ ಕೈಲಿ ಆ ಸ್ಮಾರ್ಟ್ ಫೋನ್ ಇದ್ದಾಗ ಅಂತಹ ಯಾವ ಮೆಸೇಜ್ ಬರುವುದಿಲ್ಲ..."

"ಹೌದಾ..ಗಿರಿ.. ಹಾಗಿದ್ದರೆ ನಾವಿನ್ನು ಏನು ಮಾಡಬಹುದು"

"ಸೈಬರ್ ಪೋಲೀಸರಿಗೆ ದೂರು ಕೊಡುವುದು ಒಳಿತು.."

ಗೆಳೆಯನ ಮಾತನ್ನು  ಕೇಳಿದ ಮಹೇಶ ದೂರು ನೀಡಿದನು.. ಪೋಲೀಸರು ಮಹಿಳೆಯರ ಟ್ರ್ಯಾಕಿಂಗ್ ಆಪ್ ನ ಕಿರುಕುಳ ಇದು ಎಂದು ತನಿಖೆನಡೆಸಿ ತಿಳಿಸಿದರು.

ಇಂತಹ ಆಪ್ ಗಳು ಇತ್ತೀಚೆಗೆ ಭಾರತದಲ್ಲಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿವೆ.ಇಲ್ಲಿನ ಮುಗ್ಧ ಹೆಣ್ಣುಮಕ್ಕಳ ಖಾಸಗಿ ವಿಷಯವನ್ನು ಬಹಿರಂಗ ಪಡಿಸಿ ಕೋಟಿಕೋಟಿ ದುಡ್ಡು ಜೇಬಿಗಿಳಿಸುತ್ತಿದ್ದಾರೆ.ಎಲ್ಲಾ ಹೆಣ್ಣುಮಕ್ಕಳೂ ಇಂತಹ ಆಪ್ ಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು...ಎಂಬ ಸ್ಫೋಟಕ ವಿಷಯವನ್ನು ಪೋಲೀಸರು ಬಹಿರಂಗ ಪಡಿಸಿದರು..

ಪ್ರಕರಣವನ್ನು ಭೇದಿಸಿದ ಸೈಬರ್ ಪೋಲೀಸರು
ಭಾರತದಲ್ಲಿ ಇದರ ಮೂಲಬೇರನ್ನು ಹುಡುಕಲು ಸಾಧ್ಯವಾಗದಿದ್ದರೂ...ದೆಹಲಿಯ ಸಾಮಾನ್ಯ ಓಣಿಯೊಂದರ ಹರಕಲು ಗುಡಿಸಲಿನಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದ ..ಮೆಸೇಂಜರಿನಲ್ಲಿ ಬಂದು ಉಪಟಳ ಕೊಡುತ್ತಿದ್ದ ವ್ಯಕ್ತಿಗೆ ಬಲೆಬೀಸುವಲ್ಲಿ ಯಶಸ್ವಿಯಾದರು...

ಯಶಾ ಹಾಗೂ ರಾಧಾಳ ಮುಖದಲ್ಲಿ ಗೆಲುವಿನ ನಗೆ ಹೊರಹೊಮ್ಮಿತು. .ಅವರೀಗ ಇತರ ಹೆಣ್ಣುಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ..ಪೋಲೀಸರಿಂದ "ಹೆಣ್ಣು ಮಕ್ಕಳೇ ಹುಷಾರು.."ಎಂಬ ಕಾರ್ಯಕ್ರಮವನ್ನು ವಿವಿಧೆಡೆ ಆಯೋಜಿಸಿದಾಗ ರಾಧಾಳನ್ನು ಆಹ್ವಾನಿಸುತ್ತಿದ್ದಾರೆ . ರಾಧಾ ತನ್ನ ಮಗಳು ಅನುಭವಿಸಿದ ಕಿರುಕುಳ,ತನಗಾದ ಮಾನಸಿಕ ಹಿಂಸೆಯನ್ನು ಸಾರ್ವಜನಿಕರಿಗೆ ತಿಳಿಸಿ.. ಇಂತಹ ಮೋಸದ ಬಲೆಯೊಳಗೆ ಹೆಣ್ಣುಮಕ್ಕಳು ಸಿಲುಕದಂತೆ ಸಾರ್ವಜನಿಕ ಜಾಗೃತಿಯಲ್ಲಿ ತೊಡಗಿದ್ದಾರೆ.

                           🙏

✍️... ಅನಿತಾ ಜಿ.ಕೆ.ಭಟ್.
27-09-2019.

ಸಲ್ಲಿಕೆ :- ಪ್ರತಿಲಿಪಿ ಕನ್ನಡದ ಸೆಪ್ಟೆಂಬರ್

2019 ರ ವೈಜ್ಞಾನಿಕ ಕಥಾ ಸ್ಪರ್ಧೆಗೆ ಸಲ್ಲಿಸಿರುವ ಕಥೆ.
                            💐💐💐💐
ವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ"ಓದುಗರು ಮೆಚ್ಚಿದ ಕೃತಿ"ಗಳಲ್ಲಿ ಸ್ಥಾನ ಪಡೆದ ಕಥೆ.
                           💐💐




ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home,> ಸಂಕೇತಗಳನ್ನು ಬಳಸಿಕೊಳ್ಳಬಹುದು.🙏

Saturday, 12 September 2020

ಎರಡನೇ ಬಾರಿ ಅಮ್ಮನಾದಾಗ/second pregnancy

 



ಎರಡನೇ ಬಾರಿ ಅಮ್ಮನಾದಾಗ.

      ಅದೊಂದು ದಿನ ಬೆಳಗ್ಗೆ ಎದ್ದೇಳುತ್ತಿದ್ದಂತೆಯೇ ಅವಳಿಗೆ ದೇಹದಲ್ಲೆಲ್ಲ ಏನೋ ಬದಲಾವಣೆ ಆದ ಅರಿವು. ಏನೋ ಉದರದಲ್ಲಿ ಭಾರವಾದಂತೆ ಆಗುತ್ತಿದೆಯಲ್ಲ, ದಪ್ಪವಾದಂತೆ ಅನುಭವವಾಗುತ್ತಿದೆ ಎಂದು ಯೋಚಿಸುತ್ತಿದ್ದಾಗ ಕ್ಯಾಲೆಂಡರ್ ನೋಡಿದ ಅವಳಿಗೆ ಹೊಳೆದದ್ದು ಈ ತಿಂಗಳು ಮುಟ್ಟಾಗಲಿಲ್ಲ ಒಂದು ವಾರ ಮುಂದೆ ಹೋಯಿತು ಎಂಬ ವಿಚಾರ. ತಕ್ಷಣ ಮೆಲ್ಲನೆ ತನ್ನ ಕೈಗಳಿಂದ ಮೆದುವಾಗಿ ಉದರವನ್ನು ಸವರುತ್ತಾಳೆ. ಅವಳ ಮನಸ್ಸಿಗೆ ಎಲ್ಲವೂ ತನ್ನಿಂತಾನೇ ವಿಷದವಾಗುತ್ತಿದೆ. ಮೊದಲ ಸಲದಂತೆ ಆಕೆಗೆ ಟೆಸ್ಟಿಂಗ್ ಕಿಟ್'ಗಳ ಅನಿವಾರ್ಯತೆ ಇಲ್ಲ.ಅವಳ ಮನಸ್ಸೇ ಈಗ ಸಣ್ಣದೊಂದು ಪರೀಕ್ಷಾ ಚಟುವಟಿಕೆಯನ್ನು ನಡೆಸುತ್ತಿದೆ.

        ಹೌದು. ಆಕೆ ಈಗ ಅನುಭವಸ್ಥೆ. ಎಲ್ಲವನ್ನು ಇನ್ನೊಬ್ಬರಲ್ಲಿ ಕೇಳಿ ತಿಳಿಯಬೇಕಾಗಿಲ್ಲ. ತಾಯ್ತನದ ಪ್ರತಿಯೊಂದು ಕ್ಷಣವನ್ನು ಮೊದಲ ಬಾರಿ ಅನುಭವಿಸಿದ್ದ ಆಕೆಗೆ ಈಗ ಒಂದು ಕಡೆ ಖುಷಿ ಇನ್ನೊಂದು ಕಡೆ  ತಲ್ಲಣ. ಮೊದಲ ಬಾರಿಯಂತೆ ಈಗಲೂ ಸವಾಲುಗಳನ್ನು ಎದುರಿಸಬೇಕು ..ಅಬ್ಬಾ..!! ಎಂದು ಯೋಚಿಸುತ್ತಾ ಒಮ್ಮೆ ಸುಸ್ತಾಗುತ್ತಾಳೆ.ಮತ್ತೆ ಮರುಕ್ಷಣ ತಾನು ತನ್ನ ಒಡಹುಟ್ಟಿದವರೊಂದಿಗೆ ಆಡಿ ನಲಿದ ಮಧುರವಾದ ಕ್ಷಣಗಳನ್ನು ಮೆಲುಕು ಹಾಕಿ ,ತನ್ನ ಮೊದಲ ಮಗುವಿಗೂ ಇಂತಹ ಸುಂದರ ಬಾಂಧವ್ಯವನ್ನು ಪರಿಚಯಿಸುವ ಜವಾಬ್ದಾರಿಯನ್ನು ಹೊರುತ್ತಾಳೆ.

       ಅವಳಿಗೀಗ ತನ್ನ ಆರೋಗ್ಯ ನೋಡಿಕೊಳ್ಳುವುದರ ಜೊತೆಗೆ ಮೊದಲ ಮಗುವಿನ ಆರೈಕೆಯೂ ಒಂದು ದೊಡ್ಡ ಸವಾಲು.ಆಹಾರ-ವಿಹಾರದಲ್ಲಿ ಮೊದಲಿನಷ್ಟು ಪೌಷ್ಟಿಕಾಂಶಗಳನ್ನು ತೆಗೆದುಕೊಳ್ಳಲು ಸಮಯವಿಲ್ಲ,ವ್ಯವಧಾನವೂ ಇಲ್ಲ.ದಣಿದಾಗ ವಿಶ್ರಾಂತಿ ಪಡೆಯಲು ಮೊದಲ ಮಗು ಬಿಡುತ್ತಿಲ್ಲ.ಹೀಗಿರುವ ತುಂಟ ,ಹಠಮಾರಿ ಮಗು ಇನ್ನೊಂದು ಮಗುವಿಗೆ ಹೇಗೆ ಹೊಂದಿಕೊಂಡೀತು ಎಂದು ಒಂದು ಸಣ್ಣ ಆತಂಕ ಅವಳ ಮನದಲ್ಲಿ. ಮೊದಲ ಬಾರಿಯಂತೆ ವಿಪರೀತ ವಾಕರಿಕೆ, ಆಹಾರ ರುಚಿಸದಿರುವುದು ಈ ಬಾರಿ ಅವಳು ಎದುರಿಸಲಿಲ್ಲ. ಮಗುವಿನ ಚಲನವಲನ ಬಹುಬೇಗನೆ ಅವಳಿಗೂ ಅರಿವಿಗೆ ಬರುತ್ತಿತ್ತು.ಅವಳ ಶರೀರ ಒಂದು ಮಗುವನ್ನು ಹೊತ್ತು ಹೆತ್ತಿರುವುದರಿಂದ ಎರಡನೇ ಬಾರಿ ಬಹಳ ಬೇಗ ತಾಯ್ತನಕ್ಕೆ ಒಗ್ಗಿಕೊಂಡಿತ್ತು. ದಿನೇದಿನೇ ಮುಂದೆ ಬರುತ್ತಿದ್ದ ಅಮ್ಮನ ಉದರವನ್ನು ಕಂಡ ತುಂಟನಿಗೆ ಏನೋ ಕುತೂಹಲ. ಅಮ್ಮನ ಉದರದಲ್ಲಿ ಏನಿದೆ..?? ಎಂಬ ಪ್ರಶ್ನೆ ಆಗಾಗ.ತುಂಟನನ್ನು ಇನ್ನೊಂದು ಪುಟಾಣಿ ಪಾಪುವನ್ನು ಎದುರುಗೊಳ್ಳಲು ಸಿದ್ಧಗೊಳಿಸುವ ಸಲುವಾಗಿ ಅಮ್ಮ ಸಣ್ಣದೊಂದು ಕಥೆಯನ್ನು  ಹೆಣೆದು ಎರಡನೇ ಮಗುವಿನ ಆಗಮನದ ಮುನ್ಸೂಚನೆಯನ್ನು ನೀಡುತ್ತಾಳೆ.ಏನು ಅರಿಯದ ಮಗು ಮುಗ್ಧವಾಗಿ ತನ್ನದೇ ಆದ ಕಲ್ಪನೆಯಲ್ಲಿ ವಿಹರಿಸುತ್ತಾ.. ತನಗೆ ಆಟಕ್ಕೆ ಇನ್ನೊಂದು ಜೊತೆ ಬರುತ್ತಿದೆ ಎಂಬ ಭಾವನೆಯನ್ನು ಭದ್ರಪಡಿಸುತ್ತಿದೆ.

     ಸದಾ ತುಂಟಾಟ ಹಠಮಾರಿತನ ತೋರುತ್ತಿರುವ ಮೊದಲ ಮಗು.. ತನ್ನ ಯಾವುದೇ ವಸ್ತುಗಳನ್ನು ,ಆಟಿಕೆಗಳನ್ನು ಯಾರ ಜೊತೆಯೂ ಹಂಚಿಕೊಳ್ಳಲು ಬಯಸದ ಮಗು.. ಮುಂದೆ ಇನ್ನೊಂದು ಮಗು ಬಂದಾಗ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ..?? ಸದಾ ಜಗಳಾಡಿದರೆ..? ಇಬ್ಬರ ಕಿತ್ತಾಟ ಬಿಡಿಸುವುದೇ  ನನಗೆ ದೊಡ್ಡ ಕೆಲಸವಾಗಿಬಿಟ್ಟರೆ..? ಎಂಬ ಆತಂಕ ತಾಯಿಯ ಮನದಲ್ಲಿ.ಅದರ ಜೊತೆಗೆ ಮೊದಲ ಮಗು ಗಂಡಾದಾಗ ಇನ್ನೊಂದು ಮಗುವನ್ನು ಹೊರುವುದು ಬೇಕಿತ್ತೇ? ಇಂದಿನ ಕಾಲಮಾನದಲ್ಲಿ ಖರ್ಚು ವೆಚ್ಚಗಳು ಕೂಡ ಅಧಿಕ.. ಎಂಬ ಹಗುರ ನುಡಿಗಳು ಅವಳನ್ನು ಇನ್ನಷ್ಟು ಹೈರಾಣಾಗಿಸುತ್ತವೆ. ಏನೇ ಇರಲಿ ಪ್ರಕೃತಿ ನನಗೆ ಕೊಟ್ಟಂತಹ ವರವನ್ನು ಸರಿಯಾಗಿ ನಿಭಾಯಿಸುತ್ತೇನೆ ಎಂಬುದು ಅವಳ ಮನದ ಗಟ್ಟಿತನ.

       ಆಗಾಗ ತಾಯಿಯ ಉದರವನ್ನು ಮುಟ್ಟುತ್ತಿರುವ ಮಗು ಇನ್ನು ಎಷ್ಟು ಸಮಯದಲ್ಲಿ ಇದುಹೊರೆಗೆ ಬರುತ್ತೆ..? ನನ್ನ ಜೊತೆ ಆಟವಾಡುತ್ತಾ..? ನನ್ನ ಜೊತೆ ಉಣ್ಣುತ್ತಾ..? ನನ್ನ ಜೊತೆ ಕಾರು ಬಿಡುತ್ತಾ..? ಇಬ್ಬರೂ ಜೊತೆಯಾಗಿ ಸೈಕಲ್ ಆಡುತ್ತೇವೆ .. ಶಾಲೆಗೆ ಹೋಗುವಾಗ ನಾನೇ ಕರೆದೊಯ್ಯುವುದು.. ಎಂಬೆಲ್ಲಾ ನುಡಿಗಳನ್ನು ಆಡುತ್ತಿದ್ದಂತೆ ಅವಳಿಗೆ ಮನಸ್ಸು ಹಗುರವಾಗುತ್ತದೆ.ಮೊದಲೆಲ್ಲಾ ತಾಯಿಯೇ ಬೇಕು ಎನ್ನುತ್ತಿದ್ದ ಮಗು ಅಮ್ಮನ ಮುಖದ ನೋವನ್ನು ಗಮನಿಸಿ ನನಗೆ ಅಪ್ಪನೂ ಆಗಬಹುದು ಎಂಬ ಹೊಂದಾಣಿಕೆಯನ್ನು ತಾನೆ ಮಾಡಿಕೊಳ್ಳುತ್ತದೆ.

    ಒಂದು ದಿನವೂ ಅಮ್ಮನನ್ನು ಬಿಟ್ಟು ಮಲಗದ ಮಗು ತಾಯಿ ಹೆರಿಗೆ ನೋವಿನಲ್ಲಿ ಆಸ್ಪತ್ರೆ ಸೇರಿದರೆ ಅಪ್ಪನ ಜೊತೆಗೆ ಮಲಗಿ,ಅಪ್ಪನೊಡನೇ ಆಹಾರ ಸೇವಿಸಿ,ಪ್ರತಿಯೊಂದಕ್ಕೂ ಅಪ್ಪನನ್ನೇ ನೆಚ್ಚಿಕೊಳ್ಳುತ್ತದೆ.ಅಮ್ಮನ ಮಡಿಲಲ್ಲಿ ಪುಟಾಣಿ ಮಗು ಮಲಗಿದೆ ಎಂದು ತಿಳಿದಾಗ ತಾನು ಮಗುವನ್ನು ನೋಡಲು ತುದಿಗಾಲಲ್ಲಿ ನಿಂತಿರುತ್ತದೆ. ಏನೇನೋ ಕಲ್ಪನೆಯಲ್ಲಿದ್ದ ಮೊದಲ ಮಗುವಿಗೆ.. ಬಿಳಿ ಬಟ್ಟೆಯಲ್ಲಿ ಸುತ್ತಿ ಕೊಟ್ಟ ಆ ಪುಟಾಣಿ ಮಗುವನ್ನು ನೋಡಿ ಅದರ ಪುಟ್ಟ ಪುಟ್ಟ ಕಣ್ಣುಗಳು, ಕೆಂಪನೆಯ ಪುಟ್ಟ ಕೈಗಳು, ಕೆಲವೇ ಇಂಚುಗಳಷ್ಟಿದ್ದ ಪಾದವನ್ನು ಗಮನಿಸಿ ..ವಾವ್ ..!! ಕ್ಯೂಟ್..!! 😘😘ಎಂದೆಲ್ಲಾ ತನ್ನದೇ ಭಾಷೆಯಲ್ಲಿ ವರ್ಣಿಸುತ್ತದೆ. ಇದನ್ನು ಕಂಡ ಅಮ್ಮ ಎರಡನೇ ತಾಯ್ತನದಿಂದ ಬಸವಳಿದಿದ್ದರೂ ಕೊಂಚ ಸಮಾಧಾನಪಡುತ್ತಾಳೆ.

      ದಿನಗಳೆದಂತೆ ಪುಟಾಣಿ ಮಗುವಿನ ಆರೈಕೆಯಲ್ಲಿ ತಾಯಿ ನಿರತರಾಗಿದ್ದಾಗ ಮೊದಲ ಮಗು ತನ್ನದೇ ಆದ ರೀತಿಯಲ್ಲಿ ಜೊತೆಯಾಗುತ್ತದೆ. ಅಳುತ್ತಿದ್ದರೆ ಆಟಿಕೆಗಳಲ್ಲಿ ಶಬ್ದ ಮಾಡುತ್ತಾ.. ಅದು ಅಳು ಮರೆತು ನಕ್ಕಾಗ ತಾನೇ ಸಂಭ್ರಮಿಸುತ್ತದೆ.. ನಿದ್ದೆ ತೂಗುತ್ತದೆ ಎಂದು ಅಮ್ಮನ ಮಾತು ಕೇಳಿದರೆ ಸಾಕು ಅಮ್ಮ ಹಾಡುತ್ತಿದ್ದ ಲಾಲಿ ಹಾಡುಗಳನ್ನು ತನ್ನದೇ ಆದ ಭಾಷೆಯಲ್ಲಿ ಹಾಡಿ ಮಲಗಿಸುವ ಪರಿಗೆ ಅಮ್ಮನ ಕಣ್ಣು ತೇವವಾಗುತ್ತದೆ.

     ತನಗಿಷ್ಟವಾದದ್ದನ್ನು ತಿಂಡಿಯನ್ನು ಯಾರಿಗೂ ಕೊಡದ ಆತ ಈಗ ಪುಟಾಣಿಗೆ ಆದರೆ ಕೊಡುತ್ತೇನೆ ಎಂದು ಹಂಚಿಕೊಳ್ಳಲು ಆರಂಭಿಸಿದ್ದಾನೆ. ಅಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ ಪುಟಾಣಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತಾನೇ ಹೊರುತ್ತದೆ. ತಾನು ಸೈಕಲ್ನಲ್ಲಿ ಅತ್ತಿಂದಿತ್ತ ಸಾಗುತ್ತಾ ಕೇಕೆ ಹಾಕುವುದು,ಆಟಿಕೆಗಳಲ್ಲಿ ಮಗುವಿಗೆ ಜೊತೆಯಾಗುವುದು,ತಾನು ಕಲಿತ ಹಾಡುಗಳನ್ನು ಹಾಡುವುದು.. ಇತ್ಯಾದಿಗಳಿಂದ ಪುಟಾಣಿ ಮಗುವನ್ನು ಆಡಿಸುತ್ತಾನೆ.ಅಮ್ಮ ಮಗುವಿಗೆ ಉಣಿಸಲು ಹರಸಾಹಸ ಪಡುತ್ತಿದ್ದರೆ ದೊಡ್ಡದಾಗಿ ಬಾಯಿ ತೆರೆದು ನೋಡು ಇಷ್ಟು ದೊಡ್ಡದಿರಬೇಕು ಎನ್ನುತ್ತಾ ಎರಡನೇ ಮಗುವನ್ನು ಉಣ್ಣಲು ಪ್ರೋತ್ಸಾಹಿಸುತ್ತಾನೆ..

     ಶಾಲೆಗೆ ಹೋಗುತ್ತಿರುವ ಮೊದಲ ಮಗುವಿಗೆ ತನ್ನ ಗೆಳೆಯ ಗೆಳತಿಯರಿಗೆ ಪುಟಾಣಿ ಪೋರನನ್ನು ಪರಿಚಯಿಸಬೇಕೆಂಬ ಹಂಬಲ. ಶಾಲೆಯಲ್ಲಿ ಮೀಟಿಂಗ್ ಇದ್ದರೆ ಅಮ್ಮನಿಗೆ ಮೊದಲೇ ಹೇಳಿ ಆಗುತ್ತದೆ "ಮಗುವನ್ನು ಬಿಟ್ಟು ಬರಬೇಡಿ.ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಬನ್ನಿ.. ನಾನು ನನ್ನ ಸಹಪಾಠಿಗಳಿಗೆಲ್ಲ ಹೇಳಿದ್ದೇನೆ..ನನಗೊಬ್ಬ ತುಂಟ ತಮ್ಮನಿದ್ದಾನೆ ಎಂದು"ಎನ್ನುತ್ತಾ ಹೇಳಿದಾಗ ಅಮ್ಮನೂ ತಲೆದೂಗುತ್ತಾಳೆ..ಶಾಲೆಗೆ ಕರೆದೊಯ್ದಾಗ ಎಲ್ಲ ಸಹಪಾಠಿಗಳು ತಮ್ಮನೊಂದಿಗೆ ಆಡುತ್ತಿದ್ದರೆ ,ಆಹಾ..!! ಆಗ ನೋಡಬೇಕು.. ಅಣ್ಣನಾದವನ ಗತ್ತು-ಗೈರತ್ತು ಹೆಮ್ಮೆ..!!!!!! ಆಗ ಈ ತಾಯಿಯ ಮನಸ್ಸು ಸಾರ್ಥಕ ಭಾವದಿಂದ ನಲಿದಾಡುತ್ತದೆ. ತನ್ನ ಮೊದಲ ಮಗುವಿಗೂ ಸಹೋದರ ಬಾಂಧವ್ಯವನ್ನು ಕಟ್ಟಿ ಕೊಟ್ಟಂತಹ ಅಭಿಮಾನ ಅವಳ ಮೊಗದಲ್ಲಿ ನಲಿದಾಡುತ್ತದೆ.

      ಎರಡನೇ ಮಗುವಿಗೆ ಯಾವಾಗ ಶಾಲೆ ಆರಂಭವಾಗುವುದು..? ನಾನೇ ಕೈಯಲ್ಲಿ ಕೈ ಹಿಡಿದು ಕರೆದುಕೊಂಡು ಹೋಗಬೇಕು ಎಂಬ ಆಸೆ ಮೊದಲ ಮಗುವಿನದು. ಅಂತೆ ಆ ದಿನಕ್ಕಾಗಿ ಕಾತರದಿಂದ ಕಾಯ್ದು ಮನೆಯಲ್ಲಿ ಅದೆಷ್ಟು ಬಾರಿ ಅಣಕು ಅಭ್ಯಾಸ ನಡೆಸಿರುತ್ತದೆಯೇನೋ..ತನ್ನ ಹಳೆಯ ಶಾಲೆಯ ಚೀಲವನ್ನು ತಮ್ಮನಿಗೆ ಕೊಟ್ಟು , ತಾನು ತನ್ನ ಬ್ಯಾಗ್ ಹಾಕಿಕೊಂಡು ತಮ್ಮನ ಕೈಹಿಡಿದು ಮನೆಯಿಂದ ಹೊರಟು ಅಂಗಳದ ಸುತ್ತ ಸುತ್ತಿ ಬರುವಾಗ ಅದೇನು ಆನಂದ ಅಣ್ಣನ ಮುಖದಲ್ಲಿ..!!.ಶಾಲೆಗೆ ಹೊರಡುವ ದಿನ ತನ್ನ ಕೈಯಲ್ಲಿ ತಮ್ಮನ ಬೆರಳುಗಳನ್ನು ಹಿಡಿದು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಮಕ್ಕಳಿಬ್ಬರು ನಡೆಯುತ್ತಿದ್ದರೆ ಅಮ್ಮನ ಮನಸ್ಸು ತುಂಬಿ ಬರುತ್ತದೆ..ಯಾವಾಗಲೂ ಸಮಯವೇ ಸಾಕಾಗುತ್ತಿಲ್ಲ ಎಂದು ಪರಿತಪಿಸುತ್ತಿದ್ದ ಅಮ್ಮನ ಮನಸ್ಸು ಭಣಗುಟ್ಟುತ್ತಿದೆ, ಮನೆಯು ಖಾಲಿಯಾದಂತೆ ಅನಿಸುತ್ತಿದೆ.ಯಾವಾಗ  ಮಕ್ಕಳು ಮನೆಗೆ ವಾಪಸಾಗುತ್ತಾರೆ ಎಂದು ಬಿಸಿ ಬಿಸಿ ತಿಂಡಿ ಮಾಡಿಟ್ಟು ಕಾಯುತ್ತಿರುತ್ತಾಳೆ ಅಮ್ಮ..


✍️..ಅನಿತಾ ಜಿ.ಕೆ.ಭಟ್.

11-09-2020.

ಮಾಮ್ಸ್ಪ್ರೆಸೊ ಕನ್ನಡ-ದಿನಕ್ಕೊಂದು ಬ್ಲಾಗ್_ಎರಡನೇ ಬಾರಿ ಅಮ್ಮನಾದಾಗ ಮೊದಲ ಮಗುವಿನ ಬಗ್ಗೆ ಇದ್ದ ಆತಂಕ ಮತ್ತು ಅದನ್ನು ನಿವಾರಿಸಿದ ಬಗೆ-ಆಯ್ಕೆಯಾದ ಬರಹ.

ಮಾಮ್ಸ್ಪ್ರೆಸೊ ಕನ್ನಡದಲ್ಲಿ ಪ್ರಕಟಿತ.

ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home ,>  ಸಂಕೇತಗಳನ್ನು ಬಳಸಿಕೊಳ್ಳಬಹುದು.

Wednesday, 9 September 2020

ಮುದ್ದು ಮಗಳ ಸೀರೆ ಚಾಲೆಂಜ್

 




ನಾನು ನನ್ನ ಆದ್ಯಾಳಿಗೆ ಊಟ ಮಾಡಿಸಲು ಕಷ್ಟಪಡುತ್ತಿದ್ದೆ.ಒಂದು ತುತ್ತು ಉಂಡ ಆದ್ಯಾ ಡೈನಿಂಗ್ ಟೇಬಲ್ ಅಡಿಯಲ್ಲಿ ಕುಳಿತು ನನ್ನನ್ನು ಆಟವಾಡಿಸುತ್ತಿದ್ದಳು.
"ನಾನು ಸಿಗಲಾರೆ ..."ಎಂಬ ತೊದಲು ಮಾತು ಬೇರೆ.. ಹೀಗಾದರೆ ಪೌಷ್ಟಿಕಾಂಶಗಳು ಮಗುವಿಗೆ ಸಿಗುವುದು ಹೇಗಪ್ಪಾ ಎಂಬ ಚಿಂತೆ ನನಗೆ.. ಆಗಲೇ ಕಿಲಕಿಲ ನಗುತ್ತಾ ಬಳಿ ಬಂದಳು ನನ್ನ ಬಂಗಾರಿ.. "ಅಮ್ಮಾ..ಹಾಂ..ಖಾಲಿ.." ಎನ್ನುತ್ತಾ ತನ್ನ ಬಾಯೊಡೆದು ತೋರಿಸಿದಳು... "ಹ್ಞಾಂ..ಹಾಗೇ..ಜಾಣೆ ನನ್ನಕಂದ.." ಎನ್ನುತ್ತಾ ಇನ್ನೊಂದು ತುತ್ತನ್ನು ಬಾಯೊಳಗಿಟ್ಟೆ.. "ಆಹಾ... ಎಷ್ಟು ರುಚಿ.. "ಎಂದು ಬಾಯಿಚಪ್ಪರಿಸುವ ನನ್ನ ಮಾಮೂಲಿ ಅಭ್ಯಾಸವನ್ನು ಮಾಡಿದೆ.. ನಾನು ಹೀಗೆ ಮಾಡಿಯೇ ನನ್ನ ಆದ್ಯಾಳ ಹೊಟ್ಟೆ ತುಂಬಿಸುವುದು...

ಆಟದೊಂದಿಗೆ ಮಗಳ ಊಟ ಸಾಗುವಾಗ ಅರ್ಧ ಗಂಟೆ ಹೇಗೆ ಕಳೆದುಹೋಗುತ್ತದೆಂದೇ ತಿಳಿಯುತ್ತಿರಲಿಲ್ಲ.ಹೊಟ್ಟೆತುಂಬಿ ಡರ್ರ್...ಅಂತ ಮಗಳು ತೇಗಿದರೆ ಅಮ್ಮನಿಗೆ ಹೊಟ್ಟೆತುಂಬಿದಷ್ಟೇ ಸಂತೃಪ್ತಿ.

ಕಾಲಿಂಗ್ ಬೆಲ್ ಆಯಿತು.. ಓಹ್.. ಮಗಳಿಗೆ ಉಣಿಸುತ್ತಾ ಯಾವುದೋ ಲೋಕದಲ್ಲಿ ಕಳೆದುಹೋದವಳಿಗೆ ಮುರಳಿ ಬಂದದ್ದೇ ಗೊತ್ತಾಗಲಿಲ್ಲ.. ಬೇಗನೆ ಹೋಗಿ ಬಾಗಿಲು ತೆರೆದೆ.. ಆಯಾಸಗೊಂಡು ಬಂದಿದ್ದರು ಮುರಳಿ...ಕುಡಿಯಲು ನೀರು ಒಂದು ಲೋಟ, ನನ್ನ ಪ್ರೀತಿಯ ಕುಡಿ ನೋಟ ,ಮಗಳ ತೊದಲು ನುಡಿ ತುಂಟಾಟ ಇಷ್ಟು ದೊರೆತಾಗ ಮುರಳಿಯ ಅರ್ಧ ಬಳಲುವಿಕೆ ಕಡಿಮೆಯಾದಂತೆ..

"ಅಪ್ಪಾ..."ರಾಗ ಎಳೆದಳು ಆದ್ಯಾ..
"ಏನಮ್ಮಾ... "ಎಂದು ಮುದ್ದಿನಿಂದ ಎತ್ತಿಕೊಂಡರು..
"ಅಪ್ಪಾ..ನಂಗೂ ಸಾರಿ ಬೇಕು.. "ಎಂದಳು ತೊದಲುತ್ತಾ ತನ್ನ ಅಂಗಿಯನ್ನೆಳೆದು.
"ನಿಂಗೂ ಸಾರಿ ಬೇಕಾ..ಹ್ಹ ಹ್ಹ ಹ್ಹಾ.. ಅದು ಅಮ್ಮಂಗೆ... ನೀನಿನ್ನೂ ಪುಟಾಣಿ ಪಾಪು.."
"ಊಹೂಂ..ನಂಗೂ ಬೇಕು.."

ಮುರಳಿ ನನ್ನತ್ತ ತಿರುಗಿ "ಏನಂತೆ ಮಗಳಿಗೆ...?"
"ಇವತ್ತು ಸೀರೆ ಚಾಲೆಂಜ್ ಇತ್ತು ರೀ..ನನ್ನ್ ಗೆಳತಿ ಪ್ರಿಯಾ ನಂಗೆ ಸಾರೀ ಚಾಲೆಂಜ್ ಮಾಡಿದ್ಳು..."
"ಹಾಗೆ ಸಂಗತಿ.. ಅದನ್ನು ನೋಡಿ ಆದ್ಯಾ...ತಾನೂ..."
"ನಾನೇನು ಅವಳಿಗೆ ಹೇಳಿಲ್ಲ ನೋಡಿ...ನನ್ನ ಹಳೇ ಆಲ್ಬಂ ನಲ್ಲಿದ್ದ ಧೂಳನ್ನೊಮ್ಮೆ ಒರೆಸಿ ಅದರಲ್ಲಿದ್ದ ಪಟವನ್ನು ಹಾಕಿದ್ದೆ.."
"ಮತ್ತೆ ಅವಳಿಗೆ ಹೇಗೆ ಗೊತ್ತಾಯ್ತೇ...ವಿನಿತಾ.."

"ಇವಳಿಗೆ ಊಟ ಮಾಡಿಸ್ತಾ ಇದ್ನಾ..ಅರ್ಧ ಗಂಟೆ ಆಗುತ್ತೆ.. ಇಡೀ ಮನೆ ಓಡೋದು, ಟೇಬಲ್ ಕೆಳಗೆ ತೂರೋದು ಇರುತ್ತಲ್ಲ..ಆಗ ನನ್ನ ಟೈಂ ಪಾಸ್ ಗೆ ಸ್ವಲ್ಪವೇ ಸ್ವಲ್ಪ ಮೊಬೈಲ್ ಮುಟ್ಟಿದ್ದೆ..ಊಟ ಬೇಡ ಅಂತಾ ಹಠ ಹಿಡಿದು ಟೇಬಲ್ ಅಡಿಯಲ್ಲಿ ಅವಿತು ಕುಳಿತಿದ್ದ ಆದ್ಯಾ ಕೂಡಲೇ ಬಂದ್ಬಿಟ್ಳು...ಅವಳ ಬಾಯೊಳಗೊಂದು ತುತ್ತು...ಅಮ್ಮ ಗೆಳತಿಯರಿಗೆ ಲೈಕ್ ಒತ್ತು.."

"ಓಹೋ.. ಹೀಗೆ ಅಮ್ಮನ ಮೊಬೈಲ್ ಚಟ...ಮಗಳಿಗೀಗ ಸೀರೆ ಬೇಕೆಂಬ ಹಠ.."
"ಹೂಂ..ಎಲ್ಲರ ಪಟ ನೋಡಿ ನಂಗೂ ಬೇಕು ಎಂದು ಆಗಲೇ ಕೇಳಲು ಆರಂಭಿಸಿದ್ದಳು.."
"ಮಗಳಿಗೆ ಊಟಮಾಡಿಸುವಾಗ, ನಿದ್ರೆ ಬಂದಾಗ ಮೊಬೈಲ್ ನೋಡ್ಬೇಡ ಅಂತಾ ಎಷ್ಟು ಹೇಳಿದ್ರು ಅರ್ಥ ಆಗಲ್ಲ ನನ್ನ ವಿನಿತಾಗೆ..."

"ಅಪ್ಪಾ..ನಂಗೂ ಸೀರೆ ಪಟ ಬೇಕು...ನಾನೂ ಸೀರೆ ಚಾಲೆಂಜ್ ಮಾಡ್ತೀನಿ.."
ಗೂಗಲ್ ನಿಂದ ಯಾರದೋ ಪಟ ಹುಡುಕಿ "ಇದು ನೀನೇ..ನನ್ನ ಆದ್ಯಾ..."ಎಂದ ಮುರಳಿ..
"ಊಹೂಂ.. ಇದು ಆದ್ಯಾ ಅಲ್ಲ... ವಿದ್ಯಾಕ್ಕ.."ಅನ್ನಬೇಕೇ...

ಮುರಳಿ ಮಗಳನ್ನು ಸಮಾಧಾನಪಡಿಸಿ ಸ್ನಾನ ಮಾಡಿ ಬಂದರು.. ಊಟಕ್ಕೆ ಕುಳಿತ ಅಪ್ಪನಲ್ಲಿ ಪುನಃ ಅದೇ ರಾಗ..ಆದ್ಯಾಳದ್ದು..
"ನನ್ನ ಬಂಗಾರೀ..ಈಗ ಕತ್ತಲಾಯಿತು ನೋಡು.. ನಾಳೆ ತೆಗೆದುಕೊಂಡು ಬರೋಣ"ಎಂದು ಹೇಳಿ ವಿಷಯಾಂತರ ಮಾಡಿದರು.

ಆದ್ಯಾ ಅಪ್ಪನ ಜೊತೆ ಸೀರೆ ಸೀರೆ ಎಂದು ಬಾಯಲ್ಲಿ ತಾನೇ ಸೀರೆಯ ಜೋಗುಳ ಹಾಡುತ್ತಾ ನಿದ್ರೆಗೆ ಜಾರಿದಳು.ಬೆಳಗ್ಗೆ ಮಗಳು ಏಳುವ ಮುನ್ನವೇ ಆಫೀಸಿಗೆ ಹೊರಟರು ಮುರಳಿ.

ಬಳಿಕ ಎದ್ದ ಆದ್ಯಾ.."ಅಪ್ಪ ಎಲ್ಲಿ.. ಸೀರೆ ಬೇಕು.. ಸೀರೆ ಪಟ ಹಾಕ್ಬೇಕು" ಎಂದು ಹೇಳಿ ಹಠವೇ ಹಠ.ಕೊನೆಗೆ ಮುರಳಿಗೆ ಫೋನ್ ಮಾಡಿ ತಿಳಿಸಿದೆ..
"ನೀವಿಬ್ರೂ ಹೋಗಿ ಶಾಪಿಂಗ್ ಮಾಡಿ ಬನ್ನಿ.."ಎಂದರು..

ನಾನು ಆದ್ಯಾ ಹುಟ್ಟಿದ ಮೇಲೆ ಒಬ್ಬಳೇ ಹೊರಗೆ ಹೋದದ್ದಿಲ್ಲ.ಏನಿದ್ದರೂ ಮುರಳಿಯ ಜೊತೆಗೆ ಸುತ್ತಾಟ.ನಾನು ಬೇಕು ಅಂದ್ರೆ ಸಾಕು ಮುರಳಿ ದುಡ್ಡೆಣಿಸಿ ಕೊಟ್ಟು ಬಿಡ್ತಿದ್ದ... ಈಗಲೇ ಆ ಕಷ್ಟ ಗೊತ್ತಾಗಿದ್ದು.ಅಂತೂ ಮಗಳ ಜೊತೆಗೆ ಬಟ್ಟೆಮಳಿಗೆಗೆ ತೆರಳಿ ರೆಡಿಮೇಡ್ ಸೀರೆ ಕುಪ್ಪಸ ಕೊಂಡದ್ದಾಯ್ತು...ಮುರಳೀನ ಎಷ್ಟು ಮಿಸ್ ಮಾಡ್ಕೊಂಡೆ ಗೊತ್ತಾ...ಆ ಕಲರಾ..ಈ ಡಿಸೈನ್ ಒಪ್ಪುತ್ತಾ..ಎಂದೆಲ್ಲ ನಾ ಕೇಳ್ತಾ ಇದ್ದದ್ದು ಮುರಳಿಯನ್ನೇ..ಹಿ ಈಸ್ ಮೈ ಬೆಸ್ಟ್ ಫ್ರೆಂಡ್..

ಮನೆಗೆ ಬಂದು ಆದ್ಯಾ ಮೊದಲು ಮಾಡಿದ್ದೇನು ಗೊತ್ತಾ..ತಾನು ಹಾಕ್ಕೊಂಡಿದ್ದ ಡ್ರೆಸ್ ತೆಗೆಯಲು ಪ್ರಯತ್ನಿಸಿ... ಓಹ್... ಸಕ್ಸೆಸ್..ನಂತರ ತಂದ ಬಟ್ಟೆಯನ್ನು ಹಾಕಿಕೊಳ್ಳಲು ನೋಡಿದ್ದೇ.. ಅಬ್ಬಾ..ನನ್ನ ಮೂರುವರ್ಷದ ಮಗಳು ಯಾವ ಟೀನೇಜ್ ಗರ್ಲ್ ಗೂ ಕಮ್ಮಿಯಿಲ್ರೀ ಅಲಂಕಾರ ಮಾಡೋದ್ರಲ್ಲಿ..ಅಂತ ಅನ್ಸಿತ್ತು ನಂಗೆ..

ಹಾಂ...ಸಾರಿ ಉಟ್ಟು ಪಟ ತೆಗೆದಾಯ್ತು... ಎಷ್ಟು ಮುದ್ದು ಮುದ್ದಾಗಿ ಕಾಣಿಸ್ತಾಯಿದಾಳೆ ನನ್ನ ಸಕ್ಕರೆ ಗೊಂಬೆ...ನನ್ನ ದೃಷ್ಟಿ ತಾಗದಂತೆ ನೆಟಿಗೆ ತೆಗೆದೆ..

ಪಟತೆಗೆದು ಮೊಬೈಲ್ ಪಕ್ಕಕ್ಕಿಟ್ಟು ಅವಳ ಸೀರೆ ಬಿಚ್ಚಲು ಹೊರಟೆ... ಊಹೂಂ.. ಎಂದು ನನ್ನ ಕೈಗಳನ್ನು ದೂರ ತಳ್ಳಿದಳು.. ಮೊಬೈಲ್ ತಂದು ನನ್ನ ಕೈಗಿತ್ತಳು..ಹಾಕು..ಪಟ ಹಾಕು..
ಅರೇ...ನನ್ನ ಮಗಳು ನನಗಿಂತ ಫಾಸ್ಟ್... ಅಡ್ಡಿಯಿಲ್ಲ..

ಮೊಬೈಲ್ ತೀಡಿದೆ.. ಓಪನ್ ಮಾಡಿದೆ... ಸೀರೆ ಚಾಲೆಂಜ್ ನ ಮುಂದಿನ ಹಂತ ವಿದೌಟ್ ಮೇಕಪ್ ಎಂದು ಚಾಲೆಂಜ್ ಶುರುವಾಗಿತ್ತು... ಎರಡನ್ನೂ ಜೊತೆ ಸೇರಿಸಿ "ಸೀರೆ ವಿದೌಟ್ ಮೇಕಪ್"ಎಂದು ನನ್ನದೇ ಹೆಡ್ಡಿಂಗ್ ನೀಡಿದೆ..ಆದ್ಯಾನ ಪಟ ಹಾಕಿ ಅವಳ ಎದುರು ಹಿಡಿದೆ...

ಏನು ಖುಷಿ ಅಂತೀರಿ.. ಪುಟಾಣಿ ಮಗಳ ಮೊಗದಲ್ಲಿ... ಒಂದು ಕ್ಷಣ ನಂಗೆ ..ಮುದ್ದು ಮಗಳನ್ನು ಕರ್ಕೊಂಡು ಹೋಗಿ ಕಷ್ಟಪಟ್ಟು ಶಾಪಿಂಗ್ ಸಾರ್ಥಕ ಅನಿಸಿತು..

ಮಗಳನ್ನು ಸ್ನಾನ ಮಾಡಿಸಿ ನಿದ್ದೆ ಮಾಡಿಸಿ ಮನೆಕೆಲಸ ಮುಗಿಸಿದೆ.. ಅಷ್ಟೊತ್ತಿಗೆ ನಿದ್ದೆಯಿಂದೆದ್ದಳು.. ಮೊಬೈಲ್ ಕಡೆ ಬೆರಳು ತೋರಿಸ್ತಾಳೆ.. ಈಗಲೇ ಎಷ್ಟು ಕುತೂಹಲ..!!

ಹತ್ತು ಲೈಕ್ ಬಂದಿದೆ ಎಂದು ತೋರಿಸಿದೆ..ಸಂತಸವಿತ್ತು ಮುಖದಲ್ಲಿ.. ಎಂದಿನಂತೆ ನಿದ್ದೆಯಿಂದೆದ್ದು ಅಳುತ್ತಿರಲಿಲ್ಲ...

ರಾತ್ರಿಯ ಅವಳ ಊಟದ ಹೊತ್ತು..ಅವಳ ತುಂಟಾಟ.. ಮೊಬೈಲ್ ನೋಡೊಣ ಅಂದಿತು ಮನಸ್ಸು...ಬೇಡ ಎಂದು ಮುರಳಿ ಹೇಳಿದ ಬುದ್ಧಿಮಾತು ನೆನಪಾಯಿತು.. ಸುಮ್ಮನಾದೆ ‌‌ಬಾಯಿತುಂಬಾ ತುತ್ತು ಹಾಕ್ಕೊಂಡು ಮಗಳು ಒಳಗಿನ ರೂಮಿಗೆ ತೆರಳಿದಳು..ಚಾರ್ಜಿಗಿಟ್ಟಿದ್ದ ಮೊಬೈಲ್ ನ್ನು ತಂದು ಕೈಗಿತ್ತಳು.. ನೋಡು ಎಂಬಂತೆ ಕೈಸನ್ನೆ ಮಾಡಿದಳು..

ಮುರಳಿಯ ಬುದ್ಧಿಮಾತು ಮರೆತು ಮನಸ್ಸು ಮಗಳ ಮುದ್ದುಮಾತಿನಂತೆ ನಡೆದುಕೊಂಡಿತು.. ಪುನರಪಿ ಮೊಬೈಲ್ ತೀಡನಂ..
ಲೈಕ್ ಕಮೆಂಟಿಗೆ ಉತ್ತರ ಲೇಖನಂ...

ಸಂತಸದಲ್ಲಿದ್ದ ಆದ್ಯಾ ಇಂದು ಬೇಗಬೇಗನೇ ಉಂಡಳು..ಆಗಲೇ ಗೇಟು ತೆಗೆದ ಶಬ್ದ ಕೇಳಿಸಿತು.. ಮುರಳಿ ಬಂದರು ಅಂತ ಅನಿಸುತ್ತೆ..ಬೇಗ ಹೋಗಿ ಮೊಬೈಲ್ ಚಾರ್ಜಿಗಿಟ್ಟು ಬಂದೆ..

ಬಾಗಿಲು ತೆರೆದು ಎಂದಿನಂತೆ ಪತಿ, ಗೆಳೆಯ ಮುರಳಿಗೆ ನಗುಮೊಗದ ಸ್ವಾಗತ ಕೋರಿದೆ...
ನನಗಿಂತ ಮೊದಲೇ ಅಪ್ಪನತ್ತ ಓಡಿದ ಆದ್ಯಾ..
"ಅಪ್ಪಾ...
ಅಮ್ಮನ ಚಾಲೆಂಜಿಗಿಂತ ನಂಗೇ ಜಾಸ್ತಿ ಲೈಕೂ,ಕಮೆಂಟೂ..
ಅವಳು ತುಂಬಾ ಮೆತ್ಕೊಂಡಿದ್ಳು ಪೌಡ್ರೂ, ಲಿಪ್ಸ್ಟಿಕ್,ಸೆಂಟೂ..
ನನ್ನ ಪಟ ವಿದೌಟ್ ಮೇಕಪ್ಪು ಗೊತ್ತೇ..
ಅಮ್ಮಂಗಿಂತ ನಾನೇ ಸುಂದರಿ ಅನಿಸುತ್ತೆ.."

ಎಂದು ತೊದಲು ಮಾತಲ್ಲಿ ಎಲ್ಲವನ್ನೂ ಅರುಹಿದ ಮಗಳ ಹಣೆಗೊಂದು ಮುತ್ತು ಕೊಟ್ಟ ಮುರಳಿ ನನ್ನತ್ತ ತಿರುಗಿ.."ಪರವಾಗಿಲ್ವೇ... ಮಗಳು ಈಗಲೇ ನಿನ್ನನ್ನು ಮೀರಿಸಿಬಿಟ್ಳು..."ಎನ್ನುತ್ತಾ ನಸುನಕ್ಕು ಮೆಲ್ಲನೆ ನನ್ನ ಹೆಗಲ ಮೇಲೆ ಕೈಯಿಟ್ಟಿದ್ದರು....

ಮನೆಯೊಳಗೆ ಬಂದ ಮುರಳಿಗೆ ಓಡೋಡಿ ಹೋಗಿ ಮೊಬೈಲ್ ತಂದು ಕೊಟ್ಟಳು ಆದ್ಯಾ...
ಅಮ್ಮ ಮಗಳು ಇಬ್ಬರ ಪಟವನ್ನೂ ನೋಡಿದ ಮುರಳಿ ಸಣ್ಣಕ್ಕೆ ಗುನುಗಿದ್ದು ಕೇಳಿಸಿತು..

"ಆಹಾ...!! ಮನಮೋಹಕ ಚೆಲುವೆಯರು...ಅಮ್ಮ ಮಗಳಿಬ್ಬರೂ...

ನೂಲಿನಂತೆ ಸೀರೆ...
ತಾಯಿಯಂತೆ ಮಗಳು..."

ಮುರಳಿಯ ಬಾಯಿಯಿಂದ ಇದಕ್ಕಿಂತ ದೊಡ್ಡ ಹೊಗಳಿಕೆ ನಂಗೆ ಬೇಕಾ....ನಾನೀಗ ಸಂತೃಪ್ತ ಮಡದಿ, ಅಮ್ಮ, ಗೆಳತಿ....

✍️... ಅನಿತಾ ಜಿ.ಕೆ.ಭಟ್.
03-10-2019

ಚಿತ್ರ ಕೃಪೆ :ಅಂತರ್ಜಾಲ.

ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home, >,<

ಸಂಕೇತಗಳನ್ನು ಬಳಸಿಕೊಳ್ಳಬಹುದು.


Tuesday, 8 September 2020

ನನಗೆ ನನ್ನಮ್ಮನೇ ಮಾದರಿ

 


ನನಗೆ ನನ್ನಮ್ಮನೇ ಮಾದರಿ

"ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು...
ಓಹೋ...ಓಹೋ...."

ಕಂದ ಖುಷಿ ಖುಷಿಯಾಗಿ ತಾಯಿಗೆ ಹಾಡುವ ಗೀತೆ ..ಕೇಳಿದ ಪ್ರತಿಯೊಬ್ಬರಿಗೂ ಮಾತೆಯ ಮಡಿಲ ವಾತ್ಸಲ್ಯವನ್ನು ನೆನಪಿಸುವ ಗೀತೆ.ಅಮ್ಮ ಅಂದರೆ ಅದಮ್ಯ ಚೇತನ,ಸಂತಸ,ಮಮತೆ, ವಾತ್ಸಲ್ಯ,ಕಾಳಜಿಯಿಂದ ನೋಡಿಕೊಳ್ಳುವ ಜೀವ,ತಾನು ನೊಂದರೂ ತೋರಗೊಡದೆ ಮಕ್ಕಳಿಗೆ ಪ್ರೀತಿಯ ತುತ್ತನೀವ ಜೀವ..
ಆದಿಗುರು ಶಂಕರಾಚಾರ್ಯರು ತಮ್ಮ ಸ್ತೋತ್ರದಲ್ಲಿ "ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ"ಎಂದು ಹೇಳಿದ್ದಾರೆ..ಕೆಟ್ಟ ಮಕ್ಕಳಾದರೂ ಇರಬಹುದು ಕೆಟ್ಟ ತಾಯಿ ಇರಲಾರಳು.ಹೌದು ..ತಾಯಿಯೆಂಬ ದೈವ ಕನಸು ಮನಸಿನಲ್ಲೂ ಮಕ್ಕಳ ಕ್ಷೇಮ,ಏಳಿಗೆಯನ್ನೇ ಬಯಸುವುದು..ಜಗತ್ತಿನಲ್ಲಿ ಯಾರೇ ಪ್ರೀತಿಸದಿದ್ದರೂ ತಾಯಿ ಪ್ರೀತಿ ಮಾತ್ರ ಅಜರಾಮರ...

    ಅಮ್ಮಾ.....ಅನ್ನುವ ಉಚ್ಛಾರಣೆಯೇ ಎಷ್ಟು ವಿಚಿತ್ರ ಅಲ್ವಾ... ಹೆಚ್ಚಿನೆಲ್ಲಾ ಪದಗಳು ಗಂಟಲಿನಿಂದ ಆರಂಭವಾದರೆ ಅಮ್ಮಾ...ಎಂಬುದು ನಾಭಿಯಿಂದಲೇ ಹೊರಡುವ ಸ್ವರ... ಹೌದು ಏಕೆಂದರೆ ನಾಭಿಯಲ್ಲೇ ಕಂದನಿಗೆ ತುತ್ತುಕೊಟ್ಟವಳು ಆಕೆ.ಆಕೆಯನ್ನು ಕರೆದರೆ ಆ ನಾಭಿಯೇ ಸ್ವರೋತ್ಪತ್ತಿ ಮಾಡುತ್ತದೆ..
"ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು" ಎಂಬ ಸಾಲುಗಳಂತೆ ಪ್ರತಿಯೊಬ್ಬರೂ ಜೀವನದ ಮೊದಲ ಪಾಠಗಳನ್ನು ಅಭ್ಯಾಸಗಳನ್ನು ಕಲಿತುಕೊಳ್ಳುವುದು ತಾಯಿಯಿಂದಲೇ.. ತಾಯಿಯ ಶಿಸ್ತು,ಬದ್ಧತೆ,ಸೌಜನ್ಯ,ಸಂಸ್ಕಾರಗಳು ಮಕ್ಕಳಲ್ಲಿ ಎದ್ದುಕಾಣುತ್ತವೆ..

        ನನ್ನ ತಾಯಿಯ ಸಹನೆ, ಧೈರ್ಯ, ಪ್ರೀತಿ, ನೋವನ್ನೂ ಲೆಕ್ಕಿಸದೆ ತನ್ನ ಕರ್ತವ್ಯವನ್ನು ಪಾಲಿಸುವ ಗುಣ,ಮಿಕ್ಕಿದ್ದೆಲ್ಲವೂ ಆ ದೇವನ ಲೀಲೆ  ಆಟ ಎಂಬ ಗುಣಗಳು ಇಂದಿಗೂ ನಾನು ಇಷ್ಟಪಡುವ ಆದರ್ಶವಾಗಿ ಸ್ವೀಕರಿಸುವ ಗುಣಗಳು..ಅವು ರಕ್ತಗತವಾಗಿಯೇ ನನ್ನಲ್ಲೂ ಬಂದಿದೆಯೆಂದರೂ ಅಚ್ಚರಿಯಲ್ಲ.. ಕ್ರೋಧ ಎನ್ನುವ ಪದವೇ ಅವರ ನಿಘಂಟಿನಲ್ಲಿ ಇಲ್ಲವೇನೋ ಎಂಬಂತೆ ಸೌಮ್ಯ ಸ್ವಭಾವದ ತಾಯಿ..ಅದುವೇ ಸಂತಸದ ಬಾಳುವೆಗೆ ಬುನಾದಿಯಾಗಿದೆ.. ಇಂದು ನನ್ನಲ್ಲೂ ಅದೇ ಕಾಣಿಸುತ್ತಿದೆ..ಏಕೆಂದರೆ ಅದು ಅವರು ಹಾಕಿಕೊಟ್ಟ ಸಂಸ್ಕಾರದ ಅಡಿಗಲ್ಲು..

        ನಮ್ಮ   ತಾಯಿ ಅತಿಥಿಗಳನ್ನು ಸತ್ಕರಿಸುವ ಗೌರವಿಸುವ ಗುಣವನ್ನು ಎಲ್ಲರೂ ಕೊಂಡಾಡುತ್ತಾರೆ..ಅವರ ಪ್ರೀತಿ ವಾತ್ಸಲ್ಯವನ್ನು ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.ನನ್ನಲ್ಲೂ ಅದೇ ಪಡಿಯಚ್ಚಿನಂತೆ ಬಂದಿದೆ.. ನಾನು ಮದುವೆಯಾಗಿ ಬಂದ ಮನೆಗೆ ಹತ್ತಿರದ ನೆಂಟರು ಕೂಡ ಬರುವುದು ಅಪರೂಪವಾಗಿತ್ತು.. ಆದರೆ ಈಗ ನಾನು ಕಾಲಿಟ್ಟಮೇಲೆ ಬಂಧುಬಳಗ ಮತ್ತೆ ಒಟ್ಟುಸೇರುತ್ತಿದ್ದಾರೆ.. ಪ್ರೀತಿ ವಿಶ್ವಾಸದಿಂದ ಆದರಿಸುತ್ತೇವೆ.ಇದನ್ನು ನನ್ನತ್ತೆಯ ಬಾಯಿಯಿಂದಲೇ  ನಾನು ಕೇಳಿದಾಗ ನನಗಾದ ಖುಷಿ ಅಷ್ಟಿಷ್ಟಲ್ಲ.. ಅದೆಲ್ಲವೂ ನನ್ನ ಮಾತೆಯಿಂದ ಬಳುವಳಿಯಾಗಿ ಬಂದ ಸಂಸ್ಕಾರಗಳು..

       ದುಡ್ಡು ಕೂಡಿಸಿಟ್ಟದ್ದು ಖರ್ಚು ಮಾಡಿ ಮುಗಿಯಬಹುದು.ಅಥವಾ ಕಳ್ಳಕಾಕರ ಭಯವಿರಬಹುದು.ಆದರೆ ತಾಯಿ ಕಲಿಸಿದ ಉತ್ತಮ ಗುಣಗಳು , ಸದ್ವಿಚಾರ,ಸತ್ಸಂಸ್ಕಾರಗಳು ಬಳಸಿದಷ್ಟು ಬೆಳೆಯುತ್ತವೆ. ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗುತ್ತದೆ ಮತ್ತು ಬಂಧುಬಾಂಧವರ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಲು ಸಹಕಾರಿಯಾಗುತ್ತದೆ..
ಯಾರೇ ಆಗಲಿ ಅವರ ದುಃಖವನ್ನು ತೋಡಿಕೊಂಡರೂ ಅವರಿಗೊಂದು ಸಾಂತ್ವನ ಹೇಳಲು ಅಮ್ಮ ಮರೆಯುತ್ತಿರಲಿಲ್ಲ.ಯಾರೆಷ್ಟೇ ನೋಯಿಸಿದರೂ ,ಆಳವಾಗಿ ಮನಸ್ಸಿಗೆ ಗಾಯವಾದರೂ ಅದಕ್ಕೆ ಕಾರಣರಾದವರನ್ನು ಕ್ಷಮಿಸಿ ಅದನ್ನು ಮರೆತು ಬಿಡುವುದು ಇನ್ನೊಂದು ಉತ್ತಮ ಗುಣ. ಈ ಗುಣದಿಂದಲೇ... ಹಿಂದೆ ಎಷ್ಟು ಕಷ್ಟಪಟ್ಟರೂ ಇಂದು ಮಕ್ಕಳೆಲ್ಲರೂ ಚಂದದ ಬದುಕನ್ನು ಕಟ್ಟಿಕೊಂಡಾಗ ತಾನೂ ತುಂಬುಸಂತಸವನ್ನು ಅನುಭವಿಸುತ್ತಾರೆ.. ಗಂಡಹೆಂಡತಿ ಮಕ್ಕಳು ಎಂಬ ಪುಟ್ಟ ಸಂಸಾರವಿದ್ದರೂ ವೈಮನಸ್ಸು ತಾಂಡವವಾಡುವ ಪ್ರತಿಯೊಂದು ಕುಟುಂಬವೂ ನೋಡಿ ಅನುಸರಿಸಬೇಕಾದ ಗುಣವಿದು..

       ಇಂದೂ ಕೂಡ ಮಕ್ಕಳಿಗೆ ಕಷ್ಟವಿದೆ ಎಂದು ಅರಿತರೆ ಸಾಕು ಉಪಕಾರಕ್ಕಾಗಿ ಓಡಿಬರುವ ಸಹೃದಯಿ.ಸೊಸೆಯನ್ನೂ ಮಗಳಂತೆ ಕಂಡು ಅತ್ತೆಸೊಸೆಯೆಂದರೆ ಅಮ್ಮಮಗಳಂತೆ ಎಂದು ಪರಸ್ಪರ ಅರ್ಥಮಾಡಿಕೊಂಡು ಬದುಕುತ್ತಿರುವ ಸ್ಫೂರ್ತಿಯ ಚಿಲುಮೆ..ಮನೆಯು ಚೆನ್ನಾಗಿ ಮುನ್ನಡೆಯಬೇಕಾದರೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಸಾಲದು.. ಪ್ರೀತಿಸುವ ಹೃದಯವೂ , ತಪ್ಪನ್ನು ಎತ್ತಿತೋರಿಸಿ ತಿದ್ದಿತೀಡುವ ಮಾತೃವಾತ್ಸಲ್ಯವೂ,ಎಂತಹ ಕಷ್ಟದಲ್ಲೂ ಎದೆಗುಂದದೆ ಮುನ್ನಡೆವ ಸಮರ್ಥ ಗೃಹಿಣಿಯೂ, ಸದಾ ನಗುನಗುತ್ತಾ ಮನೆಯನ್ನು ಬೆಳಗುವಂತಹ ಸುಮಂಗಲಿಯೂ ಸದ್ಗೃಹಿಣಿಯೂ ಇರಬೇಕು..ಅಂತಹ ಎಲ್ಲ ಸದ್ಗುಣಗಳ ಖನಿ ನಮ್ಮಮ್ಮ ಸರಸ್ವತಿ...ಅಂತಹ ಅಮ್ಮನ ಮಡಿಲಲ್ಲಿ ಜನುಮ ಪಡೆದ ನಾವು ಭಾಗ್ಯವಂತರು..
ವಿಶ್ವ ತಾಯಂದಿರ ದಿನದಂದು ನಾನು ನನ್ನಮ್ಮನಿಗೋಸ್ಕರ ಬರೆದ ಕವನ ಹೀಗಿದೆ ನೋಡಿ...
# ಅಮ್ಮನೆಂದರೆ ದೇವರು

ಅಮ್ಮನೆಂದರೆ ಅಕ್ಕರೆ ನೆನಪುಗಳೇ ಸಕ್ಕರೆ
ನೋವ ನುಂಗಿ  ಅಮ್ಮ ನಗುತಿರೆ
ಅರಿಯದ ಕಂದ ಬೊಚ್ಚುಬಾಯ್ದೆರೆ
ಹಿಗ್ಗಿನಲಿ ತೋರುವಳು ನಗೆಮೋರೆ...||

ನಡೆವ ದಾರಿಯ ಕಲ್ಲುಮುಳ್ಳ ಸರಿಸಿ
ತಪ್ಪಿದ ದಾರಿಗೆ ಗುರಿ ತೋರಿಸಿ
ತಿದ್ದಿ ತೀಡುವ ತಾಯೆನ್ನ ಮೊದಲ ಗುರು
ಮಾತಾಡಿಲ್ಲ ಎಂದೂ ಅವಳಿಗೆದುರು...||

ತೊದಲು ನುಡಿಗಳಿಗೆ ರೂಪ ನೀಡಿ
ಅಡೆತಡೆಗಳಿಗೆ ಸೆಡ್ಡು ಹೊಡೆದು
ಸಾಕಿಸಲಹಿರುವ ಪ್ರೇಮಮಯಿ
ಕೋಪಹಠಗಳ ಸಹಿಸಿದ ತಾಯಿ...||

ನನ್ನ ತುಂಟಾಟಗಳಿಗೆ ಲೆಕ್ಕವಿಟ್ಟಿಲ್ಲ
ಅದನೆಲ್ಲ ಮಾಡಿಹಳು ಸಾಧನೆಯ ಮೆಟ್ಟಿಲು
ಕಷ್ಟದಲಿ ಮೊದಲು ನೆನಪಾಗುವ ದೇವತೆ
ಇಷ್ಟದಲಿ ಸಂಸ್ಕಾರ ಕಲಿಸಿಹಳು ಮಾತೆ...||

ಚಿಂತೆನೋವುಗಳ ಒಳಗೆಳೆದು ನುಂಗಿ
ಹೊರಗೆ ತೊಟ್ಟಿಹಳು ಸಂತಸದ ಅಂಗಿ
ವಿಜಯವನೆ ಬಯಸುವಳು ನನ್ನ ಗಂಗಿ
ಅಪಜಯದಿ ಧೈರ್ಯ ತುಂಬುವ ಭಂಗಿ...||

ವೃದ್ಧಾಪ್ಯದಲಿ ಮಾತೆಯ ಸೇವೆಯಲ್ಲಿ
ತೊಡಗಿರುವ ಮಕ್ಕಳೇ ಧನ್ಯರಿಲ್ಲಿ
ನೆರಳಾಗಿ ನಡೆವಳು ಕುಡಿಗಳ ಆಸರೆಯಲ್ಲಿ
ಬಾಳ ಸಿಹಿಕಹಿಯಲಿ ಸವಿಯುಂಡು,
ಬೆಂದು ಬಳಲಿ...||

ಮಾತೆಯ ಮರೆತು ಬಿಡದಿರಿ ಯೌವ್ವನದ ಹುರುಪಿನಲ್ಲಿ...
ಮತ್ತೆ ಬಳಲುವಿರಿ ಹೆತ್ತೊಡಲ ಬೇಗೆಯ ಶಾಪದಲ್ಲಿ...ತಾಯಂದಿರ ಗೌರವಿಸೋಣ
ತಾಯಂದಿರಿಗೆ ಸವಿಯನುಣಿಸೋಣ||

ಇದು ಅನುದಿನದ ಅಭಿಯಾನ
ಆರೈಕೆ ಕಾಳಜಿಯಿರಲಿ ದಿನದಿನ...

✍️... ಅನಿತಾ ಜಿ.ಕೆ.ಭಟ್.

      ಇದನ್ನು ಓದಿದ ನನ್ನಮ್ಮ ಬಹಳ ಹೆಮ್ಮೆಪಟ್ಟಕೊಂಡರು.ಮಕ್ಕಳಾದ ನಾವು ನಮ್ಮ ಬರಹಗಳಿಂದ,ನಡೆನುಡಿಗಳಿಂದ ಹೆತ್ತಬ್ಬೆಯ ವದನದಲ್ಲೊಂದು ಸಂತೃಪ್ತ ಮಂದಹಾಸವನ್ನು ಮೂಡಿಸಲು ಸಾಧ್ಯವಾದರೆ ಅದಕ್ಕಿಂತ ಸಂತಸ ಬೇರೆಯಿಲ್ಲ..ಬಾಳಹಾದಿಯಲ್ಲಿ ನಡೆದು ದಣಿದ ಹಿರಿಜೀವಕ್ಕೆ ಅಮ್ಮಾ ಹೇಗಿದ್ದೀಯಾ...ಕೆಲ್ಸ ನಾನ್ಮಾಡ್ತೀನಿ..ನೀನು ಸ್ವಲ್ಪ ವಿಶ್ರಾಂತಿ ಪಡೆದುಕೋ...ಆರೋಗ್ಯ ಕೈಕೊಟ್ಟಾಗ ಔಷಧಿ ಕೊಟ್ಟು ಆರೈಕೆ ಮಾಡಿದರೆ ಹಣೆಯಲ್ಲಿ ಬೆವರು ಮೂಡಿಸುತ್ತಿರುವ ಮಾತೆಯ ಜೀವವೂ ಧನ್ಯತೆಯನ್ನು ಅನುಭವಿಸುತ್ತದೆ.ಹೆತ್ತಮಡಿಲಿಗೆ ಹಿರಿಯ ಜೀವಕೆ ವೃದ್ಧಾಪ್ಯದಲಿ ನಾವೇ ತಾಯಾಗಿ ಮಡಿಲಿನಲ್ಲಿ ಬೆಚ್ಚನೆಯ ಆಶ್ರಯ ನೀಡಬೇಕು..ಅದುವೇ ನಮ್ಮ ಭಾರತದ ಸಂಸ್ಕೃತಿ..

✍️... ಅನಿತಾ ಜಿ.ಕೆ.ಭಟ್.
08-09-2020.


Saturday, 5 September 2020

ಬಾಳ ದಾರಿಗೆ ಬೆಳಕಾದ ಗುರುಗಳು

 


ಬಾಳ ದಾರಿಗೆ ಬೆಳಕಾದ ಗುರುಗಳು

        ಹುಟ್ಟಿದ ಮಗುವೊಂದು ತನ್ನ ಅಳುವಿನಿಂದ ಭೂಮಿಯಲ್ಲಿ ತನ್ನ ಇರುವಿಕೆಯನ್ನು ಪ್ರಕಟಪಡಿಸುತ್ತದೆ .ಆ ಮಗುವಿಗೆ ಆಹಾರ ವಿಹಾರ ಸಂಸ್ಕಾರಗಳನ್ನು ಕಲಿಸುವವಳು ತಾಯಿ.ಮಗು ತಾನು ಮೊದಲು ಅನುಕರಿಸುವುದು ಮಾತೆಯನ್ನು.ಬೆಳೆಯುತ್ತ ಹೋದಂತೆ ತನ್ನ ತಂದೆ ತಾಯಿ ಕುಟುಂಬದಿಂದ ಪರಿಸರದಿಂದ ನಡೆನುಡಿಗಳನ್ನ ಅನುಕರಿಸುತ್ತಾ ಹೋಗುತ್ತದೆ.ಆದ್ದರಿಂದಲೇ ಪ್ರತೀ ವ್ಯಕ್ತಿಗೂ ಮೊದಲ ಗುರು ತಾಯಿಯೇ.

      "ಮನೆಯೆ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು"ಎಂಬ ಉಕ್ತಿಯಂತೆ ಮೊದಲ ಗುರು, ಶಿಕ್ಷಕಿ,ಅರಿವಿನ ದೀವಿಗೆಯಾಗುವವಳು ತಾಯಿ.ತೊದಲು ಮಾತನ್ನು ತಿದ್ದಿ ಸ್ಪಷ್ಟವಾಗಿ ಮಾತನಾಡಲು, ಧೈರ್ಯದಿಂದ ಬದುಕನೆದುರಿಸಲು ತಂದೆತಾಯಿ ಕಲಿಸುವ ಬಾಲ್ಯದ ದಿನಗಳೇ ಜೀವನಕ್ಕೆ ಭದ್ರಬುನಾದಿ.

     ಶಿಕ್ಷಣ ಪಡೆಯಲು ಶಾಲೆಯ ಮೆಟ್ಟಿಲೇರಿದಾಗ ಗುರುಗಳ ಮುಖದರ್ಶನವಾಗುತ್ತದೆ. ಓದಿಬರೆಯಲು ಕಲಿಸಿ ಬಾಳುಬೆಳಗುವಂತೆ ಮಾಡುವವರು ಶಿಕ್ಷಕರು.ಪುಟ್ಟ ಚಿಣ್ಣರಿಗೆ ಅಕ್ಷರಾಭ್ಯಾಸ ಮಾಡಿಸಿ ತಾವು ಕೂಡ ವಿದ್ಯಾರ್ಥಿಗಳಾಗಿ ದಿನೇದಿನೇ ಮಕ್ಕಳಿಂದಲೂ ಕಲಿಯುತ್ತಾ ಹೋಗುತ್ತಾರೆ.ಮಕ್ಕಳ ತುಂಟಾಟಗಳಿಗೆ ಕಡಿವಾಣ ಹಾಕಿ ಓದಿನಲ್ಲಿ ಏಕಾಗ್ರತೆ ಮೂಡಿಸುವ ನಿಟ್ಟಿನಲ್ಲಿ ಕೆಲವೊಮ್ಮೆ ಶಿಸ್ತಿನ ಶಿಕ್ಷಕರು.. ಜೋರಿನ ಶಿಕ್ಷಕರು ಎನಿಸಿಕೊಳ್ಳುತ್ತಾರೆ.. ಆದರೆ ಅದರ ಹಿಂದಿನ ಉದ್ದೇಶ ಒಳ್ಳೆಯದೇ ಆಗಿರುತ್ತದೆ.

      ಎಷ್ಟೋ ಶಿಕ್ಷಕರು ವಿದ್ಯಾರ್ಥಿಗಳ ಬಡತನ,ಆಹಾರದ ಕೊರತೆ,ಬಟ್ಟೆ, ಪುಸ್ತಕಗಳ ಅಭಾವವನ್ನು ಮನಗಂಡು ತಾವೇ ಕೈಯಾರೆ ಭರಿಸಿ ವಿದ್ಯಾರ್ಜನೆಗೆ ಅನುಕೂಲ ಕಲ್ಪಿಸಿಕೊಡುತ್ತಾರೆ.ಮಕ್ಕಳ ಅನಾರೋಗ್ಯ ಸಂದರ್ಭದಲ್ಲಿ ತಾವೇ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಉಪಚರಿಸಲೂಬಹುದು. ಇದಕ್ಕೆ ಪ್ರತಿಯಾಗಿ ಏನು ಕೊಟ್ಟರೂ ಕಡಿಮೆಯೇ.ಅದಕ್ಕೇ ಹೇಳುವುದು ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂದು.

      ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಬಂಧ ಗಟ್ಟಿಯಾಗುವುದು , ಆಳವಾಗಿ ಬೇರೂರುವುದು ವಿದ್ಯಾರ್ಥಿಗಳ ಕಲಿಕಾ ಆಸಕ್ತಿ,ಸೃಜನಶೀಲತೆಯ ಮೇಲಿದೆ.ಗುರುಗಳುತನ್ನ ಶಿಷ್ಯರು ತನಗಿಂತ ಹೆಚ್ಚಿನ ಸಾಧನೆ ಮಾಡಬೇಕೆಂದು ಬಯಸಿ ಹುರಿದುಂಬಿಸುತ್ತಾರೆ .. ತಾವು ಅದೇ ಸ್ಥಾನದಲ್ಲಿ ನಿಂತು ತೃಪ್ತಿ ಪಟ್ಟುಕೊಳ್ಳುತ್ತಾರೆ.ಸೌಲಭ್ಯಗಳ ಕೊರತೆ,ತನ್ನ ವೈಯಕ್ತಿಕ ಸಮಸ್ಯೆ,ವೇತನದ ಪೂರೈಕೆಯಲ್ಲಿ ವ್ಯತ್ಯಯ ಏನೇ ಇರಲಿ ಶಿಕ್ಷಕರು ಮಾತ್ರ ಅದಾವುದನ್ನೂ ತೋರಗೊಡದೆ ಬೋಧನೆಯಲ್ಲೇ ಆತ್ಮತೃಪ್ತಿ ಕಂಡುಕೊಳ್ಳುತ್ತಾರೆ.

     ಇಂತಹ ಆದರ್ಶ ಶಿಕ್ಷಕರ ವಿದ್ಯಾರ್ಥಿಗಳಾದ ನಾವೆಲ್ಲ ಧನ್ಯರು.ಶಿಕ್ಷಕರ ದಿನಾಚರಣೆಯ ದಿನ ಮಾತ್ರ ಗುರುಗಳನ್ನು ಅಭಿನಂದಿಸುವುದು ಎಂದಾಗಬಾರದು..ವಿದ್ಯೆ ಕಲಿಸಿದ ಗುರುಗಳು ಸದಾ ಸ್ಮರಣೀಯರು.

      ನಾನು ಕಲಿತ ಸರಕಾರಿ ಪ್ರಾಥಮಿಕ ಶಾಲೆ ಒಂದು ದಕ್ಷಿಣ ಕನ್ನಡದ ಕುಗ್ರಾಮದಲ್ಲಿದೆ.ನಿತ್ಯವೂ ಎರಡು ಮೂರು ಕಿಲೋಮೀಟರ್ ದೂರದಿಂದ ನಡೆದುಕೊಂಡು ಬರುತ್ತಿದ್ದ ನಾರಾಯಣ ಶೆಟ್ಟಿ ಅನ್ನುವ ಗುರುಗಳಿದ್ದರು.ಒಂದುದಿನವೂ ಸಮಯ ಮೀರಿ ಬಂದವರಲ್ಲ.ದೂರದ ಗುಡ್ಡದಲ್ಲಿ ಅವರು ನಡೆದು ಬರುತ್ತಿದ್ದಾಗ ಅವರ ಬಿಳಿ ಅಂಗಿ ,ಬಿಳಿ ಪಂಚೆಯನ್ನು ಶಾಲೆಯಿಂದಲೇ ವೀಕ್ಷಿಸಿ ಮಕ್ಕಳ ಗುಂಪು ಚುಪ್.! ಎಂದು ಕುಳಿತುಕೊಳ್ಳುತ್ತಿತ್ತು.. ಖಡಕ್ ವ್ಯಕ್ತಿತ್ವ ವಿದ್ಯಾರ್ಥಿಗಳ ಪಾಲಿಗೆ.ಆದರೆ ಬಹಳ ಒಳ್ಳೆಯ ಮನಸ್ಸಿನವರು.

      ಯಾವುದೇ ವಿಷಯವನ್ನು ಮಕ್ಕಳಿಗೆ ಎಷ್ಟು ಸಲ ಬೇಕಾದರೂ ಬೋಧಿಸಲು ಹಿಂದೆಮುಂದೆ ನೋಡರು.ಮಕ್ಕಳಿಗೆ ತಿಳಿದ ಮೇಲೆಯೇ ಮುಂದಿನ ಪಾಠ.ನಿತ್ಯದ ಮನೆಕೆಲಸ ಮಾಡದಿದ್ದವರಿಗೆ ಏಟು ನಿಶ್ಚಿತ.ಅವರಿಂದಾಗಿ ಹಲವು ತುಂಟ ಮಕ್ಕಳೂ ಓದಿ ಸರಿದಾರಿಗೆ ಬಂದಿರುವರು.ಶಾಲೆಬಿಟ್ಟ ಮಕ್ಕಳನ್ನು ಕೂಡ ಹೆತ್ತವರ ಮನವೊಲಿಸಿ ಮತ್ತೆ ಶಾಲೆಗೆ ಬರುವಂತೆ ಮಾಡಿ ಕಲಿಯಲು ಒತ್ತಾಯಿಸುವವರು.ಹಾಗೆ ಅವರಿಂದ ಮರುಸೇರ್ಪಡೆಗೊಂಡವರಲ್ಲಿ ಇಂದು ಕೆಲವರು ಬ್ಯಾಂಕ್, ಶಾಲೆ, ಸರ್ಕಾರಿ ಕಛೇರಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.

     ಒಂದರಿಂದ ಏಳನೇ ತರಗತಿಯವರೆಗಿನ ಶಾಲೆಯಲ್ಲಿ ಕೆಲವು ಸಮಯ ಒಬ್ಬರು ಅಥವಾ ಇಬ್ಬರು ಅಧ್ಯಾಪಕರು ಮಾತ್ರ ಇದ್ದ ಸಂದರ್ಭವೂ ಇತ್ತಂತೆ..ಆಗಲೂ ಕೂಡ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಹಲವಾರು ವರ್ಷಗಳ ಕಾಲ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆಯುತ್ತಿತ್ತು ಎಂದು ಗುರುಗಳು ಸದಾ ಸ್ಮರಿಸುತ್ತಿದ್ದರು ..  ಅದೆಲ್ಲ ಸಾಧ್ಯವಾಗಿದ್ದು ಅವರ ಶಿಸ್ತು  ,ಸಂಯಮ,ಬೋಧನಾ ಶೈಲಿಯಿಂದ..ಮುಂದೆ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಿಂತು ಹೋಯಿತು.ಪುಣಚಾ ಗ್ರಾಮದ ದಂಬೆ ಎಂಬಲ್ಲಿರುವ ಸರಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಿದ ನಾರಾಯಣ ಶೆಟ್ಟಿ ಗುರುಗಳು ನನ್ನ ಮೆಚ್ಚಿನ ಗುರುಗಳು.ಅವರು ಪಾಠ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು.ಜೀವನದಲ್ಲಿ ಅನುಕರಣೀಯವಾದ ಆದರ್ಶ ನಡೆ ನುಡಿ ಅವರದು.ಅವರ ಅನುಭವದ ಹಿತನುಡಿಗಳು ಇಂದಿಗೂ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿವೆ.

       ಈಗ ಆ ಶಿಕ್ಷಕರು ಸೇವೆಯಿಂದ ನಿವೃತ್ತರಾಗಿದ್ದಾರೆ.ಶಾಲೆಯೂ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ,ಉತ್ತೇಜನ ನೀಡುತ್ತಿದ್ದ  ,ಸತತ ನೂರಕ್ಕೆ ನೂರು ಫಲಿತಾಂಶ ಗಳಿಸುತ್ತಿದ್ದ ಹಳ್ಳಿಯ ಹೆಮ್ಮೆಯ ಶಾಲೆ ಎಂಬ ಹೆಸರು ಈಗ ಇತಿಹಾಸ.

        ಮಣ್ಣಿನ ಮುದ್ದೆಯೊಂದನ್ನು ಸುಂದರ ಮೂರ್ತಿಯನ್ನಾಗಿಸುವ ಕಲಾವಿದನಂತೆ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವವರು.ಭವ್ಯ ಭಾರತದ ನಿರ್ಮಾಣದಲ್ಲಿ ಅವರ ಕೊಡುಗೆ ಅನನ್ಯವಾದುದು.ಮಕ್ಕಳನ್ನು ಸಚ್ಚಿಂತನೆಯ ಹಾದಿಯಲ್ಲಿ ನಡೆಸಿ ಅವರಲ್ಲಿ ದೇಶಾಭಿಮಾನ ಮೂಡಿಸುವ ನವಭಾರತದ ನಿರ್ಮಾತೃಗಳು.'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ'ಎಂಬ ದಾಸರಪದದಂತೆ ಗುರುವು ತೋರಿದ ಸನ್ಮಾರ್ಗದಲ್ಲಿ ನಡೆದು ಧನ್ಯರಾಗೋಣ .ಗುರುವೃಂದವನ್ನು ಗೌರವಿಸೋಣ..

ಹಬ್ಬಿದ ಗಾಢಾಂಧಕಾರವ ಸರಿಸಿ
ಜ್ಞಾನದ ಬೆಳಕ ಕಿಂಡಿಯ ತೆರಿಸಿ
ಗುರಿಯ ಕಡೆಗೊಯ್ಯುವ
ಗುರುತರ ಕಾರ್ಯಮಾಡುವ
ಜನನಿ,ಗುರುಮಹಿಮರಿಗೆ
ಬರಹದ ಗೌರವಾರ್ಪಣೆ..

ಧನ್ಯವಾದಗಳು 🙏

✍️.. ಅನಿತಾ ಜಿ.ಕೆ.ಭಟ್.
05-09-2020.

Tuesday, 1 September 2020

ಸೃಜನಶೀಲತೆ-ಕಿರುಗತೆ/ಕೌಟುಂಬಿಕ ಕಥೆ

 


ಸೃಜನಶೀಲತೆ

"ಹಲೋ.. ಮೇಡಂ...ಎಕೆವಿಇಟಿ ಶಾಲೆಯಿಂದ ಮಾತನಾಡ್ತಾ ಇದ್ದೇನೆ.ನಿಮ್ಮ ಮಗ ಪ್ರಣೀತ್ ನ ಕ್ಲಾಸ್ ಟೀಚರ್.ಸಂಜೆ ಮೂರೂವರೆಯ ಹೊತ್ತಿಗೆ ನೀವು ಶಾಲೆಗೆ ಬಂದು ನನ್ನನ್ನು ಸಂಪರ್ಕಿಸಬೇಕು..ಮರೆಯದಿರಿ..ಅಗತ್ಯ ವಿಷಯ ಮಾತನಾಡುವುದಿದೆ..."
ಎಂದು ಹೇಳಿ ರಮಾಳ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲದೆ ಶಿಕ್ಷಕಿ ಫೋನಿಟ್ಟರು.ರಮಾಳ ಮನಸ್ಸು ಅಲ್ಲೋಲಕಲ್ಲೋಲವಾಯಿತು.ಪ್ರಣೀತ್ ಏನಾದರೂ ಪುಂಡಾಟಿಕೆ ಮಾಡಿರಬಹುದಾ..ಯಾರ ಜೊತೆಯಾದದೂ ಜಗಳಕ್ಕೆ ನಿಂತಿರಬಹುದಾ..ಇಲ್ಲ ನನ್ನ ಮಗ ಅಂತಹವನಲ್ಲ..ಇಲ್ಲ ಯಾರದಾದರೂ ಪೆನ್ನು ಪೆನ್ಸಿಲ್ ಮುಂತಾದ ವಸ್ತುವನ್ನು  ಎಗರಿಸಿರಬಹುದಾ..ಇಲ್ಲ ನನ್ನ ಮಗನಿಗೆ ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ ಅಪ್ಪ..ಕೇಳುವ ಮೊದಲೇ ಕೊಡಿಸುತ್ತಾರೆ ಎಂದರೂ ತಪ್ಪಿಲ್ಲ.. ಹೋಂವರ್ಕ್ ಮಾಡದೆ ಹೋಗುತ್ತಾನೆಯೇ..ಸಾಧ್ಯವೇ ಇಲ್ಲ.. ಎಲ್ಲವನ್ನೂ ನಾನೇ ಪರಿಶೀಲಿಸುತ್ತೇನೆ.ಮುಂದೆ ನಿಂತು ಹೋಂವರ್ಕ್ ,ಪ್ರಾಜೆಕ್ಟ್ ಮಾಡುವುದು ನಾನೇ ಎಂದರೂ ತಪ್ಪಿಲ್ಲ..ಹಾಗಾದರೆ ಯಾಕೆ ಬರಹೇಳಿರಬಹುದು.. ಎಂಬುದು ಅವಳ ತರ್ಕಕ್ಕೆ ನಿಲುಕದ ವಿಷಯವಾಗಿತ್ತು.

       ರಮಾ ಮನೆಕೆಲಸ ಆಗಬೇಕಲ್ಲ ಎಂದು ಒತ್ತಾಯಪೂರ್ವಕವಾಗಿ ಮಾಡಿ ಮುಗಿಸಿದಂತಿತ್ತು.ದಿನವೂ ಮಧ್ಯಾಹ್ನ ಅರ್ಧ ಗಂಟೆ ಬಚ್ಚಲು ಮನೆಯಲ್ಲಿ ಬಿಸಿ ಬಿಸಿ ನೀರಿನಲ್ಲಿ ಮಿಂದು ಬಂದು,  ತನ್ನ ನೆಚ್ಚಿನ ಅಡುಗೆ ಕಾರ್ಯಕ್ರಮ ವೀಕ್ಷಿಸಲೆಂದು ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವುದನ್ನು ಎರಡೇ ನಿಮಿಷದಲ್ಲಿ ಮುಗಿಸುತ್ತಿದ್ದವಳು ಇಂದು ಅರ್ಧ ಗಂಟೆ ಸ್ತೋತ್ರ ಪಠಣ ಮಾಡಿದಳು.ಮಗನ ಬಗ್ಗೆ ಏನು ಮಾತು ಕೇಳಬೇಕಾಗುವುದೋ ಎಂಬ ಯೋಚನೆಯಲ್ಲಿದ್ದ ಆಕೆಗೆ ಸ್ವಲ್ಪ ಸಮಾಧಾನ ಆದಂತಿತ್ತು.ಅಡುಗೆ ಬೆಳಿಗ್ಗೆ ಮಾಡಿಟ್ಟಿದ್ದರೂ ಅದನ್ನು ಬಿಸಿಮಾಡಿಕೊಂಡು ಉಣ್ಣುವ ಆಸಕ್ತಿ ಇಲ್ಲದೇ ಹಾಗೇ ಉಂಡು ಚೂರು ಮಲಗುವ ಪ್ರಯತ್ನ ಮಾಡಿದರೂ ಕಣ್ಣಿಗೆ ನಿದ್ರೆ ಸುಳಿಯಲೇ ಇಲ್ಲ.ಸಮ್ಮನೆ ಕಾಲಹರಣ ಮಾಡುವುದರ ಬದಲು ಹೊರಡೋಣ ಎಂದು ಹೊರಟು ಬಸ್ ಏರಿದಳು.

      ಶಾಲೆ ಬಿಡುವ ಅರ್ಧ ಗಂಟೆ ಮೊದಲೇ ತಲುಪಿದವಳಿಗೆ  ಮಾತಿಗೆ ಮಕ್ಕಳ ಅಮ್ಮಂದಿರು ಸಿಕ್ಕರು.ಹರಟೆ ಸಾಗಿತ್ತು.ನನ್ನ ಮಗಳು ಹಾಗೆ,ನನ್ನ ಮಗ ಹೀಗೆ ಎಂದು ಅವರವರ ಮಕ್ಕಳ ವಿಷಯ ಹಂಚಿಕೊಳ್ಳುತ್ತಿದ್ದಾಗ ರಮಾ ಎಲ್ಲರ ಮಾತಿಗೆ ಕಿವಿಯಾದಳು.ನನ್ನ ಮಗನೂ ಹೀಗೇ ಇರುತ್ತಿದ್ದರೆ ...ಎಂಬ ಆಲೋಚನೆ ಸುಳಿಯದೇ ಇರಲಿಲ್ಲ.

      ಮಕ್ಕಳೆಲ್ಲ ಶಾಲೆಯಿಂದ ಹೊರಬಂದಾಗ ಆಯಾ ಬಂದು "ಶಿಕ್ಷಕರನ್ನು ಸಂಪರ್ಕಿಸಲು ಬಂದವರು ಈಗ ಬನ್ನಿ" ಎಂದಾಗ ರಮಾ ಸೇರಿದಂತೆ ಹಲವರು ಶಾಲೆಯೊಳಗೆ ಪ್ರವೇಶಿಸಿದರು.ನಾನೊಬ್ಬಳೇ ಅಲ್ಲ ನನ್ನಂತೆ ತಳಮಳವನ್ನು ಹೊತ್ತ ಹಲವು ಪೋಷಕರು ಜೊತೆಯಲ್ಲಿ ಇದ್ದಾರೆ ಎಂಬುದು ಸ್ವಲ್ಪ ಸಮಾಧಾನ ತಂದಿತು.

      ಎರಡನೇ ಫ್ಲೋರ್ ,ಕ್ಲಾಸ್ ರೂಂ UKG 'A' ಖಾತರಿಪಡಿಸಿಕೊಡಳು.. ಶಿಕ್ಷಕಿ ಒಬ್ಬ ಪೋಷಕರ ಜೊತೆ ಸಂಭಾಷಣೆ ನಡೆಸುತ್ತಿದ್ದರು.ಮಗ ಪ್ರಣೀತ್ ಮೂರನೇ ಬೆಂಚಿನ ಒಂದು ಬದಿಯಲ್ಲಿ ಕುಳಿತು ಎತ್ತಲೋ ನೋಡುತ್ತಿದ್ದ.ನನಗಿರುವ ಆತಂಕದ ಕಾಲಂಶವೂ ಅವನ ಮುಖದಲ್ಲಿ ಕಾಣಿಸುತ್ತಿಲ್ಲ ಎಂಬುದು ಅವಳ ಅರಿವಿಗೆ ಬಂದಿತು."ಎಕ್ಸ್ಕ್ಯೂಸ್ ಮಿ .".ಎಂಬ ರಮಾಳ ದನಿಗೆ ಎಚ್ಚೆತ್ತ ಶಿಕ್ಷಕಿ.. "ಯೆಸ್..ಕಮಿನ್"..ಎಂದರು.

      "ನಿಮ್ಮನ್ನು ಕರೆಸಿ ಹೇಳಬೇಕೆಂದು ಬಹಳ ದಿನದಿಂದ ಯೋಚಿಸುತ್ತಿದ್ದೆ..ಇವತ್ತು ಇನ್ನು ಸಾಧ್ಯವಿಲ್ಲ ಎಂದಾದಾಗ ಕರೆಸಿದೆ.."

"ಏನು ಮಾಡಿದ ಮೇಡಂ.. ಏನಾದ್ರೂ ಗಲಾಟೆ.."

"ಇಲ್ಲಪ್ಪಾ.. ಗಲಾಟೆ ಮಾಡಲ್ಲ ಅವನು.. ಸಿಕ್ಕಾಪಟ್ಟೆ ಅತ್ತಿಂದಿತ್ತ ಓಡಾಡೋದು..ಒಂದರೆಗಳಿಗೆ ನಿಂತಲ್ಲಿ ನಿಲ್ಲಲ್ಲ..ಕೂತಲ್ಲಿ ಕೂರಲ್ಲ..."

"ಮತ್ತೇನು ಸಮಸ್ಯೆ ಮೇಡಂ..?"

"ನೋಡಿ.. ಇವತ್ತು ನಾನವನ ಬ್ಯಾಗ್ ಚೆಕ್ ಮಾಡಿದೆ.. ನಾಲ್ಕು ಫೆವಿಕಾಲ್ ಗಂ ಬಾಟಲ್ ಸಿಕ್ಕಿದೆ.ನೋಡಿ ..ಇವೇ ನಾಲ್ಕು" ಎನ್ನುತ್ತಾ ಕಪಾಟಿನಿಂದ ತೆಗೆದು ತೋರಿಸಿದರು.

"ಮುಗಿದಿದೆ ..ದೊಡ್ಡದೇ ತನ್ನಿ ಎಂದಿದ್ದ.. ನಿನ್ನ ಅಪ್ಪನಲ್ಲಿ.."

"ಮಕ್ಕಳು ಹೇಳ್ತಾರೆ ಅಂತ ಕೊಡಿಸುವಾಗ ಆಲೋಚನೆ ಮಾಡಬೇಡವಾ ಮೇಡಂ.. ಇಷ್ಟು  ದೊಡ್ಡ ಗಂ ಬಾಟಲ್,ಅದೂ ನಾಲ್ಕು.. ಈ ಪುಟ್ಟ ಮಕ್ಕಳಿಗೆ ಅಗತ್ಯವೇ.. ನೀವು ದಿನಾ ಬ್ಯಾಗ್ ಚೆಕ್ ಮಾಡಬೇಕು.ಇವತ್ತು ಗೆಳೆಯನ ಜೊತೆ ನಿನಗಿಂತ ದೊಡ್ಡ ಗಂ ಬಾಟಲ್ ನನ್ನಲ್ಲಿದೆ ಎಂದು ತೋರಿಸುತ್ತಿದ್ದ.ನಾಳೆ ಅವನು ಅದಕ್ಕಿಂತ ದೊಡ್ಡದನ್ನು ಮನೆಯವರಲ್ಲಿ ಹಠ ಹಿಡಿದು ತರಿಸಿಕೊಳ್ಳುತ್ತಾನೆ..ಹಾಗೇನೇ ಮೂರು ಕಂಪಾಸ್ ಬಾಕ್ಸ್ ಸಿಕ್ಕಿದೆ ನೋಡಿ.."

"ಹೌದಾ ಪ್ರಣೀತ್.."ಎಂದಳು ರಮಾ..

"ಅಮ್ಮ ಅದೂ.."

ನಾಲ್ಕನ್ನು ತೆರೆದಿಟ್ಟರು ಶಿಕ್ಷಕಿ.ಒಂದರಲ್ಲಿತುಂಬಾ ಬಣ್ಣಬಣ್ಣದ ಕಡ್ಡಿಗಳು,ಇನ್ನೊಂದರಲ್ಲಿ ಪೆನ್ಸಿಲ್ ಸ್ಕೇಲ್ ಇರೇಸರ್ ಕೆಲವು ತರದ್ದು,ಮತ್ತೊಂದರಲ್ಲಿ ತುಂಬಿ ತುಳುಕುತ್ತಿರುವ ಕ್ರೇಯಾನ್ಸ್  ,ನಾಲ್ಕನೇಯದರಲ್ಲಿ ಪುಟ್ಟ ಡಸ್ಟರ್, ಪೆನ್ಸಿಲ್ ಮೊನೆ ಚೂಪುಮಾಡಿದ ಕಸ ..ಹೀಗೆ ಇನ್ನೇನೋ ತುಂಬಿದ್ದವು.

"ನಮ್ಮ ಶಾಲೆಯ ಶಿಸ್ತಿನ ನಿಯಮದ ಪ್ರಕಾರ ಇಷ್ಟೊಂದು ಕಂಪಾಸ್ ಬಾಕ್ಸ್,ಗಂ ಬಾಟಲ್ ತಂದು ಇತರ ಮಕ್ಕಳೆದುರು ಪ್ರದರ್ಶಿಸುವಂತಿಲ್ಲ .. ನಾಳೆಯಿಂದ ದಿನವೂ ಪರಿಶೀಲಿಸಿ ಕಳುಹಿಸುವ ಜವಾಬ್ದಾರಿ ನಿಮ್ಮದು.ಹಾಗೇ ಇನ್ನೊಂದು ವಿಷಯ.."

"..ಹೇಳಿ ಮೇಡಂ.."

"ನಿಮ್ಮ ಮಗ ಬೇಕೆಂದೇ ನೋಟ್ಸ್ ಪೇಪರ್ ಕಿತ್ತು ಅದಕ್ಕೆ ಫೆವಿಕಾಲ್ ಗಂ ಸವರಿ ವಾಸನೆ ಮೂಸುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಇದು ಒಂದು ತರಹದ  ಎಡಿಕ್ಷನ್.. ಆದಷ್ಟು ಫೆವಿಕಾಲ್ ಗಂ ನಿಂದ ಮಗುವನ್ನು ದೂರವಿಡಿ. ಈ ಪುಟ್ಟ ಮಕ್ಕಳಿಗೆ ಸಾಮಾನ್ಯ ಗಂ ಸಾಕಾಗುತ್ತದೆ ."

"ಸರಿ ಮೇಡಂ..ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು.."

"ಇನ್ನು ಒಂದು ವಿಷಯ ..ಅಕ್ಷರ ಸ್ವಲ್ಪವೂ ಅಚ್ಚುಕಟ್ಟಾಗಿ ಬರೆಯುತ್ತಿಲ್ಲ.. ಮನೆಯಲ್ಲಿ ಕಾಪಿ ಬರೆಸಿ...T-ಫಾರ್ ಟಾಯ್, J-ಫಾರ್ ಜೋಕರ್ ಎಂಬುದರ ಬದಲು T-ಫಾರ್ ಟಾಮ್ J-ಫಾರ್ ಜೆರ್ರಿ B- ಫಾರ್ ಭೀಮ್ ಅನ್ನುತ್ತಾನೆ.ಸ್ವಲ್ಪ ಕಾರ್ಟೂನ್ ನೋಡುವ ಅಭ್ಯಾಸವನ್ನು ಕಡಿಮೆ ಮಾಡಿಸಿ.ಲಂಚ್ ಬಾಕ್ಸ್ ಗೆ ನೀವು ಕೊಟ್ಟದ್ದನ್ನು ಒಂದು ದಿನವೂ ಪೂರ್ತಿ ಉಂಡಿಲ್ಲ.. ಲಂಚ್ ಅವರ್ ಮುಗಿದು ಬೆಲ್ ಆದರೂ ಅವನ ಊಟ ಮುಗಿಯುವುದಿಲ್ಲ..ಮನೆಯಲ್ಲಿ ಅವನೇ ಊಟ ಮಾಡುವ ಅಭ್ಯಾಸ ಬೆಳೆಸಿ."

"ಆಗಲಿ ಮೇಡಂ.. ಇಂದಿನಿಂದಲೇ ಅವನಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ..." ಎಂದು ಹೇಳಿ ಪ್ರಣೀತ್'ನನ್ನು ಕರೆದುಕೊಂಡು ಮನೆಗೆ ಹೊರಟಳು.ದಾರಿಯುದ್ದಕ್ಕೂ ಪ್ರಣೀತ್ ಗೆ ಅಮ್ಮನ ಬೈಗುಳ ,ಎಚ್ಚರಿಕೆ ಸಾಗುತ್ತಿತ್ತು.ಒಬ್ಬನೇ ಮಗನೆಂದು ತಾನು ಮಮಕಾರ ತೋರುತ್ತಿದ್ದರೂ ಅಷ್ಟೇ ಅವನನ್ನು ತಿದ್ದುತ್ತಲೂ ಇದ್ದೆ.ಆದರೂ ಹೀಗೇಕಾದ..? ಎಂಬುದೇ ಅವಳಿಗೆ ಚಿಂತೆಯಾಗಿತ್ತು.

     ರಾತ್ರಿ ಮನೆಗೆ ಪರಮೇಶ್ವರ್ ಬಂದಾಗ ಮಡದಿಯ ಮುಖ ಬಾಡಿಕೊಂಡದ್ದುದನ್ನು ಗಮನಿಸಿದ.ಮಗ ಅಮ್ಮನ ಬಳಿ ಏನೋ ಪಿಸಿಪಿಸಿ ಹೇಳುತ್ತಿದ್ದುದನ್ನೂ ಕೇಳಿಸಿಕೊಂಡ."ಅಮ್ಮ .. ಅಪ್ಪನಲ್ಲಿ ಹೇಳ್ಬೇಡ ಪ್ಲೀಸ್ ..ನಾಳೆಯಿಂದ ಗುಡ್ ಬಾಯ್ ಆಗುತ್ತೇನೆ.."ಎಂಬುದು ಎಲ್ಲ ಮಕ್ಕಳ ಬೇಡಿಕೆಯಂತೆ ಪ್ರಣೀತ್'ನ ಕೋರಿಕೆಯೂ ಆಗಿತ್ತು.

      ಪ್ರಣೀತ್ ಮಲಗಿ ನಿದ್ರಿಸಿದ್ದನ್ನು ಖಾತರಿಪಡಿಸಿಕೊಂಡ ರಮಾ ಗಂಡನ ಬಳಿ ವಿಷಯ ಪ್ರಸ್ತಾಪಿಸಿದಳು."ಮಗನ ವರ್ತನೆಯಿಂದ ಬಹಳವೇ ಸಂಕಟವಾಗುತ್ತಿದೆ.."
"ಅಲ್ವೇ ರಮಾ.. ಅದರಲ್ಲಿ ಸಂಕಟಪಡುವಂತಹದ್ದೇನಿದೆ.. ಎಲ್ಲರಿಗಿಂತ ಚೆನ್ನಾಗಿರುವ ದೊಡ್ಡದಾಗಿರುವ ಗಂ ಬಾಟಲ್ ತನ್ನಲ್ಲಿರಬೇಕೆಂದು,ಬಣ್ಣಬಣ್ಣದ ಕಂಪಾಸ್ ಬಾಕ್ಸ್ ಬೇಕೆಂದು ಎಲ್ಲರ ಆಸೆಯೂ ಆಗಿರುತ್ತದೆ.ಚಿಕ್ಕವನಿಗಿದ್ದಾಗ ನಾನೂ  ಹೀಗೆಲ್ಲ ಆಸೆಪಟ್ಟಿದ್ದೆ. ಅವನಾಸೆಗೆ  ಹಿಂದು ಮುಂದು ನೋಡದೆ ನಾನು ಪ್ರೋತ್ಸಾಹಿಸಿದ ಕಾರಣ ಸಿಕ್ಕಿಬಿದ್ದ.. ಇನ್ನು ಜಾಗ್ರತೆಯಿಂದ ವರ್ತಿಸಿದರಾಯಿತು."

"ಅಲ್ಲ ರೀ ..ಹೇಳಿಕೊಟ್ಟದ್ದನ್ನಾದ್ರೂ ಸರಿ ಹೇಳಬಾರದಾ ಇವನಿಗೆ...ನನಗಂತೂ ಶಿಕ್ಷಕಿಯ ಮಾತಿನಿಂದ.." ಮಡದಿಯ ಮಾತನ್ನು ಅರ್ಧದಲ್ಲೇ ತುಂಡರಿಸಿದ ಪರಮೇಶ್ವರ್
"ರಮಾ..ಗಿಣಿ ಬಾಯಿಪಾಠ ಒಪ್ಪಿಸಿದಂತೆ ಎ ಫಾರ್ ಆಪಲ್ ,ಬಿ ಫಾರ್ ಬನಾನಾ, ಸಿ ಫಾರ್ ಕ್ಯಾಟ್ ಅಂದರೆ ಏನೂ ವಿಶೇಷ ಇಲ್ಲ ಕಣೇ.. ಅದಕ್ಕಿಂತ ವಿಭಿನ್ನವಾಗಿ ತಾನೇ ಯೋಚಿಸಿ ಟಿ ಫಾರ್ ಟಾಮ್ ಅಂದಾಗ ನೀನು ಖುಷಿ ಪಡಬೇಕು ..ಅದು ಮಕ್ಕಳಲ್ಲಿರುವ ಸೃಜನಶೀಲತೆ...ತಾನು ದಿನನಿತ್ಯ ಕಾಣುವ ಕೇಳುವ ಹೆಸರುಗಳಲ್ಲೇ ಇಂಗ್ಲಿಷ್ ಅಕ್ಷರಗಳನ್ನು ಹುಡುಕುವುದು ಜಾಣತನವೇ ಹೊರತು ದಡ್ಡತನವಲ್ಲ... ಎನ್ನುತ್ತಾ ಮಡದಿಯ ಹೆಗಲ ಮೇಲೆ ಕೈಯಿಟ್ಟು ತೋಳಲ್ಲಿ ಬಳಸಿದ."ನನ್ನ ಹೀಗೇ ಯೋಚಿಸುವ ಗುಣದಿಂದಾಗಿಯೇ ಇಂದು ಸಂಶೋಧನೆಗಳನ್ನು ಕೈಗೊಳ್ಳಲು  ಸಾಧ್ಯವಾದುದು.ಒಳ್ಳೆಯ ಉದ್ಯೋಗದಲ್ಲಿ ಇದ್ದುದರಿಂದಲೇ ಈ ಅರಗಿಣಿಯನ್ನು ನನ್ನ ಮಾವ ನನಗೆ ಕನ್ಯಾದಾನ ಮಾಡಿರುವುದು" ಎನ್ನುತ್ತಾ  ಹಣೆಗೆ ಮುತ್ತಿಟ್ಟಾಗ ಅವನ ಬೆಚ್ಚನೆಯ ಸ್ಪರ್ಶದಲ್ಲಿ ಅವಳ ದುಗುಡ ಮಂಜಿನಂತೆ ಕರಗಿತು.ಮನವು ಗೆಲುವಾಯಿತು.

✍️... ಅನಿತಾ ಜಿ.ಕೆ.ಭಟ್.
18-08-2020.

ಚಿತ್ರ ಕೃಪೆ :ಅಂತರ್ಜಾಲ.

ಸೌಹಾರ್ದ ಬಳಗ-ಕಥೆ ಕಥೆ ತೋರಣ -ದತ್ತಸಾಲು-ಅವನ ಬೆಚ್ಚನೆಯ ಸ್ಪರ್ಶದಲ್ಲಿ ಅವಳ ದುಗುಡ ಮಂಜಿನಂತೆ ಕರಗಿ ನೀರಾಯಿತು-ಮೆಚ್ಚುಗೆ ಪಡೆದ ಕಥೆ..