Tuesday, 30 August 2022

ಜೋ ಜೋ ಗಣಪ




ಜೋಜೋ ಗಣಪ ಜೋಜೋ ಬೆನಕ

ಜೋಜೋ ಗೌರೀಸುತ ಜೋಜೋ ಸುಮುಖ||ಪ||

ಚೌತಿಯು ಬಂದಿದೆ ಸಂಭ್ರಮ ತುಂಬಿದೆ
ನಾಳೆಯ ದಿನ ಭೂಲೋಕದಲಿ
ಹೊರಡುವ ಮೊದಲೇ ಕಣ್ಣತುಂಬಾ ನಿದ್ದೆಯ ಮಾಡು ಚಂದದಲಿ||೧||

ದೂರದ ದಾರಿ ಪುಟ್ಟದು ವಾಹನ
ಕಷ್ಟವು ಡೊಳ್ಹೊಟ್ಟೆ ಸವಾರಿ
ಭಕ್ತರನೆಲ್ಲ ಅನುಗ್ರಹಿಸುವ ನೆಪದಲಿ
ಬೇಗನೆ ಮಲಗು ಚಿನ್ನಾರಿ||೨||

ಬಾಲಗಣಪನ ಲೀಲೆಯ ಮೆಚ್ಚುತ
ಶಿವೆಯು ಲಾಲಿಯ ಹಾಡಿಹಳು
ತಪ್ಪಿಗೆ ಮರುಗಿದ ಹರನೂ ಕೂಡಾ
ಸುತನನು ಹರಸಿಹನು||೩||

ಉಮಾಶಿವರೀರ್ವರ ಕರಗಳೆ ತೊಟ್ಟಿಲು
ಪುಟ್ಟ ಗಜಾನನ ವಿನಾಯಕಗೆ
ಮೂಷಿಕವಾಹನ ಕಾಯುತಲಿಹನು
ಭೂಲೋಕದ ಸವಾರಿಗೆ||೪||

ಉಂಡೆಚಕ್ಕುಲಿ ಮೋದಕ ಕಡುಬು
ಪಂಚಕಜ್ಜಾಯ ಲಾಡು
ಮಾಡುತಲಿಹರು ಕಾಯುತ ನಿನ್ನ
ಸುಖನಿದ್ದೆಯನು ಮಾಡು||೫||

ನಾಳೆಯ ದಿನವು ಬೇಗನೇ ಎದ್ದು
ಭಕುತರ ಹರಸಪ್ಪಾ
ಇಳೆಯೊಳು ಸಕಲರು ಸೌಖ್ಯದಲಿರಲು
ವಿಘ್ನಗಳೆಲ್ಲವ ಕಳೆಯಪ್ಪಾ||೬||

ಜೋಜೋ ಗಣಪ ಜೋಜೋ ಬೆನಕ
ಜೋಜೋ ಗೌರೀಸುತ ಜೋಜೋ ಸುಮುಖ||

✍️... ಅನಿತಾ ಜಿ.ಕೆ.ಭಟ್
30-08-2022.

ನಮಿಪೆ ಗೌರಿ





#ನಮಿಪೆ ಗೌರಿ

ನಮಿಪೆನು ಗೌರಿ ಹರನ ಸಿಂಗಾರಿ
ಸುಮನಸೆ ಶಂಕರಿ ಗಿರಿಜೆ ಮನೋಹರಿ||ಪ||

ಸಕಲಾಭರಣೆ ಚಂದಿರವದನಳ
ಕಲಶಕನ್ನಡಿ ಪಿಡಿದು ಎದುರುಗೊಳ್ಳುತ||೧||

ಪರಾಶಕ್ತಿರೂಪಿಣಿ ರಜತಗಿರಿವಾಸಳ
ಮಂಗಳದ್ರವ್ಯಗಳಿಂದ ಅಲಂಕರಿಸುತ||೨||

ಮಂದಹಾಸಿನಿ ಮಂಗಳಮಯಳ
ಸಿಂಧೂರ ಸುಮಗಳಿಂದ ಅರ್ಚಿಸುತ||೩||

ಇಂದುಧರನರಸಿ ನಿತ್ಯಸಂತುಷ್ಟೆಯ
ಫಲತಾಂಬೂಲ ನೈವೇದ್ಯಗಳ ಅರ್ಪಿಸುತ||೪||

ಜಯ ಸಿರಿಗೌರಿ ಜಯ ಸ್ವರ್ಣಗೌರಿ
ಒಳಿತನುಬೇಡುವೆ ಮಂಗಳಾರತಿ ಬೆಳಗುತ||೫||

✍️... ಅನಿತಾ ಜಿ.ಕೆ. ಭಟ್
30-08-2022.
#ಗೌರಿಹಬ್ಬದ ಹಾರ್ದಿಕ ಶುಭಾಶಯಗಳು. 💐
#ದೈನಿಕವಿಷಯ- ತಾಯಿ ಸಿರಿಗೌರಿ



Friday, 13 May 2022

ಹರಿದ ಪ್ಯಾಂಟ್- ಫ್ಯಾಷನ್ ಮತ್ತು ಅನಿರೀಕ್ಷಿತ ಬೆಳವಣಿಗೆ



       ಕೆಲವು ವಿಚಾರಗಳು ಮನದೊಳಗೆ ಸದಾ ಚಿಂತನ- ಮಂಥನವನ್ನು ಹುಟ್ಟು ಹಾಕುತ್ತಲೇ ಇರುತ್ತವೆ. ನಿರ್ದಿಷ್ಟವಾದ ಉತ್ತರವನ್ನು ಹುಡುಕುವಲ್ಲಿ ಸಫಲರಾಗುವುದಿಲ್ಲ, ಅಥವಾ ದೊರೆತ ಉತ್ತರದಿಂದ ತೃಪ್ತರಾಗುವುದಿಲ್ಲ. ಇಂದು ಮಕ್ಕಳ ಬಟ್ಟೆಗಳನ್ನಿಡುವ ವಾರ್ಡ್‌ರೋಬ್ ಶುಚಿಗೊಳಿಸುವಾಗ ಕಂಡ ಬಟ್ಟೆಯೊಂದು ನೆನಪಿನ ಎಳೆಯೊಂದನ್ನು ಬಿಚ್ಚಿಟ್ಟಿದೆ. ಮುಂದಿನ ಶೈಕ್ಷಣಿಕ ವರ್ಷದ ಯೂನಿಫಾರಂ ಬಟ್ಟೆಗಳನ್ನು ಜೋಡಿಸಲು ಹಳೆಯ ಬಟ್ಟೆಗಳ ವಿಲೇವಾರಿ ಆಗಲೇಬೇಕು. ಮುಂದಿನ ವರ್ಷ ಉಪಯೋಗ ಆಗಬಲ್ಲ ಮತ್ತು ಆಗದಂತಹ ಬಟ್ಟೆಗಳ ವಿಂಗಡನೆ ಮಾಡಿ,  ಸಮರ್ಪಕವಾದ ಜಾಗದಲ್ಲಿ ಮರುಜೋಡಿಸಬೇಕು. ಇಂತಹ ಸಂದರ್ಭದಲ್ಲಿ ನನಗೆ ಕಂಡಿದ್ದೇ ಆ ಹರಿದ ಪ್ಯಾಂಟ್.

    ಒಂದು ದಿನ ಸಂಜೆ ದೊಡ್ಡ ಮಗ ಮನೆಗೆ ಬರುವಾಗ ದೂರದಿಂದಲೇ ಗಮನಿಸುತ್ತಿದ್ದೆ. ಟವೆಲ್ ನಿಂದ ತೊಡೆಯ ಭಾಗ ಮುಚ್ಚಿಕೊಂಡು ಬರುತ್ತಿರುವಂತೆ ತೋರಿತು. ಸುಮ್ಮನೇ ಟವೆಲ್ ಕೈಯಲ್ಲಿ ಹಿಡಿದು ಏನೋ ಆಟವಾಡುತ್ತಾ  ಬರುವುದು ಆಗಿರಬಹುದೆಂದು ಭಾವಿಸಿದೆ. ಗೇಟ್ ತೆಗೆದು ಒಳಬರುತ್ತಿದ್ದಂತೆ ನಿಜವಾಗಿಯೂ ಮುಚ್ಚಿಕೊಂಡು ಬರುತ್ತಿರುವುದು ಎಂದರಿವಾಗಿ ಕುತೂಹಲ ಹೆಚ್ಚಾಯಿತು. ಬಂದವನೇ ಜಗಲಿಯಲ್ಲಿ ಪೆಚ್ಚಾಗಿ ಕುಳಿತು, "ಅಮ್ಮಾ ನನ್ನ ಪ್ಯಾಂಟ್ ಹರಿದಿದೆ.." ಅಂದ. "ಈ ವರ್ಷ ಹೊಲಿಸಿದ ಪ್ಯಾಂಟ್.. ಇಷ್ಟು ಬೇಗ ಹರಿಯುವುದಾದರೂ ಹೇಗೆ..?"ಎಂದು ನಾನೂ ಆಶ್ಚರ್ಯದಿಂದಲೇ ಕೇಳಿದೆ. ಸಣ್ಣಮಗ,  "ಅದಕ್ಕೆ ನಿಂಗೆ ನಾಚಿಕೆಯಾಯಿತಾ... ಮುಚ್ಚಿಕೊಂಡು ಬಂದಿರುವುದು ಕಂಡಿತು" ಎಂದು ರೇಗಿಸಲಾರಂಭಿಸಿದ. "ತೊಡೆಯ ಭಾಗ ಸುಮಾರು ಮೂರೂವರೆ ಇಂಚಿನಷ್ಟು ಹರಿದು ಬಲು ಮುಜುಗರವಾಯಿತು. ಸೇಫ್ಟಿ ಪಿನ್ ಇರಲೂ ಇಲ್ಲ.." ಎಂದು ಅಲವತ್ತುಕೊಂಡ. ತಕ್ಷಣವೇ.. ಸಣ್ಣ ಮಗ "ಹರಿದ ಪ್ಯಾಂಟ್ ಈಗ ಫ್ಯಾಷನ್..! ನಿಂಗೆ ಗೊತ್ತಿಲ್ವಾ..? ಹರಿದ ಪ್ಯಾಂಟ್ ಹಾಕಿಕೊಂಡು ಸ್ಟೈಲಾಗಿ ಎದೆಯೆತ್ತಿ ನಡೆಯಬೇಕು" ಎಂದು ಕ್ಯಾಟ್ ವಾಕ್ ಮಾಡಿ ತೋರಿಸಿದಾಗ,  ನನಗೆ ನಗೆ ಬಂದರೂ ತೋರಿಸುವಂತಿರಲಿಲ್ಲ. ನಕ್ಕರೆ ದೊಡ್ಡವನಿಗೆ ಮತ್ತಷ್ಟು ಬೇಸರವಾದೀತೆಂದು ಗಂಭೀರವಾಗಿಯೇ ಇದ್ದೆ.

       ಸಣ್ಣವನ ಮಾತೂ ನಿಜ. ಇಂದಿನ ಯುವಜನತೆ ಫ್ಯಾಷನ್ ಹೆಸರಿನಲ್ಲಿ ಹರಿದ ಜೀನ್ಸ್ ಪ್ಯಾಂಟ್ ಧರಿಸುವುದು ಸಾಮಾನ್ಯ. ಹಳೆಯ ಜೀನ್ಸ್ ಪ್ಯಾಂಟ್ ಗಳನ್ನು ಅವರವರ ಸ್ಟೈಲ್ ಸ್ಟೇಟ್‌ಮೆಂಟ್ ಗೆ ತಕ್ಕಂತೆ ಕತ್ತರಿಸಿ ತೊಟ್ಟು, ಸ್ವಲ್ಪವೂ ಮುಜುಗರ, ನಾಚಿಕೆ ಪಡದೆ ಓಡಾಡಿದರೆ ಇಂದು ಬೋಲ್ಡ್, ಧೈರ್ಯ ಶಾಲಿ ಎಂದೇ ಲೆಕ್ಕ. ರಿಪ್ಡ್ ಜೀನ್ಸ್ ಎಂಬ ಹೆಸರಿನಿಂದ ಕರೆಯಲ್ಪಡುವ ಇಂತಹಾ ಉಡುಗೆಗಳನ್ನು ತೊಡುವವರಿಗೆ ಆತ್ಮವಿಶ್ವಾಸ ಹೆಚ್ಚು ಎಂದು ಯುವಜನತೆಯ ಅಭಿಪ್ರಾಯ. ಸುತ್ತುಮುತ್ತಲಿನ ಜನರ ಗಮನಸೆಳೆಯುವ ಇಂತಹ ಉಡುಪುಗಳನ್ನು ಧರಿಸಿದವರು, ಯಾರು ನೋಡಲಿ ಬಿಡಲಿ ನನಗೇನು? ನಾನು, ನನ್ನಿಷ್ಟ, ನನ್ನಿಚ್ಛೆಯಂತಹ ಬಟ್ಟೆ ತೊಡುವ ಸ್ವಾತಂತ್ರ್ಯ ನನಗಿದೆ ಎಂದು ನಿರ್ಭಿಡೆಯಿಂದ ಹೆಜ್ಜೆ ಹಾಕುತ್ತಾರೆ. ಕೈಯಲ್ಲೊಂದು ಮೊಬೈಲ್ ಹಿಡಿದು ಸುತ್ತಲಿನವರ ನೋಟಕ್ಕೆ ಗಮನ ಕೊಡುವ ಗೋಜಿಗೇ ಹೋಗುವುದಿಲ್ಲ.

      ಮೊದಲೆಲ್ಲಾ ಮೈ ಮುಚ್ಚುವಂತಹ ಬಟ್ಟೆ, ಹೊಸ ಬಟ್ಟೆ  ಧರಿಸಿದರೆ ಸಿರಿವಂತರು ಎಂದು ಲೆಕ್ಕ. ಈಗ ಹಳೆಯ ಪ್ಯಾಂಟ್‌ನ್ನು ಹರಿದು  ಅಥವಾ ಅಲ್ಲಲ್ಲಿ ಹರಿಯಲ್ಪಟ್ಟ ಡಿಸೈನ್ ನ ಪ್ಯಾಂಟ್ ಖರೀದಿಸಿ, ಅದನ್ನು ತೊಟ್ಟು ಅರೆಬರೆ ಮೈ ಪ್ರದರ್ಶನ ಮಾಡಿದರೆ ಅದು ಸಿರಿವಂತಿಕೆಯ ದ್ಯೋತಕ. ಯುವಜನತೆಯ ಟ್ರೆಂಡ್ ಫ್ಯಾಷನ್ ಇದು. ತಪ್ಪೆಂದೇ ಹೇಳಲೂ ಸಾಧ್ಯವಿಲ್ಲ. ನೋಡುವವರ ದೃಷ್ಟಿಕೋನ ಸರಿಯಿದ್ದರೆ ಯಾವುದೇ ತಾಪತ್ರಯಗಳು ಇರಲಾರವು.

      ಆದರೆ ಫ್ಯಾಷನ್ ಎಂದು ಧರಿಸಿಕೊಂಡಾಗ ಸಮಾಜವನ್ನು ಎದುರಿಸುವುದಕ್ಕೂ, ಮೈ ಮುಚ್ಚುವಂತೆ ಬಟ್ಟೆ ತೊಡಬೇಕೆಂದು ಬಯಸುವವರ ಪ್ಯಾಂಟ್ ಅಕಸ್ಮಾತ್ ಹರಿದಾಗ, ಅದೇ ಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆಯ ಮೂಲಕ ಮನೆಗೆ ತಲುಪಬೇಕಾದಾಗ ಆಗುವ ಸಂಕೋಚಕ್ಕೂ ವ್ಯತ್ಯಾಸವಿದೆ. ಮಗನಿಗೆ ಎದುರಾದದ್ದು ಎರಡನೆಯ ಪರಿಸ್ಥಿತಿ.

     ಶಾಲೆಯಲ್ಲಿ ಗಮನವಿಟ್ಟು ಪಾಠ ಕೇಳುವವರೊಂದಿಗೆ, ಪಾಠ ಕೇಳಲು ಇಷ್ಟವಿಲ್ಲದೆ, ಕೇಳಿಸಿಕೊಳ್ಳುತ್ತಿರುವಂತೆ ನಟಿಸಿ, ಕೈಯಲ್ಲಿ ಬೇರೆಯೇ ಕೆಲಸ ಮಾಡುವವರಿರುತ್ತಾರೆ. ಆಗ ತರಗತಿ ನಡೆಯುತ್ತಿತ್ತು. ತರಗತಿಯಲ್ಲಿ ಸುಮ್ಮನೆ ಕುಳಿತು ಕೇಳಲು ಬೋರು ಬೋರು.. ಎನ್ನುವ ತಂಟೆ ಹುಡುಗನೊಬ್ಬ ಪಕ್ಕವೇ ಕುಳಿತಿದ್ದ. ಕ್ರಾಫ್ಟ್  ಮಾಡಲೆಂದು ಕಟ್ ಬ್ಲೇಡ್ ಶಾಲೆಗೆ ತಂದಿದ್ದ. ಅದನ್ನು ಕೈಯಲ್ಲಿ ಹಿಡಿದು ಡೆಸ್ಕಿನೊಳಗೆ ಅಲ್ಲಿ ಇಲ್ಲಿ ಕೊಯ್ಯುತ್ತಿದ್ದ. ಒಂದೆರಡು ಬಾರಿ ತನ್ನದೇ ಪ್ಯಾಂಟಿಗೆ ತೊಡೆಯ ಭಾಗಕ್ಕೆ ಗೀರಿದ. ಏನೂ ಆಗಲಿಲ್ಲ. ಏನೂ ಆಗುವುದಿಲ್ಲ ನೋಡು ಎಂದು ಪಾಠ ಕೇಳುತ್ತಿದ್ದವನ ಗಮನ ಸೆಳೆದು, ಬೇಡಬೇಡವೆಂದು ಪಿಸುಗುಟ್ಟಿದರೂ ಕೇಳದೆ ಗೀರಿದ. ಪ್ಯಾಂಟ್ ಹರಿಯಿತು..!! ಅಷ್ಟೇ ಆಗಿದ್ದು.. ದೇವರ ದಯೆಯಿಂದ ಚರ್ಮ ಹರಿಯಲಿಲ್ಲ. ಆಮೇಲೆ ನಿನ್ನ ಪ್ಯಾಂಟ್ ಮೆಟೀರಿಯಲ್ ಒಳ್ಳೆಯದಿರಲಿಲ್ಲ ಎಂಬ ಸಮಜಾಯಿಷಿ..!
ಇತ್ತ ಅಧ್ಯಾಪಕರಲ್ಲೂ ಹೇಳಲಾಗದೆ, ಹಾಗೆಯೂ ಇರಲಾಗದೇ ಟವೆಲ್ ಮುಚ್ಚಿಕೊಂಡು ಆಟದ ಅವಧಿಯಲ್ಲಿ ಆಟವಾಡಲೂ ಆಗದೇ ಚಡಪಡಿಸಿದ.  ಸಹಪಾಠಿ ಹುಡುಗಿಯರ ಬಳಿ ಸೇಫ್ಟಿ ಪಿನ್ ಕೇಳಬಹುದಿತ್ತಲ್ಲಾ.. ಎಂದರೆ ಅದಕ್ಕೂ ಸಂಕೋಚವೆಂಬ ಅಡ್ಡಗೋಡೆ. ಅಂತೂ ಟವೆಲ್ ಮುಚ್ಚಿಕೊಂಡು ಮನೆಗೆ ತಲುಪಿದ.

     ಫ್ಯಾಷನ್ ಸ್ಟೇಟ್ ‌ಮೆಂಟ್‌ಗೆ ಒಡ್ಡಿಕೊಂಡು ಹರಿದ ಪ್ಯಾಂಟನ್ನು ಆಯ್ದು ಧರಿಸುವುದಕ್ಕೆ ಮನಸ್ಸು ಮೊದಲೇ ಸಿದ್ಧಗೊಂಡಿರುತ್ತದೆ. ಅನಿರೀಕ್ಷಿತವಾಗಿ ಹರಿದು ಹೋಗುವಾಗ  ಕಸಿವಿಸಿಯ ಅನುಭವ. ಸಾಮಾಜಿಕ ಶಿಸ್ತಿಗೆ ಅನುಗುಣವಾಗಿ ನಮ್ಮ ಉಡುಗೆ ತೊಡುಗೆ ಇರಬೇಕೆಂದು ಬಯಸುವವರು, ಎಳವೆಯಿಂದಲೇ ಫ್ಯಾಷನನ್ನು ಸ್ವಲ್ಪ ಪಕ್ಕಕ್ಕಿಟ್ಟು ಗೌರವಯುತವಾದ ಉಡುಪುಗಳನ್ನು ಧರಿಸುವ ಅಭ್ಯಾಸದಲ್ಲೇ ಬೆಳೆದು ಬಂದವರಿಗೆ ಇಂತಹಾ ಸಂದರ್ಭದಲ್ಲಿ ಮುಜುಗರವಾಗುವುದು ಸಹಜ. ಯಾರೇನೇ ಅನ್ನಲಿ, ತಮಾಷೆ ಮಾಡಲಿ ನಾನು ಎದೆಯೆತ್ತಿ ನಡೆಯುತ್ತೇನೆ ಎಂಬ ಸ್ಪಷ್ಟ ನಿಲುವಿನ ನಿರ್ಭಿಡೆಯ ವ್ಯಕ್ತಿತ್ವವನ್ನು ರೂಢಿಸಿಕೊಳ್ಳುವುದು ಅಷ್ಟೇನೂ ಸುಲಭವಲ್ಲ.

     ಈ ಘಟನೆಯಿಂದಾಗಿ ನಾನು ಇಬ್ಬರು ಮಕ್ಕಳ ಬ್ಯಾಗಿನಲ್ಲೂ ಸೇಫ್ಟಿ ಪಿನ್ ಇರಿಸುವ ಅಭ್ಯಾಸ ರೂಢಿಸಿಬಿಟ್ಟಿದ್ದೇನೆ. ಅನಿವಾರ್ಯತೆ ಎದುರಾದಾಗ ಉಪಯೋಗಕ್ಕಿರಲಿ ಎಂದು. ಸಣ್ಣ ಮಗ ಒಮ್ಮೆ ಕುಳಿತಲ್ಲಿಂದ ಏಳುವಾಗ ಡೆಸ್ಕ್ ನ ಆಣಿ (ನೈಲ್)ಸಿಕ್ಕಿ ಅಂಗಿ ಹರಿದಾಗ, ಸೇಫ್ಟಿ ಪಿನ್ ಹಾಕಿ ಸಂಕೋಚವಿಲ್ಲದೆ ಮನೆ ತಲುಪಿದ್ದ.

     ನಮ್ಮ ಬಾಲ್ಯದ ದಿನಗಳಲ್ಲಿ ಮನೆಯ ಹತ್ತಿರದಲ್ಲೇ ಇರುವ ಶಾಲೆಗಳಿಗೆ ಹೋಗುವ ಕ್ರಮವಿದ್ದುದು. ಹಳ್ಳಿಯ ಗದ್ದೆಯ ಬದು, ಗುಡ್ಡದ ದಾರಿಯಲ್ಲಿ ನಡೆದೇ ಹೋಗುವ ಸಂದರ್ಭದಲ್ಲಿ ಉಡುಗೆ ಹರಿದರೆ ಗಮನಿಸುವವರು ಯಾರೂ ಇರಲಿಲ್ಲ. ಆದರೆ ಈಗ ಹಾಗಲ್ಲ.. ದೂರದ ಶಾಲೆಗಳಿಗೆ ಹೋಗುವ ಮಕ್ಕಳು. ಶಾಲಾವಾಹನಗಳು ಮನೆಯ ಸಮೀಪದ ವರೆಗೆ ಬಂದರೆ ಅನುಕೂಲ. ಇಲ್ಲವೆಂದರೆ ಹತ್ತಾರು ಜನರ ನಡುವೆ ಸಾಗಬೇಕು. ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ ವಿದ್ಯಾರ್ಥಿಗಳಿಗೆ ಇಂತಹಾ ಸನ್ನಿವೇಶಗಳು ಬಹಳ ಪೇಚಾಟಕ್ಕೆ ಸಿಲುಕಿಸಬಲ್ಲವು. ಆದ್ದರಿಂದ ಮಾಸ್ಕ್, ಟವೆಲ್‌ನಂತೆ ಸೇಫ್ಟಿ ಪಿನ್‌ಗಳೂ ಸಹಾ ವಿದ್ಯಾರ್ಥಿಗಳ ಶಾಲಾ ಬ್ಯಾಗಿನಲ್ಲಿದ್ದರೆ ಉಪಯೋಗ ಆಗಬಲ್ಲದು.

     ಹರಿದ, ಹಳೆಯ ಪ್ಯಾಂಟುಗಳು, ಅಂಗಿಗಳು ತಮ್ಮ ಡ್ಯೂಟಿ ಮುಗಿಸಿ, ಗೋಣಿ ಚೀಲದೊಳಗೆ ಸೇರಿಕೊಂಡವು. ಹ್ಯಾಂಗರುಗಳು ಹೊಸ ಯೂನಿಫಾರಂಗಾಗಿ ಕಾಯುತ್ತಾ ಕುಳಿತಿವೆ.

✍️... ಅನಿತಾ ಜಿ.ಕೆ.ಭಟ್.
18-04-2022.
#ಪ್ರತಿಲಿಪಿ ಕನ್ನಡದ "ಡೈರಿ- 2022" ಏಪ್ರಿಲ್ ತಿಂಗಳ ಸ್ಪರ್ಧಾ ಬರಹ.

#ಈ ಡೈರಿಯ ಪುಟವನ್ನು ಪ್ರಥಮ ಬಹುಮಾನಕ್ಕೆ ಪರಿಗಣಿಸಿದ ಪ್ರತಿಲಿಪಿ ಕನ್ನಡದ ನಿರ್ವಾಹಕರಿಗೆ ಹಾಗೂ ನಿರ್ಣಾಯಕರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏






Sunday, 27 March 2022

ಗಾಂಧಾರಿ ಮೆಣಸು

 




#ಗಾಂಧಾರಿ ಮೆಣಸು

ತರತರದ ಮೆಣಸುಗಳ ಮೆಚ್ಚುತಲಿ
ಸವಿಯುತಲಿ ನನ್ನನೆಂದೂ ಮರೆಯದಿರಿ
ಖಾರದಿ ಸುಂಯ್ಯೆನುತ ಪರಿಮಳದಿ ಘಮ್ಮೆನಲು
ಯಾವಡುಗೆಗೂ ಸೈ ನಾನೇ ಗಾಂಧಾರಿ||೧||

ಕರಾವಳಿಯ ತೀರ ಮಲೆನಾಡ ಮಣ್ಣಿನಲಿ
ನಾನಿದ್ದರೇ ರುಚಿಯು ಗೊಜ್ಜುಸಾರು
ಜೀರಿಗೆ ಮೆಣಸು ಸೂಜಿ ಮೆಣಸು ಕಕ್ಕೆ
ಮುನ್ಚಿ ಹೀಗೆನಗಿಹುದು ಹಲವು ಹೆಸರು||೨||

ವಿಷವನುಣ್ಣುತ ಬೆಳೆದ ಹಲವು ತಳಿಗಳ
ಮೆಣಸು ಕಣ್ಣಿಗಷ್ಟೇ ಬರಿ ಅಂದ ಚಂದ
ಔಷಧಿಯೆ ಆಗುವೆನು ಎಲ್ಲೆಲ್ಲೂ ಬೆಳೆಯುವೆನು
ಸಣ್ಣಗಾತ್ರದಿ ಹೊಳೆವೆ ಪಚ್ಚೆಕೆಂಪಿನಿಂದ||೩||

ನಾಲಿಗೆಗೆ ಕಟುವಾದ ರುಚಿಯನ್ನು ತೋರುವೆ
ಉದರದೊಳಗಿಳಿಯುತಲಿ ಗುಣವು ತಂಪು
ಚಿಲಿಪಿಲಿ ಗುಬ್ಬಕ್ಕ ಕಾಗಕ್ಕನಿಗೆ ಪ್ರಿಯವು
ಗಿಳಿಗಳಿಗೆ ಆಗಾಗ ನನ್ನದೇ ನೆಂಪು||೪||

ಬೇಡದೆಯೆ ಏನನೂ ಹಿತ್ತಲಲಿ ಬೆಳೆಯುವೆ
ಮಾರುಕಟ್ಟೆಯಲೀಗ ಬೆಲೆಯುಳ್ಳ ಮೆಣಸು
ನೋಡದೆಯೆ ಕಣ್ಣೆತ್ತಿ ಕಿತ್ತೆಸೆಯದಿರಿ, ಗುಣವ
ಅರಿಯುತ ಬರಲಿ ಬಳಸುವ ಮನಸು||೫||

✍️... ಅನಿತಾ ಜಿ.ಕೆ.ಭಟ್.
28-03-2022.

Wednesday, 23 March 2022

ಅಂದು- ಇಂದು




#ಅಂದು- ಇಂದು
------------------

ಅಂದು ನಾನಾಗಿದ್ದೆ
ಬಲು  ಚೂಟಿ ತುಂಟಿ
ಇಂದು ಕಂಡೊಡನೆಯೇ
ಕರೆಯುವರೆನ್ನ ಆಂಟಿ!!೧||

ಅಂದು ಬಲು ಪ್ರಿಯವಾಗುತಿತ್ತು
ಎಥ್ನಿಕ್ ಡೇ, ಸಾರಿ ಡೇ
ಇಂದು ನಾ ಹಠಹಿಡಿಯಬೇಕಾಗಿದೆ
ಚೂಡಿ, ಕುರ್ತಾ ತೊಡುವುದ ಬಿಡೆ!!೨||

ಅಂದು ಶಾಲಾಕಾಲೇಜಿಗೆ ಪಯಣ
ನಡೆಯುತಲಿ ದಿನಕೊಂದು ಮೈಲಿ
ಇಂದು ರೋಗ ರುಜಿನ ಬರದಂತೆ
ನಡೆಯುವುದು ಜೀವನಶೈಲಿ!!೩||

ಅಂದು ಖರೀದಿ ಸಮಯದಿ
ಹಾಕುತಿದ್ದೆ ಪೈಸೆಗೆ ಪೈಸೆ ಲೆಕ್ಕ
ಇಂದು ರಶೀದಿ ಕಂಡರೆ ಬರುವರು
ಎಟಿಎಂ ಕಾರ್ಡ್ ಹಿಡಿದು ಪಕ್ಕ!!೪||

ಅಂದು ಅಳೆಯುತಿದ್ದರು ನೋಡಿ
ಪರೀಕ್ಷಾ ಗ್ರೇಡ್ ಮಾರ್ಕ್
ಇಂದು ದಿಟ್ಟಿಸುತ ಬೆಳ್ಳಿಕೇಶ 
ಮುಖದ ಮೇಲಿನ ಸುಕ್ಕು!!೫||

ಅಂದು ಅರ್ಧ ಗಂಟೆಯಲಿ ಅಡುಗೆಯ
ಕೆಲಸ ಹಿಡಿಯುತಿತ್ತು ಬೋರು
ಇಂದು ನಾವೇ ಇರಲಿ, ನೆಂಟರೆ ಬರಲಿ
ಅಡುಗೆಮನೆಯಲೇ ಕಾರುಬಾರು!!೬||

ಅಂದು ಹಳ್ಳಿಯ ಹಸಿರ ಪರಿಸರದಿ
ಸ್ವಚ್ಛ ಶುದ್ಧ ಉಸಿರು
ಇಂದು ನಗರದ ಕಾಂಕ್ರೀಟು ಕಾಡೊಳಗೆ
ಗೃಹಿಣಿಯೆಂಬ ಹೆಸರು!!೭||

ಅಂದು ಗುನುಗುತಲಿದ್ದೆ ಆಗಾಗ
ಪ್ರೇಮ ಚಿತ್ರದ ಗೀತೆಯನು
ಇಂದು ಕಲಿತಿಹೆ ಲಾಲಿ, ಜೋಗುಳವ
ಮಲಗಿಸಲೆಂದು ಮಕ್ಕಳನು!!೮||

ಅಂದು ಆಗಾಗ ಒರೆಸಲು
ತಪ್ಪದು ಕೈಲೊಂದು ಟವೆಲು
ಈಗಲೂ ಕ್ಷಣಕೊಮ್ಮೆ ನೇವರಿಸಲು
ಬೇಕೇಬೇಕು ಕೈಲಿ ಮೊಬೈಲು!!೯||

ಅಂದು ಓದಿ ಬರೆಯಲು
ಆಗ್ರಹಿಸುತಿದ್ದರು ಅಮ್ಮ
ಇಂದು ಅದೇ ಆದೇಶ ಮಕ್ಕಳಿಗೆ
ನಾನಾಗಿ ಶಿಸ್ತಿನ ಅಮ್ಮ!!೧೦||

ಅಂದು ಹೊಟ್ಟೆ ತುಂಬಲು
ಸೇವಿಸುತಿದ್ದೆ ಆಹಾರ
ಇಂದು ಹೊಟ್ಟೆ ಬೆಳೆಯದಂತೆ
ಶರೀರವಾಗದಂತೆ ವಿಕಾರ!!೧೧||

ಅಂದು ಎಲ್ಲರ ನಗುಮುಖವೂ
ಕೊಡುತಿತ್ತು ಮುಗ್ಧ ಖುಷಿ
ಇಂದು ತಿಳಿಯುತಿದೆ ಮತಿಗೆ
ನಗುವಿನ ಮುಖವಾಡ ಹುಸಿ!!೧೨||

ಅಂದು ಕನ್ನಡಿ, ಪೌಡರ್, ಬಿಂದಿ, ಬಟ್ಟೆಗೆ
ಸೆಳೆಯುವ ಮೋಹದ ಚಿಟ್ಟೆ
ಇಂದು ಬೆಣ್ಣೆಯ ಮಾತು, ಬಣ್ಣದ ಥಳಕಿಗೂ
ಬಗ್ಗದೆ ಮಾನಿನಿ ದಿಟ್ಟೆ!!೧೩||


✍️... ಅನಿತಾ ಜಿ.ಕೆ.ಭಟ್.
23-03-2022.

#ಫೇಸ್ಬುಕ್ ಬರಹ ವೇದಿಕೆಯೊಂದರಲ್ಲಿ "ಮದುವೆಯ ಮೊದಲು ಮತ್ತು ಮದುವೆಯ ನಂತರ ನಿಮ್ಮಲ್ಲಾದ ಬದಲಾವಣೆ" ಎಂಬ ಥೀಂ ಕಂಡಾಗ ಬರೆಯಬೇಕೆನಿಸಿದ ಸಾಲುಗಳು.. 






Monday, 21 March 2022

ಗುಲಾಬಿ

 


#ಚೆಂಗುಲಾಬಿ

ಬಣ್ಣಗಳು ಹಲವಾರು ಪರಿಮಳ ಬಗೆಬಗೆ
ಹೆಸರೊಂದೇ ಚೆಂಗುಲಾಬಿ
ಹಸಿರನಡುವಲಿ ಅರಳಿ ನಸುನಗೆಯ ಬೀರಿ
ಕಳೆಯುವೆ ಮನದ ಬೇಗುದಿ||೧||

ನೇಸರನ ಎದುರುಗೊಂಬುವೆ ಮುಗುಳಾಗಿ
ಮುತ್ತಿನ ಮಣಿಮಾಲೆ ತೊಟ್ಟು
ಸುಪ್ರಭಾತವ ಕೋರುವ ದುಂಬಿಯನೂಡುವೆ
ಸವಿಯಾದ ಮಕರಂದವನಿಟ್ಟು||೨||

ಮೃದುವಾದ ಪಕಳೆಯ ಕೋಮಲೆ ನಿಂದಿಹೆ
ಮೈತುಂಬಾ ಮುಳ್ಳನು ಸಹಿಸಿ
ಬದುಕಿನ ಕಠಿಣತೆ ಒಡಲೊಳಗೆ ಅಡಗಿಸುತ
ಚಿಗುರಿರಿ ಏಳಿಗೆಯ ಬಯಸಿ||೩||

ಸೌಗಂಧಸೂಸಿ ಕಣ್ಮನಸೆಳೆವ ಕ್ಷಣವದು ಕ್ಷಣಿಕ
ಬಲುದಿನದ ಶ್ರಮವಿರಲಿ ಹಿಂದೆ
ಮೊಗ್ಗನು ಕೊರೆವ ಹೂವನು ತಿನುವ ಕಟುಕ
ಕೀಟಗಳನೆದುರಿಸಿ ಸಾಗುತಿರಿ ಮುಂದೆ||೪||

✍️... ಅನಿತಾ ಜಿ.ಕೆ.ಭಟ್.
21-03-2022.
#ವಿಶ್ವ ಕಾವ್ಯದಿನದ ಶುಭಾಶಯಗಳು. 💐




Thursday, 17 March 2022

ಮಕ್ಕಳಲ್ಲಿನ ಮುಗ್ಧತೆ

 

           ಮುಗ್ಧತೆ ಎಂಬ ವಿಷಯ ಬಂದಾಗ ಮೊದಲು ನೆನಪಾಗುವುದು ಮಕ್ಕಳು. ಅವರ ಮುಗ್ಧ ನಡತೆ, ತುಂಟತನ, ಮಾತುಗಳು ಎಲ್ಲವನ್ನೂ  ಮೆಲುಕು ಹಾಕುವಾಗ ಏನೋ ಖುಷಿ, ಆನಂದ. ಬೆಳೆದಂತೆ ಅವರ ಮುಗ್ಧತೆ ಮಾಯವಾಗಿ ಬಿಡುವಾಗ ಮನದೊಳಗೆ ಸಣ್ಣ ತಲ್ಲಣ.       

         ನಾವು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ. ದೇವರ ಪೂಜೆಗೆ ಹೂವು ಬೇಕೆಂದು ನಾನು ಕುಂಡಗಳಲ್ಲಿ ಗೌರಿ ಹೂವಿನ ಬೀಜಗಳನ್ನು ಹಾಕಿದ್ದೆ. ಅದು ಬೆಳೆದು ಹೂಬಿಡಲು ಆರಂಭವಾಗಿತ್ತು. ತುಳಸಿ ತುಂಬೆ ಗಿಡಗಳೂ ಸಹಾ ಇದ್ದವು. ಬೆಳಗ್ಗೆ ಪತಿ ಸ್ನಾನ ಮಾಡಿ ಹೂಗಳನ್ನು ಕೊಯ್ದು ತಂದಿದ್ದರು. ನಂತರ ಜಪ ತಪ ಬೆಳಗಿನ ಪೂಜೆಯಲ್ಲಿ ನಿರತರಾಗಿದ್ದರು. ಸಣ್ಣ ಮಗ ಎದ್ದು ಅತ್ತಿತ್ತ ಪೋಕರಿ ಮಾಡುವುದರಲ್ಲಿ ನಿರತನಾಗಿದ್ದ. ದೀಪ ಬೆಳಗಿದ್ದು ಕಂಡರೆ ಸೀದಾ ಬಂದು ಕೈಹಾಕಿ ಸುಟ್ಟುಕೊಳ್ಳುತ್ತಿದ್ದ. ಪದೇ ಪದೇ ಇದೇ ಪುನರಾವರ್ತನೆ ಆದಾಗ ಸ್ವಲ್ಪ ಸಮಯ ದೀಪ ಬೆಳಗಿ ಕೂಡಲೆ ಆರಿಸಿ ಬಿಡುವುದನ್ನು ರೂಢಿಸಿಕೊಂಡಿದ್ದೆ. ಹೀಗಾಗಿ ಅವನಿಗೆ ದೇವರ ಪೂಜೆಯಲ್ಲಿ ವಿಶೇಷ ಆಕರ್ಷಣೆ(ತಂಟೆ ಮಾಡಲು)ಏನೂ ಉಳಿದಿರಲಿಲ್ಲ. ಆದರೂ ಆ ದಿನ ಅಪ್ಪ ಪೂಜೆ ಮಾಡುವುದನ್ನು ನೋಡುತ್ತಾ ಪಕ್ಕದಲ್ಲೇ ಕುಳಿತಿದ್ದ.

       ಊರಿನಿಂದ ಹಲಸಿನ ಮರದ ಒಂದು ಮಣೆ ಮಾಡಿಸಿ ತಂದಿದ್ದೆವು. ಅದರಲ್ಲಿ ದೇವರ ಫೊಟೋ ಇಟ್ಟು ಹೂವು ಇಡುತ್ತಿದ್ದೆವು. ಅಪ್ಪ ಹೂವು ಇಡುವುದನ್ನು ನೋಡುತ್ತಿದ್ದ ಪೋರ ಒಮ್ಮೆಲೇ ಬಾಗಿ ಒಂದು ಗೌರಿ ಹೂವನ್ನು ಮಣೆಯಿಂದ ತೆಗೆದು ಕೆಳಗಿಟ್ಟ. ಪುನಃ ಮತ್ತೊಂದು ಕೆಳಗಿಟ್ಟ, ಅಪ್ಪನ ಮುಖ ನೋಡಿದ. ಊಹೂಂ ಏನೂ ಬದಲಾವಣೆ ಕಾಣಲಿಲ್ಲ ಅನಿಸುತ್ತದೆ ಅವನಿಗೆ. ಮುಂದುವರಿಸಿದ. ಬೇಗ ಬೇಗ ಅಪ್ಪ ಇಟ್ಟ ಹೂವನ್ನೆಲ್ಲ ಕೆಳಗಿಟ್ಟ. ಈಗಲೂ ಅಪ್ಪನದು ಅದೇ ನಿರ್ಲಿಪ್ತತೆ. ದೇವರ ಫೊಟೋವನ್ನೂ ಕೆಳಗಿಟ್ಟ. ಮತ್ತೆ ತಾನೇ ಮಣೆ ಏರಿ ಕುಳಿತುಕೊಂಡ. ದೇವರಿಗಿಡಲು ಒಂದೇ ಒಂದು ಗೌರಿ ಹೂ ಬಾಕಿಯಿತ್ತು. ಅದನ್ನು ಅವನ ತಲೆಯಲ್ಲಿ ಇಟ್ಟು ಬಿಟ್ಟರು. ಈಗ ಪೂಜೆ ಮಾಡುತ್ತಿದ್ದ ಪತಿಗೂ ನಗು. ಹಿಂದೆ ನಿಂತು ಇದನ್ನೆಲ್ಲ ಗಮನಿಸುತ್ತಿದ್ದ ನನಗೂ ನಗು.. ನಮ್ಮಿಬ್ಬರ ನಗುವನ್ನು ಕಂಡ ಅವನು ಅದೇನೋ ಸಾಧಿಸಿದೆನೆಂಬಂತೆ ಖುಷಿಯಿಂದ "ಪೀಪಿ ಪೀಪಿ"(ಹೂವು) ಎನ್ನುತ್ತಾ ತನ್ನ ತಲೆ ಮೇಲಿನ ಹೂವನ್ನು ಮುಟ್ಟುಕೊಂಡು ಬೀಗುತ್ತಿದ್ದ.

                **********

        ನಮ್ಮ ಸಣ್ಣ ಮಗನಿಗಾಗ ಮೂರೂವರೆ ವರ್ಷ. ಹೊಸ ಸೈಟ್ ತೆಗೆದುಕೊಂಡು ಮನೆ ಕಟ್ಟಿ ಗೃಹಪ್ರವೇಶಕ್ಕೆ ಎಲ್ಲರನ್ನೂ ಆಮಂತ್ರಿಸುತ್ತಿದ್ದೆವು. ಇಲ್ಲಿ ಹೋಮ, ಪೂಜಾ ಕಾರ್ಯಕ್ರಮ ಮಾಡಿ, ಎಲ್ಲರನ್ನೂ ಆಮಂತ್ರಿಸಿ, ಊಟ ಬಡಿಸುವುದಿದೆ. ನಂತರ ನಾವು ಇಲ್ಲೇ ಇರುವುದು ಎಂದು ನಮ್ಮ ಮಕ್ಕಳಿಗೆ ಹೇಳಿದ್ದೆವು. ಹಲವರ ಮನೆಗೆ ತೆರಳಿ "ಮನೆ ಒಕ್ಕಲಿಗೆ ಬನ್ನಿ" ಎಂದು ಕರೆಯುವುದನ್ನು ಸಣ್ಣ ಮಗ ಕೇಳಿಸಿಕೊಂಡಿದ್ದ.  ಇವನಿಗೂ ಸಮಾರಂಭಗಳಿಗೆ ಅಥವಾ ಎಲ್ಲಿಗೇ ಆದರೂ ಹೋಗುವುದೆಂದರೆ ಪಂಚಪ್ರಾಣ. ಆದರೆ ಇನ್ನೂ ಮನೆ ಒಕ್ಕಲಿಗೆ ಹೊರಡುವ ಲಕ್ಷಣ ಕಾಣುತ್ತಿಲ್ಲ.  ಎಂದು ಅನಿಸಿತ್ತೋ ಏನೋ.. ಮನೆ ಒಕ್ಕಲಿಗೆ ಇನ್ನು ವಾರವೋ, ಮೂರ್ನಾಲ್ಕು ದಿನವೋ ಇರುವಾಗ, ಒಂದು ದಿನ ಇದ್ದಕ್ಕಿದ್ದಂತೆ ಅವನ ಸಂಶಯ ಹೊರ ಹಾಕಿದ್ದ. "ಅಪ್ಪಾ.. ಮನೆ ಒಕ್ಕಲು.. ಬನ್ನಿ ಹೇಳಿದ್ದಲ್ಲಾ.. ಎಲ್ಲಿ ಅಪ್ಪಾ ಮನೆ ಒಕ್ಕಲು.. ನಾವೂ ಹೋಪನಾ..?" ಎಂದು ಮುಗ್ಧವಾಗಿ ಕೇಳಿದ. ನಮಗೆ ನಗು ಬಂದಿತ್ತು.. ನಂತರ ಅವನಿಗೆ ಪುನಃ ವಿವರಿಸಿ ಹೇಳಿದಾಗ ಒಪ್ಪಿಕೊಂಡಿದ್ದ.

                 *******

       ಒಬ್ಬರು ಹಿರಿಯರು ನಮ್ಮ ದೊಡ್ಡ ಮಗನನ್ನು ಕಂಡಾಗ "ಇವನು ಗಿಡ್ಡ" ಎನ್ನುತ್ತಿದ್ದರು. ಆಗ ನಾನು "ಕೆಲವರು ಎಳೆಯ ಪ್ರಾಯದಲ್ಲಿ ಬೇಗ ಬೆಳವಣಿಗೆ ಹೊಂದಿ, ನಂತರ ಹದಿಹರೆಯದಲ್ಲಿ ಸ್ವಲ್ಪ ನಿಧಾನವಾಗಿ ಬೆಳೆಯುತ್ತಾರೆ. ಮತ್ತೆ ಕೆಲವರು ಎಳವೆಯಲ್ಲಿ ನಿಧಾನವಾಗಿ ಬೆಳವಣಿಗೆ ಹೊಂದುತ್ತಾ, ಹದಿಹರೆಯಕ್ಕೆ ಕಾಲಿಟ್ಟಾಗ ಒಮ್ಮಿಂದೊಮ್ಮೆಲೇ ಬೆಳವಣಿಗೆ ಹೊಂದುತ್ತಾರೆ. ಎರಡು ಮೂರು ವರ್ಷದಲ್ಲಿ ಅವರ ಚಹರೆಯೇ ಬದಲಾಗುತ್ತದೆ" ಎಂದು ಉತ್ತರಿಸಿದ್ದೆ. ಇದನ್ನು ನಾನು ನನ್ನ ಪ್ರೌಢಶಾಲೆ ದಿನಗಳಲ್ಲಿ ಗಮನಿಸಿದ್ದೆ. ಕೆಲವರು ಪ್ರೌಢಶಾಲೆಗೆ ಸೇರುವಾಗ ಉದ್ದವಿದ್ದವರು ನಂತರ ವಿಶೇಷವಾಗಿ ಎತ್ತರದಲ್ಲಿ ಬದಲಾವಣೆ ಆಗದವರೂ ಇದ್ದರು. ಕೆಲವರು ಎಂಟನೇ ತರಗತಿಯಲ್ಲಿ ಪುಟ್ಟ ಮಕ್ಕಳಂತೆ ಕಾಣುತ್ತಿದ್ದವರು ಹತ್ತನೇ ತರಗತಿ ಮುಗಿಯುತ್ತಿದ್ದಂತೆ ಬರೋಬ್ಬರಿ ಉದ್ದ, ದಪ್ಪ ಆದವರೂ ಇದ್ದರು. ಒಬ್ಬೊಬ್ಬರ ಶಾರೀರಿಕ ಬೆಳವಣಿಗೆ ಒಂದೊಂದು ರೀತಿ ಎಂದು ಅರಿವಾಗಿತ್ತು.

       ಆ ಹಿರಿಯರು ಕೆಲವು ಬಾರಿ ಅದೇ ರೀತಿ ಹೇಳಿದ್ದಿದೆ. ನಾನು ನಕ್ಕು ಸುಮ್ಮನಾಗುತ್ತಿದ್ದೆ. ಮತ್ತೆಲ್ಲೂ ಚರ್ಚಿಸುವುದಾಗಲೀ, ತಲೆ ಕೆಡಿಸಿಕೊಳ್ಳುವುದಾಗಲೀ ಮಾಡಲಿಲ್ಲ. ಇತ್ತೀಚೆಗೆ ಕೊರೋನಾ ದೆಸೆಯಿಂದ ಮೂರು ವರ್ಷಗಳಿಂದ ಅವರನ್ನು ಭೇಟಿಯಾಗಲಿಲ್ಲ. ಇತ್ತೀಚೆಗೆ ಭೇಟಿಯಾದಾಗ, ಅವರನ್ನು ಕಂಡವನೇ ಹತ್ತಿರ ಹೋಗಿ "ಈಗ ನಾನು ಉದ್ದವಾ.. ನೀವಾ..?" ಎಂದಿದ್ದ ಮುಗ್ಧವಾಗಿ ನಗುತ್ತಾ ದೊಡ್ಡ ಮಗ.
"ನೀನೇ ಉದ್ದ ಕಣೋ.. ಎಷ್ಟೆತ್ತರ ಬೆಳೆದಿದ್ದೀ.. ಗುರುತೇ ಸಿಗಲಿಲ್ಲ ನನಗೆ" ಎಂದರು. ಮೂರು ವರ್ಷಗಳಲ್ಲಿ ಎರಡು ಫೀಟ್ ಎತ್ತರ ಬೆಳೆದಿದ್ದ.
ಮಕ್ಕಳು ತಾವು ಕೇಳಿಸಿಕೊಂಡದ್ದನ್ನು  ಕೆಲವನ್ನೆಲ್ಲಾ ಬಹಳ ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾರೆ.

✍️... ಅನಿತಾ ಜಿ.ಕೆ.ಭಟ್.
18-03-2022.

#ಪ್ರತಿಲಿಪಿಕನ್ನಡ ದೈನಿಕವಿಷಯಾಧಾರಿತ
#ವಿಷಯ ಮುಗ್ಧತೆ #ಚಿತ್ರ ಕೃಪೆ- ಅಂತರ್ಜಾಲ


Tuesday, 15 March 2022

ಪುತ್ರ ಸಂತಾನ ವ್ಯಾಮೋಹ ಎಲ್ಲೆಮೀರಿದಾಗ

 




       ಅಂದು 'ಶುಭಾಂಶು' ಮನೆಯಲ್ಲಿ ಸಡಗರವು ತುಂಬಿತ್ತು. ಆ ಮನೆಗೆ ಬಾಣಂತಿ, ಮಗು ಬರುವವರಿದ್ದರು. ಅವರ ಬರುವಿಕೆಗಾಗಿ ಎಲ್ಲರೂ ಕಾದುಕುಳಿತಿದ್ದರು. ರಾಧಾಬಾಯಿಯವರು ಒಂದು ದಿನ ಮುಂಚಿತವಾಗಿಯೇ ಬಂದು ಬಾಣಂತಿಯ ಆರೈಕೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಸನತ್ ತನ್ನ ಅಕ್ಕನ ಪುಟ್ಟ ಮಗನನ್ನು ಬರಮಾಡಿಕೊಳ್ಳಲು ತುಂಬಾ ಉತ್ಸಾಹದಲ್ಲಿದ್ದ. ಅವನು ಹೇಗಿರಬಹುದು ಅಕ್ಕನಂತೆಯಾ? ಭಾವನಂತೆಯಾ? ಎಂಬೆಲ್ಲ ಕುತೂಹಲ ಅವನಲ್ಲಿ ಮನೆಮಾಡಿತ್ತು. ಜಗನ್ನಿವಾಸ ರಾಯರು ಮಗಳು ಮತ್ತು ಮೊಮ್ಮಗನನ್ನು ಬರಮಾಡಿಕೊಳ್ಳುವ ಆತುರದಲ್ಲಿ ಅತ್ತಿಂದಿತ್ತ ಸಾಗಿ ಯಾವ ಕೆಲಸ ಬಾಕಿಯಿದೆ ಎಂದು ಹುಡುಕಿ ಮಾಡುತ್ತಿದ್ದರು. ಬಾಣಂತನಕ್ಕೆ ಹಿರಿಯ ಮಹಿಳೆ ರಾಧಾಬಾಯಿ ಸಿಕ್ಕರು ಎಂಬ ಸಮಾಧಾನವೂ ರಾಯರಿಗಿತ್ತು . ಉಮಾಳಿಗೆ ಒಬ್ಬಳಿಗೇ ಬಾಣಂತನ ಕೆಲಸಗಳನ್ನು ಮನೆ ಕೆಲಸದೊಂದಿಗೆ ಮಾಡಿಕೊಳ್ಳಲು ಕಷ್ಟವಾಗಬಹುದು ಎಂದು ಸಹಾಯಕರನ್ನು ಹುಡುಕಿದಾಗ, ಸುಲಭವಾಗಿ ಯಾರು ಸಿಗದಿದ್ದಾಗ ಜಗನ್ನಿವಾಸ ರಾಯರು ತಲೆಮೇಲೆ ಕೈಹೊತ್ತು ಕುಳಿತಿದ್ದರು. ಅಂತಹ ಸಂದರ್ಭದಲ್ಲಿ ದೂರದ ಸಂಬಂಧಿ ರಾಧಾಬಾಯಿ ತಾನು ಒಪ್ಪಿಕೊಂಡರು. ಹೂವೆತ್ತಿದಂತೆ ಕೆಲಸ ಸಲೀಸಾಯಿತು ಎಂದುಕೊಂಡರು ರಾಯರು.

           ಬಾಣಂತಿ ಮಗು ಆಗಮಿಸಿದ ಮೊದಲ ದಿನದಿಂದಲೇ ಎಲ್ಲಾ ಆರೈಕೆ ಅನುಪಾನಗಳಲ್ಲಿ ರಾಧಾಬಾಯಿ ಅವರದ್ದು ಎತ್ತಿದ ಕೈ. ತಾನೂ ಹೆತ್ತು, ಮಗಳಂದಿರ ಬಾಣಂತನವನ್ನೂ ಮಾಡಿ ಅನುಭವವಿದ್ದ ಹಿರಿಜೀವ ರಾಧಾ ಬಾಯಿಯವರು. ಅವರ ಮಾತಿನಂತೆ ಎಲ್ಲವನ್ನೂ ನಿಭಾಯಿಸುತ್ತಾ ಸಹಕರಿಸುತ್ತಿದ್ದರು ಉಮಾ. ರಾತ್ರಿಯಿಡೀ ಅಳುವ ಮಗುವಿನೊಂದಿಗೆ ತಾನು ನಿದ್ದೆ ಬಿಟ್ಟು ಕುಳಿತು, ಮಗುವಿನ ಲಾಲನೆ ಪಾಲನೆಯನ್ನು ರಾಧಾಬಾಯಿ ಮಾಡುತ್ತಿದ್ದರು. "ತೂಗಿರೆ ರಂಗನ.. ತೂಗಿರೆ ಕೃಷ್ಣನ.. ತೂಗಿರೆ ಅಚ್ಯುತಾನಂತನ.." ಎನ್ನುತ್ತಾ ಜೋಗುಳ ಹಾಡು ಹಾಡಿ, ಹಳೆಯ ಧೋತಿಯನ್ನು ಮನೆಯ ಛಾವಣಿಯ ಅಡ್ಡಕ್ಕೆ ಬಿಗಿದು ಇಳಿಬಿಟ್ಟ ಜೋಲಿಯಲ್ಲಿ ಮಲಗಿಸುತ್ತಿದ್ದರು. ಬಾಣಂತಿಯ ಪಥ್ಯಗಳ, ಆಹಾರ ಕ್ರಮಗಳ  ಮಾರ್ಗದರ್ಶನವನ್ನು ಉಮಾಳಿಗೆ ನೀಡುತ್ತಿದ್ದರು.

        ಬೆಳಗ್ಗೆ ಬೇಗನೆ ಎದ್ದು, ಹಂಡೆಯಲ್ಲಿ ನೀರು ತುಂಬಿಸಿ, ಕಟ್ಟಿಗೆ ತೆಂಗಿನ ಸಿಪ್ಪೆಯಿಂದ ಬೆಂಕಿ ಮಾಡಿ ನೀರು ಬಿಸಿಬಿಸಿ ಕಾಯಲು ಬಿಡುತ್ತಿದ್ದರು. ಒಂಭತ್ತು ಗಂಟೆ ಆಗುವ ಮುನ್ನವೇ ಬಾಣಂತಿ ಮತ್ತು ಮಗುವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡಿಸುತ್ತಿದ್ದರು. ನಂತರ ಇಬ್ಬರಿಗೂ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸುತ್ತಿದ್ದರು. ತದನಂತರವೂ ರಾಧಾಬಾಯಿ ಬಾಣಂತಿ ಮಗುವಿನ ಬಟ್ಟೆಯನ್ನು  ಕೆಲಸದ ಪಾರಕ್ಕನಿಗೆ ಒಗೆಯಲೆಂದು ಕೊಟ್ಟು ಬರುವುದು, ಸಣ್ಣಪುಟ್ಟ ಹಳ್ಳಿ ಮದ್ದುಗಳ ತಯಾರಿ, ಅಡುಗೆ ಕೆಲಸಗಳಲ್ಲಿ ಕೈ ಜೋಡಿಸುವುದು.. ಇತ್ಯಾದಿಗಳಲ್ಲಿ ನಿರತರಾಗಿರುತ್ತಿದ್ದರು.

           ಹೀಗೆ ಐದಾರು ದಿನ ಕಳೆಯುವಾಗ ರಾಧಾಬಾಯಿ ಅವರಿಗೆ ಒಂದು ಫೋನ್ ಕರೆ ಬಂದಿತ್ತು. ಮಾತನಾಡಿ ಫೋನಿಟ್ಟವರು ಮಂಕಾಗಿದ್ದರು. ಇದನ್ನು ಉಮಾ  ಗಮನಿಸಿದರೂ ರಾಧಾಬಾಯಿ ಹೇಳದಿದ್ದ ಮೇಲೆ ತಾನೇ ಕೇಳುವುದು ಸರಿಯಲ್ಲ ಎಂದು ಸುಮ್ಮನಾದರು. ಇದು ಮುಂದಿನ ವಾರವೂ ಪುನರಾವರ್ತನೆಯಾಯಿತು. ಈ ಸಲ ಮಾತ್ರ ರಾಧಾ ಬಾಯಿಯವರು "ನೋಡು ಉಮಾ... ವೇದಾವತಿ ಕರೆ ಮಾಡಿದ್ದಾಳೆ. ನೀನು ಮನೆಗೆ ಹೋಗೋದು ಯಾವಾಗ? ಅಲ್ಲಿ ನಿನ್ನ ಸೊಸೆಗೆ ಕಷ್ಟವಾಗುವುದಲ್ಲವೇ.. ಎಂದು ಹೇಳುತ್ತಿದ್ದಾಳೆ."

        
        "ಹೌದೇ.. ರಾಧತ್ತೆ.. ಎರಡು ತಿಂಗಳ ಮಟ್ಟಿಗಾದರೂ ನೀವಿಲ್ಲಿ ಇದ್ದರೆ ನನಗೆ ಅನುಕೂಲ.. ನಿಮಗೆ ಇಲ್ಲಿ ಕಷ್ಟವಾಗದಂತೆ ನಾವು ನೋಡಿಕೊಳ್ಳುತ್ತೇವೆ. "
"ಹೌದು.. ನನ್ನ ಮಗ ಸೊಸೆಯ ಒಪ್ಪಿಗೆ ಪಡೆದು ಬಂದಿದ್ದೇನೆ. ಆದರೂ ವೇದಾವತಿ ಯಾಕೆ ಹೀಗೆ  ಮಾತನಾಡುತ್ತಿದ್ದಾಳೆ..? ತಿಳಿಯುತ್ತಿಲ್ಲ ನನಗೆ.."
"ಯಾವುದಕ್ಕೂ ನೀವೊಮ್ಮೆ ನಿಮ್ಮ ಮಗ ಸೊಸೆಯನ್ನು ಕೇಳಿನೋಡಿ" ಎಂದರು ಉಮಾ.

       ಸನತ್ ಕಾಲೇಜಿನಿಂದ ಬಂದೊಡನೆ ಅಳಿಯನನ್ನು ಎತ್ತಿ ಮುದ್ದಾಡುತ್ತಿದ್ದ. ಹೊರಗಿನ ಜಗಲಿಗೆ ಎತ್ತಿಕೊಂಡು ಹೋಗಿ ಒಂದು ಸುತ್ತು ಹಾಕಿ ಬರುತ್ತಿದ್ದ. ಅಮ್ಮ "ಸನತ್... ಪುಟ್ಟ ಮಗುವಿಗೆ ತಂಪಾದ ಗಾಳಿ ಬಡಿಯುತ್ತೆ ಕಣೋ.. ಶೀತವಾದೀತು.." ಎಂದರೂ ಅವನು ಕೇಳುವವನಲ್ಲ. ಜಗನ್ನಿವಾಸ ರಾಯರೂ ಅಷ್ಟೇ ಆಗಾಗ ಮೊಮ್ಮಗನನ್ನು ಏರುಸ್ವರದಲ್ಲಿ ಮಾತನಾಡಿಸಿ, ಯಕ್ಷಗಾನದ ಪದಗಳನ್ನು ಹೇಳಿ, ಜೋ ಜೋ ಶ್ರೀ ಕೃಷ್ಣ ಪರಮಾನಂದ.. ಜೋ ಜೋ ಗೋಪಿಯ ಕಂದಾ ಮುಕುಂದ.. ಎನ್ನುತ್ತಾ ಹಾಡು ಹೇಳಿ ಮುದ್ದಿಸಿ ಹೋಗುತ್ತಿದ್ದರು.

       ಕೆಲವು ದಿನಗಳ ಬಳಿಕ ರಾಧಾಬಾಯಿ ತನ್ನ ಮನೆಗೆ ಕರೆ ಮಾಡಿ ಮಾತನಾಡಿದರು. ಸೊಸೆ ನಗುನಗುತ್ತಾ "ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ. ನೀವು ಆರಾಮವಾಗಿ ಎರಡು ತಿಂಗಳು ಬಿಟ್ಟು ಬನ್ನಿ ಅತ್ತೆ.." ಎಂದಾಗ ಸೊಸೆಯ ಮಾತನ್ನು ಕೇಳಿದ ರಾಧಾಬಾಯಿ ಅವರಿಗೆ ಸಮಾಧಾನವಾಯಿತು. ಬಂದ ಕಾರ್ಯ ಪೂರ್ಣಗೊಳಿಸಿ ತೆರಳುವೆನೆಂದರು.


       ಆದರೆ ವೇದಾವತಿಯ ಕರೆ ಬರುವುದು ಮಾತ್ರ ಕಡಿಮೆಯಾಗಲಿಲ್ಲ. ವಾರಕ್ಕೆರಡು ಬಾರಿ ಕರೆ ಮಾಡಿ ಬಾಣಂತಿ ಮಗುವಿನ ಬಗ್ಗೆ ಎಲ್ಲ ಮಾಹಿತಿಯನ್ನು ಚೂರೂ ಬಿಡದೆ ವಿಚಾರಿಸಿಕೊಂಡು.. ''ನೀನು ಯಾಕೆ ಇನ್ನೂ ಅಲ್ಲೇ ಇದ್ದೀಯ? ಮನೆಗೆ ಹೋಗು ನಿನ್ನ ಮೊಮ್ಮಗುವಿಗೆ ವಿಪರೀತ ಜ್ವರವಂತೆ, ಹಠಮಾಡುತ್ತದಂತೆ.." ಎಂದು ಹೇಳುತ್ತಿದ್ದರು. ಮಗದೊಮ್ಮೆ ನಿನ್ನ ಮಗನಿಗೆ ಸೊಂಟ ಉಳುಕಿದೆಯಂತೆ, ಸೊಸೆಗೆ ಕೈಗೆ ತಾಗಿದೆಯಂತೆ, ರಾತ್ರಿಯೆಲ್ಲ ನಿದ್ದೆಗೆಟ್ಟು ನಿನ್ನ ಆರೋಗ್ಯ ಏರುಪೇರಾದರೆ ಏನು ಮಾಡುವುದು..?.... ಪದೇ ಪದೇ ಹೀಗೆ ಹೇಳುವಾಗ ರಾಧಾಬಾಯಿ ಅವರಿಗೆ ಇರುಸುಮುರುಸು. ಅಲ್ಲದೆ ವೇದಾವತಿಯವರು ರಾಧಾಬಾಯಿಯವರಿಗೂ ಉಮಾಳಿಗೂ ಇಬ್ಬರಿಗೂ ಸಂಬಂಧಿ. ಅಂದಮೇಲೆ ಅವರ ಮಾತು ಕೇಳದಿರುವುದು ಕಷ್ಟ. ತನ್ನ ಸೊಸೆಯಲ್ಲಿ ತನ್ನ ವಿರುದ್ಧ ಏನಾದರೂ ಛೂ.. ಬಿಟ್ಟರೆ ಎಂದು ಕೂಡ ಸ್ವಲ್ಪ ಅಂಜಿಕೆಯಾಯಿತು ರಾಧಾ ಬಾಯಿಯವರಿಗೆ.

       ರಾಧಾಬಾಯಿಯವರಿಗೆ ಬಾಣಂತನ ಪೂರ್ತಿ ಮಾಡಿ ಹೋಗಬೇಕೆಂಬ ಆಸೆ ಇದ್ದರೂ, ವೇದಾವತಿಯ ಒತ್ತಡದಿಂದಾಗಿ ಅರ್ಧದಲ್ಲಿ ಹೋಗುವ ನಿರ್ಧಾರವನ್ನು ಕೈಗೊಂಡರು. ಜಗನ್ನಿವಾಸ ರಾಯರು ಮತ್ತು ಉಮಾ ಹಲವು ಬಾರಿ, ಎರಡು ತಿಂಗಳಾಗಿ ಹೋಗಬಹುದು ಎಂದು ಒತ್ತಾಯಿಸಿದರೂ ಅವರಿಗೆ ನಿಲ್ಲುವ ಧೈರ್ಯ ಬರಲಿಲ್ಲ. ಮನೆಗೆ ತೆರಳಿದ  ರಾಧಾಬಾಯಿ ಮನೆಯವರಲ್ಲಿ ವಿಚಾರಿಸಿದರು. ಅವರಿಗೂ ವೇದಾವತಿಯ ನಡತೆಯ ಹಿನ್ನೆಲೆ ಏನು ತಿಳಿದಿರಲಿಲ್ಲ.


       ರಾಧಾಬಾಯಿ ಮನೆಗೆ ಹಿಂದಿರುಗಿದ್ದಾರೆ ಎಂದು ತಿಳಿದು ಸುಮಾರು ದಿನ ಕಳೆದರೂ ವೇದಾವತಿಯ ಕರೆ ಬಂದಿರಲಿಲ್ಲ. ತಿಂಗಳು ಕಳೆವಾಗ ವೇದಾವತಿ ಕರೆ ಮಾಡಿದಾಗ ಉಪಾಯವಾಗಿ ಮಾತಿಗೆಳೆದರು ರಾಧಾಬಾಯಿ. "ನೋಡು.. ವೇದಾ.. ಉಮಾ ಮಗಳು ತುಂಬಾ ಅದೃಷ್ಟವಂತೆ..."
"ಹೌದಕ್ಕಾ.. ಹೌದು..."
"ಒಳ್ಳೆಯ ಕಡೆ ಸಂಬಂಧವೂ ಕೂಡಿಬಂದಿತ್ತು. ಈಗ ಮೊದಲನೆಯದೇ ಗಂಡು ಮಗು ಎಂಬ ಸಂಭ್ರಮ."
"ಹೌದು.. ಅಷ್ಟು ಮಾತ್ರವಲ್ಲದೆ, ನೀನು ಕೂಡ ಅಲ್ಲಿ ಹೋಗಿ ಅವರಿಗೆ ಸಹಕರಿಸಿ ಅವರ ಸಂಭ್ರಮವನ್ನು ಹೆಚ್ಚು ಮಾಡಿದೆ."
"ಅಯ್ಯೋ.. ನಾನೇನು ಮಾಡಿದೆ? ಈ ಮುದುಕಿ ಏನು ಮಾಡಿಯಾಳು? ಸಲ್ಪ ಅಲ್ಲಿ ಸ್ವಲ್ಪ ಇಲ್ಲಿ ಕುಳಿತು,  ಕುಳಿತಲ್ಲಿಂದಲೇ ಹೇಳುತ್ತಿದ್ದೆ ಅಷ್ಟೇ."

"ಅದನ್ನಾದರೂ ಯಾಕೆ ಮಾಡಬೇಕು.? ನಮಗೆಲ್ಲಾ ಗಂಡು ಮಗು ಇಷ್ಟು ಸುಲಭದಲ್ಲಿ ದಕ್ಕಿದೆಯೇ..?"

"ಅದೆಲ್ಲ ನಮ್ಮ ಹಣೆಬರಹ ವೇದಾ"

"ಅಲ್ಲ ಕಣೇ ಅಕ್ಕಾ.. ನನಗೆ ನಾಲ್ಕು ಹೆಣ್ಣು ಮಕ್ಕಳಾದ ನಂತರ ಐದನೆಯದು ಗಂಡು.. ಮೊದಲನೇ ಮಗು ಹೆಣ್ಣಾದಾಗ ಮೂದಲಿಸಿದರು ನನ್ನ ಅತ್ತೆ, ಗಂಡ. ತವರಿನವರೆಲ್ಲ ನನ್ನ ಅಣ್ಣನಿಗೆ ಗಂಡು ಮಗು ಹುಟ್ಟಿದೆ ಎಂದು ನನ್ನನ್ನು ತಾತ್ಸಾರದಿಂದಲೇ ಕಂಡರು. ಬಾಣಂತನ ಮುಗಿಸಿ ಗಂಡನ ಮನೆಗೆ ಬಂದಾಗ ಸಿಕ್ಕಿದ್ದು ಬರೀ ಇರಿವ ಮಾತುಗಳ ಸ್ವಾಗತ.."

"ನನ್ನದು ಬೇರೆ ಇಲ್ಲ ಕಥೆ.. ಆರು ಹೆಣ್ಣು ಹೆತ್ತವಳು ಯಾರಿಗೂ ಬೇಡ ಎಂದು ಮೂದಲಿಸುತ್ತಿದ್ದರು. ಕೊನೆಗೆ ದೇವರು ಕಣ್ಣು ಬಿಟ್ಟ.. ಏಳನೆಯದು ಗಂಡು ಹುಟ್ಟಿದ.. ಆಗಲೇ ಆಪರೇಷನ್ ಮಾಡಿಸಿಕೊಂಡೆ.. ಈಗ ಯಾರಾದರೂ ನಿಮಗೆ ಎಷ್ಟು ಮಕ್ಕಳು ಎಂದರೆ ಹೇಳಲೂ ಸಂಕೋಚವಾಗುತ್ತದೆ.. ಈಗಿನವರಿಗೆಲ್ಲ ಒಂದೋ ಎರಡೋ ಮಕ್ಕಳು ಇರುವಾಗ ನಮ್ಮನ್ನು ನೋಡಿ ನಕ್ಕಾರು.. ಎಂದು ಅಳುಕಾಗುತ್ತಿದೆ.."

"ಹೌದು.. ನನಗೂ ಹಾಗೇ ಅನಿಸುತ್ತದೆ.  ನಾವೆಲ್ಲ ಎಷ್ಟು ತಿರಸ್ಕಾರದ ನುಡಿ ಕೇಳಬೇಕಾಗಿ ಬಂದಿತ್ತು. ಆದರೆ ಈಗ ಉಮಾ ಮಗಳಿಗೆ.. ಅಬ್ಬಾ ಅದೆಷ್ಟು ಸಂಭ್ರಮ ಅಷ್ಟು ಸುಲಭವಾಗಿ... ಬಾಣಂತನಕ್ಕಾದರೂ ಸ್ವಲ್ಪ ಕಷ್ಟಪಡಲಿ.. ನೀನೇಕೆ ಸಹಾಯಕ್ಕೆ ಹೊರಟೆ.. ಬದುಕಿನ ಕಷ್ಟ ಅವರಿಗೂ ತಿಳಿಯಲಿ.."

"ಅದೆಲ್ಲ ನಮ್ಮ ಕಾಲದಲ್ಲಿ ವೇದಾ..  ಈಗ ಹೆಣ್ಣುಮಕ್ಕಳನ್ನೂ ಬಲು ಪ್ರೀತಿಯಿಂದ ಸಾಕುತ್ತಾರೆ. ಅಲ್ಲದೆ ಉಮಾಳ ಮಗಳು-ಅಳಿಯ ವಿದ್ಯಾವಂತರು. ಹೆಣ್ಣು ಮಗು ಹುಟ್ಟಿದರೂ ಅಷ್ಟೇ ಪ್ರೀತಿಯಿಂದ ಸಾಕಿ ಸಲಹುತ್ತಿದ್ದರು. ಅಷ್ಟಕ್ಕೂ ನನ್ನನ್ನು ಬರಲು ಹೇಳಿರುವುದು ಹೆರಿಗೆಗೂ ಮುನ್ನವೇ.. ಗಂಡು ಮಗುವೆಂದು ತಿಳಿದು ನನ್ನನ್ನು ಬರಲು ಹೇಳಲಿಲ್ಲ.. ಗಂಡಾದರೂ ಹೆಣ್ಣಾದರೂ ಹೆತ್ತವರಿಗೆ ಮಕ್ಕಳು ಅಲ್ಲವೇ ವೇದಾ.."

"ಗಂಡೆಂಬ ಅಹಂ ಅವರ ತಲೆಗೆ ಏರಬಾರದು ಎಂದರೆ ಸ್ವಲ್ಪ ಅವರೂ ಕಷ್ಟ ಪಡಬೇಕು. ನಮ್ಮಷ್ಟಲ್ಲದಿದ್ದರೂ ಕಿಂಚಿತ್ತಾದರೂ... ದೇವರು ಕೆಲವರಿಗೆ ಅನ್ಯಾಯ ಮಾಡಿ ಕೆಲವರಿಗೆ ಮಾತ್ರ ಹರಸುತ್ತಾನೆ.. ಆತನದೂ ತಾರತಮ್ಯವೇ.."

"ಹೆಣ್ಣುಮಕ್ಕಳನ್ನು ಕೂಡ ಈಗ  ವಿದ್ಯಾಭ್ಯಾಸ ನೀಡಿ ಸಾಕಿ ಸಲಹಿದರೆ ಅವರು ಕೂಡ ಹೆತ್ತವರಿಗೆ ಇಳಿವಯಸ್ಸಿನಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಾರೆ. " ಎಂದರು ರಾಧಾ ಬಾಯಿ.

"ಏನೇ ಆದರೂ.. ನೋಡಿ... ನಾವು ನಾಲ್ಕು ಹೆಣ್ಣುಮಕ್ಕಳನ್ನು ಕಲಿಸಿ ಮದುವೆ ಮಾಡಲು ಎಷ್ಟು ಪ್ರಯಾಸಪಟ್ಟೆವು. ಈಗ ಮಗನ ವಿದ್ಯಾಭ್ಯಾಸಕ್ಕೆ ಪರದಾಡುವಂತಾಗಿದೆ.. ಅಂತಹದ್ದರಲ್ಲಿ ಉಮಾಳ ಮಗಳಿಗೆ.. ಬಯಸದೆ ಬಂದ ಭಾಗ್ಯವೇ ಸರಿ.."

       ಅವಳ ಮಾತುಗಳನ್ನು ಕೇಳಿದ ರಾಧಾಬಾಯಿ ಅವರಿಗೆ... ವೇದಾವತಿ ಪದೇ ಪದೇ ಕರೆ ಮಾಡಿ  "ನೀನು ಮನೆಗೆ ಹೋಗು'' ಎಂದು ಹೇಳುತ್ತಿದ್ದುದರ.. ಹಿಂದಿನ ಕಹಿಸತ್ಯ ಅರ್ಥವಾಯಿತು. ಅತಿಯಾದ ಪುತ್ರವ್ಯಾಮೋಹದಿಂದ, ಅರ್ಥಾತ್ ಗಂಡುಸಂತಾನದ ವ್ಯಾಮೋಹದಿಂದ, ಉಮಾಳ ಮಗಳ ಮೇಲೆ ಮತ್ಸರಗೊಂಡಿದ್ದ ವೇದಾಳ ಮನಸ್ಥಿತಿಯ ಬಗ್ಗೆ ಮರುಕ ಹುಟ್ಟಿತು. ಸೊಸೆಯಾಗಿ ಮನೆ ಬೆಳಗಲು, ಸಖಿಯಾಗಿ ಸುಖವುಣಿಸಲು, ಮಡಿಲಾಗಿ ಮಮತೆಯನು ಧಾರೆಯೆರೆಯಲು, ಹಿರಿಯಜ್ಜಿಯಾಗಿ ಮಾರ್ಗದರ್ಶನ ಮಾಡಲು, ಸಹೋದರಿಯಾಗಿ ಬಾಂಧವ್ಯ ಬೆಸೆಯಲು ಹೆಣ್ಣು ಬೇಕು. ಆದರೆ ಒಡಲಲ್ಲಿ ಕುಡಿಯೊಡೆದಾಗ ಮಾತ್ರ ಗಂಡಾದರೇ ಬೆಲೆ ಹೆಚ್ಚು ಎಂಬ ಪುತ್ರ ವ್ಯಾಮೋಹವನ್ನು ಇಂದಿಗೂ ಸಡಿಲಿಸದ ವೇದಾವತಿಯನ್ನು ಕಂಡು ಇಂಥವರನ್ನು ಈ ಜನ್ಮದಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಅಥವಾ ಅಂತಹದೊಂದು ಪವಾಡ ನಡೆಯಬೇಕಾದರೆ ಅದು ಭಗವಂತನಿಂದ ಮಾತ್ರ ಸಾಧ್ಯ ಎಂದುಕೊಂಡರು ರಾಧಾ ಬಾಯಿ.

✍️... ಅನಿತಾ ಜಿ.ಕೆ.ಭಟ್.
16-03-2022.

#ಪ್ರತಿಲಿಪಿಕನ್ನಡ ದೈನಿಕ ಕಥೆ
#ವಿಷಯ ಪುತ್ರ ವ್ಯಾಮೋಹ

       

Monday, 7 March 2022

ಮಹಿಳಾ ಶಕ್ತಿ

 


#ಮಹಿಳಾ ಶಕ್ತಿ

ಸಹನೆಯಲಿ ಇಳೆಯಾಗಿ ಕಷ್ಟದಲಿ ಶಿಲೆಯಾಗಿ
ತನ್ನವರ ಕ್ಷೇಮಕೆ ತೇಯುವವಳು
ನೋವಿನಲಿ ಹೆಗಲಾಗಿ ‌ಸುಖದಲ್ಲಿ ಸಖಿಯಾಗಿ
ಸುತ್ತಲೂ ನಗೆಬಿಲ್ಲ ಹರಡುವವಳು||೧||

ಮಹಿಳೆಯವಳು... ಮಹಿಮೆಯವಳು..
ತ್ಯಾಗವವಳು.. ಪ್ರೇಮವವಳು...

ಬಳಲಿಕೆಯ ಬೇಗೆಯಲಿ ಮನದ ತೊಳಲಾಟದಲಿ
ನೆರಳಾಗಿ ಕೊರಳಾಗಿ ತಬ್ಬುವವಳು
ತರುವಿನಾಸರೆಯಿರಲು ಮೊಗ್ಗಾಗಿ ಹೂಬಿರಿದು
ಕಂಪೀವ ಲತೆಯಂತೆ ಹಬ್ಬುವವಳು||೨||

ತನ್ನತನವನು ಮರೆತು ಪರರ ಹಿತವನೆಬಯಸಿ
ದುಡಿವವಳ ತುಳಿಯದೆಯೆ ಸೇವೆಮಾಡಿ
ಮಹಿಳಾಶಕ್ತಿಯ ಪ್ರೀತಿತ್ಯಾಗಸಹನೆಯ ಸ್ಮರಿಸಿ
ಶ್ರೇಷ್ಠತೆಯನರಿತು ನಿತ್ಯ ಗೌರವವ ನೀಡಿ||೩||

ಮಹಿಳೆಯವಳು.. ಮಹಿಮೆಯವಳು..
ತ್ಯಾಗವವಳು.. ಪ್ರೇಮವವಳು..

✍️... ಅನಿತಾ ಜಿ.ಕೆ.ಭಟ್.
08-03-2022.
ವಿಶ್ವ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 💐


ನಮ್ಮವ್ವ #ಚಿತ್ರಕವನ




#ನಮ್ಮವ್ವ

ಕಟ್ಟಿಗೆ ಒಲೆಯುರಿಸಿ ರೊಟ್ಟಿಯ ತಟ್ಟಿ
ತಟ್ಟೆಯನಿರಿಸಿ ಬಡಿಸ್ತಾಳ| ನಮ್ಮವ್ವ
ಹೊಟ್ಟೆ ತುಂಬಲು ತೃಪ್ತಿ ಪಡುತಾಳ||೧||

ಮಣ್ಣಿನ ಮಡಿಕೆಯಲಿ ತಣ್ಣನೆ ನೀರಿರಿಸಿ
ಉಣ್ಣಲು ಅನ್ನವ ಮಾಡುತಾಳ| ನಮ್ಮವ್ವ
ಬಣ್ಣಿಸಿ ಕಥೆಯ ಹೇಳುತಾಳ||೨||

ಹೊಗೆ ಹಬ್ಬಿ ನಿಂದರೂ ಬೇಗೆಲಿ ಮಿಂದರೂ
ನಗುನಗುತಾ ಮಾತನಾಡುತಾಳ| ನಮ್ಮವ್ವ
ಲಗುಬಗೆಯಿಂದಲೆ ದುಡೀತಾಳ||೩||

ನೆಲವು ಸೆಗಣಿಯದಿರಲಿ ಗೋಡೆ ಇಟ್ಟಿಗೆಯಿರಲಿ
ಒಲವಿಂದ ಬದುಕಿ ಬಾಳತಾಳ| ನಮ್ಮವ್ವ
ಛಲದಿಂದ ಮುಪ್ಪನ್ನೂ ಎದುರಿಸ್ಯಾಳ||೪||

ದುಡಿಯುವ ಮನಸಿರಲು ವಯಸಿನ ಹಂಗ್ಯಾಕ
ಕಾಡದು ಕಾಯಿಲೆ ನೂರೆಂಟು| ನಮ್ಮವ್ವ
ಹುಡುಗ ಹುಡುಗೀರನೆಲ್ಲ ಮೀರಿಸ್ತಾಳ||೫||

ಕಪ್ಪಾದ ಪಾತ್ರೆಯ ಸಿಪ್ಪೆಲಿ ಉಜ್ಜುಜ್ಜಿ ನೀರೆರೆದು
ಒಪ್ಪಾನೆ ಫಳಫಳ ಮಾಡುತಾಳ| ನಮ್ಮವ್ವ
ಉಪ್ಹುಳಿಖಾರ ಜೀವ್ನಕ್ಹದವಾಗಿ ಬೆರೆಸ್ಯಾಳ||೬||

ಶಿವನಿಂದ ಈ ಜನುಮ ಅವನದೆ ಆಟವು
ಬವಣೆಯು ಸುಖವೂ ಶಿವಲೀಲೆ| ನಮ್ಮವ್ವ
ದೇವಗೆ ಧನ್ಯತೆ ಹೇಳ್ತಾಳ||೭||

✍️... ಅನಿತಾ ಜಿ.ಕೆ.ಭಟ್.
07-03-2022.
#ಮಾಮ್ಸ್‌ಪ್ರೆಸೊ ದಿನದ ಚಿತ್ರಕ್ಕೆ ಬರೆದ ಸಾಲುಗಳು...
#momspressokannadashortstories




Tuesday, 1 March 2022

ಸ್ಟಿಕ್ಕರ್ ಹೋಗಿ ಸಿಂಧೂರ ಬಂತು.. ಢುಂ ಢುಂ ಢುಂ

 


     ಸಹಜ ಸೌಂದರ್ಯವತಿ ಸ್ಮಿತಾ ದಂತದ ಬೊಂಬೆಯಂತೆ ಶೋಭಿಸುತ್ತಿದ್ದಳು. ಅವಳ ನೀಳ ದಟ್ಟವಾದ ಕಪ್ಪನೆಯ ಕೂದಲಿಗೆ ಮಲ್ಲಿಗೆಯನ್ನು ಸುಂದರವಾಗಿ ಮುಡಿಸಿದ್ದರು. ಮದುಮಗಳ ಅಲಂಕಾರ ಮಾಡಲು ಇಬ್ಬರು ಸೋದರತ್ತೆಯರದೂ ಎತ್ತಿದ ಕೈ ಎಂದ ಮೇಲೆ ಕೇಳಬೇಕೇ? ಸಾಂಪ್ರದಾಯಿಕವಾಗಿ ಮಂಗಳೂರು ಮಲ್ಲಿಗೆಯ ಚೆಂಡನ್ನು ಮುಡಿಸಿ ಅಲ್ಲಲ್ಲಿ ಕೆಂಗುಲಾಬಿಯ ಪಕಳೆಗಳನ್ನು ಮುತ್ತಿನೊಂದಿಗೆ ಜೋಡಿಸಿ ಕುತ್ತಿದ್ದರು. "ಮುಖದ ಮೇಕಪ್ ಮಾತ್ರ ನಾವೇ ಮಾಡುವುದು" ಎಂದು ಸ್ಮಿತಾಳ ಗೆಳತಿಯರೆಲ್ಲ ಮುಂದೆ ಬಂದಿದ್ದರು. ಮೊದಲಾಗಿ ಸ್ಮಿತಾಳೇ ಅವರಿಗೆ ಬರಹೇಳಿದ್ದಳು.

"ನಿಂಗೆ ಮುಖಕ್ಕೆ ಕ್ರೀಂ ಬೇಡಮ್ಮಾ.. ನೀನೇ ಬೆಣ್ಣೆ ಹುಡುಗಿ ತರಹ ಇದ್ದೀ.."
"ಬಿಡಲ್ಲ ಕಣೇ.. ಹಚ್ಚಿ ಬಿಡ್ತೀವಿ.. ಅರ್ಧ ಇಂಚು ದಪ್ಪಕ್ಕೆ..."
"ಲಿಪ್ ಸ್ಟಿಕ್ ಹಚ್ತೀವಿ.. ಅದನ್ನೂ ತಿಂದು ಬಿಡಬೇಡ.. ತಿಂಡಿ ತಿನ್ನೋ ಭರದಲ್ಲಿ.."
"ಗೌರಮ್ಮನ ತರಹ ಬಿಂದಿ ಇಡಲೇನೇ..?"
"ದೃಷ್ಟಿ ಬೊಟ್ಟು ಎಲ್ಲರಿಗೂ ಕಾಣುವಂತೇ ಇಟ್ಟು ಬಿಡ್ತೀನಿ.. ನೋಡು.."
ಏನೇನೋ ರೇಗಿಸುವಿಕೆ ಗೆಳತಿಯರ ಗುಂಪಲ್ಲಿ ನಡೆಯುತ್ತಲೇ ಮೇಕಪ್ ಸಾಗಿತ್ತು.

ಅಲ್ಲಿಗೆ ಸ್ಮಿತಾಳ ಅಜ್ಜಿ ಸೌಭದ್ರಮ್ಮ ಆಗಮಿಸಿದರು. ಮೊಮ್ಮಗಳ ಅಲಂಕಾರ ಎಲ್ಲಿಯವರೆಗೆ ಮುಟ್ಟಿತು ಎಂದು ನೋಡಿ ಕಣ್ತುಂಬಿಸಿಕೊಳ್ಳುವ ತವಕ ಅಜ್ಜಿಗೆ.
"ಪೇಂಟ್ ಮೆತ್ತಿದಾಂಗೆ ಮೆತ್ತಿದ್ದು ಕಾಣ್ತಿದೆ. ಸಿಂಧೂರ ಕಾಣುವುದೇ ಇಲ್ಲ ಹಣೆಯಲ್ಲಿ.." ಅಜ್ಜಿಯ ಕಣ್ಣುಗಳು ಸೂಕ್ಷ್ಮವಾಗಿ ಮೊಮ್ಮಗಳನ್ನು ಸ್ಕ್ಯಾನ್ ಮಾಡಿದವು
"ಇದೆ ಅಜ್ಜಿ.. ನೋಡಿ ಇಲ್ಲಿ.. ಫ್ಯಾನ್ಸಿ ಸ್ಟಿಕ್ಕರ್ ಹಾಗಾಗಿ ಮಿನುಗುತ್ತೆ. ನಿಮಗೆ ಬೇಗ ಕಾಣಿಸಿಲ್ಲ." ಎಂದಳು ಮದುಮಗಳು ಸ್ಮಿತಾ.
"ಅಲ್ವೇ.. ಅದೆಂತ.. ನುಸಿ ಪಿಟ್ಟೆಯಂತೆ.. ಸ್ವಲ್ಪ ದೊಡ್ಡದಾಗಿ ಕಾಣುವಂತೆ ಹಾಕಬೇಕು." ಎಂದು ಅಸಮಾಧಾನ ವ್ಯಕ್ತಪಡಿಸಿದರು ಅಜ್ಜಿ.
"ಅಜ್ಜೀ.. ಅದೆಲ್ಲ ಈಗಿನ ಕಾಲದ ಫ್ಯಾಷನ್.. ನಿಮಗೆ ಗೊತ್ತಾಗಲ್ಲ.."
"ಎಂತ ಪೇಷನೋ ಎಂತದೋ.. ಹ್ಞಾಂ.. ಕುತ್ತಿಗೆಗೆ ಆಭರಣ ಇನ್ನೂ ತೊಡಿಸಿಯೇ ಆಗಿಲ್ಲ.. ಏ.. ಶ್ಯಾಮಲಾ..ಎಲ್ಲಿದ್ದೀ..?" ಎಂದು ಮಗಳನ್ನು ಕೂಗಿದರು.. ತಮ್ಮ ಕುತ್ತಿಗೆಯಲ್ಲಿದ್ದ ಮೂರು ತಲೆಮಾರುಗಳ ಹಿಂದಿನ ಹನ್ನೆರಡು ಪವನಿನ ಪವನದ ಸರವನ್ನು ಮದುಮಗಳಿಗೆ ತೊಡಿಸಲೆಂದು ತೆಗೆದು ಶ್ಯಾಮಲಾರ ಕೈಗಿತ್ತರು.
"ಅಮ್ಮಾ.. ಇದೆಂತ.. ಆಂಟಿಕ್ ಪೀಸ್ ತರಹ ಇದೆ.. ನನಗಿದು ಸೂಟ್ ಆಗಲ್ಲಮ್ಮ.. ಪ್ಲೀಸ್.."

"ನೋಡು ಮಗಳೇ.. ಹಾಗೆ ಹಿರಿಯರು ಮದುಮಗಳಿಗೆಂದು ಕೈಯೆತ್ತಿ ಕೊಟ್ಟದ್ದನ್ನು ಬೇಡವೆನ್ನಬಾರದು. ಅದು ಅವರ ಆಶೀರ್ವಾದ ಎಂದು ತಿಳಿದುಕೋ. ಹೂಂ.." ಎನ್ನುತ್ತಾ ಹೂವಿನ ಜಡೆಯನ್ನು ಸ್ವಲ್ಪ ಮೇಲೆತ್ತಿ ಸರವನ್ನು ತೊಡಿಸಿದರು.

"ಅಲಂಕಾರ ಮುಗೀತಾ.. ವಧುವನ್ನು ಕರೆದುಕೊಂಡು ಬರಲಿ ಸೋದರಮಾವ.." ಹೇಳಿದರು ಪುರೋಹಿತರು. "ಇನ್ನೊಂದು ಐದೇ ನಿಮಿಷದಲ್ಲಿ ರೆಡಿ" ಎಂಬ ಉತ್ತರ ಬಂತು ಡ್ರೆಸ್ಸಿಂಗ್ ರೂಮಿನಿಂದ.
ಮಂಟಪಕ್ಕೆ ಸಾಲಂಕೃತಳಾದ ವಧುವನ್ನು ಕರೆದುಕೊಂಡು ಬಂದರು. 'ಸುಮುಹೂರ್ತೇ ಸಾವಧಾನೌ ಸುಲಗ್ನೇ ಸಾವಧಾನೌ..' ಋತ್ವಿಜರ ವೇದಘೋಷ ಸುತ್ತಲೂ ಧನಾತ್ಮಕ ಕಂಪನವನ್ನು ಉಂಟುಮಾಡಿತ್ತು. ವಧೂವರರು ಪರಸ್ಪರ ಹೂ ಮಾಲೆಯನ್ನ ಬದಲಾಯಿಸಿಕೊಂಡರು.
ಧಾರೆಯ ಕಾರ್ಯಕ್ರಮ ನಡೆಯುತ್ತಲಿತ್ತು.

     ವಿಡಿಯೋ ಗ್ರಾಫರ್ ಮತ್ತು ಫೊಟೋ ಗ್ರಾಫರ್ ಪರಸ್ಪರ ಪ್ರಶ್ನಾರ್ಥಕವಾಗಿ ಮುಖ ಮುಖ ನೋಡಿಕೊಂಡರು. ವಧುವಿನ ಹಿಂದೆ ಕುಳಿತಿದ್ದ ಸೋದರತ್ತೆಯ ಸಮೀಪ ಬಂದು ಏನೋ ಹೇಳಿದ ಫೊಟೋಗ್ರಾಫರ್. "ಹ್ಞಾಂ.. ಹೌದಾ?" ಎಂಬಂತೆ ಆಶ್ಚರ್ಯದಿಂದ ಮದುಮಗಳ ಹತ್ತಿರ ಬಂದು ಬಾಗಿ ನೋಡಿ "ಓಹ್.." ಎಂದು ಹಣೆಗೆ ಕೈಯಿಟ್ಟುಕೊಂಡರು. ಮದುಮಗ ಕಣ್ಸನ್ನೆಯಲ್ಲೇ ಮದುಮಗಳಿಗೆ ಪರಿಸ್ಥಿತಿಯ ಸಂದೇಶ ರವಾನಿಸಿದ. ಸ್ಮಿತಾ ಒಮ್ಮೆಲೇ ಬೆವರತೊಡಗಿದಳು. ತನ್ನ ಟವೆಲಿನಿಂದ ಹಣೆಯಿಂದ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡಳು. ಗೌರವರ್ಣದ ಮುಖ ಗಾಬರಿಯಿಂದ ಕೆಂಪಡರಿತು.

         ಒಂದಿಬ್ಬರು ಹೆಣ್ಣುಮಕ್ಕಳು ಡ್ರೆಸ್ಸಿಂಗ್ ರೂಮಿನವರೆಗೆ ಹೋಗಿ ಬೀಗ ಹಾಕಿದೆ ಎಂದು ವಾಪಸಾದರು. ಈಗ ಬೀಗದ ಕೈ ಹಿಡಿದುಕೊಂಡಿದ್ದ ಮದುಮಗಳ ಚಿಕ್ಕಪ್ಪನ ಹುಡುಕಲು ತೆರಳಿದರು ಕೆಲವರು. ಯಾರದ್ದಾದರೂ ಬ್ಯಾಗಿನಲ್ಲಿ ಬಿಂದಿ ಇದೆಯಾ ಪರಸ್ಪರ ಹೆಂಗಳೆಯರು ಪ್ರಶ್ನಿಸಿಕೊಂಡರು. ಪುರೋಹಿತರು ತಮ್ಮ ಹಿಂದೆ ಇಟ್ಟಿದ್ದ ವೈದಿಕ ಕ್ರಿಯಾಭಾಗಗಳ ಸಲಕರಣೆಗಳ ಮಧ್ಯದಲ್ಲಿದ್ದ ಕುಂಕುಮದ ಕರಡಿಗೆಯನ್ನು ಮುಂದೆ ಹಿಡಿದು ಕನ್ನಡಿಯನ್ನೂ ಮದುಮಗಳಿಗೆ ನೀಡಿದರು. ಸ್ಮಿತಾ ಸ್ವಲ್ಪ ಹಿಂದೆ ಮುಂದೆ ನೋಡಿದಳು.
"ಏ.. ಮಿಸ್ ಇಂಡಿಯಾ.. ಹಾಕ್ಕೊಳ್ಳೇ ಶುದ್ಧ ಕುಂಕುಮ.."
ಅಲ್ಲೇ ನಿಂತಿದ್ದ ಮದುಮಗಳ ತಮ್ಮ ಹೇಳುತ್ತಿದ್ದಂತೆ ನಗುವಿನ ಅಲೆಯೊಂದು ಎದ್ದಿತು. ಫ್ಯಾಷನ್ ಪ್ರಿಯೆ
ಅಕ್ಕನನ್ನು ಆಗಾಗ ಮಿಸ್ ಇಂಡಿಯಾ ಎಂದು ರೇಗಿಸುವುದು ತಮ್ಮ ಸುಧಾಂಶುವಿನ ಪ್ರೀತಿಯ ಅಭ್ಯಾಸಗಳಲ್ಲೊಂದು. ತಮ್ಮನ ಮಾತಿಗೆ ಯಾವತ್ತೂ 'ಮಾಡ್ತೀನಿ ಇರು ನಿಂಗೆ' ಎಂದು ಮತ್ತೆ ಕೆಣಕಲು ಹೋಗುತ್ತಿದ್ದ ಸ್ಮಿತಾ ಇಂದು ಮಾತ್ರ ಕಣ್ತುಂಬಿಸಿಕೊಂಡಿದ್ದಳು.

       ಬೆರಳುಗಳನ್ನು ಕುಂಕುಮದ ಕರಡಿಗೆಗೆ ಅದ್ದಿ  ಹಣೆಗೆ ಬೊಟ್ಟನಿಟ್ಟಳು. ಹಣೆಯಲ್ಲಿ ಹೆಣ್ಣಿನ ಸೌಂದರ್ಯ ಪ್ರತೀಕವಾದ ಸಿಂಧೂರ ಎದ್ದುಕಾಣುತ್ತಿತ್ತು. ಫ್ಯಾನ್ಸಿ ಸ್ಟಿಕ್ಕರ್ ಉದುರಿ ಬೋಳಾಗಿದ್ದ ಹಣೆಗೆ ಕಳೆ ಬಂದಿತು. "ಸ್ಟಿಕ್ಕರ್ ಹೋಗಿ ಸಿಂಧೂರ ಬಂತು.. ಢುಂ.. ಢುಂ.. ಢುಂ" ಎಂದ ಸುಧಾಂಶು. ಮತ್ತೊಮ್ಮೆ ಸಭಾಮಂಟಪ ಗೊಳ್ಳೆಂದು ನಗೆಗಡಲಲ್ಲಿ ತೇಲಿತು. ಸ್ಟಿಕ್ಕರ್ ತರಲೆಂದು ಹೋಗಿದ್ದವರು ಸ್ಟಿಕ್ಕರ್ ಪ್ಯಾಕೆಟ್ ಹಿಡಿದು  ಬಂದು ತಾವೂ ನಗುವಿನ ಅಲೆಯಲ್ಲಿ ಕಳೆದುಹೋದರು. ಧಾರೆಯ ಕಾರ್ಯಕ್ರಮವನ್ನು ವೀಕ್ಷಿಸಲು ಮಂಟಪದ ಸಮೀಪದಲ್ಲಿ ಕುರ್ಚಿಯನ್ನಿರಿಸಿ ಕುಳಿತುಕೊಂಡಿದ್ದ ಸೌಭದ್ರಮ್ಮನವರಿಗೆ ಮೊಮ್ಮಗಳ ಹಣೆಯಲ್ಲಿ ಸಿಂಧೂರ ಎದ್ದು ಕಂಡಿತು. "ಈಗ ಮೊಮ್ಮಗಳ ಅಲಂಕಾರ ಪರಿಪೂರ್ಣವಾಯಿತು.." ಎಂದರು.


    ವರುಷಗಳು ಹಲವು ಉರುಳಿದರೂ ಈಗಲೂ ಅಕ್ಕನನ್ನು ಕಂಡಾಗ ಅಪರೂಪಕ್ಕಾದರೂ "ಸ್ಟಿಕ್ಕರ್ ಹೋಗಿ ಸಿಂಧೂರ ಬಂತು.. ಢುಂ.. ಢುಂ.. ಢುಂ.." ಎಂದು ಆ ಘಟನೆಯನ್ನು ನೆನಪಿಸಿ ಛೇಡಿಸುತ್ತಾನೆ ತಮ್ಮ ಸುಧಾಂಶು.

✍️... ಅನಿತಾ ಜಿ.ಕೆ.ಭಟ್.
28-12-2021.
#ಮಾಮ್ಸ್‌ಪ್ರೆಸೊ ಕನ್ನಡದ ವಾರದ ಸವಾಲು 'ಮದುವೆ ಮನೆಯ ಅವಾಂತರ'ಕ್ಕಾಗಿ ಬರೆದಿರುವುದು.

ಮುನ್ನಡೆಸು ಸೋಮನಾಥೇಶ್ವರ




#ಮುನ್ನಡೆಸು ಸೋಮನಾಥೇಶ್ವರ

ಕರಮುಗಿದು ಬೇಡುವೆ ಕರುಣಿಸಿ ಕಾಯೋ
ಕರಗಿಸುತ ಕಷ್ಟಗಳ ಕರುಣಾಕರ
ವರಗಳನು ನೀಡೋ ಹರಹರ ಮಹದೇವ
ಹರಸುತಿರು ಅನುದಿನ ಪರಮೇಶ್ವರ||೧||

ತುಂಬೆಎಕ್ಕ ಬಿಲ್ವಪತ್ರೆಯ ಅರ್ಪಿಸುವೆ ನಿನಗೆ
ನಂಬಿ ನೀ ನಡೆಸೋ ಸಹಸ್ರಾಕ್ಷ
ತುಂಬಿಕೊಂಡಿಹ ತಮವನೆಲ್ಲ ನೀಗಿಸಿ ಬೆಳಗೆ
ಹಂಬಲಿಸಿಹೆ ದಯೆತೋರು ಫಾಲಾಕ್ಷ||೨||

ಸಂಕಟವನಳಿಸೋ ತವನಾಮವ ಧ್ಯಾನಿಸುವೆ
ಕಿಂಕರನ ಅನುಗ್ರಹಿಸು ಗುಣಸಾಂದ್ರ
ಅಂಕೆಯಿಲ್ಲದ ಮತಿಗೆ ಸತ್ಯಪಥವನೇ ತೋರೋ
ಶಂಕಿಸದೆ ಹರಸೈ ವೃಂದಾರಕೇಂದ್ರ||೩||

ಜಯ ಅಭಯಂಕರ ಜಯ ಶಿವಶಂಕರ
ಜಯ ದೇವೋತ್ತಮ ಶರಣರನು ಉದ್ಧರಿಸು
ಜಯ ನಂದಿವಾಹನ ಜಯ ಭೂತಭಾವನ
ಜಯ ಸೋಮನಾಥೇಶ್ವರ ನಿರತ ಮುನ್ನಡೆಸು||೪||

✍️... ಅನಿತಾ ಜಿ.ಕೆ.ಭಟ್.
01-03-2022.


ಶಿವ ನಾಮಸ್ಮರಣೆ

 


#ಶಿವ ನಾಮಸ್ಮರಣೆ

ಶಶಿಧರ ಶುಭಕರ ಗೌರೀಪ್ರಿಯ
ಭವಹರ ನಟವರ ಬಿಲ್ವಪ್ರಿಯ||ಪ||

ಸುಜನರ ಪೋಷಕ ಮಂಗಳಕಾರಕ
ನೀಲಕಂಠ ಶಿವ ಸರ್ವೇಶ
ತ್ರಿಲೋಕನಾಥ ಸೃಷ್ಟಿಸ್ಥಿತಿಲಯಕಾರಣ
ಗಜಚರ್ಮಾಂಬರ ಗಿರಿಜೇಶ||೧||

ಶರಣ ರಕ್ಷಕ ಪಂಚಾಕ್ಷರ ಪೂಜಿತ
ಢಮರುನಿನಾದ ಪರಮಹರ್ಷಿತ
ಶಾಂಭವಿಪ್ರೀಯ ಸ್ಮಶಾನ ವಾಸಿ
ಉಗ್ರರೂಪಿ ಹರ ಗಣೇಶಪಿತ||೨||

ಸಕಲಪಾಪಹರಣ ಉರಗಧಾರಣ
ತಮಹಾರಕ ಸಾಮಗಾನ ಈಶ್ವರ
ನಿರ್ವಿಕಾರ ಉಮಾಮನೋಹರ
ವಿಶ್ವೋದ್ಧಾರಕ ಶರಣು ಶಂಕರ||೩||

✍️... ಅನಿತಾ ಜಿ.ಕೆ.ಭಟ್.

Friday, 25 February 2022

ಪ್ರಿಯತಮೆ. #ಕವನ

 


#ಪ್ರಿಯತಮೆ

ಜೀವನದಿ ಭರವಸೆಯ ಚಿಲುಮೆ
ನಗುಮೊಗದ ಚೆಲುವೆ ನನ್ನ ಪ್ರಿಯತಮೆ
ಹೂ ಮನಸಿನ ಪ್ರೇಮವಾಣಿಯ ಸರದಾರಿಣಿ
ಸದಾ ಹಿತವ ಬಯಸುವ ನನ್ನ ರಮಣಿ||೧||

ಕಣ್ಣಂಚಲಿ ಸೆಳೆವ ತುಂಬು ಮಾಂತ್ರಿಕತೆ
ಒಲವ ಬಂಧನದ ಮೋಹಕ ಸುಮಲತೆ
ನಿತ್ಯವೂ ಜೊತೆನಡೆವ ಮಧುರ ಬಂಧನ
ಸವಿಬಾಳ ಹಾದಿಗೆ ಇವಳೇ ನನ್ನ ಚೇತನ||೨||

ಎಂದೆಂದೂ ಮರೆಯಲಾರೆ ನಿನ್ನ ಸ್ಫೂರ್ತಿಯ
ನಡೆವೆನು ನುಡಿದಂತೆ ಇಲ್ಲ ತಿಳಿ ಅತಿಶಯ
ಕಣ್ಮುಚ್ಚಿದರೂ ಕಾಣುವುದು ನಿನ್ನದೇ ಬಿಂಬ
ಆವರಿಸಿರುವೆ ನೀ ನನ್ನ ಮನದ ತುಂಬ||೩||

✍️... ಅನಿತಾ ಜಿ.ಕೆ.ಭಟ್.
04-02-2022.

#ಪ್ರತಿಲಿಪಿಕನ್ನಡ ದೈನಿಕ ಕವನ
#ದೈನಿಕ ವಿಷಯ- ಪ್ರಿಯತಮೆ


ಜೀವನ್ಮುಖಿ #ಒಂದು ಸಣ್ಣ ಪ್ರಶಂಸೆ

       



   ಜೀವನದ ಪ್ರತಿಯೊಂದು ಖುಷಿಯ ಘಳಿಗೆಗಳನ್ನು ಮೆಲುಕು ಹಾಕುವಂತಾಗಬೇಕು. ಎಂದೋ ಮರು ನೆನಪಿಸಿ ಮತ್ತದೇ ಖುಷಿಯ ಉಯ್ಯಾಲೆಯಲ್ಲಿ ಕುಳಿತು ತೂಗಬೇಕು ಎಂಬುದು ಸಾಕ್ಷಿಯ ಆಸೆ. ಅದಕ್ಕಾಗಿ ಆಕೆ ಹೆಚ್ಚು ಅವಲಂಬಿಸಿದ್ದು ನೆಚ್ಚಿಕೊಂಡದ್ದು ಸಾಮಾಜಿಕ ಜಾಲತಾಣವನ್ನು. ಪ್ರತಿದಿನದ ಅವಳ ಚಟುವಟಿಕೆಗಳನ್ನು ಹಂಚಿಕೊಂಡರೆ ಅವಳಿಗೆ ಸಮಾಧಾನ. ಆ ದಿನ ಎಲ್ಲಿಗಾದರೂ ಸಮಾರಂಭಕ್ಕೆ ಹೋದರೆ ನಾಲ್ಕಾರು ಫೊಟೋಗಳನ್ನು ಫೇಸ್ಬುಕ್, ವಾಟ್ಸಪ್ ಸ್ಟೇಟಸ್ ಗಳಲ್ಲಿ ಅಪ್ಲೋಡ್ ಮಾಡುವುದು, ಅಡುಗೆಗಳ ಫೊಟೋ ಹಂಚಿಕೊಳ್ಳುವುದು ಅವಳ ಜಾಯಮಾನ. ಸಮಾನಮನಸ್ಕ ಸ್ನೇಹಿತರ ಪರಸ್ಪರ ಪ್ರೋತ್ಸಾಹ ಅವಳಿಗೆ ಜೀವನದಲ್ಲಿ ಹೊಸ ಹುರುಪನ್ನು ತಂದುಕೊಟ್ಟಿತ್ತು.

      ಹೊಸ ಹೊಸ ಸ್ನೇಹಿತ ಸ್ನೇಹಿತೆಯರು ದೊರೆತು ಅವಳ ಆಪ್ತ ಪ್ರಪಂಚವೇ ಹಿರಿದಾದಂತಾಯಿತು.
ಮುಖ ಮಾತ್ರ ಕಾಣುವ ಪರದೆ ಬಲು ಸುಂದರ. ಮುಖಾಮುಖಿಯಾಗುವಾಗ ಸಮಾಜದಲ್ಲಿನ ಓರೆಕೋರೆಗಳೆಲ್ಲ ಎದ್ದುಕಾಣುವಂತೆ ಇಲ್ಲಿ  ಕಾಣುವುದು ತೀರಾ ಅಲ್ಪ. ಸಾಕ್ಷಿಯ ಆಸಕ್ತಿಗಳೂ ವಿಶಾಲವಾಗುತ್ತಾ ಹೋದವು. ಅದಕ್ಕೆ ತಕ್ಕಂತೆ ಪ್ರೋತ್ಸಾಹದ ಹೊಳೆಯೇ ಹರಿದಾಗ ಆ ಪ್ರತಿಭೆ ಮಿಂಚುವುದರಲ್ಲಿ ಎರಡು ಮಾತಿಲ್ಲ.

     ವಿವಿಧ ಭಂಗಿಗಳಲ್ಲಿ ಫೊಟೋ ಹಂಚಿಕೊಳ್ಳುವ ಸಾಕ್ಷಿಯ ಸೌಂದರ್ಯಕ್ಕೆ ಜನ ತಲೆದೂಗಿದರು. ಉಡುಪುಗಳನ್ನು ತೊಟ್ಟುಕೊಳ್ಳುವಲ್ಲಿ ಅವಳ ಕುಶಲತೆಯೂ ಎಲ್ಲರ ಗಮನಸೆಳೆಯಿತು. ನಾನಾ ಮುಖಭಾವದಲ್ಲಿ ಅತ್ಯಂತ ಸುಂದರ ಭಂಗಿಯಲ್ಲಿ ಫೊಟೋ ಕ್ಲಿಕ್ ಮಾಡಲು ಬಹಳ ಬೇಗನೇ ಕಲಿತುಕೊಂಡಳು. ಸಾಂಪ್ರದಾಯಿಕ ಉಡುಪುಗಳಲ್ಲೇ ಆಗಲಿ ಫ್ಯಾಷನ್ ಉಡುಪುಗಳಲ್ಲೇ ಆಗಲಿ ಅವಳ ಕಲಾತ್ಮಕ ಭಂಗಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಿತ್ತು.

        ಆರಂಭದಲ್ಲಿ ಮನೆಯವರೆಲ್ಲರ ಪ್ರೋತ್ಸಾಹ ಚೆನ್ನಾಗಿತ್ತು. ದಿನಗಳೆದಂತೆ ಆಕೆಗೆ ತನ್ನ ಕುಟುಂಬಕ್ಕಿಂತ ಜಾಲತಾಣದ ಸೆಳೆತವೇ ಹೆಚ್ಚಾಯಿತು. ಮನೆಯವರ ನೇರ ನುಡಿಗಿಂತ ಬಣ್ಣದ ಮಾತುಗಳು ಹಿತವಾಯಿತು. ತನ್ನ ಬಗ್ಗೆ ಹಿಂದಿದ್ದ ಅಭಿಮಾನ ಮುಂದೆ ಹೆಚ್ಚುತ್ತಲೇ ಹೋಯಿತು. ಆತ್ಮವಿಶ್ವಾಸದ ಹೆಜ್ಜೆಗಳನ್ನಿರಿಸಿದಳು.
ತನಗೆ ಸಾಟಿ ಯಾರಿಲ್ಲ ಎಂಬ ಸಣ್ಣದೊಂದು ಭಾವ ಅವಳಿಗರಿವಿಲ್ಲದೆಯೇ ಮನಸಿನೊಳಗೆ ಹೊಕ್ಕು ಬಿಟ್ಟಿತು.

       ಫೊಟೋ ಶೂಟ್ ಮಾಡುವುದಷ್ಟೇ ಅಲ್ಲ ಫೊಟೋದ ಹಿನ್ನೆಲೆಯ ಬಗ್ಗೆಯೂ ಗಮನಹರಿಸ ತೊಡಗಿದಳು. ವಿವಿಧ ವಿನ್ಯಾಸದ ಹಿನ್ನೆಲೆಗಾಗಿ ಖರ್ಚುವೆಚ್ಚಗಳೂ ಮಾಡಬೇಕಾಗಿ ಬಂತು. ಪತಿ ತನಗೆ ಆರ್ಥಿಕವಾಗಿ ಕಷ್ಟವಾದರೂ ಮಡದಿಯ ಆಸೆಯನ್ನು ಈಡೇರಿಸಲು ಕೈ ಜೋಡಿಸಿದರು. ಸಾಕ್ಷಿ ಸಾಮಾಜಿಕ ಜಾಲತಾಣ ತನಗೆ ಹೊಸಬಗೆಯ ಅವಕಾಶವೊಂದನ್ನು ಕೊಟ್ಟಿದೆ ಎಂದು ಸಂಭ್ರಮಿಸಿದಳು. ಅವಳ ಫೊಟೋಗಳನ್ನು ಕೊಳ್ಳಲು ಗ್ರಾಹಕರೂ ಮುಂದೆ ಬಂದರು. ಹಲವು ಕವಿಗಳಿಗೆ ಹಾಡುಗಳಿಗೆ ಸ್ಫೂರ್ತಿಯಾದಳು. ಕೆಲವು ವೇದಿಕೆಗಳು ಇಂತಹ ಭಂಗಿಯಲ್ಲೊಂದು ಫೊಟೋ ಶೂಟ್ ಮಾಡಿ ಕಳುಹಿಸಿಕೊಡಿ ಎಂದು ಬೇಡಿಕೆಯಿಟ್ಟು ಶುಲ್ಕವನ್ನು ಪಾವತಿಸಿದವು.

     ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸೌಂದರ್ಯ ಸಾಧನಗಳನ್ನು ಬಳಸತೊಡಗಿದಳು. ಯಾರಾದರೂ "ಈ ಫೊಟೋ ಚೆನ್ನಾಗಿ ಬಂದಿಲ್ಲ ಮೇಡಂ.. ಇನ್ನೊಂದು ಚೂರು ಬೇರೆ  ಭಂಗಿಯಲ್ಲಿ ಇರಲಿ" ಎಂದರೆ ತಕ್ಷಣ ಅವರ ಬೇಡಿಕೆಗೆ ಸ್ಪಂದಿಸಿ ಫೊಟೋ ಶೂಟ್ ಮಾಡಿ ಕಳುಹಿಸಿ ತನ್ನ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದಳು.

     ಹವ್ಯಾಸವು ಉದ್ಯಮದ ರೂಪ ಪಡೆಯಲಾರಂಭಿಸಿತು. ಗ್ರಾಹಕರ ಸೇವೆಯೇ ತನ್ನ ಸಂತೃಪ್ತಿ ಎಂಬಂತೆ ಫೋಟೋ ಶೂಟ್ ಮಾಡುವುದರಲ್ಲೇ ತೊಡಗಿಕೊಂಡಳು. ಅವಳ ಯಶಸ್ಸನ್ನು ಕಂಡ ಹಲವು ಮಂದಿ ಇದೇ ದಾರಿಯನ್ನು ಹಿಡಿದರು. ಎಲ್ಲವೂ ಹೊಸಮುಖಗಳು. ಹಲವು ಕಲಾತ್ಮಕತೆ. ವಿಭಿನ್ನವಾದ ನೈಪುಣ್ಯತೆ. ಸಹಜ ಸೌಂದರ್ಯ... ಇತ್ಯಾದಿ  ಅಂಶಗಳು ಜನರನ್ನು ಆಕರ್ಷಿಸಿದವು.

       ಸಾಕ್ಷಿಯ ಫೋಟೋಗಳನ್ನು ನೋಡಿ ಆಸ್ವಾದಿಸುತ್ತಿದ್ದವರು ಪ್ರೋತ್ಸಾಹಿಸುತ್ತಿದ್ದವರು ಈಗ ಹೊಸ ಮುಖಗಳತ್ತ ವಾಲಿದರು. ಸಾಕ್ಷಿಯ ಫೋಟೋಗಾಗಿ ಕಾಯುತ್ತಿದ್ದವರು, ಈಗ ಹೊಸ ಮುಖಗಳ ಚೆಲುವನ್ನು ಕಣ್ತುಂಬಿಸಿಕೊಳ್ಳಲು ಕಾದು ಕುಳಿತರು. ವಿಪರೀತ ಬೋಲ್ಡ್ ಭಂಗಿಯ ಫೊಟೋಗಳನ್ನು ಸೆರೆಹಿಡಿಯಲು ಆಸಕ್ತಿಯಿಲ್ಲದ ಸಾಕ್ಷಿ ಸ್ವಲ್ಪ ಹಿಂದೆ ಬಿದ್ದಳು. ಬೋಲ್ಡ್ ಆಗಿರುವಂತಹ, ರಸಿಕರನ್ನು ರಂಜಿಸುವಂತೆ ಹೊಸಮುಖಗಳಿಗೆ ತನ್ನೆದುರೇ ಬಹಳಷ್ಟು ಬೇಡಿಕೆ ಸಿಕ್ಕಾಗ ಅವಳಿಗೆ ಉತ್ಸಾಹ ಕುಂದಿತು.

     ಆದರೆ ಹವ್ಯಾಸವನ್ನು ನಿಲ್ಲಿಸಲು ಮಾತ್ರ ಮನಸ್ಸು ಬರುತ್ತಿಲ್ಲ, ಏಕೆಂದರೆ ಅಂತಹ ಪ್ರತಿಭೆಯೂ ಎಲ್ಲರಲ್ಲೂ ಇರುವುದಿಲ್ಲ. ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು ಮತ್ತು ಅದು ಈಗ ಅವಳಿಗೆ ಪ್ರಪಂಚವೇ ಆಗಿತ್ತು. ಇನ್ನು ಯಾವ ನಿಟ್ಟಿನಲ್ಲಿ ಹೊಸತನವನ್ನು ಪ್ರಯತ್ನಿಸಬಹುದು ಎಂದು ಆಲೋಚಿಸುತ್ತಾ ಹಲವು ಪ್ರಯೋಗಗಳಿಗೆ ತನ್ನನ್ನೇ ತಾನು ನೋಡಿಕೊಂಡಳು. ಆದರೆ ಹೊಸ ಪ್ರಯೋಗಗಳು ತನ್ನ ನಿರೀಕ್ಷೆಯಂತೆಯೇ ಮುಂದೆ ಸಾಗದೆ ನೆಲಕಚ್ಚಿದವು.

       ಅವಳಿಗೆ ಒಂದು ರೀತಿಯ ವೇದನೆ ಆರಂಭವಾಯಿತು. ಒಮ್ಮೆಲೆ ಬಂದ ಪ್ರೋತ್ಸಾಹದ ಸುರಿಮಳೆ ಈಗ ಇಳಿಮುಖವಾದಾಗ ಸಣ್ಣದೊಂದು ಜಿಗುಪ್ಸೆ ತನ್ನ ಕಾಡುತ್ತಿತ್ತು. ತಾನು ಸೋತೆನೇ?  ತನಗೂ ಮುಂದೆ ಬರುವ ಶಕ್ತಿ ಇಲ್ಲವೇ? ಎಲ್ಲವನ್ನೂ ಕಳೆದುಕೊಂಡೆ ಎಂಬುದೆಲ್ಲ ಮನಸ್ಸಲ್ಲಿ ಸುಳಿಯಲಾರಂಭಿಸಿತು. ಆಗ ಸಾಕ್ಷಿಯ ಮಂಕುತನವನ್ನು ಅರ್ಥಮಾಡಿಕೊಳ್ಳಲು  ಜಾಲತಾಣದ ಯಾವ ಮಂದಿಯೂ ಇರಲಿಲ್ಲ.

      ಹೊಸ ಆಶಾಕಿರಣವಾಗಿದ್ದ ಸಾಮಾಜಿಕ ಜಾಲತಾಣ ಆಕೆಯ ಮನಸ್ಸು ಕೆಡಿಸಿತ್ತು. ಈ ಕ್ಯಾಮೆರಾ ಮುಂದಿನ ಬದುಕು ಇಷ್ಟೇ ಎಂದುಕೊಂಡಳು. ಇಲ್ಲ ಇನ್ನು ಕೆಲವು ಸಮಯದವರೆಗೆ ಏನನ್ನು ಮಾಡುವುದಿಲ್ಲ. ಆಮೇಲೆ ನೋಡೋಣ ಎಂದು ಹಿಂದೆ ಸರಿದಳು. ಸಾಕ್ಷಿಯು ಸದಾ ಅಸಹನೆ ಅತ್ಯಂತ ಉದ್ವೇಗದಿಂದ ಬಳಲುತ್ತಿರುವುದು ನೋಡಿ ಅವಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡವರು ಕುಟುಂಬದವರು. ಪ್ರೀತಿಯಿಂದ ಆಕೆಯ ಜೊತೆ ನಿಂತರು. ಸಾಕ್ಷಿ ಕೆಲವು ದಿನಗಳ ಬಳಿಕ ಮತ್ತೆ ಫೊಟೋ ಅಪ್ಲೋಡ್ ಮಾಡಲಾರಂಭಿಸಿದಳು. ಆದರೆ ಬೇಡಿಕೆ ಮೊದಲಿನಂತಿಲ್ಲ. ಯಾರೂ ಅತಿಯಾಗಿ ಹೊಗಳುತ್ತಿಲ್ಲ. ಫೊಟೋ ನೋಡುವ ಕುತೂಹಲವೂ ಇಲ್ಲ. ಒಂದು ಸಣ್ಣ ಪ್ರಶಂಸೆಯೂ ಇಲ್ಲ. ಅವಳ ಅಸಹಾಯಕತೆಗೆ ಕೊನೆಯಿಲ್ಲ.

                    *****
         
         ಅಂದು ಕೂಡ ಮಂಕಾಗಿ ಬಿದ್ದುಕೊಂಡಿದ್ದವಳಲ್ಲಿ ತನ್ನ ಬದುಕು ಮುಳುಗಿ ಹೋಯಿತು ಎಂಬ ಭಾವ ಅಲೆಅಲೆಯಾಗಿ ಸುತ್ತಿ ಬರತ್ತಿತ್ತು. ಏಳಲು ಉತ್ಸಾಹವಿಲ್ಲ. ಎಲ್ಲವೂ ಅಯೋಮಯ.
"ಸಾಕ್ಷಿ.." ಎಂಬ ಪತಿಯ ಕರೆಗೆ ಓಗೊಟ್ಟು ಕೋಣೆಯಿಂದ ಬಂದಳು.
"ಬೇಗ ಬೇಗ ರೆಡಿಯಾಗಿ ಬಾ.."
ಎಂದಾಗ ಪ್ರಶ್ನಿಸುವ ಮನಸ್ಸಾಗದೆ ಹೊರಟು ನಿಂತಳು. ಎಲ್ಲಿಗೆ ಏನು ಎಂದು ವಿಚಾರಿಸುವ ಗೋಜಿಗೆ ಹೋಗಲಿಲ್ಲ. ಮನದೊಳಗೆ ಮಾತ್ರ ಆಲೋಚನೆಗಳ ಮಹಾಪೂರವೇ ಹರಿಯುತ್ತಿತ್ತು.

     ತುಂಬು ಸಂಭ್ರಮದಿಂದ ಕೂಡಿದ್ದ ಆ ವಾತಾವರಣ ಹೊಸದಾಗಿತ್ತು. ಗಾಳಿಗೆ ತೂಗುತ್ತಿದ್ದ ಮರಗಳು ಒಣಗಿದ ಎಲೆಗಳನ್ನು ಉದುರಿಸುತ್ತಿದ್ದವು. ಹಕ್ಕಿಗಳು ಉಲಿಯುತ್ತಿದ್ದವು.
ಒಳಗೆ ಸಾಗುತ್ತಿದ್ದಂತೆ ಮಿಸೆಸ್ ಸಾಕ್ಷಿ ಅವರಿಗೆ ನಮ್ಮ ಕಾರ್ಯಕ್ರಮಕ್ಕೆ ಸುಸ್ವಾಗತವನ್ನು ಕೋರುತ್ತಿದ್ದೇವೆ ಎಂಬ ಉದ್ಘೋಷ ಕೇಳಿಬಂತು.
ಚಪ್ಪಾಳೆಯ ಸದ್ದು ಕಿವಿಗಪ್ಪಳಿಸಿದವು. ಅತ್ಯಂತ ಗೌರವದಿಂದ ಬರಮಾಡಿಕೊಂಡು ದೀಪಬೆಳಗಿಸಿ ಉದ್ಘಾಟಿಸಲು ಕೋರಿಕೊಂಡರು. ಸುತ್ತಲೂ ನೆರೆದಿದ್ದ ವಿಶೇಷ ಚೇತನ ಮಕ್ಕಳೆಲ್ಲರೂ ನಗುತ್ತಾ ಹಚ್ಚುವೆವು ಸಂತಸದ ದೀಪ.. ಬಾಳನ್ನು ಬೆಳಗುವ ದೀಪ.. ಎಂದು ಹಾಡಿನ ಮೂಲಕ ಚಾಲನೆ ನೀಡಿದರು.

       ವಿಶೇಷ ಚೇತನ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಮುಂದುವರಿದು, ಮಿಸೆಸ್ ಸಾಕ್ಷಿಯವರ ಪರಿಚಯ ಮಾಡಿಕೊಟ್ಟರು. ಅವರು ಹೇಳುತ್ತಿದ್ದ ಒಂದೊಂದು ಪದವೂ ಅವಳಿಗೆ ಅಪ್ಯಾಯಮಾನವಾಗಿದ್ದು, ಸಾಧನೆ ಮಾಡಬೇಕಾದರೆ ಬೇರೇನೂ ಬೇಡ ಮನಸ್ಸಿದ್ದರೆ ಸಾಕು ಎಂಬ ಮಾತು ಬಹಳ ಮನಮುಟ್ಟಿತು.  ಇಂದಿನಿಂದ ನನ್ನ ಫೊಟೋ ತೆಗೆದುಕೊಂಡು ನಾನು ವಿಜ್ರಂಭಿಸುವುದರ ಬದಲು ಇಂತಹ ಮಕ್ಕಳ ಬದುಕು ಮುಂದೆ ಹಲವರಿಗೆ ಪ್ರೇರಣೆಯಾಗುವಂತೆ, ಇವರ ಫೊಟೋಗಳೆಲ್ಲ ಸಾಧನೆಯೊಂದಿಗೆ ರಾರಾಜಿಸುವಂತೆ ಮಾಡಬೇಕು ಎಂದು ನಿರ್ಧರಿಸಿದಳು. ಕಾರ್ಯಕ್ರಮದಿಂದ ಹೊರಡುವಾಗ ಅವಳ ಮನದಲ್ಲಿ ಮೂಡಿದ್ದ ಗೆಲುವು, ಅವಳ ನಿರ್ಧಾರ ಪತಿಯ ಹೃದಯ ತುಂಬುವಂತೆ ಮಾಡಿತು.

✍️... ಅನಿತಾ ಜಿ.ಕೆ.ಭಟ್.
17-02-2022.

#ಪ್ರತಿಲಿಪಿ ಕನ್ನಡ ದೈನಿಕ ವಿಷಯಾಧಾರಿತ ಕಥೆ
#ವಿಷಯ- ಒಂದು ಸಣ್ಣ ಪ್ರಶಂಸೆ



ಬಂದು ಬಿಡು ಪ್ರಿಯೇ...

 


#ಬಂದುಬಿಡು ಪ್ರಿಯೇ...

ಹೇ.. ಪ್ರಿಯೇ.. ನನ್ನೀ ಬರಡು ಹೃದಯದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದವಳೇ..

         ಕಳೆದ ಆರು ತಿಂಗಳಿನಿಂದ ನನ್ನ ಬದುಕು ಅದೆಷ್ಟು ಚೇತೋಹಾರಿಯಾಗಿತ್ತು. ಒಂದು ಕ್ಷಣವೂ ಬೇಸರ ಮೂಡಿರಲಿಲ್ಲ. ದಿನದಿಂದ ದಿನಕ್ಕೆ ಲವಲವಿಕೆ ಹೆಚ್ಚುತ್ತಾ ಹೋಗಿತ್ತು. ನೀ ಬರುವಾಗ ನನ್ನೊಳಗಿದ್ದ ಆತಂಕವನ್ನು ಅದು ಹೇಗೆ ನನ್ನೆದೆಯಿಂದ ಹೊರಹಾಕಿದೆಯೋ ನೀನೇ ಬಲ್ಲೆ. ಎಂತಹಾ ಚಮತ್ಕಾರ ಅಡಗಿತ್ತು ನಿನ್ನ ಇರುವಿಕೆಯಲ್ಲಿ. ಮನೆಯ ಒಂದೊಂದು ಮೂಲೆಯೂ ಇಂದು ನಾನಾ ಕಥೆಗಳನ್ನು ನನಗೆ ನೆನಪಿಸುತ್ತಿವೆ. ನಾವಾಡಿದ ಮಾತುಗಳನ್ನೆಲ್ಲ ನೆನಪಿಟ್ಟು ಮರು ಪಿಸುಗುಡುತ್ತಿವೆ. ಹಜಾರದ ಕಿಟಕಿಯಂಚು ನನ್ನನ್ನು ಬಾ.. ಬಾ.. ಎಂದು ಕರೆದಂತೆ ಭಾಸವಾಗುತ್ತಿದೆ. ನಿನ್ನೊಡನೆ ಬೆಳದಿಂಗಳೂಟ ಮಾಡಿದ್ದು ಇನ್ನೂ ನಾಲಿಗೆಯನ್ನು ನೀರೂರಿಸುತ್ತಿದೆ. ಚಂದಿರನ ಮಂದ ಬೆಳಕು ನಮ್ಮನ್ನು ಕೆಣಕಿ ಕಚಗುಳಿಯಿಟ್ಟದ್ದು ಇಂದೋ ನಿನ್ನೆಯೋ ನಡೆದಂತಿದೆ. ಶಶಿಯ ತಂಪಿನ ಓಕುಳಿಯಲ್ಲಿ ನನ್ನ ತೋಳುಗಳಲ್ಲಿ ನೀನು ಕರಗಿಹೋದದ್ದು ನೆನೆದು ಈಗಲೂ ತೋಳುಗಳನ್ನೊಮ್ಮೆ ಬಿಗಿದು ಕಣ್ಮುಚ್ಚಿ ನಿನ್ನನ್ನೇ ಆವಾಹಿಸಿ ನೆನಪಿಸಿಕೊಂಡರೆ ಮೈ ಜುಂ ಎನ್ನುತ್ತದೆ.

       ಗುಡುಗು ಮಿಂಚಿನ ಭಯಕ್ಕೆ ಕಂಗಾಲಾದ ನಿನ್ನನ್ನು ಬೆಚ್ಚಗೆ ನನ್ನೆದೆಗಾನಿಸಿ ಮಗುವಿನಂತೆ ಮುಚ್ಚಟೆ ಮಾಡಿದ್ದು ನೆನಪಿದೆಯಾ.. ಮೊದಲ ಬಾರಿ ನಿನ್ನ ಕಿರುಬೆರಳು ಸೋಕಿದಾಗ ವಿದ್ಯುತ್ ಪ್ರವಹಿಸಿದಂತಾಗಿದ್ದು ನನಗೆ ಮಾತ್ರವಾ ಅಂದುಕೊಂಡಿದ್ದೆ. ನನ್ನ ಊಹೆ ಸುಳ್ಳಾಗಿತ್ತು, ನಿನಗೂ ಅದಕ್ಕಿಂತ ಭಿನ್ನವಾಗಿರಲಿಲ್ಲ ಆ ಸ್ಪರ್ಶ ಎಂದು ನಿನ್ನ ಬಾಯಿಂದಲೇ ಕೇಳಿ ಮತ್ತೆ ರೋಮಾಂಚನಗೊಂಡಿದ್ದೆ.

     ಬಹಳ ವರುಷಗಳಿಂದ ಯಾರಿಂದಲೂ ಬಿಡಿಸಲಾಗದ ಆ ಚಟವನ್ನು ಬಿಡಿಸಿದ ಮಾಂತ್ರಿಕ ಶಕ್ತಿ ನೀನು. ಸ್ವತಃ ನಾನೇ ಹಲವು ಬಾರಿ ಕಠಿಣ ನಿರ್ಧಾರ ಮಾಡಿದರು ಮತ್ತೆ ತಡೆಯಲಾರದೆ ಅದಕ್ಕೇ ದಾಸನಾಗಿದ್ದೆ. ಆದರೆ ನಿನ್ನ ಸನಿಹದಲ್ಲಿ ಅದಾವುದರ ಪರಿವೆಯೂ ನನಗಿರಲಿಲ್ಲ ಎಂಬುದೇ ಈಗ ಅಚ್ಚರಿ ಮೂಡಿಸುತ್ತಿದೆ. ಈಗ ನಿನ್ನ ವಿರಹ ತಾಳಲಾರದೆ ಮತ್ತದೇ ಜಂಗಮವಾಣಿಯ ಸಂಗದಲ್ಲಿ ಬಿದ್ದಿದ್ದೇನೆ. ಬಿಡಿಸಲು ನೀನೇ ಬರಬೇಕು. ಬೇಗ ಬರುವೆಯೇನೇ...?

     ಪ್ರತೀ ಸಂಜೆಯೂ ನಿನ್ನ ಜೊತೆಗೆ ಕುಳಿತು ನಿನ್ನ ಕಿವಿಗೆ ಮಾತ್ರ ಕೇಳುವಂತೆ ಪ್ರೇಮಗೀತೆಯನ್ನು ಗುನುಗುತ್ತಾ ಬಾಲ್ಕನಿಯಲ್ಲಿ ಕುಳಿತಾಗ ಮೈಗೆ ಮೈ ತುಸು ಜಾಸ್ತಿಯೇ ಅಂಟಿಸುತ್ತಿದ್ದೆ! ಪೋರಿ ನೀನು.. ನನ್ನ ಹೃದಯ ಚೋರಿ!!  ಆಗಾಗ ಯಾರೊಂದಿಗಾದರೂ ಜಗಳಾಡುತ್ತಲೇ ಇರುತ್ತಿದ್ದ ನಾನು ನಿನ್ನೊಂದಿಗೆ ಒಮ್ಮೆಯೂ ಜಗಳವಾಡದಿದ್ದುರ ಹಿಂದೆ ನಿನ್ನದೇ ಕೈವಾಡ ಇರೋದು ಗೊತ್ತಾಯ್ತಾ.. ನನ್ನ ಕೋಪವನ್ನು  ಕಣ್ಣಲ್ಲೇ ಕೊಂದು ಬಿಡುತ್ತಿದ್ದ ಪಾತಕಿ ನೀನು. ಅರ್ಥಾತ್ ಕೋಪಪಾತಕಿ! ಪ್ರೇಮಾರಾಧಕಿ..!!

    ನಾನು ನಿನ್ನ ಹೆಸರನ್ನೇ ಮರೆತಿದ್ದೇನೆ. ಆದರೆ ನನ್ನುಸಿರು ಮಾತ್ರ ನಿನ್ನುಸಿರಿನ ಗತಿಯೊಂದಿಗೇ ಸಾಗುತ್ತಿದೆ. ಹೃದಯ ನಿನ್ನ ಜೊತೆ ತಾಳಹಾಕುತ್ತಿದೆ. ಕೊಂಕು ಹುಡುಕುವ ಬುದ್ಧಿಯೆಲ್ಲಾ ಮೆದುಳಿನಿಂದಲೇ ಮರೆಯಾಗಿದೆ. ಕೆಡುನುಡಿಗಳ ಮೀಸೆಯಡಿಯಲ್ಲಿ ಹುದುಗಿಸಿಬಿಟ್ಟ ನೀನೇ.. ನನ್ನವಳೇ.. ಎಂದು ಬರುವೆ.. ಹೇಳೇ.. ಹೇಳಿ ಬಿಡು.. ನಾನಿನ್ನು ಕಾಯಲಾರೆ.. ಒಂದೊಂದು ಕ್ಷಣವೂ ಕಷ್ಟವಾಗುತ್ತಿದೆ ನನಗೆ..

      ನಾನು ‌ನಿನ್ನ ನೋಯಿಸಿದ್ದರೆ ಸಾರಿ ಕಣೆ.. ನೂರೊಂದು ಸಲ ಸಾರಿ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ನಿನ್ನಡುಗೆಯ ಘಮವಿಲ್ಲದೆ ನಾಲಿಗೆ ಹಠ ಹಿಡಿಯುತ್ತಿದೆ. ನಿನ್ನ ಕಾಲ್ಗೆಜ್ಜೆಯ ಘಲ್ ಘಲ್ ಧ್ವನಿಗೆ ಎದೆಯೊಳಗೆ ಏಳುತ್ತಿದ್ದ ಪುಳಕವೆಲ್ಲ ತಟಸ್ಥವಾಗಿವೆ. ನಿನ್ನ ಬಳೆಗಳ ಕಿಣಿ ಕಿಣಿ ಕಲರವ ಕೇಳದೆ ನಿದ್ದೆ ಹತ್ತಿರವೇ ಸುಳಿಯುತ್ತಿಲ್ಲ. ನಮ್ಮಿಬ್ಬರ  ಬೆಸುಗೆಯನ್ನು ಕಂಡು ಉರಿಯುತ್ತಿದ್ದ ತಲೆದಿಂಬು ಕೂಡಾ ಇಂದು ನನ್ನನ್ನು ಅಣಕಿಸುತ್ತಿದೆ. ಅವಳಿದ್ದರೆ ನನ್ನ ನೆನಪಿಲ್ಲ ನಿನಗೆ.. ಈಗ ನಾನೇ ಗತಿ ನೋಡು ಎಂದು ಹೀಯಾಳಿಸಿ ನನ್ನ ಲೀಟರ್ ಗಟ್ಟಲೆ ಕಣ್ಣೀರನ್ನು ತನ್ನೊಳಗೆ ಹಿಡಿದಿಡದೆ ಸತಾಯಿಸುತ್ತಿದೆ. ಪ್ರಿಯೇ.. ಪ್ರಾಣಕಾಂತೆ.. ಅರ್ಥಮಾಡಿಕೊಳ್ಳೇ...

     ನಿನಗೆಂದು ಸಂಜೆ ಎರಡು ಮೊಳ ಮಲ್ಲಿಗೆ ಹೂವು ತಂದು ಮುಡಿಗೆ ಮುಡಿಸುವೆ. ಬೆಳಗ್ಗೆ ಬೇಗನೆದ್ದು ಕೇಸರಿ ದಳಗಳನ್ನು ಹಾಕಿದ ಬಿಸಿ ಹಾಲು  ನಿನ್ನ ಕೈಗೆ ನಾನೇ ಕೊಡುವೆ.. ಹ್ಞೂಂ.. ಚೂರೇ ಚೂರು ಮುಂದುವರಿದು ನೀನೊಪ್ಪಿದರೆ ನಾನೇ ಕುಡಿಸುವೆಯೆಂದು ಹೇಳಬೇಕಿಲ್ಲ ತಾನೇ.. ನಿನ್ನ ಕೆನ್ನೆ ರಂಗೇರಿರಬಹುದೆಂದು ನನಗನಿಸುತ್ತದೆ.. ಅಷ್ಟೇ ಅಲ್ಲ.. ನಸುನಾಚಿ ರಂಗೇರಿದ ಕದಪು ಕಣ್ಣ ಮುಂದೆ ಬಂದು ಮನವು ರಚ್ಚೆ ಹಿಡಿದಿದೆ.. ಒಂದು ಬಿಗಿಯಾದ ಬಾಹು ಬಂಧನ.. ಹಣೆಮೇಲೆ ಸಿಹಿ ಮುತ್ತು.. ಮುಂಗುರುಳಲ್ಲೊಮ್ಮೆ ಕೈಯಾಡಿಸಿ  ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕೆನಿಸುತ್ತಿದೆ.

    ಎಷ್ಟು ದಿನವೇನೇ ರೆಸ್ಟು..? ಆ ರೆಸ್ಟಿಗೂ ಬೇಸರವಾಗಿರಬೇಕು ಕಣೆ.. ಬಂದುಬಿಡು.. ಸಹಚಾರಿಣಿಯಾಗಿ ಅನುದಿನವೂ ನನ್ನೊಲವಿನ ಬಲೆಯಲ್ಲಿ ಬಂಧಿಯಾಗಿ ಬಿಡು.. ತವರು ಮನೆ ವಾಸ ಸಾಕು ಕಣೇ.. ಅದಕ್ಕಿಂತ ನೂರುಪಟ್ಟು ಹೆಚ್ಚು ಪ್ರೇಮ ಧಾರೆಯೆರೆಯಲು ಸಿದ್ಧನಿದ್ದೇನೆ. ನಿನ್ನ ಉದರದಲ್ಲಿರುವ ನಮ್ಮೊಲವಿನ ಕುಡಿಗೆ ಅಪಾಯವಾಗದಂತೆ ನಿನ್ನ ಮೆರೆಸುವೆ. ಬಟ್ಟೆ ಬರೆ ಒಗೆಯಲು ವಾಷಿಂಗ್ ಮೆಷಿನ್ ಗೆ ಹಾಕಿ ತೆಗೆಯುವ ಒಣಗಿಸಿ ಮಡಚಿ ಇಸ್ತ್ರಿ ಹಾಕುವ ಕೆಲಸವೆಲ್ಲ ನನ್ನದೇ. ಪಾತ್ರೆ ತೊಳೆಯುವುದು ನೆಲವೊರೆಸುವುದು ಇನ್ನು ನಾನೇ.. ಒಮ್ಮೆ ಬರುವ ಆಲೋಚನೆ ಮಾಡಲಾರೆಯಾ.. ನವಮಾಸ ಪರ್ಯಂತ ಕಾದು ಕುಳಿತರೆ ಹುಚ್ಚನಾದೇನು ಪ್ರಿಯೇ.. ನಿನ್ನ ಸನಿಹದ ಅಮಲು ಅತಿಯಾಗಿದೆ..

   ನಿನ್ನ ಮಡಿಲಲ್ಲೊಮ್ಮೆ ತಲೆಯಿಟ್ಟು ಮಲಗಬೇಕು. ಮಗುವಿನಂತೆ ಮುದ್ದಿಸುವೆಯಾ..?
ಮುಂಜಾನೆಯ ಮಂಜಿನಲ್ಲಿ ನಿನ್ನ ಜೊತೆ ನಾಲ್ಕೇ ನಾಲ್ಕು ಹೆಜ್ಜೆ ನಡೆಯಬೇಕು.. ಹ್ಞೂಂ..ಎನ್ನುವೆಯಾ..? ಹಸಿರು ಬಣ್ಣದ ಝರಿಯಂಚಿನ ರೇಶ್ಮೆ ಸೀರೆಯಲ್ಲೊಮ್ಮೆ ನಿನ್ನ ನೋಡಬೇಕು.. ನಾನೇ ನೆರಿಗೆ ಹಿಡಿಯಬೇಕು.. ಆಗ ನಿನ್ನ ಮೊಗದ ಮೇಲೇಳುವ ಮಂದಹಾಸವನ್ನು ಕಣ್ತುಂಬಿಸಿಕೊಳ್ಳಬೇಕು.  ಮನಸು ಮಾಡೆಯಾ..? ಮನಸಾರೆ ಮುದ್ದಿಸಿ ಗಲ್ಲದ ಮೇಲೆ ಪ್ರೇಮದುಂಗುರವನು ಒತ್ತಬೇಕು... ಒಲ್ಲೆಯೆನಬೇಡ.. ಕರೆದೊಯ್ಯಲು ಯಾವಾಗ ಬರಲಿ ಹೇಳು.. ನೀನು ಹ್ಞೂಂ.. ಎಂದರೂ ಸಾಕು.. ನಾನು ನಿನ್ನ ಮುಂದೆ ಹಾಜರಾಗುತ್ತೇನೆ.. ಪ್ರೇಮ ಪಲ್ಲಕ್ಕಿಯಲ್ಲಿ ನಿನ್ನ ಕುಳ್ಳಿರಿಸಿ ಈ ಮನೆಗೆ ವಾಪಸು ಕರೆತರುತ್ತೇನೆ.. ಬಂದು ಬಿಡು ಪ್ರಿಯೇ..

                         ಇಂತಿ ನಿನ್ನ ಆಜ್ಞಾಪಾಲಕ,
                              ನಿನ್ನವ 💞💞

✍️... ಅನಿತಾ ಜಿ.ಕೆ.ಭಟ್.
17-12-2021.

#ಪ್ರತಿಲಿಪಿ ಕನ್ನಡ ದೈನಿಕವಿಷಯಾಧಾರಿತ_ಕಥೆ
#ದೈನಿಕವಿಷಯ_ಸಹಚಾರಿಣಿ
#ನವರಸದ ನವರಂಗು ಸ್ಪರ್ಧೆ, ನವರಸ_ ಶೃಂಗಾರ

#ಮಾಮ್ಸ್‌ಪ್ರೆಸೊ ಕನ್ನಡ- ದಿನಕ್ಕೊಂದು ಬ್ಲಾಗ್- ವಿಷಯ- ನನ್ನುಸಿರ ಭಾವ ನೀನು- ಶೀರ್ಷಿಕೆ- ನೀನಿಲ್ಲದೆ ನನ್ನುಸಿರೇ ನಿಲ್ಲುವಂತಾಗಿದೆ... ಬರಲಾರೆಯಾ...-ಉತ್ತಮ ಬರಹ



ಹೃದಯದಿಂದರಳಿದ ಸೌಂದರ್ಯ #ನಿಲುಗನ್ನಡಿ

 




#ಹೃದಯದಿಂದರಳಿದ ಸೌಂದರ್ಯ

     ಶಾಂತಲಾ ಹೊರಡುವ  ಗಡಿಬಿಡಿಯಲ್ಲಿದ್ದ  ಕಾರಣ ಸೊಸೆ ಮಾನ್ವಿಯನ್ನು ಅಷ್ಟಾಗಿ ಗಮನಿಸಿರಲಿಲ್ಲ. ಶಾಂತಲಾಳಿಗಿಂತ ಮೊದಲೇ ಹೊರಟಾಗಿದ್ದ ಅವಳನ್ನು ದೀಪು ತನ್ನ ಹೊಸ ಬೈಕಿನಲ್ಲಿ ಕುಳ್ಳಿರಿಸಿ ರೊಂಯ್ಯನೆ ಕರೆದೊಯ್ದಿದ್ದ. ಹೊರಡುವಾಗ "ಅಮ್ಮಾ.. ನೀನು ಹೊರಟು ನಿಲ್ಲು.. ಇವಳನ್ನು ಬಿಟ್ಟು ಬರುತ್ತೇನೆ" ಎಂದಿದ್ದ.

ಶಾಂತಲಾ ಹೊರಟದ್ದು ಮನೆಯ ಒಳಭಾಗದಲ್ಲಿದ್ದ ಒಂದು ಕೋಣೆಯಲ್ಲಿ. ಅದು ಬರೀ ಕತ್ತಲೆ ಕೋಣೆ. ಹಳೆಯ ಹಂಚಿನ ದೊಡ್ಡದಾದ ಮನೆ. ಮಸುಕು ಮಸುಕಾದ ಬೆಳಕಿನ ಕೋಣೆಗಳು. ಟಾರ್ಚ್ ಇಲ್ಲದಿದ್ದರೆ ಬರಿಕಣ್ಣಿಗೆ ಸುಲಭವಾಗಿ ಏನೂ ಕಾಣಿಸುವುದಿಲ್ಲ. ಬಾಗಿಲಿನ ಸಮೀಪ ಅಲ್ಪಸ್ವಲ್ಪ  ಬೆಳಕು ಪ್ರತಿಫಲನವಾಗಿ ಮಬ್ಬು ಬೆಳಕು ಕೋಣೆಯೊಳಗೆ ಹರಡಿದೆ. ಅಂತಹ ಕೋಣೆಯಲ್ಲಿ ಮೂಲೆಮೂಲೆಯಲ್ಲಿ ಏನೇನು ಇರುವುದು ಎಂದು ಶಾಂತಲಾಳಿಗಷ್ಟೇ ತಿಳಿದಿರುವುದು. ಮತ್ತು ಬೇಕಾದ್ದನ್ನು ಒಂದು ಅಂದಾಜಿನಲ್ಲೇ  ಕೈ ಹಾಕಿ ಹುಡುಕಿ ತೆಗೆಯಲು ಸಾಧ್ಯವಾಗುವುದು.  ಅಲ್ಲಿಯೇ ಮೂಲೆಯಲ್ಲಿದ್ದ ಕಪಾಟಿನಿಂದ ತನ್ನ ಸೀರೆ ರವಿಕೆಯನ್ನು ತೆಗೆದುಕೊಂಡು ಉಟ್ಟು ಹೊರಗೆ ಬಂದು ನಿಂತಿದ್ದಳು.

        ಸೀರೆ ಒಂದು ಉಟ್ಟಾಯ್ತು. ಮುಖಕ್ಕೆ ಪೌಡರ್ ಹಚ್ಚಿ ಆಗಿಲ್ಲ. ಕ್ರೀಂ ಎಲ್ಲಾ ಹಚ್ಚುವ ಅಭ್ಯಾಸ ಇಲ್ಲ. ನನಗೂ ವಯಸ್ಸಾಗಿದೆ. ಸೀರೆಯ ನೆರಿಗೆ ಮಾಡಿದ್ದು ಸಾಮಾನ್ಯವಾಗಿ ಆಗಿದೆ.. ಸಾಕು.. ಸೆರಗು ಅಷ್ಟೇನೂ ಸರಿ ಬಂದಿಲ್ಲ. ಆದರೂ ಇದಕ್ಕಿಂತ ಚೆನ್ನಾಗಿ ಹಾಕಲು ನನಗೂ ತಿಳಿಯುವುದಿಲ್ಲ.  ಇನ್ನೆಷ್ಟು ಬೇಕು ಈ ವಯಸ್ಸಿನಲ್ಲಿ.. ಸಾಕಲ್ಲವೇ? ಎಂದು ಯೋಚಿಸುತ್ತಾ ಅಂಗಳದಲ್ಲಿದ್ದ ಗುಲಾಬಿ ಗಿಡದಿಂದ ಎರಡು ಗುಲಾಬಿ ಹೂಗಳನ್ನು ಕೊಯ್ದು ತಂದಳು. "ನಾನು ಸೊಸೆಗೆ ಹೂ ಕೊಟ್ಟಿಲ್ಲ" ಎನ್ನುತ್ತಾ ಒಂದನ್ನು ತಾನು ಮುಡಿದು ಇನ್ನೊಂದನ್ನು ಸೊಸೆಗೆಂದು ಕೈಯಲ್ಲಿ ಹಿಡಿದುಕೊಂಡಳು.

     ಆಗಲೇ ಬೈಕ್ ಬಂದ ಸದ್ದು ಕೇಳಿತು. "ಅಮ್ಮಾ.. ಹೊರಟಾಯಿತಾ..?" ಎಂದ ಮಗ. ಬೈಕ್ ಏರಿ ಹೆದರಿ ಹೆದರಿ ಕುಳಿತ  ಅಮ್ಮನ ಕೈಯಲ್ಲಿದ್ದ ಹೂಗಳನ್ನು ಕಂಡು "ಅವಳೆಲ್ಲಿ ಮುಡಿತಾಳೆ ಗುಲಾಬಿಯನ್ನು.. ಸುಮ್ಮನೆ ನೀನು ಮುಡ್ಕೋ.. ಆಮೇಲೆ ಗಟ್ಟಿ ಹಿಡ್ಕೋ ಅಮ್ಮಾ.." ಎಂದ ಮಗರಾಯನಲ್ಲಿ.. "ಹಾಗೆಲ್ಲ ಹೇಳಬಾರದು ಕಣೋ.. ಹೆಣ್ಣುಮಕ್ಕಳು ಹೂ ಮುಡಿಯಬೇಕು" ಎಂದು ಜೋಪಾನವಾಗಿ ಕೈಯಲ್ಲಿ ಹಿಡಿದುಕೊಂಡರು.

        ಅದು ಶ್ರೀ ದುರ್ಗಾ ಕಲ್ಯಾಣ ಮಂಟಪ. ಆ ಊರಿನಲ್ಲಿ ಮದುವೆ ನಡೆಯುವುದು ಹೆಚ್ಚಾಗಿ ಅದೇ ಕಲ್ಯಾಣ ಮಂಟಪದಲ್ಲಿ. ಮಾರ್ಗದ ಹತ್ತಿರವಿದ್ದು ಬಸ್ಸಿನಲ್ಲಿ ಬರುವರಿಗೆ ಹೋಗುವವರಿಗೆ ಅತ್ಯಂತ ಔಚಿತ್ಯಪೂರ್ಣವಾದ ಜಾಗದಲ್ಲಿದೆ. ಶಾಂತಲಾ ಮಗನೊಂದಿಗೆ ಕೈ ಕಾಲು ತೊಳೆದು ಒಳಗೆ ಪ್ರವೇಶಿಸುತ್ತಿದ್ದಂತೆಯೇ... ಅಲ್ಲಿ ಹಾಲಿನ ಒಂದು ಬದಿಯಲ್ಲಿ ಹಾಕಲಾಗಿದ್ದ ನಿಲುಗನ್ನಡಿಯಲ್ಲಿ ತನ್ನ ಚೆಲುವನ್ನು ದಿಟ್ಟಿಸುತ್ತಿದ್ದ ಸೊಸೆ ಮಾನ್ವಿ ಕಂಡಳು. ಅತ್ತೆಯನ್ನು ಕಾಣುತ್ತಲೇ ಕನ್ನಡಿಯ ನೇರದಿಂದ ಈಚೆ ಬಂದು ತನ್ನ ತಲೆಕೂದಲನ್ನು ಒಮ್ಮೆ ತನ್ನೆರಡು ಬೆರಳುಗಳಲ್ಲಿ ಹರವಿಕೊಂಡಳು. ಶಾಂತಲಾ ಅದನ್ನು ನೋಡುತ್ತಲೇ 'ಇವಳೇಕೆ ಹೀಗೆ ಕೂದಲು ಬಿಟ್ಟು ಬಿಟ್ಟಿದ್ದಾಳೆ. ಒಂದು ಹೇರ್ ಬ್ಯಾಂಡ್ ಆದರೂ ಹಾಕಿಕೊಳ್ಳಬಾರದಾ?' ಎಂದುಕೊಂಡರು..  ಶಾಂತಲಾ ಮಾನ್ವಿಯ ಹತ್ತಿರ ಬಂದು "ನೋಡು ಮಾನ್ವಿ.. ನಾನು ನಿನಗೆಂದು ಗುಲಾಬಿಯ ಹೂವನ್ನು ತಂದಿದ್ದೇನೆ. ಮೊದಲು ಕೂದಲನ್ನು ಒಂದು ಕ್ಲಿಪ್ ಹಾಕಿ ಹಾರದಂತೆ ಮಾಡು. ನಂತರ  ಅದರ ಮೇಲೊಂದು ನಸು ಕೆಂಪುಹಳದಿ ಮಿಶ್ರಿತಬಣ್ಣದ ಗುಲಾಬಿ ಮುಡಿದುಕೋ.. ಎಷ್ಟು ಚೆಂದ ಕಾಣುತ್ತದೆ... ಗೊತ್ತಾ..?" ಎಂದರು.

"ಅತ್ತೆ ಕೂದಲು ಹೀಗೆ ಹಾರಾಡುತ್ತಿದ್ದರೇನೇ ಚಂದ. ಸಾರಿ ಉಟ್ಟಾಗ ಕೂದಲನ್ನು ಬಿಗಿದು ಕಟ್ಟಿದರೆ ನನಗೆ ಏನು ಚಂದ ಕಾಣಲ್ಲಪ್ಪ. ನಾನು ಹೀಗೇ ಬಿಡುತ್ತೇನೆ. ನನಗೆ ಗುಲಾಬಿ ಹೂವು ಎಲ್ಲಾ ಮುಡಿಯಲು ಇಷ್ಟವೇ ಇಲ್ಲ. ಮಲ್ಲಿಗೆ ಹೂವಾದರೆ ಮಾತ್ರ ಒಂದು ತುಂಡು ಮುಡಿಯ ಬಲ್ಲೆ.." ಎಂದು ಹೇಳಿದಾಗ ಶಾಂತಲಾ ಮುಖ ಸಪ್ಪೆ ಮಾಡಿಕೊಂಡು ಆಚೆ ಹೋದರು. ಈಗಿನ ಹೆಣ್ಣುಮಕ್ಕಳೇ ಇಷ್ಟೇ. ಹೆಚ್ಚು ಹೇಳಿ ನಾನು ನನ್ನ ನಾಲಿಗೆಯನ್ನು  ಕೆಡಿಸಿಕೊಳ್ಳಲಾರೆ. ಎಂದುಕೊಂಡರು.

     ಶಾಂತಲಾ ತನ್ನ ಬಂಧು ವರ್ಗದವರಲ್ಲೆಲ್ಲ ಮಾತನಾಡುತ್ತಾ ಇದ್ದರು. ಅಪರೂಪಕ್ಕೆ ಕಂಡ ಗೆಳತಿಯರು ಸಂಬಂಧಿಕರನ್ನು ಮಾತನಾಡಿಸುವುದು ಎಂದರೆ ಶಾಂತಲಾ ಎಲ್ಲಿಲ್ಲದ ಉತ್ಸಾಹ. ಅದರ ಮಧ್ಯೆ ಮಧ್ಯೆ ನಿಲುಗನ್ನಡಿಯಲ್ಲಿ ತನ್ನ ರೂಪವನ್ನು ತಾನೆ ದಿಟ್ಟಿಸುತ್ತಾ ಆನಂದಿಸುತ್ತಿದ್ದ ಸೊಸೆ ಮಾನ್ವಿ ಅನ್ನು ನೋಡಿ 'ಅಬ್ಬ ಇವಳಿಗೇನು ಕೊಬ್ಬು!' ಅಂದುಕೊಳ್ಳುತ್ತಿದ್ದರು.
ಇಪ್ಪತ್ತೈದರ ಹರೆಯದ ಮಾನ್ವಿ ನೋಡಲು ತೆಳ್ಳಗೆ ಬೆಳ್ಳಗಿದ್ದು ರೇಶಿಮೆಯಷ್ಟು ನಾಜೂಕಿನ ಕೂದಲಿನವಳು, ಕಪ್ಪಾದ ಹುಬ್ಬು, ಚೂಪಾದ ನೀಳ ನಾಸಿಕ, ಸೇಬಿನಂತಹ ಗಲ್ಲ, ಬಟ್ಟಲು ಕಂಗಳು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅವಳ ಎದುರಿನಲ್ಲಿ ಶಾಂತಲಾ ತನ್ನ ಸೌಂದರ್ಯದ ಬಗ್ಗೆ ಸ್ವಲ್ಪ ಕೀಳರಿಮೆಯನ್ನು ಹೊಂದಿ ಹಿಂದೆ ನಿಲ್ಲುತ್ತಿದ್ದರು. ಮುಕ್ಕಾಲಂಶ ಬೆಳ್ಳಗಾದ ತಲೆಕೂದಲು.. ಸುಕ್ಕುಗಟ್ಟಿದ ಮುಖ.. ಸದಾ ಕೆಲಸ ಮಾಡುತ್ತಾ ಒರಟಾದ ಕೈಗಳು.. ಒಡೆದ ಹಿಮ್ಮಡಿ... ಅಂದಗೆಟ್ಟ ಉಗುರುಗಳು.. ಅವರಿಗೆ ಸೊಸೆಯನ್ನು ನೋಡುವಾಗ ತನ್ನ ಶರೀರದ ಬಗ್ಗೆ ತಾನೇ ಹಿಂಸೆ ಪಡುವಂತೆ ಆಗುತ್ತಿತ್ತು.. ಸೊಸೆ ಜೊತೆ ನಿಂತುಕೊಳ್ಳಲು ಇದಕ್ಕೇ ಹಿಂಜರಿಯುತ್ತಿದ್ದರು. ಎಲ್ಲರೂ ಆಕೆಗಿಂತ ಅತ್ತೆ ಕಡಿಮೆ ಸುಂದರಿ ಎಂದು ಭಾವಿಸಬಹುದು ಎಂಬುದು ಮನದಲ್ಲಿದ್ದ ಅಳುಕು. ಮಾನ್ವಿ ಆಗಾಗ ನಿಲುಗನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದರೂ ಶಾಂತಲಾ ಮಾತ್ರ  ಕನ್ನಡಿಯಲ್ಲಿ  ತನ್ನನ್ನು ಕಾಣದಂತೆ ಎಚ್ಚರಿಕೆವಹಿಸಿ ಅತ್ತಿತ್ತ ಹೋಗುತ್ತಿದ್ದರು.

       ಮದುವೆಯ ಸಮಾರಂಭ ಎಲ್ಲ ಮುಗಿದು ಊಟ ಮಾಡಿ ಹೊರಡುವ ಸಮಯವಾಯಿತು. ಶಾಂತಲಾ ಮಗ ದೀಪುವನ್ನು ಕರೆದು "ಮಗಾ.. ನನ್ನನ್ನು ನೀನು ಈಗ ಮೊದಲು ಕರೆದುಕೊಂಡು ಹೋಗು.. ಈಗ ಸ್ವಲ್ಪ ಹೊತ್ತಿನಲ್ಲಿ ನೀವು ಬೆಂಗಳೂರಿಗೆ ಹೊರಡುತ್ತಿದ್ದೀರಲ್ಲ.. ನಿಮಗೆಲ್ಲ ತಯಾರಿ ಮಾಡಬೇಕಲ್ಲ.." ಎಂದಾಗ ಅಲ್ಲಿ ಹತ್ತಿರ ಬಂದ ಮಾನ್ವಿ "ದೀಪು.. ಇಲ್ಲಿ ತುಂಬಾ ಸೆಖೆಯಾಗುತ್ತಿದೆ. ನನಗಿನ್ನು ಮನೆಗೆ ಹೋಗಿ ಪುನಃ  ಹೊರಡಬೇಕು ಎಷ್ಟು ಕೆಲಸ ಇದೆ. ಎರಡು ಮೂರು ದಿನಕ್ಕೆ ಬೇಕಾದಷ್ಟು ಬಟ್ಟೆಬರೆ ಎಲ್ಲ ಪ್ಯಾಕ್ ಮಾಡಬೇಕಷ್ಟೇ.. ನನ್ನನ್ನೇ ಮೊದಲು ಕರೆದುಕೊಂಡು ಹೋಗು.." ಎಂದು ಮುಖ ಚಿಕ್ಕದು ಮಾಡುತ್ತಾ ಬೇಡಿಕೊಂಡಾಗ ದೀಪು ಮೊದಲು ಪ್ರಾಶಸ್ತ್ಯ ಕೊಟ್ಟದ್ದು ಮಾನ್ವಿಗೆ.. "ಅಮ್ಮಾ... ಇವಳನ್ನೇ ಮೊದಲು ಬಿಟ್ಟು ಬರುತ್ತೇನೆ.. ಅವಳಿಗೆ ಈಗಲೇ ಹೊರಡಬೇಕು ಅಲ್ವಾ.." ಎಂದಾಗ ಇಷ್ಟು ವರ್ಷ ಕೈತುತ್ತನಿತು ಸಾಕಿದ ಮಗನೇ ನನ್ನನ್ನು ಕಡೆಗಣಿಸಿ ಅವಳನ್ನು ಮೆರೆಸುತ್ತಾನಲ್ಲ ಎಂದು ಭಾವಿಸುತ್ತಾ ಹಲುಬಿದರು.

      ಮಗ ದೀಪು ಪದವಿ ಓದಿ ಮನೆಯ ಸಮೀಪದಲ್ಲೇ ಇದ್ದ ಪಂಚಾಯತ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸರ್ಕಾರಿ ಕೆಲಸ. ಪ್ರೈವೇಟ್ ಆಗಿ ಎಂಎ ಕೂಡ ಓದಿಕೊಂಡಿದ್ದ. ಸರ್ವಿಸ್ ಆದಂತೆ ಮುಂದೆ ಬಡ್ತಿ ಸಿಗಬಹುದು. ಇದನ್ನೆಲ್ಲಾ ನೋಡಿಕೊಂಡು ಮಾನ್ವಿಯಂತಹ ಇಂಜಿನಿಯರಿಂಗ್ ಹುಡುಗಿ ಮದುವೆಯಾಗಿದ್ದು. ಅಷ್ಟು ಒಳ್ಳೆ ಹುಡುಗಿ ಸಿಕ್ಕಿದ್ದು ನಮ್ಮ ಅದೃಷ್ಟವೇ ಸರಿ ಎಂದುಕೊಳ್ಳುತ್ತಿದ್ದರು ಶಾಂತಲಾ ದಂಪತಿ. ಆದರೆ ಮಗ ದೀಪು ಮಾನ್ವಿಗೆ  ಮೊದಲು ಮಣೆ ಹಾಕಿದಾಗ ವಿಚಲಿತಗೊಳ್ಳುತ್ತಿದ್ದವರು ಶಾಂತಲಾ. ಇವತ್ತು ಸಂಜೆ ದೀಪು ತನ್ನ ಆಫೀಸ್ ಕೆಲಸದ ಮೇಲೆ ಬೆಂಗಳೂರಿಗೆ ಹೋಗುವವನಿದ್ದ. ಆಫೀಸ್ ಕೆಲಸ ಒಂದು ದಿನ, ಹೆಚ್ಚಾದರೆ ಒಂದೂವರೆ ದಿನ.  ನವವಿವಾಹಿತ ಜೋಡಿ ಇನ್ನು ಹನಿಮೂನ್ ಎಂದು ಎಲ್ಲೂ ಹೋಗಿಲ್ಲ. ಬೆಂಗಳೂರಿಗೆ ಹೋದಾಗ ಎರಡು ಮೂರು ದಿನವಾದರೂ  ಅಲ್ಲಿ ಸ್ವಲ್ಪ ಸುತ್ತಾಡಿ ಬರಬಹುದು ಎಂದು ಮಾನ್ವಿಯನ್ನು ಜೊತೆಯಲ್ಲಿ ಕರೆದೊಯ್ಯುವ ಸಿದ್ಧತೆ ಮಾಡಿದ್ದರು.
ಅವರಿಗೆ ಹೊರಡುವಾಗ ಒಂದಷ್ಟು ತಿನಿಸುಗಳನ್ನು ಕಟ್ಟಿ ಕೊಡಬೇಕೆಂದು ಎಲ್ಲವನ್ನೂ ಮಾಡಿ ಡಬ್ಬದಲ್ಲಿ ಇರಿಸಿದ್ದರು ಶಾಂತಲಾ. ಅದನ್ನೆಲ್ಲ ಕೈಹಾಕಿ ಮಾನ್ವಿ ತೆಗೆದುಕೊಳ್ಳುವವಳೂ ಅಲ್ಲ..
ಎಲ್ಲವನ್ನು ತುಂಬಿಸಿ ಪ್ಯಾಕ್ ಮಾಡಿ ಶಾಂತಲಾಳೇ ಕೊಡಬೇಕಾಗಿತ್ತು. ಸಾಲದ್ದಕ್ಕೆ ಸಂಜೆ ಹೊತ್ತು ಹಟ್ಟಿಯಲ್ಲಿದ್ದ ದನವನ್ನು ಹಾಲು ಹಿಂಡಬೇಕು. ತನ್ನ ವೇಳೆಗೆ ಆಗುತ್ತಲೇ ಅದು ಜೈವಿಕ ಗಡಿಯಾರದಂತೆ ಅಂಬಾ.. ಎನ್ನುತ್ತಾ ಕೂಗಲು ಆರಂಭಿಸುತ್ತದೆ. ತಡವಾದರೆ ಪತಿ ಶೇಖರ ರಾಯರಂತೂ ಹಾಲು ಹಿಂಡುವುದಕ್ಕೆ ಹೋಗಲಾರರು. ಮನೆಗೆ ಹೋಗಿ ಈ ಝರಿ ಸೀರೆಯನ್ನು ಬದಲಾಯಿಸಿ ನಿತ್ಯದ ಕಾಟನ್ ಸೀರೆ ಉಟ್ಟು ಹಾಲು ಹಿಂಡಿ... ಮಗ ಸೊಸೆಗೆ ಕಾಫಿ ತಿಂಡಿ ಮಾಡಿ ಕೊಟ್ಟು ಬೇಕಾದ್ದನ್ನು ತುಂಬಿಸಿ ಕೊಟ್ಟು... ಅಬ್ಬಬ್ಬಾ ಎಷ್ಟೊಂದು ಕೆಲಸ ಇದೆ.. ಈ ಮಾನ್ವಿಗಾದರೂ ಏನಿದೆ ಕೆಲಸ..? ಉಟ್ಟಿದ್ದ ಸೀರೆಯನ್ನು ಅಲ್ಲೇ ಬಿಚ್ಚಿ ಹಾಕಿ ಅದೇನೋ  ಕುರ್ತಾ ಅಂತೆ.. ಅದನ್ನು ಮೇಲಿಂದ ಸುರಿದು, ಕೆಳಗಿನಿಂದ ಲೆಗ್ಗಿನ್ಸ್ ಅನ್ನು ಏರಿಸಿಕೊಂಡರಾಯಿತು.. ಆದರೂ ತಾನೇ ಮೊದಲು ಹೋಗಬೇಕೆಂಬ ಹಠ ಇವಳಿಗೆ.. ಶಾಂತಲಾ ಇದೆಲ್ಲ ಯೋಚಿಸುತ್ತಿದ್ದಂತೆಯೇ ದೀಪುವಿನ ಆಗಮನವಾಯಿತು.

      "ಬಾ ಅಮ್ಮಾ.. ನಡಿ ಹೋಗೋಣ ಮನೆಗೆ" ಎಂದು ಕರೆದ. ಮಗನೊಂದಿಗೆ ಬೈಕಿನಲ್ಲಿ ಕುಳಿತು ಹೊರಟರು. ಮನಸ್ಸಿನಲ್ಲಿ ಕಾರಿದ್ದರೆ ಎಲ್ಲರೂ ಜೊತೆಗೆ  ಹೋಗಬಹುದಿತ್ತು ಎಂಬ ಆಲೋಚನೆಯೂ ಮೂಡಿತು. ಇರಲಿ.. ಇನ್ನೊಂದೆರಡು ವರ್ಷ ಕಳೆದಾಗ ಹೊಸ ಕಾರನ್ನು ಕೊಳ್ಳೋಣವಂತೆ ಎಂದುಕೊಂಡರು. ಮನೆಗೆ ತಲುಪಿ,  ಒಳಗೆ ಸಾಗಿದಾಗ ಹಜಾರದಲ್ಲಿ ಫ್ಯಾನಿನಡಿಯಲ್ಲಿ ಕುಳಿತ ಮಾನ್ವಿ ತಲೆಕೂದಲನ್ನು ಹರಡಿ ನಿಲುಗನ್ನಡಿಯ ಮುಂದೆ ನಿಂತು ಮುಖಕ್ಕೆ ಅದೇನ್ನನ್ನೋ ಉಜ್ಜಿಕೊಳ್ಳುತ್ತಿದ್ದಳು. ಒಮ್ಮೆಲೇ ಸಿಟ್ಟು ನೆತ್ತಿಗೇರಿತು ಶಾಂತಲಾಳಿಗೆ. ಮಾಡಲು ಎಷ್ಟೊಂದು ಕೆಲಸವಿದೆ. ಅದನ್ನೆಲ್ಲ ಬಿಟ್ಟು, ಬೇಗನೆ ಬಂದವಳು ಮಾಡಿಕೊಳ್ಳುತ್ತಿರುವುದು ಆದರೂ ಏನು..? ಎಂದು ಕೋಪ ನುಂಗಿಕೊಂಡರು.. ಅತ್ತೆಯ ಮುಖ ನೋಡಿ ಅರಿತ ಮಾನ್ವಿ "ಅತ್ತೇ.. ನನಗೆ ಹಾಲಿನಲ್ಲಿ ಸೆಖೆಗೆ ಮುಖವೆಲ್ಲ ಉರಿದು ಕೆಂಪಾಗಿದೆ. ಅದಕ್ಕೆ ಸ್ವಲ್ಪ ಮುಖಕ್ಕೆ ಹಣ್ಣಿನ ಫೇಸ್ ಪ್ಯಾಕ್ ಹಾಕಿಕೊಳ್ಳುತ್ತಿದ್ದೆ ನೋಡಿ.." ಎನ್ನುತ್ತಾ ಕನ್ನಡಿಯಿಂದ ಮುಖ ಕೀಳದೆ ಉಲಿದಳು.. "ನಿನಗೆ ಸಹಜ ಸೌಂದರ್ಯವಿದ್ದರೂ ಸೌಂದರ್ಯದ ಚಿಂತೆ.. ನನಗೆ ನನ್ನ ಆರೋಗ್ಯವೂ, ಸೌಂದರ್ಯವೂ ಕೆಟ್ಟು ಹೋಗುತ್ತಿದ್ದರೂ ಕೆಲಸದ ಚಿಂತೆ.." ಎಂದು ಹೇಳಿ ಅವಳ ಉತ್ತರಕ್ಕೂ ಕಾಯದೆ ಒಳನಡೆದರು.

       ಬೇಗಬೇಗನೆ ತನ್ನ ಝರಿ ಸೀರೆಯನ್ನು ತೆಗೆದಿಟ್ಟು ನಿತ್ಯದ ಹಳೆಯ ಕಾಟನ್ ಸೀರೆ ಉಟ್ಟು, ಕೈಯಲ್ಲೊಂದು ಚೊಂಬು ಹಿಡಿದು ಸೀದಾ ಕೊಟ್ಟಿಗೆಗೆ ನಡೆದರು. ದನ ಗಂಗೆ  ಒಂದೇ ಸಮನೆ ಅಂಬಾ ಎನ್ನುತ್ತಿತ್ತು. ಕರುವನ್ನು ಬಿಟ್ಟು ಅದಕ್ಕೆ ಹಾಲುಣಿಸಿ ನಂತರ ತಾವು ಬಿಂದಿಗೆಗೆ ಹಾಲು ಹಿಂಡಲಾರಂಭಿಸಿದರು. ಒಂದು ಬಿಂದಿಗೆ ಹಾಲನ್ನು ತಂದು ಮಗ-ಸೊಸೆ ಗಂಡನಿಗೆ ಚಹಾ ಮಾಡಿ, ಕುರುಕುಲು ತಿಂಡಿಗಳನ್ನು  ತೆಗೆದುಕೊಂಡು ಹೋಗಿ ಹಜಾರದಲ್ಲಿ ಇಟ್ಟರು. ಎಲ್ಲರೂ ಚಹಾ ತಿಂಡಿಯನ್ನು ಸೇವಿಸುತ್ತಿದ್ದಂತೆ ಇನ್ನೊಂದಷ್ಟು ಎಣ್ಣೆ ತಿಂಡಿಯನ್ನು ಪ್ಯಾಕ್ ಮಾಡಿದರು..

      ಐದೂವರೆ ಹೊತ್ತಿಗೆ ಮಗ-ಸೊಸೆ  ಹೊರಟು ನಿಂತರು. ಸೊಸೆಯ ಮುಖವನ್ನು ಸ್ಪಷ್ಟವಾಗಿ ವೀಕ್ಷಿಸಿದರು ಶಾಂತಲಾ. ಇಷ್ಟೊಂದು ಮೃದುವಾದ ತ್ವಚೆ ಇದ್ದರೂ ಮತ್ತೂ ಏನೇನೋ ಮೆತ್ತಿಕೊಳ್ಳುವುದು ಯಾಕಪ್ಪಾ?  ಎಂದು ಭಾವಿಸಿದರು. ಆ ಮಾತುಗಳನ್ನೆಲ್ಲ ತನ್ನೊಳಗೆ ನುಂಗಿಕೊಂಡರು. "ಅಮ್ಮಾ.. ಬೈಕಿನಲ್ಲಿ ನಗರದವರೆಗೆ ಹೋಗಿ, ಅಲ್ಲಿಂದ ಬಾಡಿಗೆ ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದೇವೆ. ನಂತರ ಟ್ರೈನ್ನಲ್ಲಿ ಬೆಂಗಳೂರಿಗೆ ಪ್ರಯಾಣ."
"ಮಗಾ.. ದೀಪು. ಸರಿ ಜಾಗರೂಕತೆಯಿಂದ ಹೋಗಿಬನ್ನಿ" ಎಂದು ಹೇಳುತ್ತಾ ಕಳುಹಿಸಿಕೊಟ್ಟರು ಶಾಂತಲಾ ಮತ್ತು ಶೇಖರರಾಯರು.

      ಮಗ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಹಿಂದಿನ ಸೀಟಿನಲ್ಲಿ ಹತ್ತಿ ಕುಳಿತ ಮಾನ್ವಿ ಮೆಲ್ಲಗೆ ತನ್ನ ಕೈಗಳಿಂದ ಪತಿಯನ್ನು ತಬ್ಬಿಹಿಡಿದಳು. ಅವರಿಬ್ಬರ ನಡುವೆ ಸಣ್ಣದೊಂದು ಅನುರಾಗದ ಅನುಬಂಧ ಕಂಡ ಹಿರಿಯ ದಂಪತಿಗಳಿಗೂ ಕಚಗುಳಿ ಇಟ್ಟಂತೆ ಆಯ್ತು. ಬೈಕ್ ಕಣ್ಣನೋಟದಿಂದ ಮುಂದಕ್ಕೆ ಸಾಗುವವರೆಗೆ ಇಬ್ಬರು ನೋಡುತ್ತಾ  ನಿಂತರು. "ಎಷ್ಟು ವರ್ಷದಿಂದ ಹೇಳುತ್ತಾ ಇದ್ದೆ.. ನೀವು ಒಂದು ದ್ವಿಚಕ್ರವಾಹನ ಕೊಳ್ಳಿ.. ಎಂದು. ನೀವು ಕೇಳಿದಿರಾ..? ಮಗ ಕೊಂಡುಕೊಂಡ. ಸೊಸೆಯನ್ನು ಎಷ್ಟು ನಾಜೂಕಾಗಿ ಕರೆದೊಯ್ಯುತ್ತಾನೆ ನೋಡಿ. ಅವರಿಗಿದೆ ಆ ಭಾಗ್ಯ.  ನನಗೆ ಇಲ್ಲವಲ್ಲ.."
"ಎಲಾ ಇವಳೇ.. ಬೈಕಿನಲ್ಲಿ ಕುಳಿತು ಪತಿಯನ್ನು ಮೆದುವಾಗಿ ಬಳಸಿ ಹಿಡಿಯಬೇಕೆಂದೆನೂ ಇಲ್ಲ.. ಹಾಗೆಯೇ ತಬ್ಬಿ ಹಿಡಿಯಬಹುದು.." ಎಂದಾಗ ಶಾಂತಲಾರ ಮುಖ ರಂಗೇರಿತ್ತು.
"ಇದಕ್ಕೇನು ಕಮ್ಮಿ ಇಲ್ಲ ನೀವು.. ಮಾತಿನಲ್ಲಿ ರೈಲು ಬಿಡುವುದಕ್ಕೆ'' ಎಂದು ಛೇಡಿಸಿದರು.
ಬಿರಬಿರನೆ ಒಳಗೆ ನಡೆಯುತ್ತಿದ್ದ ಶಾಂತಲಾರನ್ನು ಹಿಂಬಾಲಿಸಿದ ರಾಯರು ಮೆಲ್ಲನೆ ಆಕೆಯ ಕೈಹಿಡಿದು ನಿಲ್ಲಿಸಿ ಹೆಗಲ ಮೇಲೆ ಕೈಯಿಟ್ಟು.. ಮುಖವನ್ನೇ ದಿಟ್ಟಿಸಿದರು.. ನುಣುಚಿಕೊಳ್ಳುತ್ತಿದ್ದ ಶಾಂತಲಾರನ್ನ ಮತ್ತಷ್ಟು ಬಲವಾಗಿ ಹಿಡಿದು  "ಏನೀಗ.. ನಮ್ಮ ನಡುವಿನ ಅನುರಾಗದ ಅನುಬಂಧ ಕಡಿಮೆಯಾಗಿದೆ ಎಂದು ನಿನ್ನ ಭಾವನೆಯೇ... ನೀನೆಂದಿಗೂ ನನ್ನ ಪಾಲಿಗೆ ಸೌಂದರ್ಯವತಿ.. ನಾನು ರಸಿಕ ಮಹಾರಾಜ..." ಎನ್ನುತ್ತಾ ಮಡದಿಯ ಮುಖವನ್ನು ತನ್ನತ್ತ ತಿರುಗಿಸಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು...
"ಥೂ.. ಹೋಗೀಪಾ ನನಗೆ ಕೆಲಸವಿದೆ" ಎನ್ನುತ್ತಾ ಹಜಾರದಿಂದ ವೇಗವಾಗಿ ನಡೆದು ಬಂದು ಒಳಗೆ ಸಾಗುತಿದ್ದವರು ನಿಲುಗನ್ನಡಿಯಲ್ಲಿ ತನ್ನ ಮುಖವನ್ನೊಮ್ಮೆ ದಿಟ್ಟಿಸಿಕೊಂಡರು.. ಮುಖದ ಮೇಲೆ ಅರಳಿದ ಮಂದಹಾಸದಿಂದ ತನ್ನನ್ನು ಮತ್ತಷ್ಟು ಸುಂದರವಾಗಿ ಕಂಡಿತು ಅವರಿಗೆ..
ಹಾಗೆಯೇ ಒಂದರೆಗಳಿಗೆ ತಲ್ಲೀನರಾಗಿ ಕನ್ನಡಿಯ ಮುಂದೆ ನಿಂತರು.. ಮುಖದ ಮೇಲೆ ಅರಳಿದ ಗೆಲುವಿನ ನಗೆಯಿಂದ ಮುಖದ ಸುಕ್ಕುಗಳು ಹೆಚ್ಚು ಕಾಣಲಿಲ್ಲ ಅವರಿಗೆ.. ಹಿಂದಿನಿಂದ ರಾಯರ ಆಗಮನವಾಗುತ್ತಿದ್ದಂತೆಯೇ ಮುಖದ ಸೌಂದರ್ಯ ಮತ್ತೆ  ಇಮ್ಮಡಿಗೊಂಡಂತೆ ಕಂಡಿದ್ದು.. "ಸೊಸೆಯ ಮುಖ ಮೇಕಪ್ಪು ಬಳಿಯುವ ಸೌಂದರ್ಯವಾದರೆ, ನಿನ್ನದು ಹೃದಯದಿಂದ ಪರಿಪಕ್ವವಾದ ಸೌಂದರ್ಯ ಕಣೆ" ಎನ್ನುತ್ತಾ ರಾಯರು ಹಿಂದಿನಿಂದ ಬಳಸಿದರೆ ಶಾಂತಲಾ ಅವರ ಎದೆಗೊರಗಿ ನಗುತ್ತಿದ್ದರು.. ಅಲ್ಲಿದ್ದದ್ದು ಬರೀ ನಿಷ್ಕಲ್ಮಶ ನಗು, ಪರಿಶುದ್ಧ ಪ್ರೇಮ.. ನಲುವತ್ತು ವರುಷಗಳಿಂದ ಒಂದಾಗಿ ಬೆರೆತ ಎರಡು ನಿಷ್ಕಲ್ಮಶ ಹೃದಯಗಳು... ಎಲ್ಲದಕ್ಕೂ ನಿಲುಗನ್ನಡಿ ಸಾಕ್ಷಿಯಾಗಿತ್ತು.

✍️... ಅನಿತಾ ಜಿ.ಕೆ.ಭಟ್.
24-02-2022.
#ಪ್ರತಿಲಿಪಿಕನ್ನಡ ದೈನಿಕಕಥೆ
#ವಿಷಯ ನಿಲುಗನ್ನಡಿ


ಅಣ್ಣನ ಚೀಲ #ಸಹೋದ್ಯೋಗಿ

 


#ಅಣ್ಣನ ಚೀಲ

         ಬೆಳಗ್ಗೆ ತಾನೇ ತಿಂಡಿ ತಯಾರಿಸಿಕೊಂಡು ತಿಂದು ಹೊರಡಲನುವಾದ ಮುರಾರಿ. ವಾರದಲ್ಲೆರಡು ದಿನ ಇದೇ ರೂಢಿ. ಪತ್ನಿ ಮಾಲಾ ಮಕ್ಕಳಿಬ್ಬರನ್ನು ಬೆಳಗ್ಗೆ ಬೇಗನೆ ಎಬ್ಬಿಸಿ ಸ್ಕೇಟಿಂಗ್ ಕ್ಲಾಸಿಗೆ ವಾರದಲ್ಲೆರಡು ದಿನ  ಕರೆದೊಯ್ಯುವುದರಿಂದ ಆ ದಿನಗಳಲ್ಲಿ ಮುರಾರಿಯೇ ಬೆಳಗಿನ ತಿಂಡಿ ತಯಾರಿಸುವುದು ಅವರು ಅನುಸರಿಸಿಕೊಂಡು ಬಂದಂತಹ ಹೊಂದಾಣಿಕೆಯ ಪದ್ಧತಿ. ಪತ್ನಿ ಮಾಡಿಟ್ಟಿದ್ದ ಉದ್ದಿನ ದೋಸೆ ಹಿಟ್ಟಿನಿಂದ ತನಗೂ, ಪತ್ನಿ, ಮಕ್ಕಳಿಗೂ ತಕ್ಕಷ್ಟು ದೋಸೆ ಎರೆದು ತೆಂಗಿನಕಾಯಿ ಚಟ್ನಿ ತಯಾರಿಸಿದ. ತನಗೆ ಬೇಕಾದಷ್ಟು ತಿಂದು ಉಳಿದ ದೋಸೆ ಹಾಟ್ ಬಾಕ್ಸ್ ನಲ್ಲಿ ಹಾಕಿಟ್ಟ. ಆಗಲೇ ಮಾಲಾ ಮತ್ತು ಮಕ್ಕಳು ಆಗಮಿಸಿದರು. "ಅಪ್ಪಾ.. ಇವತ್ತು ನಾವು ಬರುವುದು ಸ್ವಲ್ಪ ತಡವಾಯಿತು. ಸ್ಕೂಲ್ ಬಸ್ ಹೋಗೋ ಸಮಯ ಆಯ್ತು. ಸ್ವಲ್ಪ ಇರಿ.. ಈಗ ಬರ್ತೀವಿ.. ಸ್ಕೂಲ್ ಗೆ ಡ್ರಾಪ್ ಮಾಡಿ.." ಎಂದಾಗ ಇಲ್ಲವೆನ್ನಲಾಗದೆ ಮಕ್ಕಳಿಗೆ ತಟ್ಟೆ ಇಟ್ಟು ಚಟ್ನಿ ದೋಸೆ ಬಡಿಸಿದ. ಗಡಿಬಿಡಿಯಲ್ಲಿ ತಿಂದು ಕೈತೊಳೆದು ಹೊರಟರು ಮಕ್ಕಳು. ಅವರನ್ನು ಶಾಲೆಗೆ ಡ್ರಾಪ್ ಮಾಡುತ್ತಿದ್ದಂತೆ ಫೋನ್ ಕರೆ ಬಂತು. ಕರೆ ಸ್ವೀಕರಿಸಿದ. " ಹಲೋ ಮುರಾರಿ.. ಹೇಗಿದ್ದೀಯಪ್ಪಾ.. ಇವತ್ತು ಆಫೀಸಿಗೆ ಬರ್ತೀ ತಾನೇ..?"
"ಹೂಂ ಅಣ್ಣಾ.. ಇನ್ನೇನು ಹತ್ತು ನಿಮಿಷಕ್ಕೇ ತಲುಪುತ್ತೇನೆ.."
"ಸರಿ.. ಇಲ್ಲಿ ನಿಮ್ಮತ್ತಿಗೆ ಅದೇನೋ ತಿಂಡಿ ತೀರ್ಥ ಎಂದೆಲ್ಲ ನಿನಗೆಂದು ತುಂಬಿಸುತ್ತಿದ್ದಾಳೆ ಚೀಲದಲ್ಲಿ.. ಅದಕ್ಕೆ ಒಂದು ಮಾತು ನಿನ್ನನ್ನು ಕೇಳಿಯೇ ತರುತ್ತೇನೆ ಎಂದು ಕರೆ ಮಾಡಿದೆ. ಮಾಲಾ ಮತ್ತು ಮಕ್ಕಳು ಚೆನ್ನಾಗಿದ್ದಾರಾ...?"

"ಹೂಂ ಅಣ್ಣಾ.. ಎಲ್ಲರೂ ಆರೋಗ್ಯದಿಂದಿದ್ದಾರೆ.. ಮನೆ ಕಡೆ ಅಪ್ಪ, ಅತ್ತಿಗೆ, ಮಕ್ಕಳು ಎಲ್ಲಾ ಕ್ಷೇಮ ತಾನೇ..?"
"ಹೌದು ಕಣೋ..ಎಲ್ಲಾ ಆರಾಮ.. ಮತ್ತೆ ಸಿಗೋಣ.."
ಎನ್ನುತ್ತಾ ಫೋನಿಟ್ಟ ಮುರಾರಿಯ ಅಣ್ಣ ರಾಜೇಶ.

      ನಿಜಕ್ಕೂ ನಾನು ಪುಣ್ಯ ಮಾಡಿರಬೇಕು ಇಂತಹ ಅಣ್ಣ ಅತ್ತಿಗೆಯನ್ನು ಪಡೆಯಲು ಎಂದು ಮನತುಂಬಿ ಬಂತು ಮುರಾರಿಗೆ. ಅಮ್ಮ ನಮ್ಮನ್ನು ಅಗಲಿ ಐದು ವರ್ಷಗಳಾದವು. ಆದರೆ ಆ ಪ್ರೀತಿ ಬತ್ತದಂತೆ ನೋಡಿಕೊಂಡವರು ದೇವತೆಯಂತಹ ಅತ್ತಿಗೆ ಮಮತಾ. ಹೆಸರಿಗೆ ತಕ್ಕಂತೆ ಮಮತಾಮಯಿ. ನನ್ನ ತಾಯಿಯ ಒಡನಾಟದಲ್ಲೇ ಅಡುಗೆಯನ್ನು ಕಲಿತವರು, ಬಂಧುಬಾಂಧವರನ್ನು ಉಪಚರಿಸುವ ಪರಿಯನ್ನು ಕಲಿತವರು. ಈಗ ಅಮ್ಮನ ನಂತರ ಅದನ್ನೇ ಮುಂದುವರಿಸುತ್ತಾರೆ. ಚೂರೂ ಪ್ರೀತಿ ಕಾಳಜಿಯಲ್ಲಿ ಲೋಪ ಬಾರದಂತೆ ನಡೆದುಕೊಳ್ಳುವ ಅವರ ನಡೆನುಡಿಗೆ ನಾನೆಂದೋ ತಲೆಬಾಗಿದ್ದೆ.

      ಅಮ್ಮ ಅಂದು ನನಗೆ ಬ್ಯಾಂಕಿನಲ್ಲಿ ಉದ್ಯೋಗ ದೊರೆತಾಗ ಖುಷಿ ಪಟ್ಟಿದ್ದರು. ಆದರೆ ದೂರದೂರದ ಊರುಗಳಿಗೆ ಟ್ರಾನ್ಸ್ಫರ್ ಆಗುತ್ತಿದ್ದಾಗ "ನಮ್ಮೂರಿಗೆ ಯಾವಾಗ ಬರುತ್ತೀ ಕಣೋ?" ಎಂದು ಪದೇ ಪದೇ ಕೇಳುತ್ತಿದ್ದರು. ಆದರೆ ಅಮ್ಮನಿರುವಾಗ ಒಂದೇ ಒಂದು ಬಾರಿ ಕೂಡಾ ನಮ್ಮೂರಿಗೆ ಟ್ರಾನ್ಸ್ಫರ್ ಸಿಗುವ ಭರವಸೆಯೂ ದೊರೆತಿರಲಿಲ್ಲ. ಆದರೆ ಅಮ್ಮ ನಮ್ಮನ್ನಗಲಿ ಎರಡೇ ವರ್ಷದಲ್ಲಿ ಊರಿನ ಸಮೀಪದ ನಗರಕ್ಕೆ ನನಗೆ ವರ್ಗಾವಣೆ ಆಯಿತು. ನನಗೆ ತುಂಬಾ ಸಂತಸವಾಗಿತ್ತು. ಅಣ್ಣ ಅತ್ತಿಗೆ ಖುಷಿಯಿಂದ "ಇನ್ನು ಬಾಡಿಗೆ ಮನೆ ಎಲ್ಲ ಹುಡುಕಲು ಹೋಗಬೇಡ. ಇಲ್ಲೇ ನಮ್ಮ ಜೊತೆಗೆ ಇರು. ಅಮ್ಮನ ಆಸೆಯೂ ಅದೇ ಆಗಿತ್ತು. ಎಲ್ಲರೂ ಜೊತೆಯಲ್ಲಿ ಇರಬೇಕೆಂದು. ಈಗ ಅಮ್ಮನಿಲ್ಲದಿದ್ದರೂ ಅಪ್ಪನಿದ್ದಾರೆ. ಅವರು ಕಂಡು ಖುಷಿಪಡುತ್ತಾರೆ. ಇಲ್ಲಿಯೇ ಜೊತೆಯಲ್ಲಿ ಬದುಕೋಣ." ಎಂದಿದ್ದರು.

        ವಿಷಯ ತಿಳಿದ ಮಾಲಾ ರೊಚ್ಚಿಗೆದ್ದಿದ್ದಳು. "ಏನು ನಿಮ್ಮ ಹಳ್ಳಿಯ ಹಂಚಿನ ಮನೆಯಲ್ಲಿ ನಾನು ಮಕ್ಕಳು ಇರುವುದೇ? ಅದು ನಮ್ಮಿಂದಾಗದು. ನೀವು ಬೇಕಾದರೆ ಅಲ್ಲೇ ಇರಿ. ನಾವು ಶಾಲೆ, ಮಕ್ಕಳ ಸಂಗೀತ, ಸ್ಕೇಟಿಂಗ್, ಕರಾಟೆ, ಡ್ರಾಯಿಂಗ್ ತರಗತಿಗಳಿಗೆ ಹೋಗಲು ಅನುಕೂಲವಾಗುವಂತೆ ಬಾಡಿಗೆ ಮನೆ ನೋಡುತ್ತೇವೆ." ಮಡದಿಯ ಮಾತನ್ನು ಮೀರಲಾಗದೆ, ಅಣ್ಣ ಅತ್ತಿಗೆಯನ್ನೂ ನೋಯಿಸಲಾಗದೆ ಒದ್ದಾಡಿದ್ದ ಮುರಾರಿ. ಕೊನೆಗೂ ಮಾಲಾಳ ಮಾತಿಗೇ ಮನ್ನಣೆ ನೀಡಬೇಕಾಯಿತು.

      ಆಫೀಸಿಗೆ ತಲುಪಿ ಒಂದು ಗಂಟೆಯಲ್ಲಿ ಅಣ್ಣ ರಾಜೇಶ,  ಅತ್ತಿಗೆ ಮಮತಾ ಇಬ್ಬರೂ ಮ್ಯಾನೇಜರ್ ಆಗಿದ್ದ ಮುರಾರಿಯ ಛೇಂಬರಿಗೆ ಆಗಮಿಸಿದರು. ಅಣ್ಣನ ಕೈಯಲ್ಲಿ ದೊಡ್ಡದೊಂದು ಚೀಲವಿತ್ತು. ಅತ್ತಿಗೆಯ ಹೆಗಲಲ್ಲಿ ವ್ಯಾನಿಟಿ ಬ್ಯಾಗಿತ್ತು. ಅದೂ ಇದೂ ಮಾತನಾಡುತ್ತಾ ವ್ಯಾನಿಟಿ ಬ್ಯಾಗಿನಿಂದ ಮೈಸೂರು ಪಾಕ್ ತೆಗೆದುಕೊಟ್ಟರು ಅತ್ತಿಗೆ. ಅಮ್ಮನ ಕೈರುಚಿಯ ಮೈಸೂರು ಪಾಕ್ ನೆನಪಾಯಿತು ಮುರಾರಿಗೆ. ಅತ್ತಿಗೆ ಮಾಡಿದರೂ ಹಾಗೆಯೇ ಇರುತ್ತದೆ. ಆದರೆ ಈಗಲೇ ತಿಂದು ನೋಡುವ ಹಾಗಿಲ್ಲವಲ್ಲ ಎಂಬ ಕಸಿವಿಸಿ ಮುರಾರಿಗೆ. ಅಣ್ಣ "ಈ ಚೀಲವನ್ನು ನೀನು ಹೀಗೇ ತೆಗೆದುಕೊಂಡು ಹೋಗು ಮನೆಗೆ.." ಎಂದರು. ಮಾತುಕತೆಯ ನಂತರ ಅವರನ್ನು ಬೀಳ್ಕೊಟ್ಟ ಮುರಾರಿ.

            ಬ್ಯಾಂಕಿನಲ್ಲಿ ಕ್ಲರ್ಕ್ ಆಗಿದ್ದ ಸುನಂದಾ ಯಾವುದೋ ವಿಷಯವನ್ನು ಚರ್ಚಿಸಲೆಂದು ಮ್ಯಾನೇಜರಿನ ಛೇಂಬರಿನೊಳಗೆ ಬಂದಳು. ಮಾತಾನಾಡಿದ ನಂತರ "ಸರ್.. ಆ ಚೀಲ ಭಾರೀ ದೊಡ್ಡದಿದೆ. ಏನು ತಂದಿದ್ದಾರೆ ನಿಮ್ಮಣ್ಣ?" ಎಂದು ಕೇಳಿಯೇ ಬಿಟ್ಟಳು.
"ಹಾಂ.. ಹಾಗೇನಿಲ್ಲ. ಹಳ್ಳಿಯಿಂದ ಬರುವಾಗ ತಾವು ಬೆಳೆದ ತರಕಾರಿ ಹಣ್ಣು ತಂದಿರಬಹುದು.."
ಸ್ವಲ್ಪ ಬಾಗಿದಳು ಸುನಂದಾ..
"ಸರ್.. ಉಪ್ಪಿನಕಾಯಿ ಬಾಟಲಿ.."
"ಹೂಂ.. ನಮ್ಮತ್ತಿಗೆಯ ಕೈಯಲ್ಲಿ ತಯಾರಾಗಿರೋ ತಾಜಾ ಉಪ್ಪಿನಕಾಯಿ."
"ಸರ್.. ನಾನಿವತ್ತು ಬರೀ ಊಟ ತಂದಿದೀನಿ. ನೆಂಚಿಕೊಳ್ಳೋದಕ್ಕೆ ಸ್ವಲ್ಪ ಉಪ್ಪಿನಕಾಯಿ ನಂಗೂ ಕೊಡ್ತೀರಾ..?" ಇಲ್ಲವೆನ್ನಲಾಗದೆ ಮುರಾರಿ "ಹೂಂ.." ಎಂದ.
ಮಧ್ಯಾಹ್ನದ ವೇಳೆಗೆ ಉಪ್ಪಿನಕಾಯಿ ಬಾಟಲಿ ಹೊರತೆಗೆಯಲೇ ಬೇಕಾಯಿತು. ಕ್ಷಣಮಾತ್ರದಲ್ಲಿ ಎಲ್ಲರೂ "ನನಗೆ ಸ್ವಲ್ಪ.. ನನಗೆ ಸ್ವಲ್ಪ.." ಅನ್ನುತ್ತಾ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಬಾಟಲಿ ಅರ್ಧ ಖಾಲಿಯಾಗಿಬಿಟ್ಟಿತು. "ವಾವ್...ನೀವು ಅದೃಷ್ಟವಂತರು. ನಿಮ್ಮತ್ತಿಗೆಯ ಕೈ ರುಚಿ ತುಂಬಾ ಚೆನ್ನಾಗಿದೆ." ಎಂದು ಹೊಗಳಿದ್ದೇ ಹೊಗಳಿದ್ದು. ಊಟವಾದ ಬಳಿಕವೂ ಕೈಯನ್ನು ಆಗಾಗ ಮೂಗಿಗೆ ಹಿಡಿದು ಆಹಾ ಮಾವಿನಕಾಯಿಯ ಪರಿಮಳ ಎನ್ನುತ್ತಿದ್ದರು.

    ಮುಂದಿನ ಸಲ ರಾಜೇಶ ಬ್ಯಾಂಕಿಗೆ ಬಂದಾಗ ಸಹೋದ್ಯೋಗಿಗಳೇ "ಬನ್ನಿ ಸರ್.. ಬನ್ನಿ ಸರ್.." ಎಂದು ಸ್ವಾಗತಿಸಿದ್ದರು. ಕೈಯಲ್ಲೊಂದು ಚೀಲವಿದ್ದುದನ್ನು ಕಂಡು ಇವತ್ತೇನಿರಬಹುದು ಎಂದು ಕುತೂಹಲವೂ ಇತ್ತು. ಅವರು ಮ್ಯಾನೇಜರ್ ಮುರಾರಿಯವರಲ್ಲಿ ಮಾತನಾಡಿ ಹೊರ ಹೋಗುತ್ತಿದ್ದಂತೆ ಕ್ಯಾಷಿಯರ್ ಪರಿಣಿತಾ ಬಂದಿದ್ದಳು. ಮಾತಿನುದ್ದಕ್ಕೂ ಅವಳ ಕಣ್ಣು ಚೀಲದ ಮೇಲಿತ್ತು. ಅದು ಮುರಾರಿಯ ಗಮನಕ್ಕೂ ಬಂತು. "ಸರ್..ಇದೇನು ಬಾಟಲಿಯಲ್ಲಿ.. ಕಳ್ಳಭಟ್ಟಿ ಏನಾದರೂ.."
"ಥೂ.. ಏನ್ ಮೇಡಂ ನೀವು.. ನಾವು ಅಂತಹದ್ದೆಲ್ಲ ತಯಾರಿಸುವುದು ಬಿಡಿ, ಕಣ್ಣೆತ್ತಿಯೂ ನೋಡುವವರಲ್ಲ. ಇದು ಶುದ್ಧ ಜೇನುತುಪ್ಪ.."
"ಹಾಂ.. ಜೇನುತುಪ್ಪ..ವಾವ್.. ನಿಮ್ಮ ಹಳ್ಳಿಯ ಮನೆಯಲ್ಲಿ ಅದೂ ತಯಾರಿಸುತ್ತಾರಾ..?"
"ಹೌದು... ನಮ್ಮಣ್ಣನಿಗೆ ಜೇನುಸಾಕಣೆಯೂ ಗೊತ್ತಿದೆ. ಪ್ರತೀ ವರ್ಷ ಜೇನು ಹುಳುಗಳನ್ನು ಸಾಕಿ ಜೇನುತುಪ್ಪ ಸಂಗ್ರಹಿಸಿ ಮಾರಾಟ ಮಾಡುತ್ತಾನೆ.."
"ಹೋ.. ಹೌದಾ.. ಸರ್.. ಇವತ್ತು ನಾನು ಬುತ್ತಿಗೆ ದೋಸೆ ಮಾತ್ರ ತಂದಿದ್ದೇನೆ. ಸ್ವಲ್ಪ ಜೇನುತುಪ್ಪ ಕೊಟ್ಟರೆ ಅದರಲ್ಲದ್ದಿ ತಿನ್ನುತ್ತೇನೆ.. ಏನೂ ಅಂದುಕೊಳ್ಳಬೇಡಿ ಪ್ಲೀಸ್."
ಅನಿವಾರ್ಯವಾಗಿ ಜೇನುತುಪ್ಪವನ್ನು ಕೂಡಾ ಹಂಚಲೇಬೇಕಾಯಿತು. ಅದೂ ಎಲ್ಲರೂ "ಟೇಸ್ಟ್ ನೋಡುತ್ತೇವೆ.." ಎಂದು ಹೇಳುತ್ತಾ ಒಂದೊಂದೇ ಚಮಚ ತೆಗೆದುಕೊಂಡು ಅರ್ಧಾಂಶ ಖಾಲಿಯಾಗಿ ಬಿಟ್ಟಿತು.

       ಇನ್ನು ಅಣ್ಣನಲ್ಲಿ ಬಾಡಿಗೆ ಮನೆಗೆ ತೆಗೆದುಕೊಂಡು ಹೋಗಲು ಹೇಳಬೇಕು. ಇಲ್ಲಿಗೆ ತಂದರೆ ಹಂಚಿಯೇ ಸಾಕಾಗುತ್ತದೆ ಎಂದುಕೊಂಡ ಮುರಾರಿ. ಅಣ್ಣ ಅತ್ತಿಗೆಯೊಡನೆ ಮಾತನಾಡುವಾಗ ಅದನ್ನು ಪ್ರಸ್ತಾಪಿಸಿದ. "ಆಗಲಿ..." ಎಂದರು ಅಣ್ಣ ಅತ್ತಿಗೆ.

      ಅಂದು ಅತ್ತಿಗೆ ಮಮತಾ ಮಾಲಾಳಿಗೆ ಕರೆಮಾಡಿದರೂ ತೆಗೆಯಲಿಲ್ಲವೆಂದು ಮುರಾರಿಗೆ ಫೋನ್ ಮಾಡಿದರು. "ಸಾರಿ.. ಅತ್ತಿಗೆ.. ಅವಳು ಮಕ್ಕಳನ್ನು ಸ್ಕೇಟಿಂಗ್ ಕಾಂಪಿಟೇಶನ್ ಗೆಂದು ಕರೆದುಕೊಂಡು ಹೋಗಿದ್ದಾಳೆ." ಎಂದ ಮುರಾರಿ.
"ಹಾಗಾದರೆ ಅಣ್ಣ ನಿನ್ನ ಬ್ಯಾಂಕಿಗೇ ಬರಲಿಯಾ" ಕೇಳಿದಾಗ "ಹೂಂ..ಬ್ಯಾಂಕಿಗೆ ಬರಲಿ" ಎಂದು ಹೇಳಿದ ಮುರಾರಿ ತನ್ನ ಕೆಲಸದೊತ್ತಡದಲ್ಲಿ ಮರೆತೇಬಿಟ್ಟ.

        ಎಂದಿನಂತೆ ರಾಜೇಶ್ ಬಂದಾಗ ಕ್ಲಾರ್ಕಿನಿಂದ ಹಿಡಿದು ಕ್ಯಾಷಿಯರ್ ತನಕ ಎಲ್ಲರೂ ಪ್ರೀತಿಯಿಂದ ಮಾತನಾಡಿಸಿದರು. ಮುರಾರಿ ಅರ್ಜೆಂಟ್ ಮೀಟಿಂಗಿನಲ್ಲಿದ್ದ. ಹಾಗಾಗಿ ಚೀಲವನ್ನು ಛೇಂಬರಿನ ಹೊರಗೆ ಇಟ್ಟು ಹೋದರು ರಾಜೇಶ್.
"ಹೂಂ..ಅಡ್ಡಿಲ್ಲ..ನಾವು ಸರ್ ಗೆ ಹೇಳ್ತೀವಿ" ಎಂದಳು ಅಟೆಂಡರ್.

      ಆಫೀಸರ್ ವಾಸುದೇವ್ ಚೀಲದತ್ತ ನೋಡಿ "ಏನೋ ಘಮ ಬಡಿಯುತ್ತಿದೆ" ಎಂದರು. "ಅದೇ ಸರ್ ನನ್ನ ಮೂಗೂ ಆಗದಿಂದ ಅದನ್ನೇ ಹೇಳುತ್ತಿದೆ" ಎಂದಳು ಸುನಂದಾ. ಅಟೆಂಡರ್ ಮೆಲ್ಲಗೆ ಚೀಲವನ್ನು ಸರಿಸಿ ನೋಡಿದಳು. "ವಾವ್.. ಹಲಸಿನ ಹಣ್ಣು.. ಮಲ್ಲಿಗೆ ಹೂವು.."
ಸುನಂದಾ ಪರಿಣಿತಾ ಎಲ್ರೂ "ಹಲಸಿನ ಹಣ್ಣು ಅವರಿಗೇ ಇರಲಿ. ಆ ಮಲ್ಲಿಗೆ ಹೂವು ಕೊಡೇ.."ಎಂದು ದುಂಬಾಲು ಬಿದ್ದರು.
"ಅಯ್ಯೋ ನಂದಲ್ಲ ಮಾರಾಯ್ತಿ.. ಮ್ಯಾನೇಜರಿಂದು" ಎಂದು ಜಾರಿಕೊಂಡಳು ಅಟೆಂಡರ್.

     ಪರಿಣಿತಾ ಚೀಲದತ್ತ ಬಾಗಿ.. "ಏ.. ಮಲ್ಲಿಗೆ ಹೂವೂ ಇದೆ.. ಮೊಗ್ಗು ಬೇರೆನೇ ಇದೆ.. ಹೂವು ಸಂಜೆ ಸರ್ ಮನೆಗೆ ಮುಟ್ಟುವಾಗ ಬಾಡುತ್ತೆ. ಅದನ್ನು ಮಾಲೆ ಹೆಣೆದು ಬಿಡೋಣ.. ಮೊಗ್ಗು ಮಾಲಾ ಮೇಡಂಗಾಯ್ತು.." ಎಂದಾಗ ಸುನಂದಾಳಿಗೂ ಸ್ವಲ್ಪ ಉಮೇದು ಬಂತು.

    "ಯಾವುದಕ್ಕೂ ಮ್ಯಾನೇಜರ್ ಸಾಹೇಬರನ್ನು ಕೇಳದೆ ಮುಟ್ಟಬೇಡಿ" ಎಂದರು ವಾಸುದೇವ್. ಮಲ್ಲಿಗೆ ಕಾಣುತ್ತಿದೆ. ಮಾಲೆ ಹೆಣೆಯಲು ನೂಲು ರೆಡಿಯಾಗಿದೆ. ಆದರೆ ಒಪ್ಪಿಗೆ ಕೇಳುವುದೊಂದೇ ಬಾಕಿ.. ಅಟೆಂಡರ್ ಫೈಲ್ ಗೆ ಸಹಿ ಹಾಕಿಸಲು ಮ್ಯಾನೆಜರಿನ ಛೇಂಬರಿನೊಳಗೆ ಹೋದಾಗ ಅವಳಲ್ಲಿ ಒಪ್ಪಿಗೆ ಕೇಳಲು ಹೇಳಿದರು. ಅವಳೂ ಪ್ರಸ್ತಾಪಿಸಿದಳು. "ಮಲ್ಲಿಗೇನಾ .. ಹೂಂ ತೆಗೆದುಕೊಳ್ಳಿ" ಎಂದಿದ್ದೇ ತಡ.. ಎಲ್ಲರೂ ಮಲ್ಲಿಗೆಯನ್ನು ಹಂಚಿಕೊಂಡರು. ಕ್ಯಾಷಿಯರ್ ಮೇಡಂ ತನ್ನ ಕೌಂಟರಿನಲ್ಲೇ ಮಧ್ಯೆ ಮಧ್ಯೆ ಬಿಡುವು ಮಾಡಿಕೊಂಡು ಹೂ ಮಾಲೆ ಹೆಣೆದು ತನ್ನ ಉದ್ದ ಜಡೆಗೆ ನೇತಾಡಿಸಿ ಖುಷಿಪಟ್ಟರು. ಪರಿಣಿತಾಳ ಪೋನಿ ಟೈಲ್ ಅತ್ತಿತ್ತ ಓಲಾಡುವಾಗ ಮಲ್ಲಿಗೆಯೂ ಓಲಾಡಿ ಘಮ ಬೀರುತ್ತಿತ್ತು.

      ಊಟದ ಸಮಯಕ್ಕೆ ಛೇಂಬರಿನಿಂದ ಹೊರಬಂದ ಮುರಾರಿಗೆ ತನ್ನ ಸಹೋದ್ಯೋಗಿ ಹೆಣ್ಣು ಮಕ್ಕಳ ಮಲ್ಲಿಗೆ ಮಾಲೆಯ ಸಂಭ್ರಮ ಕಂಡು ಹೃದಯ ತುಂಬಿ ಬಂತು. "ನನ್ನ ಮಡದಿ ಮಕ್ಕಳನ್ನು ಸ್ಕೇಟಿಂಗ್ ಕಾಂಪಿಟೇಶನ್ ಗೆಂದು ಕರೆದುಕೊಂಡು ಹೋಗಿರುವುದರಿಂದ ಬರುವುದು ಎರಡು ದಿನವಾಗುತ್ತದೆ. ಈ ಮೊಗ್ಗು ಕೂಡಾ ನಿಮಗೇ ಇರಲಿ" ಎಂದು ಕೊಟ್ಟಾಗ ಅವರ ಮುಖ ಅರಳಿದ್ದು ಕಂಡು ಮಲ್ಲಿಗೆ ಗಿಡ ನೆಟ್ಟು ಸಾಕಿ ಬೆಳೆಸಿದ ಅಮ್ಮ ಅತ್ತಿಗೆಯರನ್ನು ನೆನಪಿಸಿಕೊಂಡ.

"ಸಾರ್ ನಮಗೆ ಏನಿಲ್ವಾ..? ಇದು ಬರೀ ಅನ್ಯಾಯ" ಎಂದರು ವಾಸುದೇವ್..
ಚೀಲದಲ್ಲೇನಿದೆ ಎಂದು ನೋಡಿ ಹಲಸಿನ ಹಣ್ಣನ್ನು ಎಲ್ಲರಿಗೂ ಹಂಚಿದಾಗ ಒಂದೇ ಕುಟಂಬದವರೇನೋ ಎಂಬ ಭಾವನೆ ಮೂಡಿತು ಮುರಾರಿಗೆ..
"ಸರ್.. ಇಷ್ಟೆಲ್ಲಾ ಫಲಭರಿತ ಭೂಮಿಯಿರುವ ನೀವು ನಿಜಕ್ಕೂ ಅದೃಷ್ಟವಂತರು" ಎಂದು ಎಲ್ಲರೂ ಅಂದಾಗ ಮುರಾರಿ ಮಾತ್ರ ಮೂಕನಾಗಿದ್ದ.
ಫಲವತ್ತಾದ ಆಸ್ತಿಯಿದ್ದರೇನು..? ಅದನ್ನು ನಮ್ಮೊಂದಿಗೆ ಅನುಭವಿಸಬೇಕಿದ್ದ ಮಡದಿ ಮಕ್ಕಳಿಗೆ ಭೂಮಿಯೆಂದರೆ ಅಸಡ್ಡೆ. ಮಣ್ಣೆಂದರೆ ಅಲರ್ಜಿ. ತಾಜಾ ಹಣ್ಣುಹಂಪಲುಗಳೆಂದರೆ  ತಾತ್ಸಾರ ಎಂದು ಮನದಲ್ಲೇ ಚಿಂತಿಸಿ ವಿಷಾದದ ನಗೆ ನಕ್ಕ ಮುರಾರಿ.

✍️... ಅನಿತಾ ಜಿ.ಕೆ.ಭಟ್.
18-02-2022.
#ಪ್ರತಿಲಿಪಿಕನ್ನಡ ದೈನಿಕಕಥೆ
#ವಿಷಯ ಸಹೋದ್ಯೋಗಿ


ವರವಾದ ಮಳೆ

 


#ವರವಾದ ಮಳೆ

       "ಅಮ್ಮ ಏನಾದರೊಂದು ಉಪಾಯ ಮಾಡಿ ಈ ಮದುವೆಯನ್ನು ತಪ್ಪಿಸು" ಎಂದು  ಅನುರಾಧಾ ಬೆಳಗ್ಗಿನಿಂದಲೂ ಗೋಳಾಡುತ್ತಿದ್ದಳು. ಸೀತಮ್ಮನವರಿಗೆ ಅವಳ ದೈನ್ಯತೆಯನ್ನು ಕಂಡು ಕರುಳು ಹಿಂಡುತ್ತಿತ್ತು. ತಾವಾದರೂ ಏನು ಮಾಡಲು ಸಾಧ್ಯ? ಎಂದು ಯೋಚಿಸಿದವರಿಗೆ ತಲೆಯೆಲ್ಲ ಸಿಡಿಯುವುದು ಬಿಟ್ಟರೆ ಮತ್ತೇನೂ ಉಪಾಯ ಮೂಡಲಿಲ್ಲ. ನನಗೆ ಅಧಿಕಾರ ಇರುವುದು ಇಷ್ಟೇ ಅಲ್ಲವೇ? ಗಂಡನ ಆಸೆ-ಆಕಾಂಕ್ಷೆಗಳನ್ನು ಪೂರೈಸುವುದು, ಬಯಸಿದ ಸುಖವನ್ನು ಮೊಗೆದು ಮೊಗೆದು ಉಣಬಡಿಸುವುದು, ನವಮಾಸ ಹೊರುವುದು, ಸಾಕಿ ಬೆಳೆಸುವುದು.. ಮತ್ತೆ ಯಾವುದಕ್ಕೂ ನನ್ನನ್ನು ಕೇಳುವುದೂ ಇಲ್ಲ, ನಾನು ಹೇಳುವ ಪ್ರಶ್ನೆಯೂ ಇಲ್ಲ. ನಾನಾಗಿ ಹೇಳಿದರೆ ಕೇಳಿಸಿಕೊಳ್ಳುವ ತಾಳ್ಮೆಯೂ ಇಲ್ಲ, ಕೆಲವೊಮ್ಮೆ ಸಿಡುಕಿನ ಆರ್ಭಟವೇ ಮತ್ತೆ ನಾನು ಕೇಳಬೇಕಾಗುವುದು. ಎನ್ನುತ್ತಾ ಕೈಚೆಲ್ಲಿ ಕುಳಿತಿದ್ದರು ಸೀತಮ್ಮ. "ಎಳೆಯ ಕೂಸಿನ ನೋವನ್ನು ನೀನೇ ಕಡಿಮೆ ಮಾಡು ತಾಯೇ" ಎಂದು ಜಗನ್ಮಾತೆಗೆ ಕೈಮುಗಿದು ಸೆರಗೊಡ್ಡಿ ಬೇಡಿದರು.

          "ಮಧ್ಯಾಹ್ನದ ಊಟಕ್ಕೆ ಅಂದಾಜು ಹತ್ತು ಜನರು ಇರಬಹುದು" ಎಂದು ಹೇಳಿ ತೋಟದತ್ತ ಕೆಲಸದಾಳುಗಳೊಂದಿಗೆ ತೆರಳಿದ್ದರು ಉಮಾಪತಿರಾಯರು. ಒಲ್ಲದ ಮನಸ್ಸಿನಿಂದಲೇ ಅಡುಗೆ ಮಾಡಿದರು ಸೀತಮ್ಮ. ಅಡುಗೆ ಎಂದರೆ ಬರಿ ಒಂದು ಬಗೆಯಲ್ಲ. ಉಮಾಪತಿ ರಾಯರಿಗೆ ಕನಿಷ್ಠ ಮೂರು ಬಗೆಯಾದರೂ ಇರಲೇಬೇಕು. ಹೃದಯ ಹಿಂಡುವ ಯಾತನೆಯಲ್ಲೂ ಸಾಂಬಾರು, ಸಾರು, ಸೆಂಡಿಗೆ, ಪಲ್ಯ, ತಂಬುಳಿ ಇಷ್ಟನ್ನು ತಯಾರಿಸಿದರು. ಊಟದ ಸಮಯಕ್ಕೆ ಉಮಾಪತಿ ರಾಯರ ಇಬ್ಬರು ತಮ್ಮಂದಿರು, ಅವರ ಪತ್ನಿಯರು, ಒಬ್ಬರು ಅಕ್ಕ, ಒಬ್ಬರು ತಂಗಿ ಅವರ ಗಂಡಂದಿರೊಂದಿಗೆ ಬಂದಿದ್ದರು. ಇವರೊಂದಿಗೆ  ಉಮಾಪತಿ ರಾಯರು ನಗುನಗುತ್ತಾ ಮಾತನಾಡಿ ವರನ ವಿಚಾರವನ್ನು ಹೇಳುತ್ತಿರುವಾಗ ಒಳಗಿನಿಂದ ಕೇಳಿಸಿಕೊಳ್ಳುತ್ತಾ ತಮ್ಮ ಸೆರಗಿನ ತುದಿಯಲ್ಲಿ ಕಣ್ಣಂಚನ್ನು ಒರೆಸಿಕೊಳ್ಳುತ್ತಿದ್ದರು ಸೀತಮ್ಮ. ಉಮಾಪತಿ ರಾಯರಿಗೆ ಅದು ಪ್ರತಿಷ್ಠೆ. ಸೀತಮ್ಮನವರಿಗೆ ಅದು ಕರುಳಬಳ್ಳಿಯ ಆಸೆಯನ್ನು ಪೂರೈಸಲಾಗದ ಸಂಕಟ. ತನ್ನ ಸಂಕಟವನ್ನು ಅತ್ತಿಗೆಯಂದಿರಾದರೂ ಅರ್ಥಮಾಡಿಕೊಂಡಾರೇನೋ ಎಂದು ಸೀತಮ್ಮನವರು ಆಶಿಸಿದ್ದು ಸುಳ್ಳಾಗಿತ್ತು. ಉಮಾಪತಿ ರಾಯರ ದೊಡ್ಡ ಅಕ್ಕನಂತೂ  "ಇದು ಸರಿಯಾದ ಸಮಯ.  ನಮ್ಮ ಕಾಲಕ್ಕೆ ಹದಿನಾಲ್ಕು ವರ್ಷಕ್ಕೆ ವಿವಾಹ ಮಾಡಿದರು ನಮ್ಮ ತಂದೆಯವರು. ಈಗ ಅನುರಾಧಳಿಗೆ ಹದಿನಾರನೇ ವಯಸ್ಸು. ಈ ವಯಸ್ಸಿನಲ್ಲಿ ಮದುವೆ ಮಾಡುವುದು ಈಗಿನ ಕಾಲಕ್ಕೆ ಸೂಕ್ತ. ಕಾಲೇಜು ಓದು ಎಂದೆಲ್ಲ ಹೇಳುತ್ತಾ ಯಾರ್ಯಾರೊಂದಿಗೋ  ಓಡಿದರೆ ನಮ್ಮ ಮಾನ ಮರ್ಯಾದೆಯೇ ಹರಾಜು ಆಗುವುದು. ಅಷ್ಟಾಗಿಯೂ ಓದಿ ಕಲಿತು ಮಾಡುವುದೇನಿದೆ...? ಎಷ್ಟು ಓದಿದರೂ ಅಡುಗೆಮಾಡುವುದು, ಕಸ ಮುಸುರೆ ತಿಕ್ಕುವುದು ತಪ್ಪದು ಹೆಣ್ಣಿಗೆ.." ಎಂದು ಇಡೀ ಮನೆಗೆ ಕೇಳುವಂತೆ ಹೇಳುತ್ತಿದ್ದಾಗ ಅನುರಾಧಾಳಿಗಿಂತ ಹೆಚ್ಚು ಸೀತಮ್ಮನವರು ದುಃಖಿಸಿದರು. ತನ್ನ ಅಗಲವಾದ ಶರೀರವನ್ನು ಹಿಡಿಯಷ್ಟಕ್ಕೆ ಕುಗ್ಗಿಸಿಕೊಂಡು ಅವರು ಅಳುತ್ತಿದ್ದರೆ ಅವರ ಮಕ್ಕಳೆಲ್ಲರೂ ಏನೂ ತೋಚದೆ ಪಿಳಿಪಿಳಿ ನೋಡುತ್ತಿದ್ದರು. ಒಬ್ಬ ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ನೋವು ತಿಳಿಯುವುದಿಲ್ಲವೇ ಎಂಬ ಒಂದು ವಾಕ್ಯ ಬಿಟ್ಟು ಮತ್ತೇನನ್ನೂ ಅವರು ಉಸುರಲಿಲ್ಲ.

        ಎರಡನೇ ಅತ್ತಿಗೆ "ನಮ್ಮ ಮನೆ ಹತ್ತಿರ ಒಬ್ಬಳು ಓಡಿ ಹೋಗಿದ್ದಾಳೆ... ಮತ್ತೊಬ್ಬಳು ಕಲಿಯುತ್ತೇನೆ ಎಂದು ಫಾರಿನ್ ಗೆ ತೆರಳಿದವಳು  ವಿವಾಹದ ವಯಸ್ಸು ಮೀರಿದರೂ ಇನ್ನೂ ವಿವಾಹವಾಗಿಲ್ಲ.." ಎನ್ನುತ್ತಾ ನಕಾರಾತ್ಮಕ ಸುದ್ದಿಗಳನ್ನೇ ಉಮಾಪತಿ ರಾಯರ ಕಿವಿಗೆ ತುಂಬಿಸುತ್ತಿದ್ದರು. ಇದನ್ನೆಲ್ಲ ಕೇಳಿ ಸೀತಮ್ಮ ಹಾಗೆಯೇ ಕುಸಿದು ಕುಳಿತರು.

                ******

          ಉಮಾಪತಿ ರಾಯರು ಮತ್ತು ಸೀತಮ್ಮನವರದು ಅರ್ಕುಳದ ಒಂದು ಸಾಂಪ್ರದಾಯಿಕ ಮನೆತನ. ಹಿಂದಿನಿಂದಲೂ ಸಂಪ್ರದಾಯಗಳಿಗೆ ಒತ್ತು ನೀಡುತ್ತಾ ಬಂದ ಮನೆತನ ಕಾಲಕ್ಕೆ ತಕ್ಕಂತೆ ಸ್ವಲ್ಪವೇ ಸ್ವಲ್ಪ ಬದಲಾವಣೆಗೆ ಒಡ್ಡಿಕೊಂಡಿತ್ತು. ಅದೇನೆಂದರೆ ಹಳೆಯ ರೇಡಿಯೋ ಇದ್ದ ಜಾಗದಲ್ಲಿ ಹೊಸ ದೂರದರ್ಶನವೊಂದು ಬಂದು ಕುಳಿತಿತ್ತು. ಹಳೆಯ ಎತ್ತಿನ ಬಂಡಿ ಇದ್ದ ಜಾಗಕ್ಕೆ ಹೊಸದೊಂದು ಜೀಪು ಬಂದು ಸೇರಿತ್ತು. ಹಿಂದಿನ ಕಾಲದ ಏತಗಳು ಪಳೆಯುಳಿಕೆಯಾಗಿ ಹೊಸ ಪಂಪ್ ಸೆಟ್ಟುಗಳು ಬಂದಿದ್ದವು. ಗದ್ದೆಗಳಲ್ಲಿ ಕಬ್ಬುಗಳನ್ನು ಬೆಳೆದು ಗಾಣದಲ್ಲಿ ಹಾಲು ತೆಗೆದು ಬೆಲ್ಲ ತಯಾರಿಸುತ್ತಿದ್ದ  ಪರಿಪಾಠ ಹೋಗಿ ಈಗ ಉಳ್ಳಾಲ ಬೆಲ್ಲವನ್ನು ತರಿಸುವ ಅಭ್ಯಾಸ ರೂಢಿಸಿಕೊಂಡಿದ್ದರು. ನಿಧಾನವಾಗಿ ಒಂದೊಂದೇ ಪದ್ಧತಿಗಳಲ್ಲಿ ಬದಲಾವಣೆಗಳು ಬರುತ್ತಿದ್ದವು.  ಈಗಿನ ಕಾಲಕ್ಕೆ ತಕ್ಕಂತೆ ಸಂಪೂರ್ಣವಾಗಿ ಬದಲಾಗುವ ಮಾತೇ ಇರಲಿಲ್ಲ.

          ಹಿರಿಯೂರಿನ ಸೀತಮ್ಮ ತಮ್ಮ ಹದಿಮೂರನೇ ವಯಸ್ಸಿನಲ್ಲಿ ದೊಡ್ಡವಳಾದಾಗ ಅವರ ಮನೆಯಲ್ಲಿ ಕನ್ಯೆಗೆ ಆರತಿ ಬೆಳಗುವ ಸಮಾರಂಭ ಏರ್ಪಡಿಸಿದ್ದರು. ಇದರ ಸುದ್ದಿ ತಿಳಿದ ಉಮಾಪತಿ ರಾಯರ ತಂದೆಯೇ ತಮ್ಮ ಮಗನ ಸಲುವಾಗಿ ವಿವಾಹ ಪ್ರಸ್ತಾಪವನ್ನಿಟ್ಟರು. ಉಮಾಪತಿ ರಾಯರಿಗೆ ಮೂವತ್ತು ವರ್ಷ ವಯಸ್ಸು. ಆಗಿನ ಕಾಲಕ್ಕೆ ಗಟ್ಟಿ ಕುಳವಾಗಿದ್ದ ಅರ್ಕುಳ ಮನೆತನಕ್ಕೆ ಹಿಂದೆ ಮುಂದೆ ನೋಡದೆ ಸೀತಮ್ಮನವರನ್ನು ಮದುವೆ ಮಾಡಿಕೊಡಲಾಗಿತ್ತು. ದೊಡ್ಡ ಮನೆತನ, ಮನೆತುಂಬ ಜನ, ಹಿರಿಯ ಸೊಸೆ ಸೀತಮ್ಮ. ಉಮಾಪತಿ ರಾಯರ ಅಕ್ಕ ತಂಗಿಯರೆಲ್ಲ ಹದಿಮೂರು ಹದಿನಾಲ್ಕನೇ ವಯಸ್ಸಿಗೆ ಮದುವೆಯಾಗಿ ಪತಿಯ ಮನೆಗೆ ತೆರಳಿದ್ದರು.  ಉಮಾಪತಿ ರಾಯರು ಹಾಗೂ ಅವರ ಅಜ್ಜ, ಅಜ್ಜಿ, ತಂದೆ, ತಾಯಿ, ತಮ್ಮಂದಿರು, ಅವರ ಕುಟುಂಬ ಒಟ್ಟಿಗೆ ಬಾಳುತ್ತಿದ್ದರು.

       ಮೇಲ್ನೋಟಕ್ಕೆ ಇವರದು ಅನ್ಯೋನ್ಯ ದಾಂಪತ್ಯವಾಗಿದ್ದರೂ ಪರಸ್ಪರ ಅನುರಾಗ, ಅರ್ಥಮಾಡಿಕೊಂಡದ್ದು ಕಡಿಮೆಯೇ. ಉಮಾಪತಿ ರಾಯರ ಸಿಟ್ಟಿಗೆ ಭಯ ಬೀಳುತಿದ್ದರು ಸೀತಮ್ಮ. ವಯಸ್ಸಿನಲ್ಲಿಯೂ ಸಾಕಷ್ಟು ಹಿರಿಯರಾಗಿದ್ದ ಕಾರಣ ಪರಸ್ಪರ ಆಲೋಚನೆಗಳು ಒಂದಕ್ಕೊಂದು ಹೊಂದಿಕೊಳ್ಳುತ್ತಿರಲಿಲ್ಲ. ಸೀತಮ್ಮನವರ ಎಳೆಯ ವಯಸ್ಸಿನ ಆಸೆ ಬೇಡಿಕೆಗಳು ಉಮಾಪತಿರಾಯರಿಗೆ ಅರ್ಥವಾಗುತ್ತಿರಲಿಲ್ಲ.
ಮದುವೆಯಾದ ಮರು ವರ್ಷಕ್ಕೇ ಹುಟ್ಟಿದ ಮಗ ಧನಂಜಯ. ಮತ್ತೆರಡು ವರ್ಷದಲ್ಲಿ ಹುಟ್ಟಿದವಳು ಅನುರಾಧ. ಮತ್ತೆ ಎರಡು ಮೂರು ವರ್ಷದಲ್ಲಿ ಒಂದು ಗಂಡು ಎರಡು ಹೆಣ್ಣು ಮಕ್ಕಳು ಜನಿಸಿದರು. ಆಗಾಗ ಗರ್ಭಪಾತವಾಗಿದ್ದೂ ಇದೆ.
ಸೀತಮ್ಮನವರಿಗೆ ಎಲ್ಲವೂ ಇದ್ದರೂ ಏನೋ ಕಳೆದುಕೊಂಡಂತಹ ಭಾವ ಸದಾ ಕಾಡುತ್ತಿತ್ತು.

         ಅನುರಾಧಾ ಹತ್ತನೇ ತರಗತಿ ಮುಗಿಸಿ ಮನೆಯ ಸಮೀಪದಲ್ಲಿದ್ದ ಕಾಲೇಜಿಗೆ ತೆರಳುತ್ತಿದ್ದಳು. ಆಕೆ ಕಲಿಯುವುದರಲ್ಲಿ ಮುಂದೆ. ಚಿತ್ರಕಲೆ, ಸಂಗೀತ, ನೃತ್ಯ, ರಂಗೋಲಿ ಬಿಡಿಸುವುದು.. ಇತ್ಯಾದಿಗಳಲ್ಲಿ ಅವಳದು ಎತ್ತಿದ ಕೈ. ಪ್ರತಿ ವರ್ಷ ಶಾಲೆಯ ವಾರ್ಷಿಕೋತ್ಸವದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲುತ್ತಿದ್ದಳು. ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿ. ಮುಂದೆ ನೀನು ಏನಾಗಬೇಕು ಎಂದು ಕೇಳಿದರೆ ಆಕೆ "ನಾನು ಸಂಗೀತದಲ್ಲಿ ಏನಾದರೂ ಸಾಧನೆ ಮಾಡಬೇಕು, ವಿಜ್ಞಾನ ಶಿಕ್ಷಕಿಯಾಗಿ ಬೇಕು.." ಎಂದು ಹೇಳುತ್ತಿದ್ದಳು. ಆದರೆ ಆಕೆಯ ಸಂಗೀತ ಸಾಧನೆಗೆ ಎಳ್ಳಷ್ಟೂ ಪ್ರೋತ್ಸಾಹ ಮನೆಯಲ್ಲಿರಲಿಲ್ಲ. ಉಮಾಪತಿ ರಾಯರಿಗೆ ಹೆಣ್ಣುಮಕ್ಕಳು ಎಲ್ಲರೆದುರು ಹಾಡುತ್ತಾ ಕುಳಿತರೆ ಆಗದು. ಕೆಂಡದಂತಹ ಸಿಟ್ಟು. ಒಮ್ಮೆಯಂತೂ ಅನುರಾಧಾ ಸ್ಪರ್ಧೆಗೆಂದು ಹಾಡೊಂದನ್ನು ಅಭ್ಯಾಸ ಮಾಡುತ್ತಿದ್ದಾಗ ನಾಗರ ಬೆತ್ತ ಹಿಡಿದು ಬಂದಿದ್ದರು. ಅದೇ ಕೊನೆ. ಮತ್ತೆ ಅವಳೆಂದೂ ಮನೆಯಲ್ಲಿ ಅಭ್ಯಾಸವೇ ಮಾಡುತ್ತಿರಲಿಲ್ಲ. ಅವಳ ಹಾಡಿನ ಅಭ್ಯಾಸ ಏನಿದ್ದರೂ ಶಾಲೆಯಲ್ಲಿ ಮಾತ್ರ.

            ಫೆಬ್ರವರಿ ತಿಂಗಳ ಮೊದಲನೆಯ ವಾರ. ಉಮಾಪತಿ ರಾಯರು ಸೀತಮ್ಮನವರನ್ನು ಕರೆದು "ಇವತ್ತು ನಮ್ಮ ಮನೆಗೆ ಶಾಸ್ತ್ರಿಗಳು ಬರುವವರಿದ್ದಾರೆ. ವಿಶೇಷ ಅಡುಗೆ ಮಾಡು" ಎಂದಿದ್ದರು. ಶಾಸ್ತ್ರಿಗಳು ಬರುವ ವಿಚಾರ ಏನಿದೆ? ಎಂದು ಯೋಚಿಸುತ್ತಿದ್ದಾಗ ಸೀತಮ್ಮನವರಿಗೆ ಏನೂ ಹೊಳೆದಿರಲಿಲ್ಲ. ಉಮಾಪತಿ ರಾಯರು ತಾವೇ ಜೀಪು ಕೊಂಡೊಯ್ದು ಶಾಸ್ತ್ರಿಗಳನ್ನು ಮನೆಗೆ ಕರೆತಂದಿದ್ದರು. ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತು. ಅವರಿಗೆ ಕೈ ಕಾಲು ಮುಖ ತೊಳೆಯಲು ನೀರು ಕೊಟ್ಟು, ಕುಡಿಯಲು ನೀರು ಕೊಟ್ಟರು, ಬಾಯಾರಿಕೆಗೆಂದು ಚಹಾ ಮಾಡಲು ಒಳಗೆ ತೆರಳಿದಾಗ "ನನಗೆ ಬರಿ ಮಜ್ಜಿಗೆ ನೀರು ಸಾಕು ಸೀತಮ್ಮ" ಎಂದಿದ್ದರು.. ಮಜ್ಜಿಗೆ ನೀರು ಕೊಟ್ಟು ಇನ್ನೇನು ಅಡುಗೆಗಳಿಗೆ ಒಗ್ಗರಣೆ ಹಾಕಬೇಕೆಂದು ಒಳಹೋದರು ಸೀತಮ್ಮ.

        ಸೀತಮ್ಮ ಒಗ್ಗರಣೆ ಹಾಕುತ್ತಿದ್ದಾರೆ. ಉಮಾಪತಿ ರಾಯರು ಅನುರಾಧಾಳ ಜಾತಕವನ್ನು ಶಾಸ್ತ್ರಿಗಳ ಮುಂದಿಟ್ಟಿದ್ದಾರೆ. ಶಾಸ್ತ್ರಿಗಳು ಜಾತಕ ನೋಡುತ್ತಾ "ಈಗ ಈ ಕನ್ಯೆಗೆ ಹದಿನಾರನೇ ವಯಸ್ಸು ನಡೆಯುತ್ತಿದೆ. ಇದು ಇವಳಿಗೆ ವಿವಾಹಯೋಗ್ಯ ಕಾಲ. ಈ ತಿಂಗಳಿನ ಕೊನೆಯವರೆಗೆ ಈಕೆಗೆ ಕಂಕಣ ಬಲವಿದೆ. ಈಗ ವಿವಾಹವಾಗಬೇಕು. ಇಲ್ಲವೆಂದಾದರೆ ಮತ್ತೆ ಆಕೆಗೆ ಕಂಕಣ ಬಲವಿರುವುದು ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ. ಆಗಲೂ ಹಲವು ಗ್ರಹ ದೋಷಗಳಿವೆ. ವಿವಾಹಕ್ಕೆ ಸಂಕಷ್ಟ ಎದುರಾಗಬಹುದು. ಅಥವಾ ಯಾರದಾದರೂ ಜೊತೆ ಪ್ರೇಮ ವಿವಾಹವಾಗುವ ಆಲೋಚನೆಯನ್ನು ಮಾಡಬಹುದು."
ಇದನ್ನು ಕೇಳಿದ ಉಮಾಪತಿ ರಾಯರು "ಈಗಲೇ ವಿವಾಹ ಮಾಡೋಣ" ಎಂದು ಸನ್ನದ್ಧರಾದರು.. ಇದನ್ನು ಕೇಳಿಸಿಕೊಂಡ ಸೀತಮ್ಮನವರ ತಲೆ ಒಗ್ಗರಣೆಯ ಸಾಸಿವೆಯಂತೆಯೇ ಚಟಪಟ ಸಿಡಿಯಲಾರಂಭಿಸಿತು, ರೋಷವು ಕುದಿಯಲು ಆರಂಭವಾಯಿತು. ಎಷ್ಟೊಂದು ಕನಸು ಕಂಡಿದ್ದು ಪಾಪ ಆ ಕೂಸು.. ಇವಕ್ಕೆಲ್ಲ ಎಂತಾದರೂ ಬುದ್ಧಿ ಇದೆಯಾ.. ಅಲ್ಲ ಹೆಣ್ಣು ಮಗು ಅಂದ್ರೆ ಏನು ಗ್ರಹಿಸಿದ್ದು ಇವರೆಲ್ಲ.. ಬರಿಯ ಸೇವೆಗಷ್ಟೇ ಸೀಮಿತವಾ.. ಆಕೆಗೂ ಒಂದು ಮನಸ್ಸಿದೆ ಅನ್ನೋದು ಮರೆತೇ ಹೋಗಿದೆಯಾ.. ಸಿಟ್ಟು ನೆತ್ತಿಗೇರಿತು. ಆದರೆ ಯಾರೊಂದಿಗೂ ತೋರಿಸುವ ಹಾಗಿರಲಿಲ್ಲ.

        ಉಮಾಪತಿರಾಯರು ಅಲ್ಲಿಂದಲೇ ಕೂಗಿದರು "ಏ..ಸೀತಾ.. ಊಟಕ್ಕೆ ಇಡು.."
ಸೀತಮ್ಮ ಒಗ್ಗರಣೆ  ಸಟ್ಟುಗವನ್ನು ಕುಕ್ಕುತ್ತಾ 'ಊಟ ವಂತೆ ಊಟ..! ಕೆಲವು ದಿನ ಕಳೆದು ಮದುವೆಯಂತೆ.. ಏನು ಮದುವೆ ಎಂದರೆ ಆಟವಾ.. ಹೆಣ್ಣಿನ ಬಾಳೆಂದರೆ ಇವರಿಗೆ ಎಷ್ಟು ಅಲ್ಪ..' ಎಂದುಕೊಳ್ಳುತ್ತಿರುವಾಗಲೇ ಉಮಾಪತಿ ರಾಯರು ಶಾಸ್ತ್ರಿಗಳನ್ನು ಊಟದ ಪಡಸಾಲೆಗೆ ಕರೆದುಕೊಂಡು ಬಂದರು. ಮನೆಯ ಹಿಂದಿನ ನಳ್ಳಿಯಲ್ಲಿ ಕೈ ತೊಳೆದು ಬಂದು ಊಟಕ್ಕೆ ಕುಳಿತರು. ಸೀತಮ್ಮ ಎಲ್ಲ ಬಗೆಯನ್ನು ಅಚ್ಚುಕಟ್ಟಾಗಿ ಬಡಿಸಿದರು. ಅವರ ಮುಖದಲ್ಲಿ ನಗುವಿರಲಿ.. ಬಾಯಿಮಾತಿನ ಉಪಚಾರವೂ ಇರಲಿಲ್ಲ.. ಒಡಲಬೇಗೆ ಅವರನ್ನು ಸುಡುತ್ತಿತ್ತು..

ಊಟ ಮಾಡಿ ಕವಳ ಬಾಯಿಗೆ ಹಾಕಿಕೊಂಡು ಊರ ಹರಟೆ ಕೊಚ್ಚಿದರು ಇಬ್ಬರೂ. ಅರ್ಧಗಂಟೆಯ  ಸಣ್ಣದೊಂದು ನಿದ್ದೆ ತೆಗೆದರು. ಎದ್ದು ಬಂದ ಶಾಸ್ತ್ರಿಗಳು ತಟ್ಟನೆ ಏನೋ ನೆನಪಾದಂತೆ... "ನನಗೆ ಇತ್ತೀಚೆಗೆ ಯಾರೋ ಒಬ್ಬರು ಒಬ್ಬ ಹುಡುಗನ ಜಾತಕ ಕೊಟ್ಟು ಹೋಗಿದ್ದರು. ಹೇಗೂ ನಿಮ್ಮ ಮಗಳಿಗೆ ಒಂದು ತಿಂಗಳೊಳಗೆ ವಿವಾಹವೂ ಆಗಬೇಕಲ್ಲ. ಜಾತಕ ಸರಿಹೊಂದುವುದೋ ಎಂದು ನೋಡಬಹುದು.." ಎಂದು ಹೇಳಿದಾಗ ಉಮಾಪತಿ ರಾಯರು ಆ ಬಗ್ಗೆ ವಿಚಾರಿಸಿಕೊಂಡರು.. ವಿಷಯ ಎಲ್ಲವನ್ನೂ ತಿಳಿದುಕೊಂಡಾಗ "ಸರಿ ಹಾಗಾದರೆ.. ಇಬ್ಬರ ಜಾತಕ ಎಷ್ಟರಮಟ್ಟಿಗೆ ಹೊಂದಾಣಿಕೆಯಾಗುತ್ತದೆ ನೋಡೋಣ" ಎಂದೇ ಬಿಟ್ಟರು.

           ಶಾಸ್ತ್ರಿಗಳು ತಮ್ಮ ದೊಡ್ಡದಾದ ಬಟ್ಟೆಯ ಚೀಲದಲ್ಲಿ ಆ ಹುಡುಗನ ಜಾತಕವನ್ನು ಅರಸಿದರು. ಆ ಜಾತಕವನ್ನು ತೆಗೆದು ಇಬ್ಬರ ಜಾತಕವನ್ನು ಹೋಲಿಕೆ ನೋಡುತ್ತಿದ್ದರು. ಜಾತಕದೊಂದಿಗೆ ಒಂದು ಫೋಟೋ ಕೂಡ ಇತ್ತು. ಅದನ್ನು ಎತ್ತಿ ಪಕ್ಕದಲ್ಲಿ ಇರಿಸಿದ್ದರು. ಚಹಾ ಕೊಡಲು ಬಂದ ಸೀತಮ್ಮನವರಿಗೆ ಅದು ಕಾಣಿಸಿತ್ತು. ನೋಡಲು ಮೂವತ್ತು ವರ್ಷ ಮೀರಿದವರ ತರಹ ಇದ್ದಾನೆ. ನೆತ್ತಿಯ ಮೇಲೆ ಕೂದಲುಗಳು ಉದುರಿ ಹೋಗುತ್ತಿವೆ.. ನೋಡುವುದಕ್ಕೂ ಅಷ್ಟೇನೂ ಯೋಗ್ಯನಲ್ಲ.. ಅಂತಹವನಿಗೆ ನಮ್ಮ ಚೆಲುವೆ, ಚುರುಕುಮತಿ ಅನುರಾಧಾಳನ್ನು ಈಗಲೇ ಕೊಟ್ಟು ಬಿಡಬೇಕೇ.. ಮದುವೆ ಮಾಡಿ ಮುಗಿಸಬೇಕು ಎಂಬ ಆತುರವಾದರೂ ಯಾಕೋ.." ಎಂದುಕೊಳ್ಳುತ್ತಲೇ  ಚಹಾವನ್ನು ಅಲ್ಲಿಟ್ಟು ತೆರಳಿದರು.

           "ಜಾತಕ ಬಹಳ ಚೆನ್ನಾಗಿ ಕೂಡಿಬರುತ್ತಿದೆ. ಇನ್ನೆರಡು ದಿನಗಳಲ್ಲಿ ವರನ ಕಡೆಯವರನ್ನು ವಧುಪರೀಕ್ಷೆಗೆಂದು ಕರೆದುಕೊಂಡು ಬರುತ್ತೇನೆ" ಎಂದು ಹೇಳಿದ ಶಾಸ್ತ್ರಿಗಳು ಹೊರಟು ನಿಂತಿದ್ದರು. ಅಂದಿನಿಂದ ಸೀತಮ್ಮನವರ ವೇದನೆ ಹೇಳತೀರದು. ಮಾತಿಲ್ಲದೆ ಮೂಕರಾಗಿದ್ದರು. ಎಲ್ಲವನ್ನೂ ನೋಡುತ್ತಿದ್ದರೂ ನಿರ್ಭಾವುಕ ವ್ಯಕ್ತಿಯಂತೆ ಉಮಾಪತಿರಾಯರು ತನ್ನ ಹಠವೇ ನಡೆಯಬೇಕು ಎಂಬಂತೆ ವರ್ತಿಸುತ್ತಿದ್ದರು. ವಿಷಯ ತಿಳಿದ ಅನುರಾಧಳ ಮನದ ನೋವನ್ನು ಬಣ್ಣಿಸಲು ಸಾಧ್ಯವಿಲ್ಲ. ಒಮ್ಮೆ "ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಹೊರಟಿದ್ದಳು. ಸೀತಮ್ಮ "ಏನಾದರಾಗಲಿ ಮಗಳೇ.. ಆತ್ಮಹತ್ಯೆ ಒಂದು ಮಾಡಿಕೊಳ್ಳಬೇಡ.. ನೋಡೋಣ ಏನಾದರೂ ಅನುಕೂಲ ಆಗಬಹುದು. ಇಲ್ಲದಿದ್ದರೆ ಬಂದ ಜೀವನವನ್ನೇ ಎದುರಿಸಿ ಧೈರ್ಯದಿಂದ ಬದುಕು.. ಈಗ ನಾನು ಬದುಕುತ್ತಿಲ್ಲವೇ.." ಎಂದು ಸಮಾಧಾನಿಸಿದರು. ಓರಗೆಯ ಗೆಳತಿಯರನ್ನೆಲ್ಲಾ ನೋಡಿ, ಅವರ ಮನೆಯಲ್ಲಿ ದೊರೆಯುವ ಸ್ವಾತಂತ್ರ್ಯವನ್ನು ಕಂಡು ''ನಾನು ಕಡುಬಡವರ ಮನೆಯಲ್ಲಿ ಜನಿಸಿದರೂ ತೊಂದರೆ ಇರುತ್ತಿರಲಿಲ್ಲ.. ಇಂತಹ ಹಠಮಾರಿ ಸಾಂಪ್ರದಾಯಿಕ ಮನೆತನದಲ್ಲಿ ಹುಟ್ಟುವುದರಿಂದ.. ಇಲ್ಲಿ ನನ್ನ ಕನಸುಗಳಿಗೆಲ್ಲ ಕೊಳ್ಳಿ ಇಡುತ್ತಿದ್ದಾರೆ..'' ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.. ಬೆಳ್ಳಗಿನ ಹುಡುಗಿಯ ಮುಖವಿಡೀ ಅತ್ತು ಅತ್ತು.. ಕೆಂಪಾಗಿತ್ತು ಕಣ್ಣುಗಳಿಂದ ನೀರೇ ಬತ್ತಿಹೋಗಿತ್ತು..

               *****

"ಸಂಜೆ ನಾಲ್ಕು ಗಂಟೆಗೆ ಅವರೆಲ್ಲಾ ಬರುತ್ತಿದ್ದಾರೆ. ಅನುರಾಧ ಸೀರೆ ಉಟ್ಟು ತಯಾರಾಗಲಿ.. ಅವರಿಗೆ ಉಪ್ಪಿಟ್ಟು ಅವಲಕ್ಕಿ ಕ್ಷೀರ ಕಾಫಿ ಚಹಾ ಎಲ್ಲ ತಯಾರು ಮಾಡಿಡು..'' ಎಂದು ಹೇಳಿ ಹೊರ ಹೋಗಿದ್ದರು ಉಮಾಪತಿ ರಾಯರು. ತನ್ನದೇ ಹಳೆಯ ಸೀರೆಯನ್ನು ತೆಗೆದು ಮಗಳಿಗೆ ಉಡಿಸಲು ಹೊರಟ ಸೀತಮ್ಮನವರ ಕೈ ನಡುಗುತ್ತಿತ್ತು. ಹದಿನೆಂಟುವರ್ಷ ಆಗಬೇಕು ಮದುವೆಗೆ ಎಂದು ಕಾನೂನು ಇದೆ. ಆದರೆ ಇಂತಹ ಹಠಮಾರಿಗಳು ಕಾನೂನಿಗೂ ತಲೆಬಾಗುವುದಿಲ್ಲವಲ್ಲ.. ಎಂದು ಕೊರಗುತ್ತಿದ್ದರು. ಮನಸ್ಸಿಲ್ಲದೇ ಸೀರೆಯುಟ್ಟ ಅನುರಾಧಾ ಬಾಡಿದ ಮೊಗ್ಗಿನಂತೆ ಕಾಣುತ್ತಿದ್ದಳು. ಅವಳಲ್ಲಿ ಎಂದಿನಂತೆ ಲವಲವಿಕೆ ಇರಲಿಲ್ಲ.

           ನಾಲ್ಕು ಗಂಟೆಯಾಗುತ್ತಿದ್ದಂತೆ ಉಮಾಪತಿ ರಾಯರು ಪಂಚೆಯನ್ನು ಆಗಾಗ ಎತ್ತಿಕಟ್ಟುತ್ತಾ ಒಳಗಿನ ಪಡಸಾಲೆಗೊಮ್ಮೆ ಹೊರಗಿನ ಹಜಾರಕ್ಕೆ ಒಮ್ಮೆ ಅತ್ತಿಂದ ಇತ್ತ ಸಾಗುತ್ತಿದ್ದರು. ಬಾನಂಚಿನಲ್ಲಿ ಒಮ್ಮೆಲೆ ಕಾರ್ಮೋಡ ಆವರಿಸಿತು. ತಂಗಾಳಿ ಬೀಸಲಾರಂಭಿಸಿತು. "ಎಲ್ಲೋ ಮಳೆ ಬಂದಿರಬೇಕು" ಎಂದು ನೆರೆದಿದ್ದವರೆಲ್ಲ ಕುಳಿತು ಮಾತನಾಡಿಕೊಂಡರು. ಗುಡುಗು ಮಿಂಚಿನ ಅರ್ಭಟವೂ ಕೇಳಿಬಂತು. ಕೆಲವೇ ಕ್ಷಣದಲ್ಲಿ ಧೋ.. ಎಂದು ಮಳೆ ಸುರಿಯಲು ಆರಂಬಿಸಿತು.. "ಈ ಹೊತ್ತಿನಲ್ಲಿ ಮಳೆ ಬರಬೇಕಾ?.. ವರನ ಕಡೆಯವರಿಗೆ ಬರಲು ರಗಳೆ"  ಎಂದು ಚಿಂತಿಸುತ್ತಿದ್ದರು ಉಮಾಪತಿ ರಾಯರು.. ಸಂಜೆ ಐದೂವರೆಯವರೆಗೂ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ವರನ ಕಡೆಯವರ ಪತ್ತೆಯೇ ಇರಲಿಲ್ಲ. ಬಂದವರೆಲ್ಲಾ "ಇವರನ್ನು ಇವತ್ತು ಕಾಣುವುದಿಲ್ಲ" ಎಂದು ಹೊರಡಲಾರಂಭಿಸಿದವು.

      
          ಉಮಾಪತಿರಾಯರಿಗೆ ಯಾಕೆ ಬರಲಿಲ್ಲ ಎಂಬ ಯೋಚನೆ ಕಾಡಿತು.. ರಾತ್ರಿಯಾದರೂ ವರನ ಕಡೆಯವರು ಮಾತ್ರ ಆಗಮಿಸಲಿಲ್ಲ. ಒಂದು ವಾರದ ಬಳಿಕ ಶಾಸ್ತ್ರಿಗಳ ಕಡೆಯಿಂದ ಪತ್ರವೊಂದು ಬಂದಿತ್ತು.. ಒಕ್ಕಣೆ ಹೀಗಿತ್ತು..

         ಉಮಾಪತಿ ರಾಯರಿಗೆ ಶಾಸ್ತ್ರಿಗಳ ಕಡೆಯಿಂದ ನಮಸ್ಕಾರಗಳು.. ನಾವೆಲ್ಲರೂ ಕ್ಷೇಮ. ನೀವೂ ಕ್ಷೇಮವೆಂದು ಭಾವಿಸುತ್ತೇನೆ. ಮೊನ್ನೆ ತಮ್ಮ ಮಗಳ ವಧುಪರೀಕ್ಷೆಗೆಂದು ವರನ ಕಡೆಯವರನ್ನು  ಕರೆದುಕೊಂಡು ಬರುವುದಾಗಿ ತಿಳಿಸಿದ್ದೆ. ಆದರೆ ಆ ದಿನ ವರನ ಕಡೆಯವರು ಹೊರಡುವ ಸಮಯದಲ್ಲಿ ವಿಪರೀತ ಗುಡುಗು-ಮಿಂಚಿನ ಮಳೆಯಾಗಿದ್ದರಿಂದ... ಅವರ ಮನೆಯ ಸಮೀಪದ ನದಿಯ ಸೇತುವೆಯು ಒಂದೆರಡು ಗಂಟೆಯಲ್ಲೇ ನೀರಿನಲ್ಲಿ ಮುಳುಗುವ ಸಾಧ್ಯತೆಯಿದ್ದಿದ್ದು, ಅವರು ಬಂದರೆ ವಾಪಸ್ ಮನೆ ಸೇರುವುದು ಅಸಾಧ್ಯವಾಗಿತ್ತು. ಆದ್ದರಿಂದ ಆ ದಿನ ಬರಲಾಗಲಿಲ್ಲ. ಬೇರೆ ದಿನ ಬನ್ನಿ ಎಂದು ಕೋರಿಕೊಂಡೆ. ಆದರೆ ಮೊದಲ ಬಾರಿಯೇ ವಿಘ್ನ ಎದುರಾದ್ದರಿಂದ ಅವರು ಈ ಸಂಬಂಧವನ್ನು ನಿರಾಕರಿಸಿದರು. ಆದ್ದರಿಂದ ತಮ್ಮ ಮಗಳಿಗೆ ಬೇರೆಯವರನ್ನು ಹುಡುಕಬಹುದು ಎಂದು ಈ ಮೂಲಕ ತಿಳಿಸುತ್ತಿದ್ದೇನೆ..
                         
                      ಇಂತಿ
             ‌         ಶಾಸ್ತ್ರಿಗಳು..

       ಪತ್ರವನ್ನು ಓದುತ್ತಿದ್ದಂತೆಯೇ ಉಮಾಪತಿ ರಾಯರು ಕೋಪಗೊಂಡು ಪತ್ರವನ್ನು ಎರಡು ಚೂರಾಗಿ ಮಾಡಿದರು. ಆಗಿನಿಂದ ಪತಿರಾಯರು ಓದುತ್ತಿದ್ದುದನ್ನು ಕೇಳಿಸಿಕೊಂಡ ಸೀತಮ್ಮನವರು ಹರ್ಷದಿಂದ ಕುಣಿದಾಡಿದರು. "ತಾಯೇ ಜಗನ್ಮಾತೆಯೇ ಇದೆಲ್ಲ ನಿನ್ನ ಮಾಯೆ" ಎಂದು ತಲೆಬಾಗಿದರು..

" ಈ ಫೆಬ್ರವರಿ ತಿಂಗಳ ಕೊನೆಯವರೆಗೆ ಮಾತ್ರ ಆಕೆಗೆ ಕಂಕಣಬಲ ಇರುವುದು ಅಂದರೆ ಇನ್ನು ಮೂರು ವಾರಗಳು ಮಾತ್ರ.. ಈ ಮೂರು ವಾರದಲ್ಲಿ ವಧು ಪರೀಕ್ಷೆ, ನಿಶ್ಚಿತಾರ್ಥ, ಮದುವೆ.. ಅಬ್ಬಬ್ಬಾ ಇದು ಸಾಧ್ಯವೇ ಇಲ್ಲ.. ಏನಿದ್ದರೂ ಮುಂದಿನ ಬಾರಿಗೆ ಕಂಕಣಬಲ ಬಂದಾಗ ವಿಚಾರ ಮಾಡಬೇಕಷ್ಟೇ.." ಎನ್ನುತ್ತಾ ಬಾಯಿಗೆ ಕವಳ ಜಡಿದು ತೋಟದತ್ತ ಸಾಗಿದರು ಉಮಾಪತಿ ರಾಯರು..

      ಸೀತಮ್ಮನವರು ಕಾಲೇಜಿಗೆ ಹೋದ ಮಗಳು ಬರುವಾಗ ಅವಳಿಗೊಂದು ಸಿಹಿ ಮಾಡಿರಬೇಕೆಂದು ಅಡುಗೆ ಮನೆಯತ್ತ ತೆರಳಿದರು.. ಸಿಹಿ ತಿನಿಸಿನೊಂದಿಗೆ ಸಿಹಿಸುದ್ದಿ ಹೇಳಲು ಕಾಯುತ್ತಿದ್ದರು.

                    *****

         ಅನುರಾಧಾ  ನಗರದ ಶಾಲೆಯೊಂದರಲ್ಲಿ ಶಿಕ್ಷಕಿಯಾದಳು. ಪುಟಾಣಿ ಮಕ್ಕಳಿಗೆ ಪಾಠ ಮಾಡುತ್ತಾ, ಹಾಡು ಹೇಳಿಕೊಡುತ್ತಾ, ನೃತ್ಯ ಕಲಿಸುತ್ತಿದ್ದಳು. ಶಿಕ್ಷಕ ಸೇವೆಯಲ್ಲೇ ತನ್ನನ್ನು ತೊಡಗಿಸಿಕೊಳ್ಳುವ ಆಲೋಚನೆ ಮಾಡಿದಳು. ಮಹಿಳಾ ಉದ್ಯೋಗಿಗಳ ವಸತಿಗೃಹದಲ್ಲಿ ವಾಸಮಾಡುತ್ತಿದ್ದ ಅನುರಾಧಾ ಇದರ ಜೊತೆಗೆ ತನ್ನದೇ ಸಂಪಾದನೆಯಿಂದ ಸಂಗೀತಾಭ್ಯಾಸವನ್ನು ಆರಂಭಿಸಿದಳು. ಅಲ್ಲಿ ಆಕೆಗೆ ಯಾವುದೇ ಅಡೆತಡೆ ಇರಲಿಲ್ಲ. ಅವಳದೇ ಕ್ಷೇತ್ರದಲ್ಲಿದ್ದ ಅಧ್ಯಾಪಕರೊಬ್ಬರು ಅವಳ ಚುರುಕುತನವನ್ನು ಮೆಚ್ಚಿಕೊಂಡಿದ್ದು, ಅವರ ಪೋಷಕರು ಉಮಾಪತಿ ರಾಯರ ಮುಂದೆ ಸಂಬಂಧ ಬೆಳೆಸುವ ಮಾತುಗಳನ್ನಾಡಿದ್ದರು. ಶಾಸ್ತ್ರಿಗಳು ಅಂದಂತೆ ಪ್ರೇಮ ವಿವಾಹವೆಂದರೆ ಕದ್ದು ಮುಚ್ಚಿ ಪ್ರೀತಿಸಿ ಓಡಿ ಹೋಗುವುದೇ ಆಗಬೇಕಾಗಿಲ್ಲ.. ಬದಲಾಗಿ ವರನೇ ವಧುವನ್ನು ಮೆಚ್ಚಿ ಕೈಹಿಡಿಯಲು ಮುಂದೆ ಬರುವುದು ಕೂಡ ಆಗಬಹುದು ಎಂಬುದಕ್ಕೆ ಅನುರಾಧಾಳ ಜೀವನವೇ ಉದಾಹರಣೆಯಾಗಿ ನಿಂತಿದೆ.. ಅನುರಾಧಾ, ಸೀತಮ್ಮ, ಮನೆಮಕ್ಕಳೆಲ್ಲರೂ ತುಂಬಾ ಸಂತೋಷದಿಂದ ವಿವಾಹದ ಸಿದ್ಧತೆಯಲ್ಲಿ ತೊಡಗಿದರು. ಅನುರಾಧಾ ನಗುನಗುತ್ತಾ ಪತಿಗೃಹ ಪ್ರವೇಶ ಮಾಡಿದಳು.

✍️... ಅನಿತಾ ಜಿ.ಕೆ.ಭಟ್.
25-02-2022.
#ದೈನಿಕ ವಿಷಯಾಧಾರಿತ ಕಥೆ- ಪ್ರತಿಲಿಪಿ ಕನ್ನಡ
#ಅಕಾಲಿಕ ಮಳೆ