ತೂಗುಯ್ಯಾಲೆ
ಜೀವನವೆಂಬುದು ತೂಗುಯ್ಯಾಲೆ
ಬದುಕು ಜೀಕುವುದು ಸೇತುವೆ ಮೇಲೆ
ಬೆಸೆಯಬೇಕು ಸ್ನೇಹ ಸೇತುವೆ
ಮನುಜ ಮನುಜನ ಮಧ್ಯವೇ...
ಸೇತುವೆ ಬೆಸೆದಿದೆ ಎರಡು ತೀರಗಳ
ತೀರಿಸಿದೆ ಜನರ ಸಂಕಷ್ಟಗಳ
ತಿಳಿನೀರ ಶರಧಿಯ ಸೊಬಗು
ಸಾಗುವರ ಮೊಗದಿ ಹೂನಗೆ....
ಸುತ್ತ ಹಸಿರ ಹಾಸು ಕಣ್ತುಂಬ
ಸಲಿಲದಿ ಸೇತುವೆಯ ಪ್ರತಿಬಿಂಬ
ಶುದ್ಧ ಮನವದು ಪ್ರೀತಿ ತುಂಬಿ
ಅರಳಿದರೆ ಸಾರ್ಥಕವು ಹಸಿರ ಕಂಬ....
ಕಬ್ಬಿಣದ ಕಂಬಗಳು, ಹಾಸು,ಸರಳು
ಹಸನಾಗಿಸಿದೆ ಹಲವರ ಬಾಳು
ಶಾಲೆಗೆ ತೆರಳುವ ಪುಟ್ಟ ಮಕ್ಕಳು
ಖುಷಿಯಲಿ ಸಾಗುವರು ಕೊಂಕಿಸುತ ಕೊರಳು..
ತೂಗುಸೇತುವೆ ನಿನ್ನುಪಕಾರವ
ಮರೆಯಲಾರರು ಊರ ಮಂದಿ
ನಿನ್ನ ಪುಣ್ಯಜನುಮ ಸಾರ್ಥಕವು
ಕುಣಿದಿವೆ ಹೃದಯಗಳಿಲ್ಲಿ ಆನಂದದಿಂದ...
✍️... ಅನಿತಾ ಜಿ.ಕೆ.ಭಟ್.
25-10-2020.
ಚಿತ್ರ ಕೃಪೆ ಹವಿಸವಿ ಬಳಗ.

No comments:
Post a Comment