ನಿಜ ನಾಯಕ
ಕಾರ್ಮೋಡದ ಬಾನು
ಸುತ್ತಲೂ ಹಸಿರು ಕಾನು
ಕುಂಟೆಯೆತ್ತಿಹ ರೈತನು
ಜೋಡೆತ್ತ ಹೂಡುವ ಮಾಂತ್ರಿಕನು ||
ಹುದುಗುತಿವೆ ಕಾಲು
ಗುಡುಗುತಿದೆ ಮೋಡ
ಅಡಿಗಡಿಗೆ ಪರಿಶ್ರಮ
ಉತ್ತು ಬಿತ್ತಿ ಬೆಳೆವ ಕ್ರಮ||
ಹೊನ್ನ ಹನಿ ಸಿಂಚನ
ಭೂರಮೆಯೆ ಪಾವನ
ಒಡಲಿಗೆ ನೇಗಿಲ ಗಾಯ
ಹಸಿರನುಟ್ಟ ಭೂಮಿ ತಾಯ||
ಒಡೆಯನಾಣತಿ ಮೀರದೆ
ದುಡಿಯುತಿಹ ಕರಿ ಹೋರಿ
ಹಿಂಡಿ ಬೈಹುಲ್ಲು ಸವಿದು
ಬೆವರಿಳಿಸಿ ಮೈಮುರಿದು ದುಡಿದು||
ಮಳೆ ಬಿಸಿಲು ಚಳಿಯೆನ್ನದ ರೈತ ಶ್ರಮಿಕ
ದಿನವೂ ಅನ್ನ ನೀಡುವ ಕಾಯಕ
ದಣಿವರಿಯದ ನಿಜ ನಾಯಕ
ಭೂದೇವಿಯ ಸೇವೆಯೇ ನಾಕ ||
✍️... ಅನಿತಾ ಜಿ.ಕೆ.ಭಟ್.
06-10-2020.
ಚಿತ್ರ:ಹವಿಸವಿ ಕೃಪೆ

No comments:
Post a Comment