Monday, 5 October 2020

ಅಡುಗೆ ಅವಾಂತರ

 


        ರಮಾ ಬೇಗಬೇಗನೆ ಬೆಳಿಗ್ಗೆ ಅಡುಗೆ ಮಾಡುತ್ತಾ ತರಾತುರಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಳು.ಇಂದು ಉದ್ಯೋಗಕ್ಕೂ ಬೇಗನೆ ಹೋಗಬೇಕಾಗಿರುವುದರಿಂದ ಅಡುಗೆ ಕೆಲಸಕ್ಕೆ ಗಂಡ ರಮೇಶನ ಸಹಾಯ ಕೇಳಿದಳು.ರಮೇಶನಂತೂ ಅಮ್ಮಾವ್ರ ಮುದ್ದಿನ ಗಂಡ.ನಗುನಗುತ್ತಲೇ ಸಹಕರಿಸಿ ತರಕಾರಿ ಹಚ್ಚಿ, ತೆಂಗಿನಕಾಯಿ ತುರಿದು ಕೊಟ್ಟ.

"ರೀ...ನಾನೀಗ ಒಲೆಯಲ್ಲಿ ಅನ್ನ ಇಟ್ಟಿದ್ದೇನೆ.ಮೂರು ವಿಷಲ್ ಆದಾಗ ಬೆಂಕಿ ಆರಿಸಿ"ಎಂದು ಹೇಳುತ್ತಾ ಇನ್ನೂ ಮಲಗಿದ್ದ ಪುಟ್ಟ ಮಕ್ಕಳನ್ನು ಎಬ್ಬಿಸಲು ತೆರಳಿದಳು.

ಇಲ್ಲೇ ನಿಂತು ಏನು ಮಾಡಲಿ ..?ಸುಮ್ಮನೆ ಸಮಯ ಹಾಳು.. ವಿಷಲ್ ಆದಾಗ ಬರುವೆ.. ಎಂದುಕೊಂಡು ಗಡ್ಡ ತೆಗೆಯಲು ಹೊರಟ.. ರಮೇಶ. ಗಡ್ಡಕ್ಕೆ ಶೇವಿಂಗ್ ಕ್ರೀಮ್ ಲೇಪಿಸುತ್ತಿದ್ದಾಗಲೇ ರಮಾ ಕೂಗಿದಳು.."ರೀ.. ಕುಕ್ಕರ್ ಸೀಟಿ ಕೂಗಿತಾ.."..ಅಂತ...

"ಇಲ್ಲ. ..ಕಣೇ..ಇನ್ನೂ ವಿಷಲ್ ಹೊಡೆದಿಲ್ಲ"ಎಂದ ರಮೇಶ.. ಸಮಾಧಾನದಿಂದ ಶೇವಿಂಗ್ ಮಾಡುತ್ತಿದ್ದ.ಮಕ್ಕಳನ್ನು ಎಬ್ಬಿಸಿ  ಹಲ್ಲುಜ್ಜಿಸಿ ಸ್ನಾನ ಮಾಡಿಸಿ ಬಂದ ರಮಾ ಕುಕ್ಕರ್ ನಲ್ಲಿ ವಿಷಲ್ ಬಾರದಿದ್ದಕ್ಕೆ ಅನುಮಾನಗೊಂಡು ಅಡುಗೆ ಮನೆಯತ್ತ ಧಾವಿಸಿದಳು..ಅವಸ್ಥೆ ನೋಡಿ ಹೌಹಾರಿದಳು...

ಕುಕ್ಕರ್ ನ ಮುಚ್ಚಳದ ಸಂದಿನಿಂದ ಅನ್ನದಲ್ಲಿದ್ದ ನೀರೆಲ್ಲ ಉಕ್ಕಿ ಒಲೆಯ ಮೇಲೆಲ್ಲ ಚೆಲ್ಲಿ ಕೆಳಗೂ ಪ್ರವಾಹ ಬಂದಿತ್ತು.ಅನ್ನ ತಳಹಿಡಿದು ಸೀದು ವಾಸನೆ ಬರಲಾರಂಭಿಸಿತ್ತು .

"ಅಲ್ರೀ...ನೀವಾದ್ರೂ ನೋಡೋದಲ್ವ..ಏನು ವಿಷಲ್ ಬಂದಿಲ್ಲ..ವಾಸನೆ ಬರ್ತಾ ಇದೆ ಅಂತ... ನೋಡಿ ಏನಾಗೋಯ್ತು ..ಮೊನ್ನೆನೇ ಹೇಳಿದ್ದೆ ನಿಮ್ಗೆ ಹೊಸ ಗ್ಯಾಸ್ಕಿಟ್ ತನ್ನಿ ಅಂತಾ.. ಹಳೇದು ಈಗ ಸರಿ ಭದ್ರವಾಗಿ ನಿಲ್ಲೋದಿಲ್ಲ.. ಅಂತಾ...ತಂದ್ರಾ..ಇಲ್ಲ... ಎಲ್ಲಾ ನನ್ನ್ ಕರ್ಮ...ಈ ಅನ್ನ ಉಣ್ಣೋಕೂ ಆಗಲ್ಲ.. ಬೇರೆ ಮಾಡಲು ಸಮಯವಿಲ್ಲ..."ಎಂದು ಗೊಣಗಿಕೊಂಡಳು ... ಪ್ರೀತಿಯ ಗಂಡನ ಮೇಲೆ ಯಾವತ್ತಿನಿಂದ ತುಸು ಹೆಚ್ಚೇ ರೇಗಾಡಿದಳು... ರಮಾ...

ಪೆಚ್ಚಾದ ರಮೇಶ ಮರುಮಾತನಾಡದೆ ದೊಡ್ಡ ಪಾತ್ರೆ ತೆಗೆದುಕೊಂಡು ಅದರಲ್ಲಿ ಅನ್ನ ಮಾಡಲು ಹೊರಟ.ಬಿದ್ದ ಅನ್ನದ ತೆಳಿಯನ್ನು ಒರೆಸಿ ಒಪ್ಪವಾಗಿಸಿದ...ರಮಾ  ಇನ್ನರ್ಧ ಗಂಟೆಯಲ್ಲಿ ತನಗೆ ಹೊರಟಾಗಬೇಕು ಎಂದು ಬೇಗ ಸ್ನಾನಕ್ಕೆ ತೆರಳಿ, ಸ್ನಾನ ಮುಗಿಸಿ ಸೀರೆಯುಟ್ಟು ತಯಾರಾಗಿ ಬಂದಳು.

ಲಗುಬಗೆಯಿಂದ ಅಡುಗೆ ಮನೆಗೊಮ್ಮೆ ಊಟದ ಕೋಣೆಗೊಮ್ಮೆ ಅತ್ತಿಂದಿತ್ತ ಓಡಾಡುತ್ತ ಮಕ್ಕಳಿಗೆ ತಿಂಡಿ ಬಡಿಸುವುದು ಬುತ್ತಿಗೆ ತುಂಬಿಸುವುದು ಮಾಡುತ್ತಿದ್ದಳು..

ಚಿಗುರು ಹಸುರು ಸೀರೆಯಲ್ಲಿ ಅಪ್ಸರೆಯಂತೆ ಕಂಗೊಳಿಸುವ, ಮಲ್ಲಿಗೆ ಮಾಲೆಯನ್ನು ಉದ್ದಜಡೆಗೆ ಮುಡಿದು ಅತ್ತಿಂದಿತ್ತ ಓಡಾಡುವಾಗ ಬೆನ್ನ ಮೇಲೆ ನರ್ತಿಸುವ ಕೇಶರಾಶಿಯನ್ನು ಕಂಡು ರಮೇಶ ಮಂತ್ರಮುಗ್ಧನಾಗಿದ್ದ.ಆದರೂ ಮುಖದಲ್ಲಿ ಆ ಭಾವವನ್ನು ತೋರ್ಪಡಿಸದೇ ತನ್ನೊಳಗೆ ಅದುಮಿಟ್ಟಿದ್ದನು.

ಅಡುಗೆಮನೆಯಲ್ಲಿ ಇದ್ದ ರಮೇಶನ ಗಂಭೀರವಾದ ಮುಖ ಕಂಡು ರಮಾ "ರೀ....ವೇಳೆಯಾಗುತ್ತಿದೆ . ಬೇಗನೆ ಹೋಗಬೇಕಾಗಿದೆ.. ಆದ್ದರಿಂದ ಸಿಟ್ಟಲ್ಲಿ ನಿಮ್ಮ ಮೇಲೆ ರೇಗಾಡಿದೆ.. ತಪ್ಪು ತಿಳಿಯಬೇಡಿ.. ನನ್ನನ್ನೂ ಸ್ವಲ್ಪ ಅರ್ಥಮಾಡಿಕೊಳ್ಳಿ.."ಎಂದು  ಹೇಳಿ ತನ್ನ ಕೆಲಸದಲ್ಲಿ ಮಗ್ನಳಾದಳು..

ಬೆಂದ ಅನ್ನವನ್ನು ಬಸಿದ ರಮೇಶ.ರಮಾ ಬುತ್ತಿಗೆ ತುಂಬಿಸುತ್ತಿದ್ದಲ್ಲಿ ಇರಿಸಿದ..ಎಲ್ಲರ ಬುತ್ತಿಗೂ ಅನ್ನ ತಂಬಿಸಲು ತೊಡಗಿದಳು ರಮಾ..ಅನಿರೀಕ್ಷಿತವಾಗಿ ತನ್ನ ಹಿಂದಿನಿಂದ ಬಂದ ಕೈಗಳನ್ನು ಕಂಡು ಬೆರಗಾದಳು.ಸುತ್ತಿದ ಕೈಗಳು ಬಿಗಿಯಾದವು. ಅಧರಕಧರವು ಬೆಸೆಯಿತು..ಮಲ್ಲೆ ಮೆಲ್ಲನೆ ಕಂಪು ಬಿರಿಯಿತು.ಕೋಪ ಕ್ಷಣದಿ ಕರಗಿತು.. ಮನವು ಒಂದಾಗಿ ಹಿತವಾಗಿ ಪಲ್ಲವಿಸಿತು.. 

"ರೀ...ನಿಮಗೇನು...ಹೇಳಿದರೆ ತಿಳುಯುವುದೇ ಇಲ್ಲ...ನಾನೀಗ ಐದೇ ನಿಮಿಷದಲ್ಲಿ ಮನೆಯ ಗೇಟು ದಾಟಿಬಿಡಬೇಕು..ಈಗ ಬಿಡಿ.."ಎನ್ನುತ್ತಾ ಮೆಲ್ಲಗೆ ಬಿಡಿಸಿಕೊಳ್ಳಲು ಪ್ರಯತ್ನಿಸಿದಳು..ಅನುರಾಗ ಬಂಧನ ಮತ್ತಷ್ಟು ಗಾಢವಾಗಿ ಬೆಸೆಯಿತು..

ಅಷ್ಟರಲ್ಲಿ ಮಕ್ಕಳು "ಅಮ್ಮಾ ನಮಗೆ ಇನ್ನೂ ಸ್ವಲ್ಪ ತಿಂಡಿ ಬಡಿಸು" ಎಂದು ಕೂಗಿಕೊಂಡಾಗ ರಮೇಶ ವಾಸ್ತವಕ್ಕೆ ಬಂದು ತೋಳು ಸಡಿಲಿಸಿದ..

ತಿಂಡಿ ಬಡಿಸಿ ..."ಮಕ್ಕಳೇ ನೀವು ಸಮಾಧಾನದಿಂದ ತಿಂಡಿ ತಿಂದು ಅಪ್ಪನ ಜೊತೆಗೆ ಶಾಲೆಗೆ ತೆರಳಿ "ಎಂದು ಮಕ್ಕಳಿಗೆ ಹೇಳಿ ರಮಾ ತಾನು ಅರ್ಧಂಬರ್ಧ ತಿಂಡಿ ತಿಂದು ಬ್ಯಾಗ್ ಹೆಗಲಿಗೇರಿಸಿ ಹೊರಟು ನಿಂತಾಗ ರಮೇಶ ಎವೆಯಿಕ್ಕದೆ ನೋಡುತ್ತಲೇ ನಿಂತ..ರಮಾ ಕಣ್ಣ ದೃಷ್ಟಿಯಿಂದ ಮರೆಯಾಗುವವರೆಗೂ..

 ✍️... ಅನಿತಾ ಜಿ.ಕೆ.ಭಟ್

06-10-2020.

ಚಿತ್ರ :ಹವಿಸವಿ ಕೃಪೆ


No comments:

Post a Comment