Friday, 31 January 2020

ಜೀವನ ಮೈತ್ರಿ- ಭಾಗ ೬




    ಭಾಸ್ಕರ ರಾಯರಿಗೆ ಅಳಿಯ ವೆಂಕಟನ ಮಾತು ಕೇಳಿದಾಗ ಕುತೂಹಲದಿಂದ ಒಮ್ಮೆ ಕಣ್ಣು ಮೇಜಿನ ಮೇಲೆ ಹೋಯಿತು.ಮೈತ್ರಿಯ ಫೋನ್ ಕಾಣುತ್ತಿಲ್ಲ.. ತೆಗೆದುಕೊಂಡಿದ್ದಾಳೆ.. ಮಹೇಶನ ಫೋನ್ ಅಲ್ಲೇ ಪಕ್ಕದಲ್ಲಿ ಚಾರ್ಜ್ ಆಗುತ್ತಿದೆ.ಮಗಳು ಬೆಳಿಗ್ಗೆ ಮೊಬೈಲ್ ತೆಗೆದುಕೊಂಡರೆ ಸಾಕೆಂಬ ನನ್ನ ಮಾತನ್ನು ಕೇಳದೆ ಮೊಬೈಲ್ ಒಯ್ದಿದ್ದಾಳೆ..ಈಗಿನ ಕಾಲದ ಮಕ್ಕಳೇ ಹೀಗೆ.ಹೋಗಲಿ...ಓದುವಷ್ಟು ಹೊತ್ತಾದರೂ ಮೊಬೈಲ್ ಬಿಟ್ಟು ಇದ್ದಳಲ್ಲಾ..ಅದು ಸಮಾಧಾನ... ಯಾವುದಕ್ಕೂ ನಾಳೆ ಸಂಜೆ ಒಮ್ಮೆ ಸ್ವಲ್ಪ ಅವಳನ್ನು ವಿಚಾರಿಸಿಕೊಳ್ಳಬೇಕು.ಇತ್ತೀಚೆಗೆ ಮೊಬೈಲ್ ಅವಳ ಸಂಗಾತಿಯಾಗಿಬಿಟ್ಟಿದೆ...

        ವೆಂಕಟನಿಗೆ ಮಲಗಲು ಹಾಸಿಗೆ ಹಾಸಿ ಕೊಟ್ಟರು ಮಾವ ಭಾಸ್ಕರ ಶಾಸ್ತ್ರಿಗಳು.ಮೈತ್ರಿ, .ಮಹೇಶ ಬೆಳಗ್ಗೆ ಬೇಗ ಕಾಲೇಜಿಗೆ ಹೊರಟರು.. ವೆಂಕಟ್ ನಿಧಾನವಾಗಿ ಎದ್ದು ಅಜ್ಜಿ ಅಜ್ಜನಲ್ಲಿ ಪಟ್ಟಾಂಗ ಹೊಡೆಯುತ್ತಾ ತಿಂಡಿ ತಿಂದನು.ಅಪರೂಪದಲ್ಲಿ ಬಂದ ಮೊಮ್ಮಗನಿಗೆ ಮಹಾಲಕ್ಷ್ಮಿ ಅಮ್ಮ ಒತ್ತಾಯದಿಂದ ಬಡಿಸುತ್ತಿದ್ದರು.ಅವನು ಸಾಕೆಂದರೂ ಇನ್ನು ಸ್ವಲ್ಪ ತಿನ್ನು ಎಂದು ಅಜ್ಜಿಯ ಒತ್ತಾಯ.. ಅಂತೂ ತಿಂಡಿಕಾಫಿ ಮುಗಿಸಿ ಎದ್ದ ವೆಂಕಟನಿಗೆ ಡರ್.. ಎಂದು ದೊಡ್ಡದಾದ ತೇಗು ಬಂದಿತು.


          ಮೈತ್ರಿ ಕಾಲೇಜು ಬಸ್ಸಿಗೆ ಕಾಯುತ್ತಿದ್ದಳು.ಇನ್ನೂ ಸಮಯವಿದೆ ಎಂದು ಕಿಶನ್ ನ ಉತ್ತರ ಬಂದಿದೆಯೇ ಎಂದು ಪರೀಕ್ಷಿಸತೊಡಗಿದಳು.. ಊಹೂಂ...ಬಂದಿಲ್ಲ...ಅರೇ... ಏನಾಯಿತು ಇವನಿಗೆ.. ಯಾವತ್ತೂ .. ಮುದ್ದುಗೊಂಬೆ.. ಮುದ್ದುಗೊಂಬೆ...ಅನ್ನುತ್ತಿದ್ದವ ಯಾಕ್ಹೀಗೆ ಒಮ್ಮಿಂದೊಮ್ಮೆಲೇ ಮೌನಿಯಾಗಿಬಿಟ್ಟ.. ಸಂದೇಶ ತಲುಪಿದೆ.. ಅವನು ಓದಿದ್ದಾನೆ..ಆದರೂ ಉತ್ತರಿಸಿಲ್ಲ.. ತುಂಬಾ ನೊಂದಿರಬೇಕು...ಪಾಪದ ಮಾಣಿ ...ಛೇ.. ನಾನು ಅಸಡ್ಡೆ ಮಾತಾಡಬಾರದಿತ್ತು... ಯಾವುದಕ್ಕೂ ನಾನೇ ಒಮ್ಮೆ ಕಾಲ್ ಮಾಡಿ ಕ್ಷಮೆ ಕೇಳುತ್ತೇನೆ...

        ಕರೆಮಾಡಿದಳು ಮೈತ್ರಿ.. ಕಿಶನ್ ರಿಸೀವ್ ಮಾಡಲಿಲ್ಲ.. ಆಗ ಬಸ್ ಬಂತು.. ಕಾಲ್ ಕಟ್ ಮಾಡಿ ಬಸ್ ಹತ್ತಿದಳು.ಕಾಲೇಜಿನಲ್ಲಿಳಿದ ಮೈತ್ರಿ ಗೆ ಇಂದು ಪ್ರಾಕ್ಟಿಕಲ್ ಎಕ್ಸಾಂ ಇತ್ತು..ತಯಾರಿಯ ಗಡಿಬಿಡಿಯಲ್ಲಿ ಬೇರೇನೂ ಯೋಚಿಸಲೂ ಬಿಡುವಿರಲಿಲ್ಲ..ಗೆಳತಿಯರೊಂದಿಗೆ ಕೂಡಿ ಕಲಿತ ವಿಷಯಗಳನ್ನು ಮೆಲುಕುಹಾಕುತ್ತಿದ್ದಳು..

"ಹೇಗಿತ್ತು ನಿನ್ನೆಯ ಗಮ್ಮತ್ತು.". ಎನ್ನುತ್ತಾ ತನ್ನೆರಡು ಹಲ್ಲುಗಳನ್ನು ಫ್ರೀಯಾಗಿ ತೋರಿಸುತ್ತಾ ಗಹಗಹಸಿ ನಗುತ್ತಾ ಪಕ್ಕದಲ್ಲಿ ಬಂದು ನಿಂತ ಚರಣ್...
"ಓಹೋ... ಅದು ನಿನ್ನ ಕೆಲಸವೋ.."ಎಂದು ಕೇಳಿದಳು ಮೈತ್ರಿ..
"ಹೇಳು ಈಗಲಾದರೂ ಸೋಲೊಪ್ಪಿಕೊಳ್ತೀಯಾ..."
"ನೋ... ಛಾನ್ಸ್....ಅದು ಮೋಸ..."ಎಂದಳು ಮೈತ್ರಿ..
ಮಾಡಿದ್ದು ತಪ್ಪೆಂದು ಗೊತ್ತಿದ್ದರೂ ಗತ್ತಿನಿಂದ ಬೀಗಿ ನಗುತ್ತಿದ್ದ ಚರಣ್..

ಎರಡು ದಿನದ ಹಿಂದೆ ಕ್ಲಾಸ್ ಫ್ರೀಯಿದ್ದಾಗ ಯುವಕ ಯುವತಿಯರು ಸೇರಿ ಅಂತ್ಯಾಕ್ಷರಿ ಆಡಿದ್ದರು..ಹುಡುಗಿಯರದೇ ಮೇಲುಗೈ..ಹಾಡು ಗೊತ್ತಿಲ್ಲದೆ ಹುಡುಗರು ಸೋಲೊಪ್ಪಲೇಬೇಕಾಯಿತು.ಮೈತ್ರಿ .".ನೋಡಿ ನಾವು ಹುಡುಗೀರು ಎಲ್ಲದರಲ್ಲೂ ಸೈ.."ಎಂದು ಎದೆತಟ್ಟಿಕೊಂಡಿದ್ದಳು.ಇದನ್ನು ಸಹಿಸದ ಹುಡುಗರು ಹುಡುಗಿಯರನ್ನು ಅವಮಾನಿಸಲು ಬೆಂಚಿನ ಮೇಲೆ ಬಬಲ್ ಗಮ್ ಅಂಟಿಸಿದ್ದರು.. ಕೆಲವರು ಕುಳಿತುಕೊಳ್ಳುವಾಗ ತೆಗೆದು ಕುಳಿತರು.. ಮೈತ್ರಿ ಪಾಪ ಲೇಟಾಗಿ ತರಗತಿಗೆ ಬಂದಿದ್ದಳು..ನೋಡದೆ ಕುಳಿತಿದ್ದಳು.. ಡ್ರೆಸ್ ಗೆ ಗಮ್ ಹಿಡಿದಿತ್ತು.. ಎಲ್ಲರೂ ನಕ್ಕಾಗ ಮುಖ ಸಣ್ಣದಾಗಿತ್ತು.


        ಪರೀಕ್ಷೆಯ ಸಮಯವಾಯಿತು.ಎಲ್ಲರೂ ಲ್ಯಾಬ್ ನ ಒಳಗೆ ತೆರಳಿದರು.ಪ್ರಾಕ್ಟಿಕಲ್ ಮಾಡತೊಡಗಿದರು.ಚರಣ್ ಸರಿಯಾಗಿ ತಿಳಿಯದೆ ಗೊಂದಲದಲ್ಲಿದ್ದ.ಪಕ್ಕದಲ್ಲಿದ್ದ ಮೈತ್ರಿ ಯನ್ನು ಕೇಳುತ್ತಿದ್ದ.ಅವಳು ಪರೀಕ್ಷೆಯಲ್ಲಿ ಹೇಳಿಕೊಡುವುದು ತಪ್ಪೆಂದು ..ಕೇಳಿದರೂ ಕೇಳಿಸದಂತೆ ತನ್ನ ಪ್ರಯೋಗವನ್ನು ಮುಂದುವರಿಸಿ ಬಂದ ರೀಡಿಂಗ್ ಬರೆಯುತ್ತಿದ್ದಳು.ಬಂದ ಉತ್ತರವು ಅಪ್ರೋಕ್ಸಿಮೇಟ್ ಆಗಿತ್ತು.. ಖುಷಿಯಿಂದ ಉತ್ತರ ಪತ್ರಿಕೆ ಪ್ರೊಫೆಸರ್ ಗೆ ಕೊಟ್ಟಳು.ಅವಳ ಹಿಂದೆಯೇ ಚರಣ್ ಇದ್ದ.ತಾನು ಉತ್ತರಪತ್ರಿಕೆ ಕೊಟ್ಟ.. ಅದನ್ನು ನೋಡಿದ ಪ್ರೊಫೆಸರ್.."ಅಯ್ಯಾ... ಪ್ರಾಕ್ಟಿಕಲ್ ಕ್ಲಾಸ್ ಗೆ ಸರಿಯಾಗಿ ಬರುತ್ತಿಲ್ಲ.. ರೆಕಾರ್ಡ್ ಬುಕ್ ಕಂಪ್ಲೀಟ್ ಆಗ್ಲಿಲ್ಲ...ಆದರೆ ಕೊನೆಯ ರೀಡಿಂಗ್ ಮಾತ್ರ ಕರೆಕ್ಟ್ ಇದೆಯಲ್ಲಾ.. ಯಾವುದಕ್ಕೂ ನಿನ್ನ ಪ್ಲೇಸ್ ಗೇ ಬಂದು ಚೆಕ್ ಮಾಡುತ್ತೇನೆ ಎಂದು ಅವನ ಜೊತೆ ಹೆಜ್ಜೆ ಹಾಕಿದರು..

      ಸರಿಯಾಗಿ ಪ್ರಾಕ್ಟಿಕಲ್ ಮಾಡಿಯೇ ಇಲ್ಲ.. ಎಲ್ಲಾ ಅರ್ಧಂಬರ್ಧ..ಆದರೂ ಉತ್ತರ ಹೇಗೆ ಸಿಕ್ಕಿತು ಎಂದು ಅವನನ್ನು ಪ್ರಶ್ನಿಸಿದರೆ ಸ್ಪಷ್ಟ ಉತ್ತರವಿಲ್ಲ..ಸಂಶಯದಿಂದ  ಪರಿಶೀಲಿಸಿದಾಗ ಒಂದು ಪೆನ್ ನೊಳಗಿನ ರಿಫಿಲ್ ತೆಗೆದು ಅದರೊಳಗೆ ಉತ್ತರದ ಚೀಟಿಯನ್ನು ತುರುಕಿಸಿ ಕೊಂಡು ಬಂದಿದ್ದ.ಪ್ರೊಫೆಸರ್ ನ ಕೈಗೆ ಸಿಕ್ಕಿ ಬಿದ್ದ.."ಮುಂದಿನ ಪರೀಕ್ಷೆ ಬರೆಯಬೇಕಾದರೆ ಪೇರೆಂಟ್ಸ್ ಕರೆದುಕೊಂಡು ಬಾ" ಎಂದು ಗದರಿದರು.ಪೆಚ್ಚು ಮುಖ ಹೊತ್ತು ಬಂದ ಚರಣ್ ನ ಮುಂದೆ ..." ಮೋಸದ ಗೆಲುವು ಕ್ಷಣಿಕ...ಹುಡ್ಗೀರ್ದೇ ಎತ್ತಿದಕೈ...ಈಗ ಸೋಲೊಪ್ಪಿಕೋ..."ಎಂದು ಹುಡುಗಿಯರೆಲ್ಲ ತಮಾಷೆ ಮಾಡಿದರೆ..."ಹೌದು ಗೆಳತಿಯರೆ... ನೀವೇ ಗೆದ್ದವರು.. ನಾನು ತಪ್ಪು ಮಾಡಿ ಸಿಕ್ಕಿಹಾಕ್ಕೊಂಡಿದೀನಿ ...ಸೋತಿದೀನಿ..."ಎನ್ನುತ್ತಾ ಕಣ್ಣೊರೆಸಿಕೊಳ್ಳುತ್ತಿದ್ದರೆ..ಈ ಹುಡುಗಿಯರೆಲ್ಲ ಭಾವುಕರಾಗಿಬಿಟ್ಟಿದ್ದರು...

ಪಾಪ..!!ಚರಣ್..ಅಳ್ಬೇಡ ಕಣೋ.. ಇನ್ಮುಂದೆ ಇಂಥಾ ಕೆಲ್ಸ ಮಾಡೋಕೆ ಹೋಗ್ಬೇಡ... ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ...
ಎಂದು ಎಲ್ಲರೂ ಸೇರಿ ಬುದ್ಧಿಹೇಳಿದ್ದರು..

 

     ಕಿಶನ್ ಆಫೀಸಿನ ಕೆಲಸದಲ್ಲಿ ಇವತ್ತು ಪ್ರಯಾಣ ಮಾಡಬೇಕಾಗಿ ಬಂದಿತ್ತು.ಆದ್ದರಿಂದ ತುಂಬಾ ಒತ್ತಡದಲ್ಲಿದ್ದ.ಜೊತೆಗೆ ಹಿರಿಯ ಆಫೀಸರ್ ಗಳೂ ಇದ್ದರು.ಆದ್ದರಿಂದ ಮೊಬೈಲ್ ಕಡೆಗೆ ಗಮನ ಹೋಗಲೇಯಿಲ್ಲ.

"ಕಿಶನ್ .... ಇವತ್ತು ನಾವು ವಿಶೇಷವಾಗಿ ಹೊಸ ಪ್ರಾಜೆಕ್ಟ್ ಒಂದನ್ನು ಒಪ್ಪಿಕೊಳ್ಳುತ್ತಿದ್ದೇವೆ.ಬಹಳ ಮುಖ್ಯವಾದ ಪ್ರಾಜೆಕ್ಟ್ ಅದು.ಅದನ್ನು ಯಶಸ್ವಿಯಾಗಿ ಮಾಡಿಕೊಟ್ಟರೆ ಮುಂದೆ ಇನ್ನಷ್ಟು
ಪ್ರಾಜೆಕ್ಟ್ ಗಳು ನಮ್ಮ ಕೈಸೇರಲಿವೆ."
"ಸರಿ.. ಸರ್..." ಎಂದ ಕಿಶನ್..
"ಯಾವುದೇ ಕಾರಣಕ್ಕೂ ಡಿಲೇ ಮಾಡದೆ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಳ್ಳಿ..ಒಂದು ತಿಂಗಳಲ್ಲಿ  ಪೂರ್ಣಗೊಳಿಸಬೇಕು..ಹಾಗಾದರೆ ನಿಮಗೆ ಬೋನಸ್ ಸಿಗಲಿದೆ...."

"ಹಾಗೇ ಆಗಲಿ ಸರ್..."ಎಂದ ಕಿಶನ್  ಪ್ರಾಜೆಕ್ಟ್ ಫೈಲ್ ನ ಮೇಲೆ ಕಣ್ಣಾಡಿಸಿದ.

ಸಮಯಕ್ಕೆ ಸರಿಯಾಗಿ ಮುಗಿಸಿಕೊಡಬಹುದು ಎಂದು ಭರವಸೆ ಹುಟ್ಟಿತು ಕಿಶನ್ ಗೆ.ಪ್ರಯಾಣ ಮಾಡುತ್ತಾ ಸುಂದರ ಪ್ರಕೃತಿಯನ್ನು ಆಸ್ವಾದಿಸಿದರು.ದಾರಿ ಮಧ್ಯದಲ್ಲಿ ಒಂದು ಶಿವನ ದೇವಾಲಯವಿತ್ತು.ಡ್ರೈವರ್ ಅಲ್ಲಿಗೆ ಹೋಗಿ ಪ್ರದಕ್ಷಿಣೆ ಹಾಕಿ ಬರೋಣ ಎಂದ.ಎಲ್ಲರೂ ಸರಿಯೆಂದರು...

 ದೇವಾಲಯದ ಪಕ್ಕದಲ್ಲೊಂದು ನಂದಿಯ ಏಕಶಿಲಾ ವಿಗ್ರಹವಿತ್ತು."ಇದಕ್ಕೆ ಹನ್ನೆರಡು ಪ್ರದಕ್ಷಿಣೆ  ಹಾಕಿದರೆ ಮುಂದಿನ ಯುಗಾದಿಯೊಳಗೆ ಕಂಕಣಭಾಗ್ಯ ಕೂಡಿಬರುವುದೆಂಬ ನಂಬಿಕೆಯಿದೆ"ಎಂದ ಡ್ರೈವರ್..
ಹೋದವರಲ್ಲಿ ಕಿಶನ್ ನನ್ನು ಬಿಟ್ಟು ಉಳಿದವರು ವಿವಾಹಿತರು.ಎಲ್ಲರೂ ಕಿಶನ್ ನತ್ತ ನಗುತ್ತಾ ನೋಡಿದರು..

ಡ್ರೈವರ್ ನಸುನಗುತ್ತಾ..."ಹಾಗಾದ್ರೆ..
ಯಾಕ್ ತಡಾ ಸರ್...ಬೇಗ ಬೇಗ ಪ್ರದಕ್ಷಿಣೆ ಹಾಕ್ಕೊಂಬಿಡಿ..."ಎಂದಾಗ ಎಲ್ಲರೂ ದನಿಗೂಡಿಸಿದರು...
"ಬ್ಯಾಗ್ ಇತ್ತ ಕೊಡಿ ಸರ್.."ಎಂದರು ಒಬ್ಬರು..
"ಅಂಗಿ ಬನಿಯನ್ ಕಳಚಿ "ಎಂದರು ಇನ್ನೊಬ್ಬರು.
ಅಂತೂ ಎಲ್ಲರ ಮಾತನ್ನೂ ಕಿವಿಗೆ ಹಾಕಿಕೊಂಡು ಹನ್ನೆರಡು ಬಾರಿ ಮೈತ್ರಿ ಯ ಜಪ ಮಾಡಿಕೊಂಡು ಪ್ರದಕ್ಷಿಣೆ ಹಾಕಿದ ಕಿಶನ್...

"ಈ ವರ್ಷ ಪಾಯಸದೂಟ ಪಕ್ಕಾ..."ಎಂದು ಎಲ್ಲರೂ ಹಾಸ್ಯಮಾಡುತ್ತಿದ್ದರೆ ಕಿಶನ್ ನ ಮನದಲ್ಲಿ ಮೈತ್ರಿ ಯೇ ತುಂಬಿದ್ದಳು.

ರಾತ್ರಿಯಾಗುವ ಮುನ್ನ ಬೆಂಗಳೂರು ಸೇರಿದರು..ಆಯಾಸಗೊಂಡಿದ್ದ ಕಿಶನ್ ಹೋಟೇಲಲ್ಲಿ ಊಟ ಮಾಡಿ ರೂಂ ಗೆ ತೆರಳಿದ..

ಮನೆಗೆ ತಲುಪಿ ಮೊಬೈಲ್ ನೋಡಿದಾಗ ಹತ್ತು ಬಾರಿ ಮೈತ್ರಿ ಕಾಲ್ ಮಾಡಿದ್ದಳು.. ಸಾಕಿನ್ನು  ಇವಳನ್ನು  ಸತಾಯಿಸಿದ್ದು .....ಎಂದು ಕಿಶನ್ ಮೈತ್ರಿ ಗೆ ಕಾಲ್ ಮಾಡಿದ...


       ಮುಂದುವರಿಯುವುದು...

ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.


✍️... ಅನಿತಾ ಜಿ.ಕೆ.ಭಟ್.
01-02-2020.




ಜೀವನ ಮೈತ್ರಿ -ಭಾಗ ೫




       ಮೈತ್ರಿ ಓದಲೆಂದು ಪುಸ್ತಕ ತನ್ನೆದುರು ಟೇಬಲ್ ಮೇಲೆಲ್ಲ ಹರವಿಕೊಂಡು ಕುಳಿತಿದ್ದರೂ ಓದಿನಲ್ಲಿ ಏಕಾಗ್ರತೆ ಇರಲಿಲ್ಲ.ಮನಸ್ಸು ಕಿಶನ್ ನ ಧ್ಯಾನಿಸುತ್ತಿತ್ತು .ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನನಗೆ ಈ ಪ್ರೀತಿ ಪ್ರೇಮ ಬೇಕಿತ್ತಾ.. ಎಂದು ಮಗದೊಮ್ಮೆ ಬುದ್ಧಿ ಮನಸ್ಸನ್ನು ಪ್ರಶ್ನಿಸಿತು.ಎಲ್ಲಾದರೂ ಮನೆಯವರಿಗೆ ತಿಳಿದರೆ ಸುಮ್ಮನೆ ಬಿಟ್ಟಾರೇ..ಎಂದು ಯೋಚಿಸಿ ಮೈಯೆಲ್ಲಾ ಬೆವರಿತು.ಕೈಕಾಲು ಶಕ್ತಿ ಉಡುಗಿದಂತೆ ಭಾಸವಾಯಿತು.

ಒಳಗಿನಿಂದ ಅಮ್ಮ "ಮಹೇಶ.. ಮೈತ್ರಿ..ಊಟಕ್ಕೆ ಬನ್ನಿ.."ಎಂದು ಕರೆದರು.
"ನಾನು ಸ್ವಲ್ಪ ಮತ್ತೆ ಬರುವೆ..ಓದುತ್ತಿದ್ದೇನೆ.."ಎಂದು ಹೇಳಿ ಮೈತ್ರಿ ತಪ್ಪಿಸಿಕೊಂಡಳು.ದುಗುಡತುಂಬಿದ ತಲೆಯನ್ನು ಹೊತ್ತು ಅವರೆಲ್ಲರ ಜೊತೆ ಸೇರಿ ಉಣ್ಣಲು ಅವಳಿಗೂ ಕಷ್ಟಸಾಧ್ಯವಾಗಿತ್ತು . ಮನಸ್ಸು ಏಕಾಂತವನ್ನು ಬಯಸಿತ್ತು..ಮೌನದಲ್ಲೂ ಇನಿಯನ ಪಿಸುದನಿಯ ಕಂಪನವಿತ್ತು..ಅವನ ಪ್ರೇಮಭರಿತ ಹಾಯ್ಕುಗಳ ಮೋಹವಿತ್ತು..

      ಎಲ್ಲರೂ ಊಟಕ್ಕೆ ಹೋದಂತೆ ಕಾಣುತ್ತಿದೆ.. ಒಮ್ಮೆ ನಾನು ಮೊಬೈಲ್ ತೆಗೆದುಕೊಂಡು ಕಿಶನ್ ಗೆ ಸಂದೇಶ ರವಾನಿಸುತ್ತೇನೆ ಎಂದು ಮೆಲ್ಲನೆ ಚಾವಡಿಯಲ್ಲಿದ್ದ ಅಪ್ಪನ ಮೇಜಿನ ಬಳಿಗೆ ತೆರಳುವ ಸಿದ್ಧತೆಯಲ್ಲಿದ್ದಳು.ಮೆಲ್ಲನೆ ರೂಮಿನಿಂದ ಹೊರಗೆ ಇಣುಕಿದಳು.ಅಲ್ಲಿ ಮೇಜಿನ ಮೇಲೆ ಮಲ್ಲಿಗೆಯ ಮೊಗ್ಗುಗಳನ್ನು ಹರವಿಕೊಂಡು ಅಜ್ಜಿ ಮಾಲೆಹೆಣೆಯುತ್ತಿದ್ದರು.ಒಂದು ಮೊಳದ ಮಾಲೆ ಸಿದ್ಧವಾಗಿತ್ತು.ಇನ್ನೂ ಎರಡು ಹಿಡಿ ಮೊಗ್ಗು ನೇಯಲು ಬಾಕಿಯಿತ್ತು.. ಹೂಂ... ಎಲ್ಲರೂ ಊಟಮಾಡಿ ಬರುವವರೆಗೆ ಇವರ ಮಾಲೆಹೆಣೆಯುವ ಕೆಲಸ ಮುಗಿಯಲಾರದು ಎಂದು ಎಣಿಸಿ ನಿಟ್ಟುಸಿರು ಬಿಟ್ಟಳು...


      ಮೊಮ್ಮಗಳು ಒಮ್ಮೆ ಎದ್ದು ಬಗ್ಗಿ ನೋಡಿ .. ಹೋಗಿ ಪುನಃ ಕುಳಿತಿದ್ದನ್ನು ಗಮನಿಸಿದ ಅಜ್ಜಿ ಮಹಾಲಕ್ಷ್ಮಿ ಅಮ್ಮ..."ಪುಳ್ಳೀ.. ಮೈತ್ರಿ...ನಿನಗೆ ಎಂತಾರು ಬೇಕಾ..."ಎಂದು ಕೇಳಿದರು..

"ಇಲ್ಲೆ.. ಅಜ್ಜಿ...ನನಗೆ ಎಂತ ಬೇಡ..."ಎಂದು ಹೇಳಿ ಅಜ್ಜಿಗೆ ನಾನೆಷ್ಟು ಜಾಗರೂಕತೆಯಿಂದ ಇಣುಕಿದರೂ ಗೊತ್ತಾಗಿಬಿಟ್ಟಿದೆ ...ಈ ಇಳಿವಯಸ್ಸಿನಲ್ಲೂ ಭಾರೀ ಚುರುಕು ಅಜ್ಜಿಯ ಕಿವಿ..ಎಂದುಕೊಂಡಳು..

       ಅಜ್ಜ ಅಪ್ಪ ಮಹೇಶ್ ಊಟ ಮಾಡಿ ಹೊರಬಂದರು..ಅಮ್ಮ ಮಗಳ ರೂಮಿಗೆ ಬಂದು "ಊಟಕ್ಕೆ ಬಾ.." ಎಂದು ಕರೆದರು..ಇವತ್ತೇನೋ ಮಗಳ ಮೂಡ್ ಸರಿಯಿಲ್ಲ ಎಂಬುದನ್ನು ಅವರು ಗಮನಿಸಿದಂತೆ ಇತ್ತು ಅವರ ಮಾತಿನ ಧಾಟಿ.. ಎಂದಿನಂತೆಯೇ ಇದ್ದೇನೆ ಎಂಬಂತೆ ನಟಿಸುವುದು ಮೈತ್ರಿಗೆ ಈಗ ಅನಿವಾರ್ಯವಾಗಿತ್ತು.ಅಮ್ಮ ಅಜ್ಜಿ ಯೊಂದಿಗೆ ಊಟಕ್ಕೆ ಕುಳಿತಳು ಮೈತ್ರಿ.. ಅಷ್ಟರಲ್ಲಿ  ಮೈತ್ರಿ ಯ ದೊಡ್ಡತ್ತೆ ಶಶಿಯ ಫೋನ್ ಬಂದಿತು...ಸುದ್ದಿ, ಸೌಖ್ಯ ಸಮಾಚಾರ ಮಾತನಾಡಿದ ಶಶಿ ತನ್ನ ಮಗ ಇವತ್ತು ತಡರಾತ್ರಿ ಶಾಸ್ತ್ರಿನಿವಾಸಕ್ಕೆ ಬರುವುದಾಗಿ ತಿಳಿಸಿದರು..


       ಶ್ಯಾಮ ಶಾಸ್ತ್ರಿಗಳ ದೊಡ್ಡಮಗಳು ಶಶಿಕಲಾ.ಎಲ್ಲರೂ ಪ್ರೀತಿಯಿಂದ ಶಶಿಯೆಂದು ಕರೆಯುವುದು.ಹದಿನೆಂಟನೇ ವಯಸ್ಸಿನಲ್ಲಿ ಮದುವೆಯಾಗಿ ತುಂಬು ಸಂಸಾರಕ್ಕೆ ಕಾಲಿಟ್ಟವರು.ತವರು ಮನೆಗೆ ಯಾವಾಗಲಾದರೂ ಒಮ್ಮೊಮ್ಮೆ ಬರುತ್ತಿದ್ದರು.ಮನೆಯ ಹಿರಿಸೊಸೆಯಾದ ಅವರ ಮೇಲೆ ಜವಾಬ್ದಾರಿ ಹೆಚ್ಚಿತ್ತು..ಇಬ್ಬರು ಗಂಡುಮಕ್ಕಳನ್ನು ಹೆತ್ತುಬೆಳೆಸಿದರು.. ದೊಡ್ಡ ಮಗ  ಮುರಲಿ...ಒಳ್ಳೆಯ ವಿದ್ಯಾಭ್ಯಾಸ ಪಡೆದು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ..ಎರಡನೆಯವನಿಗೆ ಓದಲು ಆಸಕ್ತಿ ಕಡಿಮೆ.ವೆಂಕಟ ಬುದ್ಧಿವಂತನೇ...ಆದರೆ ಹವ್ಯಾಸಗಳತ್ತ ಸೆಳೆತ ಹೆಚ್ಚು.. ಹಾಗಾಗಿ ಓದಿನ ಕಡೆಗೆ ಗಮನ ಕೊಡುತ್ತಿರಲಿಲ್ಲ..ಹತ್ತನೇ ತರಗತಿ ವರೆಗೆ ಮನೆಯಲ್ಲಿದ್ದು ಓದಿದ ಮಗನನ್ನು .. ಪಿಯುಸಿ ಗೆ ತವರುಮನೆ ಶಾಸ್ತ್ರಿ ನಿವಾಸ ದಿಂದ ಕಾಲೇಜಿಗೆ ಕಳುಹಿಸಿದರು ಶಶಿ..ಸೋದರಮಾವ ಭಾಸ್ಕರ ಶಾಸ್ತ್ರಿಗಳು ಅಧ್ಯಾಪಕರಾದ್ದರಿಂದ ಅವರ ಅಂಜಿಕೆಗೆ ಚೆನ್ನಾಗಿ ಓದಬಹುದು ಎಂದು ಶಶಿಯತ್ತೆಯ ಲೆಕ್ಕಾಚಾರ.. ಅಜ್ಜಿ ಮಹಾಲಕ್ಷ್ಮಿ ಅಮ್ಮ ಪೋಕರಿ ಮೊಮ್ಮಗನನ್ನು ಮನೆಯಿಂದ ಕಾಲೇಜಿಗೆ ಕಳುಹಿಸಲು ಮೊದಲು ಅಂಜಿದ್ದರು..ಮಗನ ಮಕ್ಕಳಿಗೂ ಅವನ ಪೋಲಿ ಅಭ್ಯಾಸಗಳೇ ಬಂದರೆ ಎಂದು..ಆಗ ಮಂಗಳಮ್ಮ ತಾವೇ ಖುದ್ದಾಗಿ " ಬರಲಿ..ಇಲ್ಲಿಯೇ ಓದಬಹುದು "ಎಂದು ಹೇಳಿದರು..ಹೀಗೆ ಶಶಿಯತ್ತೆಯ ಮಗ ವೆಂಕಟ್ ಅಜ್ಜಿ ಮನೆಯಿಂದ ಕಾಲೇಜಿಗೆ ಹೋಗಲಾರಂಭಿಸಿದ.. ಆದರೆ ಓದಿಗಿಂತ ತರಲೆಯೇ ಹೆಚ್ಚು..ಪಿಯುಸಿ ಹೇಗೋ ಮುಗಿಸಿ..ಓದಿಗೆ ತಿಲಾಂಜಲಿ ಬಿಟ್ಟಿದ್ದ..ಯಾರ ಮಾತಿಗೂ ಮಣಿಯಲಿಲ್ಲ..ಪ್ರಸಿದ್ಧ ಭಾಗವತರಲ್ಲಿ ಯಕ್ಷಗಾನ ಪದ ಹಾಡಲು ಕಲಿಯತೊಡಗಿದ.. ಮುಂದೆ ಅದೇ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಅವನದಾಗಿತ್ತು..ಶಶಿಯತ್ತೆ ಮಾವನಿಗಂತೂ ಇದು ಇಷ್ಟವಿಲ್ಲ..ಭಾಗವತರಿಗೆ ಈಗ ಸಂಪಾದನೆ ಸಾಲದು..ಯಾರೂ ಮದುವೆಯಾಗಲು ಹುಡುಗಿ ಕೊಡುವುದಿಲ್ಲ ಎಂದು ಅವರ ಅಂಬೋಣ.. ವೆಂಕಟ್ ಮಾತ್ರ ಪಟ್ಟು ಸಡಿಲಿಸಲಿಲ್ಲ... ಹೀಗೆ ಇವತ್ತು ಇದೇ ಊರಿಗೆ ಯಕ್ಷಗಾನ ಭಾಗವತಿಕೆಗೆ
ಬಂದಿದ್ದ ವೆಂಕಟ್ ರಾತ್ರಿ ಅಜ್ಜನ ಮನೆಯಲ್ಲಿ ಉಳಿದುಕೊಳ್ಳಲು ಬರುವೆನೆಂದು ತಿಳಿಸಲು ಅಮ್ಮನಲ್ಲಿ ಹೇಳಿದ್ದ..

     ಮೊಮ್ಮಗ ಬರುತ್ತಾನೆಂದು ತಿಳಿದ ಅಜ್ಜಿ ಸಂತಸಪಟ್ಟರು.ಬೇಗನೆ ಊಟಮಾಡಿ ಶ್ಯಾಮಶಾಸ್ತ್ರಿಗಳಿಗೆ ಮಲಗಲು ಚಾವಡಿಯಲ್ಲಿ ಮಂಚದಲ್ಲಿದ್ದ ಹಾಸಿಗೆಯನ್ನು ಬಿಡಿಸಿ ಹಾಸಿಕೊಟ್ಟರು..ಬೇಗನೆ ಮಲಗಿ ತಡರಾತ್ರಿ ಮೊಮ್ಮಗ ಬರುತ್ತಾನೆ ಎಂದ ಅವರ ದನಿಯಲ್ಲಿ ಸಂಭ್ರಮವಿತ್ತು.

      ಊಟಮಾಡಿ ರೂಮು ಸೇರಿ ಮಲಗಿದ ಮೈತ್ರಿಯ ಗಮನ ಅಜ್ಜ ಗೊರಕೆಹೊಡೆಯಲು ಯಾವಾಗ ಶುರುಮಾಡುತ್ತಾರೆ..ಅಪ್ಪ ಯಾವಾಗ ಲೈಟ್ ಆಫ್ ಮಾಡಿ ಕೋಣೆ ಸೇರುತ್ತಾರೆ ಎಂಬಲ್ಲಿತ್ತು.. ಹನ್ನೊಂದು ಗಂಟೆಯ ಹೊತ್ತು..ಮನೆಯ ಹೆಚ್ಚಿನ ಲೈಟ್ ಆಫ್ ಆಗಿದ್ದವು..ಅಪ್ಪ ಅಮ್ಮ ರೂಮುಸೇರಿ  ಮಲಗಿದ್ದನ್ನು ಬಾಗಿಲಿನ ದನಿಯಲ್ಲೇ ಅರಿತಳು ಮೈತ್ರಿ.. ಇನ್ನೊಂದು ಸಣ್ಣ ಬೆಳಕು ಕಾಣಿಸುತ್ತಿತ್ತು.. ದೊಡ್ಡದಾದ ಚಾವಡಿಯ ಮೂಲೆಯಲ್ಲಿ ಮಹೇಶ್ ಪರೀಕ್ಷೆಗೆ ಓದುತ್ತಿದ್ದ.. ಎಲ್ಲರೂ ಮಲಗಿದರೂ ಇವನೊಬ್ಬ ಎಚ್ಚರದಲ್ಲಿದ್ದಾನಲ್ಲ..!!ನಾನೇನಾದರೂ ಮೇಜಿನ ಮೇಲಿನ ಫೋನ್ ತೆಗೆದುಕೊಂಡಿದ್ದು ಗೊತ್ತಾದರೆ ನಾಳೆ ಅಪ್ಪನಿಗೆ ವರದಿ ಮಾಡಿದರೆ ಕಷ್ಟ..ಎಂದುಕೊಳ್ಳುತ್ತಲೇ ಮೆಲ್ಲನೆ ಚಾವಡಿಯತ್ತ ಇಣುಕಿದಳು..ಎರಡು ಹೆಜ್ಜೆ ಮುಂದೆ ಬಂದು ತಮ್ಮನತ್ತ ನೋಡಿದಳು.ಕೈಯಲ್ಲೊಂದು ಪುಸ್ತಕ ಹಿಡಿದಿದ್ದ.ತೂಕಡಿಸುತ್ತಿದ್ದ ..ಓಹೋ..ಹೀಗೆ ಸಂಗತಿ..!!! ಇವನು ಪೂರ್ತಿ ಎಚ್ಚರದಲ್ಲಿಲ್ಲ.. ಮೆಲ್ಲನೆ ಮೊಬೈಲ್ ತೆಗೆದುಕೊಂಡು ಹೋದರೆ ಇವನಿಗೆ ತಿಳಿಯದು ಅಂತ ಮೆಲ್ಲನೆ ಹತ್ತು ಹೆಜ್ಜೆ ಮುಂದಿಟ್ಟಳು.. ಕಾಲ್ಗೆಜ್ಜೆಯನ್ನು ರೂಮಿನಲ್ಲಿ ತೆಗೆದಿರಿಸಿ ಬಂದಿದ್ದಳು... ಮೊಬೈಲ್ ಹಿಡಿದು ರೂಮು ಸೇರಿದಳು.. ಮಹೇಶ್ ಏನೋ ಸಪ್ಪಳವಾದಂತೆ ಎಚ್ಚರವಾಗಿ ಪುಸ್ತಕ ಮಡಚಿ ಲೈಟ್ ಆಫ್ ಮಾಡಿ ಹಾಲ್ ನಲ್ಲಿ ಹಾಸಿಗೆ ಹಾಸಿ ಮಲಗಿಕೊಂಡನು.. ನಾನು ಬಂದದ್ದು ಇವನಿಗೆ ಅರಿವಾಗಿರಲಾರದು ಎಂದು ಮೈತ್ರಿ ಭಾವಿಸಿದಳು..

ಬಾಗಿಲು ಭದ್ರಪಡಿಸಿ ಮೈತ್ರಿ ಕಿಶನ್ ಗೆ ಸಂದೇಶ ರವಾನಿಸಿದಳು..


ನಾ ಬರೆದ ಒಲವಿನ ಓಲೆ ನೀ
ಮರೆತೆಯಾ ಗೆಳೆಯಾ...
ಕ್ಷಣ ಕೋಪದ ನನ್ನ ಉಲಿಯು
ಮನಸು ಮುರಿಯಿತೇ ಗೆಳೆಯಾ...

ನನ್ನ ನಿನ್ನ ಪ್ರೀತಿಬೆಸುಗೆಗೆ ಬೇಲಿ
ಎಲ್ಲಿಹುದು ಗೆಳೆಯಾ...
ನೀನಿಲ್ಲದ ನಾನಿಂದು ಖಾಲಿ
ಜೇನುಗೂಡು ಗೆಳೆಯಾ...

ನಿನ್ನೊಲುಮೆ ಸಂದೇಶಕೆ
ನಾ ಹೂವು ಗೆಳೆಯಾ..
ನನ್ನಧರದ ಮಧುಹೀರೋ
ದುಂಬಿ ನೀನೇ ಗೆಳೆಯಾ...


ಸಂದೇಶವನ್ನು ಕಿಶನ್ ಗೆ ಕಳುಹಿಸಿದ ಮೈತ್ರಿ ನನ್ನ ನಲ್ಲ ನನ್ನನ್ನು ಚೆನ್ನಾಗಿ ಬಲ್ಲ ಎಂದು ನಂಬಿದಳು.ಇಂದಲ್ಲದಿದ್ದರೆ ನಾಳೆ ಬೆಳಿಗ್ಗೆ ಯಾದರೂ ಪ್ರತಿಸಂದೇಶ ಕಳುಹಿಸುವನು ಎಂದು ಕಾದುಕುಳಿತಳು..

      ಹೊರಗೆ ಬೈಕ್ ಸದ್ದಾಯಿತು.. ವೆಂಕಟ್ ಬಂದಿರಬೇಕು..ಅಜ್ಜ ಎದ್ದು ಹೊರಗೆ ಹೋದರು.. ಬಾಯ್ತುಂಬಾ ಕವಳ ಜಗಿದುಕೊಂಡು ಥೇಟ್ ಅಜ್ಜಂದಿರಂತೆ ಫೋಸ್ ಕೊಡುತ್ತಾ ಒಳಬಂದಿದ್ದ ವೆಂಕಟ್.. ಅಜ್ಜಿ ಎದ್ದು ಬಂದು ಮೊಮ್ಮಗನನ್ನು ಉಪಚರಿಸಿದಳು.. ಭಾಸ್ಕರ ಶಾಸ್ತ್ರಿಗಳು ಕೂಡ ಅಳಿಯನನ್ನು ಮಾತನಾಡಿಸಿದರು.. ವೆಂಕಟ್ ಹೊರಗೆ ಹೋಗಿ ಮೈತ್ರಿಯ ರೂಮಿನ ಹೊರಗಡೆಯ ಜಗಲಿಯ ಪಕ್ಕದಲ್ಲಿ ನಿಂತು ಕವಳವನ್ನು ಪಿಚಕ್ಕೆಂದು ಉಗಿದು ಅಲ್ಲೇ ಇದ್ದ ನೀರಿನಿಂದ ಬಾಯಿ ಮುಕ್ಕಳಿಸಿ ಬಂದ.. ಅಜ್ಜಿ ಕುಡಿಯಲು ನೀರು ತಂದರು..ಕ್ಷೇಮ ಸಮಾಚಾರ ಹರಟಿದರು.


     ಮಾತನಾಡುತ್ತಾ ತನ್ನ ಮೊಬೈಲ್ ನಲ್ಲಿ ಗುರುಟುತ್ತಿದ್ದ ವೆಂಕಟ್ ..."ಅಲ್ಲ ಈ ಹೊತ್ತಿನಲ್ಲಿ ಇಲ್ಲಿ ವೈಫೈ ಕನೆಕ್ಷನ್ ಸಿಗುತ್ತಿದೆ.ಇಲ್ಲಿ ಈಗ ಯಾರಾದರೂ ಮೊಬೈಲ್ ಬಳಸುತ್ತಿದ್ದಾರಾ...' ಎಂದು ಕೇಳಿದ ವೆಂಕಟ್ ಭಾವನ ಮಾತು ಮೈತ್ರಿ ಯ ಸಂಕಟಕ್ಕೆ ಕಾರಣವಾಯಿತು... ಅಪ್ಪನಿಗೆ ನಾನು ಮೊಬೈಲ್ ತೆಗೆದುಕೊಂಡದ್ದು ತಿಳಿದೇ ಹೋಗಿರಬೇಕು ಈಗ ಎನ್ನುತ್ತಾ ಹೆದರುತ್ತಿದ್ದವಳ ಕಣ್ಣಂಚಿಂದ ನೀರು ಜಿನುಗಿತ್ತು.. ಕಾಲುಗಳು ನಡುಗುತ್ತಿದ್ದವು...

    ಮೊದಲು ನೆಟ್ ಆಫ್ ಮಾಡಿ ಮಲಗಿ ನಿದ್ರಿಸುವ ನಾಟಕ ಮಾಡಿದಳು ಮೈತ್ರಿ...


                     ****
      ಮಲಗಿದ್ದ ಕಿಶನ್ ಸಂದೇಶ ಬಂದದ್ದನ್ನು ಕಂಡು ಯಾರದ್ದೆಂದು ನೋಡಿದ.. ಮೈತ್ರಿ ಯ ಸಂದೇಶವೆಂದು ತಿಳಿದು ಓದಿದ..ಓದಿದವನಿಗೆ ಏಕೋ ಕೂಡಲೇ ಪ್ರತಿಸಂದೇಶ ಕಳುಹಿಸುವ ಮನಸ್ಸಾಗಲಿಲ್ಲ.. ಅವಳನ್ನು ಸ್ವಲ್ಪ ಸತಾಯಿಸಿ ನೋಡಬೇಕು ಅಂತ ಅನಿಸಿ..ಮೊಬೈಲ್ ಆಫ್ ಮಾಡಿ ಮಲಗಿ ನಿದ್ರೆಗೆ ಜಾರಿದ...


      ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
31-01-2020.

ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.


Wednesday, 29 January 2020

ಜೀವನ ಮೈತ್ರಿ- ಭಾಗ ೪




      ಹೆಬ್ಬಾವನ್ನು ನೋಡಿ ಬಂದ ಮೈತ್ರಿ ಯ ಮೊಬೈಲ್ ಗೆ ಒಂದು ಮೆಸೇಜ್ ಬಂದಿತ್ತು.
ಓದಿದ ಮೈತ್ರಿಗೆ ಶಾಕ್ ಆಯಿತು.... ಕಿಶನ್ ನ ಸಂದೇಶವದು...ಕಣ್ಣೀರು ಸುರಿಸುವ ಎಮೋಜಿ ಹಾಕಿ ಕೆಳಗೆ ಈ ಸಾಲುಗಳ ಬರೆದಿದ್ದ...

ಪ್ರೇಮದ ಪ್ರಶಾಂತ ಕೊಳಕ್ಕೆಸೆದೆ ಕಲ್ಲು...
ಅಲೆಗಳೆದ್ದು ಹರಡಿವೆ ಹೃದಯದಲ್ಲೂ...

      ಮೈತ್ರಿ ಒಂದು ಕ್ಷಣ ಸುಮ್ಮನಿದ್ದು ಯೋಚಿಸಿದಳು.ತಾನು ಕಿಶನ್ ಗೆ ಮಧ್ಯಾಹ್ನ ಗದರಿದ್ದು ನೆನಪಾಯಿತು..ಛೇ..!! ಸಿಟ್ಟಿನಲ್ಲಿ ಒಂದು ಮಾತು ಅಂದುಬಿಟ್ಟಿದ್ದೆ . ಅದನ್ನು ಇಷ್ಟು ಗಂಭೀರವಾಗಿ ಪರಿಗಣಿಸುತ್ತಾನೆಂದು ಅಂದುಕೊಂಡಿರಲಿಲ್ಲ..ನನ್ನ ಇನಿಯ ಬಲು ಮೃದುಹೃದಯಿ..ಈಗಲೇ ಅವನಿಗೆ ಕ್ಷಮೆ ಕೇಳಿ ರಮಿಸಿಬಿಡಬೇಕು...ಅವನ ಪ್ರೇಮಸಂದೇಶಗಳಿಲ್ಲದೆ ನನಗೇನೋ ಕಳೆದುಕೊಂಡ ಅನುಭವ.. ಎಂದು ಸಂದೇಶವನ್ನು ಟೈಪ್ ಮಾಡುತ್ತಿದ್ದಾಗ ಅಪ್ಪ ಬಂದರು...
"ಮಗಳೇ...ಓದಿನ ಸಮಯದಲ್ಲಿ ಓದು.. ಮೊಬೈಲ್, ಟಿವಿ ಎಲ್ಲ ಆಮೇಲೆ ಸಮಯ ಉಳಿದರೆ ಮಾತ್ರ..ಈಗೀಗ ಬರೀ ಮೊಬೈಲು ನೋಡುತ್ತಾ ಕಾಲಕಳೆಯುವುದು ಹೆಚ್ಚಾಗಿದೆ.ಮೊಬೈಲ್ ಆಫ್ ಮಾಡಿ ನನ್ನ ಟೇಬಲ್ ಮೇಲೆ ಇಟ್ಟು ಬಾ.. ಇನ್ನು ನಾಳೆ ಬೆಳಿಗ್ಗೆ ತೆಗೆದುಕೊಂಡರೆ ಸಾಕು... ಮೊಬೈಲ್ ಅಗತ್ಯಕ್ಕೆ ತಕ್ಕಂತೆ ಬಳಸಬೇಕು.."ಎಂದರು ಅಪ್ಪ ಭಾಸ್ಕರ ಶಾಸ್ತ್ರಿಗಳು..
ಅಪ್ಪನ ಮಾತಿಗೆ ಹೂಂಗುಟ್ಟಿ .. ಬರೆಯುತ್ತಿದ್ದ
ಸಂದೇಶವನ್ನು ಅಳಿಸಿ.. ಮೊಬೈಲ್ ಆಫ್ ಮಾಡಿ ಅಪ್ಪನ ಮೇಜಿನಲ್ಲಿಟ್ಟು ಬಂದು ಓದಲು ಕುಳಿತಳು.ಓದಲು ಕುಳಿತವಳಿಗೆ ತಲೆಯೊಳಗೆ ಕಿಶನ್ ನದೇ ಧ್ಯಾನ... ನಾನು ಮರುಸಂದೇಶ ಬರೆಯುತ್ತಿರುವುದು ಅವನಿಗೆ ತಿಳಿದಿರಬಹುದು..ಆದರೂ ಕಳುಹಿಸದಿದ್ದಾಗ ನನ್ನ ಬಗ್ಗೆ ತಪ್ಪು ತಿಳಿದುಕೊಂಡು ಬೇಸರಪಟ್ಟುಕೊಂಡರೆ..ನಾನೇನು ಮಾಡಲಿ..!! ಒಮ್ಮೆ ಮೊಬೈಲ್ ನಲ್ಲಿ ಟೈಪ್ ಮಾಡಿ ಬೇಗ ಕಳಿಸಿಬಿಡುವೆ ಎಂದರೆ... ಅಪ್ಪನಾದರೂ ಮೇಜಿನ ಪಕ್ಕವೇ ಕುಳಿತುಕೊಂಡಿದ್ದಾರೆ...ಅಜ್ಜ ಅಜ್ಜಿ ಅಪ್ಪ ಎಲ್ಲರೂ ಹೆಬ್ಬಾವಿನ ವಿಷಯ ಚರ್ಚಿಸುತ್ತಿದ್ದಾರೆ..ಅವರ ಮಾತುಕತೆ ನಿಲ್ಲುವಂತೆ ಕಾಣುತ್ತಿಲ್ಲ...ನನಗೆ ಈಗ ಮೊಬೈಲ್ ಸಿಗಲೂ ಸಾಧ್ಯವಿಲ್ಲ..


        ಆಫೀಸಿನಿಂದ ರೂಮಿಗೆ ಬಂದ ಕಿಶನ್ ಗೆ ತಲೆಭಾರವಾಗುತ್ತಿತ್ತು.. ತಾನು ಇಷ್ಟು ದಿನ ಪ್ರೀತಿಸುತ್ತಿದ್ದ ಆರಾಧಿಸುತ್ತಿದ್ದ ಮೈತ್ರಿ ಗೆ ತನ್ನ ಪ್ರೀತಿಯ ಮಾತು ಬೇಡವಾಗಿದೆಯೇ ...ನೀರಸವೆನಿಸುತ್ತಿದೆಯೇ...ಯಾಕಾದರೂ ನನ್ನ ಆ ರೀತಿ ಗದರಿದಳು... ನಾನು ಮಾತಾಡಿದ್ದು ತಪ್ಪಾ..ಏನೋ ಡಲ್ ಇದಾಳೆ ಅನಿಸಿತು..ಕಾರಣ ಕೇಳಿದೆ...ಆಕೆಯ ಮನಸ್ಸಿನ ಗೊಂದಲ ನನಗೆ ತಿಳಿದದ್ದು ಸಹಜ ಅಲ್ವಾ...ಎಂದೆಲ್ಲ ಯೋಚಿಸಿದಷ್ಟೂ ಉತ್ತರ ಸಿಗದೇ ಕಣ್ಣಿಂದ ಹನಿಗಳು ಪಟಪಟನೆ ಉದುರಿದವು...


        ಸೀದಾ ಕೈಕಾಲು ತೊಳೆಯಲು ತೆರಳಿದ...ನಂತರ ಅಡುಗೆ ಮನೆಗೆ ತೆರಳಿ ಫ್ರಿಜ್ ನಲ್ಲಿ ಇದ್ದ ಹಾಲನ್ನು ತೆಗೆದುಕೊಂಡು ಒಂದು ಲೋಟ ಕಾಫಿ ಮಾಡಲೆಂದು ಕಾಯಲು ಇಟ್ಟನು..ಹಾಲು ಕುದಿದು ಇನ್ನೇನು ಇನ್ಸ್ಟಾಂಟ್ ಕಾಫಿ ಪೌಡರ್ ಬೆರೆಸಬೇಕು ಎನ್ನುವಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದು ಮಾಡಿತು..ತೆರೆದಾಗ
ರೂಂ ಮೇಟ್ ಸುಂದರ್ ಮತ್ತು ಅವನ ಗೆಳೆಯ ಪ್ರಣವ್ ಬಂದಿದ್ದರು.ಅವರಿಗೆಂದು ಪುನಃ ಹಾಲು ಸೇರಿಸಿ ಕಾಯಿಸಿ ಕುದಿಸಿ ಕಾಫಿ ತಯಾರಿಸಿ.. ಎಲ್ಲರೂ ಜೊತೆಯಾಗಿ ಹರಟುತ್ತಾ ಕುಡಿದರು..


      ಸುಂದರ್ ಬಹಳ ತಮಾಷೆಯ ವ್ಯಕ್ತಿ.. ಕಾಫಿ ಕುಡಿಯುತ್ತಾ  ಬಾಳೆಹಣ್ಣನ್ನು ಸಿಪ್ಪೆ ಸುಲಿಯದೆ ಬಾಯಿಗಿಡುತ್ತಿದ್ದ ಕಿಶನ್ ನನ್ನು ಕಂಡು ..." ಕಿಶ್..ಏನೋ.. ಲವ್ವಲ್ಲಿ ಬಿದ್ದಿದೀಯಾ ಹೇಗೆ.. ಬಾಳೆಹಣ್ಣು ಸಿಪ್ಪೆ ಸುಲಿಯೋದೇ ಮರೆತುಬಿಟ್ಟೆ..ಯಾರ ಗುಂಗಿನಲ್ಲಿದೀಯಾ... ಮೊದಲು ಹಣ್ಣನ್ನು ಸರಿಯಾಗಿ ಸಿಪ್ಪೆ ಸುಲಿದು ತಿನ್ನು...ಆಮೇಲೆ ಮನಕದ್ದ ಹೆಣ್ಣಿನ ಕನವರಿಕೆ..."ಎಂದಾಗ

ಪ್ರಣವ್..." ಕಿಶನ್ ...ಪಾಯಸದೂಟ ಬೇಗ ಹಾಕ್ಸಪ್ಪಾ... ಇನ್ನು ಆರು ತಿಂಗಳಿಗೆ ನಾನು ಫಾರಿನ್ ಗೆ ಹಾರ್ತೀನಿ.... ಅದಕ್ಕಿಂತ ಮೊದಲು ನಿಮ್ಮೂರಿಗೆ ಬಂದು ನಿನ್ನ ಮದುವೆ ಫಂಕ್ಷನ್ ನಲ್ಲಿ ಭಾಗವಹಿಸಬೇಕು..ಕಣೋ.."ಎಂದು ತಾನೂ ದನಿಗೂಡಿಸಿದನು..

"ಇಲ್ಲಪ್ಪಾ..ಹಾಗೇನೂ ಇಲ್ಲ.."ಎಂದು ಕಿಶನ್ ಹೇಳುತ್ತಿದ್ದರೂ ...ಹಾಲುಬಣ್ಣದ ಕಿಶನ್ ನ ಕೆನ್ನೆ ಕೆಂಬಣ್ಣಕ್ಕೆ ತಿರುಗಿ... ಅವರಿಗೆ ಉತ್ತರವ ನೀಡಿತ್ತು...

       ಪ್ರಣವ್ ಅರ್ಧಗಂಟೆ ಮಾತನಾಡಿ ನಂತರ ತೆರಳಿದನು.. ಕಿಶನ್ ,ಸುಂದರ್ ಇಬ್ಬರೂ ಸೇರಿ ಅಡುಗೆ ಮಾಡಿದರು..ಸುಂದರ್ ಅನ್ನ, ಸಲಾಡ್ ಮಾಡಿದನು.. ಕಿಶನ್ ಅಮ್ಮ ಕೊಟ್ಟಿದ್ದ ಸಾಂಬಾರ್ ಪುಡಿ ಹಾಕಿ ಸ್ವಲ್ಪ ಕೊಬ್ಬರಿ ತುರಿಯನ್ನು ರುಬ್ಬಿ ಸಾಂಬಾರ್ ಮಾಡಿದನು.. ಇಬ್ಬರೂ ಸ್ನಾನ ಮಾಡಿ ಫ್ರೆಶ್ ಆಗಿ ಬಂದು ಊಟಮಾಡಿದರು...


       ಅವರಿಬ್ಬರೂ ಇದ್ದುದು ಒಂದು ಸಣ್ಣ ಸಿಂಗಲ್ ಬೆಡ್ ರೂಂ ಮನೆಯಲ್ಲಿ..ಒಂದುಪುಟ್ಟ ಹಾಲ್,ಒಂದು ಬೆಡ್ ರೂಮ್,ಹಾಲ್ ಗೆ ತಾಗಿಕೊಂಡು ಪುಟ್ಟ ಅಡುಗೆ ಕೋಣೆ, ಕಾಮನ್ ಬಾತ್ ರೂಮ್ ಟಾಯ್ಲೆಟ್..ಹೀಗಿರುವ ಮನೆಯಲ್ಲಿ ಇಬ್ಬರೂ ಬ್ಯಾಚ್ಯುಲರ್ ಲೈಫ್ ಕಳೆಯುತ್ತಿದ್ದರು.. ಸುಂದರ್ ಒಂದು ತಿಂಗಳು ಬೆಡ್ ರೂಂ ನಲ್ಲಿ ಮಲಗಿದರೆ ಕಿಶನ್ ಹಾಲ್ ನಲ್ಲಿ ಮಲಗುತ್ತಿದ್ದ.ಮುಂದಿನ ತಿಂಗಳು ಬೆಡ್ ರೂಂ ಕಿಶನ್ ಗೆ..ಹಾಲ್ ಸುಂದರ್ ಗೆ.. ಹೀಗೆ ಶಿಫ್ಟ್ ನಲ್ಲಿ ಹೊಂದಾಣಿಕೆಯಿಂದ ಬಾಳುತ್ತಿದ್ದರು..

     ಕಿಶನ್ ಬೆಡ್ ರೂಂ ನಲ್ಲಿ ಮಲಗಿದ.ಸುಂದರ್ ಹಾಲ್ ನಲ್ಲಿ ಸುಖವಾಗಿ ಗೊರಕೆಹೊಡೆದು ನಿದ್ರಿಸುತ್ತಿದ್ದ.. ಕಿಶನ್ ಗೆ ಕಣ್ಣಿಗೆ ನಿದ್ರೆ ಆವರಿಸಲಿಲ್ಲ.. ಮೈತ್ರಿಯ ನೆನಪೇ ಸುಳಿಯುತ್ತಿತ್ತು..ಅವಳೇಕೆ ನನ್ನನ್ನು ಅವಾಯ್ಡ್ ಮಾಡಲು ನೋಡುತ್ತಿದ್ದಾಳೆ..ನನ್ನ ಸಂದೇಶಕ್ಕೆ ಮರುಸಂದೇಶ ರವಾನಿಸದಷ್ಟು ಅಸಡ್ಡೆ ಏಕೆ..ಎಂದೆಲ್ಲ ಮನಸ್ಸು ಎಡೆಬಿಡದೆ ಯೋಚಿಸುತ್ತಿತ್ತು...


   ಇಲ್ಲ..ನನ್ನ ಮುದ್ದು ಗೊಂಬೆ ಅಂತಹವಳಲ್ಲ..ಅವಳಿಗೂ ಏನೋ ಟೆನ್ಷನ್ ಗಳು,,,ಕಲಿಕೆಯ ಒತ್ತಡಗಳೋ,,,ಮನೆಯ ನಿರ್ಬಂಧಗಳೋ,, ಸಂಪ್ರದಾಯ ಪಾಲಿಸುವ ಮನೆತನದ ಕಟ್ಟುನಿಟ್ಟು... ಮಗಳ ಮೇಲಿನ ಜವಾಬ್ದಾರಿಯ ಹಿತನುಡಿಗಳೋ..
ಹೀಗೇ ಏನೋ ಇರಬಹುದು...ನನ್ನ ಮೈತ್ರಿ ಅಪ್ಪಟ ಅಪರಂಜಿ... ಅವಳು ಅಂತಹವಳಲ್ಲ... ಎನ್ನುತ್ತಾ ಪ್ರೇಯಸಿಯ ಬಗ್ಗೆ ಧನಾತ್ಮಕವಾಗಿ ಯೋಚಿಸುತ್ತಾ ನಿದ್ರೆಗೆ ಶರಣಾಗಲು ಪ್ರಯತ್ನಿಸುತ್ತಿದ್ದನು..

ಕಣ್ಣಿಗೆ ನಿದ್ರೆ ಆವರಿಸುತ್ತಿತ್ತು.. ಅಷ್ಟರಲ್ಲಿ ಮೆಸೇಜ್ ಬಂದಾಗ ಫಕ್ಕನೇ ಎಚ್ಚೆತ್ತು ಮೊಬೈಲ್ ನತ್ತ  ಕೈ ತೆಗೆದುಕೊಂಡು ಹೋದನು ಕಿಶನ್...


     ಮುಂದುವರಿಯುವುದು....

✍️.... ಅನಿತಾ ಜಿ.ಕೆ.ಭಟ್.
30-01-2020.

ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.



ತಲುಪಿರಿ ಬಾಲರೇ ಗಮ್ಯ



ಹಾರಿ... ಮೇಲಕೆ ಹಾರಿ
ನಡೆಸುತಲಿಹರು ಪೈಪೋಟಿ
ಬೀರಿ...ನಸುನಗೆ ಬೀರಿ
ಕಾಯ್ವವಗುಂಟೇ ಸರಿಸಾಟಿ||೧||

ಏರಿ ... ಎತ್ತರಕೇರಿ
ಸಾಧಿಸೆ ಬೇಕು ಛಲವು
ಮೀರಿ ... ಅಡೆತಡೆ ಮೀರಿ
ಗೆಲ್ಲಲು ದೇವನ ವರವು||೨|

ಅತ್ತ...ನೆಡುತ ಚಿತ್ತ
ಸಾಗುವ ಜೀವನದಾಟ
ಸುತ್ತ ... ಸರಿಸದೆ ಕತ್ತ
ದೃಷ್ಟಿ ನೇರದ ನೋಟ||೩||

ಬಿತ್ತಿ... ಸಾಹಸ ಬುದ್ಧಿ
ತುಂಬುತ ಚೈತನ್ಯ
ಹತ್ತಿ ...ಶಿಖರವ ಸಿದ್ಧಿ
ತಲುಪಿರಿ ಬಾಲರೇ ಗಮ್ಯ||೪||


✍️... ಅನಿತಾ ಜಿ.ಕೆ.ಭಟ್
29-01-2020.
ಚಿತ್ರ ಕೃಪೆ-ಕನ್ನಡ ಕಥಾಗುಚ್ಛ.


Tuesday, 28 January 2020

ಜೀವನ ಮೈತ್ರಿ- ಭಾಗ ೩






  ಕಾಲೇಜಿನತ್ತ ಹೆಜ್ಜೆ ಹಾಕಿದ ಮೈತ್ರಿ ಲೇಡೀಸ್ ರೂಮಿಗೆ ತೆರಳಿದಳು.ಒಳಕಾಲಿಡುತ್ತಿದ್ದಂತೆಯೇ ಹ್ಯಾಪಿ ಬರ್ತ್ ಡೇ ಟು ಯು... ಡೀಯರ್ ಮೈತ್ರಿ... ಎಂದು ಒಮ್ಮೆಲೇ ಬಂದ ದನಿಯನ್ನು ಕೇಳಿ ಆಶ್ಚರ್ಯವಾಯಿತು ಮೈತ್ರಿಗೆ.ಫ್ರೆಂಡ್ಸ್ ಸುನಿಧಿ, ರೀನಾ, ಸೀಮಾ,ಸಾಜಿದಾ,ಶಮಾ... ಎಲ್ಲರೂ ಸೇರಿ ಗೆಳತಿಯ ಹುಟ್ಟುಹಬ್ಬಕ್ಕೆ ಒಳ್ಳೆಯ ಸರ್ಪ್ರೈಸ್ ಕೊಟ್ಟಿದ್ದರು.. ಮೈತ್ರಿ ಕೇಕ್ ಕಟ್ ಮಾಡಿ ಎಲ್ಲರಿಗೂ ತಿನಿಸಿದಳು...ಫ್ರೆಂಡ್ಸ್ ಮೈತ್ರಿಯ ಮುಖಕ್ಕೆ ಕ್ರೀಂ ಹಚ್ಚುವ ಪ್ರಯತ್ನ ದಲ್ಲಿದ್ದರು.." ಏಯ್..ಬೇಡ..ಬೇಡ ಫ್ರೆಂಡ್ಸ್...ಈಗ ಫಸ್ಟ್ ಪೀರಿಯಡ್ ಇಲೆಕ್ಟ್ರಾನಿಕ್ಸ್ ಕ್ಲಾಸ್..ಆ ಸಂತೋಷ್ ಸರ್... ಕೈಗೆ ಸಿಕ್ಕರೆ ಅಷ್ಟೇ ಮತ್ತೆ..ಈ ಸೆಮಿಸ್ಟರ್ ಮುಗಿಯೋವರೆಗೆ ನನ್ನನ್ನೇ ಟಾರ್ಗೇಟ್ ಮಾಡ್ತಾರೆ..."


   ಹೇಳುವ ಮೊದಲೇ ಸುನಿಧಿ ಸ್ವಲ್ಪ ಕ್ರೀಂ ಅನ್ನು ಮೈತ್ರಿ ಯ ಕೆನ್ನೆಗೆ ಹಚ್ಚಿಯಾಗಿತ್ತು... ಅದನ್ನು ತೊಳೆಯಲೆಂದು ಹೋದಳು ಮೈತ್ರಿ...ಕೆನ್ನೆ ಉಜ್ಜಿ ಉಜ್ಜಿ ನೋವಾದರೂ ಆಕೆಗೆ ಸಮಾಧಾನ ಆಗಲಿಲ್ಲ.. ಮೇಕಪ್ ಹೋಯಿತೆಂಬ ಆತಂಕ..ಶಮಾಳ ಬ್ಯಾಗ್ ನಿಂದ ಮೇಕಪ್ ಕಿಟ್ ಬಳಸಿಕೊಂಡು ಅಲಂಕಾರ ಮಾಡಿಕೊಂಡಳು.. ಕೇಕ್ ಕಟ್ ಮಾಡಿದ್ದು ತಿಂದು ಇನ್ನೂ ಉಳಿದಿತ್ತು.. ಅದನ್ನು ಅಚ್ಚುಕಟ್ಟಾಗಿ ಪುನಃ ಕವರ್ ಮಾಡಿ ತಂದ ಬ್ಯಾಗ್ ಗೆ ತುಂಬಿಕೊಂಡರು.ಇನ್ನೇನು ಕ್ಲಾಸ್ ಗೆ ಲೇಟಾಗುತ್ತೆ ಅಂತಾ ವೇಗವಾಗಿ ನಡೆಯತೊಡಗಿದರು.. "ಸಂತೋಷ್ ಸರ್..ನಾನು ಬಂದ ಕಾಲೇಜು ಬಸ್ಸಲ್ಲೇ ಬಂದಿದ್ದಾರೆ...ಈಗ ನಾನು ಕ್ಲಾಸ್ ಗೆ ತಡವಾದರೆ ಕಾರಣ ಕೇಳಿಯಾರು "ಎಂದು ಹೆದರುತ್ತಲೇ ವೇಗವಾಗಿ ಗೆಳತಿಯರೊಂದಿಗೆ ಹೆಜ್ಜೆಹಾಕಿದಳು ಮೈತ್ರಿ.. ವೇಗವಾಗಿ ಮೆಟ್ಟಲೇರುತ್ತಿದ್ದಾಗ ಎಡವಿದಳು ಮೈತ್ರಿ..ಬೀಳುತ್ತಿದ್ದ ಮೈತ್ರಿ ಯನ್ನು ಸಾಜಿದಾ ಗಟ್ಟಿಯಾಗಿ ಹಿಡಿದುಕೊಂಡಳು.. "ಅಬ್ಬಾ..ಸಾಜಿದಾ.. ನೀನು ಹಿಡಿದದ್ದಕ್ಕೆ ಬಚಾವಾದೆ..ಇಲ್ಲದಿದ್ದರೆ ಏನು ಅನಾಹುತ ಕಾದಿತ್ತೋ ಏನೋ.. "ಎನ್ನುತ್ತಾ ಕುಂಟುತ್ತಾ ತರಗತಿಯತ್ತ ಸಾಗಿದರು...


    ಆಗಲೇ ತರಗತಿಗೆ ಸರ್ ಎಂಟ್ರಿ ಕೊಟ್ಟಿದ್ದರು..ಎಲ್ಲರ ಎದೆ ಢವಗುಟ್ಟುತ್ತಿತ್ತು... ತಡವಾಗಿ ಬಂದವರನ್ನು ಒಮ್ಮೆ ತನ್ನ ಗಂಭೀರವಾದ ನೋಟದಿಂದ ಗದರಿ "ಯಸ್..ಕಮಿನ್..".ಅಂದರು... ಅವಸರವಸರವಾಗಿ ಎಲ್ಲರೂ ತಮ್ಮ ಸ್ಥಳದಲ್ಲಿ ಕುಳಿತುಕೊಂಡರು...ಪಾಠಮಾಡುತ್ತಿದ್ದ ಸಂತೋಷ್ ಸರ್ .. ಪ್ರಶ್ನೆಯೊಂದನ್ನು ಕೇಳಿ ಉತ್ತರ ಯಾರು ಹೇಳುತ್ತಾರೆಂದು ಗಮನಿಸುತ್ತಿದ್ದರು.. ಕೆಲವರು ಕೈ ಮೇಲೆ ಮಾಡಿದ್ದರು . ಮೈತ್ರಿ ಸುಮ್ಮನಿದ್ದಳು..ಅವಳತ್ತ ಬೆರಳು ತೋರಿದರು ...ಮೇಲೇಳಲು ಪ್ರಯತ್ನಿಸಿದ ಅವಳ ಬಟ್ಟೆಗೆ ಚೂಯಿಂಗ್ ಗಮ್ ಅಂಟಿತ್ತು.. ಎದ್ದು ನಿಂತು ಉತ್ತರಿಸಲು ಏನು ಬಡಬಡಾಯಿಸಿದಳು.. ಹಿಂದಿನಿಂದ ಗೆಳೆಯ ಗೆಳತಿಯರ ಗುಂಪು ಗೊಳ್ಳೆಂದು ನಕ್ಕಿತು.. ಸರ್..ಗರಂ ಆದರು... ಮೈತ್ರಿ ಚೂಯಿಂಗ್ ಗಮ್ ಹಿಡಿದದ್ದು ಕಾಣದಂತೆ ಮೆಲ್ಲನೆ ಬಟ್ಟೆ ಮೇಲೆ ವೇಲ್ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು..

       ನಕ್ಕವರನ್ನು ಒಬ್ಬೊಬ್ಬರನ್ನೇ ನಿಲ್ಲಿಸಿ ಪ್ರಶ್ನೆ ಗೆ ಸರಿಯಾದ ಉತ್ತರ ಸಿಗುತ್ತದೋ ಎಂದು ನೋಡುತ್ತಿದ್ದರು..ನಕ್ಕ ಎಲ್ಲರನ್ನೂ ಕೇಳಿದರೂ ಗುರುಗಳಿಗೆ ಬೇಕಾದ ಉತ್ತರ ಸಿಗಲೇಯಿಲ್ಲ... ಕೊನೆ ಗೆ ಮುಂದೆ ಕುಳಿತಿದ್ದ ಪ್ರತಿಭಾವಂತ ವಿದ್ಯಾರ್ಥಿಯಿಂದ ಉತ್ತರ ಪಡೆದ ಗುರುಗಳು ನಕ್ಕವರನ್ನು ತರಾಟೆಗೆ ತೆಗೆದುಕೊಂಡರು...
ನಗುವಿನ ಕಾರಣವನ್ನು ವಿಚಾರಿಸಿಕೊಂಡರು..ಯಾರೂ ಬಾಯಿಬಿಡಲೇಯಿಲ್ಲ.. ಕೊನೆಗೆ ಅನಿವಾರ್ಯ ವಾಗಿ ಮೈತ್ರಿ ಬಾಯಿಬಿಡಬೇಕಾಯಿತು.. ವಿಷಯ ತಿಳಿಸಿದ ಮೈತ್ರಿ ಗೆ ಕುಳಿತುಕೊಳ್ಳಲು ಅವಕಾಶ ನೀಡಿದರು.. ಚೂಯಿಂಗ್ ಗಮ್ ಅಂಟಿಸಿದವರು ಯಾರು ಎಂದು ತನಿಖೆ ಮಾಡಿದರು..ಯಾರೂ ಒಪ್ಪಿಕೊಳ್ಳಲಿಲ್ಲ..ಹೇಳದಿದ್ದವರಿಗೆ
ಇಡೀ ಪೀರಿಯಡ್ ನಿಲ್ಲುವ ಶಿಕ್ಷೆಯನ್ನು ವಿಧಿಸಿದರು...

    ಮೈತ್ರಿ ನನ್ನ ಬರ್ತ್ ಡೇ ದಿನ ವೇ ಹೀಗೆಲ್ಲ ಆಗಬೇಕೇ ಎನ್ನುತ್ತಾ ಮೂಡ್ ಔಟ್ ಆದಳು.. ತರಗತಿ ಮುಗಿಸಿ ಸರ್ ತೆರಳಿದರು.. ಬಟ್ಟೆಗೆ ಅಂಟಿದ್ದ ಗಮ್ ಹೋಗಲೇಯಿಲ್ಲ.. ಇಡೀ ದಿನ ಮೈತ್ರಿ ಗೆ ಅದನ್ನು ಮುಚ್ಚಿಡಲು ದುಪ್ಪಟ್ಟಾ ನೆರವಾಯಿತು..

   ಬರ್ತ್ ಡೇ ಗರ್ಲ್ ...ತನ್ನ ಡಾರ್ಲಿಂಗ್ ಗೆ ಆಗಾಗ  ಮೆಸೇಜ್ ಕಳಿಸುತ್ತಿದ್ದ ಕಿಶನ್.. ಅವನಿಗೆ ಉತ್ತರಿಸು ಮೂಡ್ ಅವಳಿಗಿರಲಿಲ್ಲ...ಏನೋ ನನ್ನ ಮುದ್ದು ಗೊಂಬೆ ಇವತ್ತು ಯಾವತ್ತಿನಂತೆ ಇಲ್ಲ ಎಂದು ಅನಿಸಿತ್ತು ಅವನಿಗೆ... ಊಟದ ಬಿಡುವಿನಲ್ಲಿ ಕಾಲ್ ಮಾಡಿ ಮಾತಾಡುತ್ತೇನೆ ಎಂದು ಕೊಂಡ ಕಿಶನ್..ಮಧ್ಯಾಹ್ನ ಕಾಲ್ ಮಾಡಿದ.. ಯಾವತ್ತೂ ಕಿಲಕಿಲ ನಗುತ್ತಾ ಮಾತಾಡುವವಳು ಇಂದು "ಏನು ನಿಂಗೆ ಕಾಲ್ ಮಾಡೋದಕ್ಕೆ ಹೊತ್ತು ಗೊತ್ತು ಇಲ್ವಾ.."ಎಂದು ರೇಗಿಯೇ ಬಿಟ್ಟಳು ಮೈತ್ರಿ...

ಪೆಚ್ಚಾದ ಕಿಶನ್..ಮೊದಲ ಬಾರಿಗೆ ತನ್ನ ಪ್ರೇಯಸಿ ಸಿಟ್ಟುಮಾಡಿಕೊಂಡಿದ್ದಳು.. ಯಾವತ್ತೂ ಶಾಂತಚಿತ್ತಳಾಗಿರುತ್ತಿದ್ದ ಮೈತ್ರಿ ಇಂದು.. ತನ್ನ ಬರ್ತ್ ಡೇ ದಿನ ಸಿಟ್ಟುಮಾಡಿಕೊಂಡದ್ದು ಅವನಿಗೆ ಬೇಸರತರಿಸಿತು...

ಉಳಿದಿದ್ದ ಕೇಕ್ ಅನ್ನು ತರಗತಿಯ ಗೆಳತಿಯರಿಗೆಲ್ಲ ಹಂಚಲಾಯಿತು.. ಎಲ್ಲರೂ ಮೈತ್ರಿ ಗೆ ಶುಭಹಾರೈಸಿದರು... ಸಂಜೆ ಮನೆಗೆ ಬಂದ ಮೈತ್ರಿ ಮಂಕಾಗಿದ್ದದ್ದನ್ನು ತಾಯಿ ಮಂಗಳಮ್ಮ ಗಮನಿಸಿದರು..ಕಾರಣ ಕೇಳಿದ ಅಮ್ಮನಲ್ಲಿ ನನ್ನ ಡ್ರೆಸ್..ಹೊಸದು..ಇದಕ್ಕೆ ಚೂಯಿಂಗ್ ಗಮ್ ಹಿಡಿದುಬಿಟ್ಟಿದೆ ನೋಡು ಎನ್ನುತ್ತಾ ತೋರಿಸಿದಳು... ಅದನ್ನು ನೋಡಿದ ಅಮ್ಮ ಎಣ್ಣೆ ಹಾಕಿ ತೊಳೆಯೋಣ..ಹೋಗುತ್ತದೆ.
ಚಿಂತೆಮಾಡದೆ ತಿಂಡಿತಿನ್ನು ಎನ್ನುತ್ತಾ ಸಂಜೆ ಮಾಡಿದ್ದ ಜೀವಿಹಲಸಿನ ಪೋಡಿ ,ನಿನ್ನೆ ನೆರೆಮನೆಯ ಶ್ರಾದ್ಧದಿಂದ ಕೊಟ್ಟ ಹೋಳಿಗೆಯನ್ನು ಕೊಟ್ಟರು... ಜೊತೆಗೆ ಒಂದು ಲೋಟ ಹಾಲನ್ನಿತ್ತರು ..."ಹಾಲು ಬೇಡಮ್ಮಾ.."ಎಂದಳು ಮೈತ್ರಿ... "ಹೀಗೇ ಏನೂ ತಿನ್ನದಿದ್ದರೆ ಸೊರಗುತ್ತೀಯಾ..ಪೌಷ್ಟಿಕಾಂಶ ದೊರೆಯುವುದು ಹೇಗೆ...ಮನೆಯಲ್ಲಿ ಸಾಕಿದ ಕಪಿಲೆ ದನದ ಹಾಲು ಕುಡಿ.. ಎಂದು ಒತ್ತಾಯಿಸಿದರು"..ಮಂಗಳಮ್ಮ... ಅಜ್ಜಿಬಂದು..."ಅದಕ್ಕೆ ಸ್ವಲ್ಪ ಕಾಫಿ ಡಿಕಾಕ್ಷನ್ ಬೆರೆಸಿ ಕೊಡು..ಕಡೀತಾಳೆ..."ಎಂದರೆ ..."ಅಜ್ಜೀ.. ನಂಗೆ ಕಾಫಿ ಬೇಡಜ್ಜಿ..."ಎಂದಳು...

ಅಷ್ಟರಲ್ಲಿ ಕಾಲೇಜಿನಿಂದ ಬಂದ ಮಹೇಶ್   ".. ಅಕ್ಕನಿಗೆ ಕಾಫಿ ಕುಡಿಯಲು ಭಯ.. ಎಲ್ಲಾದರೂ ಕಪ್ಪಾದರೆ ಎಂದು.. ಮತ್ತೆ ನೋಡಲು ಬಂದ ಹುಡುಗ... ಹುಡುಗಿ ಕಪ್ಪು ಎಂದು ಕೊರತೆ ಹೇಳಿದರೆ.."

"ನೀನ್ ಯಾವಾಗ ಬಂದ್ಯೋ ..
ತಮ್ಮಣ್ಣ...ಎಮ್ಮೆ ತಮ್ಮಣ್ಣ.. ನೀನು ಬೆಳ್ಳಗಾಗಿ ಗುಂಡಗಾಗಲೂ ಎಮ್ಮೆ ಹಾಲು ಕುಡಿ..."ಎನ್ನುತ್ತಾ ತಾನೂ ಬಿಡದೆ ರೇಗಿಸಿದಳು...

ತಿಂಡಿ ಮುಗಿಸಿ ತನ್ನ ರೂಮು ಸೇರಿದಳು ಮೈತ್ರಿ.. ಯಾವತ್ತೂ ಈ ಹೊತ್ತಿನಲ್ಲಿ ಕಿಶನ್ ದು ಮೆಸೇಜ್ ಬರುವುದು ರೂಢಿ..ಇವತ್ತೇನು ಬಂದಿಲ್ಲ.. ಎನ್ನುತ್ತಾ ಯೋಚಿಸುತ್ತಾ ಕುಳಿತವಳಿಗೆ... ತಾನು ಮಧ್ಯಾಹ್ನ ರೇಗಿದ್ದು ನೆನಪಾಗಲೇಯಿಲ್ಲ.. ಹೋಂ ವರ್ಕ್ ಮಾಡಲು ಕುಳಿತವಳಿಗೆ ಮನಸ್ಸಾಗದೆ ಸೀದಾ ಸ್ನಾನ ಕ್ಕೆ ತೆರಳಿದಳು..ಸ್ನಾನ ಮುಗಿಸಿ ದೇವರ ಮುಂದೆ ಕುಳಿತು ಸುಶ್ರಾವ್ಯವಾಗಿ ಭಜನೆಯನ್ನು ಹಾಡಿದಳು..ಹೊರಗೆ ಚಾವಡಿಯಲ್ಲಿ ಕುಳಿತಿದ್ದ ಅಜ್ಜ ಅಜ್ಜಿ ಮೊಮ್ಮಗಳ  ಸಿರಿಕಂಠದಿಂದ ಹೊರಹೊಮ್ಮಿದ  ದೇವರ ನಾಮಕ್ಕೆ ಕುಳಿತಲ್ಲಿಂದಲೇ ತಾಳ ಹಾಕುತ್ತಾ ತಲೆದೂಗುತ್ತಿದ್ದರು...


  ಹತ್ತು ನಿಮಿಷ ಭಜನೆ ಮಾಡಿದಾಗ ಮೈತ್ರಿಯ ಮನಸ್ಸು ಶಾಂತವಾಯಿತು...ಪರಿಶುದ್ಧವಾಯಿತು...
ಓದಲು ಬರೆಯಲು ಆರಂಭಿಸಿದಳು.. ಮನೆಯ ಹೊರಗಿನ ಬದಿಯಲ್ಲಿದ್ದ ಕೊಟ್ಟಗೆಯಲ್ಲಿ ಅಡಿಕೆ ಸುಲಿಯುತ್ತಿದ್ದರು ಜಾನಪ್ಪ ಮತ್ತು ಮೋನಪ್ಪ...ಒಮ್ಮೆಲೇ ಏನೋ ಸದ್ಧಾಗಿ ಹೆದರಿ ಮನೆಯತ್ತ ಧಾವಿಸಿದ್ದರು.. ಶ್ಯಾಮ ಶಾಸ್ತ್ರಿಗಳು ಏನೆಂದು ನೋಡಲು ಹೇಳಿದರು.ನೋಡುತ್ತಿದ್ದಂತೆ ಮೇಲಿನ ಅಟ್ಟದ ಹಲಗೆಯಲ್ಲೆಲ್ಲ ಬಿಳಿ ನೊರೆ ಕಾಣಿಸುತ್ತಿತ್ತು..ಜಾನಪ್ಪ,,ಮೋನಪ್ಪ ಕಾಲು ಮುಂದಿಡಲು ಭಯಪಡುತ್ತಿದ್ದರು.. ಭಾಸ್ಕರ ರಾಯರು ಪೇಟೆಗೆ ಹೋಗಿದ್ದವರು ಮನೆಗೆ ಬರುತ್ತಿದ್ದಂತೆ ವಿಷಯ ತಿಳಿದು ಕೊಟ್ಟಿಗೆಗೆ ಧಾವಿಸಿದರು..ನೊರೆಯೇನೆಂದು ತಿಳಿಯಲು ಮೆಲ್ಲನೆ ಅಟ್ಟಕ್ಕೆ ಹತ್ತುವ ಏಣಿಯನ್ನು ಏರಿದರು..ನೋಡಿದರೆ ಅಲ್ಲೊಂದು ಹೆಬ್ಬಾವು ಇಲಿಯನ್ನು ಹಿಡಿದು ನುಂಗುತ್ತಿತ್ತು.ಇಲಿಯನ್ನು ಬೇಟೆಯಾಡುವಾಗ ಅಲ್ಲಿದ್ದ ವಸ್ತುಗಳು ಬಿದ್ದು ಸದ್ದಾಗಿತ್ತು ..ಯಾವಾಗ ಬಂತೋ..ಏನೋ..ಕೂಡಲೇ ಭಾಸ್ಕರ ರಾಯರು ಸ್ನೇಕ್ ಪ್ರಸಾದ್ ಗೆ ಕರೆಮಾಡಿದರು.. ಸ್ನೇಕ್ ಪ್ರಸಾದ್ ಅರ್ಧಗಂಟೆಯಲ್ಲೇ ಬಂದರು..ಅಷ್ಟರಲ್ಲಿ ಸುದ್ದಿ ತಿಳಿದು ಮನೆಯ ಸುತ್ತ ಜನ ನೆರೆದಿದ್ದರು...ಬಂದವರೇ ತನ್ನಲ್ಲಿರುವ ಸ್ಟಿಕ್ ಹಿಡಿದು ಗೋಣಿಚೀಲವೊಂದನ್ನು ಕೈಯಲ್ಲಿ ನೇಲಿಸಿಕೊಂಡು ಕಾರ್ಯಾಚರಣೆಗೆ ಇಳಿದರು.. ಸ್ವಲ್ಪ ಹೊತ್ತಿನಲ್ಲಿ ಸೆರೆಹಿಡಿದು ಎರಡು ಜನ ಯುವಕರು ಹೆಬ್ಬಾವನ್ನು ಅಟ್ಟದಿಂದ ಕೆಳಗಿಳಿಸಿದರು..


   ಹೆಬ್ಬಾವನ್ನು ನೋಡಿ ಬಂದ ಮೈತ್ರಿ ಯ ಮೊಬೈಲ್ ಗೆ ಒಂದು ಮೆಸೇಜ್ ಬಂದಿತ್ತು.
ಓದಿದ ಮೈತ್ರಿ ಗೆ ಶಾಕ್ ಆಯಿತು..

   ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
29-01-2020.ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.


Monday, 27 January 2020

ಚಂದ್ರಗಿರಿ ಎಸ್ಟೇಟ್




     ರಾತ್ರಿ ಹತ್ತುಗಂಟೆಯ ಸಮಯ.ಚಂದ್ರಗಿರಿ ಎಸ್ಟೇಟ್ ಮುಂದೆ ಐಷಾರಾಮಿ ಕಾರೊಂದು ಬಂದು ನಿಂತಿತು.ವಾಚ್ಮನ್ ಗೇಟು ತೆಗೆದ.ಕಾರು ಒಳಗೆ ಹೋಯಿತು.ಕಾರಿನಿಂದ ಸುಮಾರು ನಲುವತ್ತು ವರ್ಷ ಪ್ರಾಯದ ವ್ಯಕ್ತಿ ಕೆಳಗಿಳಿದ.ವಾಚ್ಮನ್ ಅವನನ್ನು ಯಾರು ಏನು ಎಂದು ಪ್ರಶ್ನಿಸಿದ.. ವಿವರವನ್ನು ತಿಳಿದುಕೊಂಡು ಒಳಗಿದ್ದ ಚಂದ್ರಕಾಂತ ರಾಯರಿಗೆ ಸುದ್ದಿ ಮುಟ್ಟಿಸಿದ.ಚಂದ್ರಕಾಂತ ರಾಯರು ಅವನನ್ನು ಒಳಗೆ ಕರೆಯುವಂತೆ ಸೂಚಿಸಿದರು.ಅವನು ಕಂದು ಬಣ್ಣದ ಕಡತ ಹಿಡಿದು ಒಳಗೆ ಬರುತ್ತಿದ್ದಂತೆ ಬಾಗಿಲು ಮುಚ್ಚಿಕೊಂಡಿತು.ಇಬ್ಬರ ನಡುವಿನ ವ್ಯವಹಾರ ಮುಂದುವರಿಯಿತು.. ಅರ್ಧ ಗಂಟೆಯಲ್ಲಿ ಮಾತುಕತೆ ಮುಗಿದು ಬಂದವ್ಯಕ್ತಿ ಹೊರಗೆ ನಡೆದನು.


   ಮರುದಿನ ಬೆಳಿಗ್ಗೆ ಹತ್ತುಗಂಟೆಯ ಸಮಯ . ಆಫೀಸಿಗೆ ಕರ್ತವ್ಯಕ್ಕೆ ಹಾಜರಾದ ಚಂದ್ರಗಿರಿರಾಯರು.. "ಸಾರ್.. ಇವತ್ತು ರತ್ನಾಪುರದ ರೋಡ್ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಇದೆ.. ಈಗಾಗಲೇ ಹತ್ತಾರು ಅರ್ಜಿಗಳು ಬಂದಿವೆ.. ಫೈಲುಗಳನ್ನು ಇಲ್ಲಿ ಇರಿಸಿದ್ದೇನೆ..ಪರಿಶೀಲಿಸಿ ಅಂಗೀಕರಿಸಿದರೆ... ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ.."ಎಂದು ಹೇಳಿದ ಅಟೆಂಡರ್ ರಾಮಣ್ಣ..

"ಸರಿ.. ಅದನ್ನು ಫೈನಲೈಸ್ ಮಾಡುತ್ತೇನೆ..."ಎಂದು ಕಡತಗಳ ಮೇಲೆ ಕಣ್ಣಾಡಿಸಿದರು..ಕಂದು ಬಣ್ಣದ ಕಡತಕ್ಕಾಗಿ ಕಣ್ಣು ಹುಡುಕಿತು..ಕೈಗೆತ್ತಿಕೊಂಡು ಸಹಿ ಹಾಕಿದರು.. ಅಟೆಂಡರ್ ರಾಮಣ್ಣ ನನ್ನು ಕರೆದು
" ಸಮರ್ಥ್ ರೋಡ್ ಕನ್ಸ್ಟ್ರಕ್ಷನ್ ಅಂಡ್ ಮೈಯ್ಟೆನೆನ್ಸ್.."ಕಂಪನಿಗೆ ಗುತ್ತಿಗೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.. ನೋಟೀಸ್ ಕಳುಹಿಸಿಬಿಡು..

"ಸಾರ್.. ಅದು.."

"ಏನು.."

"ಅವನೊಬ್ಬ ಮೋಸಗಾರ ಸರ್..ಕೆಲಸ ಅರ್ಧಂಬರ್ಧ ಮಾಡಿ ಕೊಳ್ಳೆಹೊಡೆಯುವ ಕಂಪೆನಿ ರಾಜಶೇಖರ್ ಅವರದು.."

"ನೋಡು.‌ಅದು ನಿನಗೆ ಸಂಬಂಧಪಟ್ಟ ವಿಷಯವಲ್ಲ.. ಹೇಳಿದಷ್ಟು ಮಾಡು.."ಎಂದ
ಪಿ ಡಬ್ಲ್ಯು ಡಿ ಆಫೀಸರ ಮಾತಿಗೆ ತಲೆಯಲ್ಲಾಡಿಸಿದ ರಾಮಣ್ಣ..

   ಟೆಂಡರ್ ರಾಜಶೇಖರ್ ಪಾಲಾಯಿತು.. ರೋಡ್ ನ ಕಾಮಗಾರಿ ಪ್ರಾರಂಭವಾಯಿತು. ಕೋಟಿಗಟ್ಟಲೆ ಹಣ ಬಿಡುಗಡೆಯಾಯಿತು.. ಊರಿನ ಜನರೆಲ್ಲ ತಮ್ಮ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಕನಸು ಕಂಡರು.ಹೊಸ ರಸ್ತೆಯಲ್ಲಿ ಓಡಾಡುವ ಜನರ ಸಂಭ್ರಮವೇನು.. ಸಡಗರವೇನು...ಮಿರಮಿರ ಮಿಂಚುವ ಡಾಂಬರು ರಸ್ತೆ ತನ್ನದೇ ಗತ್ತಿನಲ್ಲಿ ಬೀಗಿತು.. ಪೂರ್ಣ ಕಾಮಗಾರಿ ಮುಗಿಯುವ ಮುನ್ನವೇ ಅಲ್ಲಲ್ಲಿ ಬೋರ್ಡಗಳು ರಾರಾಜಿಸಿದವು..
ಹಣ ಬಿಡುಗಡೆ ಗೊಳಿದವರು...
ಕಾಮಗಾರಿ ನಡೆಸಿದವರು...
ಉದ್ಘಾಟನಾ ಸಮಾರಂಭ..

 ಅದರಲ್ಲಿ ನಮೂದಿಸಿದ ದಿನವೇ ಉದ್ಘಾಟನಾ ಸಮಾರಂಭ ಜರುಗಿತು.. ಪಿ ಡಬ್ಲ್ಯು ಡಿ ಆಫೀಸರ್ ಚಂದ್ರಕಾಂತ ರಾಯರು ಕಪ್ಪನೆಯ ಕೋಟು ಧರಿಸಿ ಬೆಲೆಬಾಳುವ ಕಾರಿನಲ್ಲಿ ಬದಿಳಿದರು.ಅವರಿಗೆ ಊರವರೆಲ್ಲ ನಮ್ಮ ಊರಿನ ಅಭಿವೃದ್ಧಿಯ ಹರಿಕಾರ ಎಂದು ಕೊಂಡಾಡಿ ಸುಸ್ವಾಗತ ವನ್ನು ಕೋರಿದರು.. ರಿಬ್ಬನ್ ಕತ್ತರಿಸಿ ಡಾಮರೀಕೃತ ರೋಡನ್ನು ಉದ್ಘಾಟನೆ ಮಾಡಿ ಅಮೋಘವಾದ ಭಾಷಣಗೈದರು.ಊರವರೆಲ್ಲ ಕಿವಿಗಡಚಿಕ್ಕುವಂತೆ ಕರತಾಡನಗೈದರು..


   ಮರುದಿನವೇ  ಗುತ್ತಿಗೆ ಕಂಪೆನಿಯವರು ಅಲ್ಲಿಂದ ಕಾಲ್ಕಿತ್ತರು.ಮೋರಿಗಳ ನಿರ್ಮಾಣಕ್ಕೆಂದು ಬಂದು ಬಿದ್ದಿದ್ದ ಬೃಹತ್ ಸಿಮೆಂಟಿನ ಪೈಪುಗಳು ಅನಾಥ ಸ್ಥಿತಿಯಲ್ಲಿ ಉಳಿದವು ..ಅಲ್ಲಲ್ಲಿ ಡಾಂಬರಿನ ಡಬ್ಬಿಗಳು  ,ಜಲ್ಲಿಕಲ್ಲುಗಳು ,  ಕಬ್ಬಿಣದ ಸರಳುಗಳು ಬಿದ್ದಿದ್ದವು ..ಕ್ರಮೇಣ ಯಾರ್ಯಾರದೋ ಪಾಲಾದವು.


     ಒಂದು ಮಳೆಗಾಲ ಬರುತ್ತಿದ್ದಂತೆ ಡಾಂಬರು ರಸ್ತೆಯಿಂದ ಎದ್ದುಬಂದಿತು.ಮೋರಿಯಿಲ್ಲದೆ ನೀರು ರಸ್ತೆಯ ಮೇಲೆಯೇ ಹರಿದು ಪರಿಸ್ಥಿತಿ ಇನ್ನಷ್ಟು ಶೋಚನೀಯವಾಯಿತು.ಮಾರ್ಗ ಸರಿಯಾಯಿತೆಂದು ಬರಲಾರಂಭಿಸಿದ ಬಸ್ಸುಗಳೆಲ್ಲ ಅರ್ಧ ದಾರಿಯಲ್ಲಿ ಜನರನ್ನು ಇಳಿಸಿ ತಿರುಗಿದವು. ಹೊಸಕನಸು ಹೊತ್ತು ಶಾಲಾಕಾಲೇಜುಗಳಿಗೆ ಸೇರಿಕೊಂಡ ವಿದ್ಯಾರ್ಥಿಗಳು ಎರಡು ಮೂರು ಮೈಲು ನಡೆದುಕೊಂಡೇ ಸಾಗಬೇಕಾದ ಅನಿವಾರ್ಯತೆ ಎದುರಾಯಿತು.. ಜನರಿಗೆ ಈಗ ಮೋಸ ಅರಿವಿಗೆ ಬಂದಿತ್ತು.

      ರಾಜಶೇಖರ್ ಮತ್ತು ಚಂದ್ರಕಾಂತ ರಾಯರು ಜನರ ಬೆವರಿನ ತೆರಿಗೆ ದುಡ್ಡಿನಲ್ಲಿ ಮೆರೆದರು.ಕೋಟಿ ಅನುದಾನದಲ್ಲಿ ತಮ್ಮ ತಮ್ಮ ಪಾಲನ್ನು ಹಂಚಿಕೊಂಡರು.ರಾಜಶೇಖರ್ ಅವರಿಗೆ ಇನ್ನಷ್ಟು ರೋಡ್ ಪ್ರಾಜೆಕ್ಟ್ ಗಳು ಕೈಸೇರಿದವು.ಚಂದ್ರಗಿರಿ ರಾಯರು ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಕೊಡಿಸಿದರು.


     ಅಂದು  ಚಂದ್ರಗಿರಿ ಎಸ್ಟೇಟ್ ಮತ್ತಷ್ಟು ರಂಗೇರಿಸಿಕೊಂಡಿತ್ತು.ಎಲ್ಲೆಲ್ಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು.ಅದ್ದೂರಿಯ ಸಮಾರಂಭ ಏರ್ಪಾಡಾಗಿದೆ ಎಂದು ಊರಿಗೆ ಊರೇ ಮಾತನಾಡುತ್ತಿತ್ತು.ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ  ಜನರ ದುಡ್ಡು ನೀರಿನಂತೆ ಪೋಲಾಗಿತ್ತು.ಅಂದು ತಮ್ಮ ಮಗಳ ಮದುವೆಯ ಸಮಾರಂಭದಲ್ಲಿ ಭಾಗಿಯಾದರು ಚಂದ್ರಗಿರಿರಾಯರು.ಸಂಜೆ ಆರತಕ್ಷತೆ ಸಮಾರಂಭ ನಗರದ ಹೋಟೇಲೊಂದರಲ್ಲಿ ಏರ್ಪಾಡಾಗಿತ್ತು.ಚಂದ್ರಗಿರಿರಾಯರು ಕುಟುಂಬ ಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದಂತೆ ಒಮ್ಮೆ ಮೈನಡುಗುವ ಸದ್ದು ಕೇಳಿಸಿತು.ಏನಾಗುತ್ತಿದೆ ಎಂದು ನೋಡುತ್ತಿದ್ದಂತೆ ನೂರಾರು ಜನ ಸೇರಿದರು.ಎದ್ದೇಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು ಎಲ್ಲರೂ.ಜನರು ಒಬ್ಬೊಬ್ಬರನ್ನೇ ಕಾರಿನಿಂದ ಹೊರಗೆಳೆದು ತೆಗೆದರು.ಕಳೆದ ವರ್ಷ ಸಮರ್ಥ್ ಕನ್ಸ್ಟ್ರಕ್ಷನ್ ಗೆ ಗುತ್ತಿಗೆ ನೀಡಿದ್ದ ರೋಡ್ ನಲ್ಲಿ ದೊಡ್ಡದಾಗಿ ಹೊಂಡವೆದ್ದಿತ್ತು .ಅದರ ಅರಿವಾಗದ ಚಾಲಕ  ..
ಹತ್ತಿರ ಬಂದಾಗ ತಿಳಿದು ಕಾರು ಪಕ್ಕಕ್ಕೆ ತಿರುಗಿಸಿದ್ದಾನೆ.ಮಾರ್ಗದ ಬದಿಯಲ್ಲಿದ್ದ ಕರೆಂಟಿನ ಕಂಬಕ್ಕೆ ಡಿಕ್ಕಿಹೊಡೆದು ಕಾರು ಸಂಪೂರ್ಣ ಜಖಂ ಆಗಿತ್ತು...

    ಕಾಲು ಕೈಯ ಮೂಳೆ ಮುರಿದು ಚಂದ್ರಗಿರಿರಾಯರು ನೋವನುಭವಿಸುತ್ತಿದ್ದಾರೆ.
ರಾಜಶೇಖರ ರಾಯರ ಮೇಲೆಯೇ ರೋಡ್ ನ ಅಪೂರ್ಣ ಕಾಮಗಾರಿಗೆ ಕೇಸು ದಾಖಲಿಸಿದ್ದಾರೆ.
ಕೋರ್ಟು ಕಛೇರಿ ಅಲೆದಾಟ ರಾಜಶೇಖರ ರಾಯರ ನೆಮ್ಮದಿಯನ್ನು ಕಸಿದುಕೊಂಡಿದೆ.ಶಿಕ್ಷೆಯಾಗುವ ಭೀತಿ ಕಾಡುತ್ತಿದೆ...ಹಗಲಿನ ಸೂರ್ಯ ☀️ ಇರುಳಿನ ಚಂದ್ರ  ಎಲ್ಲದಕ್ಕೂ ಸಾಕ್ಷಿಯಾಗಿದ್ದಾರೆ...


✍️... ಅನಿತಾ ಜಿ.ಕೆ.ಭಟ್.
28-01-2020.

ಕಥಾ ಅರಮನೆಯ 'ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ 'ಥೀಂ ಗೆ ಬರೆದ ಬರಹ.ಮೂಲ ಎಳೆ ನೈಜ ಘಟನೆ.. ಕಾಲ್ಪನಿಕ ನಿರೂಪಣೆ... ದ್ವಿತೀಯ ಬಹುಮಾನ ಪಡೆದಿದೆ.

ಜೀವನ ಮೈತ್ರಿ -ಭಾಗ ೨






      ಮೈತ್ರಿ ಮನೆಯವರಿಗೆ ಬಾಯ್ ಮಾಡಿ ಕಾಲೇಜಿಗೆ ಹೊರಟಳು.ಹದಿನೈದು ನಿಮಿಷ ನಡೆದು ಬಸ್ ಸ್ಟ್ಯಾಂಡ್ ತಲುಪುವುದು ಅವಳ ನಿತ್ಯದ ಅಭ್ಯಾಸ.ಇವತ್ತು ಸುಂದರವಾಗಿ ಅಲಂಕರಿಸಿಕೊಂಡು ನಡೆಯಲು ಉದಾಸೀನ ಮಾಡಿದ ಮೈತ್ರಿ ತನ್ನನ್ನು ಅಲ್ಲಿ ತನಕ ಬೈಕ್ ನಲ್ಲಿ ಬಿಡು ಎಂದು ತಮ್ಮನಲ್ಲಿ ಕೇಳಿಕೊಂಡಳು.. ಅವನು "ಹೋಗಕ್ಕಾ.. ನಡೆದರೆ  ದೇಹಕ್ಕೆ
ವ್ಯಾಯಾಮ..ನಡಿ.."
"ಲೋ..ಒಂದ್ಸಲ ತಮ್ಮಾ...ಇನ್ನೊಮ್ಮೆ ಹೇಳಲ್ಲ... ಪ್ಲೀಸ್ ಕಣೋ..ಆಗಲ್ಲ ಅನ್ಬೇಡ...."

ಭಾಸ್ಕರರಾಯರು ಅಕ್ಕ ತಮ್ಮನ ಮಾತು ಕೇಳಿ ಚಾವಡಿಗೆ ಬಂದರು."ಮಹೇಶ .....ಅಕ್ಕನನ್ನು ಬಸ್ ವರೆಗೆ ಬಿಟ್ಟು.. ಬಸ್ ಬರುವವರೆಗೆ ನಿಂತು ಬಾ..''ಎಂದು ಆದೇಶಿಸಿದರು..ಅಪ್ಪನಾಣತಿಯನ್ನು ಮೀರಲು ಸಾಧ್ಯವಿಲ್ಲದ ಮಹೇಶ್ ಒಪ್ಪಿದ..

ಬೈಕ್ ಸ್ಟಾರ್ಟ್ ಮಾಡಿದ..ಆ ಸ್ಟೈಲಲ್ಲೇ ಅವನ ಹುಸಿಮುನಿಸು ಗುರುತಿಸಿದಳು ಮೈತ್ರಿ..ಅಂಜುತ್ತಲೇ ಗಾಡಿಯೇರಿ ಕುಳಿತಳು.ಮಹೇಶ್ ಗಾಡಿ ಚಲಾಯಿಸಿದ.ಮನೆಯಿಂದ ಹೊರಟು ಸ್ವಲ್ಪ ದೂರ ಬಂದಾಗ ಇರುವ ಮಾರ್ಗ ಮಧ್ಯದ ಗುಂಡಿಗೆ ಬೇಕೆಂದೇ ಬೈಕ್ ಇಳಿಸಿ ಅಕ್ಕನನ್ನು ಹೆದರಿಸಿದ.."ಅಯ್ಯೋ..ಬೇಡ ಮಹರಾಯ...ಹೊಂಡಗುಂಡಿ ತಪ್ಪಿಸಿ ಮೆಲ್ಲನೆ ಡ್ರೈವ್ ಮಾಡು ಕೋತಿ..."
"ಏನು ಕೋತಿಯಂತೆ ಕೋತಿ..ಆಗ ಕರೆದುಕೊಂಡು ಹೋಗಲು ಗೋಗರೆದೆ..ಈಗ ಹೀಗೇ..ಮಾಡ್ತೀನಿ ಇರು... ಎನ್ನುತ್ತಾ ಇನ್ನೊಂದು ಗುಂಡಿಗಿಳಿಸಿ ಮೇಲೆತ್ತಿದ.."

"ಅಯ್ಯಮ್ಮಾ..ಬೇಡ ಪುಣ್ಯಾತ್ಮ..."
"ಹಾಗಾದ್ರೆ ನಾನು ಹೇಳಿದಂತೆ ಕೇಳಬೇಕು ಆಯ್ತಾ.."
"ಆಯ್ತು ..ಒಮ್ಮೆ ಸುರಕ್ಷಿತವಾಗಿ ತಲುಪಿಸಿ ಬಿಡು.."
"ನೋಡು..ಆಗ ಕೊಟ್ರಲ್ಲ ಅಪ್ಪ ದುಡ್ಡು.. ಅದರಲ್ಲಿ ನೂರು ರೂಪಾಯಿ ನನಗೆ ಕೊಡು... ಇಲ್ಲಾಂದ್ರೆ ಗೊತ್ತಲ್ಲ... ಪುನಃ.."
"ಏಯ್..ಅದೆಲ್ಲ ಆಗಲ್ಲ ತಮ್ಮಾ..ಮತ್ತೆ ನಾನು ನೂರು ರೂಪಾಯಿ ಹೇಗೆ ಖರ್ಚು ಆಯಿತೆಂದು ಲೆಕ್ಕ ಬರೆಯೋದು..."
"ಅಪ್ಪ ನಿನ್ನನ್ನು ಈಗ ಕೇಳಲ್ಲ... ಕೇಳಿದರೆ ಒಂದು ಸುಳ್ಳು ಹೇಳಿಬಿಡು.."

"ಆಗಲ್ಲ.. ತಮ್ಮಾ..ನಾನಿಲ್ಲಿಂದ ಬೇಕಾದ್ರೆ ನಡ್ಕೊಂಡೇ ಹೋಗ್ತೀನಿ.. ಮತ್ತೆ ಅಪ್ಪನ ಕೈಗೆ ಸಿಕ್ಕಿಹಾಕಿಕೊಳ್ಳುವುದರಿಂದ ಅದೇ ಉತ್ತಮ.."

"ಇಳಿಯೋಕೆ ಬಿಡಲ್ಲ..ಎಲ್ಲಾ ಗುಂಡಿಗಳಿಗೆ ಬೈಕ್ ಇಳಿಸಿ ಬಿಡ್ತೀನಿ...ಏನ್ಮಾಡ್ತೀಯಾ..."

"ಸಾಕು ತಲೆಹರಟೆ... ಹೂಂ ಕೊಡ್ತೀನಿ ನೂರು ರೂಪಾಯಿ.."
"ಹಾಗೆ ಹೇಳು ನನ್ನಕ್ಕಾ..ಮುದ್ದಿನ ಅಕ್ಕಾ..."


    ಬಸ್ಟಾಪ್ ಬಂದಾಗ ಮೊದಲು ಅಕ್ಕನಿಂದ ನೂರು ರೂಪಾಯಿ ತೆಗೆದುಕೊಂಡು ಕಿಸೆಗೆ ತುರುಕಿಸಿದ ಮಹೇಶ್..ಅಕ್ಕನ ಕಡೆಗೊಂದು ಮುಗ್ಧನಗೆ ಬೀರಿದ....
"ಬಸ್ ಬಂದಾಗ ನೀನೇ ಹತ್ತಿಕೋ..ಅಲ್ಲೀವರೆಗೆ ನಾನೇಕೆ ನಿನಗೆ ಬಾಡಿಗಾರ್ಡ್ ಥರಾ ನಿಂತ್ಕೋಬೇಕು..ನಂಗೂ ಓದೋದಿದೆ..ಅಪ್ಪನತ್ರ ಬಸ್ಸಿಗೆ ಹತ್ತಿಸಿ ಬಂದೆ ಅಂತೀನಿ.. ಬಾಯ್ ಅಕ್ಕಾ.. "ಎನ್ನುತ್ತಾ ಹೊರಟ ಮಹೇಶ್..
ತಮ್ಮನಿಗೆ ಬಾಯ್ ಮಾಡಿ ಕಳುಹಿಸಿದಳು ಮೈತ್ರಿ..ಶುದ್ಧ ತರಲೆ ತಮ್ಮ.. ಎಂದು ತನ್ನೊಳಗೇ ಗೊಣಗಿಕೊಂಡಳು..


      ಬಸ್ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯ ಇದೆಯೆಂದು ಮೈತ್ರಿ ಮೊಬೈಲ್ ಫೋನ್ ತೆಗೆದುಕೊಂಡು ಒಂದು ಸೆಲ್ಫೀ ಕ್ಲಿಕ್ಕಿಸಿಕೊಂಡಳು.ತನ್ನ ಭಾವಚಿತ್ರವನ್ನು ತಾನೇ ಮೆಚ್ಚಿ ಹೆಮ್ಮೆ ಪಟ್ಟುಕೊಂಡು ಹನ್ನೆರಡು ಗಂಟೆಗೆ ಸರಿಯಾಗಿ ತನಗೆ ಹುಟ್ಟಿದ ಹಬ್ಬದ ಶುಭಾಶಯ ಕೋರಿದ ಕಿಶನ್ ಗೆ ಫೊಟೋ ಕಳುಹಿಸಿದಳು.
ತಕ್ಷಣವೇ ಉತ್ತರಿಸಿದ ಕಿಶನ್ " ಸುರಸುಂದರಿ ನನ್ನ ಮುದ್ದು ಗೊಂಬೆ". ಮೈತ್ರಿ ಖುಷಿಯಿಂದ
"ಥ್ಯಾಂಕ್ಯೂ ಮೈ ಜಂಟಲ್ ಮ್ಯಾನ್"ಎಂದು ಪ್ರತ್ಯುತ್ತರ ಕಳುಹಿಸಿದಾಗಲೇ ಕಾಲೇಜು ಬಸ್ ಬಂತು.

       ಮೈತ್ರಿಯ ಸಂಪರ್ಕ ಕಡಿತಗೊಂಡಾಗ ಕಿಶನ್ ಮುದ್ದುಗೊಂಬೆಯ ಪ್ರೇಮದ ಗುಂಗಿನಲ್ಲಿ ಮುಳುಗಿದನು.ಅಂದು ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿದ್ದಾಗ ಇಂಟರ್ನಲ್ ಪರೀಕ್ಷೆಯ ದಿನ.ಕೊನೆಯ ಕ್ಷಣದ ಮನನ ಕಾರ್ಯ ಮಾಡುತ್ತಿದ್ದಾಗ ಎಲ್ಲಿಂದಲೋ ಒಂದು ಕಾಗದ ಹಾರಿ ಬಂದಿತ್ತು.ಕೈಯಲ್ಲಿ ಹಿಡಿದು ಏನಿದೆ ಎಂಬುದಾಗಿ ನೋಡಿದಾಗ ಅಂದದ ಕೈಬರಹದಲ್ಲಿ ಇಲೆಕ್ಟ್ರಾನಿಕ್ಸ್ ವಿಷಯದ ಮುಖ್ಯ ಸೂತ್ರ, ಡೆಫಿನಿಷನ್ ಗಳನ್ನು ಬರೆದ ಕಾಗದವಾಗಿತ್ತು.

      ಕಾಗದ ಓದಿ ಪೂರ್ಣಗೊಳ್ಳುತ್ತಿದ್ದಂತೆ ಮುದ್ದಾದ ಬೆಡಗಿಯೊಬ್ಬಳು ವೈಯಾರದಿಂದ ಬಳುಕುತ್ತಾ ಮೆಟ್ಟಲಿಳಿದು ತನ್ನತ್ತವೇ ಬರುತ್ತಿದ್ದಳು.. ತುಟಿಯಂಚಿನ ಕಿರುನಗೆಯಲಿ ನಾ ತೇಲಾಡಬೇಕು ಎನ್ನುವಷ್ಟರಲ್ಲಿ "ಸಾರಿ..ಆ ಪೇಪರ್ ಗಾಳಿಗೆ ಹಾರಿ ಬಂತು..."ಎನ್ನುತ್ತಾ ಕೈ ಮುಂದೆ ಮಾಡಿದಳು...ಗುಳಿಕೆನ್ನೆಯ ಮೇಲಿತ್ತು ನನ್ನ ನೋಟ.. ನಾಚಿ ಕಾಗದ ಪಡೆಯಲು ಯತ್ನಿಸಿದವಳ ಕಿರುಬೆರಳು ನನ್ನ ಕೈಸೋಕಿ ರೋಮಾಂಚನವನ್ನುಂಟುಮಾಡಿತು."ಓಹ್.. ಸಾರಿ..."ನಾನೆಂದೆ..ತುಂಟಕಣ್ಣಿನಲ್ಲಿ ನನ್ನನ್ನು ಗದರಿ ವೇಗವಾಗಿ ಮೆಟ್ಟಿಲುಹತ್ತಿದಳು..ನನ್ನಲ್ಲೇನೋ ಹೇಳಲಾರದ ಭಾವಗಳ ಮಳೆಯಾಗಿ...ಅವಳೇ ಕಾಡತೊಡಗಿದಳು.. ಯೋಚಿಸುತ್ತಾ ಕಿಶನ್ ತನ್ನ ಆಫೀಸಿನ ಕೆಲಸಗಳತ್ತ ಗಮನಹರಿಸಿದ.


      ಬಸ್ಸಿನಲ್ಲಿ ಕುಳಿತ ಮೈತ್ರಿಯ ಪಕ್ಕದ ಸೀಟಿನಲ್ಲಿ ಕುಳಿತ ಹುಡುಗಿ ಪರಿಚಯದವಳಲ್ಲ..ಅಂದ ಮೇಲೆ ಮಾತಾಡಲು ಯಾರಿಲ್ಲ.. ಹಾಗೇ ಕುಳಿತವಳಿಗೆ ಕಿಶನ್ ನ ನೆನಪು ಬಂತು..ಅದ್ಯಾವ ಘಳಿಗೆಯಲ್ಲಿ ಕಣ್ಣು ಕಣ್ಣು ಮಿಲನವಾಯ್ತೋ ...ಅಂದಿನಿಂದ ಅವನ ಕಣ್ಣುಗಳು ನನ್ನನ್ನೇ ಹಿಂಬಾಲಿಸಿದವು...ಆಗಾಗ ಏನಾದರೊಂದು ನೆಪ ಹುಡುಕಿ ಮಾತಿಗೆಳೆಯುತ್ತಿದ್ದ...ಯಾವ ಹುಡುಗನ ಪ್ರೇಮದ ಬಲೆಗೂ  ಕೂಡ ಬೀಳಬಾರದು ಎಂದು ಗಟ್ಟಿಮನಸು ಮಾಡಿದ್ದ ನನ್ನ ಮನಸ್ಸು ನಿಧಾನವಾಗಿ ಅವನೆಡೆಗೆ ವಾಲಿದ್ದು ಗೊತ್ತಾಗಲೇಯಿಲ್ಲ ..ನನ್ನ ತರಗತಿಯ ಪಕ್ಕ ನನ್ನ ಕಾಣಲೆಂದೇ ಬರುತ್ತಿದ್ದನಾ...ಅಲ್ಲ ಕಾರಿಡಾರ್ ನಲ್ಲಿ ಅವನು ನಡೆಯುತ್ತಿದ್ದರೆ ನನ್ನ ನಯನಗಳೇ ಅವನ ಹಿಂದೆ ಸುಳಿಯುತ್ತಿದ್ದುದಾ ... ಅರಿವಾಗುವ ಮುನ್ನ  ಮೋಹದ ಬಲೆಗೆ ಬಿದ್ದಿದ್ದೆ..ನಿದ್ರೆಯಿಲ್ಲದ ರಾತ್ರಿಗಳು.ಹುಣ್ಣಿಮೆಯ ಚಂದಿರನು ಇಣುಕಿ ನಿನ್ನಿನಿಯನ ಕರೆಯಲೇ ಎನುವಂತೆ ಭಾಸವಾಗುತ್ತಿತ್ತು...ಬೀಸುವ ತಂಗಾಳಿಯಲೂ ನಿನ್ನ ಸ್ನೇಹ ಸೌಗಂಧದ ಕಂಪು ಹರಡಿತ್ತು..ಬೆಳಗಿನ ಇಬ್ಬನಿಯಲ್ಲಿ ತೋಯ್ದ ಅರೆಬಿರಿದ ಗುಲಾಬಿ ಮೊಗ್ಗು ಚಳಿಯಲ್ಲಿ ಇನಿಯನಪ್ಪುಗೆ ಬಯಸಿದಂತೆ ನಾನು ನಿನ್ನೊಳಗಿನ ಬೆಚ್ಚನೆಯ ಆಸರೆಗೆ ಆಸೆಪಡುತಿದ್ದೆ..

     ಅದೊಂದು ದಿನ ಮನೆಯವರ ಒತ್ತಾಯಕ್ಕೆ ಬಂಧುಗಳ ಮನೆ ಮದುವೆಗೆ ತೆರಳಿದ್ದೆ..ಮೊದಲ ಬಾರಿ ಝರಿ ಸೀರೆಯನುಟ್ಟಿದ್ದೆ...ಕಾರಿನಿಂದಿಳಿದು ಮಂಟಪಕ್ಕೆ ತೆರಳುವ ಹಾದಿಯಲ್ಲಿ ಎದುರಾದೆಯಲ್ಲ ನೀನು..ಅರೆ..ನೀನು ಎಲ್ಲಿದ್ದೆ...ನಾ ಬರುವಲ್ಲೆಲ್ಲ ನೀನೂ ಹಾಜರಿ ಹಾಕುತಿದ್ದೆಯಾ...ಕಣ್ಣಲ್ಲಿ ಕಣ್ಣಿಟ್ಟು ನೀನನ್ನ ನೋಡಿದಾಗ ನಾನೆಷ್ಟು ನಾಚಿದ್ದೆ ಗೊತ್ತಾ...ನಿನ್ನ ಮುಖಭಾವವನ್ನು ಅರಿತು ಕರಗಿ ಹೋದೆ... ಈ ಕಲ್ಲು ಮನಸನ್ನು ಕರಗಿಸುವ ಶಕ್ತಿ ನಿನಗೆಲ್ಲಿಂದ ಬಂತು...ನಿನ್ನ ನಯನದ ವ್ಯಾಪ್ತಿಗೆ ಸಿಗದಂತೆ ನಾ ಕುಳಿತಿದ್ದರೆ ಅಲ್ಲೇ ಪಕ್ಕದಲ್ಲೇ ಬಂದು ಕುಳಿತೆಯಲ್ಲಾ ...ನನ್ನೆದೆ ಕಿವಿಗೆ ಕೇಳಿಸುವಂತೆ ಹೊಡೆದುಕೊಳ್ಳುತ್ತಿತ್ತು...

      ನಿನ್ನಿಂದ ತಪ್ಪಿಸಿಕೊಳ್ಳಲು ನಾ ಗೆಳತಿಯರ ಜೊತೆ ಪಕ್ಕದ ದೇವಾಲಯದತ್ತ ಹೆಜ್ಜೆ ಹಾಕಿದೆ..ಪ್ರದಕ್ಷಿಣೆ ಹಾಕಿ ದೇವರಿಗೆ ನಮಸ್ಕರಿಸುವಾಗ ಕಣ್ಮುಚ್ಚಿದ್ದೆ...ಕಣ್ತೆರೆದಾಗ ಮುಂದೆ ನೀ ಬಂದು ಎದುರು ನಿಂತಿದ್ದೆಯಲ್ಲ... ಕೈಯಲ್ಲಿ ಕೆಂಗುಲಾಬಿ ಹಿಡಿದು...ಎಲ್ಲರೆದುರು ಪ್ರೊಪೋಸ್ ಮಾಡ್ತಾ ಇದ್ದಾನೆ ಎಂದು ನಾ ಕಂಪಿಸುತ್ತಿದ್ದೆ..ನನ್ನ ಗಂಟಲು ಮಾತನಾಡಲು ಮರೆತಿತ್ತು..ತುಟಿಗಳು ಒಣಗತೊಡಗಿದವು...ಗೆಳತಿಯರೆಲ್ಲ ಗೊಳ್ಳೆಂದು ನಗುವ ಮೊದಲೇ..." ಸಾರಿ.. ಮೇಡಂ..ನಿಮ್ಮ ಜಡೆಯಿಂದ ಹೂ ಕೆಳಗೆ ಬಿದ್ದಿತ್ತು..".ಎಂದೆಯಲ್ಲ.. ಅಬ್ಬಾ..ಹೋದ ಜೀವ ಬಂದಂತಾಗಿತ್ತು...ಹೂ ಕೈಗೆ ಕೊಟ್ಟು ಪಕ್ಕನೆ ಏನೂ ಆಗಿಲ್ಲವೆಂಬಂತೆ ದೂರಸರಿದು  ದೇವಾಲಯದಿಂದ ಹೊರ ಹೋಗುವಾಗ ಒಂದು ತುಂಟ ನಗೆಬೀರಿದೆ ನೋಡು ...ಅಲ್ಲೇ ಅರ್ಥವಾಗಿತ್ತು ನಿನ್ನ ಮನದ ಭಾವವೆಲ್ಲ...ಸಂಜೆ ಮನೆಗೆ ಹೊರಡುವ ಮುನ್ನ ನನಗೊಂದು ಮೆಸೇಜ್ ಕಳಿಸಿದೆಯಲ್ಲ...ಇಂದಿಗೂ ಅದರ ಗುಟ್ಟು ಬಿಟ್ಟುಕೊಟ್ಟಿಲ್ಲ..ನಿನಗೆ ನನ್ನ ಫೋನ್ ನಂಬರ್ ಕೊಟ್ಟವರಾರೆಂದು ....ಅಂತೂ ನೀನು ನನ್ನೊಳಗೆ ಆವರಿಸಿಬಿಟ್ಟಿದ್ದೆ ...ನನಗೆ ತಿಳಿಯದೆಯೆ...


      ಹೀಗೆ ಸ್ನೇಹ ಬೆಳೆದು ಗಾಢವಾಯಿತು.ನಾನು ಮೊದಲ ವರ್ಷದಲ್ಲಿ ಅವನು ಕೊನೆಯ ವರ್ಷದಲ್ಲಿ.. ಕಿಶನ್ ಗೆ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಇನ್ಫೋಸಿಸ್ ನಲ್ಲಿ ಉದ್ಯೋಗ ದೊರೆಯಿತು.. ದಿನಕ್ಕೊಮ್ಮೆ ಮಾತಾಡುತ್ತಾ ಸ್ನೇಹ ಪ್ರೇಮಕ್ಕೆ ತಿರುಗಿತು..

        ಓದು ಮುಗಿಯಲಿ.. ಆಮೇಲೆ ಮುದ್ದು ಗೊಂಬೆ ನನ್ನರಸಿ.. ಎಂದು ಆಗಾಗ ರೇಗಿಸುತ್ತಾನೆ..ಅವನ ನಲ್ಮೆಯ ನುಡಿಗಳೇನೋ ಬಲು ಆನಂದ ತಂದರೂ ಮನೆಯವರ ನೆನಪಾದರೆ ಭಯವಾಗುತ್ತದೆ..ಅಜ್ಜ ,ಅಜ್ಜಿ ,ಅಪ್ಪ ಏನಂತಾರೋ..ಅವನು ಬೇಡ ಬೇರೆ ಮದುವೆ ಮಾಡುತ್ತೇವೆ ಎಂದರೆ ನಾನೇನು ಮಾಡಲಿ.. ಎಂದುಕೊಳ್ಳುತ್ತಿದ್ದಂತೆ ಕಾಲೇಜಿನ ಮುಂದೆ ಬಸ್ ನಿಂತಿತು.. ಬಸ್ಸಿಳಿದ ಮೈತ್ರಿ ತನ್ನ ಕಾಲೇಜಿನತ್ತ ಹೆಜ್ಜೆ ಹಾಕಿದಳು.


          ಮುಂದುವರಿಯುವುದು.....


✍️... ಅನಿತಾ ಜಿ.ಕೆ.ಭಟ್.
28-01-2020.

ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.

Sunday, 26 January 2020

ಜೀವನ ಮೈತ್ರಿ- ಭಾಗ ೧



           ಮೈತ್ರಿ ಕೆಂಪಂಗಿ ತೊಟ್ಟು ಹಣೆಗೊಪ್ಪುವ ಬಿಂದಿಯಿಟ್ಟು ಕೈತುಂಬಾ ಬಳೆತೊಟ್ಟು ತನ್ನ ನೀಳಜಡೆಯ ತುಂಬಾ ಘಮಘಮಿಸುವ ಮಂಗಳೂರು ಮಲ್ಲಿಗೆಯನ್ನು ಮುಡಿದು ಸುಂದರವಾಗಿ ಕಾಣುತ್ತಿದ್ದಳು.ಆಕೆ ಸಹಜವಾಗಿ ಸೌಂದರ್ಯವತಿ. ಮಾತಿನ ಮಲ್ಲಿ.ಎಲ್ಲರನ್ನೂ ತನ್ನ ಮಧುರ ಮಾತುಗಳಿಂದ ಸೆಳೆಯಬಲ್ಲ ಚತುರೆ.ಆದರೂ ಸರಳ ಸ್ವಭಾವದ ಹುಡುಗಿ . ಹಮ್ಮು ಬಿಮ್ಮು ಅವಳ ಬಳಿ ಸುಳಿಯಲು ಆಸ್ಪದ ಕೊಟ್ಟವಳಲ್ಲ.

      ಹಳ್ಳಿಯ ಸುಂದರ ಪರಿಸರದಲ್ಲಿ ಅಡಿಕೆ ತೆಂಗಿನ ತೋಟದ ಮಧ್ಯೆ ಇರುವ ವಿಶಾಲವಾದ ಎರಡಂತಸ್ತಿನ ಮನೆ 'ಶಾಸ್ತ್ರೀ ನಿವಾಸ'ದಲ್ಲಿ ಸಾಂಪ್ರದಾಯಿಕ ವಾತಾವರಣದಲ್ಲಿ ಹುಟ್ಟಿ ಬೆಳೆದವಳು.ಅಜ್ಜ ಶ್ಯಾಮಶಾಸ್ತ್ರಿಗಳು.ಅಜ್ಜಿ ಮಹಾಲಕ್ಷ್ಮೀ ಅಮ್ಮನವರು.ಇವರ ಆರುಜನ ಮಕ್ಕಳಲ್ಲಿ ಇಬ್ಬರು ಗಂಡುಮಕ್ಕಳು.ದೊಡ್ಡವನು ಭಾಸ್ಕರ ಎರಡನೆಯವನು ಶಂಕರ.ಭಾಸ್ಕರ ಶಾಸ್ತ್ರಿ ಬಿಎಸ್ಸಿ ಬಿಎಡ್ ಓದಿ ಸ್ಥಳೀಯ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಶಂಕರ ಶಾಸ್ತ್ರಿ ಎಂಎಸ್ಸಿ ಓದಿ ಬೆಂಗಳೂರಿನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

      ಭಾಸ್ಕರ ಶಾಸ್ತ್ರಿಗಳ ಪತ್ನಿ ಮಂಗಳಾದೇವಿ..ಮಗಳು ಮೈತ್ರಿ.ಮಗ ಮಹೇಶ ಶಾಸ್ತ್ರಿ.ಶಂಕರ ಶಾಸ್ತ್ರಿಗಳ ಪತ್ನಿ ಬೆಂಗಳೂರು ಮೂಲದ ಗಾಯತ್ರೀ ದೇವಿ. ಇಬ್ಬರು ಹೆಣ್ಣು ಮಕ್ಕಳು ವಂದನಾ ಮತ್ತು ಸಂಜನಾ..


      ಶಾಸ್ತ್ರಿಗಳದು ಸಂಪ್ರದಾಯವ ಪಾಲಿಸುವ, ಪೂಜೆ ಪುನಸ್ಕಾರ ಇರುವ ಮನೆತನ.ನಿತ್ಯವೂ ಬೆಳಿಗ್ಗೆ ನಾಲ್ಕು ಗಂಟೆಗೆ ಶ್ಯಾಮಶಾಸ್ತ್ರಿಗಳು ಮತ್ತು ಮಹಾಲಕ್ಷ್ಮೀ ಅಮ್ಮ ಏಳುತ್ತಾರೆ.ಶಾಸ್ತ್ರಿಗಳು ಮಿಂದು ಪೂಜೆಗೆ ಕುಳಿತರೆ ಅಮ್ಮನವರು ಮಿಂದು ಮಡಿಯುಟ್ಟು ಪೂಜೆಗೆಂದು ನೈವೇದ್ಯ ತಯಾರಿಸುತ್ತಾರೆ.ನಂತರ ಲಲಿತ ಸಹಸ್ರನಾಮ ಪಠಣ, ಕುಂಕುಮಾರ್ಚನೆ, ಸ್ತೋತ್ರ ಪಾರಾಯಣ ಎಂದು ತಾವೂ ಭಕ್ತಿ ಶ್ರದ್ಧೆಯಿಂದ ಶಾಸ್ತ್ರಿಗಳಿಗೆ ಜೊತೆಯಾಗುತ್ತಾರೆ.

       ಭಾಸ್ಕರ ರಾಯರು ಕೊಟ್ಟಿಗೆಯಲ್ಲಿದ್ದ ದನಗಳ ಹಾಲುಹಿಂಡಿ,ಹಿಂಡಿ,ಹುಲ್ಲು ನೀಡುವ ಕಾಯಕದಲ್ಲಿ ಮಗ್ನರಾಗುತ್ತಾರೆ.ಮಂಗಳಮ್ಮ ಎಲ್ಲರಿಗೂ ತಿಂಡಿ, ಬುತ್ತಿ ಮಧ್ಯಾಹ್ನದ ಅಡುಗೆಯೆಂದು ಅಡುಗೆ ಕೆಲಸದತ್ತ ಹೊರಳುತ್ತಾರೆ.ನಿತ್ಯವೂ ಇಪ್ಪತ್ತು ಆಳುಗಳಿಗೆ ಕೆಲಸಕೊಟ್ಟು ತಿಂಡಿ ,ಊಟ ಕೊಡುವ ಕರಾವಳಿಯ ಹವ್ಯಕರ ಹೆಮ್ಮೆಯ ಶಾಸ್ತ್ರೀ ಮನೆತನವದು..

      ಅಂದು ಮೈತ್ರಿಯ ಜನ್ಮದಿನ.ಸುಂದರವಾಗಿ ಅಲಂಕರಿಸಿಕೊಂಡು ಹಿರಿಯರಿಗೆ ನಮಸ್ಕರಿಸಿ,ಪೂಜೆಯ ಮಂಗಳಾರತಿಗೆ ತಾನು ಘಂಟಾನಾದ ಮಾಡಿ.. ದೇವರ ತೀರ್ಥ ಪ್ರಸಾದ ಸ್ವೀಕರಿಸಿದಳು.ಹತ್ತಿರದ ನಗರದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಳೆ.ತಮ್ಮ ಮಹೇಶ್ ಪಿಯುಸಿ ವಿಜ್ಞಾನದ ವಿದ್ಯಾರ್ಥಿ..

      ಶಾಸ್ತ್ರೀ ನಿವಾಸ ಸಾಂಪ್ರದಾಯಿಕವಾಗಿ ನಿರ್ಮಿಸಿದ ವಿಶಾಲವಾದ ಮನೆ.ಮನೆಯೆದುರು ಅಚ್ಚುಕಟ್ಟಾದ ಸೆಗಣಿ ಸಾರಿಸಿದ ವಿಶಾಲವಾದ ಅಂಗಳದಲ್ಲಿ ಹರಡಿರುವ ಅಡಿಕೆ.ಒಂದು ಬದಿಯಲ್ಲಿ ಅರಳಿನಿಂತಿರುವ ಗುಲಾಬಿ, ದಾಸವಾಳದ ಹೂಗಳು. ಮನೆಯ ಹಿಂಭಾಗದಲ್ಲಿ ಅಂಬಾಕಾರಗೈಯ್ಯುತ್ತಿರುವ ದನಕರುಗಳು..ಅವುಗಳ ಕೊಟ್ಟಿಗೆ.ಅಂಗಳದಲ್ಲಿ ನಿಂತು ಎತ್ತ ದೃಷ್ಟಿ ಹರಿಸಿದರೂ ಹಚ್ಚಹಸಿರಾಗಿ ಕಂಗೊಳಿಸುವ ಅಡಿಕೆ ,ತೆಂಗು ,ಬಾಳೆಯ ತೋಟವಿದೆ.

       ಭಾಸ್ಕರ ಶಾಸ್ತ್ರಿಗಳು ಶಾಲೆಗೆ ಹೊರಡುವ ಮುನ್ನವೇ ಕೆಲಸದಾಳು ಜಿನ್ನಪ್ಪ ಬರುವುದು ರೂಢಿ.ಅವನಲ್ಲಿ ಆ ದಿನ ಮಾಡಬೇಕಾದ ಕೆಲಸಗಳ ವಿವರವನ್ನು ಒಪ್ಪಿಸಿ ಶಾಲೆಗೆ ತೆರಳುತ್ತಿದ್ದರು.ಶ್ಯಾಮಶಾಸ್ತ್ರಿಗಳು ವಯಸ್ಸಾಗುತ್ತಿದ್ದಂತೆ ತೋಟದ ಜವಾಬ್ದಾರಿಯನ್ನು ಮಗನಿಗೆ ವಹಿಸಿದ್ದರು.ಏನಾದರೂ ಅಗತ್ಯ ಬಿದ್ದರೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.


       ಮಹಾಲಕ್ಷ್ಮಿ ಅಮ್ಮ ಮತ್ತು ಸೊಸೆ ಮಂಗಳಾದೇವಿ ಇಬ್ಬರೂ ಅನ್ಯೋನ್ಯತೆಯಿಂದ ಮನೆಯನ್ನು ನಿಭಾಯಿಸುತ್ತಿದ್ದರು.ಎಲ್ಲರೂ ಗೌರವಿಸುವಂತಹ ಅತ್ತೆಸೊಸೆಯಾಗಿದ್ದರು.ಅತ್ತಿಗೆಯರ ಪಾಲಿಗೆ ಮಂಗಳಮ್ಮ ಸ್ನೇಹಿತೆಯಾಗಿದ್ದಳು.ಶಂಕರನು ವರುಷಕ್ಕೆರಡು ಬಾರಿ ಊರಿಗೆ ಕುಟುಂಬ ಸಮೇತವಾಗಿ ಬಂದು ಎಲ್ಲರೊಂದಿಗೆ ಬೆರೆತು ಹಳ್ಳಿಯ ಸೊಗಡನ್ನು ಸವಿದು ಬೆಂಗಳೂರಿಗೆ ವಾಪಾಸಾಗುತ್ತಿದ್ದ.

"ಅಮ್ಮಾ.. ತಿಂಡಿ ಆಯ್ತಾ..ಬಸ್ಸಿಗೆ ತಡವಾಗುತ್ತಿದೆ" ಎಂದಳು ಮೈತ್ರಿ.."ಬಾ..ಮಗಳೇ..ಬಟ್ಟಲು ಲೋಟ ಇಟ್ಟುಕೊಂಡು ಕುಳಿತುಕೋ..ಚಟ್ನಿಗೊಂದು ಒಗ್ಗರಣೆ ಹಾಕಿಬಿಟ್ರೆ ಮುಗೀತು.."ಎಂದರು ತಾಯಿ ಮಂಗಳಮ್ಮ.. ಮೈತ್ರಿ ಎಲ್ಲರಿಗೂ ತಿಂಡಿಗೆ ಪಂಕ್ತಿ ಹಾಕಿದಳು..ಅಜ್ಜ ಅಜ್ಜಿ ಅಪ್ಪನಿಗೆ ಬಾಳೆಎಲೆ ಇಟ್ಟು ತನಗೂ ತಮ್ಮನಿಗೂ ಬಟ್ಟಲು ಇಟ್ಟಳು.ಅಲ್ಲಲ್ಲಿ ಇದ್ದ ಲೋಟಗಳನ್ನು ಒಟ್ಟುಗೂಡಿಸಿ ತಂದು ಹುಡುಕಿ ಅಜ್ಜನಿಗೆ ಅಜ್ಜನದೇ ದೊಡ್ಡ ಲೋಟವನ್ನು ಇಟ್ಟಳು... ಅಷ್ಟರಲ್ಲಿ ಬಂದ ತಮ್ಮ ಮಹೇಶ..."ಅಕ್ಕ ಇದು ಚೀಟಿಂಗ್.... ಅಜ್ಜನಿಗೆ ಅವರ ಲೋಟವೇ ಇಟ್ಟಿದ್ದೀಯಾ ...ನನಗೂ ನನ್ನದೇ ಲೋಟ ಇಡು...ಈ ಲೋಟ ನನಗೆ ಬೇಡ.."ಎಂದ..
"ನಿನಗೆ ಬೇಕಾದ್ದು ಇಟ್ಟುಕೋ..ನೀನೇ..ನಾನೇ ಏಕೆ ಇಡಬೇಕು... ಹುಡುಗರು ಕೆಲಸ ಮಾಡಬಾರದು ಅಂತ ರೂಲ್ಸ್ ಇದೆಯಾ...ನಂಗೂ ಕಾಲೇಜಿಗೆ ಲೇಟಾಗ್ತಿದೆ..."ಎಂದು ತಮ್ಮನನ್ನು ತರಾಟೆಗೆ ತೆಗೆದುಕೊಂಡಳು.
"ಹಾಗಿದ್ರೆ ನಿನ್ನ ಲೋಟವನ್ನೇ ಹುಡುಕಿ ಅದರಲ್ಲೇ ಇವತ್ತು ಕಾಫಿ ಕುಡೀತೀನಿ ಅಕ್ಕಾ..ನೋಡ್ತಾಯಿರು..."ಎಂದು ಕೀಟಲೆ ಮಾಡಿದ ಮಹೇಶ್..

"ಅಮ್ಮಾ...ನೋಡಿಲ್ಲಿ..ಮಹೇಶನ ಕೆಲಸ..."ಎಂದು ತನ್ನ ಲೋಟವನ್ನು ಇಟ್ಟುಕೊಂಡು ಕುಳಿತ ತಮ್ಮನ ಬಗ್ಗೆ ದೂರುಕೊಟ್ಟಳು ಮೈತ್ರಿ..
"ಏನು ನಿಮ್ಮದು..ಬೆಳಗ್ಗೇನೇ..ಅಕ್ಕಂದು ನೀನು ತೊಗೊಂಡು ಆಕೆಯನ್ನು ಗೋಳುಹೊಯ್ಕೋಬೇಡ ಮಹೇಶ..."
"ಗೋಳಂತೆ.. ಗೋಳು...ಬೇಕಂತಲೇ ನನ್ನ ಲೋಟ ಅಜ್ಜಿಗಿಟ್ಟಿದ್ದಾಳೆ ಮಳ್ಳಿ..."
"ಹಾಗೆಲ್ಲ ಅನ್ಬಾರ್ದು.. ಮಹೇಶ್.. ಅಕ್ಕನನ್ನು.. ಇವತ್ತು ಅವಳ ಹುಟ್ಟುಹಬ್ಬ ಬೇರೆ..."

"ಹ್ಯಾಪಿ ಬರ್ತ್ ಡೇ ಅಕ್ಕೋ... ಏನು ಯಾವತ್ತೂ ಮಾಡಿರದ ಅಲಂಕಾರ ಇವತ್ತು.. ಮದುಮಗಳನ್ನು ಮೀರಿಸುವಂತಿದೆ ..."ಅಕ್ಕನನ್ನು ಯಾವಾಗಲೂ ಹೀಗೇ ರೇಗಿಸುವುದು ಮಹೇಶನ ಅಭ್ಯಾಸ..
"ಅಮ್ಮಾ... ಇವನನ್ನು ಸುಮ್ಮನಿರಲು ಹೇಳು..ಏನೇನೋ ಅಂತಿದಾನೆ.."
"ಹೇಳಬಾರದ್ದು ನಾನೇನಂದೆ...ಇರೋದನ್ನೇ ಹೇಳಿದ್ದು...ಇಂಡೈರೆಕ್ಟ್ ಆಗಿ ಬಹಳ ಚಂದ ಕಾಣ್ತೀಯಾ ಅಂತ ಹೇಳಿದ್ದು.....ಓಹೋ.. ಸ್ವಲ್ಪ ಟ್ಯೂಬ್ ಲೈಟ್ ಅಲ್ವಾ.." ಅಂತ ಹೇಳಿ ಮುಗಿಸುವಷ್ಟರಲ್ಲಿ ಅಜ್ಜ ಬಂದಾಗ ಇಬ್ಬರೂ ಗಂಭೀರವಾಗಿ ಕುಳಿತರು..

     ಮಂಗಳಮ್ಮ ಎಲ್ಲರಿಗೂ ತೆಂಗಿನಕಾಯಿ ಚಟ್ನಿ,ತೆಳ್ಳವು ದೋಸೆ(ನೀರ್ದೋಸೆ) ಬಡಿಸಿದರು.ಬೆಲ್ಲಕಾಯಿಸುಳಿ ಮಾಡಿದ್ದನ್ನು ಒಮ್ಮೆ ಎಲ್ಲರಿಗೂ ಬಡಿಸಿದರು ಮಂಗಳಮ್ಮ..ಇನ್ನೂ ಸ್ವಲ್ಪ ಬಡಿಸು ಎಂದು ಸೊಸೆಯಲ್ಲಿ ಹೇಳಿ ಸ್ವಲ್ಪ ಹೆಚ್ಚೇ ಬಡಿಸಿಕೊಂಡರು ಶ್ಯಾಮಶಾಸ್ತ್ರಿಗಳು.ಮಾವನವರಿಗೆ ದೊಡ್ಡ ಲೋಟದಲ್ಲಿ ಸ್ವಲ್ಪವೇ ಡಿಕಾಕ್ಷನ್ ಬೆರೆಸಿ ಹಾಲು ಜಾಸ್ತಿ ಹಾಕಿ ಲೈಟ್ ಕಾಫಿ ಕೊಟ್ಟರು ಮಂಗಳಾ..

ಮೊಮ್ಮಗಳತ್ತ ಒಮ್ಮೆ ನೋಟಬೀರಿದ ಅಜ್ಜ.."ಯಾವಾಗಮ್ಮಾ.. ಪರೀಕ್ಷೆ..."ಎಂದು ಕೇಳಿದರು...
"ಮುಂದಿನ ತಿಂಗಳು ಇಂಟರ್ನಲ್ ಪರೀಕ್ಷೆಯಿದೆ ಅಜ್ಜಾ.."ಎಂದು ಹೇಳಿ ಬೇಗನೆ ತಿಂಡಿ ತಿಂದು ಎದ್ದಳು..
ಅಷ್ಟರಲ್ಲಿ ಅಮ್ಮ ಇನ್ನೆರಡು ಬಿಸಿಬಿಸಿ ದೋಸೆ ತಂದು.."ಇಷ್ಟು ಬೇಗ ಎದ್ದು ಬಿಟ್ಟೆಯಾ.. ಇನ್ನೆರಡು ದೋಸೆ ತಿಂದು ಹೋದರೆ ಸಾಕಲ್ಲ.. ಏನು ಮಕ್ಕಳೋ ಏನೋ..ಓದು ಓದು..ಅಂತ ಹೊಟ್ಟೆಗೂ ಸರಿ ಹಾಕ್ಕೊಳಲ್ಲ.."
"ಸರಿ..ಅವಳ ಪಾಲಿಂದೆಲ್ಲ ನನಗೇ ಬಡಿಸಿಬಿಡಿ.." ಎನ್ನುತ್ತಾ ದೋಸೆ ಹಾಕಿಸಿಕೊಂಡ ಮಹೇಶ.. ಮೈತ್ರಿ ಅವಸರವಸರವಾಗಿ ಕೈತೊಳೆದು, ಬಟ್ಟಲು ಲೋಟವನ್ನು ತೊಳೆದು ಕವಚಿಟ್ಟು ಬಂದಳು.. ಒಂದು ಬಾಟಲ್ ಕಾದಾರಿದ ನೀರು ತುಂಬಿಸಿಕೊಂಡ ಮೈತ್ರಿ ಅಲ್ಲಿಂದ ಹೊರಡುತ್ತಿದ್ದಂತೆ ಅಜ್ಜ ಕಾಫಿಕುಡಿದು ಏಳುವ ಪ್ರಯತ್ನ ಮಾಡುತ್ತಿದ್ದರು.ಕಾಲಗಂಟು ನೋವಿನಿಂದ ಏಳಲು ಕಷ್ಟಪಡುತ್ತಿದ್ದ ಅಜ್ಜನಿಗೆ ಕೈನೀಡಿ ಮೆಲ್ಲನೆ ಎಬ್ಬಿಸಿ ಗೋಡೆಹಿಡಿದು ಅಜ್ಜ ನಿಂತು.."ನೀನಿನ್ನು ಹೋಗು.‌ನಾನು ಹೋಗಿ ಕೈತೊಳೆಯಬಲ್ಲೆ"ಎಂದಾಗ ಹೊರನಡೆದಳು.. ಅಷ್ಟರಲ್ಲಿ ಅಪ್ಪ ಬಂದು ಮಗಳ ಕೈಯಲ್ಲಿ ಖರ್ಚಿಗೆಂದು ದುಡ್ಡು ಕೊಟ್ಟರು.ದುಡ್ಡು ತೆಗೆದುಕೊಂಡು ಮೈತ್ರಿ ತಮ್ಮನ ಕಡೆಗೊಂದು ನಸುನಗೆ ಬೀರಿದಳು..
"ತೆಗೆದುಕೋ..ತೆಗೆದುಕೋ...ಅಪ್ಪನ ಕೈಯಿಂದ ದುಡ್ಡು...ನಾನೂ ಕಲಿತು ಒಳ್ಳೆ ನೌಕರಿ ಸೇರಿ ಸಂಪಾದನೆ ಮಾಡ್ತೀನಿ ನೋಡ್ತಾಯಿರು.."ಎನ್ನುವಂತೆ ಕಣ್ಣಲ್ಲೇ ಅಕ್ಕನನ್ನು ಗುರಾಯಿಸಿದ ತಮ್ಮ.ದೊಡ್ಡಕ್ಕೆ ಹೇಳಲು ಧೈರ್ಯವಿಲ್ಲ ಅಜ್ಜ, ಅಪ್ಪ ಅಲ್ಲೇ ಇದ್ದಾರೆ.... ಅಕ್ಕನಿಗೆ ಧಾರಾಳವಾಗಿ ದುಡ್ಡು ಕೊಡುವ ಅಪ್ಪ ನನಗೆ ಮಾತ್ರ ಲೆಕ್ಕಾಚಾರದ್ದು ಕೊಡುವುದು ಮತ್ತೆ ಆಗಾಗ ದಿನದ ಹಣದ ಖರ್ಚಿನ ಲೆಕ್ಕಾಚಾರವನ್ನು ತಂದು ತೋರಿಸಲು ಹೇಳುವುದು ಎಂದು ನಸುಗೋಪ ಮಹೇಶನಿಗೆ...

         ಭಾಸ್ಕರ ರಾಯರು ತನ್ನ ಇಬ್ಬರು ಮಕ್ಕಳಿಗೂ  ದುಡ್ಡು ತೆಗೆದುಕೊಂಡ ವಿವರ,ಯಾವುದಕ್ಕೆ ಎಷ್ಟು ಖರ್ಚು,ವಾರದ ಉಳಿಕೆ ಎಷ್ಟು ಎಂದು ಬರೆಯಲು ಒಂದು ಡೈರಿ ನೀಡಿದ್ದರು.ಆಗಾಗ ನೋಡುವಾಗ ಮೈತ್ರಿಯ ಲೆಕ್ಕ ಯಾವಾಗಲೂ ಸರಿಯಾಗಿ ಇರುತ್ತಿತ್ತು..ಮಹೇಶನ ಲೆಕ್ಕ ಮಾತ್ರ ಅನುಮಾನ ಬರುವಂತೆ ಇರುತ್ತಿತ್ತು..ಎಲ್ಲದರಲ್ಲೂ ಸ್ವಲ್ಪ ಹೆಚ್ಚು ಹಣ ಬರೆದು ತಂದೆಯಿಂದ ಹೆಚ್ಚು ಕೇಳುತ್ತಿದ್ದ..ಅಕ್ಕನಲ್ಲೂ ಹಾಗೇ ಮಾಡೇ..ಎನ್ನುತ್ತಿದ್ದ.. ವ್ಯವಹಾರದಲ್ಲಿ ಅನುಭವವಿರುವ ತಂದೆಗೆ ಇದು ಗೊತ್ತಾಗದೇ ಇದ್ದೀತೇ...??  ಹಾಗಾಗಿ ಮಹೇಶನಿಗೆ ದುಡ್ಡು ಕೊಡುವಾಗ ಸ್ವಲ್ಪ ಕೈ ಗಿಡ್ಡ ಮಾಡುತ್ತಿದ್ದರು ಅಪ್ಪ.. ಇದು ಅಕ್ಕನ ಮೇಲೆ ಅವನಿಗೆ ಸ್ವಲ್ಪ ಹೊಟ್ಟೆಯುರಿ ತರಿಸಿದೆ...ಮಕ್ಕಳು ದಾರಿತಪ್ಪಬಾರದು ಎಂದು ಭಾಸ್ಕರ ರಾಯರ ಉದ್ದೇಶ..



    ಮುಂದುವರಿಯುವುದು....


✍️... ಅನಿತಾ ಜಿ.ಕೆ.ಭಟ್.
27-01-2020.

ನಮಸ್ತೇ...

       ನಿಮಗೆ ಬೇರೆ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.




ನಮ್ಮಯ ಶಾಲೆಯ ಗಣರಾಜ್ಯೋತ್ಸವ


ಸಂಭ್ರಮದ ಗಣರಾಜ್ಯೋತ್ಸವ
ಚಿಣ್ಣರಿಗಿಂದು ಹಬ್ಬ
ಧ್ವಜಾರೋಹಣ ಗೈದವರು
ಊರಿನ ಹಿರಿಯ ಸುಬ್ಬ||

ಸುದೀರ್ಘ ಸಂವಿಧಾನ
ಭಾರತಕೆ ಮುಕುಟ
ನಾಟಕ ಸಾರಿದೆ ಸನಾತನ
ಸಂಸ್ಕ್ರೃತಿಯ ಕಿರೀಟ||

ಜಾತ್ಯಾತೀತತೆ ಪ್ರಜಾಪ್ರಭುತ್ವ
ಐಕ್ಯತೆಗೆ ನಾವು ಬದ್ಧ
ಸಂವಿಧಾನದ ಮಹತಿಯ
ಭಾಷಣಗೈದಿಹ ಸಿದ್ಧ||

ಗುರುಗಳಿಂದ ದೇಶಕಾಗಿ
ಹೋರಾಡಿದ ಗಣ್ಯರ ಗುಣಗಾನ
ಗಡಿಕಾಯುವ ಯೋಧರಿಗೆ
ನಮಿಸುವ ಸುದಿನ||

ಭಾರತೀಯರೆಲ್ಲ ಸಮಷ್ಟಿ
ಒಕ್ಕೊರಲಿನಲಿ ಹಾಡಿ
ನೆಲದಲಿ ನಮ್ಮಯ ಪುಣ್ಯಸೃಷ್ಟಿ
ಬಾಗುವೆವವಳ ಪಾದದಡಿ||

ಚಿಣ್ಣರಿಗೆಲ್ಲ ಸಿಹಿ ಹಂಚಿ
ದೇಶಭಕ್ತಿಯ ಮೂಡಿಸುತ
ಬಾಲರಲಿ ತುಂಬಿಕೊಂಡಿತು
ಕಣಕಣದಲ್ಲೂ ಭಾರತೀಯತೆ||


✍️... ಅನಿತಾ ಜಿ.ಕೆ.ಭಟ್.
26-01-2020.

Thursday, 23 January 2020

ಬದುಕಿನ ಪಥ ಬದಲಾಯಿಸಿದ ಮಹಿಳೆ...




        ಹೆಣ್ಣು ಕುಟುಂಬದ ಕಣ್ಣು.ಅಮ್ಮ, ಅಕ್ಕ,ತಂಗಿ ಅತ್ತೆ, ಅಜ್ಜಿ, ಪತ್ನಿ ,ಸ್ನೇಹಿತೆ..ಹೀಗೆ ಹಲವಾರು ಮಹತ್ವಪೂರ್ಣ ಸ್ಥಾನಗಳಲ್ಲಿ ನಮಗೆ ಬೆನ್ನೆಲುಬಾಗಿ ನಿಲ್ಲುವವಳು ಮಮತಾಮಯಿ ಹೆಣ್ಣು.ಸ್ತ್ರೀ ಎಂದರೆ ತಾನು ಉರಿದು ಜಗವನೆಲ್ಲ ಬೆಳಗುವ ಬತ್ತಿಯಂತೆ.ತಾನು ಸ್ವಾರ್ಥಕ್ಕಾಗಿ ಹಂಬಲಿಸದೆ ಕುಟುಂಬದ ಹಿತಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಡುವವಳು.ಪುಟ್ಟ ಮಗು ಮೊದಲು ನುಡಿಯುವುದು ಅಮ್ಮಾ..ಎನ್ನುವ ಪದವನ್ನು.ಬಿದ್ದಾಗ ಮೊದಲು ನೆನಪಾಗುವವಳು ಅಮ್ಮ..ಕಂಬನಿಗೆರೆದಾಗ ಮೊದಲು ಬಂದು ಎದೆಗಾನಿಸುವವಳೂ ಹೆಣ್ಣು. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣದ ದೃಷ್ಟಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಜನವರಿ 24 ರಂದು ಆಚರಿಸಲಾಗುತ್ತದೆ.
ಹೆಣ್ಣೊಬ್ಬಳು ತಾನು ಕಲಿತರೆ ತನ್ನ ಸುತ್ತಮುತ್ತಲಿನ ಜನರನ್ನು ಸುಶಿಕ್ಷಿತರನ್ನಾಗಿಸುತ್ತಾಳೆ.ಸನ್ಮಾರ್ಗದಲ್ಲಿ ನಡೆಸುತ್ತಾಳೆ.

       ಪ್ರತಿಯೊಬ್ಬರ ಜೀವನವು ರೂಪುಗೊಳ್ಳುವಲ್ಲಿ ಹೆಣ್ಣುಮಕ್ಕಳ ಪಾತ್ರ ಅಗಾಧವಾಗಿದೆ.ನನ್ನ ಜೀವನದಲ್ಲೂ ಅಮ್ಮ,ದೊಡ್ಡಮ್ಮ,ಅತ್ತೆ,ಅಕ್ಕ ತಂಗಿ ,ಅತ್ತಿಗೆ ಹೀಗೆ ಎಲ್ಲರೂ ಒಂದಲ್ಲೊಂದು ಬದಲಾವಣೆಗೆ ಕಾರಣರಾಗಿದ್ದಾರೆ. ಅದು ನಮ್ಮ ಯೋಚನಾ ಶೈಲಿಯ ಬದಲಾವಣೆ ಆಗಿರಬಹುದು,ನಮ್ಮ ನಡವಳಿಕೆಯಲ್ಲಿ ,ಹವ್ಯಾಸದಲ್ಲಿ, ಜೀವನವನ್ನು ಧನಾತ್ಮಕವಾಗಿ ನೋಡುವಲ್ಲಿ ಆಗಿರುವಂತಹ ಹೊಸ ರೂಢಿಗಳೇ ಆಗಿರಬಹುದು.. ಎಲ್ಲದರಲ್ಲೂ ಸ್ತ್ರೀ ಶಕ್ತಿ ಯ ಪಾತ್ರ ಮಹತ್ವದ್ದು.


        ಒಂದೂವರೆ ವರ್ಷಗಳ ಹಿಂದೆ ಸ್ಮಾರ್ಟ್ ಫೋನ್ ಬಂದ ನಂತರ ಪುಟ್ಟ ಕವನಗಳನ್ನು ನನ್ನಂಗಳದ ಗಿಡಗಳ ಚಿತ್ರಕ್ಕೆ ತಕ್ಕಂತೆ ಬರೆದು ಎರಡು ಮುಖಪುಟದ ಗುಂಪುಗಳಲ್ಲಿ ಪ್ರಕಟಿಸುತ್ತಿದ್ದೆ.ಇದನ್ನು ಗಮನಿಸಿದ ನಿತ್ಯವೂ ತಪ್ಪದೇ ನನ್ನ ಬರಹಕ್ಕೆ ಪ್ರತಿಕ್ರಿಯಿಸುತ್ತಿದ್ದ ಒಬ್ಬ ನಿರ್ವಾಹಕಿ ನಮ್ಮ ಬಳಗದಲ್ಲಿ ಬರುವ ವಾರದ ಕವನ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು.ನಾನು ಮೊದಲೇ ಸಂಕೋಚ ಸ್ವಭಾವದವಳು.ಇದೆಲ್ಲ ನನಗೇಕೆ ಇನ್ನು ಎಂದು ಸುಮ್ಮನಿದ್ದೆ..ಒಂದಲ್ಲ ಎರಡಲ್ಲ.. ನಾಲ್ಕನೇ ಬಾರಿಗೆ ಅವರು "ಅನಿತಾ..ನಿನಗಾಗುತ್ತೆ.. ನೀನು ಬರಿ.."ಅಂದಾಗ ಅವರ ಮಾತಿಗೆ ಬೆಲೆಕೊಡಬೇಕೆಂದು ಅವರು ಕೊಟ್ಟಿದ್ದ ಗೋಮಾತೆಯ ಹಾಲುಹಿಂಡುವ ದೃಶ್ಯವೊಂದಕ್ಕೆ ಮೊದಲ ಕವನವನ್ನು ಬರೆದೆ.ಮೊದಲ ಬಹುಮಾನವೂ ಬಂದಿತು.


       ಅಂದಿನಿಂದ ಕವನ ರಚನೆ ಅಧಿಕೃತವಾಗಿ ಆರಂಭವಾಯಿತು.ಹೀಗೆ ಲೇಖನ , ಕಾಲ್ಪನಿಕ ಕಥೆಗಳನ್ನು ಕೂಡ ಬರೆಯುವಂತೆ ಹುರಿದುಂಬಿಸಿದರು.ಇಂದು ಹಲವಾರು ಕವನಗಳು, ಕಥೆ,ನೀಳ್ಗತೆ ,ಲೇಖನಗಳು ನನ್ನ ಲೇಖನಿಯಿಂದ ಮೂಡಿಬರುತ್ತಿದ್ದರೆ ಅದಕ್ಕೆ ನನಗೆ ನಿರಂತರ ಪ್ರೋತ್ಸಾಹ ನೀಡಿದ ಶ್ರೀಮತಿ ಅನ್ನಪೂರ್ಣ ಹೆಗಡೆ ಅವರ ಉತ್ತೇಜನವೇ ಕಾರಣ.ದೂರದ ಅಮೇರಿಕಾದಲ್ಲಿದ್ದು ಕನ್ನಡಕ್ಕಾಗಿ ತುಡಿಯುವ ಮನಸ್ಸುಳ್ಳ ಉತ್ತರಕನ್ನಡ ಮೂಲದ ಮಹಿಳೆ ಅನ್ನಪೂರ್ಣ ಹೆಗಡೆ.'ಹವಿಸವಿಬಳಗ 'ಎಂಬ ಮುಖಪುಟ ಬಳಗವನ್ನು ಮುನ್ನಡೆಸುತ್ತಿರುವ ಒಬ್ಬರು ನಿರ್ವಾಹಕಿ .ನನ್ನಂತೆ ಹಲವಾರು ಪ್ರತಿಭೆಗಳನ್ನು ಗುರುತಿಸಿ ನಿರಂತರ ಬೆಂಬಲಿಸುತ್ತಿರುವ ಅವರು ಇದಕ್ಕಾಗಿಯೇ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟಿದ್ದಾರೆ.ಹಮ್ಮುಬಿಮ್ಮಿಲ್ಲದ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಬಳಗದಲ್ಲಿ ಅಮ್ಮ,ಅನ್ನಕ್ಕಾ,ಅನ್ನತ್ತೆ,ಅಷ್ಟೇ ಏಕೆ ಒಂದು ಹೆಜ್ಜೆ ಮುಂದೆ ಹೋಗಿ ಹಾಯ್ ಯ್ಯಾನಿ ಅಂದರೂ ನಗುನಗುತ್ತಾ ಪ್ರತಿಕ್ರಿಯಿಸುವ ಸರಳ ವ್ಯಕ್ತಿತ್ವ ಅವರದು.ಇದುವರೆಗೆ ಬಳಗದಲ್ಲಿ ನಾನು ಬರೆದು ಪ್ರಕಟಿಸಿದ ಒಂದೇ ಒಂದು ಬರಹ ಕೂಡ ಅವರ ಪ್ರತಿಕ್ರಿಯೆ ಇಲ್ಲದ್ದು ಸಿಗಲಾರದು ಎಂದರೆ ಅವರ ಕಾರ್ಯತತ್ಪರತೆ ,ಪ್ರೋತ್ಸಾಹಿಸುವ ಹುಮ್ಮಸ್ಸು ಎಷ್ಟರಮಟ್ಟಿಗೆ ಇದೆ ಅನ್ನುವುದಕ್ಕೆ ಒಂದು ನಿದರ್ಶನ.ಇಂತಹ ಮೇರು ವ್ಯಕ್ತಿತ್ವದ ಮಹಿಳೆಯ ಪ್ರೋತ್ಸಾಹದಿಂದ ನಾನು ಸಾಹಿತ್ಯ ಪ್ರಪಂಚಕ್ಕೆ ಕಾಲಿಡಲು ಸಾಧ್ಯವಾಯಿತು ಎಂಬುದು ನನಗೆ ಹೆಮ್ಮೆಯ ಸಂಗತಿ.


    ಹೆಣ್ಣು ತನ್ನ ತ್ಯಾಗಕ್ಕೆ ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ.ಎಲ್ಲರ ಪ್ರೀತಿ, ವಿಶ್ವಾಸವೇ ನನಗೆ ಸಾಕು ಎಂದು ಬಯಸುವವಳು. ಹೆಣ್ಣು ಮಕ್ಕಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.ಹೆಣ್ಣು ಭ್ರೂಣಹತ್ಯೆ ತಡೆದು ಅವಳ ಶಿಕ್ಷಣಕ್ಕೆ ಆದ್ಯತೆಯನ್ನು ನೀಡಬೇಕು.ಹೆಣ್ಣುಮಗು ಮತ್ತು ಗಂಡು ಮಗು ಎಂಬ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ನಾವು ಮಾಡಬೇಕು.ಹೆಣ್ಣುಮಗುವನ್ನು ಗೌರವಿಸೋಣ.. ಆಕೆಯನ್ನು ಸಂರಕ್ಷಿಸೋಣ.. ಬಾಲ್ಯವಿವಾಹ ತಡೆಗಟ್ಟೋಣ..ಅರಳುತ್ತಿರುವ ಹೂವನ್ನು ಚಿವುಟದಂತೆ ,ಹೊಸಕದಂತೆ ಕಾಪಾಡಲು ಒಗ್ಗಟ್ಟಾಗಿ ನಿಲ್ಲೋಣ...

  ಹುಟ್ಟಿದ ಹೆಣ್ಣು ಮಗು
ಭಾರವಲ್ಲ ಎಂದಿಗೂ...

ಮಗನಂತೆ ಅವಳನ್ನು ಬೆಂಬಲಿಸಿ
ದೀಪದಂತೆ ಬೆಳಗುವವಳ ಹರಸಿ...

ವೃದ್ಧಾಪ್ಯದಲ್ಲಿ ಜೊತೆಯಾಗುವಳು
ಕಂಬನಿಯೊರೆಸಿ ಸಂತೈಸುವಳು...

ಅವಳು ಮಮತಾಮಯಿ...
ಅವಳು ಕರುಣಾಮಯಿ..
ಅವಳು ಜ್ಯೋತಿರ್ಮಯಿ...
ಅವಳು ಆದಿಮಾಯೆ ಜಗನ್ಮಯಿ...


✍️... ಅನಿತಾ ಜಿ.ಕೆ.ಭಟ್.
24-01-2020.




ಸಂಕ್ರಾಂತಿ ಸಂಪ್ರೀತಿ




ಹಿಗ್ಗಿ ಹಿಗ್ಗಿ ನಲಿವ ಸುಗ್ಗಿ
ಬಂದಿತೀಗ ಭರದಿ
ತೆನೆಗಳೀಗ ಭುವಿಗೆ ಬಾಗಿ
ರವಿಯ ಭ್ರಮಣೆ ನಭದಿ...||೧||

ದಕ್ಷಿಣದಿಂ ಉತ್ತರಕೆ
ವಲಸೆಗೈದ ದಿನಕರ
‌ಹೇಮಂತನ ಮಾಗಿಚಳಿಗೆ
ಧನು ಕಳೆದು ಮಕರ...||೨||

ಎಳ್ಳು ಬೆಲ್ಲ ಎಲಚಿಯೆಲ್ಲ
ಹಂಚಿ ಸಿಹಿಯ ಸವಿದು
ಒಳ್ಳೆ ನುಡಿ ಸಮರಸತೆಯ
ಸದ್ಭಾವವು ಮೈತಳೆದು....||೩||

ದವಸಧಾನ್ಯ ರಾಶಿಕಂಡು
ರೈತನಮೊಗದಿ ಕಾಂತಿ
ಮನೆಮನದಿ ಸಂಪ್ರೀತಿಯ
ತುಂಬುವ ಹಬ್ಬ ಸಂಕ್ರಾಂತಿ...||೪||

ಹೊಸಬಟ್ಟೆ ಧರಿಸಿ ಹೊಸ
ಅಕ್ಕಿಯಿಂದ ಹುಗ್ಗಿ
ಹರೆಯ ವೃದ್ಧ ಭೇದವಿರದೆ
ಸಂಕ್ರಾಂತಿಯೆಂದು ಹಿಗ್ಗಿ...||೫||


✍️... ಅನಿತಾ ಜಿ.ಕೆ.ಭಟ್.
16-01-2020.

ಒಲವೇ...



ನಿನ್ನ ಬೆಚ್ಚನೆಯ ಅಪ್ಪುಗೆಯಲ್ಲಿ
ನೋವನೆಲ್ಲ ಮರೆಸುವ ಶಕ್ತಿಯಿದೆ...

ನಿನ್ನೊಂದು ನಗುವಿನಲ್ಲಿ  ಮನವು
ಅರಳಿ ಕಂಪು ಬಿರಿಯುತಿದೆ...

ನಿನ್ನೊಂದು ನೋಟವು ಜನ್ಮಜನ್ಮದ
ಅನುಬಂಧದಂತೆ ಭಾಸವಾಗುತಿದೆ...

ನೀ ನನಗೆ ಸಿಕ್ಕ ಅಪರೂಪದ
ನಿಧಿಯೆಂದು ಮನವು ಸಾರುತಿದೆ...

ಮತ್ತೆ ಮತ್ತೆ ನಿನ್ನ ಬರುವಿಕೆಗೆ
ಕಾದಿರುವೆ ನಾನಿಲ್ಲಿ ನಿನ್ನ ರಾಧೆ...

✍️... ಅನಿತಾ ಜಿ.ಕೆ.ಭಟ್.
23-01-2020.

Wednesday, 22 January 2020

ಕೈಬರಹ ವ್ಯಕ್ತಿತ್ವದ ಕೈಗನ್ನಡಿ





       "ಮಗಳೇ...ಅಕ್ಷರ ದುಂಡಗೆ ಬರೆದರೆ ಬೆಲ್ಲದುಂಡೆ ಕೊಡುವೆ "ಎಂದು ಅಮ್ಮ  ಪುಸಲಾಯಿಸಿ ಬರೆಯಿಸುತ್ತಿದ್ದರು ನನ್ನ ಬಾಲ್ಯದ ಅಕ್ಷರಾಭ್ಯಾಸದ ಆರಂಭದ ದಿನಗಳಲ್ಲಿ.ಸಿಹಿಯ ಆಸೆಗೆ ಮನಸ್ಸುಕೊಟ್ಟು ಬರೆಯಲು ಆರಂಭಿಸುತ್ತಿದ್ದೆವು.ನಂತರ ಶಾಲೆಯಲ್ಲಿ ಕಾಪಿ ಬರೆಯಲು ಹೇಳಿದರೆ ನಮಗೇ ಜಾಸ್ತಿ ಅಂಕ ಸಿಗಬೇಕು ಎಂಬ ಸಹಪಾಠಿಗಳ ನಡುವಿನ ಸ್ಪರ್ಧಾತ್ಮಕ ದೃಷ್ಟಿಕೋನ ಸುಂದರ ಅಕ್ಷರ ಮೂಡಿಬರಲು ಕಾರಣವಾಯಿತು.ಕೈಯಲ್ಲಿ ಕಡ್ಡಿ ಹಿಡಿದು ಅ ಆ ಇ ಈ ಅಕ್ಷರಗಳ ಮೇಲೆ ಅದೆಷ್ಟು ಬಾರಿ ಕೈ ತಿರುವಿದ್ದೇವೋ ಏನೋ..ಅವೆಲ್ಲ ಕೈಬರಹದಲ್ಲಿ ಶಿಸ್ತು ಅಚ್ಚುಕಟ್ಟುತನ ಮೂಡುವುದಕ್ಕೆ ಬಹಳ ಮುಖ್ಯ.


    ಜನವರಿ 23 ವಿಶ್ವ ಕೈಬರಹ ದಿನ.ಬರೆಯುವ ಸಾಮಗ್ರಿಗಳ ಉತ್ಪಾದಕರ ಸಂಘದವರು ಆರಂಭಿಸಿದ ಆಚರಣೆಯಿದು.ಬರವಣಿಗೆಯು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಮನೋದೈಹಿಕ ಚೈತನ್ಯವನ್ನು ತುಂಬುತ್ತದೆ.ಋಣಾತ್ಮಕ ಯೋಚನೆಗಳಿಂದ ನಮ್ಮನ್ನು ದೂರವಿಟ್ಟು ಧನಾತ್ಮಕ ಚಿಂತನೆಯನ್ನು, ಪ್ರೇರಣೆಯನ್ನು ನಮ್ಮಲ್ಲಿ ಮೂಡಿಸುತ್ತದೆ.

    ನಮ್ಮ ಕೈಬರಹದಿಂದಲೇ ವ್ಯಕ್ತಿತ್ವವನ್ನು ಅಳೆಯಬಹುದಂತೆ.ಕೆಲವರದು ದುಂಡನೆಯ ಅಕ್ಷರವಾದರೆ ಇನ್ನು ಕೆಲವರದು ಒಂದೆಡೆಗೆ ಬಲ ಅಥವಾ ಎಡಕ್ಕೆ ವಾಲಿದ ಅಕ್ಷರ..ಕೆಲವರ ಕೈಬರಹ ಸ್ಫುಟವಾಗಿದ್ದು ಓದುವಂತಿದ್ದರೆ ಇನ್ನು ಕೆಲವರದು ಓದಲು ಹರಸಾಹಸ ಪಡಬೇಕಾಗುತ್ತದೆ.ಶಾಲೆಯಲ್ಲಿ ಅಧ್ಯಾಪಕರು ಆಗಾಗ ದುಂಡಗೆ ಬರೆಯಿರಿ..ಗೆರೆಗಳಿಗೆ ತಾಗಿಸಿ ಬರೆಯಿರಿ.. ಅಕ್ಷರಗಳು ಒಂದಕ್ಕೊಂದು ಅಂಟದಿರಲಿ..ಮಾರ್ಜಿನ್ ಹಾಕಿ ಬರೆಯಿರಿ...ಅಕ್ಷರಗಳು ತಪ್ಪಾಗದಿರಲಿ.. ಅಲ್ಪಪ್ರಾಣ ,ಮಹಾಪ್ರಾಣ, ಹೃಸ್ವ, ದೀರ್ಘ ಲೋಪವಾಗಬಾರದು.. ಕೊನೆಗೊಂದು ಪೂರ್ಣ ವಿರಾಮ ಹಾಕಲು ಮರೆಯದಿರಿ ..ಎಂದೆಲ್ಲ ಹೇಳುತ್ತಿದ್ದುದು ಈಗ ಸವಿನೆನಪಿನ ಹಾಳೆಯಲ್ಲಿ ಭದ್ರವಾಗಿ ಅಚ್ಚೊತ್ತಿ ನಿಂತಿವೆ.


       ಒಬ್ಬೊಬ್ಬರು ಪೆನ್ನು ಹಿಡಿಯುವ ಶೈಲಿ , ಪುಸ್ತಕ ಹಿಡಿಯುವ ರೀತಿ ಭಿನ್ನವಾಗಿರುತ್ತದೆ.ಕೆಲವರು ಬರೆಯುವಾಗ ಕೈಯ ಎಲ್ಲಾ ಬೆರಳುಗಳನ್ನು ಸೇರಿಸಿ ಪೆನ್ನು ಹಿಡಿದುಕೊಂಡರೆ,ಇನ್ನು ಕೆಲವರದು ನಾಲ್ಕು ಬೆರಳು ಸೇರಿಸಿ ಬರೆಯುವ ಅಭ್ಯಾಸ.ನಾನೂ ಇದೇ ರೀತಿ ಬರೆಯುತ್ತಿದ್ದೆ.ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಆರನೇ ತರಗತಿಯಲ್ಲಿ ನಮಗೆ ಶ್ರೀಪತಿ ನಾಯಕ್ ಅನ್ನುವ ಗುರುಗಳಿದ್ದರು.."ಪೆನ್ನು ಹಿಡಿಯುವುದು ಹಾಗಲ್ಲ.. ಹೀಗೆ.."ಎಂದು ಮೂರು ಬೆರಳಿನಲ್ಲಿ ಪೆನ್ ಹಿಡಿದು ಬರೆಯಲು ಆದೇಶ ಮಾಡಿದ್ದರು.ಆರಂಭದಲ್ಲಿ ಬೆರಳು ನೋವು ಬಂದರೂ ಸತತ ಮೂರು ದಿನ ಅದೇ ರೀತಿ ಕಷ್ಟಪಟ್ಟಾಗ ಆ ಕಲೆ ಸಿದ್ಧಿಸಿತು ಅನ್ನಿ..ಈಗ ನಾನು ಬರೆಯುವುದು ಮೂರು ಬೆರಳಲ್ಲಿ ಪೆನ್ನು ಹಿಡಿದು.. ಸಾಮಾನ್ಯವಾಗಿ ಹೆಬ್ಬೆರಳು ಮತ್ತು ತೋರು ಬೆರಳನ್ನು ಸೇರಿಸಿ ನೇರವಾಗಿ ಕುಳಿತುಕೊಂಡು ಜ್ಞಾನ ಮುದ್ರೆಯನ್ನು ಮಾಡುವುದು ಹೆಚ್ಚಿನವರಿಗೆ ತಿಳಿದಿದೆ.ಈ ಜ್ಞಾನ ಮುದ್ರೆ ನೆನಪು ಶಕ್ತಿ, ಏಕಾಗ್ರತೆ, ಬುದ್ಧಿಮತ್ತೆಯನ್ನು ವೃದ್ಧಿಸಲು ಸಹಕಾರಿ.ತೋರುಬೆರಳು ಮತ್ತು ಹೆಬ್ಬೆರಳಲ್ಲಿ ಪೆನ್ನು ಗಟ್ಟಿಯಾಗಿ ಹಿಡಿದು ಪೆನ್ನಿನ ಅಡಿಭಾಗದಲ್ಲಿ ಮಧ್ಯದ ಬೆರಳನ್ನು ಆಧಾರವಾಗಿಸಿ ಹಿಡಿದು ಬರೆಯುವ 'ತ್ರಿಬೆರಳ ಹಿಡಿತ ' ಕೂಡ ಜ್ಞಾನ ಮುದ್ರೆಯ ಪ್ರಭಾವವನ್ನೇ ನಮ್ಮ ಮೇಲೆ ಬೀರುತ್ತವೆ.ಆದ್ದರಿಂದ ಬರವಣಿಗೆ ನಮ್ಮ ಕ್ರಿಯಾಶೀಲತೆ ಮತ್ತು ಸೃಜನಾತ್ಮಕ ಕೌಶಲ್ಯಗಳನ್ನು ವೃದ್ಧಿಸುವುದಲ್ಲಿ ಎರಡು ಮಾತಿಲ್ಲ.

   ನಾವು ಓದಿದ ಸರಕಾರಿ ಶಾಲೆಯಲ್ಲಿ ನಮಗೆ ಯಾವ ಸ್ಪರ್ಧೆಗಳೂ ಇರಲಿಲ್ಲ.ಪಕ್ಕದ ಖಾಸಗಿ ಶಾಲೆಯಲ್ಲಿ ದುಂಡಕ್ಷರ ಸ್ಪರ್ಧೆಯಿದ್ದಾಗ ತಪ್ಪದೇ ಭಾಗವಹಿಸುತ್ತಿದ್ದೆ.ಮೊದಲ ಬಹುಮಾನ ನನಗೆ ದೊರೆತು ಪುಟ್ಟ ಸ್ಟೀಲ್ ಲೋಟ ಸಿಕ್ಕಿದ್ದು ಆಗ ದೊಡ್ಡ ವಿಷಯವೇ ಆಗಿತ್ತು.ಪಕ್ಕದ ಶಾಲೆಯಲ್ಲಿ ದೊರೆತ ಪುಟ್ಟ ಲೋಟ ನಮ್ಮ ಸಹಪಾಠಿಗಳ ಬಾಯಿಯಿಂದ ಹೊಗಳಿಕೆಯ ಮಹಾಪೂರವನ್ನೇ ಹರಿಸಿತ್ತು.. ನಂತರ ಅದೇ ಶಾಲೆಗೆ ಸೇರಿ ನಿರಂತರವಾಗಿ ಹಲವಾರು ಬಾರಿ ದುಂಡಕ್ಷರ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದೆ..


    ನನ್ನ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಸಮಯದಲ್ಲಂತೂ ಸ್ಲೇಟು ಕಡ್ಡಿ ಬಳಸಿದ್ದು ಬಹಳ ಕಡಿಮೆ..ನರ್ಸರಿಯಿಂದಲೇ ಪುಸ್ತಕ ಪೆನ್ಸಿಲ್ ಬಳಸಿ ಮೆಲ್ಲನೆ ನಾನೂ ಕೈಹಿಡಿದು ಬರೆಸಿ ಅಕ್ಷರವ ತಿದ್ದುತ್ತಿದ್ದೆ..ನಾವೆಲ್ಲ ಅ ಆ ಇ ಈ ಬರೆಯಲು ಆರಂಭಿಸಿದ್ದರೆ ನಮ್ಮ ಮಕ್ಕಳಿಗೆ ಸ್ಟ್ರೈಟ್ ಲೈನ್,ಸ್ಲಾಂಟಿಂಗ್ ಲೈನ್, ಸರ್ಕಲ್,ಸೆಮಿ ಸರ್ಕಲ್ ,ಕರ್ವ್ಡ್ ಲೈನ್.. ಎಂದು ಕಲಿಸುವ ಆಂಗ್ಲಪದ್ಧತಿ ಅನುಸರಿಸಿದ್ದು ಹೆಚ್ಚು...ಆದರೂ ಅಕ್ಷರಗಳು ಸುಂದರವಾಗಿ ರೂಪುಗೊಂಡಿವೆ ಎಂದು ನನಗೆ ಹೆಮ್ಮೆಯಿದೆ..


     ಬರೆಯುವುದು ನಮ್ಮ ಮೆದುಳು ಸಕ್ರಿಯವಾಗಿರಲು ಸಹಕಾರಿ.ಓದುವಾಗ ಮನಸ್ಸು ಚಂಚಲವಾಗುವುದು ಅಧಿಕ.ಬರೆಯುವಾಗ ಏಕಾಗ್ರತೆ ಮೂಡುತ್ತದೆ .ಹೇಳುವುದನ್ನು ಕೇಳಿಸಿಕೊಂಡು ಬರೆಯುವಾಗ ಆಲಿಸುವ ಕೌಶಲ್ಯ,ನೋಡಿ ಕಾಪಿ ಮಾಡುವಾಗ ದೃಷ್ಟಿಯ ಮತ್ತು ಕೈಯ ಸ್ನಾಯುಗಳಲ್ಲಿ ಏಕಾಗ್ರತೆ ಮತ್ತು ಹೊಂದಾಣಿಕೆ...,ನಮ್ಮದೇ ಆಲೋಚನೆಯಲ್ಲಿ ಬರೆಯುವಾಗ ಮೆದುಳು ಸಂಪೂರ್ಣವಾಗಿ ಒಂದೇ ವಿಷಯದಲ್ಲಿ ಕೇಂದ್ರೀಕೃತವಾಗಿರುತ್ತದೆ . ಇದಕ್ಕೇ ಗುರುಹಿರಿಯರು  ಓದಿ ಕಲಿಯುವುದಕ್ಕಿಂತ ಬರೆದು ಕಲಿಯುವುದು ಉತ್ತಮ ಎಂದಿರುವುದು..


    ಸುಂದರವಾದ ಕೈಬರಹವು ವ್ಯಕ್ತಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ .ಅಕ್ಷರಗಳು ಚಂದವಿದ್ದವರನ್ನು ಶಿಕ್ಷಕರು ಸಹಪಾಠಿಗಳು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.ಬರಹವು ಅಚ್ಚುಕಟ್ಟಾಗಿ ಇದ್ದವರಲ್ಲಿ ಕಾರ್ಯದಕ್ಷತೆ, ಕೆಲಸವನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸುವ ಮನೋಬಲ ಇರುವುದರಿಂದಲೇ  ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ಕೈಬರಹದಲ್ಲಿ ಇರಬೇಕು ಎಂದು ಕೆಲವು ಕಡೆ ನಿಬಂಧನೆಗಳಿರುತ್ತವೆ.

    ಆಧುನಿಕ ತಂತ್ರಜ್ಞಾನ ಬಳಕೆ ಆರಂಭವಾದರೂ ಕೂಡ ಕೈಬರಹ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡಿದೆ.ಪರೀಕ್ಷೆಯಲ್ಲಿ ಸುಂದರವಾದ ಸ್ಫುಟವಾದ ಕೈಬರಹವು ಉತ್ತಮ ಅಂಕಗಳಿಕೆಗೆ ಸಹಾಯಕವಾಗಿದೆ.ನಮ್ಮ ಅಕ್ಷರಗಳು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ.ಸೊಗಸಾದ ಅಕ್ಷರಗಳು ಬರೆದವರ ಬಗ್ಗೆ ಸದಭಿಪ್ರಾಯವನ್ನು ಮೂಡಿಸುತ್ತವೆ.ಆಗಾಗ ಬರೆಯುತ್ತಿರೋಣ.. ಬರವಣಿಗೆಯ ಅಭ್ಯಾಸ ನಮ್ಮ ಜೊತೆಗಿರಲಿ..

✍️... ಅನಿತಾ ಜಿ.ಕೆ.ಭಟ್.
23-01-2020.
Momspresso Kannada  ಮತ್ತು Pratilipi Kannada ದಲ್ಲಿ ಪ್ರಕಟಿಸಿದ ಲೇಖನ..

Tuesday, 21 January 2020

ನಮ್ಮ ದಕ್ಷಿಣಕನ್ನಡ ಜಿಲ್ಲೆಯ ಪರಿಚಯ



ನಮ್ಮದು ಪರಶುರಾಮ ತನ್ನ ಕೊಡಲಿಯನ್ನು ಎಸೆದು ಸೃಷ್ಟಿಸಿದನು  ಎಂಬ ಐತಿಹ್ಯವಿರುವ 'ಪರಶುರಾಮ ಸೃಷ್ಟಿ'ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆ.ಕಡಲ ತೀರದ ನಾಡು ಕುಡ್ಲ_ಮಂಗಳೂರು ಜಿಲ್ಲಾ ಕೇಂದ್ರ.


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.ಕಟೀಲು.

ದಕ ಜಿಲ್ಲೆಯಲ್ಲಿ ಆರು ತಾಲೂಕುಗಳು.ಅವುಗಳು ಮಂಗಳೂರು, ಮೂಡುಬಿದಿರೆ, ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ.ಇಲ್ಲಿನ ಪ್ರಮುಖ ಭಾಷೆ ತುಳು.ಆದ್ದರಿಂದ ತುಳುನಾಡು ಎಂಬ ಹೆಸರು ಇದೆ.ಕನ್ನಡ ಮತ್ತು ತುಳು ಎರಡೂ ವ್ಯಾವಹಾರಿಕ ಭಾಷೆ.ಕೊಂಕಣಿ, ಮಲೆಯಾಳ, ಮರಾಠಿ,ಅರೆಕನ್ನಡ, ಹವ್ಯಕ ಕನ್ನಡ ಇವು ಇಲ್ಲಿನ ಇತರ ಭಾಷೆಗಳು.

ಪೋರ್ಚುಗೀಸ್ ರೊಂದಿಗೆ ಹೋರಾಡಿದ ಉಳ್ಳಾಲದ ವೀರರಾಣಿ ಅಬ್ಬಕ್ಕ ದೇವಿಯ ನಾಡಿದು.ಸೋಮೇಶ್ವರದ ಸೋಮನಾಥ ದೇವಾಲಯ ಆಕೆಯ ಶಕ್ತಿ ಕ್ಷೇತ್ರ.

ದಕ ಬ್ಯಾಂಕ್ ಗಳ ತವರು.ಅಮ್ಮೆಂಬಳ ಸುಬ್ಬರಾವ್ ಪೈ,ಅತ್ತಾವರ ಎಲ್ಲಪ್ಪ, ಕಾರ್ನಾಡ್ ಸದಾಶಿವ ರಾವ್,ಕುದ್ಮಲ್ ರಂಗರಾವ್,ರಾಜಕಾರಣಿ ಜಾರ್ಜ್ ಫರ್ನಾಂಡಿಸ್.. ಹೀಗೇ ಇನ್ನೂ ಅನೇಕ ಧುರೀಣರ ತವರು.

ಬುದ್ಧಿವಂತರ ನಾಡು ಎಂದು ಕರೆಸಿಕೊಳ್ಳುವ ಈ ನಾಡು ಶಿಕ್ಷಣ ಕಾಶಿ ಎಂದೇ ಪ್ರಸಿದ್ಧ.ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NITK) ಇರುವುದು ಸುರತ್ಕಲ್ ನಲ್ಲಿ. ಇದು ಹಲವಾರು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಗಳಿಗೆ  ನಾಂದಿ ಹಾಡಿದೆ.ಹಲವಾರು ವೈದ್ಯಕೀಯ, ಅರೆ ವೈದ್ಯಕೀಯ, ಇಂಜಿನಿಯರಿಂಗ್ ಸಂಸ್ಥೆಗಳು ಇಲ್ಲಿವೆ.

ರಾಜ್ಯದ ಮೂರನೇ ದೊಡ್ಡ ನಗರ ಮಂಗಳೂರು ಒಂದು ಬದಿಯಿಂದ ಅರಬ್ಬೀ ಸಮುದ್ರ ದಿಂದ ಸುತ್ತುವರಿದಿದೆ.ಮೀನುಗಾರಿಕೆ, ಕೃಷಿ, ಹೈನುಗಾರಿಕೆ, ಹೋಟೆಲ್, ಬ್ಯಾಂಕ್ ಪ್ರಮುಖ ಉದ್ಯಮಗಳು.ಉಳ್ಳಾಲದ ತೆಂಗು ಸಂಶೋಧನಾ ಕೇಂದ್ರ,CPCRI   (ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ  )ವಿಟ್ಲ,ಫಶುಸಂಗೋಪನಾ ಕೇಂದ್ರ ಕೊಯ್ಲ,ಗೇರು ಸಂಶೋಧನ ಕೇಂದ್ರ ಪುತ್ತೂರು ಇವು ಪ್ರಮುಖ ಕೃಷಿ ಸಂಸ್ಥೆ ಗಳು.ತೆಂಗು, ಅಡಿಕೆ,ಭತ್ತ ಪ್ರಮುಖ ಕೃಷಿ.
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಾಲಯ.ಧರ್ಮಸ್ಥಳ.

ಧಾರ್ಮಿಕ ಕೇಂದ್ರಗಳು_ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ, ಅಣ್ಣಪ್ಪ ಸ್ವಾಮಿ, ಬಾಹುಬಲಿ ವಿಶ್ವ ಪ್ರಸಿದ್ಧ.ಇತ್ತೀಚೆಗಷ್ಟೇವಿಜೃಂಭಣೆಯಿಂದ ಮಹಾಮಸ್ತಕಾಭಿಷೇಕ ನೆರವೇರಿದೆ.ಜೈನ ಹಿಂದೂ ಧರ್ಮದ ಸಂಗಮ ಸ್ಥಳ.ಅನ್ನದಾನ,ವಿದ್ಯಾದಾನ,ನ್ಯಾಯದಾನ ನಡೆಸುತ್ತಾ ಬಂದಿರುವ ಪೂಜ್ಯ ರಾಜರ್ಷಿ ಡಾ|| ವೀರೇಂದ್ರ ಹೆಗ್ಗಡೆ ಯವರು ಆದರ್ಶ ಪ್ರಾಯರು.
ಕುಕ್ಕೆಸುಬ್ರಹ್ಮಣ್ಯ ದ ದೇವಾಲಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕದ್ರಿ ಮಂಜುನಾಥ ಸ್ವಾಮಿ ದೇವಾಲಯ, ಕುಡುಪು ಶ್ರೀ ಅನಂತ ಪದ್ಮನಾಭ ದೇಗುಲ, ಗೋಕರ್ಣ ನಾಥ ದೇವಾಲಯ ಕುದ್ರೋಳಿ, ಮಂಗಳಾದೇವಿ ದೇವಸ್ಥಾನ ,ಮೂಡುಬಿದಿರೆ ಸಾವಿರ ಕಂಬದ ಬಸದಿ,ಸೌತೆಡ್ಕ ಮಹಾಗಣಪತಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಮಂಗಳೂರು ಬಾವುಟಗುಡ್ಡೆಯಲ್ಲಿರುವ ಸಂತ ಅಲೋಶಿಯಸ್ ಚಾಪೆಲ್,ಉಳ್ಳಾಲದ ಸಯ್ಯದ್ ದರ್ಗಾ ಪ್ರಮುಖ ಧಾರ್ಮಿಕ ಕ್ಷೇತ್ರಗಳು.

ಸಾವಿರ ಕಂಬದ ಬಸದಿ ,ಮೂಡುಬಿದಿರೆ.

ಸಂತ ಅಲೋಶಿಯಸ್ ಚಾಪೆಲ್, ಮಂಗಳೂರು.

ಪ್ರವಾಸಿ ತಾಣಗಳು_
ಇಲ್ಲಿನ ಸಮುದ್ರ ತೀರದಲ್ಲಿ ಸಂಜೆಯ ಸೊಬಗನ್ನು ಒಮ್ಮೆಯಾದರೂ ಆಸ್ವಾದಿಸಬೇಕು.ಸುರತ್ಕಲ್, ಸಸಿಹಿತ್ಲು, ಪಣಂಬೂರು, ತಣ್ಣೀರು ಬಾವಿ, ಉಳ್ಳಾಲದ ಸಮ್ಮರ್ ಸ್ಯಾಂಡ್, ಸೋಮೇಶ್ವರ ಸಮುದ್ರ ತೀರಗಳು ರಜಾದಿನಗಳಲ್ಲಿ ಪ್ರವಾಸಿಗರಿಂದ ತುಂಬಿರುತ್ತದೆ.ನಮ್ಮನೆಯಿಂದ ಸಮುದ್ರ ತೀರಕ್ಕೆ ಕೇವಲ ಎರಡು ಕಿಲೋಮೀಟರ್ ಅಂತರ.ಸಮುದ್ರತೀರದಲ್ಲಿ ಸಂಜೆಯ ವಿಹಾರ ಮನಸಿಗೆ ಆಹ್ಲಾದಕರ.

ಕಡಲ ತೀರದ ಸೂರ್ಯಾಸ್ತದ ವಿಹಂಗಮ ನೋಟ

ಸುಲ್ತಾನ್ ಬತ್ತೇರಿ ಕೋಟೆ  ಪ್ರೇಕ್ಷಣೀಯ ಸ್ಥಳ.ಕೋಟೆಯ ಮೇಲೆ ನಿಂತು ಅರಬ್ಬೀ ಸಮುದ್ರದ ದಿಗಂತದಲ್ಲಿ ಸೂರ್ಯಾಸ್ತದ ವಿಹಂಗಮ ನೋಟವನ್ನು ನೋಡಿಯೇ ಆನಂದಿಸಬೇಕು.

ಮಂಗಳೂರು ನಗರದ ಹೊರವಲಯದ ವಾಮಂಜೂರಿನಲ್ಲಿ ಪಿಲಿಕುಳ ಜೈವಿಕ ಉದ್ಯಾನವನ,ಡಾ|ಶಿವರಾಮ ಕಾರಂತ ಪ್ರಾದೇಶಿಕ ವಿಜ್ಞಾನ ಕೇಂದ್ರವಿದೆ.ಇಲ್ಲಿನ ಸ್ವಾಮಿ ವಿವೇಕಾನಂದ ತಾರಾಲಯವು ಭಾರತದ ಪ್ರಥಮ 3ಡಿ ತಾರಾಲಯ.ಉದ್ಯಾನವನದಲ್ಲಿ ಸುಂದರ ಪ್ರಕೃತಿಯ ಐಸಿರಿ ಮಧ್ಯೆ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ.ಜೈವಿಕ ಉದ್ಯಾನವನದಲ್ಲಿ ನಾನಾ ಪ್ರಾಣಿ ಪಕ್ಷಿಗಳ ಕಲರವ ಮುದನೀಡುವುದು .ಗುತ್ತಿನ ಮನೆ ಕೂಡ ಬಹಳ ಆಕರ್ಷಕವಾಗಿದೆ.
ಮಂಗಳೂರಿನ ಬಿಜೈ ಯಲ್ಲಿ ಶ್ರೀಮಂತಿಬಾಯಿ ವಸ್ತು ಸಂಗ್ರಹಾಲಯವಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಸುಬ್ರಹ್ಮಣ್ಯ.

MRPL (ಪೆಟ್ರೋಲಿಯಂ),MCF (ರಸಗೊಬ್ಬರ),KIOCL(ಕಬ್ಬಿಣದ ಅದಿರು)ನಂತಹ ಕೈಗಾರಿಕೆಗಳು ಇಲ್ಲಿವೆ.ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶ ವಿದೇಶಗಳ ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ.ರೈಲುಸಂಚಾರ ಅನುಕೂಲವಾಗಿದ್ದು ಕೊಂಕಣ ರೈಲ್ವೆ ವಲಯಕ್ಕೆ ಸೇರಿದೆ.ಅತ್ಯಾಧುನಿಕ ಬಂದರು ನವಮಂಗಳೂರು ಬಂದರು(NMPT) ದೇಶವಿದೇಶದ ಬಂದರುಗಳೊಂದಿಗೆ ಸಂಬಂಧ ಕಲ್ಪಿಸುತ್ತದೆ.ಮೂರು ರಾಷ್ಟ್ರೀಯ ಹೆದ್ದಾರಿ ಗಳು ಜಿಲ್ಲೆಯ ಮೂಲಕ ಸಾಗುತ್ತವೆ.
ವಾಯು, ಭೂ (ರೈಲ್ವೇ ಮತ್ತು ಹೆದ್ದಾರಿ),ಸಾಗರ ಮಾರ್ಗಗಳ ಸಂಪರ್ಕ ಇರುವ ಜಿಲ್ಲೆ ನಮ್ಮದು.ಇನ್ಫೋಸಿಸ್ ಸಾಫ್ಟವೇರ್ ಸಂಸ್ಥೆ ತನ್ನೆರಡು ಶಾಖೆಗಳನ್ನು ನಮ್ಮ ಜಿಲ್ಲೆಯಲ್ಲಿ ಹೊಂದಿದೆ.
                           ಯಕ್ಷಗಾನ ಬಯಲಾಟ

ಭೂತಕೋಲ,ಕಂಬಳ, ಯಕ್ಷಗಾನ ಬಯಲಾಟ ಇಲ್ಲಿನ ಪ್ರಮುಖ ಜಾನಪದ ಕಲೆ.ಕಟೀಲು ಮೇಳದಿಂದ ನಡೆಯುವ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಎಂದರೆ ಭಕ್ತಿ ಭಾವದ ಪರಾಕಾಷ್ಠೆ, ಜಾತಿ ಧರ್ಮದ ಭೇದ ಇಲ್ಲದೆ ಎಲ್ಲರೂ ಮಂತ್ರಮುಗ್ಧರಾಗುವಂಥದ್ದು.ಕಟೀಲು ಮೇಳದ ಬಯಲಾಟಗಳು ಇನ್ನು ಮೂವತ್ತು ವರ್ಷಗಳ ವರೆಗೆ ಈಗಲೇ ಬುಕ್ ಆಗಿದೆಯೆಂದರೆ ಆ ಭಕ್ತಿ ಅಂಥಾದ್ದು.
                              ಕಂಬಳ

ನಮ್ಮ ಜಿಲ್ಲೆಯ ಮಂಗಳೂರು ಬನ್ಸ್, ಪತ್ರೊಡೆ ಪ್ರಸಿದ್ಧ ತಿಂಡಿಗಳು.ಮಂಗಳೂರು ಮಲ್ಲಿಗೆ ದೇಶವಿದೇಶಗಳಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡಿದೆ.ಇಲ್ಲಿಗೆ ಭೇಟಿ ನೀಡಿದಾಗ ಮಂಗಳೂರು ಮಲ್ಲಿಗೆ ಕೊಳ್ಳಲು ಮರೆಯದಿರಿ.

ಕಡಲ ತೀರದ ಭಾರ್ಗವ ಎಂದೇ ಪ್ರಸಿದ್ಧಿ ಪಡೆದ ಕಾರಂತರು ತಮ್ಮ ಜೀವನವನ್ನು ಪುತ್ತೂರಿನಲ್ಲಿ ಕಳೆದಿದ್ದಾರೆ.ಅವರ ಮನೆ,ಸುತ್ತಲಿನ ವಿಶಾಲ ಉದ್ಯಾನ ಈಗ ಬಾಲವನ ಎಂದು ಪ್ರಸಿದ್ಧಿ ಪಡೆದಿದೆ.ಕನ್ನಡದ ಮೊದಲ ಶಬ್ದಕೋಶ ಕಿಟ್ಟೆಲ್ ಡಿಕ್ಷನರಿ ಪ್ರಿಂಟಾಗಿದ್ದು ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ ನಲ್ಲಿ.

ಬರೆಯುತ್ತಾ ಹೋದರೆ ಮುಗಿಯುವಂತೆ ಕಾಣುತ್ತಿಲ್ಲ.ಇವೆಲ್ಲ ನನ್ನ ನೆನಪಿನ ಪುಟಗಳನ್ನ ಕೆದಕಿ ಬರೆದದ್ದು.ಅಲ್ಪ ಸ್ವಲ್ಪ ವ್ಯತ್ಯಾಸ ಗಳಿದ್ದರೆ ಮನ್ನಿಸಿ.ತಪ್ಪದೆ ಈ ಬೇಸಿಗೆಯಲ್ಲಿ ನಮ್ಮೂರಿಗೆ ಭೇಟಿ ನೀಡಲು ಮರೆಯದಿರಿ.

                 🌴🌴🌴🌴

✍️.. ಅನಿತಾ ಜಿ.ಕೆ.ಭಟ್
22-01-2020.
ಚಿತ್ರ: ಗೂಗಲ್ ಕೃಪೆ.
ಕಥಾ ಅರಮನೆ ಯ ಥೀಂ ಗೆ ಬರೆದ ಲೇಖನ.'ಪ್ರೋತ್ಸಾಹ ಬರವಣಿಗೆ ' ಎಂದು ಅಭಿನಂದನೆ ಪಡೆದಿದೆ.

********************************

ನನ್ನ ಮಗಳು


ಮಗಳು ಜನಿಸಿದ ಸಂಭ್ರಮ
ನೋವ ಮರೆತು ನಕ್ಕ ಶುಭದಿನ
ನಿನ್ನೊಡನೆ ಕಳೆದೆ ಅನುದಿನ
 ನುಡಿಯು ಜೇನ ಸವಿಸಂಗಮ||೧||

ನಾ ಕಣ್ರೆಪ್ಪೆ ಮಿಟುಕಿಸದೆ ಕಾದೆ
ಅಪ್ಪನ ಹೆಗಲ ಕೂಸುಮರಿಯಾದೆ
 ಅಣ್ಣನ ಆಟಕೆ ಜೊತೆನೀಡಿ ನಲಿದೆ
ಅಜ್ಜಿ ಅಜ್ಜನ ಕಾಡಿ ಮನತುಂಬಿದೆ||೨||

ನಿನ್ನ ಕಿಲಕಿಲ ನಗೆ ಆವರಿಸಿ ಎಲ್ಲೆಲ್ಲೂ
ಚೆಲ್ಲಿತ್ತು ನವೋಲ್ಲಾಸ ಸಡಗರವ ಬಿತ್ತಿ
ಕಲೆಯ ಕೋಮಲೆ ಜಯದ ಮಾಲೆ
ರೂಪವತಿ ದೇವ ಕಡಿದ ಶಿಲ್ಪವ ಕೆತ್ತಿ||೩||

ಹಬ್ಬಹರಿದಿನದಂದು ಚಂದದುಡುಗೆಯ
ಧರಿಸಿ ನೀ ನಲಿದರೆ ಎಂಥ ಸೊಗಸು
ಪ್ರತಿಯೊಂದು ದೀಪದಲೂ ನಿನ್ನದೇ
ಬಿಂಬವು ಮೊಗದಿ ತುಂಬಿ ತೇಜಸ್ಸು||೪||

ಮಗಳ ವಯಸಿಗೆ ಕೂಡಿದ ಕಂಕಣ
ನಾ ಚಡಪಡಿಸಿದೆ ಆತಂಕ ಪ್ರತಿಕ್ಷಣ
ಮನವಗೆದ್ದಿತು ಅಳಿಯನ ಮೆದುಗುಣ
ಈ ತಾಯ ಮಡಿಲೀಗ ಭಣಭಣ||೫||

ಸಂಜೆಯಾದರೆ ಸಾಕು ಕಣ್ಣು ಬಾಗಿಲಿನತ್ತ
ಮಗಳು ಕಾಲೇಜಿಂದ ಬಂದಳೇ ಎಂಬ ಚಿತ್ತ
ಸಿಹಿತಿನಿಸು ತಿನ್ನಲು ಮನಸಿಲ್ಲ ಬಿಟ್ಟು
ಸೆರಗಿಡಿದು ಬಂದಿದ್ದೆ ಸವಿಪಾಕವ ಇಷ್ಟಪಟ್ಟು||೬||

ದೀಪಹಚ್ಚುವ ವೇಳೆ ಉದುರಿತು ಪನ್ನೀರು
ಹಂಬಲಿಸಿದೆ ನೀನು ಹೋದಮನೆ ಬೆಳಗೆಂದು
ಮನೆಸೊಸೆಯೆ ಮಗಳೆಂಬ ಮಮಕಾರ
ತುಂಬಿ ನಿನ್ನ ಬಾಳಲಿ ಸಂತಸವುಕ್ಕಲೆಂದು||೭||

✍️... ಅನಿತಾ ಜಿ.ಕೆ.ಭಟ್.
22-01-2020.

ಅಂಗಳದ ಸಿಂಗಾರಿ




ಮನೆಯ ಮುಂಬಾಗಿಲ ಮುಂದೆ
ಸೇವಂತಿಗೆ ಹೂವು...
ಕಣ್ಣೋಟದಲ್ಲೆ ಮರೆಸುವೆ
ನನ್ನೆಲ್ಲ ನೋವು...
ರವಿಯು ನಾಚಿದ ನೋಡಿ
ನಿನ್ನ ಚೆಲುವು...
ಅರಳಲು ಕಾಯುತಿವೆ
ಮೊಗ್ಗು ಹಲವು...
✍️...ಅನಿ ಅಜಿ.ಕೆ.ಭಟ್.
"""""""""""""""""""""""""""""""""""""""""""""


ಬಿಂಕದ ಸಿಂಗಾರಿಗೆ ನಾ ಕೊಡೆ ಹಿಡಿಯಲೇ
ಶಶಿಯಂತೆ ನಾನೂ ತಂಪೀಯಲೇ
ಮುಗ್ಧ ಮನದಲ್ಲಿ ತುಂಬಿಟ್ಟುಕೊಳ್ಳಲೇ
ಮೃದುವಾದ ಹೃದಯದಲಿ ತುಸು ಜಾಗ ಕೊಡಲೇ...

✍️.. ಅನಿತಾ ಜಿ.ಕೆ.ಭಟ್.



ತಾಯಂದಿರಿಗೆಲ್ಲ 'ವಿಶ್ವ ತಾಯಂದಿರ ದಿನ'ದ ಶುಭಾಶಯಗಳು..

ನವಮಾಸ ಹೊತ್ತವಳು
ನೋವೆನದೆ ಹೆತ್ತವಳು
 ನವಿರಾಗಿ ಸಲಹಿದಳು
ನಗುತಲೇ ಬಾಳುವವಳು...

ಕಂದನ ಅರಿತವಳು
 ಕರೆಯದಲೆ ಬರುವವಳು
ಕೈಹಿಡಿದು ನಡೆಸಿದವಳು
ಕರುಣಾಮಯಿ ಮಾತೆಯವಳು...

ಮಾತೆಯರನ್ನು ಗೌರವಿಸೋಣ...🙏
✍️... ಅನಿತಾ ಜಿ.ಕೆ.ಭಟ್.


Theme # Anniversary special

🎁🎁🎁🎁🎁🎁🎁🎀🎀🎀🎀


ಶುಭ್ರ, ಶ್ವೇತ ಹೂವಿನ ಬಿಂಬ
ನಿರ್ಮಲ ಮನದ ಪ್ರತಿಬಿಂಬ
ಹಚ್ಚ ಹಸಿರಿನ ತರುವು
ಸಮೃದ್ಧಿಯ ಸಂಕೇತವು

ನಾನಾಗಬಯಸುವೆ ಬಿಳಿಯ ಪುಷ್ಪ
ಭೂರಮೆಯ ಪಚ್ಚೆ ಸೀರೆಯ ಮುಕುಟದಿ...
"""""""""""""""""""""""""""""""""""""""""""""""
🤝ನಮ್ಮ ಮನೆ ಕೈ ತೋಟದ ಪ್ರಥಮ ವಾರ್ಷಿಕೋತ್ಸವ ದ ಶುಭಾಶಯಗಳು.🎉🎁



✍️✍️ ಅನಿತಾ ಜಿ.ಕೆ.ಭಟ್.
🎈🎈🎈🎐🎐🎐🎄🎄🎄🎊🎊🎊

ಮೇಲಿನದು ನಮ್ಮ ಮನೆ ಕೈ ತೋಟ ಗುಂಪಿನಲ್ಲಿ ಬರೆದ ಚಿತ್ರ ಬರಹಗಳು...

Friday, 17 January 2020

ಅಂಬಾಸಿಡರ್ ಕಾರಿನ ಕಥೆ #ಕವನ







ಏನಿದು ಕಾರು? ಓಹೋ ಸುಂದರ||
ಬುರ್ರನೆ ಬಂತೈ ಅಂಬಾಸಿಡರು ||1||

ಚಂದದ ಕಲರೂ|ಒಳ್ಳೆಯ ಖದರು||
ಕಾರಿನ ಮುಂದೆ ಮಕ್ಕಳಿಬ್ಬರು||2||

ಹಳ್ಳಿ ಪೇಟೆ|ನಿತ್ಯದ ಓಟ||
ಬಾಳೆ ಅಡಿಕೆ|ಸರಕು ಸಾಗಾಟ||3||

ಹಸಿರಿನ ನೋಟ|ಧೂಳಿನ ಮಾಟ||
ಹೊಂಡಗುಂಡಿ|ಸರಿಸಮ ಓಟ||4||

ಸಿರಿಕರ ಮನೆಕರೆ|ಸಿಂಗಾರಿ ಬಂಗಾರಿ||
ಮುಂದೆ ಬಡವರ ಉದರವ|ಪೊರೆದಿರುವುದು ಖರೆ||5||

ಹಿರಿಕಿರಿ ಜನರಿಗೂ ಸೀಟು|
ಕಿರಿಕಿರಿ ಇಲ್ಲದೆ ಗಟ್ಟಿಮುಟ್ಟು ||6||

ಹೊಸತರ ಕಾರು|ಸವಾಲಿನೆದುರು||
ಅಚ್ಚಳಿಸದೆ ಬರೆದರು|
ನಿನ್ನಯ ಮೆರುಗು ಹೆಸರು ||7||


ಜೀವನದ ಪಾಠ|ನಮದು ಕೆಲದಿನದ ಓಟ||


✍️...ಅನಿತಾ.ಜಿ.ಕೆ.ಭಟ್.
18-01-2020.
ಚಿತ್ರ ಕೃಪೆ :- ಹವಿಸವಿ ಬಳಗ.
ಹವಿಸವಿ ಬಳಗದ ವಾರದ ಭಾವ ಚಿತ್ರಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕವನ.



Tuesday, 14 January 2020

ಕಲೆಯ ವರ್ಣಚಾದರ



ಬೀಸುವ ಸಮೀರ ಶರಧಿಗೆ ತೊಡಿಸಿದ
ಅಲೆಯ ಉಂಗುರ
ಅಸ್ತಮ ನೇಸರ ಹಾಸಿದ ದಿಗಂತದಿ
ಕಲೆಯ ವರ್ಣಚಾದರ||೧||

ದೋಣಿ ಪಯಣವು ಸಾಗಿ ಸಾಗಿ
ತೀರದಿ ತಾ ವಿರಮಿಸಿ
ವರ್ಣ ಭಾಸ್ಕರ   ಊರ ತಿರುಗಿ
ಅರುಹಿದ ಈಗ ಬರುವೆ ನಿದ್ರಿಸಿ||೨||

ಕೊತ್ತಲಗಳು ಗಗನಚುಂಬಿಸಿ
ಸಂಜೆರಾಗದಿ ಪುಳಕಗೊಂಡು
ಹಕ್ಕಿಪಿಕ್ಕಿ ಗುಂಪುಗೂಡಿಸಿ
ತಮ್ಮ ಗೂಡಿಗೆ ಸೇರಿಕೊಂಡು||೩||

ಒಂಟಿಮರವು ತಾನು ಬಯಸಿದೆ
ಹಿಮದ ಹಾಸಿನ ಆಲಿಂಗನ
ಗಂಟೆಯೋಡುತ ಜನರಕಾಣದೆ
ಜಲಬಾನಿನ ಶುಭಮಿಲನ||೪||

ನೀರಿನಲೆಯಲಿ ತೇಲಿಬಂದಿದೆ
ಭವ್ಯಬದುಕಿನ ದೀವಿಗೆ
ಹುಟ್ಟುಹಾಕುತ ದೋಣಿನಡೆಸುವ
ನಮ್ಮ ಬಾಳಿನ ಹಾದಿಗೆ||೫||

✍️... ಅನಿತಾ ಜಿ.ಕೆ.ಭಟ್.
14-01-2020.
ಚಿತ್ರ-ಹವಿಸವಿ ಕೃಪೆ
ಸವಿಸವಿ ಬಳಗದ ವಾರದ ಚಿತ್ರ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಕವನ..

Sunday, 12 January 2020

ನನಗೂ ಒಬ್ಳು ಗೆಳತಿ ಬೇಕು




   ನಮ್ಮ ಬದುಕಿನ ಯಾನದಲ್ಲಿ ಸ್ನೇಹವು ಮಹತ್ವದ ಸ್ಥಾನವನ್ನು ಪಡೆದಿದೆ.ಸ್ನೇಹವೆಂಬುದು ಮನುಷ್ಯ ಮನುಷ್ಯನನ್ನು ಬೆಸೆಯುವ ಸರಪಳಿ.ಇಲ್ಲಿ ಪ್ರೀತಿ,, ಮಮತೆ ,ಅನುಕಂಪ,ಸಹಾಯ, ಸಲಹೆ ಸೂಚನೆಗಳ ವಿನಿಮಯ ಅಡೆತಡೆಯಿಲ್ಲದೆ ಸಾಗುತ್ತದೆ.ಆತ್ಮವಿಶ್ವಾಸವನ್ನು ಹೆಚ್ಚಿಸಿ ಧೈರ್ಯದಿಂದ ಬದುಕನ್ನು ಎದುರಿಸಲು ಉತ್ತಮ ಸ್ನೇಹಿತರು ಬೇಕು.ಸ್ನೇಹವೆಂಬುದು ದಿನನಿತ್ಯವೂ ಬದಲಾಗುತ್ತಿರುವ ಬಾಂಧವ್ಯ.ಸಂದರ್ಭಕ್ಕೆ ತಕ್ಕಂತೆ ಪಾತ್ರಗಳು ಬದಲಾಗುತ್ತಾ ಹೋಗುತ್ತವೆ.ಆದರೆ ಅಂತರಾಳದ ಭಾವನೆಗಳನ್ನು ಅರ್ಥೈಸಿಕೊಳ್ಳುವ ಪರಿ ಬದಲಾಗದು.ಸ್ನೇಹ ಬಳಸಿದಷ್ಟು ಅಗಲ..ಆಳಕ್ಕಿಳಿದಷ್ಟೂ ವಿಶಾಲ... ಇಲ್ಲಿ ಪರಸ್ಪರ ಆಸಕ್ತಿಯ ವಿಷಯಗಳನ್ನು ಹಂಚಿಕೊಳ್ಳಲು ಚರ್ಚಿಸಲು ಯಾವುದೇ ಚೌಕಟ್ಟು ಇಲ್ಲ.. ನಮ್ಮತನವನ್ನು ಒಪ್ಪಿಕೊಂಡು ನಮ್ಮ ವಿಭಿನ್ನತೆಯನ್ನು  ಗೌರವಿಸುತ್ತಾ ನಮ್ಮ ದೌರ್ಬಲ್ಯದ ಅರಿವು ಮೂಡಿಸುವುದೇ ಉತ್ತಮವಾದ ಸ್ನೇಹಬಂಧನ..


    ಪ್ರತಿಹೆಣ್ಣಿಗೂ ಇಂತಹ ಒಬ್ಬ ಆಪ್ತ ಗೆಳತಿಯ ಅವಶ್ಯಕತೆಯಿದೆ.ನಾವೆಷ್ಟೋ ಕನಸುಗಳನ್ನು ಕಂಡಿರುತ್ತೇವೆ.ಕೆಲವು ಸಾಕಾರಗೊಂಡಿರಬಹುದು ಇನ್ನು ಕೆಲವು ಈ ಬದುಕಿನಲ್ಲಿ ಪೂರೈಸಲು ಸಾಧ್ಯವೇ ಇಲ್ಲ ಎನ್ನುವ ನಿರಾಸೆಯಿರಬಹುದು ಮತ್ತೆ ಹಲವು ವಿಷಯಗಳಲ್ಲಿ ನಾವು ಬಯಸಿದ್ದಕ್ಕಿಂತ ಅತಿಯಾದ್ದೇ ದೊರಕಿರಬಹುದು.. ಹೀಗೆ ನಮ್ಮ ನೋವು ನಲಿವನ್ನು ಹಂಚಿಕೊಳ್ಳಲು, ಅವರ ದನಿಗೆ ಕಿವಿಯಾಗಲು ಪರಸ್ಪರ ಸ್ನೇಹ ಸಂಬಂಧವೊಂದು ಚಿಗುರೊಡೆಯುತ್ತದೆ. ಬದುಕನ್ನು ಸಹನೀಯವಾಗಿಸುವ ,ಸಂತಸದ ಅಲೆಯೆಬ್ಬಿಸುವ ,ದೇಹಗಳು ಬೇರೆಯಾದರೂ ಮನಸು ಆಸಕ್ತಿ ಒಂದೇ ಇರುವಂತಹ ಸ್ನೇಹಸಂಗಕ್ಕೆ ಬಾಳುವಿಕೆ ಹೆಚ್ಚು.


     "Wishing to be a friend is quick work,but friendship is a slow ripening fruit"---Aristotle.ಅಂದರೆ ಗೆಳೆಯ/ಗೆಳತಿ ಆಗುವುದು ಸುಲಭ ಆದರೆ ಗೆಳೆತನ ಎಂಬುದು ನಿಧಾನವಾಗಿ ಮಾಗುವ ಹಣ್ಣು ಎಂದಿದ್ದಾನೆ ಅರಿಸ್ಟಾಟಲ್.ನಮ್ಮ ಗೆಳತಿ ಯಾರು ಎಂದು ನಮಗರಿವಾಗುವುದು ನಮಗೆ ಕಷ್ಟ ಬಂದಾಗಲೇ ..ಮುಖವಾಡದ ,ಲಾಭಪಡೆವ ಹುನ್ನಾರದ ಗೆಳೆತನದ ಅರಿವಾಗಿ ಪರಿಶುದ್ಧ ಸ್ನೇಹವೆನ್ನುವ ಸೌರಭವು ವಜ್ರದಂತೆ ಹೊಳೆಯುತ್ತದೆ. ಷೇಕ್ಸ್ ಪಿಯರ್ ತನ್ನ ನಾಟಕವೊಂದರಲ್ಲಿ "ಒಮ್ಮೆ ಗೆಳೆತನದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಬಿಟ್ಟರೆ ಅವರನ್ನು ನಮ್ಮ ಆತ್ಮಕ್ಕೆ ಬಂಧಿಸಿಕೊಂಡು ಬಿಡಬೇಕು"ಎಂದಿದ್ದಾನೆ..

       ಹೆಣ್ಣಿಗೆ ಒಬ್ಬ ಉತ್ತಮ ಗೆಳತಿ  ಸಿಕ್ಕರೆ ಜಗತ್ತನ್ನೇ ಗೆಲ್ಲುವ ಧೈರ್ಯ ತುಂಬಿ ತನ್ನ ದಾರಿಯಲ್ಲಿ ವಿಶ್ವಾಸ ಮೂಡುತ್ತದೆ.ಗೆಳೆತನವು ಜವಾಬ್ದಾರಿಯನ್ನು ಬಯಸುತ್ತದೆ ಬರಿಯ ಅವಕಾಶವಾದಿತನವಲ್ಲ..ಪರಸ್ಪರ ಒಬ್ಬರಿಗೊಬ್ಬರು ಹೆಗಲುಕೊಡುವ ಸಾಂತ್ವನ ಹೇಳುವ ಸುಂದರ ಪರಿಭಾಷೆ ಮೂಡಿದಾಗ ಗೆಳೆತನಕ್ಕೊಂದು ಅರ್ಥಬರುವುದು..

        ನನ್ನ ಬಾಳಪಯಣದಲ್ಲೂ ಹಲವಾರು ಗೆಳತಿಯರು ಒಂದಲ್ಲಾ ಒಂದು ಸಂದರ್ಭದಲ್ಲಿ ಜೊತೆಯಾದರು..ಹಲವರ ಜೊತೆಗೆ ಈಗಲೂ ನಂಟು ಮುಂದುವರಿದಿದೆ..ನನ್ನ ಬರವಣಿಗೆಯ ಪಯಣದಲ್ಲಿ ನನ್ನ ಆಪ್ತಗೆಳತಿಯ ನೆರಳಿದೆ.'ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು'ಎಂಬ ಕವಿ ಚೆನ್ನವೀರ ಕಣವಿಯವರ ಕವನದ ಸಾಲಿನಂತೆ ನನಗೆ ತಣ್ಣೆಳಲನ್ನು ನೀಡಿದ ಗೆಳತಿ ಅಶ್ವಿನಿ..ನನ್ನ ತಂತ್ರಜ್ಜಾನದ ಅಜ್ಞಾನದಲ್ಲಿ ಅವಳು ತೋರಿದ ಬೆಳಕಿನ ಕಿರಣಗಳು ನನ್ನನ್ನು ಮುನ್ನಡೆಸಿವೆ.ನೋವಿನಲ್ಲಿ ಕಣ್ಣೀರೊರೆಸುವ, ನಲಿವಿನಲ್ಲಿ ನನ್ನೊಡನಿದ್ದು ಸಂಭ್ರಮಿಸುವ ಆಪ್ತಗೆಳತಿ...ನನ್ನ ದೌರ್ಬಲ್ಯಗಳು ನನಗಿಂತ ಚೆನ್ನಾಗಿ ಅವಳಿಗೇ ಅರಿವಾಗುವುದು...ಅವಳ ಮನದ ತಲ್ಲಣಗಳು ನನ್ನ ಹೃದಯವನ್ನು ತಟ್ಟಿ ಸಾಂತ್ವನದ ನುಡಿಗಳು ತಾನಾಗಿಯೇ ಹೊರಬಂದು ಧೈರ್ಯದಿಂದ ಬದುಕನ್ನು ಎದುರಿಸಲು ಅವಳಿಗೂ ಸಹಕಾರಿಯಾಗುತ್ತವೆ. ಬತ್ತಿ ತಾನುರಿದು ಜಗವನು ಬೆಳಗುವಂತೆ ನನ್ನ ಹಿಂದಿನ ಶಕ್ತಿಯಾಗಿ ನಿಂತು  ಮನ್ನಡೆಸುವ ಬಲು ಅಪರೂಪದ ಗೆಳತಿ...ಈ ಬಾಂಧವ್ಯದಲ್ಲಿ ಮುಚ್ಚುಮರೆಯಿಲ್ಲ..ಎಲ್ಲಿ ಭಾವನೆಗಳು ಇತರ ಕಿವಿಗಳಿಗೆ ರವಾನೆಯಾಗುತ್ತವೆಯೋ ಎಂಬ ಆತಂಕವಿಲ್ಲ...ಇಂತಹ ಆಪ್ತಗೆಳತಿ 2020 ರಲ್ಲಿ ಎಲ್ಲ ತಾಯಂದಿರಿಗೂ ಸಿಗಲಿ ಎಂಬುದೇ ನನ್ನ ಆಶಯ.



   ಜೀವನವನ್ನು ಪ್ರೀತಿಸಲು,ಬಂದ ಎಡರುತೊಡರುಗಳನ್ನು ಎದೆಗುಂದದೆ ಹಿಮ್ಮೆಟ್ಟಿಸಲು ಉತ್ತಮ ಗೆಳೆತನ ಹೆಣ್ಮಕ್ಕಳಿಗೆ ವರದಾನ. ರಾಮನಿಗೆ ಸುಗ್ರೀವನಿದ್ದಂತೆ , ಕೃಷ್ಣನಿಗೆ ಕುಚೇಲನಿದ್ದಂತೆ  ಪರಸ್ಪರ ಒಬ್ಬರಿಗೊಬ್ಬರು ಬೆನ್ನುತಟ್ಟಿಕೊಂಡು ಬಾಳಪಯಣದಲ್ಲಿ ಉತ್ಸಾಹದಿಂದ ಸಾಗಲು ಗೆಳತಿ ಒಬ್ಬ ಆಪ್ತಸಲಹೆಗಾರ್ತಿಯಿದ್ದಂತೆ ...

'ನಾನು ಈಗ ಪ್ರೀತಿಯಲ್ಲಿ ಬೀಳಬೇಕು...
ನನಗೂ ಒಬ್ಬ ಗೆಳೆಯ ಬೇಕು...'ಅನ್ನುವ ಹಾಡನ್ನು ಎಲ್ಲರೂ ಗುನುಗಿರ್ತೀರಾ...ಅದೇ ರೀತಿ ಇದನ್ನೂ ಗುನುಗೋಣವೇ...ನೀವೂ ದನಿ ಸೇರಿಸಿ...

ನನಗೂ ಒಬ್ಳು ಗೆಳತಿ ಬೇಕು
ನಾನು ಸ್ನೇಹದಲ್ಲಿ ಮೀಯಬೇಕು...||

ತಾಣದಲ್ಲಿ ಜೊತೆಯಾಗಿದ್ದು
ಅವಳ ಹೃದಯ ನಾನು ಗೆದ್ದು
ನಮ್ಮ ಒಂಟಿತನವ ಮರೆಯಬೇಕು...||೧||

ನನ್ನ ಮಾತನೆಲ್ಲ ಕೇಳಿ
ಹೃದಯದಲ್ಲಿ ಜಾಗಕೊಟ್ಟು
ಜೋಪಾನ ಮಾಡಬೇಕು...||೨||

ನನಗೂ ಒಬ್ಳು ಗೆಳತಿ ಬೇಕು
ನಾನು ಸ್ನೇಹದಲ್ಲಿ ಮೀಯಬೇಕು...||

ಚಿಂತೆಯಿಂದ ಬಳಲುವಾಗ
ಅವಳ ಮನಸ ಅರಿತು ನಾನು
ಸಾಂತ್ವನ ಹೇಳಬೇಕು...||೩||

ದಾರಿ ತಪ್ಪಿ ನಡೆಯುವಾಗ
ಜಾರಿ ಮೋಸಕೆ ಸಿಲುಕಿದಾಗ
ನನ್ನ ತಿದ್ದಿಬುದ್ಧಿ ಹೇಳಬೇಕು...||೪||

ನನಗೂ ಒಬ್ಳು ಗೆಳತಿ ಬೇಕು
ನಾನು ಸ್ನೇಹದಲ್ಲಿ ಮೀಯಬೇಕು...||

ಹೊತ್ತು ಗೊತ್ತು ಯಾವ್ದೂ ನೋಡ್ದೇ
ಅವಳು ಬಯಸಿದಾಗಲೆಲ್ಲ
ಸ್ನೇಹಬಂಧ ಬೆಸೆಯಬೇಕು...||೫||

ಮಾತಿನಲ್ಲೆ ನಕ್ಕುನಲಿದು
ಭಾವದಲ್ಲಿ ಸಿಹಿಯ ಸವಿದು
ಹಾಲುಜೇನಂತೆ ಬೆರೆಯಬೇಕು...||೬||

ನನಗೂ ಒಬ್ಳು ಗೆಳತಿ ಬೇಕು
ನಾನು ಸ್ನೇಹದಲ್ಲಿ ಮೀಯಬೇಕು...||
 


  ಗೆಳತಿ ...ಪ್ರತೀ ಹೆಣ್ಣಿನ ಶಕ್ತಿ...ಗೆಳತಿಯಲ್ಲಿ ತಾಯಿಯ ಅಂತಃಕರಣವಿದೆ ,ತಂದೆಯ ಕರ್ತವ್ಯಪ್ರಜ್ಞೆಯಿದೆ,ಮುಗ್ಧಮನಸಿದೆ,ನೋವನ್ನು ಮರೆಸಿ ಮರೆತ ನಗುವನ್ನು ಮತ್ತೆ ಮೂಡಿಸುವ ಚಾಕಚಕ್ಯತೆಯಿದೆ , ನಿನ್ನ ಆಂತರ್ಯದ ದನಿಗೆ ಕಿವಿಯಾಗುತ್ತೇನೆ ಎಂಬ ಭರವಸೆಯಿದೆ... ಇಂತಹ  ಸದಾ ಸ್ಪಂದಸುವ ಗೆಳತಿ ಮೊದಲು ನಾವಾಗಬೇಕು...ಆಗ ನಮಗೂ ಅಂತಹದೇ ಗೆಳತಿಯ ಇರುವಿಕೆಯ ಅರಿವಾಗುವುದು...


   

✍️... ಅನಿತಾ ಜಿ.ಕೆ.ಭಟ್.
08-01-2020.
Momspresso Kannada ದ ಬ್ಲಾಗಿಂಗ್ ಸ್ಪರ್ಧೆಗೆ ಬರೆದ ಬರಹ..

ನಡಿಗೆಯ ಠೀವಿ



ನುಣುಪಾದ ಟಾರು ರಸ್ತೆಯ ಮೇಲೆನ್ನ
ದಿನದಿನದ ಪಯಣ
ನಡೆಸಲಾರನು ದೇವ ಬದುಕ ಇಂತೆಯೇ
ಅನವರತ ಕಾಣಣ್ಣ||೧||

ಮೈಮೇಲೆ ಎಣ್ಣೆಯ ಪೂಸಿ ಉದರಕೆ
ಅಶನವನು ನೀಡಿ
ಸಾಕಿಹನು ಎನ್ನೊಡೆಯ ಎಳೆಯಲಿಕೆ
ಬಂಡಿಯನು ನೋಡಿ||೨||

ದೈವಚಿತ್ತವು ಬಗೆದಂತೆ ಸಾಗುತಿದೆ
ಬಾಳಿನ ಅಲೆದಾಟ
ಜನುಮವೆತ್ತ ಜೀವರಾಶಿಗಳ ನಿಲ್ಲದ
ಸಂತೃಪ್ತಿಯ ಹುಡುಕಾಟ||೩||

ಸುತ್ತ ಹಸಿರನು ಕಂಡು ಮನವು
ಮೀಟಿದೆ ಮುದಗೊಂಡು
ಅತ್ತ ನೋಡಿದರೆನ್ನ ಬೆನ್ನುಹುರಿ
ಚಾಟಿಯೇಟಿಗೆ ಒಡ್ಡಿಕೊಂಡು||೪||

ಮಣಭಾರದ ಪೆಟ್ಟಿಗೆ ಹೊರಲು
ನಾನೆ ಗಟ್ಟಿ ಆಳು
ಕೊರಳಪಟ್ಟಿಯ ಬಿಗಿದು ಹೊಸೆದರು
ನಡಿಗೆಯ ಠೀವಿ ಕೇಳು||೫||

ಮೇಲಿದ್ದಚಕ್ರಗಳು ಕೆಳಗೆ ಬರುತಿವೆ
ಮತ್ತೆ ಬಾಳವಿಧಿಯಂತೆ
ನಲಿವಿನಲೂ ನೋವಿನಲು ವಿಶ್ವಾಸದ
ಹೆಜ್ಜೆಯಿರಿಸಲುಬೇಕು ನನ್ನಂತೆ||೬||

ವರ್ಣವರ್ಣವ ಬೆರೆಸಿ ಮೈಮೇಲೆ
ಬಿಡಿಸಿದ ಚೆಲುಚಿತ್ತಾರ
ಭೇದ ಭಾವವ ಮರೆತು ದೃಢತೆಯಲಿ
ನಡೆದರೆ ಬಾಳುಬಂಗಾರ||೭||

✍️... ಅನಿತಾ ಜಿ.ಕೆ.ಭಟ್
02- 01-2020.
ಹವಿಸವಿ ಬಳಗದ ವಾರದ ಚಿತ್ರ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವನ.ಚಿತ್ರ ಕೃಪೆ :- ಹವಿಸವಿ ಬಳಗ.

Saturday, 4 January 2020

ಪ್ರಕೃತಿಯೊಡನೆ ಪ್ರೇಮಪಯಣ


ಚಳಿಯೂರಿನಿಂದ ಕರೆಯೊಂದು ಬಂದಿಹುದು
ಹೋಗೋಣವೇ ನಲ್ಲ ಚಳಿಯೂರಿಗೆ...
ಬಿಳಿಯಾದ ಆಗಸವು ನೀಲಿಸೆರಗನು ಹೊದ್ದು
ಕಾತರದಿ ಕಾದಿಹುದು ನಮ್ಮ ಬರುವಿಕೆಗೆ...||

ಹರಿಯುತಿಹ ಸಲಿಲವು ಶಶಿಯ ಪ್ರೇಮಕೆ
ಘನವಾಗಿ ಬುವಿಯ ತಬ್ಬಿಹುದು
ದಿನಕರನ ತುಂಟನೋಟಕೆ ಅದುರಿ
ಬಾಯ್ಬಿರಿದು ಆವಿಯಾಗಿಹುದು....||

ನಿನ್ನ ಒಲವಿನ ಕರವ ನನ್ನ ಕರದಲಿ
ಪಿಡಿದು ನಡೆಸುವೆಯ ಗೆಳೆಯ
ತೀರಿಸುವೆಯ ತೀರದ ಮರಳಿನಲಿ
ಜೋಡಿಯಾಗುತ ನೀ ನನ  ಬಯಕೆಯ...||

ಹೂ ಹಣ್ಣು ಹಸಿರಾಗಿ ಮಾಗಿಹುದು
ನೋಡಲ್ಲಿ ನನ್ನ ದೊರೆಯೇ
ಒಂಟಿ ಆಸನವು  ಮೇಲೆ ಕುಳಿತಿಹುದು
ವಿರಹದ ಬೇಗೆ ಮರೆಯೆ...||

ಮನದ ಜಂಜಡವೆಲ್ಲ ಕಾಡಿಸದೆ ಕಳೆದು
ಹಸಿರ ಮಡಿಲಲ್ಲಿ ಹಾಡುಹಕ್ಕಿಯಾಗಿ
ಇಂಪಾದ ಸಂಗೀತ ಹೊಮ್ಮುತಿರಬೇಕು
ತಂಪಾದ ಇಳೆಯಲ್ಲಿ ಶುಭ ಉದಯಕಾಗಿ...||

✍️... ಅನಿತಾ ಜಿ.ಕೆ.ಭಟ್.
04-01-2020.
ಚಿತ್ರ ಕೃಪೆ :-ಹವಿಸವಿ ಬಳಗ

ಮುದುಡಿಹೋದ ಬೆಸುಗೆ



ಮುದುಡಿಹೋದ ಬೆಸುಗೆಯೊಂದು
ಮತ್ತೆ ಮೂಡಬಲ್ಲದೇ
ಕದಡಿಹೋದ ಮನಸದಿಂದು
ಮತ್ತೆ ಕೂಡಬಲ್ಲದೇ...||೧||

ಜಾರಿಹೋದ ಕಣ್ಣಹನಿಯು
ನೂರು ಅರ್ಥವ ಸಾರಿದೆ
ತೂರಿಬಂದ ಭಾವವೆಲ್ಲ ಸೋರಿ
ಸೋರಿ ಕರಗಿದೆ...||೨||

ತಾಳಲಯದ ಗತಿಯದಿಂದು
ಹೇಳಕೇಳದೆ ಹೊರಟಿದೆ
ತೋಳಬಂಧನ ಒಲವಸ್ಪಂದನ
ಕೇಳಿಯೀಗ ಮರೆತಿದೆ...||೩||

ಸೂಜಿಬಿದ್ದ ಸದ್ದು ಕೂಡಾ
ಸೋಜಿಗದಿ ಅನುರಣಿಸಿದೆ
ಹೂಜಿಯಲ್ಲಿನ ತಂಪುನೀರೂ
ಬಿಸಿಯನಳಿಸಲು ಸೋತಿದೆ...||೪||

ಅರೆಬಿರಿದ ಮಲ್ಲೆ ಹೂವು
ಪರಿಮಳವ ತಾ ಹರಡಿದೆ
ಇರುಳುಗತ್ತಲ ಮರುಳುಮನವು
ಪ್ರೇಮಗಂಧವ ಮರೆತಿದೆ...||೫||

ಎಲ್ಲೆಮೀರಿದ ಸೊಲ್ಲದೆಂದು
ಮಾತು ಹೃದಯದಿ ಅವಿತಿದೆ
ಮೆಲ್ಲನುಸುರಿದ ನಲ್ಲನೆಂದು
ಮೌನ ಸುಖಕರವೆನಿಸಿದೆ...||೬||

ಕಾಂತಿಯಿರದ ಕಣ್ಣಕೊಳದಿ
ಭ್ರಾಂತಿಯೊಂದೇ ತುಂಬಿದೆ
ಇಂತಿ ಮನ್ನಿಸು ಎಂಬ ಭಾವದಿ
ಬಾಳಬಂಧವು ಚಿಗುರಿದೆ...||೭||

✍️... ಅನಿತಾ ಜಿ.ಕೆ.ಭಟ್.
04-01-2020.
ಚಿತ್ರ ಕೃಪೆ:-ಸೌಹಾರ್ದ ಬಳಗ
ಈ ಹಾಡನ್ನು ಯೂಟ್ಯೂಬ್ ನಲ್ಲಿ ಕೇಳಲು ಕೆಳಗಿನ ಲಿಂಕ್ ಬಳಸಿ..https://youtu.be/mTJxLCXehGo