Tuesday, 14 January 2020

ಕಲೆಯ ವರ್ಣಚಾದರ



ಬೀಸುವ ಸಮೀರ ಶರಧಿಗೆ ತೊಡಿಸಿದ
ಅಲೆಯ ಉಂಗುರ
ಅಸ್ತಮ ನೇಸರ ಹಾಸಿದ ದಿಗಂತದಿ
ಕಲೆಯ ವರ್ಣಚಾದರ||೧||

ದೋಣಿ ಪಯಣವು ಸಾಗಿ ಸಾಗಿ
ತೀರದಿ ತಾ ವಿರಮಿಸಿ
ವರ್ಣ ಭಾಸ್ಕರ   ಊರ ತಿರುಗಿ
ಅರುಹಿದ ಈಗ ಬರುವೆ ನಿದ್ರಿಸಿ||೨||

ಕೊತ್ತಲಗಳು ಗಗನಚುಂಬಿಸಿ
ಸಂಜೆರಾಗದಿ ಪುಳಕಗೊಂಡು
ಹಕ್ಕಿಪಿಕ್ಕಿ ಗುಂಪುಗೂಡಿಸಿ
ತಮ್ಮ ಗೂಡಿಗೆ ಸೇರಿಕೊಂಡು||೩||

ಒಂಟಿಮರವು ತಾನು ಬಯಸಿದೆ
ಹಿಮದ ಹಾಸಿನ ಆಲಿಂಗನ
ಗಂಟೆಯೋಡುತ ಜನರಕಾಣದೆ
ಜಲಬಾನಿನ ಶುಭಮಿಲನ||೪||

ನೀರಿನಲೆಯಲಿ ತೇಲಿಬಂದಿದೆ
ಭವ್ಯಬದುಕಿನ ದೀವಿಗೆ
ಹುಟ್ಟುಹಾಕುತ ದೋಣಿನಡೆಸುವ
ನಮ್ಮ ಬಾಳಿನ ಹಾದಿಗೆ||೫||

✍️... ಅನಿತಾ ಜಿ.ಕೆ.ಭಟ್.
14-01-2020.
ಚಿತ್ರ-ಹವಿಸವಿ ಕೃಪೆ
ಸವಿಸವಿ ಬಳಗದ ವಾರದ ಚಿತ್ರ ಕವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಕವನ..

2 comments:

  1. ಚಂದದ ಚಿತ್ರಕ್ಕೆ ಒಪ್ಪುವ ಸುಂದರ ಕವನ

    ReplyDelete
  2. ಧನ್ಯವಾದಗಳು 💐🙏

    ReplyDelete