Thursday, 30 April 2020

ಮಾವಿನ ಹಣ್ಣಿನ ಜಾಮ್ 😋😋😋😋😋😋😋😋😋😋😋👌👌👌

ಮಾವಿನ ಹಣ್ಣಿನ ಜಾಮ್


        ಜಾಮ್ ಎಂಬ ಹೆಸರು ಕೇಳಿದ ತಕ್ಷಣ ಸಾಮಾನ್ಯವಾಗಿ ಎಲ್ಲರ ಬಾಯಲ್ಲಿಯೂ ನೀರೂರುತ್ತದೆ. ಮಾರುಕಟ್ಟೆಯಲ್ಲಿ ತರತರದ ಜಾಮ್ ಗಳು ಇಂದು ಲಭ್ಯವಿವೆ. ನಮ್ಮ ಮನೆಯಲ್ಲಿ ಸಿಗುವ ತಾಜಾ ಹಣ್ಣಿನಿಂದ ಜಾಮ್ ಮಾಡಿದಾಗ ಅದು ರುಚಿಕರ ಹಾಗೂ ಆರೋಗ್ಯಕರ. ನಮ್ಮ ಕರಾವಳಿಯಲ್ಲಿ ಬೇಸಿಗೆಯಲ್ಲಿ ಲಭ್ಯವಿರುವಂತಹ ಸಿಹಿ-ಹುಳಿ ಮಿಶ್ರರುಚಿಯ ಕಾಟು ಮಾವಿನ ಹಣ್ಣಿನಿಂದ ಜಾಮ್  ಮಾಡುವ ಎಂದು ಹೊರಟೆ..ಪಾಕ ಬಹಳ ಚೆನ್ನಾಗಿ ಬಂತು. ರುಚಿಯಾಗಿತ್ತು ..ಎಲ್ಲರೂ ಇಷ್ಟಪಟ್ಟರು.. ಹೇಗೆ ಮಾಡಿದೆ ಅಂತ ಹೇಳ್ತೀನಿ.. ಓದಿ..ನೀವೂ ಮಾಡಿ ನೋಡಿ..

ಬೇಕಾಗುವ ಸಾಮಗ್ರಿಗಳು:-


*ಮಾವಿನ ಹಣ್ಣು

*ಸಕ್ಕರೆ:  ಮಾವಿನ ಹಣ್ಣಿನ ರಸದ ಮುಕ್ಕಾಲು ಭಾಗ(1cup ರಸ-ಮುಕ್ಕಾಲು ಕಪ್ ಸಕ್ಕರೆ)

*ಒಂದು ನಿಂಬೆಹಣ್ಣಿನ ರಸ


ಮಾಡುವ ವಿಧಾನ:-

      ಮಾವಿನಹಣ್ಣಿನ ಸಿಪ್ಪೆ ತೆಗೆದು ರಸಹಿಂಡಿ ಅಥವಾ ತುಂಡು ಮಾಡಿ ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿ. ಯಾವುದೇ ಕಾರಣಕ್ಕೂ ಜಾರಿನಲ್ಲಿ ತೇವಾಂಶವಿರಬಾರದು.. ನೀರು ಹಾಕಬಾರದು. ಅದನ್ನು ಕಡಾಯಿಗೆ ಹಾಕಿ.ಮಧ್ಯಮ ಉರಿಯಲ್ಲಿ ಕದಡುತ್ತಿರಿ...ಸುಮಾರು ಏಳೆಂಟು ನಿಮಿಷದ ನಂತರ ಮಾವಿನ ಹಣ್ಣಿನ ರಸದ ಮುಕ್ಕಾಲು ಭಾಗದಷ್ಟು ಸಕ್ಕರೆ ಸೇರಿಸಿ. ಅಂದರೆ ಒಂದು ಕಪ್ ಮಾವಿನ ಹಣ್ಣಿನ ರಸಕ್ಕೆ ಮುಕ್ಕಾಲು ಕಪ್ ಸಕ್ಕರೆ..
ನಂತರ ಏಳೆಂಟು ನಿಮಿಷಗಳ ಕಾಲ ಚೆನ್ನಾಗಿ ತಿರುವುತ್ತಿರಿ..
ಗಟ್ಟಿಯಾಗುತ್ತಾ ಬಂದಾಗ ನಿಂಬೆಹಣ್ಣಿನ ರಸ ಹಾಕಿ ಮತ್ತು ಸ್ವಲ್ಪ ಹೊತ್ತು ತಿರುವಿ. ಜಾಮ್ ಪಾಕದ ಹದ ಬಂದಾಗ ಗ್ಲಾಸ್ ಜಾರ್ ಅಥವಾ ಸ್ಟೀಲ್ ಪಾತ್ರೆಗೆ ಹಾಕಿಡಿ. ಬಿಸಿಬಿಸಿಯಾದ ಮಾವಿನ ಹಣ್ಣಿನ ಜಾಮ್ ಸವಿಯಲು ಸಿದ್ಧ. ತಣಿದ ನಂತರ ಬೇಕಾದರೆ ಪ್ಲಾಸ್ಟಿಕ್ ಕಂಟೇನರ್ ಗಳಲ್ಲಿ ಕೂಡ ಹಾಕಿಡಬಹುದು.ಹೊರಗಡೆ ಇಟ್ಟರೆ ಒಂದು ವಾರದ ತನಕವೂ ಉಳಿಯಬಹುದು.. ಫ್ರೀಜರಿನಲ್ಲಿಟ್ಟರೆ ತುಂಬಾ ಸಮಯದವರೆಗೆ ಬಳಸಬಹುದು.

      ನಾನು ಇಲ್ಲಿ ಯಾವುದೇ ಫುಡ್ ಕಲರ್ ಅಥವಾ ಪ್ರಿಸರ್ವೇಟಿವ್ ಬಳಸಿಲ್ಲ. ನೈಸರ್ಗಿಕವಾದ ಬಣ್ಣ. ನಾಲಿಗೆಗೂ ಬಹಳ ರುಚಿಕರವಾಗಿರುತ್ತದೆ.. . ಇದನ್ನು ತೆಳ್ಳವು, (ನೀರುದೋಸೆ) ಉದ್ದಿನ ದೋಸೆ, ಚಪಾತಿ, ರೋಟಿ , ಬ್ರೆಡ್ ಜೊತೆ ಸವಿಯಬಹುದು. ಅಥವಾ ಹಾಗೆಯೇ ಹಲ್ವ ತರಹ ತಿನ್ನಬಹುದು.. ತುಂಬಾ ಟೇಸ್ಟಿ ಟೇಸ್ಟಿ ಆಗಿರುತ್ತದೆ...ಟ್ರೈ ಮಾಡಿ ನೋಡಿ...


✍️...ಅನಿತಾ ಜಿ.ಕೆ. ಭಟ್ .
01-05 -2020.

ಜೀವನ ಮೈತ್ರಿ ಭಾಗ ೭೦(70)




ಜೀವನ ಮೈತ್ರಿ ಭಾಗ ೭೦

           ಸೌಜನ್ಯ ತನ್ನ ಕಣ್ಣರಳಿಸಿ ನಸುನಗುತ್ತಾ  "ಉತ್ತಮ ಅವಕಾಶ ದೊರೆತಿರುವುದು ನನ್ನ ಪುಣ್ಯ  "ಎಂದು ಹೇಳಿದಳು.ಅದನ್ನು ಕೇಳಿದ ಕೇಶವ " ಏನು ಪುಣ್ಯ..?  ಪರಪುರುಷನೊಂದಿಗೆ ವೇದಿಕೆಯ ಮೇಲೆ ನರ್ತಿಸುವುದು ನನಗೆ ಸರಿಕಾಣಲಿಲ್ಲ" ಎಂದಾಗ ಸೌಜನ್ಯಳ ಆಶಾಗೋಪುರ ಒಮ್ಮೆಲೆ ಕುಸಿದು ಬಿದ್ದಿತು.


"ಅಳಿಯಂದಿರೆ.. ನೀವು ತಿಳಿದುಕೊಂಡಿರುವುದು ತಪ್ಪು.ವೇದಿಕೆಯ ಮೇಲೆ ಹಾಡಿಗೆ ತಕ್ಕಂತೆ ಭಾವ ಹೊರಹೊಮ್ಮಿಸುತ್ತಾ ಬರೀ ನಟನೆ ಮಾಡುವುದೇ ಹೊರತು ಪಾತ್ರಧಾರಿಗಳ ನಡುವೆ ವೈಯಕ್ತಿಕ ಭಾವ ವಿನಿಮಯ ನಡೆಯುವುದಿಲ್ಲ.ಕಾರ್ಯಕ್ರಮ ಮುಗಿದ ನಂತರ ಆತನಾರೋ..ಈಕೆ ಯಾರೋ.." ಎಂದು ವಿವರಿಸಿದರು ರೇಖಾ.


"ಆದರೂ..ಅತ್ತೆ... ಇನ್ನು ಭರತನಾಟ್ಯದ ಸಮಾರಂಭಗಳಲ್ಲಿ ಭಾಗವಹಿಸುವುದು ಬೇಡವೆಂದು ನನ್ನ ಅಭಿಪ್ರಾಯ.."


ಸೌಜನ್ಯ ಗಾಳಿಹೋದ ಬೆಲೂನಿನಂತಾಗಿದ್ದಳು.

ರೇಖಾ ಮಾತು ಮುಂದುವರಿಸುತ್ತಾ"ಕಲೆ ಯಾರದೂ ವೈಯಕ್ತಿಕ ಸ್ವತ್ತಲ್ಲ.ಅದು ಒಬ್ಬೊಬ್ಬರಿಗೆ ತನ್ನಿಂತಾನೇ ಒಲಿಯುತ್ತದೆ.ಜೊತೆಗೆ ಪರಿಶ್ರಮ, ಆಸಕ್ತಿಯೂ ಸೇರಿದಾಗ  ಜನರಿಂದ ಗುರುತಿಸಲ್ಪಡುತ್ತದೆ.ಪ್ರತಿಭೆಯನ್ನು ಬೆಳೆಸಬೇಕೇ ವಿನಃ ಚಿವುಟುವ ಪ್ರಯತ್ನ ಮಾಡಬಾರದು..."ಎಂದರು.


           ಅವರೆದುರು ವಾದಮಾಡುವುದು ಬೇಡವೆಂದು ಸುಮ್ಮನಾದ ಕೇಶವ.ನರಸಿಂಹ ರಾಯರು ಇಂತಹ ವಿಷಯದಲ್ಲಿ ಚರ್ಚೆ ಬೇಡವೆಂದು ಸುಮ್ಮನಾದರು.ತಾವು ಫ್ರೆಶ್ ಆಗಿ ಬಂದರು.ಅಷ್ಟರಲ್ಲಿ ಕೇಶವನೂ ರೆಡಿಯಾದ.ಮಾವ ಅಳಿಯ ಡೈನಿಂಗ್ ಟೇಬಲ್ ಮೇಲೆ ರೇಖಾ ಇರಿಸಿದ್ದ ಊಟ ಮಾಡಿದರು.ರೇಖಾ ಬೇರೆ ಕೆಲಸಗಳಲ್ಲಿ ತೊಡಗಿದ್ದರು. ಸೌಜನ್ಯ ಮನಸ್ಸು ಸರಿಯಿಲ್ಲದೆ "ಹಸಿವಿಲ್ಲ" ಎಂದು ಹೇಳಿ ರೂಮು ಸೇರಿದ್ದಳು.


        ಕೇಶವ ಊಟ ಮಾಡಿ ಬಂದಾಗ ಸೌಜನ್ಯ ತನ್ನ ನೃತ್ಯದ ಬಟ್ಟೆಗಳನ್ನು ಜೋಡಿಸುತ್ತಿದ್ದಳು.ಇನ್ನು ತನಗಿದನ್ನು ಧರಿಸಿ ನೃತ್ಯಗೈಯ್ಯಲು  ಪತಿ ಒಪ್ಪುತ್ತಾರೋ ಇಲ್ಲವೋ ಎಂಬ ದುಃಖದಿಂದ ಕಾಲಿಗೆ ಧರಿಸುವ ಗೆಜ್ಜೆಯನ್ನೊಮ್ಮೆ ಮೈದಡವಿದಳು.ನುಣುಪಾದ ವರ್ಣರಂಜಿತವಾಗಿ ಮನಸೂರೆಗೊಳ್ಳುವ  ನೃತ್ಯದ ಬಟ್ಟೆಯನ್ನೇ ದಿಟ್ಟಿಸುತ್ತಿದ್ದಳು.ಹಿಂದಿನಿಂದ ಪತಿ ಬಂದುದು ಅರಿವಾಗಲಿಲ್ಲ.ಕೇಶವ ಬಂದು ಪತ್ನಿಯ ಭುಜದ ಮೇಲೆ ಕೈಯಿಟ್ಟು  ಪತ್ನಿಯ ಮುಖದ ಸಮೀಪವೇ ತನ್ನ ವದನವನ್ನು ತಂದು ಮೆಲ್ಲನೆ "ಸೌಜನ್ಯಾ.." ಅಂದ.ಅವಳು ಮಾತನಾಡದೆ ಗಂಭೀರವಾಗಿ ಇದ್ದಳು.ಮತ್ತಷ್ಟು ಹತ್ತಿರದಿಂದ ತನ್ನೆರಡೂ ಕೈಗಳನ್ನು ಅವಳ ಹೆಗಲಮೇಲಿರಿಸಿ ಕರೆದರೂ ಉತ್ತರವಿಲ್ಲ.ಬದಲಾಗಿ ಅಲ್ಲಿಂದ ಎದ್ದು ಬಾಲ್ಕನಿಗೆ ನಡೆದಳು.ಕೇಶವ ಆಕೆಯ ಹಿಂದೆಯೇ ಹೋದ.ಕೇಶವನಿಗೆ 'ನೃತ್ಯ ಮಾಡುತ್ತಿರಬೇಕಾದರೆ ಅಷ್ಟೆಲ್ಲ ಶೃಂಗಾರ ರಸವನ್ನು ವೈಭವೀಕರಿಸಿದ ಮಡದಿ ... ಪತಿ ಸನಿಹಕೆ ಬಂದರೆ ಹೀಗಾಡುವುದೇಕೆ ' ಎಂಬುದೇ ತಿಳಿಯಲಿಲ್ಲ.'ಕೆಲವೊಂದರಲ್ಲಿ ದಡ್ಡ..!! ನನ್ನ ಪತಿ' ಎಂದು ಕೊಳ್ಳುತ್ತಿದ್ದಳು ಸೌಜನ್ಯ.


        ಕೇಶವ "ಏನಾಯ್ತು.. ಯಾಕೆ ಹೀಗೆ..?" ಎನ್ನುತ್ತಾ ಬಳಸಿ ಮಧುಹೀರುವ ದುಂಬಿಯಾದ..ಆಕೆ ಇದೇ ಸಮಯ ಪತಿಯನ್ನು ಮಣಿಸಲು ಎಂದು ಆ ಬಂಧನದಿಂದ ಬಿಡಿಸಿಕೊಂಡು ಮುಖ ಊದಿಸಿಕೊಂಡು ನಿಂತಳು.ಅವಳಾಟಕೆ ಕೇಶವ ಸೋಲಲೇಬೇಕಾಯಿತು.

       ಸಮಾಧಾನಿಸಲು ಬಂದ ಕೇಶವನಿಗೆ ಒಂದು ಕಂಡೀಷನ್ ಹಾಕಿದಳು ಸೌಜನ್ಯ.. "ನನ್ನನ್ನು ಭರತನಾಟ್ಯ, ಸಂಗೀತದಲ್ಲಿ ತೊಡಗಿಸಿಕೊಳ್ಳಲು ಒಪ್ಪಿದರೆ ಮಾತ್ರ.." .ಎಂದವಳ ಮಾತಿಗೆ ಹೂಂಗುಟ್ಟಬೇಕಾದ ಅನಿವಾರ್ಯತೆ ಕೇಶವನಿಗೆ..ಕೇಶವನ ಒಪ್ಪಿಗೆಯ ಮುದ್ರೆ ಬಿದ್ದದ್ದೇ ತಡ ಅವನೊಲವಿನ ಕರೆಗೆ ಸಿಹಿಮುದ್ರೆಯನಿತ್ತು  ಅವನಿಟ್ಟ ಕಚಗುಳಿಗೆ ಕೆನ್ನೆ ಕೆಂಪೇರಿಸಿಕೊಂಡಳು.


       ಸೌಜನ್ಯಳಿಗೆ ಕೇಶವನನ್ನು ತನ್ನಿಷ್ಟಕ್ಕೆ ತಕ್ಕಂತೆ ಬಗ್ಗಿಸಲು ಅದೇ ಪ್ರಬಲವಾದ ಅಸ್ತ್ರ ವಾಯಿತು.ಕೇಶವನಿಗೆ ಅನಿವಾರ್ಯತೆ.ಗಂಡನನ್ನು ತನ್ನ ಬುದ್ಧಿಬಲದಿಂದ ಮಣಿಸಿದ ಅವಳಲ್ಲಿ  ಇವನನ್ನು ತನ್ನ ಕಿರುಬೆರಳಿನಲ್ಲಿ ಆಡಿಸಬೇಕು ಎಂಬ ಭಾವನೆ ಬಲವಾಗಿತ್ತು.


            ******

      ರೇಖಾ ಮಲಗಲು ಬಂದ ಪತಿಯನ್ನು "ಮಾತನಾಡುವುದಿದೆ.." ಎಂದು ಕರೆದು "ಅಳಿಯನಿಗೆ ನೀವಾದರೂ ಬುದ್ಧಿ ಹೇಳಬಾರದಿತ್ತೇ.. ?"ಎಂದು ಗದರಿದರು.

"ಇಂತಹ ವಿಷಯದಲ್ಲಿ ನಾವು ಮಧ್ಯೆ ಬಾಯಿ ಹಾಕಬಾರದು. ಅದು ಅವರಿಬ್ಬರೂ ಮಾತನಾಡಿ ಸರಿಪಡಿಸಬೇಕಾದದ್ದು."

"ಅಲ್ಲ..ರೀ ನಮ್ಮ ಎದುರೇ ಸೌಜನ್ಯಳನ್ನು ಹಾಗೆ ಹೇಳುತ್ತಾನಲ್ಲ.. ಮಗಳನ್ನು ಅವಮಾನಿಸಿದಾಗ ನಿಮಗೆ ಏನೂ ಅನಿಸುವುದಿಲ್ಲವೇ..?"


"ಮದುವೆಯಾಗುವವರೆಗೆ ಮಗಳು ನಮ್ಮವಳು. ಮತ್ತೇನಿದ್ದರೂ ಗಂಡನಿಗೆ, ಗಂಡನ ಮನೆಯವರಿಗೆ ಬೇಕಾದಂತೆ ಹೊಂದಿಕೊಂಡು ಹೋಗಬೇಕಾದವಳು. ಹಾಗಿರುವಾಗ ನಾವು ಬುದ್ಧಿ ಹೇಳುವುದರಲ್ಲಿ ಅರ್ಥವಿಲ್ಲ. ತೀರಾ ತಪ್ಪಾಗಿದ್ದರೆ ಮಾತ್ರ ಎಚ್ಚರಿಸಿದರೆ ಸಾಕು."


"ನೀವು ಅಳಿಯಂದಿರ ಪರವಾಗಿಯೇ ಮಾತನಾಡುತ್ತೀರಲ್ಲಾ...!!"


"ಮತ್ತೆ ಏನು ರೇಖಾ.. ಆಕೆಯ ಜೀವನ ಹಳಿ ತಪ್ಪಿ ಹೋಗಿ ಸರಿಪಡಿಸಲು ನಾವೆಷ್ಟು ಕಷ್ಟಪಟ್ಟಿದ್ದೇವೆ.ಯೋಚಿಸು ಒಮ್ಮೆ.. ಈಗ ಒಂದು ಹಂತಕ್ಕೆ ಬಂದಾಗ ಪುನಃ ಹಾಳು ಮಾಡಿಕೊಳ್ಳಬಾರದು ಅಲ್ವಾ..ನಮ್ಮ ಸಲಹೆಗಳು ಮಗಳ ಸುಂದರ ಬಾಳನ್ನು ಕೆಡಿಸಬಾರದು ಎಂಬ ಎಚ್ಚರ ನಮಗಿರಬೇಕು..."

"ಹೌದು ಹೌದು ... ಭರತನಾಟ್ಯ  ಮಾಡಿದರೆ  ಹಾಳಾಗುತ್ತದೆ ಬದುಕು.. ನೀವು ಇನ್ನೂ ಯಾವ ಕಾಲದಲ್ಲಿದ್ದೀರಿ.?."

"ಅರ್ಥವಿಲ್ಲದ ವಾದ ಮಾಡಬಾರದು. ಮೊನ್ನೆ ಮದುವೆಯಾಗಿ ವಧೂಗೃಹಪ್ರವೇಶ ಕಾರ್ಯಕ್ರಮ ಮುಗಿಯುವ ಮುನ್ನವೇ ಮತ್ತೆ  ಬಶೀರ ಬಂದು ಆಕೆಯ ತೋಳು ಹಿಡಿದಿದೆಳೆದಿದ್ದ.. ನೆನಪಿದೆಯೇ..? ಹೀಗೆ ಪ್ರೋಗ್ರಾಮ್ ಅಂತ ಸುತ್ತಿದಾಗ ಅವನೆಲ್ಲಿಯಾದರೂ ಪುನಹ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದರೆ.."


ರೇಖಾ ಪತಿಯ ಮಾತನ್ನು ಅರ್ಥೈಸಿಕೊಂಡು  'ಹೌದು..ಇವರ ವಾದದಲ್ಲೂ ಹುರುಳಿದೆ'..ಎಂದು ಯೋಚಿಸುತ್ತಿದ್ದರು.


"ಕೆಟ್ಟವರಿಗೆ ಎಲ್ಲಿ ಕೇಡುಬಗೆಯಲು  ಅವಕಾಶ ಸಿಗುತ್ತದೆ ಎಂದು ಕಾಯುವುದು ಕೆಲಸ .ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ನನ್ನ ಪ್ರಕಾರ ಸಧ್ಯ ಭರತನಾಟ್ಯ , ಸಂಗೀತ ಎಂದು ಮನೆಯಿಂದ ಹೊರಗೆ ಹೋಗದಿರುವುದೇ ಲೇಸು.."

"ಇನ್ನೂ ಸೇಡು ತೀರಿಸಲು ಪ್ರಯತ್ನಿಸಬಹುದು ಅಂದುಕೊಳ್ಳುತ್ತೀರ.."

"ಹೇಳಲು ಸಾಧ್ಯವಿಲ್ಲ. ಕಾಮಾತುರಾಣಾಂ ನ ಭಯಂ ನ ಲಜ್ಜಾಃ." ಎಂಬ ಮಾತೇ ಇದೆ. ಅಲ್ಲದೆ ಇಂತಹ ಕಾರ್ಯಕ್ರಮಗಳು ರಾತ್ರಿಯ ಹೊತ್ತಿನಲ್ಲಿ ನಡೆಯುವುದು.ನಾವೂ ಜೊತೆಗಿರುವುದಿಲ್ಲ... ಕೇಡು ಬಯಸುವವರಿಗೆ ಇಂತಹ ಸಂದರ್ಭ ಅತಿ ಸುಲಭ."


"ನಾನು ಈ ದೃಷ್ಟಿಕೋನದಿಂದ ಆಲೋಚನೆ ಮಾಡಿಲ್ಲ..ರೀತಿ.."

"ಅಲ್ಲದೆ ಈಗ ಮಗಳು ಅಳಿಯ ನಮ್ಮ ಮನೆಯಲ್ಲಿ ನೆಮ್ಮದಿಯಿಂದ ಇದ್ದಾರೆ. ಅದುವೆ ನಮ್ಮ ಸೌಭಾಗ್ಯ ಎಂದು ತಿಳಿಯಬೇಕು.ಅವರಿಗೆ ಬುದ್ಧಿ ಹೇಳುವುದು ,ತಿದ್ದುವುದು ಎಂದು ನಾವು ಕಿರಿಕಿರಿ ಮಾಡಿದರೆ ನಾಳೆ ತಮ್ಮದೇ ಮನೆ ಮಾಡಿಕೊಳ್ಳುತ್ತೇವೆ ಎಂದು ಬೇರೆ ಕಡೆ ಹೋದರೆ ನಮಗಾದರೂ ಯಾರಿದ್ದಾರೆ..
? ಮನೆ ಅಳಿಯ ಸಿಕ್ಕಿದ್ದು, ಮಗಳ ಬಾಳು ಸರಿ ಹೋದದ್ದು ನಮ್ಮ ಪುಣ್ಯ ಎಂದು ತಿಳಿ. ಪ್ರತಿಯೊಂದರಲ್ಲೂ ಎದುರು ಮಾತನಾಡಲು ಹೋಗಬಾರದು ತಿಳಿಯಿತಾ.."


"ಆಯ್ತು ..ಹಾಗೆ ಮಾಡುವೆ..ಒಟ್ಟಿನಲ್ಲಿ ಮಗಳು ಚೆನ್ನಾಗಿದ್ದರೆ ಸಾಕು."ಎಂದು ತಾವು ಮುಸುಕೆಳೆದುಕೊಂಡರು.


            ******


        ಶಾಸ್ತ್ರೀ ನಿವಾಸದಲ್ಲಿ ಮದುವೆಗೆ ಇನ್ನು 10 ದಿನಗಳು ಇರುವುದು ಎಂದು ಚಪ್ಪರದ ಕೆಲಸ ವೇಗವಾಗಿ ಸಾಗುತ್ತಿತ್ತು. ದಿನವೂ 25 ಕೆಲಸದಾಳುಗಳು ಮದುವೆಯ ತಯಾರಿಗೆಂದೇ  ಶ್ರಮ ಪಡುತ್ತಿದ್ದರು.ಶ್ಯಾಮಶಾಸ್ತ್ರಿಗಳು ಮುಂದೆ ನಿಂತು ಮಗನಿಗೆ ಮಾರ್ಗದರ್ಶನವನ್ನು ಮಾಡುತ್ತಿದ್ದರು.ದೊಡ್ಡದಾಗಿ ಕೊಪ್ಪರಿಗೆ  ಒಲೆಯನ್ನು ಹಾಕಿದ್ದು ಹಿಂದಿನಿಂದಲೇ ಶಾಸ್ತ್ರಿಗಳ ಮನೆತನಕ್ಕೆ ಕೊಪ್ಪರಿಗೆ ಒಲೆ ಹಾಕುತ್ತಿದ್ದ ಸೀನಪ್ಪ. ಶ್ಯಾಮ ಶಾಸ್ತ್ರಿಗಳೇ ಸ್ಥಳ ತೋರಿಸಿ  ತಾವೇ ನಿಂತು ಉಸ್ತುವಾರಿ ವಹಿಸಿದ್ದರು. ಸೀನಪ್ಪನಿಗೆ ಈಗ ವಯಸ್ಸು 78 ಆದರೂ... ಶಾಸ್ತ್ರಿ ದನಿಯ ಮನೆ ಮದುವೆಯೆಂದರೆ ಅವನಿಗೂ  ಯೌವ್ವನದ ಹುರುಪು ಬಂದಿತ್ತು.ಕಾಲು ನೋವು ಅನ್ನುವುದನ್ನು ಲೆಕ್ಕಿಸದೆ ಅಚ್ಚುಕಟ್ಟಾಗಿ ಕೊಪ್ಪರಿಗೆ ಒಲೆಯನ್ನು ಸಿದ್ಧಪಡಿಸಿ ಕೊಟ್ಟಿದ್ದ.ಮದುವೆಯ ಮುನ್ನಾ ದಿನವೇ ಬಂದು ಕೊಪ್ಪರಿಗೆಯನ್ನು ಉಪ್ಪರಿಗೆಯಿಂದ ಕೆಳಗಿಳಿಸಿ.. ತೊಳೆದು ಶುಚಿ ಗೊಳಿಸುವ ಜವಾಬ್ದಾರಿಯು ನನ್ನದೇ ಎಂದು ಹೇಳಿ ತೆರಳಿದ್ದ.

       ಶಾಸ್ತ್ರೀ ನಿವಾಸದಲ್ಲಿ ಮದುವೆ ಎಂದು ಗೊತ್ತಾದಾಗ ಲೀಸಾ ಬಾಯಮ್ಮ "ನಮ್ಮ ಮನೆಯ ಮಲ್ಲಿಗೆ ಆ ದಿನ ನಿಮ್ಮ ಮನೆಗೆ .ಮೈತ್ರಿಯಮ್ಮ ನಮ್ಮ ತೋಟದ ಮಲ್ಲಿಗೆ ಮುಡಿದು ಮಂಟಪದಲ್ಲಿ ನಿಲ್ಲಬೇಕು..ಪೇಟೆ  ಮಲ್ಲಿಗೆ ಬೇಗ ಕಪ್ಪಾಗುವುದು..ನಮ್ಮದು ತಾಜಾ  ಮಲ್ಲಿಗೆ..".ಎಂದು ಶಾಸ್ತ್ರೀ ಮೇಸ್ಟ್ರಿಗೆ ಮೊದಲೇ ಹೇಳಿದ್ದಳು. ಲೀಸಾ ಬಾಯಮ್ಮ ಮಲ್ಲಿಗೆ ಕೃಷಿಯಲ್ಲಿ ಬಹಳ ಮುಂದೆ ಇರುವ. ದಿನವೂ 15 ಅಟ್ಟೆ ಮಲ್ಲಿಗೆ  ಮಾರುವವರು. ಆಕೆಯ ಗಂಡ ಗುಡ್ಡದಲ್ಲಿ  ತರಕಾರಿ ಬೆಳೆಯುತ್ತಿದ್ದಾರೆ."ತರಕಾರಿ ನಮ್ಮಲ್ಲಿಂದ  ಕೊಡುತ್ತೇವೆ ಮೇಷ್ಟ್ರೇ .."ಎಂದಿದ್ದ.


     ಶಾಸ್ತ್ರಿ ಮನೆತನದ ಅದ್ದೂರಿ ಸಾಂಪ್ರದಾಯಿಕ ಮದುವೆಗೆ ಊರಿಗೆ ಊರೇ ಸಂಭ್ರಮಪಟ್ಟು ಕೈಜೋಡಿಸಿ ಕಾತರದಿಂದ ಕಾಯುತ್ತಿತ್ತು.


ಮುಂದುವರಿಯುವುದು..

✍️...ಅನಿತಾ ಜಿ .ಕೆ .ಭಟ್
01-05-2020.

Wednesday, 29 April 2020

ಜೀವನ ಮೈತ್ರಿ ಭಾಗ ೬೯(69)




ಜೀವನ ಮೈತ್ರಿ ಭಾಗ ೬೯


       ಒಮ್ಮೆ ಮನಸ್ಸೆಂಬ ಕಡಲು  ಪ್ರಕ್ಷುಬ್ಧವಾಗಿ ಮತ್ತೆ ಈಗ ಶಾಂತವಾಯಿತು. ಮನುಷ್ಯನ ಬದುಕೇ ಹೀಗೆ.. ಏರಿಳಿತಗಳಿಂದ ,ಸುಖ-ದುಃಖಗಳಿಂದ ಆವೃತವಾಗಿರುತ್ತದೆ.ಬರಿಯ ಸುಖ ಮಾತ್ರವೇ ಇದ್ದರೆ ಆ ಸುಖದ ಸವಿಯನ್ನು ನಾವು ಗ್ರಹಿಸಲು ಅಸಮರ್ಥವಾಗುತ್ತೇವೆ..ಮಧ್ಯೆ ದುಃಖದ ಛಾಯೆ  ಮಿಳಿತವಾದರೆ ಆಗ ಸುಖದ ಅಮೃತಸತ್ವ ನಮಗೆ ತಿಳಿಯುವುದು. ನಮ್ಮೊಂದಿಗೆ ನಗುನಗುತ್ತಾ ಬೆರೆಯುವ ಹಲವರ  ನಗುವಿನ ಹಿಂದೆ ನೋವಿದೆಯೋ ನಲಿವಿದೆಯೋ ಪಿತೂರಿಯಿದೆಯೋ ನಮಗೆ ತಿಳಿಯದು. ಎದುರಿನಿಂದ ಹಾಡಿಹೊಗಳುವ ಜನಗಣ ನಮ್ಮ ಸುತ್ತುವರೆದಿರುತ್ತದೆ. ಆದರೆ ಅವರ ಇನ್ನೊಂದು ಮುಖ ಅರಿವಾಗುವುದು ಇಂತಹ ಸಂದರ್ಭ ಬಂದಾಗಲೇ.ಆದ್ದರಿಂದ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರವಿರಬೇಕು ಎಂಬುದು ಎಲ್ಲರಿಗೂ ಅರಿವಾಯಿತು.


    ಶಾಸ್ತ್ರಿಗಳ ಕುಟುಂಬಕ್ಕೆ ಈಗ ಶಶಿಯ  ಇನ್ನೊಂದು ಮುಖ ಅರಿವಾಗಿ ಆಕೆಗೆ ಮೊದಲು ಕೊಡುತ್ತಿದ್ದ ಗೌರವ ಕಡಿಮೆಯಾಯಿತು. ಮನೆಯ ವಿಷಯಗಳು ಸೋರಿ ಹೋಗದಂತೆ  ಗೌಪ್ಯತೆ ಕಾಪಾಡಲು ಕಾಪಾಡಲು ಎಲ್ಲರೂ ಒಗ್ಗಟ್ಟಾದರು.


        ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದವು. ಮೈತ್ರಿ ತನ್ನ ಪರೀಕ್ಷೆ ಓದಿನತ್ತ ಗಮನಹರಿಸಿದಳು. ಮಹೇಶನಿಗೂ ಈಗ ಪರೀಕ್ಷೆ ನಡೆಯುತ್ತಿರುವುದರಿಂದ ಅವನು ಓದಿನಲ್ಲಿ ತಲ್ಲೀನನಾದ. ಭಾಸ್ಕರ ಶಾಸ್ತ್ರಿಗಳು ಉದ್ಯೋಗಕ್ಕೆ ರಜೆ ಹಾಕಿ ಮಗಳ ಮದುವೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.


ಮೈತ್ರಿ ಕಿಶನ್ ಗೆ ಕರೆ ಮಾಡಿ ನಡೆದ ಸಂಗತಿಯನ್ನು ಹೇಳಿದಳು."ನಿಮ್ಮಪ್ಪನ ಈ ಶಿಸ್ತಿನ ಗುಣ ನನಗೆ ಇಷ್ಟವಾಯಿತು" ಎಂದನು ಕಿಶನ್.

"ಅಪ್ಪ ಎಲ್ಲ ವಿಷಯದಲ್ಲೂ ಶಿಸ್ತನ್ನು ತೋರಿಸುವುದು ..ನನ್ನ ವಿಷಯದಲ್ಲಿಯೂ ಹಾಗೆ"

"ಹೌದು ಮುದ್ಗೊಂಬೆ.. ನಮ್ಮ ಪ್ರೀತಿಗೋಸ್ಕರ ನಿನ್ನ ನನ್ನ ಸಂಭಾಷಣೆಯ ಕಳ್ಳಾಟ ನೆನಪಾದರೆ ಈಗ ನಗೆ ಬರುತ್ತಿದೆ..."

"ಎಷ್ಟು ಸಲ ಸಿಕ್ಕಿಬೀಳುವಂತಾದರೂ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದೆ.."

"ಜಾಣೆ.. ಅಪ್ಪನ ಶಿಸ್ತಿನ ಹಿಂದೆ ಮಗಳ ಮೇಲೆ ಪ್ರೀತಿ ಇದೆ ಕಾಳಜಿ ಇದೆ.."

"ಹೌದು ..ಅದು ಈಗ ನನಗೆ ಅರಿವಾಗುತ್ತಿದೆ."

"ಇನ್ನು ಮದುವೆಗೆ ದಿನದ ಬೆರಳೆಣಿಕೆ ಶುರುವಾಗಿದೆ.. ನಾನಂತೂ ಕನಸಿನ ಮಹಲಿನಲ್ಲಿ  ವಿಹರಿಸುತ್ತಿದ್ದೇನೆ."

"ಆ ಮಹಲಿನಲ್ಲಿ ನಾನು  ಯುವ ರಾಣಿಯಾಗಿ ಕಂಗೊಳಿಸುವ ದಿನ ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೇನೆ.."

"ಓಕೆ ಮುದ್ಗೊಂಬೆ.. ಸ್ವೀಟ್ ಡ್ರೀಮ್ಸ್.. ಬಾಯ್ ಬಾಯ್.."

"ಬಾಯ್"


        ********

           ಸೌಜನ್ಯ ಕೇಶವನ ಸಂಸಾರ ಸುಖಮಯವಾಗಿ ನಡೆಯುತ್ತಿತ್ತು.. ಬೆಳಗ್ಗೆ ಬೇಗ ಎದ್ದು ಕೇಶವನನ್ನು ಹೊರಡಿಸುವುದು ಸೌಜನ್ಯಳಿಗೆ ಬೇಸರದ ಕೆಲಸವಾಗಿತ್ತು.. ಆದರೂ ಏನೂ ಬೇಸರವನ್ನು ತೋರಿಸಿಕೊಳ್ಳದೆ ಅಡುಗೆ ಮಾಡಿ ತಿಂಡಿ ಮಾಡಿ ಗಂಡನಿಗೆ ಉಣಬಡಿಸಿ ಕಳುಹಿಸಿಕೊಡುತ್ತಿದ್ದಳು.ಅಮ್ಮನೂ ಜೊತೆಯಾಗುತ್ತಿದ್ದರು. ಇತ್ತೀಚೆಗಂತೂ ಸುನಿತಾ ಬರುವುದನ್ನು ನಿಲ್ಲಿಸಿದ್ದಳು. ಅಮ್ಮ-ಅಪ್ಪ ಉದ್ಯೋಗಕ್ಕೆ ತೆರಳುತ್ತಿದ್ದರು. ಈಗ ಮೊದಲಿನಂತೆ ಸಂಗೀತ ,ಭರತನಾಟ್ಯ ,ಓದು ಎಂದು ಮಹಡಿಯ ರೂಮಿನಲ್ಲಿ ಕುಳಿತರೆ ಆಗುತ್ತಿರಲಿಲ್ಲ .ಮನೆಯ ಕೆಲಸಗಳನ್ನು ಮಾಡಲೇಬೇಕಿತ್ತು. ಕೆಲಸದಲ್ಲಿ ಸ್ವಲ್ಪ ಆಲಸ್ಯವಿದ್ದ ಸೌಜನ್ಯಳಿಗೆ ಮನೆಯ ಕೆಲಸ ಸಾಕು ಬೇಕಾಗುತ್ತಿತ್ತು..


         ಎಲ್ಲರೂ ಮನೆಗೆ ಹಿಂತಿರುಗುವಾಗ ಮನೆ ಅಚ್ಚುಕಟ್ಟಾಗಿ ಇಡುವುದು ಅವಳಿಗೆ ಸವಾಲಾಗಿತ್ತು. ಅಮ್ಮ "ಇರಲಿ ಬಿಡು..ನಾನೇ ಮಾಡುತ್ತೇನೆ " ಅಂದರೂ ತಡರಾತ್ರಿಯವರೆಗೆ ಕೆಲಸ ಮಾಡುವ ಅಮ್ಮನನ್ನು ಕಂಡರೆ ಅವಳಿಗೆ ಕನಿಕರ ಉಂಟಾಗುತ್ತಿತ್ತು.. ಆದ್ದರಿಂದ ತನಗೆ ಸಾಧ್ಯವಾದಷ್ಟು ಕೆಲಸವನ್ನು ಮಾಡಿ ಮುಗಿಸುತ್ತಿದ್ದಳು....ಮದುವೆಯಾಗಿ ಕೆಲವು ದಿನದಲ್ಲಿ ಶರೀರದ ಕೊಬ್ಬು ಕರಗಲು ಆರಂಭವಾಗಿತ್ತು.. ಮನೆಗೆಲಸದಿಂದ ಸಾಕಷ್ಟು ವ್ಯಾಯಾಮ ದೊರಕುತ್ತಿತ್ತು.. ರುಚಿಕರವಾದ ತಿಂಡಿ ಮಾಡಿಕೊಡದಿದ್ದರೆ ಕೇಶವನಂತೂ ಒಪ್ಪುತ್ತಿರಲಿಲ್ಲ. ಅಚ್ಚುಕಟ್ಟಿನ ವಿಷಯದಲ್ಲೂ ಅಷ್ಟೇ. ಅವನು ಸಂಜೆ ಬಂದಾಗ ರೂಮ್ ಗಲೀಜಾಗಿದ್ದರೆ ಸೌಜನ್ಯಳಿಗೆ ಹೇಳಿ ಅಲ್ಲೇ ಸರಿ ಮಾಡಿಸುತ್ತಿದ್ದ.. ಇದಂತೂ ಸೌಜನ್ಯಳಿಗೆ ನುಂಗಲಾರದ ತುತ್ತಾಗಿತ್ತು. ಪ್ರೀತಿಯಿಂದ ಒಬ್ಬಳೇ ಮಗಳೆಂದು ಏನೂ ಕೆಲಸ ಮಾಡಿಸದೆ ಬೆಳೆದ ಮಗಳು ಈಗ ಗಂಡನ ಶಿಸ್ತಿಗೆ ಅಂಜಿ ಕೆಲಸ ಮಾಡಬೇಕಾಗಿತ್ತು..


         ರೇಖಾಗೆ ಈ ವಿಷಯದಲ್ಲಿ ಅಳಿಯಂದಿರ ಮೇಲೆ ಸ್ವಲ್ಪ ಅಸಮಾಧಾನ ಉಂಟಾಯಿತು. ಆದರೂ ತುಟಿ ಕಚ್ಚಿಕೊಂಡು ಸಹಿಸಿದರು.ಅಳಿಯಂದಿರು ನಮ್ಮಂತೆ ಆಫೀಸಿನಿಂದ ಬಂದ ಮೇಲೆ ಸ್ವಲ್ಪ ಕೆಲಸವನ್ನು ಮಾಡಿಕೊಂಡರೆ ಒಳ್ಳೆಯದು ಎಂದು ಅವರ ಭಾವನೆ ಆಗಿತ್ತು. ಆದರೆ ಮನೆಗೆಲಸದಲ್ಲಿ ಸಹಕರಿಸುವ ಉಮೇದು ಕೇಶವನಿಗೆ ಇರಲಿಲ್ಲ. ಹೀಗಿರುವಾಗ ಒಂದು ದಿನ ಸೌಜನ್ಯಳ ಗೆಳತಿ "ಒಂದು ಭರತನಾಟ್ಯದ ಪ್ರೋಗ್ರಾಂ ಗೆ ಅರ್ಜೆಂಟಾಗಿ ಒಬ್ಬ ಕಲಾವಿದೆಯ ಅವಶ್ಯಕತೆ ಇದೆ ..ಒಪ್ಪಿದ ಕಲಾವಿದೆ ಕೊನೆಯ ಕ್ಷಣದಲ್ಲಿ ಬರಲಾಗುವುದಿಲ್ಲ ಎಂದರು ..ನೀನು ಬರುವೆಯಾ ..." ಎಂದು ಫೋನಾಯಿಸಿದಳು."ಆಲೋಚಿಸಿ ಹೇಳುತ್ತೇನೆ" ಎಂದಳು.. ಮನೆಯವರಲ್ಲಿ ಕೇಳದೆಯೇ  ಒಪ್ಪಿಕೊಳ್ಳುವುದು ಉಚಿತವಲ್ಲ ಎಂದು ಕೇಶವ ನಲ್ಲಿ ಕೇಳಿದಳು. ಆಫೀಸಿನಲ್ಲಿದ್ದಾಗ ಕೇಶವ ಕೇಶವ "ಹೂಂ.." ಎಂದ. ಅಷ್ಟರಲ್ಲಾಗಲೇ ಗೆಳತಿ ಪುನಃ ಕರೆ ಮಾಡಿ " ಸ್ವಲ್ಪ ಜಾಸ್ತಿಯೇ ಸಂಭಾವನೆ ಕೊಡೋಣ.. ದಯವಿಟ್ಟು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಲು ನಿನ್ನ ಅಗತ್ಯವಿದೆ"  ಎಂದು ಪುನಃ ಕೋರಿದಳು.ಅದಕ್ಕೊಪ್ಪಿದ ಸೌಜನ್ಯ ಅವಳು ಹೇಳಿದ ಸ್ಥಳಕ್ಕೆ ಅಗತ್ಯ ಸಲಕರಣೆಗಳೊಂದಿಗೆ  ತೆರಳಿದಳು.


         ಕಾರ್ಯಕ್ರಮ 6:00 ಗಂಟೆಗೆ ಆರಂಭವಾಗುವುದು ಎಂದು ನಿಗದಿಯಾಗಿತ್ತು. ಆದರೆ ಆರಂಭವಾಗುವಾಗ 7.30 ಆಯ್ತು. ಮುಗಿಯುವಾಗ 10:30 ಆಗಬಹುದು ಎಂದು ಗಂಡನಿಗೆ ಕರೆ ಮಾಡಿದರು. ಕೇಶವ ಕರೆಯನ್ನು ಸ್ವೀಕರಿಸಲಿಲ್ಲ. ಆತ ಅಡುಗೆ ಕೋಣೆಗೆ ತೆರಳಿ ತನ್ನ ಹೊಟ್ಟೆಗೆ ಬೇಕಾದ್ದನ್ನು ಹಾಕಲು ತಯಾರಿ ನಡೆಸುತ್ತಿದ್ದ.ಹಸಿದು ಬಂದಾಗ ತಿನ್ನಲು ಏನೂ ರೆಡಿ ಇಲ್ಲದಿದ್ದರೆ ಕೇಶವನಿಗೆ ಸಿಟ್ಟು ನೆತ್ತಿಗೇರುತ್ತಿತ್ತು .ಇಂದು ಕೂಡ ಹಾಗೆ ಆಯಿತು. ಎರಡನೇ ಬಾರಿ ಸೌಜನ್ಯ ಕರೆಮಾಡಿದಾಗ ಫೋನೆತ್ತಿ ಸರಿಯಾಗಿ ಬೈದುಬಿಟ್ಟ. "ಏನಾದರೊಂದು ತಿಂಡಿ ಮಾಡಿ ಪ್ರೋಗ್ರಾಂ ಗೆ ಹೋಗಬಹುದಿತ್ತು" ಎಂಬುದು ಅವನ ಮಾತಿನಲ್ಲಿ ಆಶಯವಾಗಿತ್ತು. ಏಕಾಏಕಿ ಗಂಡನ ಬೈಗುಳವನ್ನು ಕೇಳಿದ ಸೌಜನ್ಯಳ ಮನಸ್ಸು ಕೆಟ್ಟಿತು.

        ಅತ್ತೆ ಮಾವ ಆಫೀಸಿನಿಂದ ಹಿಂತಿರುಗಿದಾಗ ಕೇಶವನ ಮನಸ್ಸು ಅಲ್ಲೋಲಕಲ್ಲೋಲವಾಗಿದ್ದುದು ಅರ್ಥವಾಯಿತು ರೇಖಾಗೆ. ಕೇಶವ ಉಪ್ಪಿಟ್ಟು ಮಾಡಿ ತಿನ್ನುತ್ತಿದ್ದ. "ಅಳಿಯಂದಿರೇ ಫ್ರಿಜ್ಜಿನಲ್ಲಿ ಉದ್ದಿನ ದೋಸೆ ಹಿಟ್ಟು ಇತ್ತು.. ತಿಳಿಲಿಲ್ಲವೇ..".

      ಅಂದಾಗ ತುಸು ಕೋಪದಿಂದಲೇ "ಹೇಳಿದರೆ ತಾನೆ ತಿಳಿಯುವುದು ..ಯಾವುದನ್ನೂ ಹೇಳದೆ ಸೀದಾ ನಾಟ್ಯಗೈಯ್ಯಲು ಹೋದರೆ ಇಲ್ಲಿ ಹಸಿದ ಹೊಟ್ಟೆ ಸುಮ್ಮನಿರುವುದೇ..?" ಎಂದು ಗರಂ ಆದ. ಅಳಿಯನ ಮಾತಿಗೆ ರೇಖಾಗೆ  ದುಃಖವಾದರೂ ಸಹಿಸಿಕೊಂಡು ದೋಸೆ ಚಟ್ನಿ ಬಡಿಸಿದಳು. ಈಗ ಅವನ ಹೊಟ್ಟೆ ತುಂಬಿದಾಗ ಮನಸ್ಸು ಕೂಡ ಶಾಂತವಾಯಿತು.


        9.30 ಹೊತ್ತಿಗೆ ಮಾವ ಅಳಿಯ ಇಬ್ಬರು ಸೌಜನ್ಯಳನ್ನು ಕರೆದುಕೊಂಡು ಬರಲು ಹೊರಟರು. ಸುಮಾರು ಅರ್ಧ ಗಂಟೆಯ ಪಯಣ .10 ಗಂಟೆಗೆ ಸಭಾಂಗಣದಲ್ಲಿ ಆಸೀನರಾದರು. ಸೌಜನ್ಯಳ ನೃತ್ಯ ಕಾರ್ಯಕ್ರಮ ನಡೆಯುತ್ತಿದ್ದು.  ರೂಪಕವನ್ನು ಭರತನಾಟ್ಯದ ಮೂಲಕ ಪ್ರಸ್ತುತ ಪಡಿಸುತ್ತಿದ್ದರು.ಆಕೆಯ ರಾಣಿಯಾಗಿ ತನ್ನ ನಾಟ್ಯವನ್ನು ಪ್ರದರ್ಶಿಸುತ್ತಿದ್ದರೆ ಆಕೆಗೆ ರಾಜನ ಪಾತ್ರದಲ್ಲಿ ಪುರುಷ ಕಲಾವಿದನಿದ್ದುದು ಕೇಶವವಿಗೆ ಬಹಳ ಇರುಸುಮುರುಸಾಗಿತ್ತು.ಎಲ್ಲರೂ ಅವಳ ಅದ್ಭುತ ನಟನೆಗೆ ಕರತಾಡನ ಮಾಡುತ್ತಿದ್ದರೆ ಕೇಶವ ಮಾತ್ರ ಸುಮ್ಮನೆ ನೋಡುತ್ತಾ ಕುಳಿತಿದ್ದ.
ರಾಜನ ಕಣ್ಣಿನೊಂದಿಗೆ ಕಣ್ಣನ್ನು ಬೆರೆಸುತ್ತಾ ರಾಣಿ ಒಂದೇ ಲಯದಲ್ಲಿ ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತ್ತಿದ್ದಂತೆ ಕೇಶವ ಇದೆಲ್ಲ ಇನ್ನೂ ಸೌಜನ್ಯಳಿಗೆ ಬೇಕಾ ಎಂದು ಯೋಚಿಸುತ್ತಿದ್ದ.


        ಮಡದಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಕೇಶವ ಆಕೆಯನ್ನು ಇನ್ನೊಬ್ಬರೊಂದಿಗೆ ನೋಡಲು ಇಷ್ಟಪಡುತ್ತಿರಲಿಲ್ಲ. ಅದು ಸಹಜ ಕೂಡ. ಆದರೆ ಕಲೆಯಲ್ಲಿ ಆ ಭೇದವಿಲ್ಲ.ತೆರೆಯ ಮೇಲೆ ಗಂಡು-ಹೆಣ್ಣು ದಂಪತಿಯಾಗಿ  ಅಭಿನಯಿಸಿದ್ದರೆ ಅವರು ಖಾಸಗಿ ಜೀವನದಲ್ಲಿ ದಂಪತಿ ಆಗಿರಬೇಕೆಂದಿಲ್ಲ. ಈ ಸತ್ಯ ಅರಿವಿದ್ದರೂ ಕೂಡ ತನ್ನ ವೈಯಕ್ತಿಕ ಜೀವನದ ವಿಷಯ ಬಂದಾಗ ಕೇಶವನಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.ತಾನೊಮ್ಮೆ ಬಲವಾಗಿ ಬಂಧಿಸಿದರೆ ಕೊಸರಿಕೊಳ್ಳುವ ಸೌಜನ್ಯ ಸಹಕಲಾವಿದನೊಂದಿಗೆ ಅದೆಷ್ಟು ಹೊಂದಾಣಿಕೆಯಿಂದ ಶೃಂಗಾರ ಭಾವವನ್ನು ತೋರ್ಪಡಿಸುತ್ತಿದ್ದಾಳೆ ಎಂದು ಆಕೆಯ ಮೇಲೆ ಅಸಮಾಧಾನವುಂಟಾಯಿತು.


      ಕಾರ್ಯಕ್ರಮ ಮುಗಿದು ಮನೆಗೆ ಹೊರಟಾಗ ಸೌಜನ್ಯ ದಣಿದಿದ್ದರೂ. .. ಪತಿಯನ್ನು ಕಂಡಾಗ ನಸುನಗುತ್ತ ಮಾತನಾಡಿಸಿದಳು .ಆದರೆ ಆತ ಮಾತ್ರ ಮೌನವಾಗಿದ್ದ. ಪತಿಗೆ ನಾನು ತಿಂಡಿ ತಯಾರಿಸದಿದ್ದುದು  ಕೋಪ ಬಂದಿರಬೇಕು ಅಂದುಕೊಂಡು ಸುಮ್ಮನಾದಳು.ಮನೆಗೆ ಮುಟ್ಟುವ ಮೊದಲೇ ಕಾರಿನಲ್ಲಿ ಕುಳಿತುಕೊಂಡು ಅಮ್ಮನಿಗೆ ತನ್ನ ಭರತನಾಟ್ಯದ ವಿಡಿಯೋ ತುಣುಕುಗಳನ್ನು ಕಳುಹಿಸಿದಳು. ಸುಮಾರು ಎರಡು ವರ್ಷದ ನಂತರ ಮೊದಲ ಬಾರಿಗೆ ಆಕೆ ಸ್ಟೇಜ್ ಮೇಲೆ ಏರಿದ್ದಳು. ಅಮ್ಮ ಸಹಜವಾಗಿಯೇ ಖುಷಿಯಾದರು.ಇಬ್ಬರ ನಡುವಿನ ಸಂತೋಷದ ಸಂಭಾಷಣೆಯನ್ನು ಕೇಳುತ್ತಿದ್ದ ಕೇಶವನ ಮನಸ್ಸು  ಅದನ್ನು  ಸಹಿಸಲಿಲ್ಲ.


      ಮನೆ ತಲುಪಿದಾಗ ಕಾದುಕುಳಿತಿದ್ದ ಅಮ್ಮನನ್ನು ತಬ್ಬಿ ಸಂಭ್ರಮ ಪಟ್ಟಳು ಸೌಜನ್ಯ. ಸೌಜನ್ಯ ತನ್ನ ಕಣ್ಣರಳಿಸಿ ನಸುನಗುತ್ತಾ  "ಉತ್ತಮ ಅವಕಾಶ . ದೊರೆತಿರುವುದು ನನ್ನ ಪುಣ್ಯ  "ಎಂದು ಹೇಳಿದಳು.ಅದನ್ನು ಕೇಳಿದ ಕೇಶವ " ಏನು ಪುಣ್ಯ...?  ಪರಪುರುಷನೊಂದಿಗೆ ವೇದಿಕೆಯ ಮೇಲೆ ನರ್ತಿಸುವುದು ನನಗೆ ಸರಿಕಾಣಲಿಲ್ಲ" ಎಂದಾಗ ಸೌಜನ್ಯಳ ಆಶಾಗೋಪುರ ಒಮ್ಮೆಲೆ ಕುಸಿದು ಬಿದ್ದಿತು.


ಮುಂದುವರಿಯುವುದು..

✍️...ಅನಿತಾ ಜಿ.ಕೆ. ಭಟ್
29-04 -2020.


ಮುಂದಿನ ಭಾಗ ಶುಕ್ರವಾರ...







Monday, 27 April 2020

ಗುಜ್ಜೆ/ ಎಳೆಹಲಸಿನ ಕಾಯಿ ಪಕೋಡ

ಎಳೆಹಲಸಿನ ಕಾಯಿ/ಗುಜ್ಜೆ ಪಕೋಡ



     ಸಂಜೆ ಹೊತ್ತು ಏನಾದರೂ ಬಿಸಿ ಬಿಸಿಯಾಗಿ ಎಣ್ಣೆತಿಂಡಿ ಮಾಡಿಕೊಟ್ಟರೆ ... ಆಹಾ..ಮನೆಮಂದಿಯೆಲ್ಲ ಬಹಳ ಇಷ್ಟಪಟ್ಟು  ಬಾಯಿಚಪ್ಪರಿಸಿಕೊಳ್ಳುತ್ತಾರೆ.ಒಂದೇ ತೆರನಾದ ತಿಂಡಿಗಳು ಬೋರ್ ಹೊಡೆಸುತ್ತವೆ.ಅದಕ್ಕಾಗಿ ವಿಶೇಷವಾಗಿ ಏನಾದರೂ ಪ್ರಯತ್ನ ಮಾಡ್ತಾನೇ ಇರಬೇಕಾಗುತ್ತದೆ.ಗುಜ್ಜೆ ಪಕೋಡ  ಮಾಡಲು ಪ್ರಯತ್ನಿಸಿದೆ.ಚೆನ್ನಾಗಿ ಬಂದಿದೆ.ಮಾಡುವ ವಿಧಾನವನ್ನು ನೀವೂ ನೋಡಿ ..ಮನೆಯಲ್ಲೇ ಗರಿಗರಿಯಾದ ಪಕೋಡ ತಯಾರಿಸಿ.


ಬೇಕಾಗುವ ಸಾಮಗ್ರಿಗಳು:-

ಗುಜ್ಜೆ ಎಳೆಹಲಸಿನ ಕಾಯಿ ಎರಡು ಕಪ್
ಈರುಳ್ಳಿ ಒಂದು ಕಪ್
ಕಡ್ಲೆ ಹಿಟ್ಟು ಒಂದು ಕಪ್
ಅಕ್ಕಿಹಿಟ್ಟು ಅರ್ಧ ಕಪ್
ಸಣ್ಣಗೆ ಹೆಚ್ಚಿದ ಕರಿಬೇವು
ಅರಿಶಿನ ಪುಡಿ
ಮೆಣಸಿನ ಪುಡಿ
ಉಪ್ಪು
ಎಣ್ಣೆ

ಮಾಡುವ ವಿಧಾನ:-

ಗುಜ್ಜೆಯನ್ನು ಬೇಯಿಸಿ ಪುಡಿಮಾಡಿಟ್ಟುಕೊಳ್ಳಿ.ಅದಕ್ಕೆ ಈರುಳ್ಳಿ, ಕಡ್ಲೆಹಿಟ್ಟು, ಅಕ್ಕಿಹಿಟ್ಟು,ಕರಿಬೇವು,ಅರಿಶಿನ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಬೆರೆಸಿ.ಸ್ವಲ್ಪ ನೀರು ಸೇರಿಸಿ.ಹಿಟ್ಟು ಗಟ್ಟಿಯಾಗಿ ಕಲಸಿಕೊಳ್ಳಿ.ಬಾಣಲೆಯಲ್ಲಿ ಎಣ್ಣೆ ಕಾಯಲಿಟ್ಟು,ಕಾದ ಎಣ್ಣೆಯಲ್ಲಿ ಸಣ್ಣ ಸಣ್ಣದಾಗಿ ಹಿಟ್ಟನ್ನು ಬಿಡಿ.ಕಾದಾಗ ತೆಗೆದರೆ ಬಿಸಿ ಬಿಸಿಯಾದ ಪಕೋಡ ಸವಿಯಲು ಸಿದ್ಧ.ಗುಜ್ಜೆ ಬಳಸಿದ್ದೇವೆ ಎಂದು ಹೇಳಿದರೆ ಮಾತ್ರ ತಿಳಿದೀತಷ್ಟೇ...ಟೇಸ್ಟೀ.. ಆಗಿರುತ್ತೆ..ನೀವೂ ಟ್ರೈ ಮಾಡಿ ನೋಡಿ..


✍️... ಅನಿತಾ ಜಿ.ಕೇ.ಭಟ್.
27-04-2020.

ಮಾವಿನ ಹಣ್ಣಿನ ಪಾಯಸ

ಮಾವಿನ ಹಣ್ಣಿನ ಪಾಯಸ


     ಹುಳಿ ಸಿಹಿ ರುಚಿಯಿರುವ ಕಾಟು ಮಾವಿನ ಹಣ್ಣಿನ ಪಾಯಸ ಮಾಡಿದರೆ ಹೇಗೆ ಎಂದು ಆಲೋಚನೆ ಬಂದಿದ್ದೇ ತಡ ಮಾಡೇಬಿಡೋಣ ಎಂದು ಆರಂಭಿಸಿದೆ..ಪಾಯಸ ಬಲು ರುಚಿಯಾಗಿತ್ತು.ಹೇಗೆ ಮಾಡಿದೆ ಅಂತ ನೀವೂ ನೋಡ್ಕೊಳ್ಳಿ..


ಬೇಕಾಗುವ ಸಾಮಗ್ರಿಗಳು:-

ಎಂಟು ಕಾಟುಮಾವಿನ ಹಣ್ಣು
ಎರಡು ಕಪ್ ಹಸಿತೆಂಗಿನಕಾಯಿ ತುರಿ
ಎರಡು ಕಪ್ ಬೆಲ್ಲ
ಏಲಕ್ಕಿ
ಎರಡು ಚಮಚ ಅಕ್ಕಿಹಿಟ್ಟು

ಮಾಡುವ ವಿಧಾನ :-

      ಮೊದಲು ಮಾವಿನ ಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಕಿವುಚಿಕೊಳ್ಳಿ. ತಿರುಳು ಗಟ್ಟಿಯಾಗಿದ್ದರೆ ಎರಡೂ ಬದಿ ತುಂಡುಮಾಡಿ ಮಿಕ್ಸಿಯಲ್ಲಿ ರುಬ್ಬಿ ಹಾಕಿ.ತೆಂಗಿನತುರಿಯನ್ನು ನುಣ್ಣಗೆ ರುಬ್ಬಿ ದಪ್ಪ ಹಾಲು ಸೋಸಿಟ್ಟುಕೊಳ್ಳಿ.ಎರಡನೇ ಸಲದ ಹಾಲಿನಲ್ಲಿ ಮಾವಿನ ಹಣ್ಣನ ಮಿಶ್ರಣವನ್ನು ಬೇಯಿಸಿಕೊಳ್ಳಿ..ಬೆಲ್ಲ ಹಾಕಿ.ಬೆಲ್ಲ ಕರಗಿದಾಗ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ತಿರುವಿ.ಕುದಿಯಲು ಆರಂಭವಾದಾಗ ದಪ್ಪ ಕಾಯಿಹಾಲು ಸೇರಿಸಿ. ಪಾಯಸ ಕುದಿಯುತ್ತಿದ್ದಂತೆ ಸ್ಟವ್ ಆರಿಸಿ ಏಲಕ್ಕಿ ಪುಡಿ ಬೆರೆಸಿ.. ಬಿಸಿ ಬಿಸಿ ಮಾವಿನ ಹಣ್ಣಿನ ಪಾಯಸ ಮನೆಮಂದಿಯೊಂದಿಗೆ ಸವಿಯಿರಿ..

✍️... ಅನಿತಾ ಜಿ.ಕೆ.ಭಟ್.
27-04-2020.

ಜೀವನ ಮೈತ್ರಿ ಭಾಗ ೬೮(68)



ಜೀವನ ಮೈತ್ರಿ ಭಾಗ ೬೮


          ನೀರು ಕುಡಿದು ಭಾಸ್ಕರ ಶಾಸ್ತ್ರಿಗಳು ಭಾವನನ್ನು ಕರೆದರು.  ತಮ್ಮ ಎಂದಿನ ಶೈಲಿಯಲ್ಲಿ ಅವರ ಕಿವಿಗೆ ಬಿದ್ದ ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಬಂದಿದ್ದೇವೆ ಎಂದು ಪೀಠಿಕೆ ಹಾಕಿದರು...ಶಶಿಗೆ ಹೊಟ್ಟೆ ಒಳಗೆ ಕಿವುಚಿದಂತೆ ಆಯಿತು. ಶಂಕರ ಭಾವ
"ಏನೋ ಹೆಣ್ಣುಮಕ್ಕಳು... ನಾಲಿಗೆ ಸ್ವಲ್ಪ ಉದ್ದ ಜಾಸ್ತಿ... ಇಲ್ಲಿಗೆ ಬಿಟ್ಟುಬಿಡೋಣ ಭಾವ" ಎಂದು ಹಾರಿಕೆಯ ಉತ್ತರವನ್ನು ನೀಡಿದರು.. ಆದರೆ ಶಶಿ ಮಾತ್ರ
" ನಾನು ಹಾಗೆ ಹೇಳಿಲ್ಲ .."ಎಂದು ವಾದಿಸಲು ಆರಂಭಿಸಿದರು..ಶ್ಯಾಮ ಶಾಸ್ತ್ರಿಗಳು ಕೂಡ ಮಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಆದರೆ ಆಕೆ "ನನಗೆ ಇಂತಹ ಕೆಲಸ ಮಾಡಲು ಹೇಗಾದರೂ ಮನಸ್ಸು ಬಂದೀತು..ಅದೂ ತವರು ಮನೆಯವರ ಬಗ್ಗೆ..ತಮ್ಮನ ಮಗಳೆಂದರೆ ಹೆಣ್ಣುಮಕ್ಕಳಿಲ್ಲದ ನನಗೂ ಮಗಳಂತೆ..ನಾನು ಇಂತಹಾ ಕೆಲಸವನ್ನು ಮಾಡಿಲ್ಲ.." ಎಂದು ನಯವಾಗಿ ಜಾರಿಕೊಂಡರು. ಸಿಟ್ಟು ಬಂದ ಭಾಸ್ಕರ ಶಾಸ್ತ್ರಿಗಳು 'ಈ ವಿಷಯದಲ್ಲಿ ಮಾತ್ರ ನಿನ್ನನ್ನು ಸುಮ್ಮನೆ ಬಿಡಲಾರೆ ..ಮಾಡಿದ ತಪ್ಪು ಲೋಕಕ್ಕೆ ತಿಳಿಯಬೇಕು.ಇನ್ನೊಮ್ಮೆ ಇಂತಹಾ ನೀಚಬುದ್ಧಿಗಿಳಿಯದಂತೆ ಎಚ್ಚರಿಕೆಯ ಪಾಠವಾಗಬೇಕು.. 'ಎಂದು ತನ್ನಲ್ಲೇ ಅಂದುಕೊಂಡು ತನ್ನ ಭಾವಿ ಅಳಿಯನಿಗೆ ಕರೆ ಮಾಡಿ ಪುರೋಹಿತರ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡರು...ಪುರೋಹಿತರಲ್ಲಿ  ತಾವೇ ಖುದ್ದಾಗಿ ಲೌಡ್ ಸ್ಪೀಕರ್ ಹಾಕಿ ಮಾತನಾಡಿದರು...ಅವರ ಮಾತುಗಳು ರೆಕಾರ್ಡ್ ಆಗುತ್ತಿದ್ದವು...ಶಂಕರ ಭಾವ ಗಮನವಿಟ್ಟು ಕೇಳುತ್ತಿದ್ದಂತೆ ಅವರ ಮುಖ ವಿವರ್ಣವಾಯಿತು..  ಶಶಿ  ನಾನು ಮಾಡಿಲ್ಲ ಎಂದು ಗರ್ವದಿಂದ ವಾದಮಾಡುತ್ತಿದ್ದವರು ತಲೆ ಕೆಳಗೆ ಹಾಕಿ ನಿಂತರು..  ಆಕೆಯ ಕೈಕಾಲುಗಳು ನಡುಗುತ್ತಿದ್ದವು...ಮೈ ಬೆವರುತ್ತಿತ್ತು..

          ಪುರೋಹಿತರ ಬಳಿ ಕೇಳಿದಾಗ ಅವರು ಮೊದಲಿನಂತೆಯೇ ಅಂದರು... ಈಗ ಶಶಿ ಒಪ್ಪಿಕೊಳ್ಳಲೇ ಬೇಕಾಯಿತು... ಆಕೆಯ ಪತಿ ಆಕೆಯ ಬಳಿಗೆ ತೆರಳಿ " ಮಾಡಬಾರದನ್ನು ಮಾಡಿ.. ಹೇಳಬಾರದ್ದನ್ನು ಹೇಳಿದ ಮೇಲೆ... ಸುಳ್ಳು ಹೇಳುವುದಲ್ಲ.... ನೀನು ಮಾಡಿದ ತಪ್ಪನ್ನು  ಒಪ್ಪಿಕೋ.. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ ..." ಎಂದು ಸಿಟ್ಟಿನಿಂದ ಗದರಿದರು..

         ಈಗ ತಪ್ಪನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ...ಕೊನೆಗೂ ಮಾಡಿದ್ದನ್ನು ಒಪ್ಪಿಕೊಳ್ಳಲೇಬೇಕಾಯಿತು.. ತಮ್ಮ ಭಾಸ್ಕರ ಶಾಸ್ತ್ರಿ ಮಾತ್ರ ಬಂದಿದ್ದರೆ ಏನಾದರೂ ಸುಳ್ಳು ಹೇಳಬಹುದಿತ್ತು ...ಅಪ್ಪನೇ ಬಂದಾಗ... ಗಂಡನೆದುರೇ ವಿಚಾರಿಸಿಕೊಂಡಾಗ ...ಆಕೆಗೆ ಅನ್ಯದಾರಿಯಿರಲಿಲ್ಲ..



          ಶಂಕರ್ ಭಾವನಿಗೆ  ಪತ್ನಿಯ ಮೇಲೆ ಬಹಳ ಕೋಪ ಬಂದಿತು ..."ಇಂತಹ ಸಣ್ಣ ಬುದ್ಧಿ  ನಿನಗೇಕೆ...? " ಎಂದು ಜೋರಾಗಿ  ದನಿ ತೆಗೆದರು.. ಶಂಕರ ರಾಯರಿಗೆ ಮಾವನ ಮನೆಯ ಮೇಲೆ ಬಹಳ ಗೌರವ. ಇಂತಹ ಗೌರವದಿಂದಾಗಿ ಪತ್ನಿಯ ಮೇಲೆ ಗರಂ ಆಗಿಯೇ ನಡೆದುಕೊಂಡರು..
ಶಂಕರರಾಯರು "ಇನ್ನೆಂದೂ ಇಂತಹ ತಪ್ಪು ಮಾಡಲಾರೆ ..ಎಂದು ನಿನ್ನ ತಂದೆಯನ್ನು ಕಾಲು ಹಿಡಿ ದು ನಮಸ್ಕರಿಸಿ ಕೇಳು "ಎಂದು ಗಡಸು ದನಿಯಲ್ಲಿ ಹೇಳಿದಾಗ ಆಕೆ ಮನಸ್ಸಿಲ್ಲದಿದ್ದರೂ ನಮಸ್ಕಾರ ಮಾಡಲೇಬೇಕಾಯಿತು.. ಕಾಲಿಗೆ ನಮಸ್ಕರಿಸಿ "ಇನ್ನೊಮ್ಮೆ ಇಂತಹ ಅಪಪ್ರಚಾರವನ್ನು ಮಾಡುವುದಿಲ್ಲ  , ನನ್ನನ್ನು ಕ್ಷಮಿಸಿ " ಎಂದು ಬೇಡಿಕೊಂಡಳು.


        " ಉಂಡ ಮನೆಗೆ ಕನ್ನ ಹಾಕುವ ಬುದ್ಧಿ ನಿನಗೆಲ್ಲಿಂದ ಬಂತು ..?"ಎಂದು ಶ್ಯಾಮಾಶಾಸ್ತ್ರಿಗಳು ಮಗಳನ್ನು ತರಾಟೆಗೆ ತೆಗೆದುಕೊಂಡರು..  "ಮೊದಲು ಹೇಳು... ನಿನಗೆ ಅಲ್ಲಿಂದ ಸುದ್ದಿಯನ್ನು ರವಾನಿಸುವವರು ಯಾರು ...ಅಮ್ಮನೇ.?... ಇನ್ನು ಮುಂದೆಯಾದರೂ ವಯಸ್ಸಾದವರಿಂದ ಸುದ್ದಿಯನ್ನು ಕಲೆ ಹಾಕುವುದನ್ನು ನಿಲ್ಲಿಸಿಬಿಡು. ಏನಾದರೂ ಹೇಳಬೇಕೆಂದರೆ ತಮ್ಮ ಅಥವಾ ಅವನ ಹೆಂಡತಿಯಲ್ಲಿ ಕೇಳು... ಇಲ್ಲದಿದ್ದರೆ ಮುಂದೆ ಪರಿಣಾಮ ನೆಟ್ಟಗಿರಲ್ಲ.."


        ಶಶಿ ತಲೆ ಕೆಳಗೆ ಹಾಕಿ ಅಪ್ಪನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಳು. "ಇಲ್ಲಿಗೆ ಇಂತಹ ಕೆಟ್ಟಬುದ್ಧಿ ಕೊನೆಯಾಗಬೇಕು. ಯಾರೇ ಆಗಲಿ ಅವರು ನನ್ನಂತೆಯೆ ಮನುಷ್ಯರು ಎಂಬ ಭಾವನೆ ಮನದಲ್ಲಿರಲಿ. ಸಣ್ಣಪುಟ್ಟ ಲೋಪದೋಷಗಳು ಎಲ್ಲರಲ್ಲೂ ಇರುತ್ತವೆ. ಅದನ್ನೇ ದೊಡ್ಡದು ಮಾಡಿ ಹಾಗಂತೆ ಹೀಗಂತೆ ಎಂದರೆ ಚೆನ್ನಾಗಿರುವುದಿಲ್ಲ.. ಇನ್ನೊಮ್ಮೆ ಇಂತಹ ವಿಷಯದಲ್ಲಿ ನಾನು ಎಚ್ಚರಿಕೆ ಕೊಡುವಂತೆ ಆಗಬಾರದು ತಿಳಿಯಿತಾ..." ಶ್ಯಾಮ ಶಾಸ್ತ್ರಿಗಳ ಮಾತಿಗೆ ಸಣ್ಣದಾಗಿ ಹೂಂಗುಟ್ಟಿದಳು.



          ನಂತರ ಅಪ್ಪ-ಮಗ ಚಹಾ ಕುಡಿದು ಮನೆಗೆ ತೆರಳಿದರು. ಅವರು ತೆರಳುತ್ತಿದ್ದಂತೆ ಶಂಕರರಾಯರು ಮಡದಿಯ ಮೇಲೆ ಅರ್ಧಗಂಟೆ ಬೈಗುಳಗಳ ಸುರಿಮಳೆಗೈದರು.. "ಇನ್ನು ಯಾರಿಗೆಲ್ಲ ಇಂತಹ ಸುದ್ದಿ ಮುಟ್ಟಿಸಿದ್ದೀಯ.. ಏನೋ...ಎಲ್ಲರ  ಬಳಿ ಹೇಳಿ ಗಾಳಿ ಸುದ್ದಿ ಹಬ್ಬಿಸಿದ್ದನ್ನು ಮತ್ತೆ ಹಿಂಪಡೆಯಲು ಸಾಧ್ಯವೇ?"ಎಂದಾಗ ಎಂದಿನಂತೆ ಗಂಡನಿಗೆ ಎದುರು ಮಾತನಾಡಲು ಅವಳಿಗೆ ಇಂದು ಅವಕಾಶವೇ ಇರಲಿಲ್ಲ.. ಶಶಿ ಅವಳ ದುರ್ಬುದ್ಧಿ ಯಿಂದ ತವರು ಮನೆಯಲ್ಲಿ ಇರುವ ಸ್ಥಾನಮಾನವನ್ನು ಕಳೆದುಕೊಂಡು.... ಶಂಕರರಾಯರು ತಮ್ಮ ಗುಣದಿಂದಾಗಿ 'ಅಳಿಯಂದಿರು ಒಳ್ಳೆಯವರು' ಎಂಬ ಗೌರವವನ್ನು ಶ್ಯಾಮಶಾಸ್ತ್ರಿಗಳಿಂದ ಪಡೆದರು.

        ಶಂಕರ ರಾಯರು ತಮ್ಮ ಅಕ್ಕ ,ತಂಗಿ ಹಾಗೂ ಅಣ್ಣನ ಮನೆಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದರು ಹಾಗೂ ಶಶಿ ಹೇಳಿದ ಮಾತುಗಳನ್ನೆಲ್ಲಾ ನಂಬಬೇಡಿ ,ಯಾರೊಂದಿಗೂ ದಯವಿಟ್ಟು ಹಂಚಿಕೊಳ್ಳಬೇಡಿ ಎಂದರು. ಅಣ್ಣನ ಮನೆಗೆ ಕರೆ ಮಾಡಿದಾಗ ಅತ್ತಿಗೆ ಮತ್ತಷ್ಟು ಕೂಲಂಕುಶವಾಗಿ ವಿಷಯವನ್ನು ತಿಳಿದುಕೊಂಡಾಗ ಶಶಿಯ ಮೈ ಉರಿಯುತ್ತಿತ್ತು. ಅಷ್ಟಕ್ಕೇ ನಿಲ್ಲಿಸಿದರೆ ಸಾಕಿತ್ತು ..ಆದರೆ ಶಂಕರ ರಾಯರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಗ ವೆಂಕಟ್ ಹಾಗೂ ಮುರಳಿಗೂ ಕರೆ ಮಾಡಿ ಎಲ್ಲ ವಿಷಯವನ್ನು ಚಾಚೂತಪ್ಪದೆ ಹಂಚಿಕೊಂಡಾಗ ಶಶಿ ಅವಮಾನದಿಂದ ಕುಗ್ಗಿಯೇ ಹೋದಳು. ಶಶಿಯ ಎರಡು ನಾಲಗೆಯ ಬುದ್ಧಿ ಅವಳಿಗೆ  ಮುಳುವಾಯಿತು.


    ನಿಜ ಹೇಳಬೇಕೆಂದರೆ ಶಶಿ ತನ್ನ ಮಕ್ಕಳಲ್ಲಿ ಅಜ್ಜನಮನೆ ಅವರ ಬಗ್ಗೆ ಬಹಳ ಗೌರವಯುತವಾಗಿ ಮಾತನಾಡುತ್ತಿದ್ದರು. ಇನ್ನು ತನ್ನ ನಾದಿನಿ ಓರಗಿತ್ತಿಯಲ್ಲಂತೂ ಮಾತನಾಡುವಾಗ ತನ್ನ ತವರನ್ನು ಹೊಗಳಿ ಅಟ್ಟಕ್ಕೇರಿಸಿ ತಾನು ಬಹಳ ಒಳ್ಳೆಯ ಕುಲದಿಂದ ಬಂದಿದ್ದೇನೆ ಎಂದು ಜಂಭ ಕೊಚ್ಚಿಕೊಳುತ್ತಿದ್ದರು. ಮೈತ್ರಿಯ ಬಗ್ಗೆ ಇಲ್ಲಸಲ್ಲದನ್ನು ಇವರುಗಳಲ್ಲಿ ಹೇಳಿಕೊಂಡಿರಲಿಲ್ಲ. ತನ್ನ ತವರಿನಲ್ಲಿ ಮದುವೆ ನಿಶ್ಚಯವಾಗಿದೆ ಹುಡುಗ ಹಾಗೆ ಹೀಗೆ ಎಂದು ಸ್ವಲ್ಪ ಹೆಚ್ಚೇ ಆಡಿದ್ದರು. ವಿನಃ ಒಂದು ಮಾತೂ ದೂಷಿಸಿರಲಿಲ್ಲ.ತವರಿನ ಬಗ್ಗೆ ಇವರಲ್ಲೆಲ್ಲ ಕೇವಲವಾಗಿ ಮಾತನಾಡಿದರೆ ತಾನು  ಸಣ್ಣವಳಾಗುತ್ತೇನೆ ಎಂದು ಅವಳ ಭಾವನೆ.


          ಆದರೆ ಮನದೊಳಗಿನ ನಂಜು ಬಿಡಬೇಕಲ್ಲ..?  ತಮ್ಮ ಭಾಸ್ಕರ  ತನ್ನ ಮಗನಿಗೆ ಮೈತ್ರಿಯನ್ನು ಮದುವೆ ಮಾಡಿಕೊಡಲು ಒಪ್ಪಲಿಲ್ಲ ಎಂಬ ಸಿಟ್ಟಿನಿಂದ ಹತ್ತಿರದ ಬಂಧುಗಳನ್ನು ಹೊರತುಪಡಿಸಿ ಪುರೋಹಿತರಲ್ಲಿ, ಕಿಶನ್ ಗೆ ಸಂಬಂಧಿಗಳಾದ ನನ್ನ ಗೆಳತಿಯರಲ್ಲಿ ಇಂತಹ ಅಪಪ್ರಚಾರಕ್ಕೆ ಮುಂದಾಗಿದ್ದಳು.ಶಶಿಯ ಇಂತಹ ಸೂಕ್ಷ್ಮ ಗುಣಗಳ ಅರಿವಿರದ ಶಂಕರರಾಯರು ಮಾತ್ರ ತನ್ನ ಕುಟುಂಬದ ಬಂಧುಗಳೊಡನೆ ಇದನ್ನೆಲ್ಲಾ ಹಂಚಿಕೊಂಡದ್ದು... ಶಶಿಗೆ ಪಾತಾಳಕ್ಕಿಳಿದ ಅನುಭವವನ್ನು ತಂದುಕೊಟ್ಟಿತು.'ಇನ್ನು ಯಾವತ್ತೂ ಇಂತಹ ಕೆಲಸ ಮಾಡಿ  ನನ್ನ ಗೌರವವನ್ನು ಮಣ್ಣು ಪಾಲು ಮಾಡಿಕೊಳ್ಳುವುದಿಲ್ಲ' ಎಂದು ತನಗೆ ತಾನೇ ನಿಬಂಧನೆಯನ್ನು ಹಾಕಿಕೊಳ್ಳುವಷ್ಟು ಬುದ್ಧಿಕೊಟ್ಟಿತು.


           ಮನೆಗೆ ತೆರಳಿದ ಭಾಸ್ಕರ ಮತ್ತು ಶ್ಯಾಮ ಶಾಸ್ತ್ರಿಗಳಿಗೆ ಕಾರಿನಿಂದ ಇಳಿಯುತ್ತಲೇ ಮಹೇಶ ತಾನು ಮಾಡಿದ ವಿಡಿಯೋ ತೋರಿಸಿದ. ಶಾಸ್ತ್ರಿಗಳು ಚಾವಡಿಗೆ ಬಂದಾಗ ಮಂಗಳಮ್ಮ ಮಹಾಲಕ್ಷ್ಮಿ ಅಮ್ಮ ಹಾಜರಾದರು. ಮಹಾಲಕ್ಷ್ಮಿ ಅಮ್ಮನಿಗೆ ಶಶಿಯ ಬಗ್ಗೆ ತಿಳಿದುಕೊಳ್ಳುವ ಹಂಬಲ .ಇನ್ನೇನು ಪ್ರಶ್ನೆ ಕೇಳಬೇಕು ಎನ್ನುವಷ್ಟರಲ್ಲಿ ಶ್ಯಾಮಶಾಸ್ತ್ರಿ ಗಳಿಂದ ಬಿರು ನುಡಿಗಳು ಬಂದವು.

ಶ್ಯಾಮಶಾಸ್ತ್ರಿಗಳು:-ಅಲ್ವೇ... ಮಹಾಲಕ್ಷ್ಮಿ ನಿನಗೆ ಹೇಳಿದರೆ ಅರ್ಥವಾಗುವುದಿಲ್ವಾ..?

ಮಹಾಲಕ್ಷ್ಮಿ ಅಮ್ಮ:-ಏನು ..?ಏನಾಯ್ತು ...ಎಂದು ಹೇಗೆ ಹೇಳುತ್ತೀರಿ.
 ನಾನೇನು ಮಾಡಿದೆ..?

ಶ್ಯಾಮ ಶಾಸ್ತ್ರಿಗಳು:-ನಿನ್ನಿಂದಲೇ ಇಷ್ಟು ಹಾಳಾಗುತ್ತಿರುವುದು.. ನೀನು ತಿದ್ದಿಕೊಳ್ಳಬೇಕು.. ಹಿರಿಯವರಾದ ಮಾತ್ರಕ್ಕೆ ಮಾಡುತ್ತಿರುವ ಎಲ್ಲಾ ಸರಿ ಇಲ್ಲ...

ಮಹಾಲಕ್ಷ್ಮಿ ಅಮ್ಮ:-ನಾನೇನು ತಪ್ಪು ಮಾಡಿದೆ..?

ಶ್ಯಾಮ ಶಾಸ್ತ್ರಿಗಳು:-ನಿನಗೆ ಮಗ ಭಾಸ್ಕರ ನಿನ್ನೆಯಷ್ಟೇ ಹೇಳಿದ್ದ ಶಶಿಗೆ ಫೋನ್ ಮಾಡಬೇಡ ಎಂದು.. ನೀನೇನು ಮಾಡಿದೆ..?


ಮಹಾಲಕ್ಷ್ಮಿ ಅಮ್ಮ:-ನಾನು ಫೋನ್ ಮಾಡಿಲ್ಲ ಅದು ಕೆಟ್ಟು ಹೋಗಿತ್ತು..

ಶ್ಯಾಮ ಶಾ..:-ಕೆಟ್ಟು ಹೋಗಿದ್ದರಿಂದ ಮಾತನಾಡಿಲ್ಲ .ಕೆಟ್ಟುಹೋಗದೆ ಇರುತ್ತಿದ್ದರೆ ಮಾತನಾಡಿ ನಾವು ಹೋದ ವಿಚಾರವನ್ನು ಕೆಡಿಸುತ್ತಿದ್ದೆ ಅಲ್ಲವೇ..?

ಎಂದು ಮಡದಿಯನ್ನು ತರಾಟೆಗೆ ತೆಗೆದುಕೊಂಡರು.

ಮಹಾಲಕ್ಷ್ಮಿ ಅಮ್ಮ:- ಇಲ್ಲಪ್ಪಾ ನಾನು ಶಶಿ ಗೆ ಫೋನ್ ಮಾಡಲೆಂದು ನೋಡಿದ್ದಲ್ಲ..

ಶ್ಯಾಮ ಶಾಸ್ತ್ರಿಗಳು:-ನಿನ್ನ ಬುದ್ಧಿ ಗೊತ್ತಿಲ್ಲ ಎಂದು ತಿಳಿಯಬೇಡ .ಮನೆಯ ಸುದ್ದಿಯನ್ನು ಅಗತ್ಯವಿಲ್ಲದಿದ್ದರೂ ರವಾನಿಸುತ್ತಿರುವುದು ನೀನೆಂದು ತಿಳಿದಿದೆ... ಮುಂದಕ್ಕೆ ಏನಾದರೂ ಇಂತಹ ಬುದ್ಧಿ ಮುಂದುವರಿಸಿದರೆ.. ಲ್ಯಾಂಡ್ಲೈನ್ ಫೋನ್ ನಿನಗೂ ಬೇಡ ನನಗೂ ಬೇಡ .ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು .ನಾವು ಫೋನ್ ಮಾಡಿ ಮನೆತನದ ಗೌರವವನ್ನು ಮಣ್ಣುಮುಕ್ಕಿಸುವ ಬೇಡ...


ಪತಿಯ ಸಿಡುಕಿನ ಮಾತುಗಳನ್ನು ಕೇಳಿದ ಮಹಾಲಕ್ಷ್ಮಿ ಅಮ್ಮನ ಕಂಗಳಿಂದ ನೀರು ಹರಿಯಲಾರಂಭಿಸಿತು. ಇದುವರೆಗೆ ಮಂಗಳಮ್ಮ, ಮೈತ್ರಿಯನ್ನು ಭಾಸ್ಕರ ಶಾಸ್ತ್ರಿಗಳು ಏನಾದರೂ ಅಂದರೆ ಸುಮ್ಮನೆ ನಿಂತು ನೋಡುತ್ತಿದ್ದ ಮಹಾಲಕ್ಷ್ಮಿ ಅಮ್ಮನ ಪರವಾಗಿ ಇಂದು ಅವರು  ಯಾರೂ ಬರಲಿಲ್ಲ.. ಸೊಸೆಯಾದರೂ ನನ್ನ ಪರವಾಗಿ ಮಾತನಾಡಬಾರದೇ ಎಂದು ಮಹಾಲಕ್ಷ್ಮಿ ಅಮ್ಮನ ಮನಸ್ಸು ಹೇಳಿದ್ದು ಸುಳ್ಳಲ್ಲ


      ಕಾಲಚಕ್ರ ಉರುಳುತ್ತದೆ.. ಇಂದು ಇನ್ನೊಬ್ಬರಿಗೆ ನೋವಾದಾಗ ಸುಖಿಸಿದವರು ನಾಳೆ ತಾವು ಕೂಡ ಅದೇ ಸ್ಥಾನದಲ್ಲಿ ಇರುತ್ತೇವೆ ಎಂಬುದು ಕಲ್ಪಿಸಿಕೊಳ್ಳಬೇಕು. . ಹಿಂದೆ ಸೊಸೆಯ ಕಣ್ಣೀರಿಗೆ ಭಾವ ರಹಿತವಾಗಿ ವರ್ತಿಸಿದವರಿಗೆ ....ಇಂದು ಸೊಸೆ ಭಾವರಹಿತವಾಗಿ ನಿಲ್ಲಬೇಕಾದ ಅನಿವಾರ್ಯತೆ ವಿಧಿ ತಂದುಕೊಟ್ಟಿದೆ. ಅತ್ತೆ ಗೌಪ್ಯವಾಗಿರಬೇಕಾಗಿದ್ದ ಮನೆಯ ಎಲ್ಲ ವಿಷಯಗಳನ್ನು ಅತ್ತಿಗೆಯರಿಗೆ ಮುಟ್ಟಿಸುತ್ತಿದ್ದರೂ ಅಸಹಾಯಕಳಾಗಿದ್ದ ಸೊಸೆಗೆ ಇಂದಾದರೂ ಅತ್ತೆಯ ತಪ್ಪು ಮಾವನವರಿಗೆ ,ಗಂಡನಿಗೆ  ಅರಿವಾಯಿತಲ್ಲ ಎಂಬ ಸಮಾಧಾನ...


ಮುಂದುವರಿಯುವುದು....


✍️... ಅನಿತಾ ಜಿ.ಕೆ.ಭಟ್.
27-04-2020.

ಮುಂದಿನ ಭಾಗ..ಬುಧವಾರ.

Saturday, 25 April 2020

ವೈರಾಣುಸೋಂಕನ್ನು ತಡೆಗಟ್ಟಲು ಮನೆಯಲ್ಲೇ ತಯಾರಿಸಬಹುದಾದ ಪಾನಕಗಳು



       ಜಗತ್ತಿನಾದ್ಯಂತ ಕೋವಿಡ್ 19 ವೈರಾಣುವಿನ ವಿಷವರ್ತುಲ ಪ್ರಬಲವಾಗುತ್ತಿದೆ. ಈ ಹೆಮ್ಮಾರಿಯಿಂದ,ಇತರ ವೈರಾಣುಗಳಿಂದ ನಮ್ಮ ದೇಹವನ್ನು ರಕ್ಷಿಸಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ವಿಹಾರಗಳತ್ತ ಗಮನಹರಿಸಬೇಕು.ನಮ್ಮ ಸುತ್ತಮುತ್ತ ಸಿಗುವಂತಹ, ಅಡುಗೆಯಲ್ಲಿ ನಿತ್ಯವೂ ಬಳಸುವಂತಹ ಪದಾರ್ಥಗಳಿಂದ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಲು ಸಾಧ್ಯ.


     ನಮ್ಮ ಮನೆಯ ಹಿತ್ತಲಲ್ಲಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳು ಇರುತ್ತವೆ.ಇದ್ದರೂ 'ಹಿತ್ತಲ ಗಿಡ ಮದ್ದಲ್ಲ' ಎಂಬ ನಮ್ಮ ಅಸಡ್ಡೆಯನ್ನು ಈಗ ಬದಿಗಿರಿಸಬೇಕಾಗಿದೆ.ಯಾವ ರೀತಿಯಲ್ಲಿ ಇವುಗಳನ್ನು ಬಳಸಬೇಕು ಎಂಬುದನ್ನು ನಮಗಿಂತ ಚೆನ್ನಾಗಿ ನಮ್ಮ ಹಿರಿಯರು ಅರಿತಿದ್ದರು.ನಾವು ಅಳವಡಿಸಿಕೊಳ್ಳದೆ ಇದ್ದ ಸರಳ ಮನೆಮದ್ದುಗಳು ಇಂದು ವೈರಾಣುವಿನ ವಿರುದ್ಧದ ನಮ್ಮ ಹೋರಾಟಕ್ಕೆ ಅತೀ ಅಗತ್ಯ.


ಪಾನಕಗಳು:-

ಕಾಳುಮೆಣಸು:- ಕಾಳುಮೆಣಸನ್ನು ಚೆನ್ನಾಗಿ ಗುದ್ದಿ ಪುಡಿಮಾಡಿಟ್ಟುಕೊಳ್ಳಿ.ಎಂಟು ಲೋಟ ನೀರಿಗೆ ಅರ್ಧ ಚಮಚ ಈ ಪುಡಿಯನ್ನು ಹಾಕಿ ಐದು ನಿಮಿಷ ಕುದಿಸಿ.ಚಿಟಿಕೆ ಅರಶಿನ ಪುಡಿ ಹಾಕಿ . ಆರಿದ ನಂತರ ಒಂದು ಲೋಟ ಪಾನಕಕ್ಕೆ ಒಂದು ಚಮಚ ಜೇನು ಬೆರೆಸಿ ಸೇವಿಸಿ.ಅಥವಾ ಕುಡಿಯುವಷ್ಟು ಬಿಸಿಯಿದ್ದಾಗ ಒಂದು ಚಮಚ ನಿಂಬೆರಸ ಸೇರಿಸಿ ಸೇವಿಸಿದರೆ ಗಂಟಲು ಕೆರೆತ,ಶೀತ , ಕೆಮ್ಮು ಶಮನವಾಗುತ್ತದೆ. ಬಾರದಂತೆಯೂ ತಡೆಯುತ್ತದೆ.

ತುಳಸಿ:- ಎರಡು ಲೋಟ ನೀರಿಗೆ ಒಂದು ಹಿಡಿ ತುಳಸಿ ದಳಗಳನ್ನು ಹಾಕಿ ಕುದಿಸಿ.ಹದವಾಗಿ ಬಿಸಿಯಿದ್ದಾಗ ನಿಂಬೆ ರಸದೊಂದಿಗೆ ಅಥವಾ ತಣ್ಣಗಾದ ನಂತರ ಜೇನುತುಪ್ಪದೊಂದಿಗೆ ಸೇವಿಸಿ.
ಅರ್ಧ ಕಪ್ ನಷ್ಟು ತುಳಸಿದಳಗಳನ್ನು ರುಬ್ಬಿ ಅದಕ್ಕೆ  ನಾಲ್ಕೈದು ಚಮಚ ನಿಂಬೆರಸ ಸೇರಿಸಿ.ಎಂಟು ಲೋಟ ನೀರು ಕುದಿಸಿ ಬೆಲ್ಲ ಸೇರಿಸಿ.ಆರಿದ ನಂತರ ಇದಕ್ಕೆ ರುಬ್ಬಿದ ತುಳಸಿಯ ಮಿಶ್ರಣವನ್ನು ಸೇರಿಸಿ.ಏಲಕ್ಕಿ ಪುಡಿ ಬೆರೆಸಬೇಕು.ಇದನ್ನು ಖಾಲಿಹೊಟ್ಟೆಯಲ್ಲಿ ಕುಟುಂಬದ ಸದಸ್ಯರು ದಿನಕ್ಕೆ ಎರಡು ಬಾರಿ ಸೇವಿಸಬಹುದು.ವೈರಸ್ ಹತೋಟಿಗೆ,ಅಜೀರ್ಣದ ಸಮಸ್ಯೆಗೆ ಉತ್ತಮ ಪರಿಹಾರ.
ಪುದೀನಾ:- ಪುದೀನಾ ಎಲೆಗಳನ್ನು ಶುಂಠಿಯ ಜೊತೆ ಎಂಟು ಲೋಟ ನೀರಿನಲ್ಲಿ ಕುದಿಸಿ .ಕುಟುಂಬದ ಸದಸ್ಯರು ದಿನಕ್ಕೆ ಮೂರು ಬಾರಿ ಇದನ್ನು ಸೇವಿಸಬಹುದು.
ಅಮೃತ ಬಳ್ಳಿ,ಕಿರಾತಕಡ್ಡಿ,ಕಹಿಬೇವು, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು ಎಲ್ಲವನ್ನೂ ಜೊತೆಯಾಗಿ ಕುದಿಸಿ ಕೊನೆಯಲ್ಲಿ ಸ್ವಲ್ಪ ಬೆಲ್ಲ ಸೇರಿಸಿ.ನಿಂಬೆರಸ  ಬೆರೆಸಿ ಸೇವಿಸಿ.ಇದು ಶೀತ ,ಕೆಮ್ಮು ,ಕಫ ,ಜ್ವರದ ಬಾಧೆಯನ್ನು ಹತೋಟಿಗೆ ತರುತ್ತದೆ.
ದೊಡ್ಡ ಪತ್ರೆ/ಸಾಂಬ್ರಾಣಿ ಎಲೆಗಳನ್ನು  ಬಾಡಿಸಿಕೊಂಡು ರಸತೆಗೆದು ಚಮಚ ಜೇನಿನೊಂದಿಗೆ ಸೇವಿಸಿದರೆ ಶೀತ ಜ್ವರ ಹತೋಟಿಗೆ ಬರುತ್ತದೆ.ಹಾಗೆಯೇ ಸೊಪ್ಪನ್ನು ನೀರಿನಲ್ಲಿ ಕುದಿಸಿ ಬೆಲ್ಲ ಸೇರಿಸಿ ಕಷಾಯ ಕೂಡ ತಯಾರಿಸಬಹುದು.
ಆಡುಸೋಗೆ:- ಆಡುಸೋಗೆಯನ್ನು ಜಜ್ಜಿ ರಸವನ್ನು ಹಿಂಡಿ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಶ್ವಾಸಕೋಶದ ಸೋಂಕಿಗೆ ಉತ್ತಮ ಪರಿಹಾರ ದೊರೆಯುತ್ತದೆ.ನೀರಿನಲ್ಲಿ ಎಲೆಗಳನ್ನು ಕುದಿಸಿ ಸೋಸಿ ಜೇನುತುಪ್ಪ ದೊಂದಿಗೆ ಸಹ ಸೇವಿಸಬಹುದು.


          ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ನಮ್ಮ ದೇಹದಲ್ಲಿ ರೋಗದ ವಿರುದ್ಧ ಹೋರಾಡುವ ಕೋಶಗಳ ಸಾಮರ್ಥ್ಯವನ್ನು ವೃದ್ಧಿಸುತ್ತದೆ.ತುಳಸಿಯು ಆಂಟಿವೈರಲ್ ಗುಣವನ್ನು ಹೊಂದಿದ್ದು ಶ್ವಾಸಕೋಶದ ಮತ್ತು ಉಸಿರಾಟದ ಸಮಸ್ಯೆಗಳಿಗೆ ಮನೆಮದ್ದು.ಅಮೃತಬಳ್ಳಿಯು ಸುಲಭವಾಗಿ ಬೆಳೆಯುವ ಸಸ್ಯವಾಗಿದ್ದು ಜ್ವರವನ್ನು ಶಮನಗೊಳಿಸಿ ದೇಹದ ವೈರಿಣುಗಳ ವಿರುದ್ಧ ಹೋರಾಡುವ ಗುಣವನ್ನು ವರ್ಧಿಸಲು ಸಹಾಯಕ.ಕಹಿಬೇವು ರೋಗನಿರೋಧಕ ಶಕ್ತಿಯನ್ನು ವರ್ಧಿಸುವುದರಲ್ಲಿ ಎತ್ತಿದ ಕೈ.ಅರಿಶಿನವು ನಂಜು ನಿರೋಧಕವಾಗಿದ್ದು, ಸೌಂದರ್ಯ ವರ್ಧಕ ಕೂಡ ಹೌದು.



       ಆಹಾರದಲ್ಲಿ ನೆಲ್ಲಿಕಾಯಿ ಬಳಸುವುದು ನಮ್ಮಲ್ಲಿ ಇಂದಿಗೂ ಮುಂದುವರಿದಿದೆ. ನೆಲ್ಲಿಕಾಯಿ ತೊಕ್ಕು,ನೆಲ್ಲಿಚಟ್ಟು, ನೆಲ್ಲಿಕಾಯಿ ಪುಡಿ,ಉಪ್ಪಿನಲ್ಲಿ ಅದ್ದಿದ ನೆಲ್ಲಿಕಾಯಿ.. ಹೀಗೆ ಹಲವು ವಿಧಾನದಲ್ಲಿ ಬೆಟ್ಟದ ನೆಲ್ಲಿಕಾಯಿಯನ್ನು ಶೇಖರಿಸಿಟ್ಟು ಬಳಸುತ್ತೇವೆ.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿಯನ್ನು ವರ್ಧಿಸುವುದರಲ್ಲಿ ಎರಡು ಮಾತಿಲ್ಲ.ಉಪ್ಪಿನಲ್ಲಿರಿಸಿದ ನೆಲ್ಲಿಕಾಯಿಯಿಂದ ಚಟ್ನಿ,ತುಂಬುಳಿ ಮಾಡಿ ಅನ್ನದ ಜೊತೆ ಸೇವಿಸಬಹುದು.ನಾಲಿಗೆಗೂ ರುಚಿ , ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.


      ಅಡುಗೆಯಲ್ಲಿ ಬಳಕೆಯಾಗುವ ಕೊತ್ತಂಬರಿ, ಜೀರಿಗೆ, ಮೆಂತ್ಯ,ಚಕ್ಕೆ , ಶುಂಠಿ ...ಇವುಗಳು ಕೂಡ ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.ನಾಲ್ಕು ಚಮಚ ಕೊತ್ತಂಬರಿ ಬೀಜ, ಎರಡು ಚಮಚ ಜೀರಿಗೆ, ಒಂದು ಚಮಚ ಮೆಂತ್ಯ,ಸಣ್ಣ ತುಂಡು ಒಣ ಶುಂಠಿ, ಐದು ಕಾಳುಮೆಣಸು .. ಇವುಗಳನ್ನು ಹುರಿದು ಪುಡಿಮಾಡಿಟ್ಟುಕೊಳ್ಳಿ.ಇದರಿಂದ  ಕಷಾಯ ತಯಾರಿಸಿ ಹಾಲು ಬೆರೆಸಿ ಸೇವಿಸಬಹುದು.ಕಾಫಿ ಟೀ ಗಿಂತ ಉತ್ತಮ.


    ಸಾಂಕ್ರಾಮಿಕ ರೋಗ ಹರಡದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುತ್ತಾ ಆಗಾಗ್ಗೆ ಬಿಸಿಯಾದ ನೀರನ್ನು ಸೇವಿಸಬೇಕು. ಉಪ್ಪುನೀರಿನಲ್ಲಿ ಗಾರ್ಗಲ್ ಮಾಡಿಕೊಳ್ಳಬೇಕು.ಹೊರಗಡೆ ಹೋಗಬೇಕಾದಾಗ ಮನೆಯಲ್ಲೇ ತಯಾರಿಸಿದ ಕಾಟನ್ ಮಾಸ್ಕ್ ಧರಿಸಿ.


      ಇವುಗಳೆಲ್ಲಕ್ಕಿಂತ ಮುಖ್ಯ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛವಾಗಿ ಕೈ ತೊಳೆದುಕೊಳ್ಳುವುದು ,ಆಗಾಗ ಕಣ್ಣು ಮೂಗು ಮುಟ್ಟದಿರುವುದು, ನಮ್ಮ ಮನೆಯಲ್ಲೇ ಇದ್ದು ವೈರಾಣುವಿನ ಸಂಪರ್ಕಕ್ಕೆ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು.. .ನಮ್ಮ ದೇಹವನ್ನು ರಕ್ಷಿಸಿಕೊಂಡು ಇತರರಿಗೂ ನಮ್ಮಿಂದ ಹರಡದಂತೆ ಎಚ್ಚರವಹಿಸೋಣ.

(ಸಾಧಾರ)

✍️... ಅನಿತಾ ಜಿ.ಕೆ.ಭಟ್.
26-04-2020.

Momspresso Kannada  ಮತ್ತು Pratilipi Kannada ದಲ್ಲಿ ಪ್ರಕಟಿಸಿದ ಬರಹ.

Friday, 24 April 2020

ಜೀವನ ಮೈತ್ರಿ ಭಾಗ ೬೭(67)



ಜೀವನ ಮೈತ್ರಿ ಭಾಗ ೬೭



           ಪುರೋಹಿತರು ಸಾಕಷ್ಟು ಆಲೋಚಿಸಿ ಲಾಭ  ನಷ್ಟ, ಅನುಕೂಲ ಅನಾನುಕೂಲ ಎಲ್ಲವನ್ನು ಲೆಕ್ಕ ಹಾಕಿ "ನಾನು ಬರುತ್ತೇನೆ "ಎಂದು ಒಪ್ಪಿಕೊಂಡರು. "ನೀವು ಬರಬೇಕು. ಅಷ್ಟೇ ಅಲ್ಲ . ನೀವೀಗ ಮಾಡಿದ ಆರೋಪವನ್ನು ನಿಮಗೆ ಯಾರು ಹೇಳಿದರು? ಏನು ಹೇಳಿದರು .ಎಂಬುದನ್ನು ಕೂಡ ಸ್ಪಷ್ಟವಾಗಿ ತಿಳಿಸಬೇಕು" ಎಂದು ಕಿಶನ್ ಪಟ್ಟುಹಿಡಿದು ಕುಳಿತ.


        ಯಾರದೋ ಮಾತನ್ನು ಕೇಳಿ ಸಿಕ್ಕಿಬಿದ್ದೆ ಮಾತನಾಡುವ ಮುನ್ನ ಸರಿಯಾಗಿ ಯೋಚಿಸಬೇಕಿತ್ತು. ಎಂದು ತನ್ನ ಮನದಲ್ಲಿ ಅಂದುಕೊಂಡರು ಪುರೋಹಿತರು.
"ಇರ್ಲಿ ಬಿಡಿ...  ಯಾರು ಹೇಳಿದರು ಏನು ಹೇಳಿದರು ಎಂಬುದನ್ನು ಇಲ್ಲಿಗೆ ಬಿಟ್ಟುಬಿಡೋಣ. ಅದನ್ನು  ಮನಸ್ಸಿಗೆ ತೆಗೆದುಕೊಳ್ಳಬೇಡಿ."

ಕಿಶನ್:-"ಇಲ್ಲ ..ಖಂಡಿತಾ ಸಾಧ್ಯವಿಲ್ಲ.. ಮಾಡದ ತಪ್ಪಿನ ಆರೋಪವನ್ನು ನಾನು ಹೊರಲು ಸಾಧ್ಯವಿಲ್ಲ... ಹೇಳಲೇಬೇಕು..."

      ಎಂದಾಗ ನಿರ್ವಾಹವಿಲ್ಲದೆ ಪುರೋಹಿತರು "ನಾನು ಯಾವಾಗಲೂ ಪೌರೋಹಿತ್ಯಕ್ಕೆ ಹೋಗುವ ಮನೆಯ ಶಶಿ ಎಂಬುವರು ಈ ಹುಡುಗಿಯ ಸೋದರತ್ತೆ.. ಅವರೇ ಹೇಳಿದ ಮೇಲೆ ನಂಬದಿರಲು ಸಾಧ್ಯವೇ?"


ಕಿಶನ್:-ಏನೆಂದು ಹೇಳಿದರು?

ಪುರೋಹಿತರು:-ನೀವು ತಪ್ಪು ಮಾಡಿಲ್ಲ ಅಂದಮೇಲೆ ಬಿಟ್ಟುಬಿಡೋಣ..

ಕಿಶನ್ :-ನೀವು ಹೇಳಲಿಲ್ಲ ಎಂದಾದರೆ ನಾನು ಮಾನನಷ್ಟ ಮೊಕದ್ದಮೆ ಹೂಡಿ ಮುಂದಿನ ಕ್ರಮ ಜರುಗಿಸುತ್ತೇನೆ.

ಪುರೋಹಿತರು:-(ತನ್ನ ಮೇಲೆ ಕೇಸು ದಾಖಲಾದರೆ ಎಂಬ ಭಯದಿಂದ  ) ಅಯ್ಯೋ ಅಷ್ಟೆಲ್ಲಾ ಮುಂದುವರಿಯುವುದು ಬೇಡ ಬಿಡಿ.. ನಾನು ಹೇಳುತ್ತೇನೆ ..ನಾಲ್ಕು ವರ್ಷದಿಂದ ತಮ್ಮನ ಮಗಳು ಒಬ್ಬನ ಜೊತೆ ಓಡಾಡುತ್ತಿದ್ದಳು.   ಇಬ್ಬರಿಗೂ ಬಹಳ ಅನ್ಯೋನ್ಯತೆಯಿದ್ದು ಆಕೆ ಗರ್ಭಿಣಿಯಾದಳು.. ಎರಡು ಕಡೆಯವರಿಗೂ  ಮದುವೆ ಮಾಡದೆ ನಿರ್ವಾಹವಿಲ್ಲ.. ಹೊಟ್ಟೆಯಲ್ಲಿ ಇರುವುದನ್ನು ತೆಗೆಸಿ ಮದುವೆಯನ್ನು   ನಿಶ್ಚಯಿಸಿದರು..
ಇದಿಷ್ಟು ಅವರೇ ಹೇಳಿದ್ದು ..ನನ್ನನ್ನು  ಬಿಟ್ಟುಬಿಡಿ ನಾನಿಲ್ಲ ಇನ್ನು ಈ ವಿಷಯಕ್ಕೆ..."

ಗಣೇಶ ಶರ್ಮ:-ಸರಿ ..ಈ ವಿಷಯವನ್ನು ನಾವು ನೋಡಿಕೊಳ್ಳುತ್ತೇವೆ.. ಇದು ಮಾತ್ರ ಸಂಪೂರ್ಣ ಸುಳ್ಳು.. ಯಾರೊಂದಿಗೂ ಈ ವಿಷಯವನ್ನು ಹಂಚಿಕೊಳ್ಳಲು ಹೋಗಬೇಡಿ .ಕಾರ್ಯಕ್ರಮಕ್ಕೆ ಬಂದು ಸಾಂಗವಾಗಿ ನಡೆಸಿಕೊಡಿ ಎಂದು ಕೋರಿ ಅಲ್ಲಿಂದ ಹೊರಟರು.

ಕಾರು ಸ್ಟಾರ್ಟ್ ಮಾಡಿ ಐದು ನಿಮಿಷ ಡ್ರೈವ್ ಮಾಡಿದ ಕಿಶನ್ ಮಾರ್ಗದ ಬದಿಯಲ್ಲಿ ಕಾರ್ ನಿಲ್ಲಿಸಿ ಮೈತ್ರಿಗೆ ಕರೆ ಮಾಡಿದ.

"ಅದು ಯಾರೇ ನಿನ್ನ ಸೋದರತ್ತೆ ಶಶಿಯಂತೆ?"

"ಏನಾಯ್ತು ಕಿಶನ್ ? ಯಾಕೆ ಶಶಿಯತ್ತೆಯ ಸುದ್ದಿ! ದನಿಯಲ್ಲಿ ಏನೋ ವ್ಯತ್ಯಾಸವಿದೆಯಲ್ಲ"


"ಹೌದು ..ಅವರಿಗೇನು ಬುದ್ಧಿ ಗಿದ್ಧಿ  ಸರಿ ಇಲ್ವಾ.
? ಇಲ್ಲಸಲ್ಲದನ್ನು ಪ್ರಚಾರ ಮಾಡುವುದು ತರವಲ್ಲ .."ಎಂದು ಸಿಟ್ಟಿನಿಂದಲೇ ಗುಡುಗಿದ.

 ಕಿಶನ್ ನ ಇಂತಹ ಸಿಡುಕು ಮಾತನ್ನು ಇದುವರೆಗೂ ಕೇಳದವಳಿಗೆ ಆತಂಕವಾಯಿತು.
 "ಏನಾಯಿತು ..?ಅದನ್ನಾದರೂ ಹೇಳಿ" ಎಂದಳು.


"ನಾ ಹೇಳಿದರೆ ನನ್ನ ನಾಲಿಗೆ ಹೊಲಸು ..ಕೇಳಿದರೆ ನಿನ್ನ ಕಿವಿಯ ಹಾಳು .
ನಮ್ಮ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ.."

"ಅವರ ಸ್ವಭಾವ ಹಾಗೇನೆ"

"ಹಾಗೆಂದು ಒಪ್ಪಿ ಬಿಡಲು ಸಾಧ್ಯವೇ..? ನನಗೂ ನಿನಗೂ ಅನ್ಯೋನ್ಯ ಸಂಬಂಧವಿತ್ತಂತೆ. ಇಬ್ಬರೂ ಜೊತೆಯಾಗಿ ಸುತ್ತುತ್ತಿದ್ದೆವಂತೆ ..ಪರಿಣಾಮವಾಗಿ ನೀನು ಗರ್ಭಿಣಿಯಾಗಿ  ಮದುವೆ ಮಾಡುವುದು ಅನಿವಾರ್ಯವೆಂದು ಅಬಾರ್ಷನ್ ಮಾಡಿಸಿ   ಮದುವೆ ನಿಶ್ಚಯಿಸಿದರಂತೆ..ಇಷ್ಟೆಲ್ಲ ಕೇಳಿದ ಮೇಲೂ ಸುಮ್ಮನೆ ಇರ್ತೀಯ.. ಇರಬೇಕಾ..?
ಎಂದು ಒಂದೇ ಉಸಿರಿನಲ್ಲಿ ಗುಡುಗಿದ ಕಿಶನ್ ನ ಮಾತಿಗೆ ಮೈತ್ರಿ ನಡುಗಿದಳು.

ಆಕೆಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೀದಾ ಹೋಗಿ ಅಮ್ಮನ ಬಳಿ ಹೇಳಿ ಕಣ್ಣೀರು ಹಾಕಿದಳು. ಮಂಗಳಮ್ಮನಿಗೆ ಶಶಿ ಅತ್ತಿಗೆಯ ಅಸಡ್ಡೆಯ ವರ್ತನೆಯನ್ನು ಮರೆಯುವ ಮುನ್ನವೇ ಈ ರೀತಿ ಸಿಡಿಲಿನಂತೆ ಅಪಪ್ರಚಾರ ವಾರ್ತೆಗಳು ಬಂದಾಗ ಆಘಾತ ಉಂಟಾಯಿತು.. ಈ ವಿಷಯದಲ್ಲಿ ಮಾತ್ರ ಸುಮ್ಮನಿರುವುದು ಸರಿಯಲ್ಲ ಗಂಡನಿಗೆ ಹೇಳಲೇಬೇಕು ಎಂದು ನಿರ್ಧರಿಸಿದರು.
ರಾತ್ರಿ ಊಟ ಮಾಡಿ ಬೇಗ ವೇಗವಾಗಿ ಅಡುಗೆ ಮನೆಯ ಕೆಲಸಗಳನ್ನು ಮುಗಿಸುತ್ತಿದ್ದಳು. ಅಲ್ಲಿಗೆ ಬಂದ ಮಹಾಲಕ್ಷ್ಮಿಅಮ್ಮ "ಏನು ಮಂಗಳ ..ಪಾತ್ರೆಗಳನ್ನೆಲ್ಲ ಸರಿಯಾಗಿ ತೊಳೆದಿಲ್ಲ.
 ಅಲ್ಲಿನೋಡು ಪಾತ್ರೆಯಲ್ಲಿ ಆಂಟಿ ಹಿಡಿದಿದೆ ಇನ್ನು ಸ್ವಲ್ಪ ತಿಕ್ಕು.. ಎಂದಾಗ ಮೊದಲೇ ಮನಸ್ಸು ಸರಿ ಇಲ್ಲದ ಮಂಗಳಮ್ಮ"  ಇನ್ನು ಬೇಕಾದರೆ ನೀವೇ ತಿಕ್ಕಿಕೊಳ್ಳಿ "ಎಂದು    ಉತ್ತರಿಸಿ ಬಿರಬಿರನೆ ರೂಮಿಗೆ ನಡೆದರು.ಮಂಗಳಮ್ಮ ಬರುವ ಹೊತ್ತಿಗೆ ಭಾಸ್ಕರ ಶಾಸ್ತ್ರಿಗಳು ಹಾಸಿಗೆ ಮೇಲೆ ಮಲಗಿ ಕಣ್ಣುಗಳಿಗೆ ನಿದ್ರೆ ಆವರಿಸಲು ಆರಂಭವಾಗಿತ್ತು.."ರೀ .." ಎಂದು ಕರೆದರು. ಎಚ್ಚರವಾಗಲಿಲ್ಲ ... ಪುನಃ ಅಲುಗಾಡಿಸಿ ಎಬ್ಬಿಸಲು ಎಚ್ಚೆತ್ತುಕೊಂಡರು .ಗಂಡನಲ್ಲಿ ಮೈತ್ರಿ ಹೇಳಿದ ವಿಷಯಗಳನ್ನೆಲ್ಲಾ ಚಾಚುತಪ್ಪದೆ ವರದಿ ಒಪ್ಪಿಸಿದರು. ನಿದ್ರೆಯ ಮಂಪರಿನಲ್ಲಿದ್ದ ಭಾಸ್ಕರ ಶಾಸ್ತ್ರಿಗಳು ಒಮ್ಮೆಲೆ ಎದ್ದುಕುಳಿತರು...
'ಏನು .. ಶಶಿ ಅಕ್ಕ ಈ ರೀತಿ ಹೇಳಿಕೊಂಡು ಬಂದಿದ್ದಾರೆಯೇ..? .ಇದನ್ನು ಮಾತ್ರ ಈ ಶಾಸ್ತ್ರಿ ಸಹಿಸಲಾರ ..ತಕ್ಕ ಪಾಠ ಕಲಿಸಲೇಬೇಕು.. ಎಲ್ಲವನ್ನು ಸಹಿಸುತ್ತಾ ಹೋದರೆ ತಿದ್ದಿಕೊಳ್ಳಲು ಅವಕಾಶ ಕೊಡದಂತಾಗುತ್ತದೆ.. ತಪ್ಪಿದವರಿಗೆ ತಪ್ಪನ್ನು ತಿದ್ದಿ ಹೇಳಿ ಸರಿದಾರಿಯಲ್ಲಿ ನಡೆಸುವುದು ಕರ್ತವ್ಯ "ಎಂದು  ಖಾರವಾಗಿ ನುಡಿದು ಚಾವಡಿಗೆ ಬಂದರು..


       ಊಟವಾದ ಮೇಲೆ ಮನೆಯ ಎದುರು ಬದಿಯ ಅಂಗಳದಲ್ಲಿ ಹತ್ತು ಹೆಜ್ಜೆ ನಡೆಯುತ್ತಿದ್ದ ತಂದೆಯವರನ್ನು ಕರೆದರು.ತನ್ನ ನೆಚ್ಚಿನ ಧಾರವಾಹಿ ನೋಡುತ್ತಿದ್ದ ಅಮ್ಮನನ್ನು ಕೂಡ ಟಿವಿ ಆಫ್ ಮಾಡಿ  ಕೂಡಲೇ ಬರಲು ಹೇಳಿದರು.. ಮೈತ್ರಿ ಮಹೇಶ್ ಕೂಡ ಜೊತೆಯಾಗಿದ್ದರು.

"ನೋಡಿ ...ನಾನೀಗ ಒಂದು ಬಹಳ ಗಂಭೀರವಾದ ವಿಷಯವನ್ನು ಚರ್ಚಿಸುತ್ತಿದ್ದೇನೆ.ಎಲ್ಲರೂ ಕಿವಿಗೊಟ್ಟು ಕೇಳಿ. ಅಮ್ಮ.. ಈಗ ನಾನು ಹೇಳುವುದನ್ನು ಕೇಳುವುದು ನಿಮಗೆ ಕೆಲಸ.. ಮಧ್ಯದಲ್ಲಿ ಬಾಯಿಹಾಕಿ ಇತರರ ಪರವಾಗಿ ಮಾತನಾಡಲು ಹೋಗಬಾರದು ..ಎಂದು ತಿಳಿಯಿತಾ "ಎಂದು ಮಗ ಅಮ್ಮನಿಗೆ ಹೇಳಿದಾಗ ಸುಮ್ಮನೆ ತಲೆ ಆಡಿಸಿದರು ಮಹಾಲಕ್ಷ್ಮಿ ಅಮ್ಮ... ಎಲ್ಲವನ್ನೂ ವಿವರವಾಗಿ ಹೇಳಿದ ಭಾಸ್ಕರ ಶಾಸ್ತ್ರಿಗಳು" ನಾವು ಇದರ ಬಗ್ಗೆ ಶಶಿಯನ್ನು ವಿಚಾರಿಸಬೇಕು. ಅವಳು ಮಾಡುತ್ತಿರುವ ತಪ್ಪನ್ನು  ಭಾವನಿಗೆ ಹೇಳಲೇಬೇಕು ..ಶಾಸ್ತ್ರೀ ವಂಶದಲ್ಲಿ ಬೆಳೆದು ಅನ್ನ ಹಾಕಿದ ಮನೆಗೆ ದ್ರೋಹ ಬಗೆಯುವವರನ್ನು ಎಂದಿಗೂ ಕ್ಷಮಿಸುವುದಿಲ್ಲ ಈ ಶಾಸ್ತ್ರಿ ವಂಶ.. ಅಪ್ಪ ನಾಳೆ ನಾನು ಅಕ್ಕನಲ್ಲಿಗೆ ತೆರಳಿ ಅವರನ್ನು ವಿಚಾರಿಸಿಕೊಳ್ಳುತ್ತೇನೆ.."

"ಮಗನೇ.. ಮಗಳು ಚಿಕ್ಕಂದಿನಲ್ಲಿ ಮಾಡುತ್ತಿದ್ದ ತಪ್ಪುಗಳಿಗೆ ನಾಗರ ಬೆತ್ತದ ರುಚಿ ತೋರಿಸಿ ತಿದ್ದಿದ್ದೇನೆ.. ಈಗಲೂ ಕೂಡ ತಪ್ಪು ಮಾಡಿದರೆ ಎಚ್ಚರಿಸುವ ಹಕ್ಕು ನನಗಿದೆ ..ಆದ್ದರಿಂದ ನಿನ್ನ ಜೊತೆಗೆ ನಾನು ಬರುತ್ತೇನೆ" ಎಂದರು ಶ್ಯಾಮ ಶಾಸ್ತ್ರಿಗಳು.

"ಆಗಲಿ ಅಪ್ಪ " ಎಂದು ಒಪ್ಪಿದರು ಭಾಸ್ಕರ ಶಾಸ್ತ್ರಿಗಳು.

ಅಮ್ಮನ ಕಡೆಗೆ ತಿರುಗಿ "ನೋಡು.. ಶಶಿ ಅಕ್ಕನಿಗೆ ಫೋನ್ ಮಾಡಿ
ವಿಚಾರ ತಿಳಿಸುವುದು ಬೇಡ .ಸುಳ್ಳನ್ನು ನಿಜವೆಂದು ಸಾಬೀತುಪಡಿಸಲು ಇನ್ನಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಸುಳ್ಳಿನಿಂದ ಶಶಿ ಮೆರೆಯುವುದು ಬೇಡ ಗೊತ್ತಾಯ್ತಾ.."
ಎಂದಾಗ ಅಮ್ಮ ತಲೆ ಆಡಿಸಿದರು..


ರಾತ್ರಿ ಭಾವಿ ಅಳಿಯನಿಗೆ ಭಾಸ್ಕರ ಶಾಸ್ತ್ರಿಗಳು ಕರೆಮಾಡಿ ವಿಷಯವನ್ನು ಇನ್ನೊಮ್ಮೆ ಖಚಿತಪಡಿಸಿಕೊಂಡರು.ಈ ಪ್ರಕರಣವನ್ನು ನಾನು ಕೂಲಂಕುಶವಾಗಿ ವಿಚಾರಿಸಿಕೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡಿದರು. ಕಿಶನ್ ಗೆ ಮಾವನ ಮಾತಿನಿಂದ ತುಸು ಸಮಾಧಾನವಾಯಿತು.


ಭಾಸ್ಕರ ಶಾಸ್ತ್ರಿಗಳು ತಾಯಿಗೆ ತಿಳಿಯದಂತೆ ಲ್ಯಾಂಡ್ಲೈನ್ ಫೋನ್ ನ ಸಂಪರ್ಕ ಕಳಚಿದರು. ಮಗನನ್ನು ಕರೆದು "ಅಜ್ಜಿ...ಫೋನ್ ಮಾಡಿದರೆ ನೋಡುವ ಜವಾಬ್ದಾರಿ ನಿನ್ನದು.. ಹೇಗೂ ಚಾವಡಿಯಲ್ಲಿ ಓದಿಕೊಂಡಿರುತ್ತೀಯ... ಸಂಪರ್ಕ ಕೊಡಲು ಹೇಳಿದರೆ ಮಾಡಬೇಡ.. ಮೊಬೈಲ್ ಕೊಡಬೇಡ .."ಎಂದು ಮಗನಿಗೆ ಒಂದು ಕೆಲಸವನ್ನು ನೀಡಿದರು.


ರಾತ್ರಿಯಿಡೀ ಶಾಸ್ತ್ರಿಗಳಿಗೆ ಸರಿಯಾಗಿ ನಿದ್ದೆ ಬರಲಿಲ್ಲ ..ಒಂದೇ ಪಾತ್ರೆಯ ಅನ್ನವನ್ನು ಉಂಡವರು.. ಒಂದೇ ರಕ್ತವನ್ನು ಹಂಚಿಕೊಂಡು ಬೆಳೆದವರು.. ಆದರೆ ಎಷ್ಟೊಂದು ವ್ಯತ್ಯಾಸ ..ಯೋಚಿಸುತ್ತಿದ್ದಾಗ ನೆನಪುಗಳೆಲ್ಲ ಕಣ್ಣಮುಂದೆ ಹಾದು ಹೋದವು.
ಮರುದಿನ ಬೆಳಗ್ಗೆ ಬೇಗ ಎದ್ದು ಶ್ಯಾಮ  ಶಾಸ್ತ್ರಿಗಳು ಪೂಜೆ ಮುಗಿಸಿ ತಿಂಡಿ ತಿಂದು ರೆಡಿಯಾದರು ..ಶಾಸ್ತ್ರಿಗಳು ಕೂಡ ಜೊತೆಯಾದರು ..ಇಬ್ಬರು ಬೆಳ್ಳಂಬೆಳಗ್ಗೆ ಶಶಿ ಮನೆಗೆ ತೆರಳಿದರು.


ಮಗ ಮತ್ತು ಪತಿ ಮಗಳ ಮನೆಗೆ ತೆರಳುತ್ತಿದ್ದಂತೆಯೇ ಮಹಾಲಕ್ಷ್ಮಿ ಅಮ್ಮ ಆಗಾಗ ಚಾವಡಿಗೆ ಇಣುಕತೊಡಗಿದರು ..ಯಾವಾಗ ಮಹೇಶ ಅಲ್ಲಿಂದ ಹೊರಡುತ್ತಾನೆ ಎಂದು..ಇದನ್ನರಿತ ಮಹೇಶ  ಅಜ್ಜಿಯನ್ನು ಪರೀಕ್ಷಿಸಲು ಒಮ್ಮೆ ಅಲ್ಲಿಂದ ಹೊರಗೆ   ತೆರಳಿದ. ಚಾವಡಿಗೆ ಬಂದ ಅಜ್ಜಿ  ಲ್ಯಾಂಡ್ ಫೋನ್ ರಿಸೀವರ್ ಕಿವಿಗೆ ಇಟ್ಟು ಡಯಲ್ ಮಾಡಲು ನೋಡಿದರು...ರಿಂಗ್ಟೋನ್ ಇಲ್ಲ ಎಂದು ಫೋನನ್ನು ಪುನಃ ಕುಕ್ಕಿದರು .ಇದನ್ನೆಲ್ಲಾ ಹೊರಗಿನ ಕಿಟಕಿಯಲ್ಲಿ ನಿಂತು ಮಹೇಶ ನೋಡುತ್ತಿದ್ದ ..ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದ.. ಅಜ್ಜಿ ಗೆ ಗೊತ್ತಿಲ್ಲ ..


       ಶಶಿ ಬೆಳಗಿನ ತಿಂಡಿಯಾಗಿ ಕೆಲಸದಾಳುಗಳ ಜೊತೆ ಮಾತನಾಡುತ್ತಾ ಕೆಲಸವನ್ನು ಹೇಳುತ್ತಿದ್ದಳು ..ಆಕೆಯ ಪತಿ ಶಂಕರ ಭಾವ ಪೇಪರ್ ಓದುತ್ತಾ ಇದ್ದರು. ಅಷ್ಟೊತ್ತಿಗೆ ಅಂಗಳದಲ್ಲಿ ತಮ್ಮನ ಕಾರು ಕಂಡು ಆಶ್ಚರ್ಯವೋ ಆಶ್ಚರ್ಯ. ಬಹುಶಃ ಇವನಿಗೆ ಮಗಳ ಮದುವೆ ಅಬ್ಬರದಲ್ಲಿ ಮಾಡಲು ದುಡ್ಡಿನ ಕೊರತೆಯಿರಬಹುದು ..ಹಾಗೇ ಬಂದಿದ್ದಾನೆ ಎಂಬ ಯೋಚನೆ ಅವಳಿಗೆ. ಆದರೆ ಕಾರಿನಿಂದಿಳಿದು ಬರುತ್ತಿದ್ದಂತೆಯೇ ತಮ್ಮ ಹಾಗೂ ಅಪ್ಪನ ಮುಖ ನೋಡಿ ಆಕೆಗೂ ಒಮ್ಮೆ ಒಮ್ಮೆ ದಂಗಾಯಿತು ..ಏನು ಇಷ್ಟು ಗಂಭೀರವಾಗಿ ಯೋಚಿಸುತ್ತಾರೆ ಎಂದುಕೊಂಡು ಕುಡಿಯಲು ಬೆಲ್ಲ ನೀರು ತಂದಿಟ್ಟಳು.

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
24-04-2020.

ಮುಂದಿನ ಭಾಗ... ಸೋಮವಾರ..



Tuesday, 21 April 2020

ದಾಸವಾಳದ ಸೊಬಗು



ಬಿಸಿಲಿನ ಧಗೆಯನು ಸಹಿಸಿ
ಸ್ಥಿರವಾಗಿ ನಿಂತು ಹೂನಗೆಸೂಸಿ
ಒಂದೇ ದಿನ ಬಾಳುವ ಪುಷ್ಪಸಿರಿ
ಅಲ್ಲವೇ ಇಂದಿನ ನಮ್ಮ ಬದುಕಿಗೆ ಮಾದರಿ..?


✍️... ಅನಿತಾ ಜಿ.ಕೆ.ಭಟ್.
22-04-2020.


ಜೀವನ ಮೈತ್ರಿ ಭಾಗ ೬೬(66)




ಜೀವನ ಮೈತ್ರಿ ಭಾಗ ೬೬


        ಮಂಗಳಮ್ಮನ ಕಣ್ಣಿನಿಂದ ಹನಿಗಳು ಉದುರುವುದನ್ನು ಕಂಡು ಶಾಸ್ತ್ರಿಗಳಿಗೂ ನೋವಾಯಿತು .ಅಕ್ಕನ ನಡತೆ ಅವರಿಗೆ ಎಳ್ಳಷ್ಟೂ ಸರಿಕಾಣಲಿಲ್ಲ.
"ಮಂಗಳ... ಶಶಿ ಅದೆಷ್ಟು ಬದಲಾಗಿದ್ದಾಳೆ. ನಮ್ಮ ಮನೆತನದಲ್ಲಿ ಇದುವರೆಗೆ ಯಾರನ್ನೂ ಕೂಡ ಅಷ್ಟು ಅಸಡ್ಡೆಯಿಂದ ನಾವು ಕಂಡಿಲ್ಲ. ನನ್ನ ತಂದೆ ತಾಯಿಗಳು ಈ ರೀತಿ ಮಾಡುವುದನ್ನು ಹೇಳಿಕೊಟ್ಟಿಲ್ಲ... ತಾವೂ ಮಾಡಿಲ್ಲ.ಶಾಸ್ತ್ರಿ ಮನೆತನದ ಗೌರವವನ್ನು ಕಾಪಾಡಿಕೊಳ್ಳುತ್ತಾ ಸಂಪ್ರದಾಯವನ್ನು ಪಾಲಿಸುತ್ತಿದ್ದೇನೆ ಎನ್ನುವವಳ ನಡತೆ ಹೇಗಿದೆ..?"

"ರೀ..ನಾವೇನು ಮಾಡಲು ಸಾಧ್ಯ ..ಎಲ್ಲಾ ಅವರವರು ಕಲಿತುಕೊಂಡದ್ದು.ತವರು ಮನೆಯಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸಿದರೂ ಸಹ ಪತಿಯ ಮನೆಯಲ್ಲಿ ಜೊತೆಗೆ ಒಡನಾಡುವ ನಾದಿನಿಯರನ್ನು, ಅತ್ತೆ,  ಓರಗಿತ್ತಿಯನ್ನು ನೋಡಿ ಕೆಟ್ಟ ಸಂಸ್ಕಾರವನ್ನು ಅಳವಡಿಸಿಕೊಂಡಿರಬೇಕು.ಮುರಳಿಗೆ ಮೈತ್ರಿಯನ್ನು ಕೊಟ್ಟಿಲ್ಲ ಎಂಬ ನೋವು ಕೂಡ ಇದರ ಹಿಂದಿರಬಹುದು .ಏನೇ ಆದರೂ ಶುಭಕಾರ್ಯಕ್ಕೆ ಬಂದವರನ್ನು ಈ ರೀತಿ ನೋಡುವುದು ಮಾತ್ರ ಸರಿಯಲ್ಲ.."


"ಶಶಿಯಕ್ಕನಿಂದ ನಾನು ಇಂತಹ ನಡೆಯನ್ನು ನಿರೀಕ್ಷಿಸಿರಲಿಲ್ಲ ಮಂಗಳ.."

"ಅವರ ಬುದ್ಧಿಗೆ ತಕ್ಕಂತೆ ಅವರ ನಡೆ. ನಾವು ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಸುವುದು ಬೇಡ .ಸಧ್ಯ ಮಗಳ ಮದುವೆ ಯೋಚನೆಯಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳೋಣ."


"ಇಂತಹವರ ಮಗನಿಗೆ ಮೈತ್ರಿಯನ್ನು ಕೊಟ್ಟಿದ್ದರೆ... ಒಂದು ಕ್ಷಣ ಯೋಚಿಸಿದಾಗ ಮೈ ಜುಮ್ಮೆನ್ನುತ್ತದೆ.."

"ದೇವರ ದಯ..ಮಗಳಿಗೆ ಒಳ್ಳೆ ಸಂಬಂಧ ದೊರಕಿದ್ದು. ಈ ಸಂದರ್ಭದಲ್ಲಿ 'ನೀವು ಮರ್ಯಾದೆ ಕೊಟ್ಟಿಲ್ಲ' ಎಂದು ನಾವು  ಸೇಡು ತೀರಿಸಿಕೊಳ್ಳಲು ಹೋಗುವುದು ಬೇಡ. ನಮ್ಮ ಮಗಳು ಒಳ್ಳೆಯ ಸಂಸ್ಕಾರದಿಂದ ಬದುಕಿ ಬಾಳಿದರೆ ನಮಗೆ ಅಷ್ಟೇ ಸಾಕು .ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸೋಣ. ಕೇಡು ಬಗೆದವರಿಗೆ ದೈವವೇ ತಕ್ಕ ಶಿಕ್ಷೆಯನ್ನು ಪಾಟವನ್ನು ಕಲಿಸುತ್ತದೆ.."


       ಹೀಗೆ ಇಬ್ಬರೂ ಅದೇ ವಿಷಯದಲ್ಲಿ ಚರ್ಚಿಸುತ್ತಾ ಇನ್ನೂ ಕೆಲವರ ಮನೆಗೆ ಕರೆಯೋಲೆಯನ್ನು ಹಂಚಿ ಮನೆಗೆ ಬಂದರು.ಮನೆಗೆ ಬರುತ್ತಲೇ ಮಹಾಲಕ್ಷ್ಮಿ ಅಮ್ಮ ಚಾವಡಿಯಲ್ಲಿ ನಿಂತು ಭಾಸ್ಕರನನ್ನು ಕೇಳಿದರು "ಮಗ ನೀವೇನು ಶಶಿ ಮನೆಯಲ್ಲಿ ಊಟ ಮಾಡದೆ ಪುರೋಹಿತರಲ್ಲಿ ಊಟ ಮಾಡಿದ್ದು...?"

"ಸಂದರ್ಭ ಹಾಗೆ ಬಂತು ..ಅದಕ್ಕಾಗಿ ಅಲ್ಲಿ ಉಂಡೆವು ..ಯಾವುದು ಪೂರ್ವನಿರ್ಧಾರಿತ ಅಲ್ಲ.."

"ಪಾಪ ...!!ಶಶಿ ಎಷ್ಟು ಬೇಸರ ಮಾಡಿಕೊಂಡಳು ಗೊತ್ತಾ..?"

        ಅಮ್ಮನ ಮಾತನ್ನು ಕೇಳಿದ ಭಾಸ್ಕರ ಶಾಸ್ತ್ರಿಗಳಿಗೆ ಶಶಿಯ ಇನ್ನೊಂದು ಮುಖದ ಅನಾವರಣವಾಯಿತು .ಮಾಡುವುದೊಂದು.. ಅಮ್ಮನಲ್ಲಿ ಹೇಳುವುದು ಇನ್ನೊಂದು.ಏನೋ ಹೇಳಲು ಬಾಯೊಡೆದ ಗಂಡನನ್ನು ಮಂಗಳಾ ಕಣ್ಣಿನಲ್ಲೇ ಬೇಡ ಎಂದು ತಡೆದಳು.ಅಪರೂಪಕ್ಕೆ ಮಡದಿಯ ಮಾತನ್ನು ಪಾಲಿಸಿದರು ಶಾಸ್ತ್ರಿಗಳು.ಅವರಿಗೂ ಗೊತ್ತಿತ್ತು ಅಮ್ಮನಲ್ಲಿ ಶಶಿಯಕ್ಕನ ಬಗ್ಗೆ ಹೇಳಿದರೆ ಬಂಡೆಕಲ್ಲಿನ ಮೇಲೆ ನೀರು ಹೊಯ್ದಂತೆ ಎಂದು.


      ಅಮ್ಮನಲ್ಲಿ ಏನೂ ಮಾತನಾಡದೆಯೇ ಸೀದಾ ಒಳ ನಡೆದರು ಶಾಸ್ತ್ರಿಗಳು. ಮಕ್ಕಳಲ್ಲಿ ಪರೀಕ್ಷೆಯ ಸುದ್ದಿಯನ್ನು ಕೇಳಿ"ಮುಂದಿನ ಪರೀಕ್ಷೆಗಾಗಿ ಚೆನ್ನಾಗಿ ತಯಾರಿ ನಡೆಸಿ " ಎಂದು ಇಬ್ಬರಿಗೂ ಸಲಹೆಯಿತ್ತರು.


      ಮರುದಿನ ಮೈತ್ರಿ ಮತ್ತು ಮಂಗಳ ಇಬ್ಬರು ತರಲಿ ತೆರಳಿ ಬಟ್ಟೆಗಳನ್ನೆಲ್ಲಾ ಹೊಲಿಯಲು ಕೊಟ್ಟು ಬಂದರು. ಶಾಸ್ತ್ರಿಗಳು ಕೆಲವು ದಿನ ಕರೆಯೋಲೆಯನ್ನು ಹಂಚುವ ಕೆಲಸದಲ್ಲಿ ನಿರತರಾದರು.


        ****

ಗಣೇಶ ಶರ್ಮಾ ಮಗನಿಗೆ ಫೋನ್ ಮಾಡಿ "ಜವುಳಿ ಯಾವಾಗ ಬರುತ್ತೀಯಾ"ಎಂದು ಕೇಳಿದರೆ "ಒಂದೆರಡು ದಿನ ರಜೆ ಹಾಕಿ ಬರುತ್ತೇನೆ"ಎಂದ ಕಿಶನ್. ಅದೇ ದಿನಕ್ಕೆ ಮೇದಿನಿ ಚಾಂದಿನಿ ಕೂಡ ತಯಾರಾಗಿದ್ದರು ಸೀರೆ ಸೆಲೆಕ್ಷನ್ ಗೆ..


       ಹೇಳಿದಂತೆ ಕಿಶನ್ ಆಗಮಿಸಿದ ..ಎಲ್ಲರೂ ಜೊತೆಯಾಗಿ ಹೋದರು ಮದುವೆಗೆ ಬೇಕಾದ ಬಟ್ಟೆಗಳನ್ನು ಕೊಂಡುಕೊಳ್ಳಲು .ಮೈತ್ರಿಗೆಂದು ಸಿಂಧೂರ ವರ್ಣದ ಕಾಂಜೀವರಂ ಸೀರೆಯನ್ನು ಖರೀದಿ ಮಾಡಿದರು. ಆಯ್ಕೆಯಲ್ಲಿ ಮೇದಿನಿ ಮತ್ತು ಚಾಂದಿನಿ ಇದ್ದುದರಿಂದ ಮಮತಾ ಸ್ವಲ್ಪ ನಿರಾಳರಾದರು.
ಮಾಂಗಲ್ಯ ಸರ ಕಂಡುಕೊಳ್ಳಲು ಮೈತ್ರಿಯನ್ನು "ಬಾ ಸೆಲೆಕ್ಷನ್ಗೆ " ಎಂದು ಕರೆದಿದ್ದರೂ ಆಕೆ ಫೈನಲ್ ಪರೀಕ್ಷೆ ಇರುವುದರಿಂದ ಸ್ವಲ್ಪ ಉದಾಸೀನ ತೋರಿಸಿದಾಗ... "ಅಡ್ಡಿಯಿಲ್ಲ" ಎಂದು ಕಿಶನ್ ಚಿನ್ನದ ಕಟ್ಟೆಯಿಂದಲೇ ಆಕೆಗೆ ಮಾಂಗಲ್ಯ ಸರವನ್ನು  ಮೊಬೈಲ್ ಮೂಲಕ ತೋರಿಸಿ ಆಯ್ಕೆ ಮಾಡಲು ಹೇಳಿದ ಕಿಶನ್. ಆಕೆ ಹೇಳಿದ ಪ್ಯಾಟರ್ನ್ ಅನ್ನು ಆರು ಪವನ್ ಬಂಗಾರದಲ್ಲಿ  ಮಾಡಿಸಿಕೊಡಲು ಹೇಳಿದರು. ಸೊಸೆಗೆ ಎಂದು ಎರಡು ಅಗಲದ ಚಿನ್ನದ ಬಳೆ, ಪುಟ್ಟ ನೆಕ್ಲೇಸ್ ಖರೀದಿ ಮಾಡಿದರು.


ಮನೆಗೆ ತೆರಳಿದ ಕೂಡಲೇ ಕಿಶನ್ ಮೈತ್ರಿ ಗೆ ಸಂದೇಶ ರವಾನಿಸಿದ

ಬಂಗಾರಿಗೆಂದು ಕೊಂಡೆನಿಂದು ಬಂಗಾರ
ಝರಿಸೀರೆಯು ಹೊತ್ತಿದೆ ವರ್ಣ  ಸಿಂಧೂರ
ಮದುವೆಯ ದಿನಕ್ಕಾಗಿ ನಾನಿಲ್ಲಿ ಕಾತರ
ನೀ ಸಂದೇಶ ಕಳುಹಿಸದಿರೆ ಈ ಹೃದಯ ಭಾರ


ಕಿಶನ್ ನ ಸಂದೇಶವನ್ನು ಓದಿ ಕರೆ ಮಾಡಿದಳು ಮೈತ್ರಿ..
"ಹೇಗಾಯ್ತು ಸಾರಿ ಸೆಲೆಕ್ಷನ್.."

"ಮೊದಲ ಸಲಕ್ಕಿಂತ ಬೆಟರ್.. ಇವತ್ತು ತಂಗಿಯರಿಬ್ಬರು, ಅಮ್ಮ ಇದ್ದುದರಿಂದ ನನಗೇನೂ ಟೆನ್ಷನ್ ಇರಲಿಲ್ಲ.. ಆದರೂ.."

"ಆದರೂ.. ಸೆಲೆಕ್ಷನ್ ಗೆ ತುಂಬಾ ಹೊತ್ತು ಬೇಕಾಯ್ತು ಅಂತಾನಾ..?"

."ಅಲ್ಲ...ನನ್ನ ಮುದ್ಗೊಂಬೆಗೆ ಧಾರೆ ಸೀರೆಯನ್ನು ಫೈನಲ್ ಆಯ್ಕೆ ಮಾಡಿದ್ದು ನಾನೇ.. "

"ಹ್ಹ ಹ್ಹ ಹ್ಹಾ... ಹಾಗೆ .. ಹೌದು ಹೇಗೆ ಸೆಲೆಕ್ಟ್ ಮಾಡಿದ್ದು  ಮೈಗೆ ಹಿಡಿದು ಕನ್ನಡಿಯಲ್ಲಿ ನೋಡ್ಕೊಂಡ್ರಾ..?😃😃"

"ಕಾಲೆಳೆಯೋದರಲ್ಲಿ ನೀನೂ ಭಾರೀ ಜೋರಾಗಿದ್ದೀಯಾ ...ಮುದ್ಗೊಂಬೆ.."


"ಇಲ್ಲಪ್ಪಾ...ನಾನು ಪಾಪದ ಕೂಸು..!! "

ಅದು ಇದು ಮಾತಾಡಿ ಕಾಲೆಳೆದು ಬಾಯ್ ಎಂದರು ಇಬ್ಬರೂ..


      ತಂದೆ-ಮಗ ಇಬ್ಬರೂ ಮದುವೆಯ ವಿಷಯದಲ್ಲಿ ಸಾಕಷ್ಟು ಚರ್ಚಿಸಿದರು .ಆಗ ತಾನೆ ಮನೆಗೆ ಅಚ್ಚುಹಾಕಿಸಿ ತಂದಿದ್ದ ಮದುವೆಯ ಕರೆಯೋಲೆಯ ಮೇಲೆ ಕಣ್ಣಾಡಿಸಿದರು.
ಕಿಶನ್ ನಲ್ಲಿ  ಗಣೇಶ ಶರ್ಮ "ಮಗ.. ನೀನು ಹೇಗೂ ಬಂದಿದ್ದೀಯಾ.. ಈ ಸಲವೇ ಮದುವೆಯ ಕರೆಯೋಲೆಯನ್ನು ಪುರೋಹಿತರಿಗೆ ಕೊಟ್ಟು ಬರೋಣ. ಆಗದೇ..?" ಎಂದು ಪ್ರಶ್ನಿಸಿದರು.." ಆಗಬಹುದು "ಎಂದು ಒಪ್ಪಿದ ಕಿಶನ್ .

          ಮರುದಿನ ಬೆಳಗ್ಗೆ ಬೇಗನೇ ಗಣೇಶ ಶರ್ಮ ಮತ್ತು ಕಿಶನ್ ಮದುವೆಯ ಕರೆಯೋಲೆಯನ್ನು ತೆಗೆದುಕೊಂಡು ಹೊರಟರು. ಮೊದಲು ಗ್ರಾಮ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ನಂತರ ಕುಲಪುರೋಹಿತರಲ್ಲಿಗೆ ತೆರಳಿದರು.ಆ ದಿನ ಎಲ್ಲಿಯೂ ಕಾರ್ಯಕ್ರಮ ಇಲ್ಲದಿದ್ದುದರಿಂದ ಪುರೋಹಿತ ಶಂಕರನಾರಾಯಣ ಅವರು ಮನೆಯಲ್ಲಿಯೇ ಇದ್ದರು .ಗಣೇಶ ಶರ್ಮ ಮತ್ತು ಕಿಶನ್ ವಾಹನ ನಿಲ್ಲಿಸಿ ಕೈಕಾಲು ತೊಳೆದು ಪುರೋಹಿತರ ಮನೆಯ ಚಾವಡಿಗೆ ಬರುತ್ತಿದ್ದಂತೆ ಇವರನ್ನು ಗಂಭೀರವಾಗಿ ದಿಟ್ಟಿಸಿದರು ಪುರೋಹಿತರು.


          ಮನೆಯೊಡತಿ ಬಾಯಾರಿಕೆ ತಂದುಕೊಟ್ಟರು. ಬಾಯಾರಿಕೆ ಕುಡಿದು ಗಣೇಶ್ ಶರ್ಮ ಮಗನ ಮದುವೆಯ ಕರೆಯೋಲೆಯನ್ನು ನೀಡಿದರು.ಎಲ್ಲಾ ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸಿ ಕೊಡಬೇಕೆಂದು ಕೋರಿದರು. ಬಹಳ ಗಂಭೀರವಾಗಿ ಮದುವೆಯ ಕರೆಯೋಲೆಯನ್ನು ವಿಮರ್ಶಾತ್ಮಕವಾಗಿ ಓದಿದ ಶಂಕರನಾರಾಯಣ ಪುರೋಹಿತರು ಕಿಶನ್ ನನ್ನ ಕಡೆಗೊಮ್ಮೆ ಕಣ್ಣೊಡೆದು ನೋಡಿದರು. ಆ ದೃಷ್ಟಿ ಹಿಂದಿನ ಅರ್ಥ ಕಿಶನ್ ಗೆ ಹೊಳೆಯಲಿಲ್ಲ.

       ಒಂದೆರಡು ನಿಮಿಷ ಶಾಂತವಾಗಿ ಸುಮ್ಮನಿದ್ದ ಪುರೋಹಿತರು ನಂತರ
"ನನಗೆ ಈ ಮದುವೆ ಮಾಡಿಸಲು ಸಾಧ್ಯವಿಲ್ಲ .ಇಂತಹ ಲಜ್ಜೆಗೆಟ್ಟ ಯುವಜೋಡಿಯ ವಿವಾಹಕ್ಕೆ ನನ್ನಂತಹ ಸಂಪ್ರದಾಯಬದ್ಧ  ಪುರೋಹಿತರು ಬೇಕಾಗಿಲ್ಲ. ಈ  ವಿವಾಹವನ್ನೂ ಕೂಡಾ ಅವರೇ ಮಾಡಿಕೊಳ್ಳಲಿ .."ಎಂದು ಒಗಟಾಗಿ ನೋಡಿದರು. ಗಣೇಶ ಶರ್ಮ ಪುರೋಹಿತರಲ್ಲಿ "ನಿಮ್ಮ ಮಾತಿನ ಅರ್ಥ ನನಗೆ ತಿಳಿಯಲಿಲ್ಲ" ಎಂದರು .
"ಹೌದು ನಿನಗೆ ತಿಳಿಯದಿದ್ದದ್ದಕ್ಕೆ ಹೀಗೆಲ್ಲ ಆಗಿರೋದು.." ಎಂದರು.
 ಗಣೇಶ ಶರ್ಮಾ ಮುಂದುವರಿಸುತ್ತಾ "ಪುರೋಹಿತರೇ... ನಿಮ್ಮ ಮನಸ್ಸಿನಲ್ಲಿರುವುದನ್ನು ವಿವರವಾಗಿ ತಿಳಿಸಿ.. ಒಗಟಿನಂತೆ ತಿಳಿಸಿದರೆ ನನಗೆ ಅರ್ಥವಾಗುವುದಿಲ್ಲ.. ಸುಮ್ಮನೆ ಸಮಯ
 ವ್ಯರ್ಥ..ತಲೆಯೂ ಹಾಳು.." ಎಂದರು.

"ಎಲ್ಲಾ ನಿನ್ನ ಮಗನನ್ನು ಕೇಳು .ಎಲ್ಲಾ  ಅವನೇ ಹೇಳುವನು..." ಎಂದಾಗ ಕಿಶನ್ ಕಕ್ಕಾಬಿಕ್ಕಿಯಾದ.

ಕಿಶನ್:-"ಪುರೋಹಿತರೇ ಅದೇನು ಅಂತ ಸರಿಯಾಗಿ ಹೇಳಬಾರದೇ..?"

ಪುರೋಹಿತರು:-"ನಾನು ಇಂತಹ ಮದುವೆಯನ್ನು ಮಾಡಿಸುವುದಿಲ್ಲ. ಸಂಪ್ರದಾಯಬದ್ಧವಾಗಿ ಹಿರಿಯರು  ನಿರ್ಧರಿಸಿದ ಮದುವೆಯನ್ನು ಮಾತ್ರ ನಾನು ಮಾಡಿಸುವುದು. ಆಧುನಿಕ ಸಂಸ್ಕೃತಿಯನ್ನು ಅಪ್ಪಿಕೊಂಡು ನೈತಿಕತೆಯನ್ನು ಮಾರಿಕೊಂಡ ಯುವಜೋಡಿಯ ಮದುವೆ ನನ್ನಿಂದ ಮಾಡಿಸಲು ಸಾಧ್ಯವಿಲ್ಲ... ಅರ್ಥಮಾಡಿಕೊಳ್ಳಿ."

ಗಣೇಶ ಶರ್ಮಾ:- ಈ ವಿವಾಹವು ಸಂಪ್ರದಾಯಬದ್ಧವಾಗಿ ನಾವು ಎರಡು ಕಡೆಯ ಹಿರಿಯರು ಸೇರಿ ನಿರ್ಧರಿಸುವಂತಹದ್ದು. ಇದರಲ್ಲಿ ಎರಡು ಮಾತಿಲ್ಲ.

ಪುರೋಹಿತರು:- ಎಲ್ಲವೂ ಆದ ಮೇಲೆ ಎರಡು ಕಡೆಯವರಿಗೂ ಅನಿವಾರ್ಯತೆ ತಾನೇ..?

ಕಿಶನ್:-ಎಲ್ಲವೂ ಆದ ಮೇಲೆ ಅಂದರೇನು ..?ಅಂತಹ ಅನಿವಾರ್ಯತೆಯ ಪರಿಸ್ಥಿತಿಯನ್ನು ನಾವು ಸೃಷ್ಟಿಸಿಕೊಂಡಿಲ್ಲ. ನಿಮಗೆ ಏನಾದರೂ ಅಂತಹ ಗೊಂದಲವಿದ್ದರೆ ನೇರವಾಗಿ ಹೇಳಿ ಪರಿಹರಿಸಿಕೊಳ್ಳಬಹುದು.. ನಮಗೂ ತಿಳಿಯಲಿ ನಿಮಗೇನು ಅಸಮಾಧಾನವೆಂದು.

ಪುರೋಹಿತರು:- ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳದೆ ಇರುವವರಿಗೆ, ತಮ್ಮ ಹೆಸರನ್ನು ಕೆಡಿಸಿಕೊಂಡವರಿಗೆ ನಾನು ಪೌರೋಹಿತ್ಯ ಮಾಡುವುದಿಲ್ಲ.. ಸುಮ್ಮನೆ ಮಾತು ಬೇಡ..

ಕಿಶನ್:-ನಾನು ಬ್ರಹ್ಮಚರ್ಯವನ್ನು ಪಾಲಿಸಿಕೊಂಡು ಬಂದವನು.ನೀವು ಹೇಳಿದಂತೆ ಅಂತಹದ್ದು ನಮ್ಮ ಮಧ್ಯೆ ಏನೂ ನಡೆದಿಲ್ಲ.. ಆದರೂ ನಿಮಗೆ ಏನಾದರೂ ಅಂತ ಸುದ್ದಿ ಬಂದಿದ್ದರೆ ಈಗ ಅದನ್ನು ತಿಳಿಸಬೇಕು.

ಗಣೇಶ ಶರ್ಮ:-ನನ್ನ ಮಗನ ಬಗ್ಗೆ ಇಂತಹ ಆರೋಪ ಕೇಳಿ ನನಗೂ ಖೇದವಾಗಿದೆ. ದಯವಿಟ್ಟು ನಿಮಗೆ ಯಾರು ಅಂತ ಸುದ್ದಿ ತಲುಪಿಸಿದ್ದಾರೆ ಎಂದು ಹೇಳುವಿರಾ..

ಪುರೋಹಿತರು ಒಂದು ಕ್ಷಣ ಮೌನವಾದರು.

ಕಿಶನ್:-ಇಷ್ಟು ಆಪಾದನೆ ಹೊತ್ತ ಮೇಲೆ ನಾನು ಇಲ್ಲಿಗೆ ನಿಲ್ಲಿಸುವುದಿಲ್ಲ.. ಖಂಡಿತ ಆ ರೀತಿ ತಮಗೆ ಸುದ್ದಿ ಹಬ್ಬಿಸಿದವರು ಯಾರು ತಿಳಿಸಲೇ ಬೇಕು ..ಅನಾವಶ್ಯಕವಾಗಿ ಚಾರಿತ್ರ್ಯವಧೆ ಮಾಡುವುದೂ ಅಪರಾಧ.. ನಾನು ಯಾವತ್ತೂ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಕಂಡವನಲ್ಲ. ಸ್ತ್ರೀಯರನ್ನು ಗೌರವಿಸುವ ,ಹಿರಿಯರನ್ನು ಶಿರಬಾಗಿ ನಮಿಸುವ ಸಂಸ್ಕಾರವಂತ.

        ಪುರೋಹಿತರು ಅವರ ಮಾತುಗಳನ್ನು ಕೇಳಿ ಆಲೋಚಿಸತೊಡಗಿದರು.ಬಹಳ ಸ್ಪಷ್ಟವಾಗಿ ಇಬ್ಬರೂ ನಿರಾಕರಿಸುತ್ತಿದ್ದಾರೆ. ಅಲ್ಲದೆ ನಾನು ಯಾರು ಹೇಳಿದ್ದಾರೆ ಎಂದು ಹೇಳಿದರೆ ....ಹೇಳಿದವರ ಮೇಲೆ ಅಪವಾದ ಹೊರಿಸಿದಂತೆ. ಸುಮ್ಮನಿದ್ದುಬಿಡುವುದೇ ಲೇಸು. ಅಲ್ಲದೆ ಆ ದಿನ ನನಗೆ ಯಾವುದೇ ಕಾರ್ಯಕ್ರಮಗಳಿಲ್ಲ.ಶಾಸ್ತ್ರಿಗಳ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಎಂದರೆ ಅದು ಒಂದು ಗೌರವವೇ ..ಸಾಕಷ್ಟು ದಕ್ಷಿಣೆಯನ್ನು ನೀಡುವ ಧಾರಾಳಿ ಶಾಸ್ತ್ರಿಗಳು.. ಅಲ್ಲದೆ ಇವನು ಕೂಡ ಇನ್ಫೋಸಿಸ್ನ ಸಾಫ್ಟ್ವೇರ್ ಇಂಜಿನಿಯರ್ ..ಸಾಕಷ್ಟು ದುಡ್ಡು ಇರಬಹುದು. ಎದುರು ಹಾಕಿಕೊಳ್ಳುವುದಕ್ಕಿಂತ ಒಪ್ಪುವುದೇ ಲೇಸು...


ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
22-04-2020.

ಮುಂದಿನ ಭಾಗ.. ಶುಕ್ರವಾರ..








Monday, 20 April 2020

ಮಾವಿನ ಹಣ್ಣಿನ ರಸಾಯನ 😋😋😋😋😋😋😋😋

ಮಾವಿನ ಹಣ್ಣಿನ ರಸಾಯನ



        ಬೇಸಗೆ ಅಂದರೆ ಹಣ್ಣುಗಳ ಸುಗ್ಗಿಕಾಲ...ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಯಥೇಚ್ಛವಾಗಿ ದೊರಕುವ ಸಮಯ.ಒಮ್ಮೆಯಾದರೂ ಮಾವಿನ ಹಣ್ಣಿನ ರಸಾಯನ ಮಾಡದಿದ್ದರೆ ಹೇಗೆ..? ಅಲ್ವಾ.. ಆಯಾಯ ಋತುವಿನಲ್ಲಿ ದೊರಕುವ ಆಹಾರ ಪದಾರ್ಥಗಳನ್ನು ,ಹಣ್ಣುಹಂಪಲುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
ಮಾವಿನ ಹಣ್ಣಿನ ರಸಾಯನ ಬಹಳ ಸರಳವಾಗಿ ಮಾಡಬಹುದು.

ಬೇಕಾಗುವ ಪದಾರ್ಥಗಳು..

*ಎರಡು ಕಪ್ ಮಾವಿನ ಹಣ್ಣಿನ ಚಿಕ್ಕ ಹೋಳುಗಳು
*ಒಂದು ಕಪ್ ಬೆಲ್ಲ
*ತೆಂಗಿನಕಾಯಿ ತುರಿ ಎರಡು ಕಪ್
*ಏಲಕ್ಕಿ
*ಎಳ್ಳು (ಬೇಕಾದಲ್ಲಿ)

ಮಾಡುವ ವಿಧಾನ...

       ಮಾವಿನ ಹಣ್ಣಿನ ತುಂಡಿಗೆ ಬೆಲ್ಲ ಬೆರೆಸಿಡಿ.ಮಿಕ್ಸಿ ಗೆ ತೆಂಗಿನ ತುರಿ,ಏಲಕ್ಕಿ ಹಾಕಿ ನೀರು ಸ್ವಲ್ಪ ಸೇರಿಸಿ ನುಣ್ಣಗೆ ರುಬ್ಬಿ.ಬಟ್ಟೆಯಲ್ಲಿ ಸೋಸಿ.ದಪ್ಪ ತೆಂಗಿನಕಾಯಿ ಹಾಲು ತೆಗೆದಿಡಿ.ಮತ್ತೊಮ್ಮೆ ನೀರು ಬೆರೆಸಿ ಹಾಲು ಹಿಂಡಿ.ದಪ್ಪ ಹಾಲನ್ನು ಸೇರಿಸಿ.ರಸಾಯನದ ಪಾಕದ ಅಂದಾಜು ನೋಡಿ ಬೇಕಾದರೆ ಎರಡನೇ ಸಲ ಹಿಂಡಿದ ಕಾಯಿಹಾಲು ಹಾಕಿ . ಎಳ್ಳನ್ನು ಪಟಪಟ ಸಿಡಿಸಿ ಮೇಲೆ ಹಾಕಿ.ಕೆಲವರು ಇದನ್ನು ಇಷ್ಟಪಡಲ್ಲ.ಹಾಕದಿದ್ದರೂ ಆಗುತ್ತದೆ.ನಾನು ಹಾಕಿಲ್ಲ.ಬೆಲ್ಲ ಕರಗಿದಾಗ ಹಾಗೆಯೇ  ತಿನ್ನಲು ಕೊಡಬಹುದು.ಅಥವಾ ಫ್ರಿಡ್ಜ್ ನಲ್ಲಿ ಇಟ್ಟು ತಂಪಾದ ನಂತರವೂ ಸರ್ವ್ ಮಾಡಬಹುದು..


      ಕಲರ್ ಫುಲ್ ರಸಾಯನ ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ.ಇದನ್ನು ತೆಳ್ಳವು (ನೀರ್ದೋಸೆ), ಉದ್ದಿನ ದೋಸೆ , ಇಡ್ಲಿಯ ಜೊತೆಗೆ ಕೂಡಾ ತಿನ್ನಬಹುದು.


✍️... ಅನಿತಾ ಜಿ.ಕೆ.ಭಟ್.
21-04-2020.

Sunday, 19 April 2020

ಜೀವನ ಮೈತ್ರಿ ಭಾಗ ೬೫(65)



ಜೀವನ ಮೈತ್ರಿ ಭಾಗ ೬೫

            ಕೇಶವ ತನ್ನ ಆಫೀಸಿನಲ್ಲಿದ್ದ ಸಹೋದ್ಯೋಗಿಗಳನ್ನು ಬಹಳ ಬೇಗನೆ ಪರಿಚಯ ಮಾಡಿಕೊಂಡನು.ಒಂದು ತಿಂಗಳು ಆಫೀಸಿನಲ್ಲಿ ಕೆಲಸ ಮಾಡಿ ಅನುಭವ ಆದನಂತರ ಅರ್ಧ ದಿನ    ಫೀಲ್ಡ್ ವರ್ಕ್ ಕೊಡಲಾಗುವುದು ಎಂದು ಟೀಮ್ ಲೀಡರ್ ಹೇಳಿದರು. ಅವನ ಹತ್ತಿರವೇ ಕುಳಿತಿದ್ದ ಧನಂಜಯ ಕೆಲಸ ಗೊತ್ತಿಲ್ಲದಿದ್ದರೆ ಹೇಳಿಕೊಡುತ್ತಿದ್ದ. ಸಂಜೆ 6:00 ವರೆಗೂ ದುಡಿದು ಬಸ್ ಹತ್ತಿ ಮಾವನ ಮನೆಗೆ ವಾಪಸಾದ.

           ಮನೆಗೆ ಮರಳುವಾಗ ಸಮಯ 7.30 ಆಗಿತ್ತು .ಸೌಜನ್ಯ ಪತಿಯ ದಾರಿ ಕಾಯುತ್ತಿದ್ದಳು. ಪತಿಯನ್ನು ಬಿಟ್ಟಿರುವುದು  ಆಕೆಗೆ ಎಂದು ಬಹಳ ಪ್ರಯಾಸದ ಕೆಲಸವಾಗಿತ್ತು . ಕ್ಷಣಕ್ಷಣವೂ ಕೇಶವನ ಮುಖವೇ ಕಣ್ಣಮುಂದೆ ಬರುತ್ತಿತ್ತು. ಕೇಶವ ಬಂದಾಗಲೇ ಅವನಿಗೆ ತಾಗಿ ನಿಂತ ಮೆಲ್ಲನೆ ಬೆನ್ನನ್ನು ಸವರಿದಳು. ಕೇಶವನು ಅಷ್ಟೇ.. ತನ್ನ ಕೈಗಳನ್ನು ಮಡದಿಯ ಹೆಗಲ ಮೇಲಿಟ್ಟು ಕಣ್ಣಲ್ಲೇ ಮುತ್ತಿನ ಮಳೆಗರೆದ..

"ರಾಜಾ ಹೇಗಾಯಿತು ಆಫೀಸ್ ಕೆಲಸ..?"

"ಅಂದಾಜು ಮಾಡಿದ್ದಕ್ಕಿಂತ ಖುಷಿಯಾಗಿ ಇತ್ತು. ನನ್ನ ಗೆಳೆಯ ಜೊತೆಗಿರುವುದರಿಂದ ಕಷ್ಟವಾಗಿಲ್ಲ ನನಗೆ ಹೊಸ ಪರಿಸರ ಇಷ್ಟವಾಯಿತು. ಇಷ್ಟವಾದರೆ ಯಾವ ಕೆಲಸವೂ ಕಠಿಣವಲ್ಲ."

"ಆಗಲಿ. ಒಂದು ಉದ್ಯೋಗವಾದರೂ ದೊರೆಯಿತಲ್ಲ. ಅಷ್ಟಾದರೂ ಸ್ವಂತ ಸಂಪಾದನೆ ಇದೆಯೆಂದು ತೃಪ್ತಿ.."

" ನಾವೇ ದುಡಿದ ಹಣ ನಮ್ಮ ಕೈಯಲ್ಲಿದ್ದರೆ ಅದರಲ್ಲಿ ಒಂದು ಸಂತೃಪ್ತಿಯೇ ಬೇರೆ. ನಾನಂತೂ ಪರರ ದುಡ್ಡಿಗಾಗಿ ಕೈಚಾಚಲು ಇಷ್ಟಪಡುವವನಲ್ಲ."


"ರಾಜ .. ನನ್ನ ಅಪ್ಪ-ಅಮ್ಮ ನನ್ನ ಪರರು ಎಂದು ಭಾವಿಸಬೇಡಿ. ಅವರಿಗೆ ನೀವು ಮಗನಂತೆ."

"ಅತ್ತೆ-ಮಾವ ಪರರು ಎಂದಲ್ಲ. ಆದರೂ ನನಗೆ ನನ್ನದೇ ಆದ ಸ್ವಾಭಿಮಾನ ಅನ್ನೋದು ಇದೆ."

"ಸ್ವಾಭಿಮಾನ ಒಳ್ಳೆಯದೇ..ಹಾಗೆಂದು ಅತಿಯಾದಲ್ಲಿ ಒಳ್ಳೆಯದಲ್ಲ. ಅದು ಅಹಂ ಅನ್ನು ತರುತ್ತದೆ . ಹೊಂದಾಣಿಕೆ ಮಾಡಿಕೊಳ್ಳಲು  ಕಷ್ಟವಾಗುತ್ತದೆ."


"ನಮ್ಮ ಕಾಲ ಮೇಲೆ ನಾನೇ ನಿಲ್ಲಬೇಕು ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಹಿರಿಯರಿಂದ ಬಂದ ದುಡ್ಡು ,ಅಂತಸ್ತು ಯಾವತ್ತೂ ಶಾಶ್ವತವಲ್ಲ. ನಮ್ಮ ಜೀವನವನ್ನು ನಾವೇ ರೂಪಿಸಿಕೊಂಡಾಗ ಅದರಲ್ಲಿ ಒಂದು ಮಜವೇ ಬೇರೆ."


"ಹಿರಿಯರಿಂದ ಬಂದ್ದು  ಜೊತೆಜೊತೆಗೆ ಇರಲಿ. ನಮ್ಮದು ಕೂಡ ಅದಕ್ಕೆ ಸೇರಲಿ. ಹಿರಿಯರು ದುಡಿದು ಕೂಡಿಡುವುದು ಮಕ್ಕಳಿಗೆ ಮೊಮ್ಮಕ್ಕಳಿಗೆ ಅಂತ ತಾನೇ...?"


"ಅಲ್ಲವೆಂದು ನಾನು ಹೇಳುತ್ತಿಲ್ಲ ಸೌಜನ್ಯ. ಆದರೆ ಲಕ್ಷ್ಮಿ ಯಾವತ್ತು ಚಂಚಲೆ. ಅಂದರೆ ದುಡ್ಡು ನಿಂತಲ್ಲಿ ನಿಲ್ಲುವುದಿಲ್ಲ.ಅದು ಚಲಿಸುತ್ತಲೇ ಇರುತ್ತದೆ. ಆದರೆ ಸರಸ್ವತಿ ಸ್ಥಿರೆ.. ಅವಳು ಆಗಾಗ ಸ್ಥಾನಪಲ್ಲಟ ಮಾಡುವವಳಲ್ಲ.
 ಹಿರಿಯರು ನಮಗೆ ಕಲಿಸಿದ ವಿದ್ಯೆ ,ಬುದ್ಧಿ ನಮ್ಮನ್ನು ಕಠಿಣ ಸಂದರ್ಭದಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ. ಇದನ್ನು ಯಾರಿಂದಲೂ ಕೊಳ್ಳೆ ಹೊಡೆಯುವುದಕ್ಕೆ ,ನನ್ನ ಆಸ್ತಿ..ನನಗೆ ಪಾಲು ಕೊಡು ಎನ್ನುವುದಕ್ಕೆ  ಸಾಧ್ಯವೇ ಇಲ್ಲ. ನಾನು ಕಲಿತ ವಿದ್ಯೆ ನನ್ನ ಕುಟುಂಬವನ್ನು ಮೂರು ಹೊತ್ತು ಹೊಟ್ಟೆ ತುಂಬ ಉಣಿಸಲು ಸಾಕು."

      ಹೀಗಂದ ಗಂಡನನ್ನು "ಹೋಗಿ ಪ್ರೆಶ್ ಆಗಿ ಬನ್ನಿ.. ತಿಂಡಿ ಮಾಡಿಕೊಡುತ್ತೇನೆ " ಎಂದಳು. ಅಮೇಲೆ ಅವಳ ಮನಸ್ಸು ಏನೆಲ್ಲ ಯೋಚಿಸುತ್ತಿತ್ತು. ನಾನು ಅಂದಾಜು ಮಾಡಿದ್ದೇನು..? .ಶ್ರೀಮಂತ ಮನೆತನದ ಯುವಕ ಹಳ್ಳಿಯಾದರೂ ಚೆನ್ನಾಗಿ ಜೀವಿಸಬಹುದೆಂದು.. ಆದರೆ ಹಣೆಯಲ್ಲಿ ಬರೆದಿಲ್ಲವಲ್ಲ ...ಏನು ಮಾಡುವುದು. ಗಂಡ ಸ್ವಾಭಿಮಾನಿ.  ತಂದೆಯವರ ಬಳಿ ಕೂಡ ಕೈಯೊಡ್ಡುವುದಕ್ಕೆ ಇಷ್ಟಪಡಲಾರರು ಎಂದು ಕಾಣುತ್ತಿದೆ . ಒಂದು ದೃಷ್ಟಿಯಿಂದ ಒಳ್ಳೆಯದೇ.. ಆದರೂ ಇನ್ನೊಂದು ದೃಷ್ಟಿಯಿಂದ ಯೋಚಿಸಿದರೆ ಬೇಸರವೂ ಮೂಡುತ್ತಿದೆ.ಎಷ್ಟು ಶ್ರೀಮಂತಿಕೆಯಲ್ಲಿ ಅಪ್ಪ-ಅಮ್ಮನ ಪ್ರೀತಿಯಲ್ಲಿ ಬೆಳೆದವಳಿಗೆ ಗಂಡನ ಕೆಲವೇ ಕೆಲವು ಸಾವಿರ ರೂಪಾಯಿಗಳಲ್ಲಿ ಬದುಕುವ ಅನಿವಾರ್ಯತೆ. ನಾನು ಕೆಲಸಕ್ಕೆ ಹೋದರೆ ಹೇಗೆ....?ಎಂಬ ಯೋಚನೆ ಮನದಲ್ಲಿ ಮೂಡಿತು.


        ಗಂಡನಿಗೆ ತಿಂಡಿ ಬಡಿಸಿ ತಾನೂ ತಿಂದಾಗ ಅಪ್ಪ-ಅಮ್ಮ ಆಫೀಸಿನಿಂದ ಬಂದಿದ್ದರು. ಬರುತ್ತಲೇ ಅಳಿಯನನ್ನು ವಿಚಾರಿಸಿಕೊಂಡರು. ಅಪ್ಪ-ಅಮ್ಮನಿಗೂ ತಿಂಡಿ ಬಡಿಸಿದಳು ಸೌಜನ್ಯ. "ನೀನು ಕಷ್ಟ ತೆಗೆದುಕೊಳ್ಳುವುದು ಬೇಡ.. ನಾವೇ ಮಾಡುತ್ತೇವೆ ಹಾಕಿಕೊಳ್ಳುತ್ತೇವೆ." ಎಂದರು ಅಮ್ಮ. ಎಷ್ಟಾದರೂ ತಾಯಿ ಹೃದಯ ತಾನೆ..?


    ಸೌಜನ್ಯ ಕೇಶವ ರೂಮಿನಲ್ಲಿದ್ದಾನೆಂದು  ರೂಮಿಗೆ ತೆರಳಿದಳು. ಸಣ್ಣದನಿಯಲ್ಲಿ ಹಾಡೊಂದನ್ನು ಗುನುಗುತ್ತಿದ್ದ ಕೇಶವ ಮಡದಿಯ ಹತ್ತಿರ ಮೆಲ್ಲನೆ ಸರಿದು "ಏನು ಮಹಾರಾಣಿಯವರು ಬೇಗನೆ ಚಿತ್ತೈಸಿದ್ದು..?"ಎಂದ.

"ಏನಿಲ್ಲ ..ತಮ್ಮೊಡನೆ ಹರಟೋಣ ಎಂದು.."

ಬೆಡ್ ಮೇಲೆ ಕುಳಿತ ಸೌಜನ್ಯಳ ತೊಡೆಯಲ್ಲಿ ತಲೆಯಿಟ್ಟು ತುಂಟತನದಿಂದ ನಕ್ಕ ಕೇಶವ. ಅವಳ ಕೈಗಳು ಅವನ ಕೂದಲಿನ ಜತೆಗೆ ಸರಸವಾಡಿದವು. ವಾತ್ಸಲ್ಯದ ಹೊಳೆ ಹರಿಸಿದಳು ಪತ್ನಿ ಸೌಜನ್ಯ..ಅವಳ ಸನಿಹ ಕೇಶವನಿಗೆ ದಿನದ ಆಯಾಸವನ್ನು  ಮರೆಸಿತ್ತು. ಸೌಜನ್ಯ "ನನ್ನ ಕೈಗಳು ಘಮ್ಮೆನ್ನುತ್ತಿವೆ.. ಅದೆಷ್ಟು  ರುಚಿಕರವಾಗಿ ಅಡುಗೆ ಮಾಡುತ್ತೀಯಾ.."

"ಅದರಲ್ಲಿ ಹೊಗಳುವುದು ಏನಿದೆ..? ಮಾಡಬೇಕಾದದ್ದೇ ತಾನೇ..?"

"ಅಂತೂ ನಾನು ಬಹಳ ಅದೃಷ್ಟವಂತ. ಅಡುಗೆ ನೇ ಬರಲ್ಲ ನಿಂಗೆ ಅಂತ ಅಂದುಕೊಂಡಿದ್ದೆ.."

"ರಾಜಾ.. ಅದೆಲ್ಲ ಈಗ ಬೇಕಾ .. ರುಚಿಯಾಗಿ ಅಡುಗೆ ಮಾಡಿಕೊಡುತ್ತೇನೆ ಅಷ್ಟು ಸಾಲಲ್ಲವಾ.."

" ಸಾಕು ..ಆದರೂ ನನಗೆ  ಕುತೂಹಲ.. ನನ್ನ ರಾಣಿ ಮದುವೆಗೆ ಮೊದಲು ಅಡುಗೆ ಏನೂ ಬರಲ್ಲ ಅಂದದ್ದೇಕೆ..."

"(ಕೇಶವನ ಗಲ್ಲ ಹಿಂಡುತ್ತಾ) ಸುಮ್ಮನೆ ಅಂದೆ.ಅಡುಗೆ ಮಾಡಲು ಬರುತ್ತದೆ ಅಂದರೆ ಅಷ್ಟು ದೊಡ್ಡ ಮನೆಯಲ್ಲಿ ಆಳುಕಾಳುಗಳಿಗೆ ಸಮೇತ ಅಡುಗೆ ಮಾಡಿ ಹಾಕಬೇಕಾದರೆ ತುಂಬಾ ಕಷ್ಟವಿದೆ.. ಇಲ್ಲಿ ಪಟ್ಟಣದಲ್ಲಿ ಹದಿನೈದು ಚಪಾತಿ ಮಾಡಬೇಕಾದರೆ ..ಹಳ್ಳಿಯಲ್ಲಾದರೆ 50 ಮಾಡಬೇಕಾದೀತು.ಮದುವೆಯಾದ ಆರಂಭದಲ್ಲಿಯೇ ನನ್ನ ಮೇಲೆ ಜವಾಬ್ದಾರಿ ಎಲ್ಲ  ಹೊರಿಸಿ ಬಿಟ್ಟರೆ ...ಎಂಬ ಭಯದಿಂದ ಆ ರೀತಿ ಹೇಳಿದೆ.. ಪ್ಲೀಸ್ ರಾಜ ಏನೋ ಅಂದುಕೊಳ್ಳಬೇಡಿ.." ಎನ್ನುತ್ತಾ ಬೆರಳುಗಳನ್ನು ಎದೆಯ ಮೇಲೆ ಇರಿಸಿದಳು. ಕೇಶವ ಕರಗಿಹೋದ.


       ಹೆಣ್ಣುಮಕ್ಕಳಿಗೆ ಅದೆಷ್ಟು ಚಾಣಾಕ್ಷತೆ.ನಾವು ಗಂಡಸರು ಮದುವೆ ಅಂದರೆ ಮಡದಿ ಪಕ್ಕಕ್ಕೆ ಬರುವಲ್ಲಿವರೆಗೆ ಮಾತ್ರ ಯೋಚನೆ ಮಾಡೋದು..ಅದರಿಂದ ಮುಂದಿನ ವಿಷಯಕ್ಕೆ ಅಷ್ಟಾಗಿ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ.ಇವರು ಅಬ್ಬಾ...!!ಭಯಂಕರ ಮಂಡೆ..!!
 ದುರಾಲೋಚನೆ -- ದೂರಾಲೋಚನೆ  ..ತನ್ನ ಮೇಲೆ ಯಾರೂ  ಹೆಚ್ಚು ಜವಾಬ್ದಾರಿ ಹೊರಿಸದಂತೆ ಮೊದಲೇ ಬೇಲಿ ಹಾಕಿಕೊಳ್ಳುತ್ತಾರೆ...ನಾಟಕ ಮಾಡುವುದರಲ್ಲಿ ಎಕ್ಸ್ಪರ್ಟ್..ಯಾವ ಮಾತನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂದೇ ತಿಳಿಯದು.ಪಕ್ಕಾ ಪ್ಲಾನ್ಡ್ ಬಿಹೇವಿಯರ್..!!


          ಮಾತನಾಡದೆ ಸುಮ್ಮನಿದ್ದ ಕೇಶವನಲ್ಲಿ ಉದ್ಯೋಗಕ್ಕೆ ತೆರಳಬೇಕೆಂಬ ತನ್ನಾಸೆಯನ್ನು ಅರುಹಿದಳು.ಕೇಶವನ ಮೌನವೇ ಉತ್ತರವಾಗಿತ್ತು.ತಾನೊಂದು ಉದ್ಯೋಗ ಹಿಡಿದು ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು.ಮಡದಿ ಸೌಜನ್ಯ ಮನೆಯಲ್ಲಿ ಇದ್ದು ತನ್ನ ಇಷ್ಟಾರ್ಥಗಳನ್ನು ಪೂರೈಸುತ್ತಾ ಮನೆಯನ್ನು ನಿಭಾಯಿಸಬೇಕು ಎಂದು ಅವನ ಇಚ್ಛೆಯಾಗಿತ್ತು.ಹಾಗೆಂದು ಖಡಕ್ಕಾಗಿ ಸೌಜನ್ಯ ಳಲ್ಲಿ ಹೇಳುವ ಮನಸ್ಸಾಗಲಿಲ್ಲ.ಸಮಾಧಾನದಲ್ಲಿ ತಿಳಿಸಿ ಹೇಳೋಣ.ಎಂದು  ಯೋಚಿಸುತ್ತಾ ಕಣ್ಮುಚ್ಚಿಕೊಂಡ ಪತಿಯನ್ನು ಕಂಡು ಸೌಜನ್ಯಾ ಳಿಗೆ ನಿರಾಸೆಯಾಯಿತು.



            *********


           ಭಾಸ್ಕರ ಶಾಸ್ತ್ರಿಗಳು ಮತ್ತು ಮಂಗಳಮ್ಮ ಮಗಳ ಮದುವೆ ಕಾಗದವನ್ನು ಕರೆಯೋಲೆಯನ್ನು ಕುಲ ಪುರೋಹಿತರ ಮನೆಗೆ ಕೊಡಲು ಹೊರಟರು.ಶ್ಯಾಮ ಶಾಸ್ತ್ರಿಗಳು ಅಲ್ಲೇ ಹತ್ತಿರ ಇರುವ ನೆಂಟರ ಹೆಸರುಗಳನ್ನು ಮಗನಿಗೆ ನೆನಪಿಸಿದರು.  ಆಗ ಬಂದ ಮಹಾಲಕ್ಷ್ಮಿ ಅಮ್ಮ "ಶಶಿಯ ಮನೆ ಇರುವುದು ಆ ಕಡೆಯೇ.ಅಲ್ಲಿಗೆ ಹೋಗಿ ಮದುವೆ ಕರೆಯೋಲೆ, ಸೀರೆ, ವಸ್ತ್ರಗಳನ್ನು ಕೊಟ್ಟು ಬನ್ನಿ ಎಂದರು. ಹಾಗೆಯೇ ಶಶಿ ಹಾಗೂ ಅಳಿಯಂದಿರನ್ನು ಪ್ರೀತಿಯಿಂದ ಆಹ್ವಾನಿಸುವುದನ್ನು ಮರೆಯಬೇಡಿ.. " ಎಂದ ಎಂದ ತಾಯಿಯ ಮಾತನ್ನು ಭಾಸ್ಕರ ಶಾಸ್ತ್ರಿಗಳು ಒಪ್ಪಿದರು.


      ಬೆಳಿಗ್ಗೆ ಮನೆಯಿಂದ ಒಮ್ಮೆಯ ಕೆಲಸಗಳನ್ನೆಲ್ಲಾ ಮಾಡಿ ಹೊರಟರು. ಹೊರಡುವಾಗಲೇ ಗಂಟೆ ಒಂಭತ್ತಾಗಿತ್ತು. ಮಂಗಳಾ  ಕರೆಯೋಲೆ ಸೀರೆ ವಸ್ತ್ರಗಳನ್ನು ನೆನಪುಮಾಡಿ ತೆಗೆದುಕೊಂಡಿದ್ದರು.ಮನೆಯಿಂದ ಹೊರಟವರು ಪೇಟೆಯಲ್ಲಿ ಅಗತ್ಯದ ಕೆಲಸಗಳನ್ನು ಮುಗಿಸಿಕೊಂಡು ಪುರೋಹಿತರ ಮನೆಗೆ ತಲುಪುವಾಗ ಸಮಯ ಹನ್ನೊಂದೂವರೆಯಾಗಿತ್ತು.ಪುರೋಹಿತರಾದ ಶಂಭಟ್ಟರು ಮಧ್ಯಾಹ್ನದ ಪೂಜೆಗೆ ಕುಳಿತಿದ್ದರು.ಪುರೋಹಿತರ ಪತ್ನಿ "ಪೂಜೆ ಆಗದೆ ಅವರು ಮಾತನಾಡಲಾರರು.ನೀವು ಕಾಯಬೇಕು "ಎಂದು ಹೇಳಿ ಬಾಯಾರಿಕೆ ತಯಾರಿಸಿ ಕೊಟ್ಟು ಉಪಚರಿಸಿದರು."ಮಧ್ಯಾಹ್ನದ ಊಟ ಇಲ್ಲಿಯೇ ಮಾಡಿ ಹೋಗಿ" ಎಂದು ಹೇಳುತ್ತಾ ಒಳನಡೆದರು.ಸೊಸೆಯಲ್ಲಿ" ಸ್ವಲ್ಪ ಬೆಳ್ತಿಗೆ ಅನ್ನ ಮಾಡು" ಎಂದು ಹೇಳಿ ಹೊರಗೆ ಬಂದು ಮಾತನಾಡುತ್ತಾ ಕುಳಿತರು.ಹನ್ನೆರಡೂವರೆಗೆ ಪೂಜಾ ಮಂಗಳಾರತಿಯನ್ನು ನೋಡುವ ಸೌಭಾಗ್ಯ ಶಾಸ್ತ್ರಿ ದಂಪತಿಗೆ ದೊರಕಿತು.ತೀರ್ಥ ಪ್ರಸಾದ ಸ್ವೀಕರಿಸಿದರು.


         ಹತ್ತು ನಿಮಿಷದಲ್ಲಿ ಪುರೋಹಿತರು ಶಾಸ್ತ್ರಿಗಳಿಗೆ ನಮಸ್ಕರಿಸುತ್ತಾ ಹೊರಬಂದು ತಮ್ಮ ಎಂದಿನ ಹಲಸಿನ ಮರದ ಹಳೇ ಕುರ್ಚಿಯಲ್ಲಿ ಕುಳಿತರು.ಮದುವೆಯ ಕರೆಯೋಲೆಯನ್ನು ನೀಡಿ ನಮಸ್ಕರಿಸಿದ ದಂಪತಿಯನ್ನು ಹರಸಿ ವೈದಿಕ ಕಾರ್ಯಕ್ರಮ ಗಳಿಗೆ ಬೇಕಾದ ವಸ್ತುಗಳ ಪಟ್ಟಿಗಳನ್ನು ನೀಡಿ ಊಟ ಮಾಡಿ ಹೋಗುವಂತೆ ವಿನಂತಿಸಿದರು.ಊಟಮಾಡಿ ಶಾಸ್ತ್ರಿ ದಂಪತಿ ಶಶಿಯಕ್ಕನ ಮನೆಗೆ ತೆರಳಿದರು.

      ಸುಮಾರು ಎರಡುಗಂಟೆಯ ಹೊತ್ತಿಗೆ ಮನೆಯಂಗಳದಲ್ಲಿ ಕಾರು ನಿಂತ ಸದ್ದಾದಾಗ ಹೊರಗಿಣುಕಿದರು ಶಶಿ."ಓಹೋ ಇವರದಾ ಸವಾರಿ.". ಎನ್ನುತ್ತಾ ಅಸಡ್ಡೆಯಿಂದ ಉದ್ಗಾರವೊಂದನ್ನು ಹೊರಡಿಸಿ  ತಾವು ನೋಡುತ್ತಿದ್ದ ಟಿವಿ ಧಾರಾವಾಹಿ ಯ ವಾಲ್ಯೂಮ್ ಇನ್ನೂ ಸ್ವಲ್ಪ ಹೆಚ್ಚಿಸಿದರು.ಚಾವಡಿಗೆ ಬಂದು ನಿಂತ ತಮ್ಮನನ್ನು ಕಂಡು"  ಓಹೋ ತಮ್ಮಾ.. ನೀನು ಯಾವಾಗ ಬಂದದ್ದು.ಗೊತ್ತೇ ಆಗಲಿಲ್ಲ"ಎನ್ನುತ್ತಾ "ನಿಮಗಿನ್ನೂ ಊಟ ಆಗಿಲ್ಲಾಂತ ಕಾಣುತ್ತದೆ ಆಲ್ವಾ.." ಎಂದವರ ಮುಖದಲ್ಲಿ ಇನ್ನು ಇವರಿಗೆ ಬಡಿಸಬೇಕಲ್ವಾ ಎಂಬ ಅಸಡ್ಡೆಯಿದ್ದಿತು.


"ಪುರೋಹಿತರಲ್ಲಿ ಊಟ ಮಾಡಿ ಬಂದಿದ್ದೇವೆ" ಎಂದ ಭಾಸ್ಕರ ಶಾಸ್ತ್ರಿಗಳು
 "ಸ್ವಲ್ಪ ನೀರು ಕೊಡಿ ವಿಪರೀತ ಬಾಯಾರಿಕೆ "ಎಂದರು.
"ತಮ್ಮಾ.. ನೀವು ಈ ಕಡೆಗೆ ಬರುವುದಾದರೆ ಇಲ್ಲಿಯೇ ಊಟಮಾಡಬಹುದಿತ್ತು.ನಿನ್ನೆಯೇ ಗೊತ್ತಾಗಿದ್ದರೆ ನಾನೇ ಇಲ್ಲಿಗೆ ಬರಲು ಹೇಳುತ್ತಿದ್ದೆ.. ಇಷ್ಟು ಹತ್ತಿರ ಅಕ್ಕನ ಮನೆಯಿದ್ದರೂ ಪುರೋಹಿತರ ಮನೆಯಲ್ಲಿ ಉಣ್ಣಬೇಕೇ" ಎಂಬ ಅವರ ಮಾತು ಸಾಗುತ್ತಲೇ ಇತ್ತು.


      ನೀರು ತರಲು ಹೋದವರು ಹತ್ತು ನಿಮಿಷ ಬೇಕಾಯಿತು ತರಲು.. ಮತ್ತೆ ಯಾರೋ ಒಬ್ಬರು ಪಕ್ಕದ ಮನೆಗೆ ತೆರಳುವವರು ಅಂಗಳದ ಬದಿಯಲ್ಲಿ ಸಾಗುತ್ತಿದ್ದರು.ಅವರನ್ನು ಕರೆದು ಪಟ್ಟಾಂಗದಲ್ಲಿ ತೊಡಗಿದರು.ಒಳಗೆ ಕುಳಿತಿದ್ದ ಶಾಸ್ತ್ರಿಗಳನ್ನು ಮಾತನಾಡಿಸುವವರು ಯಾರೂ ಇರಲಿಲ್ಲ.ಊಟಮಾಡಿ ಒಂದು ಸಣ್ಣ ನಿದ್ದೆಎಳೆದ ಭಾವ ಎದ್ದು ಬಂದು ಮಾತನಾಡಿಸಿದರು.ಭಾಸ್ಕರ ಶಾಸ್ತ್ರಿಗಳು ಕರೆಯೋಲೆ ವಸ್ತ್ರವನ್ನು ಅವರ ಕೈಗಿತ್ತು ನಮಸ್ಕರಿಸಿದರು."ನಿಮಗೆ ಬಾಯಾರಿಕೆ "ಎಂದು ರಾಗ ಎಳೆದರು..ಭಾವ.

"ಬೆಲ್ಲ ನೀರು ಕೊಟ್ಟಿದ್ದಾರೆ ಅದಕ್ಕಿಂತ ಹೆಚ್ಚೇನಿದೆ ಭಾವ" ಎಂದರು ಭಾಸ್ಕರ ಶಾಸ್ತ್ರಿಗಳು.

      ಅದು ಇದು ಮಾತನಾಡುತ್ತಿದ್ದಂತೆ "ಇನ್ನೂ ಹಲವು ಕಡೆ ಹೋಗುವುದಿದೆ.. ನಾವಿನ್ನು ಹೊರಡುತ್ತೇವೆ" ಅಂದು ಹೊರಗೆ ಕಾಲಿಟ್ಟಾಗ ಶಶಿ ಪಟ್ಟಾಂಗ ಮೊಟಕುಗೊಳಿಸಿ.. "ಹ್ಞಾಂ.. ನೀವು ಈಗಲೇ ಇಷ್ಟುಬೇಗ ಹೊರಟದ್ದಾ... ಸ್ವಲ್ಪ ಚಹಾ.. ಮಾಡುತ್ತೇನೆ "ಎಂದು ಗಂಡನನ್ನೂ ತಮ್ಮನನ್ನೂ ನೋಡುತ್ತಾ ಅಂದರು..

         ಭಾಸ್ಕರ ಶಾಸ್ತ್ರಿಗಳು ಸ್ವಲ್ಪ ನಿಧಾನಿಸಿದರೂ ಶಶಿಯಕ್ಕ ಟೀ ಮಾಡಲು ತೆರಳುವ ಯಾವ ಸೂಚನೆಯೂ ಇರಲಿಲ್ಲ.ಅವರಿಗೆ ಟೀ ಬೇಕಾಗಿಯೂ ಇರಲಿಲ್ಲ.ಆದರೆ ಏನೂ ಕುಡಿಯದೆ ಹೋದರು ಎಂಬ ಅಪವಾದ ಬೇಡವೆಂದು ಕಾದರು.ಕೊನೆಗೆ ಶಶಿಯ ಕೈಗೆ ಸೀರೆ ಕೊಟ್ಟು ನಮಸ್ಕರಿಸಿ ಹೊರಟು ಅಂಗಳಕ್ಕಿಳಿದರು.ಶಶಿಯಕ್ಕ  ತಾವು ತಮ್ಮ ಕೆಲಸಕ್ಕೆಂದು ಒಳ ತೆರಳಿದವರು ಹೊರಬರಲೇಯಿಲ್ಲ.ಭಾವ ಕಾರು ಹೊರಡುತ್ತಿದ್ದಂತೆ ಕೈಬೀಸಿದರು.


    ಅತ್ತಿಗೆಯ ವರ್ತನೆಯನ್ನು ಕಂಡು ಮಂಗಳಾಳಿಗೆ ಕಣ್ತುಂಬಿ ಬಂತು..ತವರಿನಿಂದ ಶುಭಕಾರ್ಯಕ್ಕೆಂದು ಕರೆಯಲು ಬಂದರೆ ಹೀಗಾ ನಡೆದುಕೊಳ್ಳುವುದು..ಶಾಸ್ತ್ರೀಮನೆತನ ಇಂತಹಾ ಕೆಟ್ಟ ನಡತೆಯನ್ನು ಯಾವತ್ತಾದರೂ ಕಲಿಸಿದೆಯಾ.. ಮಾತೆತ್ತಿದರೆ ಶಾಸ್ತ್ರಿ ನಿವಾಸದ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದೇನೆ ಎನ್ನುತ್ತಾರೆ.ನಾನು ಸೊಸೆಯಾಗಿ ಕಾಲಿಟ್ಟ ಮೇಲೆ ಇದುವರೆಗೆ ಯಾರೊಬ್ಬರನ್ನೂ  ಉಪಚರಿಸದೆ ಕಳುಹಿಸಿದ್ದು ನಾನು ಕಂಡಿಲ್ಲ..ಛೀ... ಎಂತಹಾ ಕೀಳುಬುದ್ಧಿ ಹಿರಿಯತ್ತಿಗೆ ಶಶಿಯದು.. ಎಂದು ಯೋಚಿಸುತ್ತಿದ್ದಂತೆ ಕಣ್ಣಿಂದ ನಾಲ್ಕು ಹನಿಗಳು ಪಟಪಟನೆ ಉದುರಿದವು.

ಮುಂದುವರಿಯುವುದು..

✍️.. ಅನಿತಾ ಜಿ.ಕೆ.ಭಟ್.
20-04-2020.


ಮುಂದಿನ ಭಾಗ... ಬುಧವಾರ.




Fun in drawing....🕵️🕵️👱👱🧓🧓👨👨

Cartoon drawing.
🎅🎅🎅🎅



                      💐💐💐💐💐


2 point perspective....




Holiday art by..shreeda kumar..

Saturday, 18 April 2020

ಜೀವನ ಮೈತ್ರಿ ಭಾಗ ೬೪(64)



ಜೀವನ ಮೈತ್ರಿ ಭಾಗ ೬೪


            ಬೆಳಗ್ಗೆ ಕೇಶವ ಬೇಗನೆ  ಎದ್ದು ತಯಾರಾಗಿದ್ದ. ಸೌಜನ್ಯ ಕೆಳಗೆ ಹೋಗಿ ಗಂಡನಿಗೆ ತಿಂಡಿಗೆ ತಯಾರು ಮಾಡಿದಳು. ಬಿಸಿಬಿಸಿಯಾದ ಉದ್ದಿನ ದೋಸೆ ,ಬಟಾಟೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿ ರೆಡಿ ಮಾಡಿ ಗಂಡನನ್ನು ಕರೆದು ಬಡಿಸಿದಳು ಕೇಶವನಿಗೆ.. ಅಂತೂ ಕೇಶವನಿಗೆ ಬಹಳವೇ ಖುಷಿಯಾಗಿತ್ತು. ನನ್ನವಳಿಗೆ ರುಚಿ ರುಚಿಯಾಗಿ ಅಡುಗೆ ಮಾಡಲು ಬರುತ್ತದೆ ಎಂದು. ಆದರೂ ಒಂದು ಸಂದೇಹ... ನನಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ಮದುವೆಗೂ ಮುನ್ನ ಹೇಳಿರುವುದು ಸುಳ್ಳೇ..
ಎಂದು.. ಯಾವುದಕ್ಕೂ ಅವಸರ ಮಾಡದೆ ನಿಧಾನವಾಗಿ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು ಎಂದು ತಿಂಡಿಯನ್ನು ಸವಿದ. ಅಷ್ಟರಲ್ಲಾಗಲೇ ಸುನಿತಾ ಮನೆಗೆ ಹಾಜರಾಗಿದ್ದಳು. ರಾತ್ರಿ ತಡವಾಗಿ ಮನೆಗೆ ಬಂದಿದ್ದ ಮಾವ ಅತ್ತೆ ಕೂಡ ಎದ್ದು ಬಂದರು. ಬೆಳ್ಳಂಬೆಳಗ್ಗೆ ಹೊರಟುನಿಂತ ಅಳಿಯನನ್ನು ವಿಚಾರಿಸಿಕೊಂಡು ಶುಭಹಾರೈಸಿದರು. ಕೇಶವ್ ಅತ್ತೆ-ಮಾವನ ಕಾಲಿಗೆರಗಿ ಹೊರಟ. ಸೌಜನ್ಯ ಗಂಡನತ್ತ ಒಂದು ತುಂಟ ನಗೆ ಬೀರಿ... "ರೀ ಆಲ್ ದಿ ಬೆಸ್ಟ್" ಎನ್ನುತ್ತಾ ಗಂಡನ ಕೈಗೆ ಕೈ ಬೆಸೆದು ತೋಳುಗಳ ಮೇಲೆ ತುಟಿಯನ್ನು ಒತ್ತಿ ಗಂಡನಿಗೆ ಬಾಯ್ ಹೇಳಿ ಕಳುಹಿಸಿದಳು.


         ನಿಗದಿತ ಸಮಯಕ್ಕೆ ಸಿಂಗರ್ ಸೀನ ಹೇಳಿದ ವಿಳಾಸಕ್ಕೆ ತಲುಪಿದ ಕೇಶವ . ಅವನೆದುರಿಗೆ ಪ್ರಣತಿ ಸಾಫ್ಟ್ವೇರ್ ಸಿಸ್ಟಮ್ಸ್ ಎಂಬ ಬೋರ್ಡ್ ಕಾಣಿಸಿತು ಒಳಗೆ ನಡೆದ. ರಿಸೆಪ್ಶನಿಸ್ಟ್ ಅಲ್ಲಿ ಬಂದ ವಿಷಯ ಹೇಳಿದ . "ಜಸ್ಟ್ ವೇಟ್ ಫಾರ್ ಫೈವ್ ಮಿನಿಟ್ಸ್. "ಎಂದು ಹೇಳಿ ಅವಳ ಕೆಲಸದಲ್ಲಿ ತೊಡಗಿದಳು. ಅಷ್ಟರಲ್ಲಿ ಸಿಂಗರ್ ಸೀನ ಆಫೀಸಿಗೆ ಎಂಟ್ರಿಕೊಟ್ಟಿದ್ದು ಕೇಶವನ ಕೈಕುಲುಕಿ "ಈಗ ಸ್ವಲ್ಪ ಹೊತ್ತಲ್ಲಿ ಬಾಸ್ ಆಗಮಿಸುತ್ತಾರೆ.. ನಾನೆಲ್ಲ ವಿಷಯ ಹೇಳಿದ್ದೇನೆ " ಎಂದ.



           ಕಟ್ಟುಮಸ್ತಾದ ದೇಹ...ಶಿಸ್ತಿನಿಂದ ಡ್ರೆಸ್ ಮಾಡಿಕೊಂಡಿದ್ದ ಯುವಕನೋರ್ವ ಕೈಯಲ್ಲಿ ಬ್ಯಾಗ್ ಹಿಡಿದು ಒಳಗೆ ಬಂದ. ರಿಸೆಪ್ಶನಿಸ್ಟ್ ಸಹಿತ ಎಲ್ಲರೂ "ಗುಡ್ ಮಾರ್ನಿಂಗ್ ಸರ್" ಎಂದರು. ಗಂಭೀರವಾಗಿ ಗುಡ್ ಮಾರ್ನಿಂಗ್ ಹೇಳುತ್ತಾ ತನ್ನ ಛೇಂಬರ್ ಗೆ ಸಾಗಿದರು. ಇವರೇ ಬಾಸ್ ಇರಬೇಕು ಎಂದುಕೊಂಡ ಕೇಶವ. ಸ್ವಲ್ಪ ಹೊತ್ತಿನಲ್ಲಿ ಕೇಶವನಿಗೆ ಒಳಗಿನಿಂದ ಕರೆಬಂತು ರಿಸೆಪ್ಷನಿಸ್ಟ್  "ಸರ್ ನೀವು ಒಳಗೆ ಹೋಗಬಹುದು" ಎಂದರು.


          ಒಳಗೆ ತೆರಳಿದ ಕೇಶವ..ಕೇಶವನ ನಡೆಯನ್ನು ಬಾಸ್ ಗಮನಿಸುತ್ತಿದ್ದರು. ಔಪಚಾರಿಕವಾಗಿ ಒಂದೆರಡು ಪ್ರಶ್ನೆಗಳನ್ನು ಕೇಳಿ

"ಯಾವಾಗಿನಿಂದ ಜಾಬ್  ಗೆ ಬರಲು ಇಷ್ಟಪಡುತ್ತೀರಿ ..?"ಎಂದು ಕೇಳಿದರು .

."ನೀವು ಎಸ್ ಎಂದರೆ ನಾಳೆಯಿಂದಲೇ ಬರಲು ಸಿದ್ಧ" ಎಂದ ಕೇಶವ.

"ಸರಿ ಹಾಗಾದರೆ ನಾಳೆಯಿಂದಲೇ ಬನ್ನಿ. ನಮ್ಮ ಟೀಂ ಲೀಡರ್ ನಿಮಗೆ ಅಪಾಯಿಂಟ್ಮೆಂಟ್ ಆರ್ಡರ್ ಲೆಟರ್ ಕೊಡುತ್ತಾರೆ. ಮಾಡಬೇಕಾದ ಕೆಲಸ ಕಾರ್ಯಗಳ ವಿವರವನ್ನು ಕೂಡ ನೀಡುತ್ತಾರೆ "ಎಂದು ಹೇಳಿದರು. ಅದಕ್ಕೆ ಸಮ್ಮತಿಸಿ  ಕೇಶವ ಹೊರಬಂದ. ಅಪಾಯಿಂಟ್ಮೆಂಟ್ ಲೆಟರ್ ಅವನ ಕೈಗಿತ್ತ ಟೀಮ್ ಲೀಡರ್.ಅಪಾಯಿಂಟ್ಮೆಂಟ್ ಲೆಟರ್ ನ ಮೇಲೆ ಕಣ್ಣಾಡಿಸಿ ನಿಟ್ಟುಸಿರು ಬಿಟ್ಟುಕೊಂಡು... ಮುಳುಗುವವನಿಗೆ ಹುಲುಕಡ್ಡಿ ಆಸರೆ ಎಂಬಂತೆ ಈ ಉದ್ಯೋಗ ನನಗೆ ಎಂದು ತೃಪ್ತಿಪಟ್ಟುಕೊಂಡನು ಕೇಶವ.


          ಮನೆಗೆ ಹಿಂತಿರುಗಿದ ಕೇಶವನಿಗೆ ಮಾವ, ಅತ್ತೆ ,ಸೌಜನ್ಯಳ ಪ್ರಶ್ನೆಗಳಿಗೆ ಉತ್ತರಿಸುವುದೇ ಸವಾಲಾಯಿತು.ಇಷ್ಟು ಕಡಿಮೆ ಸಂಬಳಕ್ಕೆ ಬೆಂಗಳೂರಿನಲ್ಲಿ ಜೀವನ ಮಾಡಲು ಸಾಧ್ಯವಾ ಎಂಬುದು ಸೌಜನ್ಯಳ ಅಳಲಾಗಿತ್ತು.

"ಅಳಿಯಂದಿರೇ ಇದಕ್ಕಿಂತ ಬೇರೆ ಕೆಲಸ ಸಿಗಬಹುದು. ಸ್ವಲ್ಪ ದಿನ ಕಾದು ನೋಡೋಣ" ಎಂದರು ನರಸಿಂಹರಾಯರು.

"ಇದಕ್ಕೂ ಮೊದಲು ಕಾರ್ಯನಿರ್ವಹಿಸಿದ ಅನುಭವ ಇದೆಯಲ್ಲವೇ.. ನಮ್ಮ ಪರಿಚಯದವರಲ್ಲಿ ಯಾರಲ್ಲಾದರೂ ಹೇಳಿ ಉದ್ಯೋಗಕ್ಕೆ  ಪ್ರಯತ್ನಿಸೋಣ .ಯಾವುದಕ್ಕೂ ಅವಸರ ಬೇಡ " ಎಂದು ಹೇಳಿದರು ರೇಖಾ.

        ಯಾರು ಏನೇ ಅಂದರೂ ಸಿಕ್ಕಿದ ಉದ್ಯೋಗವನ್ನು ಬಿಡುವ ಮನಸ್ಸು ಅವನಿಗೆ ಇರಲಿಲ್ಲ .ಬಂಗಾರಣ್ಣ ತಿಂಗಳಿಗೆ ಐವತ್ತು ಸಾವಿರ ತನ್ನ ಕೃಷಿಯ ಕೆಲಸದಾಳುಗಳಿಗೆ ನೀಡುತ್ತಿದ್ದ. ಅಂತಹವನ  ಮಗ ಇಂದು ಕೇವಲ ಹದಿನಾಲ್ಕು ಸಾವಿರ ರೂಪಾಯಿಗಳಿಗೆ ಕೆಲಸ ಮಾಡಬೇಕಾಗಿತ್ತು.. ಕೇಶವ ಎಲ್ಲದಕ್ಕೂ ಸಿದ್ದನಾಗಿದ್ದ .ಜೀವನ ಮಾಡಬೇಕಾದರೆ ಕಷ್ಟವನ್ನು ಎದುರಿಸಬೇಕು ಎಂಬುದು ಅವನಿಗೆ ಇತ್ತೀಚಿನ ವಿದ್ಯಮಾನಗಳಿಂದ ಸರಿಯಾದ ಪಾಠವಾಗಿತ್ತು ‌.  ಮರುದಿನದಿಂದಲೇ ಉದ್ಯೋಗಕ್ಕೆ ಹೋಗಲು ಬೇಕಾದ ತಯಾರಿಯನ್ನು ಮಾಡಿಕೊಂಡ.


                   ********


        ಬಂಗಾರಣ್ಣನ ಮಾತಿನಲ್ಲಿ  ಸೊಸೆಯ  ಬಗ್ಗೆ ಹೀಯಾಳಿಕೆ ಆಗ ಕೇಳುತ್ತಿತ್ತು., ಸೌಜನ್ಯಳ ಬಗ್ಗೆ ಏನೇ ಹೇಳಿದರೂ ಬಶೀರನ ಹೆಂಡತಿ ಎಂದೇ ಸಂಬೋಧಿಸುತ್ತಿದ್ದರು. ಸುಮಾಳಿಗೆ ಇದು ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಒಮ್ಮೆ ಮಿತಿಮೀರಿದಾಗ ಕಟುವಾಗಿ ಹೇಳಿಬಿಟ್ಟರು.

"ಮಾತುಮಾತಿಗೆ  ಸೊಸೆಯನ್ನು ಬಶೀರನ ಹೆಂಡತಿ ಅನ್ನುತ್ತೀರಲ್ಲ ...ಹಾಗಿದ್ದರೆ ಮಗ ಕೇಶವನನ್ನು ಸಿಂಧ್ಯಾ ಳ ಗಂಡ ಅನ್ನುತ್ತೀರೇನು...?ಎಳೆಯ ಪ್ರಾಯದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ವಯೋಸಹಜ ಆಕರ್ಷಣೆಯಿಂದಲೋ ಹೆಜ್ಜೆಯನ್ನಿಟ್ಟಿದ್ದಾರೆ. ನಮ್ಮ ಮಗ ತಪ್ಪು ಮಾಡಿದಾಗ ನಾವು ಹೇಗೆ ಕ್ಷಮಿಸಿ ಅದನ್ನು ಹೊಟ್ಟೆಗೆ ಹಾಕಿಕೊಂಡು ಅವನನ್ನು ಸರಿದಾರಿಯಲ್ಲಿ ನಡೆಸಿದ್ದೇವೆಯೋ.. ಹಾಗೆಯೇ ಆಕೆಯ ಪೋಷಕರು ಕೂಡ ಆಕೆಯನ್ನು ತಿದ್ದಿದ್ದಾರೆ ... ಅದನ್ನು ನಾವು ಅರ್ಥಮಾಡಿಕೊಳ್ಳಬೇಕು .... ಮಗನನ್ನು ಕ್ಷಮಿಸಿದಂತೆ ಸೊಸೆಯನ್ನೂ ಕ್ಷಮಿಸಬೇಕು..ಇನ್ನೊಮ್ಮೆ ಆ ಮಾತನ್ನು  ಪುನರಾವರ್ತಿಸಿದ್ದಾದರೆ ನಾನು  ಮತ್ತೆ ಈ ಮನೆಯಲ್ಲಿ ನಿಲ್ಲಲ್ಲ."

      ಎಂದ ಮಡದಿಯ ಮಾತಿಗೆ ಪೆಚ್ಚುಮೋರೆ ಹಾಕಿಕೊಂಡು ಹೊರಗೆ ಹೋದವರು ಬಂಗಾರಣ್ಣ.ಏನೇ ಆದರೂ ಬಂಗಾರಣ್ಣನಿಗೆ ಸುಮಾ ಇಲ್ಲದೆ ಇರುವುದು ಕಷ್ಟ.  ಹೆಣ್ಣುಮಕ್ಕಳಿಗೆ ಮನೋಬಲ ದೇವರು ಕೊಟ್ಟಿದ್ದಾನೆ... ಗಂಡನನ್ನು ಅಗಲಿ ಬದುಕುವ ಸಾಮರ್ಥ್ಯವನ್ನು  ಹೊಂದಿದ್ದಾಳೆ. ಆದರೆ ಗಂಡಸರಿಗೆ ಮಾತ್ರ ಹೆಂಡತಿಯನ್ನು ಬಿಟ್ಟು ಇರುವುದು ಸ್ವಲ್ಪ ಕಷ್ಟದ ಮಾತೇ.. ಆದ್ದರಿಂದ ಬಂಗಾರಣ್ಣ ಹೆಂಡತಿ ಹಾಕಿದ ಗೆರೆಯನ್ನು ದಾಟುವುದಿಲ್ಲ... ಆಕೆ ಕೋಪಿಸಿಕೊಂಡು ತವರಿಗೆ ಹೋದರೆ ನನ್ನ ಗತಿ ಎಂದು ಅವನ ಪಜೀತಿ..!!


                     *****

          ಗಂಡನಿಗೆ ಇಂದು ಆಫೀಸಿಗೆ ಹೋಗಲಿರುವುದು  ಸೌಜನ್ಯಳಿಗೆ ಗೊತ್ತಿದ್ದರೂ ಗಾಢ ನಿದ್ರೆ ಆವರಿಸಿತ್ತು.. ಅಲಾರಾಂ ರಿಂಗಣಿಸುತ್ತಿತ್ತು.. ಏಳಲೂ ಮನಸ್ಸಿರಲಿಲ್ಲ.. ಆದರೆ ಏಳಲೇಬೇಕಿತ್ತು..  ಕಷ್ಟದಿಂದ ಎದ್ದು ಫ್ರೆಶ್ ಆಗಿ ಕೆಳಗಿಳಿದಳು.ಅಡುಗೆ ಮನೆಗೆ ತೆರಳಿ ಸಿಂಪಲ್ ಆಗಿ ವೆಜ್ ಪಲಾವ್ ಮಾಡಿದಳು. ಫ್ರೆಶ್ ಆಗಿ ಬಂದ ಕೇಶವನಿಗೆ ಪಲಾವ್ ಬಡಿಸಿದಳು. ಎಂದಿನಂತೆ ಕೇಶವನ ಮುಖದ ಮೇಲೆ ತುಂಟತನವಿರಲಿಲ್ಲ. ಗಂಭೀರವಾಗಿದ್ದ ಪತಿಯನ್ನು ಕಂಡು ಸೌಜನ್ಯಳಿಗೂ ಅವನ ತಳಮಳ ಅರ್ಥವಾಗಿತ್ತು.
ಬೇಗನೆ ತಿಂಡಿ ಮುಗಿಸಿ ಹೊರಟು ಆಫೀಸಿಗೆ ತೆರಳಿದ ಕೇಶವ್.

        ಹೊಸ ಉದ್ಯೋಗ ಹೊಸ ಹುರುಪನ್ನು ಕೇಶವನಲ್ಲಿ ಮೂಡಿಸಿತು. ಆಫೀಸಿಗೆ ತೆರಳಿದ ಕೇಶವನಿಗೆ ಟೀಂ ಲೀಡರ್ ಆ ದಿನದ ಕೆಲಸವನ್ನು ಒಪ್ಪಿಸಿದ. ತನಗೆ ತಿಳಿಯದ ವಿಷಯಗಳನ್ನು ಸಹವರ್ತಿಗಳಿಗೆ ಕೇಳುತ್ತಾ ಆದಷ್ಟು ಬೇಗನೆ ಮುಗಿಸಿದ. ಉದ್ಯೋಗದ ಮೊದಲ ದಿನ ಅವನಲ್ಲಿ ಆತ್ಮವಿಶ್ವಾಸ ಮೂಡಿಸಿತು.


         ‌         ******

        ಶಾಸ್ತ್ರಿ ನಿವಾಸದಲ್ಲಿ ಮದುವೆಯ ಕರೆಯೋಲೆಯನ್ನು ದೇವರ ಮುಂದಿಟ್ಟು ಪೂಜೆಗೈದ ಶ್ಯಾಮಶಾಸ್ತ್ರಿಗಳು ಮಗನಲ್ಲಿ ಕೊಡುತ್ತಾ
 "ಭಾಸ್ಕರ... ಮೊದಲು ಕುಲಪುರೋಹಿತರ ಮನೆಗೆ ತೆರಳಿ ಕರೆಯೋಲೆ ಕೊಟ್ಟು ನಮಸ್ಕರಿಸಿ ಬನ್ನಿ.. ಆಮೇಲೆ ಒಬ್ಬೊಬ್ಬರಿಗೆ ಕೊಡಲು ಆರಂಭಿಸೋಣ.."

ಅಪ್ಪನ ಮಾತಿಗೆ ಹೂಂಗುಟ್ಟಿದ ಭಾಸ್ಕರ ಶಾಸ್ತ್ರಿಗಳು "ಆದಷ್ಟು ಬೇಗ ಹೋಗುತ್ತೇವೆ ನಾನು ಮತ್ತು ಮಂಗಳಾ..ಹಾಗೆಯೇ ಪುರೋಹಿತರಲ್ಲಿ ಹೋಮ,ನಾಂದಿ, ಮದುವೆಯ ವೈದಿಕ ಕಾರ್ಯಕ್ರಮಗಳಿಗೆ ಬೇಕಾದ ವಸ್ತುಗಳನ್ನು ಪಟ್ಟಿ ಮಾಡಿಸಿಕೊಂಡು ಬರುತ್ತೇವೆ.."ಎಂದರು..

"ಅದಕ್ಕೂ ಮೊದಲು ಪೇಟೆಗೆ ಹೋಗಿ ಚಿನ್ನ, ಬಟ್ಟೆ ಖರೀದಿ ಮಾಡೋಣ..ಪುರೋಹಿತರ ಮನೆಗೆ ಹೋಗಿ ಬರುವಾಗ ದಾರಿಯಲ್ಲಿ ಶಶಿಯತ್ತಿಗೆ ಸಾವಿತ್ರಿಯತ್ತಿಗೆಯ ಮನೆ ಸಿಗುತ್ತದೆ.ಅಲ್ಲಿ ಅವರ ಸೀರೆ ಕೊಟ್ಟು ಕರೆಯೋಲೆಯನ್ನೂ ನೀಡಿ ಬರಬಹುದು" ಎಂದರು ಮಂಗಳಮ್ಮ.

"ಹೌದು ಮಂಗಳಾ..ಅದು ಒಳ್ಳೆಯದು.. ಇಲ್ಲದಿದ್ದರೆ ಮತ್ತೆ ಹೊಲಿಸಿಕೊಳ್ಳಲು ಸಮಯ ಸಿಕ್ಕಿಲ್ಲ ಎಂದಾಗುವುದು ಬೇಡ.."ಎಂದರು ಮಹಾಲಕ್ಷ್ಮಿ ಅಮ್ಮ.
"ಹಾಗೆಯೇ ಮಾಡೋಣ" ಎಂದರು ಭಾಸ್ಕರ ಶಾಸ್ತ್ರಿಗಳು.


         ಮರುದಿನ   ಮದುವೆಗೆ ಚಿನ್ನ,ಬಟ್ಟೆ ಖರೀದಿಗೆ ತೆರಳಿದರು.ಮಹೇಶ ಮತ್ತು ಅಜ್ಜಿ ಮನೆಕಾವಲಿಗೆಂದು ಮನೆಯಲ್ಲೇ ಉಳಿದರು.ಮೈತ್ರಿಗೆ ಕೈಗೆ ನಾಲ್ಕು ಚಿನ್ನದ ಬಳೆ, ಎರಡು ಮುತ್ತಿನ ಬಳೆ ,ಆರು ಪವನಿನ ಚಿನ್ನದ ಲಾಂಗ್ ನೆಕ್ಲೇಸ್, ಕಿವಿಯೋಲೆ ಜುಮುಕಿ, ಕುತ್ತಿಗೆಗೆ ಮೆರುಗು ಕೊಡುವ ಪುಟಾಣಿ ನೆಕ್ಲೇಸ್ , ಕಾಲ್ಗೆಜ್ಜೆ ,ಮಂಗಳಮ್ಮನಿಗೆ ಬೆಂಡೋಲೆ ಖರೀದಿಸಿದರು.
   
          ನಂತರ ಬಟ್ಟೆಯಂಗಡಿಗೆ ಕಾಲಿಟ್ಟಾಗ ಕಾಂಜೀವರಂ ಸೀರೆಯನ್ನು ಮೊದಲು ಆಯ್ಕೆ ಮಾಡಲು ತೆರಳಿದರು.. ಒಂದಕ್ಕಿಂತ ಒಂದು ಸುಂದರ ಸೀರೆಯನ್ನು ಕಂಡಾಗ ಯಾವುದನ್ನು ಆಯ್ಕೆ ಮಾಡಬೇಕೆಂದು ತಿಳಿಯಲಿಲ್ಲ ತಾಯಿ ಮಗಳಿಗೆ..
"ಅಮ್ಮಾ ..ಈಗ ಗಾಯತ್ರಿ ಚಿಕ್ಕಮ್ಮನೂ ಬಂದಿದ್ರೆ ಚೆನ್ನಾಗಿತ್ತು..."

"ನಂಗೂ ಹಾಗೇ ಅನಿಸ್ತಿದೆ ಮೈತ್ರಿ..."

"ಭಾಸ್ಕರ ಶಾಸ್ತ್ರಿಗಳು ಆಯ್ತಾ ಸೆಲೆಕ್ಷನ್.." ಎಂದು ಕೇಳಲಾರಂಭಿಸಿದರು..ಶ್ಯಾಮ ಶಾಸ್ತ್ರಿಗಳು ಎರಡೆರಡು ಸಲ ಬಂದು "ಸೀರೆ ಆಯ್ಕೆ ಆಯಿತಾ" ಎಂದು ನೋಡಿ ಹೋದರು..
"ಅಮ್ಮಾ ಇದಾಗಬಹುದೇ..?" ..ಎಂದು ಸೇಲ್ಸ್ ಗರ್ಲ್ ತೆಗೆದುಹಾಕಿದ ಸೀರೆಯನ್ನೆಲ್ಲ ಮೈಗೆ ಹಿಡಿದು ಕನ್ನಡಿಯಲ್ಲಿ ನೋಡುತ್ತಾ ಕೇಳುತ್ತಿದ್ದಳು ಮೈತ್ರಿ..ಕನ್ನಡಿ ನೋಡುತ್ತಿದ್ದಂತೆ ನಿನ್ನೆ ಕಿಶನ್ ಕೇಳಿದ್ದು ನೆನಪಾಗಿ ಅವಳ ಮುಖದಲ್ಲಿ ನಸುನಗೆ ಮೂಡಿತು."ಯಾವ ಲೋಕದಲ್ಲಿದ್ದಿ ಮಗಳೇ.." ಎಂದು ಅಮ್ಮ ಎಚ್ಚರಿಸಿದರು.


        ಬಂಗಾರದ ಬಣ್ಣದ ಝರಿಯಿರುವ ಹಿನ್ನೆಲೆಯಲ್ಲಿ ಕೆಂಪು ಬಣ್ಣದಿಂದ ಕೂಡಿರುವ ಸೀರೆಯೊಂದನ್ನು ಆಯ್ಕೆ ಮಾಡಿದರು."ಒಂದು ಸೀರೆಯ ಆಯ್ಕೆಗೆ ಒಂದೂವರೆ ಗಂಟೆ... ಅಬ್ಬಬ್ಬಾ..!! "ಎಂದರು ಕೈಗಡಿಯಾರ ನೋಡುತ್ತಾ ಶ್ಯಾಮ ಶಾಸ್ತ್ರಿಗಳು..

        " ಮಂಗಳಾ ..ನಿನಗೂ ಒಳ್ಳೆಯದನ್ನೇ ಆಯ್ಕೆ ಮಾಡಿಕೋ "ಎಂದರು ಭಾಸ್ಕರ ಶಾಸ್ತ್ರಿಗಳು..ಮಡದಿ ಆಯ್ಕೆ ಮಾಡುತ್ತಿದ್ದಾಗ ತಾವೇ ಮುಂದಾಗಿ ಬಂದು ಸಹಕರಿಸಿದರು.ತಾವೇ "ನೋಡು ಮಂಗಳಾ.. ನಿನಗಿದು ಚೆನ್ನಾಗಿ ಒಪ್ಪುತ್ತದೆ "ಎಂದು ಸೀರೆಯನ್ನು ಕೈಗಿತ್ತರು.ಪತಿಯ ಆಯ್ಕೆ ಅವರಿಗೂ ಹಿಡಿಸಿತು.ಹೊಳೆಯುವ ಹಸಿರು ಕೆಂಪು ಮಿಶ್ರಿತ ಬಣ್ಣದ ಸೀರೆಯ ಮೇಲೆ ಅಲ್ಲಲ್ಲಿ ಬಂಗಾರದ ಬಣ್ಣದ ಚಿತ್ತಾರ ಎದ್ದು ಕಾಣುತ್ತಿತ್ತು.. ಮೈತ್ರಿಗೂ ಅಮ್ಮನಿಗೆಂದು ಅಪ್ಪ ಮಾಡಿದ ಆಯ್ಕೆ ಇಷ್ಟವಾಯಿತು..


ಉಳಿದವರಿಗೆಲ್ಲ ಬಟ್ಟೆ ಖರೀದಿ ಮಾಡಿ ಮನೆಸೇರುವಾಗ ರಾತ್ರಿ ಎಂಟಾಗಿತ್ತು.ದಿನವಿಡೀ ಮೈತ್ರಿಯ ಸಂದೇಶವಿರದ ಕಾರಣ ಕಿಶನ್ ಗೆ ಅವಳ ನೆನಪು ಜೋರಾಗಿತ್ತು..

"ಮುದ್ಗೊಂಬೆ....ಏನೇ ಭಾರೀ ಬ್ಯುಸಿ...ಈ ದಿನ ಒಂಚೂರೂ ನನ್ನ ನೆನಪಾಗಿಲ್ವೇನೇ.."ಎಂದು ಸಂದೇಶ ರವಾನಿಸಿದ್ದ..

"ಅಯ್ಯಾ.. ಸ್ವಲ್ಪ ಸುಮ್ನಿರಿ.. ಇಡೀ ದಿನ ನಾನು ಅಪ್ಪ ಅಮ್ಮನ ಜೊತೆಗೆ ಇದ್ದೆ.. ರಾತ್ರಿ ಮೆಸೇಜ್ ಮಾಡ್ತೀನಿ.. ಬಾಯ್.."

ಮೈತ್ರಿ ರಾತ್ರಿ ಆದರೂ ಚಾಟ್ ಮಾಡಲು ಸಿಗುತ್ತಾಳಲ್ಲ ಎಂದು ಸಮಾಧಾನದಿಂದ  ಅಡುಗೆ ಉಟದತ್ತ ಗಮನಹರಿಸಿದ.. ಕಿಶನ್..


ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
18-04-2020.

ಮುಂದಿನ ಭಾಗ.. ಸೋಮವಾರ...





      

Thursday, 16 April 2020

ಜೀವನ ಮೈತ್ರಿ ಭಾಗ ೬೩(63)




ಜೀವನ ಮೈತ್ರಿ ಭಾಗ ೬೩



             ಶಾಸ್ತ್ರೀ ನಿವಾಸದಲ್ಲಿ ಮೈತ್ರಿಯ ಮದುವೆಯ ಸಿದ್ಧತೆ ಭರದಿಂದ ಸಾಗಿತ್ತು.ಭಾಸ್ಕರ ಶಾಸ್ತ್ರಿಗಳು ಮದುವೆಯ ಕರೆಯೋಲೆಯನ್ನು ಅಚ್ಚುಹಾಕಿಸಿ ತಂದರು.ಶ್ಯಾಮ ಶಾಸ್ತ್ರಿಗಳು ಕನ್ನಡಕವನ್ನು ಮೂಗಿನ ಮೇಲಿರಿಸಿ ಪ್ರಿಂಟ್ ಆದ ಅಕ್ಷರಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿದರು.. ಮನೆಯವರೆಲ್ಲ ಒಬ್ಬೊಬ್ಬರಾಗಿ ಕರೆಯೋಲೆ ಓದಿದರು..

ಮಹೇಶ್ ಓದಿದವನೇ
" ಇದು ಭಾರೀ ಲಾಯಿಕಾಯಿದು" ಅಂದ.. ನಗುನಗುತ್ತಾ..

"ಏನು  ..?ಪ್ರಿಂಟ್ ಹಾಕಿಸಿದ್ದು ನಾನೇ.. ಕೊಂಕು ನಗೆಯೇಕೆ ..?"ಎಂದರು ಅಪ್ಪ ಗಂಭೀರವಾಗಿ..

"ಅದು.. ಮಹೇಶ್ BE ಎಂದು ಅಚ್ಚಾಗಿದೆ.. ಅದು ಅಕ್ಕನ ಹೆಸರಿನ ಮುಂದೆ ಇರಬೇಕಾದ್ದಲ್ವಾ..ನಂದು ಪಿಯುಸಿಯೂ ಆಗಿಲ್ಲ ಅಂತ.."

"ಹೌದಾ .." ಎನ್ನುತ್ತಾ ತಾವು ಕೂಡಾ ರೂಮಿನೊಳಗೆ ಹೋಗಿ ಕನ್ನಡಕ ಹಾಕಿಕೊಂಡು ಬಂದರು.. ಕರೆಯೋಲೆಯ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು."ಹೌದಲ್ವಾ...ಮಹೇಶ...ನೋಡು ನಾಳೆ ವೈಟ್ನರ್ ತಂದು ಕೊಡುತ್ತೇನೆ..ನಿನ್ನ ಹೆಸರಿನ ಮುಂದೆ ಹಾಕುವುದು ನಿನ್ನ ಕೆಲಸ ಆಯ್ತಾ..."

ಸಮ್ಮನಿದ್ದ ಮಹೇಶ್..ಅಪ್ಪ ಆ ಕಡೆಗೆ ಹೋದ ಕೂಡಲೇ ಅಮ್ಮ, ಅಜ್ಜ ,ಅಕ್ಕನಲ್ಲಿ "ನಾನ್ಯಾಕೆ ಹಾಕ್ಬೇಕು ವೈಟ್ನರ್..ಅಕ್ಕ ಓದಿ ನಂಗೆ ಡಿಗ್ರಿ...!!
ಮುಂದೆ ನಾನು ಇಂಜಿನಿಯರಿಂಗ್ ಓದುವುದೆಂದು ಪ್ರೆಸ್ ನವರು ಭವಿಷ್ಯ ಹೇಳಿದ್ದಿದು.. ಇರಲಿ.. ಇರಲಿ..ನಂಗೆ ಹೆಮ್ಮೆ.."

ಎಂದು ಶರ್ಟಿನ ಕಾಲರ್ ಏರಿಸುತ್ತಿದ್ದಾಗ ಅಪ್ಪ ವಾಪಾಸಾಗಿ "ಹಾಂ.. ಮಹೇಶ್... ಇದು..ಈ ಪರೀಕ್ಷೆ ಮಧ್ಯದಲ್ಲಿ ಅಷ್ಟು ಕರೆಯೋಲೆಗಳಿಗೆ ವೈಟ್ನರ್ ಹಾಕುವುದು ನಿನಗೆ ಕಷ್ಟ..ಬೇಡ ಬಿಡು.. ನಾನು ಅವನಲ್ಲೇ ಹೇಳಿ ಪುನಃ ಸರಿಮಾಡಿಸುತ್ತೇನೆ..." ಎಂದರು..


ಮಾತು ಮುಂದುವರಿಸುತ್ತಾ...." ಮಂಗಳಾ...ಯಾರಿಗೆಲ್ಲ ಸೀರೆ ತೆಗೆದುಕೊಳ್ಳಬೇಕು.. ಎಷ್ಟು ರೇಟಿನದ್ದು ಎಂದೆಲ್ಲ ಒಂದು ಅಂದಾಜು  ಪಟ್ಟಿ ಮಾಡಿಡು.ಮುಂದಿನವಾರ ಹೋಗಿ ತರೋಣ.."

"ಮಗಳಂದಿರಿಗೆ ಸೀರೆ ಒಳ್ಳೆಯ ರೇಟಿನದ್ದು ಕೊಡಬೇಕು ..ಇಲ್ಲದಿದ್ದರೆ ಶಶಿಗೆ ಸರಿಬರದು.ಅಳಿಯಂದಿರಿಗೆ ಪಂಚೆ ..ಮೊಮ್ಮಕ್ಕಳಿಗೆ ಶರ್ಟ್ ಪೀಸ್ ಚೂಡಿದಾರ್ ಪೀಸ್ ಕೊಡಲೇಬೇಕು.. ಮತ್ತೆ ಮನೆಯವರಿಗೆ ,ಮದುಮಗಳಿಗೆ ,ಮಂಗಳಾಳ ತವರುಮನೆಯವರಿಗೆ ಕೆಲಸದಾಳುಗಳಿಗೆ ಎಲ್ಲ ಬಟ್ಟೆ ಖರೀದಿ ಮಾಡಬೇಕು.."ಎಂದರು ಮಹಾಲಕ್ಷ್ಮಿ ಅಮ್ಮ.

"ಅಜ್ಜಿ... ನೀವು ನನ್ನ ಹೆಸರೇ ಹೇಳಿಲ್ಲ.."ಅಂದ ಮಹೇಶ್.

"ಅಲ್ಲ.. ನನ್ನನ್ನು ಮರೆತೇಬಿಟ್ಟೆಯಾ..." ಎಂದರು ಶ್ಯಾಮ ಶಾಸ್ತ್ರಿಗಳು..

ಮಹಾಲಕ್ಷ್ಮಿ ಅಮ್ಮ:-ಮನೆಯವರಿಗೆ ಅಂದರೆ ಅದರಲ್ಲಿ ನೀವೆಲ್ಲರೂ ಬಂದ ಹಾಗೇ..ಪ್ರತ್ಯೇಕ ಹೇಳಬೇಕೇ..


ಭಾಸ್ಕರ ಶಾಸ್ತ್ರಿಗಳು:-ಮಂಗಳಾ.. ಮಲ್ಲಿಗೆ ಹೂವು ಎಷ್ಟು ಬೇಕೆಂದು ಮೊದಲೇ ಹೇಳಬೇಕು .. ಬುಕ್ ಮಾಡಿಡಬೇಕು..ಈ ವಾರದಲ್ಲೇ ನಿರ್ಧರಿಸಿಬಿಡು.. ಮುಂದಿನವಾರ  ಹೋಗುವಾಗಲೇ ಹೇಳಿಬಿಡೋಣ..

ಮಂಗಳಾ:-ಸರಿ.. ಆಲೋಚಿಸಿ ಹೇಳುತ್ತೇನೆ.. ಮತ್ತೆ ಫ್ಯಾನ್ಸಿ ಐಟಂ ಗಳೆಲ್ಲ ಆಗಬೇಕು..ಅದನ್ನೂ ಮುಂದಿನವಾರವೇ ಸಮಯವಿದ್ದರೆ ಕೊಂಡುಕೊಳ್ಳೋಣ..

ಭಾಸ್ಕರ:-ಸರಿ ಸರಿ..ಆದಷ್ಟನ್ನು  ಖರೀದಿ ಮಾಡೋಣ...

ಹೀಗೆ ಮದುವೆಯ ತಯಾರಿಗಳು ಸಾಗುತ್ತಿದ್ದರೆ ಮೈತ್ರಿ ಓದಿನಲ್ಲಿ ತಲ್ಲೀನಳಾದಂತೆ ನಟಿಸಿ ಓದು, ಪ್ರೆಮಸಲ್ಲಾಪ ಎರಡನ್ನೂ ನಿಭಾಯಿಸುತ್ತಿದ್ದಳು.


             ‌‌******


         ಕಿಶನ್ ಗೆ ಆಫೀಸಿನಲ್ಲಿ ವಿಪರೀತ ಒತ್ತಡವಿರುತ್ತಿತ್ತು..ಒಮ್ಮೆ ಮೈತ್ರಿ ಯಲ್ಲಿ ಮಾತನಾಡಿದಾಗ ಮನಸು ರಿಲಾಕ್ಸ್ ಆಗುತ್ತಿತ್ತು..ಹಾಗೇ ಕರೆಮಾಡಿದ ಕಿಶನ್

"ಹಾಯ್ ಹಲೋ...ಮುದ್ಗೊಂಬೆ"

"ಏನು ಮದುವೆ ಹುಡುಗ ಫುಲ್ ಜೋಶ್.."

"ಜೋಶ್ ನೀನೇ ತುಂಬಬೇಕು ಈಗ...ನಂದೊಂದು ಪ್ರಶ್ನೆ ಹುಡುಗಿಯರು ಆಗಾಗ ಕನ್ನಡಿ ನಾಡೋದ್ಯಾಕೆ ಅಂತ.."

"ಇದೆಲ್ಲ ಪ್ರಶ್ನೆ ತಮ್ಮ ತಲೆಯೊಳಗೆ ಈಗ್ಯಾಕೆ ಬಂತು ಅಂತ.."

"ಆಫೀಸಿನಲ್ಲಿ ಕೆಲಸದ ಬ್ಯುಸಿ ಶೆಡ್ಯೂಲ್ ಮಧ್ಯೆ ಮಧ್ಯೆ ಕೂಡಾ ಕನ್ನಡಿ ನೋಡಿ ಮುಖ ಓರೆ ಮಾಡಿ, ಆಕಡೆ ಈಕಡೆ ಮಾಡಿ ನೋಡಿ ಅದೇನು ಖುಷಿಪಟ್ಟುಕೊಳ್ಳುತ್ತಾರೋ ..ಈ..ಹುಡುಗೀರು.. ಕೆಲಸವೆಲ್ಲ ನಮ್ಮಂತಹ ಪಾಪದ ಹುಡುಗರ ಮೇಲೆ ಹೊರೆ.."

"ಒಬ್ಬೊಬ್ಬರಿಗೆ ತಮ್ಮ ಸೌಂದರ್ಯ ವನ್ನು ಕಂಡಾಗ ಆತ್ಮವಿಶ್ವಾಸ ಮೂಡುತ್ತದೆ, ಇನ್ನು ಕೆಲವರಿಗೆ ಇನ್ನೊಬ್ಬರನ್ನು ಮೆಚ್ಚಿಸುವ ತವಕ, ಮತ್ತೆ ಕೆಲವರಿಗೆ ಮೂಡುತಿರುವ ಮೊಡವೆಯ ಗೊಡವೆ ...ಹೀಗೆ ಕನ್ನಡಿಯ ನೋಟಕ್ಕೆ ಹಲವು ಕಾರಣಗಳು.."

"ತಾವೂ ಹೀಗೆಯಾ.."

"ನಿಮಗೆ ಬೋರಾಗುವಷ್ಟು ನೋಡಲ್ಲ.. ಹಾಗಂತ ನೋಡೋದೇ ಇಲ್ಲ ಅಂತ ಅಂದುಕೋಬೇಡಿ..ನನಗೂ ಸೌಂದರ್ಯ ಪ್ರಜ್ಞೆ ಇದೆ.. ಎಲ್ಲರನ್ನೂ ಅಲ್ಲದಿದ್ದರೂ ಒಬ್ಬರನ್ನಾದರೂ ಮೆಚ್ಚಿಸಬೇಕೆಂಬ ಆಸೆಯಿದೆ.."

"ಒಬ್ಬರು ಮೆಚ್ಚಿ .. ಮನಬಿಚ್ಚಿ ನಿವೇದಿಸಿದ್ದಾಗಿದೆ..."

"ಹ್ಞೂಂ... ಆದರೆ ದಿನವೂ ಮೆಚ್ಚಿಸಿಕೊಳ್ಳಬೇಕೆಂಬ ಆಸೆಗೆ ಕನ್ನಡಿ ನೆರವಾಗುತ್ತೆ..."

"ಹಾಗಾದ್ರೆ ಮುದ್ಗೊಂಬೆ ಮನೆಗೆ ಬರುವ ಹೊತ್ತಿಗೆ ಮನೆಯಲ್ಲಿ ನಾಲ್ಕಾರು ಕನ್ನಡಿ ನೇತು ಹಾಕೋದೇ.. ಆಯ್ತಾ.."

"ಹಾಕಿ.. ಹಾಕಿ..ಅದೇ ಕನ್ನಡಿಯ ಮುಂದೆ ನಿಂತು ನೀವೂ ಸ್ಟೈಲಿಶ್ ಶೇವ್ ಮಾಡ್ಕೋಬೇಕು..."

"ಹ್ಹ ಹ್ಹ ಹ್ಹಾ.. ಏಕೆ ಈಗಿನ ಶೇವಿಂಗ್ ಚೆನ್ನಾಗಿ ಇಲ್ವಾ.."

"ಅದೆಲ್ಲ ಈಗ ಹೇಳಲ್ಲ... ಪೂರ್ಣ ನನ್ನವರಾದ ಮೇಲೆ ಹೇಳೋದು.."

"ಮುದ್ಗೊಂಬೆ.. ಯಾವತ್ತೂ ಹೇಳದೇ ಸತಾಯಿಸೋದೇ ಆಯ್ತು ನಿಂದು.."

"ಸತಾಯಾಸಿದರೇ ಪ್ರೀತಿ ಜಾಸ್ತಿ ಅಂತೆ.. ನಂಗೀಗ ಓದ್ಕೋಬೇಕು ಬಾಯ್..."

"ಬಾಯ್.."


                  ********


       ಕೇಶವ್ ಕೋಣೆಯಲ್ಲಿ ಕುಳಿತು ಉದ್ಯೋಗ, ಇಂಟರ್ವ್ಯೂ ಬಗ್ಗೆ ಯೋಚಿಸುತ್ತಿದ್ದ.ಕೆಳಗಿನಿಂದ ಮೆಟ್ಟಿಲು ಹತ್ತಿ ಸೌಜನ್ಯ ಬಂದಳೆಂದು ಆಕೆಯ ಘಲ್ಲೆನಿಸುವ ಗೆಜ್ಜೆ ಸಪ್ಪಳವೇ ಹೇಳಿತು..ಆದರೂ ತಿಳಿಯದಂತೆ ಸುಮ್ಮನಿದ್ದ..


          ಹಿಂದಿನಿಂದ ಬಂದವಳೇ ತನ್ನ ಕೈಗಳಿಂದ ಪತಿಯ ಹೆಗಲಿನ ಮೂಲಕ ಎದೆಯನ್ನು ಬಳಸಿ "ರೀ... " ಅಂದಳು ಮೆಲ್ಲನೆ.. ಕೇಶವ್ ಮೆತ್ತಗೆ ತನ್ನವಳ ಕೆನ್ನೆಗೆ ತನ್ನ ಗಡ್ಡವನ್ನು ಸವರಿದ.. ಮತ್ತಷ್ಟು ಕೇಶವನೆಡೆಗೆ ಬಾಗಿ ಕಿವಿಯಲ್ಲಿ "ರಾಜಾ...ಪರಾಟಾ ಮಾಡಿದ್ದೇನೆ ಬನ್ನಿ " ಎಂದಳು.

ಆತನ ಪ್ರೀತಿಯ ಪರಾಠಾ, ಕೊಡುತ್ತೇನೆ ಬನ್ನಿ ಎಂದು ಕರೆದವಳು ಮುದ್ದಿನ ಮಡದಿ ..ಮಡದಿಯ ಕೈಗಳನ್ನು ಸವರುತ್ತಾ ಮೆಲ್ಲನೆ ಎದ್ದ.ಅವಳನ್ನು ಹತ್ತಿರಕ್ಕೆಳೆದು ಸವಿಮುತ್ತೊಂದನ್ನು ನೀಡಬೇಕೆನ್ನುವಾಗ ನಗುನಗುತ್ತಾ ಕೊಸರಿಕೊಂಡು ಕೆಳಗೆ ಓಡಿದಳು.".ಎಲಾ..ಇವಳಾ...ಕೈಗೇ ಸಿಗಲಿಲ್ಲ..ಇರ್ಲಿ.. ಆಮೇಲೆ ಸಿಕ್ಕಾಗ ಈಗಿಂದು ಸೇರಿಸಿಯೇ ಕೊಡ್ತೀನಿ..." ಎನ್ನುತ್ತಾ ಕೈಕಾಲು ಮುಖ ತೊಳೆದು ಒರೆಸಿಕೊಂಡು ಕೆಳಗಡೆ ಹೋದ..

        ಘಮ್ಮೆಂದು ಪರಿಮಳ ಬರುತ್ತಿದೆ.ತಟ್ಟೆಯ ಮುಂದೆ ಕುಳಿತ.ಮಾವ ಅತ್ತೆ ಹೊರಗಡೆ ಹೋಗಿದ್ದಾರೆಂದು ತಿಳಿಯಿತು.. ಸುನಿತಾ ಕೂಡಾ ಇರಲಿಲ್ಲ...ಸುತ್ತ ಮುತ್ತ ಯಾರೂ ಇಲ್ಲ ಎಂದು ತಿಳಿದು ತನ್ನಾಸೆಯನ್ನು ಪೂರೈಸಿದ ಕೇಶವ್.."ಛೀ..ತುಂಟ...ಇನ್ನೂ ಸಾಕಾಗಿಲ್ವಾ..." ಎನ್ನುತ್ತಾ ನಕ್ಕು ಅವನಿಂದ ಬಿಡಿಸಿಕೊಳ್ಳುವಷ್ಟರಲ್ಲಿ ಸುಸ್ತಾಗಿದ್ದಳು..ಸಕ್ಕರೆ ಗೊಂಬೆ..


         ಪರಾಟ ತಿನ್ನುತ್ತಿದ್ದ ಪತಿಗೆ ಪ್ರೀತಿಯಿಂದ ಬಡಿಸಿದಳು ಸೌಜನ್ಯ.. ಸೌಜನ್ಯ ಆವತ್ತು ಅಡುಗೆಯೇ ಬರಲ್ಲ ಎಂದು ಹೇಳಿದ್ದ ನೆನಪು..ಆದರೂ ಟೇಸ್ಟಿ ಯಾಗಿ ಮಾಡಿದ್ದಾಳೆ..ಅಲ್ಲ ಅತ್ತೆ ಅಥವಾ ಸುನಿತಾ ಮಾಡಿರಬಹುದಾ... ಯಾವುದಕ್ಕೂ ಈಗ ಕೇಳೋದು ಬೇಡ... ಮತ್ತೆ ರೂಮಲ್ಲಿ ಸಿಕ್ಕಾಗ ಕೇಳುತ್ತೇನೆ.ಎಂದು ಸುಮ್ಮನಿದ್ದು ಹೊಟ್ಟೆ ತುಂಬಾ ತಿಂದ...ತಾನು ಕೈತೊಳೆದು ಬಂದು ಸೌಜನ್ಯ ಳಿಗೆ ಬಡಿಸಿದ.."ನಾನೇ ಹಾಕಿಕೊಳ್ಳುತ್ತೇನೆ" ಎಂದರೂ ಕೇಳದೆ ಅವಳ ಪಕ್ಕವೇ ಕುಳಿತು ಬಡಿಸಿದ..ಸಾಕೆಂದ ಮೇಲೂ ಒತ್ತಾಯ ಮಾಡಿ ಒಂದು ಬಡಿಸಿ  ತಿನ್ನು ಎಂದ ಪತಿಯ ಮಾತಿಗೆ ಆಗಲ್ಲವೆನ್ನದೆ ತಿಂದಳು ಸೌಜನ್ಯ..ಅವನ ಕೈಗಳು ಅವಳ ಹೆಗಲಮೇಲೆ ತುಂಟಾಟವಾಡುತ್ತಿದ್ದವು...


        ತಿಂಡಿ ತಿಂದು ಕ್ಲೀನ್ ಮಾಡಲೂ ಕೇಶವ್ ನೆರವಾದ..."ರೀ ನಾನೊಬ್ಬಳೇ ಮಾಡುತ್ತೇನೆ.ನೀವು ಹೋಗಿ ಮಲಗಿ "ಎಂದರೂ ಕೇಳದೆ ಜೊತೆಯಾದ.ಮಡದಿಯನ್ನು ಆಗಾಗ ಕಣ್ಣಲ್ಲೇ ಮುದ್ದಿಸುತ್ತಿದ್ದ ...ಪತಿಯ ಒಲವಿಗೆ ಸೋತಳು.. ಕೆಲಸವನ್ನು ಅಲ್ಲೇ ಮೊಟಕುಗೊಳಿಸಿ ಇಬ್ಬರೂ ರೂಮಿಗೆ ತೆರಳಿದರು..

 
        ಪತಿಯ ಕೈಹಿಡಿದು ಬಾಲ್ಕನಿಗೆ ಸಾಗಿ ತಂಗಾಳಿಗೆ ಮೈಯೊಡ್ಡಿ ನಿಂತು ಮೆಲುದನಿಯಲ್ಲಿ "ರೀ.." ಅಂದಳು..
ಅವಳ ಮಾತಿಗೆ ಪೂರ್ಣವಿರಾಮ ಹಾಕಿ ಅಧರಗಳ ಮಧುಹೀರತೊಡಗಿದ ಅವನು.ಬೀಸುವತಂಗಾಳಿಯಲ್ಲಿ ಅವಳ ಕೂದಲುಗಳು ಅವನತ್ತ ತಮ್ಮನ್ನೂ ಪ್ರೀತಿಸೆಂದು ಬರುತ್ತಿದ್ದವು.ಅವನ ಮುಂಗುರುಳು ಸೋಕಿ ಮತ್ತಷ್ಟು ಮತ್ತೇರಿಸಿಕೊಂಡಳು ಅವಳು..ಮೌನವೂ ಮಾತಿಗಿಂತ ಪ್ರಬಲವಾಗಿತ್ತು... ಅವನೆದೆಗೆ ಒರಗಿ ಕಣ್ಮುಚ್ಚಿಕೊಂಡಳು..ಆಲಿಂಗನದಲ್ಲಿ  ದೇಹದ ಕಣಕಣಗಳೆಲ್ಲ ಭಾಗಿಯಾದವು..ಎರಡು ಜೀವ ಒಂದೇ ಭಾವವಾಗಿ ಗಾಳಿಗೆ ಮಧ್ಯೆ ಪ್ರವೇಶವಿಲ್ಲವೆಂದು ಸಾರಿದವು..ಬಾಲ್ಕನಿಯಿಂದ ಒಳಗಡಿಯಿಟ್ಟ ಮಧುಹೀರಿದ ದುಂಬಿಗಳು ಕತ್ತಲಲ್ಲಿ ಬಾಗಿಲೆಳೆದುಕೊಂಡು  ಒಲವಿನ ಹೂವಹಾಸಿಗೆಗೊರಗಿದರು...


ಮುಂದುವರಿಯುವುದು..

✍️.. ಅನಿತಾ ಜಿ.ಕೆ.ಭಟ್.
16-04-2020.

ಮುಂದಿನ ಭಾಗ..ಶನಿವಾರ..


Tuesday, 14 April 2020

ಜೀವನ ಮೈತ್ರಿ ಭಾಗ ೬೨(62)



ಜೀವನ ಮೈತ್ರಿ -ಭಾಗ ೬೨


     ಬಾರಂತಡ್ಕದ ಮನೆಯಲ್ಲಿ ನೀರವ ಮೌನ ಆವರಿಸಿತ್ತು .ಮದುವೆಗೆಂದು ಕಳೆಗಟ್ಟಿದ ಬಂಗಾರಣ್ಣನ ಮನೆಯ ಅಂಗಳ ಇಂದು ಕಳಾಹೀನವಾಗಿತ್ತು. ಇದನ್ನೆಲ್ಲಾ ನೋಡುತ್ತಿದ್ದ ಕೆಲಸದಾಳುಗಳು..." ಛೇ...!! ದನಿಗಳ ಮನೆಯಲ್ಲಿ ಹೀಗೆ ಆಗಬಾರದಿತ್ತು. .. ಇನ್ನು ಯಾವಾಗ ಹೊಸ ಅಮ್ಮ ಮನೆಯ ಹೊಸ್ತಿಲು ತುಳಿಯುತ್ತಾರೆ...? ಇನ್ನು ಕೇಶವ ದನಿ ಮನೆಗೆ ಬರುತ್ತಾರೋ ಇಲ್ಲವೋ..?ಸುಮಾ  ಅಮ್ಮನ ಮುಖವನ್ನು ನೋಡಲಾಗುವುದಿಲ್ಲ ..ದನಿಗಳು ಏನೋ ದರ್ಪದಿಂದ ಅವಡುಗಚ್ಚಿ ಸಹಿಸಿಕೊಂಡಿದ್ದಾರೆ. " ಎಂದೆಲ್ಲಾ ಮಾತನಾಡುತ್ತಿದ್ದರು ..ಚಪ್ಪರದ ವಸ್ತುಗಳನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿದರು.. ಸಿಹಿ ತಿನಿಸು ಗಳು ಇದ್ದರೂ ಸಿಹಿ ತಿನಿಸುಗಳನ್ನು ತಿನ್ನುವ ಮನಸ್ಸಿಲ್ಲ ಸುಮಾಗೆ ..ಮಗ ಬಹಳ ಇಷ್ಟ ಪಡುತ್ತಿದ್ದ ಸಿಹಿತಿನಿಸುಗಳನ್ನು. ಆದರೆ ಇತ್ತೀಚೆಗೆ ಡಯಟ್  ಎಂದು ಏನೂ ಕೊಬ್ಬಿನಂಶ ಕೊಡುತ್ತಿರಲಿಲ್ಲ.ಇನ್ನಾದರೂ ಕೊಡೋಣವೆಂದು ಅವನೆಲ್ಲಿದ್ದಾನೆ ಎಂದು ಕಣ್ತುಂಬಿಕೊಳ್ಳುತ್ತಿದ್ದರು.ಗಂಡ-ಹೆಂಡತಿಯ ಮಧ್ಯೆ ಮಾತು ವಿರಳವಾಗಿತ್ತು .. ಹೊತ್ತು ಹೊತ್ತಿಗೆ ಊಟಕ್ಕೆ ಬರುತ್ತಿದ್ದ ಬಂಗಾರಣ್ಣನಿಗೆ ಬಡಿಸುವುದು ಮಾತ್ರ ಸುಮಾಳ ಕೆಲಸವಾಗಿತ್ತು.

       ಏನೋ ಗಹನವಾಗಿ ಯೋಚಿಸುತ್ತಿದ್ದಂತೆ ಒಳಬಂದ ಬಂಗಾರಣ್ಣ " ಸುಮಾ... ಇಲ್ಲಿ  ಕಾರ್ಯಕ್ರಮ ಮುಗಿಯುವ ಮುನ್ನವೇ  ಬ್ರೋಕರ್ ಶೇಷಣ್ಣ ನಿಗೆ ಕಮಿಷನ್ ದುಡ್ಡು ಪಡೆಯಲು ಬಹಳ ಆತುರವಿತ್ತು ..ಆ ಆತುರದ ಹಿಂದಿನ ಸತ್ಯ ನಂತರವೇ ಬಯಲಾದದ್ದು.. ಅವನ ಇಂತಹ ಕೆಲಸದಿಂದ ನಮ್ಮ ಮನೆಯ ಕಾರ್ಯಕ್ರಮ ಅರ್ಧದಲ್ಲಿ ನಿಂತಿತು.ಮಗನಿಗೆ ಬುದ್ಧಿ ಹೇಳಿದೆ... ಅಂತಹ ಯುವತಿ ಬೇಡ ಎಂದು... ಕೇಳಿದನಾ..ಇಲ್ಲವಲ್ಲ...!! ಆ ಬಷೀರನ ಪತ್ನಿಯ ಹಿಂದೆಯೇ ಹೋದ... ಬೇಕಿತ್ತಾ ನಮಗೆ ಬ್ರೋಕರ್ ನಲ್ಲಿ ಹುಡುಗಿ ಹುಡುಕಲು ಹೇಳುವುದು...??"

         ಸುಮಾ ಮೌನವಾಗಿ ಕುಳಿತು ಏನೋ ಯೋಚಿಸುತ್ತಿದ್ದರು... ಅತ್ತು ಅತ್ತು ಕಣ್ಣೀರು ಕೂಡಾ ಬತ್ತಿ ಹೋಗಿತ್ತು..." ನೋಡು ಸುಮಾ ನಾನು ಈಗ ಹೊರಡುತ್ತೇನೆ.. ಶೇಷಣ್ಣನ ಮನೆಗೊಮ್ಮೆ ಹೋಗಿ ಚೆನ್ನಾಗಿ ಬೆಂಡೆತ್ತಿ ಬರಬೇಕು. rs.50000 ಹಾಳು ...ಅವನು ಮಾಡಿದ ಕೆಲಸವು ಬರೀ ದಂಡದ್ದು... ಅವನು ಈ ಜನ್ಮದಲ್ಲಿ ಬರ್ಖತ್ತಾಗಲಾರ..." ಎಂದು ಶೇಷಣ್ಣನ ಮೇಲೆ ಕೋಪವನ್ನು ತೋರಿಸಿದರು. ಹೀಗೆ ಹೊರಟ ಗಂಡನನ್ನ ತಡೆಯಲು ಹೋಗಲಿಲ್ಲ ಸುಮಾ..




                  ********

           ಶೇಷಣ್ಣ ದಿನವೂ ಚಿನ್ನದ ರೇಟು ಗಮನಿಸುತ್ತಿದ್ದ. ಇಂದು ಮಡದಿ ಸುಬ್ಬಿಯನ್ನು ಕರೆದು"ಏ... ಸುಬ್ಬಿ.. ನೋಡಿಲ್ಲಿ...ಇವತ್ತು ಚಿನ್ನದ ರೇಟು ಕೆಳಗಿಳಿದಿದೆ... ಇವತ್ತು ಮುಳಿಯಕ್ಕೆ ಹೋಗೋಣ  ಎರಡು ಚಿನ್ನದ ಬಳೆ ಕೊಳ್ಳೋಣ." ಎಂದು ಹೇಳಿದ್ದೇ ತಡಾ ಹೊರಟು ರೆಡಿಯಾಗಿದ್ದಾಳೆ.

         ಇಬ್ಬರೂ ಹೊರಟು ಮುಳಿಯ ಜ್ಯುವೆಲ್ಲರ್ಸ್ ಗೆ ತೆರಳಿದರು .ಸುಬ್ಬಿಯ ಮುಖದಲ್ಲಿ ಸಂಭ್ರಮ ಮನೆಮಾಡಿತ್ತು. ಬಹಳ ವರ್ಷಗಳ ಹಿಂದಿನ ಅವಳ ಬೇಡಿಕೆ ಇಂದು ಈಡೇರುವ ಸಮಯವಾಗಿತ್ತು. ತನಗೆ ಒಪ್ಪುವ ಪ್ಯಾಟರ್ನ್ ಅನ್ನು ಆಯ್ಕೆ ಮಾಡಿ ಅದನ್ನು ಕೊಂಡುಕೊಂಡರು.ಒಂದಿಷ್ಟು ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡು ಮನೆಗೆ ಹಿಂದಿರುಗಿದರು.ಮನೆಗೆ ಬಂದೊಡನೆ
 "ಸುಬ್ಬಿ.. ಹಾಕಿ ನೋಡೆ... ಬಳೆ ಹೇಗೆ ಕಾಣಿಸುತ್ತದೆಯೆಂದು.."ಎಂದು ಶೇಷಣ್ಣ ಹೇಳಿದಾಗ ಬೇಗ ಕೈಗೆ ಬಳೆ ಹಾಕಿಕೊಂಡಳು. ಇಬ್ಬರಿಗೂ ಬಹಳ ಸಂತಸವಾಯಿತು. "ಇಷ್ಟು ವರ್ಷದಿಂದ ಕೊಡಿಸಲಾಗದ್ದನ್ನು ಇವತ್ತು ಬಂಗಾರಣ್ಣನಿಂದ ಕೊಡಿಸುವಂತೆ ಆಯಿತು.."ಎಂದು ಮಡದಿಯ ಸಂತಸಭರಿತ ಮುಖವನ್ನು ನೋಡುತ್ತಾ ಹೇಳಿದನು ಶೇಷಣ್ಣ.


         ಹೋಗಿ ಬಂದ ಬಟ್ಟೆಯನ್ನು ಕೂಡ ಬದಲಾಯಿಸಿ ಆಗಿರಲಿಲ್ಲ ..ಆಗಲೇ ಮನೆಯ ಅಂಗಳದಲ್ಲಿ ಬಂಗಾರಣ್ಣನ ಜೀಪು ಬಂದು ನಿಂತಿತ್ತು. ಇದನ್ನು ಕಂಡಾಗ ತನಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ ..ಒಂದು ಕ್ಷಣ ಆಲೋಚಿಸಿದ ಶೇಷಣ್ಣ ಸುಬ್ಬಿಯ ಕಿವಿಯಲ್ಲಿ "ನಾನಿಲ್ಲ ಎಂದು ಹೇಳು.." ಹೇಳುತ್ತಾ ಅಲ್ಲಿಂದ ಪಲಾಯನ ಮಾಡಿದ.ಬಂಗಾರಣ್ಣ ಸಿಟ್ಟಿನಿಂದಲೇ ಜೀಪಿನಿಂದ ಇಳಿದಂತಿತ್ತು ..ಸೀದಾ ಜಗಲಿಗೆ ಬಂದವರು "ಶೇಷಣ್ಣ...."ಎಂದು ಕರೆದರು .ಸುಬ್ಬಿ ಅಷ್ಟು ಬೇಗನೆ ಹೊರಗೆ ಹೋಗಲಿಲ್ಲ. ನಿಧಾನವಾಗಿ ಹಾಕಿಕೊಂಡಿದ್ದ ಬಳೆಯನ್ನು ತೆಗೆದಿಟ್ಟು ಹೊರಗೆ ಬಂದಳು. ಬಂಗಾರಣ್ಣನ ಮುಖವನ್ನು ಕಂಡು ಅವಳ ಕೈ ಕಾಲುಗಳು ನಡುಗಲು  ಆರಂಭವಾದವು.." ಎಲ್ಲಿ ಶೇಷಣ್ಣ "ಎಂದು ಅಬ್ಬರಿಸಿದ ಬಂಗಾರಣ್ಣ..

"ಅವರು ಯಾವುದೋ ಕಾರ್ಯಕ್ರಮದ ನಿಮಿತ್ತ ದೂರದೂರಿಗೆ ತೆರಳಿದ್ದಾರೆ .ಬರುವುದು ಇನ್ನೆರಡು ದಿನವಾಗಬಹುದು. ಏನಾದರೂ ಹೇಳುವುದಿತ್ತಾ..??"

ಎಂದಾಗಲೇ ಬಂಗಾರಣ್ಣನ ಪಿತ್ತ ನೆತ್ತಿಗೇರಿತು.. "ಏನು ಹೇಳುವುದು?? ಮಾಡಬಾರದ್ದೆಲ್ಲ ಮಾಡಿಯಾಯ್ತು.. ನಮ್ಮ ಮನೆ ಹಾಳು ಮಾಡಿದ ಮೇಲೆ ಇನ್ನೇನು ಹೇಳಲಿ...  ಈಗ ಹೇಳಲು ಬಂದಿಲ್ಲ. ಕೇಳಲು ಬಂದಿದ್ದೇನೆ ..ಯಾಕೆ ಹೀಗೆ ಮಾಡಿದ ಶೇಷಣ್ಣ..?"

"ಏನು.... ಏನಾಯ್ತು..??" ಎಂದು ಏನೂ ತಿಳಿಯದವಳಂತೆ ಸುಬ್ಬಿ ನಾಟಕವಾಡಿದಳು.

"ಏನಾಯಿತೆಂದು ನಿನಗೆ ಪುನಃ ಹೇಳಬೇಕಾ..? ಊರಲ್ಲಿ ನಾಲಿಗೆಗೊಂದರಂತೆ ಸುದ್ದಿ ಹಬ್ಬಿದೆ.. ನಿನಗೊಬ್ಬಳಿಗೆ ಮಾತ್ರ ಗೊತ್ತಿಲ್ಲವೆ...? ಸುಖಾಸುಮ್ಮನೆ ಹೊಟ್ಟೆ ಉರಿಸುವ ಪ್ರಶ್ನೆಗಳು.. ಇಷ್ಟೇ ನಿಮ್ಮ ಬುದ್ಧಿ ..ಈಗ ತಿಳಿಯಿತು ನನಗೆ.. ಸೋತಮೇಲೆ ..".ಎಂದ ಬಂಗಾರಣ್ಣನ  ಮಾತಿನಲ್ಲಿ ಹತಾಶೆಯ ಭಾವ ತುಂಬಿತ್ತು.

"ಬಾಯಾರಿಕೆ ಬೇಕಾ..?"ಎಂದು ಕೇಳಿದಳು .

"ನಮಗೆ ಉಪ್ಪುನೀರು ಕುಡಿಸಿ  ಅವನ ಬಾಯಾರಿಕೆ ತಣಿದಿರಬೇಕಲ್ಲ... ಇನ್ನು ನನ್ನ ಮುಖ ನೋಡುವುದು ಬೇಡ...ನನ್ನ ಜೀವಮಾನದಲ್ಲಿ ಇಷ್ಟು ಅವಮಾನ ನಾನು ಅನುಭವಿಸಿಲ್ಲ ..ಬಾರಂತಡ್ಕದ ಕುಟುಂಬದಲ್ಲಿ ವಧೂಗೃಹಪ್ರವೇಶ ಸಮಾರಂಭ ಅರ್ಧದಲ್ಲೇ ನಿಂತ ಉದಾಹರಣೆಗಳು ಇಲ್ಲ. ನಮ್ಮ ಮನೆತನದ ಗೌರವವನ್ನು ಶೇಷಣ್ಣ ಹಾಳು ಮಾಡಿಬಿಟ್ಟ.ಇಂದು ನನ್ನ ಸಂಕಟ ಮುಂದೊಂದು ದಿನ ನಿಮಗೂ ಬರಬಹುದು ಆಗ ಅರ್ಥವಾದೀತು "ಎನ್ನುತ್ತಾ ಬಿರಬಿರನೆ ಹಿಂದಿರುಗಿ ನೋಡದೆ ಹೊರಟು ಹೋದ.

ಬಂಗಾರಣ್ಣ ಹೋದದ್ದು ತಿಳಿದರೂ ಒಂದರ್ಧ ಗಂಟೆ ಬಿಟ್ಟೇ ಶೇಷಣ್ಣ ಮನೆಯೊಳಗೆ ಪ್ರವೇಶಿಸಿದ..

             *******


         ಗಂಡ ಮನೆಯಲ್ಲಿ ಇಲ್ಲದ ಹೊತ್ತು.. ಸುಮಾಗೆ ಒಂಟಿತನ ಕಾಡುತ್ತಿತ್ತು ..ಮಗನ ನೆನಪು ದುಃಖದೊಂದಿಗೆ ಕಣ್ಣೀರಾಗಿ ಹರಿದು ಹೋಗುತ್ತಿತ್ತು... ತಡೆಯಲಾರದೆ ಮಗನಿಗೆ ಫೋನ್ ಮಾಡಿದಳು. ಅಮ್ಮನ ಕರೆಗಾಗಿ ಚಾತಕ ಪಕ್ಷಿಯಂತೆ ಕಾದುಕುಳಿತ ಕೇಶವ ಕೂಡಲೇ ಫೋನ್ ಎತ್ತಿದ " ಅಮ್ಮ .."ಎಂದ ಅವನ ದನಿಯಲ್ಲಿ ಸೋತ ಛಾಯೆಯಿತ್ತು.ಕಣ್ಣು ತುಂಬಿತ್ತು .."ಮಗನೇ.." ಎಂದ ಸುಮಾಳಿಗೆ  ಮುಂದೆ ಮಾತನಾಡಲು ನಾಲಿಗೆ ಬರಲಿಲ್ಲ. ಒಂದೆರಡು ನಿಮಿಷ ಸಾವರಿಸಿಕೊಂಡು ನಿಧಾನವಾಗಿ ಅಮ್ಮ ಮಗ ಇಬ್ಬರೂ ಹರಟಿದರು. ಕೇಶವ ಮಾತನಾಡುತ್ತಾ ತನಗೆ ಸರ್ಟಿಫಿಕೇಟ್ಗಳನ್ನು ಕಳುಹಿಸಿಕೊಡಲು ಕೋರಿದನು ..ಸುಮಾ ಅದಕ್ಕೆ ಒಪ್ಪಿದರು. ಸೊಸೆಯ ಬಗ್ಗೆಯೂ ವಿಚಾರಿಸಿಕೊಂಡರು.

       ತಾನು ತನ್ನ ಗೆಳೆಯನ ಕಂಪನಿಗೆ ಕೆಲಸದ ಸಂದರ್ಶನಕ್ಕೆ ಹೋಗುತ್ತಿದ್ದೇನೆ ಎಂದು ಕೇಶವ ಅಮ್ಮನಲ್ಲಿ ಹೇಳಿದಾಗ..."ಶುಭವಾಗಲಿ ಮಗನೇ .."ಎಂದು ಹಾರೈಸಿದರು.. ಅಪ್ಪನನ್ನು ಕೇಳಿದ್ದಕ್ಕೆ "ಅಪ್ಪ ಚೆನ್ನಾಗಿದ್ದಾರೆ "ಎಂದು ನಿರ್ಲಿಪ್ತವಾಗಿ ನುಡಿದರು ಸುಮಾ.


      "ಸೌಜನ್ಯಳನ್ನು ಚೆನ್ನಾಗಿ ನೋಡಿಕೋ.. ನಾನು ಇಲ್ಲಿ ನೋಯುತ್ತಿದ್ದೇನೆ... ಆದರೆ  ಅವಳನ್ನು ನೋಯಿಸಬೇಡ  ..ಪ್ರತಿದಿನವೂ ಸಂಶಯದಲ್ಲಿ ಸತಾಯಿಸಬೇಡ. ಯಾರು ಏನೇ ತಪ್ಪು ಮಾಡಿದರೂ ,ಎಡವಿದರೂ ಅದಕ್ಕೆ ಕ್ಷಮೆ ಎಂಬುದು ಇದೆ .. ತಪ್ಪನ್ನು ಅರಿತು ಪಶ್ಚಾತ್ತಾಪ ಪಟ್ಟರೆ ಅದಕ್ಕಿಂತ ದೊಡ್ಡ ವಿಷಯ ಏನಿದೆ..ಯಾರು ಕೂಡ ತಪ್ಪು ಮಾಡದವರು ಇಲ್ಲ .ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ತಪ್ಪುಮಾಡಿರುತ್ತಾರೆ... ಅದು ಎಲ್ಲಿ? ಏನು? ಹೇಗೆ ?ಎಂಬುದರ ಮೇಲೆ ಅದರ ಗಂಭೀರತೆ ನಿಂತಿದೆ. ಇನ್ನು ಮುಂದೆಯಾದರೂ ಪರಸ್ಪರ ವಿಶ್ವಾಸದಿಂದ ನಡೆಯಿರಿ ..ಅವಳಿಂದ ಪರಿಶುದ್ಧ ಪ್ರೀತಿ ನಿನಗೆ ಸಿಗಲಿ ..ನೀನು ಕೂಡ ಅಷ್ಟೇ ಅವಳಿಗೆ ನಿಷ್ಠನಾಗಿರಬೇಕು ..ಹಿಂದಿನಂತೆ ಎಡವದಂತೆ ನಿಮಗೆ ನೀವೇ ಬೇಲಿ ಹಾಕಿಕೊಳ್ಳಬೇಕು..." ಎಂದು ಹೇಳುವುದು ಮರೆಯಲಿಲ್ಲ...

ಅಮ್ಮನೊಂದಿಗೆ ಮನಬಿಚ್ಚಿ ಮಾತನಾಡಿದ ಕೇಶವ ನ ಮನಸ್ಸು ಬಹಳ ಹಗುರವಾಗಿತ್ತು.. ಅದನ್ನು ಕಂಡ ಸೌಜನ್ಯ... "ಅಮ್ಮ ಮಗನ ಸಂಭಾಷಣೆ ಬಹಳ ಆಪ್ತವಾದಂತಿತ್ತು.."

"ಹೌದು ..ಅಮ್ಮ ಮಾತನಾಡಿದರೆ ಹಾಗೇನೇ.. ಯಾವಾಗಲೂ ಸೌಮ್ಯಸ್ವಭಾವ ..ಒಳ್ಳೆಯದನ್ನೇ ಹೇಳುತ್ತಾರೆ .. ಕೆಟ್ಟದನ್ನು ಅಪ್ಪಿತಪ್ಪಿಯೂ ಹೇಳಲಾರರು ..ದಾರಿ ತಪ್ಪದಂತೆ ಆಗಾಗ ಎಚ್ಚರಿಸುವುದು ಅವರ ಕರ್ತವ್ಯ"

"ಹೌದು ....ರೀ.. ನನಗೂ ಅಮ್ಮ ಅಪ್ಪ ಅಂದೆಲ್ಲ ಬುದ್ಧಿ ಹೇಳುತ್ತಿದ್ದಾಗ ಬಹಳ ಕಿರಿಕಿರಿಯಾಗುತ್ತಿತ್ತು.. ಆದರೆ ಒಮ್ಮೆ ಜೀವನದಲ್ಲಿ ಸೋತಾಗ ನಿಜವಾಗಲೂ ಅನಿಸಿತು ಅವರ ಮಾತನ್ನು ಕೇಳುತ್ತಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು."

"ಸೌಜನ್ಯ... ಹಿರಿಯರು ನಮ್ಮ ಒಳ್ಳೆಯದಕ್ಕೆ ಹೇಳುತ್ತಾರೆ ..ಆದರೆ ನಾವು ಕಿವಿಗೆ ಹಾಕಿಕೊಳ್ಳುವುದಿಲ್ಲ ಅಷ್ಟೇ.."ಎಂದು ಮಾತನಾಡುತ್ತಿದ್ದಾಗಲೇ ಮಾತು ಬೇರೆಡೆಗೆ ಹೊರಳಿಸಿ


"ರಾಯರಿಗೆ ಈಗ ಬಿಸಿಬಿಸಿ ಕಾಫಿ ತರಲೇ..?"ಎಂದು ಕೇಳುತ್ತಾ ನಸುನಕ್ಕಳು.

"ಬೇಡ.. ತಂಪಾಗಿ ನೀನೇ  ಬಳಿ ಇರುವಾಗ ಬಿಸಿ ಕಾಫಿ ಯಾಕೆ..?"

ಎನ್ನುತ್ತಾ ಸೌಜನ್ಯಳನ್ನು ಹತ್ತಿರಕ್ಕೆಳೆದುಕೊಂಡ.. ಅವನ ಕೈಗಳು ಅವಳ ಹೆಗಲ ಮೇಲಿದ್ದವು.. ಹತ್ತಿರದಿಂದ ಅವಳ ಮುಖವನ್ನೇ ದಿಟ್ಟಿಸುತ್ತ "ನಾಳೆ ಒಂದು ಇಂಟರ್ವ್ಯೂ ಗೆ ಹೋಗಿ ಬರುತ್ತೇನೆ.."

"ಆಗಲಿ ..ಆಲ್ ದಿ ಬೆಸ್ಟ್ ರಾಜ.. ಎಲ್ಲಿ ಯಾವ ಜಾಬ್ ಎಂದು ಕೇಳಬಹುದೇ?"

"ನನ್ನ ಗೆಳೆಯನ ಕಂಪನಿಯಲ್ಲಿ.. ಇವತ್ತು ಹೊರಗಡೆ ಹೋಗಿದ್ದಾಗ ನನ್ನ ಗೆಳೆಯ ಸಿಕ್ಕಿದ.. ಇಲ್ಲಿಂದ ಸುಮಾರು 15 ಕಿಲೋಮೀಟರ್ ದೂರವಾಗಬಹುದು"

"ನಾನು ಕೂಡ ಉದ್ಯೋಗ ಮಾಡಬೇಕೆಂಬ ಆಸೆಯಲ್ಲಿದ್ದೇನೆ... ಇದುವರೆಗೆ ಏನೇನೋ ತೊಂದರೆಗಳು.. ಆದರೆ ಇನ್ನು ಮೇಲೆ ಆ ತೊಂದರೆಗಳೆಲ್ಲ ಇಲ್ಲ ..ನನಗೂ ಸರಿ ಹೊಂದುವ ಜಾಬ್ ಎಲ್ಲಾದರೂ ಇದ್ದರೆ ಹೇಳಿ.."

"ನೋಡೋಣ ..ನಿಧಾನವಾಗಿ ..ಈಗ ನಾನು ನಾಳೆ ಹೋಗಿ ಬರುತ್ತೇನೆ.."

ಪತಿಯ ಮಾತಿಗೆ ಒಪ್ಪಿದ ಸೌಜನ್ಯ ಅವನ ಕೈಮೇಲೆ ಕೈ ಇಟ್ಟು ಒತ್ತಿಕೊಂಡಳು. ಇಬ್ಬರ ತುಂಟಾಟವನ್ನು ನೋಡುತ್ತಾ ಕಿಟಿಕಿಯಾಚೆ ಮರದಲ್ಲಿ ಹಕ್ಕಿಗಳು ಚಿಲಿಪಿಲಿಗೈಯುತ್ತಿದ್ದವು.

ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
14-04-2020.

ಮುಂದಿನ ಭಾಗ... ಗುರುವಾರ..




Sunday, 12 April 2020

ಗುಜ್ಜೆ/ಎಳೆಹಲಸಿನ ಕಾಯಿ ಪಲ್ಯ...😋😋😋😋😋👌👌👌👌👌

ಗುಜ್ಜೆ/ಎಳೆಹಲಸಿನ ಕಾಯಿ ಪಲ್ಯ



    ಬೇಸಿಗೆ ಬಂದರೆ ಸಾಕು ಹಲಸಿನ ಕಾಯಿಯು ನಮ್ಮ ಅಡುಗೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳುತ್ತದೆ.ಎಳೆ ಹಲಸಿನ ಕಾಯಿಯಿಂದ ಹಿಡಿದು ಹಣ್ಣಿನವರೆಗೂ ನಾನಾ ಪಾಕ ವೈವಿಧ್ಯಗಳನ್ನು ತಯಾರು ಮಾಡಬಹುದು.ಬಲಿತ ಹಲಸಿನ ಕಾಯಿ ಮತ್ತು ಹಣ್ಣಿಗಿಂತ ಎಳೆಯ ಹಲಸಿನ ಕಾಯಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ಹಿರಿಯರು.ಕಾರಣ ಇದರಲ್ಲಿ ವಾಯುವಿನ ಅಂಶ ಕಡಿಮೆಯಿದ್ದು ಕನರು/ಒಗರು ರುಚಿಯನ್ನು ಹೊಂದಿರುತ್ತದೆ.


   ಗುಜ್ಜೆಯಿಂದ ತಯಾರಿಸಬಹುದಾದ ರುಚಿಕರವಾದ ಪಲ್ಯವನ್ನು ಹೇಗೆ ಮಾಡುವುದು ಎಂದು ನೋಡೋಣ..

ಬೇಕಾದ ಸಾಮಗ್ರಿಗಳು...

ಎರಡು ಕಪ್ ಹಲಸಿನ ಹೋಳುಗಳು
ನೆನೆಸಿದ ಕಡಲೆಕಾಳು
ಕಾಲು ಕಪ್ ತೆಂಗಿನ ತುರಿ
ಮೆಣಸಿನ ಪುಡಿ -2 ಚಮಚ
ಅರಿಶಿನ ಪುಡಿ- ಕಾಲು ಚಮಚ
ಉಪ್ಪು-2 ಚಮಚ
ಬೆಲ್ಲ-2 ಚಮಚ
ನೀರು
ಒಗ್ಗರಣೆಯ ಸಾಮಗ್ರಿಗಳು


ಮಾಡುವ ವಿಧಾನ...

       ಕಡಲೆ ಕಾಳನ್ನು ಏಳೆಂಟು ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು.ಕುಕ್ಕರಿನಲ್ಲಿ ಮೂರು ಸೀಟಿ ಕೂಗಿಸಿ.ಗುಜ್ಜೆಯನ್ನು ತುಂಡುಗಳಾಗಿ ಮಾಡಿ ನೀರಿನಲ್ಲಿ ಹಾಕಿಡಿ.ಸ್ವಲ್ಪ ಹೊತ್ತಿನ ಬಳಿಕ ಕುಕ್ಕರಿನಲ್ಲಿ ಸ್ವಲ್ಪ ನೀರು ಹಾಕಿ ಮೂರು ಸೀಟಿ ಕೂಗಿಸಿ.ಪ್ರೆಶರ್ ಹೋದ ಬಳಿಕ ಗುಜ್ಜೆಯ ತುಂಡುಗಳನ್ನು ಪುಡಿಮಾಡಿಕೊಳ್ಳಿ.

        ಬಾಣಲೆಗೆ ತೆಂಗಿನೆಣ್ಣೆ ಹಾಕಿ ಅದರಲ್ಲಿ ಹುಡಿ ಮಾಡಿದ ಗುಜ್ಜೆ,ಬೇಯಿಸಿದ ಕಡಲೆಕಾಳು, ಮೆಣಸಿನ ಪುಡಿ,ಅರಶಿನ ಪುಡಿ, ಉಪ್ಪು,ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ.ಕೊನೆಯಲ್ಲಿ ತೆಂಗಿನಕಾಯಿ ತುರಿ ಹಾಕಿ ಮಗುಚಿ ಕೆಳಗಿಳಿಸಿ.


       ನಂತರ  ಒಗ್ಗರಣೆಗೆ ಎಣ್ಣೆ ಧಾರಾಳವಾಗಿ ಬಳಸಿ.ಉಳಿದ ಪಲ್ಯಗಳಿಗಿಂತ ಇದಕ್ಕೆ ಎಣ್ಣೆ ಜಾಸ್ತಿ ಇದ್ದರೇ ರುಚಿ.ಸಾಸಿವೆ, ಉದ್ದಿನಬೇಳೆ,ಕೆಂಪುಮೆಣಸಿನ ಕಾಯಿ ಹಾಕಿ ಒಗ್ಗರಣೆ ಚಟಪಟ ಸಿಡಿಸಿ ,ಬಾಣಲೆಯಲ್ಲಿರುವ ಪಲ್ಯದ ಮಧ್ಯದಲ್ಲಿ ಸ್ವಲ್ಪ ಗುಂಡಿಮಾಡಿ ಕರಿಬೇವಿನ ಸೊಪ್ಪು ಹಾಕಿ.. ಒಗ್ಗರಣೆಯನ್ನು ಹಾಕಿರಿ.ಅದರ ಮೇಲೆ ಪಲ್ಯವನ್ನು ಮುಚ್ಚಿ.ಬಾಣಲೆಗೆ ಮುಚ್ಚಳ ಮುಚ್ಚಿ ಹತ್ತು ನಿಮಿಷ ಹಾಗೇ ಬಿಡಿ.ನಂತರ ಎಲ್ಲವನ್ನೂ ಮಿಶ್ರಮಾಡಿ ..ಬಿಸಿ ಬಿಸಿ ಅನ್ನದ ಜೊತೆ ಸೇವಿಸಿ...ಸೂಪರಾಗಿರುತ್ತೆ..👌👌👌👌😋😋😋😋

✍️... ಅನಿತಾ ಜಿ.ಕೆ.ಭಟ್.
12-04-2020.

ಜೀವನ ಮೈತ್ರಿ ಭಾಗ ೬೧(61)



 ಜೀವನ ಮೈತ್ರಿ ಭಾಗ ೬೧

   
       ಸೌಜನ್ಯಳ ಕಂಗಳ ಸೆಳೆತಕ್ಕೆ ಮಾರುಹೋಗಿದ್ದ ಕೇಶವ್ ಮೆದುವಾಗಿ ಕೈಗಳಿಂದ ಆಕೆಯನ್ನು ಬಳಸಿ ಪ್ರೀತಿತೋರಿದ..ಪತಿಯ ಒಲವಿಗೆ ತನ್ನ  ನಲ್ಮೆಯನ್ನೂ ಬೆರೆಸಿದಳು..ಇಬ್ಬರೂ ಅಂಟಿಕೊಂಡೇ ಸೋಫಾದಲ್ಲಿ ಕುಳಿತು ಪರಸ್ಪರ ಕೀಟಲೆ ತುಂಟಾಟದಲ್ಲಿ ತೊಡಗಿದರು..ಆಯಾಸದಿಂದ ಸೌಜನ್ಯಳಿಗೆ ಆಕಳಿಕೆ ಬರುತ್ತಿತ್ತು..ಅದನ್ನರಿತ ಕೇಶವ್ "ನೀನು ಹೋಗಿ ರೆಸ್ಟ್ ಮಾಡು.ನಾನು ಹೊರಗೆ ಸ್ವಲ್ಪ ಅಡ್ಡಾಡಿ ಬರುತ್ತೇನೆ "ಎಂದನು.ಕೇಶವನನ್ನು ಒಂದು ಕ್ಷಣ ಅಗಲಿರಲೂ ಬಯಸದ ಸೌಜನ್ಯ "ನೀವೂ ಬನ್ನಿ "ಎಂಬಂತೆ ನೋಟ ಬೀರಿದರೆ ಕೇಶವ್ ಗೆ ಹುಚ್ಚು ಹುಡುಗಿ..!! ಅನಿಸಿತು.
ನಿದ್ದೆ ತೂಗುತ್ತಿದ್ದರೂ ಬಯಕೆಗಳಿಗೆ ಕಡಿವಾಣವಿಲ್ಲ .." ನನ್ನ  ಅಪ್ಸರೆ .. ನಾನು ಆಮೇಲೆ ಬರುವೆ..ಇಬ್ಬರೂ ಜೊತೆಯಾದರೆ ವಿಶ್ರಾಂತಿ ಸಿಗಲ್ಲ.."ಎಂದು ನಗುತ್ತಾ ಹೇಳಿ ಹೊರಗೆ ಹೊರಟ..


      ಒಂದು ಫರ್ಲಾಂಗ್ ದೂರನಡೆದು ಅಮ್ಮನಿಗೆ ಕರೆ ಮಾಡಿದ.ಅಮ್ಮ ಫೋನೆತ್ತಲಿಲ್ಲ..ಬಹಳ ದುಃಖವಾಯಿತು ಕೇಶವನಿಗೆ.ಅಮ್ಮ ಬೇಕೆಂದೇ ನನ್ನ ಮೇಲೆ ಸಿಟ್ಟಿನಿಂದ ಈ ರೀತಿ ಮಾಡಿರಬಹುದಾ..? ಅಲ್ಲ ಬೇರೇನಾದರೂ ಕೆಲಸದಲ್ಲಿರಬಹುದಾ ..ಎಂಬ ಸಂದೇಹ ಕಾಡಿತು...ನನ್ನ ಮುಂದಿನ ಜೀವನದ ಬಗ್ಗೆ ನಾನೇ ಯೋಚಿಸಿ ನಿರ್ಧಾರ ಮಾಡಬೇಕು.ಮಾವನ ಮುಂದೆ ಈ ಬಂಗಾರಣ್ಣನ ಮಗ ಕೈಯೊಡ್ಡುವಂತಾಗಬಾರದು.ಆದರೆ ನನ್ನ ಡಿಪ್ಲೋಮಾ ಪದವಿಗೆ ಎಲ್ಲಿ ಒಳ್ಳೆಯ ಉದ್ಯೋಗ ಲಭಿಸೀತು..? .ಇಲ್ಲೇ ಒಳ್ಳೆಯ ವರಮಾನವಿದ್ದರೆ ಸೆಟ್ಲ್ ಆಗಬಹುದು.. ಪುನಃ ತಂದೆಯ ಮುಂದೆ ಮನೆಗೆ ಬರಲು ಒಪ್ಪಿಗೆ ಕೇಳುವುದು ತಪ್ಪುತ್ತದೆ.. ಅಲ್ಲಿ ಊರಜನರು ಬಾಯಿಗೊಂದರಂತೆ ಆಡುವವರಿಂದ ಅವಮಾನ ಅನುಭವಿಸುವುದೂ ತಪ್ಪುತ್ತದೆ.. ಸರಿ.. ಯಾವುದಕ್ಕೂ ಅಮ್ಮನಿಗೆ ಫೋನ್ ಮಾಡಿ ಡಿಪ್ಲೋಮಾ ಸರ್ಟಿಫಿಕೇಟ್ ತರಿಸಿಕೊಳ್ಳಬೇಕು.. ಎಂದೆಲ್ಲ ಯೋಚನೆಯಲ್ಲಿ ಮುಂದೆ ಇದ್ದ ಸೂಪರ್ ಬಜಾರ್ ಗೆ ಹೋಗಿ ತನಗೆ ಆಗತ್ಯವಿರುವ ಸಾಮಾಗ್ರಿಗಳನ್ನು ತೆಗೆದುಕೊಂಡ.. ಕಿಸೆಯಿಂದ ದುಡ್ಡು ಎಣಿಸಿಕೊಟ್ಟಾಗ ಮಾವ ಕೊಟ್ಟ ದುಡ್ಡಿದು.ಮುಂದಿನ ಬಾರಿ ನನ್ನ ಖರ್ಚಿಗೆ ನನ್ನದೇ ಸಂಪಾದನೆಯ ದುಡ್ಡು ನನ್ನ ಕೈಯಲ್ಲಿ ಇರಬೇಕು.. ಎಂದು ಗಟ್ಟಿಯಾದ ಸಂಕಲ್ಪ ಮಾಡಿದ..



          ಸಾಮಾನು ಪಡೆದುಕೊಂಡು ವಾಪಾಸಾಗುತ್ತಿದ್ದ ಕೇಶವನ ಮುಂದೆ ಬೈಕೊಂದು ಗಕ್ಕನೆ ನಿಂತಿತು. ಸ್ಕಲ್ ಕ್ಯಾಪ್, ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ಯಾರೆಂದು ಗುರುತು ಹಿಡಿಯಲಾಗಲಿಲ್ಲ.. ಕಟ್ಟುಮಸ್ತಾದ ದೇಹ ,ಶರ್ಟಿನ ಒಂದೆರಡು ಬಟನ್ಗಳನ್ನು ಬಿಟ್ಟು ಕೆಳಗಿನ ಬಟನ್ ಮಾತ್ರವೇ ಹಾಕಿದ್ದ...  ಆ ವ್ಯಕ್ತಿ ಯಾರಿರಬಹುದೆಂದು ಕೇಶವನಿಗೆ ಕುತೂಹಲ..

"ಅರೆ.. ಕೇಶವ್...ಕುಡ್ಲದ ಭಟ್ರು..." ಎಂದ ಆತನ ದನಿ ಎಲ್ಲೋ ಕೇಳಿದ ಚಿರಪರಿಚಿತ ದನಿಯಂತಿತ್ತು.


"ಕೇಶವ್ ನೀನೇನೋ ಇಲ್ಲಿ.. ನಿನ್ನನ್ನು ನೋಡಿ ಬಹಳ ದಿನಗಳು ಆಯ್ತು ಕಣೋ.."  ಎಂದು ಹೆಲ್ಮೆಟ್ ತೆಗೆದ..

"ಓಹೋ...ಸಿಂಗರ್ ಸೀನ... ಹೇಗಿದ್ದೀಯಾ..?"

"ನಂದೇನೋ...ಹೀಗಿದೀನಿ..ನೋಡು..ನೀನು ಹೇಗಿದ್ದೀಯಾ...ಊರಿಗೆ ಹೋದವನು ಅಲ್ಲಿ ಸೆಟ್ಲ್ ಆಗದೆ ಬಂದಿದ್ದೇನು.."

ಅವನ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ಅವನಿಗೆ ಯಾವುದಾದರೂ ಉದ್ಯೋಗ ಖಾಲಿಯಿರುವುದು ಗೊತ್ತಾ ಎಂದು ಕೇಳುವ ಕುತೂಹಲ ಕೇಶವನಿಗೆ...


"ಮದುವೆ ಆಗಿ ಈ ಕಡೆ ಬಂದೆ.. ಎಲ್ಲಾದರೂ ಜಾಬ್ ಸಿಗಬಹುದೇನೋ ಸೀನ..."

"ಜಾಬ್ ಏನು ಬೇಕಾದಷ್ಟಿವೆ.. ನಿಂಗೆ ಸೂಟ್ ಆಗುವಂತಹದ್ದು ಸಿಗಲು ಸ್ವಲ್ಪ ಹುಡುಕಿ, ಕಾದುನೋಡಬೇಕು.."

"ಅರ್ಜೆಂಟಾಗಿ ಆಗಲೇಬೇಕು..ಕಣೋ..."

"ಹಾಗಿದ್ರೆ ನಾನಿರುವ ಕಂಪೆನಿಯಲ್ಲಿ ಇದೆ..ಬಾ.. ಫೀಲ್ಡ್ ವರ್ಕ್ ಜಾಸ್ತಿ ಇರುತ್ತೆ... ಒಂದು ಬೈಕ್ ಬೇಕು.. ಆರಂಭದಲ್ಲಿ ಇಲ್ಲದಿದ್ದರೆ ಕೆಲವು ತಿಂಗಳು ಕಂಪೆನಿಯದ್ದನ್ನೇ ಬಳಸಬಹುದು.."

ಸಿಂಗರ್ ಸೀನನಲ್ಲಿ ಮಾತನಾಡಿ ನಾಳೆ ಅವನ ಕಂಪೆನಿಗೆ ಉದ್ಯೋಗಕ್ಕೆ ಅಪ್ಲೈ ಮಾಡುವುದಾಗಿ ತಿಳಿಸಿದ.

"ಬಾಯ್ " ಮಾಡಿ ಸೀನನನ್ನು ಬೀಳ್ಕೊಟ್ಟ ಕೇಶವನಿಗೆ ಬ್ಯಾಚುಲರ್ ಲೈಫ್ ನ ನೆನಪಾಯಿತು.. ಅಂದು ಸಿಂಗರ್ ಸೀನ,ವಟವಟ ವೆಂಕು, ನಾನು , ಟಿಪ್ ಟಾಪ್ ಮೋಹನ್ ಎಲ್ಲರೂ ಒಂದೇ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದವರು.ಕಂಪೆನಿಯಿಂದ ಕೊಟ್ಟ ರೂಮಿನಲ್ಲಿ ಒಟ್ಟಿಗೆ ಇರುತ್ತಿದ್ದವರು..ಇವನಂತೂ ಯಾವತ್ತೂ ಹಾಡ್ತಾ ಇರ್ತಿದ್ದ.. ಅದಕ್ಕೆ ಸಿಂಗರ್ ಸೀನ ಅಂತ ಹೆಸರು ಬಂತು.. ನಂತರ ವೆಂಕು ಅವನು ಯಾವಾಗ ನೋಡಿದ್ರು ವಟವಟ ಅಂತಿರುತ್ತಿದ್ದ... ಮತ್ತೊಬ್ಬ ಮೋಹನ್ . ಅವನು ಯಾವಾಗಲೂ ಇಸ್ತ್ರಿ ಮಾಡಿದ ಪ್ಯಾಂಟ್ ಶರ್ಟ್ ಧರಿಸಿ ದಿನವೂ ಪಾಲಿಶ್ ಮಾಡಿ ಧರಿಸುತ್ತಿದ್ದ. ಅದಕ್ಕೆ ಅವನಿಗೆ ಟಿಪ್-ಟಾಪ್ ಮೋಹನ್ ಎಂಬ ಹೆಸರು. ನನಗೆ ಕುಡ್ಲದ ಭಟ್ಟರು ಎಂದೇ ಕರೆಯುತ್ತಿದ್ದರು. ಎಷ್ಟು ಮೋಜು-ಮಸ್ತಿ ಮಾಡಿದ್ದೆವು. ಈಗ ಎಲ್ಲವೂ ನೆನಪು. ಸಮಯಕ್ಕೆ ಸರಿಯಾಗಿ ಈ ದಿನ ಮತ್ತೆ ಸಿಕ್ಕಿದ ..ನೋಡೋಣ ನಾಳೆ ಏನಾಗುತ್ತೆ.. ಎಂದು.


        ಕೇಶವ್ ಹೋಗಿ ಒಂದು ಗಂಟೆಯಾದರೂ ಬಾರದಿದ್ದನ್ನು ಕಂಡು ನರಸಿಂಹರಾಯರಿಗೆ ಸ್ವಲ್ಪ ಗಾಬರಿ ಉಂಟಾಯಿತು..  ಅಳಿಯಂದಿರು ಹೇಳದೆ ಎಲ್ಲಿಗೆ ಹೋದರು..? ಮಡದಿಯಲ್ಲಿಯೂ ಕೇಳಿದರು." ಆಕೆ ನನಗೆ ತಿಳಿದಿಲ್ಲ "ಎಂದು ತಲೆಯಾಡಿಸಿ ಸುನಿತಾಳಲ್ಲಿ ಕೆಲಸ ಹೇಳಲು ಹೋದರು. ಸೌಜನ್ಯಳನ್ನು ಕೇಳೋಣ ಮಾಳಿಗೆಯ ರೂಮಿನತ್ತ ಹೆಜ್ಜೆ ಹಾಕತೊಡಗಿದರು. ಅಷ್ಟರಲ್ಲಿ ಗೇಟು ತೆರೆದ ಸದ್ದು  ಕೇಳಿದ್ದು ಹಿಂದಿರುಗಿ ಮುಂಬಾಗಿಲಿನ ಕಡೆಗೆ ಬಂದರು.. ಅಳಿಯಂದಿರು ಗೇಟ್ ತೆಗೆದು ಒಳಗೆ ಬರುತ್ತಿದ್ದಾರೆ ..ನರಸಿಂಹರಾಯರಿಗೆ ಸಮಾಧಾನವಾಯಿತು ಬಾಗಿಲು ತೆರೆದು ಅಳಿಯಂದಿರನ್ನು ಬರಮಾಡಿಕೊಂಡು ಒಂದಷ್ಟು ಮಾತುಕತೆ ನಡೆಸಿದರು..

                   *******

         ಮೈತ್ರಿ ತನ್ನ ಪರೀಕ್ಷೆಗೆ ಸಿದ್ಧತೆಯ ನಡೆಸುತ್ತಿದ್ದಳು. ಮಧ್ಯೆ ಮಧ್ಯೆ ನಿದ್ದೆ ತೂಗದಂತೆ ಕಿಶನ್ ಸಂದೇಶ ಕಳುಹಿಸುತ್ತಿದ್ದ.ಮೈತ್ರಿ ಕಿಶನ್ ಸಂದೇಶವನ್ನು ಓದುತ್ತಾ ತನ್ನ ಪಠ್ಯವನ್ನು ಅಧ್ಯಯನ ನಡೆಸುತ್ತಿದ್ದಳು. ಅವಳು ಓದಿನಲ್ಲಿ ಬುದ್ಧಿವಂತೆ ..ಯಾವಾಗಲೂ ತರಗತಿಯಲ್ಲಿ ಒಳ್ಳೆಯ ಅಂಕ ಪಡೆದು ಟಾಪ್ ಫೈವ್ ಸ್ಟುಡೆಂಟ್ ಗಳಲ್ಲಿ ಒಬ್ಬಳಾಗಿದ್ದಳು. ಈ ಸಲ ಮಾತ್ರ ಎಷ್ಟು ಅಂಕ ಬರುವುದು ಅವಳಿಗೂ ಸಂದೇಹವಿತ್ತು. ಮನಸ್ಸಿನ ತುಂಬಾ ಕಿಶನ್ ನ ಮಧುರವಾದ ಭಾವಗಳ ಆಂದೋಲನ. ಓದಿದ್ದು ಕ್ಷಣದಲ್ಲಿ ಮರೆಯುವ ಮರೆಗುಳಿತನ.. ಜೊತೆಯಲ್ಲಿ ಮನೆಯಲ್ಲಿ ಮದುವೆಯ ತಯಾರಿ ಎಲ್ಲರೂ ಸೇರಿ ಅವಳಿಗೆ ಗೊಂದಲ ..


          ಅಂದು ಅವಳ ಗೆಳತಿ ಸುನಿಧಿ ಮದುವೆ ಸಮಾರಂಭ. ಬರಲೇಬೇಕೆಂದು ಕರೆದಿದ್ದರು. ಸ್ವಲ್ಪ ಹೊತ್ತಿಗಾದರು ಹೋಗಿಬರುತ್ತೇನೆ ಎಂದ ಮೈತ್ರಿಗೆ ಅಜ್ಜಿ "ನೀನು ಹಸಿ ಮೈ ಕೂಸು.. ಹಾಗೆಲ್ಲ ಎಂದು ಹೊರಗೆ ಓಡಾಡುವಂತಿಲ್ಲ"ಎಂದು ಹೇಳಿದರು. ಮೈತ್ರಿಗೆ ದುಃಖವಾಯಿತು ..ಆಗ ಮಂಗಳಮ್ಮ " ಮೈತ್ರಿ ನಿನಗೆ ಹೋಗಲೇ ಬೇಕೆಂದು ಇದ್ದರೆ ನಾನು ಬರುವೆ ಜೊತೆಗೆ.." ಅಮ್ಮನ ಮಾತಿಗೆ ಒಪ್ಪಿ ಅಮ್ಮ ಮಗಳು ಇಬ್ಬರು ಗೆಳತಿಯ ಮದುವೆಗೆ ತೆರಳಿದರು.


         ಸರಳವಾದ ಚೂಡಿದಾರ್ ಧರಿಸಿ ಮೈತ್ರಿ ಸುಂದರಿಯಂತೆ ಕಂಗೊಳಿಸುತ್ತಿದ್ದಳು. ಎಲ್ಲಾ ಗೆಳೆಯ-ಗೆಳತಿಯರು ಆಗಮಿಸಿದ್ದರು ಎಂಗೇಜ್ಮೆಂಟ್ ಆಗಿರುವುದು ಯಾರಿಗೂ ತಿಳಿದಿರಲಿಲ್ಲ. ಕೈಯಲ್ಲಿ ಉಂಗುರ ನೋಡಿ ನೋಡಿ ಎಲ್ಲರೂ ಕೇಳಿದರು.. ಹೌದೆಂದು ಒಪ್ಪಿಕೊಂಡಳು. ಫೋಟೋ ತೋರಿಸೆಂದು ಗೋಗರೆದರು. ಫೋಟೋ ನೋಡಿ.

". ಏಯ್..ನಿನ್ನ ರಾಜಕುಮಾರ ಎಷ್ಟು ಸ್ಮಾರ್ಟ್ ಲುಕಿಂಗ್ ಗೈ.."

"ಎಷ್ಟು ಬೆಳಗಿದ್ದಾನೆ... ನೋಡು ಹಾಲಿನ ಕೆನೆ ಇದ್ದಂಗೆ"

"ಅಷ್ಟು ಒಳ್ಳೆಯ.. ಹ್ಯಾಂಡ್ಸಮ್ ಹುಡುಗನ ಪಕ್ಕ ಏಕೆ ಮುಖ ಊದಿಸಿಕೊಂಡು ನಿಂತಿದ್ದೀಯಾ ಸ್ವಲ್ಪ ನಗಬಾರದಾ..?"

"ಕ್ಯೂಟ್ ಪೇರ್.."

ಎಂದೆಲ್ಲ ಹೇಳಿದಾಗ ಮೈತ್ರಿ ಗೆ ಖುಷಿಯಾಯ್ತು..

    ಸುನಿಧಿಯ ಹಳೇ ಬಾಯ್ಫ್ರೆಂಡ್ ಸಚಿನ್ ಕೂಡ ಬಂದಿದ್ದ..ಯಾವುದೇ ಬೇಸರ ತೋರಿಸಿಕೊಳ್ಳದೆ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದ..ಶಮಾ ಮೈತ್ರಿಯಲ್ಲಿ ಹೇಳಿದಳು.. "ಅವನಿಗೆ ನಮ್ಮ ಜೂನಿಯರ್ ಒಬ್ಬಳು ಗರ್ಲ್ ಫ್ರೆಂಡ್ ಸಿಕ್ಕಿದಾಳೆ...ಸೋ.. ಹ್ಯಾಪಿ ಮೂಡ್ ನಲ್ಲಿದ್ದಾನೆ.."

ಮೈತ್ರಿ ತನಗೆ ಮತ್ತು ಕಿಶನ್ ಗೆ ಮಾತ್ರ ಹೀಗೆ ಒಬ್ಬರನ್ನೊಬ್ಬರು ಅಗಲಿ ಬದುಕುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಾಗಲಿಲ್ಲ..ಹಾಗಾಗಿಯೋ ಏನೋ ಆ ದೇವರೇ ನಮ್ಮನ್ನು ಆಶೀರ್ವದಿಸಿದ್ದು... ಎಂದು ತನ್ನ ಬದುಕಿಗೆ ಹೋಲಿಸಿಕೊಂಡಳು.


        ಮದುವೆಮುಗಿಸಿ ಹೊರಡುವಾಗ
ಮಂಗಳಮ್ಮ  ಫ್ರೆಂಡ್ ಗಳನ್ನು ಮಗಳ ವಿವಾಹಕ್ಕೆ ಬರಬೇಕೆಂದು ಹೇಳಿ.. ಪರೀಕ್ಷೆ ಗೆ ಶುಭಕೋರಿದರು... ಎಲ್ಲರಿಗೂ ಬಾಯ್ ಹೇಳಿ ಅಮ್ಮನೊಂದಿಗೆ ಹೆಜ್ಜೆ ಹಾಕಿದಳು ಮೈತ್ರಿ..



                 ********

           ಮನೆಗೆ ಬಂದಾಗ ಮಹಾಲಕ್ಷ್ಮಿ ಅಮ್ಮ ಚಾವಡಿಯಲ್ಲಿ ಕುಳಿತಿದ್ದರು..ಒಳಬಂದ ಸೊಸೆ ಮೊಮ್ಮಗಳನ್ನು ಕಂಡು.."ಹೊರಗೆ ಮದುವೆಗೆ ಹೋಗಿ ಸೀದಾ ಒಳಗೆ ಬರುವುದಾ.. ಮಂಗಳಾ ನಿನಗಾದರೂ ಬುದ್ಧಿ ಬೇಡವಾ.. ಚೆನ್ನಾಗಿ ಕೈ ಕಾಲು ಮುಖ ತೊಳೆದು ಒಳಗೆ ಬನ್ನಿ.." ಅಂದಾಗ ಅಮ್ಮ ಮಗಳಿಬ್ಬರೂ ಮರುಮಾತನಾಡದೆ ಅಜ್ಜಿಯ ಆದೇಶವನ್ನು ಪಾಲಿಸಿದರು...

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
12-04-2020.

ಮುಂದಿನ ಭಾಗ..ಮಂಗಳವಾರ..