ಸಂಜೆ ಕಿಶನ್ ಗೆ ಕರೆ ಮಾಡಿದ ಗಣೇಶ ಶರ್ಮ.ಕಿಶನ್ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ಎತ್ತಲೇಯಿಲ್ಲ..ತಂದೆ ತಾಯಿ ಇಬ್ಬರೂ ಗಾಬರಿಯಾದರು."ನೋಡೋಣ ರಾತ್ರಿಯ ತನಕ ಕಾಯೋಣ ..."ಎಂದು ಸುಮ್ಮನಾದರು.
****
ಮೈತ್ರಿಯ ಕಾಲೇಜು ಮುಗಿಯಲು ಕೆಲವೇ ದಿನಗಳಿದ್ದವು.ಫ್ರೀ ಇದ್ದಾಗ ಗೆಳತಿಯರೆಲ್ಲ ಸೇರಿ ಬಾಯ್ತುಂಬಾ ಹರಟುತ್ತಿದ್ದರು..ಯಾರ್ಯಾರು ಮುಂದೆ ಓದುತ್ತಾರೆ..ಅಪ್ಪ ಅಮ್ಮ ಪರ್ಮಿಷನ್ ಕೊಡ್ತಾರೆ..ಇನ್ಯಾರಿಗೆಲ್ಲ ಮದುವೆ ಆಲೋಚನೆ ಇದೆ..ಮತ್ತ್ಯಾರಿಗೋ ಸೀರಿಯಲ್ ನಟನ ಪ್ರಪೋಸಲ್ ಬಂದಿರುವುದು..ಇನ್ಯಾರೋ ಲವ್ ಮಾಡಿ ಮುಂದೆ ಉದ್ಯೋಗ ದೊರೆತ ನಂತರ ಮದುವೆಯಾಗುವ ನಿರ್ಧಾರ ಮಾಡಿರುವುದು..ಇಂತಹುದೇ ವಿಷಯಗಳು ಮುನ್ನೆಲೆಯಲ್ಲಿ ಚರ್ಚೆಯಾಗುತ್ತಿದ್ದವು..ಯಾವಾಗಲೂ ಎಲ್ಲರೂ ಚರ್ಚಿಸುತ್ತಿದ್ದಾಗ ಕಿಶನ್ ನ ನೆನಪು ಬಂದು ಮೌನಿಯಾಗುತ್ತಿದ್ದಳು... ಆದರೆ ಇಂದು ಮಾತ್ರ ಅವಳಲ್ಲಿ ಅವಳದೇ ಆದ ಜೋಶ್ ಇತ್ತು.. ನಗುನಗುತ್ತಾ ಅಮೂಲ್ಯ ಸಮಯವನ್ನು ಕಳೆದಳು..
ಕಾಲೇಜಿನಿಂದ ಬಂದ ಮೈತ್ರಿ ಎಂದಿನಿಂದ ಹೆಚ್ಚು ಲವಲವಿಕೆಯಿಂದ ಇದ್ದಳು.ಅವಳ ಮುಖಭಾವವನ್ನು ಗಮನಿಸಿದ ಮಹೇಶ್ ರೂಮಿನೊಳಗೆ ಬಂದು "ಬಂದಳೋ ಬಂದಳು ಗೆಳತಿ ಇಶಾ ಬಂದಳು.."ಎಂದು ರೇಗಿಸಿ ಹೊರ ನಡೆದ.. ಮೈತ್ರಿಗೆ ತಮ್ಮನ ಕೀಟಲೆಗೆ ನಗಬೇಕೋ ಕೋಪಿಸಿಕೊಳ್ಳಬೇಕೋ ತಿಳಿಯಲಿಲ್ಲ..ಆದರೂ ತಾನೂ ನಕ್ಕು ಮನಸು ಹಗುರಮಾಡಿಕೊಂಡಳು. ಕಿಶನ್ ತಂದೆಯ ಜೊತೆಗೆ ಮನೆಗೆ ಬಂದದ್ದೇ ಅವಳ ಪಾಲಿಗೆ ದೊಡ್ಡ ಉಡುಗೊರೆಯಾಗಿತ್ತು..
ಅಜ್ಜ ಮೊಮ್ಮಗಳನ್ನು ಕರೆದು
"ಪುಳ್ಳಿ.. ಪರೀಕ್ಷೆ ಯಾವಾಗ ಆರಂಭವಾಗುವುದು " ಎಂದು ಕೇಳಿದರು..
ಈ ಅಜ್ಜನಿಗೆ ಎಷ್ಟು ಸಲ ಹೇಳುವುದಪ್ಪಾ..ಮರೆತೇಬಿಡ್ತಾರೆ ಎಂದು ತನ್ನಲ್ಲೇ ಗೊಣಗಿಕೊಂಡ ಮೈತ್ರಿ.."ಇನ್ನು ಒಂದೇ ತಿಂಗಳು ಇರುವುದು ಅಜ್ಜಾ.."ಎಂದು ಹೇಳಿ ಬೇಗನೆ ಜಾಗ ಖಾಲಿ ಮಾಡಿದಳು.. ಇಲ್ಲದಿದ್ದರೆ ಅಜ್ಜ ಇನ್ನಷ್ಟು ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾರೆ ಎಂದು ಅರಿವಿತ್ತು ಅವಳಿಗೆ...
ಮಂಗಳಮ್ಮ ಅಡುಗೆ ಮನೆಯಲ್ಲಿ ಕೆಲಸದಲ್ಲಿದ್ದರು.ಇದ್ದಕ್ಕಿದ್ದಂತೆ ಬಂದ ಭಾಸ್ಕರ ಶಾಸ್ತ್ರಿಗಳು ಫೋನ್ ಯಾವಾಗ ಹಾಳಾದ್ದು ಎಂದು ಕೇಳಿದರು..
"ಆಗ ಅತ್ತೆ ಹೇಳಿ ನನಗೆ ಗೊತ್ತಾದ್ದು.. ಅವರನ್ನೇ ಕೇಳಿ ಹೇಳುತ್ತಾರೆ.." ಎಂದುತ್ತರಿಸಿದರು..
ಹೆಂಡತಿಗೆ ನನ್ನ ಮೇಲಿನ ಕೋಪ ತಣಿಯಲಿಲ್ಲ ಎಂದು ಭಾಸ್ಕರ ಶಾಸ್ತ್ರಿಗಳು ಅರಿತರು..
"ಈ ಸಾರಿ ಮಾತ್ರ ರಿಪೇರಿ ಮಾಡಿಸುವುದು.. ಇನ್ನು ಹಾಳಾದರೆ ಮತ್ತೆ ಮೊಬೈಲ್ ಫೋನೇ ಬಳಸೋಣ..ಆಗದೇ.." ಎಂದಾಗ
ಮಂಗಳಮ್ಮ .."ಹೂಂ.."ಎಂದಷ್ಟೇ ಹೇಳಿ ನಿಲ್ಲಿಸಿದರು..
"ನಾಳೆ ಶಾಲೆಗೆ ಅರ್ಧ ದಿನ ರಜೆ ಹಾಕಿದ್ದೇನೆ.. ಪೇಟೆ ಕೆಲಸವಿದೆ.. ಮನೆಗೆ ಏನಾದರೂ ಸಾಮಾನು ಬೇಕಾದರೆ ಬರೆದಿಡು.." ಎಂದಾಗ
"ಹೇಳ್ತೇನೆ ಈಗಲೇ ಬರೆದುಕೊಳ್ಳಿ.". ಎಂದರು..
ಮಂಗಳಮ್ಮ ಹೇಳುತ್ತಾ ಹೋದರು.. ಶಾಸ್ತ್ರಿಗಳು ಬರೆಯುತ್ತಾ ಹೋದರು.ಪಟ್ಟಿ ಉದ್ದವಾಯಿತು..
.."ನೀನೂ ಬರ್ತೀಯಾ ಪೇಟೆಗೆ.."
"ಯಾಕೆ.. ಇಷ್ಟನ್ನು ತರೋದಿಕ್ಕೆ ನಿಮ್ಮ ಕೈಲಿ ಆಗಲ್ವಾ.."
"ಹಾಗಲ್ಲ..ಮೈತ್ರಿಗೊಂದೋ ಎರಡೋ ಸೀರೆ ಕೊಂಡುಕೊಳ್ಳೋಣ ಅಂತ.."
"ಅದಕ್ಕೆ ಅವಳೇ ಆಗಬೇಕು...ಈಗಿನ ಫ್ಯಾಷನ್ ಗೆ ತಕ್ಕಂತೆ ಸೀರೆ ಆಯ್ಕೆ ಮಾಡಲು ನನಗೆ ಬರುವುದಿಲ್ಲ.."
"ಅವಳಿಗೆ ಕಾಲೇಜು ಇದೆಯಲ್ಲಾ.."
"ಅವಳ ಕೈಲೇ ದುಡ್ಡು ಕೊಡಿ.. ಕಾಲೇಜಿನಿಂದ ಬರುವಾಗ ಗೆಳತಿಯರ ಜೊತೆ ಹೋಗಿ ಕೊಂಡುಕೊಂಡು ಬರುತ್ತಾಳೆ..ಅವಳಿಗೂ ಸ್ವಲ್ಪ ವ್ಯವಹಾರ ಜ್ಞಾನ ಬರಲಿ..ನನ್ನ ಹಾಗೇ ಬರೀ ಮನೆ,ಊಟ ,ತೋಟ ಇಷ್ಟೇ ಗೊತ್ತಿರುವುದು ಅಂತ ಆಗುವುದು ಬೇಡ..."
"ಬೇಡ.. ಅವಳನ್ನು ಒಬ್ಬಳನ್ನೇ ಕಳುಹಿಸಲು ನನಗೆ ಮನಸ್ಸು ಬರುವುದಿಲ್ಲ..ಇನ್ನೊಮ್ಮೆ ನೋಡೋಣ.."
"ನೀವು ಯಾವಾಗಲೂ ಹೀಗೇನೇ..ಒಂದು ಚೂರೂ ಸ್ವಾತಂತ್ರ್ಯ ಕೊಡುವವರಲ್ಲ.."
"ಅಲ್ವೇ... ಸ್ವಾತಂತ್ರ್ಯಕ್ಕೆ ನಾನೇನು ಕಡಿಮೆ ಮಾಡಿದ್ದೇನೆ.. ಸ್ವಾತಂತ್ರ್ಯ ಸಿಕ್ಕಿರುವುದಕ್ಕೇ ಲವ್ ಮಾಡಿ ಹೆಸರು ಕೆಡಿಸಲು ನೋಡಿರುವುದು.."
"ಅಲ್ಲಾ..ಅವಳನ್ನೇ ಏಕೆ ದೂಷಿಸ್ತೀರಿ ಅಂತ ನನಗರ್ಥ ಆಗ್ತಿಲ್ಲಪ್ಪಾ.. ಬಂದವರು ...ಇಬ್ಬರೂ ಲವ್ ಮಾಡಿದ್ದಾರೆ ಅಂತೇನಾದ್ರೂ ಹೇಳಿದ್ರಾ...ಇಲ್ವಲ್ಲಾ.."
"ಹೇಳದೇ ತಿಳಿದುಕೊಳ್ಳಬಹುದು ಅಂತಹದ್ದೆಲ್ಲ..."
"ಏನೇ ಹೇಳಿ.. ನನಗಂತೂ ಹುಡುಗ ಹಿಡಿಸಿದ್ದಾನೆ.."
"ಏನೋ... ನೋಡೋಣ..ಯಾರ ಕಡೆಯಿಂದ ಉತ್ತರ ಬರುತ್ತೆ ಅಂತ.. ನಾನಂತೂ ಈಗ ಯಾರ ಬಳಿಯೂ ಅವರ ಬಗ್ಗೆ ವಿಚಾರಿಸಲು ಹೋಗೋಲ್ಲ.."
"ವಿಚಾರಿಸಿಕೊಳ್ಳಬೇಕಾದವರು ನೀವು..ಕೈಕಟ್ಟಿ ಕುಳಿತುಕೊಳ್ಳಬೇಕಾದವರಲ್ಲ .."
"ಅವರೇ ಎಲ್ಲ ನಿರ್ಧರಿಸಿದ್ದಾರೆ ಎಂದ ಮೇಲೆ ಭಾರವು ಅವರ ಹೆಗಲ ಮೇಲೆಯೇ ಇರಲಿ.."
"ಈ ರೀತಿಯ ಹಠವೇ ನನಗಿಷ್ಟವಾಗದ್ದು...ಮಕ್ಕಳ ಮನಸ್ಸನ್ನು ಅರಿತು ಹಿರಿಯರು ನಡೆದರೆ ಬೆಲೆ.."
"ಏನಂತ ಕೇಳಲಿ... ಯಾರಲ್ಲಿ ಕೇಳಲಿ..ಕೇಳ ಹೊರಟರೆ ನಿಮಗೆ ಹುಡುಗನ ಪರಿಚಯ ಹೇಗೆ ಎಂದು ಕೇಳಿದರೆ ಹೇಳೋದೇನು.. ನನಗೆ ಬೇಗ ಸುಳ್ಳು ಹೇಳಲು ಬರುವುದಿಲ್ಲ.. ಪ್ರಾಮಾಣಿಕ... ನಾನು..."
"ನೀವೊಂದು ಜನವೇ ಮಾರಾಯ್ರೆ...ಅಲ್ಲ ಮಗಳನ್ನು ಮದುವೆ ಮಾಡಿ ಕೊಡುವಾಗ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದರೆ...!!
ಅದು ಹೆತ್ತವರ ಜವಾಬ್ದಾರಿ... ಮಕ್ಕಳು ಒಂದು ಹೆಜ್ಜೆ ಮುಂದಿಟ್ಟರೂ ನಾವು ಬೇಸರಪಟ್ಟುಕೊಳ್ಳದೆ ನಮ್ಮ ಕರ್ತವ್ಯವನ್ನು ಮಾಡಿದರೆ ಚೆನ್ನ.."
"ಆದರೂ ನಾನಿಷ್ಟು ಮಗಳ ಬಗ್ಗೆ ಕೇರ್ ತೆಗೆದುಕೊಂಡರೂ ಈ ಒಂದು ಮಾತೂ ನನಗೆ ತಿಳಿಸದೆ..."
"ನೋಡಿ..ಅಂತಹ ಮಾತೆಲ್ಲ ಹಿಂದಿನದಾಯ್ತು...ಈಗ ಏನಿದ್ದರೂ ಕಾಲಕ್ಕೆ ತಕ್ಕ ಕೋಲ... ನೋಡಿ ಎರಡು ವರ್ಷಗಳ ಹಿಂದೆ ಚೇಲಡ್ಕ ರಾಮಣ್ಣ ಅದ್ದೂರಿಯಾಗಿ ಮಗಳ ಮದುವೆ ಮಾಡಿದ.. ನಾವೆಲ್ಲ ಹೋಗಿದ್ದೆವು.. ಅಲ್ವಾ... ಅರೇಂಜ್ಡ್ ಮ್ಯಾರೇಜ್..ಈಗ ಏನಾಗಿದೆಯಂತೆ ಗೊತ್ತಾ..."
"ಇಲ್ಲ..ಏನಾಗಿದೆಯಂತೆ.. ಡೈವೋರ್ಸಾ..."
"ಡೈವೋರ್ಸ್ ಆದ್ರೂ ಆಗ್ತಿತ್ತೇ...ಅದಕ್ಕೂ ಕಡೆಯಾಗಿದೆ..."
"ಏನಾಗಿದೆ ಅಂತಾದ್ರೂ ಹೇಳೇ.."
"ಅದೇ ರೀ..ಅವ ಮೆಡಿಕಲ್ ಓದುತ್ತಿದ್ದ ತಾನೇ ..ಎಂಡಿ .. ಅವನಿಗೆ ಏನೋ ಕೆಟ್ಟ ಚಾಳಿ ಕೋರ್ಸ್ ಆರಂಭದಿಂದಲೂ ಇತ್ತಂತೆ..ಇವ್ರಿಗೆ ಗೊತ್ತಿಲ್ಲ...ನೆಂಟರಿಷ್ಟರಿಗೇನು ಗೊತ್ತು ಪಾಪ..ಕಲಿಯೋ ಹುಡುಗನ ಸಹಪಠ್ಯಚಟುವಟಿಕೆ ...!!..."
"ಹೂಂ.. ಹೌದು.."
"ಈಗ ಅದೆನೋ ಗುಣವಾಗದ ಖಾಯಿಲೆ ಅಂಟಿಕೊಂಡಿದೆಯಂತೆ ...ರಾಮಣ್ಣ ಮಗಳನ್ನು ತವರಿಗೆ ಕರ್ಕೊಂಡು ಬಂದಿದ್ದಾನಂತೆ..ಇವಳಿಗೂ ಅಂಟಿಕೊಂಡಿದೆಯಾ ಅಂತ ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಂತೆ..."
"ಹೌದಾ..."
"ಪಾಪ ರಾಮಣ್ಣನ ಮಗಳು..ನಂಗೆ ಕೇಳಿ ಬೇಸರ ಆಯ್ತು..ಏನೂ ತಪ್ಪು ಮಾಡದ ಹುಡುಗಿಗೆ ಹೀಗಾಯ್ತಲ್ಲಾ..ರಾಮಣ್ಣ ತಾನೇ ಮುಂದೆ ನಿಂತು ಹುಡುಗನನ್ನು ಹುಡುಕಿ ಮದುವೆ ಮಾಡಿದ್ರೂ ಹೀಗಾಯ್ತಲ್ಲಾ ಅಂತಾ ನೊಂದ್ಕೊಂಡಿದಾನಂತೆ..."
"ಯಾರೇ..ಇದೆಲ್ಲ ನಿನಗೆ ಹೇಳಿದ್ದು.."
"ಮೊನ್ನೆ ನನ್ನ ತಂಗಿ ಹೇಳಿದ್ಲು ರೀ..."
ಹೆಂಡತಿಯ ಮಾತನ್ನು ಕೇಳಿದ ಭಾಸ್ಕರ ಶಾಸ್ತ್ರಿಗಳು ಸ್ವಲ್ಪ ಚುರುಕಾದರು.. ಕಿಶನ್ ಹಾಗೂ ಕೇಶವ್ ಇಬ್ಬರ ಬಗ್ಗೆಯೂ ನಾನು ಇನ್ನೂ ಸ್ವಲ್ಪ ತಿಳಿದುಕೊಳ್ಳಬೇಕು..
ನನ್ನ ಮಗಳ ಬಾಳು ಹಾಳಾಗಬಾರದು ... ಎಂದು ನಿರ್ಧರಿಸಿದರು...
ಮಂಗಳಮ್ಮ ತನ್ನ ಮೆದುವಾದ ಬೆಣ್ಣೆಯಂತಹ ಮಾತಿನಿಂದ ಗಂಡನನ್ನು ನಯವಾಗಿ ತಿದ್ದಿ ಸರಿದಾರಿಗೆ ತಂದರು..
*****
ಕಿಶನ್ ಆಫೀಸಿನಿಂದ ಮನೆಗೆ ಬರುತ್ತಿರುವಾಗ ಅವನಿಗೇಕೋ ಮನೆಯವರ ನೆನಪು ಆಗುತ್ತಿದ್ದಿತು .. ಹೋಂ ಸಿಕ್ ಇರಬಹುದು.. ಎರಡು ದಿನ ಮನೆಯಲ್ಲಿ ಕಳೆದು ಬಂದ ಕಾರಣ ಇರಬಹುದು ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ.. ರೂಮಿಗೆ ಬಂದು ಫ್ರೆಶ್ ಆಗಿ ನಂತರ ಅಡುಗೆ ಮಾಡಿ ಸುಂದರ್ ಜೊತೆಗೆ ಉಣ್ಣಲು ಕುಳಿತ..ಬಟ್ಟಲಿನ ಬದಿಗೆ ಅಮ್ಮ ಕೊಟ್ಟಿದ್ದ ಒಣಕೊಬ್ಬರಿ ಚಟ್ನಿಯನ್ನು ಬಡಿಸಿದ..ಆಗ ಸುಂದರ್ ನ ಫೋನ್ ರಿಂಗಾಯಿತು.ಎದ್ದು ಹೋಗಿ ಫೋನ್ ಎತ್ತಿದವನು..."ಇಲ್ಲಿಯೇ ಇದ್ದಾನೆ.. ಕೊಡ್ತೀನಿ ಒಂದು ನಿಮಿಷ.."ಎಂದಾಗ ಯಾರಾಗಿರಬಹುದು ಎಂದು ಕುತೂಹಲ ಕಿಶನ್ ಗೆ ಇತ್ತು..
"ಓಹ್.. ಅಪ್ಪಾ..."
"ಏನೋ...ಪೋನೇ ತೆಗೀತಿಲ್ಲ.."
"ಹೌದಾ.. ನೀವು ಯಾವಾಗ ಫೋನ್ ಮಾಡಿದ್ರಿ ಅಪ್ಪಾ..."
"ಆಗಿನಿಂದಲೇ ಮಾಡ್ತಾ ಇದೀವಿ ಕಣೋ.. ಹೋಗ್ತಾ ಇಲ್ಲ..."
"ಏನಾದ್ರೂ ಅರ್ಜೆಂಟ್ ಹೇಳೋದಿತ್ತಾ.."
ಎಂದು ಕೇಳಿದವನಿಗೆ ...ಅಪ್ಪ ಇವತ್ತು ನನ್ನ ಮತ್ತು ಮೈತ್ರಿಯ ಜಾತಕ ತೋರಿಸಲು ಹೋಗುತ್ತಾರೆ ಎಂದು ತಿಳಿದಿರಲಿಲ್ಲ...
"ನೀನು ನಿನ್ನ ಮೊಬೈಲ್ ಸರಿಯಾದ ಮೇಲೆ ಮಾಡು..ಹುಷಾರಾಗಿದ್ದೀಯಾ... ತಾನೇ"
"ಹೂಂ..ಚೆನ್ನಾಗಿದ್ದೀನಿ.. ಬಾಯ್.. "ಎಂದನು..
ಫೋನ್ ಏನಾಗಿದೆ ಎಂದು ನೋಡಿದ..ಹೋ..ಹೌದಲ್ಲ ಡೆಡ್ ಆಗಿದೆ.. ಯಾಕೆ ಹೀಗಾಗಿದೆ..ಆದರೂ ಅಮ್ಮ ಅಪ್ಪ ನನ್ನನ್ನು ನೆನೆಸಿಕೊಂಡದ್ದು ತನಗೆ ಆರನೇ ಇಂದ್ರಿಯ ತಿಳಿಸಿದೆ..ಅದೇಕೋ..ಆಗಲೇ ಮನೆಯವರ ನೆನಪಾಗಿದ್ದು ಅದಕ್ಕೇ ಇರಬೇಕು ಎಂದುಕೊಂಡು ಊಟಮಾಡಿದ..
*****
ಬಾರಂತಡ್ಕದ ಕೇಶವ್... ಶಾಸ್ತ್ರಿಗಳ ಕುಟುಂಬದ ಹಿಂದೆ ಬಿದ್ದ..ತನ್ನ ಗೆಳೆಯರ ಮೂಲಕ ಭಾಗವತ ವೆಂಕಟ್ ನ ಪರಿಚಯ ಮಾಡಿಕೊಂಡನು..ತನ್ನ ಉದ್ದೇಶ ಈಡೇರಿಸಿಕೊಳ್ಳಲು ಇವನೇ ಸರಿಯಾದ ವ್ಯಕ್ತಿ ಎಂದು ನಿರ್ಧರಿಸಿದನು.
ಮುಂದುವರಿಯುವುದು...
✍️.... ಅನಿತಾ ಜಿ.ಕೆ.ಭಟ್.
29-02-2020.