Sunday, 23 February 2020

ಜೀವನ ಮೈತ್ರಿ-ಭಾಗ ೨೫(25)





     ಶ್ಯಾಮ ಶಾಸ್ತ್ರಿಗಳು ಕೂಡ ಗಹನವಾದ ಚರ್ಚೆ ನಡೆಯುವುದನ್ನು ಕಂಡು ತಾವೂ ಆಗಮಿಸಿದರು.ಮಗನ ಮಾತಿನಿಂದ ಮೈತ್ರಿಯ ಪ್ರೇಮದ ವಿಷಯ ಅವರ ಅರಿವಿಗೆ ಬಂದಿತ್ತು.

ಅಜ್ಜ : ಅಲ್ಲ ಪುಳ್ಳಿ..ಓದ್ಬೇಕು ಅಂತಿದ್ದೆ.. ಮತ್ತೇನು ಮಾಡಿದೆ..
ಮೈತ್ರಿ ಮಾತನಾಡಲಿಲ್ಲ..

ಮಹೇಶ್ : ಅಜ್ಜಾ.. ಅವಳೇನು ಮಾಡಬಾರದ್ದು ಮಾಡಿಲ್ಲ.ದಿನವೂ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಿ ಅಷ್ಟೇ ಕರಾರುವಕ್ಕಾಗಿ ಕಾಲೇಜು ಬಸ್ಸಿನಲ್ಲೇ ಮನೆಗೆ ಮರಳುತ್ತಿದ್ದಳು.ನೀವು ಏನೇನೋ ಕಲ್ಪಿಸಿಕೊಂಡು ಮಾತನಾಡುವುದು ಬೇಡ..

ಅಜ್ಜ : ನೋಡಿ ನಮ್ಮ ಮನೆಯಲ್ಲಿ ಹಿಂದಿನಿಂದಲೂ ಒಂದು ಅಭ್ಯಾಸ.ಹೆಣ್ಣುಮಕ್ಕಳಿಗೆ ಸಣ್ಣವಯಸ್ಸಲ್ಲೇ ಮದುವೆ ಮಾಡುವುದು..ಆದರೆ ಈಗ ಹೆಣ್ಣುಮಕ್ಕಳು ವಿದ್ಯಾವಂತರಾಗಬೇಕು ಎಂಬ ಕಾರಣಕ್ಕೆ ಓದಲು ಕಳುಹಿಸಿದರೆ ಪ್ರೀತಿ ಪ್ರೇಮದಲ್ಲಿ ಜಾರುವ ಆಗತ್ಯವಿರಲಿಲ್ಲ.. ಆಯ್ತು ಈಗ ಮುಂದೇನು ಎಂಬ ಯೋಚನೆ ಮಾಡಬೇಕು... ಕೇಶವ್ ನ ಕಡೆಯವರು ಜಾತಕ ಹೊಂದಾಣಿಕೆ ಆಗುತ್ತದೆ ಎಂದರೆ ನಾವೇನು ಉತ್ತರ ಕೊಡಬೇಕು ಎಂಬ ಆಲೋಚನೆ ಮಾಡಬೇಕಾಗಿದೆ..

ಭಾಸ್ಕರ ಶಾಸ್ತ್ರಿಗಳು: ನನಗೆ ಮೊದಲೇ ಸಂಶಯ ಬಂದಿತ್ತು.ಇತ್ತೀಚೆಗೆ ಮೊಬೈಲ್ ಬಳಕೆ ಜಾಸ್ತಿಯಾದಾಗಲೇ.. ಎಲ್ಲರೂ ಪಾಪದ ಪುಳ್ಳಿ ಎಂದು ಅವಳ ಕಡೆಗೆ ನಿಂತು ಮಾತನಾಡಿದಿರಿ..ಈಗ ಎಲ್ಲರೂ ತಲೆತಗ್ಗಿಸಬೇಕಾಗಿದೆ..ಇವಳ ಘನಾಂದಾರಿ ಕೆಲಸಕ್ಕೆ...

ಒಳಗೆ ರೂಮಿನಲ್ಲಿ ನಿಂತಿದ್ದ  ಸಂಜನಾ ಬಲವಾಗಿ ವಂದನಾಳ ಕೈ ಹಿಡಿದಿದ್ದಳು.."ತಂಗೀ ನಮಗಂತೂ ಯಾರನ್ನು ಲವ್ ಮಾಡುವ ಕೆಲಸ ಬೇಡ ಕಣೇ.. ಅಬ್ಬಾ..ಅಕ್ಕನನ್ನು ಎಷ್ಟು ಬೈತಿದಾರೆ ಪಾಪ..ದೊಡ್ಡಮ್ಮನೂ ಜೊತೆಗೆ ಬೈಗುಳ ಕೇಳಬೇಕಾಗಿದೆ.."
ವಂದನಾ: "ಆದರೆ ಅಕ್ಕ ಹೆದರಲಿಲ್ಲ ನೋಡು..ದೊಡ್ಡಪ್ಪನ ಮಾತು ಕೇಳಿ ನನಗೇ ಕಾಲು ನಡುಗುತ್ತಿದೆ..."
ಸಂಜನಾ:"ಹೌದು ವಂದನಾ..ನಮ್ಮಪ್ಪ ಇಷ್ಟು ಜೋರಿಲ್ಲದ್ದು ನಮ್ಮ ಪುಣ್ಯ..ಇವತ್ತೇ ಬೆಂಗಳೂರಿಗೆ ಹೋಗಿಬಿಡುತ್ತೇವಲ್ಲ.. ಸಾಕಪ್ಪಾ ಸಾಕು ಈ ಹಳ್ಳಿಯ ಸಹವಾಸ..ಅಕ್ಕ ಕಿಶನ್ ಜೊತೆ ಬರೀ ಮಾತಾಡುತ್ತಿದ್ದುದಕ್ಕೇ ಹೀಗೆ..ಇನ್ನು ಜೊತೆಗೆ ಸುತ್ತಿದ್ದರೆ... ಏನು ಮಾಡಿಬಿಡುತ್ತಿದ್ದರೋ.... ವಂದನಾ: ನಂಗೆ ಅಕ್ಕನನ್ನು ಕಂಡು ಅಳುವೇ ಬರುತ್ತಿದೆ ಕಣೇ... ಇಷ್ಟು ಜೋರು ಮಾಡುತ್ತಾರೆ ಆಂತ ತಿಳಿದಿದ್ದರೆ ಲವ್ ಮಾಡುತ್ತಿರಲಿಲ್ಲವೇನೋ..

ಎಂದು ಅಕ್ಕ ತಂಗಿಯರು ಮಾತನಾಡುತ್ತಿದ್ದರು.ಗಾಯತ್ರಿ ಭಾವನ ಬೈಗುಳದ ಮಾತೆಲ್ಲ ಹಿಡಿಸದಿದ್ದರೂ ಕೇಳಬೇಕಾದ ಅನಿವಾರ್ಯತೆ ನಮಗೆ ಎಂದು ಭಾವನನ್ನು ಶಪಿಸುತ್ತಾ ಬ್ಯಾಗ್ ಗೆ ಬಟ್ಟೆಬರೆ ತುಂಬುತ್ತಿದ್ದಳು..ಶಂಕರ ಬೆಂಗಳೂರಿಗೆ ಕೊಂಡೊಯ್ಯಲಿರುವ ಹಪ್ಪಳ,ಸೆಂಡಿಗೆ,ಮಾಂಬಳ, ತರಕಾರಿಗಳನ್ನು ತುಂಬಿಸುವುದರಲ್ಲಿ ನಿರತನಾಗಿದ್ದ..ಆಣ್ಣನ ಮೂಗಿನ ಮೇಲಿನ ಕೋಪದ ಸ್ವಭಾವದ ಅರಿವು ಅವನಿಗಿತ್ತು..

ಅಜ್ಜ : ಸರಿ..ಇನ್ನು ಹೇಳಿ ಪ್ರಯೋಜನವಿಲ್ಲ..ಮುಂದಿನ ಯೋಚನೆ ಮಾಡಬೇಕು.. ಇಂದು ಮಾಡಿದ ಕಾರ್ಯ ಮುಂದೆ ಕಾಡದೆ ಇರದು..

ಮಹೇಶ್ : ಯಾಕೆ ಹಾಗೆ ಹೇಳ್ತೀರಾ ಅಜ್ಜ ಅಕ್ಕನಿಗೆ..ಅವಳೇನಾದರೂ ಅನ್ಯಧರ್ಮೀಯನನ್ನು ಪರಿಚಯ ಮಾಡಿಕೊಂಡಿದ್ದಾಳಾ..ಅಥವಾ ಬೇರೆ ಸಂಪ್ರದಾಯ ಇರುವಂತಹ ಬೇರೆ ಜಾತಿಗೆ ಸೇರಿದವನನ್ನು ಪ್ರೀತಿಸಿದಳಾ..ನಮ್ಮದೇ ಕರಾವಳಿಯ ನಮ್ಮದೇ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿರುವ ಶರ್ಮ ಕುಟುಂಬದ ಯುವಕನೊಂದಿಗೆ ಸಲುಗೆಯಿಂದಿದ್ದಳು ...ಅಷ್ಟೇ ತಾನೆ..

ಭಾಸ್ಕರ ಶಾಸ್ತ್ರಿಗಳು: ಅದು ಬೇಕಿಗಿತ್ತಾ...? ಅನ್ನುವುದೇ ಪ್ರಶ್ನೆ..


ಅಣ್ಣ ತನ್ನ ಹಠಮಾರಿತನವನ್ನು ಕಡಿಮೆ ಮಾಡುವ ಆಲೋಚನೆ ಕಾಣದ ಶಂಕರ ಮನಸ್ಸು ತಡೆಯದೆ ಮಧ್ಯೆ ಪ್ರವೇಶಿಸಿದ..

ಶಂಕರ : ಅಣ್ಣಾ .. ನೀನು ಹೇಳುವುದೂ ಒಂದು ಅರ್ಥದಲ್ಲಿ ಸರಿ..ಆದರೆ ನಾವು ನಮ್ಮ ಮಕ್ಕಳ ಸ್ಥಾನದಲ್ಲಿ ನಿಂತು ಆಲೋಚನೆ ಮಾಡಬೇಕು..ಯುವಕ ಒಳ್ಳೆಯ ವಿದ್ಯಾವಂತ ಸಂಸ್ಕಾರವಂತನಂತೆ ಕಂಡ ನನಗೆ.. ಇನ್ಫೋಸಿಸ್ ನಲ್ಲಿ ಉದ್ಯೋಗವೂ ಇದೆ..ನನ್ನ ಭಾವಮೈದುನ ಅಲ್ಲಿಯೇ  ಉದ್ಯೋಗದಲ್ಲಿ ಇರುವುದು.. ಅವನಲ್ಲಿ ಕಿಶನ್ ಬಗ್ಗೆ ವಿಚಾರಿಸಿಕೊಳ್ಳುತ್ತೇನೆ.ನೀವು ಇಲ್ಲಿ ನೆಂಟರಿಷ್ಟರಲ್ಲಿ ತಿಳಿದುಕೊಳ್ಳಿ..ಜಾತಕವೂ ಸರಿಹೊಂದಿದರೆ ಮತ್ತೆ ಯಾಕೆ ಈ ಯೋಚನೆಗಳೆಲ್ಲ..?

ಭಾಸ್ಕರ ಶಾಸ್ತ್ರಿಗಳು: ಹೂಂ...ನೀನೂ ಇವಳನ್ನೇ ಬೆಂಬಲಿಸಿಕೊಂಡು ಬಂದೆಯಾ..?

ಶಂಕರ : ಅಣ್ಣಾ..ನನ್ನ ವಿದ್ಯಾರ್ಥಿನಿಯರನ್ನು ಎಷ್ಟೋ ಜನರನ್ನು ನೋಡಿದ್ದೇನೆ..ಬಾಲಿಶವಾದ ಪ್ರೇಮ..ವಿದ್ಯಾಭ್ಯಾಸ ಪೂರ್ಣವಾಗದೆ ಓಡಿಹೋಗುವುದು,ಬದುಕುತ್ತೇವೆ ಎಂದುಕೊಂಡು ಹೆತ್ತವರನ್ನು ಎದುರು ಹಾಕಿಕೊಂಡು  ಮದುವೆಯಾಗಿ ಕೆಲವೇ ಸಮಯದಲ್ಲಿ ಬೇರೆಯಾಗುವುದು ಇತ್ಯಾದಿ..ಅಷ್ಟೇ ಪ್ರಮಾಣದಲ್ಲಿ ಪ್ರೀತಿಸಿ ಚೆನ್ನಾಗಿ ಜೀವನ ಮಾಡುವವರೂ ಇದ್ದಾರೆ.. ಜಾತಿ, ಧರ್ಮವನ್ನು ಮೀರಿ ಬದುಕುವವರೂ ಇದ್ದಾರೆ.. ಇಲ್ಲಿ ನಮಗೆ ಅಂತಹ ಯಾವ ಸಮಸ್ಯೆಗಳೂ ಇಲ್ಲದಿದ್ದರೂ ಯಾಕಣ್ಣ ಈ ಮೊಂಡುತನ..?
(ಮೈತ್ರಿಯ ಕಡೆ ತಿರುಗಿ)
 ಮೈತ್ರಿ ನೀನು ಒಳಗೆ ಹೋಗು ಮಗಳೇ.. ಸಾಕಿನ್ನು... ಕಿಶನ್ ಬಗ್ಗೆ ನಾನು ತಿಳೀತೀನಮ್ಮ.. ನೀನು ಧೈರ್ಯದಿಂದ ಇರು..ನನಗೆ ಕಿಶನ್ ಹಿಡಿಸಿದ್ದಾನೆ..ಒಳ್ಳೆಮಾಣಿ ..ಮಗಳಿಗೆ ತಕ್ಕ ಅಳಿಯ ಎನಿಸಿದೆ.. ಯಾವುದಕ್ಕೂ ಎರಡು ಮೂರು ದಿನದಲ್ಲಿ ತಿಳಿದು ಹೇಳುವೆ...

ಮೈತ್ರಿ ಒಳಗೆ ತೆರಳಿದಳು.ಮಂಗಳಮ್ಮನೂ ಮಗಳನ್ನು ಹಿಂಬಾಲಿಸಿದರು..ಶಂಕರ ಅಪ್ಪ ಮತ್ತು ಅಣ್ಣನೊಡನೆ ಚರ್ಚಿಸುತ್ತಿದ್ದ..ಈಗಿನ ಕಾಲಕ್ಕೆ ತಕ್ಕಂತೆ ನಾವು ಹಿರಿಯರೂ ಬದಲಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿದ...

         ‌

ಸಂಜನಾ ,ವಂದನಾ, ಗಾಯತ್ರಿ ಸ್ನಾನ ಮಾಡಿ ಹೊರಟು ನಿಂತರು.. ಶಂಕರನೂ ಸ್ನಾನ ಜಪಾದಿಗಳನ್ನು ಮುಗಿಸಿ ಅಮ್ಮ ಊಟಕ್ಕೆ ಕರೆದಾಗ ಬಂದು ಕುಳಿತನು.. ಇಷ್ಟು ದಿನ ಖುಷಿಯಿಂದ ಅಡುಗೆ ಬಡಿಸುತ್ತಿದ್ದ ಅತ್ತಿಗೆಯ ಮುಖವು ಇಂದು ಬಾಡಿದ್ದು ಕಂಡು ಅವನಿಗೆ ಬೇಸರವಾಯಿತು.. "ಅತ್ತಿಗೆ ನೀವೇನೂ ಯೋಚಿಸಬೇಡಿ.. ಕಿಶನ್ ಬಗ್ಗೆ ನಾನು ನಿಮಗೆ ತಿಳಿದು ಹೇಳುವೆ..ಒಳ್ಳೆಯ ಯುವಕನೆಂದಾದರೆ ಮುಂದಿನ ಕಾರ್ಯಕ್ರಮಕ್ಕೆ ನಾನೇ ಮುಂದಾಗಿ ಬರುತ್ತೇನೆ..ಅಣ್ಣನ ವರ್ತನೆಗೆ ಬೇಸರಿಸಿಕೊಳ್ಳಬೇಡಿ" ಎಂದು ಮೈದುನ ಹೇಳಿ ಸಮಾಧಾನ ಪಡಿಸಿದರೆ ಮಂಗಳಮ್ಮನ ಕಣ್ಣಂಚಿನಿಂದ ಹನಿ ಜಿನುಗುತ್ತಿತ್ತು..


ಶಂಕರನ ಕುಟುಂಬ ಬೆಂಗಳೂರಿಗೆ ಹೊರಟು ನಿಂತಿತು.. ಸಂಜನಾ, ವಂದನಾ ...ಅಕ್ಕ, ತಮ್ಮನಿಗೆ ಬೇಸರದಿಂದಲೇ ಬಾಯ್ ಹೇಳಿದರು..ದೊಡ್ಡಪ್ಪನಲ್ಲಿ ಹೋಗಿಬರುತ್ತೇವೆ ಅಂದಾಗ ಇವರ ಸ್ವರವೂ ಗಂಭೀರವಾಗಿ ಇತ್ತು.. ದೊಡ್ಡಮ್ಮನಿಗೊಂದು ಅಪ್ಪುಗೆ ಕೊಟ್ಟು ಅಜ್ಜ ಅಜ್ಜಿಗೆ ನಮಸ್ಕರಿಸಿ ಕಾರು ಏರಿದರು..ಗಾಯತ್ರಿ "ಅಕ್ಕಾ ಹೆದರಬೇಡ..ನಾವು ನಿಮ್ಮ ಜತೆಗಿದ್ದೇವೆ.." ಎನ್ನಲು ಮರೆಯಲಿಲ್ಲ..ಅತ್ತೆ ಮಾವನ ಕಾಲಿಗೆರಗಿದರು..


    ಕಾರು ಬೆಂಗಳೂರಿನತ್ತ ಪಯಣ ಬೆಳೆಸಿತು..ಮನೆಯು ಒಮ್ಮೆ ಸ್ತಬ್ಧವಾದಂತಾಯಿತು..ಸಾಗುತ್ತಿರುವಾಗ ಮನೆಯ ವಾತಾವರಣದ ಬಗ್ಗೆ ಚರ್ಚಿಸುತ್ತಿದ್ದರು.. ಸಂಜನಾ ವಂದನಾಗೆ ದೊಡ್ಡಪ್ಪ ಅಕ್ಕನನ್ನು ಗದರಿದ್ದು ಸ್ವಲ್ಪವೂ ಇಷ್ಟವಾಗಿರಲಿಲ್ಲ .. ಗಾಯತ್ರಿ..". ರೀ..ನೀಮಗೂ ಹೀಗೆಲ್ಲ ಗದರುತ್ತಿದ್ದರಾ.".ಅಂತ ಕೇಳಲೂ ಮರೆಯಲಿಲ್ಲ.. "ನಾನು ಲವ್ ಮಾಡಿದ್ದರೆ ತಿಳಿಯುತ್ತಿತ್ತು .."ಎಂದು ನಸುನಕ್ಕ ಶಂಕರ..


       ‌.         ****

   ಹುಡುಗಿ ನೋಡಿ ಬಂದ ಕಿಶನ್ ಮತ್ತು ಅಪ್ಪನನ್ನು ತಂಗಿಯರು ಅಮ್ಮ ಕಾರಿನಿಂದಿಳಿಯುತ್ತಲೇ ಪ್ರಶ್ನಿಸತೊಡಗಿದ್ದರು..".. ಅಯ್ಯಾ..ಒಳ್ಳೇ ನ್ಯೂಸ್ ಚಾನಲ್ ನವರು ಪ್ರಶ್ನಿಸಿದಂತೆ ಪ್ರಶ್ನಿಸುತ್ತೀರಲ್ಲ ..ಸ್ವಲ್ಪ ನಮಗೆ ಮನೆಯೊಳಗೆ ಬರುವುದಕ್ಕೆ ಬಿಡುವಿರೋ.." ಎಂದು ಗಣೇಶ ಶರ್ಮ ಕೇಳಿದರೆ..ಅಳಿಯಂದಿರೂ ತಮ್ಮ ಪತ್ನಿಯರ ಕುತೂಹಲಕ್ಕೆ ನಕ್ಕುಬಿಟ್ಟರು.. ಮಮತಾ ಬಿಸಿ ನೀರು ತಂದು ಕುಡಿಯಲು ಕೊಟ್ಟಾಗ ಒಂದು ಲೋಟ ನೀರು ಕುಡಿದ ಗಣೇಶ ಶರ್ಮ ಸುದ್ದಿಯೆಲ್ಲ ಮಡದಿ ಮಕ್ಕಳು ಅಳಿಯಂದಿರಿಗೆ ತಿಳಿಸಿದರು.. ಎಲ್ಲರೂ ಮೈತ್ರಿಯ ಹಾಗೂ ಮನೆಯವರ ಬಗ್ಗೆ ಒಳ್ಳೆಯ ಅಭಿಪ್ರಾಯ ತಾಳುವಂತೆ ಇತ್ತು ಗಣೇಶ ಶರ್ಮರ ಮಾತುಗಳು..


"ನಾನು ಇನ್ನೊಂದು ಎರಡು ಮೂರು ದಿನದಲ್ಲಿ ಜೋಯಿಸರಲ್ಲಿ ಜಾತಕ ತೋರಿಸಿ ಬರುತ್ತೇನೆ" ಎಂದರು ಗಣೇಶ ಶರ್ಮ.. ಮಗನಲ್ಲಿ.."ಸರಿ" ಎಂದು ಕಿಶನ್ ತಲೆಯಲ್ಲಾಡಿಸಿದರೂ ಇನ್ನು ಜೋಯಿಸರು ಏನು ಹೇಳುತ್ತಾರೋ ಎಂಬ ಆತಂಕ ಮನಸಿನ ಮೂಲೆಯಲ್ಲಿ ಇತ್ತು..

ಕಿಶನ್ ಕೂಡ ಅಮ್ಮ ಮಾಡಿದ್ದ ತಿಂಡಿತಿನಿಸುಗಳನ್ನು ಪಾಕ್ ಮಾಡಿಕೊಂಡು ಬೆಂಗಳೂರಿಗೆ ಹೊರಡುವ ತಯಾರಿ ಮಾಡುತ್ತಿದ್ದನು.

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
24-02-2020.

ನಮಸ್ತೇ....

      ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ view web version ಕ್ಲಿಕ್ ಮಾಡಿ...💐🙏

2 comments:

  1. ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ...

    ReplyDelete
  2. ಆದಷ್ಟು ಬೇಗ ಬರಲಿದೆ... ಥ್ಯಾಂಕ್ಯೂ 💐🙏

    ReplyDelete