Friday, 21 February 2020

ಜೀವನ ಮೈತ್ರಿ-ಭಾಗ ೨೪(24)





      'ಶಾಸ್ತ್ರೀನಿವಾಸ'ದಲ್ಲಿ ಭಾಸ್ಕರ ಶಾಸ್ತ್ರಿಗಳು ಮೈತ್ರಿಯ ವಿಚಾರಣೆ ಗಂಭೀರವಾಗಿ ಆರಂಭಿಸಿದ್ದರು.ಮೈತ್ರಿಯನ್ನು ಚಾವಡಿಗೆ ಬರಹೇಳಿದ ಅಪ್ಪ "ಮಗಳೇ.. ನಿನ್ನನ್ನು ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ್ದು ಏತಕ್ಕೆ..?"
"ಓದಿ ನನ್ನ ಸ್ವಂತ ಕಾಲಮೇಲೆ ನಿಲ್ಲುವಷ್ಟು ವಿದ್ಯಾಭ್ಯಾಸ ಬೇಕು" ಎಂದು..
"ನೀನು ಮಾಡಿದ್ದೇನು.."
"ಅದನ್ನೇ ಮಾಡುತ್ತಿದ್ದೇನೆ ಅಪ್ಪಾ..ಪ್ರತಿ ಸೆಮಿಸ್ಟರ್ ನಲ್ಲಿಯೂ ಡಿಸ್ಟಿಂಕ್ಷನ್ ಗಳಿಸಿ ತರಗತಿಗೆ ಮೂರನೇ ಅಥವಾ ನಾಲ್ಕನೇ ಸ್ಥಾನ ಗಳಿಸುತ್ತಿದ್ದೇನೆ.."
"ಅಷ್ಟನ್ನೇ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿದ್ದರೆ ಈಗ ನಾನು ಕರೆದು ಕೇಳುತ್ತಿದ್ದೆನಾ..?"

"ಮತ್ತೇನು ಅಪ್ಪಾ..?" ಮೈತ್ರಿಗೆ ಗೊತ್ತು.. ಅಪ್ಪಾ ಕಿಶನ್ ಜೊತೆ ಪರಿಚಯ ಆದ ಬಗ್ಗೆ ಕೇಳುತ್ತಿದ್ದಾರೆ ಎಂದು.ಆದರೂ ಮೊದಲಿನ ಅಳುಕುತನ ಅವಳಲ್ಲಿರಲಿಲ್ಲ..ಅವಳೂ ದಿನದಿಂದ ದಿನಕ್ಕೆ ಹೃದಯ ಗಟ್ಟಿಮಾಡಿಕೊಳ್ಳುತ್ತಿದ್ದಾಳೆ.ಇದುವರೆಗೆ ಕಿಶನ್ ಮಾತ್ರ ಪರಿಚಯವಿದ್ದ ಮೈತ್ರಿಗೆ ಇವತ್ತು ಅವನ ತಂದೆಯನ್ನು ಕಂಡು ನಮ್ಮಿಬ್ಬರ ಪ್ರೇಮಸಂಬಂಧವನ್ನು ದಡಸೇರಿಸುವಂತಹ ವ್ಯಕ್ತಿ ಇವರು ಎಂಬ ವಿಶ್ವಾಸ ಗಣೇಶ ಶರ್ಮರ ಮೇಲೆ ಮೂಡಿತ್ತು.ವಿಶ್ವಾಸ ಧೈರ್ಯವನ್ನು ತಂದುಕೊಡುತ್ತದೆ.ಅದೇ ಧೈರ್ಯದಿಂದ ಇವತ್ತು ತಂದೆಯ ದನಿಗೆ ಹೆದರದೆ ಉತ್ತರಿಸುತ್ತಿದ್ದಾಳೆ . ಇದು ಅವಳ ಬದುಕಿನ ಪ್ರಶ್ನೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾಳೆ.

"ಓದಲು ಕಾಲೇಜಿಗೆ ಹೋದವಳಿಗೆ ಸೀನಿಯರ್ ಹುಡುಗನನ್ನು ಪರಿಚಯ ಮಾಡಿಕೊಳ್ಳುವ ಅಗತ್ಯವೇನಿತ್ತು.."
"ಅಪ್ಪಾ..ನಾನಾಗಿ ಅವರನ್ನು ಪರಿಚಯ ಮಾಡಿಕೊಂಡಿಲ್ಲ..ಯಾವುದೋ ಸಂದರ್ಭದಲ್ಲಿ ಕಾಲೇಜಿನಲ್ಲಿ ಮುಖಾಮುಖಿಯಾದೆವು..ನಂತರ ನಮ್ಮ ಸಂಬಂಧಿಕರ ಮದುವೆಯಲ್ಲಿ ಕಂಡಿದ್ದೆ..ಅಷ್ಟೇ ಅಪ್ಪಾ.."

"ಅಷ್ಟೇನಾ..."
"ಹೌದು..ಅಷ್ಟೇನೇ.."
"ಅಷ್ಟೇ ಆಗಿದ್ರೆ ಅವರು ಯಾಕೆ ಮನೆವರೆಗೆ ಬಂದು ಹೆಣ್ಣು ಕೇಳುತ್ತಿದ್ದರು.. ಯಾರಾದರೂ ಪರಿಚಯದವರಲ್ಲಿ ಕೇಳಲು ಹೇಳುತ್ತಿದ್ದರು...ಇಬ್ಬರ ನಡುವೆ ಪ್ರೇಮವಿರುವುದು ನಿಮ್ಮ ನಡತೆಯಿಂದ ಆರಿವಾಗದಷ್ಟು ದಡ್ಡನಾ ನಿನ್ನಪ್ಪಾ.."ಎನ್ನುತ್ತಾ ದನಿಯೇರಿಸಿದರು..

ಮೈತ್ರಿ ಸ್ವಲ್ಪವೂ ಕದಲದೆ ನಿಂತಿದ್ದಳು.. ಉತ್ತರಿಸಲು ಹೋಗಲಿಲ್ಲ..ಎಂದಿನಂತೆ ಕಣ್ಣೀರು ಸುರಿಸಲಿಲ್ಲ.. ಕೈಕಾಲು ನಡುಗಲಿಲ್ಲ..

ಗಂಡನ ಏರುಸ್ವರವನ್ನು ಕೇಳಿ ಗಾಬರಿಗೊಂಡ ಮಂಗಳಮ್ಮ ಚಾವಡಿಗೆ ಧಾವಿಸಿದರು..

"ಹೇಳು.. ಮೈತ್ರಿ ..ಯಾವನನ್ನೋ ಪ್ರೀತಿಸುವ ಅಗತ್ಯವೇನಿತ್ತು ನಿನಗೆ..ಪ್ರೀತಿಸುವುದೇ ಜೀವನದ ಗುರಿಯಾಗಿದ್ದರೆ ಹದಿನೆಂಟು ವರ್ಷಕ್ಕೇ ಮದುವೆ ಮಾಡುತ್ತಿದ್ದೆ.."

"ಪ್ರೀತಿ ಪ್ರೇಮ ನನ್ನ ಗುರಿಯೆಂದು ನಾನೆಂದೂ ಅಂದುಕೊಂಡಿಲ್ಲ ಅಪ್ಪಾ.."
"ಮತ್ತೇಕೆ ಹೀಗೆ ಮಾಡಿದೆ...ನನ್ನ ಮಕ್ಕಳು ಅಡ್ಡದಾರಿ ಹಿಡೀಬಾರ್ದು,ಲವ್ ಮಾಡಿ ಕೆಟ್ಟ ಹೆಸರು ತರಬಾರದು,ಪರೀಕ್ಷೆಗಳಲ್ಲಿ ಫೇಲ್ ಆಗಬಾರದು ಎಂದು ನಾನು ಇಷ್ಟೆಲ್ಲಾ ಶಿಸ್ತನ್ನು ನಿಮ್ಮಲ್ಲಿ ಅಳವಡಿಸಲು ಪ್ರಯತ್ನಿಸಿದರೆ.. ನೀನು ಹೀಗೆ ಮಾಡುತ್ತೀಯಾ ಎಂದು ತಿಳಿದಿರಲಿಲ್ಲ.."
"ನಿಮ್ಮ ಹೆಸರು ಹಾಳಾಗುವಂತಹ ಕೆಲಸ ನಾನೇನೂ ಮಾಡಿಲ್ಲ"
"ನನ್ನ ಮಗಳೇ ಹೀಗೆ ಲವ್ ಮಾಡಿದರೆ ನಾನು ಹದಿಹರೆಯದಲ್ಲೇ ಪ್ರೇಮಪಾಶಕ್ಕೆ ಸಿಲುಕುವ ನನ್ನ ವಿದ್ಯಾರ್ಥಿಗಳಿಗೆ ಹೇಗೆ ಬುದ್ಧಿವಾದ ಹೇಳಲೀ.. ಅವರು ನಿಮ್ಮ ಮಗಳು ಏನು ಮಾಡಿದ್ದಾಳೆ ಅನ್ನಲಾರರೇ....??"
"ನಾನೇನೂ  ಲವ್ ಮಾಡಿಲ್ಲ.. ಪರಸ್ಪರ ಪರಿಚಯ ಸ್ನೇಹ ಸಲುಗೆ ಇತ್ತು.."

"ಮತ್ತೆ ಮತ್ತೆ ಅದನ್ನೇ ಹೇಳಿ ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ ... ಸಮಾಜದಲ್ಲಿ ಆದರ್ಶವಾಗಿ ಬಾಳಬೇಕು ನನ್ನ ಕುಟುಂಬ ಎಂಬ ನನ್ನ ಆಸೆಗೆ ನೀರೆರೆದು ಬಿಟ್ಟಿಯಲ್ಲೇ..ನಿನ್ನನ್ನಾ.."ಎನ್ನುತ್ತಾ ಮಗಳ ಮೇಲೆ ಕೈಮಾಡ ಹೊರಟರು.

ಇಬ್ಬರ ಮಧ್ಯೆ ಆಗಮಿಸಿದ ಮಂಗಳಮ್ಮ..ಗಂಡನ ಕೈಯನ್ನು ಪಕ್ಕಕ್ಕೆ ತಳ್ಳಿ"ಮಗಳ ಮೇಲೆ ಕೈಮಾಡಬೇಡಿ... ಅವಳೇನು ತಪ್ಪು ಮಾಡಿದಳು.. ಹೊಡೆಯುವಂತಹದ್ದು.."
"ನೀನು ತಾಯಿಯಾದವಳು ಹೀಗೆ ಮಗಳಿಗೆ ಸಪೋರ್ಟ್ ಮಾಡುವುದಕ್ಕೇ ಅವಳು ಇವತ್ತು ನಮ್ಮ ಕುಟುಂಬದ ಇತಿಹಾಸದಲ್ಲೇ ಯಾರೂ ಮಾಡದ ಕೆಲಸ ಮಾಡಿರುವುದು.."ಎನ್ನುತ್ತಾ ಅಬ್ಬರಿಸಿದರು.

"ಇಲ್ಲ..ಅವಳು ಏನು ಮಾಡುತ್ತಿದ್ದಾಳೆ ಎಂಬ ಅರಿವು ಅವಳಿಗಿದೆ.ಹುಡುಗಾಟಿಕೆಯ ಬುದ್ಧಿ ಆವಳದಲ್ಲ.."
"ಏನಂದೆ..ಮಾಡೋದೆಲ್ಲ ಮಾಡಿ..ಹುಡುಗಾಟಿಕೆ ಯು ಬುದ್ಧಿ ಅಲ್ವಾ.."ಎನ್ನುತ್ತಾ ತಾಯಿ ಮಗಳಿಬ್ಬರಿಗೂ ಕೈಯೈತ್ತಿ ಹೊಡೆಯಹೊರಟರು..

ಪರಿಸ್ಥಿತಿಯನ್ನರಿತ ಮಹೇಶ್ ಅಲ್ಲೇ ಪಕ್ಕದಲ್ಲಿ ನಿಂತಿದ್ದವನು ಆಪ್ಪನೆದುರಿಗೆ ಬಂದು ನಿಂತ.."ಅಪ್ಪಾ.. ನೀವು ಅಮ್ಮ, ಅಕ್ಕ ಇಬ್ಬರ ಮೇಲೆ ಕೈಮಾಡಿದರೂ ನನ್ನ ಮೇಲಾಣೆ..
ಅಲ್ಲಾ..ಒಬ್ಬ ಯುವತಿ ಯುವಕನೊಂದಿಗೆ ಸಲುಗೆಯಿಂದಿದ್ದರೆ ಅದರಿಂದ ಕುಟುಂಬದ ಮಾನ ಹೋಗುತ್ತದೆ ಅಂತೀರಲ್ಲಾ.. ಸ್ವಲ್ಪ ನೀವೂ ವಿಶಾಲವಾಗಿ ಯೋಚಿಸುವುದನ್ನು ಕಲಿಯಿರಿ.."
"ಹಾಂ..ನೀನೊಬ್ಬ ಬಾಕಿ ಅಕ್ಕನ ಪರ ಉಪದೇಶ ಮಾಡುವುದಕ್ಕೆ..."

"ಹೌದು ಅಪ್ಪಾ..ನಾನೂ ಉಪದೇಶ ಮಾಡಬಲ್ಲೆ..ಅವಳು ಮಾಡಿದ ಕೆಲಸವನ್ನೇ ನೀವೂ ಮಾಡುತ್ತಿದ್ದೀರಿ ಎಂದೂ ನಿಮ್ಮ ತಪ್ಪನ್ನು ಎತ್ತಿತೋರಿಸಬಲ್ಲೆ"

"ಥೂ..ನಾನು ಅಂತಹಾ ಕೆಲಸ ಮಾಡಿದವನಲ್ಲ..ಮಾಡಿದವರನ್ನು ಸಹಿಸುವುದೂ ಇಲ್ಲ..ಅದು ನನ್ನ ಮಕ್ಕಳೇ ಆಗಲಿ, ವಿದ್ಯಾರ್ಥಿಗಳೆ ಆಗಲಿ.."ಎನ್ನುತ್ತಾ ಆಟ್ಟಹಾಸಗೈದರು..
"ಸ್ವಲ್ಪ ತಾಳ್ಮೆಯಿರಲಿ..ನಾನು ಹೇಳುವುದನ್ನು ಕೇಳಿ.. ನಿಮಗೆ ಕೆಲವೊಮ್ಮೆ ಬೆಳಿಗ್ಗೆ ಏಳು ಗಂಟೆ ಗೆ ಸರಿತಾ ಟೀಚರ್ ಫೋನ್ ಮಾಡ್ತಾರೆ..ಸರ್.. ಇವತ್ತು ಫಂಕ್ಷನ್ ಇದೆ ಗೆಸ್ಟ್ ಗೆ ಬೊಕ್ಕೆ ತರಲು ಹೆಡ್ ಮಾಸ್ಟರ್ ನನಗೆ ಹೇಳಿದ್ದಾರೆ.. ನೀವು ಬರ್ತಾ ತಂದ್ರೆ ಉಪಕಾರ .. ಎಂದರೆ ಸಾಕು ನಗುನಗುತ್ತಾ ಆಯ್ತು ಅಂತೀರಿ..ನಾವ್ಯಾರಾದರೂ ನಿಮ್ಮಿಬ್ಬರ ಮಧ್ಯೆ ಸಂಬಂಧ ಕಲ್ಪಿಸಿ ಆಡಿದ್ದೀವಾ..ಹೋಗಲಿ ಬಿಡಿ..ಮೊನ್ನೆ ಶಾಲೆಯ ಟೂರ್ ಇತ್ತಲ್ಲಾ..ಎರಡು ದಿನಕ್ಕೆ ಹೋದ್ರಿ.. ಮುಂಜಾನೆ ನಾಲ್ಕು ಗಂಟೆಗೇ ಸರಿತಾ ಟೀಚರ್ ಕಾಲ್ ಮಾಡಿದ್ರು ಸರ್.. ನೀವು ಶಾಲೆಕಡೆಗೆ ಹೋಗುವಾಗ ನಮ್ಮನೆ ಪಕ್ಕದಲ್ಲೇ ಸ್ವಲ್ಪ ಬರಬಹುದಾ..ನನಗೂ ಮಕ್ಕಳೊಂದಿಗೆ ಬರಲು ಸುಲಭ ಅಂತ.. ಯಾಕಪ್ಪಾ ಅವಳಿಗೆ ಗಂಡ ಕರ್ಕೊಂಡು ಬರಲ್ವಾ..?? ನೀವೇ ಯಾಕೆ ಹೋಗ್ಬೇಕು.. ?? ನಾವ್ಯಾರಾದರೂ ನಿಮ್ಮನ್ನು ಕೇಳಿದ್ದೇವಾ...?? ಅವರಿಗೂ ಅವರ ಸೇವೆಗೆ ಸಂಬಳ ಸಿಗುತ್ತದೆ ತಾನೇ..?? ತನ್ನ ಕೆಲಸ ಇನ್ನೊಬ್ಬ ಪುರುಷ ಶಿಕ್ಷಕನ ಕೈಯಲ್ಲಿ ಮಾಡಿಸಿದರೆ ಅಥವಾ ನೀವು ಅವರ ಬಲಗೈ ಬಂಟನಂತೆ ನಡೆದುಕೊಂಡರೆ ಜನ ಆಡಿಕೊಳ್ಳಲ್ವಾ.. ?? ಯಾವತ್ತಾದರೂ ಅಮ್ಮ ನಿಮ್ಮಿಬ್ಬರ ಮಧ್ಯೆ ಇಲ್ಲಸಲ್ಲದ್ದನ್ನು ಕಲ್ಪಿಸಿ ಆಡಿದ್ದಿದೆಯಾ..???"

"ನೋಡು ಮಹೇಶ್..ಆ ವಿಷಯವೇ ಬೇರೆ..ಇದೇ ಬೇರೆ..ಆಕೆ ಮದುವೆಯಾದ ಹೆಣ್ಣುಮಗಳು.. ಸಹೋದರಿಯಂತೆ.. ಇವರಿಬ್ಬರೂ ಪರಸ್ಪರ ಪ್ರೀತಿಸಿದ್ದು..ಅದೆಲ್ಲ ಅರ್ಥವಾಗುವ ವಯಸ್ಸು ನಿನ್ನದಲ್ಲ..."

"ನನಗರ್ಥ ಆಗುತ್ತದೆ.. ನಿಮಗೆ ನಿಮ್ಮಿಷ್ಟದಂತೆಯೇ ಎಲ್ಲವೂ ನಡೆಯಬೇಕು..ನಿಮ್ಮನ್ನು ಯಾರೂ ಪ್ರಶ್ನಿಸುವಂತಿಲ್ಲ.. ಹಾಗಾದರೆ ಮಾತ್ರ ಸಮಾಧಾನ.. ಮಡದಿ ಮಕ್ಕಳ ಆಸೆಗಳಿಗೆ ಗೌರವವಿಲ್ಲ.."

"ಮಗಳಿಗೆ ಮದುವೆ ಮಾಡುವ ಜವಾಬ್ದಾರಿ ತಂದೆತಾಯಿಗಿದೆ.ವಿದ್ಯಾಭ್ಯಾಸ ಮುಗಿಯುವವರೆಗೆ ಕಾಯುವ ತಾಳ್ಮೆಇಲ್ಲದಿದ್ದರೆ.. ಮೊದಲೇ ಹೇಳುತ್ತಿದ್ದರೆ ನಾವೇ ಮುಂದೇ ನಿಂತು ಸೂಕ್ತ ವರನಿಗೆ ಧಾರೆಯೆರೆಯುತ್ತಿದ್ದೆವು..ಈಗ ನಮ್ಮನ್ನು ನಾಲ್ವರು ಆಡಿಕೊಳ್ಳುವಂತಾಯಿತು.. ಮಾಷ್ಟ್ರ ಮಗಳದು ಲವ್ ಮ್ಯಾರೇಜ್ ಅಂತ.."

"ಅಪ್ಪಾ..ಲವ್ ಮ್ಯಾರೇಜ್ ಆದರೂ ಅರೇಂಜ್ಡ್ ಮ್ಯಾರೇಜ್ ಆದರೂ ಹೊಂದಿಕೊಂಡು ಬದುಕುವುದು ಮುಖ್ಯವೇ ಹೊರತು ಮದುವೆ ಯಾವ ರೀತಿಯದ್ದು ಎಂಬುದು ಮುಖ್ಯವಲ್ಲ."ಎಂದ ಮಹೇಶ್.

"ನಾವು ಹಿರಿಯರು ಆಶೀರ್ವದಿಸಿ ಮಾಡಿದ ಮದುವೆಗೆ ಬಾಳ್ವಿಕೆ ಹೆಚ್ಚು..ಚಂದ ಹೆಚ್ಚು.. ಲವ್ ಮಾಡಿ ಎರಡೇ ವರ್ಷದಲ್ಲಿ ಡೈವೋರ್ಸ್ ಕೊಟ್ಟರೆ ಗೋವಿಂದ...ಅರಳುವ ಹೂವಿಗೆ ಮಕರಂದ ಹೀರುವ ದುಂಬಿ ಮುತ್ತಿಕೊಳ್ಳುತ್ತದೆ..ಮಕರಂದ ಸವಿದು ಹೂವು ಬಾಡಿದಾಗ ತಾನು ಇನ್ನೊಂದು ಹೂವನ್ನು ಆಶ್ರಯಿಸುತ್ತದೆ.."

"ಅಪ್ಪಾ.. ಕಿಶನ್ ಅಂತಹವರಲ್ಲ.. ಕಿಶನ್ ದುಂಬಿಯಂತೆ ಸಿಕ್ಕಸಿಕ್ಕ ಹೂವುಗಳಿಂದ ಮಕರಂದ ಹೀರಲು ಕಾದುಕುಳಿತವರಲ್ಲ..ಏನೇನೋ ಹೇಳಬೇಡಿ.."ಎಂದಳು ಏರು ಧ್ವನಿಯಲ್ಲಿ ಮೈತ್ರಿ.. ಅವಳಿಗೆ ಕಿಶನ್ ಬಗ್ಗೆ ಅಪ್ಪ ಹೇಳಿದ ಮಾತು ಬೇಸರ, ಸಿಟ್ಟು ತರಿಸಿತ್ತು.

"ಅದೆಲ್ಲ ಈಗ ನಿನಗೆ ಅರ್ಥವಾಗದು.. ಅರ್ಥವಾಗಲು ಎರಡು ಮೂರು ವರ್ಷಗಳು ಬೇಕು..ಆಗ ಮತ್ತೆ ಅಪ್ಪಾ ಎಂದು ನನ್ನೆದುರು ಅಂಗಲಾಚಬೇಡ.."

"ಏನೇ ಕಷ್ಟ ಬಂದರೂ ಅಂಗಲಾಚಲಾರೆ ಅಪ್ಪಾ..ನನಗೆ ನನ್ನ ಕಾಲ ಮೇಲೆ ಬದುಕುವ ಸಾಮರ್ಥ್ಯವಿದೆ.."

ಮಹೇಶ್ ಈಗ ಸುಮ್ಮನಿರಲು ಸಾಧ್ಯವಿಲ್ಲ ಎಂದುಕೊಂಡು ಒಂದು ಸತ್ಯವನ್ನು ಬಯಲು ಮಾಡಹೊರಟ.. " ಹಿರಿಯರು ಆಯ್ಕೆ ಮಾಡಿದ ಯುವಕ ಸನ್ನಡತೆಯಲ್ಲಿರುತ್ತಾನೆ ಎಂಬ ಖಾತ್ರಿಯೂ ಇಲ್ಲ.. ಲವ್ ಮ್ಯಾರೇಜ್ ಗೆ ಆಯಸ್ಸು ಕಡಿಮೆ ಎಂದೂ ಹೇಳಲಾಗದು.."

"ಇನ್ನೂ ವರುಷ ಇಪ್ಪತ್ತು ದಾಟದ ನೀನು ನನಗೆ ಹೇಳಬೇಡ..ಬಾಯ್ಮಚ್ಚಿ ನಡೆ.."

"ಇಲ್ಲ ಅಪ್ಪಾ... ನೀವು ಮಾಡುತ್ತಿರುವುದು ಸರಿಯಿಲ್ಲ.."
"ಹೌದು ಮತ್ತೇನು..ಲವ್ ಮಾಡಿ ಮನೆತನಕ್ಕೆ ಕೆಟ್ಟ ಹೆಸರು ತರಲು ಬಯಸಿದವಳನ್ನು ನಿಮ್ಮಂತೆ ಹಾಡಿಹೊಗಳಬೇಕೇನು..??"

"ನಿಧಾನವಾಗಿ ಕಿಶನ್ ಬಗ್ಗೆ ಅವನ ಕುಟುಂಬದವರ ಬಗ್ಗೆ ತಿಳಿದುಕೊಳ್ಳಿ.. ಆಮೇಲೆ ಮಾತನಾಡಿ..ಬೇಕಾದರೆ ಕಿರುಚಿಕೊಳ್ಳಿ.."
"ಏನಂದೆ..ನನಗೇ ಎದುತ್ತರ ಕೊಡುತ್ತೀಯಾ.."ಧ್ವನಿ ಏರಿತು..

"ಹೌದು.. ನೀವು ಅಕ್ಕನ ಜಾತಕ ಕೊಟ್ಟ ಬಾರಂತಡ್ಕದ ಕೇಶವ್ ಭಾರೀ ಸನ್ನಡತೆಯ ವ್ಯಕ್ತಿ ಅಂದುಕೊಂಡರೆ ಅದು ಶುದ್ಧ ಸುಳ್ಳು.. ಅವನು ನಿಜವಾಗಿಯೂ ಅರಳುವ ಹೂವನರಸುವ ದುಂಬಿ..ದುಡ್ಡಿನ ಮದದಿಂದ ಅದನ್ನೆಲ್ಲ ಮರೆಸುವ ಶಕ್ತಿಯುಳ್ಳವನು.. ನೀವು ಯಾರಲ್ಲಿ ಅವನ ಬಗ್ಗೆ ಒಳ್ಳೆಯ ಮಾತು ಕೇಳಿದಿರೋ...!!!!!! ಶ್ರೀಮಂತರ ಹಾದಿತಪ್ಪಿದ ನಡತೆ ಬಗ್ಗೆ ಗೊತ್ತಿದ್ದರೂ ಮೌನವಾಗಿದ್ದು ಒಳ್ಳೆಯವರು ಎಂದು ಹೊಗಳುವ ಹೊಗಳುಭಟ್ಟರೇ ಹೆಚ್ಚು..ಮಧ್ಯಮವರ್ಗದವರು ಮಾನವೀಯತೆ, ಪ್ರೀತಿ ,ಪ್ರೇಮ ಇತ್ಯಾದಿ ಮೌಲ್ಯಗಳಿಗೆ ಬೆಲೆಕೊಟ್ಟು ಬದುಕಿದರೂ ಆಂತಹವರ ಮೇಲೆ ಸಂಶಯ ತಪ್ಪಿದ್ದಲ್ಲ.."

"ಕೇಶವ್ ನ ಬಗ್ಗೆ ಹೀಗೆಲ್ಲ ನಿನಗೆ ಹೇಗೆ ಗೊತ್ತಾಯ್ತು.."

"ಅಪ್ಪಾ.ನಿಮಗೆ ಮಗಳ ಮದುವೆಯ ಕಾಳಜಿ ಎಷ್ಟಿದೆಯೋ ನನ್ನಕ್ಕ ನಗುನಗುತ್ತಾ ಸುಖವಾಗಿ ಬಾಳಬೇಕು ಅನ್ನುವ ಆಸ್ಥೆ ನನಗೂ ಅಷ್ಟೇ ಇದೆ.. ಆದ್ದರಿಂದಲೇ ನಾನೂ ಅವನ ಬಗ್ಗೆ ತಿಳಿದುಕೊಳ್ಳಲೇಬೇಕಾಯಿತು.."

"ಮತ್ತೆ ಯಾಕೆ ಇಷ್ಟು ದಿನ ಮುಚ್ಚಿಟ್ಟೆ..ಈಗ ಈ ಸಂಬಂಧವನ್ನು ಮುಂದುವರಿಸಲು ಸುಳ್ಳು ಹೆಣೆಯುತ್ತಿಲ್ಲ ತಾನೇ..."

"ಹೇಳುವ ಸಂದರ್ಭ ಬಂದಾಗ ಹೇಳಿದರೆ ಅದಕ್ಕೊಂದು ಅರ್ಥ... ಕೇಶವ್ ನೊಂದಿಗೆ ಮದುವೆ ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಮಾಡುವ ಹುನ್ನಾರಕ್ಕಿಂತ ಪರಿಚಯವಿರುವ ಕಿಶನ್ ಬಗ್ಗೆ ಇನ್ನಷ್ಟು ತಿಳಿದುಕೊಂಡು ಮುಂದುವರಿಯುವುದು ಸೂಕ್ತ..."

       ಈಗ ಭಾಸ್ಕರ ಶಾಸ್ತ್ರಿಗಳು ಸ್ವಲ್ಪ ಮೆದುವಾದರು.ಮಗ, ಮಡದಿ, ಮಗಳು ಮೂವರೂ ಒಗ್ಗಟ್ಟಿನಿಂದ ನಿಂತಿದ್ದರೆ ತಾನೇ ಒಬ್ಬಂಟಿಯಾದೆ ಅನಿಸತೊಡಗಿತು..


ಮುಂದುವರಿಯುವುದು...

✍️ ಅನಿತಾ ಜಿ.ಕೆ.ಭಟ್.
22-02-2020.


ನಮಸ್ತೇ...

      ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home'ಮತ್ತು> ಸಂಕೇತಗಳನ್ನು ಬಳಸಿಕೊಳ್ಳಬಹುದು.view web version ಕ್ಲಿಕ್ ಮಾಡಿ ಫಾಲೋ ಮಾಡಬಹುದು.




No comments:

Post a Comment