ಶಾಸ್ತ್ರಿ ನಿವಾಸದಲ್ಲಿ "ಲ್ಯಾಂಡ್ ಲೈನ್ ಫೋನ್ ಹಾಳಾಗಿದೆ...ಡಯಲ್ ಟೋನ್ ಬರ್ತಾ ಇಲ್ಲ" ಎಂದು ಮಗ ಭಾಸ್ಕರ ಬಂದ ಕೂಡಲೇ ಮಹಾಲಕ್ಷ್ಮಿ ಅಮ್ಮ ತಿಳಿಸಿದರು..ಮಂಗಳಮ್ಮ ತನಗೇನೂ ಅರಿಯದಂತೆ ಸುಮ್ಮನಿದ್ದರು...
ಭಾಸ್ಕರ ಶಾಸ್ತ್ರಿಗಳು "ನಾಳೆ ಬಿಎಸ್ ಎನ್ ಎನ್ ಕಛೇರಿಯಲ್ಲಿ ದೂರು ದಾಖಲಿಸುವೆ..ಅವರೇ ಸರಿ ಮಾಡಿಯಾರು..ನಿಮಗೆ ಬಳಸಲು ನನ್ನ ಹಳೆಯ ಫೋನ್ ಕೊಡುವೆ"ಎಂದು ತಾಯಿಯನ್ನು ಸಮಾಧಾನಿಸಿದ ಮಗ.
ಶಾಸ್ತ್ರಿಗಳು ಮಗನಲ್ಲಿ ತೋಟದ,ಕೃಷಿಯ ವಿಚಾರವಾಗಿ ಮಾತನಾಡಿದರು.ಇನ್ನು ಅಡಿಕೆ ಸುಲಿದು ಕೊಡಲು ಬಾಕಿಯಿರುವುದನ್ನು ಮೊದಲು ಮಾಡಬೇಕು.. ಆಳುಗಳು ಈಗ ಜಾತ್ರೆ, ಮದುವೆ ಎಂದು ರಜೆ ಹಾಕುತ್ತಿರುತ್ತಾರೆ..ಬಾಕಿಯಿರುವ ಕಟ್ಟಿಗೆ ಒಡೆಯುವ ಕೆಲಸ ಐತಪ್ಪನಿಗೆ ವಹಿಸು... ಮಳೆ ಬರುವ ಮೊದಲೇ ಒಮ್ಮೆ ತೆಂಗಿನ ಕಾಯಿ ಕೊಯ್ಲು ಮಾಡಿದರೆ ಒಳ್ಳೆಯದು..ತೆಂಗಿನ ಕಾಯಿ ಕೊಯ್ಯುವ ತುಕ್ರಪ್ಪನಿಗೆ ಈಗಲೇ ಹೇಳಿಟ್ಟರೆ ಒಂದು ತಿಂಗಳ ನಂತರವಾದರೂ ಬಂದಾನು..ಅವನೂ ಈಗೀಗ ಕಂಡಾಬಟ್ಟೆ ಬ್ಯುಸಿ... ವಾರಕ್ಕೆ ಎರಡು ದಿನ ಎಣ್ಣೆ ಹಾಕಲು ರಜೆ.. ಹೀಗೆ ಅಪ್ಪ ಮಗನ ಸಂಭಾಷಣೆ ಸಾಗುತ್ತಿತ್ತು.. ಭಾಸ್ಕರ ಶಾಸ್ತ್ರಿಗಳು ಅಪ್ಪನ ಮನದ ಇಂಗಿತವನ್ನು ಅರಿತರು.ಮಗಳ ಮದುವೆ ಏಳುವ ಸೂಚನೆಯಿದೆ..ಈಗಲೇ ತಯಾರಾಗು ಎನ್ನುವುದು ಅವರ ಎಚ್ಚರಿಕೆಯ ಸಲಹೆಯ ಹಿಂದಿನ ಮರ್ಮವಾಗಿತ್ತು.
ಅತ್ತೆ ಸೊಸೆ ಒಳಗೆ ಅಡುಗೆ ಮಾಡುತ್ತಾ ಮಾತನಾಡಿಕೊಳ್ಳುತ್ತಿದ್ದರು.. ಮಾತು ಮೊನ್ನೆ ಸಂಜೆ ಬಂದಿದ್ದ ಮಾಣಿಯ ಕಡೆಗೆ ಸಾಗಿತು..ಅತ್ತೆ ಸೊಸೆಯಲ್ಲಿ ..."ಮಾಣಿ ..ಎಂತ ಓದಿದ್ದ.."ಎಂದು ಕೇಳಿದರು.
ಮಂಗಳಮ್ಮ: ಇಂಜಿನಿಯರಿಂಗ್ ಕಲಿತು ಕೆಲಸದಲ್ಲಿದ್ದಾನೆ..
ಅತ್ತೆ: ಹೂಂ..ಯಾವುದಂತೇ ಕೆಲಸ.ಕಂಪೆನಿ ಕೆಲಸವೋ.. ಎಂತಾ..
ಮಂಗಳಮ್ಮ: ಹೂಂ... ಹೌದು.. ಇನ್ಫೋಸಿಸ್ ಕಂಪನಿಯ ಕೆಲಸ..
ಅತ್ತೆ:ಓಹೋ..ಅದಾ..
ಮಂಗಳಮ್ಮ: ನಿಮಗೆ ಗೊತ್ತಾ.. ಇನ್ಫೋಸಿಸ್..
ಅತ್ತೆ: ಅದೇ ಅಲ್ವಾ ಮಂಗಳಾ...ನಮ್ಮ ಶಾಂತನ ಅತ್ತಿಗೆ ಮಗಳು ಇರುವ ಕಂಪೆನಿ..
ಮಂಗಳಮ್ಮ :ಅವರೂ ಇದರಲ್ಲಿರುವುದಾ ಎಂದು ನನಗೆ ತಿಳಿದಿಲ್ಲ..
ಅತ್ತೆ: ಹೌದಂತೆ..ಹೇಳಿದ ನೆನಪು... ಕೈತುಂಬಾ ಸಂಬಳ ಬರುತ್ತದಂತೆ...ಕಾರು ಬಂಗಲೆ ಎಲ್ಲವೂ ಸಣ್ಣ ಪ್ರಾಯದಲ್ಲೇ ಕೊಂಡುಕೊಳ್ಳುವಷ್ಟು ಸಂಪಾದನೆ ಇರುತ್ತದಂತೆ..
ಮಂಗಳಮ್ಮ : ಸಂಪಾದನೆ ಇರಬಹುದು.. ಜೊತೆಗೆ ಮುಖ್ಯವಾಗಿ ಹುಡುಗನು ಒಳ್ಳೆಯ ಸಂಸ್ಕಾರವಂತನಂತೆ ಕಾಣುತ್ತಿದ್ದಾನೆ..
ಅತ್ತೆ : ಹೌದು ಮಂಗಳಾ... ನನಗೂ ಒಳಮನಸ್ಸಿನಲ್ಲಿ ಬಾರಂತಡ್ಕದ ಕೇಶವನಿಗಿಂತ ಇವನೇ ಹೆಚ್ಚು ಮೆಚ್ಚುಗೆಯಾದ..
ಮಂಗಳಮ್ಮ: ಮತ್ತೆ ಯಾಕೆ ಅತ್ತೆ ಮಗನಲ್ಲಿ ಹೇಳಲಿಲ್ಲ..
ಅತ್ತೆ: ಅವನು ಮೊದಲೇ ಕೋಪದಲ್ಲಿದ್ದ..ಮತ್ತೆ ನಾನು ಹೇಳಿ ನನ್ನ ಮೇಲೂ ರೇಗುವುದು ಬೇಡಾಂತ ಸುಮ್ಮನಾದೆ...
ಮಂಗಳಮ್ಮ ನಿಟ್ಟುಸಿರು ಬಿಟ್ಟರು.. ಇವರಿಗೆ ಮಗ ರೇಗುವುದೇ ದೊಡ್ಡ ವಿಷಯ ಮೊಮ್ಮಗಳ ಭವಿಷ್ಯಕ್ಕಿಂತ.. ಮೈತ್ರಿಯ ಮೇಲಿನ ಪ್ರೀತಿಯಿಂದಾದರೂ ಮಗನಿಗೆ ಒಂದು ಬುದ್ಧಿಮಾತು ಹೇಳಿದರೆ ಎಷ್ಟು ಬೆಲೆಯಿತ್ತು...ಎಂದು ತನ್ನೊಳಗೇ ಅಂದುಕೊಂಡರು..
*****
ಗಂಡ ನಗುಮುಖವನ್ನು ಹೊತ್ತು ಬಂದಾಗಲೇ ಮಮತಾ ಶುಭಸುದ್ದಿಯ ನಿರೀಕ್ಷೆಯಲ್ಲಿದ್ದರು. ಬಾಯ್ಬಿಟ್ಟು ಹೇಳಿದಾಗಲಂತೂ ಬಹಳ ಸಂತಸಪಟ್ಟುಕೊಂಡರು.ಎಲ್ಲ ದೇವರ ಮೇಲೆ ಭಾರ ಎಂದು ಹೇಳಿದಾಗ...
ಗಣೇಶ ಶರ್ಮ:"ಏನೇ..ಹಾಗಂತೀ.."
ಮಮತಾ: ಅಷ್ಟು ದೊಡ್ಡ ಶ್ರೀಮಂತರ ಮನೆ ಮಗಳು..ನಮ್ಮ ಮನೆಗೆ ಹೆಣ್ಣು ಕೊಡುತ್ತಾರೋ ಇಲ್ಲವೋ..ಎಂಬ ಆತಂಕ...
ಗಣೇಶ ಶರ್ಮ: ಯಾವುದಕ್ಕೂ ಮನಸ್ಸಿಗೆ ಹಚ್ಚಿಕೊಳ್ಳಲು ಹೋಗುವುದು ಬೇಡ..ಸಂಜೆ ಕಿಶನ್ ಗೆ ಸಿಹಿಸುದ್ದಿ ತಿಳಿಸಿ..ಅಳಿಯ ಮಗಳಂದಿರನ್ನೆಲ್ಲಾ ಕೇಳಿ ಒಂದು ನಿರ್ಧಾರಕ್ಕೆ ಬರೋಣ...
ಮಮತಾ : ಹಾಗೇ ಆಗ್ಲೀ..
ಗಣೇಶ ಶರ್ಮ : ನಾಳೆ ಮಂಗಳವಾರ..ನಾಳೆ ಬೇಡ..ನಾಡಿದ್ದು ಶಾಸ್ತ್ರಿಗಳ ಕುಟುಂಬಕ್ಕೆ ವಿಷಯ ತಿಳಿಸಬಹುದು..ಒಳ್ಳೆಯ ದಿನ ಬುಧವಾರ...
ಮಮತಾ : ನಾವು ಸೀದಾ ಅವರನ್ನು ಸಂಪರ್ಕಿಸುವುದು ಕ್ಕಿಂತ ಯಾರಾದರೂ ನೆಂಟರ ಮೂಲಕ ವಿಷಯ ತಿಳಿಸೋಣ.. ಇಲ್ಲಾಂದ್ರೆ ಲವ್ ಮ್ಯಾರೇಜ್ ಅಂತ ಎಲ್ಲರೂ ಸುದ್ದಿ ಹಬ್ಬಿಸ್ತಾರೆ ...
ಗಣೇಶ ಶರ್ಮ : ನಮ್ಮ ನೆಂಟರಲ್ಲಿ ಅವರ ಸಂಬಂಧಿಕರು ಯಾರಾದರೂ ಇದ್ರೆ ಆದೀತು.. ಇಲ್ಲಾಂದ್ರೆ ಅದೂ ಕಷ್ಟ.. ಸುಮ್ಮನೆ ಇನ್ಯಾರನ್ನೋ ಕೇಳಿ ಮತ್ತೇನೋ ಎಡವಟ್ಟು ಆದರೆ..ಈಗಿನ ಕಾಲ ಕಷ್ಟ..
ಗಂಡ ಹೆಂಡತಿ ಇಬ್ಬರೂ ಕುಳಿತು ತಮ್ಮ ಮಗನ ಮದುವೆಯ ವಿಚಾರವನ್ನು ಚರ್ಚಿಸಿದರು...
****
ಬಂಗಾರಣ್ಣ ಮತ್ತು ಕೇಶವ್ ಇಬ್ಬರೂ ಮನೆಗೆ ಹಿಂದಿರುಗಿದರು..ನಜ್ಜುಗುಜ್ಜಾದ ಜೀಪಿನ ಮುಂಭಾಗವನ್ನು ಕಂಡು ಅಮ್ಮ ಸುಮಾ ಪ್ರಶ್ನಿಸುತ್ತಲೇ ಅಂಗಳಕ್ಕಿಳಿದರು..
ಸುಮಾ:"ಅಲ್ಲಾ ನಾನು ಹೋಗುವಾಗಲೇ ಹೇಳಿದ್ದೆ.. ರಾಹುಕಾಲ ಗುಳಿಗಕಾಲ ಬಿಟ್ಟು ಹೋಗಬೇಕು ಅಂತ..ಕೇಳಿದ್ರಾ..ನನ್ನ ಮಾತು..
ಬಂಗಾರಣ್ಣ : ನಾನೆಲ್ಲಿ ಬೇಡ ಅಂದೇ..ನಿನ್ನ ಮುದ್ದಿನ ಮಗರಾಯನಿಗೆ ಅವಸರವಾದ್ದು...
ಮಗ ಕೇಶವ್ ನ ಮುಖ ಕೋಪದಿಂದ ಕಪ್ಪೇರಿತ್ತು..ಅದನ್ನರಿತ ಅಮ್ಮ..
ಸುಮಾ : ಇನ್ನು ಚಿಂತಿಸಿ ಫಲವಿಲ್ಲ..ಇಷ್ಟರಲ್ಲೇ ಹೋಯ್ತಲ್ಲಾ..ಹೆಚ್ಚೇನೂ ಅಪಾಯವಾಗದ್ದು ಪುಣ್ಯ..
ಕೇಶವ್ : ಇವತ್ತು ಹೋಗದಿದ್ರೇ ಚೆನ್ನಾಗಿತ್ತು..ನನ್ನ ಕ್ರಿಕೆಟ್ ಮ್ಯಾಚ್ ಕೂಡಾ ಸ್ವಲ್ಪ ಮಿಸ್ಸಾಯ್ತು..ಈಗ ನೋಡುವ ಮೂಡ್ ಕೂಡ ಕೆಟ್ಟೋಯ್ತು...
ಬಂಗಾರಣ್ಣ : ಅಷ್ಟಕ್ಕೆಲ್ಲಾ ಸಿಟ್ಟು ಮಾಡಿಕೊಂಡರೆ
ಆಗುತ್ತಾ.. ಜೀವನದಲ್ಲಿ ಇಂತಹದ್ದೆಲ್ಲ ಮಾಮೂಲಿ.. ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಪ್ಪಾ...
ಕೇಶವ್ : ಹೋಗಿದ್ದೇ ವೇಸ್ಟ್..
ಸುಮಾ : ಏನಾಯ್ತು..ಹಾಗಾದ್ರೆ ಜಾತಕ..
ಬಂಗಾರಣ್ಣ :ಏನಾಗೋದು ..ಆ ಶಾಸ್ತ್ರಿಗಳದು ಬರೀ ಮೋಸ..
ಸುಮಾ :ಮೋಸನಾ..ಏನದು..?
ಬಂಗಾರಣ್ಣ : ಹೌದು ಸುಮಾ.. ಅವರು ಮಗಳ ಜಾತಕ ನಮಗೆ ಮಾತ್ರ ಕೊಟ್ಟಿದ್ದಲ್ಲ..ನಮಗೆ ಕೊಟ್ಟು ನಾವು ಉತ್ತರಿಸುವ ಮೊದಲೇ ಬೇರೆಯವರಿಗೂ ಕೊಟ್ಟಿದ್ದಾರೆ.. ಹೆಣ್ಣು ಅಂದ್ರೆ ಏನು ಅಂದುಕೊಂಡಿದ್ದಾರೆ ..ಮದುವೆಯ ಸರಕು ಅಂತಾನಾ... ಹಲವು ಜನಕ್ಕೆ ಒಮ್ಮೆಲೇ ಜಾತಕ ಕೊಡಲು.. ಒಬ್ಬರಿಗೆ ಕೊಟ್ಟ ನಂತರ ಉತ್ತರ ಹೇಳುವವರೆಗೆ ಕಾಯಲು ತಯಾರಿರಬೇಕು ..
ಸುಮಾ : ಸಂಗತಿ ಏನೋ ಯಾರಿಗೆ ಗೊತ್ತು..
ಕೇಶವ್ : ಆ ಜೋಯಿಸರೆದುರು ನಮಗೆ ಅವಮಾನ... ಸುಖಾಸುಮ್ಮನೆ ಅವಮಾನವಾಗುವಂತೆ ಮಾಡಿದ ಶಾಸ್ತ್ರಿಗಳು ಕೂಡ ಅವಮಾನ ಅನುಭವಿಸಲೇ ಬೇಕು... ಇಲ್ಲದಿದ್ದರೆ...
ಬಂಗಾರಣ್ಣ : ಕೇಶವ್... ಸ್ವಲ್ಪ ಸಮಾಧಾನ ಮಾಡ್ಕೋ..ಇಲ್ಲಿ ನಾವು ಅವರಿಗೆ ಅವಮಾನ ಮಾಡಲು ಹೋದರೆ ನಮಗೇನೂ ಲಾಭವಿಲ್ಲ..
ಕೇಶವ್ : ಲಾಭದಾಸೆಯೂ ಇಲ್ಲ... ಮುಯ್ಯಿಗೆ ಮುಯ್ಯಿ ತೀರಿಸಿಯೇ ತೀರೀಸುತ್ತೇನೆ..ನನ್ನ ಪಂಜರದಲ್ಲಿರಬೇಕಾದ ಮುದ್ದಿನ ಗಿಣಿ ಯಾರದೋ ಪಾಲಾದರೆ ನಾನು ಸುಮ್ಮನಿರಲಾರೆ...
ಬಂಗಾರಣ್ಣ : ನೋಡು ಕೇಶವ್..ಮೊನ್ನೆಯೇ ಪುರುಷೋತ್ತಮ ಜೋಯಿಸರು ಹೇಳಿದ್ದಾರೆ ಜಾತಕ ಹೊಂದಾಣಿಕೆ ಆಗುವುದಿಲ್ಲ ಅಂತ..ಇವತ್ತೂ ನಡೆದದ್ದು ಅದೇ ತಾನೇ..ಅದಕ್ಕೆ ಹೇಳುವುದು ಜ್ಯೋತಿಷ್ಯವನ್ನು ನಂಬು ಅಂತ.. ಅವರು ಹೇಳಿದ್ದೇ ನಡೆದಿದೆ.. ನಮ್ಮ ಹಠ ನಡೆದಿಲ್ಲ..ಠುಸ್ಸಾಗಿದೆ..
ಕೇಶವ್ : ಅದೆಲ್ಲ ನಂಗೊತ್ತಿಲ್ಲ ಅಪ್ಪಾ..ನನಗೆ ಆ ಸಕ್ಕರೆ ಗೊಂಬೆಯನ್ನು ಸವಿಯಲೇ ಬೇಕು...
ಬಂಗಾರಣ್ಣ : ನೀನು ತಾಳ್ಮೆಯಿಂದಿದ್ದರೆ ಅವಳೇನು ... ಅವಳನ್ನು ಮೀರಿಸುವ ಅಪ್ಸರಕನ್ಯೆಯೇ ನಮ್ಮ ಶ್ರೀಮಂತಿಕೆಯನ್ನು,ನಿನ್ನ ಬುದ್ಧಿವಂತಿಕೆಯನ್ನು ನೋಡಿ ಒಲಿಯಬಹುದು...
ಕೇಶವ್ : ನಂಗೆ ಅವಳನ್ನು ಪಡೆಯಲೇ ಬೇಕು..
ಎಂದು ರೊಚ್ಚಿಗೆದ್ದ ಮಗನನ್ನು ಸಂತೈಸಲು ಸೋತು ಅಪ್ಪ ಅಮ್ಮ ಇಬ್ಬರೂ ಮೌನವಾದರು.ಸುಮಾ ಮಗನಿಗೆ ಕೋಲ್ಡ್ ಜ್ಯೂಸ್ ಕೊಟ್ಟು ಸಮಾಧಾನಪಡಿಸಿದರು.. ಮಗನ ಹಠವನ್ನು ಎಳವೆಯಿಂದಲೇ ಕಂಡ ತಾಯಿ ಸುಮಾ ಭಯಪಟ್ಟರು..ಮಗ ಏನಾದರೂ ಕೆಟ್ಟ ಕೆಲಸಕ್ಕೆ ಪುನಃ ಕೈ ಹಾಕದಿರಲಿ ಅಂತ ದೇವರಿಗೆ ಮೊರೆಯಿಟ್ಟರು..ಒಮ್ಮೆ ನಡತೆ ತಪ್ಪಿ ಏನೆಲ್ಲ ಕೇಳಬೇಕಾಯಿತು ಬಂಧು ಬಾಂಧವರಿಂದ.. ಇನ್ನು ನಮ್ಮೂರಿನಲ್ಲೇ ಇದ್ದು ಅಡ್ಡ ದಾರಿ ಹಿಡಿದರೆ..ಜೀವನ ಪರ್ಯಂತ ಕೆಟ್ಟ ಹೆಸರು ಅಂಟಿಸಿಕೊಳ್ಳಬೇಕಾದೀತು ... ಆದಷ್ಟು ಬೇಗ ಮಗನಿಗೆ ಬೇರೆ ಹೆಣ್ಣು ಹುಡುಕಿ ಮದುವೆ ಮಾಡಿ ಬೀಡಬೇಕು ಎಂದು ತನ್ನ ಮನದಲ್ಲೇ ನಿರ್ಧರಿಸಿದರು...
****
ಸಂಜೆ ಕಿಶನ್ ಗೆ ಕರೆ ಮಾಡಿದ ಗಣೇಶ ಶರ್ಮ.
ಕಿಶನ್ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ಎತ್ತಲೇಯಿಲ್ಲ..
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
28-02-2020.
ಮೈತ್ರಿ ಕಿಶನ್ ಮದುವೆಗೆ ಯಾವುದೇ ಅಡ್ಡಿ ಆಗದಿರಲಿ...😊
ReplyDeleteಹೂಂ.. ಹಾಗೇ ಆಶಿಸುತ್ತಾ ಕಥೆ ಮುಂದುವರಿಸೋಣ.... ಥ್ಯಾಂಕ್ಯೂ 💐🙏
ReplyDelete