ಕೇಶವ್ ಯಾವತ್ತೂ ವೇಗವಾಗಿಯೇ ವಾಹನ ಚಾಲನೆ ಮಾಡುವವನು.. ಇಂದು ಮಾತ್ರ ನಿಧಾನವಾಗಿ ಚಲಾಯಿಸುತ್ತಿದ್ದ..ಆಗ ಗೆಳೆಯನ ಕರೆ ಬಂದಿತು.." ಕೇಶವ್.. ಬೆಟ್ಟಿಂಗ್ ನೆನಪಿದೆ ತಾನೇ...
ನಾನು ಸೋತರೆ ... ಇಪ್ಪತ್ತು ಸಾವಿರ ನಿನಗೆ
ನೀನು ಸೋತರೆ ಇಪ್ಪತ್ತು ಸಾವಿರ ನನಗೆ.."
"ಹೂಂ..ಸರಿ ಗೆಳೆಯ.. ಅದಕ್ಕೇ ಪೇಟೆಯ ಕೆಲಸವನ್ನೆಲ್ಲ ಮುಗಿಸಿ ಬೇಗ ಮನೆ ಕಡೆ ಹೋಗಬೇಕೆಂದಿದ್ದೇನೆ"
"..ಸರಿ ಸರಿ ..ಬೇಗ ಮ್ಯಾಚ್ ಆರಂಭವಾಗುವ ಮುನ್ನವೇ ಮನೆ ತಲುಪಿ.." ಎಂದು ಹೇಳಿದನು..ಒಪ್ಪಿದ ಕೇಶವ್ ನ ಮನಸ್ಸು ಬೆಟ್ಟಿಂಗ್ ನಲ್ಲಿ ಮುಳುಗಿತು.. ಬೆಟ್ಟಿಂಗ್ ನಲ್ಲಿ ಹಣ ಗೆದ್ದು... ಬಾಳಿನಲ್ಲಿ ಮೈತ್ರಿಯೆಂಬ ಸುಂದರಿಯನ್ನು ಗೆದ್ದರೆ ಮತ್ತೆ ನನ್ನಂತಹ ಅದೃಷ್ಟವಂತ ಪುರುಷರು ಇರಲಾರರು..
ಮನದೊಳಗೆ ಲೆಕ್ಕಾಚಾರ ಹಾಕುತ್ತಾ ಕೇಶವ್ ಒಳ್ಳೆಯ ಮೂಡಿನಲ್ಲಿದ್ದ...
ಒಮ್ಮಿಂದೊಮ್ಮೆಲೇ ಬಂದ ಸದ್ದಿನಿಂದ ಬೆಚ್ಚಿಬಿದ್ದರು ಬಂಗಾರಣ್ಣ... ಏನಾಯಿತೆಂದು ಕಣ್ಣುತೆರೆದು ನೋಡಿದರೆ.... ಜೀಪ್ ಮಾರ್ಗದ ಬದಿಯ ಚರಂಡಿಗಿಳಿದಿತ್ತು.. ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಗುದ್ದುವುದನ್ನು ತಪ್ಪಿಸಲು ಜೀಪಿನ ಸ್ಟೇರಿಂಗ್ ಒಮ್ಮೆಲೇ ತಿರುಗಿಸಿದ್ದ ಕೇಶವ್...
ಅಪಾಯವೇನೂ ಹೆಚ್ಚು ಆಗದಿದ್ದುದು ದೊಡ್ಡದು ಎಂದುಕೊಂಡು ಮೆಲ್ಲನೆ ಜೀಪಿನಿಂದ ಇಳಿದರು ಬಂಗಾರಣ್ಣ.. ಕೇಶವ್ ಕಾರಿನವನಿಗೆ ಗದರಿಸತೊಡಗಿದ..ವಾದವಿವಾದ ಬಲವಾಯಿತು...ಜನಸೇರತೊಡಗಿದರು... ಜೀಪಿನ ಎದುರು ಭಾಗ ಸ್ವಲ್ಪ ನಜ್ಜುಗುಜ್ಜಾಗಿತ್ತು.ಖರ್ಚು ಕೊಡಬೇಕೆಂದು ಹಠ ಹಿಡಿದರು ಕೇಶವ್ ಮತ್ತು ಬಂಗಾರಣ್ಣ.. ಒಂದು ಗಂಟೆ ಶ್ರಮಪಟ್ಟು ಜೀಪನ್ನು ಚರಂಡಿಯಿಂದ ಮೇಲಕೆತ್ತಲು ಸಾಧ್ಯವಾಯಿತು.. ಪರಿಹಾರ ಸ್ವಲ್ಪ ಕೈಗಿತ್ತ ಕಾರಿನ ಚಾಲಕ..
ಈಗಲೇ ತಡವಾಯಿತು ಎಂದ ಕೇಶವ್ ಗೆ ಜಾತಕ ತೋರಿಸುವ ಮೂಡೇ ಇರಲಿಲ್ಲ.ಆದರೂ ಅಪ್ಪನ ಮಾತಿಗೆ ಒಪ್ಪಿ ಬಾಳೆಮಲೆಗೆ ತೆರಳಿದರು.
ಗಣೇಶ ಶರ್ಮ ಮೈತ್ರಿ ಮತ್ತು ಕಿಶನ್ ನ ಜಾತಕ ಹಿಡಿದು ತನ್ನ ಸರದಿ ಈಗ ಬರುವುದೆಂದು ಕಾದು ಕುಳಿತಿದ್ದರು.ಇತರರಲ್ಲಿ ಜೋಯಿಸರು ಮಾತನಾಡುವುದನ್ನು ಕೇಳುತ್ತಿದ್ದ ಗಣೇಶ ಶರ್ಮ ಇನ್ನು ಕಿಶನ್ ಮೈತ್ರಿ ಜಾತಕ ನೋಡಿ ಏನು ಹೇಳುತ್ತಾರೋ ಎಂಬ ಆತಂಕ ಕಾಡುತ್ತಿತ್ತು.
ಅವರ ಸರದಿ ಬಂತು.ಒಳಗೆ ನಡೆದರು.
ಇಬ್ಬರ ಕುಂಡಲಿಗಳನ್ನು ತದೇಕಚಿತ್ತದಿಂದ ಜೋಯಿಸರು ನೋಡುತ್ತಿದ್ದಾರೆ.ತಮ್ಮಲ್ಲೇ ಅಷ್ಟಮದಲ್ಲಿ ಗುರು,ಪಂಚಮದಲ್ಲಿ ಶನಿ, ಶುಕ್ರದೆಸೆ.. ಎಂದು ಲೆಕ್ಕಾಚಾರದಲ್ಲಿ ಮಗ್ನರಾಗಿದ್ದರು...."ನೋಡಿ ಜಾತಕ ಹೊಂದಾಣಿಕೆಯ ಮಟ್ಟಿಗೆ ಅಡ್ಡಿಯಿಲ್ಲ.. ಅರುವತ್ತು ಪರ್ಸೆಂಟ್ ಕೂಡಿ ಬರುತ್ತದೆ..ವಿವಾಹ ಮಾಡಲು ಅಡ್ಡಿಯಿಲ್ಲ.. ಆದರೆ ಸ್ವಲ್ಪ ಗ್ರಹಗತಿಗಳಲ್ಲಿ ದೋಷಗಳಿವೆ.. ಅಗತ್ಯವಾಗಿ ಶಾಂತಿ ಹೋಮ ಮಾಡಿಸಬೇಕಾಗುತ್ತದೆ..ಮದುವೆಗೆ ಮುನ್ನವೇ ಮದುಮಗಳಿಗೆ ಒಂದು ಶಾಂತಿ ಹೋಮ ಕಡ್ಡಾಯವಾಗಿ ಆಗಬೇಕು.. ಇಲ್ಲದಿದ್ದರೆ ವೈವಾಹಿಕ ಜೀವನದ ಮೇಲೆ ಕೆಟ್ಟ ಪ್ರಭಾವ ಬೀರಬಹುದು.. ಅದೊಂದು ಮಾಡಿದರೆ ಮಿಕ್ಕಿದಂತೆ ಹುಡುಗಿಯ ಜಾತಕ ಒಳ್ಳೆಯ ಗ್ರಹಗತಿ ಹೊಂದಿದೆ.. ಇವಳು ಕಾಲಿಟ್ಟ ಮನೆಗೆ ಯಶಸ್ಸನ್ನು ತಂದುಕೊಡಬಲ್ಲ ಯೋಗಗಳಿವೆ.ಗಂಡನಿಗೆ ಉನ್ನತ ಉದ್ಯೋಗ ಭಾಗ್ಯ ತರಬಲ್ಲ ಜಾತಕ..ಸತ್ಕುಲ ಸಂಜಾತೆಯೆಂದು ಜಾತಕ ಪ್ರಕಾರ ಹೇಳಬಹುದು..."
ಜೋಯಿಸರ ಮಾತುಗಳನ್ನು ಕೇಳಿ ಗಣೇಶ ಶರ್ಮ ಬಹಳ ಸಂತೋಷಪಟ್ಟರು.
ಜೋಯಿಸರಲ್ಲಿ ಮನೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದ ನಾಗನ ಕಟ್ಟೆ, ದೈವಸ್ಥಾನದ ಆರಾಧನೆಗಳ ಬಗ್ಗೆ ಪ್ರಶ್ನೆ ಕೇಳಿ ದರು..ಬಾಯಲ್ಲಿ ಮಂತ್ರೋಚ್ಛಾರಣೆ ಮಾಡುತ್ತಾ ಕವಡೆಯನ್ನು ಸುತ್ತು ಸುತ್ತು ತಿರುಗಿಸಿದ ಜೋಯಿಸರು ಅದರಿಂದ ಎಂಟು ಕವಡೆಗಳನ್ನು ತೆಗೆದಿರಿಸಿದರು..ಮೇಜಿನಬದಿಯಲ್ಲಿ ಅವುಗಳನ್ನು ಸಮಾನ ಅಂತರದಲ್ಲಿ ಎರಡು ಸಾಲುಗಳಲ್ಲಿರಿಸಿ.." ಪಂಚಮದಲ್ಲಿ ನೀಚ ಗ್ರಹ ... ಸಪ್ತಮದಲ್ಲಿ ಬಲವಿದೆ.. ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ ಎಂದು ಇಲ್ಲಿ ಬಂದು ರಾಶಿಯ ಆಧಾರದಲ್ಲಿ ಹೇಳಬಲ್ಲೆ..ಅಲ್ಲಿ ಹೇಗಿದೆಯೋ ನನಗೆ ಗೊತ್ತಿಲ್ಲ.. ಆದರೆ ಮುಂದಿನ ದಿನಗಳಲ್ಲಿ
ಏನಾದರೊಂದು ಪರಿಹಾರ ದೊರೆಯುವ ನಿರೀಕ್ಷೆಯಿದೆ.."
"ಅಂದರೆ ... ಮುಂದೆ ಪೂಜಾವಿಧಾನದಲ್ಲಿ ಏನಾದರೂ ಬದಲಾವಣೆ ಬೇಕೆಂದು ಹೇಳುತ್ತಿರುವಿರಾ.."
"ನೋಡಿ... ನಿರ್ವಹಣೆ ಅಂದರೆ ಬರೀ ಪೂಜಾವಿಧಾನ ಅಲ್ಲ...ಗುಡಿ ,ಕಟ್ಟೆ ಶಿಥಿಲವಾಗಿರಲೂಬಹುದು...ಅಶೌಚಾದಿ ಕ್ರಿಯೆಗಳು ಮೇಲಿಂದ ಮೇಲೆ ಬಂದಿರಬಹುದು.. ಏನೆಂದು ಒಮ್ಮೆಲೇ ಹೇಳಲು ಸಾಧ್ಯವಿಲ್ಲ.. ಪುನಃ ಅದಕ್ಕೆಂದೇ ವಿವರವಾದ ಪ್ರಶ್ನೆಯಿಟ್ಟಾಗ ಮಾತ್ರ ಹೇಳಲು ಸಾಧ್ಯ..ನೀವೀಗ ಅದನ್ನು ಮಾಡುವ ಸ್ಥಿತಿಯಲ್ಲಿ /ಮನಸ್ಥಿತಿಯಲ್ಲಿ ಇದ್ದೀರಾ.."
"ಮನಸ್ಸು ಇದೆ ಆದರೆ ಶಕ್ತಿ ಇಲ್ಲ..."
"ಹಾಗಿದ್ದರೆ ಈ ವಿಷಯದಲ್ಲಿ ಹೆಚ್ಚಿನ ಪ್ರಶ್ನಾವಿಮರ್ಶೆ ಬೇಡ...."
"ತಿಳಿದುಕೊಂಡರೆ ಮುಂದೆ ಅದಕ್ಕೆ ತಕ್ಕಂತೆ ನಡೆಯಬಹುದು ಎಂದು...."
"ನೋಡಿ... ಮಾಡುವುದಿದ್ದರೆ ಮಾತ್ರ ಪ್ರಶ್ನೆಯಿಡುವುದು ಜ್ಯೋತಿಷ್ಯದ ಪದ್ಧತಿ.ಸುಮ್ಮನೆ ನೀವು ಕೇಳುವುದು.. ನಾವು ಏನೇನೋ ಹೇಳುವುದು..ನಿಮ್ಮ ಮನಸ್ಸಲ್ಲಿ ಅದೇ ಬೇರೂರಿ ಅನಾಹುತಕ್ಕೆ ಕಾರಣವಾಗುವುದು ಬೇಡ..ಈಗ ಯಥಾಶಕ್ತಿ ದೈವಕ್ಕೆ, ನಾಗನಿಗೆ ಸೇವೆಕೊಡಿ ..ನಂತರ ಅವನೇ ಮುಂದೆ ಶಕ್ತಿ ಕೊಟ್ಟಾನು.."
"ಸರಿ ಹಾಗಿದ್ರೆ... "ಎಂದು ಗಣೇಶ ಶರ್ಮ ನಿಟ್ಟುಸಿರು ಬಿಟ್ಟರು..
ಜೋಯಿಸರು ಮೈತ್ರಿ ಕಿಶನ್ ಜಾತಕದ ಕೂಟ ಹೊಂದಾಣಿಕೆಯನ್ನು ಚೀಟಿನಲ್ಲಿ ಬರೆಯುತ್ತಿದ್ದರು..ಗಣೇಶ ಶರ್ಮ ಜೋಯಿಸರ ಕೈಬರಹವನ್ನು ನೋಡುತ್ತಾ ಕುಳಿತಿದ್ದರು..ಜೋಯಿಸರಿಗೆ ವಯಸ್ಸಾದರೂ ಕೈಬರಹ ಮಾತ್ರ ಪ್ರಿಂಟ್ ಮಾಡಿದ ಅಕ್ಷರವನ್ನು ನಾಚಿಸುವಂತಿತ್ತು..ಸ್ಫುಟವಾದ ಚೂಪಾದ ಬರಹ.. ಚೀಟಿಯನ್ನು ಗಣೇಶ ಶರ್ಮರ ಕೈಗಿತ್ತರು ಜೋಯಿಸರು.. ಗಣೇಶ ಶರ್ಮ ಅಂಗಿ ಕಿಸೆಯಿಂದ ನೋಟು ತೆಗೆದು ಜೋಯಿಸರಿಗೆ ಕೊಟ್ಟು ತಲೆಬಾಗಿಸಿದರು.."ಶುಭಸ್ಯ ಶೀಘ್ರಂ..." ಎಂದು ಜೋಯಿಸರ ಉವಾಚ..
ಖುಷಿಯಿಂದ ಮುಖ ಅರಳಿಸಿಕೊಂಡು ಹೊರನಡೆದರು ಶರ್ಮರು.. ಕಾರು ಏರಿ ಮನೆಗೆ ತೆರಳಿದರು..
ಕೇಶವ್ ಮತ್ತು ಬಂಗಾರಣ್ಣ ಕಾದು ಕಾದು ಸುಸ್ತಾದರು..ಸರತಿ ಉದ್ದವಿತ್ತು..ಕೇಶವನ ಮುಖದಲ್ಲಿ ಅಸಹನೆ ತಾಂಡವವಾಡುತ್ತಿತ್ತು.. ಅವನಿಗೆ ಕ್ರಿಕೆಟ್ ಮ್ಯಾಚ್ ವೀಕ್ಷಿಸುವ ಸಮಯವಾಗುತ್ತಾ ಬಂತು... ಜೋಯಿಸರು ಹೊತ್ತು ಮೀರುತ್ತಿದ್ದರೂ ತಾನು ಊಟಕ್ಕೆ ತೆರಳದೆ ಬಂದವರನ್ನು ಮಾತನಾಡಿಸುವುದರಲ್ಲೇ ಮಗ್ನರಾಗಿದ್ದರು...ಬಂಗಾರಣ್ಣನ ಸರದಿ ಬಂತು.
ಇಬ್ಬರೂ ಒಳಗೆ ನಡೆದರು.. ಜಾತಕವನ್ನು ಜೋಯಿಸರ ಮುಂದಿಟ್ಟ ಬಂಗಾರಣ್ಣ.. ಒಮ್ಮೆ ಮೇಲಿಂದ ಮೇಲೆ ನೋಡಿದ ಜೋಯಿಸರು ಏನನ್ನೂ ಮಾತನಾಡದೆ ತಲೆಯಲ್ಲಾಡಿಸಿದರು... "...ಜೋಯಿಸರೆ ಇಬ್ಬರ ಜಾತಕ ಹೊಂದಾಣಿಕೆ ನೋಡಬೇಕಿತ್ತು.. ಇವನು ಕೇಶವ..ನನ್ನ ಏಕೈಕ ಪುತ್ರ.. ಇಂಜಿನಿಯರಿಂಗ್ ಓದಿದವ.."
ಜೋಯಿಸರ ಮುಖದಲ್ಲಿ ಅದೇ ಭಾವ..ಬದಲಾಗಲೇಯಿಲ್ಲ.. ಏನೊಂದೂ ಕೇಶವ್, ಬಂಗಾರಣ್ಣನಿಗೆ ಅರ್ಥವಾಗಲಿಲ್ಲ ..
"ಹೊಂದಾಣಿಕೆಯಿದೆಯಾ..".ಬಂಗಾರಣ್ಣನ ದನಿಯಲ್ಲಿ ಸ್ವಲ್ಪ ದರ್ಪವೂ ಇತ್ತು..
"ನೋಡಿ ಯಾರಿಗೆ ಎಲ್ಲಿನ ನೀರು ಕುಡಿಯುವ ಭಾಗ್ಯ ಬರೆದಿರುತ್ತದೆಯೋ ಅಲ್ಲಿಗೇ ಸಲ್ಲುತ್ತಾರೆ..ಈ ವಿಷಯದಲ್ಲಿ ಹೆಚ್ಚೇನೂ ಹೇಳಲಾಗದು.."
"ಒಗಟಾಗಿ ಹೇಳಿದರೆ ಅರ್ಥೈಸಿಕೊಳ್ಳುವುದು ಹೇಗೆ..??"
"ನೋಡಿ..ಆ ಯುವತಿಗೆ ಈಗಾಗಲೇ ವಿವಾಹ ಸಂಬಂಧ ಹೊಂದಾಣಿಕೆಯಾಗಿದೆ ..ಬೆಳಗ್ಗೆಯಷ್ಟೇ ನಾನೇ ಮೇಳಾಮೇಳಿ ನೋಡಿದ್ದೆ.."
"ಹೌದೇ..ಛೇ...ಹೀಗೂ ಹೆಣ್ಣಿನ ಕಡೆಯವರು ಮೋಸ ಮಾಡುತ್ತಾರಾ..ಅಲ್ಲ ಒಂದು ಕಡೆಗೆ ಜಾತಕ ಕೊಟ್ಟ ಮೇಲೆ ಉತ್ತರ ಬರುವಷ್ಟು ಸಮಯ ಕಾಯುವ ತಾಳ್ಮೆ ಅವರಿಗಿಲ್ಲದೆಹೋಯಿತೇ...??"
"ಮೊದಲು ಯಾರಿಗೆ ಜಾತಕ ಕೊಟ್ಟರೋ ನಾನರಿಯೆ...ಇಲ್ಲಿಗೆ ಮೊದಲು ಬಂದವರ ಜಾತಕ ವಿಮರ್ಶೆ ಮಾಡಿ ಕಳುಹಿಸಿದ್ದೇನೆ.."
"ಏನಾದರೂ ...ಇಲ್ಲಿವರೆಗೆ ಬಂದಿದ್ದೇವಲ್ಲ ..ಅದಕ್ಕಾದರೂ ಒಮ್ಮೆ ನೋಡಿಬಿಡಿ.."
"ಇಲ್ಲ ..ಹಾಗೆ ಮಾಡಲು ಸಾಧ್ಯವಿಲ್ಲ..."
"ಏನು ಸಾಧ್ಯವಿಲ್ಲದೇ.. ಏಯ್..ಬೇಗ ನೋಡಿ ಹೇಳ್ತೀಯೋ ಇಲ್ವೋ... " ಕೇಶವ್ ಸಿಟ್ಟಿನಿಂದ ಏಕವಚನದಲ್ಲಿ ಸಂಬೋಧಿಸಿದ..
"ಇಲ್ಲ..ನಮಗೂ ನಮ್ಮ ಜ್ಯೋತಿಷ್ಯ ವೃತ್ತಿ ಧರ್ಮದ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವೇ ಇಲ್ಲ.."
ಶಾಂತವಾದ ದನಿಯಲ್ಲಿ ನುಡಿದ ಜೋಯಿಸರ ಮಾತಿನಲ್ಲಿ ಅರ್ಥವಿತ್ತು...ನಿಖರತೆಯಿತ್ತು...
'ಬಂದ ದಾರಿಗೆ ಸುಂಕವಿಲ್ಲ ' ಎಂಬ ಮಾತಿನಂತೆ ಅನ್ಯಮಸ್ಕತೆಯಿಂದ ಹಿಂದಿರುಗಬೇಕಾಯಿತು ಬಂಗಾರಣ್ಣ ಮತ್ತು ಕೇಶವ್...
*****
ಶಾಸ್ತ್ರಿ ನಿವಾಸದಲ್ಲಿ "ಲ್ಯಾಂಡ್ ಲೈನ್ ಫೋನ್ ಹಾಳಾಗಿದೆ...ಡಯಲ್ ಟೋನ್ ಬರ್ತಾ ಇಲ್ಲ" ಎಂದು ಮಗ ಭಾಸ್ಕರ ಬಂದ ಕೂಡಲೇ ಮಹಾಲಕ್ಷ್ಮಿ ಅಮ್ಮ ತಿಳಿಸಿದರು..ಮಂಗಳಮ್ಮ ತನಗೇನೂ ಅರಿಯದಂತೆ ಸುಮ್ಮನಿದ್ದರು...
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
27-02-2020.
Chennagide....
ReplyDeleteಧನ್ಯವಾದಗಳು 💐🙏
ReplyDelete