ಅಂದು ಆಫೀಸಿನಲ್ಲಿ ಕೆಲಸಮಾಡಿ ದಣಿದಿದ್ದಳು ಸರಳಾ.ತನ್ನ ಮನೆಕಡೆಗೆ ಹೋಗುವ ಏಕೈಕ ಬಸ್ ಸಿಗಬೇಕಾದರೆ ವೇಗವಾಗಿ ನಡೆಯಬೇಕಿತ್ತು.ಬಸ್ ಬರಲು ಐದು ನಿಮಿಷ ಇತ್ತು.ವೇಗವಾಗಿ ನಡೆದರೆ ಅಷ್ಟು ಹೊತ್ತು ಸರಿಯಾಗಿ ಬೇಕು.ಸಮಯ ನಿಲ್ಲುವುದಿಲ್ಲ.ಎನ್ನುತ್ತಾ ನೋಯುತ್ತಿದ್ದ ಕಾಲುಗಳನ್ನು ಎಳೆಯತೊಡಗಿದಳು.ಅವಳು ಬಸ್ ಸ್ಟ್ಯಾಂಡ್ ಗೆ ಬರುವುದೂ ಬಸ್ ಬರುವುದೂ ಸರಿಯಾಯಿತು.ಸ್ವಲ್ಪ ತಡವಾದರೆ ಎರಡೆರಡು ಬಸ್ ಹಿಡಿದು ಮನೆತಲುಪುವಾಗ ರಾತ್ರಿಯಾಗುತ್ತಿತ್ತು.
ಬಸ್ ಹತ್ತಿದವಳು ಮೊದಲು ನೋಡಿದ್ದು ಸೀಟು ಇದೆಯಾ ಎಂದು.ಅಬ್ಬಾ...ಅವಳ ಅದೃಷ್ಟ ಚೆನ್ನಾಗಿತ್ತು.ಒಂದೇ ಒಂದು ಸೀಟು ಇತ್ತು.ಬಸ್ ಹತ್ತಿದಾಗ ಸಿಗುವ ಆಸನಗಳ ಸಾಲಿನಲ್ಲಿ ಇದ್ದ ಸೀಟು ಕಂಡು ಅವಳಿಗೆ ಜೀವಬಂದಂತಾಯ್ತು.ಪಕ್ಕದಲ್ಲಿ ಯುವಕನಿದ್ದ.ಮೊಬೈಲ್ ನೋಡುವುದರಲ್ಲಿ ಮಗ್ನನಾಗಿದ್ದ.ಕುಳಿತುಕೊಂಡಾಗ ಅವಳ ಅರಿವಿಲ್ಲದೇ ನಿಟ್ಟುಸಿರೊಂದು ಹೊರಬಿದ್ದಿತು.ತನ್ನ ದೇಹದ ಭಾರವನ್ನೆಲ್ಲ ಆಸನದ ಮೇಲೆ ಇಳಿಬಿಟ್ಟಂತೆ ಕುಳಿತಳು.
ಬಸ್ ಮುಂದಿನ ತಿರುವಿನಲ್ಲಿ ನಿಂತಿತು.ಶಾರದಾ ವಿದ್ಯಾಮಂದಿರದ ಕೆಲವು ವಿದ್ಯಾರ್ಥಿಗಳು ಬಸ್ ಗೆ ಹತ್ತಿಕೊಂಡರು.ಅವಳ ಪಕ್ಕದಲ್ಲಿ ಒಬ್ಬ ಏಳೆಂಟು ವರ್ಷ ಪ್ರಾಯದ ಬಾಲಕ ಬಂದು ನಿಂತ.ಅವನ ಹೆಗಲ ಮೇಲೆ ಅವನ ಸಾಮರ್ಥ್ಯಕ್ಕಿಂತ ಅಧಿಕ ಭಾರವಾದ ಬ್ಯಾಗ್ ಇತ್ತು.ಕೈಯಲ್ಲೊಂದು ಬುತ್ತಿಯ ಚೀಲ.ಆಗಾಗ ಬ್ರೇಕ್ ಅದುಮುತ್ತಿದ್ದ ಚಾಲಕ.ಅವನು ಮುಗ್ಗರಿಸಿ ಬೀಳುವಂತಾಗುತ್ತಿದ್ದ . ತೋಳುಗಳನ್ನು ಆಗಾಗ ಸವರುತ್ತಿದ್ದ.ಅವನ ಮುಖಭಾವ ತೋಳುಗಳು ನೋಯುತ್ತಿವೆಯೆಂದು ಹೇಳಿದಂತೆ ಭಾಸವಾಯಿತು ಸರಳಾಗೆ."ಬ್ಯಾಗ್ ಇಲ್ಲಿ ಕೊಡು" ಎಂದಳು.ನಕ್ಕ .. ಬೇಗನೆ ತೆಗೆದು ಅವಳ ತೊಡೆಯ ಮೇಲಿರಿಸಿದ.ಶರೀರ ಹಗುರಾಗಿ ಸ್ವಲ್ಪ ತುಂಟತನ ಶುರುಮಾಡಿದ್ದ.ಸನಿಹದಲ್ಲಿ ನಿಂತಿದ್ದ ಅವನ ಅಕ್ಕನಿರಬಹುದೇನೋ .. ಅವಳಿಗೆ ಮೆಲ್ಲನೆ ಕಾಟಕೊಟ್ಟು ನಗುತ್ತಿದ್ದ.
ಆ ತುಂಟನಲ್ಲಿ ಆಕರ್ಷಣೆ ಇತ್ತು.ಸರಳಾ ಬಾ ಕುಳಿತುಕೋ ಎಂದು ಇಬ್ಬರ ನಡುವೆ ಅವನನ್ನು ಕುಳ್ಳಿರಿಸಿದಳು.ಸರಳಾಳಿಗೆ ಅವನನ್ನು ಮಾತನಾಡಿಸುವ ಬಯಕೆ.ಮಾತನಾಡಿದಾಗ ನಾಚಿ ತಲೆತಗ್ಗಿಸುತ್ತಿದ್ದ .ಮರುಕ್ಷಣ ಅಕ್ಕನತ್ತ ಓರೆನೋಟ ಬೀರುತ್ತಿದ್ದ.ಸರಳಾಗೆ ಅವನ ಮುದ್ದು ಮುಖ ಕಂಡು ಒಮ್ಮೆ ಇವನನ್ನು ಮನಸಾರೆ ಮುದ್ದಿಸಬೇಕೆಂಬ ಹಂಬಲ.ಯಾರಾದರೂ ಏನಾದರೂ ಅಂದುಕೊಂಡರೆ..ಎಂಬ ಸಂಕೋಚ..ತಿರುವುಗಳಲ್ಲಿ ಬಾಲಕ ಆಸನದಿಂದ ಬೀಳುವಂತಾದಾಗ ಮೆತ್ತಗೆ ತನ್ನ ತೋಳುಗಳಿಂದ ಅವನನ್ನು ಪುನಃ ಸರಿಯಾಗಿ ಕುಳ್ಳಿರಿಸಿ ಸಮಾಧಾನಪಟ್ಟುಕೊಳ್ಳುತ್ತಿದ್ದಳು ಸರಳಾ..
ಭರತ್ ನಗರ ಬಸ್ ನಿಲ್ದಾಣ ಬಂತು.ಹುಡುಗ ಮೆಲ್ಲನೆ ಎದ್ದು ಬ್ಯಾಗ್ ಹೆಗಲಮೇಲೇರಿಸಿದ.ಸರಳಾಳತ್ತ ಓರೆನೋಟದಿಂದ ಮುಗುಳುನಕ್ಕು ಅಕ್ಕನ ಕೈಹಿಡಿದು ಮುಂದೆ ಸಾಗಿದ.ಸರಳಾಳಿಗೆ ಇಷ್ಟು ಬೇಗ ಅವನು ಇಳಿಯುವ ಸ್ಟಾಪ್ ಯಾಕದರೂ ಬಂತೋ.. ಇನ್ನೂ ಸ್ವಲ್ಪ ಹೊತ್ತು ತನ್ನ ಸನಿಹವೇ ಇರಬೇಕಿತ್ತು ಅನಿಸಿತು.. ಕಂಡಕ್ಟರ್ ಸೀಟಿ ಊದಿದನು.ಬಸ್ ನಿಂತಿತು.ಮಕ್ಕಳು ಇಳಿದರು.ಸರಳಾ ಕುಳಿತಲ್ಲಿಂದಲೇ ಮಗುವಿನತ್ತ ದೃಷ್ಟಿ ಹರಿಸಿದಳು.ಹುಡುಗನ ಮುಗ್ಧವಾದ ಮುಖವನ್ನು ಕಂಡು ನಿಟ್ಟುಸಿರು ಬಿಟ್ಟಳು.ಕಂಡಕ್ಟರ್ ರೈಟ್ ಹೇಳಿದ್ದೇ ತಡ... ಜೋರಾಗಿ ಚೀರುವ ಶಬ್ದ ಕೇಳಿಸಿತು.ಏನಾಯಿತು .. ಎಂದು ನೋಡುವಷ್ಟರಲ್ಲಿ....
ಸರಳಾ ಒಂದುಕ್ಷಣ ಯೋಚಿಸದೆ ಬಸ್ಸಿನಿಂದಿಳಿದು ಓಡಿದಳು.ಬಾಲಕನ ಮೇಲೆ ಬೈಕೊಂದು ಹರಿದು ಹೋಗಿತ್ತು.ರಕ್ತದ ಮಡುವಿನಲ್ಲಿದ್ದ ಬಾಲಕನನ್ನು ಎತ್ತಿಕೊಂಡು ಸ್ಥಳೀಯರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲು ಮುಂದಾದಳು.ಆತನ ಜೊತೆಗಿದ್ದ ಹುಡುಗಿಯೂ ಜೊತೆಗಿದ್ದಳು.ನಗುತ್ತಿದ್ದ ಮಗು ಕ್ಷಣದಲ್ಲೇ ಪ್ರಜ್ಞೆಯನ್ನು ಕಳೆದುಕೊಂಡಿತ್ತು.ಮಗುವನ್ನು ತನ್ನ ತೊಡೆಯಮೇಲೆ ಮಲಗಿಸಿಕೊಂಡ ಸರಳಾಳ ಪ್ರಾರ್ಥನೆ..ದೇವರೇ..ನೀನು ಕ್ರೂರಿಯಾಗದಿರು..ಈ ಪುಟ್ಟನ ಜೀವವನ್ನು ಹೊತ್ತೊಯ್ಯದಿರು...ಎಂಬುದಾಗಿತ್ತು.
ಈ ವಾಹನ ಚಾಲಕರು ಯಾಕಿಷ್ಟು ಅಸಡ್ಡೆಯಿಂದ ವಾಹನ ಚಾಲನೆ ಮಾಡುತ್ತಾರೋ ...ಅವಸರ...ಬಸ್ಸಿನಿಂದ ಇಳಿದು ಜನ ಮಾರ್ಗ ದಾಟುವಷ್ಟು ಸಮಯ ಕಾಯುವ ತಾಳ್ಮೆ ಬೈಕಿನ ಚಾಲಕನಿಗೆ ಬೇಡವೇ...ಛೇ..!! ಬೇಜವಾಬ್ದಾರಿ...
ನೆನಪಿನ ಸುಳಿಯಲ್ಲಿ ಕಳೆದುಹೋದಳು ಸರಳಾ.. ಅಂದು ಸಂಜೆ ಇದೇ ಹೊತ್ತಿನಲ್ಲಿ ನಾನು ಆಫೀಸಿನಿಂದ ಹೊರಟು ಮನೆಗೆ ಬರುತ್ತಿದ್ದೆ.ಹಿಂದಿನಿಂದ ವೇಗವಾಗಿ ಬಂದ ಬೈಕ್ ಗುದ್ದಿಬಿಟ್ಟಿತು.ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ.ನನ್ನ ಜೀವವೇನೋ ಉಳಿದಿತ್ತು.. ಆದರೆ ಹೊಟ್ಟೆಯೊಳಗಿದ್ದ ಏಳು ತಿಂಗಳ ಕಂದ ಈ ಲೋಕಕ್ಕೆ ಕಾಲಿಡುವ ಮುನ್ನವೇ ಕಣ್ಣುಮುಚ್ಚಿದ್ದ.ಅಪಘಾತ ನಡೆಯದಿದ್ದರೆ ನನಗೂ ಈಗ ಇದೇ ವಯಸ್ಸಿನ ಮಗು ಇರುತ್ತಿತ್ತು...ಛೇ..!! ಹಾಳು ನೆನಪು..ಕಣ್ಣೀರೊರೆಸಿಕೊಂಡಳು...ಈ ಮಗುವನ್ನು ಉಳಿಸಿಕೊಳ್ಳಬೇಕು... ನಾವು ನೊಂದುಕೊಂಡಂತೆ ಈ ಮಗುವಿನ ಹೆತ್ತವರು ನೋವನುಭಾವಿಸಬಾರದು... ಎಂದು ಅಂದುಕೊಳ್ಳುತ್ತಲೇ ಸುರಕ್ಷಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತಲುಪಿದರು.
ವೈದ್ಯರು ತುರ್ತು ಚಿಕಿತ್ಸೆ ಕೈಗೊಂಡರು.ಸರಳಾ ಹಿಂದೆ ಮುಂದೆ ನೋಡದೆ ಖರ್ಚಿಗೆ ಬೇಕಾದ ಹಣವನ್ನು ಪಾವತಿಸಿ ವೈದ್ಯರಲ್ಲಿ ದೈನ್ಯವಾಗಿ ಮಗುವಿನ ಪ್ರಾಣವನ್ನು ಉಳಿಸಿಕೊಡುವಂತೆ ಬೇಡಿಕೊಂಡಳು..ಪಕ್ಕದಲ್ಲಿದ್ದ ಹುಡುಗನ ಅಕ್ಕ ದಿಶಾ ಹೆದರಿ ಅತ್ತೂ ಅತ್ತೂ ಇಳಿದುಹೋಗಿದ್ದಳು.ಅಪ್ಪ ಅಮ್ಮ ಆತಂಕದಿಂದ ಆಸ್ಪತ್ರೆಗೆ ದೌಡಾಯಿಸಿದರು.ಬಂದವರೇ ಮಗಳಲ್ಲಿ ಮಗನ ಬಗ್ಗೆ ಕೇಳತೊಡಗಿದರು.. ಅವಳು ಏನು ಹೇಳಲಾಗದೆ ಕಣ್ಣೀರುಸುರಿಸಿದಳು.ಪಕ್ಕದಲ್ಲಿದ್ದ ಸರಳಾಳ ಕಡೆಗೆ ಕೈತೋರಿಸಿ ಈ ಆಂಟಿಯೇ ತಮ್ಮನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು.. ಎಂದು ಗದ್ಗದಿತಳಾದಳು..ಸರಳಾಳ ಬಳಿ ಬಂದ ಮಗುವಿನ ತಾಯಿ ಅವಳ ಕೈಯನ್ನು ಹಿಡಿದು ಉಕ್ಕಿಬರುತ್ತಿರುವ ಕಣ್ಣೀರು ಒರೆಸಿ ಮಗನನ್ನು ವಿಚಾರಿಸಿಕೊಂಡಳು... ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ..ಆ ದೇವರ ಮೇಲೆ ಭರವಸೆ ಇಡೋಣ ಎಂದಷ್ಟೇ ಚುಟುಕಾಗಿ ಉತ್ತರಿಸಿ ಅವಳನ್ನು ಸಂತೈಸಿದಳು ಸರಳಾ...
ಏಳು ಗಂಟೆಯಾದರೂ ಸೊಸೆ ಸರಳಾ ಬಾರದ್ದನ್ನು ಕಂಡು ಅತ್ತೆ ಚೆನ್ನಮ್ಮ ಮಗನಿಗೆ ಕರೆಮಾಡಿ ವಿಷಯ ತಿಳಿಸಿದರು.ದಿನೇಶ್ ಕೂಡಲೇ ಮಡದಿಗೆ ಕರೆಮಾಡಿದ.. ಆಸ್ಪತ್ರೆ ಯಲ್ಲಿರುವ ಸುದ್ದಿ ತಿಳಿದು "ನೀನು ಅಲ್ಲೇ ಇರು..ನಾನೇ ಬರುತ್ತೇನೆ.. "ಎಂದು ಹೇಳಿದನು.. ಸ್ವಲ್ಪ ಹೊತ್ತಿನಲ್ಲಿ ಬಂದ ದಿನೇಶ್ ಗೆ ಸರಳಾಳ ರಕ್ತಸಿಕ್ತ ಬಟ್ಟೆಯನ್ನು ಕಂಡು ಕರುಳುಹಿಂಡಿದಂತಾಯಿತು... ಮಗು ದಿವಿನ್ ಅಪಾಯದಿಂದ ಪಾರಾಗಿ ಬರಲಿ ಎಂಬುದೇ ಅವನ ಆಶಯವಾಗಿತ್ತು..ದಿವಿನ್ ನ ತಂದೆ ದಿನಕರನಲ್ಲಿ "ಏನಾದರೂ ಸಹಾಯ ಬೇಕಿದ್ದರೆ ಹೇಳಿ" ಎಂದು ಹೇಳಿ ಮಡದಿಯನ್ನು ಕರೆದುಕೊಂಡು ಹೊರಟನು..ಸರಳಾಗೆ ದಿವಿನ್ ನ ತಾಯಿ ವಸುಧಾಳನ್ನು ಬಿಟ್ಟುಬರುವಾಗ ತನ್ನ ಬಂಧುವನ್ನು ಬಿಟ್ಟುಹೋಗುತ್ತಿದ್ದೇನೋ ಎಂಬ ಭಾವ.
ಮನೆಗೆ ಬಂದ ಸರಳಾಳಿಗೆ ಕುಳಿತರೂ ನಿಂತರೂ ದಿವಿನ್ ನ ನೆನಪೇ.ಆಘಾತದಿಂದ ಹೊರಬರಲು ಕಷ್ಟವಾಯಿತು.ಉದ್ಯೋಗಕ್ಕೆ ಹೋಗಲಾರದೆ ಚಡಪಡಿಸಿದಳು.ದಿನಕ್ಕೊಮ್ಮೆ ಆಸ್ಪತ್ರೆಗೆ ತೆರಳಿ ದಿವಿನ್ ನ ಆರೋಗ್ಯ ವಿಚಾರಿಸಿ ಮನೆಗೆ ಮರಳಿ ಮಂಕಾಗಿಬಿಡುತ್ತಿದ್ದಳು.ದಿವಿನ್ ನ ತಂದೆ ತಾಯಿಗೆ ಮಗನ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಮಾಡಿದಳು.ಇದನ್ನು ತಿಳಿದ ಅತ್ತೆ ಚೆನ್ನಮ್ಮ ..." ಗುರುತು ಪರಿಚಯವಿಲ್ಲದ ಯಾರಿಗೋ ಏಕೆ ಸಾವಿರಗಟ್ಟಲೆ ದುಡ್ಡು ಕೊಡುತ್ತಿರುವೆ ...ಅದನ್ನೇ ಉಳಿತಾಯ ಮಾಡಿದರೆ ಮುಂದೆ ಮಾಳಿಗೆ ಮನೆ ಕಟ್ಟಲು ಅನುಕೂಲ..."
ಅತ್ತೆ.."ನಮಗೆ ಮಕ್ಕಳಿಲ್ಲ..ಇದೇ ರೀತಿ ಅಪಘಾತ ನಮ್ಮ ಕರುಳಕುಡಿಯನ್ನು ಬಲಿತೆಗೆದುಕೊಂಡಿದೆ .ನಂತರ ಲಕ್ಷಗಟ್ಟಲೆ ಹಣ ವೈದ್ಯರು,ಜ್ಯೋತಿಷ್ಯರು, ವೈದಿಕರು,ಹೋಮಹವನ ಎಂದು ಸುರಿದಾಯಿತು..ಆದರೂ ಫಲ ಸಿಕ್ಕಿಲ್ಲ..ಇನ್ನೂ ಹೊಸವೈದ್ಯರನ್ನು ಸಂಪರ್ಕಿಸುವ ಪ್ರಯತ್ನ ನಿಂತಿಲ್ಲ..ಇಲ್ಲದ ಮಗುವಿಗಾಗಿ ಹಂಬಲಿಸುವ ಬದಲು ಭೂಮಿಮೇಲಿರುವ ಮಗುವನ್ನು ಉಳಿಸುಕೊಳ್ಳಲು ಆ ಪೋಷಕರಿಗೆ ನೆರವಾದರೆ ತಪ್ಪೇನು..."ಎಂದು ಕೇಳಿದಳು..ಸೊಸೆಯ ಮಾತಿಗೆ ಮರುಮಾತನಾಡದ ಚೆನ್ನಮ್ಮ..."ನಿನಗೆ ಹೇಗೆ ಬೇಕೋ ಹಾಗೆ.. ನನ್ನಿಂದ ಅಭ್ಯಂತರವಿಲ್ಲ...ನನಗನಿಸಿದ್ದು ಹೇಳಿದ್ದೇನೆ.. ನಿರ್ಧಾರ ನಿನಗೆ ಬಿಟ್ಟದ್ದು.."ಎಂದರು..
ಸರಳಾ ಆಫೀಸಿಗೆ ಹೋಗುವುದು ನಿಲ್ಲಿಸಿದಳು.ದಿವಿನ್ ನನ್ನು ನೆನೆದು ಮಾನಸಿಕವಾಗಿ ಕುಗ್ಗಿದಳು.ದಿನೇಶ್ .."ಯಾಕೆ ಸರಳಾ..ಅಷ್ಟು ಹಚ್ಚಿಕೊಳ್ಳುತ್ತೀ... ಇದರಿಂದ ನಿನ್ನ ಆರೋಗ್ಯ ಹಾಳಾಗುತ್ತದೆ.. ಹೊತ್ತು ಹೊತ್ತಿಗೆ ಊಟ ಮಾಡಿ, ಆಫೀಸಿಗೆ ಹೋಗುತ್ತಾ ನಿತ್ಯದ ಕೆಲಸಗಳಲ್ಲಿ ತೊಡಗು.ಆಗ ಮನಸು ಹಗುರಾಗುವುದು.."
"ಅಯ್ಯೋ.. ಏನು ಹೇಳ್ತೀರಿ.. ನಾನು ಚಿಂತೆ ಮಾಡ್ತಿಲ್ಲ....ಖುಷಿಯಾಗಿದ್ದೇನೆ .."ಎಂದು ನಕ್ಕರೂ ಅದರ ಹಿಂದೆ ನೋವಿನ ಛಾಯೆಯಿರುವುದು ದಿನೇಶನ ಗಮನಕ್ಕೆ ಬರದಿರುವುದೇ... ಮಡದಿಯನ್ನು ಅರ್ಥಮಾಡಿಕೊಂಡ ಪತಿ ದಿನೇಶ್..ಸರಳಾಳ ಮಗುವಿನ ಪ್ರೇಮವನ್ನು ಕಂಡ ದಿನೇಶ್ ತನ್ನ ಸಹೋದ್ಯೋಗಿಗಳಲ್ಲಿ ಅವಳ ಸ್ಥಿತಿಯನ್ನು ಹೇಳಿ ಮಗುವನ್ನು ದತ್ತು ತೆಗೆದುಕೊಂಡರೆ ಹೇಗೆ ಎಂದು ಚರ್ಚಿಸಿದನು.ಕೆಲವರು ಅದೇ ಒಳ್ಳೆಯದು ಎಂದರೆ ಇನ್ನು ಕೆಲವರು ದತ್ತು ಪ್ರಕ್ರಿಯೆಯ ಋಣಾತ್ಮಕ ಅಂಶಗಳನ್ನು ಎತ್ತಿಹೇಳಿದ್ದರು.. ಅಂತೂ ದಿನೇಶ ಗೊಂದಲದ ಗೂಡಾದ.
ಇಲ್ಲ..ನನ್ನ ಸರಳಾ ಹೀಗಾಗಲು ಬಿಡಬಾರದು.. ಅವಳನ್ನು ಇಂತಹ ಸಂದರ್ಭದಲ್ಲಿ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳಬೇಕು.. ನಾನು ಕೂಡ ಇತ್ತೀಚೆಗೆ ಆಫೀಸ್ ಕೆಲಸದಲ್ಲಿ ಒತ್ತಡದಲ್ಲಿ ಸಿಲುಕಿರುವುದರಿಂದ ಅವಳ ಕಡೆಗೆ ಗಮನ ಕೊಡುವುದೂ ಕಡಿಮೆಯಾಗಿದೆ..ಪಾಪ..!! ಅವಳಾದರೂ ನೋವನ್ನು ಇನ್ನಾರಬಳಿ ಹಂಚಿಕೊಳ್ಳುವುದು...ನಾನೇ ಈಗ ಅವಳಿಗೆ ಪುಟ್ಟ ಮಗು..ಅವಳೇ ನನಗೆ ಮಗಳು, ತಾಯಿ, ಪ್ರೇಯಸಿ ಎಲ್ಲವೂ ...ಯಸ್... ಅವಳನ್ನು ಖುಷಿಪಡಿಸಲೇ ಬೇಕು... ಅವಳು ನಾನು ಇಬ್ಬರೇ ಸುಂದರ ಪ್ರಕೃತಿಯ ಮಡಿಲಲ್ಲಿ ಮತ್ತೆ ನಲಿದಾಡಬೇಕು...ಯಸ್ ಶುವರ್..ಈಗಲೇ ನಿರ್ಧಾರ ಮಾಡಿಯಾಯ್ತು..ಎಂದುಕೊಂಡವನೇ ಆಫೀಸಿಗೆ ಒಂದು ವಾರ ರಜೆ ಹಾಕಿ ಮನೆಗೆ ತೆರಳಿದ..
ಮೊದಲೆಲ್ಲ ನಗುನಗುತ್ತಾ ಸ್ವಾಗತಿಸುತ್ತಿದ್ದ ಸರಳಾ ಈಗ ಪತಿ ಬಂದದ್ದು ತಿಳಿದರೂ ಹೊರಗೆ ಬರುವುದಿಲ್ಲ..ಅವನೇ ನಗುನಗುತ್ತಾ ಒಳಬಂದ.ಚೆನ್ನಮ್ಮ ಮಗನ ಮುಖದಲ್ಲಿನ ಮಂದಹಾಸವನ್ನು ಗಮನಿಸಿದನು.ಸೀದಾ ಒಳಗೆ ತೆರಳಿ ರೂಮಿನಲ್ಲಿದ್ದ ಸರಳಾಳನ್ನು ತನ್ನ ತೋಳಲ್ಲಿ ಬಳಸಿದ.. "ಏನು ಈಗ.."
"ನಿನಗೆ ಸರ್ಪ್ರೈಸ್ ಕೊಡೋಣ ಅಂತ"
"ಏನಿರುತ್ತೆ ಅಂತಾದ್ದು.. ಪಾರ್ಟಿಗೆ ಹೋಗೋಣ ಅಂತಾನೋ...ಹೋಟೇಲಿಗೆ ಹೋಗೋಣ ಅಂತಾನೋ ಹೇಳುವುದು ಬಿಟ್ಟು..."
"ಈಗಲೇ ಡ್ರೆಸ್ ಪ್ಯಾಕ್ ಮಾಡಿ ಹೊರಡು... ಒಂದು ವಾರ ಪ್ರವಾಸ ಹೋಗಿ ಬರೋಣ.."
"ಹೌದಾ..ದಿನೀ... ಏನು... ಸುಮ್ನೆ ತಮಾಷೆ ಮಾಡ್ತಿಲ್ಲ ತಾನೇ...."
"ಇಲ್ಲ.. ಮಹಾತಾಯಿ..ನೋಡು.. ಬುಕ್ ಮಾಡಿದೀನಿ ಎರಡು ಸೀಟು.. "ಎನ್ನುತ್ತಾ ಮೊಬೈಲ್ ತೋರಿಸಿದ..
ಖುಷಿ ಖುಷಿಯಿಂದ ಹೊರಟರು ಇಬ್ಬರೂ..ಚೆನ್ನಮ್ಮ ಹೋಗಿಬನ್ನಿ ಮಕ್ಕಳಾ... ಎಂದು ಹರಸಿ ಕಳುಹಿಸಿದಳು..ಸರಳಾ ಹೀಗಾದರೂ ಖುಷಿಯಾಗಿದ್ದರೆ ಸಾಕು... ಇತ್ತೀಚೆಗೆ ತೀರಾ ಮಗುವಿನ ಬಗ್ಗೆ ಚಿಂತೆ ಮಾಡುತ್ತಿದ್ದಾಳೆ..ಎಂದು ಮನದಲ್ಲೇ ಅಂದುಕೊಳ್ಳುತ್ತಾ ಮಗಸೊಸೆಯ ಅನುರೂಪ ಜೋಡಿಯನ್ನು ಕಂಡು ಒಂದು ಮಗು ಇವರ ಮಡಿಲಿನಲ್ಲಿ ಅರಳಿದರೆ ಎಷ್ಟು ಚಂದ...!! ಆ ದೇವರು ಯಾವಾಗ ಕರುಣೆ ತೋರುತ್ತಾನೋ...ಎಂದುಕೊಂಡರು..
ಆಸ್ಪತ್ರೆಯಲ್ಲಿ ದಿವಿನ್ ಗೆ ಚಿಕಿತ್ಸೆ ನಡೆಯುತ್ತಿತ್ತು.ದಿನಕರ ವಸುಧಾ ಆರ್ಥಿಕವಾಗಿ ಮಾನಸಿಕವಾಗಿ ಕುಸಿದುಹೋದರು.ವೈದ್ಯರೂ ತಮ್ಮಾಂದಾದಷ್ಟು ಕಡಿಮೆ ಖರ್ಚಿನಲ್ಲಿ ಆಪರೇಶನ್ ಗಳನ್ನು ಮಾಡಿದರೂ ಮಗು ಚೇತರಿಸಿಕೊಂಡಿರಲಿಲ್ಲ ..ವಸುಧಾಗಂತೂ ಸಾಂತ್ವನ ಹೇಳುವವರು ಯಾರೂ ಇರಲಿಲ್ಲ.
ಪ್ರೀತಿಸಿ ದಿನಕರನನ್ನು ಮದುವೆಯಾದವಳು.ಅಲ್ಲಿಂದ ತವರ ಬಾಂಧವ್ಯ ಕಡಿದೇ ಹೋಗಿತ್ತು.ದಿನವೂ ಆಸ್ಪತ್ರೆಗೆ ಬರುತ್ತಿದ್ದ ಸರಳಾ ಅವಳಿಗೆ ಅಕ್ಕನಂತೆ ಕಂಡಿದ್ದಳು.ಸರಳಾಳಿಗೂ ಹಾಗೇನೇ ..ತಂದೆ ಬಾಲ್ಯದಲ್ಲೇ ಕಳೆದುಕೊಂಡಿದ್ದು ಅಮ್ಮ ತವರ ಮನೆಯಲ್ಲಿ ಆಶ್ರಯ ಪಡೆದಿದ್ದಳು.ಸರಳಾಳ ಮದುವೆಗೂ ಮುನ್ನವೇ ಅಸುನೀಗಿದ್ದಳು..ಮದುವೆಯಾದ ನಂತರ ಸರಳಾಗೆ ಅತ್ತೆ,ಗಂಡ,ಸಹೋದ್ಯೋಗಿಗಳೇ ಬಂಧುಗಳು..ಅಪರೂಪಕ್ಕೊಮ್ಮೆ ಅಜ್ಜಿ ಮನೆಗೆ ಹೋದರೂ ಅಲ್ಲಿ ಪ್ರೀತಿಮಾಡಿಕೊಳ್ಳುವವರು ಯಾರೂ ಇರಲಿಲ್ಲ.. ಹಾಗಾಗಿ ವಸುಧಾ ಸರಳಾಳ ಮೈತ್ರಿ ಗಾಢವಾಗಿ ಬೆಸೆಯಿತು..ಪ್ರವಾಸದಲ್ಲಿದ್ದರೂ ಸರಳಾ ದಿನಕ್ಕೊಮ್ಮೆ ಕರೆ ಮಾಡಿ ವಿಚಾರಿಸುತ್ತಿದ್ದಳು..
ಸರಳಾ ದಿನೇಶ್ ಹತ್ತು ವರ್ಷ ಹಿಂದಕ್ಕೆ ಮರಳಿದರು.ಹಾಡುಹಳೆಯದಾದರೇನು ಭಾವ ನವನವೀನ ಎನ್ನುತ್ತಾ ದಿನೇಶ್ ಸರಳಾಳನ್ನು ತೋಳ್ತೆಕ್ಕೆಯಲ್ಲಿ ಬಂಧಿಸಿದನು.ಸರಳಾಳ ಮಡಿಲಲ್ಲಿ ತಲೆಯಿಟ್ಟು ಮಲಗುವ ಮಗುವಾದನು.ಇಬ್ಬರ ಬಾಂಧವ್ಯಕ್ಕೆ ತಡೆಗೋಡೆಯಿರದೆ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿದರು..ಸುಂದರ ಸ್ಥಳಗಳನ್ನು ಕಣ್ತುಂಬಿಸಿಕೊಳ್ಳುತ್ತಾ ದಾಂಪತ್ಯದ ಸರಸಮಯ ಕ್ಷಣಗಳನ್ನು ಅನುಭವಿಸಿದರು.ಒಂದು ವಾರ ಸರಿದದ್ದೇ ತಿಳಿಯಲಿಲ್ಲ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿವಿನ್ ನ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ತಿಳಿಸಿದರು.ಸಾಲಮಾಡಿ ಹಣಹೊಂದಿಸಿ ಆಸ್ಪತ್ರೆ ಶುಲ್ಕ ಪಾವತಿಸಿ ದಿವಿನ್ ನನ್ನು ಮನೆಗೆ ಕರೆತರಲಾಯಿತು.ವಸುಧಾ ಉದ್ಯೋಗ ಬಿಟ್ಟರೆ ಕಷ್ಟ.ಉದ್ಯೋಗಕ್ಕೆ ತೆರಳಿದರೆ ಮಗನ ಆರೈಕೆ ಮಾಡುವವರಿಲ್ಲ.ಅಂತೂ ಗಟ್ಟಿ ಮನಸ್ಸು ಮಾಡಿ ಉದ್ಯೋಗವನ್ನು ತೊರೆದು ಮಗನ ಸೇವೆಗೆ ನಿಂತಳು. ಯಾರಲ್ಲೋ ಕಲಿತುಕೊಂಡು ಆಕ್ಯುಪ್ರೆಷರ್, ಮುದ್ರೆಗಳನ್ನು ಮಗನಮೇಲೆ ಪ್ರಯೋಗ ಮಾಡಿದಳು.ಏನು ಮಾಡಿದರೂ ಫಲ ಮಾತ್ರ ಶೂನ್ಯ.
ವೈದ್ಯರು ದಿವಿನ್ ನ ಮೇಲೆ ಭರವಸೆ ಕಳೆದುಕೊಂಡದ್ದನ್ನು ತಿಳಿದ ಸರಳಾ ಬಹಳ ಕುಗ್ಗಿದಳು.ನೋವಿನಿಂದ ಆಹಾರ ಸೇರುತ್ತಿರಲಿಲ್ಲ.ಪ್ರವಾಸದಿಂದ ಉಲ್ಲಾಸವಾದ ಮನಸ್ಸು ಮುದುಡಲಾರಂಭಿಸುವ ಮುನ್ನ ಮಡದಿಯನ್ನು ಉದ್ಯೋಗಕ್ಕೆ ತೆರಳುವಂತೆ ಮಾಡಬೇಕು.ನಾಲ್ಕುಜನರ ಒಡನಾಟ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ದಿನೇಶ್ ನ ಲೆಕ್ಕಾಚಾರ."ನಾಳೆ ಆಫೀಸಿಗೆ ಜೊತೆಗೆ ಹೋಗೋಣ.ಬೆಳಗ್ಗೆ ಬೇಗನೆ ತಯಾರಾಗು "ಎಂದು ದಿನೇಶ್ ರಾತ್ರಿಯೇ ಹೇಳಿದ್ದ.ಬೆಳಗ್ಗೆ ಬೇಗನೆದ್ದ ಸರಳಾ ಒಂದೇ ಸಮನೆ ವಾಂತಿ ಮಾಡಲು ಆರಂಭಿಸಿದ್ದಳು. ಆಯಾಸಗೊಂಡಳು . ಚಿಕಿತ್ಸೆಗೆ ಕರೆದುಕೊಂಡು ಹೋದ ದಿನೇಶನಿಗೊಂದು ಅಚ್ಚರಿ ಕಾದಿತ್ತು.. ವೈದ್ಯರು ಪರೀಕ್ಷಿಸಿ ಬಂದು "..ಭಯಪಡಬೇಕಾಗಿಲ್ಲ.. ನೀವು ತಂದೆಯಾಗುತ್ತಿದ್ದೀರಾ..." ಎಂದಾಗ ದಿನೇಶ ಸರಳಾರ ಮುಖ ಸಂತಸದಿಂದ ಅರಳಿತ್ತು.. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿ ಪೌಷ್ಟಿಕಾಂಶಗಳ ಮಾತ್ರೆಗಳನ್ನು ಬರೆದುಕೊಟ್ಟರು.ಸುದ್ದಿ ತಿಳಿದ ಚೆನ್ನಮ್ಮ ಸೊಸೆಯನ್ನು ಮಹಾರಾಣಿಯಂತೆ ನೋಡಿಕೊಳ್ಳಬೇಕು..ಮುದ್ದಾದ ಮಗು ಬಾಯ್ತುಂಬಾ ಅಜ್ಜೀ, ಅಮ್ಮಾ, ಅಪ್ಪಾ.. ಅನ್ನುತ್ತಾ ಮನೆತುಂಬಾ ಓಡಾಡಬೇಕಾದರೆ ಈಗ ನನ್ನ ಆರೈಕೆ, ಕಾಳಜಿ ಸೊಸೆಗೆ ಅಗತ್ಯ... ಎಂದುಕೊಂಡು ಸರಳಾಳನ್ನು ಜೋಪಾನವಾಗಿ ನೋಡಿಕೊಂಡರು..
ಸಿಹಿಸುದ್ದಿ ತಿಳಿದ ವಸುಧಾ ದಿನವೂ ತಪ್ಪದೇ ಸರಳಾಗೆ ಕರೆಮಾಡುವುದು..ಸಲಹೆ ನೀಡುವುದು ...ಸರಳಾ ದಿವಿನ್ ಆರೋಗ್ಯ ವಿಚಾರಿಸುವುದು ದಿನಚರಿಯಾಯಿತು.. ವಸುಧಾ ಸರಳಾ ಅಕ್ಕತಂಗಿಯರಂತೆ ಹತ್ತಿರವಾದರು..
ಒಂದು ದಿನ ಮಲಗಿದ್ದ ವಸುಧಾಳಿಗೆ ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ದಿವಿನ್...."ಅಮ್ಮಾ..... ಅಮ್ಮಾ..."ಎಂದು ಕರೆದಂತಾಯಿತು... ಪಕ್ಕನೆ ಎಚ್ಚರವಾಗಿ ಸುತ್ತಲೂ ನೋಡಿದಳು...ದಿವಿನ್ ಮಾತನಾಡಲು ಹೇಗೆ ಸಾಧ್ಯ.. ಎದ್ದು ಮಂಚದಲ್ಲಿ ಮಲಗಿದ್ದ ದಿವಿನ್ ನನ್ನು ನೋಡಿದಳು.ಎಂದಿನಂತೆಯೇ ಈ ಜಗದ ಅರಿವಿಲ್ಲದೆ ಮಲಗಿದ್ದ..." ನನಗೆ ಕನಸು..." ಎಂದುಕೊಂಡು ಹೊದ್ದು ಮಲಗಿದಳು.ಮುಂಜಾನೆಯ ಹೊತ್ತು ..."ಅಮ್ಮಾ.. ಅಮ್ಮಾ... ನನ್ನನ್ನು ಎತ್ತಿಕೋ..."ಎಂದು ಅಳುತ್ತಾ ಎರಡು ಕೈಗಳನ್ನು ಮುಂದೆ ಹಿಡಿದು ನಿಂತಿದ್ದ ಪೋರ ದಿವಿನ್.. ಒಮ್ಮೆಲೆ ಗಾಬರಿಯಾದಳು...ರೀ..ರೀ... ಎಂದು ದಿನಕರನನ್ನು ಎಬ್ಬಿಸಿದಳು.ಮಗನತ್ತ ದೃಷ್ಟಿ ಹರಿಸಿದರು..ಮೂಗಿನತ್ತ ಕೈಹಿಡಿದರು.ಆಗಲೇ ಬಾರದ ಲೋಕಕ್ಕೆ ತೆರಳಿದ್ದ ದಿವಿನ್...ವಸುಧಾ ಕನಸನ್ನು ನೆನೆದು ...ಮಗನ ಅಗಲುವಿಕೆಯಿಂದ ದಿಗ್ಭ್ರಾಂತಳಾದಳು.
ಮುಂದಿನ ಸಂಸ್ಕಾರದ ತಯಾರಿ ನಡೆಯುತ್ತಿತ್ತು.ವಸುಧಾಳ ಫೋನ್ ಗೆ ಕರೆಬಂತು.ಸರಳಾಳ ಫೋನ್ ಕರೆಯಾದ್ದರಿಂದ ಮಗನನ್ನು ಬದುಕಿಸಲು ಶಕ್ತಿಮೀರಿ ಪ್ರಯತ್ನಪಟ್ಟವಳಿಗೆ ನಾನು ಸುದ್ದಿ ತಿಳಿಸಬೇಕು ಎಂದು ಕೆರೆಯನ್ನು ಸ್ವೀಕರಿಸಿದಳು ವಸುಧಾ ....ಅತ್ತ ಕಡೆಯಿಂದ ಸರಳಾಳ ಪತಿ ದಿನೇಶ್ ಮಾತನಾಡುತ್ತಿದ್ದರು..."ಸರಳಾ ಮುಂಜಾನೆ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ .. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.."
ವಸುಧಾ ತನ್ನ ನೋವನ್ನು ಮರೆತು ..."ಆಗಲಿ..ಚೆನ್ನಾಗಿರಲಿ ನಿಮ್ಮ ಕುಟುಂಬ.."ಎನ್ನುತ್ತಾ ಕುಸಿದಳು..ಅತ್ತ ಕಡೆಯಿಂದ "ದಿವಿನ್ ನನ್ನು ವಿಚಾರಿಸಿಕೊಂಡಿದ್ದಾಳೆ ಸರಳಾ.."ಎಂಬ ಮಾತು ತೇಲಿ ಬಂತು.. ಒಂದು ಕ್ಷಣ ಸಾವರಿಸಿಕೊಂಡ ವಸುಧಾ ..."ಚೆನ್ನಾಗಿದ್ದಾನೆ..."ಎಂದು ಉತ್ತರಿಸಿ ಫೋನಿಟ್ಟಳು..
ಹೌದು... ನಾನು ಹೇಳಿದ್ದು ಸತ್ಯ..ನನ್ನ ಮಗ ದಿವಿನ್ ಸರಳಾಳ ಹೊಟ್ಟೆಯಿಂದ ಜನ್ಮತಳೆದು ಭೂಮಿಗೆ ಬಂದಿದ್ದಾನೆ.. ಅಮ್ಮಾ.. ನನ್ನನ್ನು ಎತ್ತಿಕೋ... ಎಂದು ಮುಂಜಾನೆ ಕೂಗಿಕೊಂಡದ್ದು ಅವನೇ..ಅವನೇ...
ಎನ್ನುತ್ತಾ ನೆಲಕ್ಕುರುಳಿದ ಅಮ್ಮನನ್ನು ಮಗಳು ದಿಶಾ ಸಂತೈಸುವ ದೃಶ್ಯ ಮನಕಲುತ್ತಿತ್ತು...
ದಿನಗಳುರುಳಿದವು.. ವಸುಧಾ ಸರಳಾಳಿಗೆ ದಿವಿನ್ ನ ಮರಣದ ವಾರ್ತೆಯನ್ನು ತಿಳಿಸಿದಳು.ಮಡಿಲಲ್ಲಾಡುವ ಮುದ್ದು ಮಗು ಸರಳಾಳ ನೋವನ್ನು ಮರೆಸಿತು..ಮಗುವೇ ಅವಳ ಪ್ರಪಂಚ ಈಗ.ಒಂದು ದಿನ ವಸುಧಾ ಮಗುವನ್ನು ನೋಡಲು ಆಗಮಿಸಿದಳು..ಸರಳಾಳ ಮಗು ವಸುಧಾಳ ಮಗ ದಿವಿನ್ ಮಗುವಾಗಿದ್ದಾಗ ಇದ್ದಂತೇ ಇತ್ತು.. ಎತ್ತಿ ಮುದ್ದಾಡಿ ಆನಂದಿಸಿದಳು.. ಅವಳು ಹೊರಡುತ್ತಿದ್ದಂತೆ ಜೋರಾಗಿ ಅತ್ತ ಸರಳಾಳ ಮಗ ಸಂಹಿತ್...
ಸಂಹಿತ್ ಗೆ ಆರುವರ್ಷ ವಯಸ್ಸು.ಶಾಲೆಗೆ ಹೋಗಲಾರಂಭಿಸಿದ.ಸರಳಾ ಅವನನ್ನು ಶಾಲೆಗೆ ಕರೆದೊಯ್ಯುವುದು, ಮನೆಗೆ ಕರೆದುಕೊಂಡು ಬರುವುದು ಮಾಡುತ್ತಿದ್ದಳು.. ಒಂದು ದಿನ ಮನೆಗೆ ಮರಳುವಾಗ ವಸುಧಾ ಆಂಟಿಯ ಮನೆಗೆ ಹೋಗೋಣ ಎಂದು ಹಠ ಹಿಡಿದ..ಅವನ ಹಠಕ್ಕೆ ಮಣಿದು ಕರೆದುಕೊಂಡು ಹೋದಳು ಸರಳಾ... ವಸುಧಾ ತೀವ್ರ ಜ್ವರದಿಂದ ಬಳಲುತ್ತಿದ್ದಳು.. ತಾವೇ ಚಿಕಿತ್ಸೆ ಕೊಡಿಸೋಣ ಎಂದು ಸಂಹಿತ್.. ವೈದ್ಯರಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸಿ ವಾಪಾಸಾದರು..ದಿನಕರ,ವಸುಧಾ,ದಿಶಾಗೆ ಏನಾದರೂ ಹೆಚ್ಚು ಕಡಿಮೆ ಆದರೂ ಸಂಹಿತ್ ಗೆ ತಿಳಿಯುತ್ತಿತ್ತು..ಸರಳಾಗೆ ಹಾಗೂ ದಿನೇಶ್ ಗೆ ಇದು ಅಚ್ಚರಿಯ ವಿಷಯವಾಗಿತ್ತು... ದಿನಗಳೆದಂತೆ ಎರಡೂ ಮನೆಗೂ ಮಗನಂತಾದ ದಿವಿನ್...ಸರಳಾ ವಸುಧಾಳಲ್ಲಿ ಅಚ್ಚರಿಯನ್ನು ವ್ಯಕ್ತಡಿಸಿದಾಗ ವಸುಧಾ ದಿವಿನ್ ನ ಮರಣದ ದಿನ ತನಗೆ ಬಿದ್ದಂತಹ ಕನಸನ್ನು ಹೇಳಿಕೊಂಡಳು...
ದಿವಿನ್ ನ ಆತ್ಮ ಸರಳಾಳ ಗರ್ಭದಲ್ಲಿ ಮರುಜನ್ಮತಳೆದು ವಸುಧಾ ಹಾಗೂ ಸರಳಾ ಇಬ್ಬರ ಕುಟುಂಬಕ್ಕೂ ಮಗನಾಗಿ ಸಂಹಿತ್ ಎಂಬ ಹೆಸರಿನಲ್ಲಿ ಕರ್ತವ್ಯ ಕಾಳಜಿಮೆರೆಯಿತು ...
✍️... ಅನಿತಾ ಜಿ.ಕೆ.ಭಟ್.
27-11-2019.