ಒಂದು ಕಾಡಿನ ಪಕ್ಕದಲ್ಲಿ ವಿಜಯಪುರ ಎಂಬ ಊರಿನಲ್ಲಿ ರಾಮಣ್ಣನ ಮನೆಯಿತ್ತು.ರಾಮಣ್ಣ ತನ್ನ ಮಡದಿ ಸೋಮಕ್ಕ ಮಕ್ಕಳಾದ ಲೀಲಾ ಮತ್ತು ಮಾಲಾರ ಜೊತೆಗೆ ವಾಸಿಸುತ್ತಿದ್ದನು.ರಾಮಣ್ಣ ಉತ್ತಮ ಕೃಷಿಕನಾಗಿದ್ದನು.ತನ್ನ ತೋಟದಲ್ಲಿ ತೆಂಗು, ಬಾಳೆ, ಅನಾನಸು, ಮಾವು, ಸೀಬೇಕಾಯಿ, ಚಕ್ಕೋತ ಬೆಳೆದು ಮಾರಾಟ ಮಾಡುತ್ತಿದ್ದನು.ಅದರಿಂದ ಬಂದ ಹಣದಿಂದ ಕುಟುಂಬವನ್ನು ಸಲಹುತ್ತಿದ್ದನು . ಮನೆಗೆ ಬೇಕಾದ ಸೌಲಭ್ಯಗಳನ್ನು ಮಾಡಿಸುತ್ತಿದ್ದನು.
ಒಂದು ದಿನ ಊರಿನ ಜಾತ್ರೆಯಿದ್ದಿತು.ಜಾತ್ರೆಗೆ ರಾಮಣ್ಣ ಮಡದಿ ಮಕ್ಕಳೊಂದಿಗೆ ತೆರಳಿದ್ದ.ಮಕ್ಕಳಿಗೆ ಬೇಕಾದ ಆಟಿಕೆಗಳನ್ನು,ಬಳೆ, ಶೇಂಗಾ ಚಿಕ್ಕಿ ಎಲ್ಲವನ್ನೂ ರಾಮಣ್ಣ ತೆಗೆದುಕೊಟ್ಟಿದ್ದನು.ಅಷ್ಟರಲ್ಲಿ ರಾಮಣ್ಣನ ಬಾಲ್ಯಸ್ನೇಹಿತ ಪರಮೇಶ ಬಂದರು.ಪರಮೇಶ ಈಗ ವಿದೇಶದಲ್ಲಿ ಒಳ್ಳೆಯ ನೌಕರಿಯಲ್ಲಿದ್ದರು.ಸ್ವಲ್ಪ ದಿನಕ್ಕೆ ಊರಿಗೆ ಬಂದಿದ್ದರು.ಇಬ್ಬರೂ ಸ್ವಲ್ಪ ಹೊತ್ತು ಹರಟೆಹೊಡೆದರು.ಲೀಲಾ ಮತ್ತು ಮಾಲಾರನ್ನು ಹತ್ತಿರಕ್ಕೆ ಕರೆದ ಪರಮೇಶ ಚೆನ್ನಾಗಿ ಓದಿ ಜಾಣೆಯರಾಗಬೇಕು ಎಂದು ಕಿವಿಮಾತು ಹೇಳಿದರು.ಇಬ್ಬರಿಗೂ ತನ್ನ ಕೈಚೀಲದಿಂದ ಎರಡೆರಡು ವಿದೇಶೀ ಚಾಕಲೇಟುಗಳನ್ನು ನೀಡಿದರು.
ಲೀಲಾಗೆ ಚಾಕಲೇಟೆಂದರೆ ತುಂಬಾ ಇಷ್ಟ.ಕೈಯಲ್ಲಿ ಹಿಡಿದುಕೊಂಡು ಕೂರುವ ಜಾಯಮಾನ ಅವಳದಲ್ಲ.ಚಾಕಲೇಟ್ ಸಿಪ್ಪೆ ಸುಲಿದು ಬಾಯಿಗಿಟ್ಟಳು.ಆಹಾ ..ಎಂಥಾ ಸವಿರುಚಿ ಎಂದು ಹೊಗಳಿದಳು.ಈ ಪರಮೇಶ ಮಾಮ ಆಗಾಗ ಹೀಗೆ ಸಿಕ್ಕರೆ ಎಷ್ಟು ಚಂದ.ವಿದೇಶೀ ಚಾಕಲೇಟ ಸವಿಯಬಹುದು ಎಂಬುದು ಅವಳ ಲೆಕ್ಕಾಚಾರವಾಗಿತ್ತು.
ಮಾಲಾ ತನಗೆ ಕೊಟ್ಟ ಚಾಕಲೇಟ್ ನ್ನು ತಿನ್ನದೆ ಕೈಯಲ್ಲಿ ಹಿಡಿದೇ ಇದ್ದಳು.ಲೀಲಾ ತಿಂದು ಗುಣಗಾನ ಮಾಡುವುದನ್ನು ಕೇಳಿ ತಾನೂ ಏನೋ ಯೋಚನೆಯಲ್ಲಿ ಮುಳುಗಿದಳು.ಪರಮೇಶ ಮಾಮ ತುಂಬಾ ಓದಿರಬೇಕು.ಅದಕ್ಕೆ ಅವರು ವಿದೇಶದಲ್ಲಿ ನೌಕರಿ ಪಡೆದಿದ್ದಾರೆ.ಕೈತುಂಬಾ ಸಂಬಳ ಸಿಗುತ್ತಿರಬಹುದು.ಆದ್ದರಿಂದಲೇ ಎಲ್ಲರಿಗೂ ಚಾಕಲೇಟ್ ಕೊಡುತ್ತಿದ್ದಾರೆ.ತಾನೂ ಕೂಡ ಚೆನ್ನಾಗಿ ಕಲಿತು ಒಳ್ಳೆಯ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬೇಕೆಂಬ ಹಂಬಲ ಅವಳಲ್ಲಿ ಮೂಡಿತು.
ಜಾತ್ರೆಯಿಂದ ಹೊರಟು ಮನೆಗೆ ತಲುಪಿತು ರಾಮಪ್ಪನ ಕುಟುಂಬ.ಮಾಲಾಳ ಕೈಯಲ್ಲಿದ್ದ ಚಾಕಲೇಟ್ ನೀರಾಗಿದ್ದರಿಂದ ಆಕೆ ಅದನ್ನು ಶೀತಲೀಕರಣ ಯಂತ್ರದಲ್ಲಿ ಇರಿಸಿದಳು. ಎರಡು ಗಂಟೆಯ ಬಳಿಕ ಲೀಲಾ ತಿನ್ನಲು ಏನಾದರೂ ಇದೆಯೇ ಎಂದು ನೋಡಲು ಫ್ರಿಡ್ಜ್ ಬಾಗಿಲು ತೆರೆದಳು.ಅಲ್ಲಿ ಚಾಕಲೇಟ್ ಗಳು ಕಂಡವು.ಮೊದಲೇ ತನ್ನ ಕೈಯಲ್ಲಿದ್ದ ಚಾಕಲೇಟ್ ತಿಂದಿದ್ದ ಲೀಲಾಗೆ ಅದರ ರುಚಿ ನೆನಪಾಗಿ ನಾಲಿಗೆಯಲ್ಲಿ ನೀರೂರಿತು.ಆಹಾ ... ಎಷ್ಟು ರುಚಿಕರವಾದ ಸ್ವಾದಿಷ್ಟವಾದ ಚಾಕಲೇಟ್ ಗಳು.ನಾನು ಈ ಮೊದಲು ತಿನ್ನುತ್ತಿದ್ದ ದೇಶೀಯ ಚಾಕಲೇಟ್ ನಂತೆ ಅಲ್ಲ.ಇದು ಮಾಲಾಳದ್ದು ಆಗಿರಬೇಕು.. ನಾನು ತಿಂದರೆ ಆಕೆಗೆ ಗೊತ್ತಾಗಲಾರದು...ಎಂದುಕೊಂಡು ಮೆಲ್ಲಗೆ ಕೋಣೆಯಿಂದ ಹೊರಗೆ ಇಣುಕಿದಳು.ಮಾಲಾ ಓದಿನಲ್ಲಿ ನಿರತಳಾಗಿದ್ದಳು.ಅಮ್ಮ ಸೋಮಕ್ಕ ದನದ ಕೊಟ್ಟಿಗೆಯಲ್ಲಿ ದನದ ಹಾಲು ಹಿಂಡುವುದರಲ್ಲಿ ನಿರತಳಾಗಿದ್ದಳು.ಇದೇ ಸರಿಯಾದ ಸಮಯ ಎಂದು ಮೆಲ್ಲನೆ ಚಾಕಲೇಟ್ ತೆಗೆದುಕೊಂಡು ಮನೆಯ ಅಟ್ಟಕ್ಕೆ ತೆರಳಿದಳು.ಬಾಯಿ ಚಪ್ಪರಿಸಿ ತಿಂದಳು.ಯಾರಿಗೂ ಹೇಳದೆ ತಿಂದದ್ದು ಅವಳಿಗೆ ಬಹಳ ಮಜಾ ಕೊಟ್ಟಿತು..
ನಂತರ ಮನೆಯಿಂದ ಹೊರಗೆ ಓಡಿ ಆಟದಲ್ಲಿ ತಲ್ಲೀನಳಾದಳು.ಚೆಂಡಿನಲ್ಲಿ ಆಟವಾಡುತ್ತಿದ್ದಾಗ ಅಂಗಳದ ಬದಿಯಲ್ಲಿ ಇರುವೆಯ ಸಾಲೊಂದನ್ನು ಕಂಡಳು.ಆಟವಾಡುತ್ತಿದ್ದಾಗ ಚೆಂಡು ಅವುಗಳು ಮೇಲೆ ಬಿದ್ದಿತು..ಇರುವೆಗಳ ಸರತಿಯ ಸಾಲು ಚಲ್ಲಾಪಿಲ್ಲಿಯಾಯಿತು.ದೊಡ್ಡ ಇರುವೆ ಲೀಲಾಳ ಕಾಲಿಗೆ ಕಡಿಯಿತು..ಉರಿ.. ಉರಿ.. ಎಂದು ಕಾಲನ್ನು ಉಜ್ಜಿಕೊಂಡಳು .. ತಾನು ಆಡುವಾಗ ಅವುಗಳಿಗೆ ತೊಂದರೆ ಕೊಟ್ಟದ್ದು ತಪ್ಪು ಎನಿಸಿತು ಅವಳಿಗೆ.ಸೀದಾ ಮನೆಯ ಒಳಗೆ ಓಡಿದಳು.ಒಂದು ಚಮಚ ಸಕ್ಕರೆ ತಂದಳು.ಅಂಗಳದ ಬದಿಯಲ್ಲಿ ಹಾಕಿದಳು.ಸಣ್ಣ ಇರುವೆಯೊಂದು ಅಲ್ಲಿಗೆ ಬಂದು ಸಕ್ಕರೆಯ ಇರುವಿಕೆಯನ್ನು ಪತ್ತೆ ಹಚ್ಚಿತು.ತಾನು ತಿನ್ನದೆ ಹೋಯಿತು.ಲೀಲಾಗೆ ಆಶ್ಚರ್ಯ ವಾಯಿತು.ರುಚಿಕರ ಆಹಾರ ಸಿಕ್ಕರೂ ತಿನ್ನದೇ ಹೋಯಿತಲ್ಲ.. ಎಂದು.
ಹೋದ ಇರುವೆ ತನ್ನ ಮೂತಿಯಲ್ಲಿ ಎಲ್ಲ ಇರುವೆಗಳಿಗೂ ಸುದ್ದಿ ಮುಟ್ಟಿಸಿತು.ತನ್ನ ಬಳಗದ ಇರುವೆಗಳನ್ನು ಒಟ್ಟು ಸೇರಿಸಿ ಕರೆದುಕೊಂಡು ಬಂದಿತು.ಎಲ್ಲವೂ ಒಟ್ಟಾಗಿ ಸಕ್ಕರೆಯನ್ನು ತಿನ್ನದೆ ತಮ್ಮ ಮನೆಯತ್ತ ಒಯ್ಯತೊಡಗಿದವು..ಚದುರಿದ್ದ ಸಾಲು ಪುನಃ ರೂಪಿಸಿ ಎಲ್ಲ ಇರುವೆಗಳೂ ವೇಗವಾಗಿ ತಮ್ಮ ಮನೆಗೆ ಆಹಾರ ಕೊಂಡೊಯ್ದವು.ಇದನ್ನು ಕಂಡ ಲೀಲಾಳ ಮುಖ ಸಣ್ಣದಾಯಿತು.
ಪುಟ್ಟ ಇರುವೆ ಸಕ್ಕರೆಯನ್ನು ಕಂಡು ಅಕ್ಕರೆಯಿಂದ ತನ್ನ ಬಳಗವನ್ನು ಕರೆಯಿತು.ನಾನು ಮಾತ್ರ ರುಚಿಕರ ಚಾಕಲೇಟ್ ಪರಮೇಶ ಮಾಮ ಕೊಟ್ಟಾಗ ಯಾರಿಗೂ ಕೊಡದೆ ತಿಂದೆ.. ಶೀತಲೀಕರಣ ಯಂತ್ರದಲ್ಲಿ ಕಂಡಾಗ ಮಾಲಾಳದು ಎಂದು ತಿಳಿದಿದ್ದರೂ ಯಾರಿಗೂ ಗೊತ್ತಾಗದಂತೆ ಒಬ್ಬಳೇ ಸವಿದೆ..ಪುಟ್ಟ ಇರುವೆಗಳು ನನಗೆ ಪಾಠ ಕಲಿಸಿದವು.. ಆಹಾರವನ್ನು ಹಂಚಿ ತಿನ್ನಬೇಕು ..ಎಲ್ಲರೂ ಕೂಡಿ ಉಣ್ಣಬೇಕು ಎಂದು..
ಮಾಲಾ ಓದುತ್ತಿದ್ದಲ್ಲಿಗೆ ಬಂದ ಲೀಲಾ "ನೀನು ಶೀತಲೀಕರಣ ಯಂತ್ರದಲ್ಲಿ ಇಟ್ಟಿದ್ದ ಚಾಕಲೇಟ್ ನಾನೇ ನಿನಗೆ ಹೇಳದೆ ಸವಿದೆ.. ಕ್ಷಮಿಸಿಬಿಡು ಮಾಲಾ.." ಎಂದಳು.
"ಇರಲಿ ಬಿಡು ಲೀಲಾ..ನನಗೆ ಚಾಕಲೇಟ್ ನಲ್ಲಿ ತುಂಬಾ ಆಸೆಯಿರಲಿಲ್ಲ.ಪರಮೇಶ ಮಾಮನಂತೆ ನಾನೂ ಕೂಡ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಹಂಬಲ.. ಆದ್ದರಿಂದ ಬಂದ ಕೂಡಲೇ ಓದಲು ಕುಳಿತೆ.ಓದಿ ಬರೆದು ಜಾಣೆಯಾಗಿ ಉದ್ಯೋಗ ದೊರೆತರೆ ಮತ್ತೆ ಬೇಕಾದಂತಹ ಚಾಕಲೇಟ್ , ಬಟ್ಟೆಬರೆ, ಪುಸ್ತಕ ಎಲ್ಲವನ್ನೂ ಕೊಳ್ಳಬಹುದು.."
"ಹೂಂ.. "ಎನ್ನುತ್ತಾ
ಲೀಲಾ ಸೀದಾ ಅಮ್ಮನಲ್ಲಿ ಹೋಗಿ ಹೇಳಿದಳು."ಅಮ್ಮಾ ... ನಾನು ಮಾಲಾಳ ಚಾಕಲೇಟ್ ಕೂಡಾ ಗುಳುಂ ಮಾಡಿದೆ.. ತಪ್ಪಾಯ್ತು..ಕ್ಷಮಿಸಮ್ಮಾ.."
"ಆಯ್ತು ಮಗಳೇ..ನಿನ್ನ ತಪ್ಪು ನಿನಗೆ ಅರಿವಾಯ್ತಲ್ಲ... ಪ್ರಾಮಾಣಿಕವಾಗಿ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳುವುದು ದೊಡ್ಡಗುಣ.ಇನ್ನೆಂದೂ ಅಂತಹ ಕೆಲಸ ಮಾಡದೆ ಚೆನ್ನಾಗಿ ಓದಿ ಬರೆದು ಮಾಡಿ ನೀನೂ ಪರಮೇಶ ಮಾಮನಂತೆ ದೊಡ್ಡ ಉದ್ಯೋಗ ಪಡೆಯಬೇಕು.."
"ಹೌದಮ್ಮ..ನಾನೂ ಜಾಣೆಯಾಗಬೇಕು.ಆಡುತ್ತಾ ಕಾಲಕಳೆಯದೆ ಓದಿ ಜಾಣೆಯಾಗುತ್ತೇನೆ.." ಎನ್ನುತ್ತಾ ಓದಲು ತೆರಳಿದಳು.
ತೋಟದಿಂದ ಬಂದ ರಾಮಣ್ಣನಿಗೆ ಸೋಮಕ್ಕ ನಡೆದ ಘಟನೆಯನ್ನು ವಿವರಿಸಿದಳು.ಲೀಲಾ ತನ್ನ ತಪ್ಪನ್ನು ಅರಿತು ತಿದ್ದಿಕೊಂಡದ್ದನ್ನು ಕಂಡ ರಾಮಪ್ಪನಿಗೂ ಸಂತಸವಾಯಿತು..
✍️... ಅನಿತಾ ಜಿ.ಕೆ.ಭಟ್.
16-11-2019.
No comments:
Post a Comment