Sunday, 24 November 2019

ಕಪಿಯ ಚೇಷ್ಟೆ




ನಗರದ ನಡುವಿನ ಒಂಟಿಮರದಲಿ
ಕುಳಿತಿಹನೊಬ್ಬ ಕಪಿರಾಯ
ಛಂಗನೆ ನೆಗೆಯುತ ವೇಗದಿ ಸಾಗಲು
 ಹುಡುಕಿದನೊಂದು ಉಪಾಯ...

ಕೆಲಸಕೆ ತೆರಳಿದ ರಂಗೇಗೌಡ
ನೆರಳಲ್ಲಿರಿಸಿದ ಗಾಡಿ
ಸಮಯವ ಸಾಧಿಸಿ ಜಿಗಿಯುತ
ವಾಹನ ಹತ್ತಿದ ನೋಡಿ...

ಕೊರಳನು ಕೊಂಕಿಸಿ ಕನ್ನಡಿಯಲ್ಲಿ
ನೋಡಿದ ತನ್ನಯ ರೂಪ
ತನ್ನಯ ಗೆಳೆಯನು ಇಲ್ಲಿಯೇ
ಇರುವ ಎಂದುಕೊಂಡನು ಪಾಪ....

ಗಾಡಿಯ ಏರಿ ಮೆಲ್ಲನೆ ಚಾಲನೆ
ಮಾಡಲು ನೋಡಿದನು
ಠೀವಿಯಲಿ ಸೀಟನ್ನೇರಿ ತುಳಿಯಲು
ಕಾಲು ಚೂರೇ ಚೂರು ಇನ್ನು...

ಎಟುಕೋದಿಲ್ಲ ಕೆಳಗಿಳಿದು
ಒದೆಯುವೆ ಎಂದುಕೊಂಡಂತೆ
ಮೆಟ್ಟೀಮೆಟ್ಟೀ ಸೋತುಹೋದ
ಕಾಲುನೋವು  ಬಂದೀತಂತೆ....

ರಂಗೇಗೌಡನು ಬಂದೇಬಿಟ್ಟನು
ಬೇಗನೆ ಗಾಡಿಯ ಬಳಿಗೆ
ಕಪಿಯ ಕುಚೇಷ್ಟೆ ಕೀಯನು ಕಸಿದು
ಪರಾರಿಯಾಯ್ತು ಗೆಲ್ಲಿಗೆ...

ಒಲ್ಲದು ಕಪಿಯು ಕೀಯನು
ಕೊಡಲು ಗೌಡಗೆ   ಮಾತ್ರ
ರಂಗೇಗೌಡನು ಮಾಡಿದ ಸಂತೇಲಿ
ಬಾಳೇಹಣ್ಣನು ಕೊಳ್ಳುವ ತಂತ್ರ....

ಹಣ್ಣನು ಕಂಡ ಹಸಿದ ಕೋತಿ
ಸರಸರ ಬಂತು ಹಿಗ್ಗಿ
ಕೀಯನು ನೀಡಿ ಹಣ್ಣನುತಿಂದು
 ಉದರವು ತುಂಬಿ ತೇಗಿ....

ಕುಳಿತಿತು ಮರದಲಿ ಹೋಗಿ
ನಲಿಯಿತು ಹಸಿವೆಯು ನೀಗಿ...


✍️... ಅನಿತಾ ಜಿ.ಕೆ.ಭಟ್
25-11-2019

No comments:

Post a Comment