ಪನ್ನೀರ ಗುಲಾಬಿಗೆ
ಹೊನ್ನೀರ ಸ್ನಾನ
ಕಂಡಿತ್ತು ಮುತ್ತು
ನಾ ಸೆರೆಹಿಡಿದ ಹೊತ್ತು...
🌹🌹
ಸುರಿಯುತಿರುವ ಮಳೆಗೆ
ನಾನೀಗ ಪೂರ್ತಿ ಒದ್ದೆ
ನನಗೆ ಖುಷಿಯು ಒಳಗೊಳಗೆ
ಕೊಯ್ಯಲು ಬಂದವರು ಚಂಡಿಮುದ್ದೆ...
ಗಿಡವು ಹಸಿರಾಗಿ ಮೈತುಂಬಿದೆ
ಎಳೆಬದನೆಕಾಯಿ ಹೊಳೆಯುತಿದೆ
ನಾಲಿಗೆಯು ಏಕೋ ಜೊಲ್ಲು ಸುರಿಸುತಿದೆ
ಪೋಡಿ,ಎಣ್ಣೆಗಾಯಿ ನೆನಪಾಗಿಬಿಟ್ಟಿದೆ...
🌹🌹
ಭಾರ ತಾಳಲಾಗದ ಹೂವೇ
ನಾನು ನಿನಗೆ ಹೆಗಲಾಗುವೇ...
ಕ್ಷಣಿಕದ ಚೆಲುವಿನ ಬಾಳಲಿ
ನನ್ನ ಅಳಿಲಸೇವೆ ಇರಲಿ...
ನಿನ್ನ ಚೆಲುವಿಕೆಗೆ ಸೋಲುವ ಜನ
ಆಗ ನೋಡುವರು ಒಮ್ಮೆ ನನ್ನ
ಹಸಿರಾಗಿಹ ನನಗೂ ಬಂತು ಬೆಲೆ
ಕ್ಷಣಿಕವಾಗಿ ಜನಮನಗೆದ್ದ ಎಲೆ...
🌹🌹
ಬೆನ್ನಿಗೆ ಬೆನ್ನು ಹಾಕಿ ನಿಂತವರೇ
ಅಹಂ ಏಕೆ ನಿಮ್ಮಿಬ್ಬರೊಳಗೆ ....
ಇಂದು ಅರಳುವ ಸಮಯ
ದಿನಗಳುರುಳುತ ಅಳಿವು ನಿಶ್ಚಯ....
ಹರಡಿದ ಪರಿಮಳದ ನೆನಪು ಶಾಶ್ವತ
ಅಂದವು ಕುಂದುವುದು ವಿಧಿಲಿಖಿತ....
🌹🌹
ನಾನೇ ಸುಂದರಿಯೆಂದು ಜಂಭದಲಿ ಬೀಗುವಳು ಕಿಸ್ಕಾರ...
ಪ್ರೀತಿಯಲಿ ಭಕ್ತಿಯಲಿ ದೇವಿಗೆ ಆಗುವಳು ಹಾರ...
ಹೂವಿನ ಅಬ್ಬರಕೆ ಗೆಲ್ಲಬಾಗುತಲಿ ತಾಳುವಳು ಭಾರ...
✍️ ಅನಿತಾ ಜಿ.ಕೆ.ಭಟ್.
25-11-2019.
No comments:
Post a Comment