ಜೀವನ ಮೈತ್ರಿ ಭಾಗ ೮೦
ತಡರಾತ್ರಿ ಸಂಜನಾಗೆ ಬಾತ್ ರೂಮ್ ಗೆ ಹೋಗಬೇಕೆನಿಸಿತು.ಇಲ್ಲಿ ಬಾಗಿಲು ತೆಗೆದು ಹೊರ ಹೋಗಬೇಕಾಗಿತ್ತು.ಒಬ್ಬಳೇ ಹೋಗಲು ಭಯವಾಗಿ ಅತ್ತೆಯನ್ನು ಕರೆದಳು.ದಿನವಿಡೀ ಓಡಾಡಿ ಆಯಾಸಗೊಂಡಿದ್ದ ಮಮತಾ ಗಾಢನಿದ್ರೆಗೆ ಜಾರಿದ್ದರು.ಅವರಿಗೆ ಎಚ್ಚರವಾಗಲಿಲ್ಲ.ಅವಳಿಗೀಗ ಏನು ಮಾಡಲಿ ಎಂಬ ಸಂದಿಗ್ಧತೆ.ಟಾರ್ಚ್ ಹಿಡಿದು ಹೋಗಲೇ..ಬೇಡ ..ಹಾವೇನಾದರೂ ಇದ್ದರೆ..
ಭೂತಪ್ರೇತ ಇದ್ದರೆ.ರಾತ್ರಿಹೊತ್ತು ಅಂತಹವುಗಳೆಲ್ಲ ಸಂಚರಿಸುತ್ತವೆಂದು ಅಜ್ಜಿ ಹೇಳಿದ್ದ ನೆನಪು.ಯಾಕಾದರೂ ಇಲ್ಲಿ ಉಳಕೊಂಡೆನೋ ಅನಿಸಿತು.ಅಷ್ಟರಲ್ಲಿ ಯಾರದೋ ಕಾಲ್ಗೆಜ್ಜೆ ಸಪ್ಪಳ ಕೇಳಿಸಿ ಇನ್ನಷ್ಟು ಬೆಚ್ಚಿಬಿದ್ದಳು.ಚಾಪೆಯ ಮೇಲೆ ಮುದುಡಿ ಹೊದಿಕೆಯೆಳೆದುಕೊಂಡಳು.
ಯಾರೋ ಮಾತನಾಡಿದಂತೆ ಅತ್ತಿತ್ತ ಸಂಚರಿಸಿದಂತೆ ಕಂಡಾಗ ಮೆಲ್ಲನೆ ಹೊದಿಕೆ ಸರಿಸಿ ನೋಡಿದಳು.ಅಕ್ಕಭಾವ ಹೊರಗಡೆ ಹೋಗಿದ್ದರು.ಸ್ವಲ್ಪ ಧೈರ್ಯ ಬಂತು ಅವಳಿಗೆ.ಹೇಗೂ ಅಕ್ಕ ಭಾವ ಇದ್ದಾರೆ ಈಗ ಹೋಗುವುದಕ್ಕೆ ಭಯವಿಲ್ಲ ಎಂದು ಎದ್ದು ಹೊರಗೆ ಹೋದಳು.ಇದ್ದದ್ದು ಒಂದೇ ಬಾತ್ ರೂಮ್.
ಬಾತ್ ರೂಮ್ ಹೊರಗೆ ಕಾದಳು.ಅವಳಿಗೂ ಆಶ್ಚರ್ಯ.ಅಕ್ಕ ಭಾವ ಇಬ್ಬರು ಬಂದಿದ್ದರು. ಈಗ ಒಬ್ಬರೂ ಕಾಣ್ತಾಯಿಲ್ವೇ..ಹಾಂ ನನ್ನಕಣ್ಣು ಸುಳ್ಳು ಹೇಳ್ತಾಯಿದೆಯೇ.. ಎಂದು ಯೋಚಿಸುತ್ತಿದ್ದಾಗಲೇ ಬಾತ್ರೂಂ ಬಾಗಿಲು ಗರ್ರ ಎಂದು ತೆರೆಯಿತು.ಅಕ್ಕ ಭಾವ ಇಬ್ಬರೂ ಹೊರಗೆ ಬಂದರು.ಅವಳಿಗೆ ನಗುಬಂದರೂ ತೋರಿಸಿಕೊಳ್ಳುವಂತಿರಲಿಲ್ಲ...!! ಮೈತ್ರಿಗೆ ಈ ಹೊತ್ತಿನಲ್ಲಿ ತಂಗಿಯೆದುರು ಹೀಗೆ ಕಾಣಿಸಿಕೊಂಡಾಗ ಬಹಳ ಸಂಕೋಚವೆನಿಸಿ..ತಂಗಿಯ ಮುಖವೇ ನೋಡದೆ ಸೀದಾ ಪತಿಯ ಕೈಹಿಡಿದು ಹೊರಟೇಬಿಟ್ಟಳು.ಸಂಜನಾಗೆ ಬಹಳ ನೋವಾಯಿತು.ಜೊತೆಗೆ ಆಶ್ಚರ್ಯ ಕೂಡ..ಅಕ್ಕ ರಾತ್ರಿ ಮಲಗುವ ವೇಳೆ ಚೂಡಿದಾರ್ ಧರಿಸಿದ್ದನ್ನು ಕಂಡಿದ್ದಳು.ಈಗ ನೋಡಿದರೆ ಅಕ್ಕ ನೈಟಿ ಹಾಕ್ಕೊಂಡಿದ್ದಾಳೆ.. ರಾತ್ರಿ ಡ್ರೆಸ್ ಬದಲಾಯಿಸಿದ್ದೇಕೆ..ಅದೂ ನಾನು ಇದುವರೆಗೂ ಅಕ್ಕ ನೈಟಿ ಹಾಕಿದ್ದು ಕಂಡೇಯಿಲ್ಲ.. ಇದ್ದಕ್ಕಿದ್ದಂತೆ ಹೀಗೆ ಕಾಣಿಸಿದ್ದು ಸತ್ಯನಾ.. ಯಾಕೆ ನನ್ನಲ್ಲಿ ಮಾತನಾಡಲೇಯಿಲ್ಲ..ತನ್ನ ಕೆಲಸ ಮುಗಿಸಿಕೊಂಡು ಬಂದು ನಿದಿರೆಗೆ ಜಾರಬೇಕೆಂದರೂ ಮನಸಿನಲ್ಲಿ ಇದುವೇ ಕೊರೆಯುತ್ತಿತ್ತು..
ಅತ್ತ ಮೈತ್ರಿ ತಾನು ಅನಿರೀಕ್ಷಿತವಾಗಿ ತಂಗಿಯನ್ನು ಕಂಡು ತಬ್ಬಿಬ್ಬಾದ್ದನ್ನು ನೆನಪಿಸಿಕೊಂಡು ಹೊರಳಾಡುತ್ತಿದ್ದಳು..ತಂಗಿ ಏನೆಂದುಕೊಂಡಳೋ ಏನೋ..
"ಏಕೆ ಮುದ್ಗೊಂಬೆ ನಿದ್ದೆಯೇ ಬರ್ತಿಲ್ವಾ.."
"ರೀ.. ನಂಗೆ ತಂಗಿಯೆದುರು ನಾಚಿಕೆಯಾಗಿತ್ತು ಗೊತ್ತಾ.. ಅವಳೇನು ಅಂದುಕೊಳ್ತಾಳೋ ಏನೋ.. ನಾನು ನೀವು ಒಟ್ಟಿಗೆ ಬಾತ್ ರೂಮ್ ಗೆ ಹೋದ್ದು, ನಾನು ನೈಟಿಯಲ್ಲಿದ್ದಿದ್ದು .."
"ಆಕೆಯೂ ಅರ್ಥ ಮಾಡಿಕೊಳ್ಳುತ್ತಾಳೆ ಬಿಡು.." ಎಂದು ಸಮಾಧಾನಿಸಿದ ... ಪತಿಯ ಮುದ್ದಿನಲ್ಲಿ ಮನದ ದುಗುಡವೆಲ್ಲ ದೂರವಾಗಿ ಹಾಯಾಗಿ ನಿದ್ರಿಸಿದಳು.
ಬೆಳಿಗ್ಗೆ ಸಂಜನಾ ಏಳುವ ಹೊತ್ತಿಗೆ ಅಕ್ಕ ಎದ್ದಿದ್ದಳು.ರಾತ್ರಿ ಮಲಗುವಾಗ ತೊಟ್ಟ ಚೂಡಿದಾರ್ ಅನ್ನೇ ತೊಟ್ಟಿದ್ದುದು ಮತ್ತೂ ಸಂಶಯಕ್ಕೆ ಕಾರಣವಾಯಿತು.
'ಅಲ್ಲ ನಾನು ನಿನ್ನೆ ರಾತ್ರಿ ನೋಡಿದ್ದು ಸುಳ್ಳಾ..?'ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು.
ಬೆಳಗ್ಗೆ ಕಿಶನ್ ಎದ್ದು ಬಂದಾಗ ಹತ್ತಿರಬಂದ ಮೈತ್ರಿ "ರೀ .. ಮುಟ್ಟು" ಎಂದಳು. ಈಗ ಕಿಶನ್ ಮುಟ್ಟದೇ ದೂರ ನಿಂತ.ಸ್ವಲ್ಪ ಆಲೋಚಿಸಿ
"ಇಲ್ಲ ...ಇಲ್ಲಿ ಮುಟ್ಟಬಹುದು.. " ಎಂದನು ಕಿಶನ್..
"ಯಾವುದಕ್ಕೂ ಅತ್ತೆಯನ್ನೊಮ್ಮೆ ಕೇಳಿ ಬರುತ್ತೇನೆ" ಎಂದಳು.
"ಬೇಡ ಮುದ್ಗೊಂಬೆ.. ಪ್ಲೀಸ್... ಮತ್ತೆ ನಿನ್ನನ್ನು ಮೂರು ದಿನ ಬಿಟ್ಟಿರಲು ನನ್ನಿಂದ ಸಾಧ್ಯವಿಲ್ಲ...ಹೇಳ್ಬೇಡ ಕಣೇ.."
"ಅಮ್ಮನಲ್ಲಿ ಹೇಳಿದ್ದಕ್ಕೆ ಅಮ್ಮ ಅತ್ತೆ ಹೇಳಿದಂತೆ ಮಾಡು ಅಂದರು.."
"ಛೇ..!! ನೀನಾಗಲೇ ಅತ್ತೆಗೂ ಹೇಳಿಬಿಟ್ಯಾ..?"
ಕಿಶನ್ ಮುಖ ಚಿಕ್ಕದು ಮಾಡಿ ಕುಳಿತ..ಅಮ್ಮ 'ಅದೆಲ್ಲ ಶಾಸ್ತ್ರ ಇಲ್ಲಿ ಇಲ್ಲ ' ಅಂದರೆ ಸಾಕು ಎಂದು ಮನಸಾರೆ ದೇವರಿಗೆ ಕೈಮುಗಿದ..
ಅಮ್ಮನಲ್ಲಿ ಕೇಳಲು ಹೋದವಳು ಬರುವ ಸೂಚನೆಯಿಲ್ಲದೆ ಕಾದು ಸುಸ್ತಾದ.ಹುಡುಕಿಕೊಂಡು ಒಳಗೆ ಹೊರಟವನಿಗೆ ಅಮ್ಮ ಆಕೆಗೆಂದು ಒಳಗಿನ ಕೋಣೆಯನ್ನು ನೀಡಲು ಅಲ್ಲಿದ್ದ ವಸ್ತುಗಳನ್ನು ಒಂದೊಂದೇ ಹೊರಗಿಡುತ್ತಿದ್ದರು.ಮನದಲ್ಲಿ 'ಯಾಕೆ ಇದೆಲ್ಲ... ಅವಳು ನನ್ನ ಜೊತೆ ಇದ್ದರೇನು ಇವರಿಗೆಲ್ಲ..'ಅನಿಸಿದ್ದರೂ ತೋರ್ಪಡಿಸದೇ ತಾನೂ ಸಹಕರಿಸಿದ.
"ಮಗ.. ಮೈತ್ರಿ ಮೊದಲ ಬಾರಿಗೆ ನಮ್ಮ ಮನೆಯಲ್ಲಿ ಮುಟ್ಟಾಗಿದ್ದಾಳೆ.ದಿಂಡಿನ ಹೋಮ ಮಾಡುವುದಿದೆ.ಆದ್ದರಿಂದ ಈ ಬಾರಿ ಶಾಸ್ತ್ರದಂತೆ ಮೂರು ದಿನ ಇಲ್ಲಿರಲಿ.ಮುಂದೆ ಆಚರಿಸದಿದ್ದರೂ ಅಡ್ಡಿಯಿಲ್ಲ.."ಎಂದಾಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು ಕಿಶನ್ ಗೆ."ಹೂಂ .."ಎಂದು ಸುಮ್ಮನಾದ.
ಮೈತ್ರಿಗೆ ಮೂರುದಿನದ ಕ್ವಾರೆಂಟೈನ್ ಗೆ ರೂಂ ಸಿದ್ಧವಾಯಿತು.ಕಿಶನ್ ನ ಹೃದಯ ವಿಲವಿಲನೆ ಒದ್ದಾಡುತ್ತಿತ್ತು.ಸಂಜನಾ ಈಗ ಅಕ್ಕನಿಗೆ ಸಪ್ಲಯರ್..!! ಮೊದಲು ಹೊಟ್ಟೆನೋವಿಗೆ ಜೀರಿಗೆ ಕಷಾಯದಿಂದ ಆರಂಭವಾಯಿತು ಸಂಜನಾಳ ಡ್ಯೂಟಿ.ಆಮೇಲೆ ತಿಂಡಿ ಕಾಫಿ.. ಎಲ್ಲವನ್ನೂ ಅಲ್ಲಿಗೊಯ್ದು ಕೊಟ್ಟು ಬರುತ್ತಿದ್ದಳು.ಮೈತ್ರಿ ಸೇವಿಸಿ ಬಟ್ಟಲು ಲೋಟ ತೊಳೆದಿಟ್ಟು ಆ ರೂಮಲ್ಲೇ ಕವಚಿ ಹಾಕಿ..ತಿಂದ ಜಾಗವನ್ನು ಸೆಗಣಿ ನೀರಿನಿಂದ ಕೈಯಲ್ಲಿ ಸ್ವಚ್ಛಗೊಳಿಸಬೇಕಾಗಿತ್ತು.ಇದನ್ನೆಲ್ಲ ನೋಡಿಯೇ ಗೊತ್ತಿಲ್ಲದ ಸಂಜನಾಳಿಗೆ ವಿಚಿತ್ರವೆನಿಸಿತು. ಇಂತಹ ಪದ್ಧತಿ ನಮ್ಮ ಮನೆ ಶಾಸ್ತ್ರಿ ನಿವಾಸದಲ್ಲಿ ಇದೆ ಎಂದು ಯಾವತ್ತೋ ಅಮ್ಮ ಹೇಳಿದ್ದನ್ನು ನೆನಪು ಮಾಡಿಕೊಂಡಳು.ಅದಕ್ಕಾಗಿ ಊರಿಗೆ ಬರುವಾಗ ಆ ಸಮಯವನ್ನು ತಪ್ಪಿಸಿಯೇ ಬರುತ್ತಿದ್ದುದು ಇಂತಹ ಮುಜುಗರವನ್ನು ತಪ್ಪಿಸಲೆಂದು ತಿಳಿಯಿತು.
ತಿಂಡಿ ತಿಂದ ಬಳಿಕ ಅಕ್ಕ ರೂಮಿನ ಆ ಮೂಲೆಯಲ್ಲಿ ಮುದುಡಿಕೊಂಡು ಕುಳಿತರೆ ಭಾವ ಬಾಗಿಲ ದಾರಂದಕ್ಕೆ ಒರಗಿಕೊಂಡು ಅದೇನೋ ಮಾತನಾಡುತ್ತಾ ನಗುತ್ತಾ ಇದ್ದರೆ ಸಂಜನಾ ಪರಕೀಯಳಾಗಿಬಿಡುತ್ತಿದ್ದಳು.ಅತ್ತ ಸುಳಿಯಲೂ ಮನಸ್ಸಾಗದೆ ಏನು ಮಾಡಲಿ ಹೊತ್ತು ಹೋಗದು ಎಂದು ಚಡಪಡಿಸುತ್ತಿದ್ದಳು.ಇದನ್ನು ಕಂಡ ಗಣೇಶ್ ಶರ್ಮ ಅವಳಿಗೆ ಕಥೆ ಕಾದಂಬರಿ ಪುಸ್ತಕಗಳನ್ನು ಕಪಾಟಿನಿಂದ ತೆಗೆದು ಕೊಟ್ಟರು.ಸ್ವಲ್ಪಹೊತ್ತು ಓದಿ ನಂತರ ಅದೂ ಬೆಡವೆನಿಸುತ್ತಿತ್ತು.ಅಕ್ಕನಿಗೆ ಬಾಡಿಗಾರ್ಡ್ ನಂತೆ ಭಾವ ಇದ್ದಾರೆ.ಮತ್ತೆ ನಾನು ಯಾಕಿಲ್ಲಿ ..ಎಂಬ ಪ್ರಶ್ನೆ ಅವಳ ಮನಸಿನಲ್ಲಿ ಮೂಡಿತು.ತನಗೂ ಅಪ್ಪ ,ಅಮ್ಮ ,ತಂಗಿಯನ್ನು ಬಿಟ್ಟು ಐದು ದಿನ ಇಲ್ಲಿರುವುದು ಕಷ್ಟ ಎಂದು ದುಃಖ ಉಮ್ಮಳಿಸಿ ಬಂತು.ಅಮ್ಮನಿಗೆ ಕರೆಮಾಡಿ ಎಲ್ಲವನ್ನೂ ಹೇಳಿದಳು.
ಅಮ್ಮ ಗಾಯತ್ರಿ ಸಮಾಧಾನ ಹೇಳಿದರು."ಒಂದು ದಿನ ಇರು.ಮತ್ತೆ ನೋಡೋಣ ಕರೆದುಕೊಂಡು ಬರುವ ವ್ಯವಸ್ಥೆ ಮಾಡೋಣ" ಎಂದು ಹೇಳಿ ಸಮಾಧಾನಪಡಿಸಿದರು.ಕಿಶನ್ ನ ತಂಗಿಯಂದಿರು ಅಣ್ಣನ ಫಜೀತಿಯನ್ನು ನೋಡಿ ಛೇಡಿಸುತ್ತಿದ್ದರು..
"ಮೂರು ದಿನವಾದ್ರೂ ನಿನ್ನ ಕಾಟವಿಲ್ಲದೆ ಹಾಯಾಗಿರಲಿ "ಅತ್ತಿಗೆ ಎಂದು ಮೇದಿನಿ..
"ನೀನೆಲ್ಲಿಯಾದರೂ ರಾತ್ರಿ ಬಂದು ಅತ್ತಿಗೆಯನ್ನು ಮುಟ್ಟಿದಿಯೋ... ಮತ್ತೆ ನಿನಗೂ ಮೂರು ದಿನ ಕ್ವಾರೆಂಟೈನ್..." ಎಂದು ಚಾಂದಿನಿ..
"ಮೈತ್ರಿಯ ರೂಮಿಗೆ ಭಾವ ನುಗ್ಗದಂತೆ..ಭದ್ರತೆಗೆ ಸಂಜನಾ ಅವರನ್ನು ನಿಯೋಜಿಸಲಾಗಿದೆ."ಎಂದರು ಮೇದಿನಿಯ ಪತಿ..
"ಅಕಸ್ಮಾತ್ ಭಾವ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರೆ ಮತ್ತೆ ಸೆಗಣಿನೀರಿನ ಸ್ನಾನ ಮಾಡಿಯೇ ಒಳಗೆ ಬರಬೇಕು.. ಅಲ್ಲಿವರೆಗೆ ಗೃಹಪ್ರವೇಶ ನಿಷಿದ್ಧ.".ಎಂದ ಚಾಂದಿನಿಯ ಪತಿ..ಇವರೆಲ್ಲರ ಮಾತುಗಳನ್ನು ಕೇಳಿ ಸಂಜನಾಗೆ ಒಮ್ಮೆ ಅಲ್ಲಿಂದ ತನಗೆ ಬಿಡುಗಡೆ ದೊರಕಿದರೆ ಸಾಕು ಎಂದೆನಿಸಿತು.
ಸಂಜೆ ಮೇದಿನಿ ಚಾಂದಿನಿ ಇಬ್ಬರೂ ಅವರವರ ಮನೆಗೆ ತೆರಳಿದರು.ಈಗ ಸ್ವಲ್ಪ ಸಂಜನಾ ಚೇತರಿಸಿದಳು.ರಾತ್ರಿ ಮಲಗುವ ಹೊತ್ತಿಗೆ ಇನ್ನು ಇವತ್ತು ತಾನೆಲ್ಲಿ ಚಾಪೆ ಹಾಸಿ ಮಲಗಬೇಕು ಎಂದು ಯೋಚಿಸುತ್ತಿದ್ದಳು.ಮಮತಾ ಅತ್ತೆ "ಮೈತ್ರಿ ಗೆ ಒಬ್ಬಳಿಗೆ ಬೇಸರವಾಗುವುದಕ್ಕೆ ಅವಳ ರೂಮಿನಲ್ಲೇ ನೀನು ಮಲಗು.ಅವಳು ಆ ಕಡೆ ಮಲಗಲಿ.ನೀನು ಈ ಕಡೆ ಮಲಗು" ಎಂದರು.ಒಪ್ಪಿಕೊಂಡು ಹಾಗೆಯೇ ಮಲಗಿದರು.
ಮಲಗಿ ನಿದ್ರಿಸಲು ಕಣ್ಣು ಮುಚ್ಚಿ ಹೊದಿಕೆಯೆಳೆದುಕೊಂಡಿದ್ದಳು ಸಂಜನಾ.ಆಗಲೇ ಅಕ್ಕನ ಫೋನ್ ಪದೇ ಪದೇ ಮೆಸೇಜ್ ಬಂದ ಸದ್ದು ಮಾಡತೊಡಗಿತು.ಮೆಲ್ಲಗೆ ಹೊದಿಕೆಯೆಡೆಯಿಂದ ಇಣುಕಿದಳು.ಅಕ್ಕ ಚಾಟ್ ಮಾಡುತ್ತಿದ್ದಾಳೆ.. ಅಂದರೆ ಇದು ಭಾವನ ಕೆಲಸವೇ...!!! ಎಷ್ಟು ಹೊತ್ತಾದರೂ ಅವರ ಚಾಟಿಂಗ್ ನಿಲ್ಲುವಂತೆ ಕಾಣಲಿಲ್ಲ..ಸಂಜನಾಗೆ ನಿದ್ರೆಯಾವರಿಸಿತು.. ಬೆಳಿಗ್ಗೆ ಎದ್ದು ನೋಡುವಾಗ ಅಕ್ಕ ಮೊದಲೇ ಎದ್ದಿದ್ದಳು.ಬಾತ್ ರೂಮ್ ಗೆ ಹೋಗಲೆಂದು ಹೊರಟಾಗ ಅಕ್ಕ ಜಗಲಿಯ ಆ ಬದಿ ಭಾವ ಈ ಬದಿ ನಿಂತು ನಗುನಗುತ್ತಾ ಹರಟುತ್ತಿದ್ದರು... ರಾತ್ರಿ ಚಾಟ್ ಮಾಡಿದ್ದು ಸಾಕಾಗಿಲ್ವಾ ಇಬ್ಬರಿಗೂ..!! ಮದುವೆಯಾದ ಮೇಲೆ ಹೀಗೆಲ್ಲ ಆಗೋದುಂಟಾ ..!! ಎಂದು ಹುಬ್ಬೇರಿಸಿದಳು ಸಂಜನಾ... ಅಮ್ಮನಿಗೆ ಕರೆ ಮಾಡಿ "ಇವತ್ತು ನಾನು ಬರುತ್ತೇನೆ " ಎಂದು ಹಠ ಹಿಡಿದಳು.
ಗಾಯತ್ರಿ ಪತಿಯಲ್ಲಿ ನಿನ್ನೆಯೇ ವಿಷಯ ತಿಳಿಸಿದ್ದಳು.ಮಗಳನ್ನು ಕರೆದುಕೊಂಡು ಬರೋಣವೆಂದು."ಮನೆಯವರು ಹೇಗೆ ಹೇಳುತ್ತಾರೋ ಹಾಗೆ" ಎಂದಿದ್ದರು ಶಂಕರರಾಯರು.ಇವತ್ತು ಪುನಃ ಪತಿಯಲ್ಲಿ ಮಾತನಾಡಿ ಪ್ರಯೋಜನವಿಲ್ಲ.ನಾನೇ ಮನೆಯವರಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಎಲ್ಲರೂ ಚಾವಡಿಯಲ್ಲಿರುವಾಗ ಪ್ರಸ್ತಾಪಿಸಿದಳು.
"ಸಂಜನಾಗೆ ಅಲ್ಲಿ ಕಷ್ಟವಾಗುತ್ತಿದೆ.. ಉದಾಸಿನವಾಗುತ್ತಿದೆ.ಪೇಟೆಯಲ್ಲಿ ಬೆಳೆದವಳಿಗೆ ಹಳ್ಳಿಯ ಮನೆಯಲ್ಲಿ ಐದು ದಿನ ಇರುವುದು ಬಹಳ ಕಷ್ಟ.ಅಲ್ಲದೆ ಅವಳು ಬೇಕಾದ ಡ್ರೆಸ್ ಕೂಡಾ ಒಯ್ದಿಲ್ಲ.ಸಂಜನಾಳನ್ನು ಕರೆದುಕೊಂಡು ಬರೋಣ..ಆಗದೇ.."
ಭಾಸ್ಕರ ಶಾಸ್ತ್ರಿಗಳು ಗಂಭೀರವಾಗಿ..
"ಅದು ಹೇಗಾಗುತ್ತದೆ.. ಇನ್ನು ಐದು ದಿನದಲ್ಲಿ ಇಲ್ಲಿ ನವವಧೂವರರಿಗೆ ಸಮ್ಮಾನ ಕಾರ್ಯಕ್ರಮ ಇದೆ.ಕೂತವರು ವಧೂವರರ ಜೊತೇಗೇ ಬರುವುದು ಕ್ರಮ..."
"ಹೌದು.. ಗಾಯತ್ರಿ.. ನಾವು ಹಾಗೆಲ್ಲ ಮಧ್ಯದಲ್ಲಿ ಕರೆದುಕೊಂಡು ಬರಬಾರದು "ಎಂದರು ಅತ್ತೆ.
"ಅಲ್ಲಿ ಅಕ್ಕ ಕೂತಿದ್ರೆ ಆ ಮಾತನ್ನು ಒಪ್ಪಬಹುದಿತ್ತು.ಆದರೆ ಅಕ್ಕನನ್ನು ಮಗಳ ಜೊತೆ ಕುಳಿತುಕೊಳ್ಳಲು ನೀವೆಲ್ಲಿ ಬಿಟ್ರಿ..?ನನ್ನ ಮಗಳು ವಯಸ್ಸಿಗೆ ಬಂದವಳು.ಒಂದು ದಿನವಾದರೆ ಹೇಗೋ ಆಗುತ್ತದೆ ಎಂದು ಒಪ್ಪಿಸಿದ್ದೆ.. ಆದರೆ ಮೈತ್ರಿ ಮುಟ್ಟಾಗಿ ಇನ್ನು ಐದನೇ ದಿನದ ಸ್ನಾನವಾಗದೆ ಬರುವಂತಿಲ್ಲ.. ಅಲ್ಲಿವರೆಗೆ ನನ್ನ ಮಗಳು ಯಾಕಲ್ಲಿ...?ಅಕ್ಕ ಭಾವನ ತುಂಟಾಟ ಹಾವಭಾವ ಗಮನಿಸುವುದಕ್ಕಾ..?"
"ಹೀಗಾಗುತ್ತದೆ ಎಂದು ಗೊತ್ತಿರಲಿಲ್ಲವಲ್ಲಾ.."ಎಂದರು ಭಾವ ಭಾಸ್ಕರ ಶಾಸ್ತ್ರಿಗಳು.
"ಗೊತ್ತಾದ ಮೇಲೂ ಸಮ್ಮನಿರಬೇಕಾ..ನವದಂಪತಿಯ ಜೊತೆಗೆ ತಾಯಿಯನ್ನು ಅಥವಾ ಯಾರಾದರೂ ಹಿರಿಯ ಹೆಂಗಸರನ್ನು ನಿಲ್ಲಿಸಿದರೆ ಅರ್ಥವಿದೆ.ಅದು ಬಿಟ್ಟು ವಯಸ್ಸಿಗೆ ಬಂದ ತಂಗಿಯನ್ನು ಇನ್ನೂ ಐದು ದಿನ ಇರಲು ಹೇಳುವುದು ನನ್ನ ಶಿಸ್ತಿಗೆ ಸರಿಕಾಣುವುದಿಲ್ಲ.."ಎಂದು ಗಾಯತ್ರಿ..
"ಅಲ್ಲಿಯೂ ಮೈತ್ರಿಯ ಅತ್ತೆ ,ಮಾವ ಇರುತ್ತಾರಲ್ಲ ಗಾಯತ್ರಿ.. ಸಂಜನಾ ಒಬ್ಬಳೇ ಅಲ್ಲವಲ್ಲ.. " ಎಂದು ಅತ್ತೆ ಹೇಳಿದಾಗ..
ಗಾಯತ್ರಿ"ಒಳ್ಳೆಯ ಅತ್ತೆ ಮಾವ ಇದ್ದಾರೆ. ಅರ್ಥಮಾಡಿಕೊಳ್ಳುವ ಗಂಡನಿದ್ದಾನೆ. ಅಂದಮೇಲೆ ಸಾಲದೇ..ನಮ್ಮ ಮಗಳನ್ನು ನಾವು ಕರೆದುಕೊಂಡು ಬರುತ್ತೇವೆ.."ಎಂದರು.
"ಹಾಗೆಲ್ಲ ಮಾಡಿದರೆ ಸರಿಯಲ್ಲ.ಎಲ್ಲದಕ್ಕೂ ಒಂದು ಸಂಪ್ರದಾಯದ ಚೌಕಟ್ಟಿದೆ.."ಎಂದರು ಭಾಸ್ಕರ ಶಾಸ್ತ್ರಿಗಳು.
"ಮಾತೆತ್ತಿದರೆ ಸಂಪ್ರದಾಯ ಸಂಪ್ರದಾಯ ಸಂಪ್ರದಾಯ.. ವಯಸ್ಸಿಗೆ ಬಂದ ತಂಗಿಯನ್ನು ಅಕ್ಕಭಾವನ ಚಕ್ಕಂದ ನೋಡಿಕೊಂಡು ಕುಳಿತುಕೊಳ್ಳಲು ಯಾವ ಸಂಪ್ರದಾಯ ಶಾಸ್ತ್ರ ಹೇಳುತ್ತದೆ..ನೀವೇನೇ ಹೇಳಿ.. ನಾನು ಮಗಳನ್ನು ಕರೆದುಕೊಂಡು ಬರುವುದೇ...ನನಗೂ ಸಮಯ ಸಂದರ್ಭಕ್ಕೆ ತಕ್ಕಂತೆ ಶಿಸ್ತು ಅನ್ನುವುದು ಇದೆ.."
ಎಂದು ಮನೆಯವರಿಗೆ ಎದುರುತ್ತರ ನೀಡಿ ರೂಮಿಗೆ ತೆರಳಿದಳು ಗಾಯತ್ರಿ...
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
21-05-2020.