Tuesday, 19 May 2020

ಜೀವನ ಮೈತ್ರಿ ಭಾಗ ೭೯(79)



ಜೀವನ ಮೈತ್ರಿ ಭಾಗ ೭೯



       ಶಂಕರ ಶಾ‌ಸ್ತ್ರಿಗಳು ಮತ್ತು ಗಾಯತ್ರಿ ಹಣದ ಚೆಕ್ ಅನ್ನು ನೀಡಿದರು.ಸಂಜನಾ ಅಕ್ಕನಿಗೆ ಚಿನ್ನಾಭರಣಗಳನ್ನು ಇಡುವ ಸುಂದರ ಖಜಾನಾವನ್ನು ಉಡುಗೊರೆಯಾಗಿ ನೀಡಿದಳು.ವಂದನಾ ಅಕ್ಕನಿಗೆ ಪುಟ್ಟದೊಂದು ಪೆಂಡೆಂಟ್ ನೀಡಿದಳು.ಸೋದರತ್ತೆಯರಾದ ಗೀತಾ, ಸೀತಾ ತಮ್ಮ ಪತಿ ಮಕ್ಕಳೊಂದಿಗೆ ಮಂಟಪಕ್ಕೆ ತೆರಳಿ ಸೀರೆ, ಶರ್ಟ್ ಪೀಸ್ ,ಬಣ್ಣದ ಕಾಗದದಲ್ಲಿ ಸುತ್ತಿದ ಉಡುಗೊರೆಗಳನ್ನು ಕೊಟ್ಟರು.ಎಲ್ಲರೂ ಕೊಡುವುದನ್ನೇ ಮೂಲೆಯಲ್ಲಿ ಕುಳಿತು ಕಣ್ತುಂಬಾ ನೋಡಿದ ಸಾವಿತ್ರಿ ತನ್ನ ಗಂಡ ಉಡುಗೊರೆಗೆಂದು ಕೊಟ್ಟಿದ್ದ ನೂರು ರೂಪಾಯಿಗಳನ್ನು ಮೈತ್ರಿಗೆ ನೀಡಿ ಶುಭವಾಗಲಿ ಎಂದು ಹರಸಿದಳು.ಎಲ್ಲರಂತೆ ಬಣ್ಣಬಣ್ಣದ ಬೆಲೆಬಾಳುವ ಉಡುಗೊರೆಗಳನ್ನು ಕೊಡುವ ಮನಸ್ಸಿದ್ದರೂ ತನ್ನ ಗಂಡ ಸಮ್ಮತಿಸಲಾರ ಎಂದು ಗೊತ್ತಿದ್ದು ಅವಳ ಮನವು ಮೂಕವಾಗಿ ರೋದಿಸುತ್ತಿತ್ತು.ಗಂಡನ ಜೊತೆಗೆ ಹೋಗಿ ಉಡುಗೊರೆ ಮಾಡುವ ಇವರಷ್ಟು ಭಾಗ್ಯವಂತೆ ನಾನಲ್ಲವೆಂದು ಕೊರಗುತ್ತಿದ್ದಳು ..ಆದರೆ ಪ್ರೀತಿಯಿಂದ ನೂರು ರುಪಾಯಿ ಕೊಟ್ಟರೂ ಅತ್ತೆಯ ಉಡುಗೊರೆಯನ್ನು ಗೌರವದಿಂದಲೇ ಸ್ವೀಕರಿಸಿದಳು ಮೈತ್ರಿ.ಶಾಸ್ತ್ರಿ ಕುಟುಂಬದವರೂ ಆಕೆಯ ಉಡುಗೊರೆಯನ್ನು ಅಸಡ್ಡೆಮಾಡಲಿಲ್ಲ.ಅಷ್ಟರಲ್ಲಿ ಅನಿರೀಕ್ಷಿತವಾಗಿ ಬೆಲೆಬಾಳುವ ಆಭರಣ ತೊಟ್ಟು ಝರಿಸೀರೆಯುಟ್ಟು ಕೈಯಲ್ಲಿ ಝಗಮಗಿಸುವ ಪ್ಯಾಕ್ ಮಾಡಿದ ಉಡುಗೊರೆಯನ್ನು ಮಂಟಪಕ್ಕೆ ಆಗಮಿಸಿದಳು ಶಶಿ.ಎಲ್ಲರಿಗೂ ಆಶ್ಚರ್ಯ..!! ದೊಡ್ಡದಾದ ಉಡುಗೊರೆಯ ಕಟ್ಟನ್ನು ಮೈತ್ರಿಯ ಕೈಗಿತ್ತು ಮಂತ್ರಾಕ್ಷತೆ ಹಾಕಿ ಮಂಟಪದ ಪಕ್ಕದಲ್ಲಿ ನಿಂತಳು.ಅವಳ ಗತ್ತಿಗೆ ಯಾರೂ ಸೊಪ್ಪು ಹಾಕಲಿಲ್ಲ.


      ಉಡುಗೊರೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಕನ್ಯಾ ಸಮರ್ಪಣೆ ಕಾರ್ಯಕ್ರಮ ನೆರವೇರಿತು.ಮಗಳನ್ನು ಪತಿಯ ಮನೆಯವರಿಗೊಪ್ಪಿಸುವ ಭಾವಪೂರ್ಣ ಸನ್ನಿವೇಶ. ಪುರೋಹಿತರ ಮಂತ್ರಘೋಷವೂ ಸ್ಪಷ್ಟವಾಗಿತ್ತು.ಜೊತೆಗೆ ವಿವರಣೆಯನ್ನು ನೀಡುವ ಶೈಲಿಯೂ ನೆರೆದವರನ್ನು ಆರ್ದ್ರರನ್ನಾಗಿ ಮಾಡಿತು.ಭಾಸ್ಕರ ಶಾಸ್ತ್ರಿಗಳ ಕಣ್ಣಿನಿಂದ ನೀರು ಜಿನುಗುತ್ತಿತ್ತು. ಮಂಗಳಮ್ಮನ ಮುಖವಂತೂ ನೋಡುವಂತೆ ಇರಲಿಲ್ಲ. ಅಜ್ಜ ಕನ್ನಡಕದ ಅಂಚಿನಿಂದ ಗುಟ್ಟನ್ನು ಬಿಟ್ಟುಕೊಡಲಿಲ್ಲ. ಅಜ್ಜಿಯ ಮುಖವೂ  ಪೇಲವವಾಗಿತ್ತು. ಮಹೇಶ ತಾನು ಅಳಬಾರದು ಎಂದು ಆ ಹೊತ್ತಿಗೆ ಅಲ್ಲಿಂದ ಎದ್ದು ಹೊರ ನಡೆದಿದ್ದ. ಅವನ ವೇದನೆ ಏನೆಂದು ಅವನಿಗೇ ಗೊತ್ತು ...ಸದಾ ಅಕ್ಕನಿಗೆ ಕೀಟಲೆ ಮಾಡುತ್ತಿದ್ದರೂ.. ಅಕ್ಕನೆಂದರೆ ಬಹಳ ಪ್ರೀತಿ ಅವನಿಗೆ...ಅಕ್ಕನ ಎದೆಬಡಿತವನ್ನೂ ಮನದಮಿಡಿತವನ್ನೂ ಬಹಳ ಚೆನ್ನಾಗಿ ಅರಿತವನು ಅವನು...ಅಕ್ಕ ಪ್ರೀತಿಯಲ್ಲಿ ಸಿಲುಕಿದ್ದನ್ನು ಮೊದಲು ಖಚಿತಪಡಿಸಿದವನು,ಅಕ್ಕನ ಪ್ರೀತಿಯನ್ನು  ಒಂದಾಗಿಸಲು ಶ್ರಮಿಸಿದವನು ಅವನು..ಇನ್ನು ಅಕ್ಕನ ಜೊತೆ ಕೀಟಲೆ ಮಾಡಲು ಸಾಧ್ಯವಿಲ್ಲ ಎಂಬ ನೋವು ಕಣ್ಣೀರಾಗಿ ಯಾರಿಗೂ ತಿಳಿಯದಂತೆ ಹರಿದುಹೋಯಿತು.

        ಇದನ್ನೆಲ್ಲ ನೋಡಿ ತನಗೂ ಕಣ್ಣು ತುಂಬಿ ಬರುತ್ತದೆ ಎಂದರಿತಾಗ ಪತಿಯ ಮುಖವನ್ನು ನೋಡಿದಳು ಮೈತ್ರಿ. ಅವನ ತುಂಟ ಕಣ್ಣುಗಳನ್ನು ನೋಡಿದ ಕೂಡಲೇ ಏನೋ ಒಂದು ಉತ್ಸಾಹ , ಭರವಸೆ ಅವಳ ಮುಖದಲ್ಲಿ ಮೂಡಿತು.. ಕಣ್ಣಲ್ಲಿ ಹೊಳಪು ಹೆಚ್ಚಿತು.. ಅದು ಅಗಾಧವಾದ ಭರವಸೆಯ ಬೆಳಕು. ಹೊಸ ಬದುಕಿನ ನವಜ್ಯೋತಿ.. 'ನಿನ್ನನ್ನು ನನ್ನುಸಿರಿನಷ್ಟೇ ಪ್ರೀತಿಸುತ್ತೇನೆ 'ಎಂದ ಪತಿಯ ಮೇಲಿನ ವಿಶ್ವಾಸ.


    ನಂತರ ಊಟಕ್ಕೆ ಸಿದ್ಧತೆ ನಡೆಯಿತು.ಎಲ್ಲವೂ ಬಹಳ ಅಚ್ಚುಕಟ್ಟಾಗಿ ಏರ್ಪಾಡಾಗಿತ್ತು. ನೆರೆಹೊರೆಯ ಬಂಧುಗಳ ಸಹಕಾರ ಗಣೇಶ ಶರ್ಮರಿಗೆ ಮೆಚ್ಚುಗೆಯಾಯಿತು.ಬಫೆಗೆ ಬಡಿಸಲು ಕಿಶನ್ ನ ಗೆಳೆಯರ ಗುಂಪೂ ಕೈಜೋಡಿಸಿತು.ವಧೂವರರನ್ನು ಪಂಕ್ತಿಯಲ್ಲಿ ಊಟಕ್ಕೆ ಕುಳ್ಳಿರಿಸಲಾಯಿತು.ಇಬ್ಬರೂ ನಗುನಗುತ್ತಾ ಹರಟುತ್ತಿದ್ದರು.ಕಾಟು ಮಾವಿನ ಹಣ್ಣಿನ ಸಾಸಿವೆ ಬಡಿಸುತ್ತಾ ಬಂದಾಗ ಕಿಶನ್ ಗೆ ಎರಡು ಗೊರಟು ಬಿದ್ದಿತು.ಮೈತ್ರಿಗೆ ಒಂದು ಬಡಿಸಿದರು.ಯಾರೋ ಅಂದರು

 "ಮದುಮಗನಿಗೆ ಚೀಪಲು ಸರಿಯಾಗಿ ಅಭ್ಯಾಸವಾಗಲಿ ಎಂದು ಎರಡು ಬಡಿಸಿದ್ದು"ಎಂದು.ಇನ್ನೊಬ್ಬರು

" ಎಷ್ಟು ಬೇಗ ರಸ ಹೀರ್ತಾನೆ ನೋಡೋಣ"ಎಂದರು.ಆದ್ರೆ ಮದುಮಗ ಕಿಶನ್ ಮಾತ್ರ ಇವರ ಮಾತಿನಿಂದ ಸಂಕೋಚಗೊಂಡಿದ್ದ. ತಮಾಷೆಯಿಂದಾಗಿ ಗೊರಟು ಚೀಪದೇ ಬದಿಯಲ್ಲಿಟ್ಟುಬಿಟ್ಟ.

       ಪಾಯಸ ಬಂದಾಗ ಗೊತ್ತಾಗದಿದ್ದ ಕಿಶನ್ ಗೆ ಎರಡು ಸೌಟು ಪಾಯಸ ಬಡಿಸಿಯೇ ಬಿಟ್ಟರು ನೆರೆಮನೆಯ ಕುಮಾರಣ್ಣ.ಮೈತ್ರಿ ತನಗೆ ಬೇಡವೆಂದು ಕೈ ಅಡ್ಡ ಹಿಡಿದರೂ ಕೇಳದೆ  .."ಸ್ತ್ರೀ ಸಮಾನತೆಗೆ ಸರಿಬರುವುದಿಲ್ಲ ..ಪತಿಯಷ್ಟೇ ಪತ್ನಿಯೂ ತಿನ್ನಬೇಕು" ಎಂದು ಬಡಿಸಿಯೇ ಮುಂದೆ ಸಾಗಿದರು.ಹೋಳಿಗೆ ಬರುವಾಗ ಇಬ್ಬರೂ ಮೊದಲೇ ಎಚ್ಚರಿಕೆಯಿಂದಿದ್ದರು.ನಮಗೆ ಬೇಡವೆಂದರು.ನಿನ್ನೆ ಸಿಹಿ ತಿಂದೇ ಸಾಕಾಗಿತ್ತು.ಕೇಳದ ಈಶ್ವರ ಭಾವ ಇಬ್ಬರಿಗೂ ಒಂದೊಂದು ಚೆನ್ನಾಗಿ ಪುಲ್ಲಿ ಪುಲ್ಲಿ ಬಿದ್ದ ಕಾಯಿ ಹೋಳಿಗೆ ಬಡಿಸಿದರು. ಹೋಳಿಗೆ ಬಿಟ್ಟೆದ್ದರೆ ಶಾಸ್ತ್ರಿ ಮಾಷ್ಟ್ರ ಬಳಿ ಹೇಳಿ ಪನಿಶ್ಮೆಂಟ್ ಕೊಡಿಸುವುದಾಗಿ ಈಶ್ವರ ಭಾವ ಹೇಳಿದಾಗ ನಗುವಿನ ಅಲೆಯೇ ಎದ್ದಿತು.ಶಾಸ್ತ್ರಿಗಳು  ಅಲ್ಲಿ ಹತ್ತಿರವಿರಲಿಲ್ಲ.ಹಾಗಾಗಿಯೇ ಈಶ್ವರ ಭಾವನಿಗೆ ಇಷ್ಟು ಧೈರ್ಯ ಬಂದದ್ದು ಅಂತ ಇನ್ನೊಬ್ಬರು ಹೇಳಿ ನಗೆಗಡಲಲ್ಲಿ ತೇಲಿಸಿದರು.

     ವಿಧಿಯಿಲ್ಲದೇ ಹೋಳಿಗೆ ತಿಂದರು.. ಎರಡನೇ ಸಲ ಹೋಳಿಗೆ ವಿಚಾರಣೆಗೆ ಬಂದಿತ್ತು.ಈಗ ಬೇಡ ಭಾವಯ್ಯ ಎಂದು ಕಿಶನ್ ಮುಂದೆ ಕಳಿಸಿದರೂ ಕೇಳದ ಭಾವ "..ಇದು ಎನರ್ಜಿ ಬೂಸ್ಟರ್... " ಅಂದಾಗ ಮೈತ್ರಿಯ ಮುಖ ರಂಗೇರಿತ್ತು.ಒಂದು ಹೋಳಿಗೆಯನ್ನು ಅರ್ಧ ಮಾಡಿ ಕಿಶನ್ ಗೆ ಬಡಿಸಿ .."ಉಳಿದ ಅರ್ಧವನ್ನು ನಿನ್ನ ಅರ್ಧಾಂಗಿಗೇ ಬಡಿಸುತ್ತೇನೆ "ಎಂದು ಬಡಿಸಿದರು.ಮೈತ್ರಿಗೆ ಉಸಿರು ಬಿಡಲೂ ಕಷ್ಟಪಡುವಷ್ಟಾಯಿತು.ಮತ್ತೇನನ್ನೂ ಹಾಕಿಸಿಕೊಳ್ಳದೇ ಸುಮ್ಮನಿದ್ದ ಮೈತ್ರಿಯಲ್ಲಿ ಹಾಡುವಂತೆ ಒತ್ತಾಯಿಸಿದರು.ಈಶ್ವರ ಭಾವ ಬಂದು "ಏ..ಮದಿಮ್ಮಾಳೇ.. ಭಕ್ತಿಗೀತೆ ಬೇಡ..
ಚಿತ್ರಗೀತೆ ಹಾಡು.."ಅನ್ನಬೇಕೇ...

ಅಷ್ಟರಲ್ಲಿ ಕುಮಾರಣ್ಣ "ಒಂದು ರೊಮ್ಯಾಂಟಿಕ್ ಡ್ಯುಯೆಟ್ ಸಾಂಗ್.. ಹಾಡಿದರೆ ಚಂದ.."ಎಂದು ಮೈಕ್ ನಂತೆ ಹಳೇ ಟಾರ್ಚ್ ಹಿಡಿದು ಬಂದರು.ಮೈತ್ರಿ ನಗುತಡೆಯದೆ "ನಿಮ್ಮ ಕಡೆಯವರು ಎಷ್ಟು ರೇಗಿಸ್ತಾರಪ್ಪಾ.."ಎಂದು ಕಿಶನ್ ನ ಬಳಿ ಹೇಳಿದಳು.
"ಹೂಂ.. ಹೀಗೇನೇ..ಹೊಸ ಜೋಡಿ ಹಳೆಜೋಡಿಯಾಗುವ ತನಕವೂ "
ಎಂದ ಕಿಶನ್.

"ಓಹೋ..ಯಾವ ಹಾಡು ಹಾಡೋದೂಂತ ಚರ್ಚಿಸುತ್ತಾ ಇದ್ದಾರೆ.."

"ನಾಲ್ಕು ವರ್ಷದಿಂದ ಚ್ಯಾಟ್ ಮಾಡುವಾಗ ಬಂದ ಪ್ರೇಮಗೀತೆಗಳೂ ಆದೀತು.."

"ಫಸ್ಟ್ ಪ್ರೊಪೋಸ್ ಮಾಡುವಾಗ ಕಿಶನ್ ನೀನು ಯಾವ ಸಾಲು ಹೇಳಿದ್ದೆ...ಅದನ್ನೇ ಹೇಳಿ.."

ಹೀಗೆ ಒಬ್ಬೊಬ್ಬರೂ ಸಿಕ್ಕಿದ್ದೇ ಛಾನ್ಸ್ ಅಂತ  ರೇಗಿಸಿದ್ದೇ..

ಕೊನೆಗೆ ಇಬ್ಬರೂ ಸೇರಿ ಹಾಡಿದ್ದು ಮಾತ್ರ ವಿಘ್ನವಿನಾಶಕನ ಹಾಡು..


ಮಹಾಗಣಪತಿಂ.....
ಮಹಾಗಣಪತಿಂ ಮನಸಾಸ್ಮರಾಮಿ
ವಶಿಷ್ಠ ವಾಮದೇವಾದಿ ವಂದಿತ
ಮಹಾಗಣಪತಿಂ ಮನಸಾಸ್ಮರಾಮಿ
ವಶಿಷ್ಠ ವಾಮದೇವಾದಿ ವಂದಿತ
ಮಹಾಗಣಪತಿಂ.....ಆ....ಆ....


ವಧೂವರರ ಹಾಡಿಗೆ ಬಂದವರೆಲ್ಲರೂ ತಲೆದೂಗಿದರು.ಮೇದಿನಿ ಚಾಂದಿನಿ ಇಬ್ಬರೂ ಜೊತೆಯಲ್ಲಿ ಹಾಡೊಂದನ್ನು ಹಾಡಿದರು.ಸಂಜನಾ ವಂದನಾ ಕೂಡಾ ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಗೆದ್ದರು. ಗೋವಿಂದ ನಾಮ ಸ್ಮರಣೆಯನ್ನು ಭಾಸ್ಕರ ಶಾಸ್ತ್ರಿಗಳು ಯಕ್ಷಗಾನದ ಪದದ ಮೂಲಕ ಮಾಡಿದರು. ಗೋವಿಂದಾ.. ಎನ್ನುತ್ತಾ ಊಟಮುಗಿಸಿ ಎಲ್ಲರೂ ಎದ್ದರು.


       ಶಾಸ್ತ್ರಿಗಳ ಕುಟುಂಬದವರು ಹೊರಡುವ ಸಮಯವಾಗುತ್ತಾ ಬಂತು.ಮೈತ್ರಿಯ ಜೊತೆ ಯಾರು ಕುಳಿತುಕೊಳ್ಳುವುದು ಎಂದು ಚರ್ಚೆಯಾಯಿತು.ಗಾಯತ್ರಿ "ಅಕ್ಕಾ.. ನೀನೇ ಕುಳಿತುಕೋ..ಮನೆಯ ಬಗ್ಗೆ ಚಿಂತೆ ಬೇಡ..ನಾನೂ ಅತ್ತೆಯೂ ನಿಭಾಯಿಸುತ್ತೇವೆ" ಎಂದರು.
ಮಹಾಲಕ್ಷ್ಮಿ ಅಮ್ಮನಿಗೆ ಸೊಸೆ ಅಲ್ಲಿ ಕುಳಿತರೆ ಮನೆಯಲ್ಲಿ ರಾಶಿ ಬಿದ್ದಿದ್ದ ಕೆಲಸಗಳನ್ನೆಲ್ಲ ಯಾರು ಮಾಡುವುದು ಎಂಬ ಚಿಂತೆ..

ಮಗನ ಬಳಿ ಹೋಗಿ "ಸಂಜನಾ ವಂದನಾರನ್ನು ನಿಲ್ಲಿಸೋಣ..ಅವರಿಗೆ ಮನೆಯಲ್ಲಿ ಮಾಡಲೇನೂ ಕೆಲಸವೂ ಇಲ್ಲ.. " ಎಂದರು.
ಭಾಸ್ಕರ ಶಾಸ್ತ್ರಿಗಳಿಗೂ ಅದೇ ಬೇಕಿತ್ತು.ಸಂಜಾನಾ ವಂದನಾರನ್ನು ಕರೆದು ಕೇಳಿದಾಗ ವಂದನಾ ಒಪ್ಪಲೇಯಿಲ್ಲ.. ಸಂಜನಾ ಅಳುಕುತ್ತಲೇ ಒಪ್ಪಿಕೊಂಡಳು.


         ಸಂಜನಾಳನ್ನು ಬಿಟ್ಟು ಉಳಿದವರೆಲ್ಲರೂ ವಾಹನವೇರುತ್ತಿದ್ದಂತೆ ಮೈತ್ರಿಯ ಕಣ್ಣುಗಳಲ್ಲಿ ತನ್ನಿಂತಾನೇ ಜಲಪ್ರಳಯವಾಗುವುದನ್ನರಿತ ಕಿಶನ್ ಕಣ್ಣಲ್ಲೇ ಆಕೆಯನ್ನು "ಅಳಬೇಡ.. ನಾನಿರುವೆ ನಿನ್ನ ಜತೆ "ಎಂದು ಮುದ್ದಿಸಿದ.. ಸನಿಹಕ್ಕೆ ಬಂದು ಕೈಯನ್ನು ಅದುಮಿದ..ಅಷ್ಟೇ...ಪತಿ ಕಣ್ಣಲ್ಲಿ ನೋಡಿದ್ದೇ ತಡ ಮದುಮಗಳು ಒಳ್ಳೆಯ ಮೂಡ್ ಗೆ ಬಂದುಬಿಟ್ಟಳು.. ಕಣ್ಣೀರು ಮಾಯ.. ತವರು ಮನೆಯವರಿಗೆ ನಗುನಗುತ್ತಲೇ ಬಾಯ್ ಮಾಡಿದಳು.


   ಸಂಜನಾಗೆ  ಮಾತ್ರ ಏನು ಮಾಡಬೇಕೆಂದೇ ತೋಚಲಿಲ್ಲ.ಪೇಟೆಯಲ್ಲಿ ಬೆಳೆದ ಅವಳಿಗೆ ಇನ್ನೊಬ್ಬರ ಮನೆಯಲ್ಲಿ ನಿಂತು ಅಭ್ಯಾಸವೂ ಇರಲಿಲ್ಲ.ಅಕ್ಕನ ಜೊತೆಗೆ ಇರೋಣವೆಂದರೆ ಭಾವ ಅಕ್ಕನ ಹಿಂದೆಯೇ ಸುತ್ತುತ್ತಿದ್ದಾರೆ. ಒಂಟಿಯಾಗಿಬಿಟ್ಟೆ ಎಂದೆನಿಸಿತು ಅವಳಿಗೆ.ಅವಳ ಮುಖಭಾವವನ್ನರಿತ ಮೇದಿನಿ, ಚಾಂದಿನಿ ಅವಳ ಜೊತೆ ಮಾತನಾಡುತ್ತಾ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದರು.ತಾನೂ ಸಹಾಯ ಮಾಡಲು ಹೊರಟ ಸಂಜನಾಳನ್ನು ಬೇಡ ನಾವೇ ಮಾಡುತ್ತೇವೆ ಎಂದರು.


      ರಾತ್ರಿ ಊಟವಾಗುತ್ತಿದ್ದಂತೆ ನಾನೆಲ್ಲಿ ಮಲಗಲಿ ಎಂಬ ಚಿಂತೆ ಸಂಜನಾಳಿಗೆ..ಅಲ್ಲಿದ್ದಿದ್ದೇ ಎರಡು ರೂಮು..ಮಮತಾ ಮಗಸೊಸೆಗೆ ಒಂದು ರೂಮಿನಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟರು.ಚಾಂದಿನಿ ಅವಳ ಗಂಡ ಇನ್ನೊಂದು ರೂಮಿನಲ್ಲಿ ಮಲಗುವ ಸೂಚನೆಯಿತ್ತು.ಮೇದಿನಿ...?? ಮೇದಿನಿಗೂ ಅವಳ ಗಂಡನಿಗೂ ಅಟ್ಟದಲ್ಲಿ ಮಲಗಲು ವ್ಯವಸ್ಥೆ...!!! ಸಂಜನಾಗೆ ಇದೆಲ್ಲ ವಿಶೇಷವಾಗಿತ್ತು.. ಕೊನೆಗೆ ಗಣೇಶ್ ಶರ್ಮ ಚಾವಡಿಯಲ್ಲಿ ಮಲಗಿ ..ತಾನೂ ಮಮತಾ ಅತ್ತೆಯೂ ಊಟದ ಪಡಸಾಲೆಯಲ್ಲಿ ಮಲಗುವುದೆಂದು ತಿಳಿದಾಗ ನಿಟ್ಟುಸಿರು ಬಿಟ್ಟಳು.



    ಕಿಶನ್ ಗೆ ನಿದ್ದೆ ತೂಗುತ್ತಿತ್ತು.ಮೈತ್ರಿಯ ಕೈಹಿಡಿದು "ಬಾ .."ಎಂದ.."ಈಗ ಬರುತ್ತೇನೆ" ಎಂದು ಹೋದಳು.. ಆಕೆ ಬರುತ್ತಾಳೆ ಎಂದು ಆತ ರೂಮು ಸೇರಿದ ..ಮುದ್ಗೊಂಬೆಯ ನಿರೀಕ್ಷೆಯಲ್ಲಿದ್ದ ಅವನು ಕೈಬಳೆಯ ಸಣ್ಣ ಸದ್ದಿಗೂ ತನ್ನವಳು ಬಂದಳೇ ಎಂದು ನೋಡುತ್ತಿದ್ದ.ಕಾಲ್ಗೆಜ್ಜೆ ಸಪ್ಪಳಕ್ಕೆ ತನ್ನವಳದೇ ಎಂದು ಮನದಲ್ಲೇ ಮಂಡಿಗೆ ಸವಿದವನಿಗೆ ಅದು ತಂಗಿ ಮೇದಿನಿಯದು ಎಂದು ಗೊತ್ತಾದಾಗ ನಿರಾಸೆ.ನಿನ್ನೆಯ ಶೃಂಗಾರಮಯ ನೆನಪುಗಳ ಪುರವಣಿಯಲ್ಲಿ ಇಂದಿನ ಸಂತಸದ ಮೆರವಣಿಗೆಗಾಗಿ ಕಾಯುತ್ತಿದ್ದ.ಕ್ಷಣವೂ ಯುಗವಾದಂತೆ ಭಾಸವಾಯಿತು.

       ಮುದ್ಗೊಂಬೆಯ ಸವಿನೆನಪಿನಲ್ಲಿ ಛೇ.. ನಾನು ನೋವು ಮಾಡಿದೆನೇ...ಎಂದುಕೊಂಡು..ಇಲ್ಲ ...ಅವಳೂ ಸಮ್ಮತಿಸಿದ್ದಳು.ನೋವಿನಲ್ಲೂ ನಕ್ಕು ನನ್ನನ್ನು ಬಾಚಿತಬ್ಬಿದ್ದನ್ನು ನೆನಪಿಸಿಕೊಂಡು ಮೈಯೆಲ್ಲಾ ರೋಮಾಂಚನವಾಯಿತು... ಇವತ್ತು .. ಊಹೂಂ...ನಿನ್ನೆಯಷ್ಟಲ್ಲ.. ಅವಳನ್ನು ಸ್ವಲ್ಪ ಜಾಸ್ತಿಯೇ ಖುಷಿಪಡಿಸ್ಬೇಕು.
ಆದರೆ ಮುದ್ಗೊಂಬೆ ಈಗ ಬರ್ತೇನೆ ಅಂದವಳು ಬಂದೇ ಇಲ್ವೇ... ಎನ್ನುತ್ತಾ ತಾನೇ ಹುಡುಕಿಕೊಂಡು ಹೊರಟ.


    ಅಡುಗೆ ಕೋಣೆಯಲ್ಲಿ ಅಮ್ಮನ ಜೊತೆಗೆ ಇದ್ದಳು ಮುದ್ಗೊಂಬೆ ಮುಖ ಕಿವುಚಿಕೊಂಡು..ಅಮ್ಮ ಏನೋ ಬಿಸಿಮಾಡುತ್ತಿದ್ದರು. ಅಮ್ಮನೆದುರು "ಮುದ್ಗೊಂಬೆ ಏನಾಯ್ತು" ಎಂದು ಕೇಳುವಷ್ಟು ಸಲುಗೆಯಿಲ್ಲ..ಏನು ಮಾಡಲಿ..ಎಂದು ಯೋಚಿಸುತ್ತಾ ನಿಂತ.ಮಗನನ್ನು ಕಂಡು ಅಮ್ಮನೇ ಕರೆದರು."ಮೈತ್ರಿಗೆ ಹೊಟ್ಟೆನೋವಂತೆ .. ಕಷಾಯ ಮಾಡಿ ಕೊಡ್ತಿದೀನಿ.." ಅಂದಾಗ  ಅವಳ ಕಿವುಚಿದಂತಿರುವ ಮುಖದ ಹಿಂದಿನ ವೇದನೆ ಅರಿವಾಯಿತು.. ಕಷಾಯ ಕುಡಿದು ಮುಗಿಸುತ್ತಿದ್ದಂತೆ ಮಗನಲ್ಲಿ "ಮಗನೇ ಜೋಪಾನ.. ಅವಳ ಆರೋಗ್ಯದ ಕಡೆಯೂ ಗಮನವಿರಲಿ.. "
"ಅಮ್ಮಾ..ನಾನೇನೂ ಮಾಡಿಲ್ಲ.." ಅಂದಿದ್ದ ಮುಗ್ಧ ಹುಡುಗನಂತೆ.

"ಆಹಾ..ನಾಟಕ.. ಬಾಯಿಗೆ ಬೆರಳಿಟ್ಟರೆ ಕಚ್ಚೋಕೂ ಬರದವರಂತೆ ಆಡುವುದು ಬೇಡ..ನಂಗೆಲ್ಲಾ ಗೊತ್ತು.."
ಅಂದಾಗ..' ಹಾಗಾದರೆ ಮುದ್ಗೊಂಬೆ ಎಲ್ಲವನ್ನೂ ಅಮ್ಮನಿಗೆ  ವರದಿ ಮಾಡಿದ್ದಾಳಾ... ಕೈಗೆ ಸಿಗ್ಲಿ..ಅವಳನ್ನೇ ಕೇಳ್ತೀನಿ..' ಎಂದುಕೊಂಡು ಮಡದಿಯೊಂದಿಗೆ ಹೊರಟ.ಊಟದ ಪಡಸಾಲೆಯಲ್ಲಿ ಆಗಷ್ಟೇ ಹೊದಿಕೆ ಹೊದೆದು ಮಲಗಿದ್ದ ಸಂಜನಾ ಅವರ ಮಾತುಕತೆಯನ್ನೆಲ್ಲ ಕೇಳಿ ಹೊದಿಕೆಯೆಡೆಯಿಂದ ಇಣುಕಿದ್ದಳು.ಅಕ್ಕ ಭಾವನ ಜೊತೆ ವಯ್ಯಾರದಿಂದ ಹೆಜ್ಜೆ ಹಾಕುವುದನ್ನು,ಭಾವ ಕಟಿಯನ್ನು ತೋಳಲ್ಲಿ ಬಳಸುವುದನ್ನು ಕಂಡಳು.ಇನ್ನೆರಡು ಮೂರು ವರ್ಷದಲ್ಲಿ ನನಗೂ ಇದೇ ಪರಿಸ್ಥಿತಿ ಬಂದೀತು ಎಂದು ನೆನೆದು ನಿದ್ದೆಗೆ ಜಾರಿದಳು.

 
        ಮುದ್ಗೊಂಬೆಯನ್ನು ಕರೆದೊಯ್ದ ಕಿಶನ್ ಬಾಗಿಲನ್ನು ಭದ್ರಪಡಿಸಿ ಮೊದಲು ಅಮ್ಮನಲ್ಲಿ ಏನೆಲ್ಲ ಹೇಳಿದ್ದೀಯೆಂದು ಕೇಳಿತಿಳಿದುಕೊಂಡು ಸಮಾಧಾನಪಟ್ಟುಕೊಂಡ.  ಮಧುವನ್ನರಸಿ ಬಸಿದು ಹೀರಿ ಸುಖವಾಗಿ ಸಂಸಾರದಲ್ಲಿ ತೇಲಿತು ಮುದ್ದುಜೋಡಿ.ಹೊರಗಡೆ ಮಲಗಿದ್ದ ಅಪ್ಪ ಮಗನ ಸಂಸಾರ ಆರಂಭವಾಗಿದೆ ಎಂದು ಒಳಗಿನಿಂದ ಬರುತ್ತಿದ್ದ ಶಬ್ದದಿಂದಲೇ ತಿಳಿದು ಸಂತಸಪಟ್ಟರು.ಮಮತಾ ಅಗತ್ಯದ ಸ್ವಚ್ಛತೆಯ ಕೆಲಸಗಳನ್ನು ಮಾಡಿ ಮುಗಿಸಿ ನಂತರ ಸಂಜನಾಳ ಪಕ್ಕದಲ್ಲಿ ತನ್ನ ನಿತ್ಯದ ಹಾಸಿಗೆ ಬಿಡಿಸಿ ನಿದ್ರೆಗೆ ಜಾರಿದರು.


ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
19-05-2020.



No comments:

Post a Comment