Sunday, 30 August 2020

ಕೂಡಿ ಬಾಳುವ ಖುಷಿ-ಕಿರುಗತೆ/ಕೌಟುಂಬಿಕ ಕಥೆ.

 

         


          ಕೂಡಿ ಬಾಳುವ ಖುಷಿ



         "ಅಪ್ಪಾ... ಈ ಸಾರಿ ಮಕ್ಕಳನ್ನು ರಜೆಯಲ್ಲಿ  ಕಳಿಸಲೇ.. ?ಪ್ಲೀಸಪ್ಪಾ.. ಇದೊಂದು ವರ್ಷ ಮಾತ್ರ.. ಮುಂದಿನ ವರ್ಷ ನಾನೇ ಉದ್ಯೋಗ ಬಿಟ್ಟು ಮನೆಯಲ್ಲಿರುತ್ತೇನೆ" ಎಂದ ಮಗಳ ಮಾತನು ಕೇಳಿ ಪಶುಪತಿ ರಾಯರು ಮೌನವಾದರು .ಮಗಳಿಗೆ 'ನಿನ್ನ ಮಕ್ಕಳನ್ನು ಕಳುಹಿಸಿಕೊಡು ' ಎಂದು ಹೇಳುವ ಮನಸ್ಸು. ಆದರೆ ಪರಿಸ್ಥಿತಿ ಕಟ್ಟಿಹಾಕಿತ್ತು.

        "ಅಪ್ಪ ಅವರು ಈಗ ಬೆಳೆದಿದ್ದಾರೆ. ಮೊದಲಿನಂತೆ ಗಲಾಟೆ ಮಾಡಲ್ಲ. ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳಲು ಕಲಿತಿದ್ದಾರೆ .ಆದರೂ ನಾನು ಉದ್ಯೋಗಕ್ಕೆ ತೆರಳುವಾಗ ಅವರಿಬ್ಬರನ್ನೇ ಮನೆಯಲ್ಲಿ ಬಿಟ್ಟು ಹೋಗುವುದು ನನಗೆ ಕಷ್ಟ..ಡೇ ಕೇರ್ ಸೆಂಟರ್ ಗಳು ಕೂಡ ಬಾಗಿಲು ಮುಚ್ಚಿಕೊಂಡಿದೆ ಪ್ಲೀಸ್ ಒಂದು ಸಲ ...ಆಗಲ್ಲ ಎನ್ನಬೇಡಿ ಅಪ್ಪ"

"ಆಯ್ತು ಮಗಳೇ ಕಳುಹಿಸಿಕೊಡು ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ನೋಡಿಕೊಳ್ಳುತ್ತೇವೆ."

        "ಥ್ಯಾಂಕ್ಸ್ ಅಪ್ಪ .". ಧಾರಿಣಿಯ ಮನಸ್ಸು ಹಗುರವಾಗಿತ್ತು. ಮತ್ತೆ ತನ್ನ ಕಾರ್ಯದಲ್ಲಿ ತೊಡಗಿಸಿಕೊಂಡು ತಲೆಯಲ್ಲಿ ಏನು ಯೋಚಿಸುತ್ತಿದ್ದರೆ "ಸಿಸ್ಟರ್ ... ಡ್ರಿಪ್ ಸರಿ ಹೋಗ್ತಾ ಇಲ್ಲ "ಎಂದು ವಯಸ್ಸಾದ  ಮಹಿಳೆಯೊಬ್ಬಳು ಕರೆದಾಗ 101 ನಂಬರ್ನ ರೂಮ್ಗೆ  ತೆರಳಿದಳು.

         ಸುಮಾರು 65 ವರ್ಷದ  ಮಹಿಳಾರೋಗಿ ಜ್ವರವೆಂದು ದಾಖಲಾಗಿದ್ದರೂ, ಅಶಕ್ತತೆ ಬಲವಾಗಿತ್ತು .ವೈದ್ಯರು ಗ್ಲೂಕೋಸ್ ಹಾಕಿದ್ದರು . ಆದರೆ ಆಕೆ ಪದೇ ಪದೇ ಕೈ ಅಲುಗಾಡಿಸುತ್ತಾ ಇದ್ದುದರಿಂದ ಗ್ಲೂಕೋಸ್ ಸರಿಯಾಗಿ ಇಳಿಯುತ್ತಲೇ ಇರಲಿಲ್ಲ. ಪದೇ ಪದೇ ಕರೆದಾಗ ಧಾರಿಣಿ ಸರಿಮಾಡಿ ತೆರಳುತ್ತಿದ್ದಳು .ಒಮ್ಮೆ "ಎಷ್ಟು ಸಾರಿ ಹೀಗೆ ಮಾಡಿಕೊಳ್ಳುತ್ತಿದ್ದೀರಿ.. ಸ್ವಲ್ಪವಾದರೂ ಪ್ರಜ್ಞೆ ಬೇಡ್ವಾ"ಎಂದು ಗದರಿದ್ದಳು.ಮರುಕ್ಷಣ ಆಕೆಯ ಮುಖವನ್ನು ನೋಡಿ ' ಅಯ್ಯೋ ಪಾಪ ನನ್ನ ಅಮ್ಮನ ವಯಸ್ಸಿನವರು . ಸುಮ್ಮನೆ ಬೈದುಬಿಟ್ಟೆ 'ಎಂದು ನೊಂದುಕೊಂಡಳು.
ಏನೇ ಕಾಯಿಲೆ ಬಂದರೂ ಒಂದು ದಿನವೂ ತಪ್ಪಿಸದೆ ತನ್ನ ಕಾರ್ಯವನ್ನು ಮಾಡುತ್ತಿದ್ದ ಅಮ್ಮನ ನೆನಪು ಬಂದು ಕಂಗಳು ತುಂಬಿದವು.

                 ******

         ಪಶುಪತಿ ರಾಯರು ಮಗಳ ಮಾತುಗಳನ್ನೇ ಮತ್ತು ಮತ್ತೆ ನೆನಪಿಸಿಕೊಂಡರು. ಅವಳ ತೋರಿಕೆಯಲ್ಲಿ ಅದೆಷ್ಟು ಆರ್ದ್ರತೆ ಇತ್ತು. 'ಆಗಲ್ಲ  'ಎನ್ನುವ ಮಾತೇ ನನ್ನ ನಾಲಿಗೆಯಿಂದ ಹೊರಡಲಿಲ್ಲ ..ಹೊರಡುವುದೂ ಇಲ್ಲ . ತಾವು ಅನುಭವಿಸಿದ ಕಷ್ಟವನ್ನು ನೆನೆದು  ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಬೇಕೆಂದು ನಿರ್ಧರಿಸಿದ್ದರು.ಅದಕ್ಕಾಗಿ ಬಹಳ ಶ್ರಮ ಪಟ್ಟಿದ್ದರು...ಮಕ್ಕಳು ಕೂಡ ಕಲಿಕೆಯಲ್ಲಿ ಮುಂದಿದ್ದರು... ಮಗಳನ್ನು ನರ್ಸಿಂಗ್ ಓದಿಸಿ ಮಗನನ್ನು ಫಾರ್ಮಸಿ ಕೋರ್ಸಿಗೆ ಸೇರಿಸಿದರು .. ಇಂದು ಇಬ್ಬರು ಉದ್ಯೋಗದಲ್ಲಿದ್ದು ,ತಮ್ಮ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. . ಆತ್ಮವಿಶ್ವಾಸ ಅವರಲ್ಲಿದೆ . ನಾವು ಅನುಭವಿಸಿದಂತಹ   ಕಷ್ಟ ಅವರಿಗಿಲ್ಲ...ಆದರೆ ಅವರ ಕೌಟುಂಬಿಕ ಜವಾಬ್ದಾರಿಗಳಲ್ಲಿ ಪೂರ್ತಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ .ಇಂತಹ ಸಂದರ್ಭದಲ್ಲಿ ಅವರಿಗೆ ಸಹಾಯಬೇಕು. ಆಗಲ್ಲ ಎಂದು ಹೇಳಿದರೆ ಹೇಗೆ..? ಅವರ ಜವಾಬ್ದಾರಿಗಳನ್ನು ನಾವು ಹಂಚಿಕೊಳ್ಳುತ್ತಾ ಅವರಿಗೆ ನೆರವಾಗಬೇಕು .ಆದರೆ ಪರಿಸ್ಥಿತಿ ಇದಕ್ಕೆ ಸಹಕರಿಸುತ್ತಿದೆಯಾ ..? ಎಂದು ಯೋಚಿಸುತ್ತಾ.. ಹಣೆಯ ಮೇಲಿನ ನೆರಿಗೆಯಲ್ಲಿ ಮುತ್ತಿನಂತೆ ಜಿನುಗುತ್ತಿದ್ದ ಬೆವರ ಹನಿಗಳನ್ನು ಹೆಗಲ ಮೇಲಿನ ಬೈರಾಸಿನಲ್ಲಿ ಒರೆಸಿಕೊಂಡರು.

        ಒಳಗೆ ತೆರಳಿದರು.. ಚಾವಡಿಯಲ್ಲಿ ಮಂಚದ ಮೇಲೆ ಬಾಳಸಂಗಾತಿ ಶಾಂತ  ಚಲನೆಯಿಲ್ಲದೆ ಮಲಗಿದ್ದರು. ಕಣ್ಣುಗಳಲ್ಲಿ ಮಾತ್ರ ಹೊಸ ಹೊಳಪಿತ್ತು ."ರೀ ಏನಂತೆ ..? ಧಾರಿಣಿ ಮತ್ತು ಮಕ್ಕಳು ಬರುತ್ತಾರಂತಾ..?"

         ಅವಳ ಮನಸ್ಸು ಕುಣಿಯುತ್ತಿತ್ತು ಮೊಮ್ಮೊಕ್ಕಳನ್ನು ನೋಡಲು ..ಎಷ್ಟಾದರೂ ಮಾತೃ ಹೃದಯವಲ್ಲವೇ. ತಾನು ಕೈ ಕಾಲು ಆಡದೆ ಮಲಗಿದ್ದರು ಮೊಮ್ಮಕ್ಕಳನ್ನು ನೋಡುವ ತವಕ. ಕಣ್ಣಂಚಲ್ಲೇ ಮಿಂಚಿನ ಸಂಚಾರವಾಯಿತು. ತುಂಬಾ ದಿನವಾಯಿತು ಇಂತಹ ಆನಂದವನ್ನು ಅವಳ ಮುಖದಲ್ಲಿ ಕಾಣದೇ. .."ರೀ.. ಮಕ್ಕಳು ಬಂದಾಗ ತಿನ್ನಲು ಏನಾದರೂ ತಂದಿಡಿ..ಹಾಗೇ ಕಪಾಟಿನಲ್ಲಿದ್ದ ಅವರ ಹಳೆಯ ಚಡ್ಡಿಗಳು, ಟೀಶರ್ಟುಗಳು, ಬೈರಾಸು , ಹೊದಿಕೆ ಎಲ್ಲವನ್ನೂ ಒಮ್ಮೆ ತೆಗೆದು  ಸರ್ಫ್ ನೀರಿನಲ್ಲಿ ಹಾಕಿ ಬಿಸಿಲಿನಲ್ಲಿ ಒಣಗಿಸಿ. ವಾಸನೆ ಬರುತ್ತಿದ್ದರೆ ಮಕ್ಕಳಿಗೆ ಹಿಡಿಸದು."

            ಶಾಂತಾಳ ಕಳಕಳಿಯನ್ನು ಅರ್ಥಮಾಡಿಕೊಂಡ ರಾಯರ ಕಣ್ಣು ತೇವವಾಯಿತು.. ತನ್ನ ಬಗ್ಗೆ ಯೋಚಿಸದಿದ್ದರೂ ತನ್ನವರದೇ ಚಿಂತೆ... ಎಂದು ಮಡದಿಯ ಮುಖವನ್ನೇ ದಿಟ್ಟಿಸಿ ಕಪಾಟಿನತ್ತ ತೆರಳಿದರು.ಮೊಮ್ಮಕ್ಕಳ ಬಟ್ಟೆಯನ್ನೆಲ್ಲಾ ಹೊರತೆಗೆದು ಸರ್ಫ್ ನೀರಿನಲ್ಲಿ ಅದ್ದಿ ಸ್ವಚ್ಛಗೊಳಿಸಿ ಅಂಗಳದ ತುದಿಯಲ್ಲಿದ್ದ ಬಳ್ಳಿಯಲ್ಲಿ ನೇತುಹಾಕಿದರು. ಆಗಾಗ ಕಣ್ಣು ಆ ಕಡೆಗೆ ಹೋಗುತ್ತಿದ್ದು ಬಟ್ಟೆಗಳು ಗಾಳಿಗೆ ಕೆಳಗೆ ಬಿದ್ದಾಗ ಹೆಕ್ಕಿಡುವುದು ,ಒಣಗಿದ್ದನ್ನ ಒಳಗೆ ತಂದು ಮಡಚಿಡುವುದು... ಮಾಡುತ್ತಿದ್ದರು. ಕಳೆದ ವರ್ಷ ಹಾಕಿದ ಅಂಗಿಚಡ್ಡಿಗಳು ಈ ವರ್ಷ ಮಕ್ಕಳಿಗೆ ಆಗಬಹುದೇ..? ದೊಡ್ಡವರಾಗಿರುತ್ತಾರೆ.. ಮಕ್ಕಳು ನನ್ನ ಹೆಗಲಿನೆತ್ತರಕ್ಕೆ ಬೆಳೆದಿರಬಹುದಾ..?ಹೇಗಿರಬಹುದು ..?ಎಂಬೆಲ್ಲಾ ಕುತೂಹಲ ಅವರಿಗೆ.

           ಸಂಜೆ 5 ಗಂಟೆ ಆಯ್ತು. ಮಗ ಸೊಸೆ ಮಕ್ಕಳು ಮನೆಗೆ ಬರುವ ಸಮಯ.. ಪಶುಪತಿ ರಾಯರು ಅಡುಗೆ ಕೋಣೆಗೆ ತೆರಳಿ ತಯಾರಿ ನಡೆಸಿದರು. ಅಷ್ಟರಲ್ಲೇ ಬೈಕ್ ಬಂದಿತ್ತು. ಸಿಟ್ಟಿನಿಂದ ಬೈಕಿನಿಂದ ಇಳಿದ ಸೊಸೆ ಅಪರ್ಣ "ಮಾವ .."ಎಂದು ಜೋರಾಗಿ ಕರೆಯುತ್ತಲೇ ಒಳಗೆ ಬಂದಳು.
"ಮಾವ...ಧಾರಿಣಿ ಅತ್ತಿಗೆಯ ಮಕ್ಕಳು ಬರುತ್ತಿದ್ದಾರೆಯೇ.. ? ಬಟ್ಟೆಗಳೆಲ್ಲ ಒಣಗಲು ಹಾಕಿದ್ದು ಕಾಣುತ್ತದೆ.."

ತಣ್ಣಗಿನ ದನಿಯಲ್ಲಿ "ಹೌದು" ಎಂದರು.

"ನಿಮ್ಮಲ್ಲಿ ಮೊದಲೇ ಹೇಳಿದ್ದೇನೆ.. ಈ ಸಾರಿ ಅತ್ತಿಗೆಯ ಮಕ್ಕಳನ್ನು ಕರೆಸಿಕೊಳ್ಳುವುದು ಬೇಡ ಎಂದು.ಕೊರೊನಾ ಸಾಂಕ್ರಾಮಿಕ ರೋಗವೂ ಹಬ್ಬುತ್ತಿದೆ.ಇಲ್ಲಿ ಅತ್ತೆಯು ಹಾಸಿಗೆ ಹಿಡಿದಿದ್ದಾರೆ.. ನನ್ನ ಇಬ್ಬರು ಮಕ್ಕಳನ್ನು ನೋಡಿಕೊಂಡು ಉದ್ಯೋಗ ಮನೆ ಎರಡನ್ನೂ ನಿಭಾಯಿಸುವುದರಲ್ಲಿ ನಾನು ಹೈರಾಣವಾಗುತ್ತಿದ್ದೇನೆ. ಇನ್ನು ಇಬ್ಬರು  ಮಕ್ಕಳು ಮನೆಯ ಬಂದರಂತೂ ಕೇಳುವುದೇ ಬೇಡ. ನನ್ನ ಕಷ್ಟ ಸ್ವಲ್ಪವಾದರೂ ಅರ್ಥಮಾಡಿಕೊಳ್ಳಿ.."ಎಂದು ವಟವಟ ಅನ್ನುತ್ತಲೇ ಒಳಬಂದಳು.

         ಮೌನವಾಗಿದ್ದ ರಾಯರ ಮುಖವನ್ನೊಮ್ಮೆ ನೋಡಿ "ಆ ಮಕ್ಕಳನ್ನು ನೀವು  ನೋಡಿಕೊಳ್ಳುತ್ತೀರಾ...? ಪಟ್ಟಣದಲ್ಲಿ ಬೆಳೆದು ವಿಪರೀತ ಸೊಕ್ಕಿವೆ.. ತಂಟೆ ಮಾಡುವುದೇ ಕೆಲಸ . ಆ ತಿಂಡಿ ಮೆಚ್ಚುವುದಿಲ್ಲ.. ಈ ಪದಾರ್ಥ ನಮಗೆ ಬೇಡ ..ಯಾವ ತಿನಿಸೂ ಸರಿಹೋಗದು. ಮನೆಯಿಡೀ ಹಾರಾಡುತ್ತಾ ಅಸ್ತವ್ಯಸ್ತ ಮಾಡಿದರೆ ಮತ್ತೆ ಸರಿ ಮಾಡಲು ನನಗೆ ವೇಳೆಯಿಲ್ಲ..
ಬೆಳಗ್ಗೆ ಐದಕ್ಕೆ ಎದ್ದು ಮನೆಗೆಲಸಗಳನ್ನೆಲ್ಲ ಮಾಡಿ ನನ್ನ ಮಕ್ಕಳಿಗೆ ತಿಂಡಿತಿನಿಸಿ ಉದ್ಯೋಗಕ್ಕೆ ಹೊರಟಾಗ ನನಗೆ ಸಾಕು ಬೇಕಾಗುತ್ತದೆ ..  .."

         ರಾಯರು ಮರುಮಾತನಾಡದೆ ಹೊರ ಹೊರಟರು ಸೊಸೆಯ ಮಾತಿನಲ್ಲಿ ಅರ್ಥವಿದೆ. ಹಾಸಿಗೆ ಹಿಡಿದು ಮಲಗಿದ ಅತ್ತೆಯನ್ನು ಚಾಕರಿ ಮಾಡಿ, ಮನೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಉದ್ಯೋಗಕ್ಕೆ ತೆರಳುವ ಅವಳಿಗೂ ಒತ್ತಡ ಹೆಚ್ಚುತ್ತದೆ.ಆದರೇನು ಮಾಡುವುದು..?  ಮಗಳಲ್ಲಿ ನಿನ್ನ ಮಕ್ಕಳನ್ನು ನೀನೆ ನೋಡಿಕೋ.. ಎಂದು ಹೇಳಲು ಮನಸ್ಸಾದರೂ ಹೇಗೆ ಬರುತ್ತದೆ. ಮಗಳು ಉದ್ಯೋಗದಲ್ಲಿರಲಿ ಎಂದು ಬಯಸಿದ್ದು ನಾವೇ ತಾನೇ..?. ಆಕೆಗೆ ಉದ್ಯೋಗ ದೊರೆತಾಗ ತಮ್ಮನ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದವಳು ಅವಳಲ್ಲವೇ..? ಸ್ವಂತ ಕಾಲ ಮೇಲೆ ನಿಂತ ಮಗಳು ಗಂಡನ ಮನೆಗೂ ಹೆಗಲು ನೀಡಿದ್ದಳು. ಡೇ ಕೇರ್ ಸೆಂಟರ್ ಗಳ ಸಹಾಯದಿಂದ ಮಕ್ಕಳನ್ನು ಬೆಳೆಸಿದ್ದಾಳೆ .ಆದರೆ ಈಗ ಅವು ಕೊರೋನಾ ಭಯದಿಂದ ಬಾಗಿಲು ಮುಚ್ಚಿವೆ. ಆಕೆಯ ನರ್ಸ್ ವೃತ್ತಿಯಲ್ಲಿ ಈಗ ಒತ್ತಡ ಹೆಚ್ಚು .ಇಂತಹ ಸಂದರ್ಭದಲ್ಲಿ
ಜವಾಬ್ದಾರಿ ನಮಗೆ ಬೇಡ ಎಂದರೆ ಸರಿಯಾ..? ಎಂಬ ರಾಯರ  ಮನಸ್ಸು ಇಬ್ಬಂದಿತನ ಅನುಭವಿಸಿತು.

               ******

          ಭಾನುವಾರ ಬಂದೇಬಿಟ್ಟಿತು. ಧಾರಿಣಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ತವರಿಗೆ ಬಂದಳು. ತಾನು ಒಂದು ದಿನ ನಿಂತು ಮಕ್ಕಳಿಗೆ ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಿ ತೆರಳಿದಳು. ಹಾಸಿಗೆ ಹಿಡಿದಿದ್ದ ಶಾಂತಮ್ಮನವರಿಗೂ ಲವಲವಿಕೆ ಉಂಟಾಯಿತು. ಪಶುಪತಿ ರಾಯರು ಬೆಳಿಗ್ಗೆ ಬೇಗನೆದ್ದು ಸೊಸೆಗೆ ಮನೆಕೆಲಸಕ್ಕೆ ಸಹಕರಿಸುತ್ತಿದ್ದರು.ಮಗ ಧ್ರುವ ಕೂಡಾ ಎಂದಿನಿಂದ ಬೇಗನೆ ಎದ್ದು ಮನೆಯನ್ನು ಗುಡಿಸಿ ,ಒರೆಸಿ ,ವಾಷಿಂಗ್ ಮೆಷಿನ್ನ ಬಟ್ಟೆ ಒಣಗಲು ಹಾಕಿ, ಮಕ್ಕಳನ್ನು ಹಲ್ಲುಜ್ಜಿಸಿ ಸ್ನಾನ ಮಾಡಿಸಿ ,ತಿಂಡಿ ತಿನ್ನಲು ಕರೆದುಕೊಂಡು ಬರುತ್ತಿದ್ದ.

          ಅಷ್ಟರಲ್ಲಿ ಧಾರಣಿಯ ಮಕ್ಕಳಾದ ಭುವನ್ ಮತ್ತು ಪವನ್ ಪ್ರಾತಃ ವಿಧಿ ವಿಧಾನಗಳನ್ನು ಮುಗಿಸಿ ತಯಾರಾಗುತ್ತಿದ್ದರು. ಅತ್ತೆ ಮಾಡಿಟ್ಟ ತಿನಿಸನ್ನು , ಪದಾರ್ಥಗಳನ್ನು ತಂದಿಟ್ಟು ಎಲ್ಲರಿಗೂ ಪಂಕ್ತಿ ಹಾಕುತ್ತಿದ್ದರು.ಅಪರ್ಣ ತನ್ನ ಮಕ್ಕಳನ್ನು ತಿಂಡಿ ತಿನ್ನಲು ಬನ್ನಿ ಎಂದು ಹತ್ತು ಸಲ ಕೂಗಬೇಕಾಗುತ್ತಿದ್ದುದು ಈಗ ಕರೆಯುವ ಅವಶ್ಯಕತೆಯೇ ಇರಲಿಲ್ಲ.ಭಾವಂದಿರ ಜೊತೆಗೆ ಅವರೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದರು.ಭಾವಂದಿರ ಬಟ್ಟಲನ್ನು ನೋಡಿ ತಮಗೂ ಅಷ್ಟೇ ತಿಂಡಿಬೇಕೆಂದು ಹಠಮಾಡಿ ಬಡಿಸಿಕೊಂಡು ಅವರ ಜೊತೆ ಬೇಗನೆತಿಂದು ಹೊಟ್ಟೆ ತುಂಬಿಸಿಕೊಳ್ಳಲು ಆರಂಭಿಸಿದರು.ಅಪರ್ಣಾ ಮೂಗಿನ ಮೇಲೆ ಬೆರಳಿಟ್ಟುಕೊಂಡಳು.ನಿತ್ಯವೂ ಆಕೆಗೆ ಮಕ್ಕಳಿಗೆ ಈಗಿನ ಅರ್ಧದಷ್ಟು ಆಹಾರ ಉಣಿಸಲು  ಕನಿಷ್ಠ ಅರ್ಧಗಂಟೆ ಬೇಕಾಗುತ್ತಿತ್ತು.

       ಅಪರ್ಣಾ ದಿನವೂ ಮಕ್ಕಳನ್ನು ಆಫೀಸಿಗೆ ಕರೆದೊಯ್ಯುತ್ತಿದ್ದವಳು ಅತ್ತಿಗೆಯ ಮಕ್ಕಳೊಡನೆ ಮನೆಯಲ್ಲೇ ಬಿಟ್ಟು ಹೋಗಲಾರಂಭಿಸಿದಳು.ಎಲ್ಲ ಮಕ್ಕಳನ್ನು ಪಶುಪತಿರಾಯರು  ಅಡಿಕೆ ಸೋಗೆಯ ಗಾಡಿಯಲ್ಲಿ ಎಳೆಯುವುದು, ಹಳೆ ಟಯರಿನ ಗಾಡಿ ಮಾಡಿ ಎಳೆಯುವುದು ,ಮಾವಿನಹಣ್ಣು ಹೆಕ್ಕಲು,ಗೇರುಬೀಜ ಹೆಕ್ಕಲು ಕರೆದೊಯ್ಯುತ್ತಿದ್ದುದು ನಾಲ್ವರಿಗೂ ಜೊತೆಯಾಗಿ ಬೆರೆಯಲು ಅವಕಾಶವಾಯಿತು.. ಮೊಮ್ಮಕ್ಕಳೊಂದಿಗೆ ಅಜ್ಜನೂ ಮಗುವಾದನು.. ಧಾರಿಣಿ ತಾನು ಉದ್ಯೋಗದಲ್ಲಿರುವುದರಿಂದ ಮಕ್ಕಳಿಗೆ ಅವರ ಬಟ್ಟೆಗಳನ್ನು ಒಗೆಯಲು ಒಣಗಿದ ಬಟ್ಟೆಯನ್ನು ಮಡಚಿಡಲು ಕಲಿಸಿದ್ದಳು.ಅವರಂತೆ ತನ್ನ ಮಕ್ಕಳೂ ಕಲ್ಲಿಗೆ ವಸ್ತ್ರ ಬಡಿಯುವುದನ್ನು ಕಂಡು ಅಪರ್ಣಾಳ ಮುಖದಲ್ಲೊಂದು ನಗುಮೂಡಿತು..

       ಮಾತನಾಡಲು ತೊದಲುತ್ತಿದ್ದ ತರುಣ್ ಚೆನ್ನಾಗಿ ಮಾತನಾಡಲು ಕಲಿತ.ಸಣ್ಣ ವಿಷಯಕ್ಕೂ ಆಳುತ್ತಿದ್ದ ಸಾನ್ವಿ ಅಳು ಮರೆತಳು.. ಭುವನ್ ಪವನ್ ಗುನುಗುತ್ತಿದ್ದ ಪದ್ಯ ,ಶ್ಲೋಕಗಳು ತರುಣ್ ,ಸಾನ್ವಿಯ ಬಾಯಿಂದ ಹೊರಬಂದವು. ಶಾಂತಮ್ಮನವರ ಮಂಚದ ಸಮೀಪದಲ್ಲಿ ಭುವನ್ ಪವನ್ ಕುಣಿಯುತ್ತಿದ್ದರೆ ತರುಣ್ ಸಾನ್ವಿಯೂ ಅದನ್ನೇ  ಅನುಕರಿಸಿದರು..ಶಾಂತಮ್ಮ ಇವರನ್ನೆಲ್ಲ ನೋಡಿಕೊಳ್ಳಲು ನನ್ನ ಕೈಕಾಲುಗಳಲ್ಲಿ ಶಕ್ತಿ ಇಲ್ಲವೇ ..?ಎಂದು ಕೊರಗಿದರು.    .
     ಅಜ್ಜಿ ನಾವು ನಿನ್ನ ಕಾಲು ಒತ್ತಬೇಕಾ..  ನಿನಗೆ ಔಷಧಿ ಕೊಡಬೇಕಾ..ಬಿಸಿನೀರು ಬೇಕಾ..ಎನ್ನುತ್ತಾ ಭುವನ್ ಪವನ್ ಅಜ್ಜಿಯ ಮಂಚದ ಸುತ್ತ ಸುತ್ತುತ್ತಿದ್ದರು..ಅಜ್ಜಿ ಮೊಮ್ಮಕ್ಕಳಿಂದ ಬಯಸುವುದು ಇದನ್ನೇ ತಾನೆ.. ಅಜ್ಜಿಯ ಕಾಲಿಗೆ ಹೆಚ್ಚು ಬಲವಿಲ್ಲದಿದ್ದರೂ ಅಜ್ಜಿಯನ್ನು ವಾಕರ್ ನಲ್ಲಿ  ನಡೆಸುತ್ತ ವಾಶ್ ರೂಮಿಗೆ ಕರೆದೊಯ್ಯುಯುತ್ತಿದ್ದರು. ಮೊಮ್ಮಕ್ಕಳ ಆಟ ,ಆರೈಕೆ ಅವರಿಗೆ ಸಂತೋಷ ತಂದುಕೊಟ್ಟಿತು.

          ಹೀಗೆ ದಿನ ಕಳೆದದ್ದೇ ಗೊತ್ತಾಗಲಿಲ್ಲ. ಅಪರ್ಣಳಿಗೆ ಎಂದಿಗಿಂತ ಬೇಗನೆ ಆಫೀಸಿಗೆ ಹೊರಟಾಗುತ್ತಿತ್ತು .ಆಫೀಸಿನ ಕೆಲಸ ಮುಗಿಸಿ ಬಂದವಳಿಗೆ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳಿಗೆ ಅತ್ತಿಗೆಯ ಮಕ್ಕಳು ನೆರವಾಗುತ್ತಿದ್ದುದು ಸಮಾಧಾನದ ವಿಚಾರವಾಗಿತ್ತು.ಅಲ್ಲದೆ ಮಕ್ಕಳಿಗೆ ಉಣಿಸುವ ಕಾರ್ಯ ಬಹಳ ಸುಲಭದಲ್ಲಿ ನಡೆಯುತ್ತಿದ್ದುದರಿಂದ ಅವಳ ಅರ್ಧ ತಲೆನೋವು ಕಮ್ಮಿಯಾಗಿತ್ತು . ಪತಿರಾಯನೂ ಸ್ವಲ್ಪ ಸಹಾಯ ಮಾಡುವುದನ್ನು ಕಲಿತಿದ್ದ.. ಮನೆಯ ವಾತಾವರಣದಲ್ಲಿ ಇಷ್ಟೆಲ್ಲಾ  ಆಗಲೇಬೇಕಾದ ಬದಲಾವಣೆಗಳು ಆದದ್ದನ್ನು ಕಂಡಾಗ ಅವಳ ಮನಸ್ಸು ಖುಷಿಯಿಂದ ಹಾರಾಡಿತು.

       ಭುವನ್ ಮತ್ತು ಪವನ್ ತಮ್ಮ ತಾಯಿಯ ಜೊತೆಗೆ ತೆರಳುವ ಮುನ್ನ ಅಪರ್ಣಾ ಮಾವನವರಲ್ಲಿ "ಕ್ಷಮಿಸಿ ಮಾವ .. ನಾನು ಅತ್ತಿಗೆಯ ಮಕ್ಕಳು ಬಂದರೆ ತೊಂದರೆ ಎಂದುಕೊಂಡರೆ ಅವರಿಂದ ಎಷ್ಟು ಉಪಕಾರವಾಯಿತು..." ಎನ್ನುತ್ತಾ ಕಣ್ತುಂಬಿಕೊಂಡಳು.

       "ಪರ್ವಾಗಿಲ್ಲ ಮಗಳೇ...ಮನೆಯ ಒಳಗೂ ಹೊರಗೂ ದುಡಿಯುವ ನೀನು.. ಒತ್ತಡವನ್ನು ತಾಳಲಾರದೆ ನಿನ್ನ ಕಷ್ಟದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿದರೆ ಅದರಲ್ಲಿ ತಪ್ಪಿಲ್ಲಮ್ಮಾ ... ದೊಡ್ಡ ಮಕ್ಕಳನ್ನು ನೋಡಿ ಸಣ್ಣ ಮಕ್ಕಳು ಕಲಿಯುತ್ತಾರೆ ಎಂಬುದು ಸತ್ಯ.ಮನೆಯ ಮಕ್ಕಳೆಲ್ಲಾ ಜೊತೆ ಸೇರಿದರೆ ಹಿರಿಯರಿಗೂ ಆನಂದ.."ಎನ್ನುತ್ತಾ ತಾವೂ ಹನಿಗಣ್ಣಾದರು.

"ಇನ್ನು ಪ್ರತೀ ವರ್ಷವೂ ಅಕ್ಕನ ಮಕ್ಕಳು ರಜೆಯಲ್ಲಿ ಊರಿಗೆ ಬರಲಿ.ಅಪರ್ಣಾ..ನಿನಗೆ ಮನೆಕೆಲಸಕ್ಕೆ ನಾನೂ ನೆರವಾಗುತ್ತೇನೆ .."ಎಂದ ಪತಿ ಧ್ರುವ..

    ಎಲ್ಲರ ಮಾತುಗಳನ್ನು ಕೇಳುತ್ತಿದ್ದ ಶಾಂತಾ " ಹೀಗೇ ಒಬ್ಬರಿಗೊಬ್ಬರು ಸಹಕರಿಸುತ್ತಾ ಖೂಷಿಯಾಗಿರಲಿ ನನ್ನ ಕುಟುಂಬ"ಎಂದು ಮಲಗಿದಲ್ಲಿಂದಲೇ ಮನದುಂಬಿ ಹಾರೈಸಿದರು.

✍️... ಅನಿತಾ ಜಿ.ಕೆ.ಭಟ್.
30-08-2020.

ಆತ್ಮೀಯ ಓದುಗರೇ...

ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ Home,> ಸಂಕೇತಗಳನ್ನು ಬಳಸಿಕೊಳ್ಳಬಹುದು..

ಚರಣ ನಮನ

 


    ಚರಣ ನಮನ

ಭಾರತ ಮಾತೆಯ ಕುವರರು ನಾವು
ಮಾತೆಯ ಚರಣಕೆ ನಮಿಸೋಣ
ಸತ್ಯ ಪ್ರೀತಿ  ಅಹಿಂಸೆಯಿಂದ
ವಿಶ್ವದ ಜನಮನ ಗೆಲ್ಲೋಣ||೧||

ಪುಣ್ಯದ ಮಣ್ಣಿದು ಮಹಿಮರ ನೆಲವಿದು
ಸಿರಿ ಸಂಸ್ಕೃತಿಯ ನೆಲೆವೀಡು
ಹಸಿರಿನ ತೋಪಿದು ಶಾಂತಿಯ ಬೀಡಿದು
ಭವ್ಯ ಭಾರತಿಯ ನೆಲೆನಾಡು||೨||

ಹತ್ತಿಯ ಬಿಳುಪಿನ ಹಿಮಗಿರಿ ಶಿರವು
ಹಾಲ್ನೊರೆ ಜಲಧಿಯು ತೊಳೆವ ಚರಣವು
ಉತ್ತರ ದಕ್ಷಿಣ ಹಬ್ಬಿದ ಬಾಹುವು
ಭಾರತ ಮಾತೆಯ ಚೆಲುನಾಡು||೩||

ಭಾಷೆಯು ಹಲವು ಮತವದು ಕೆಲವು
ಐಕ್ಯತೆಯೆ ಮಂತ್ರ ಘೋಷವು
ನಿನ್ನಯ ಮಡಿಲು ಶೂರರ ಒಡಲು
ಧೈರ್ಯ ಸಾಹಸದ ಗುಡಿನೋಡು||೪||

ಸಾಧು ಸಂತರು ಋಷಿಮುನಿಗಳು
ವಿವೇಕಾನಂದ ಪರಮಹಂಸರು
ಜಗದಲಿ ಅರಿವಿನ ಜ್ಯೋತಿಯ ಬೆಳಗಿದ
ಸಾಧಕ ಗಡಣದ ತರವಾಡು||೫||

✍️... ಅನಿತಾ ಜಿ.ಕೆ.ಭಟ್.
30-08-2020.

             


ಪಾಪಪ್ರಜ್ಞೆ


 ಪಾಪಪ್ರಜ್ಞೆ


         "ಗಂಗಾ..ಯಾರು ಬಂದಿದ್ದಾರೆ ನೋಡಮ್ಮ..." ಆಟೋರಿಕ್ಷಾ ಮನೆಯ ಅಂಗಳದ ಬದಿಯಲ್ಲಿ ನಿಂತಾಗ ಮಗಳನ್ನು ಕೂಗಿ ಕರೆದರು ನರಸಿಂಹ ರಾಯರು.ಗಂಗಾ ಬೆಳಗ್ಗಿನ ಉಪಾಹಾರ ಮುಗಿಸಿ ಪಾತ್ರೆ ಉಜ್ಜಿ ಸ್ವಚ್ಛಗೊಳಿಸಿ ಮಧ್ಯಾಹ್ನ ಊಟಕ್ಕೆಂದು ಕುಚ್ಚಿಲಕ್ಕಿ ಗಂಜಿಯಿಡಲು ಒಲೆ ಉರಿಸಲು ಆರಂಭಿಸಿದ್ದಳು.ಚಿಮಣಿ ದೀಪ ಉರಿಸಿಟ್ಟು ತೆಂಗಿನ ಗರಿಯನ್ನು ಚಿಮಣಿ ದೀಪಕ್ಕೊಡ್ಡಿ ಬೆಂಕಿ ಹಿಡಿಸಿ ಒಲೆಯೊಳಗಿನ ಸೌದೆಯ ತುಂಡುಗಳ ಅಡಿಗೆ ಇರಿಸಿ, ಸೌದೆಯ ತುಂಡಿಗೆ ಬೆಂಕಿ ಹಿಡಿಯಲು ಆರಂಭವಾಗಿತ್ತಷ್ಟೇ.."ಈ ಅಪ್ಪ ಮಲಗಿದಲ್ಲಿಂದಲೇ ಹೀಗೆ ಹತ್ತಾರು ಸಲ ಕೂಗಿದರೆ ಕೆಲಸ ಆಗುವುದು ಹೇಗೆ..?" ಎಂದು ತನ್ನಲ್ಲೇ ಬೈಯುತ್ತಾ ದೀಪವನ್ನು ಆರಿಸಿ ಒಳಗಿನ ಕತ್ತಲೆಯ ಅಡುಗೆ ಕೋಣೆಯಿಂದ ಹೊರಗಿನ ಚಾವಡಿಗೆ ಬಂದಳು.

"ಅರೆ.. ಯಮುನಾ.. ನೀನು.. ಏನೂ ಸೂಚನೆಯೇ ನೀಡದೆ ಮಕ್ಕಳ ಜೊತೆ ಒಬ್ಬಳೇ ಬಂದೆಯಾ..ಹೇಳಿದ್ದಿದ್ದರೆ ತಮ್ಮ ಪ್ರಕಾಶನಲ್ಲಿ ಹೇಳುತ್ತಿದ್ದೆವು..ಮಕ್ಕಳೇ.. ಪ್ರೀತಿ ಸ್ವಾತಿ ಹೇಗಿದ್ದೀರಾ.."


       ಗಂಗಾ ಕೇಳುತ್ತಲೇ ಇದ್ದಳು.ಯಮುನಾ ಮೌನಿಯಾಗಿದ್ದಳು.ಒಳಬಂದ ಮಗಳನ್ನು ತಾನು ಮಲಗಿದ್ದಲ್ಲಿಂದಲೇ ಮಾತನಾಡಿಸಲೆತ್ನಿಸಿದ ನರಸಿಂಹ ರಾಯರು,ಮಡದಿ ಸಾವಿತ್ರಿಯಮ್ಮನಿಗೆ ಅವಳ ಮುಖಭಾವವೇ ಸಂಕಟವನ್ನು ಹೇಳುತ್ತಿತ್ತು.ಯೌವ್ವನದಲ್ಲಿ ಎಷ್ಟು ಗಟ್ಟಿಮುಟ್ಟಾಗಿ ಇದ್ದವಳು ಯಮುನಾ.ಖಾಯಿಲೆ ಕಸಾಲೆ ಎಂದು ಔಷಧಿ ಸೇವಿಸಿದವಳಲ್ಲ.ಅಗಲವಾದ ಶರೀರ,ದಪ್ಪ ಕಪ್ಪನೆಯ ಕೂದಲು ಬೆನ್ನಿನ ಕೆಳಭಾಗದವರೆಗೆ ಹರಡಿ ನಡೆಯುವಾಗ ತಾನೂ ಅತ್ತಿತ್ತ ಸರಿಯುತ್ತಿತ್ತು.ಯಾವ ಕೆಲಸವೇ ಇರಲಿ ಅಡುಗೆಯಿಂದ ಹಿಡಿದು ಕಟ್ಟಿಗೆ ತುಂಡರಿಸುವುದರವರೆಗೆ ಎಲ್ಲದಕ್ಕೂ ಇವಳು ಸೈ.ಮನೆಯ ಹಿರಿಯಕ್ಕನಾಗಿ ಎಲ್ಲರ ಮೇಲೂ ನಿಗಾಯಿಟ್ಟು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದವಳು.ಅಡಿಕೆ ವ್ಯಾಪಾರಿ ಮೊಯ್ದು ಬಂದು ಅಡಿಕೆ ತೂಕದಲ್ಲಿ ಏರುಪೇರು ಮಾಡಿದರೆ ಎಂದು ಮೊದಲೇ ತೂಕ ಮಾಡಿಡುತ್ತಿದ್ದ ಚತುರೆ.ಆದರೆ ಈಗ ಸೋತು ಸುಣ್ಣವಾದ ಮುಖಚಹರೆ,ಕೃಶಕಾಯ,ಉದುರಿ ಬೋಳಾದ ನೆತ್ತಿ ,ಸೀರೆ ರವಿಕೆ ಸಡಿಲವಾಗಿ ಜಾರುವಂತಾಗಿದ್ದನ್ನು ಕಂಡಾಗ ಎಲ್ಲವೂ ಅರ್ಥವಾಗಿತ್ತು,ಆಘಾತವಾಗಿತ್ತು."ಯಾವುದಕ್ಕೂ ಪ್ರಕಾಶ ಬರಲಿ .ಅವನಲ್ಲಿ ಒಂದು ಮಾತು ಕೇಳಿ ಮುಂದುವರಿಯೋಣ " ಎಂದರು ನರಸಿಂಹ ರಾಯರು.


      ಮರುದಿನ ಅಪ್ಪನ ಮಾತಿನಂತೆ ಪ್ರಕಾಶ ಅಕ್ಕನ ಮನೆಗೆ ತೆರಳಿ ಭಾವನೊಂದಿಗೆ ಮಾತನಾಡಲು ಹೊರಟಿದ್ದ.ಅಂಗಳ ದಾಟಿ ಮನೆಯ ಜಗಲಿಗೆ ಬಂದವನಿಗೆ ಒಳಗೊಬ್ಬಳು ಹೆಣ್ಣುಮಗಳ ಇರುವಿಕೆ ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ..ಹೊರಬಂದ ಭಾವ "ಏನು..ಏನು ಬಂದಿದ್ದೀಯಾ..ನಿಮ್ಮ ಜೊತೆಗೆ ಸಂಬಂಧವೇ ಮುಗಿದುಹೋಯಿತು.ಅವಳನ್ನೂ ಮಕ್ಕಳನ್ನೂ  ನಿಮ್ಮ ಮನೆಯಂಗಳದವರೆಗೆ ಬಿಟ್ಟು ಹೋಗಿದ್ದೇನೆ.ಇನ್ನು ನೀವುಂಟು.. ಅವರುಂಟು.." ಎಂದು ಹೇಳಿ ದಢಾರನೆ ಬಾಗಿಲೆಳೆದುಕೊಂಡರು.ಪ್ರಕಾಶನಿಗೆ ಮಾತು ಬಾಯಿಯಿಂದ ಹೊರಬೀಳಲೆತ್ನಿಸಿದ್ದೂ ಹೊರಬಾರದೆ ಹೋಯಿತು.ಇಂತಹವರೊಂದಿಗೆ ಎಂತಹ ಮಾತು .. ಆದರೂ ..ತಗ್ಗಿ ಬಗ್ಗಿ ನಡೆದರೆ ಏನಾದರೂ ಸಾಧಿಸಬಹುದೇನೋ ಎಂದು ಮಾತನಾಡಿದರೆ ಅದು ಕೇಳಿತೋ ಇಲ್ಲವೋ ..ಉತ್ತರವಿಲ್ಲ..ಮುಚ್ಚಿದ ಬಾಗಿಲಿನೊಳಗಿನಿಂದ..


                   ******


      ಯಮುನಾ ಏದುಸಿರು ಬಿಡುತ್ತಾ ಮನೆಕೆಲಸಕ್ಕೆ ಕೈಜೋಡಿಸುತ್ತಿದ್ದಳು.ಗಂಗಾಳಿಗೆ ಸ್ವಲ್ಪ ಸಹಕಾರವೇನೋ ಆಗುತ್ತಿತ್ತು.ಆದರೆ 'ನನ್ನ ಬದುಕು ಹೇಗೋ ಆಗುತ್ತದೆ.ಆದರೆ ಇವಳ ಬದುಕು ಹೀಗಾಯಿತಲ್ಲ ..ಇಬ್ಬರು ಮಗಳಂದಿರನ್ನು ಮಡಿಲಲ್ಲಿಟ್ಟುಕೊಂಡು' ಎಂಬ ಕೊರಗು ಗಂಗಾಳದು..ವಯಸ್ಸಾದ ಸಾವಿತ್ರಮ್ಮನಿಗೆ ಮಗಳ ಚಿಂತೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತಿರಲಿಲ್ಲ.ನರಸಿಂಹ ರಾಯರು ಅಲ್ಪ ಸ್ವಲ್ಪ ಅಡ್ಡಾಡುತ್ತಿದ್ದವರು ಹಾಸಿಗೆ ಹಿಡಿಯುವಂತಾದರು.. ಪ್ರಕಾಶ ಹೆಚ್ಚೇನೂ ತಲೆಕೆಡಿಸಿಕೊಳ್ಳದೆ ಎಂದಿನಂತೆ ತನ್ನದೇ ಲೋಕದಲ್ಲಿ ಮುಳುಗಿದ್ದ.ಯಮುನಾಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದ .ಹೆಚ್ಚಿನ ಪರೀಕ್ಷೆಗಾಗಿ ಬೇರೆ ಕಡೆ ಹೋಗಬೇಕೆಂದರೆ ಇರುವ ಖರ್ಚು ವೆಚ್ಚಗಳನ್ನು ಅಂದಾಜಿಸಿ ಉದಾಸೀನ ತೋರುತ್ತಿದ.


     ಆ ದಿನ ಯಮುನಾ ಎದೆ ಹಿಡಿದು ಏದುಸಿರು ಬಿಡುವುದನ್ನು ಕಂಡು ಮಕ್ಕಳಿಬ್ಬರು ಅಳುತ್ತಾ ಕುಳಿತಿದ್ದರು.ಸಾವಿತ್ರಮ್ಮ ಮಗನಲ್ಲಿ "ಆ ಪುಟ್ಟ ಮಕ್ಕಳ ಮುಖ ನೋಡಿಯಾದರೂ  ಒಮ್ಮೆ ವೈದ್ಯರಲ್ಲಿ ಕರೆದೊಯ್ಯೋ ಮಗ" ಎಂದು ಗೋಗರೆದರು.. "ಅಮ್ಮಾ ಹೋದ ಸಲವೇ ವೈದ್ಯರು ಪುನಃ ಜೋರಾದರೆ ದೊಡ್ಡಾಸ್ಪತ್ರೆಗೆ ಕರೆದೊಯ್ಯಬೇಕು.ಆಪರೇಷನ್ ಆಗಬೇಕು..ಇಲ್ಲಿ ಸಾಧ್ಯವಿಲ್ಲ ಎಂದಿದ್ದಾರೆ.." ಎಂದಾಗ ಸಾವಿತ್ರಮ್ಮ ಕೈಯಲ್ಲಿ ಕಾಸಿಲ್ಲದೆ ಹೇಗೆ ಚಿಕಿತ್ಸೆ ಕೊಡಿಸುವುದು ಎಂದು ಸುಮ್ಮನಾದರು.ಗಂಗಾ ಇಬ್ಬರು ಮಕ್ಕಳನ್ನು ತನ್ನ ಎದೆಗವಚಿ ಹಿಡಿದು ಸಂತೈಸಲು ಪ್ರಯತ್ನಿಸಿದಳು.ನರಸಿಂಹ ರಾಯರು ಮಗನಲ್ಲಿ "ಆ ಭಾವನಿಂದಲೇ ದುಡ್ಡು ಪಡೆದು ಚಿಕಿತ್ಸೆ ಕೋಡಿಸಬೇಕು.ಅವನಿಗೂ ಬುದ್ಧಿ ಕಲಿಸಬೇಕು..ಮಗಾ ಈಗಲೇ ಹೋಗಿ ವಕೀಲರನ್ನು ಕಂಡು ಮಾತನಾಡಿ ಬಾ.."ಎಂದರು.

"ಅವನಿಗೆ ಬುದ್ಧಿ ಕಲಿಸ ಹೊರಟವರು ನೀವು ಮಾಡಿದ್ದೇನು..?"ಎಂದು ಮಗಳ ಬಾಳಿನ ಗೋಳು ನೋಡಲಾರದೆ ಚುಚ್ಚಿದರು ಸಾವಿತ್ರಿ..

"ನಾನು..ನಾನೇನು ಮಾಡಬಾರದ್ದು ಮಾಡಿರುವೆ..ಎಲ್ಲಾ ಯಮುನಾಳ ದುರಾದೃಷ್ಟ..ಮತ್ತಿನ್ನೇನು..?"

"ತಂದೆತಾಯಿ ಮಾಡಿದ ಪುಣ್ಯದಲ್ಲಿ ಮಾತ್ರವಲ್ಲ ಮಕ್ಕಳಿಗೆ ಪಾಲು..ಪಾಪದಲ್ಲೂ ಇರುತ್ತೆ ರೀ..ಅದೇ ಆಗಿರೋದು ಈಗ.."

"ಏನಂದೇ.. ನಾನು ಪಾಪ ಮಾಡಿದ್ದೇನಾ..ಅವಳ ದೆಸೆ ಹಾಳದ್ದಕ್ಕೆ ನನ್ನನ್ನು ಆಡುತ್ತಿದ್ದೀಯಾ ..ಸುಮ್ನಿದ್ರೆ ಸರಿ.."ಎಂದು ಗದರಿಸಿ ಮಡದಿಯ ಬಾಯಿ ಮುಚ್ಚಿಸಿ ತೆರಳಿದರು.. ಆದರೆ ತನ್ನೊಳಗಿನ ಗತಕಾಲದ ನೆನಪಿನ ಬುತ್ತಿ ತೆರೆದುಕೊಂಡದ್ದನ್ನು ಮುಚ್ಚಲು ಸಾಧ್ಯವಾಗಲಿಲ್ಲ.


                    ******


          ಹಿರಿಯರ ಆಶೀರ್ವಾದದಿಂದ ರೂಪವತಿ ,ಹದಿನಾರರ ಕನ್ಯೆ ಮಧುಮಾಲಾ ನರಸಿಂಹ ರಾಯರ ಜೊತೆ ಸಪ್ತಪದಿ ತುಳಿದಿದ್ದಳು.ಮನೆಯವರು  ಮದುಮಗಳನ್ನು ಗಂಡನ ಮನೆಗೆ ಕಳುಹಿಸಿದರು.ಹೊಸಬಾಳು ಆರಂಭವಾಯಿತು .ಆರಂಭದಲ್ಲೇ ನರಸಿಂಹ ರಾಯರಿಗೆ ಮಧುಮಾಲಾಳೊಂದಿಗೆ ದಾಂಪತ್ಯದ ಅತೃಪ್ತಿ ಕಾಡಿತ್ತು.ಆಕೆಗೋ ಎಳೆಯ ವಯಸ್ಸು.ತನ್ನ ದೇಹಾರೋಗ್ಯ, ಸ್ವಚ್ಛತೆಯ ಅರಿವಿಲ್ಲ.ದೊಡ್ಡ ಕುಟುಂಬ ,ಮನೆಯ ತುಂಬಾ ಜನರು.ಬಹಳ ಸಂಕೋಚ ಸ್ವಭಾವದ ಮಧು ದಾಂಪತ್ಯದ ಕಿರಿಕಿರಿಯಿಂದ ಚಡಪಡಿಸುತ್ತಿದ್ದಳು. ಹಂಚಿಕೊಳ್ಳಲೂ ಸಾಧ್ಯವಿಲ್ಲ ,ಹೇಳದಿರಲೂ ಆಗದು ಎಂಬ ಕಷ್ಟ.ಅಂತೂ ತಾಯಿಗೆ ತಿಳಿದಾಗ ಮಗಳಿಗೆ ಸಲಹೆ ನೀಡಿ ,ಮನೆಯವರಲ್ಲೂ ಅವಳ ಪರವಾಗಿ ಮಾತನಾಡಿದರು .ಮಧುವಿನ ಅತ್ತೆ ಮಾತ್ರ ತಲೆಗೆ ಹಾಕಿಕೊಳ್ಳಲಿಲ್ಲ.ಎಲ್ಲರಿಗೂ  ಪ್ರಿಯವೆಂದು ಎಂದಿನಂತೆ ಅತಿ ಖಾರದಡುಗೆ,ಆಗಾಗ ಸ್ಟ್ರಾಂಗ್ ಕಾಫಿ,ಹಾಲು,ಮೊಸರು, ಮಜ್ಜಿಗೆ ಅಲ್ಲಿಂದಿಲ್ಲಿಗೆ ಎಲ್ಲರಿಗೂ ಬರುವಂತೆ ನೀರೆರೆದು ಸರಿದೂಗಿಸುತ್ತಿದ್ದರು..ಮಧುಮಾಲಾಳಿಗೆ ಉರಿಮೂತ್ರ,ಗುಪ್ತಾಂಗದ ಉರಿಯೂತದ ಸಮಸ್ಯೆ ..ತಾಳ್ಮೆಯಿಲ್ಲದ ಪತಿ.ಅವಳ ಆರೋಗ್ಯದ ಕಾಳಜಿ ವಹಿಸಬೇಕಾದವನು ನಾನು ಎಂಬ ಜವಾಬ್ದಾರಿಯನ್ನು  ಹೊರುವ ಮನಸ್ಥಿತಿ ಇಲ್ಲದ ನರಸಿಂಹ.ಅವಳ ಯಾತನೆ,ನೋವು, ಅಸಹಕಾರದ ನಡುವೆ ಬಲವಂತವಾಗಿ ತನ್ನ ಕಾಮ ವಾಂಛೆಯನ್ನು ತೀರಿಸಿಕೊಳ್ಳುತ್ತಿದ್ದ. ಗರ್ಭಿಣಿಯಾಗಿ ಮಗುವಿಗೆ ಜನ್ಮವಿತ್ತಳು ಮಧು. ಬಾಣಂತನ ಮುಗಿದರೂ ಅಳಿಯ ನರಸಿಂಹ ಮಗಳನ್ನು ಕರೆದೊಯ್ಯಲು ಬಾರದಿದ್ದಾಗ ಮಧುಮಾಲಾಳ ತಂದೆ ತಾಯಿ ತಾವೇ ಮಗಳು ಹಾಗೂ ಮೊಮ್ಮಗನನ್ನು ಕರೆದುಕೊಂಡು ಮಗಳ ಮನೆಗೆ ಬಂದರೆ ನರಸಿಂಹ ಅವಳನ್ನು ಮನೆಯೊಳಗೆ ಸೇರಿಸಲು ಸಿದ್ಧನಿರಲಿಲ್ಲ.ಕಣ್ಣೀರುಗರೆದು ಅತ್ತೆ ಮಾವನ ಕಾಲಿಗೆರಗಿ ಬೇಡಿಕೊಂಡಳು ಮಧು."ನಮಗೇನೂ ಅಭ್ಯಂತರವಿಲ್ಲ.ಮಗ ಹೇಗೆ ಹೇಳಿದನೋ ಹಾಗೆ" ಎಂದರು ಅತ್ತೆಮಾವ.ಕುಟುಂಬದ ಸದಸ್ಯರು ನರಸಿಂಹನಿಗೆ ಬುದ್ಧಿವಾದ ಹೇಳಿದರೂ ಮೊಂಡು ಹಠ ಸಡಿಲಿಸದೆ ಇದ್ದಾಗ ನೊಂದುಕೊಂಡು ಹಿಂದಿರುಗಿದರು.ಮಧುಮಾಲಾಳ ತಂದೆ ಎರಡೂ ಕುಟುಂಬದ ಹಿರಿಯರನ್ನು ಕರೆಸಿ ಪಂಚಾಯತಿಕೆ ನಡೆಸುವ ತಯಾರಿಯಲ್ಲಿದ್ದಾಗಲೇ ಅವರಿಗೆ ಬಂದ ಸುದ್ದಿಯಿಂದ ಸಿಡಿಲೆರಗಿದಂತೆ ಕುಸಿದರು.ಅಳಿಯ ನರಸಿಂಹ ಬಡಹೆಣ್ಣುಮಗಳನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದ.ಇನ್ನು ಏನು ಮಾತನಾಡಿದರೂ ವ್ಯರ್ಥ..ಆದರೂ ಕಡೆಯ ಪ್ರಯತ್ನವೆಂಬಂತೆ ಎಲ್ಲರನ್ನೂ ಸೇರಿಸಿ ಮಾತನಾಡಿ "ಬಾಳುಕೊಡುವುದು ಸಾಧ್ಯವಿಲ್ಲದಿದರೆ ಪರಿಹಾರವಾದರೂ ಕೊಡಲಿ " ಎಂದರೆ ..ನರಸಿಂಹನೂ ಅವನ ಕುಟುಂಬದವರೂ ಏನೂ ಕೊಡುವ  ಯೋಚನೆ ಮಾಡಲಿಲ್ಲ .


      ಮಧು ಎಳೆಯ ಪ್ರಾಯದಲ್ಲೇ ಬಾಳಿನಲ್ಲಿ ಎದುರಾದ ಸಂಕಟದಿಂದ ಕುಗ್ಗಿದಳು. ದಿನಗಳುರುಳಿದವು .ತಂಗಿಯರಿಗೆ ಮದುವೆ ತಯಾರಿ ನಡೆಯುತ್ತಿತ್ತು.ಸಂಬಂಧ ಬರಲು ಇವಳೇ ಅಡ್ಡಿಯಾಗುತ್ತಿದ್ದಾಳೆಂದು ತೋರಿತು ಅಮ್ಮ ಮಹೇಶ್ವರಿಗೆ."ಇವತ್ತು ತಂಗಿಯನ್ನು ನೋಡಲು ಗಂಡಿನ ಕಡೆಯವರು ಬರುತ್ತಿದ್ದಾರೆ. ಅವರು ಬಂದು ಹೋಗುವವರೆಗೂ ಇತ್ತ ಕಡೆ ತಲೆಹಾಕಬೇಡ.ನಡಿ ತೋಟದ ಕಡೆಗೆ ಮಗುವಿನೊಂದಿಗೆ" ಎಂದಾಗ ಮುನ್ನುಗ್ಗಿ ಬಂದ ಅಳುವನ್ನು ನುಂಗಿಕೊಂಡು ತೋಟದ ಕಡೆಗೆ ಭಾರವಾದ ಹೆಜ್ಜೆಯಿರಿಸಿದಳು.ಗಂಡನಿಂದ ದೂರವಾದ ನನಗೆ ವಿಧವೆಯಂತಹ ಬಾಳು ಎಂದು ತನಗೆ ತಾನೇ ಹಣೆಬರಹವನ್ನು ಹಳಿದುಕೊಂಡಳು.ತೋಟದ ಕೆಲಸ ಮಾಡುತ್ತಾ "ಅಮ್ಮಾ..ಹಸಿವೆ.ಮನೆಕಡೆ ಹೋಗೋಣ" ಎನ್ನುವ ಮಗನನ್ನು ಸಮಾಧಾನಿಸಿ ತೋಟದಲ್ಲಿದ್ದ ಸೀಬೆಹಣ್ಣುಗಳನ್ನು ಕಿತ್ತು ಕೈಗಿತ್ತಳು.ಬಾಯಾರಿಕೆಯಾದಾಗ ತೋಟದ ಕೆರೆಯಲ್ಲಿದ್ದ ನೀರು ಕೊಟ್ಟಳು.ಎಷ್ಟೋ ಹೊತ್ತಿನ ನಂತರ ಮನೆಯಿಂದ ಕೂ... ಎಂದು ಕರೆಯುವ ದನಿ ಕೇಳಿದಾಗ ನಿಧಾನವಾಗಿ ಮನೆಯತ್ತ ನಡೆದಳು.ತನಗೆ ಇನ್ನೊಮ್ಮೆ ಈ ರೀತಿ ಹೇಳುವ ಪ್ರಸಂಗ ಬರದಂತೆ ತಾನು ತಂಗಿ ತಮ್ಮಂದಿರ ವಿವಾಹ ಕಾರ್ಯಕ್ರಮಗಳಲ್ಲಿ ದೂರವೇ ಉಳಿದಳು.ಆದರೂ ಕೆಲಸಕಾರ್ಯಗಳಲ್ಲಿ ಮೊದಲು ಕೂಗುತ್ತಿದ್ದುದೇ ಮಧು.. ಇದು ಮಾಡು, ಮಧು ..ಅದು ಮಾಡು ಎಂದು..ಯಾವುದನ್ನೂ ಒಂದಿನಿತೂ ಬೇಸರಿಸದೆ ಮಾಡಿ ಮನೆಯ ಮೂಲೆಯಲ್ಲಿ ಕುಳಿತುಬಿಡುತ್ತಿದ್ದಳು.ಎಲ್ಲರೂ ಅವರವರ ಜೀವನದಲ್ಲಿ ಸುಖ ಸಂತೋಷ ಅನುಭವಿಸುತ್ತಿದ್ದರೆ ಮಧು ತನ್ನ ಹರೆಯದ ಆಸೆಗಳನ್ನೆಲ್ಲ ಬದಿಗಿಟ್ಟು ಮಗನ ಮುಂದಿನ ಭವಿಷ್ಯದ ದೃಷ್ಟಿಯಿಂದ ಯೋಚಿಸುತ್ತಿದ್ದಳು.ಆಗಾಗ ಮಗನಲ್ಲಿ " ಮಗಾ.. ಚೆನ್ನಾಗಿ ಓದು..ನೀನು ಓದಿ ಜಾಣನಾದರೆ ಮಾತ್ರ ಬದುಕು ಹಸನಾದೀತು" ಎಂದು ಹೇಳುತ್ತಿದ್ದರೆ..ಮಗ  ಮುಗ್ಧವಾಗಿ ಹೂಂಗುಟ್ಟುತ್ತಿದ್ದ.


        ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಮಗನಿಗೆ ಮುಂದೆ ಓದಿಸಲು ಹಣವಿಲ್ಲದೆ ಕಂಗಾಲಾದಳು ಮಧು.ಒಡಹುಟ್ಟಿದವರಾರೂ ಸಹಕರಿಸುವ ಮನಸ್ಥಿತಿಯಲ್ಲೂ ಇರಲಿಲ್ಲ.ಅಲ್ಲಿ ಇಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿ ಮಗ ಹರ್ಷ ಸ್ವಲ್ಪ ಸಂಪಾದನೆ ಮಾಡುತ್ತಿದ್ದ.ಅವನ ಓದು ಕನಸಾಗಿಯೇ ಉಳಿದುಹೋದರೆ ಎಂಬ ಚಿಂತೆ ಕಾಡಿತು ಮಧುಗೆ.ಆ ದಿನ "ಅಮ್ಮಾ.. " ಎನ್ನುತ್ತಾ ಓಡೋಡಿ ಬಂದಿದ್ದ ಹರ್ಷ...ಅಮ್ಮ ಮನೆಯಲ್ಲಿರಲಿಲ್ಲ..ದನದ ಕೊಟ್ಟಿಗೆಯಲ್ಲಿ ಹುಡುಕಿದ.ಗೋಪಮ್ಮನ ಹಾಲು ಹಿಂಡುತ್ತಿದ್ದಳು.ಸಗಣಿಯ ಮೇಲೆಯೇ ಓಡೋಡಿ ಬಂದು ಅಮ್ಮನನ್ನು ಬಿಗಿದಪ್ಪಿ ಸಿಹಿಸುದ್ದಿಯನರುಹಿದ.ಮಧು ಹಾಲು ಹಿಂಡುವುದನ್ನು ನಿಲ್ಲಿಸಿ ಆನಂದಭಾಷ್ಪ ಸುರಿಸುತ್ತಿದ್ದರೆ ಕೊಟ್ಟಿಗೆಯಲ್ಲಿದ್ದ ದನಕರುಗಳೆಲ್ಲ ಅಂಬಾಕಾರಗೈಯುತ್ತಿದ್ದವು.ಹರ್ಷ ತನ್ನ ಗುರುಗಳು ಹೇಳಿದಂತೆ ಬ್ಯಾಂಕ್ ಕ್ಲರ್ಕ್ ಪರೀಕ್ಷೆಗೆ ಬರೆದಿದ್ದ.ಅದರಲ್ಲಿ ತೇರ್ಗಡೆಯಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದ.ಅಮ್ಮನ ಆಶೀರ್ವಾದ ಪಡೆದು ಹೊರಟ ಹರ್ಷನಿಗೆ ತಾನು ಉದ್ಯೋಗ ಗಿಟ್ಟಿಸಿಕೊಳ್ಳಲೇಬೇಕೆಂಬ ಛಲ.ಸಂದರ್ಶನಕ್ಕೆಂದು ಮೈಸೂರಿಗೆ ತೆರಳಿದವನು ಸಂದರ್ಶನ ಮುಗಿಸಿದ ನಂತರ ಅಲ್ಲಿಯೇ ಪುಟ್ಟ ಕೆಲಸವೊಂದನ್ನು ಹಿಡಿದ.ಕೆಲವು ತಿಂಗಳಲ್ಲಿ ಬ್ಯಾಂಕ್ ಗೆ ಆಯ್ಕೆಯಾದ ಸುದ್ದಿ ಬಂದಾಗ ಊರಿಗೆ ಮರಳಿ ಅಮ್ಮನ ಆಶೀರ್ವಾದ ಪಡೆದು ತರಬೇತಿಗೆ ಹೊರಟ.ಮಗ ಹೊರಡುತ್ತಿದ್ದರೆ ಅಮ್ಮನ ಸಂಭ್ರಮವೇನು...!! ತಾನೇ ಕೈಯಾರೆ ಮಗನಿಗೆ ಬೇಕಾದ್ದನ್ನೆಲ್ಲಾ ಜೋಡಿಸಿ ಚೀಲಗಳನ್ನು ಕೈಗಳಲ್ಲಿ ನೇತಾಡಿಸಿಕೊಂಡು ಮಾರ್ಗದ ಬದಿಗೆ ಬಂದು ಮಗನನ್ನು ಬಸ್ಸಿಗೆ ಹತ್ತಿಸಿ ಟಾಟಾ ಮಾಡಿ ಕಣ್ತುಂಬಿಕೊಂಡಿದಳು .ಇದು ನೋವಿನ ಕಣ್ಣೀರೋ, ಕಂಡ  ಕಷ್ಟದ ಬೇಗೆಯೋ ಅವಳಿಗೂ ತಿಳಿಯದು.


      ಒಂದೆರಡು ವರ್ಷದಲ್ಲಿಯೇ ಹರ್ಷ ಅಮ್ಮನನ್ನೂ ಕರೆದೊಯ್ದ.ತಾನೂ ಖಾಸಗಿಯಾಗಿ ಓದುತ್ತಾ..ಮೇಲಿನ ಹುದ್ದೆಗಳಿಗೆ ಪರೀಕ್ಷೆ ಬರೆದೂ ಉನ್ನತ ಹುದ್ದೆ ಗಿಟ್ಟಿಸಿಕೊಂಡ.ತನ್ನದೇ ಆಫೀಸಿನಲ್ಲಿದ್ದ ಬಡ ಕನ್ಯೆಯನ್ನು ವರಿಸಿ ಅವಳ ದಾರಿಗೂ ಬೆಳಕಾದ.ಮಧುಮಾಲಾಳ ಮುಂದಿನ ಜೀವನ ಸುಖಮಯವಾಗಿತ್ತು.ಒಳ್ಳೆಯ ಮಗ ಸೊಸೆ ,ಮುದ್ದಾದ ಇಬ್ಬರು ಮೊಮ್ಮಕ್ಕಳನ್ನು ಆಡಿಸುತ್ತಾ ದಿನಹೋದದ್ದೇ ತಿಳಿಯುತ್ತಿರಲಿಲ್ಲ.ಇಪ್ಪತ್ತು ವರ್ಷಗಳು  ಮಗನೊಂದಿಗೆ ಸುಖವಾಗಿ ಕಳೆದ ಆಕೆಗೆ ಸ್ವಲ್ಪವೂ ನೋವಾಗದಂತೆ ಯಮರಾಜ ಕರೆದೊಯ್ದ.ಹರ್ಷನ ಕುಟುಂಬ ಆಕೆಯ ಅನುಪಸ್ಥಿತಿಯಲ್ಲಿ ಮರುಗಿತು.ಆದರೂ ಜೀವನದಲ್ಲಿ ನೊಂದು ಬೆಂದ ಅಮ್ಮನನ್ನು ತಾನು ಚೆನ್ನಾಗಿ ನೋಡಿಕೊಂಡಿದ್ದೇನೆ ಎಂಬ ಸಮಾಧಾನ ಹರ್ಷನದು.



       ನರಸಿಂಹ ರಾಯರು ಮಧುಮಾಲಾಳಿಂದ ದೂರವಾದರೂ ಅವಳ ಎಲ್ಲಾ ಸುದ್ದಿಗಳನ್ನು ಗೆಳೆಯರಿಂದ ಸಂಗ್ರಹಿಸಲು ಸಂಕೋಚಪಡುತ್ತಿರಲಿಲ್ಲ.ಆಕೆಯ ಕಣ್ಣೀರಿನ ದಿನಗಳನ್ನು ನೋಡಿ "ನನ್ನೊಂದಿಗೆ ದಾಂಪತ್ಯದಲ್ಲಿ ಅಸಹಕಾರ ತೋರುತ್ತಿದ್ದವಳ ಅಹಂಕಾರ ಈಗ ಮುರಿಯಿತು" ಅನ್ನುತ್ತಿದ್ದವರು, ಮಗನಿಗೊಂದು ಉದ್ಯೋಗ ದೊರೆತು ಚಂದದ ಬದುಕು ಸಿಕ್ಕಾಗ ಹೊಟ್ಟೆಯುರಿದುಕೊಂಡಿದ್ದರು.


       ನರಸಿಂಹ ರಾಯರಿಗೆ ಮದುವೆಯಾಗಿ ನಾಲ್ವರು ಮಕ್ಕಳಾಗಿದ್ದರೂ ಒಬ್ಬರಿಗೂ ಓದು ತಲೆಗೆ ಹತ್ತಿರಲಿಲ್ಲ.ಮಗಳಂದಿರಿಗೆ ಮದುವೆಯೂ ಆಗುತ್ತಿರಲಿಲ್ಲ.ವರದಕ್ಷಿಣೆ ಕೊಡುವಷ್ಟು ಅನುಕೂಲವೂ ಈಗ ಆವರಲ್ಲಿರಲಿಲ್ಲ.ಹೇಗೋ ಸಾಲಸೋಲ ಮಾಡಿ ಗಂಗಾ,ಕಾವೇರಿಯ ಮದುವೆ ಮಾಡಿದರೂ ದೊಡ್ಡವಳಾದ ಯಮುನಾ ವಯಸ್ಸು ಮೀರಿ ಮದುವೆಯಾಗದೆ ಉಳಿದಿದ್ದಳು.ಕೊನೆಗೆ ಎದಡನೇ ಸಂಬಂಧ ಮೂರು ಮಕ್ಕಳ ತಂದೆಯ ಜೊತೆ ವಿವಾಹ ಮಾಡಿ ಕಳುಹಿಸಿದರು.ಎಲ್ಲವೂ ಸುಸೂತ್ರವಾಗಿ ನೆರವೇರಿ , ಇನ್ನು ಪ್ರಕಾಶನಿಗೊಂದು ಮದುವೆ ಮಾಡಿದರೆ ಜವಾಬ್ದಾರಿ ಕಳೆಯಿತು..ಎಂದುಕೊಳ್ಳುತ್ತಿರುವಾಗಲೇ..

ಕಾವೇರಿಯ ಗಂಡ ಅಕಾಲಿಕ ನಿಧನ ಹೊಂದಿದ ವಾರ್ತೆ ಬಂದಿತು.ಕಾವೇರಿಯ ಗಂಡ ಶಾಲೆಯೊಂದರಲ್ಲಿ ಕ್ಲರ್ಕ್ ಆಗಿದ್ದ.ಅವನ ಕೆಲಸ ಕಾವೇರಿಗೆ ದೊರೆತು ಜೀವನ ಸಾಗುತ್ತಿತ್ತು.

ಆ ನೋವು ಕಡಿಮೆಯಾಗುವ ಮುನ್ನವೇ ಇನ್ನೊಂದು ಆಘಾತ ಕಾದಿತ್ತು.ಗಂಗಾ ಗರ್ಭಿಣಿಯಾದ ಮೇಲೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು.ಚಿಕಿತ್ಸೆ ಕೊಡಿಸಿದರೂ ಸರಿಯಾಗದಿದ್ದಾಗ ತವರಿಗೆ ಕಳುಹಿಸಿದ್ದರು.ಅವಳ ಅನಾರೋಗ್ಯದಿಂದ ಅಬಾರ್ಷನ್ ಆಯಿತು.ಗಂಗಾಳ ಗಂಡನ ಮನೆಯವರು ತಿರುಗಿಯೂ ಇತ್ತ ನೋಡಲಿಲ್ಲ.ಗಂಗಾಳಿಗೆ ತವರ ವಾಸವೇ ಗಟ್ಟಿಯಾಯಿತು.ಮಗ ಪ್ರಕಾಶ ಉಂಡಾಡಿಯಂತೆ ಊರೆಲ್ಲ ಸುತ್ತುತ್ತಿದ್ದರೆ ಗಂಗಾ ಮನೆಯ ಕೆಲಸಕಾರ್ಯಗಳಲ್ಲಿ ತೊಡಗಿ ತೋಟಕ್ಕೂ ಹೋಗಿ ಮುತುವರ್ಜಿಯಿಂದ ದುಡಿಯುತ್ತಿದ್ದಳು.ಇದನ್ನೆಲ್ಲ ನೋಡುತ್ತಿದ್ದಾಗ ಸಾವಿತ್ರಿ ಅದೆಷ್ಟೋ ಬಾರಿ ಹೇಳಿದ್ದಳು "ರೀ..ನೀವು ಒಂದು ಹೆಣ್ಣಿಗೆ ಮಾಡಿದ ಅನ್ಯಾಯ, ಅವಳ ನೋವಿನ ಕಣ್ಣೀರಿನ ಶಾಪ ನಮಗೆ ತಟ್ಟಿದೆ.ನಮ್ಮ ಮಕ್ಕಳ ಬಾಳು ನರಕವಾಗುತ್ತಿದೆ" ಎಂದು..ಅವಳು ಹೇಳಿದಾಗ ಗದರಿದರೂ ಅಂತಃಕರಣ ಮಾತ್ರ ಅವಳ ಮಾತನ್ನು ಸತ್ಯವೆಂದೇ ಹೇಳುತ್ತಿದೆ.ಈಗ ಯಮುನಾಳೂ ಹೃದಯದ ಖಾಯಿಲೆಯಿಂದ ಬಳಲುತ್ತಿದ್ದು ಗಂಡ ಇಬ್ಬರು ಹೆಣ್ಣುಮಕ್ಕಳ ಸಹಿತ ತವರಿಗಟ್ಟಿದ್ದಾನೆ.ಮನೆಯಲ್ಲಿ ಅವಳ ಚಾಕರಿಮಾಡಲು ತನ್ನಿಂದ ಸಾಧ್ಯವಿಲ್ಲ .ತನ್ನ ಅವಶ್ಯಕತೆಗೆ ಬೇರೆಯವಳನ್ನೇ ಆಶ್ರಯಿಸುವೆ.ಅನಾರೋಗ್ಯ ಪೀಡಿತೆ ನನಗೆ ಬೇಡವೆಂದು ದೂರತಳ್ಳಿದಾಗ .. ಮಡದಿಯೆದುರು ಅಳಿಯನ ತಪ್ಪನ್ನು ಆಡುವ ಧೈರ್ಯ,ತನ್ನ ತಪ್ಪನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ..ಎರಡೂ ನರಸಿಂಹ ರಾಯರಿಗಿರಲಿಲ್ಲ.ತಾನು ಯೌವ್ವನದಲ್ಲಿ ಮಾಡಿದ್ದೇನು..ಇದನ್ನೇ ಅಲ್ಲವೇ..ಆದರೂ ಸಾವಿತ್ರಿಯೆದುರು ಕುಬ್ಜನಾಗಲಾರೆ...ಮಧು ಮಗನೊಂದಿಗೆ ಸುಖವಾಗಿ ಬಾಳಿ ಸ್ವರ್ಗಸ್ಥಳಾದಳು.. ನಾನು ಯೌವನದಲ್ಲಿ ಸಾವಿತ್ರಿಯೊಂದಿಗೆ ಮಜವಾಗಿ ಕಳೆದು ಈಗ  ನೋವುಣ್ಣುತ್ತಿದ್ದೇನೆ...ಕಾಲಚಕ್ರ ಉರುಳುತ್ತಿದೆ .. ಎಂದು ಯೋಚಿಸುತ್ತಾ..

"ನಿನ್ನ ಮಾತು ನಿಜ ಸಾವಿತ್ರಿ ...ಯಾವ ತಪ್ಪೂ ಮಾಡದ ಮಧುಮಾಲಾ ಮೊದಲು ನೋವುಂಡು ಜೀವನದಲ್ಲಿ ನೆಮ್ಮದಿ ಕಂಡಳು.ನಾನು ಮಾಡಿದ್ದು ತಪ್ಪೆಂದು ಗೊತ್ತಿದ್ದೂ ಅದೇ ಸರಿಯೆಂಬ ಹಠಕ್ಕೆ ಬಿದ್ದು ಮೆರೆದ.ಇಂದು ನನ್ನ ಗರ್ವವನ್ನು ಮುರಿಯಲೆಂದೇ ಈ ಕಷ್ಟಗಳ ಸರಮಾಲೆಯನ್ನು ಭಗವಂತ ನನ್ನ ಮುಂದಿರಿಸಿದ್ದಾನೆ ..ನಾನು ತಪ್ಪು ಮಾಡಿದೆ ಸಾವಿತ್ರಿ...ನಾನು ತಪ್ಪು ಮಾಡಿದೆ.." ಎನ್ನುತ್ತಾ ಕುಸಿದರು.


✍️... ಅನಿತಾ ಜಿ.ಕೆ.ಭಟ್.

27-08-2020.




           

Saturday, 29 August 2020

ಮಕ್ಕಳ ಊಟದ ಸವಾಲು ಮತ್ತು ಸಲಹೆಗಳು

 



           ಮಕ್ಕಳ ಹೊಟ್ಟೆ ತುಂಬಿಸುವ ಕೆಲಸ ಇಂದಿನ ಅಮ್ಮಂದಿರಿಗೆ ಸ್ವಲ್ಪ ಸವಾಲಿನದು . ಮೊದಲಿನ ಕಾಲದ ಮಕ್ಕಳಂತೆ ಅಮ್ಮ "ಊಟಕ್ಕೆ ಬಾ, ತಿಂಡಿಗೆ ಬಾ" ಎಂದಾಗ ಬಂದು ತಟ್ಟೆ ಮುಂದೆ ಕುಳಿತುಕೊಳ್ಳುವ ಸ್ವಭಾವ ಇಂದಿನವರಲ್ಲಿ ಕಾಣಸಿಗುವುದು ಅಪರೂಪ. ಅದಕ್ಕೆ ಕಾರಣವೂ ಹಲವು. ಕೈಗೆಟುಕುವಂತೆ ಇರುವ ಜಂಕ್ ಫುಡ್'ಗಳು, ಕಡಿಮೆ ವ್ಯಾಯಾಮ, ಇಲೆಕ್ಟ್ರಾನಿಕ್ ಗ್ಯಾಡ್ಜೆಟ್'ಗಳ ಅತಿಯಾದ ಬಳಕೆ..ಇತ್ಯಾದಿ..

      ದಿನಕ್ಕೆ ಮೂರು ಬಾರಿ "ದೋಸೆಯ ಮಾಡಮ್ಮ... ಬಿಸಿಬಿಸಿ ದೋಸೆ ಮಾಡಮ್ಮ" ಎಂಬ ಹಾಡನ್ನು ಹಾಡುವ ಮಕ್ಕಳು.. "ಇವತ್ತು ಮಧ್ಯಾಹ್ನ ಊಟ ಮಾಡಿ..ಊಟದ ಜೊತೆಗೆ ತುಪ್ಪ, ಪಲ್ಯ ,ಸಾಂಬಾರು,ಮೊಸರು.. ಹೊಟ್ಟೆಗೆ ಸೇರಿದರೆ ಆರೋಗ್ಯಕ್ಕೆ ಹಿತಕರ" ಎಂದೆಲ್ಲಾ ರಮಿಸುವ ಅಮ್ಮ. ರಮಿಸುವಿಕೆಗೆ ಬಗ್ಗದಿದ್ದರೆ ಅಮ್ಮನದು ಚೂರು ಹಠ. ಹಾಗಾದರೆ "ನನಗೆ ಬಿಳಿ ಅನ್ನ /ಬೆಳ್ತಿಗೆ ಅನ್ನ ಮಾಡಿ"ಎನ್ನುವ ಅಣ್ಣ. "ಬೇಡ ಕೆಂಪನ್ನವೇ /ಕುಚ್ಚಿಲನ್ನವೇ ಮಾಡಿ ..ತುಪ್ಪದೊಂದಿಗೆ ಎಷ್ಟು ರುಚಿಯಾಗಿರುತ್ತದೆ..!! "ಎನ್ನುವ ತಮ್ಮ."ಊಟ ಮಾಡುವಿರಾದರೆ ಎರಡು ಬಗೆ ತಯಾರು ಮಾಡುವುದು ಕಷ್ಟವಲ್ಲ" ಎಂದು ಅಡುಗೆ ಮಾಡಿ ಊಟಕ್ಕೆ ಕರೆದರೆ.. "ಬಿಳಿ ಅನ್ನದೊಂದಿಗೆ ಟೊಮೆಟೊ ಉಪ್ಪಿನಕಾಯಿ ಇದ್ದರೆ ರುಚಿ" ಎನ್ನುವ ಅಣ್ಣ. ಸರಿ.. ಚಕಚಕ ಅಂತ ಟೊಮೆಟೊ ಕತ್ತರಿಸಿ  ಉಪ್ಪಿನಕಾಯಿ ರಸ ಸೇರಿಸಿ ಟೊಮೆಟೋ ಉಪ್ಪಿನಕಾಯಿ ತಯಾರು ಮಾಡಿದ್ದಾಯ್ತು.ಅಷ್ಟರಲ್ಲಿ "ಕೆಂಪನ್ನದ ಜೊತೆಗೆ ಮುರಿದು ತಿನ್ನುವುದಕ್ಕೆ  ಅಜ್ಜಿ ಕೊಟ್ಟ ಹಪ್ಪಳ ಅಥವಾ ಅಮ್ಮ ಮಾಡಿದ ಸೆಂಡಿಗೆ  ಕರುಂ ಕುರುಂ ಇದ್ದರೆ ರುಚಿ" ಎಂದು ಕಣ್ಣರಳಿಸುವ ತಮ್ಮ.. ಅದನ್ನು ಕರಿದದ್ದೂ ಆಯ್ತು. ಊಟ ಬಡಿಸುವಾಗ "ಒಂದು ಸೌಟು ಸಾಕು ಸಾಕು.. ಇವತ್ತು ಹಸಿವೆ ಕಡಿಮೆ " ಎನ್ನುವ ರಾಗ.ಊಟ ಸಾಗುವ ಮೊದಲೇ ಹಪ್ಪಳ-ಸೆಂಡಿಗೆ ಖಾಲಿಯಾಗುತ್ತ ಬರುವ ಲಕ್ಷಣ ಕಂಡಾಗ ಈ ಅಮ್ಮನ ಬಾಯಿ ಸುಮ್ಮನಿದ್ದೀತೇ..?  "ಊಟ ಮಾಡಿ ಮೊದಲು ಎಂಬ ಎಚ್ಚರಿಕೆ..!!" . ಊಟ ಮಾಡುತ್ತಿದ್ದಾಗ "ಇನ್ನು ಚೂರು ಬಡಿಸಲಾ..?"  ಎಂದರೆ "ಇಲ್ಲಮ್ಮ ಇನ್ನು ಹೊಟ್ಟೆಯಲ್ಲಿ ಜಾಗವೇ ಇಲ್ಲ.. ಹೊಟ್ಟೆ ತುಂಬಿತು" ಎಂದು ತುಂಟ ನಗು ಬೀರುವ ಮಕ್ಕಳು.

       ಮಧ್ಯಾಹ್ನ ಅಮ್ಮ ಉಂಡು ಸ್ವಲ್ಪ ಕಣ್ಣಡ್ಡ ಮಾಡಿದಾಗ ಮಕ್ಕಳ ಸೈನ್ಯ ಸ್ಟೋರ್ ರೂಮಿಗೆ ನುಗ್ಗಿ ಸದ್ದು ಮಾಡುತ್ತಿತ್ತು. "ಸುಮ್ನಿರು ತಮ್ಮ.. ಏನು ಸದ್ದು ಮಾಡೋದು.. ಅಮ್ಮ ಏಳ್ತಾರೆ.. ಅಷ್ಟು ಗೊತ್ತಾಗಲ್ವಾ...?".. ಮೆಲ್ಲ ಬಂದು ಅಮ್ಮ ಎದ್ದರೇ.. ಅಂತಹ ಗೂಢಾಚಾರಿಕೆ... ಅಬ್ಬಾ..!! ಎದ್ದಿಲ್ಲ ..ಅಂತ ಸಮಾಧಾನಪಟ್ಟುಕೊಂಡು ಹೊರಟು ಹೊಟ್ಟೆ ತುಂಬಾ ಬಿಸ್ಕೆಟ್, ಮಸಾಲೆ ಕಡಲೆ, ನೆಲ ಕಡಲೆ,ಕರಿದ ತಿಂಡಿ ತಿಂದು ತೆರಳುವ ಮಕ್ಕಳು.ಇದನ್ನು ಕಂಡು " ಅರ್ಧಂಬರ್ಧ ಊಟ ಮಾಡಿ ಹೀಗೆ ಜಂಕ್ ಫುಡ್ ಉದರ ಸೇರಿಸಿದರೆ.. ಅನಾರೋಗ್ಯ, ಅಪೌಷ್ಟಿಕತೆ ಕಾಡೀತು. ನಿಮಗೆ  ಮೂರು ಹೊತ್ತು  ದೋಸೆ, ಚಪಾತಿ, ಪುಲಾವ್ ..ಹೀಗೇ ಮಾಡಿಕೊಡುವ" ಎಂದೊಪ್ಪುವ ಅಮ್ಮ. "ಹ್ಹ ಹ್ಹ ಹ್ಹಾ..ಅಮ್ಮ ಸೋತರು... ಇನ್ನು ಒಂದು ಹೊತ್ತಾದರೂ ಅನ್ನ ಉಣ್ಣಿ ಅಂತ ಹೇಳಲ್ಲ"  ಎಂದು ತಾವೇ ಗೆದ್ದಂತೆ ಬೀಗುವ ಮಕ್ಕಳು. ಮಕ್ಕಳೆದುರು ಸೋತಂತೆ ನಟಿಸಿ... ಮಕ್ಕಳು ಹೊಟ್ಟೆತುಂಬಿ ತೇಗಿದಾಗ ಅಮ್ಮನ ಮುಖದಲ್ಲಿ ಸಂತೃಪ್ತಿಯ ನಗೆ.

      ಮಗದೊಮ್ಮೆ "ಇವತ್ತು ದೋಸೆ ಹಿಟ್ಟು ಮುಗಿಯಿತು.. ಊಟ ಮಾಡಿ " ಎಂದ ತಕ್ಷಣ "ನನಗೆ ಹಸಿವೆ ಇಲ್ಲ.." ಎಂದುತ್ತರಿಸಿದ ಅಣ್ಣ. "ಅಣ್ಣಾ ...ಇವತ್ತು ಅಪ್ಪ ಮಸಾಲೆ ಕಡಲೆ ತಂದಿದ್ದಾರೆ... ಬೇಕಾ..." ಎಂದು ಕೇಳಿದ ತಮ್ಮ. "ಎಲ್ಲಿದೆ ..ಆಹಾ..!!"ಕಣ್ಣರಳಿಸಿ ಕೇಳಿದ ಅಣ್ಣ. ತಮ್ಮನೀಗ ಅಪ್ಪ-ಅಮ್ಮನ ಕಡೆ ತಿರುಗಿ '' ಹೇಗಿದೆ..? ನಾನು ಅಣ್ಣನಿಗೆ ಹಸಿವೆ ಇದೆಯಾ ಇಲ್ಲವಾ ಎಂದು ಪರೀಕ್ಷಿಸಿದ್ದು ..ಎರಡು ಸೌಟು ಅನ್ನ ಉಣ್ಣಲಿ... ಹೊಟ್ಟೆಯಲ್ಲಿ ಜಾಗವಿದೆ.." ಎಂದು ನಗುತ್ತಿದ್ದರೆ ಅಣ್ಣ ಪೆಚ್ಚಾದ...ತುಂಟ ತಮ್ಮನ ಆಲೋಚನೆಗೆ ಅಪ್ಪ-ಅಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಂಡು ನಗುತ್ತಿದ್ದಾರೆ.

       ಹೀಗೆ ಮಕ್ಕಳಿದ್ದ ಮನೆಯಲ್ಲಿ ಊಟದ ಹಾಸ್ಯ,ತಂಟೆ,ತಕರಾರು,ಅಮ್ಮಂದಿರ ರಮಿಸುವಿಕೆ,ಮಕ್ಕಳ ರಂಪಾಟ ತಪ್ಪಿದ್ದಲ್ಲ..ಮಕ್ಕಳಿಗೆ ಊಟಮಾಡಿಸಲು ,ಹೊಟ್ಟೆ ತುಂಬಿಸಲು ಕಷ್ಟಪಡುವ ತಾಯಂದಿರು ಕೆಲವು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

1. ಮಕ್ಕಳಿಗೆ ಅತಿಯಾಗಿ ಜಂಕ್ ಫುಡ್ ನೀಡುವುದು ಒಳ್ಳೆಯದಲ್ಲ.ಕರಿದ ತಿಂಡಿ ಆಸೆಪಟ್ಟರೆ ಮನೆಯಲ್ಲೇ ಮಾಡುವುದು ಉತ್ತಮ.

2.ಆಗಾಗ ಬಿಸಿ ನೀರು ಕುಡಿಸುತ್ತಿರಿ.

3.ಮಕ್ಕಳಿಗೆ ಸ್ವಲ್ಪ ಶಾರೀರಿಕ ವ್ಯಾಯಾಮ ದೊರೆಯುವಂತೆ ಮಾಡಿ.
ಅವರಿಗಿಷ್ಟವಾಗುವ ಮನೆಯಡಿಗೆ ಊಟ, ದೋಸೆ, ಪುಲಾವ್..ಯಾವುದಾದರೂ ಜಂಕ್ ಫುಡ್ ಗಿಂತ ಉತ್ತಮ.

4.ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ, ಉಪ್ಪು/ಸಕ್ಕರೆ ಸೇರಿಸಿ ದಿನಕ್ಕೊಮ್ಮೆ ಕುಡಿಯಲು ನೀಡಿ.ಹಸಿವೆ ಹೆಚ್ಚುತ್ತದೆ.

5.ಟಿವಿ ಮುಂದೆ, ಮೊಬೈಲ್ ನೋಡುತ್ತಾ ಊಟಮಾಡುವ ಅಭ್ಯಾಸವನ್ನು ರೂಢಿಮಾಡದಿರಿ.ಆರೋಗ್ಯಕ್ಕೆ ಹಿತವಲ್ಲ.

6.ಮಕ್ಕಳ ಆಹಾರದಲ್ಲಿರುವ ಪೋಷಕಾಂಶಗಳನ್ನು,ಅವರ ದೇಹಕ್ಕೆ ಬೇಕಾಗಿರುವ ಅಂಶಗಳನ್ನು ಆಗಾಗ ಹೇಳುತ್ತಿರಿ.

7.ತರಕಾರಿ ತಿನ್ನಲು ಹಠ ಹಿಡಿವ ಮಕ್ಕಳಿಗೆ ಸಣ್ಣಸಣ್ಣದಾಗಿ ತರಕಾರಿ ಕತ್ತರಿಸಿ ಪುಲಾವ್ ಗೆ ಹಾಕಿ, ಬೇಯಿಸಿ ಚಪಾತಿ ಹಿಟ್ಟಿನಲ್ಲಿ ಸೇರಿಸಿ ನಾದಿ, ದೋಸೆಯಲ್ಲಿ ಟೊಮೆಟೊ,ನೀರುಳ್ಳಿ ಸೇರಿಸಿ ಅಲಂಕಾರಿಕವಾಗಿ ಮಾಡಿಕೊಡಿ.

8.ಅಡುಗೆ ಮಾಡುವಷ್ಟೇ ಪ್ರಾಮುಖ್ಯತೆ ಅದನ್ನು ಮಕ್ಕಳ ಮುಂದೆ ಸುಂದರವಾಗಿ ಕಾಣುವಂತೆ ಜೋಡಿಸಿಡುವುದರಲ್ಲೂ ಇರಲಿ.

9.ಮಕ್ಕಳ ಊಟದಲ್ಲಿ ಮೊಸರು ಇರಲಿ.ಇದು ಹಸಿವೆಯನ್ನು ಹೆಚ್ಚಿಸುತ್ತದೆ.ನೀರು ಮಜ್ಜಿಗೆಗೆ ಉಪ್ಪು ಹಾಕಿ ಕುಡಿಯಲು ಕೊಡಬಹುದು.

10.ರಾತ್ರಿಯೂಟ,ರಜಾ ದಿನಗಳಲ್ಲಿ ಮೂರೂ ಹೊತ್ತು ಕುಟುಂಬದ ಸದಸ್ಯರು ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುವ ಅಭ್ಯಾಸ ರೂಢಿಸಿಕೊಳ್ಳಿ.ಹಿರಿಯರು ಊಟಮಾಡುವ ಶೈಲಿಯನ್ನು ಮಕಳು ಅನುಸರಿಸಲು ಪ್ರಯತ್ನಿಸುತ್ತಾರೆ.

11.ಸಂದರ್ಭ ದೊರೆತಾಗ ನೆಲದ ಮೇಲೆ ಪಂಕ್ತಿ  ಹಾಕಿ ಬಾಳೆಲೆಯಲ್ಲಿ ಊಟ ಮಾಡುವುದನ್ನು ಕಲಿಸಿ.ಬಾಳೆಲೆಯಲ್ಲಿ ಉಂಡರೆ ಜೀರ್ಣಕ್ರಿಯೆಗೆ ಅನುಕೂಲ ಮತ್ತು ದೇಹಾರೋಗ್ಯದ ದೃಷ್ಟಿಯಿಂದ ಹಿತಕರ.

12.ಮಕ್ಕಳಿಗೆ ಹಸಿವೆಯಿಲ್ಲದಿದ್ದರೂ ಒತ್ತಾಯದಿಂದ ತಿನಿಸುವುದು ಒಳ್ಳೆಯದಲ್ಲ.ಹಸಿವೆಯಾದಾಗ ಸತ್ವಭರಿತ ಆಹಾರ ನೀಡಿ.

13.ಮಕ್ಕಳಿಗೆ ಕೇಳಿಸುವಂತೆ ಮನೆಯವರೆದುರು,ನೆಂಟರಿಷ್ಟರೆದುರು ಮಗು ಊಟಮಾಡಲ್ಲ,ಹಠ ಮಾಡುತ್ತಾನೆ, ಜಂಕ್ ಫುಡ್ ಜಾಸ್ತಿ ತಿನ್ನುವುದು, ತರಕಾರಿ ತುಂಡುಗಳನ್ನು ತಿನ್ನಲ್ಲ, ಎತ್ತಿ ಪಕ್ಕದಲ್ಲಿಡುತ್ತಾನೆ..ಎಂದೆಲ್ಲ ಋಣಾತ್ಮಕ ಮಾತುಗಳನ್ನು ಆಡದಿರಿ.ಬದಲಾಗಿ ಉಣ್ಣಲು ಪ್ರೇರೇಪಿಸುವಂತಹ ಧನಾತ್ಮಕ ಮಾತುಗಳಿರಲಿ.ಅವನು ಜಾಣಮರಿ , ಚೆನ್ನಾಗಿ ಉಣ್ಣುತ್ತಾನೆ,ಶಕ್ತಿವಂತನಾಗುತ್ತಾನೆ ..ಈ ರೀತಿಯಾಗಿ 
ಪ್ರೋತ್ಸಾಹದ ನುಡಿಗಳಿರಲಿ.

ಹೀಗೆ ಹಲವಾರು ತಂತ್ರಗಳನ್ನು ಮನಸಿನಲ್ಲಿಟ್ಟುಕೊಂಡು ತಾಯಿ ಮಕ್ಕಳಿಗೆ ಆಹಾರ ನೀಡುತ್ತಿದ್ದರೆ ಹೊಟ್ಟೆತುಂಬಿಸಲು ಹರಸಾಹಸ ಪಡಬೇಕಾಗಿಲ್ಲ.

✍️..ಅನಿತಾ ಜಿ.ಕೆ.ಭಟ್.
29-08-2020.

Momspresso Kannada and Pratilipi Kannada
ದಲ್ಲಿ ಪ್ರಕಟಿತ ಲೇಖನ...
ಅಗಸ್ಟ್ ತಿಂಗಳ ಟಾಪ್ ಬ್ಲಾಗರ್ ಸ್ಪರ್ಧೆಯಲ್ಲಿ ಅತ್ಯುತ್ತಮ ಎಂಟ್ರಿ ಎಂದು ಗುರುತಿಸಲ್ಪಟ್ಟು 500ರೂ
ಬಹುಮಾನ ಗಳಿಸಿದೆ.



Thursday, 27 August 2020

ಯಕ್ಷಗಂಧರ್ವ ರಾಣಿ

 



ಶೀರ್ಷಿಕೆ:-ದೇವಲೋಕದ ಗಂಧರ್ವಯಕ್ಷರಾಣಿ Vs ಭೂಲೋಕದ ಯಕ್ಷಸುಂದರಿ.


ಭೂಲೋಕದ ಮಾಯಾನಗರಿಯಲ್ಲಿ ವಾಸಿಸುತ್ತಿರುವ ಯಕ್ಷಸುಂದರಿ ತನ್ನ ಅನುಯಾಯಿ ಯಕ್ಷಿಣಿ,ಯಕ್ಷಕಿನ್ನರರ ಸಭೆಯನ್ನು ಕರೆದಿದ್ದಳು.  ಎಲ್ಲರೂ ಆಗಮಿಸುತ್ತಿದ್ದರೂ ಯಕ್ಷ ಸುಂದರಿ ಯಾವುದೋ ಚಿಂತೆಯ ಸುಳಿಯಲ್ಲಿ ಸಿಲುಕಿದಂತೆ ಅತ್ತಿಂದಿತ್ತ ಶತಪಥ ತಿರುಗುತ್ತಿದ್ದಳು .. ಆಕೆಯ ಸಹಾಯಕ ಮುಖ್ಯ ಕಿನ್ನರ ಯಕ್ಷ ಸುಂದರಿಯ ಬಳಿ ಬಂದು
"ಯಕ್ಷ ಸುಂದರಿ.. ಎಲ್ಲರೂ ಆಗಮಿಸಿದ್ದಾರೆ ನೀವು ವೇದಿಕೆಯೇರುವುದನ್ನು ಕಾಯುತ್ತಿದ್ದಾರೆ"
"ಮುಖ್ಯ ಕಿನ್ನರ ..ಭ್ರೂಂ ಭ್ರಾಂ ಭ್ರೌಂ... ನನ್ನ ತಲೆ ಹೋಳಾಗುತ್ತಿದೆ.ಸಮಸ್ಯೆಗೊಂದು ಪರಿಹಾರ ದೊರೆತರೆ ಮಾತ್ರ ಅಪಾಯದಿಂದ ಪಾರಾಗಬಹುದು .."
ಮುಖ್ಯ ಕಿನ್ನರ ಮಾತು ಮುಂದುವರಿಸುತ್ತಾ "ಯಕ್ಷಸುಂದರಿ ನಾಡಿನಾದ್ಯಂತ ಇರುವ ನಿಮ್ಮ ಅನುಯಾಯಿಗಳು ಆಗಮಿಸಿದ್ದಾರೆ .. ಏನಾದರೂ ಸಲಹೆ ಸಿಗಬಹುದು ಬನ್ನಿ.. ಮಾತೆ"ಎನ್ನುತ್ತಾ ಯಕ್ಷ ಸುಂದರಿಯನ್ನು ಗೌರವದಿಂದ ವೇದಿಕೆಯ ಬಳಿ ಕರೆದುಕೊಂಡು ಹೋದನು.

ಸುತ್ತಲೂ ಮುಳ್ಳು ಗಿಡಗಂಟಿಗಳು ಬೆಳೆದ ದೊಡ್ಡ ಬಂಡೆಯೇ ವೇದಿಕೆ. ಕೆಳಗಡೆ ಹರಡಿಕೊಂಡಿರುವ ಪುಟ್ಟ ಪುಟ್ಟ ಬಂಡೆಕಲ್ಲುಗಳ ಮೇಲೆ ಅನುಯಾಯಿಗಳು ಆಸೀನರಾಗಿದ್ದಾರೆ.ಎಲ್ಲರ ಮುಖದಲ್ಲೂ ಭಯ ಎದ್ದು ತೋರುತ್ತಿದೆ . ಮಡಕೆಯಲ್ಲಿ ಯಕ್ಷರಸ ಪಾನೀಯವನ್ನು ಅಲ್ಲಲ್ಲಿ ಇರಿಸಲಾಗಿತ್ತು.ಅದನ್ನು ಕುಡಿದು  ..ಭ್ರೂಂ ಭ್ರಾಂ ಭ್ರೌಂ..ಎಂದಾಗ ವಿಶೇಷ ಶಕ್ತಿಯೊಂದು ಮೈಮೇಲೆ ಹರಿದಾಡಿದಂತಾಗಿ ಹೊಸ ಲೋಕಕ್ಕೆ ಕಾಲಿಟ್ಟಂತಾಗುತ್ತಿತ್ತು.

ಯಕ್ಷ ಸುಂದರಿಯನ್ನು ಕಂಡಾಗ ಎಲ್ಲರೂ ಎದ್ದು ನಿಂತು .."ಭ್ರೂಂ ಭ್ರಾಂ ಭ್ರೌಂ.."
ಎಂದು ಉದ್ಗರಿಸಿದರು. ಪ್ರತಿಯೊಬ್ಬರ ಕಣ್ಣಮುಂದೆಯೂ ಯಕ್ಷಸುಂದರಿ ಬಂದು ನಿಂತು ಕಣ್ಣಿನಲ್ಲಿ ಒಂದು ಕಾಂತಿ ಝಳಪಿಸಿ ತಮ್ಮೆಡೆಗೆ ಹರಿಸಿದಂತೆ ಭಾಸವಾಗುತ್ತಿತ್ತು."ನನ್ನ ಪ್ರೀತಿಯ ಯಕ್ಷ ಕಿನ್ನರರೇ,ಅನುಯಾಯಿಗಳೇ ದೇವಲೋಕದ ಗಂಧರ್ವಯಕ್ಷರಾಣಿ ನಮ್ಮ ಲೋಕಕ್ಕೆ ಪಾದಾರ್ಪಣೆ ಮಾಡುವ ಸೂಚನೆ ನನ್ನ ವಿಶೇಷ ಶಕ್ತಿಯಿಂದ ತಿಳಿದುಬಂದಿದೆ. ಈ ಹಿಂದೆ ನಾಲ್ಕು ಬಾರಿ ತಡೆದಿದ್ದೆ. ಇದು 5ನೇ ಬಾರಿ. ಈ ಬಾರಿ ತಡೆಯಲು ಹೊಸ ಉಪಾಯ ಕಂಡು ಹಿಡಿಯುವುದು ಅಗತ್ಯವಾಗಿದೆ. ಒಂದು ಸಾರಿ ಪ್ರಯೋಗಿಸಿದ ತಂತ್ರ ಮತ್ತೊಮ್ಮೆ ಫಲಿಸದು. ಈಗ ನಿಮ್ಮ ಸಹಕಾರ,ಹೊಸ ಉಪಾಯ ನನಗೆ ಬೇಕು..ನೀವು ಏನು ಉಪಾಯ ಸೂಚಿಸುತ್ತೀರಿ..?"

"..ಭ್ರೂಂ ಭ್ರಾಂ ಭ್ರೌಂ.." ಎಂಬ ಉದ್ಗಾರ ಸಭೆಯಿಂದ ಬಂತು. ಯಾರೂ ಎದ್ದು ನಿಲ್ಲುವ ಲಕ್ಷಣ ಕಾಣಲಿಲ್ಲ. "ಯಾರೂ ಇಲ್ಲವೇ..? ನನ್ನ ಅನುಯಾಯಿಗಳಲ್ಲಿ ಬುದ್ಧಿವಂತರು..!!" ಎಂದು ಕೇಳುತ್ತಿದ್ದಂತೆ ಕೊನೆಯ ಸಾಲಿನಲ್ಲಿ ಕುಳಿತಿದ್ದ ಮುದಿ ಯಕ್ಷಿಣಿ ಮೆಲ್ಲನೆ ಎದ್ದು ನಿಂತಳು. "ಹ್ಹ..ಹ್ಹ..ಹ್ಹ.. ಇವಳೇನು ಮಹಾ?" ಎಂಬಂತಹ ತಾತ್ಸಾರದ ನೋಟ ಯಕ್ಷ ಸುಂದರಿಯ ಕಡೆಯಿಂದ ಬಂತು.

"ಯಕ್ಷ ಸುಂದರಿಗೆ ಪ್ರಣಾಮಗಳು. ನಾನು ಅಮರಾಪಟ್ಟಣದ ಯಕ್ಷಿಣಿ .ದೇವಲೋಕದ ಗಂಧರ್ವಯಕ್ಷರಾಣಿ ಬಂದಾಗ ಸತ್ಕಾರಕ್ಕೆ ಸುಗಂಧಭರಿತ ,ವಿಷಪೂರಿತ 'ಮೃತ್ಯುಫಲ'ವನ್ನು ನೀಡೋಣ .ನಮ್ಮ ಪಟ್ಟಣದಲ್ಲಿ ಬೆಟ್ಟವೊಂದರ ತುದಿಯಲ್ಲಿ 'ಮೃತ್ಯುಫಲ'ದ ಮರವಿದೆ .ಆ ಬೆಟ್ಟದ ಬುಡದಲ್ಲಿನ ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಗುಹಾಬಾಬಾ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನು ಸಂತೃಪ್ತಿ ಪಡಿಸಿದವರು ಮಾತ್ರ ಫಲಗಳನ್ನು ಕೊಯ್ದು ತರಬಹುದು."
"ಹೌದೇ ..? ಹಾಗಾದರೆ ಇನ್ನೇಕೆ ತಡ.. ಈ ಕಾರ್ಯಕ್ಕೆ ಯಾರೆಲ್ಲ ಸಿದ್ಧವಿದ್ದೀರಿ..?"

ಎಲ್ಲರೂ ಮುಖ ಮುಖ ನೋಡಿಕೊಂಡರು. ಎಲ್ಲಿಯಾದರೂ ಗುಹಾಬಾಬಾನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸೋತರೆ ,ಯಕ್ಷಸುಂದರಿಯು ನಮ್ಮನ್ನು ಶಿಕ್ಷಿಸದೆ ಬಿಡಲಾರಳು ಎಂಬ ಭಯ ಎಲ್ಲರಿಗೂ ಕಾಡಿತು. ಯಕ್ಷ ಸುಂದರಿ ತನ್ನ ಮುಖ್ಯ ಕಿನ್ನರನನ್ನು ಕರೆದು"ಯಾರೂ ಮುಂದೆ ಬರುತ್ತಿಲ್ಲ.. ನಾನೇ ಈ ಕೆಲಸ ಮಾಡುತ್ತೇನೆ. ಮುಖ್ಯ ಕಿನ್ನರ... ನೀನು ಹಾಗೂ ನಿನ್ನ ಸಹಾಯಕ ಕಿನ್ನರ ..ಇಬ್ಬರೂ ನನ್ನ ಜೊತೆಗೆ ಬನ್ನಿ."

"ಅಪ್ಪಣೆಯಾಗಲಿ..ಯಕ್ಷಸುಂದರಿ"ಎನ್ನುತ್ತಾ ಬಾಗಿದ.

ಮುದಿ ಯಕ್ಷಿಣಿ ದಾರಿ ತೋರಿಸಿದಲ್ಲಿ ಸಾಗಿ ಅಮರಾಪಟ್ಟಣಕ್ಕೆ ತಲುಪಿದರು.ಬೆಟ್ಟದ ಬುಡದಲ್ಲಿರುವ ಗುಹೆಯ ಜಾಗಕ್ಕೆ ಎಲ್ಲರೂ  ಬಂದರು . ಹೊರಗೆ ನಿಂತಿದ್ದ ಗುಹಾ ಬಾಬಾನ ಬಂಟರು "ಬಾಬಾ ಧ್ಯಾನದಲ್ಲಿದ್ದಾರೆ.ಒಬ್ಬರು ಒಳಗಡೆ ಹೋಗಿ ಸ್ವಲ್ಪ ಹೊತ್ತು ಧ್ಯಾನ ಮಾಡಿ. ಆಗ ಮಾತನಾಡುತ್ತಾರೆ "ಎಂದರು. ಯಕ್ಷ ಸುಂದರಿ ಒಳಗಡೆ ತೆರಳಿದಳು.ಯಕ್ಷ ಕಿಂಕರರು ಹೊರಗಡೆ ಕಾದರು.

**********

ದೇವಲೋಕದ ಗಂಧರ್ವಯಕ್ಷರಾಣಿಗೆ ಭೂಲೋಕದಿಂದ ದೂರುಗಳು ಬರುತ್ತಿದ್ದವು. ಜನರು ಭೂಲೋಕದ ಯಕ್ಷಸುಂದರಿಯ ಕಿರುಕುಳದಿಂದ ಬೇಸತ್ತಿದ್ದರು. ಸಾಮಾನ್ಯ ಜನರಿಗೂ ತೊಂದರೆ ನೀಡಿ ತನಗೆ ಬೇಕಾದಂತೆ ನಡೆಸಿಕೊಳ್ಳುತ್ತಿದ್ದಳು ಭೂಲೋಕದ ಯಕ್ಷಸುಂದರಿ.ಅಷ್ಟೇ ಅಲ್ಲ ಗಂಧರ್ವಯಕ್ಷರಾಣಿಯ ಭೂಲೋಕದ ಅನುಯಾಯಿಗಳನ್ನು ಕೂಡ ಬಲಾತ್ಕಾರದಿಂದ ತನ್ನ ಮುಷ್ಟಿಯೊಳಗೆ ಇಟ್ಟುಕೊಂಡಿದ್ದಳು. ತನ್ನ ಅನುಯಾಯಿಗಳನ್ನು ಮತ್ತು ಸಾಮಾನ್ಯ ಜನರನ್ನು ರಕ್ಷಿಸುವ ಸಲುವಾಗಿ ಗಂಧರ್ವಯಕ್ಷರಾಣಿ ಭೂಲೋಕದತ್ತ ಸಂಚಾರ ಹೊರಟರು. ಜೊತೆಗೆ ಆಕೆಯ ಸಹಚರರ ದಂಡೂ ಇದ್ದಿತು. "ಕಿಂ...ಕಿಣಿ...ಕಿಣಿ .....'ಪಂಚಮಂ ಕಾರ್ಯಸಿದ್ಧಿ'ಎಂಬ ಮಾತಿದೆ . ಮೊದಲು ನಾಲ್ಕು ಬಾರಿ ಭೂಲೋಕ ತಲುಪಲು ಸಾಧ್ಯವಾಗದೆ ಹಿಂದಿರುಗಬೇಕಾಯಿತು. ಈ ಬಾರಿ ತಪೋನಿರತಳಾಗಿ ಶಕ್ತಿ ಪಡೆದುಕೊಂಡು ಹೊರಟಿದ್ದೇನೆ.. ನೋಡೋಣ."ಎಂದರು ಗಂಧರ್ವಯಕ್ಷರಾಣಿ.

"ಯಕ್ಷರಾಣಿ ..ಈ ಮೊದಲು ಏನೇನು ಅಡೆತಡೆ ಬಂದಿತ್ತು..?" ಎಂದು ಅನುಯಾಯಿಯೊಬ್ಬ ಕೇಳಿದ.

"ನಮ್ಮ ಬರುವಿಕೆಯು ಭೂಲೋಕದ ಯಕ್ಷಸುಂದರಿಗೆ ತಿಳಿದುಬಿಡುತ್ತಿತ್ತು.ಪ್ರತಿತಂತ್ರ ಪ್ರಯೋಗಿಸುತ್ತಿದ್ದಳು. ಒಮ್ಮೆ ಬೃಹತ್ತಾದ ಜೇನುಹಿಂಡು ಅಟ್ಟಾಡಿಸಿಕೊಂಡು ಬಂದಿದ್ದವು, ಮತ್ತೊಮ್ಮೆ ಕಾರ್ಮೋಡಗಳು ನಮ್ಮ ದಾರಿಗೆ ಅಡ್ಡವಾಗಿದ್ದವು, ಇನ್ನೊಮ್ಮೆ ರಣಹದ್ದುಗಳು ನಮ್ಮನ್ನು ಕುಕ್ಕುವಂತೆ ಅಟ್ಟಿಸಿಕೊಂಡು ಬಂದಿದ್ದವು. ನಾಲ್ಕನೇ ಬಾರಿ ಕಣ್ಣುಕೋರೈಸುವ ವಿದ್ಯುದ್ದೀಪಗಳಿಂದ ನಮ್ಮ ಕಣ್ಣುಗಳು ಮಂಜಾಗಿ ಮುಂದಿನ ದಾರಿ ಕಾಣದೆ ಹಿಂದಿರುಗಬೇಕಾಯಿತು. ಈ ಬಾರಿ ಗೆಲ್ಲಲೇಬೇಕು .ಭೂಲೋಕದಲ್ಲಿ ಯಕ್ಷಸುಂದರಿಯಿಂದ ನನ್ನ ಅನುಯಾಯಿಗಳನ್ನು ಮತ್ತು ಮುಗ್ಧಜನರನ್ನು ರಕ್ಷಿಸಬೇಕು."

"ಸರಿ ಗಂಧರ್ವಯಕ್ಷರಾಣಿ ..ನಿಮಗೆ ಜಯವಾಗಲಿ"
ಕಿಂ...ಕಿಣಿ...ಕಿಣಿ..ಎನ್ನುತ್ತಾ ಭೂಲೋಕದತ್ತ ಹೊರಟರು.

*********

"ಯಕ್ಷ ಸುಂದರಿ... ಯಕ್ಷ ಸುಂದರಿ.. " ಗುಹೆಯ ಹೊರಗಿನಿಂದ ಕೂಗುತ್ತಿದ್ದಾನೆ ಮುಖ್ಯ ಕಿನ್ನರ. ಗುಹಾ ಬಾಬಾ ಧ್ಯಾನದಿಂದೆದ್ದು ಯಕ್ಷಸುಂದರಿಯತ್ತ ಒಂದು ತೀಕ್ಷ್ಣ ನೋಟ ಹರಿಸಿದ.ಅಷ್ಟರಲ್ಲಿ ಹೊರಗಿನಿಂದ ಕರೆಯುವುದು ಕೇಳಿ ಕಿರಿಕಿರಿ ಅನುಭವಿಸುತ್ತಾ "ಯಾರದು ..?" ಎಂದು ಗಡುಸಾಗಿ ಕೇಳಿದ..

"ಅದು ನನ್ನ ಸಹಚರನ ದನಿ.."
"ಇಲ್ಲಿ ದನಿಯೆತ್ತಿ ಕೂಗುವಂತಿಲ್ಲ..ಇಲ್ಲಿ ನಿದ್ರಿಸಿದ ಆತ್ಮಗಳಿಗೆ ತೊಂದರೆಯಾಗುತ್ತದೆ. ನಿಯಮ ಪಾಲಿಸದವರಿಗೆ ಇಲ್ಲಿ ಜಾಗವಿಲ್ಲ ..ನಡೆಯಿರಿ.."

"ಇಲ್ಲ ಬಾಬಾ ..ಮುಂದೆ ಹೀಗಾಗಲ್ಲ.. ನಾನು ಇಲ್ಲಿಂದಲೇ ಅವನಿಗೆ ವಿಶೇಷ ಶಕ್ತಿಯ ಮೂಲಕ ತಿಳಿ ಹೇಳುತ್ತೇನೆ ..ದಯಮಾಡಿ.. ನೀವು ಪ್ರಶ್ನೆಗಳನ್ನು ಕೇಳಿ..ಉತ್ತರಿಸಲು ಸಿದ್ಧಳಿದ್ದೇನೆ.."

"ಆ ಸ್ವರದಿಂದ ಇಲ್ಲಿನ ಶಕ್ತಿ ಸಂಚಯನ ಏರುಪೇರಾಗಿದೆ ..ಹೊರಡಿ ಇಲ್ಲಿಂದ.." ಕ್ರುದ್ಧನಾದ..ಬಾಬಾ.. ಬೇರೆ ದಾರಿಯಿಲ್ಲದೆ ಹೊರಬಂದಳು ಯಕ್ಷಸುಂದರಿ..

"ಯಕ್ಷ ಸುಂದರಿ..ಯಕ್ಷಸುಂದರಿ... ಗಂಧರ್ವಯಕ್ಷರಾಣಿ ಭೂಲೋಕದತ್ತ ಹೊರಟಿದ್ದಾರಂತೆ...ಬೇಗ 'ಮೃತ್ಯುಫಲ' ಕೊಯ್ಯೋಣ ..ಬನ್ನಿ ಹೊರಡೋಣ .."ಎಂದ ಮುಖ್ಯ ಕಿನ್ನರ..

"ನನ್ನಲ್ಲಿ ಇನ್ನೊಮ್ಮೆ ಮಾತನಾಡಬೇಡ.. ನಿನ್ನ ಈ ಆತುರ ಗುಣದಿಂದ ಎಲ್ಲವೂ ಹಾಳಾಯಿತು.. ಬಾಬಾ ಪ್ರಶ್ನೆ ಕೇಳಲಿಲ್ಲ.."

"ಪ್ರಶ್ನೆ ಕೇಳದಿದ್ದರೆ ಏನಂತೆ ..ನಾವು ಬೆಟ್ಟವೇರಿ ಮೃತ್ಯುಫಲವನ್ನು ಕೊಯ್ದುಕೊಳ್ಳೋಣ.."
ಎನ್ನುತ್ತಿದ್ದಂತೆ ಗುಹೆಯೊಳಗಿನಿಂದ ಬೆಂಕಿಯುಂಡೆ ಒಂದು ಹೊರಬಂದು ಮುಖ್ಯ ಕಿನ್ನರನ ಮೇಲೆ ಬಿದ್ದಿತ್ತು. ಆತ ಬೊಬ್ಬಿಡುತ್ತಾ ಪ್ರಾಣತೆತ್ತ.
ಮುದಿ ಯಕ್ಷಿಣೆ "ಇಲ್ಲಿ ನಿಯಮವನ್ನು ಪಾಲಿಸದವರಿಗೆ ಉಳಿಗಾಲವಿಲ್ಲ. ಯಕ್ಷಸುಂದರಿ.. ನಾವು ಗುಹಾಬಾಬಾನ ಒಪ್ಪಿಗೆಯಿಲ್ಲದೆ 'ಮೃತ್ಯುಫಲ'ವನ್ನು ಕೊಯ್ಯುವುದು ಸಾಧ್ಯವಿಲ್ಲ.. ನೀವು ನಿಮ್ಮ ಮಾಯಾನಗರಿಗೆ ಹಿಂದಿರುಗಿ.."ಎಂದರು.
ನಿರಾಶಾಭಾವದಿಂದ ಇನ್ನೇನಾದರೂ ಉಪಾಯ ಹೊಳೆಯುತ್ತದೆಯೇ ಎಂದು ಚಿಂತಿಸುತ್ತಾ ಯಕ್ಷಸುಂದರಿ ಉಳಿದ ಒಬ್ಬ ಸಹಚರರೊಂದಿಗೆ ಮಾಯಾನಗರಿಗೆ ಹಿಂತಿರುಗಿದಳು.

***********

ಗಂಧರ್ವಯಕ್ಷರಾಣಿ ತನ್ನ ಸಹಚರರೊಂದಿಗೆ ಭೂಲೋಕಕ್ಕೆ ಪಾದಾರ್ಪಣೆ ಮಾಡಿದ್ದಾಯಿತು. "ಓಹೋ.. ಈ ದಿನ ನನ್ನ ಪಾಲಿಗೆ ಸೂರ್ಯ ಪಶ್ಚಿಮದಲ್ಲಿ ಉದಯಿಸಿದ್ದಾನೆ" ಎನ್ನುತ್ತಾ ಪ್ರಕೃತಿ ಸಿರಿಯನ್ನು ನೋಡಿ ಬೆರಗುಗಣ್ಣಿನಿಂದ ಆಸ್ವಾದಿಸುತ್ತಾ ವಿಹಾರ ಹೊರಟಳು.ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಧರಣಿದೇವಿ ಚಿಲಿಪಿಲಿಗುಟ್ಟುತ್ತಿರುವ ಪಕ್ಷಿಸಂಕುಲ, ಅಂಬಾಕಾರಗೈಯುತ್ತಿರುವ ಗೋವುಗಳು, ರಸಭರಿತ ಫಲಗಳನ್ನು ತುಂಬಿ ಬಾಗಿರುವಂತಹ ವೃಕ್ಷಗಳು, ಸುಗಂಧಭರಿತ ಹೂಗಳನ್ನು ಆಘ್ರಾಣಿಸುತ್ತಾ ಉಲ್ಲಸಿತಳಾದಳು. ಗಂಧರ್ವಯಕ್ಷರಾಣಿ ಬಂದಿರುವ ಸುದ್ದಿ ಭೂಲೋಕದಲ್ಲೆಡೆ ಮಿಂಚಿನಂತೆ ಪಸರಿಸಿತು. ಸುದ್ದಿ ತಿಳಿದ ಆಕೆಯ ಅನುಯಾಯಿಗಳು ಆಕೆಯ ಭೇಟಿಗೆಂದು ಆಗಮಿಸಿದರು. ಮಾಯಾನಗರಿಯ ಯಕ್ಷಸುಂದರಿ  ಕೊಡುತ್ತಿರುವ ಕಾಟಗಳನ್ನು ಹೇಳಿ ಕಣ್ಣೀರು ಸುರಿಸಿದರು." ನಮ್ಮನ್ನು ಅವಳಿಂದ ಪಾರುಮಾಡಿ" ಎಂದು ಗೋಳಿಟ್ಟರು. "ಕಿಂ...ಕಿಣಿ...ಕಿಣಿ..ಇನ್ನು ಮುಂದೆ ಅವಳ ಆಟ ನಡೆಯದು" ಎಂದು  ಗಂಧರ್ವಯಕ್ಷರಾಣಿ ಅಭಯವಿತ್ತರು.

ಇದನ್ನರಿತ ಭೂಲೋಕದ ಮಾಯಾನಗರಿಯ ಯಕ್ಷಸುಂದರಿ ಮೋಸದ ಸಂಚು ರೂಪಿಸಿ ಗಂಧರ್ವಯಕ್ಷರಾಣಿಯನ್ನು ಮಾಯಾನಗರಿಗೆ ಕರೆಸಿಕೊಂಡರು.ಗಂಧರ್ವಯಕ್ಷರಾಣಿ ಬರುತ್ತಿದ್ದಂತೆಯೇ ಮಾಯಾನಗರಿಯ ತುಂಬಾ ಹೊಗೆ ಹಾಕಿ ಉಸಿರುಗಟ್ಟಿಸುವ ತಂತ್ರ ನಡೆಸಿದ್ದರು. ಗಂಧರ್ವಯಕ್ಷರಾಣಿ ತನ್ನ ತಪೋಶಕ್ತಿಯಿಂದ ಅದನ್ನು ಭೇದಿಸಿ ಆತಿಥ್ಯ ಸ್ವೀಕರಿಸಿ ತೆರಳಿದಾಗ.. ತನ್ನಿಂತಾನೇ ಮಾಯಾನಗರಿಗೆ ಹೊಗೆ ಮುತ್ತಿಕೊಂಡಿತು. ಭೂಲೋಕದ ಯಕ್ಷಸುಂದರಿ ಮತ್ತು ಆಕೆಯ ಅನುಯಾಯಿಗಳಾದ ಕಿಂಕರರು ಹೊಗೆಯಿಂದ ಹೊರಬರಲಾಗದೆ ಉಸಿರುಗಟ್ಟಿ ಚಡಪಡಿಸಿದರು. ಸಹಾಯಕ್ಕಾಗಿ ಗಂಧರ್ವಯಕ್ಷರಾಣಿಯನ್ನು ಕೋರಿಕೊಂಡರು. "ಯಕ್ಷ ವಿದ್ಯೆಯನ್ನು ಬಳಸಿ ಯಾರಿಗೂ ತೊಂದರೆ ಕೊಡುವುದಿಲ್ಲ ಎಂಬ ಮಾತಿಗೆ ಒಪ್ಪಿದರೆ ಮಾತ್ರ ಪಾರುಮಾಡುವೆ "ಎಂದು ಗಂಧರ್ವಯಕ್ಷರಾಣಿ ಷರತ್ತು ವಿಧಿಸಿದಳು.
ಬೇರೆ ದಾರಿಯಿಲ್ಲದೆ ತನ್ನ ತಪ್ಪನ್ನು ಒಪ್ಪಿಕೊಂಡು, ಮುಂದೆ ತಿದ್ದಿಕೊಳ್ಳುತ್ತೇನೆ ಎಂದಳು ಭೂಲೋಕದ ಮಾಯಾನಗರಿಯ ಯಕ್ಷಸುಂದರಿ...ಗಂಧರ್ವಯಕ್ಷರಾಣಿ ಕಿಂ ಕಿಣಿ ಕಿಣಿ ಎನ್ನುತ್ತಾ ತನ್ನ ತಪೋಶಕ್ತಿಯನ್ನು ಬಳಸಿ ಹೊಗೆಯಿಂದ ಭೂಲೋಕದ ಯಕ್ಷಸುಂದರಿ ಮತ್ತು ಆಕೆಯ ಅನುಯಾಯಿಗಳನ್ನು ಕಾಪಾಡಿದಳು. "ನಿಜವಾಗಿಯೂ ಇಂದು  ನನ್ನ ಪಾಲಿಗೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗಿದ್ದಾನೆ ..ಬಹಳ ದಿನಗಳಿಂದ ಸಾಧ್ಯವಾಗದ ಕಾರ್ಯವಿಂದು ನೆರವೇರಿದೆ.." ಎನ್ನುತ್ತಾ ಗಂಧರ್ವಲೋಕಕ್ಕೆ ವಾಪಾಸಾದರು.

✍️...ಅನಿತಾ ಜಿ.ಕೆ.ಭಟ್.
26-08-2020.

Momspresso Kannada_ವಾರದ ಬ್ಲಾಗಿಂಗ್ ಸ್ಪರ್ಧೆ-fantasy story-ಆ ದಿನ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ ಪೂರ್ವದಲ್ಲಿ ಮುಳುಗಿದ್ದಾನೆ.

ಮಾತೆ ಚೇತನ-ದೇಶಭಕ್ತಿ ಗೀತೆ/kannada patriotic song

 


#ಮಾತೆ_ಚೇತನ

ಒಡಲ ಕುಡಿಗಳಿಗೆಲ್ಲ ಚೇತನ
ಮಾತೆ ತುಂಬುತ ಸಂತತ
ಸೋಲನರಿಯದ ಅಶ್ವವಾಗಿಹೆ
ವಿಶ್ವಗುರು ನೀ ಭಾರತ..||೧||

ಕಲೆಯ ಸೆಲೆಯು ಕಡಲ ಅಲೆಯು
ಚಿಮ್ಮುತಿಹುದು ನಿತ್ಯವೂ
ವೀರಮಣಿಗಳ ಜ್ಞಾನಗಣಿಗಳ
ಮಡಿಲು ನಿನ್ನದು ಸತ್ಯವು..||೨||

ಸಮಸ್ತ ಲೋಕದ ಹಿತವ ಬಯಸುವ
ಶ್ರೇಷ್ಠ ನಿನ್ನ ಚಿಂತನೆ
ಕೇಡು ಕಲಿಗಳ ಸೇಡಿನುಲಿಗಳ
ಮಟ್ಟಗೈಯ್ಯುವೆ ಕುಲವನೇ..||೩||

ಸಂತ ಮಹಿಮರು ಸಿರಿಯ ತುಹಿನವು
ವೇದಶಾಸ್ತ್ರ ಪುರಾಣವು
ಕ್ಷಿಪಣಿ ಶೋಧನೆ ನವೀನ ಸಾಧನೆ
ತಂತ್ರಜ್ಞಾನ ನಾಗಾಲೋಟವು...||೪||

ವಸುದೈವಕುಟುಂಬಂ ವಂದೇಗೋಮಾತರಂ
ನಿನ್ನ ನಿತ್ಯ ತತ್ವವು
ಪೂಜ್ಯ ಆತಿಥ್ಯತೆ ಮಾತೆ ದೇವತೆ
ಐಕ್ಯತೆಯೆ  ಮಣ್ಣಕಣದ ಸತ್ವವು...||೫||

ಮಾನವೀಯತೆ ಪರಹಿತ ಸ್ನೇಹದಿ
ಬರೆದೆ ಜಯದ ಭಾಷ್ಯವ
ಕಾರ್ಯತಂತ್ರ ಶಾಂತಿಮಂತ್ರ
ಜ್ಞಾನಸೂತ್ರದಿ ಸೆಳೆದ ನೀ ವಿಶ್ವವ..||೬||

✍️...ಅನಿತಾ ಜಿಕೆ ಭಟ್
27-08-2020.


ಮಳೆಹನಿಯ ಕಹಾನಿ

 



ಮಳೆಹನಿಯ ಕಹಾನಿ


   ಬಾಲ್ಯದ ನೆನಪಿನ ಪುಟ ತೆರೆದು ಮಳೆಯ ಸಿಹಿಕಹಿ ಅನುಭವಗಳ ಬಗ್ಗೆ ಬರೆಯಲು ಹೊರಟರೆ ತುಂತುರು ಹನಿಯಿಂದ ಆರಂಭಿಸಿ ಹನಿಕಡಿಯದ ವರ್ಷಧಾರೆಯೇ ಆಗಬಹುದು.ಮಳೆಯೆಂದರೆ ಹಾಗೆನೇ ಭಾವಗಳ ಮಳೆ, ಪ್ರೀತಿ ಕಾರಂಜಿ ಸುರಿಸಿದ ಮಳೆ,ನೀರಾಟವಾಡಿ ಅಮ್ಮನ ಬೈಗುಳದ ಸುರಿಮಳೆ, ಅನಾರೋಗ್ಯದ ಹೈರಾಣಗಳು..


     ನಮ್ಮ ಕರಾವಳಿಯಲ್ಲಿ ಮಳೆಯ ಅಬ್ಬರ ಜೋರು. ಮೇ ತಿಂಗಳಲ್ಲೇ ಗುಡುಗು ಸಿಡಿಲು ಮಿಂಚಿನ ಆರ್ಭಟ ಆರಂಭವಾಗುತ್ತದೆ.ಮಳೆ ಸುರಿಯುವ ಲಕ್ಷಣಗಳು ಕಂಡಾಗ ಅಂಗಳದಲ್ಲಿ ಹರವಿದ್ದ ಹಲಸಿನ ಹಪ್ಪಳ,ಗೇರುಬೀಜ,ಅಲ್ಪ ಸ್ವಲ್ಪ ಅಡಿಕೆ, ಪುನರ್ಪುಳಿ/ಕೋಕಂ ಸಿಪ್ಪೆ... ಎಲ್ಲವನ್ನೂ ಗಡಿಬಿಡಿಯಿಂದ ಒಳಗೊಯ್ಯುವುದೂ ಒಂದು ಸವಾಲಿನ ಕೆಲಸ.ಅತಿಕಡಿಮೆ ಅವಧಿಯಲ್ಲಿ ನಡೆಯಬೇಕಾದ ಈ ಕೆಲಸಗಳಿಗೆ ಹಿರಿಕಿರಿಯರೆನ್ನದೆ ಎಲ್ಲರೂ ಕೈಜೋಡಿಸುವುದರಲ್ಲೂ ಆನಂದವಿದೆ. ಒಳಗೊಯ್ಯುವ ಮೊದಲೇ ಧೋ..ಎಂದು ಮಳೆ ಸುರಿದರೆ ಮನದೊಳಗೆ ಒಂಥರಾ ನಿರಾಸೆಯ ಭಾವ..ಮೊದಲ ಮಳೆ ಹನಿ ಕಾದ ಇಳೆಯ ಮಡಿಲಿಗೆ ಬಿದ್ದಾಗ ಹೊರಸೂಸುವ ಪರಿಮಳ ಆಘ್ರಾಣಿಸಲು ಮೈಯ ಕಣಕಣವೆಲ್ಲಾ ಪುಳಕ..ಮಳೆ ಬಿದ್ದು ಒಂದೆರಡು ದಿನ ಕಳೆಯುತ್ತಿದ್ದಂತೆ ಚಿಗುರುವ ಹುಲ್ಲುಗಳು ಕಣ್ಣಿಗೆ ಸೊಬಗನುಣಿಸುತ್ತವೆ.ಸೆಕೆ ವಿಪರೀತವಿದ್ದು ಮಳೆ ಬರುವ ಸೂಚನೆಯೆಂದು ಹೇಳಲಾಗುವ ಪುಟ್ಟ ಮಿಡತೆಗಳ ಹಾರಾಟ..ಅಬ್ಬಾ ..!! ಮಣ್ಣಿನೆಡೆಯ ಸಣ್ಣ ತೂತಿನೊಳಗಿಂದ ಹೊರಬರುವ ಅವುಗಳ ದಂಡು ನೋಡಿದರೆ ಆಶ್ಚರ್ಯವಾಗುತ್ತದೆ.ಸಣ್ಣ ಜಾಗದಲ್ಲಿ ಹೊಂದಾಣಿಕೆಯಿಂದ ಬದುಕುವ ಅವುಗಳನ್ನು ನೋಡಿ ನಾವು ಕಲಿಯುವುದು ಸಾಕಷ್ಟಿದೆ. ಹೊರಗಡೆ ವಿದ್ಯುದ್ದೀಪಗಳಿಂದ ಆಕರ್ಷಿಸಲ್ಪಟ್ಟು ರಾಶಿ  ರಾಶಿ ಹುಳಗಳು ಕೆಳಗುರುಳುವಾಗ ಮನಸಿಗೆ ಸಂಕಟ.



      ವರ್ಷದ ನಾಲ್ಕು ತಿಂಗಳು ಮಳೆಯಾಗಿ ಮತ್ತೂ ಎರಡು ತಿಂಗಳು ಆಗಾಗ ಮಳೆ ಕಾಣಿಸಿಕೊಳ್ಳುತ್ತದೆ.ಭೂದೇವಿ ಹಸಿರುಟ್ಟು ಕಂಗೊಳಿಸುವ ದೃಶ್ಯ ಆಹ್ಲಾದಕರ.ಹಳ್ಳ ಕೊಳ್ಳಗಳು,ತೋಡು, ನದಿಗಳು ಕೆನ್ನೀರಿನಿಂದ ಉಕ್ಕಿ ಹರಿಯುತ್ತವೆ.ಅಂಗಳದ ಪಕ್ಕದಲ್ಲಿ ಮಾಡಿದ ಪುಟ್ಟ ಕಣಿಯಲ್ಲಿ ತುಂಬ ಶುಭ್ರನೀರು.ಸಂಭ್ರಮದಿಂದ ಓಡುವ ಪುಟ್ಟ ಮೀನುಗಳು.ಇಂತಹ ಕಣಿಗಳಲ್ಲಿ ಅನ್ನದ ಪಾತ್ರೆ,ಇಡ್ಲಿತಟ್ಟೆ,ಸೇಮಿಗೆ ಗೊಣೆ ಎಲ್ಲವನ್ನು ನೆನೆಯಲು ಹಾಕಿದರೆ ನೆನೆದಂತೆಯೂ ಆಯಿತು,ಮೀನಿಗೆ ಆಹಾರವೂ ಆಯಿತು ಎಂಬ ಉದಾರ ಬುದ್ಧಿ ಮನೆಯ ಹೆಣ್ಣುಮಕ್ಕಳದು.


      ಕರಾವಳಿ ಬೆಟ್ಟ ಗುಡ್ಡಗಳ ಪ್ರದೇಶ.ಮನೆಗಳು ಗುಡ್ಡದ ಭಾಗದಲ್ಲಿದ್ದು ಕೆಳಗಿನ ಭಾಗದಲ್ಲಿ ಅಡಿಕೆ ತೋಟ, ತೆಂಗಿನ ತೋಟ,ಸಮತಟ್ಟಾದ ಜಾಗದಲ್ಲಿ ಭತ್ತದ ಗದ್ದೆಗಳು ಇರುವುದು ಸಾಮಾನ್ಯವಾಗಿ ಕಂಡುಬರುವ ಸಂಗತಿ.ನಮ್ಮ ಮನೆ ಕೂಡ ಇದೇ ರೀತಿ ಇತ್ತು,ಇದೆ.ಮಳೆಗಾಲದ ದಿನಗಳಲ್ಲಿ ನಾವು ಶಾಲೆಯಿಂದ ಬಂದ ಕೂಡಲೇ ಕಾಗದದ ದೋಣಿ ನೀರಲ್ಲಿ ಬಿಡುವುದು ಸಾಮಾನ್ಯವಾಗಿತ್ತು. ಶನಿವಾರದಂದು ಶಾಲೆ ಅರ್ಧ ದಿನ.ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಮನೆಯಿಂದ ಕೆಳಗಿಳಿದು ತೋಟ ಗದ್ದೆಗಳಿಗೆ ತೆರಳಿದರೆ ಬರುತ್ತಿದ್ದುದು ಹಿರಿಯರ ಕೂ...ಎಂಬ ಕರೆ ಕೇಳಿದ ಮೇಲೆ.ಗುಡ್ಡ ಪ್ರದೇಶದಲ್ಲಿ ಮರಗಳ ನಡುವೆ ಇಂಗಿದ ಮಳೆಯ ನೀರು ತೋಟ ಗದ್ದೆಗಳಲ್ಲಿ ಒಸರಾಗಿ ಝುಳು ಝುಳು ನಿನಾದದೊಂದಿಗೆ ಹರಿಯುತ್ತಿತ್ತು.ಶುಭ್ರನೀರಿನ ಪುಟ್ಟ ಪುಟ್ಟ ಝರಿಗಳು ನಮ್ಮ ಆಟಕೆ ಸಾಕ್ಷಿಯಾಗಿ ಕೆಂಪೇರುತ್ತಿದ್ದವು.


        ನೀರ ಝರಿಗಳಲ್ಲಿ ಪುಟ್ಟ ಪುಟ್ಟ ಮೀನುಗಳು... ಅವುಗಳಿಗೆ ಬಟ್ಟೆಹಾರಿಸುವುದು ..ಏನೋ ತಿನ್ನಲು ಸಿಗಬಹುದೆಂದು ಅವು ಆಸೆಪಟ್ಟು ಬಂದಾಗ ಬಟ್ಟೆಯ ಬದಿ ಹಿಡಿದು ಮೇಲೆತ್ತುವುದು ... ಹೀಗೆ ಮೀನಿನ ಮರಿಗಳಿಗೆ ಕಾಟ ಕೊಡುತ್ತಿದ್ದೆವು..ಮತ್ತೆ ನೀರಿಗೆ ಬಿಡುವಾಗ ಅವುಗಳು ನೀರಿಗೆ ಧುಮುಕುವುದು ನೋಡಿ ಖುಷಿ ಪಡುತ್ತಿದ್ದೆವು.

ಕಪ್ಪೆ ಮರಿಗಳು, ದೊಡ್ಡ ಕಪ್ಪೆಗಳು ವಟಗುಟ್ಟಿದರೆ ಕೇಳಲು ಏನೋ ಆನಂದ.ಆಗಾಗ ಆಮೆಗಳು ಕಾಣಸಿಗುತ್ತಿದ್ದವು.ಏಡಿಗಳು (ಡೆಂಜಿಗಳು) ಕಂಡರೆ ಅದೇನೋ ಭಯವಾಗುತ್ತಿತ್ತು. ನೀರೊಳ್ಳೆಗಳು ನಮ್ಮನ್ನು ಕಂಡು ಹೆದರಿ ಓಡುತ್ತಿದ್ದವು.


        ಮಳೆಗಾಲದಲ್ಲಿ ಅಪ್ಪ ಹಲಸಿನ ಹಣ್ಣು ಕೊಯಿದು ತಂದು ಜಗುಲಿಯ ಬದಿಯಲ್ಲಿ ಸಾಲಾಗಿ ಇರಿಸಿದರೆ ನೋಡುವುದೇ ಚೆಂದ.ಅಡುಗೆಯಲ್ಲಿ ಹಲಸಿನದ್ದೇ ಅಬ್ಬರ.ಹಲಸಿನ ಕಾಯಿ ಪಲ್ಯ, ದೋಸೆ,ಸೋಂಟೆ/ಚಿಪ್ಸ್ (ಹಲಸಿನ ಸೊಳೆಯನ್ನು ತೆಳ್ಳಗೆ ಸಿಗಿದು ಎಣ್ಣೆಯಲ್ಲಿ ಕರಿದ ತಿಂಡಿ),ಹಲಸಿನ ಹಣ್ಣಿನ ಕಡುಬು,ಗೆಣಸಲೆ, ಸುಟ್ಟವು, ಗುಳಿ ಅಪ್ಪ... ಹೀಗೆ ಹಲಸಿನ ಹಣ್ಣಿನ ಗತ್ತೇ ಬೇರೆ.ಕೆಸುವಿನ ಎಲೆಯಿಂದ ತಯಾರಿಸಿದ ಪತ್ರೊಡೆ ಆಟಿ ತಿಂಗಳ ವಿಶೇಷ ತಿಂಡಿ.



    ವಿಪರೀತ ಮಳೆಗೆ ಬಟ್ಟೆಗಳು ಒಣಗುವುದೇ ಇಲ್ಲ.ಆಗ ಮನೆಯ ಒಳಗಿನ ಬೆಚ್ಚನೆಯ ಗೂಡಿನಂತಹ ಅಡುಗೆಕೋಣೆಯಲ್ಲಿ ಬಟ್ಟೆಳನ್ನೆಲ್ಲಾ ಹಾಕಿ ಒಲೆಯಲ್ಲಿ ಹಲಸಿನ ಹಣ್ಣಿನ ಕಡುಬು ಮಾಡಿಟ್ಟು  ಬೆಂಕಿ ಹಾಕುತ್ತಿದ್ದುದು ಸಾಮಾನ್ಯ.ಬೆಳಗಿನ ತಿಂಡಿಯೂ ಆಯ್ತು..ಬಟ್ಟೆಯೂ ಒಣಗಿತು..ಎರಡೂ ಕೆಲಸ ಒಟ್ಟಿಗೆ ಆಗುತ್ತಿತ್ತು.ಈಗ ವಾಷಿಂಗ್ ಮೆಷಿನ್ ಬಂದಿರುವುದರಿಂದ ಸ್ವಲ್ಪ ಮಟ್ಟಿಗೆ ಅನುಕೂಲ ವಾಗಿದೆ.ಮಳೆಗೆ ಕರೆಂಟ್ ಕೈಕೊಡುವುದು ಸಾಮಾನ್ಯ ಸಂಗತಿ.ಒಮ್ಮೆ ಕರೆಂಟ್ ಹೋದರೆ ಮತ್ತೆ ಬರಲು ಎರಡು ಮೂರು ದಿನಗಳು ಬೇಕು.ಅಮ್ಮನಿಗೆ  ಹಿಟ್ಟುಕಡೆಯಲು ರುಬ್ಬುವ ಕಲ್ಲೇ  ಸಂಗಾತಿ ಆಗಿಬಿಡುತ್ತಿತ್ತು.


      ನಮ್ಮ ಕಡೆ ತೋಡುಗಳಿಗೆ (ಚಿಕ್ಕ ನದಿಗಳು) ಮಳೆಗಾಲದಲ್ಲಿ ಕಾಲು ಸಂಕ ಹಾಕುತ್ತಾರೆ.ಇಂತಹ ಉದ್ದವಾದ ಕಾಲುಸಂಕದಲ್ಲಿ ದಾಟುವುದೆಂದರೆ ನನಗೆ ಎಲ್ಲಿಲ್ಲದ ಭಯ.ತಲೆತಿರುಗಿದಂತೆ ಆಗುತ್ತದೆ..

ಸಂಕದಲ್ಲಿ ಅರ್ಧಕ್ಕೆ ಮುಟ್ಟಿದಾಗ ಅದು ಆಚೆಈಚೆ ತೊಯ್ದಾಡಿದಂತಾಗ ಏನೇನೋ ಕೆಟ್ಟ ಆಲೋಚನೆಗಳು.. ಹಿರಿಯರ ಕೈ ಹಿಡಿದ ಇನ್ನೊಂದು ದಡ ಮುಟ್ಟಿದಾಗ ಅಬ್ಬಾ..!! ಎಂಬ ನಿಟ್ಟುಸಿರು..ಸಂಕ ಸಣ್ಣದಾದರೆ ಖುಷಿಯಿಂದ ದಾಟುತ್ತಿದ್ದೆ.


      ಅಡಿಕೆ ಕೃಷಿಕರಿಗೆ ಮಳೆಗಾಲದಲ್ಲಿ ಕೊಳೆರೋಗದ ಚಿಂತೆ.ಔಷಧ ಸಿಂಡಿಸುವ ತರಾತುರಿ,ತಾಪತ್ರಯ.ಔಷಧವನ್ನು ಮಳೆ ಕಡಿಮೆ ಇರುವ ಸಾಧ್ಯತೆ ಕಂಡರೆ ತಯಾರಿಸಬೇಕು.ಸಿಂಪಡಿಸುವ ಕೂಲಿಯಾಳುಗಳೂ ಆ ಸಂದರ್ಭದಲ್ಲಿ ಒದಗಬೇಕು.ಔಷಧ ಸಿಂಪಡನೆಗೆ ತಯಾರಾದಾಗ ಮಳೆ ಸುರಿದರೆ,ಸಿಂಪಡಿಸಿದ ಔಷಧಿ ಕಾಲು ಗಂಟೆಯಾದರೂ ಒಣಗುವ ಮುನ್ನ ಮಳೆ ಬಂದರೆ ಅವರ ಪ್ರಯತ್ನ ಎಲ್ಲವೂ ವ್ಯರ್ಥ..ನೀರಮೇಲೆ ಹೋಮ ಮಾಡಿದಂತೆ..

ಔಷಧ ತಯಾರಿಸಿದಾಗ ಮಳೆಯಿಂದಾಗಿ ಸಿಂಪಡಿಸಲು ಸಾಧ್ಯವಾಗದಿದ್ದರೆ ಔಷಧವನ್ನು ಚೆಲ್ಲಬೇಕಷ್ಟೆ..ಮರುದಿನ ಬಳಸುವಂತಿಲ್ಲ.ಔಷಧ ತಯಾರಿಸುವಾಗ ಸಣ್ಣಕ್ಕೆ ಬಿಸಿನೀರು ಸುರಿವಾಗ ಹೊರಬರುವ ಕಟು ಘಾಟಿಗೆ ಉಸಿರುಗಟ್ಟಿದಂತಾಗುತ್ತಿತ್ತು.ಆದರೂ ಹತ್ತಿರ ನಿಂತು ಸುಣ್ಣದಿಂದ ಮೇಲೇಳುವ ಗುಳ್ಳೆಗಳನ್ನು ನೋಡುವ ತವಕವಿತ್ತು.


       ಹೋರಿಗಳನ್ನು ಕಟ್ಟಿ ಗದ್ದೆ ಉಳುಮೆ ಮಾಡುತ್ತಿದ್ದ ನೆನಪು ಹಸಿರಾಗಿದೆ. ಓಬೇಲೇ..ಎನ್ನುತ್ತಾ ನೇಜಿ ನೆಡುತ್ತಿದ್ದ ಕೊರಪೋಳು,ತಿಮ್ಮಕ್ಕ ,ಪಾರೋತಿ ,ಕಮಲಿ,ಚಂದ್ರಿ ಈಗ ನೆನಪಿನ ಪುಟಗಳಲ್ಲಿ ಅಚ್ಚೊತ್ತಿ ನಿಂತಿದ್ದಾರೆ.ಈಗ ಎತ್ತಿನ ಜಾಗಕ್ಕೆ ಯಂತ್ರವು ಬಂದಿದೆ..ಹೆಂಗಸರ ಪಾಡ್ದನ ಮಾಯವಾಗಿದೆ.


     ಈಗ ಸಂಪೂರ್ಣ ಚಿತ್ರಣವೇ ಬದಲಾಗಿದೆ..ಹಳ್ಳಿಯಿಂದ ಪಟ್ಟಣದಂಚಿಗೆ ಪಯಣ ಸಾಗಿದೆ.ಸುತ್ತಲೂ ಕಣ್ಮನ ಸೆಳೆಯುವ ಹಸಿರ ಸಿರಿಯಿದೆ ಎಂಬ ಸಮಾಧಾನವಿದೆ.

ಒಮ್ಮೊಮ್ಮೆ ಸುರಿವ ಮಳೆಯಲ್ಲಿ  ಮನೆಯಂಗಳದಲ್ಲಿ  ಆಡಲು ನನ್ನ ಮಕ್ಕಳಿಗೂ ಸಮ್ಮತಿಸುತ್ತೇನೆ.. ನಾವು ಸಂಭ್ರಮಿಸಿದಂತೆ ಮಕ್ಕಳೂ ಮಳೆಗೆ ನೆನೆದು ಖುಷಿಯಿಂದ ಕೇಕೆ ಹಾಕುತ್ತಾರೆ.ಶೀತ ,ನೆಗಡಿ ಬಂದರೆ ಎಂಬ ಭಯವಿದ್ದರೂ ..ಅವರ ನೆನಪಿನ ಬುಟ್ಟಿಯೊಳಗೆ ಮಳೆಯ ನೆನಪುಗಳು ಹಸಿರಾಗಿರಲಿ ಎಂಬ ಆಶಯದೊಂದಿಗೆ ಈ ಅಮ್ಮ ಮಕ್ಕಳಾಟವನ್ನು ನೋಡುತ್ತಾ ಸಂಭ್ರಮಿಸುತ್ತಾಳೆ.



✍️... ಅನಿತಾ ಜಿ.ಕೆ.ಭಟ್.

27-08-2020.


ಸಿಹಿಕಹಿ ನೆನಪು

 



ಅಂದು ಕಿರುಗಣ್ಣಿನಲೆ

ನಕ್ಕು ನನ್ನೆದೆಯ ಮೀಟಿದ ನೆನಪು...

ದೂರದಲೆ ನಿಂತು ನಿಸ್ತಂತು ಸಂದೇಶವ

ಕಳುಹಿಸಿದ ಸವಿನೆನಪು..

ಪ್ರೇಮವು ಕುಡಿಯೊಡೆಯೆ 

ಮಡಿಲಲಿ ಶಿರವ ನೇವರಿಸಿದ ನೆನಪು..

ಪ್ರಸವ ವೇದನೆಯಲಿ ಬಳಲಿರಲು

ನಾ ಹಂಚಿಕೊಳ್ಳಲಾರದೇ

ಹೋದೆನೇ ..ಹತಾಶೆಯ ನೆನಪು..

ಮುದ್ದುಮಗುವಿನ ವದನದಲಿ

ನಿನ್ನ ಅಗಲ ಮೊಗದ 

ಚಹರೆಯೇ ಕಂಡ ನೆನಪು..

ಲಾಲನೆ ಪಾಲನೆಗೆ ಕೈಜೋಡಿಸಲಾರದೆ

ನನ್ನನೇ ನಾನು ಪ್ರಶ್ನಿಸಿಕೊಂಡ ನೆನಪು..

ಹಗಲು ರಾತ್ರಿ ನಿದ್ದೆಗೆಟ್ಟು ನಿಭಾಯಿಸುವ

ನಿನ್ನ ರೂಪವನಾಡಿದಾಗ ಜಗವೇಕೆ 

ಹೀಗೆ ಎಂದು ನೊಂದ ನೆನಪು..

ಮಗು ಮೊದಲಬಾರಿ ಅಪ್ಪಾ ಎಂದಾಗ 

ಎದೆಯುಬ್ಬಿಸಿದ ಹೆಮ್ಮೆಯ ನೆನಪು..

ಜವಾಬ್ದಾರಿ ಹೊರುತಲಿ 

ಕಡೆಗಣಿಸಿ ಹೋದ ನೆನಪು..

ಸಿಹಿಕಹಿಯ ನೆನಪಿಂದು 

ಬಿಟ್ಟುಬಿಡದೇ ಕಾಡುತಿದೆ ..

ನಿವೃತ್ತಿಯ ಖಾಲಿ ಪುಟಗಳಲಿ...

ಮತ್ತೆ ಮರಳಲಾರದ ದಿನಗಳ

ಸವಿಯದ ಯಜಮಾನ 

ಹಿಡಿದಿಟ್ಟ ನೆನಪು..


✍️... ಅನಿತಾ ಜಿ.ಕೆ.ಭಟ್.

25-08-2020.

Friday, 21 August 2020

ವಿನಾಯಕ...ಅಭಯದಾಯಕ

 

ವಿನಾಯಕ...ಅಭಯದಾಯಕ..

ವಿನಾಯಕ ...ಅಭಯದಾಯಕ...
ಮಹಿಮಾಪೂರ್ಣಾ..ಶರಣು..ಕರುಣಾ..||ಪ||

ಗೌರಿಯ ಕಂದ ವರಗಳ ಸುರಿವನೇ
ಹಂಸಗ್ರೀವ ಅಗ್ರಗಾಮಿನಿಯೇ
ಅಭೀಷ್ಟವರದ ಸನ್ಮಂಗಲನೇ
ವಿಷ್ಣುಪ್ರಿಯ ಮಹಾಗಣಪತಿಯೇ||೧||

ದ್ವಿಮುಖ ರೂಪ ಸುಖಾನಿಧಿಯೇ
ಮೋದಕಪ್ರಿಯ ಭಕ್ತನಿಧಿಯೇ
ಸಂತತ ಭಜಿಪೆ ಪಂಚಹಸ್ತನೇ
ದೂರ್ವಪೂಜಿತ ದುರಿತಹರನೇ||೨||

ಪಾರ್ವತಿನಂದನ ನಿತ್ಯವಂದ್ಯನೇ
ವಿದ್ಯಾಬುದ್ಧಿಪ್ರದಾಯಕ ವಾಕ್ಪತಿಯೇ
ಕಡುಬು ಕಜ್ಜಾಯಾರ್ಪಿತ ಶಿವಪ್ರಿಯನೇ
ಪ್ರಥಮಪೂಜಿತ ಸುಪ್ರದೀಪನೇ||೩||

ಕನಕ ಕಿರೀಟಧಾರಿ ವಿಶ್ವನೇತ್ರನೇ
ಮಹೋದರ ಸತ್ಯತತ್ವಸೂತ್ರನೇ
ಆಶ್ರಿತವತ್ಸಲ ಸುರಪೂಜಿತನೇ
ಸಂಕಟನಾಶ ವರಗಜತೇಜನೇ||೪||

✍️... ಅನಿತಾ ಜಿ.ಕೆ.ಭಟ್.
22-08-2020.

ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳು .💐

ಚಿತ್ರ ಕೃಪೆ: ಅಂತರ್ಜಾಲ.

Thursday, 20 August 2020

ಮಕ್ಕಳಿಗೆ ನನ್ನ ಶಿಶುಗೀತೆಗಳು/ಅಭಿನಯ ಗೀತೆಗಳು

 


ಶಿಶುಗೀತೆಗಳು ಮಕ್ಕಳ ಮನಸ್ಸನ್ನು  ಮುದಗೊಳಿಸಿ ಅವರ ಕಲ್ಪನಾಶಕ್ತಿಯನ್ನು ಚುರುಕುಗೊಳಿಸುತ್ತದೆ.ಮಕ್ಕಳ ಶಬ್ದಭಂಡಾರದಲ್ಲಿ ಹೊಸ ಶಬ್ದಗಳ ಸೇರುವಿಕೆಗೆ ಕಾರಣವಾಗುತ್ತದೆ.ಸರಳ ಪದಗಳನ್ನು ಪ್ರಾಸಬದ್ಧವಾಗಿ ಪೋಣಿಸಿದಾಗ ಮೂಡುವ ಶಿಶುಗೀತೆಯು ಮಕ್ಕಳ ನಾಲಿಗೆಯನ್ನು ಸರಿಯಾಗಿ ತಿರುಚುವಂತೆ ಮಾಡಿ ಮಾತನ್ನು ಸುಲಲಿತಗೊಳಿಸುತ್ತದೆ.ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಶಿಶುಗೀತೆಗಳನ್ನು ಕಲಿಸಲೇಬೇಕು.ಅದಕ್ಕೆ ತಕ್ಕಂತೆ ಭಾವಾಭಿನಯವನ್ನೂ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು.

ನನ್ನ ಮಕ್ಕಳಿಗೆ ನಾನು ಬಹಳಷ್ಟು ಕನ್ನಡದ ಹಳೆಯ ಶಿಶುಗೀತೆಗಳನ್ನು  ಕಲಿಸಿದ್ದೆ. ಅಭಿನಯಿಸುವುದರ ಜೊತೆಗೆ ಹೇಳಿಕೊಟ್ಟ ಗೀತೆಗಳು ಮಕ್ಕಳ ನೆನಪಿನ ಕಣಜದಲ್ಲಿ ಅಚ್ಚೊತ್ತಿ ನಿಂತಿವೆ,ನಿಲ್ಲುತ್ತವೆ.ನಾನು ಬೇರೆ ಬೇರೆ ಸಾಹಿತ್ಯ ಸಂಬಂಧಿ ಫೇಸ್ಬುಕ್ ವೇದಿಕೆಗಳಲ್ಲಿ ಬರೆದಂತಹ ಕೆಲವು ಶಿಶುಗೀತೆಗಳನ್ನು ಆಯ್ದು ಇಲ್ಲಿ ನೀಡುತ್ತಿದ್ದೇವೆ.ನಿಮ್ಮ ಮಕ್ಕಳಿಗೂ ಶಿಶುಗೀತೆಗಳನ್ನು ಕಲಿಸಿ,ಹಾಡಿಸಿ, ಅಭಿನಯಿಸಿ ತೋರಿಸಿ..ಮುದ್ದು ಮುದ್ದಾಗಿ ಮೂಡಿಬಂದರೆ ವಿಡಿಯೋ ಮಾಡಿ ಮಾಮ್ಸ್ಪ್ರೆಸೊಗೂ ಕಳುಹಿಸಿ.

*****
1.ನಾಯಿ ಮರಿ

ನನ್ನ ಹೆಸರು ಸುಮಾ
ಗೆಳತಿಯಿವಳು ರಮಾ
ಅವಳ ನಾಯಿ ಮಿಟ್ಟು
ಅವನು ಬಹಳ ತುಂಟ||೧||

ಶಾಲೆಯಿಂದ ರಮಾ ಬರಲು
ಹಾರಿ ನೆಗೆವುದು
ಅವಳ ಅತ್ತ ಇತ್ತ
ಪಕ್ಕದಲ್ಲಿ ಸುಳಿವುದು||೨||

ಮನೆಯ ಒಳಗೆ ತೆರಳಿದಾಗ
ಕುಂಯ್ ಕುಂಯ್ ಎನುವುದು
ಬಿಸ್ಕಿಟ್ ತಂದು ಹಾಕಿದರೆ
ಬೇಗ ತಿನುವುದು||೩||

ಪಕ್ಕದ ಮನೆಯ ಬೆಕ್ಕು
ಕಂಡರೆ ಅಟ್ಟಿ ಬಿಡುವುದು
ಹಾವು ಓತಿ ಮುಂಗುಸಿ
ಹೆದರಿ ಓಟಗೈವುದು||೪||

ಹೊಸಬರನ್ನು ಕಂಡಾಗ
ಭಾರೀ ಬೊಗಳಿಕೆ
ನಾನು ಸುಮಾ ಗೆಳತಿಯೆಂದು
ಸ್ವಲ್ಪ ಸಡಿಲಿಕೆ||೫||

ನಾಯಿ ಮರಿ ನನಗೂ
ಬೇಕೆಂಬ ಬೇಡಿಕೆ
ಇಟ್ಟಿರುವೆ ಅಪ್ಪನಲ್ಲಿ
ನನ್ನ ಜೊತೆಗೆ ಆಟಕೆ||೬||

✍️... ಅನಿತಾ ಜಿ.ಕೆ.ಭಟ್.
20-08-2020.


*****
2.ಪಕ್ಕದ್ಮನೆ ತುಂಟ ಪುಟಾಣಿ

ಪಕ್ಕದ್ಮನೆ ತುಂಟ ಪುಟಾಣಿಗೆ
ಕೋಳಿಯ ಜೊತೆಗೆ ಸರಸ
ಬುಟ್ಟಿಯ ಕೆಳಗಡೆ ಕಾಳನು ಚೆಲ್ಲಿ
ಸನಿಹದಿ ಕಾಯುವ ಕೆಲಸ||೧||

ಕೋಳಿಯು ಕೂಗಿ ಜಗವನ್ನೆಬ್ಬಿಸಿ
ಹುಳುಹುಪ್ಪಟೆಯ ಅರಸುತ್ತಾ
ಕೊಕ್ಕಲಿ ಕುಕ್ಕಿ ಕಸವನು ಸರಿಸಿ
ಹಸಿವೆಯು ನೀಗಿ ಕೊಕ್ಕೊಕ್ಕೋ ಎನ್ನುತ್ತಾ||೨||

ಊರುಕೇರಿ ಸುತ್ತುವ ಕೋಳಿಯ
ನಾನು ಹಿಡಿದಿಡಬೇಕು
ಉದರಕೆ ತುಂಬುವ ಭಕ್ಷಕರಿಂದ
ನಾನು ರಕ್ಷಿಸಬೇಕು||

ಬುಟ್ಟಿಯ ಕೋಲಲಿ ಆನಿಸುತ
ಕೋಲಿಗೆ ದಾರವ ಕಟ್ಟಿ
ಸದ್ದನು ಮಾಡದೆ ಶ್ಶ್ ಎನುತಾ
ಬಾಗಿಹ ಬೂಟನು ಮೆಟ್ಟಿ||೪||

ಸಂಚನ್ನರಿಯದ ಕೋಳಿಯು ತಾನು
ಬಂದಿತು ಬುಟ್ಟಿಯ ಅಡಿಗೆ
ತುಂಟ ಪುಟಾಣಿ ಹಗ್ಗವನೆಳೆದನು
ಕೋಳಿಯು ಬಂಧಿ ಒಳಗೆ||೫||
ಕೋಳಿಯು ಬಂಧಿ ಒಳಗೆ||

✍️... ಅನಿತಾ ಜಿ.ಕೆ.ಭಟ್.
23-11-2019.

ಈ ಶಿಶುಗೀತೆಯು ಹವಿಸವಿ ಎಂಬ ಫೇಸ್ಬುಕ್ ಬಳಗದಲ್ಲಿ ನೀಡಿದ ಚಿತ್ರಕ್ಕೆ ತಕ್ಕಂತೆ ರಚಿಸಿರುವುದು..ಪಕ್ಕದ್ಮನೆ ಪದುಮಮ್ಮನಿಗೆ ಏಕಾದಶಿ ಉಪವಾಸ..ಎಂಬ ಹಾಡಿನ ಧಾಟಿಯಲ್ಲೇ ಹಾಡಬಹುದು..


******
🌹 ಬಿಳುಪಿನ ಹಲ್ಲು 🌹
"""""""""""""""""""""""""""""""

ವಾಣಿಯು ದಿನವೂ
ತರುವಳು ದುಡ್ಡು
ಅಪ್ಪನು ಕೊಡುವ
ಹತ್ತರ ಗರಿಗರಿ ನೋಟು... ಗರಿಗರಿ ನೋಟು||

ಶಾಲೆಯ ಪಕ್ಕದ
ಅಂಗಡಿ ಮುಂದೆ
ಗುಂಪಲಿ ನುಗ್ಗಿ
ಬಿಸ್ಕತ್ ಮಿಠಾಯಿ ತರುವಳು ಹಿಗ್ಗಿ...ತರುವಳು ಹಿಗ್ಗಿ||

ವೀಣಾಳು ವಾಣಿಯು
ಜೊತೆಯಲಿ ನಡೆಯೆ
ವೀಣಾಳ ಬಾಯಲಿ ನೀರು
ವಾಣಿಯು ಕೊಡಳು ಚೂರೂ...ಕೊಡಳು ಚೂರೂ||

ಅಮ್ಮನ ಬಳಿಯಲಿ
ವೀಣಾಳು ಅಳಲು
ಅಮ್ಮನು ಕಣ್ಣಲೆ ಗದರಿ
ವೀಣಾ ಹೋದಳು ಹೆದರಿ... ಹೋದಳು ಹೆದರಿ||

ಒಂದಿನ ಶಾಲೆಗೆ
ಬಂದರು ವೈದ್ಯರು
ವೀಣಾಳ ಬಾಯೊಳ ನೋಡಿದರು
ಚಂದದ ಹಲ್ಲನು ಹೊಗಳಿದರು...ಹಲ್ಲನು ಹೊಗಳಿದರು||

ಬಂದಿತು ವಾಣಿಯ ಸರದಿ
ಬಾಯಿಯ ಒಡೆದಳು ಆತುರದಿ
ಬಿಳುಪಿನ ಹಲ್ಲು ಇಲ್ಲವೇ ಇಲ್ಲ
ಕಪ್ಪಿನ ಹಲ್ಲು ಹುಳುಕೇ ಎಲ್ಲ...ಹುಳುಕೇ ಎಲ್ಲ||

ವೀಣಾಗೆ ದೊರಕಿತು ಚಪ್ಪಾಳೆ
ಬಿಳುಪಿನ ಹಲ್ಲಿಗೆ ಬಹುಮಾನ
ವಾಣಿಯ ಮೊಗದಲಿ ಇಲ್ಲ ಕಳೆ
ಕೆಡುಕಿನ ಹಲ್ಲೆಂದು ಅವಮಾನ... ಕೆಡುಕಿನ ಹಲ್ಲೆಂದು ಅವಮಾನ||

✍️... ಅನಿತಾ ಜಿ.ಕೆ.ಭಟ್.
01-08-2019.

ಈ ಶಿಶುಗೀತೆ ಕನ್ನಡ ಕಥಾಗುಚ್ಛದಲ್ಲಿ 'ಪಾಕೆಟ್ ಮನಿ' ಎಂಬ ವಿಷಯದಲ್ಲಿ ಲೇಖನ ಅಥವಾ ಮಕ್ಕಳ ಸಾಹಿತ್ಯ ಬರೆಯುವ ಥೀಂ ಕೊಟ್ಟಾಗ ಬರೆದಿರುವಂತಹದು.. ಅನಗತ್ಯವಾಗಿದ್ದೂ ಕೊಡುವ ಪಾಕೆಟ್ ಮನಿಯಿಂದ ಕೆಡುಕೂ ಇದೆ.ಅಗತ್ಯವಿದ್ದರೆ ಮಾತ್ರ ಪಾಕೆಟ್ ಮನಿ ನೀಡಿ ಎಂಬ ಸಂದೇಶದೊಂದಿಗೆ ಬರೆದ ಗೀತೆ.

*******


ನಾನು ಬರೆದಂತಹ ಈ ಶಿಶುಗೀತೆಗಳು ಹಲವು ಮಕ್ಕಳಿಗೆ ತಲುಪಲಿ.ಮಕ್ಕಳಲ್ಲಿ ಕನ್ನಡದ ಕಂಪು ಪಸರಿಸಿ ಇಂಪಾದ ದನಿಯಲ್ಲಿ ಮೂಡಿಬರಲಿ.ಇನ್ನಷ್ಟು ಶಿಶುಗೀತೆಗಳನ್ನು ಇನ್ನೊಮ್ಮೆ ನಿಮ್ಮ ಮುಂದಿರಿಸುತ್ತೇನೆ.

✍️... ಅನಿತಾ ಜಿ.ಕೆ.ಭಟ್.
21-08-2020.
Momspresso Kannadaದಲ್ಲಿ ಪ್ರಕಟಿತ ಲೇಖನ...

ನಾಯಿ ಮರಿ-ಶಿಶುಗೀತೆ/ಅಭಿನಯ ಗೀತೆ/ಮಕ್ಕಳ ಸಾಹಿತ್ಯ

 

ನಾಯಿ ಮರಿ-ಶಿಶುಗೀತೆ

ನನ್ನ ಹೆಸರು ಸುಮಾ
ಗೆಳತಿಯಿವಳು ರಮಾ
ಅವಳ ನಾಯಿ ಮಿಟ್ಟು
ಅವನು ಬಹಳ ತುಂಟ||೧||

ಶಾಲೆಯಿಂದ ರಮಾ ಬರಲು
ಹಾರಿ ನೆಗೆವುದು
ಅವಳ ಅತ್ತ ಇತ್ತ
ಪಕ್ಕದಲ್ಲಿ ಸುಳಿವುದು||೨||

ಮನೆಯ ಒಳಗೆ ತೆರಳಿದಾಗ
ಕುಂಯ್ ಕುಂಯ್ ಎನುವುದು
ಬಿಸ್ಕಿಟ್ ತಂದು ಹಾಕಿದರೆ
ಬೇಗ ತಿನುವುದು||೩||

ಪಕ್ಕದ ಮನೆಯ ಬೆಕ್ಕು
ಕಂಡರೆ ಅಟ್ಟಿ ಬಿಡುವುದು
ಹಾವು ಓತಿ ಮುಂಗುಸಿ
ಹೆದರಿ ಓಟಗೈವುದು||೪||

ಹೊಸಬರನ್ನು ಕಂಡಾಗ
ಭಾರೀ ಬೊಗಳಿಕೆ
ನಾನು ಸುಮಾ ಗೆಳತಿಯೆಂದು
ಸ್ವಲ್ಪ ಸಡಿಲಿಕೆ||೫||

ನಾಯಿ ಮರಿ ನನಗೂ
ಬೇಕೆಂಬ ಬೇಡಿಕೆ
ಇಟ್ಟಿರುವೆ ಅಪ್ಪನಲ್ಲಿ
ನನ್ನ ಜೊತೆಗೆ ಆಟಕೆ||೬||

✍️... ಅನಿತಾ ಜಿ.ಕೆ.ಭಟ್.
20-08-2020.

ಚಿತ್ರ ಕೃಪೆ ಅಂತರ್ಜಾಲ.

Wednesday, 19 August 2020

ಪುಟ್ಟ ಮಲ್ಲಿ-ಶಿಶುಗೀತೆ/ ಮಕ್ಕಳ ಹಾಡು /ಅಭಿನಯ ಗೀತೆ

 

ಪುಟ್ಟ ಮಲ್ಲಿ-ಶಿಶುಗೀತೆ

ಪುಟ್ಟ ಮಲ್ಲಿ ಕಣ್ಣುಮುಚ್ಚಿ
ನಿಂತಿರುವೆ ಏತಕೆ
ಹಸಿರು ಹಾಸು ನೀಲಬಾನು
ಸೆಳೆವ ನೋಟಕೆ...||೧||

ಪುಟ್ಟ ಮಲ್ಲಿಗೆರಡು ಜುಟ್ಟು
ದಿರಿಸು ಚೆಂದಿದೆ
ಧರಣಿದೇವಿ ವರುಣನೊಸಗೆ
ಹೀರಿ ಚಿಗುರಿದೆ...||೨||

ಆಡಲೆರಡು ಕುರಿಯ ಜೊತೆಗೆ
ದೊಡ್ಡ ಬಯಲಿದೆ
ಹಸಿದ ಹೊಟ್ಟೆ ಬಿಳಿಯ ಟಗರು
ಹುಲ್ಲು ಮೇದಿದೆ...||೩||

ನಿನ್ನ ನಲಿವು ನೋಡದೇನೆ
ಕರಿಕುರಿಯು ಖೇದಗೊಂಡಿದೆ
ಕರವ ಸರಿಸಿ ಸಂಗ ಬಯಸಿ
ಆಡಿ ಕುಣಿಯಬಾರದೆ...||೪||

ದಣಿಯೆ ನೀನು ಮರವು ತಾನು
ನೆಳಲನೀವುದು
ಮೋಡದಾಚೆ ರವಿಯು
ಅಡಗಿ ನೋಡುತಿರುವನು...||೫||

ಪುಟ್ಟ ಮಲ್ಲಿ ಬೇಡವಿಲ್ಲಿ
ಅಳುಕು ಅಂಜಿಕೆ
ಚಂದಮಾಮ ಬರುವನೀಗ
ತಾರೆ ತೋಟಕೆ...||೬||

ಬರಿಯ ಕಾಲು ಹುಲ್ಲು ಮುಳ್ಳು
ಮೆಟ್ಟಿ ಜಿಗಿಯಲಿ
ಅಮ್ಮ ಬರಲು ಕುರಿಯ ಕೂಡಿ
ಮನೆಗೆ ಸಾಗಲಿ...||೭||

ಪ್ರಾಣಿ ಪ್ರೀತಿ ಪೊರೆವ ರೀತಿ
ಮಲ್ಲಿ ತಿಳಿಯಲಿ
ನೆನಪ ಸಂಚಿ ತುಂಬಿಕೊಳಲಿ
ಬಾಳಬಯಲಲಿ...||೮||

✍️.. ಅನಿತಾ ಜಿ.ಕೆ.ಭಟ್.
19-08-2020.
ಚಿತ್ರ ಕೃಪೆ: ಕನ್ನಡ ಕಥಾಗುಚ್ಛ

ಈ ಗೀತೆಯನ್ನು ಯೂಟ್ಯೂಬ್ ನಲ್ಲಿ ಕೇಳಲು ಕೆಳಗಿನ ಲಿಂಕ್ ಬಳಸಿಕೊಳ್ಳಬಹುದು.

.https://youtu.be/8JNebLj48ZA



ನ್ಯಾನೋ ಕಥೆಗಳು/nano stories/ಪುಟ್ಟ ಕಥೆಗಳು

 

ನ್ಯಾನೋ ಕಥೆಗಳು

1.ಸಹಪಠ್ಯಚಟುವಟಿಕೆ

ತನ್ನ ಮಗಳು ಪಠ್ಯ ಸಹಪಠ್ಯಚಟುವಟಿಕೆಗಳಲ್ಲಿ
ಮೊದಲಿಗಳಾಗಬೇಕು ಎಂದು ಬಯಸಿದ್ದರು ಶಿಕ್ಷಕಿ ತಾಯಿ.ಓದು ಮುಗಿಯುತ್ತಿದ್ದಂತೆ ಹೆತ್ತವರಿಗೆ ತಿಳಿಸದೆ ಪ್ರೇಮವಿವಾಹವಾಗಿ ವಿದೇಶಕ್ಕೆ ಹಾರಿದ್ದಳು.

ಸಹಪಠ್ಯಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಳು ಮಗಳು !!!

              ******

2.ಸ್ವಚ್ಛತಾಪಾಠ

ನಾನು ನಡೆಯುತ್ತಿದ್ದಾಗ ಆಕೆ ಮಾರ್ಗಕ್ಕೆ ಪಿಚಕ್ಕೆಂದು ಕಸವನ್ನೆಸೆದು ದಢಾರನೆ ಬಾಗಿಲೆಳೆದುಕೊಂಡಳು. ಹೆಜ್ಜೆ ಹಿಂದಿಟ್ಟೆ.ಕಸದ ಲಾರಿ "ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನೆಸೆಯುವುದು ಶಿಕ್ಷಾರ್ಹ ಅಪರಾಧ" ಎಂದರಚುತ್ತಾ ನನ್ನ ಹಿಂದೆಯೇ ಬಂದಿತ್ತು.

                  *****

3.ದುಡ್ಡು

ಸದಾ ದುಡ್ಡು ಕೂಡಿಡುತ್ತಾ ' ದುಡ್ಡೇ ಮುಖ್ಯ' ಎನ್ನುತ್ತಿದ್ದ.ರೌಡಿಗಳು ಅವನನ್ನು ಒತ್ತೆಯಾಳಾಗಿಟ್ಟು ಹಣದ ಬೇಡಿಕೆಯಿಟ್ಟರು.ಈಗ ಮನೆಯವರಲ್ಲಿ  "ಬೇಗ ಹಣ ಕೊಡಿ ನನ್ನ 'ಪ್ರಾಣ ಮುಖ್ಯ' .."ಎನ್ನುತ್ತಿದ್ದಾನೆ.

           .   *****
4.ತೃಪ್ತಿ

"ಮಮ್ಮೀ..ಈ ಡ್ರೆಸ್ ಹಳತಾಗಿದೆ"ಎಂದು ಸಿಡುಕಿನಿಂದೆಸೆದ ಬೆಲೆಬಾಳುವ ಮೆದು ಅಂಗಿಯನ್ನೊಮ್ಮೆ ಸವರಿದಳು ಮನೆಕೆಲಸದಾಕೆ.ಮನೆಗೆ ತೆರಳಿದಾಗ ಹರಿದ, ಬಣ್ಣಮಾಸಿದ ಅಂಗಿಯತೊಟ್ಟು ನಗುನಗುತ್ತಾ ಅಮ್ಮನನ್ನು ಎದುರುಗೊಂಡಳು ಮಗಳು.(ಇದು ಪ್ರತಿಲಿಪಿಯ ನನ್ನದೇ ಹನಿಕಥೆಯ ಸಣ್ಣರೂಪ)

                *****

5.ರಾಜಿ

''ರಾಜೀ..'' ಎನ್ನುತ್ತಾ ಹಿಂದೆ ಸುತ್ತುತ್ತಿದ್ದವನೊಡನೆ  ಓದುಮೊಟಕುಗೊಳಿಸಿ ಹೆತ್ತವರನ್ನು ತ್ಯಜಿಸಿ ವಿವಾಹವಾದಳು.ತನ್ನ ಹಠ ಸ್ವಭಾವದೊಂದಿಗೆ 'ರಾಜಿ'ಯಾಗದಾತ ಕೈಗೆರಡು ಮಕ್ಕಳನ್ನು,ವಿಚ್ಛೇದನ ಪತ್ರವನ್ನೂ ನೀಡಿದ.ಅವಳಿಗೀಗ ತವರಿನೊಂದಿಗೆ 'ರಾಜಿ'ಯಾಗಲೇಬೇಕಾದ ಅನಿವಾರ್ಯತೆ .

             ******

6.ಅಂತರಂಗ-ಬಹಿರಂಗ

ಸುಂದರವಾಗಿ ಅಲಂಕರಿಸಿಕೊಂಡು ತನ್ನ ಹನ್ನೆರಡರ ಆಸುಪಾಸಿನ ಮಗನೊಂದಿಗೆ ಲೇಡೀಸ್ ಸೀಟಿನಲ್ಲಿ ಕುಳಿತಿದ್ದಳಾಕೆ.ಮಗುವನ್ನೆತ್ತಿಕೊಂಡು ಬಸ್ಸೇರಿದ ಮಹಿಳೆಯತ್ತ ಮುಖಸಿಂಡರಿಸಿ ನೋಡಿದಾಗ, ಅರುವತ್ತರ ಹರಕಲಂಗಿಯವನೆದ್ದು ಆಸನವ ನೀಡಿದ.

           ******

7.ಬೆಲೆ

ಸಿರಿವಂತ ,ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುತ್ತಿದ್ದ.ಬಡವ ,ಮಕ್ಕಳಿಗೆ ಅಗತ್ಯವಾದದ್ದನ್ನು ಕೊಡಿಸಲೂ ಹರಸಾಹಸಪಡುತ್ತಿದ್ದ.ಶ್ರೀಮಂತನೀಗ ವೃದ್ಧಾಶ್ರಮದಲ್ಲಿದ್ದಾನೆ.ಬಡವ ತನ್ನ ವಿದ್ಯಾವಂತ, ಸಂಸ್ಕಾರವಂತ ಮಕ್ಕಳೊಡನೆ ಸುಖವಾಗಿ ಬಾಳುತ್ತಿದ್ದಾನೆ.

           *****

8.ಕೀಳರಿಮೆ

ಸಮಾರಂಭಗಳಲ್ಲಿ ಕಂಡ ಎಲ್ಲರ ರೂಪದಲ್ಲೂ ಓರೆಕೋರೆಗಳನ್ನು ಹುಡುಕಿ ಆಡುತ್ತಿದ್ದಳಾಕೆ.ತನ್ನ ಮಗನ ಗೃಹಪ್ರವೇಶದ ದಿನ ರೂಮಿನೊಳಗೆ ಅಳುಕುತ್ತಾ ಕುಳಿತಿದ್ದಳು,ತಾನು ಕುರೂಪಿಯೆಂದು..!!

                 ******

9.ಚುರುಕು

ಆತ ತನ್ನ ಆಫೀಸಿನ ಸಹಾಯಕಿಯ ಚುರುಕುತನವನ್ನು ಹೊಗಳುತ್ತಿದ್ದ.ಚುಟುಕು ಕಾರ್ಯಾಚರಣೆ ನಡೆಸಿದ ಮಡದಿ, ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಾಗಲೇ ಮಡದಿಯ ಚುರುಕುತನ ಅರಿವಾದದ್ದು ಆತನಿಗೆ ..!!

                 ******
10.ಮುಟ್ಟು

ನವವಧು ಅಳುಕುತ್ತಾ ನಾಚುತ್ತಾ '' ನಾ ಮುಟ್ಟು'' ಅಂದಾಗ ...
ಮುಟ್ಟಲಾಗದೆ ಪರಿತಪಿಸುತ್ತಾ ಮಾರು ದೂರ ನಿಂತು ಮಡದಿಯನ್ನು ನೋಡಿದ ಪತಿರಾಯ..😥
(ಜೀವನ ಮೈತ್ರಿ ಧಾರಾವಾಹಿಯ ಒಂದು ಸನ್ನಿವೇಶ)

           *****
11.ದಪ್ಪ

ಆ ಹುಡುಗಿ ದಪ್ಪ ,ನನಗೆ ಬೇಡವೆಂದವ ಬಳುಕುವ ಬಳ್ಳಿಯಂತಹವಳನ್ನು ಮದುವೆಯಾದ.ಅವಳ ಪ್ರೀತಿಯಡುಗೆಯುಂಡು ಆತ ದಪ್ಪವಾಗುತ್ತಲೇ ಹೋದ..

         ****

12.ಅವಕಾಶ

ಮಕ್ಕಳಿಬ್ಬರಿಗೂ ಹಣ್ಣನ್ನು ಸಮಪಾಲು ಮಾಡಿ ಕೊಟ್ಟಿದ್ದಳು ಅಮ್ಮ.ಅಣ್ಣ ನೆಪ ಹಿಡಿದು ಹಠ ಮಾಡುತ್ತಲೇ ಕುಳಿತ.ತಮ್ಮ ತನ್ನದನ್ನು ತಿಂದು,ಅಣ್ಣನತ್ತ ಬಾಗಿ ಅವನದನ್ನೂ ತಿಂದು ಮುಗಿಸಿ ಆಡತೊಡಗಿದ.

          ****

13.ನಂಬಿಕೆ

ಗುಡುಗು ಮಿಂಚಿನ ಮಳೆಯಾಗುತ್ತದೆ ಎಂದಿತು ಹವಾಮಾನ ವರದಿ.ಗದ್ದೆ ಹಸನುಮಾಡಿದ ರೈತ ಕಾಯುತ್ತಲೇ ಇದ್ದ.

             *****

14.ಮಾನ-ಸ್ಥಾನಮಾನ

ಸಿಡುಕುವಾಗಲೆಲ್ಲ ನಿನಗೆ 'ಮಾನ' ಮರ್ಯಾದೆ ಇಲ್ಲ ಎಂದು ಹಂಗಿಸುತ್ತಿದ್ದ ಉಂಡಾಡಿ ಗಂಡ.ನೊಂದ ಆಕೆ ಉದ್ಯೋಗ ಆರಂಭಿಸಿ ,ಹಣ ಸಂಪಾದನೆ ಮಾಡಿ ಮನೆತನಕ್ಕೆ 'ಸ್ಥಾನಮಾನ' ತಂದುಕೊಟ್ಟಳು.

                  *****

15.ತೆಗಳು-ಹೊಗಳು

ಹೆಣ್ಣು ಮಗು ಎಂದು ಮೂದಲಿಸುತ್ತಿದ್ದ ಅತ್ತೆ.ಜತನದಿಂದ ಸೊಸೆ ಮಗಳನ್ನು ಸಾಕಿದಳು.ಅವಳು ಸಾಧನೆಗೈದಾಗ ನನ್ನ ಮೊಮ್ಮಗಳು ಎನ್ನುತ್ತಾ ಎದೆತಟ್ಟಿಕೊಂಡರು ಅದೇ ಅತ್ತೆ.

              ******

16.ಭಾಷೆಯ ಅವಾಂತರ

ಹೂ ಕಟ್ಟು ಎಂದಿದ್ದಳು ಅಮ್ಮ ಆಂಗ್ಲಮಾಧ್ಯಮ ದಲ್ಲಿ ಓದುತ್ತಿರುವ ಮಗಳಲ್ಲಿ.ಕತ್ತರಿ ತಂದು ಹೂ ಕಟ್ ಮಾಡಿದಳು ಅಮ್ಮನ ಆಜ್ಞಾಪಾಲಕಿ ಮಗಳು.

          *****

✍️... ಅನಿತಾ ಜಿ.ಕೆ.ಭಟ್.
19-08-2020.

ಚಿತ್ರ ಕೃಪೆ : ಅಂತರ್ಜಾಲ

ಪುಟ್ಟ ಪುಟ್ಟ ಕಥೆ ಬರೆಯುವ ಸ್ಪರ್ಧೆಯೊಂದಕ್ಕಾಗಿ ಬರೆದ ಕಥೆಗಳು.

Tuesday, 18 August 2020

ಬಂದನೋ ಬಂದನು.. ಮನೆಗೆ ಗಣಪ ಬಂದನು

 

        ಗಣಪ ಬಂದನು

ಬಂದನೋ ಬಂದನು
ಮನೆಗೆ ಗಣಪ ಬಂದನು
ತಂದನೋ ತಂದನು
ನಮ್ಮ ಮನಕೆ ಮುದವನು...ನಮ್ಮ ಮನಕೆ ಮುದವನು...||೧||

ಹೊಳೆಯುವ ಬೆಳ್ಳಿಯ
ಡೊಳ್ಳುಹೊಟ್ಟೆ ಗಣಪನು
ಕೆಳಗಿಹ ಪಿಳ್ಳೆಯ
ಮೂಷಿಕವೇ ವಾಹನವು....ಮೂಷಿಕವೇ ವಾಹನವು...||೨||

ಅಂದದಿಂದ ಬಾಲರೆಲ್ಲ
ಅಲಂಕಾರ ಮಾಡಬಂದರು
ಚೆಂದದೊಂದು ಚೆಂಡು ಮಾಲೆ
ಕೊಂಡು ತಂದರು...ಕೊಂಡು ತಂದರು...||೩||

ಚಡ್ಡಿತೊಡುವ ಪುಟ್ಟ ಪೋರ
ಮುಂಡು ತೊಟ್ಟನು
ಅಡ್ಡಿಯಿಲ್ಲ ಪುರೋಹಿತನು
ನಾನೇ ಎಂದನು...ನಾನೇ ಎಂದನು...||೪||

ಬಾಲಗಣಪಗೆ ಹಾರವನ್ನು
ಅಲಂಕರಿಸೆ ಎತ್ತಿಹಿಡಿದರು
ಸಾಲುನಿಂತು ಸಿಕ್ಕು ಬಿಡಿಸೆ
ಕಂಠಕೆ ತೊಟ್ಟರು...ಕಂಠಕೆ ತೊಟ್ಟರು...||೫||

ಗರಿಕೆ ಪತ್ರೆ ಹೂಗಳನ್ನು
ಕರದಿ ಅರ್ಪಿಸಿ
ತರತರದ ನೈವೇದ್ಯವನ್ನು
ಗಣಪಗೆ ಒಪ್ಪಿಸಿ..ಗಣಪಗೆ ಒಪ್ಪಿಸಿ...||೬||

ಜಯಗಣಪ ಜಯಗಣಪ
ಜಯವಿನಾಯಕ
ಜಯಗಣಪ ಜಯಗಣಪ
ಅಭಯದಾಯಕ...ಬಾಲರಕ್ಷಕ....||೭||

ಊರಕೇರಿಯ ತರಳರೆಲ್ಲ
ಕರವ ಜೋಡಿಸಿ
ಮೊರೆಯಿಟ್ಟರು ವಿದ್ಯಾ
ಬುದ್ಧಿ ಕೊಟ್ಟು ರಕ್ಷಿಸು... ವಿದ್ಯಾ ಬುದ್ಧಿ ಕೊಟ್ಟು ರಕ್ಷಿಸು...||೮||

✍️... ಅನಿತಾ ಜಿ.ಕೆ.ಭಟ್.
19-08-2020.

ಚಿತ್ರ ಕೃಪೆ :ಕನ್ನಡ ಕಥಾಗುಚ್ಛ.

ಈ ಹಾಡನ್ನು ಯೂಟ್ಯೂಬ್ ನಲ್ಲಿ ಕೇಳಲು ಕೆಳಗಿನ ಲಿಂಕ್ ಬಳಸಿ..https://youtu.be/vE241KG_OC0

Saturday, 15 August 2020

ಎಲ್ಲರೊಳಗೊಂದಾಗಿ ಬಾಳು ಮನುಜ

 

ಎಲ್ಲರೊಳಗೊಂದಾಗಿ ಬಾಳು ಮನುಜ

ಎಲ್ಲರೊಳಗೊಂದಾಗಿ ಬಾಳು ಮನುಜ
ನೀ ಸರ್ವರೊಳು ಒಮ್ಮತದಿ ನಗುತ ಬಾಳು||ಪ||

ಬೆಂಬಲವಾಗು ಸಂತಸದ ಹೊನಲಿನಲಿ
ಮೂಕನಾಗು ದಹಿಸುವ ಕಲಹದಲಿ
ಕಿವುಡನೇ ಆಗಿ ಬಿಡು ಕಟುಶ್ರವಣಕೆ
ಸರ್ವ ಹೃದಯವ ಜಯಿಸು ಪ್ರೇಮದಲಿ||೧||

ಮುಗುಳುನಗುವಾಗು ದುಃಖದುಮ್ಮಾನದಲಿ
ಹಾಯಿದೋಣಿಯೆ ನೀನು ಹಣದೇರುಪೇರಿನಲಿ
ಭಾವರಹಿತನೆ ಆಗು ಲೋಕ ಡಾಂಭಿಕತನಕೆ
ಪರಹಿತವು ನಿಜಮತವು ಪ್ರತಿನಡೆಯಲಿ||೨||

ಹಸಿದುಂಬ ಅನ್ನ,ತಾಯಿ ಋಣಕೆ ಬಾಗು
ಕೇಡು ಬಯಸುವಗೆ ಹಿತವನೇ ಬಯಸು
ಚಿಗುರಾಗು ನೀ ಕೊಡಲಿಯೇಟನು ಸಹಿಸಿ
ಬೆನ್ನುತಟ್ಟುವನಾಗು ಪರರೇಳ್ಗೆಗೆ||೩||

ಮರೆಗುಳಿಯೆ ಆಗು ಹಿಂಡಿದ ವಿಕೃತಿಗೆ
ಕಹಿಯುಂಡು ಸಿಹಿನೀಡೋ ಬೇವುಬೆಲ್ಲ
ನೂರಾರು ಚಿಂತೆಯೊಳು ಸಂತನೇ ಆಗು
ಶುದ್ಧಾಂತರಂಗಿಯಾಗು ಮಸಿಕೊಳಕಲಿ||೪||

✍️... ಅನಿತಾ ಜಿ.ಕೆ.ಭಟ್.
16-08-2020.



ಅವಳ ಸ್ವಗತ

 

        ಅವಳ ಸ್ವಗತ

ನೂರು ಹಿರಿಯರ ಹಾರೈಕೆಗಳಲಿ
ಸೇರಿ ನಡೆದ ಒಲವಿದು
ಆರ ನಯನವು ಸೋಕಿತೇನೋ
ಕರವ ಸಡಿಲಿಸಿ ಸಾಗಲಿಂದು||೧||

ನಗುವ ಮಂಟಪ ಕಟ್ಟಿ ಒಲವ
ತೂಗುಮಂಚದಿ ನೀ ತೂಗಿಹೆ
ಭಗವಂತ ಬರೆದ ವಿಧಿಯ ಬರಹವ
ತಿದ್ದಲಾರದೆ ನಾ ಕೊರಗಿಹೆ||೨||

ಮಿಡಿದ ಕಂಬನಿ ಎದೆಗೆ ಇಳಿದಿದೆ
ಸ್ತಬ್ಧವಾಗಿಸಿ ಪ್ರತಿಕ್ಷಣ
ನುಡಿದ ಮಾತಿನ ಮೆಲುಕು ಹಾಕುತ
ನನ್ನ ಮನವಿದು ತಲ್ಲಣ||೩||

ಬಾಳ ಶರಧಿಯ ಸುಳಿಯ ನಡುವೆ
ಒಂಟಿಯಾಗಿಸಿ ನಡೆದೆಯಾ
ಹೇಳತೀರದ ಮನದ ವೇದನೆ
ಅರಿಯುವವನೇ ಸರಿದೆಯಾ||೪||

ಬರಡು ಹೃದಯ ಕುರುಡು ಮನವು
ಕೊರಡಿನಂದದಿ ತನುವಿದು
ಕರುಳ ಕುಡಿಯ ಬೆರಳು ಸೋಕಲು
ಕರುಣೆ ಕಿರಣವು ಮೂಡಿದೆ||೫||

ಭಾವಸುರಭಿಯ ಬಂಧಿಯಾಗಿಸಿ
ಬದುಕೊ ದಾರಿಯ ಅರಸುವೆ
ದಿನಗಳುರುಳುತ ಶೋಕಮರೆತು
ಬಾಳಪಯಣಕೆ ಹೆಗಲ ನೀಡುವೆ||೬||

ನೀಲ ಮೇಘದ ಕಾಣದಂಚಲಿ
ನೀನಿರುವೆಯೆಂಬ ಕಲ್ಪನೆ
ಕಾಲ ಸಾಗುತ ಲೆಕ್ಕ ಮುಗಿಯುತ
ಬಂದು ಸೇರುವೆ ನಿನ್ನನೆ||೭||

✍️... ಅನಿತಾ ಜಿ.ಕೆ.ಭಟ್.
05-08-2020.

ಕಾಂತಿಯುಕ್ತ ಜಗದ ಜೀವನ

 


#ಕೊರೋನಾ ಗೆಲ್ಲೋಣ
ಕಾಂತಿಯುಕ್ತ ಜಗದ ಜೀವನ

ದೂರದೇಶದಲ್ಲಿ ರೋಗ
ಮಾರಿ ಹಬ್ಬಿದಂತೆ ಸುತ್ತಿ
ಹಾರಿಬಂತು ವಿಮಾನದಲ್ಲಿ ನಮ್ಮನಡುವಿಗೆ
ಪಾರುಮಾಡಲೆಂದು ಪ್ರಧಾನಿ
ಪೌರರಲ್ಲಿ ಮನವಿಯಿತ್ತರು
ಇರಲಿ ಅಂತರ ,ಕವಚ ಮುಖದಲಿ..||೧||

ದೇಶದೆಲ್ಲೆಡೆ ಸೋಂಕುಹಬ್ಬಿ
ವಿಷಮಸ್ಥಿತಿಗೆ ತಲುಪದಂತೆ
ಹುಷಾರಾಗಿ ಜಡಿದು ದೇಶಕೆ ಬೀಗಮುದ್ರೆಯ
ಲೇಸು ಬದುಕು ಮನೆಯಲ್ಲಿದ್ದು
ಕಷಾಯಕುಡಿದು ಜತನದಿಂದ
ದೀಕ್ಷಾಬದ್ಧರಾದ ಜನ ಸೋಂಕನಳಿಸಲು..||೨||

ಎಲ್ಲಿ ಮಾರಿ ಕಂಡರಲ್ಲಿ
ಎಲ್ಲರನ್ನು ನಿಗಾದಲಿರಿಸಿ
ಕೊಳ್ಳಲಾದರೂ ವೈರಸ್ ದಾಂಗುಡಿಯಿಟ್ಟಿತು
ಕೇಳದಿದ್ದ ಜನರಿಗೆಲ್ಲ
ಪೋಲೀಸರಿಂದ ಲಾಠಿ,ದಂಡ ಹಾಕಲಾಗಿ
ಕಲಿತರಾಗ ವಿಧಿಸಲಾದ ಕಠಿಣ ನಿಯಮವ||೩||

ಹಸಿ,ತಂಪು ಆಹಾರ ತ್ಯಜಿಸಿ
ಬಿಸಿ , ಪೌಷ್ಟಿಕ ಆಹಾರ ಸೇವಿಸಿ
ಐಶಾರಾಮ ಬಿಟ್ಟು ದೇಹ ದಂಡಿಸಿ
ಕ್ಲೇಷಕಳೆಯಲು ಧ್ಯಾನ ಓದು
ಪಾಶಪ್ರೀತಿ ಬಲದಿ ಬೆಸೆದು
ನಾಶಮಾಡಬೇಕು ಕೇಡಿ ವೈರಾಣುವ..||೪||

ಸೇವೆಗೈದ ಹಲವರಿಂದು
ಶಿವನ ಪಾದ ಸೇರಿದರು
ಕೋವಿಡನ ಕ್ರೂರಬಲೆಗೆ ಸಿಲುಕುತ
ಆವ ಬಡವ ಧನಿಕನೆಂದು ಬೇಧ
ಭಾವ ಇರದೆ ತರಿವ ಸರಪಳಿಯ ತುಂಡರಿಸಬೇಕು
ನಾವು ಅಂತರ ಕಾಯ್ದುಕೊಳ್ಳುತ||೫||

ಸ್ವಂತ ದೇಹ ಅಸ್ತಿತ್ವ ವಿರದ
ಜಂತುವಿನಟ್ಟಹಾಸ ಮಟ್ಟಗೈದು
ಚಿಂತೆನೀಗಬೇಕು  ಸರ್ವ ಕ್ಷೇತ್ರದಿ
ಭ್ರಾಂತಿಗೊಳದೆ ದೃಢದಿ ಶಪಥಗೈದು
ಶಾಂತಿಯಿಂದ ಕೋವಿಡನ ಗೆದ್ದು
ಕಾಂತಿಯಿಂದ ಬೆಳಗಬೇಕು ಮತ್ತೆ ಜಗದಜೀವನ..||೬||

✍️... ಅನಿತಾ ಜಿ.ಕೆ.ಭಟ್.
15-08-2020.

      



Friday, 14 August 2020

ನಾವು ಭಾರತೀಯರು

 

      ನಾವು ಭಾರತೀಯರು

ನಾವು ಭಾರತೀಯರು
ಹೆಮ್ಮೆಯಿಂದ ಎದೆಯತಟ್ಟಿ ಹೇಳ್ವೆವು
ಪುಣ್ಯ ಪವಿತ್ರ ಭರತ ಭೂಮಿ
ಮಡಿಲು ನಮಗೆ ನಾಕವು||೧||

ಹಿಮದ ಮುಕುಟ ಹಸಿರಸೆರಗು
ಪದತಲದಲಿ ಮುತ್ತಿಕ್ಕುವ ಶರಧಿ
ಸಿರಿಫಲದ ಕಣಜ ಬಾಳ್ವ ಖಗಮೃಗಮನುಜ
ಪೊರೆದಿದೆ ತಾಯಿ ಭಾರತಿಯೊಡಲು ||೨||

ಆಚಾರ್ಯಸಂತರ ಪಾದ ಸೋಕಿದನಾಡು
ಪತಂಜಲಿ ವ್ಯಾಸವಾಲ್ಮೀಕಿಮಹರ್ಷಿಗಳ ಬೀಡು ಗಂಗೆ ತುಂಗೆ ಯಮುನೆ ಹರಿವ ನಾಡಿನಲಿ
ಜನುಮ ಪಡೆದ ನಾವು ಭಾರತೀಯರು||೩||

ನಡುಗುವ ಚಳಿಯಲಿ ಗಡಿಕಾವ ಯೋಧ
ಸೋಂಕು ತಡೆಗೆ ಸಜ್ಜಾಗಿಹ ದಾದಿ ವೈದ್ಯ
ನೇಗಿಲಯೋಗಿ ,ಹಲವಿಧ ಕರ್ಮಿಗಳ
ಒಕ್ಕೊರಲ ದನಿ ನಾವು ಭಾರತೀಯರು||೪||

ಜಾತಿಮತಗಳ ಭೇದವನಳಿಸಿ
ತಾಯ್ನೆಲದ ಸಂಸ್ಕೃತಿ ವೈಭವ ಮೆರೆಸುವ
ಪ್ರಕೃತಿ ಸಿರಿಯನು ಜತನದಿ ಉಳಿಸಿ
ಪ್ರೀತಿ ಶಾಂತಿಯ ದೀಪವ ಬೆಳಗುವ||೫||ನಾವು ಭಾರತೀಯರು||

✍️... ಅನಿತಾ ಜಿ.ಕೆ.ಭಟ್.
15-08-2020.

ಅಲ್ಲಮ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ ರಾಷ್ಟ್ರೀಯ ರಕ್ಷಾಬಂಧನ ಕವಿಗೋಷ್ಠಿ (ಆನ್ಲೈನ್)ಯಲ್ಲಿ ದತ್ತ ಶೀರ್ಷಿಕೆ 'ನಾವು ಭಾರತೀಯರು' -ಇದಕ್ಕಾಗಿ ಬರೆದು ವಾಚಿಸಿದ ಕವನ.https://youtu.be/n7dpo-3NWDg


ಸ್ವಾತಂತ್ರ್ಯದ ಹೆಮ್ಮರ

 

ಸ್ವಾತಂತ್ರ್ಯದ ಹೆಮ್ಮರ

ಭರದಿ ಏರಿ ನಭದಿ ತೇಲಿ
ಕಂಗೊಳಿಸುವ ಪತಾಕೆ
ಮೂರು ವರ್ಣ ನೀಲ ಚಕ್ರ
ಮೆರುಗು ನಮ್ಮ ದೇಶಕೆ||೧||

ಕೇಸರಿ ಬಿಳಿ ಹಸಿರು ವರ್ಣ
ತ್ಯಾಗ ಶಾಂತಿ ಸಮೃದ್ಧಿಯು
ಸ್ನೇಹ ಪ್ರೀತಿ ಐಕ್ಯತೆಯ
ನಡೆಯು ನಮ್ಮ ಹೆಮ್ಮೆಯು||೨||

ಪರರ ದಾಸ್ಯ ದಬ್ಬಾಳಿಕೆಗೆ
ನೀಡಿ ದಿಟ್ಟ ಉತ್ತರ
ದೇಶಭಕ್ತಿ ಶೌರ್ಯ ಮೆರೆದು
ಗೆಲಿದ ಸ್ವಾತಂತ್ರ್ಯದ ಹೆಮ್ಮರ||೩||

ದೇಶಕಾಗಿ ಹಗಲಿರುಳು
ಮಹಾತ್ಮರ ಬಲಿದಾನ
ಸತ್ಯಧರ್ಮ ಅಹಿಂಸೆ
ದೇಶಭಕ್ತಿಯ ಗುಣಗಾನ||೪||

ವೀರಕಲಿಗಳ ಪುಣ್ಯ ಪುರುಷರ
ಮಡಿಲು ತಾಯಿ ಭಾರತಿ
ಲೋಕಕೆಲ್ಲ ಒಳಿತು ಬಯಸುವ
ಉದಾತ್ತ ನಿನ್ನ ಸಂಸ್ಕೃತಿ||೫||

ಜಾತಿಮತ ಭೇದ ಮರೆತು
ದೇಶವಿರಲಿ ಅಖಂಡ
ಸಕಲ ಕ್ಷೇತ್ರ ಸಾಧನೆ
ದಿಟ್ಟಿಸುವಂತೆ ಬ್ರಹ್ಮಾಂಡ||೬||

✍️... ಅನಿತಾ ಜಿ.ಕೆ.ಭಟ್.
15-08-2020.

 ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು 💐💐

ಚಿತ್ರ ಕೃಪೆ ಅಂತರ್ಜಾಲ..

Thursday, 13 August 2020

ಲೇಜಿ ಫೆಲೋ



      

             ಲೇಜಿ ಫೆಲೋ

"ಅಪ್ಪಾ... ಅಪ್ಪಾ "ಎನ್ನುತ್ತಾ ಓಡಿಬಂದಳು ಮಗಳು.

"ಅಪ್ಪಾ.. ಇವತ್ತು ನನ್ನ ಹುಟ್ಟುಹಬ್ಬ.ಅಮ್ಮ ಎಷ್ಟೊಂದು ಚೆಂದದ ಅಂಗಿ ಕೊಡಿಸಿದ್ದಾರೆ ನೋಡು.."

"ಹೌದು ಮಗಳೇ .. ಎಷ್ಟು ಚೆನ್ನಾಗಿದೆ !! ಹ್ಯಾಪಿ ಹುಟ್ದಬ್ಬ"

"ಅಷ್ಟೇನಾ.. ಅಪ್ಪ .."ಮುಖ ಸಿಂಡರಿಸಿಕೊಂಡಳು ಮಗಳು.

"ನೀನು ಚಂದನದ ಗೊಂಬೆ ತರಹ ಕಾಣುತ್ತಿದ್ದೀಯಾ  ಮಗಳೇ.."

"ಇನ್ನೂ ಚೆಂದ ಕಾಣಲ್ವಾ.. ನಾನು.. ಬಾರ್ಬಿ ಡಾಲ್ ತರಹ.. "ಎಂದಳು ಮುದ್ದಾಗಿ.

"ಬಾರ್ಬಿಡಾಲ್ ಎಂಬ ಆಂಗ್ಲಸುಂದರಿಗಿಂತ ನಮ್ಮ ಅಚ್ಚಕನ್ನಡದ ಚಂದನದ ಗೊಂಬೆಯೇ ಅಪ್ರತಿಮ ಸುಂದರಿ.."
ಎಂದಾಗ ಕಣ್ಣುಮಿಟುಕಿಸಿ,ಬಾಯಗಲಿಸಿ ನಕ್ಕು ಕೆನ್ನೆಯನ್ನು ಅಪ್ಪನ ಹತ್ತಿರ ತಂದಳು.

"ಹೋಗ್ಲಿಬಿಡು ಅಪ್ಪ ... ಒಂದು ಸಿಹಿಮುತ್ತಾದರೂ ಕೊಡಬಾರದೇ..?"

"ಅದಕ್ಕೇನಂತೆ ಮಗಳೇ.." ಎನ್ನುತ್ತಾ ಮಗಳನ್ನು ಮುದ್ದಿಸಿ ಮುತ್ತಿನ ಮಳೆಗರೆದರು.

"ಅಪ್ಪಾ.. ನಾನು ಈ ಡ್ರೆಸ್ ಹಾಕಿಕೊಂಡು ನೃತ್ಯ ಮಾಡಬೇಕು ..ಬಾ ನೀನೂ ನನ್ನೊಂದಿಗೆ ನೃತ್ಯ ಮಾಡುವಿಯಂತೆ"

"ನಾನು.." ದೊಡ್ಡ ಉದ್ಗಾರ ಹೊರಡಿಸಿದ ಅಪ್ಪ.

"ಹೌದು.. ಯಾಕಪ್ಪಾ ನೀನು ನೃತ್ಯ ಮಾಡಬಾರದಾ"

"ಅದೆಲ್ಲ ನಿನ್ನಂತಹ ತೆಳ್ಳಗೆ-ಬೆಳ್ಳಗಿನವರು ಮಾಡಿದರೆ ಚಂದ .ನನ್ನಿಂದ ಈ ದಢೂತಿ ಶರೀರವನ್ನು ಹೊತ್ತುಕೊಂಡು ನೃತ್ಯಗೈಯಲು ಸಾಧ್ಯವಿಲ್ಲ ಮಗಳೇ.."

"ನಮ್ಮ ಟೀಚರ್ ಹೇಳಿದ್ರು.. ನೃತ್ಯ ಮಾಡುತ್ತಿದ್ದರೆ ಶರೀರದಲ್ಲಿ ಕೊಬ್ಬು ತುಂಬಿಕೊಳ್ಳುವುದಿಲ್ಲವಂತೆ. ಹೆಚ್ಚಾದ ಕೊಬ್ಬು ಕೂಡ ಕರಗುತ್ತದಂತೆ. ನಿಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲವೇ . ಬನ್ನಿ ಜೊತೆಗೆ  ಹೆಜ್ಜೆ ಹಾಕೋಣ."

"ನೀನು ನೃತ್ಯ ಮಾಡು.. ನಾನು ಇಲ್ಲಿಂದಲೇ ತಾಳ ಹಾಕುತ್ತೇನೆ " ಎಂದವರು ಕುಳಿತಲ್ಲಿಂದಲೇ..ಸ್ವಲ್ಪ ಸ್ವಲ್ಪವೇ ಶರೀರವನ್ನು ಆಡಿಸಲಾರಂಭಿಸಿ.. ಎದ್ದುನಿಂತು ನೃತ್ಯ ಮಾಡತೊಡಗಿದರು.

"ಶಹಬ್ಬಾಸ್ .. ಅಪ್ಪಾ.ನೋಡಿ.. ನಾನು ಈ ಸ್ಟೂಲ್ ಹತ್ತಿ ನೃತ್ಯ ಮಾಡುತ್ತೇನೆ. " ಸ್ಟೂಲ್ ಹತ್ತಿ ವಯ್ಯಾರಿ ಬೊಂಬೆ ಕುಣಿಯಲಾರಂಭಿಸಿದಳು.
ಅಪ್ಪ ಡ್ಯಾನ್ಸ್ ಮಾಡಿ ಸುಸ್ತಾಗಿ ಕುಳಿತುಕೊಂಡರು.

"ಏನಪ್ಪಾ ..ನೀನು..!! ಇಷ್ಟು ಲೇಜಿಫೆಲೋ.. ಅದಕ್ಕೆ ನಿನ್ನ ಶರೀರದಲ್ಲಿ ಕೊಬ್ಬು ತುಂಬಿದೆ. ನೃತ್ಯವೂ ಮಾಡಲ್ಲ.. ಕೆಲಸವೂ ಮಾಡಲ್ಲ.. ಮತ್ತೆ ಹೇಗೆ ಕೊಬ್ಬು ಕರಗುತ್ತದೆ..?"ಎನ್ನುತ್ತಾ ತಾನು ನೃತ್ಯ ಮುಂದುವರಿಸಿದಳು.

"ಏನಂದೆ..? ನನ್ನನ್ನೇ ಕೆಲಸ ಮಾಡಲ್ಲ ಅಂತೀಯಾ.. ಕೊಬ್ಬು ಅಂತೀಯಾ ..ನೋಡ್ತಾ ಇರು ನಿನ್ನ ..ಏನು ಮಾಡ್ತೀನಿ ಅಂತ..."
ಎನ್ನುತ್ತಾ ನೃತ್ಯ ಮಾಡುತ್ತಿದ್ದ ಮಗಳ ತಲೆಕೂದಲಿಗೆ ಹಿಂದಿನಿಂದ ಕೈಹಾಕಿ ಎಳೆದು " ಕೂದಲನ್ನು ಕಟ್ಟಿ..ಏನು ಮಾಡ್ತೀನಿ ನೋಡು"ಎಂದಾಗ ಬೆದರಿದ ಅವಳ ಹೆಜ್ಜೆ ತಾಳ ತಪ್ಪಿ ಅವಳು ಬೀಳುವಂತಾದಾಗ ಪಶ್ಚಾತಾಪಪಟ್ಟ ತಂದೆ "ಕ್ಷಮಿಸು ಮಗಳೇ.ಸಿಟ್ಟಿನಲಿ ಅಂದೆ"ಅನ್ನುತ್ತಾ ಮಗಳನ್ನೆತ್ತಿಕೊಂಡು ಎದೆಗೊತ್ತಿಕೊಂಡರು.

✍️..ಅನಿತಾ ಜಿ.ಕೆ.ಭಟ್ .
06-08-2020.

ಕನ್ನಡ ಕಲರವ ಆನ್ಲೈನ್ ಸಾಹಿತ್ಯ ಕೂಟದ ವಾರದ ಸವಾಲಿನ ಬರಹ.ದ್ವಿತೀಯ ಸ್ಥಾನ ಗಳಿಸಿದೆ..

Wednesday, 12 August 2020

ಮುದುಡಿದ ಮನವು ಅರಳಿದಾಗ

 

ಮುದುಡಿದ ಮನವು ಅರಳಿದಾಗ

"ಇಲ್ಲ.. ನಾನು ನೃತ್ಯ ಮಾಡುವುದಿಲ್ಲ.. ಇನ್ನೆಂದೂ ನೃತ್ಯಾಭ್ಯಾಸದಲ್ಲಿ ತೊಡಗುವುದಿಲ್ಲ.. ಮತ್ತೆ ಮತ್ತೆ ನನ್ನ ಕೆಣಕಬೇಡ ಅಮ್ಮ.."ಎಂದು ಕಿರುಚಾಡಿದಳು ಆದಿ.ಏನೂ ತೋಚದಾಯಿತು ಅಮ್ಮ ಗೀತಾಗೆ.

"ಮಗಳೇ ನೀನೇ ಇಷ್ಟಪಟ್ಟು,ಹಠಮಾಡಿ ನೃತ್ಯ ತರಗತಿಗೆ ಸೇರಿದವಳು.ಈಗ ಹೋಗಲಾರೆ ಎಂದರೆ ಹೇಗೆ.. ಇನ್ನೊಮ್ಮೆ ಆಲೋಚನೆ ಮಾಡು.ಮನಸ್ಸು ಬದಲಾಯಿಸು"ಎಂದು ತಾಯಿ ಗೀತಾ ಬುದ್ಧಿ ಹೇಳುತ್ತಾಳೆ ಮಗಳಿಗೆ.

      ಆದಿ ತುಂಬಾ ಚೂಟಿ ಹುಡುಗಿ.ಪಕ್ಕದ ಮನೆಯ ಸಲಿಲ ಅಕ್ಕ ಭರತನಾಟ್ಯ ಮಾಡೋದು ಕಂಡು ಮನೆಯಲ್ಲಿ ತಾನೂ ತಕಥೈ ತಕಧಿಮಿತ ಎಂದು ಕುಣಿಯುತ್ತಿದ್ದಳು.ತಾನೂ ನೃತ್ಯಗಾರ್ತಿಯಾಗಬೇಕೆಂಬ ಕನಸು ಕಂಡವಳು.ಗೀತಾದಂಪತಿಯಂತೂ ಮಗಳ ಆಸೆಗೆ ತಣ್ಣೀರೆರಚುವವರೇ ಅಲ್ಲ.ಆದಿಯನ್ನು ಕೂಡ ಸಲಿಲ ಕಲಿಯುತ್ತಿರುವ ನೃತ್ಯ ಶಾಲೆಗೆ ಸೇರಿಸಿದರು.

    ನೃತ್ಯವಿದ್ವಾನ್ ರಂಗನಾಥ ಮಾಸ್ತರ್ ನಗರದ ಆಸುಪಾಸಿನಲ್ಲಿ ಹೆಸರುವಾಸಿ ನೃತ್ಯ ಗುರು.ವಾರಕ್ಕೆರಡು ದಿನ ಗೀತಾಳೇ ನೃತ್ಯ ತರಗತಿಗೆ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಳು.ಅದಕ್ಕಾಗಿಯೇ ವಾಹನ ಚಾಲನೆ ಮಾಡುವುದನ್ನು ಕಲಿತಳು.ಬಹಳ ಉತ್ಸಾಹದಿಂದ ಆದಿ  ಅಭ್ಯಾಸ ಮಾಡುತ್ತಿದ್ದಳು .

     ಬರಬರುತ್ತಾ ಆದಿ ತುಂಬಾ ಮಂಕಾದಳು. ಯಾವಾಗಲೂ ಒಬ್ಬಂಟಿಯಾಗಿರಲು ಪ್ರಯತ್ನಿಸುತ್ತಿದ್ದಳು.ನೃತ್ಯತರಗತಿಗೆ ಹೋಗುವ ಹೊತ್ತಿನಲ್ಲಿ ಸಿಡಿದೇಳುತ್ತಿದ್ದಳು.ಶಾಲೆಯಲ್ಲೂ ಅದೇ ರೀತಿ ಇರುವುದನ್ನು ಕಂಡು ಶಿಕ್ಷಕಿ ಗೀತಾಳಿಗೆ ಸುದ್ದಿ ಮುಟ್ಟಿಸಿದರು. ಗೀತಾದಂಪತಿಗಂತೂ ಏಕೈಕ ಪುತ್ರಿ ಏಕೆ ಹೀಗಾದಳು ಎಂದು ತಿಳಿಯದಾಯಿತು.

        ದಿನಕಳೆದಂತೆ ಪರಿಸ್ಥಿತಿ ಗಂಭೀರವಾಯಿತು. ಕುಟುಂಬ ವೈದ್ಯರಲ್ಲಿ ದಂಪತಿ ಸಮಾಲೋಚನೆ ನಡೆಸಿದರು.ವೈದ್ಯರು ಆದಿಯನ್ನು ಕೂರಿಸಿ    ಆಕೆಯೊಂದಿಗೆ ಆಪ್ತಸಮಾಲೋಚನೆ ನಡೆಸಿದರು.ನಂತರ ತನಗೆ ತಿಳಿದಿರುವ ಖ್ಯಾತ ಮನೋವೈದ್ಯ ಡಾ|ಚಿದಾನಂದ ಕಾಮತ್ ಅವರನ್ನು ಭೇಟಿಯಾಗುವಂತೆ ತಿಳಿಸಿದರು.ಮುಂದಿನ ಗುರುವಾರಕ್ಕೆ ವೈದ್ಯರ ಭೇಟಿಗೆ ಸಮಯ ನಿಗದಿಯಾಯಿತು.ಚಿದಾನಂದ ಕಾಮತ್ ಅವರು ಹೆಸರಿಗೆ ತಕ್ಕಂತೆ ಯಾವಾಗಲೂ ಆನಂದದಿಂದಲೇ ಇರುವವರು, ಮಾತನಾಡಿಸುವವರು.ಹಮ್ಮುಬಿಮ್ಮಿಲ್ಲದೆ ಎಲ್ಲರೊಂದಿಗೆ ಸರಳವಾಗಿ ಬೆರೆಯುವವರು.            

                         ******

ಕಾಮತ್: ಹಾಯ್ ಆದಿ... ಇಂದಿನಿಂದ ನೀನೂ ನಾನೂ ಫ್ರೆಂಡ್ಸ್...

ಆದಿ: ಹ್ಞೂಂ..

ಕಾಮತ್: ನಿಂಗೆ ಮಿಲ್ಕೀಬಾರ್ ಚಾಕಲೇಟ್ ಇಷ್ಟ ತಾನೇ... ಎಷ್ಟು ಬೇಕೋ ತಗೋ...

ಎನ್ನುತ್ತಾ ಚಾಕೋಲೇಟ್ ಡಬ್ಬವನ್ನೆ ಕೈಗಿತ್ತರು.

      ಚಾಕೋಲೇಟ್ ತಿನ್ನುತ್ತಿದ್ದ ಆದಿಯಲ್ಲಿ ಸಮಾಧಾನ, ಜಾಣ್ಮೆಯಿಂದ ಒಂದೊಂದೇ ಪ್ರಶ್ನೆ ಕೇಳತೊಡಗಿದರು.ಮಾತನಾಡುತ್ತಾ ಸಮಯ ಮೂವತ್ತು ನಿಮಿಷ ದಾಟಿದ್ದು ಇಬ್ಬರಿಗೂ ತಿಳಿಯಲಿಲ್ಲ.ಇಬ್ಬರ ನಡುವೆ ಕ್ಲೋಸ್ ಫ್ರೆಂಡ್ ಶಿಪ್ ಬೆಳೆಯಿತು.

       ವೈದ್ಯರು ಮುಂದಿನ ವಾರವೂ ಆಪ್ತಸಮಾಲೋಚನೆಗೆ ಬರಹೇಳಿದರು.ಹೀಗೆ ಕೆಲವು ವಾರಗಳ ಆಪ್ತ ಸಮಾಲೋಚನೆಯಿಂದ ಆದಿ ಚೇತರಿಸುತ್ತಿದ್ದಳು. ಮಂಕುತನ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಬಂತು.ಗೀತಾ ದಂಪತಿಗೆ ಕೂಡ ಆಪ್ತಸಮಾಲೋಚನೆಗೆ ಒಂದು ದಿನ ಬರಹೇಳಿದರು.ಆದಿಯ ಮನಸ್ಸಿಗೆ ಘಾಸಿ ಮಾಡಿದ್ದ ವಿಷಯಗಳನ್ನು ಮನದಟ್ಟು ಮಾಡಿದರು.

         ರಂಗನಾಥ್ ಮಾಸ್ತರ್ ಬಹಳ ಶಿಸ್ತಿನ ನೃತ್ಯ ಗುರು.ನೃತ್ಯದ ಪಟ್ಟುಗಳನ್ನು ಸರಿಯಾಗಿ ಮಾಡದಿದ್ದರೆ ಪೆಟ್ಟು ಖಂಡಿತಾ.ಕೆಲವೊಮ್ಮೆ ಸರಿಯಾಗಿ ನೃತ್ಯ ಮಾಡಿದರೂ ಗರುಗಳ ಮೂಡ್ ಸರಿಯಿಲ್ಲದಿದ್ದರೆ ಪೆಟ್ಟು, ಕೊಳಕು ಚುಚ್ಚು ಮಾತು ಕೇಳಬೇಕಾಗುತ್ತಿತ್ತು . ಇದು ಎಳೆಯ ಹೃದಯಕ್ಕೆ ನಾಟಿತ್ತು, ಗಾಯಗೊಳಿಸಿತ್ತು.ಮಗಳ ತರಗತಿಗೆ ಪೋಷಕರಿಗೆ ಪ್ರವೇಶವಿಲ್ಲದ್ದರಿಂದ ಗೀತಾದಂಪತಿಗಳಿಗೆ ತಿಳಿಯಲಿಲ್ಲ.ಅಮ್ಮ ಅಪ್ಪನೂ ಗದರಿದರೆ ಎಂಬ ಭಯದಿಂದ ಆದಿಯೂ ಹೇಳಿಕೊಳ್ಳಲು ಹಿಂಜರಿದಳು. ಹೇಳಿಕೊಳ್ಳಲಾಗದೆ ,ಸಹಿಸಲಾಗದೆ ಕೊರಗಿ ಮುಗ್ಧ ಬಾಲೆ ಮಂಕಾಗಿದ್ದಳು.

         ಇದನ್ನು ಕೇಳಿದ ದಂಪತಿ ನಮ್ಮ ಮಗಳು ಮೊದಲಿನಂತಾದರೆ ಸಾಕು.. ಭರತನಾಟ್ಯ ಮಾಡದಿದ್ದರೂ ಪರವಾಗಿಲ್ಲ.. ಎಂದು ತಾವು ಆದಿಯ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಕೇಳಿ ತಿಳಿದುಕೊಂಡರು.ಒಂದು ವರ್ಷದಲ್ಲಿ ಆದಿ ಸಂಪೂರ್ಣ ಮೊದಲಿನಂತಾದಳು.ಡಾ|ಕಾಮತ್ ಅವಳ ಪಾಲಿಗೆ ಪ್ರೀತಿಯ ಕಾಮತ್ ಅಂಕಲ್ ಆಗಿಬಿಟ್ಟಿದ್ದರು.ಕಾಮತ್ ಅಂಕಲ್ ಅವರ ಬಳಿ ತಾನು ನೃತ್ಯ ಕಲಿಯಬೇಕು, ನೃತ್ಯದಲ್ಲಿ ಸಾಧನೆ ಮಾಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದಳು.ಕಾಮತ್ ಅವರು ತನಗೆ ತಿಳಿದಿರುವ ಸ್ನೇಹಿತೆಯಾದ ವಿದುಷಿ ಶ್ಯಾಮಲಾ ಪ್ರಸಾದ್ ಅವರನ್ನು ಸೂಚಿಸಿದರು.ಗೀತಾದಂಪತಿ ಮೊದಲು ಭರತನಾಟ್ಯದ ಸಹವಾಸವೇ ಇನ್ನು ಬೇಡ ಎಂದುಕೊಂಡರೂ ಕೊನೆಗೆ ಶಾಂತಚಿತ್ತದ ಗುರುಗಳನ್ನು ಕಂಡು ಒಪ್ಪಿಗೆ ನೀಡಿದರು.ಆದಿಯನ್ನು ಶ್ಯಾಮಲಾ ಮೇಡಂ ಮಗಳಂತೆ ಕಂಡರು.ನೃತ್ಯಾಭ್ಯಾಸ ಯಾವುದೇ ಅಡ್ಡಿಯಿಲ್ಲದೆ ಸಾಗಿತು.ಆಕೆಯಲ್ಲಿ ಭವಿಷ್ಯದಲ್ಲಿ ಉತ್ತಮ ನೃತ್ಯಗಾರ್ತಿಯಾಗಬಲ್ಲಳೆಂಬ ಭರವಸೆಯನ್ನು ಕಂಡರು.


                    ******

       ನಗರದ ಪುರಭವನದಲ್ಲಿ ಭವ್ಯವಾದ ವೇದಿಕೆ ಸಜ್ಜಾಗಿದೆ. ಹಿಮ್ಮೇಳದವರು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದರು.ಕಾರ್ಯಕ್ರಮ ವೀಕ್ಷಣೆಗೆ ದೂರದೂರದಿಂದ ಜನ ಬರುತ್ತಿದ್ದರು. ಆದಿ ಕೂಡ ಅಪ್ಪ ಅಮ್ಮನ ಜೊತೆಗೆ ಕಾರ್ಯಕ್ರಮಕ್ಕೆ ಎರಡು ಗಂಟೆ ಮೊದಲೇ ಅಲ್ಲಿಗೆ ತಲುಪಿದ್ದಳು.ತನ್ನ ಸ್ನೇಹಿತೆ, ಶ್ಯಾಮಲಾ ಗುರುಗಳ ಪ್ರೀತಿಯ ಶಿಷ್ಯೆ ಕು|ಮೇಘಾಳ ನೃತ್ಯ ಪ್ರದರ್ಶನ ಅಂದು.

ವೇದಿಕೆಯ ಹಿಂಭಾಗದಲ್ಲಿ ಏನೋ ಗುಸುಗುಸು ಪಿಸುಮಾತು ಕೇಳಿ ಬಂದಿದೆ.ಗುರುಗಳು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ .ತನ್ನ ಗುರುಗಳು ಇಷ್ಟೊಂದು ಒತ್ತಡಕ್ಕೆ ಸಿಲುಕಿದ್ದನ್ನು ಆದಿ ಇದೇ ಮೊದಲು ನೋಡುತ್ತಿರುವುದು.ಈಗ ಏನು ಮಾಡುವುದು ಎಂದು ಹಿಮ್ಮೇಳದವರಲ್ಲಿ ಕೇಳುತ್ತಾ..ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮ ರದ್ದುಗೊಳಿಸೋಣವೇ ...? ಎಂದು ಶ್ಯಾಮಲಾ ಮೇಡಂ ಹೇಳೋದನ್ನು ಕೇಳಿಸಿಕೊಂಡಳು ಆದಿ.ತನ್ನ ಪ್ರೀತಿಯ ಗುರುಗಳು ಇಷ್ಟೊಂದು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವುದನ್ನು ಕಾಣುವಾಗ ಮನಸ್ಸು ತಡೆಯದೆ ಆದಿ ಮೆಲ್ಲನೆ ಗುರುಗಳ ಬಳಿ ತೆರಳಿ"ನನ್ನಿಂದ ಏನಾದರೂ ಸಹಾಯ ಬೇಕಾ ಮೇಡಂ" ಎಂದು ಕೇಳಿಯೇ ಬಿಟ್ಟಳು.

           ಶ್ಯಾಮಲಾ ಮೇಡಂಗೆ ಮರುಭೂಮಿಯಲ್ಲಿ ಓಯಸಿಸ್ ಕಂಡಂತಾಯಿತು.ಮೈಮರೆತು ಆಕೆಯನ್ನು ತಬ್ಬಿಕೊಂಡು ಕಣ್ಣೀರು ಸುರಿಸುತ್ತ "ಹೌದು.. ನನಗೊಂದು ಉಪಕಾರ ನಿನ್ನಿಂದ ಆಗಲೇ ಬೇಕು... ಆದಿಯಿಂದ ಮಾತ್ರ ಅದು ಸಾಧ್ಯ..ನನ್ನನ್ನು ಈ ಸಂದಿಗ್ಧತೆಯಿಂದ ನೀನೇ ಕಾಪಾಡಬೇಕು.. ಈಗಲೇ ತಯಾರಾಗು ನೃತ್ಯ ಪ್ರದರ್ಶನಕ್ಕೆ" ಎಂದರು.ಏಕೆ? ಏನು?  ಎಂದು ಮರುಪ್ರಶ್ನೆ ಹಾಕದೆ ತಾಯಿಯನ್ನು ಕರೆದುಕೊಂಡು ಡ್ರೆಸ್ಸಿಂಗ್ ರೂಮ್ಗೆ ನಡೆದೇ ಬಿಟ್ಟಳು.ಕಾರ್ಯಕ್ರಮಕ್ಕೆ ಮುನ್ನವೇ ತಯಾರಾಗಿ ಆತ್ಮವಿಶ್ವಾಸದಿಂದ ವೇದಿಕೆಯ ಬಳಿಗೆ ಆಗಮಿಸಿದಳು.ಗುರುಹಿರಿಯರ ಆಶೀರ್ವಾದ ಪಡೆದುಕೊಂಡಳು.

            ನಿಗದಿತ ಸಮಯಕ್ಕೆ ಗಣೇಶನ ಸ್ತುತಿಯೊಂದಿಗೆ ನೃತ್ಯ ಪ್ರದರ್ಶನ ಆರಂಭಿಸುತ್ತಿದ್ದಂತೆ ವೀಕ್ಷಕರಿಂದ ಅದ್ಭುತ ಕರತಾಡನ ಕೇಳಿಬಂತು.ತಿಲ್ಲಾನದವರೆಗೂ ಅದೇ ರೀತಿ ಬೆಂಬಲ ಮುಂದುವರಿಯಿತು.ಆಗಾಗ ವನ್ಸ್ ಮೋರ್ ಎಂದು ಉದ್ಗಾರ ಕೂಡ ಕೇಳುತ್ತಿತ್ತು.ಕಾರ್ಯಕ್ರಮದ ಕೊನೆಯಲ್ಲಿ ವಿದುಷಿ ಶ್ಯಾಮಲಾ ಪ್ರಸಾದ್ ಅವರು "ಇಂದು ನೃತ್ಯ ಪ್ರದರ್ಶನ ನೀಡಬೇಕಾಗಿದ್ದ ಕು| ಮೇಘಾರವರ ತಂದೆಗೆ ಅಪಘಾತವಾಗಿ ಗಂಭೀರಸ್ಥಿತಿಯಲ್ಲಿದ್ದುದರಿಂದ ಆಕೆಯ ಬದಲು ಶಿಷ್ಯೆ ಕು| ಆದಿ ಪ್ರದರ್ಶನ ನೀಡಿದ್ದಾರೆ.ಸಂದರ್ಭೋಚಿತವಾಗಿ ಕಾರ್ಯಕ್ರಮಕ್ಕೆ ಚ್ಯುತಿ ಬಾರದಂತೆ ಅಮೋಘ ಅಭಿನಯದಿಂದ ಎಲ್ಲರ ಮನಸೂರೆಗೊಂಡ ಕು| ಆದಿಗೆ ಧನ್ಯವಾದಗಳು 🙏.ಇಂತಹ ಶಿಷ್ಯೆಯನ್ನು ಪಡೆದ ನಾನು ಧನ್ಯೆ ......"ಎಂದಾಗ ಆದಿಯ ಕಣ್ಣಿಂದ ಆನಂದಭಾಷ್ಪ ಜಾರಿತು.ಗುರುಗಳ ಕಾಲಿಗೆ ನಮಸ್ಕರಿಸಿದಳು.

           ಗೀತಾದಂಪತಿಗಳು ಮಗಳ ಸಮಯೋಚಿತ ನಿರ್ಧಾರದಿಂದ ,ಉತ್ತಮ ನೃತ್ಯಪ್ರದರ್ಶನದಿಂದ ಆನಂದತುಂದಿಲರಾದರು.ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ವೀಕ್ಷಿಸಿದ ಕಾಮತ್ ಅಂಕಲ್ ಗೆ ಪ್ರದರ್ಶನ ನೀಡುತ್ತಿರುವುದು ಆದಿ.. ಮೇಘಾ ಅಲ್ಲ.. ಎಂದು ಆಗಾಗ ಅನಿಸುತ್ತಿತ್ತು.ತಮ್ಮ ಊಹೆ ನಿಜವೆಂದು ತಿಳಿದು ಸಂತಸಗೊಂಡು" ಉತ್ತಮ ಭರತನೃತ್ಯ ಕಲಾವಿದೆಯಾಗು " ಎಂದು ತುಂಬು ಹೃದಯದಿಂದ ಆಶೀರ್ವದಿಸಿದರು.ಡಾ|ಕಾಮತ್ ಅವರು ತನ್ನ ಚಿಕಿತ್ಸೆಯಿಂದ ಚೇತರಿಸಿಕೊಂಡ ಆದಿಯನ್ನು ಕಂಡು ವೃತ್ತಿಜೀವನದ ಬಗ್ಗೆ ಹೆಮ್ಮಪಟ್ಟುಕೊಂಡರು.


   ✍️... ಅನಿತಾ ಜಿ.ಕೆ.ಭಟ್.10-07-2019.

ಚಿತ್ರ :ಅಂತರ್ಜಾಲ ಕೃಪೆ.

2019 ರ ಜೂನ್ ತಿಂಗಳ ಪ್ರತಿಲಿಪಿ ರಾಷ್ಟ್ರೀಯ ಕಥಾ ಸ್ಪರ್ಧೆಯಲ್ಲಿ ಸ್ಫೂರ್ತಿದಾಯಕ ಪ್ರಭೇದದಲ್ಲಿ ಈ ಕಥೆಯು ಎಂಟನೇ ಸ್ಥಾನ ಗಳಿಸಿದೆ...

ಪ್ರತಿಲಿಪಿ ವೇದಿಕೆಗೂ,ರೂವಾರಿಗಳಿಗೂ ಹೃತ್ಪೂರ್ವಕ ಕೃತಜ್ಞತೆಗಳು 🙏.


Tuesday, 11 August 2020

ಎಂಥಾ ಚೆಲುವ ನನ್ನ ಕೃಷ್ಣ

 

ಎಂಥಾ ಚೆಲುವ ನನ್ನ ಕೃಷ್ಣ

ಎಂಥಾ ಚೆಲುವ ಮುದ್ದು ಕೃಷ್ಣ
ಶಿರದಿ ಗರಿಯ ಮುಡಿವನು
ಗೆಲುವು ನಾನು  ಒಲವು ಅವನು
ಬಲದಿ ದಿನವು ಕಾಯ್ವನು ||

ಎಂಥಾ ಚೆಲುವ ಬಾಲಕೃಷ್ಣ
ನೀಲ ಮೇಘ ಶ್ಯಾಮನು
ಬಣ್ಣ ನಾನು ಕಣ್ಣು ಅವನು
ಉಣಿಸುತಿಹನು ನಲಿವನು||

ಎಂಥಾ ಚೆಲುವ ತುಂಟ ಕೃಷ್ಣ
ದಧಿಯ ಗಡಿಗೆ ಒಡೆವನು
ಉದಯ ನಾನು ಹೃದಯ ಅವನು
ಅಮೃತ ಸುಧೆಯ ಸುರಿವನು||

ಎಂಥಾ ಚೆಲುವ ಕಂದ ಕೃಷ್ಣ
ಹಾಲ ವಿಷವ ಗೆದ್ದನು
ಕಲೆಯು ನಾನು ಸೆಲೆಯು ಅವನು
ಸೋಲಸರಿಸಿ ಜಯವನು||

ಎಂಥಾ ಚೆಲುವ ಕೊಳಲ ಕೃಷ್ಣ
ಕಾಂತಿಯಿಂದ ಹೊಳೆವನು
ಸ್ಥಿತಿಯು ನಾನು ಮತಿಯು ಅವನು
ಗತಿಗೆ ನೀಡಿ ಬೆಳಕನು||

ಎಂಥಾ ಚೆಲುವ ನಂದ ಕೃಷ್ಣ
ಆನಂದ ಚೆಲ್ಲುತಿರುವನು
ತೇರು ನಾನು  ಸೂತ್ರ ಅವನು
ಕರವ ಬಿಡದೆ ಪಿಡಿವನು||

ಎಂಥಾ ಚೆಲುವ ನನ್ನ ಕೃಷ್ಣ
ಪ್ರೀತಿ ರಾಗ ನುಡಿಸ್ವನು
ರಾಧೆ ನಾನು ಮೋದ ಅವನು
ವಿನೋದದಿಂದ ನಡೆವನು||

✍️... ಅನಿತಾ ಜಿ.ಕೆ.ಭಟ್.
11-08-2020.


Monday, 10 August 2020

ಮಹಾಮಹಿಮ ಶ್ರೀಕೃಷ್ಣ

 

ಮಹಾಮಹಿಮ ಶ್ರೀ ಕೃಷ್ಣ

ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಅಭಯವ ನೀಡುವ ಶ್ರೀಕೃಷ್ಣ
ಗೀತೆಯ ಬೋಧಿಸಿ ನೀತಿಯನರುಹಿದ
ಸುಜ್ಞಾನ ಮತಿಯು ನೀ ಶ್ರೀಕೃಷ್ಣ..||೧||

ಬೆಣ್ಣೆಯ ಮೆಲುತ ತುಂಟಾಟವಗೈವ
ಯಶೋದೆಯ ಮುದ್ದು ಶ್ರೀಕೃಷ್ಣ
ಗೋವರ್ಧನ ಗಿರಿ ಕಿರುಬೆರಳಲೆತ್ತಿದ
ಮಹಾಮಹಿಮನೇ ಶ್ರೀಕೃಷ್ಣ..||೨||

ಪಿಳ್ಳಂಗೋವಿಯ ರಾಗದಿನುಡಿಸಿ
ರಾಧೆಗೊಲಿದವನೇ ಶ್ರೀಕೃಷ್ಣ
ತೇಜೋಮಯನೇ ಪೀತಾಂಬರಧರನೇ
ಶ್ರೀ ತುಳಸೀಪ್ರಿಯ ಶ್ರೀಕೃಷ್ಣ..||೩||

ನಿನ್ನನೆ ನುತಿಸುವೆ ನೈವೇದ್ಯವ ನೀಡುವೆ
ಬಿಡದೇ ಪೊರೆಯೋ ಶ್ರೀ ಕೃಷ್ಣ
ಹಗಲಿರುಳೆನ್ನದೆ ಅನುದಿನವೆಮಗೆ
ಸುಭಿಕ್ಷೆಯ ನೀಡೋ ಶ್ರೀಕೃಷ್ಣ..||೪||

✍️... ಅನಿತಾ ಜಿ.ಕೆ.ಭಟ್.
11-08-2020.



ಶ್ರೀ ಕೃಷ್ಣನಿಗೆ ಪ್ರಿಯವಾದ ಬೆಣ್ಣೆ ಚಕ್ಕುಲಿ

 

ಶ್ರೀಕೃಷ್ಣನಿಗೆ ಪ್ರಿಯವಾದ ಬೆಣ್ಣೆ ಚಕ್ಕುಲಿ

     ಹಬ್ಬಗಳು ಬಂತೆಂದರೆ ಎಲ್ಲ ಮನೆಗಳಲ್ಲೂ ಸಂಭ್ರಮ ಮನೆಮಾಡುತ್ತದೆ .ಇತ್ತೀಚಿನ   ದಿನಗಳಲ್ಲಿ ಹಬ್ಬಕ್ಕೆಂದು ಹೂಹಣ್ಣು ,ಬಟ್ಟೆ ಬರೆ,ಖರೀದಿ ಭರಾಟೆ ಜೋರಾಗಿಯೇ ಸಾಗುತ್ತಿದೆ.ವಿಧವಿಧದ ತಿನಿಸುಗಳನ್ನು ನೈವೇದ್ಯಕ್ಕೆಂದು ಮನೆಯಲ್ಲಿಯೇ ತಯಾರಿಸುವ ಸಂಪ್ರದಾಯ.ಅದಕ್ಕೆ ಬೇಕಾಗುವಂತಹ  ವಸ್ತುಗಳನ್ನು ಆರಿಸಿ ಕೊಂಡುತರುವುದು ಕ್ರಮ.ಈಗೀಗ ರೆಡಿ ಮಿಕ್ಸ್ ಗಳ ಅಬ್ಬರ.ಇದರ ನಡುವೆ ತಿಂಡಿತಿನಿಸುಗಳ ನೈಜ ರುಚಿ ಕಳೆದುಕೊಳ್ಳುತ್ತೇವೆಯೋ ಎನಿಸುವುದು ಸಹಜ.ಕೆಲವಂತೂ ಮನೆಯಲ್ಲಿಯೇ ತಾಜಾ ಮಾಡಿಕೊಂಡಷ್ಟು ಸ್ವಾದ ಹೊರಗಿನಿಂದ ಖರೀದಿಸಿದಾಗ ಇರುವುದಿಲ್ಲ.

   ಶ್ರೀ ಕೃಷ್ಣನ ಹಬ್ಬ ಬಂತೆಂದರೆ ಉಂಡೆಗಳು,ಚಕ್ಕುಲಿಗಳು,ಅವಲಕ್ಕಿಯಿಂದ ತಯಾರಿಸುವ ಹಲವು ಸಿಹಿತಿನಿಸುಗಳು ನೈವೇದ್ಯಕ್ಕಾಗಿ ತಯಾರಿಸುತ್ತಾರೆ.ಚಕ್ಕುಲಿಗಳಲ್ಲಿ ನಾನಾ ತರಹಗಳು ಇವೆ.ನಾನಾ ಶೈಲಿಗಳಲ್ಲಿ ತಯಾರಿಸುತ್ತಾರೆ.

ಬೆಣ್ಣೆ ಚಕ್ಕುಲಿ

ಬೇಕಾಗುವ ಸಾಮಗ್ರಿಗಳು:-
ದೋಸೆ ಅಕ್ಕಿ ಎರಡು ಕಪ್
ಉದ್ದಿನಬೇಳೆ ಒಂದು ಕಪ್
ಬೆಣ್ಣೆ ನಿಂಬೆಹಣ್ಣಿನ ಗಾತ್ರದಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ
ಮೆಣಸಿನ ಪುಡಿ (ಬೇಕಾದಲ್ಲಿ)

ಮಾಡುವ ವಿಧಾನ:-
ದೋಸೆ ಅಕ್ಕಿಯನ್ನು ತೊಳೆದು ನೀರಲ್ಲಿ ಎರಡು ಗಂಟೆಗಳ ಕಾಲ ನೆನೆಸಿ.ಉದ್ದಿನ ಬೇಳೆಯನ್ನು ಸಣ್ಣ ಉರಿಯಲ್ಲಿ ಕೆಂಪಗಾಗುವಷ್ಟು ಹುರಿಯಿರಿ.ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಜರಡಿ ಹಿಡಿದು  ಉಳಿದ ಪುಟ್ಟ ಪುಟ್ಟ ಚೂರುಗಳನ್ನು ಪುನಃ ಪುಡಿಮಾಡಿಕೊಳ್ಳಿ.ಜರಡಿಮಾಡಿ ತೆಗೆದಿರಿಸಿ.ಉಳಿದ ತರಿಯನ್ನು ಮಿಕ್ಸಿಯಲ್ಲಿ ಹಾಕಿ.ನೆನೆಸಿದ ಅಕ್ಕಿಯನ್ನು ಪುನಃ ತೊಳೆದು ನೀರು ಬಸಿದು ಅದೇ ಮಿಕ್ಸಿ ಜಾರಿನಲ್ಲಿ ಗಟ್ಟಿಯಾಗಿ ರುಬ್ಬಿ.ಉಪ್ಪು ಸೇರಿಸಿ.ಒಂದುಗಂಟೆಯ ಕಾಲ ಫ್ರಿಡ್ಜ್ ನಲ್ಲಿ ಇಡಿ.ಮೇಲೆ ಶೇಖರಣೆಯಾದ ನೀರನ್ನು ಪಾತ್ರೆಗೆ ಬಸಿದುಕೊಳ್ಳಿ.ನಂತರ ಮೊದಲು ಪುಡಿಮಾಡಿಟ್ಟ ಉದ್ದಿನಬೇಳೆ ಪುಡಿ , ಜೀರಿಗೆ ಸೇರಿಸಿ.ಮೆಣಸಿನ ಪುಡಿ,ಇಂಗು ಬೇಕಾದರೆ ಸೇರಿಸಿಕೊಳ್ಳಿ.ನಮ್ಮಲ್ಲಿ ನೈವೇದ್ಯಕ್ಕೆ ಮಾಡುವಾಗ ಇದನ್ನೆಲ್ಲ ಬಳಸುವ ಪದ್ಧತಿಯಿಲ್ಲ.ಆದ್ದರಿಂದ ನಾನು ಹಾಕಿಲ್ಲ.ಬೆಣ್ಣೆ ಸೇರಿಸಿ.

ಈ ಹಿಟ್ಟನ್ನು ಸ್ವಲ್ಪ ಬಿಸಿ ಎಣ್ಣೆ ಸೇರಿಸಿ ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಶ್ರ ಮಾಡಿ.ಬೇಕಾದಲ್ಲಿ ನೀರು ಸೇರಿಸಿ.ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಬೇಕು.ನಂತರ ಕಾಲುಗಂಟೆ ಮುಚ್ಚಿಡಿ.ಎಣ್ಣೆ ಕಾಯಲು ಇಟ್ಟು ,ಬಾಳೆಲೆ ಅಥವಾ ಪ್ಲಾಸ್ಟಿಕ್ ಶೀಟ್ ಗೆ ಎಣ್ಣೆ ಸವರಿ.ಚಕ್ಕುಲಿ ಮುಟ್ಟು/ಚಕ್ಕುಲಿ ಒರಳಿನಲ್ಲಿ ಹಿಟ್ಟು ಹಾಕಿ ಬಾಳೆಲೆಯ ಮೇಲೆ ಒತ್ತಿ ವೃತ್ತಾಕಾರವಾಗಿ ಸುತ್ತಿ.ಕಾದ ಎಣ್ಣೆಗೆ ಒಂದೊಂದಾಗಿ ಬಿಡಿ.ಸ್ವಲ್ಪ ಹೊತ್ತಿನಲ್ಲಿ ತಿರುವಿ ಬೇಯಿಸಿ.ಕುದಿಯುವ ಶಬ್ದ ನಿಂತಾಗ ತೆಗೆಯಿರಿ.ಬಿಸಿಬಿಸಿಯಾದ ಗರಿಗರಿ ಬೆಣ್ಣೆ ಚಕ್ಕುಲಿ ಸಿದ್ಧ.

ಇದನ್ನು ಸ್ವಲ್ಪ ಜಾಸ್ತಿ ಬೆಣ್ಣೆ ಹಾಕಿ, ನೇರವಾಗಿ ಎಣ್ಣೆಗೇ ಒತ್ತಬಹುದು .ಆಗ ಬೆಣ್ಣೆಮುರುಕು ಚಕ್ಕುಲಿ ಸಿದ್ಧ.

ಹೆಸರು ಬೇಳೆ ಚಕ್ಕುಲಿ:-

ಬೇಕಾಗುವ ಸಾಮಗ್ರಿಗಳು:
ಹೆಸರು ಬೇಳೆ ಒಂದುಕಪ್
ಅಕ್ಕಿಪುಡಿ ಮೂರು ಕಪ್
ಉಪ್ಪು ಜೀರಿಗೆ

ಮಾಡುವ ವಿಧಾನ:
ಸ್ವಲ್ಪ ನೀರು ಹಾಕಿ ಹೆಸರುಬೇಳೆಯನ್ನು ಬೇಯಿಸಿಕೊಳ್ಳಿ.ಮೂರುಕಪ್ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಉಪ್ಪು, ಜೀರಿಗೆ ಸೇರಿಸಿ.ನಂತರ ಬೇಯಿಸಿದ ಹೆಸರುಬೇಳೆಯನ್ನು ನೀರು ಪಾತ್ರೆಗೆ ಬಸಿದುಕೊಂಡು ಚೆನ್ನಾಗಿ ಕಿವುಚಿಕೊಳ್ಳಿ.ಇದನ್ನು ಅಕ್ಕಿಹಿಟ್ಟಿನ ಮಿಶ್ರಣದೊಂದಿಗೆ ಬೆರೆಸಿ.ಚೆನ್ನಾಗಿ ನಾದಿಕೊಳ್ಳಿ.ಚಪಾತಿ  ಹಿಟ್ಟಿನ ಹದಕ್ಕಿರಲಿ. ನಿಮಿಷ ಮುಚ್ಚಿಡಿ.
ಎಣ್ಣೆ ಕಾಯಲು ಬಿಡಿ.ಚಕ್ಕುಲಿ ಒರಳಿನಲ್ಲಿ ಹಿಟ್ಟು ಹಾಕಿ ಎಣ್ಣೆಸವರಿದ ಬಾಳೆಲೆಯಲ್ಲಿ ಚಕ್ಕುಲಿ ಒತ್ತಿ.ಕಾದ ಎಣ್ಣೆಗೆ ಬಿಡಿ.ಹೊಂಬಣ್ಣ ಬಂದಾಗ ತೆಗೆಯಿರಿ.ರುಚಿಕರವಾದ ಹೆಸರುಬೇಳೆ ಚಕ್ಕುಲಿ ನೈವೇದ್ಯಕ್ಕೆ ಸಿದ್ಧ.

ಗೋಧಿ ಲಡ್ಡು:-

ಬೇಕಾಗುವ ಸಾಮಗ್ರಿಗಳು:
ಗೋಧಿಹುಡಿ ಎರಡು ಕಪ್
,ಸಕ್ಕರೆ  ಎರಡು ಕಪ್
ತುಪ್ಪ ಅರ್ಧ ಕಪ್
ಹಾಲು ಸ್ವಲ್ಪ
ಏಲಕ್ಕಿ, ಗೋಡಂಬಿ ,ದ್ರಾಕ್ಷಿ

ಮಾಡುವ ವಿಧಾನ:-

ಗೋಧಿ ಹುಡಿಯನ್ನು ಚೆನ್ನಾಗಿ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ.ಸಕ್ಕರೆಯನ್ನು ಪುಡಿ ಮಾಡಿ.ಗೋಧಿಹಿಟ್ಟು ,ಸಕ್ಕರೆಪುಡಿ, ತುಪ್ಪ, ಏಲಕ್ಕಿಪುಡಿ ಹಾಕಿ ಮಿಶ್ರಮಾಡಿ.ಸ್ವಲ್ಪ ಹಾಲು ಸೇರಿಸಿ. ನಂತರ ಕೈಗೆ ತುಪ್ಪ ಸವರಿಕೊಂಡು ಗೋಡಂಬಿ ದ್ರಾಕ್ಷಿ ಸೇರಿಸಿ ಉಂಡೆಕಟ್ಟಿ.ರುಚಿಕರವಾದ ಗೋಧಿ ಲಡ್ಡು ತಯಾರು.ಶ್ರೀಕೃಷ್ಣನಿಗೆ ನೈವೇದ್ಯವ ನೀಡಿ.

ಜಗದೋದ್ಧಾರಕ ಶ್ರೀ ಕೃಷ್ಣನನ್ನು ಭಕ್ತಿಯಿಂದ ಪೂಜಿಸಿ,ನೈವೇದ್ಯವನರ್ಪಿಸಿ ಸಕಲರ ಒಳಿತನ್ನು ಬೇಡೋಣ.ಸರ್ವೇ ಜನಾಃ ಸುಖಿನೋ ಭವಂತು ,ಲೋಕಾ ಸಮಸ್ತಾ ಸುಖಿನೋ ಭವಂತು ಎಂಬುದು ನಮ್ಮ ಪ್ರಾರ್ಥನೆ..🙏

✍️..ಅನಿತಾ ಜಿ.ಕೆ.ಭಟ್.
11-08-2020.
  

   ಪ್ರತಿಲಿಪಿ ಕನ್ನಡ ಮತ್ತು ಮಾಮ್ಸ್ಪ್ರೆಸೊ ಕನ್ನಡದಲ್ಲಿ ಪ್ರಕಟಿತ ಲೇಖನ.