Saturday, 30 May 2020

ತೀರದಲ್ಲಿ ತೀರಿಸಿದ ಬಯಕೆ





" ಸಂಜೆ ಕಡಲತೀರಕ್ಕೆ ಹೋಗೋಣ ಸೋನಿ. ಬರ್ತೀಯ ತಾನೆ.."

"ಖಂಡಿತ ಬರ್ತೀನಿ ರಾಮು ಅಣ್ಣಯ್ಯ.. ನೀನು ಹೇಳಿದ ಮೇಲೆ ಇಲ್ಲ ಅಂತೀನಾ.."

ಎನ್ನುತ್ತಾ ಚಿಗರೆ ಮರಿಯಂತೆ ಮನೆಗೆ ಓಡಿದಳು ಸೋನಿ.

ರಾಮು ಅಣ್ಣಯ್ಯ ವಾರದ ಹಿಂದೆ ತನ್ನ ಹುಟ್ಟುಹಬ್ಬದ ದಿನ ಕೊಟ್ಟಂತಹ ತೋಳಿಲ್ಲದ ಕೆಂಪು ಬಣ್ಣದ ಸಲ್ವಾರ್ ಧರಿಸಿ ಸಂಜೆ ಹೊರಟುನಿಂತಳು.. ಕನ್ನಡಿಯ ಮುಂದೆ ಆ ದಿರಿಸಿನಲ್ಲಿ ತಾನು ಸುಂದರಿಯಾಗಿ ಕಾಣಿಸುತ್ತೇನಾ ಎಂದು ಮತ್ತೆ ಮತ್ತೆ ದಿಟ್ಟಿಸಿಕೊಂಡಳು.ತನ್ನ ಕಣ್ಣು ದೃಷ್ಟಿ ಆದೀತು ಎಂದು ದೃಷ್ಟಿಯನ್ನು ತೆಗೆದುಕೊಂಡಳು. ಮುಖದ ಮೇಲೆ ತುಂಟತನ ಮಾಡಲೆಂದೇ ಉದಯಿಸಿದ ಒಂದೇ ಒಂದು ಮೊಡವೆ ಆತಂಕವನ್ನು ಮೂಡಿಸಿತು."ನಿನಗೆ ಏನೋ ನನ್ನ ಮೇಲೆ ದ್ವೇಷವೇ.. ನನ್ನನ್ನು ಸುಂದರಿಯಂತೆ ಕಾಣಬಾರದೆಂದು  ಮುಖದ ಮೇಲೆ ಮೂಡಿಬಂದು ಅಣಕಿಸುತ್ತಿರುವೆ" ಎಂದು ಮೊಡವೆಯನ್ನು ಪ್ರಶ್ನಿಸಿದಳು.

ಸಂಜೆ ರಾಮು ಅಣ್ಣಯ್ಯ ಬಂದೊಡನೆ "ಅಪ್ಪ ನಾನು ಕಡಲ ತೀರಕ್ಕೆ ಹೋಗಿ ಬರುವೆ .ಅಣ್ಣಯ್ಯ ನೊಂದಿಗೆ" ಎಂದಳು ಅಪ್ಪನಲ್ಲಿ. ರಾಮು ಅಂದವಾದ ಮಿರಮಿರ ಮಿನುಗುವ  ನುಣುಪಾದ ಬಾಟಲಿಯನ್ನು ಅಪ್ಪ ದಿವಾಕರನಿಗೆ ಕೊಟ್ಟಾಗ ಅವನ ಸಂತಸಕ್ಕೆ ಪಾರವೇ ಇರಲಿಲ್ಲ. "ಎಷ್ಟು ಒಳ್ಳೆಯವ ರಾಮು ನೀನು.ನಿನ್ನ ಉಪಕಾರವನ್ನು ಮರೆಯಲಾರೆ.." ಎಂದು ಹೇಳುತ್ತಿದ್ದಂತೆ ರಾಮುವಿನ ಕಣ್ಣಲ್ಲಿ ಮಿಂಚಿನ ಸಂಚಾರವಾಯಿತು. ಸೋನಿಯ ಕೈ ಹಿಡಿದು ತನ್ನ ಕಾರಿನಲ್ಲಿ ಕೂರಿಸಿಕೊಂಡ.ಹಿಂದೆ ಕುಳಿತ ಸೋನಿಯನ್ನು ಸ್ವಲ್ಪ ದೂರ ಹೋದಾಗ" ಯಾಕಮ್ಮ ಹಿಂದೆ ಕುಳಿತೆ.ಮುಂದೆ ಬಾ.. ಮಾತನಾಡುತ್ತಾ ಹೋಗೋಣ" ಎಂದ ರಾಮು.. ಮುಂದೆ ಬಂದು ರಾಮು ಡ್ರೈವಿಂಗ್ ಮಾಡುತ್ತಿದ್ದಾಗ ಅರಳು ಹುರಿದಂತೆ ಮಾತನಾಡುತ್ತಲೇ ಇದ್ದಳು ಸೋನಿ. ರಾಮುಗೆ ಅವಳ ಮಾತನ್ನು ಕೇಳುತ್ತಲೇ ಇರಬೇಕು ಎಂಬ ಬಯಕೆ .ಅವಳು ಒಂದು ಕ್ಷಣ ಮೌನವಾದರೂ ಮತ್ತೇನಾದರೂ ಪ್ರಶ್ನಿಸಿ ಮಾತಿಗೆ ಎಳೆಯುತ್ತಿದ್ದ.


ಸೋನಿ ದಿವಾಕರ ಮತ್ತು ಶಾರದಮ್ಮನ ಮಗಳು. ಏಕಮಾತ್ರ ಪುತ್ರಿ. ದಿವಾಕರ ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿ ಸ್ವಲ್ಪ ಸಂಪಾದನೆ ಮಾಡುತ್ತಿದ್ದರೂ ಅದು ಸಂಜೆ ಮದ್ಯಪಾನಕ್ಕೆ ಸರಿಹೋಗುತ್ತಿತ್ತು. ತಾಯಿ ಶಾರದಮ್ಮ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ದುಡಿಯುತ್ತಿದ್ದರು. ಶಾರದಮ್ಮನ ದುಡಿಮೆಯಿಂದಲೇ ಕುಟುಂಬದ ಜೀವನ ಸಾಗುತ್ತಿತ್ತು. ಶಾರದಮ್ಮನಿಗೆ ಮಗಳನ್ನು ವಿದ್ಯಾವಂತಳನ್ನಾಗಿ ಮಾಡಿ ಉನ್ನತ ಸ್ಥಾನದಲ್ಲಿ ನೋಡಬೇಕೆಂಬ ಬಯಕೆ. ಹತ್ತಿರದಲ್ಲಿರುವ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಬಹಳ ಕಷ್ಟದಿಂದ ಶುಲ್ಕವನ್ನು ಭರಿಸಿ ಕಳುಹಿಸುತ್ತಿದ್ದಳು.ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಳು ಸೋನಿ.


ಸಂಜೆ ಶಾರದಮ್ಮ ಮನೆಗೆ ಹಿಂತಿರುಗಿದಾಗ ಮಗಳನ್ನು ಕಾಣದೆ ಗಂಡನಲ್ಲಿ ಪ್ರಶ್ನಿಸಿದಾಗ" ಆಕೆ ರಾಮುವಿನೊಟ್ಟಿಗೆ ಕಡಲತೀರಕ್ಕೆ ತೆರಳಿದ್ದಾಳೆ.. ಇನ್ನೀಗ ಬರಬಹುದು..ಯಾಕೆ ಚಿಂತೆ..?" ಎನ್ನುತ್ತಾ ರಾಮು ಕೊಟ್ಟ ಬಾಟಲಿಯಿಂದ ಬಗ್ಗಿಸಿ ಮದ್ಯ ಹೀರುತ್ತಿದ್ದ .."ತಗೋ ನಿನಗೂ.." ಎಂದು ಕೊಟ್ಟಾಗ "ನನಗೆ ಬೇಡ "ಎಂದು ಬಿರುಸಿನ ಉತ್ತರವನ್ನು ನೀಡಿದರು ಶಾರದಮ್ಮ. ಆಕೆಯ ಮನಸ್ಸು ಮಗಳ ಬಗ್ಗೆ ಚಿಂತಿಸುತ್ತಿದ್ದು ಎಂದಿಗಿಂತ ಹೆಚ್ಚಾಗಿ ಹೃದಯ ಬಡಿದುಕೊಳ್ಳುತ್ತಿತ್ತು. ದೀಪ ಹಚ್ಚುವ ವೇಳೆಗೂ ಬಾಗಿಲಿನವರೆಗೆ ಹೋಗಿ ಬಂದು ಮಗಳು ಬಂದಳೇ ಎಂದು    ನೋಡಿ ವಾಪಾಸಾದರು.ದೇವರದೀಪ ಹಚ್ಚಿ ನನ್ನ ಮಗಳನ್ನ ಸುರಕ್ಷಿತವಾಗಿ ಮನೆಗೆ ಬರುವಂತೆ ಮಾಡು,ಒಳ್ಳೆಯ ವಿದ್ಯೆ ಗಳಿಸಿ ಸಮಾಜದಲ್ಲಿ ಗೌರವದಿಂದ ಬದುಕುವಂತೆ ಮಾಡು "ಎಂದು ಸೆರಗೊಡ್ಡಿ  ಬೇಡಿಕೊಂಡಳು. ಬಿಸಿಬಿಸಿ ಗಂಜಿ ಸಿದ್ಧಪಡಿಸಿ ಮಗಳಿಗಾಗಿ ಕಾಯುತ್ತಲೇ ಇದ್ದಳು.

ಅವಳ ಆತಂಕ ಮುಗಿಲುಮುಟ್ಟಿತ್ತು .. ರಾತ್ರಿ ಗಂಟೆ 9:30 ಆದರೂ ಮಗಳನ್ನು ಕಾಣಲೇ ಇಲ್ಲ. ಆಗ ಮನೆಯ ಮುಂದೆ ಕಾರೊಂದು ಬಂದು ನಿಂತಿತು. ಅದರಿಂದ ಮಗಳು ಇಳಿದು ಬಂದಳು. ಕಾರು ವಾಪಸ್ ಆಯ್ತು.ಮಗಳನ್ನು "ಎಲ್ಲಿಗೆ ಹೋದೆ? ಯಾಕೆ ಇಷ್ಟೊಂದು ತಡ ?"ಎಂದು ಶಾರದಮ್ಮ ಪ್ರಶ್ನಿಸುತ್ತಿದ್ದರೆ ಗಂಡ ದಿವಾಕರ "ಯಾಕೆ ಮಗಳ ಮೇಲೆ ಅಷ್ಟೊಂದು ಸಂಶಯ ..? ರಾಮು ಸಹೋದರನಂತೆ. ಆಕೆಯನ್ನು ಜೋಪಾನವಾಗಿ ಕರೆದೊಯ್ದು ವಾಪಸ್ ಕರೆತಂದು ಬಿಟ್ಟಿದ್ದಾನೆ". ಎಂದರೂ ತಾಯಿಯ ಹೃದಯ ಮಾತ್ರ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲೇ ಇಲ್ಲ.


"  ಬಾ ಊಟ ಮಾಡು "ಎಂದು ಮಗಳನ್ನು ಕರೆದಾಗ "ನನಗೆ ಹಸಿವಿಲ್ಲ "ಎಂದು ಬಟ್ಟೆ ಬದಲಾಯಿಸಿ ಮಲಗಿಕೊಂಡಳು ಸೋನಿ.
ದಿವಾಕರನಿಗೆ ಗಂಜಿಯುಣ್ಣಲು ಜಾಗವಿಲ್ಲದಷ್ಟು ಮದ್ಯ ಉದರ ಸೇರಿತ್ತು.ಮನಸ್ಸಿಲ್ಲದ ಮನಸ್ಸಿನಿಂದ ಶಾರದಮ್ಮ ಗಂಜಿ ಉಂಡು ಮಲಗಿಕೊಂಡಳು.  ಬೆಳಗ್ಗೆ ಪಾಠವನ್ನು ಒಮ್ಮೆ ಓದಿ ನಂತರ ಶಾಲೆಗೆ ಹೊರಡಲು  ಮಗಳನ್ನು ಬೇಗ ಏಳು  ಎಂದು ಎಬ್ಬಿಸುತ್ತಾರೆ ಶಾರದಮ್ಮ.ಆಕೆ ಎಂದಿನಂತೆ ಏಳದೆ  ಬಹಳ ಉದಾಸೀನ ಪಟ್ಟಳು. ಮಗಳ ಬಟ್ಟೆಯನ್ನು ಒಗೆಯಲು ಹೊರಟ ಶಾರದಮ್ಮನಿಗೆ ಅದರಲ್ಲಿದ್ದ ಸೆಂಟಿನ ಪರಿಮಳ ಸ್ವಲ್ಪ ಕಸಿವಿಸಿ ಅನಿಸಿತು. ಬಟ್ಟೆಯ ಮೇಲೆ ಅಲ್ಲಲ್ಲಿ ಹರಡಿದ್ದ  ಕೂದಲುಗಳು ಅನುಮಾನ ಮೂಡಿಸಿದವು. ಆಕೆ ತೊಟ್ಟಿದ್ದ ಲೆಗ್ಗಿಂಗ್ಸ್ ಒಗೆಯಲು ತೆಗೆದುಕೊಳ್ಳುತ್ತಿದ್ದಂತೆಯೇ ಎಲ್ಲವೂ ಅರ್ಥವಾಗಿತ್ತು ..ಮಲಗಿದ್ದ ಮಗಳ ಕತ್ತು ಹಿಡಿದು ಎಬ್ಬಿಸಿ ಕೆನ್ನೆಗೆರಡು ಬಾರಿಸಿಯೇ ಬಿಟ್ಟಳು."ಎಂಥಾ.. ಕೆಲಸ ಮಾಡಿ ಬಂದಿದ್ದೀಯಾ..?"ಎಂದು ಗುಡುಗಿದರು.. "ನಾನೇನು ಮಾಡಿಲ್ಲ" ಅಂತ ಮುಗ್ಧವಾಗಿ ನಟಿಸಿದಳು ಸೋನಿ.ಶಾರದಮ್ಮ  ದುರ್ಗಿ ಅವತಾರವನ್ನು  ತಾಳಿದರು..ಇದನ್ನು ಸಹಿಸದ ಪತಿರಾಯ  " ನನ್ನ ಮಗಳನ್ನು ಏಕೆ ಹೊಡೆಯುತ್ತೀಯಾ?" ಎಂದು ಶಾರದಮ್ಮನ ಮೇಲೆ ಕೈಮಾಡಿದ.ಕುಡಿದು ಕುಡಿದು ನರಪೇತಲನಂತಾಗಿದ್ದ  ಗಂಡನನ್ನು ಪಕ್ಕಕ್ಕೆ ಸರಿಸಿ  "ಏನೇ...ಮಳ್ಳಿ..ಹೇಳ್ತೀಯಾ..ಅಲ್ಲ ಬಾಯಿ ಬಿಡಿಸಲೋ.."ಅಂತ ಇನ್ನೂ ಜೋರಾಗಿ ಅಬ್ಬರಿಸುತ್ತಾ ನಾಲ್ಕೇಟು ಹೊಡೆದರು.ಅಮ್ಮನ ಅಷ್ಟು ಸಿಟ್ಟಿನ ಮುಖ ಎಂದೂ ನೋಡದ ಸೋನಿ ತಲೆತಗ್ಗಿಸಿ ಅಮ್ಮನ ಮುಂದೆ ನಿಂತಳು.


********

ರಾಮು ಸೋನಿಯನ್ನು ಕರೆದೊಯ್ದು, ಸಂಜೆಯ ಸೂರ್ಯಾಸ್ತವನ್ನು ನೋಡುತ್ತಾ  ಕಡಲ ತೀರದಲ್ಲಿ ಆವಳೊಂದಿಗೆ ಸುತ್ತಾಡಿದ. ಸೋನಿಗೆ ಅಣ್ಣ, ತಮ್ಮ ,ತಂಗಿಯರು ಇಲ್ಲದ್ದರಿಂದ ಆಕೆಗೆ ರಾಮುವಿನಲ್ಲಿ ಅಣ್ಣನೆಂಬ ಮಮಕಾರ ಬಹಳವಿತ್ತು ..ಚಿಕ್ಕಂದಿನಿಂದಲೇ  ನೆರೆಹೊರೆಯಲ್ಲಿ ವಾಸಿಸುತ್ತಿದ್ದವರು..  ಸೋನಿಯ ಕೈಯನ್ನು ಮೆದುವಾಗಿ ಹಿಡಿದು ಮೈಗೆ ಮೈ ತಾಗಿಸಿ ಸಾಗುತ್ತಿದ್ದ. ಆಗಾಗ ಕೈ ಅದುಮುತ್ತಿದ್ದಾಗ 'ಇಂತಹ ಸಹೋದರ ನನಗೆ ಇಲ್ಲವಲ್ಲ... ಇಷ್ಟು ಪ್ರೀತಿಸುವ ಸ್ವಂತ ಸಹೋದರ ಇದ್ದಿದ್ದರೆ ಒಳ್ಳೆಯದಿತ್ತು.. 'ಎಂದು ಬೇಸರಿಸಿದಳು. ಕಲ್ಲು ಬೆಂಚಿನ ಮೇಲೆ ಕುಳಿತು ರಾಮು ತನ್ನ ಹೆಗಲ ಮೇಲೆ ಕೈಯ್ಯಿರಿಸಿ ತೋಳಿನ ಮೇಲೆ ಬೆರಳಾಡಿಸುತ್ತಿದ್ದರೆ ಅವಳಿಗೆ ಎಲ್ಲಿಲ್ಲದ ಖುಷಿಯಾಗಿತ್ತು .ಅವನಿಗೆ ಮತ್ತೂ ಅಂಟಿಕೊಳ್ಳುತ್ತ  ಕುಳಿತಳು. ಅವಳ ಪಟಪಟ ಮಾತು ಸಾಗುತ್ತಲೇ ಇತ್ತು. ಅವನ ನೋಟ ಅವಳ ದಿರಿಸಿನ ಕತ್ತಿನ ಒಳಗೆ  ಇಣುಕಿತ್ತು.ಹದಿಹರೆಯದ ಸೋನಿಗೆ ಅದೆಲ್ಲ ಗಮನಕ್ಕೆ ಬರಲಿಲ್ಲ..ಬಂದರೂ ಅಣ್ಣಯ್ಯನೆಂಬ ಮಮಕಾರ ..ಕದ್ದು ನೋಡುತ್ತಿದ್ದಾಗ ಅವಳ ಹರೆಯದ ಅಂಗಸೌಷ್ಟವ ಅವನ ಕಣ್ಣುಗಳಿಗೆ ಮೃಷ್ಟಾನ್ನ ಭೋಜನವನ್ನು ಒದಗಿಸಿತು. ಮನದಲ್ಲಿ ಬೇರೂರಿದ್ದ ಬಯಕೆ ಹೆಮ್ಮರವಾಗಿ ಕಾಡತೊಡಗಿತ್ತು. ಮುಸ್ಸಂಜೆ ಆವರಿಸುತ್ತಿದ್ದಂತೆ ಸೂರ್ಯ ಪಡುಗಡಲಲ್ಲಿ ಮರೆಯಾದ.   ಕಡಲಿನ ತೆರೆಗಳನ್ನು ಆಸ್ವಾದಿಸುತ್ತಾ ಜೊತೆಯಾಗಿ  ಸಂಚರಿಸುತ್ತಿದ್ದ ಸೋನಿ "ಅಣ್ಣಯ್ಯ ಹಸಿವಾಗುತ್ತಿದೆ. ಚರುಮುರಿ ತಿನ್ನೋಣ "ಎಂದಳು.
"ಪಕ್ಕದಲ್ಲಿ  ರೆಸ್ಟೋರೆಂಟ್ ಇದೆ .ಅಲ್ಲಿ ಹೊಟ್ಟೆತುಂಬಾ ಮಸಾಲೆ ದೋಸೆ ಕೊಡಿಸುತ್ತೇನೆ" ಎಂದ. "ಸರಿ .."ಎಂದು ಇಬ್ಬರೂ ಕಾರಿನಲ್ಲಿ ರೆಸ್ಟೋರೆಂಟಿಗೆ ತೆರಳಿದರು. ಆಕೆಗೆ ಹೊಟ್ಟೆತುಂಬಾ ಮಸಾಲೆದೋಸೆ ಐಸ್ಕ್ರೀಮ್ ತಿನ್ನಿಸಿದ ರಾಮು. ಅವಳ ಮುಖದಲ್ಲಿನ ಮಂದಹಾಸ ಕಂಡು ಅವನ ಬಯಕೆಯ ಮತ್ತು ಏರಿತ್ತು. ಅಲ್ಲಿ ಲಾಡ್ಜಿನಲ್ಲಿ ರೂಮ್ ಬುಕ್ ಮಾಡಿಕೊಂಡು. "ಸ್ವಲ್ಪ ಹೊತ್ತು ಆರಾಮವಾಗಿ ಮಾತನಾಡಿ ನಿಧಾನವಾಗಿ ಮನೆಗೆ ಹೋಗೋಣ" ಎಂಬ ಅಣ್ಣಯ್ಯನ ಮಾತಿನಲ್ಲಿ ನಂಬಿಕೆ ಇರಿಸಿದಳು ಸೋನಿ.. ತನ್ನ ಬೆರಳುಗಳಲ್ಲಿ ರಾಮುವ ಬೆರಳುಗಳನ್ನು ಬಂಧಿಸಿ ಮಾಳಿಗೆಯಲ್ಲಿದ್ದ ರೂಮಿನತ್ತ ತೆರಳಿದಳು.


ರೂಮಿನಲ್ಲಿ ಕುಳಿತರೆ ಸಾಗರದ ಅಲೆಗಳು ಚಂದಿರನ ಬೆಳದಿಂಗಳಿನಲ್ಲಿ ಸುಂದರವಾಗಿ ಕಾಣಿಸುತ್ತಿದ್ದವು ..ಜೋರಾಗಿ ಗಾಳಿ ಬೀಸುತ್ತಿತ್ತು. ರಾಮು ಅವಳ ಹೆಗಲ ಮೇಲೆ ತಲೆಯಿಟ್ಟು ಸಮುದ್ರವನ್ನು ದಿಟ್ಟಿಸುತ್ತಿದ್ದ. ನಿಧಾನವಾಗಿ ಅವನ ಕೈಗಳು ಅವಳನ್ನು ಸುತ್ತುವರಿಯತೊಡಗಿದವು. ಅವಳಿಗೂ ಬೇಡವೆನುವ ಮನಸ್ಸಾಗಲಿಲ್ಲ. ಮೆಲ್ಲನೆ ಅವನ ತುಟಿಗಳು ಅವಳತ್ತ ಸರಿದು ಮೆದುವಾದ ಕೈಗಳಿಗೆ ಸಿಹಿಮುತ್ತು ಇತ್ತಾಗ ಮೊದಲ ಸಿಹಿ ಮುತ್ತಿಗೆ  ಪುಳಕಿತಳಾದಳು. ಆತ ಮುಂದುವರಿದ.  ಅವಳ ಬೆಂಬಲ ಅವನಿಗೆ ಧೈರ್ಯ ತುಂಬಿತು. ಅದುವರೆಗೆ ಅಣ್ಣಯ್ಯ ಎನಿಸಿಕೊಂಡಿದ್ದ ರಾಮು ಕೆಲವೇ ನಿಮಿಷಗಳಲ್ಲಿ ಪ್ರಿಯಕರನಾಗಿ ಬಿಟ್ಟಿದ್ದ. ತಾನು ನೋಡಿದ ಸಿನಿಮಾ ಡೈಲಾಗ್ ಗಳಂತೆ "ಐ ಲವ್ ಯು ರಾಮು "ಎಂದು ಬಿಗಿಯಾಗಿ ತಬ್ಬಿಕೊಂಡಳು.ಮುಂದೇನಾಗಬಹುದೆಂಬ ಯಾವ ಅರಿವೂ ಇಲ್ಲದ ಅವಳಿಗೆ ಆ ಕ್ಷಣ ಸುಖಮಯವಾಗಿತ್ತು ಅಷ್ಟೇ. ರಾಮು ಕಡಲತೀರದಲ್ಲಿ ತನ್ನ ಬಯಕೆಯನ್ನು ತೀರಿಸಿಕೊಂಡ."ಈ ತರಹ ನಡೆದುಕೊಂಡಿದ್ದನ್ನು ಯಾರಲ್ಲೂ ಹೇಳಬೇಡ ..ನಿನಗೆ ಬೇಕಾದ್ದನ್ನೆಲ್ಲ ಕೊಡಿಸುವೆ.."ಎಂದು ಆಕೆಯಿಂದ ಮಾತು ತೆಗೆದುಕೊಂಡು ಆಕೆಯನ್ನು ಮನೆಗೆ ಕರೆದೊಯ್ದು ಬಿಟ್ಟ.


ಮರುದಿನ ಶಾಲೆಗೆ ಹೊರಟಿದ್ದ ಸೋನಿಗೆ ಮೈ ಭಾರವೆನಿಸಿತು.  ಮನಸ್ಸು ರಾಮುವಿನಲ್ಲಿ ನೆಟ್ಟಿತ್ತು. ಶಾಲೆಗೆ ತೆರಳದೆ ದಾರಿಯಲ್ಲಿ ಸಿಕ್ಕ ರಾಮುವಿನ ಜೊತೆಗೆ ತೆರಳಿದಳು.ಶಾರದಮ್ಮ ಮನೆಗೆ ಹಿಂದಿರುಗುತ್ತಿರುವಾಗ ಮಗಳು ಎಂದಿನಂತೆ ಪುಸ್ತಕವನ್ನು ಅಲ್ಲಲ್ಲಿ ಎಸೆಯದಿರುವುದು ,ತನ್ನ ಮಗಳಿಗೆ ಬೈದು ಬುದ್ಧಿ ಹೇಳಿದ್ದರ ಪರಿಣಾಮ ಎಂದುಕೊಂಡಳು. ಬಟ್ಟೆಯನ್ನು ಅವಳೇ ಒಗೆಯಲು ಆರಂಭಿಸಿದ್ದು ಒಳ್ಳೆಯ ಬೆಳವಣಿಗೆ ಎಂದುಕೊಂಡಳು..ಮಗಳು ತಿದ್ದಿಕೊಂಡು ಒಳ್ಳೆಯ ದಾರಿಯಲ್ಲಿ ನಡೆಯುತ್ತಿದ್ದಾಳೆ ಎಂದುಕೊಂಡಳು.


ಒಂದು ದಿನ ಶಾಲೆಯಿಂದ ಆಕೆಗೆ ಕರೆ ಬಂತು. ನಿಮ್ಮ ಮಗಳು ಒಂದು ತಿಂಗಳಿನಿಂದ ಶಾಲೆಗೆ ಹಾಜರಾಗುತ್ತಿಲ್ಲ ಎಂದು.ಆಶ್ಚರ್ಯದಿಂದ ಶಾಲೆಗೆ ಹೋಗಿ ವಿಚಾರಿಸಿದಾಗ ಅವಳಿಗೆ ಆಘಾತ ಕಾದಿತ್ತು . ತಾನು ಮೊದಲು ಅಂದುಕೊಂಡಿದ್ದೇ ನಿಜವಾಗಿತ್ತು. ಗಂಡನಲ್ಲಿ ಹೇಳಿದರೆ ಅವನು ರಾಮುವಿನ ಕಡೆಗೆ. ಮನೆಗೆ ಬರುತ್ತಿದ್ದ ಬೆಲೆಬಾಳುವ ಮದ್ಯದ ಹಿಂದಿನಗುಟ್ಟು ಅವಳಿಗೀಗ ತಿಳಿಯಿತು. ಇಂತಹ ಅಪ್ಪ ಇದ್ದರೆ ಮಕ್ಕಳ ಬಾಳು ಮೂರಾಬಟ್ಟೆ ಆಗುವುದರಲ್ಲಿ ಸಂಶಯವಿಲ್ಲ ಎಂದು ನೊಂದುಕೊಂಡಳು.

ಶಾರದಮ್ಮನಿಗೆ ಮಗಳ ಮೇಲೆ ಇರಿಸಿದ ಕನಸುಗಳೆಲ್ಲ ಒಮ್ಮೆಲೆ ಬುಡಮೇಲಾದ ಅನುಭವ. ಮಗಳನ್ನು ಮುದ್ದಿನಿಂದ ಬೆಳೆಸಿದ ಕೈಯ ನೋಡಿ ತಾನೇ ಜರೆದುಕೊಂಡಳು. ಅರಳುತ್ತಿರುವ ಹೂವನ್ನು ಯಾರು ಕೀಳದಂತೆ ಬೇಲಿ ಹಾಕಿ ಕಾಪಾಡಲು ನಮ್ಮಿಂದ ಸಾಧ್ಯವೇ..? ತಾನು ಹೊರಗೆ ದುಡಿದರೆ ಅಷ್ಟೇ ಕುಟುಂಬ ಗಂಜಿ ಉಣ್ಣುವುದು. ಮನೆಯಲ್ಲಿ ಕುಳಿತರೆ ಹೊಟ್ಟೆತುಂಬಲು ಸಾಧ್ಯವಿಲ್ಲ. ಗಂಡನೆನಿಸಿಕೊಂಡವನಿಗೆ ಜವಾಬ್ದಾರಿಯ ಅರಿವೇ ಇಲ್ಲ.ಎಂದು ರೋದಿಸುತ್ತಿದ್ದ ಹೆತ್ತೊಡಲ ಸಂಕಟ ಅವಳಿಗೇ ಗೊತ್ತು. ಮಗಳಿಗೆ ಬುದ್ಧಿ ಹೇಳಿ ಶಾಲೆಗೆ ಕರೆದೊಯ್ದು ಬಿಡಲಾರಂಭಿಸಿದಳು..ಸೋನಿಯನ್ನು ಶಾಲೆಯ ಮುಂದಿನ ಗೇಟಿನವರೆಗೆ ಬಿಟ್ಟು ಮಗಳು ಮಹಡಿ ಏರಿ ತನ್ನ ತರಗತಿ ಕೊಠಡಿಗೆ ತೆರಳುವುದನ್ನು ನೋಡಿದ ಮೇಲೆಯೇ ಅಮ್ಮ ಉದ್ಯೋಗಕ್ಕೆ ತೆರಳುವುದು .ಅಮ್ಮ ಹೋಗುವುದು ಕಾಣುತ್ತಲೇ ಕೆಳಗಿಳಿದು ಶಾಲೆಯ ಹಿಂದಿನ ಗೇಟಿನಿಂದ ಹೊರಗೆ ಹೋಗುತ್ತಿದ್ದಳು ಸೋನಿ. ಅಲ್ಲಿ ರಾಮು ಅವಳಿಗಾಗಿ ಕಾಯುತಿದ್ದ. ನಂತರದ ದಿನಗಳಲ್ಲಿ ಅವನ ಸ್ನೇಹಿತರೂ ಸೇರಿಕೊಂಡರು. ಅವಳಿಗೆ ಬೇಕು ಬೇಕಾದ್ದನ್ನೆಲ್ಲ ಕೊಡಿಸುತ್ತಿದ್ದರು.ಎಲ್ಲರ ಹಸಿವೆ ನೀಗಿಸುವ ಆಹಾರವಾದಳು ಎಳೆಯ ಕೋಮಲೆ ಸೋನಿ..ದಿವಾಕರ ತನಗೆ ದಿನವೂ ಉಚಿತವಾಗಿ ಸಿಗುತ್ತಿದ್ದ ಮದ್ಯಪಾನದ ಭಾಗ್ಯವನ್ನು ಕಂಡು ಹಿರಿಹಿರಿ ಹಿಗ್ಗಿದ.ಮಗಳ ಬದುಕಿನ ಚಿಂತೆ ಅವನಿಗಿರಲಿಲ್ಲ.


ಪುನಃ ಶಾಲೆಯಿಂದ ಶಾರದಮ್ಮನಿಗೆ ಕರೆಬಂದಾಗ ಆತಂಕದಿಂದಲೇ ಶಾಲೆಯೆಡೆಗೆ ಓಡಿಬಂದಳು. ಆಕೆ ಮಗಳು ಈಗಲೂ ಶಾಲೆಗೆ ಬರುತ್ತಿಲ್ಲ ಎಂದು  ಕೇಳಿದ ಮೇಲೆ ಆಕೆಯ ಕಣ್ತುಂಬಿ ಬಂದಿತ್ತು. ಶಾಲೆಯ ಗೇಟಿನವರೆಗೆ ಕರೆದುಕೊಂಡು ಬಂದು ಬಿಟ್ಟರೂ ಹೀಗೆ ಮಾಡುತ್ತಿದ್ದಾಳಲ್ಲ ಎಂದು ಕರುಳು ಚುರುಕ್ ಅಂದಿತು.. ಮನೆಯ ಪರಿಸ್ಥಿತಿಯನ್ನು  ಮುಖ್ಯಶಿಕ್ಷಕಿಯ ಮುಂದೆ ಹೇಳಿಕೊಂಡು ಕಣ್ಣೀರುಗರೆದಳು.  ದುಡಿದು ಉಳಿತಾಯ ಮಾಡಿ ಮಗಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದೇನೆ ..ಚೆನ್ನಾಗಿ ಓದಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ನೋಡಬೇಕೆಂಬ ನನ್ನ ಬಯಕೆಗೆ ಕೊಳ್ಳಿ ಇಟ್ಟಳು. ಅವಳ ಬದುಕನ್ನು ನುಚ್ಚುನೂರು ಮಾಡಿಕೊಂಡಳು. ಬುದ್ಧಿ ಹೇಳಲು ಹೊರಟರೆ ನೀನು ಯಾಕೆ ಬಡತನದಲ್ಲೂ ನನ್ನನ್ನು ಹೆತ್ತೆ ..ಎಂದು ಎದುರುತ್ತರ ನೀಡುತ್ತಾಳೆ..ಇಂತಹ ಮಕ್ಕಳು   ಯಾರ ಹೊಟ್ಟೆಯಲ್ಲೂ ಹುಟ್ಟುವುದೇ ಬೇಡ ಎಂದು ಅತ್ತು ಕರೆಯುತ್ತಿದ್ದರೆ...
ಶಿಕ್ಷಕಿಯರೆಲ್ಲರೂ ಕಣ್ಣೀರು ಸುರಿಸುತ್ತಿದ್ದರು. ಆಫೀಸಿನ ಗೋಡೆಗಳು ಕೂಡಾ ಆಕೆಯ ನೋವಿಗೆ ಸ್ಪಂದಿಸುತ್ತಿದ್ದವೋ ಎನ್ನುವಂತೆ ಭಾಸವಾಗಿತ್ತು.


ದಿನ ಕಳೆಯುತ್ತಿದ್ದಂತೆ ಮೈಕೈ ತುಂಬಿಕೊಂಡ ಮಗಳನ್ನು ಕಂಡು ಆಕೆಗೆ ಅನುಮಾನ ಮೂಡಿತು. ಬುದ್ಧಿ ಹೇಳಿ ವೈದ್ಯರಲ್ಲಿ ಕರೆದೊಯ್ಯಬೇಕು ಎನ್ನುತ್ತಿದ್ದವಳ ಮೇಲೆ ದಿವಾಕರ " ನಿನಗೇಕೆ ಮಗಳ ಮೇಲೆ ಸದಾ ಸಂಶಯ...?" ಎಂದು ಗದರುತ್ತಿದ್ದ. ಮನೆಯಿಂದ ಹೊರಗಡಿಯಿಟ್ಟರೆ 'ಇವರ ಮಗಳು ಹಾಗಂತೆ ಹೀಗಂತೆ 'ಎಂಬ ಚುಚ್ಚುಮಾತು ಅವಳ ಕಿವಿಗೆ ಪಾಶದಂತೆ ಭಾಸವಾಗುತ್ತಿತ್ತು. ಮಗಳ ಬಗ್ಗೆ ಎಷ್ಟೊಂದು ಕಾಳಜಿ ವಹಿಸಿದರೂ ಮಗಳು ತಪ್ಪಿನಡೆದರೆ ,ಎಳೆಯ ಬಾಲೆಯ ದೇಹವನ್ನು ಹರಿದು ಮುಕ್ಕುವ  ಯುವಕರ ಕಾಮಾಂಧತೆಯನ್ನು ಆಡುವ ಬದಲು, ಸಂಕಟಪಡುತ್ತಿರುವ ಹೆತ್ತೊಡಲನ್ನು ಜನ ಮತ್ತೆ ಮತ್ತೆ ತಮ್ಮ ಮಾತಿನಿಂದ ಚುಚ್ಚುತ್ತಿದ್ದಾಗ "ಬೇಡ... ಇಂತಹ ತಾಯ್ತನ ಯಾರಿಗೂ ಬೇಡ" ಎಂದು ಮಾತೃ ಹೃದಯ ಗೋಳಿಡುತ್ತಿತ್ತು....


✍️... ಅನಿತಾ ಜಿ.ಕೆ.ಭಟ್.
29-05-2020.

ಪ್ರತಿಲಿಪಿ ಕನ್ನಡ ದೈನಿಕ ವಿಷಯ:-ಕಡಲ ತೀರದಲ್ಲಿ ವಿಹರಿಸೋಣ ಬಾ...



ಸಾಂದರ್ಭಿಕ ಚಿತ್ರ ಅಂತರ್ಜಾಲ ಕೃಪೆ.

2 comments: